ಭಾನುವಾರ, ಸೆಪ್ಟೆಂಬರ್ 13, 2026

ಪುಸ್ತಕಪ್ರೇಮಿಯ ಆಸೆಗಣ್ಣು (ಬೆಳಕಿಂಡಿಯ ಕತೆಗಳು - 81)


ಹಲವು ತಿಂಗಳುಗಳಿಂದ ಪುಸ್ತಕ ಕೊಳ್ಳಲು ಹೋದಾಗಲೆಲ್ಲಾ ಆಸೆಗಣ್ಣುಗಳಿಂದ ತನ್ನಿಷ್ಟದ ಪುಸ್ತಕವನ್ನು ನೋಡುತ್ತಿದ್ದರೂ.. ದುಬಾರಿಯಾದ ಆ ಬೃಹತ್ ಕಾದಂಬರಿಯ ಕೊಳ್ಳುವಿಕೆಯನ್ನು ಮುಂದೂಡುತ್ತಲೇ ಇದ್ದಳು. ಅವಳ ಪ್ರತಿಭೆಗೆ ಪ್ರತಿಫಲವೆಂಬಂತೆ.. ಮನದಾಸೆಯನ್ನು ಅರಿತಂತೆ ಅದೇ ಪುಸ್ತಕ ಬಹುಮಾನವಾಗಿ ಸಿಕ್ಕಾಗ ಅವಳ ಸಂತೋಷವಂತೂ ವರ್ಣಿಸಲಸದಳ.

~ವಿಭಾ ವಿಶ್ವನಾಥ್

ಎಲ್ಲಾ ಅಂತ್ಯವೂ ಅಂದುಕೊಂಡಂತೆಯೇ ಇರಬೇಕಿಲ್ಲ

 


"ತಗೊಳ್ಳಿ ನಿಮ್ಮ ಬ್ಯಾಗ್. ನೀವು ನಿಮ್ಮ ಅಪ್ಪ - ಅಮ್ಮ ಇಬ್ಬರನ್ನೂ ಕರೆದುಕೊಂಡು ಮನೆ ಬಿಟ್ಟು ಹೋಗಬಹುದು. ನಿಮಗೆ ಹೋಗುವುದಕ್ಕೆ ಇಷ್ಟ ಇಲ್ಲ ಅಂತಾ ಇದ್ದರೆ ನೀವು ಬೇಕಾದರೆ ಇಲ್ಲಿಯೇ ಉಳಿದುಕೊಳ್ಳಬಹುದು." ಎಂದು ಕಲ್ಲು ಮನಸ್ಸಿನಿಂದ ಹೇಳಿ ಅಲ್ಲೇ ಇದ್ದ ಸೋಫಾದ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಕುಳಿತಳು ಸೀತಾ.


"ಏನೋ ರಾಮ್ ಇದು..

ಇವಳು ಹೀಗೆಲ್ಲಾ ಹೀನಾಯವಾಗಿ ನಮ್ಮನ್ನು ಮನೆಯಿಂದ ಹೊರಗಡೆ ಹಾಕಲು ನೋಡಿದರೂ ನೋಡಿಕೊಂಡು ಸುಮ್ಮನೆ ಇದ್ದೀಯಲ್ಲ. ನಾವೇನೂ ಏನೂ ಇಲ್ಲದವರಲ್ಲ. ಕೋಟಿ ರೂಪಾಯಿ ಆಸ್ತಿ ಇದೆ. ಗೊತ್ತಲ್ವಾ ಅವಳಿಗೆ.

ಅದೆಲ್ಲಾ ಸರಿ. ಇದು ನಿನ್ನ ಮನೆ ತಾನೇ ? ಅವಳು ಯಾಕೆ ನಿನ್ನನ್ನು, ನಮ್ಮನ್ನು ಎಲ್ಲರನ್ನೂ ಹೊರಗಡೆ ಹಾಕಬೇಕು ಅಂತಾ ಹೇಳುತ್ತಾ ಇದ್ದಾಳೆ ? " ಎಂದಾಗ ರಾಮ್


"ಅಪ್ಪಾ, ನೀವು ತಪ್ಪು ತಿಳಿದುಕೊಂಡಿದ್ದೀರಿ. ಇದು ನನ್ನ ಮನೆಯಲ್ಲ. ಅವಳ ಮನೆ. ಮನೆ ಇರುವುದು ಅವಳ ಹೆಸರಲ್ಲೇ.. ನನ್ನ ಸಂಬಳದ ಹಣ ಈ ಮನೆ ಲೋನ್ ಗೆ ಹೋಗುತ್ತಾ ಇದೆ. ಮನೆ ನಡೆಯುತ್ತಾ ಇರುವುದು ಅವಳ ಸಂಬಳದಲ್ಲೇ. ಒಂದು ವಾರದಿಂದ ನೀವು ಜೀವನ ಮಾಡುತ್ತಾ ಇದ್ದದ್ದು.. ನಾನು ಆವತ್ತಿನಿಂದ ಬದುಕುತ್ತಿರುವುದು ಅವಳ ಸಂಬಳದಲ್ಲೇ.. " ಎಂದನು ರಾಮ್.


"ಅಯ್ಯೋ.. ಅಯ್ಯೋ.. ಮನೆಹಾಳಿ.

ನನ್ನ ಮಗನ ಹತ್ತಿರ ಎಲ್ಲವನ್ನೂ ಕಿತ್ತುಕೊಂಡು ಅವನನ್ನೇ ಹೊರಗಡೆ ಹಾಕುವುದಕ್ಕೆ ನೋಡುತ್ತಿದ್ದೀಯಲ್ಲ. ನಿನಗೆ ಮನಸ್ಸಾದರೂ ಹೇಗೆ ಬಂತು ? " ಎಂದ ಅತ್ತೆಯ ಮಾತಿಗೆ ಸೀತಾ


"ಅತ್ತೆ, ಆ ಮಾತನ್ನು ನಿಮಗೆ ನೀವೇ ಕೇಳಿಕೊಳ್ಳಿ. ಬಹುಶಃ ಉತ್ತರ ಸಿಗಬಹುದು. ಇಲ್ಲಾ ಅಂದರೆ ಮನೆಹಾಳಿ ಯಾರು ಅಂತಲಾದರು ಗೊತ್ತಾಗಬಹುದು. " ಎಂದು ತಣ್ಣಗೆ ನುಡಿದಾಗ ಅವಳ ಅತ್ತೆಯ ಮೈ ಮೇಲೆ ಕಾದ ಬಿಸಿ ನೀರು ಹೊಯ್ದ ಹಾಗಾಯಿತು.


ಸೀತಾ ಮಾತು ಶುರು ಮಾಡಿದ್ದಳು. "ಅತ್ತೆ, ಮಾವ ಮತ್ತೆ ನೀವು ಎಲ್ಲರೂ ಸರಿಯಾಗಿ ಕೇಳಿಸಿಕೊಳ್ಳಿ. ಮನೆಹಾಳಿ ಅಂತಾ ಅಂದಿರಲ್ಲ.. ನನ್ನ ನೆಮ್ಮದಿ ಹಾಗೂ ನನ್ನ ಗಂಡನ ಒಳಿತಿಗಾಗಿ ನಾನು ಹಾಗೆಯೇ ಇರುವುದು.


ನಿಮ್ಮ ಕೋಟಿ ರೂಪಾಯಿ ಆಸ್ತಿ ಇದ್ದರೆ ಹೋಗಿ ಅಲ್ಲಿ ಮಾತನಾಡಿ. ಇದು ನನ್ನ ನೆಲ , ನನ್ನ ಮನೆ. ಇಲ್ಲಿ ನಾನು ಹೇಳಿದ ಹಾಗೆಯೇ ಕೇಳಬೇಕು. ನನ್ನ ಗಂಡನ ಸಂಬಳದ ಹಣವನ್ನೆಲ್ಲಾ ನಿಮ್ಮ ಆಸ್ತಿ ವೃದ್ಧಿಸಿಕೊಳ್ಳುವುದಕ್ಕೆ , ನಿಮ್ಮ ಮತ್ತೊಬ್ಬ ಮಗನ ಸಂಸಾರ ನೆಟ್ಟಗೆ ಮಾಡುವುದಕ್ಕೆ ಬಳಸಿ ಬಿಡಿಗಾಸು ಸಹಾ ಇಲ್ಲದಂತೆ ಕಿತ್ತುಕೊಂಡು ನಾಯಿ ಸಾಕಿದ ಹಾಗೆ.. ಬೇಕಾದಷ್ಟೇ ಊಟ ಕೊಡುತ್ತಾ ಇದ್ದಾಗ ಅದು ನಿಮಗೆ ಅನ್ಯಾಯ ಅಂತಾ ಅನ್ನಿಸಲಿಲ್ಲವಾ..


ಕೊನೆಗೆ ಇವರು ನನ್ನನ್ನು ಮದುವೆ ಮಾಡಿಕೊಂಡು ಬಂದಾಗ ಮನೆಗೂ ಸೇರಿಸದೆ ಉಟ್ಟ ಬಟ್ಟೆಯಲ್ಲೇ, ನಿಂತ ನೆಲೆಯಿಲ್ಲದ ಹಾಕಿ ಬೀದಿಗೆ ತಳ್ಳಿದ್ದಿರಿ. ಅಲ್ಲವಾ..?? ಆಗ ಅದು ನಿಮಗೆ ಅನ್ಯಾಯ ಅನ್ನಿಸಿರಲಿಲ್ಲ.


ಈಗ ಮತ್ತೊಬ್ಬ ಮಗ ನಿಮ್ಮ ಹತ್ತಿರ ಎಲ್ಲವನ್ನೂ ಕಿತ್ತುಕೊಂಡು ಕಳುಹಿಸಿರುವಾಗ ನಾವು ಕರೆದುಕೊಂಡು ಬಂದು ಆಶ್ರಯ ಕೊಟ್ಟೆವು. ಆದರೆ, ನೀವು ಮಾಡಿದ್ದೇನು ? ಈಗಲಾದರೂ ನನ್ನನ್ನು ಮತ್ತು ಇವರನ್ನು ಕಾಡಿಸಿದ್ದೇ ಆಯಿತು. ನಾನು ಹೊರಗಡೆ ಹೋಗಿ ಅಷ್ಟೆಲ್ಲಾ ದುಡಿದುಕೊಂಡು ಬಂದರೂ ಮನೆಯಲ್ಲಿ ಕೂತು ತಿಂದಿರಿ. ಕೇಳಿ ಕೇಳಿದ್ದನ್ನು ಮಾಡಿ ಹಾಕಿದೆ. ಮರ್ಯಾದೆ ನೀಡಿದೆ. ಆದರೆ, ನೀವುಗಳು ಹಂಗಿಸುವುದನ್ನು ಹಾಗೂ ಬೈಯ್ಯುವುದನ್ನು ಬಿಡಲೇ ಇಲ್ಲವಲ್ಲ. ನೆನ್ನೆಯಂತೂ ಅದು ಇನ್ನೂ ವಿಪರೀತಕ್ಕೆ ಹೋಯಿತಲ್ಲ. ಊಟಕ್ಕೆ ಉಪ್ಪು ಕಡಿಮೆ ಇತ್ತು. ಉಪ್ಪು ಹಾಕಿಕೊಂಡು ಊಟ ಮಾಡಬಹುದಾಗಿತ್ತು. ಅಲ್ಲವಾ..??


ನೀವು ಮಾಡಿದ್ದೇನು ? ನನ್ನ ವಂಶಾವಳಿಯನ್ನೇ ಜಾಲಾಡಿದಿರಿ. ನಾನು ಮನಸ್ಸು ಮಾಡಿದ್ದರೆ ನೆನ್ನೆಯೇ ರಾತ್ರಿಯೇ ಮನೆಯಿಂದ ಹೊರಗೆ ಓಡಿಸುತ್ತಿದ್ದೆ. ಬೆಳಗಿನವರೆಗೂ ಇರಲಿ.. ವಯಸ್ಸಾದವರು ಎಂದು ಬಿಟ್ಟಿದ್ದೆ. ಅಷ್ಟೇ..


ಈಗಲೂ ನಿಮಗೆ ಈ ಮನೆ ಅಧಿಕಾರ, ಮಗನ ಹಣ, ಸೊಸೆಯ ಬಾಗುವಿಕೆ ಅಷ್ಟೇ ಬೇಕಾಗಿರುವುದು. ಅಲ್ಲವಾ..?? ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ.


ಇಲ್ಲೇ ಹತ್ತಿರದಲ್ಲಿ ಒಂದು ಮನೆ ಮಾಡಿದ್ದೇನೆ. ನೀವಿಬ್ಬರೂ ಅಲ್ಲೇ ಇರಿ. ಇವರ ಅಪ್ಪ- ಅಮ್ಮ ಅನ್ನುವ ಒಂದೇ ಕಾರಣಕ್ಕೆ ಬಾಡಿಗೆ ಕಟ್ಟಿ, ಸಾಮಾನು ತಂದು ಹಾಕುತ್ತೇನೆ. ಇವರು ಆಗಾಗ ಬಂದು ವಿಚಾರಿಸುತ್ತಾರೆ. ಅದಕ್ಕಿಂತ ಹೆಚ್ಚಿನ ಹಣ ಬೇಕಾದಲ್ಲಿ ನಿಮ್ಮ ಕೋಟ್ಯಾಂತರ ರೂಪಾಯಿ ಆಸ್ತಿಯಿಂದ ನೀವೇ ಉಪಯೋಗಿಸಿಕೊಳ್ಳಿ.


ಒಂದು ವಿಷಯ ನೆನಪಿಟ್ಟುಕೊಳ್ಳಿ. ಆಗ ರಾಮ ವಿಧೇಯನಾಗಿದ್ದ. ಸೀತೆ ಮುಗ್ಧೆಯಾಗಿದ್ದಳು.


ಆದರೆ, ಈಗ ರಾಮ ವಿಧೇಯ. ಆದರೆ, ಈ ಸೀತಾ ದಡ್ಡಿಯಲ್ಲ. ಕಣ್ಣು ಮುಚ್ಚಿ ಎಲ್ಲರನ್ನು ನಂಬುವುದೂ ಇಲ್ಲ. ಅಹಂಕಾರ, ಅಧಿಕಾರಕ್ಕೆ ಬಾಗುವುದೂ ಇಲ್ಲ. " ಎಂದು ನುಡಿದು ಒಳ ಹೋದಳು.


ಸೊಸೆಯನ್ನು ಮನೆಯ ಅಡಿಯಾಳಾಗಿರಿಸಿ ವೈಭವದಿಂದ ಮೆರೆಯಲು ಹವಣಿಸಿದ್ದ ಅತ್ತೆ - ಮಾವ ಈಗ ಇಂಗು ತಿಂದ ಮಂಗನಂತಾಗಿದ್ದರು.


ರಾಮ್ ಅಷ್ಟರವರೆಗೂ ಸುಮ್ಮನಿದ್ದವನು ಈಗ ಮಾತನಾಡಿದ್ದ. "ಎಲ್ಲಾ ಅಂತ್ಯವೂ ನೀವೆಂದುಕೊಂಡ ಹಾಗೆಯೇ ಇರುವುದಿಲ್ಲ. ಅಂತ್ಯಗಳು ಬದಲಾಗುತ್ತವೆ. ನಿಮಗಿಂತ ಬುದ್ಧಿವಂತರು ಕೊಡುವ ಅಂತ್ಯ ಬುದ್ಧಿವಂತಿಕೆಯಿಂದಲೇ ಇರಬೇಕಲ್ಲವಾ.." ಎಂದವನೇ ಒಳ ನಡೆದ.


