ಭಾನುವಾರ, ಆಗಸ್ಟ್ 9, 2026

ಭರವಸೆ (ಬೆಳಕಿಂಡಿಯ ಕತೆಗಳು - 63)


 ನಮ್ಮ ಆಚಾರ-ವಿಚಾರ ತಿಳಿಯದ ಫಾರಿನ್ ಹುಡುಗಿಯನ್ನು ಮನೆ ಸೊಸೆ ಎಂದು ಒಪ್ಪುವುದಾದರೂ ಹೇಗೆ ಎಂದು ಹಿಂಜರಿಯುತ್ತಿದ್ದ ಅಪ್ಪ-ಅಮ್ಮನಿಗೆ ಅಂದು ತಮ್ಮ ಪ್ರೀತಿಯ ಆಳ ಅರ್ಥ ಮಾಡಿಸಿದ್ದ ಮಗ. ಮನಸ್ಸಿಲ್ಲದ ಮನಸ್ಸಿನಲ್ಲಿ ಒಪ್ಪಿದ್ದವರಿಗೆ ಇಂದು ಸೊಸೆಯ ಮೌಲ್ಯ ಅರ್ಥವಾಗಿತ್ತು.

ಗೊತ್ತಿಲ್ಲದಿದ್ದರೂ ಎಲ್ಲವನ್ನೂ ಕಲಿತು ತಮ್ಮ ಆಚಾರ-ವಿಚಾರವನ್ನು ಕಲಿತು ಪ್ರೀತಿಯಿಂದ ಒಪ್ಪಿ ಅಪ್ಪಿರುವ ಸೊಸೆ ಹೆಮ್ಮೆ ಮೂಡಿಸಿದ್ದಳು. ಬದಲಾಗುತ್ತಿರುವುದು ಯುವ ಜನತೆಯ ಮತ್ತೊಂದು ಮಜಲು ಭರವಸೆ ಮೂಡಿಸಿತ್ತು.

~ವಿಭಾ ವಿಶ್ವನಾಥ್

ತಿತ್ತಿಬ್ವಾಸನ ಟೈಟಾನ್ ವಾಚು (ಪುಸ್ತಕ ಯಾನ - 480)


ಪುಸ್ತಕದ ಶೀರ್ಷಿಕೆ : ತಿತ್ತಿಬ್ವಾಸನ ಟೈಟಾನ್ ವಾಚು

ಲೇಖಕರು : ದಿಲೀಪ್ ಎನ್ಕೆ

ಪ್ರಕಾಶಕರು : ಈಶ್ವರಿ ಪ್ರಕಾಶನ

ಪ್ರಥಮ ಮುದ್ರಣ : 2025

ಪುಟಗಳು : 148

ಬೆಲೆ : 178 ರೂ.


ತಿತ್ತಿಬ್ವಾಸನ ಟೈಟಾನ್ ವಾಚು ದಿಲೀಪ್ ಎನ್ಕೆ ಅವರ ನಾಲ್ಕನೇ ಕೃತಿ ಹಾಗೂ ಎರಡನೆಯ ಕಥಾ ಸಂಕಲನ. ಇವರ ಮೊದಲ ಕಥಾ ಸಂಕಲನ ಬಲಿಷ್ಠ. ಈ ಕಥಾ ಸಂಕಲನದ ಕೆಲವು ಕಥೆಗಳು ಕೆಂಡಸಂಪಿಗೆ ಬ್ಲಾಗ್ ನಲ್ಲಿ ಹಾಗೂ ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಈ ಕಥಾ ಸಂಕಲನದಲ್ಲಿ ಒಟ್ಟು ಒಂಬತ್ತು ಕಥೆಗಳಿವೆ.