~ವಿಭಾ ವಿಶ್ವನಾಥ್

ಬಡವರಾದರೆ ಏನು ಪ್ರಿಯೆ


 "ನಿನ್ನ ಮನೆಯಲ್ಲಿ ಅಷ್ಟೆಲ್ಲಾ ಇದ್ದರೂ ನೀನು ನನಗಾಗಿ, ನಮ್ಮ ಪ್ರೀತಿಗಾಗಿ ಎಷ್ಟೆಲ್ಲಾ ಮಾಡಿದೆ ಹೃದಯ್. ನೀನು ನಿನ್ನ ಅಪ್ಪ - ಅಮ್ಮ, ಆಸ್ತಿ - ಪಾಸ್ತಿ ಎಲ್ಲವನ್ನೂ ಬಿಟ್ಟು ಬಂದೆಯಲ್ಲಾ.. ಯೂ ಆರ್ ಗ್ರೇಟ್. ರಿಯಲಿ ಗ್ರೇಟ್" ಎಂದವಳನ್ನು ತೋಳಲ್ಲಿ ಬಳಸುತ್ತಾ


"ಬದುಕಲ್ಲಿ ಒಂದು ಮೌಲ್ಯಯುತವಾದದ್ದನ್ನು ಪಡೆದುಕೊಳ್ಳಬೇಕಿದ್ದರೆ ಮತ್ತೊಂದನ್ನು ಕಳೆದುಕೊಳ್ಳಬೇಕಂತೆ. ನೋಡು, ಆ ಆಸ್ತಿ ನನಗೆ ಸಿಗದಿರಬಹುದು. ಅದೇನೂ ನನ್ನ ಕಷ್ಟಾರ್ಜಿತವಲ್ಲ. ನೀನು ನನ್ನ ಅಮೂಲ್ಯ ಆಸ್ತಿ ಕಣೇ ಮಾ.


ಎಷ್ಟೋ ಜನ ಹುಡುಗಿಯರು ಪ್ರೀತಿಯನ್ನು ನಿವೇದಿಸಿಕೊಂಡರು. ಆದರೆ, ಅವರೆಲ್ಲರಿಗೂ ನಾನು ನಾನಾಗಿ ಇಷ್ಟವಾಗಲಿಲ್ಲ. ಅವರು ನನ್ನನ್ನು ಪ್ರೀತಿಸಲಿಲ್ಲ. ಅವರು ಪ್ರೀತಿಸಿದ್ದು ನನ್ನ ಆಸ್ತಿಯನ್ನು ಕಂಡು. ಅವರು ನನ್ನ ಆಸ್ತಿಯನ್ನು ಪ್ರೀತಿಸಿದರು ಅಷ್ಟೇ.. ಆಸ್ತಿಯನ್ನು ಬಿಟ್ಟು ಬಂದರೆ ಓಡಿ ಹೋಗಿ ಮದುವೆಯಾಗೋಣ ಎಂದರೆ ಹೆದರಿ ಓಡುತ್ತಿದ್ದರು. ಆದರೆ, ನೀನು ನೀನಾಗಿ ಬಂದು ನನ್ನನ್ನು ಪ್ರೀತಿಸಲಿಲ್ಲ. ನಾನೇ ಬಂದು ನಿನಗೆ ಮನಸೋತ ವಿಚಾರ ತಿಳಿಸಿದಾಗ ನಮ್ಮ ಶ್ರೀಮಂತಿಕೆ ಕಂಡು ನಿರಾಕರಿಸಿದ್ದೆಯಲ್ಲ. ಆಗಲೇ ಅನ್ನಿಸಿತ್ತು ನೀನೇ ನನ್ನ ಜೋಡಿ ಎಂದು. ಆಸ್ತಿ ಇವತ್ತು ಇರುತ್ತದೆ. ನಾಳೆ ಹೋಗುತ್ತದೆ. ಆದರೆ, ಪ್ರೀತಿ ಯಾವಾಗಲೂ ಇರಬೇಕು. ಅಲ್ಲವಾ..??


ಇನ್ನೊಂದು ವಿಚಾರ ಶಿವಾನಿ.. ನೀನು ನನ್ನನ್ನು ಮದುವೆಯಾಗಿದ್ದರೆ ನೀನು ನಿನ್ನ ತಂದೆ ತಾಯಿಯನ್ನು ಬಿಟ್ಟು ನನ್ನ ಬಳಿ ಬರಬೇಕಿತ್ತು. ಅಲ್ಲವಾ..?? ಐ ಮೀನ್ ಮದುವೆಯಾದ ನಂತರ ಹೆಣ್ಣು ಮಕ್ಕಳು ತವರನ್ನು ತೊರೆದು ಗಂಡನ ಬಳಿಗೆ ಬರುತ್ತಾರೆ. ಇಲ್ಲಿ ಸ್ವಲ್ಪ ಬದಲಾವಣೆ ಆಗಿದೆ. ಅಷ್ಟೇ.. ಹಿಂದೆ ದಕ್ಷಿಣ ಕನ್ನಡದಲ್ಲಿ ಅಳಿಯ ಬಂದು ಅತ್ತೆಯ ಮನೆಯಲ್ಲಿ ಇರುವ ಪರಿಸ್ಥಿತಿ ಇತ್ತಂತೆ. ಇದೂ ಹಾಗೆಯೇ ಅಂದುಕೊಂಡರೆ ಆಯ್ತು.




ಇನ್ ಫ್ಯಾಕ್ಟ್.. ನನ್ನಿಂದ ನಿನ್ನ ಕೆಲಸ ಹೋಯ್ತು. ನನ್ನನ್ನು ಮದುವೆಯಾದೆ ಅಂತಾ ನನ್ನ ತಂದೆ ಫ್ಯಾಕ್ಟರಿಯಿಂದ ನಿನ್ನನ್ನು ತೆಗೆದು ಹಾಕಿದ್ದಾರೆ. ಅಲ್ಲದೆ, ನೀನು ಮದುವೆಯಾಗಿದ್ದರೆ ಇಂದಿನ ಈ ಪರಿಸ್ಥಿತಿಯಿಂದ ಸ್ವಲ್ಪ ಸುಖವಾಗಿರುತ್ತಿದ್ದೆ. ನಿನ್ನ ತಂದೆ-ತಾಯಿಗೂ ಕಷ್ಟ ಇರುತ್ತಿರಲಿಲ್ಲ. ಅಲ್ಲವಾ ? "ಎಂದಾಗ ಶಿವಾನಿ


"ಕಷ್ಟ ಯಾರಿಗೆ ಇರುವುದಿಲ್ಲ ಹೇಳಿ. ನಿಮ್ಮ ಕಷ್ಟ, ನೋವನ್ನು ಮರೆಮಾಚಿ ನನ್ನನ್ನು ನಮ್ಮ ಮನೆಯವರನ್ನು ಇಷ್ಟು ಚೆಂದ ನೋಡಿಕೊಳ್ಳುತ್ತಿದ್ದೀರಿ.


ನೀವು ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದ್ದವರು. ಈಗ ಬೀದಿ ಬದಿಯ ಅಂಗಡಿಯಲ್ಲಿ ತಟ್ಟೆ ತೊಳೆಯುತ್ತೀರಿ. ರಸ್ತೆ ಬದಿಯಲ್ಲಿ ಪೇಪರ್ ಮಾರುತ್ತೀರಿ. ದಿನಗೂಲಿಯನ್ನು ಸಹಾ ಮಾಡುತ್ತೀರಿ. ನಿಮಗೆ ಓದು, ಯೋಗ್ಯತೆ ಎಲ್ಲವೂ ಇದ್ದರೂ ನಿಮ್ಮಪ್ಪನ ಹಠ ಮತ್ತು ದ್ವೇಷದಿಂದ ನಿಮಗೊಂದು ಸರಿಯಾದ ಕೆಲಸವೂ ಇಲ್ಲ. ಜೊತೆಗೆ ನಮ್ಮನ್ನೆಲ್ಲಾ ನೋಡಿಕೊಳ್ಳಬೇಕು" ಎಂದಾಗ


"ನೋಡು ಶಿವಾನಿ..

ಶ್ರೀಮಂತ ಆಗಿದ್ದಾಗ ನನಗೊಂದು ಆಸೆ ಇತ್ತು. ಹೀಗೆ, ಬೀದಿ ಬದಿ ಹೋಟೆಲ್ ಅಲ್ಲಿ ತಿನ್ನಬೇಕು. ಚಹಾ ಕುಡಿಯಬೇಕು. ದುಡಿದು ಬಂದು ನೆಮ್ಮದಿಯ ನಿದ್ದೆ ಮಾಡಬೇಕು. ಮನೆಯಲ್ಲಿ ಕಾಯುವ ಹೆಂಡತಿಯನ್ನು ಸಾಧ್ಯವಾದಷ್ಟು ಪ್ರೀತಿ ಮಾಡಬೇಕು ಅಂತಾ.


ನಿಜಕ್ಕೂ ಮೊದಲಿದ್ದ ಜೀವನದಲ್ಲಿ ಅದು ಯಾವುದು ಸಹಾ ಸಾಧ್ಯವಾಗುತ್ತಾ ಇರಲಿಲ್ಲ. ಈಗ ನೋಡು.. ಎಲ್ಲವೂ ಸಾಧ್ಯ.


ಯಾಕೋ ಬೇಂದ್ರೆಯವರು ಹೇಳಿದ್ದು ನೆನಪಾಗುತ್ತಿದೆ ನೋಡು


ಬಡವನಾದರೆ ಏನು ಪ್ರಿಯೆ

ಕೈ ತುತ್ತು ತಿನಿಸುವೆ

ಎದೆಯ ತುಂಬಾ ಒತ್ತಿಕೊಂಡು

ಮುತ್ತು ಮಳೆಯಾ ಸುರಿಸುವೆ  "


ಎನ್ನುತ್ತಾ ಹಾಡತೊಡಗಿದ್ದನು ಹೃದಯ್. ಅವನ ಅಪ್ಪುಗೆಯ ಸುಖದಲ್ಲಿ ಮೈಮರೆತು ತನ್ನನ್ನು ತಾನೇ ಕಳೆದುಕೊಂಡಿದ್ದಳು ಶಿವಾನಿ. ಬಡತನದಲ್ಲಿಯೂ ಸುಖವಿದೆ ಎಂಬುದನ್ನು ಇಬ್ಬರೂ ಒಪ್ಪಿ ಅಪ್ಪಿ ನಡೆಯುತ್ತಿದ್ದರು


~ವಿಭಾ ವಿಶ್ವನಾಥ್

ರಾಜ ಕಲಾವಿದ ರವಿವರ್ಮ (ಪುಸ್ತಕ ಯಾನ - 487)


ಪುಸ್ತಕದ ಶೀರ್ಷಿಕೆ : ರಾಜ ಕಲಾವಿದ ರವಿವರ್ಮ

ಲೇಖಕರು : ಡಾ. ಗೀತಾ ಸೀತಾರಾಮ್

ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಷನ್ಸ್

ಪ್ರಥಮ ಮುದ್ರಣ : 2022

ಪುಟಗಳು : 152

ಬೆಲೆ : 200 ರೂ.


ರಾಜಾ ರವಿವರ್ಮರ ಚಿತ್ರವೆಂದು ತಿಳುವಳಿಕೆಯಿಲ್ಲದ ಹಲವಾರು ಜನ ಅವರ ಕಲೆಯನ್ನು ಮೆಚ್ಚಿ ಆರಾಧಿಸುತ್ತಿದ್ದಾರೆ. ಮೈಸೂರು ಅರಸರ ಆಶ್ರಯದಲ್ಲಿಯೂ ಇವರ ಕಲೆ ಪ್ರವರ್ಧಮಾನಕ್ಕೆ ಬಂದದ್ದನ್ನು ನೋಡಬಹುದು. ಇವರ ಚಿತ್ರಗಳು ಮೈಸೂರಿನ ಅರಮನೆಯಲ್ಲಿ ಹಾಗೂ ಜಗನ್ಮೋಹನ ಆರ್ಟ್ ಗ್ಯಾಲರಿಯಲ್ಲಿವೆ. ಈ ಕಾದಂಬರಿಯ ಕೊನೆಯಲ್ಲಿ 40 ವರ್ಣ ಚಿತ್ರಗಳು ಮನಸೆಳೆಯುವಂತಿವೆ. ಈ ಕಾದಂಬರಿ ಸುಧಾದಲ್ಲಿ ಪ್ರಕಟವಾಗಿತ್ತು.


ಚಿತ್ರಕಲೆಯನ್ನೇ ತನ್ನ ಉಸಿರಾಗಿಸಿಕೊಂಡ ರವಿವರ್ಮರು ಕೇರಳ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಬದುಕಿದರೂ.. ಹುಟ್ಟಿದ್ದು ಕೇರಳದ ಕಿಳಿಮಾನೂರಿನಲ್ಲಿ. ಒಡೆಯರಾದ ರಾಜರಾಜವರ್ಮರಿಗೆ ಮನೆಯಾಳು ಪಾಚನ್ ಹೆದರುತ್ತಲೇ ಮನೆತನದ ಗುಡಿಯ ಗೋಡೆಗಳು, ಮನೆಯೊಳಗಿನ ಬಿಳಿ ಗೋಡೆಗಳ ಮೇಲೆ ಬರೆಯಲಾಗಿದ್ದ ಇದ್ದಲಿನ ಚಿತ್ರಗಳನ್ನು ತೋರಿಸುವುದರಿಂದ ಕಾದಂಬರಿ ಆರಂಭವಾಗುತ್ತದೆ. 


ಆ ಘಟನೆ ನಡೆದಾಗ ರವಿಗಿನ್ನೂ ಏಳು ವರ್ಷ. ಅವರ ಸೋದರಮಾವ ರಾಜರಾಜವರ್ಮರು ಅಳಗಿರಿ ನಾಯ್ಡು ಆಸ್ಥಾನದಲ್ಲಿ ನೀರಿನ ಬಣ್ಣಗಳ ಚಿತ್ರಕಲೆಯನ್ನು ಅಭ್ಯಸಿಸಿದ್ದರು. ವಂಶಪಾರಂಪರ್ಯವಾಗಿ ಅದು ರವಿಗೂ ಬಂದಿರಬಹುದು. ರವಿಯ ತಾಯಿ ಉಮಾಂಬ ನೃತ್ಯ ಹಾಗೂ ಚಿತ್ರ ಕಲಾವಿದೆ, ತಂದೆ ಏಳುಮಾವಿಲ್ ಸಂಸ್ಕೃತ ಪಂಡಿತರು.


ಎಲ್ಲರೂ ರಾಜರಾಜವರ್ಮರ ಕೋಪಕ್ಕೆ ಹೆದರಿದ್ದರು. ಆದರೆ, ವ್ಯತಿರಿಕ್ತವೆಂಬಂತೆ ಅವರು ರವಿಯ ಪ್ರತಿಭೆಯನ್ನು ಗುರುತಿಸಿ, ಪರಿಷ್ಕರಿಸಿ, ಉತ್ತೇಜಿಸಿದರು. ರವಿಗೆ ಮಾವನ ಚಿತ್ರಕಲಾ ಕೊಠಡಿಗೆ ಪ್ರವೇಶ ದೊರೆಯಿತು.


ಅಳಿಲಿನ ಬಾಲದಿಂದ ತಯಾರಿಸಿದ ಅನೇಕ ರೀತಿಯ ಕುಂಚಗಳು, ಮಣ್ಣಿನ ಕುಡಿಕೆಯಲ್ಲಿನ ಬಣ್ಣಗಳು, ಮಾವನ ಹಳೆಯ ಕ್ಯಾನ್ವಾಸ್ಗಳು ಆತನದ್ದಾಯಿತು. 

"ಪ್ರತಿಯೊಬ್ಬ ಚಿತ್ರಕಾರನು ತನ್ನದೇ ಬಣ್ಣಗಳನ್ನು ಸೃಷ್ಟಿಸಬೇಕು ಅವನಿಗೆ ಕಣ್ಣುಗಳಿದ್ದರೆ ಮಾತ್ರ ಸಾಲದು. ಅಂತರ್ ದೃಷ್ಟಿ ಇರಬೇಕು ನೋಡಿದ್ದು ಗ್ರಹಿಸುವ ಶಕ್ತಿ ಇರಬೇಕು" ಎನ್ನುವ ಮಾವನ ಮಾತಿನ ಜೊತೆಗೆ ಬಣ್ಣಗಳನ್ನು ಎಲೆ, ಹೂವು, ಬೇರು, ಮಣ್ಣು ಮತ್ತು ರಾಸಾಯನಿಕ ವಸ್ತುಗಳಿಂದ ತಯಾರಿಸುವ ಪ್ರಾಥಮಿಕ ಪಾಠದಲ್ಲಿ ನಾಲ್ಕು ವರ್ಷಗಳ ಅಭ್ಯಾಸವಾಯಿತು.


ಅಧಿಕೃತವಾಗಿ ರವಿವರ್ಮ ಚಿತ್ರಿಸಿದ ಮೊದಲ ಚಿತ್ರ ಯಾವುದು ಗೊತ್ತೇ..?!

ಕೇಸರಿ ಬಣ್ಣದ ಎಲೆ.


ಆತನ ಪ್ರತಿಭೆಗೆ ಮತ್ತಷ್ಟು ಮೆರುಗು ನೀಡಲು ಎಲ್ಲರನ್ನೊಪ್ಪಿಸಿ ರಾಜರಾಜವರ್ಮರು ತನ್ನ ಪ್ರೀತಿಯ ಕೊಚ್ಚ್(ಕಂದಾ)ನನ್ನು ತಿರುವನಂತಪುರದ ಮಹಾರಾಜ ಆಯಿಲ್ಯ ತಿರುನಾಳರ ಆಶ್ರಯಕ್ಕೆ ಬಿಡುತ್ತಾರೆ. ಇವರು ರವಿವರ್ಮರ ಚಿತ್ರಕಲಾ ಹಾಗೂ ವೈಯಕ್ತಿಕ ಬದುಕಿನಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ.


ಮೊದಲಿಗೆ ಆತನನ್ನು ಮದುವೆಯ ಪ್ರಸ್ತಾಪಕ್ಕೆಂದು ಭಾವಿಸಿದ್ದರಾದರೂ.. ಕಲೆಯ ವಿಚಾರ ತಿಳಿದು, ಅವನ ಮೂರು ವರ್ಣಚಿತ್ರಗಳನ್ನು ನೋಡಿ ಆಸ್ಥಾನ ಚಿತ್ರಕಾರರಾದ ರಾಮಸ್ವಾಮಿ ನಾಯಕರ್ ರಿಂದ ಪಾಠ ಹೇಳಿಸಲು ಒಪ್ಪುತ್ತಾರೆ. 


ರಾಮಸ್ವಾಮಿ ನಾಯಕರ್ ಪಾಠವನ್ನು ಆರಂಭಿಸಿದರಾದರೂ.. ಬಣ್ಣವನ್ನು ಕಲಸುವಾಗ ಕೋಣೆಯೊಳಗೆ ಬಿಡುತ್ತಿರಲಿಲ್ಲ. ಆದರೆ, ರವಿವರ್ಮ ತಾನೇ ಮಿಶ್ರ ಮಾಡಿದ ಬಣ್ಣಗಳನ್ನು ತೆಗೆದುಕೊಂಡು ಹೋದಾಗ ಅವರಿಗೆ ಸಿಟ್ಟು ಬಂದು ಪ್ಯಾಲೆಟ್ ಅನ್ನು ಎಸೆದು ರಾದ್ದಾಂತವಾದಾಗ.. ಅದು ಶಮನವಾದುದೇಗೆ..?


ಪಾಶ್ಚಾತ್ಯ ಕಲಾವಿದರಾದ ಬ್ರೂಕ್ಸ್ ಅವರನ್ನು ನೇಮಿಸಲು ಮಹಾರಾಜರು ಒಪ್ಪುತ್ತಾರಾದರೂ.. ಆತನೇ ಇವರಿಗೆ ಪಾಠ ಹೇಳಲು ಒಪ್ಪುವುದಿಲ್ಲ ಮದರಾಸಿನಿಂದ ತೈಲವರ್ಣಗಳನ್ನು ತರಿಸಿಕೊಡುತ್ತಾರೆ. 15-16 ವಯೋಮಾನದಲ್ಲಿದ್ದಾಗ ಬ್ರೂಕ್ಸ್ ಬಣ್ಣ ಮಿಶ್ರ ಮಾಡುವುದನ್ನು ಗಮನಿಸುತ್ತಿರುತ್ತಾರೆ. ಆತನಿಗೆ ಅದು ತಿಳಿದು ಕೋಣೆಗೆ ಅನುಮತಿಸುವುದಿಲ್ಲ. ಗ್ರಂಥಾಲಯದ ಸಹಾಯದಿಂದಲೇ ಚಿತ್ರಕಲೆ ಅಭ್ಯಾಸಿಸಿ ರಾಜಮಾತೆಯ ಚಿತ್ರವನ್ನು ಅವರದ್ದೇ ತದ್ರೂಪಿನಂತೆ ಬರೆದು ಎಲ್ಲರ ಮನ ಸೆಳೆದರು.


ಕಲೆಗೆ ಮೆಚ್ಚಿ ಮಹಾರಾಣಿಯ ತಂಗಿ ಪುರತಾರ್ಥಿಯೊಡನೆ ವಿವಾಹವಾಗುತ್ತದೆ. ಮಾತೃಪ್ರಧಾನ ಸಮಾಜದ ನಡೆಯಂತೆ ಪತ್ನಿಯ ಊರು ಮಾನೆಲ್ಲಿಕರಾಗೆ ಹೋಗಿ ನೆಲೆಸಬೇಕಾಗುತ್ತದೆ. ಪತ್ನಿಯಿಂದ ಕಲೆಗೆ ಯಾವ ರೀತಿಯ ಪ್ರೋತ್ಸಾಹ ಸಿಗುತ್ತದೆ ಹಾಗೂ ಅವರ ಸಾಂಸಾರಿಕ ಬದುಕು ಹೇಗಿತ್ತು ಓದಿ ನೋಡಿ.


ರವಿವರ್ಮ ನಾಯರ್ ಸ್ತ್ರೀ ಕಾಮಿನಿ ಅನ್ನು ರೂಪದರ್ಶಿಯನ್ನಾಗಿಸಿಕೊಂಡು ಬರೆದ ಚಿತ್ರ ಸಾಕಷ್ಟು ಪ್ರಶಂಸೆ, ಬಹುಮಾನಗಳಿಗೆ ಪಾತ್ರವಾಗುತ್ತದಾದರೂ.. ತನ್ನವರಿಂದ ದೂರಾಗಿಸುತ್ತದೇಕೆ..?


ರವಿವರ್ಮನಷ್ಟೇ ಅವರ ತಂಗಿ ಮಂಗಳ ಸಹ ಪ್ರತಿಭಾವಂತ ಳು. ನೈಜವೆಂಬಂತ ಸುಂದರ ಪುಷ್ಪವೊಂದನ್ನು ರವಿವರ್ಮ ಚಿತ್ರಿಸಿರುತ್ತಾರೆ. ಊಟಕ್ಕೆ ಕರೆಯಲು ಬಂದ ಮಂಗಳ ಅದನ್ನು ನೋಡಿ ತನ್ಮಯಳಾಗುತ್ತಾಳೆ. ಊಟ ಮುಗಿಸಿ ಬರುವಷ್ಟರಲ್ಲಿ ಚಿತ್ರದ ಮೇಲಿದ್ದ ದುಂಬಿಯನ್ನು ಓಡಿಸಲು ಹೋದವರು ಬೇಸ್ತು ಬೀಳುತ್ತಾರೆ. ಏಕೆಂದರೆ, ಅದು ಮಂಗಳ ಚಿತ್ರಿಸಿದ್ದು. ಇದು ಇಬ್ಬರ ಕಲಾ ಪ್ರತಿಭೆಗೂ ಸಾಕ್ಷಿಯಾಗಿದೆ.


"ರಾಜಕುಮಾರ ರಾಜ ಮನೆತನದಲ್ಲಿ ಹುಟ್ಟುವುದರಿಂದ ರಾಜನಾಗಬಲ್ಲ. ಆದರೆ, ಜನರ ಮನಸ್ಸನ್ನು ಗೆದ್ದು ರಾಜಕಲಾವಿದನಾಗುವುದು ಸಣ್ಣ ಮಾತಲ್ಲ." ಎನ್ನುವ ಮಾವನ ಮಾತು ರವಿವರ್ಮನ ಮನಸ್ಸಿನಲ್ಲಿ ಅಚ್ಚಳಿಯದಂತಿತ್ತು. ಮುಂದೆ ಆಯಿಲ್ಯ ತಿರುನಾಳರಿಂದ 'ರಾಜ ರವಿವರ್ಮ' ಎಂಬ ಬಿರುದು ದೊರೆಯುತ್ತದೆ. ಗೌರವ ಬಿರುದು ದಯಪಾಲಿಸಲೆಂದೇ ದರ್ಬಾರ್ ಏರ್ಪಡಿಸಲಾಗಿರುತ್ತದೆ. 

ಮುಂದೆ ಅವರ ತಮ್ಮ ವಿಶಾಖಂ ತಿರುನಾಳ್ ರಾಜರಾದಾಗ ಬಿರುದನ್ನು ಹಿಂಪಡೆಯಲಾಗುತ್ತದೆ. ಮತ್ತೆ ಮುಂದಿನ ರಾಜರಾದ ಗುಲಂತಿರುನಾಳ್ ರು ಗೌರವದಿಂದ ಅದೇ ಬಿರುದನ್ನು ಹಿಂತಿರುಗಿಸುತ್ತಾರೆ.


"ಬಣ್ಣಗಳನ್ನು, ಕುಂಚಗಳನ್ನು ಹಿಡಿದು ಬಿಟ್ಟರೆ ಶ್ರೇಷ್ಠ ಕಲಾವಿದನಾಗುವುದಿಲ್ಲ. ಭಗವಂತನೆಂಬ ದೊಡ್ಡ ಚಿತ್ರ ಕಲಾವಿದ ಪ್ರತಿ ಹೃದಯದಲ್ಲಿಯೂ ದೈವತ್ವವನ್ನು ತುಂಬುತ್ತಾನೆ. ಅದನ್ನು ಕೆಲವರು ಮಾತ್ರ ಕಂಡುಕೊಳ್ಳುತ್ತಾರೆ." ಎನ್ನುವ ಮಾವನ ಮಾತು ಸತ್ಯ. ಅದರಲ್ಲಿ ರವಿವರ್ಮ ಮುಂಚೂಣಿಯಲ್ಲಿದ್ದರು.


ತಮ್ಮ ಚಿತ್ರಕಲೆಯ ಸ್ಪೂರ್ತಿಗಾಗಿ ದೇವಾಲಯದ ಶಿಲ್ಪ ಸೌಂದರ್ಯ, ನೈಜ ಸೌಂದರ್ಯವನ್ನು ಅರಸುತ್ತಾ ನೃತ್ಯ ಹಾಗೂ ಸಂಗೀತ ಕಚೇರಿಗೆ ಹೋಗುವುದನ್ನು ಇಲ್ಲಿ ಗಮನಿಸಬಹುದು.


ಮದರಾಸಿನಲ್ಲಿ ದಿವಾನ್ ರಘುರಾಯರಿಂದ ಏರ್ಪಾಡಾದ ಚಿತ್ರ ಪ್ರದರ್ಶನಕ್ಕೆ ಹೋದಾಗ ಪಾಶ್ಚಾತ್ಯರ ಬಣ್ಣದ ಛಾಯೆಗಳನ್ನು ಗಮನಿಸುವುದನ್ನು ಇಲ್ಲಿ ಹೇಳಿದ್ದಾರೆ.

ಕಂದು ಬಣ್ಣವೆಂದರೆ ಬ್ರೌನ್, ಟೊಬಾಕೊ ಬ್ರೌನ್, ಮಮ್ಮಿ ಬ್ರೌನ್ ಹೀಗೆ.. ಬಣ್ಣದ ಹಲವಾರು ಶೇಡ್ ಗಳ ಕುರಿತು ತಿಳಿಯುತ್ತಾರೆ. ಅಲ್ಲಿ ಹೆಚ್ಚು ಕಲಿಯುವ ಸಲುವಾಗಿ ಪ್ರವಾಸಕ್ಕೂ ಹೋಗುವುದಿಲ್ಲ. ಹಲವಾರು ಪಾಶ್ಚಾತ್ಯ ಕಲಾವಿದರನ್ನು ಭೇಟಿಯಾದರೂ ಇವರ ಚಿತ್ರವನ್ನು ಹೊಗಳಿದರೇ ವಿನಃ ಅವರ ಚಿತ್ರಕಲೆಯ ಗುಟ್ಟು ಬಿಟ್ಟುಕೊಡುವುದಿಲ್ಲ.


ಶಕುಂತಲೆಯ ಪತ್ರಲೇಖನ ಚಿತ್ರಕ್ಕೆ ಮದರಾಸಿನ ಮತ್ತೊಂದು ಪ್ರದರ್ಶನದಲ್ಲಿ ಪದಕವು ದೊರೆಯುತ್ತದೆ. ಅದಕ್ಕೆ ಅಗತ್ಯವಾಗಿದ್ದ ರೂಪದರ್ಶಿಗಳನ್ನು ಆಯಿಲ್ಯಂ ತಿರುನಾಳರೇ ಒದಗಿಸುತ್ತಿದ್ದರು. 


ರವಿವರ್ಮನ ಚಿತ್ರಕಲೆಯಲ್ಲಿ ಅವರ ತಮ್ಮ ರಾಜವರ್ಮನದ್ದೂ ಪಾಲಿತ್ತು. ಆತನು ಒಳ್ಳೆಯ ಚಿತ್ರಕಾರ. ಹೆಚ್ಚಿನ ಚಿತ್ರಗಳನ್ನು ಎರಡು ಕಾಪಿ ಮಾಡುತ್ತಿದ್ದರು. ರಾಜಕುಟುಂಬದವರ ವರ್ಣಚಿತ್ರಗಳಲ್ಲಿ ಮುಖ್ಯವ್ಯಕ್ತಿಯ ಚಿತ್ರವನ್ನು ರವಿವರ್ಮ ರಚಿಸಿದರೆ ಹಿನ್ನೆಲೆಯ ಬಣ್ಣವನ್ನು ರಾಜವರ್ಮ ತುಂಬುತ್ತಿದ್ದ ಉಲ್ಲೇಖವಿದೆ.