ತಿತ್ತಿಬ್ವಾಸನ ಟೈಟಾನ್ ವಾಚು : 

ಕೊಕ್ಕರಕ್ಕಿ ಹಾಗೂ ತಿತ್ತಿಬ್ವಾಸ ಎಂಬ ಎರಡು ಪಾತ್ರಗಳು ಓದುಗರನ್ನು ಕಥೆಯೊಳಗೆ ಸೆಳೆದುಕೊಂಡು ಹೋಗುತ್ತವೆ. ಇಲ್ಲಿ ಗೆಳೆಯ ಧನಂಜಯನೇ ಕೊಕ್ಕರಕ್ಕಿ. ಆತನ ಮೂಲಕವೇ ಇಲ್ಲಿ ಕಥೆ ತೆರೆದುಕೊಳ್ಳುತ್ತಾ ಹೋಗುತ್ತವೆ. ಅಮ್ಮನಿಲ್ಲದೆ, ಮಲತಾಯಿ ಬಂದ ನಂತರ ತಿತ್ತಿಬ್ವಾಸನ ಬದುಕು ಹೇಗಿತ್ತು..? ತನ್ನ ಕೈಯಲ್ಲಿದ್ದ ಟೈಟಾನ್ ವಾಚು ಅಮ್ಮ ಕೊಟ್ಟಿದ್ದು ಅಮ್ಮನ ಪ್ರತಿರೂಪವೇ ಎಂದು ಭಾವಿಸುತ್ತಿದ್ದವನು ವಾಚ್ ಅನ್ನು ತೆಗೆಯುವ ಅನಿವಾರ್ಯ ಸಂದರ್ಭ ಬಂದದ್ದೇಕೆ..? ಬಳ್ಳಾರಿಯಲಿ ಪಿ.ಟಿ ಶಿಕ್ಷಕನ ಕೆಲಸ ಸಿಕ್ಕಿದರೂ ತಿತ್ತಿಬ್ವಾಸನಿಗೆ ಅಲ್ಲಿಗೆ ಹೋಗದಂತಹ ಸಂದರ್ಭ ಬಂದದ್ದಕ್ಕೆ ಕಾರಣವೇನು..? ಆತನ ಬದುಕಿನ ದಾರುಣ ಕಥೆ ಸಿಗುತ್ತದೆ. ಇಲ್ಲಿ ಕಥೆ ಹಾಗೂ ಕಾವ್ಯ ಎರಡರ ಮೂಲಕ ವಿಭಿನ್ನವಾಗಿ ಕಥೆಯನ್ನು ನಿರೂಪಿಸಿದ್ದಾರೆ.


ಸುಟ್ಟಿರದೇ ಮೂರ್ ದ್ವಾಸ : ಅಣಕಿಸುವಂತೆಯೇ ಶುರುವಾಗುವ ಹಾಡಿನಲ್ಲಿರುವ ಸಾಲಿನಂತೆ ಇಲ್ಲಿ ಬಡತನ ಕಾಣಸಿಗುತ್ತದೆ. ತಾವು ಕಷ್ಟಪಟ್ಟರೂ ಮಕ್ಕಳು ಓದಿ ಮುಂದೆ ಬರಲೆಂದು ಆಶಿಸುವ ತಂದೆ ತಾಯಿ ಇಲ್ಲಿ ಕಾಣಿಸುತ್ತಾರೆ. ಬುದ್ಧಿ ಬಲಿಯದ ವಯಸ್ಸಿನ ಉಡಾಫೆಯ ಮಗ ಸಿದ್ದನಿದ್ದಾನೆ. 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದವರು ಸಿದ್ದನ ಕಥೆ ಹೇಳಿದ್ದೇಕೆ.. ಬದುಕಿನ ಬದಲಾವಣೆ ಎಲ್ಲಿ ಶುರುವಾಗುತ್ತದೆ ಮತ್ತು ಹೇಗೆ ಎಂಬುದರ ಚೆಂದದ ಕಥೆ.


ದೊಡ್ಡ ಸಂಪಿಗೆಯ ತಿರುವು : ಹುಚ್ಚಾಲಮ್ಮನ ಒಕ್ಕಲಿಗೆ ಸೇರಿದ ಕಾರಣಕ್ಕೆ ಹುಚ್ಚಾಲಿ ಎಂದು ಹೆಸರು ಕರೆದಿರಬೇಕು ಎಂದುಕೊಂಡರೂ ಮೂಲ ಕಥೆ ಅವಳ ಹೆಸರ ಹಿಂದಿನ ಮರ್ಮವನ್ನು ಬೇರೆಯೇ ಹೇಳುತ್ತದೆ. ಜೊತೆಗೆ ಆಕೆಯ ತಂದೆಯ ನ್ಯಾಯ ನಿಷ್ಠುರತೆಯ ಪರಿಚಯವನ್ನು ಮಾಡಿಸುತ್ತದೆ. ಹುಚ್ಚಾಲಿಯ ಸಾಂಸಾರಿಕ ಬದುಕು ಹೇಗಿತ್ತು..? ಆಕೆಯ ಗಂಡ ಕಾಣೆಯಾದದಕ್ಕೂ.. ಅವಳ ಭ್ರಮೆಗೂ ಇರುವ ಸಂಬಂಧವೇನು..? ಕಣ್ಣಿಗೆ ಕಂಡದ್ದು ಅಥವಾ ಅಂದುಕೊಂಡದ್ದೇ ನಿಜ ಎನ್ನುವ ದೃಷ್ಟಿಕೋನವನ್ನು ಬದಲಿಸುವ ಕಥೆ ಇದು.