ರವಿವರ್ಮರ ಹೆಚ್ಚಿನ ಚಿತ್ರಗಳಿಗೆ ರೂಪದರ್ಶಿಯಾದ ಸುಗಂಧಳ ಅಧ್ಯಾಯ ಶುರುವಾದದ್ದು ಹೇಗೆ..? 

ಉಷಾಳ ಸ್ವಪ್ನದಲ್ಲಿ ಅನಿರುದ್ಧ ಬರುವ ಚಿತ್ರವನ್ನು ಬರೆಯುವ ಸಂದರ್ಭದಲ್ಲಿ ಹಾಡು ಕೇಳಿ ಸ್ಪೂರ್ತಿಗೊಳ್ಳಲು ತಮ್ಮ ಗೋದವರ್ಮರನ್ನು ವೀಣೆಯೊಂದಿಗೆ ಬರಲು ಹೇಳುತ್ತಾರೆ.


ಬರೋಡಾದ ರಾಜಮನೆತನದ, ಭಾವನಗರ್ ಸಂಸ್ಥಾನದ ರಾಜ ಕುಟುಂಬದ ತೈಲಚಿತ್ರಗಳನ್ನು ರಚಿಸುತ್ತಾರೆ. ಹಲವಾರು ಪುರಾಣ ಪ್ರಸಂಗಗಳ ಪ್ರಸಿದ್ಧ ಚಿತ್ರಣಗಳನ್ನು ರಚಿಸುತ್ತಾರೆ. ಅದಕ್ಕೆ ಸುಗಂಧ ಹಾಗೂ ಆಕೆಯ ತಂಗಿ ಕಮಲ ರೂಪದರ್ಶಿಗಳು.


ಪುರೂರವ ಹಾಗೂ ಊರ್ವಶಿಯರ ಚಿತ್ರಕ್ಕೆ.. ಅರೆನಗ್ನ ಚಿತ್ರದ ರೂಪದರ್ಶಿಯಾಗಿದ್ದು ಸುಗಂಧ.

"ರವಿವರ್ಮರ ಪಾಲಿಗೆ ಜಡವಸ್ತುವಾಗಿದ್ದ ಸುಗಂಧ..!

ಬರಿಯ ಭಾವನೆಗಳಿಲ್ಲದ ರೂಪದರ್ಶಿಯಂತೆ.. ಒಂದು ಹೂವನ್ನು, ಹಣ್ಣನ್ನು ಚಿತ್ರಿಸುವಂತೆ ನನ್ನನ್ನು ಚಿತ್ರಿಸಿದ" ಎನ್ನುವ ಆತನ ನಿರ್ಲಿಪ್ತ ಮನಸ್ಥಿತಿಯನ್ನು ಕಲಾಲೋಕದ ಔನ್ನತ್ಯಕ್ಕೆ ಸಾಕ್ಷಿಯಂತೆ ಕಾಣಬಹುದು.


ಮೈಸೂರಿನ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಆಹ್ವಾನದ ಮೇಲೆ ರಾಜಮನೆತನದವರ ಚಿತ್ರಗಳನ್ನು ಬಿಡಿಸುತ್ತಾರೆ.


"ನಿನ್ನ ಬಣ್ಣದ ತಟ್ಟೆಯ ತುಂಬಾ ಅನೇಕ ಬಣ್ಣಗಳಿವೆ. ಅವೆಲ್ಲ ನೀನೇ ಸೃಷ್ಟಿಸಿರುವ ಬಣ್ಣಗಳು. ಒಬ್ಬ ಕಲಾಕಾರನಿಗೆ ಯಾವ ಬಣ್ಣಗಳನ್ನು ಉಪಯೋಗಿಸಬಾರದು ಎಂದು ತಿಳಿದಿರಬೇಕು. 

ಚಿತ್ರದ ಕಣ್ಗಳಲ್ಲಿ ಜೀವಕಳೆ ಮೂಡಿಸುವುದು ತುಂಬಾ ಕ್ಲಿಷ್ಟ. ಅದರಲ್ಲಿ ನೀನು ಪರಿಣಿತ. ಕಲೆಯನ್ನು ಹಣಕ್ಕಾಗಿ ಮಾರಬೇಡ" ಎಂಬ ಕಿವಿಮಾತನ್ನು ಮಾವ ಹೇಳುತ್ತಾರೆ.


ಮಹಾರಾಜ ಸಯ್ಯಾಜಿ ರಾವ್ ಅವರ ಲಕ್ಷ್ಮಿವಿಲಾಸ ಅರಮನೆಗೆ ಸಂಸ್ಕೃತಿ, ಪುರಾಣ, ಇತಿಹಾಸಗಳ ಕಥೆಯನ್ನು ಬಣ್ಣಿಸುವ ಚಿತ್ರಗಳು ಬೇಕಾದಾಗ ಅವರ ಏಕೈಕ ಹಾಗೂ ಉತ್ಕೃಷ್ಟ ಆಯ್ಕೆಯಾಗಿದ್ದು ರವಿವರ್ಮರೇ. ಇದಕ್ಕಾಗಿ ಅವರು ಉತ್ತರ ಭಾರತದ ಪ್ರವಾಸವನ್ನು ಮಾಡಿ ಬರುತ್ತಾರೆ.


ರವಿವರ್ಮರ ಚಿತ್ರಕಲೆಯ ಹಿರಿಮೆಯ ಕುರಿತು ಹೇಳುತ್ತಾ ಸಾಗಿದಷ್ಟೂ ಇದೆ.


ಮುಂದೆ ಚಿತ್ರಗಳನ್ನು ಮುದ್ರಿಸಲು ನಿರ್ಧರಿಸಿ ಜರ್ಮನಿಯಿಂದ ಮುದ್ರಣ ಯಂತ್ರಗಳನ್ನು ತರಿಸಿ ಕ್ಯಾಲೆಂಡರ್ ಆರ್ಟ್ ಶುರು ಮಾಡುತ್ತಾರೆ. ಆದರೆ ಅಲ್ಲಿಂದ ಬಂದ ಯಂತ್ರಜ್ಞರು ಚಿತ್ರಗಳನ್ನು ಪ್ರಶಂಸಿಸುತ್ತಾರಾದರೂ.. ಮುದ್ರಣದ ದೃಷ್ಟಿಯಿಂದ ಕಡಿಮೆ ಬಣ್ಣಗಳನ್ನು ಉಪಯೋಗಿಸಿ ರಚಿಸುವ ಸಲಹೆ ನೀಡುತ್ತಾರೆ. ಲಿತೋಗ್ರಾಫ್ ತಟ್ಟೆಗಳ ಮೇಲೆ ಅಂತಹ ಚಿತ್ರವನ್ನು ರಚಿಸಿಯೇ ಬಿಡುತ್ತಾರೆ ರವಿವರ್ಮ. ಹಾಗೆ ರಚಿಸಿದ ಮೊದಲ ಚಿತ್ರ ಶಕುಂತಲೆಯ ಜನನ.


ಹಿಂದೂ ದೇವಕೆಗಳ ಚಿತ್ರಗಳನ್ನು ಮನೆಮನೆಗಳಲ್ಲೂ, ಬೀದಿಬೀದಿಗಳಲ್ಲೂ ಹರಡಿ ಪವಿತ್ರತೆಗೆ ಕುಂದು ತಂದಿರುವ ಕುರಿತಾಗಿಯೂ ಹಾಗೂ ಅವರನ್ನು ಅರೆನನ್ನವಾಗಿ ಚಿತ್ರಿಸಿ ಆಗೌರವಿಸಿರುವ ಕುರಿತಾಗಿಯೂ ಕೋರ್ಟ್ ನಿಂದ ಸಮನ್ಸ್ ಬರುತ್ತದೆ. ಅಲ್ಲಿ ವಾದ ಮಾಡಿ ಎಲ್ಲರಿಗೂ ಸ್ಪಷ್ಟನೆ ನೀಡಿ ಮನಸ್ಸು ಹಾಗೂ ಕೇಸ್ ಎರಡನ್ನೂ ಗೆಲ್ಲುವ ರವಿವರ್ಮರ ವಾದದ ವೈಖರಿ ಓದಿಯೇ ತಿಳಿಯಬೇಕು.


ಚಿತ್ರಕಲೆ ಹಾಗೂ ಸಂಗೀತ ಎರಡರಲ್ಲೂ ಸಾಮ್ಯತೆಯಂತೆ ಉದಾಹರಿಸುತ್ತಾರೆ. ಒಂದು ರಾಗದ ಸಂಪೂರ್ಣ ಸ್ವರೂಪಕ್ಕೆ ಆರೋಹಣ ಹಾಗೂ ಅವರೋಹಣ ಮುಖ್ಯವಿರುವಂತೆ.. ಪೂರ್ಣ ಸ್ವರೂಪದ ಚಿತ್ರವನ್ನರಿಯಲು ಒಳಗಣ್ಣು ತೆರೆಯುವ ಪರಿಯನ್ನು ಉದಾಹರಿಸುತ್ತಾರೆ.


ಅಂಜನೀಬಾಯಿ ಎಂಬ ರೂಪದರ್ಶಿಯ ಕುರಿತು ಪ್ರಸ್ತಾಪವಿದೆ.


ಪ್ರಖ್ಯಾತರೊಬ್ಬರು ಇವರಿಗೆ ಹೀಗನ್ನುತ್ತಾರೆ. 

"ಮನುಷ್ಯನಿಗೆ ಸಾವು ಬಂದಂತೆ ನಿನಗೂ ಬಂದು ನೀನು ಸ್ವರ್ಗಕ್ಕೆ ಹೋದರೆ ಅಲ್ಲಿ ರಂಬೆ, ಊರ್ವಶಿ, ಮೇನಕೆ, ತಿಲೋತ್ತಮಯರನ್ನು ನೋಡಿ ನಿನಗೆ ನಿರಾಸೆಯಾಗುವುದು ಖಂಡಿತ. ಏಕೆಂದರೆ, ನೀನು ರಚಿಸಿರುವ ಸ್ತ್ರೀಯರಷ್ಟು ಸುಂದರಿಯಾಗಿರಲು ಸಾಧ್ಯವಿಲ್ಲ"ವೆನ್ನುತ್ತಾರೆ.

ರವಿವರ್ಮರ ಕಲ್ಪನೆ ಹಾಗೂ ಕಲಾ ಸೃಷ್ಟಿಗೆ ಕನ್ನಡಿ ಹಿಡಿದ ಪ್ರಖ್ಯಾತರಾರು ಓದಿ ನೋಡಿ.


ರವಿವರ್ಮರು ತಾವು ಚಿತ್ರರಚನೆ ನಿಲ್ಲಿಸಬೇಕೆಂದು ಸೂಚನೆ ಬಂದಿತು ಎಂದು ಹೇಳುವ ಪ್ರಸಂಗ ಯಾವುದು..? ಅವರ ಮುಂದಿನ ಪೀಳಿಗೆ, ಅವರ ಬದುಕಿನಲ್ಲಿನ ಏಳು-ಬೀಳುಗಳು, ಸಾಂಸಾರಿಕ ಚಿತ್ರಣ, ಕೌಟುಂಬಿಕ ಚಿತ್ರಣ ಎಲ್ಲದರ ಕುರಿತು ನೀವೇ ಓದಿ.


ಕಲೆಯ, ಕಲಾವಿದನ ಅದರಲ್ಲಿಯೂ ಚಿತ್ರಕಲಾಕಾರನ ಸಮಗ್ರ ಬದುಕಿನ ಚಿತ್ರಣವಿದು. ಬಹಳಷ್ಟು ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಪುಸ್ತಕವನ್ನು ಒಮ್ಮೆಯಾದರೂ ಓದಲೇಬೇಕು.


~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 6, 2026

ವಿಶೇಷ ಮುತ್ತು (ಬೆಳಕಿಂಡಿಯ ಕತೆಗಳು - 80)


 ಅವನು ಒರಟೊರಟಾಗಿ ಅವಳನ್ನು ಅಪ್ಪಿ ಹಿಡಿದು ಅವಳ ಕೆನ್ನೆಗೆ ಜೊಲ್ಲನ್ನು ಸಹಾ ಸೇರಿಸಿ ಮುತ್ತು ಕೊಡುತ್ತಿದ್ದರೆ ಅವಳ ಕಣ್ಣಲ್ಲಿ ನೂರು  ಸೂರ್ಯರ ಪ್ರಕಾಶ ಮಿನುಗುತ್ತಿತ್ತು.


ಅಮ್ಮನಿಗೆ ಅದು ತನ್ನ ವಿಶೇಷ ಚೇತನ ಮಗುವಿನ ಮೊದಲ ಮುತ್ತು. ಅದು ಅವಳ ಪಾಲಿನ ವಿಶೇಷ ಮುತ್ತು. 


~ವಿಭಾ ವಿಶ್ವನಾಥ್

ಹಂಬಲದ ತಕ್ಕಡಿಯಲ್ಲಿ... (ಬೆಳಕಿಂಡಿಯ ಕತೆಗಳು - 79)

 


ಅವಳು ಹಂಬಲಿಸಿದ್ದು ಅವನ ಹಣ, ಐಶ್ವರ್ಯಕ್ಕಲ್ಲ ಬದಲಾಗಿ ಅವನ ಹಿಡಿ ಪ್ರೀತಿಗೆ. ಆದರೆ, ಅವನು ಅವಳ ಅಂತರಂಗವನ್ನು ಅರ್ಥ ಮಾಡಿಕೊಳ್ಳದೇ ಚಿನ್ನ, ವಜ್ರಗಳನ್ನು ತಂದು ಅವಳ ಮುಂದೆ ಸುರಿದ. 

ಆದರೂ, ಅವಳ ಹಂಬಲದ ತಕ್ಕಡಿಯಲ್ಲಿ ಸಂಪತ್ತಿಗಿಂತಲೂ, ಪ್ರೀತಿಗೇ ಹೆಚ್ಚು ತೂಕ. 


~ವಿಭಾ ವಿಶ್ವನಾಥ್

ಅಮೃತ (ಬೆಳಕಿಂಡಿಯ ಕತೆಗಳು - 78)

 


ವಿಷದ ತುತ್ತನ್ನೇ ಉಣಿಸಿದರೂ ಅದು ಅಮೃತ ಸಮಾನವಾಗುವುದು ಕಯಾದುವಂತಹಾ ತಾಯಿಯಿಂದ.. ಪ್ರಹ್ಲಾದನಂತಹಾ ನಂಬಿಕೆಯುಳ್ಳ ಮಾತೃಭಕ್ತ ಮಗನಿಂದ. ಅಮ್ಮ ನೀಡಿದ್ದು ಎಂದಿಗೂ ಅಮೃತಸಮಾನವೇ..


~ವಿಭಾ ವಿಶ್ವನಾಥ್

ಸತ್ಯದ ಮುಸುಕು ಹೊದ್ದು

 


"ಏನೋ ಈಗ ನಿನ್ನ ಯೂಟ್ಯೂಬ್ ಚಾನೆಲ್ ತುಂಬಾ ಫೇಮಸ್ ಆಗಿ ಬಿಟ್ಟಿದೆಯಂತೆ" ಎಂದ ಗೆಳೆಯನ ಮಾತಿಗೆ "ಹೌದು ಕಣೋ ಮಚ್ಚಾ.. ಸ್ವಲ್ಪ ಫೇಮಸ್ ಆಗುವವರೆಗೂ ಅಷ್ಟೇ ಇವೆಲ್ಲಾ.. ನೋಡ್ತಾ ಇರು ಇನ್ನೂ ಹೇಗೆಲ್ಲಾ ಫೇಮಸ್ ಆಗುತ್ತೇನೆ ಅಂತಾ.. " ಎಂದನು ಮುರುಳಿ.


ಅಲ್ಲಿಯೇ ಇದ್ದ ಶಶಿಧರ "ಫೇಮಸ್ ಏನೋ ಆಗ್ತಿಯಪ್ಪ. ಆದರೆ, ಒಳ್ಳೆಯ ರೀತಿಯಲ್ಲಿ ಫೇಮಸ್ ಆಗೋ. ಈ ಟ್ರೋಲ್ ಮಾಡಿಸಿಕೊಂಡು ಫೇಮಸ್ ಆಗೋ ತರಹದಲ್ಲೆಲ್ಲಾ ಫೇಮಸ್ ಆಗಬೇಡ. ಸತ್ಯವಾದ ಹಾದಿಯಲ್ಲಿ ನಡೆಯೋ.. ಸತ್ಯವನ್ನು ಮಾತ್ರ ಹೇಳೋ. ಹೆಡ್ಡಿಂಗ್ ಒಂದು ಹಾಕಿರುತ್ತೀಯ. ಒಳಗಡೆ ಕಂಟೆಂಟ್ ಇನ್ನೊಂದು ಇಟ್ಟಿರುತ್ತೀಯ. ಹೀಗಾದ್ರೆ ಕಷ್ಟ ಕಣೋ.. ಇಂತದ್ದೆಲ್ಲಾ ಸ್ವಲ್ಪ ದಿನ ಅಷ್ಟೇ ವರ್ಕ್ ಆಗೋದು. ಇಂತಹಾ ಗಿಮಿಕ್ ಗಳಿಗೆಲ್ಲಾ ಹೆಚ್ಚು ಆಯುಷ್ಯ ಇರಲ್ಲಮ್ಮ. " ಎಂದಾಗ ಮುರಳಿ ರೇಗಿದನು.


"ನಾನು ಫೇಮಸ್ ಆಗುವುದನ್ನು ಸಹಿಸುವುದಿಲ್ಲ ನೀನು. ಅದಕ್ಕೇ ಹೀಗೆಲ್ಲಾ ಮಾತನಾಡುತ್ತಾ ಇದ್ದೀಯ. " ಎಂದವನಿಗೆ "ಬೈಯ್ಯುವವರೇ ಕಣೋ ಬದುಕುವುದಕ್ಕೆ ಹೇಳುವುದು. ಸುಮ್ಮನೆ ಎಲ್ಲರೂ ಹೊಗಳಿದ ಹಾಗೆ ನಾನೂ ಹೊಗಳಿಬಿಟ್ಟರೆ ನೀನು ಹೋಗುತ್ತಿರುವ ಹಾದಿಯೇ ಸರಿ ಅನ್ನೋ ಭ್ರಮಗೆ ಬಿದ್ದು ಬಿಡುತ್ತೀಯ. ಒಬ್ಬ ಒಳ್ಳೆಯ ಸ್ನೇಹಿತನಾಗಿ ನಿನಗೆ ಇದನ್ನ ಹೇಳಬಹುದು ನೋಡಪ್ಪ. " ಎಂದವನೇ ಅಲ್ಲಿಂದ ಹೊರಟನು ಶಶಿಧರ.


ಅಲ್ಲೇ ಇದ್ದ ಮತ್ತೊಬ್ಬ ಗೆಳೆಯ ಮುರಳಿಗೆ "ಇನ್ನೂ ಅವನು ಸತ್ಯ, ನ್ಯಾಯ, ಪ್ರಾಮಾಣಿಕತೆ ಅಂತಾ ಕೂತಿರುವುದಕ್ಕೆ ಅವನಿಗೆ ಟ್ಯಾಲೆಂಟ್ ಇದ್ದರೂ ಅವನು ಫೇಮಸ್ ಆಗದೇ ಇರುವುದು. ಈಗಿನ ಕಾಲಕ್ಕೆ ಯಾವುದು ಸರಿಯೋ ಹಾಗೆಯೇ ಇರಬೇಕು. ಅದು ಬಿಟ್ಟು ಸತ್ಯವನ್ನು ನೇರವಾಗಿಯೇ ಹೇಳ್ತೀನಿ. ನಾನು ನಿಷ್ಠುರವಾಗಿಯೇ ಇರುತ್ತೇನೆ ಅಂತಾ ಅಂದರೆ ಯಾರು ಕೇಳುತ್ತಾರೋ..


ಈಗಿನ ಕಾಲದಲ್ಲಿ ಅರ್ಧ ಸತ್ಯ ಹೇಳಿದರೂ ಅದನ್ನು ಸುಳ್ಳು ಅಂತಾ ಹೇಳುವುದಿಲ್ಲ. ಅದನ್ನೂ ಸತ್ಯ ಅಂತಲೇ ಪರಿಗಣಿಸುವುದು. ಅವನ ಮಾತನ್ನೆಲ್ಲಾ ನೀನು ಸೀರಿಯಸ್ ಆಗಿ ತೆಗೆದುಕೊಳ್ಳುವುದಕ್ಕೆ ಹೋಗಬೇಡ. ನಿನ್ನ ಪಾಡಿಗೆ ನೀನು ಹೇಗೆ ವಿಡಿಯೋ ಹಾಕ್ತಾ ಇದ್ದಿಯೋ ಹಾಗೇ ಹಾಕು. " ಎನ್ನುವ ಬಿಟ್ಟಿ ಸಲಹೆ ಕೊಟ್ಟನು.


ಅದಕ್ಕೆ ಮುರಳಿ " ನೋಡೋಣ ಬಿಡೋ.. ಏನೇನು ಆಗುತ್ತೋ ಏನೋ.. ಯಾಕೋ ಮನಸ್ಸು ಸರಿ ಇಲ್ಲ. ಮನೆಗೆ ಹೋಗುತ್ತೇನೆ" ಎಂದು ಮನೆಗೆ ಹೊರಟನು.


ಅಷ್ಟರಲ್ಲಿ ಅವನ ಮೊಬೈಲಿಗೆ ಅವನ ತಂಗಿಯ ಮೊಬೈಲ್ ನಿಂದ ಒಂದು ಮೆಸೇಜ್ ಬಂತು. "ಅಣ್ಣ, ಅಪ್ಪನಿಗೆ ಆಕ್ಸಿಡೆಂಟ್ ಆಗಿದೆ ಕಣೋ.. " ಎಂದು.


'ಯಾವ ಹಾಸ್ಪಿಟಲ್, ಹೇಗೆ, ಯಾವಾಗ , ಏನಾಗಿದೆ, ಎಲ್ಲಿದ್ದೀರ' ಎಂದೆಲ್ಲಾ ಒಂದರ ಮೇಲೆ ಒಂದು ಮೆಸೇಜ್ ಕಳುಹಿಸಿದನು. ಒಂದಕ್ಕೂ ರಿಪ್ಲೈ ಇಲ್ಲ. ಅವಳ ಮೊಬೈಲ್ ಗೆ ಕರೆ ಮಾಡಿದರೆ ಅದು ಸ್ವಿಚ್ಡ್ ಆಫ್. ಅಪ್ಪ ಹಾಗೂ ಅಮ್ಮನ ಮೊಬೈಲ್ ಕೂಡಾ ಕನೆಕ್ಟ್ ಆಗದಿದ್ದಾಗ ಗಾಬರಿಯಿಂದ ಹುಚ್ಚನಂತೆ ಮನೆಗೆ ಓಡಿದ ಮುರುಳಿ.


ಅಲ್ಲಿ ನೋಡಿದರೆ ಮನೆಯಲ್ಲಿ ಎಲ್ಲರೂ ಸಂತೋಷದಿಂದ ಹರಟೆ ಹೊಡೆಯುತ್ತಾ ಕೂತಿದ್ದರು. ಬಂದವನೇ ತಂಗಿಯ ಕೆನ್ನೆಗೆ ಬಾರಿಸಿ "ಇನ್ನೊಂದು ಸಾರಿ ಸುಳ್ಳು ಹೇಳಿದ್ರೆ ಸರಿ ಇರುವುದಿಲ್ಲ ನೋಡು.." ಎಂದು ವಾರ್ನಿಂಗ್ ಕೊಟ್ಟನು.


"ನಾನೆಲ್ಲಿ ಸುಳ್ಳು ಹೇಳಿದೆ. ಕಳೆದ ವರ್ಷ ಅಪ್ಪನಿಗೆ ಆಕ್ಸಿಡೆಂಟ್ ಆಗಿತ್ತು ತಾನೇ ? " ಎಂದಳು.


"ಅದು ಕಳೆದ ವರ್ಷ ತಾನೇ..?? ಈಗ ಯಾಕೆ ಹೇಳಿದೆ ? ಈಗ ಏನೂ ಆಗಿರಲಿಲ್ಲ ತಾನೇ.. ಪೂರ್ತಿ ಮಾಹಿತಿ ಹೇಳದೆ ಫೋನ್ ಬೇರೆ ಆಫ್ ಮಾಡಿದ್ದೀಯ" ಎಂದ ಮುರಳಿಗೆ


"ನೀನು ನಿನ್ನ ಯೂಟ್ಯೂಬ್ ಗಳಲ್ಲಿ ಈ ರೀತಿ ಯಾವತ್ತೋ ಆಗಿದ್ದಕ್ಕೆ ಬಣ್ಣ ಹಚ್ಚಿ, ಅರ್ಧಂಬರ್ಧ ಮಾಹಿತಿ ನೀಡಿದರೆ ತಪ್ಪಲ್ಲ. ಅದು ಸುಳ್ಳು ಸಹಾ ಅಲ್ಲ. ಆದರೆ , ನಿನ್ನ ತಂಗಿ ಮಾಡಿದ್ದು ತಪ್ಪು ಅಲ್ವಾ..


ಅವರ ಮನೆಯವರಿಗೂ ಹೀಗೆಯೇ ಆಗಿರುತ್ತೆ ಅಲ್ವಾ.. ಎಲ್ಲರ ಬುಡಕ್ಕೆ ಬೆಂಕಿ ಬಿದ್ದಾಗಲೇ ಅವರಿಗೂ ಅರ್ಥ ಆಗುವುದು" ಎಂದ ಶಶಿಧರನನ್ನು ಕಂಡಾಗ ಅದು ಅವನ ಉಪಾಯವೆಂಬುದು ಅರಿವಾಗಿತ್ತು. ಅಲ್ಲದೇ.. ಅವನು ಹೇಳಿದ್ದು ಸಹಾ ಸರಿಯಾಗಿ ಅರ್ಥವಾಗಿ ಜ್ಞಾನೋದಯವಾಗಿತ್ತು.


"ಖ್ಯಾತಿ ನಿಧಾನಕ್ಕೇ ಬರಲಿ ಬಿಡೋ.. ತೊಂದರೆಯಿಲ್ಲ. ಆದರೆ, ಕುಖ್ಯಾತಿ ಅಂತೂ ಬೇಡ. ಇನ್ನು ಮುಂದೆ ಡೈರೆಕ್ಟ್ ಆಗಿರುವ ಹೆಡ್ಡಿಂಗ್ ಹಾಕಿ ಪೂರ್ಣ ಸತ್ಯವನ್ನು ಮಾತ್ರ ತಲುಪಿಸುತ್ತೇನೆ" ಎಂದ ಮುರಳಿಯ ಮಾತು ಕೇಳಿ ಎಲ್ಲರಿಗೂ ಸಂತಸವಾಗಿತ್ತು.


~ವಿಭಾ ವಿಶ್ವನಾಥ್

ನನ್ನ ಬದುಕಿನ ಗುರುಗಳು ಹಾಗೂ ಗುರು ಸಮಾನರಿವರು..


ಜೀವನದ ಹಾದಿಯಲ್ಲಿ ಪ್ರತಿಯೊಬ್ಬರಿಂದಲೂ ಕಲಿಯುವುದು ಇದ್ದೇ ಇದೆ. ಆ ನಿಟ್ಟಿನಲ್ಲಿ ಹಲವಾರು ಬಳಗಗಳು ಮಾಮ್ಸ್ಪ್ರೆಸೊ, ಸಾಹಿತ್ಯ ಸೃಷ್ಟಿ ಬಳಗ, ಎಲ್ಲಕ್ಕಿಂತ ಹೆಚ್ಚಾಗಿ ಪುಸ್ತಕ ಅವಲೋಕನ ಬಳಗದಿಂದ ಕಲಿತದ್ದು ಬಹಳವಿದೆ. ಹಾಗೆಯೇ, ಇಲ್ಲಿ ದಿನನಿತ್ಯವೂ ಕಲಿಯುವಿಕೆ ಇದ್ದೇ ಇದೆ. ಗುರು ಮುಖೇನ ಕಲಿಯುವುದು ಹೆಚ್ಚು ಪರಿಣಾಮಕಾರಿ ಎಂಬುದು ಹೌದಾದರೂ.. ಏಕಲವ್ಯನಿಗೆ ದ್ರೋಣಾಚಾರ್ಯರಿದ್ದಂತೆ, ಪರೋಕ್ಷವಾಗಿಯೂ ಗುರುವಾಗುವ ಪರಿಣಾಮಕಾರಿಯಾಗಿ ನೆನಪಿಸಿಕೊಳ್ಳುವುದು ಹಾಗೂ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವುದು ಸಹಾ ಅವರಿಗೆ ನೀಡುವ ಗೌರವವೆಂಬುದು ನನ್ನ ಅಭಿಪ್ರಾಯ.


ಹಾಗೆ ನಾನು ಇದುವರೆಗೂ ಪ್ರತ್ಯಕ್ಷವಾಗಿ ನೋಡದೆ ಬಹಳ ಗೌರವಿಸುವ  ಹಾಗೂ ಗುರು ಸಮಾನರೆಂದು ಭಾವಿಸುವುದು ವೀಣಾ ನಾಯಕ್ ಮೇಡಂ ಅವರನ್ನು. ಅವರ ಶಿಸ್ತು, ಸಮಯಪಾಲನೆ, ಸಾಹಿತ್ಯಸೇವೆ, ಕನ್ನಡದ ಕುರಿತ ಕಾಳಜಿ, ಪುಸ್ತಕದ ಓದು ಹಾಗೂ ಪುಸ್ತಕವನ್ನು ಬಹುಮಾನವಾಗಿ ಕಳುಹಿಸುವ ನಿಸ್ವಾರ್ಥತೆ ಎಲ್ಲವೂ ಆದರಣೀಯ. 'ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ' ಎಂಬಂತೆ ಅವರ ನಡೆ ಎಲ್ಲವೂ ಗೌರವಪೂರ್ಣವಾಗಿದ್ದು, ಅವರ ನಿಯಮಗಳನ್ನು ನಮಗೇ ಅರಿವಿಲ್ಲದಂತೆ ಪಾಲಿಸುವಂತೆ ಮಾಡುತ್ತದೆ. 


ನಮ್ಮ ಈ ಬಳಗದಲ್ಲಿ ಇರುವ ಹಲವರಿಂದ ಅವರ ಬರಹದಿಂದ ಬಹಳಷ್ಟು ಕಲಿಯುತ್ತಿದ್ದೇನೆ. ಈ ಸಂಧರ್ಭದಲ್ಲಿ ಅಂತಹಾ ಎಲ್ಲರನ್ನೂ ಸ್ಮರಿಸುತ್ತೇನೆ.