ಕಾಕ್ಟೇಲ್ : ವೀರೇಶ್ ಮಾಡುತ್ತಿದ್ದ ಕೆಲಸದ ಪರಿಚಯವನ್ನು ಮಾಡಿಸುತ್ತಲೇ ಆತನ ಕಥೆ, ಕಾದಂಬರಿಗಳನ್ನು ಓದುವ ಗೀಳು ಹಚ್ಚಿಕೊಂಡದ್ದು ಹಾಗೂ ಓದನ್ನು ಆಸ್ವಾದಿಸುತ್ತಿದ್ದ ಬಗೆಯ ಜೊತೆಗೆ ಅಚಾನಕ್ಕಾಗಿ ಸಿಕ್ಕ ಗೆಳೆತನಗಳಲ್ಲಿ ಸಾಹಿತ್ಯಕ್ಕೆ ಕನೆಕ್ಟ್ ಆದ ಗೆಳೆತನಗಳು ಕಾಣುತ್ತವೆ. ಆ ಗೆಳೆಯರ ಗುಂಪಿನಲ್ಲಿ ಪ್ರದೀಪ್ ಬರೆದ ಕಾಗದ ಒಂದು ಆತನ ಬದುಕಿಗೆ ಸಂಬಂಧಪಟ್ಟಿದ್ದೇ ಆದರೂ.. ವೀರುವಿನ ಒಂದು ನಿರ್ಲಕ್ಷ್ಯ ಪ್ರದೀಪ್ ಹಾಗೂ ವೀರುವಿನ ಬದುಕನ್ನೇ ಬುಡಮೇಲಾಗಿಸುವ ಬಗೆ ಇಲ್ಲಿದೆ. 


ಕುಂಟು ಸೇತುವೆ : ಇದೊಂದು ಪ್ರೇಮ ಕಥೆ. ಇಲ್ಲಿ ಪ್ರೇಮ ಯಶಸ್ವಿಯಾಯಿತೋ ಅಥವಾ ವಿಫಲವಾಯಿತೋ ಎಂಬುದನ್ನು ಓದಿ ನೋಡಿ. ಆದರೆ, ಈ ಕಥೆಯ ಕೊನೆಯಲ್ಲಿ ಬರುವ ಸಾಲು ಈ ಕಥೆಯನ್ನು ಬೇರೆಯದ್ದೇ ಆಯಾಮದಲ್ಲಿ ತೋರುವ ಸಾಮರ್ಥ್ಯ ಹೊಂದಿದೆ. 

ಸಂದರ್ಭ : ಕುಂಟು ಸೇತುವೆಯ ಕೆಳಗೆ ಮೀನುಗಳಿಗೆ ಕಡಲೆಪುರಿ ಇಡುತ್ತಾ ಕುಳಿತಿದ್ದ ಆತ ಹಾಗೂ ಪಚ್ಚಿ.

"ನಾನು ನನ್ನದೇ ಆದ ರೀತಿಯಲ್ಲಿ ಹೇಳಿದ ಅವನ ಕಥೆಯನ್ನು ಕೇಳಿ ಅವನಿಗೆ ಹೇಗಾಯಿತು ಏನೋ?"

ಈ ಕಥೆಯ ಕುರಿತು ನೀವೇ ಓದಿ ನೋಡಿ.