ನಾನು ಕನ್ನಡದ ಕುರಿತು, ಸಾಹಿತ್ಯದ ಕುರಿತು, ಓದಿನ ಕುರಿತು ಇಷ್ಟು ಆಸಕ್ತಿ ಬೆಳೆಸಿಕೊಂಡಿರುವುದಕ್ಕೆ ಮುಖ್ಯವಾಗಿ ನನ್ನ ಇಬ್ಬರು ಕನ್ನಡ ಗುರುಗಳು ಕಾರಣ. 


ಪ್ರಾಥಮಿಕ ಶಾಲೆಯಲ್ಲಿ ನಾಗರತ್ನ ಮಿಸ್ ರಾಗವಾಗಿ ಹಾಡುತ್ತಿದ್ದ ಕನ್ನಡದ ಪದ್ಯಗಳು ಹಾಗೂ ಹೇಳಿಕೊಟ್ಟ ವ್ಯಾಕರಣ, ಕೊಡುತ್ತಿದ್ದ ಉಕ್ತಲೇಖನ ಜೊತೆಗೆ ಮಾತಿನಲ್ಲಿಯೇ ನಯವಾಗಿ ತಿದ್ದುತ್ತಿದ್ದ ಪರಿ, ಹೇಳಿಕೊಟ್ಟ ಪಾಠ ಎಲ್ಲವೂ ಮರೆಯಲಾಗದಂತಹದ್ದು. ಇವರು ಸಮಾಜ ವಿಜ್ಞಾನದ ಶಿಕ್ಷಕರೂ ಹೌದು. ಅವರ ಇತಿಹಾಸ, ಭೂಗೋಳವನ್ನು ಭೋಧಿಸುತ್ತಿದ್ದ ಪರಿ ಅಚ್ಚಳಿಯದೇ ನೆನಪಿನಲ್ಲಿರುವಂತಹದ್ದು. ಬಹುಶಃ, ಇದ್ದ ಒಬ್ಬನೇ ಮಗನನ್ನು ದುರಂತದಲ್ಲಿ ಕಳೆದುಕೊಳ್ಳದೇ ಇದ್ದಿದ್ದರೆ ನನ್ನಂತಹಾ ಎಷ್ಟೋ ವಿದ್ಯಾರ್ಥಿಗಳು ಅವರ ಗರಡಿಯಲ್ಲಿ ಪಳಗುತ್ತಿದ್ದರು. ಆದರೆ, ಬಂದದ್ದನ್ನು ಸ್ವೀಕರಿಸಿ ಬದುಕನ್ನು ಸ್ವೀಕರಿಸಿದ ಪರಿಯೂ ಅಚ್ಚರಿಯೇ.. ನಾನು ಅಪ್ಪನನ್ನು ಕಳೆದುಕೊಂಡ ದಿನ ಬೆಂಬಲಕ್ಕೆ ನಿಂತು ಸಾಂತ್ವನಿಸಿದ ಪರಿ, ಇಂದಿಗೂ ನನ್ನನ್ನು ತಮ್ಮ ಮಗಳಂತೆಯೇ ಭಾವಿಸುವ, ಮಾರ್ಗದರ್ಶನ ನೀಡುವ ಅವರ ಪ್ರೀತಿಗೆ ನಾನು ಆಭಾರಿ.


ಮತ್ತೊಬ್ಬರು ಧರ್ಮೇಂದ್ರ ಕುದ್ರೋಳಿ ಸರ್. ಪಿ. ಯು. ಸಿ ಯಲ್ಲಿ ಎರಡು ವರ್ಷ ಕನ್ನಡವನ್ನು ಭೋಧಿಸಿದವರು. ಮುಖ್ಯವಾಗಿ ಕಾವ್ಯದ ಕುರಿತು ಪ್ರೀತಿ ಹುಟ್ಟಿಸಿದವರು. ಅವರ ಕವಿತಾ ವಾಚನ ಹಾಗೂ ಪದ್ಯಗಳನ್ನು ಬಿಡಿಸಿ ಹೇಳಿಕೊಡುತ್ತಿದ್ದ ಪರಿ, ಪಠ್ಯದ ಜೊತೆಗೆ ಪೂರಕ ಸಾಹಿತ್ಯವನ್ನು ತಿಳಿಸಿ ಹೇಳಿಕೊಡುತ್ತಿದ್ದ ರೀತಿ, ಪೌರಾಣಿಕ ಭಾಗಗಳನ್ನು ರಸವತ್ತಾಗಿ ಹೇಳುತ್ತಿದ್ದ ರೀತಿ, ಆಗಾಗ ಆರೋಗ್ಯಕರ ಹಾಸ್ಯ ಎಂಥಹವರಲ್ಲಿಯೂ ಕನ್ನಡ ಪಾಠವನ್ನು ಕೇಳುವ ಆಸಕ್ತಿ ಮೂಡಿಸುತ್ತಿತ್ತು. ಇಷ್ಟೆಲ್ಲಾ ಕನ್ನಡ ಪ್ರೀತಿಯ ಅವರ ಮನೆಭಾಷೆ ಮಲೆಯಾಳಂ ಎಂದರೆ ನೀವು ನಂಬಲಾರಿರಿ. ಅವರ ಮಗಳು ರಚನಾ ಹಾಗೂ ನಾನೂ ಒಂದೇ ತರಗತಿ. ಆದರೆ, ತರಗತಿಯಲ್ಲಿ ಎಂದಿಗೂ ಭೇಧ-ಭಾವ ಮಾಡಿದವರಲ್ಲ. ಪಿ.ಯು.ಸಿ ಯಲ್ಲಿ ನಾನಿದ್ದದ್ದು ಹಾಸ್ಟೆಲ್ ನಲ್ಲಿ. ಆ ಸಂಧರ್ಭದಲ್ಲಿ ಮನೆಗೆ ವಾರಕ್ಕೆರಡು ಬಾರಿಯಷ್ಟೇ ಕರೆ ಮಾಡಲು ಅವಕಾಶ. ಆದರೆ, ಪರೀಕ್ಷೆ ಸಮಯದಲ್ಲಿ ನನ್ನ ಆತಂಕವನ್ನು ಕಡಿಮೆ ಮಾಡಲು ಅಪ್ಪನ ಜೊತೆಗೆ ಮಾತನಾಡಲು ಅವಕಾಶ ಮಾಡಿಕೊಡುತ್ತಿದ್ದವರು. ಅಪ್ಪನ ಸಾವಿನ ವಿಚಾರ ತಿಳಿದು ನಾನು ನನ್ನ ಸಹೋದರನನ್ನೇ ಕಳೆದುಕೊಂಡೆ ಎಂದು ಬೇಸರಿಸಿಕೊಂಡು ಸಮಾಧಾನಪಡಿಸಿದವರು. ಬಹುಶಃ, ಗುರುವಾದವರು ಮನೆಯವರಂತೆ ಭಾಸವಾಗುವುದು ಬಹಳ ಕಡಿಮೆ. ಮೇಲೆ ಉಲ್ಲೇಖಿಸಿರುವುದು ಒಂದೆರಡು ಸಂಧರ್ಭಗಳಷ್ಟೇ.. ಆದರೆ, ಈ ಅಪರೂಪದ ಗುರುವನ್ನು ನಾನೆಂದಿಗೂ ಮರೆಯಲಾರೆ.


ಈ ಸಂಧರ್ಭದಲ್ಲಿ ನಾನು ನೆನಪಿಸಿಕೊಳ್ಳಲು ಇಚ್ಛಿಸುವ ಮತ್ತೊಬ್ಬರು ಗುರುಗಳು ಕವಿತಾ ಮೇಡಂ. ಬಯಾಲಜಿ ಲೆಕ್ಚರರ್. ಶಿಕ್ಷಕರು ಸ್ಟ್ರಿಕ್ಟ್ ಆಗಿದ್ದಷ್ಟು ವಿದ್ಯಾರ್ಥಿಗಳಿಗೆ ಕನೆಕ್ಟ್ ಆಗುವುದು ಕಡಿಮೆಯೇ ಎಂಬುದು ನನ್ನ ಭಾವನೆ. ಆದರೆ, ಇದನ್ನು ಸುಳ್ಳಾಗಿಸಿದವರು ನನ್ನ ಕವಿತಾ ಮೇಡಂ. ಚುರುಕು ಮಾತು, ಬೇಕಾದಷ್ಟನ್ನು ಕರಾರುವಕ್ಕಾಗಿ ಹೇಳುವವರು. ಪಾಠಕ್ಕೂ.. ಜೀವನಪಾಠಕ್ಕೂ.. 


ಸರಳತೆ, ಸೌಜನ್ಯತೆಯ ಪಾಠವನ್ನು ಕೃತಿಯ ಮೂಲಕ ತೋರಿಸಿಕೊಟ್ಟದ್ದು ನನ್ನ ಪಿ.ಯು.ಸಿ ಪ್ರಿನ್ಸಿಪಾಲ್ ಆಗಿದ್ದ ಸದಾನಂದ ರೈ ಕೂವೆಂಜ ಸರ್. ಇಂಗ್ಲೀಷ್ ಲೆಕ್ಚರರ್ ಸಹಾ ಆಗಿದ್ದವರು. ವಿದ್ಯಾರ್ಥಿಗಳಿಗೆ ಸ್ವಂತ ಮಕ್ಕಳ ಹಾಗೆ ಕಾಳಜಿ ಮಾಡುತ್ತಿದ್ದವರು. ಶ್ರಮದಾನಗಳಲ್ಲಿ ನಮ್ಮೊಡನೆ ಭಾಗಿಯಾಗಿ ನಮ್ಮ ಜೊತೆಗೆ ಕೆಲಸ ಮಾಡುತ್ತಿದ್ದವರು. ಅದೂ ಕೇವಲ ಸ್ವಲ್ಪ ಸಮಯವಲ್ಲ.. ವಿದ್ಯಾರ್ಥಿಗಳು ಶ್ರಮದಾನ ಮಾಡುತ್ತಿದ್ದ ಅಷ್ಟೂ ಹೊತ್ತು. ಅದನ್ನು ನೋಡಿ ಬೇರೆ ಲೆಕ್ಚರರ್ ಗಳು ಬರುವುದಿತ್ತು. ಪ್ರತಿದಿನವೂ ಅವರು ಬರುತ್ತಿದ್ದದ್ದು ಬಸ್ ನಲ್ಲಿಯೇ.. ಆದರೆ, ಸಮಯಪಾಲನೆಯನ್ನು ಅವರನ್ನು ನೋಡಿ ಕಲಿಯಬೇಕಿತ್ತು. ಹಾಸ್ಟೆಲ್ ಗೆ ಪಾರ್ಥನೆಯ ಸಮಯದಲ್ಲಿ ಬಂದಾಗ ಚಕ್ಕಳಮಕ್ಕಳ ಹಾಕಿ ನಮ್ಮೊಡನೆ ಕುಳಿತು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಹೋಗುತ್ತಿದ್ದರು. ನಾನಂತೂ ಇಂತಹಾ ಅಪರೂಪದ ವ್ಯಕ್ತಿತ್ವವನ್ನು ಮತ್ತೆಲ್ಲೂ ಕಾಣಲಿಲ್ಲ. ಅವರ ಪುಸ್ತಕ ಸಂಗ್ರಹದ ಓದಿನ ಪ್ರೀತಿಯನ್ನು ಕಂಡಿದ್ದೇನಾದರೂ.. ಅವರ ಬಳಿ ಕೇಳುವ ಪುಸ್ತಕ ಧೈರ್ಯ ಮಾಡಿರಲಿಲ್ಲ. ಎಷ್ಟು ಸರಳ ಹಾಗೂ ಸ್ನೇಹಮಯಿಯೋ.. ಅಷ್ಟೇ ಶಿಸ್ತಿನ ಪರಿಪಾಲಕರು. ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ತಿದ್ದುವ ಪರಿ, ಅಗತ್ಯಬಿದ್ದಲ್ಲಿ ಮಾತ್ರ ಶಿಕ್ಷೆ. ಓದಿನ ಜೊತೆಗೆ ದೈಹಿಕ ಚಟುವಟಿಕೆಗಳು, ಸಾಂಸ್ಕೃತಿಕ ಚಟುವಟಿಕೆಗಳಿಗೂ ಒತ್ತು ನೀಡುತ್ತಿದ್ದವರು.


ಹೇಳಲು ಹೊರಟರೆ ಹಲವಾರು ಗುರುಗಳು, ಗುರು ಸಮಾನರು ಸಿಗುತ್ತಾರೆ. ಗಣಿತದ ಕುರಿತು ಆಸಕ್ತಿ ಮೂಡಿಸಿದ ಶೋಭಾ ಮಿಸ್, ಅದನ್ನು ದಿನನಿತ್ಯದ ಬದುಕಲ್ಲಿ ಅಳವಡಿಸಿಕೊಳ್ಳಲು ಹೇಳಿಕೊಟ್ಟ ಮಾರುತಿ ಸರ್, ಪ್ರತಿಯೊಂದು ವಿಚಾರಕ್ಕೂ ಪ್ರೋತ್ಸಾಹ ನೀಡುತ್ತಿದ್ದ ಕೃಷ್ಣಮೂರ್ತಿ ಸರ್, ಧರ್ಮರಾಜ್ ಸರ್ ಹಾಗೂ ಸೀತಾ ಮಿಸ್ ದಂಪತಿಗಳು, ಹಿಂದಿಯ ಪಠ್ಯದ ಜೊತೆಗೆ ಅಚ್ಚರಿಯ ಹಲವು ವಿಚಾರಗಳನ್ನು ಹೇಳುತ್ತಾ ಕುತೂಹಲ ಮೂಡಿಸುತ್ತಿದ್ದ ಸುಧಾ ಮಿಸ್, ಇಂಜಿನಿಯರಿಂಗ್ ನಲ್ಲಿ ಸರಳವಾಗಿ ವಿಚಾರಗಳನ್ನು ಕಲಿಸಿಕೊಟ್ಟ ಹಾಗೂ ಆಸಕ್ತಿಕರವಾದ ಸಂಗತಿಗಳನ್ನು ಹೇಳಿಕೊಡುತ್ತಿದ್ದ ಭರತ್ ಸರ್, ಪ್ರೋಗ್ರಾಮಿಂಗ್ ಬರೆಯಲು ಆಸಕ್ತಿ ಮೂಡಿಸಿದ ಸತೀಶ್ ಸರ್, ಪ್ರಾಜೆಕ್ಟ್ ಗೈಡೆನ್ಸ್ ಮಾಡಿದ, ಸಾಫ್ಟ್ವೇರ್ ಕಂಪೆನಿ ಸ್ಥಾಪಿಸಿ ಮಾದರಿಯಾದ, ಬೋಧಿಸಲು ಅವಕಾಶ ಕೊಟ್ಟ ನನ್ನ ಸೀನಿಯರ್ ಗಳಾದ ತೇಜೇಜ್ ಹಾಗೂ ಫಣೀಷ್ ರವರು, ಕಾಂಪಿಟೇಟಿವ್ ಎಕ್ಸಾಮ್ ಗಳಿಗೆ ಗೈಡ್ ಆಗಿದ್ದ ನರೇಶ್ ಸರ್ ಹಾಗೂ ಸ್ನೇಹಿತೆ ಪ್ರೀತಿಯ ಧನಲಕ್ಷ್ಮಿ, ನನ್ನ ಬರಹಗಳ ಮೊದಲ ಓದುಗಳಾಗಿ ತಿದ್ದುವ ಗೆಳತಿ ರಂಜಿತ, ತಮಿಳು ಕಲಿಯಲು ಮಾರ್ಗದರ್ಶನ ನೀಡಿದ ವಸಂತಕುಮಾರಿ ಅಜ್ಜಿ, ಗೋವಿಂದನ್ ಕುಟ್ಟಿ ತಾತ.... ಹೀಗೆ ಪಟ್ಟಿ ಸಾಗುತ್ತಾ ಹೋಗುತ್ತದೆ. ಸದ್ಯಕ್ಕೆ ತಾಜಾ ನೆನಪಿನಲ್ಲಿ, ಈ ಕ್ಷಣದ ನೆನಪಿಗೆ ಸಿಕ್ಕಿದವರಿವರು.