ಅಂಬಾಸಿಡರ್ ಕಾರು : ಸುಹಾಸ್ ತಿಳಿದೋ ತಿಳಿಯದೆಯೋ ಸಣ್ಣ-ಪುಟ್ಟ ತಪ್ಪನ್ನೂ ಬೆಟ್ಟದಷ್ಟೆಂದು ಭಾವಿಸಿ ಭಯಭೀತನಾಗುತ್ತಿದ್ದ. ನಲುಗುತ್ತಿದ್ದ, ನರಳುತ್ತಿದ್ದ. ಆದರೆ, ಕ್ಷಮೆ ಕೇಳಿ ಮತ್ತೆ ಸರಿಪಡಿಸಿಕೊಂಡು ಸಂತಸವನ್ನು ಹಂಚಿಕೊಳ್ಳುವುದು ಸಹ ಅಷ್ಟೇ ಆಪ್ತವಾಗಿ ಹಾಗೂ ಗಾಢವಾಗಿ. 

ಎಳ್ಳಮಾವಾಸ್ಯೆಯ ದಿನ ನಡೆದ ಒಂದು ಘಟನೆ ಅವನಿಗೆ ಗಾಢವಾಗಿ ಬಾಧಿಸುತ್ತಿತ್ತು. ತಪ್ಪು ಇವನದ್ದೇ.. ಅಪಘಾತವೆಂದರೆ ಅದು ಒಂದು ಕ್ಷಣದ ಮೈಮರೆಯುವಿಕೆ. ಈತ ಮಾಡಿದ ಅಪಘಾತಕ್ಕೆ ಬಲಿಯಾದ ವ್ಯಕ್ತಿ ಇವನನ್ನು ಸುಮ್ಮನೆ ಬಿಟ್ಟುಬಿಟ್ಟಿದ್ದ. ಆದರೆ, ಆತನ ಮಾತಿನಿಂದ ಪಶ್ಚಾತ್ತಾಪ ಪಡುತ್ತಾ ಆ ವ್ಯಕ್ತಿಯ ಯೋಗಕ್ಷೇಮ ವಿಚಾರಿಸಲು ಅಪ್ಪ, ಅತ್ತೆ ಹಾಗೂ ಪುಟ್ಟಿಯ ಜೊತೆ ಹೊರಡುತ್ತಾನೆ. ಪುಟ್ಟಿ ಎಲ್ಲರಂತಲ್ಲ. ಅಂದು ಅಲ್ಲಿಗೆ ಹೋದಾಗ ಅಂಬಾಸಿಡರ್ ಕಾರು ಕಂಡ ಪುಟ್ಟಿ ಕೆರಳಿದ್ದೇಕೆ..? 

ಕೆಲವೊಮ್ಮೆ ಸಂತ್ರಸ್ತರು ಎಂದು ಭಾವಿಸುವವರು ನಿಜಕ್ಕೂ ಸಂತ್ರಸ್ತರೇ ಆಗಿರುತ್ತಾರೆಯೇ..?


ಭೈರೂಪ : ವಂದನಾ ಹಾಗೂ ಅಭಿಯ ಮನಸ್ತಾಪ ಹಾಗೂ ಅವರಿಬ್ಬರ ಮನದ ತುಮುಲಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ವಂದನಾ ಹಾಗೂ ಅಭಿ ಒಬ್ಬರಿಗೊಬ್ಬರು ಏನಾಗಬೇಕು ಎಂಬ ಸಂಬಂಧ ತೆರೆದುಕೊಂಡಾಗ ಅವರಿಬ್ಬರ ನಡುವಿನ ಮನದ ಮಾತುಗಳು ನಿಜಕ್ಕೂ ಸರಿಯೇ ಎಂಬ ಆಲೋಚನೆ ಮೂಡುತ್ತಿರುವಾಗಲೇ ವಂದನಾ ಅಭಿ ಎಂದು ಕರೆಯುತ್ತಿದ್ದದ್ದು ಅನಿತಾಳನ್ನು ಎಂದು ತಿಳಿದುಬರುವಷ್ಟರಲ್ಲಿ ಕಥೆ ಕೊನೆಯಾಗುತ್ತದಾದರೂ.. ಕಥೆ ಮತ್ತೊಂದು ಆಯಾಮದಲ್ಲಿ ಇನ್ನೊಮ್ಮೆ ಓದಿಸಿಕೊಳ್ಳುತ್ತದೆ.


ಕ್ವಲ್ಲನಂಜಿ : ಕ್ರಿಶ್ಚಿಯನ್ನರ ಸಮಾಧಿ ಹಾಗೂ ಅವರು ಅಂತ್ಯಸಂಸ್ಕಾರ ಕಾರ್ಯವನ್ನು ಮಾಡುವ ಕ್ಷಣದಿಂದ ತೆರೆದುಕೊಳ್ಳುವ ಕಥೆ ನಂಜಿಯ ಹಾಲುತುಪ್ಪದ ದಿನ ಸಮಾಧಿಯ ಮೇಲಿಟ್ಟ ತಿಂಡಿ-ತಿನಿಸನ್ನು ಕಾಗೆ ಮುಟ್ಟದೆ ಇರುವಾಗ ಅಯ್ಯನಿಗೆ ಗೊತ್ತಾಗದಂತೆ ನಂಜೆಯ ದೊಡ್ಡ ಮಗ ಮಾಡಿದ ಕೆಲಸವೇನು..? ಎನ್ನುವುದರಿಂದ ಶುರುವಾಗಿ, ಅಯ್ಯ ಹಾಗೂ ನಂಜಿಯ ಯೌವ್ವನದ ದಿನಗಳಿಂದ ಇಂದಿನ ಆಪ್ತತೆಯವರೆಗೂ ತೆರೆದುಕೊಳ್ಳುತ್ತದೆ. ಅಯ್ಯವನ್ನು ಸಮಾಧಾನಪಡಿಸಿದವರಾರು..? ನಂಜಿಯ ಕೊನೆಯ ಆಸೆ ಏನಿತ್ತು..? 


ವಿಕಾರಿ : ಇಲ್ಲಿ ಪ್ರತಿ ಕಥೆಗೂ ಶೀರ್ಷಿಕೆ ಚಿತ್ರಗಳಿವೆ. ಆದರೆ, ಈ ಕಥೆಯ ಚಿತ್ರವಂತೂ ಅನ್ವರ್ಥದಂತಿದೆ. 

ಎಲ್ಲಾ ಪತ್ರಗಳು ಸರಿಯಾಗಿ ಹೊಂದಿ ಕೆಲಸಕ್ಕೆಂದು ಹೋದ ಮುರುಗ ಬಂದಾಗ ಮೊದಲಿನಂತಿರಲಿಲ್ಲ. ಅಮ್ಮನ ಉತ್ಸಾಹಕ್ಕೂ ಅವನ ನಿರುತ್ಸಾಹಕ್ಕೂ ಬಹಳ ವೇ ಅಂತರ. 

ಅದಕ್ಕೂ ಮೊದಲು ಆಕೆಯ ನೆನಪಿನಾಳದ ಮಾತುಗಳು ಇಂತಿವೆ.

"ಹೆಣ್ಣ ತ್ತಾಣ ನೂರ್ಮಡಿಗೊಳ್ಳುವುದಕ್ಕೆ ತಾಯ್ತನವೇ ವೇದಿಕೆ. ಹೆಣ್ಣ ಹುಟ್ಟು, ಹೆಣ್ಣ ಬದುಕು ಸಾರ್ಥಕ್ಯದ ಗುರಿ ಮುಟ್ಟಿ ತೇಲಾಡುವಂಥದ್ದು ಆಗಲೇ. ಯಾರೇ, ಏನೇ ಎದುರಾದರೂ ಈಸುವ ಛಲ ಹೆಣ್ಣಿನೊಳಗೆ ಪುಟಿದೇಳುವಂತದ್ದು ಅಲ್ಲಿಂದೀಚೆಗೇ. ಇಂತಹ ಮಧುರ ಸುಮಧುರ ಪ್ರಕೃತಿಯಲ್ಲಿ ನನ್ನೊಳಗೊಬ್ಬ ವಿಕಾರಿ ಮೈದಾಳುವುದೇ..?!"

ಪಲ್ಲಮ್ಮನ ಮನಸ್ಸಿನ ಈ ಮಾತುಗಳು ಯಾವ ನೆನಪಿನಿಂದ ವಾಸ್ತವಕ್ಕೆ ಕರೆತರುತ್ತವೆ..? ಇದರ ಹಿನ್ನೆಲೆ ಏನು..?