ಇದಿಷ್ಟೂ ಹೊರಗಿನವರಾದರೆ.. ನನಗೆ ಮನೆಯೇ ಮೊದಲ ಪಾಠಶಾಲೆ. ಕೂಡು ಕುಟುಂಬದಲ್ಲಿ ಬೆಳೆದವಳು ನಾನು. ಆದರೆ, ಕ್ರಮೇಣ ಅದು ಕರಗಿದೆ. ನನ್ನ ಕುಟುಂಬದಿಂದ ನಾನು ಕಲಿತ ಪಾಠವೆಂದರೆ.. "ಕಷ್ಟದ ದಿನಗಳಲ್ಲಿ ಏನೇ ಪರಿಸ್ಥಿತಿ ಇದ್ದರೂ ಮರೆತು ಒಂದಾಗುವುದು." ಕೆಲವೊಮ್ಮೆ ಚೆನ್ನಾಗಿದ್ದಾಗ ಮುನಿಸಿದ್ದರೂ.. ಯಾರಿಗಾದರೂ ನೋವು, ದುಃಖ ಎಂದಾಗ ಕಷ್ಟ ಎಂದಾಗ ಬಂದು ನಿಲ್ಲುವ ನಡೆಯೇ ನಾನು ಕಲಿತ ಅತಿ ದೊಡ್ಡ ಪಾಠ. ಅದರಲ್ಲೂ ನನ್ನ ಅಣ್ಣಂದಿರ ಶ್ರೀರಕ್ಷೆ, ಮಾರ್ಗದರ್ಶನ ಮರೆಯಲಾಗದ್ದು.


ಈ ಕುಟುಂಬ ನನ್ನದಾಗಲು ಕಾರಣ ಪಪ್ಪ-ಅಮ್ಮ. ಸರಳತೆ, ಶಿಸ್ತು ಪಪ್ಪ ಕಲಿಸಿಕೊಟ್ಟರೆ, ಅಮ್ಮ ಗೆಳತಿಯಂತೆ ಎಲ್ಲದಕ್ಕೂ ಮಾರ್ಗದರ್ಶಿಯಾಗಿದ್ದಾರೆ. ಅಮ್ಮ, ಚಿಕ್ಕಮ್ಮನ ಮಾರ್ಗದರ್ಶನವಿಲ್ಲದೇ ಕೆಲವು ನಡೆಗಳು ಬಹಳವೇ ಕಷ್ಟ.


ನನ್ನ ಬದುಕಿನಲ್ಲಿ ಬಂದ ಸಾವಿರಾರು ಜನದಲ್ಲಿ ಇಂದಿಗೂ ಅಥವಾ ಆಗಾಗ ನೆನಪಿಸಿಕೊಳ್ಳುವುದು ಕೆಲವರನ್ನು ಮಾತ್ರವೇ.. ಇದ್ದರೆ ಹೀಗೆ ಮತ್ತೊಬ್ಬರ ಬದುಕಲ್ಲಿ ನಾವೂ ಇಂತಹಾ ನೆನಪೇ ಆಗಬೇಕು. ಪಾಸಿಟಿವ್ ಎನರ್ಜಿ ತುಂಬಿಕೊಳ್ಳುವ ಕ್ಷಣಗಳು, ಕಲಿತ ಪಾಠಗಳನ್ನು ಮೆಲುಕು ಹಾಕಿಕೊಳ್ಳುವ ಪರಿಯನ್ನು ಸಾಧ್ಯವಾಗಿಸಿದ ಎಲ್ಲಾ ಗುರುಗಳಿಗೂ.. ಗುರು ಸಮಾನರಿಗೂ ಹೃತ್ಪೂರ್ವಕ ನಮನಗಳು.


~ವಿಭಾ ವಿಶ್ವನಾಥ್

ಹಲೋ ಟೀಚರ್ (ಪುಸ್ತಕ ಯಾನ - 486)


ಪುಸ್ತಕದ ಶೀರ್ಷಿಕೆ : ಹಲೋ ಟೀಚರ್

ಲೇಖಕರು : ಅನುಸೂಯ ಯತೀಶ್ 

ಪ್ರಕಾಶಕರು : ಅವ್ವ ಪುಸ್ತಕಾಲಯ 

ಪ್ರಥಮ ಮುದ್ರಣ : 2025 ಜನವರಿ

ದ್ವಿತೀಯ ಮುದ್ರಣ : 2025 ಫೆಬ್ರವರಿ (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 164

ಬೆಲೆ : 200 ರೂ. 


ಅನಸೂಯ ಯತೀಶ್ ಅವರು ಮಮತಾಮಯಿ ಶಿಕ್ಷಕಿ ಹಾಗೂ ಬಹುಮುಖ ಪ್ರತಿಭೆ. ಕಥೆ, ಕವನ, ಪ್ರಬಂಧ, ಲೇಖನ, ಹೈಕು ಹೀಗೆ ಹಲವಾರು ವಿಭಿನ್ನ ಪ್ರಕಾರದಲ್ಲಿ ಬರೆಯುತ್ತಾರೆ. ವಿಮರ್ಶೆ ಇವರ ಆದ್ಯತೆಯ ಪ್ರಕಾರ. ಹಾಗೆಂದು, ಈ ಪುಸ್ತಕದಲ್ಲಿನ ಅನುಭವ ಕಥನದಲ್ಲಿ ಯಾರನ್ನೂ ಒರೆಗೆ ಹಚ್ಚಿ ನೋಡದೆ.. ತಾಯಿಯಂತೆ, ಶಿಕ್ಷಕಿ-ಮಕ್ಕಳ ಒಡನಾಟದ ಬುತ್ತಿಯನ್ನು ಹಂಚಿಕೊಂಡಿದ್ದಾರೆ. 


25 ವರ್ಷಗಳ ಶಿಕ್ಷಣ ಇಲಾಖೆಯಲ್ಲಿನ ವೃತ್ತಿ ಬದುಕನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಲೇಖನಗಳು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣ ರೂಪದಲ್ಲಿಯೂ ಪ್ರಕಟವಾಗಿವೆ.


ಶಿಕ್ಷಕರೆಂದರೆ ಕೇವಲ ಶಿಕ್ಷೆ ಕೊಡುವವರಲ್ಲ ಅಥವಾ ಕೇವಲ ಕಲಿಸುವವರೂ ಅಲ್ಲ. ಅವರ ವಿಭಿನ್ನ ವ್ಯಕ್ತಿತ್ವ, ಮಕ್ಕಳೊಡನೆಯ ಒಡನಾಟ, ಅವರೊಡನೆ ತೋರುವ ಪ್ರೀತಿ, ಕಾಳಜಿ ಅವರನ್ನು ರೂಪಿಸುವಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಸರ್ಕಾರ ಇದಕ್ಕಾಗಿ ಹಲವಾರು ತರಬೇತಿಗಳನ್ನು ನೀಡಿದರೂ.. ಅದನ್ನು ಕಲಿಸುವಲ್ಲಿ ಅಳವಡಿಸಿಕೊಳ್ಳುವ ಪರಿ ಶಿಕ್ಷಕರ ಮೇಲೆ ಅವಲಂಬಿತ. ತಾವು ಕಲಿತು, ಮಕ್ಕಳಿಗೂ ಹೊಂದಿಸುವ ಪರಿ ಅನುಸೂಯಾ ಮಿಸ್ ಅವರಿಂದಲೇ ಕಲಿಯಬೇಕು.


ಇಂದಿಗೂ ನಾವು ಹಲವಾರು ಶಿಕ್ಷಕರ ಮೂಲಕ ಶಿಕ್ಷಣವನ್ನು ಪಡೆದಿದ್ದರೂ.. ವಿದ್ಯೆ ಕಲಿತಿದ್ದರೂ.. ಬೆರಳೆಣಿಕೆಯಷ್ಟು ಶಿಕ್ಷಕರನ್ನು ಮಾತ್ರವೇ ನೆನಪಿಟ್ಟುಕೊಂಡಿದ್ದೇವೆ ಹಾಗೂ ಸ್ಮರಿಸುತ್ತೇವೆ. ಅನುಸೂಯ ಟೀಚರ್ ಅವರ ವಿದ್ಯಾರ್ಥಿಗಳು ಅವರನ್ನು ಎಷ್ಟೆಲ್ಲಾ ನೆನಪಿಸಿಕೊಂಡಿರಬಹುದು ಎಂದು ವಿಸ್ಮಯವಾಗುತ್ತದೆ. ಅಲ್ಲದೆ, ಅವರ ವೃತ್ತಿ ಬದುಕಿನಲ್ಲಿ ಹಲವಾರು ವಿದ್ಯಾರ್ಥಿಗಳನ್ನು ನೋಡಿದ್ದರೂ.. ಸ್ಪೆಷಲ್ ಎನ್ನಿಸುವಂತಹ ಕೆಲ ವಿದ್ಯಾರ್ಥಿಗಳನ್ನು ನಮಗೂ ಪರಿಚಯಿಸುತ್ತಾರೆ. ಇಲ್ಲಿನ 20 ಅನುಭವದ ಬುತ್ತಿಗಳು ಅಪ್ಯಾಯಮಾನವಾಗಿಸುತ್ತದೆ. 


ಕಾಲೇಜ್ ಸೇರಿದಾಗ ಅವರ ಗುರುಗಳಾದ ಶ್ರೀ ಮಾಗಡಿ ರಂಗಯ್ಯನವರು ನೀನು ಶಿಕ್ಷಕ ವೃತ್ತಿಗೆ ಹೇಳಿ ಮಾಡಿಸಿದಂತಿರುವೆ ಎಂದು ಹೇಳಿದ್ದೇಕೆ..? 

ಅವರ ನೋಟ ನೂರಕ್ಕೆ ನೂರು ಸರಿಯಾಗಿತ್ತು ಎಂದು ಮುಂದೆ ನಮಗೆ ಅರಿವಾಗುತ್ತಾ ಹೋಗುತ್ತದೆ. ವೃತ್ತಿ ಬದುಕಿನ ಮೊದಲ ದಿನ ಹಾಗೂ ಮುಗ್ಧ ಜೀವಗಳನ್ನು ಪರಿಚಯಿಸುತ್ತಲೇ ಲಕ್ಷಕ್ಕೆ ಎಷ್ಟು ಸೊನ್ನೆ ಬರೆಯಬೇಕು ಎನ್ನುವುದೇ ಗೊತ್ತಿಲ್ಲದ ಹುಡುಗಿಯೊಬ್ಬಳ ಉತ್ಸಾಹಕ್ಕೆ ಭಂಗವಾಗದಂತೆ ಹ್ಯಾಂಡಲ್ ಮಾಡಿದ ರೀತಿ ಇಷ್ಟವಾಗುತ್ತದೆ. 


ವಿಶೇಷ ಚೇತನ ಮಗು ಮಂಜನ ಮಂಜಿನಂತಹ ಪ್ರೀತಿಗೆ ಕರಗಿ ಹೋಗುವ ಅವರು ಇತರ ಮಕ್ಕಳನ್ನು ಹಾಗೂ ಸುತ್ತಲಿನ ಪರಿಸರವನ್ನು ತಿದ್ದುವ ರೀತಿಗೆ, ವಿಶೇಷ ವಿದ್ಯಾರ್ಥಿಗಳನ್ನು ವಿಶೇಷವಾಗಿ ಕಾಣುವ ಬಗೆಗೂ ಗೌರವ ಮೂಡುತ್ತದೆ.


ಶಾಲೆಯಲ್ಲಿ ಶೈಕ್ಷಣಿಕ ಪ್ರವಾಸದಲ್ಲಿ ಮಕ್ಕಳ ಉತ್ಸಾಹದ ಜೊತೆಗೆ ಶಿಕ್ಷಕರ ಜವಾಬ್ದಾರಿ ಎಷ್ಟಿರುತ್ತದೆ ಎಂಬುದನ್ನು ಹಾಗೂ ಪೋಷಕರು ಅವರಿಗೆ ನೀಡಿರುವ ಜವಾಬ್ದಾರಿಯ ಜೊತೆಗೆ ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ನಿರ್ಧಾರ, ಅಲ್ಲಿ ಮಕ್ಕಳನ್ನು ಜಾಗೃತೆಯಿಂದ ಹಾಗೂ ಸೂಕ್ಷ್ಮವಾಗಿ ಪೋಷಿಸುವ ಬಗ್ಗೆ ಇಲ್ಲಿದೆ. ಶೈಕ್ಷಣಿಕ ಪ್ರವಾಸ ಹೋಗಿದ್ದಾಗ ಬೇಸ್ತು ಬಿದ್ದ ಬಗೆ, ಅದು ಗೊತ್ತಾದಾಗ ಪ್ರತಿಕ್ರಿಯಿಸಿದ ರೀತಿ, ತಮ್ಮದಲ್ಲದ ತಪ್ಪಿಗೆ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾದ ಬಗೆಯನ್ನೂ ಇಲ್ಲಿ ಹೇಳಿದ್ದಾರೆ. 


2012-13ನೇ ಸಾಲಿನಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಆರೋಗ್ಯದ ಅರಿವು, ಲೈಂಗಿಕ ಶೋಷಣೆ ವಿರುದ್ಧ ಜಾಗೃತಿ ಮೂಡಿಸಲು ಕಿಶೋರಿ ತರಬೇತಿಯನ್ನು ಪಡೆದು ಬಂದು ಸಂಪನ್ಮೂಲ ವ್ಯಕ್ತಿಯಾಗಿ ಹೋಗಿದ್ದಾಗ ಅವರು ತಮ್ಮ ವಿದ್ಯಾರ್ಥಿನಿಯರಿಗೆ ಹೇಳಿದ ವಿಚಾರಕ್ಕೆ ಅವರ ತಾಯಂದಿರು ಇವರ ಮೇಲೆ ಕೋಪಗೊಂಡದ್ದೇಕೆ..? ಪೋಷಕರಿಗೆ ಮನದಟ್ಟು ಮಾಡಿಕೊಡುವಾಗ ಶಿಕ್ಷಕರು ತಾಳ್ಮೆ ಕಳೆದುಕೊಳ್ಳಬಾರದು ಎಂಬ ಅಂಶವೂ ಇಲ್ಲಿದೆ.


ಸಮಾಜದಲ್ಲಿ, ಶಾಲೆಯಲ್ಲಿ ಮನೆಯಲ್ಲಿ ಹೆಣ್ಣುಮಕ್ಕಳು ಅತಿ ಹೆಚ್ಚು ಲಿಂಗ ತಾರತಮ್ಯಕ್ಕೆ ಒಳಗುತ್ತಿದ್ದಾಗ ಅದನ್ನು ತಡೆಯಲು ಹಾಗೂ ಜಾಗೃತಿ ಮೂಡಿಸಲು ಯೋಜಿಸಿದ ಯೋಜನೆ.. ಪೋಷಕರಿಗೂ, ವಿದ್ಯಾರ್ಥಿಗಳಿಗೂ ಅರ್ಥ ಮಾಡಿಸಿದ ಬಗೆ ಇಲ್ಲಿದೆ.