ಕೆಲವು ವೃತ್ತಿಗಳು ವಂಶಪಾರಂಪರ್ಯವಾಗಿ ಮುಂದುವರಿಯುವುದಿಲ್ಲ. ಅದಕ್ಕೆ ಹಲವು ಕಾರಣಗಳು. ಇಲ್ಲಿ ಅಂತಹದ್ದೇ ಒಂದು ವೃತ್ತಿ ಇದೆ. ಆ ವೃತ್ತಿ ಸಮಾಜ ಎಷ್ಟೇ ಆಧುನಿಕತೆ ಕಂಡರೂ ಬದಲಾಗದ ವಾಸ್ತವತೆಗೆ ಹಿಡಿದ ಕನ್ನಡಿಯಂತಿದೆ. 

ನನಗೇಕೋ ಈ ಕಥೆಯ ಅಂತ್ಯ ಬದಲಾವಣೆಯನ್ನು ಬಿಂಬಿಸಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿದರೂ.. ಆ ಬದಲಾವಣೆ ಅಷ್ಟು ಸುಲಭವಲ್ಲ ಎನ್ನುವ ವಾಸ್ತವತೆ ತೋರಿರುವ ಕಥೆಗಾರರೇ ಸರಿಯೇನೋ ಎಂದೂ ಅನ್ನಿಸಿತು.


ಈ ಕಥಾ ಸಂಕಲನದಲ್ಲಿ ಭಾಷೆ ಚಾಮರಾಜನಗರ, ಕೊಳ್ಳೇಗಾಲ ಭಾಗದ ಪ್ರಾಂತೀಯ ಕನ್ನಡ. ಅಲ್ಲಿನ ಆಡು ನುಡಿ, ಬೈಗುಳ ಹಾಗೂ ಮಂಟೇಸ್ವಾಮಿ ಪದಗಳು ವಿಭಿನ್ನ ಓದಿನ ಅನುಭವ ನೀಡುತ್ತವೆ. ಆಡುಭಾಷೆಯಿಂದಾಗಿ ಓದು ನಿಧಾನವಾದರೂ.. ಆಸಕ್ತಿಕರವಾಗಿ ಓದಿಸಿಕೊಂಡು ಹೋಗುವ ಕಥೆಗಳು ಇಲ್ಲಿವೆ. ಭಾಷೆ ಕಾವ್ಯಾತ್ಮಕವಾಗಿ ಹಾಗೂ ಸೆಳೆಯುವಂತಿದೆ. ಇನ್ನಷ್ಟು ವೈವಿಧ್ಯಮಯ ಬರಹಗಳು ಮೂಡಿ ಬರಲಿ ಎಂದು ಹಾರೈಸುವೆ. 


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 2, 2026

ಒಂದೇ ನೋವಿಗೆ ಎಷ್ಟೆಂದು ಘಾಸಿಗೊಳ್ಳುವುದು..?


ನನಗಂತೂ ಆಗಾಗ ಬಹಳಷ್ಟು ಜ್ಞಾನೋದಯಗಳಾಗುತ್ತಿರುತ್ತವೆ. ಕೆಲವೊಂದು ಅಷ್ಟೇ ಬೇಗ ಅದರ ತೀವ್ರತೆಯನ್ನು ಕಳೆದುಕೊಳ್ಳಬಹುದಾದರೂ ಹೊಳೆಯುವ ಹೊಳವುಗಳು ಆ ಕ್ಷಣಕ್ಕೆ ಸಾಂತ್ವನ ನೀಡುತ್ತವೆ. ಅದರಲ್ಲೂ ಈಗೀಗ ಮಗಳ ನಡೆಗಳನ್ನೂ ಮೆಲುಕು ಹಾಕುವಾಗ, ಆಟೋಟಗಳನ್ನು ಗಮನಿಸಿ ಯಾವಾಗಲೋ ನನ್ನದೇ ಲಹರಿಯಲ್ಲಿರುವಾಗ ಯೋಚನಾಲಹರಿ ಮತ್ತೊಂದು ಕಡೆ ಹೊರಳುತ್ತದೆ. ಇದು ಹಾಗೆ ಹೊಳೆದದ್ದೇ..