ವಿದ್ಯಾರ್ಥಿಗಳು ಸಹಪಾಠಿಗಳಿಗೆ ಮಾತ್ರವಲ್ಲದೆ, ಶಿಕ್ಷಕರಿಗೂ ಅಡ್ಡ ಹೆಸರಿಟ್ಟು ಕರೆದಾಗ ಆ ವಿಚಾರ ಶಿಕ್ಷಕರಿಗೆ ತಿಳಿದು ಮಕ್ಕಳಿಗೆ ಯಾವ ರೀತಿ ಪ್ರತಿಕ್ರಿಯಿಸಿದರು..? ಅಡ್ಡ ಹೆಸರಿನ ಅವಾಂತರಗಳನ್ನು ಹೇಳುತ್ತಲೇ ಯಾರನ್ನೂ ಟಾರ್ಗೆಟ್ ಮಾಡದೆ ಮಕ್ಕಳನ್ನು ತಿದ್ದಿದ ಬಗೆಯನ್ನು ಹೇಳುತ್ತಾರೆ. ಈ ಬುದ್ದಿಯನ್ನು ಮಕ್ಕಳು ಸಕಾರಾತ್ಮಕವಾಗಿ ಬಳಸಿಕೊಂಡರೆ ಎಷ್ಟು ಚೆನ್ನ ಅಲ್ಲವೇ ಎಂದು ನಮಗೂ ಅನ್ನಿಸುವಂತೆ ಮಾಡುತ್ತಾರೆ. 


ಶಾಲೆಯಲ್ಲಿ ಹಲವಾರು ಮಕ್ಕಳನ್ನು ನೋಡುತ್ತಾರೆ. ಮಕ್ಕಳನ್ನು ಅತಿಯಾಗಿ ಮುದ್ದು ಮಾಡಿ ಬೆಳೆಸಿದ ಪೋಷಕರು ತಮ್ಮದೇ ತಪ್ಪಿಗೆ ಪರಿತಪಿಸುವ ಪ್ರಸಂಗ ಹಾಗೂ ಸವಾಲನ್ನು ಮೆಟ್ಟಿ ನಿಲ್ಲಲು ನೆರವಾದ ಘಟನೆ ಇಲ್ಲಿದೆ.


ಮಕ್ಕಳ ವಿದ್ಯಾಭ್ಯಾಸದಲ್ಲಿ ಕೇವಲ ಶಿಕ್ಷಕರ ಪಾತ್ರವಿರುವುದಿಲ್ಲ. ಅವರ ಕುಟುಂಬದ ಪಾತ್ರವೂ ಅಷ್ಟೇ ಮುಖ್ಯವಾಗಿರುತ್ತದೆ. ಹಳ್ಳಿಗಳಲ್ಲಿ ಅಂದಿನ ದಿನಗಳಲ್ಲಿ ಅದನ್ನು ಅರ್ಥ ಮಾಡಿಸುವುದೇನೂ ಸುಲಭವಲ್ಲ. ಪೋಷಕರು ಜಾಗೃತಿ ವಹಿಸಬೇಕಾದ ವಿಚಾರಗಳನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ.


ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಹ ಪಠ್ಯಗಳ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವುದು ಮಕ್ಕಳ ವರ್ತನೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಎಷ್ಟು ದೊಡ್ಡಮಟ್ಟದ ಪಾತ್ರ ವಹಿಸುತ್ತದೆ ಎನ್ನುವುದನ್ನು ಹೇಳುತ್ತಲೇ.. ಅದಕ್ಕೆ ತಾವು ಮಾಡಿದ ಪ್ರಯೋಗಗಳು ಹಾಗೂ ಸಿ.ಸಿ.ಇ ಎನ್ನುವ ಶಿಕ್ಷಣ ಕ್ಷೇತ್ರದ ಮಹತ್ವದ ಯೋಜನೆಯ ಕುರಿತು ತಿಳಿಸುತ್ತಾರೆ. 


ಮಕ್ಕಳ ಮನಸ್ಸು ಸೂಕ್ಷ್ಮ ನ ಅವುಗಳಿಗೆ ಘಾಸಿಯಾಗದಂತೆ ಸಹವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಡೆದುಕೊಳ್ಳುವುದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಸಂಬಂಧಗಳು ಹಾಗೂ ಬಾಂಧವ್ಯಕ್ಕೆ ಸಂಬಂಧಿಸಿದ ಪಾಠಗಳನ್ನು ಮಾಡುವಾಗ ಅಥವಾ ಅವರನ್ನು ತಿದ್ದುವಾಗ ಅವೆಲ್ಲವನ್ನು ಗಮನಿಸಿ ಬ್ಯಾಲೆನ್ಸ್ ಮಾಡುವ ಶಿಕ್ಷಕರ ಕುರಿತು ತಿಳಿದು ಹೆಮ್ಮೆ ಎನಿಸುತ್ತದೆ. 


ಮಕ್ಕಳಿಗೆ ಬೈದಾಗ ಆ ಕುರಿತು ಭಯ ಮೂಡುತ್ತದೆ. ಆದರೆ, ಮೆಚ್ಚುಗೆಯ ಮಾನದಂಡ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸುವ ಬಗೆ ಹಾಗೂ ಅವರಿಗೆ ಆ ಕುರಿತು ಹೆಮ್ಮೆ ಮೂಡುವ ಬಗೆ ಅವರನ್ನು ಯಾವೆಲ್ಲಾ ಬಗೆಯಲ್ಲಿ ತಿದ್ದಬಲ್ಲದು ಹಾಗೂ ಬದಲಾಯಿಸಬಲ್ಲದು ಎನ್ನುವ ವಿಚಾರಗಳಿಲ್ಲಿವೆ. ಶಿಕ್ಷೆ ಇಲ್ಲದೆ ಶಿಕ್ಷಣ ಕೊಡಲು ಸರಳ ಹಾಗೂ ಜಾಣತನದ ತಂತ್ರಗಳನ್ನು ಸೊಗಸಾಗಿ ಹೇಳಿದ್ದಾರೆ. 


ಮಕ್ಕಳು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಅದರಲ್ಲಿಯೂ ಶಿಕ್ಷಕರನ್ನು ಹೆಚ್ಚು ಗಮನಿಸುತ್ತಿರುತ್ತಾರೆ. ಕಾರಣಾಂತರದಿಂದ ತಡವಾಗಿ ಶಾಲೆಗೆ ಬಂದ ಸಂದರ್ಭದಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಗಮನಿಸುವಾಗ ಮಕ್ಕಳೇ ಶಿಕ್ಷಕರಾದ ಸುಸಂದರ್ಭ ಅವರಲ್ಲಿ ಮಾತ್ರವಲ್ಲ ನಮ್ಮಲ್ಲಿಯೂ ಹೆಮ್ಮೆ ಮೂಡಿಸುತ್ತದೆ. 


ಬಯ್ಯದೆ, ಹೊಡೆಯದೆಯೇ ನಸುನಗುತ್ತ ತಾಳ್ಮೆಯಿಂದ ತಿದ್ದಿದ ಅನುಸೂಯ ಟೀಚರ್ ಅವರ ಅನುಭವದ ಜೊತೆಗೆ ಶಿಕ್ಷೆ ರಹಿತ ಶಿಕ್ಷಣವನ್ನು ಬೆಂಬಲಿಸುವ ಅವರ ನಿಲುವು ನನಗಂತೂ ಇಷ್ಟವಾಯಿತು. 


ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವಾಗ ಶಿಕ್ಷಕರಿಗೆ ಅದೇ ಊರಿನ ವಿದ್ಯಾರ್ಥಿಗಳಿಂದ ಅವರ ಪೋಷಕರಿಂದ ಸವಾಲುಗಳು ಎದುರಾಗಬಹುದು. ಮಕ್ಕಳೊಡನೆ ಸಾಕುಪ್ರಾಣಿಗಳು ಶಾಲೆಗೆ ಬಂದರೆ..?! ಆ ಸಂದರ್ಭ ನಿಭಾಯಿಸಿದ ಜಾಣತನದ ಪ್ರಸಂಗ ಇಲ್ಲಿದೆ. 


ತಮ್ಮ ಪ್ರೀತಿಯ ಶಿಕ್ಷಕರನ್ನು ಬೆಂಬಲಿಸುವ ಹೊಗಳುವ ಹಾಗೂ ಓಲೈಸುವ ಪ್ರೀತಿಯ ವಿದ್ಯಾರ್ಥಿಗಳನ್ನು ನಾವಿಲ್ಲಿ ಕಾಣಬಹುದು. ಅದೆಲ್ಲವೂ ಆಯಾ ಟೀಚರ್ ಗಳ ಗುಣ-ಸ್ವಭಾವಗಳಿಂದ ಪ್ರೇರಿತವಾಗುತ್ತದೆ ಎಂಬುದಂತೂ ಅಕ್ಷರಶಃ ಸತ್ಯ. 


ಶಿಕ್ಷಣವೆಂದರೆ ಕೇವಲ ಪಠ್ಯದಲ್ಲಿನ ಪಾಠವಲ್ಲ. ನಡೆ-ನುಡಿಗಳನ್ನು ತಿದ್ದುವ ಹಾಗೂ ಬದಲಾಯಿಸುವ, ಮಾನವೀಯತೆಯನ್ನು ಮೂಡಿಸುವ ನಡೆ.. ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆ ಎಷ್ಟು ಎಂಬುದರ ಅರಿವಾಗುತ್ತದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಇದು ಅತ್ಯವಶ್ಯಕವೂ ಹೌದು. 


ಸಮುದಾಯದತ್ತ ಶಾಲಾ ಕಾರ್ಯಕ್ರಮದ ಸಂದರ್ಭದಲ್ಲಿ ಪೋಷಕರಿಗೆ ತಮ್ಮ ಮಕ್ಕಳ ಶೈಕ್ಷಣಿಕ ಸಾಧನೆಗಳನ್ನು ಶಿಕ್ಷಕರ ಬಾಯಿಂದಲೇ ಕೇಳಿ ತಿಳಿಯುವ ಉತ್ಸಾಹ, ಖುಷಿ. ಇದರ ಜೊತೆಗೆ ಬೇರೆ ಮಕ್ಕಳ ಅಂಕಗಳ ಕುರಿತು ಕೇಳುವ ಕುತೂಹಲವೂ.. ಮಕ್ಕಳ ಬುದ್ಧಿಮತ್ತೆಗನುಗುಣವಾಗಿ ಅವರು ಓದುತ್ತಾರೆ ಎಂಬ ಅರಿವು ಪೋಷಕರಿಗಿರುವುದು ಅತ್ಯಗತ್ಯ ಎಂಬ ಕಿವಿಮಾತನ್ನು ಹೇಳುತ್ತಲೇ ಮಕ್ಕಳಲ್ಲಿ ಪ್ರಾಮಾಣಿಕತೆಯನ್ನು ಉದ್ದೀಪಿಸುವ ಇವರ ಅನುಭವಗಳೂ ಇಲ್ಲಿವೆ.


ಹೋಂವರ್ಕ್ ಎನ್ನುವ ಮಕ್ಕಳ ಕಲಿಕಾ ಅಂಗಳಕ್ಕೆ ಪೋಷಕರು ಹಾಗೂ ಶಿಕ್ಷಕರು ಇಬ್ಬರ ಪ್ರತಿಕ್ರಿಯೆ ಹಾಗೂ ಬದಲಾದ ದಿನಗಳಲ್ಲಿ.. ಈಗ ಶನಿವಾರದಂದು ಪುಸ್ತಕದ ಹೊರೆ ಇರದ 'ಬ್ಯಾಗ್ ಲೆಸ್ ಡೇ' ದಿನಗಳು ಇಲ್ಲಿವೆ.


ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆ ಮಾಡುವುದರ ಹಿಂದಿನ ಉದ್ದೇಶ ಜೊತೆಗೆ ಮಕ್ಕಳಲ್ಲಿ ಉತ್ತಮ ನಾಯಕತ್ವದ ಗುಣಗಳನ್ನು ಮೂಡಿಸುತ್ತ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಾ.. ಸವಾಲುಗಳನ್ನು ನಿಭಾಯಿಸುವುದನ್ನು ಕಲಿಯುವುದು, ಧೈರ್ಯ, ಸಾಹಸ ಹೆಚ್ಚಿಸುವ ಸಲುವಾಗಿ ಮಾಡಿರುವ ಈ ಜವಾಬ್ದಾರಿಯ ಕುರಿತು ಮಾತನಾಡಿದ್ದಾರೆ.


ಅತಿ ಹೆಚ್ಚಿನ ಬುದ್ಧಿಮತ್ತೆ ಇರುವ ಮಕ್ಕಳ ಜೊತೆಜೊತೆಗೆ ಹಿಂದುಳಿದ ಮಕ್ಕಳನ್ನು ಕರೆದುಕೊಂಡು ಸಾಗುವ ಶಿಕ್ಷಕರಿಗೆ ಬುದ್ದಿವಂತ ಮಕ್ಕಳಿಂದ ತಮ್ಮನ್ನು ಕಡೆಗಣಿಸಿದ್ದಾರೆ ಎಂಬ ಭಾವನೆಯನ್ನು ತೆಗೆದು ಹಾಕುವ ಜವಾಬ್ದಾರಿಯೂ ಇರುತ್ತದೆ. ಯಾವುದೂ ಅಥವಾ ಯಾರು ಮೇಲಲ್ಲ, ಕೀಳಲ್ಲ ಎನ್ನುವುದನ್ನು ಅರಿವಾಗಿಸಿರುವ ಶಿಕ್ಷಕಿಯ ಪ್ರಯತ್ನ ಇಲ್ಲಿ ಸಮರ್ಥವಾಗಿ ಕಾಣುತ್ತದೆ.


ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ ಮಕ್ಕಳ ಮನಸನ್ನು ಅರ್ಥ ಮಾಡಿಕೊಂಡು ದಿನದಿನದ ಹೊಸಹೊಸ ಸವಾಲುಗಳನ್ನು ಮೆಟ್ಟಿ ನಿಲ್ಲವ ಇಂತಹ ಶಿಕ್ಷಕರು ನಿಜಕ್ಕೂ ಆದರ್ಶ.


ಹೊಸದಾಗಿ ಶಿಕ್ಷಕ ವೃತ್ತಿಗೆ ಸೇರಿದವರು, ಶಿಕ್ಷಕರ ಅನುಭವದ ಬುತ್ತಿಯನ್ನು ಸವಿಯಲಿಚ್ಚಿಸುವವರು, ಎಲ್ಲಾ ವಯೋಮಾನದ ಮಕ್ಕಳ ಪೋಷಕರು, ಅದರಲ್ಲಿಯೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಎಲ್ಲರೂ ಓದಲೇಬೇಕಾದ ಪುಸ್ತಕ ಎಂದೇ ಹೇಳುವೆ. ಈ ವರ್ಷದ ಓದಿನಲ್ಲಿ ಖಂಡಿತವಾಗಿಯೂ ಮನದಲ್ಲಿ ನಿಲ್ಲುವ ಪುಸ್ತಕ ಇದು. ಒಂದೊಳ್ಳೆ ಓದಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು.


~ವಿಭಾ ವಿಶ್ವನಾಥ್