ಕಳೆದ ವಾರ ಮಗಳಿಗೆ ವ್ಯಾಕ್ಸಿನ್ ಹಾಕಿಸಿದಾಗ ಆಸ್ಪತ್ರೆಯಲ್ಲಿ ನೋವಿನ ತೀವ್ರತೆಯಲ್ಲಿ ಒಂದೆರಡು ನಿಮಿಷ ಅತ್ತದಷ್ಟೇ. ಅವಳಿಗೆ ಮತ್ತೆ ಅದರ ಕಡೆ ಗಮನವಿರಲಿಲ್ಲ. ಮನೆಗೆ ಬಂದು ಆ ಬ್ಯಾಂಡೆಡ್ ನೋಡಿದಾಗ, ಎಲ್ಲಿ ಚುಚ್ಚಿ ಮಾಡಿದ್ದಾರೆ ಎಂದು ನಾವೇ ಬೇಕೆಂದು ಪ್ರಶ್ನಿಸಿದಾಗಲೆಲ್ಲಾ ಅವಳು ಅದನ್ನು ನೋಡಿಕೊಂಡಂತೆಲ್ಲಾ ಅಳು. ಅದೂ ಒಂದರ್ಧ ಗಂಟೆಯಷ್ಟೇ.. ನಂತರದ ಒಂದು ಗಂಟೆಯಲ್ಲಿ ಆಟದ ಸಂಭ್ರಮದಲ್ಲಿ ಅದನ್ನು ನೋಡಿಕೊಂಡು ಅವಳೇ ನಗುತ್ತಾ ತೋರುತ್ತಿದ್ದಳು. ನಾನು ಗಟ್ಟಿಗಿತ್ತಿ ನೋಡು ಎಂಬ ಹೆಮ್ಮೆ ಇರುವಂತೆ..! ಇನ್ನೊಂದಷ್ಟು ಕ್ಷಣಕ್ಕೆ ಹಾಗೂ ನಂತರ ಅದು ಲೆಕ್ಕವೇ ಇಲ್ಲವೆಂಬಂತೆ..!


ಇದನ್ನು ಮೆಲುಕು ಹಾಕಿದಾಗ ನನಗೆ ಹೀಗೆಲ್ಲಾ ಆಲೋಚನೆ ಮೂಡಿತು. ಯಾರಿಂದಲೋ ಯಾವುದೋ ಒಂದು ಸಂದರ್ಭದಲ್ಲಿ ನೋವಾದಾಗ, ಆಘಾತ, ದ್ರೋಹ, ವಂಚನೆ, ಅವಮಾನವಾದಾಗ.. ಹೀಗೆ ಯಾವುದೋ ಒಂದು ವಿಚಾರಕ್ಕೆ ಮನಸ್ಸು ಕೆಡಿಸಿಕೊಂಡು ಆ ಕ್ಷಣದಲ್ಲಿ ರಿಯಾಕ್ಟ್ ಮಾಡುತ್ತೇವೆ. ಹಲವಾರು ಬಾರಿ ಮತ್ತದು ನಮಗೆ ಮರೆತೇ ಹೋಗಿರುತ್ತದೆ. ಸಾಮಾನ್ಯವಾಗಿ ಕೋಪ ತೋರಿಸಿಕೊಂಡ ನಂತರ ಮತ್ತದೇ ವಿಚಾರಕ್ಕೆ ಕೋಪ ಬರುವ ಸಾಧ್ಯತೆ ತೀರಾ ಕಡಿಮೆ. 


ಆ ವ್ಯಕ್ತಿಯನ್ನೋ, ವಸ್ತುವನ್ನೋ ಅಥವಾ ಆ ಕ್ಷಣವನ್ನೋ ಯಾರೋ ನೆನಪಿಸಿದಾಗ ಅಥವಾ ಅಚಾನಕ್ಕಾಗಿ ನೆನಪಾದಾಗ ನೋವಿನ ತೀವ್ರತೆ ಹೆಚ್ಚಾಗುತ್ತದೆ. ಜೊತೆಗೆ ಮನಸ್ಸು ಘಾಸಿಯಾಗುತ್ತದೆ. ಅದನ್ನು ನೆನಪಿಸಿದವರ ಮೇಲೆಯೇ ಹರಿಹಾಯುವಂತಾಗುತ್ತದೆ. ಅವರಾದರೂ ಗೊತ್ತಿದ್ದೂ ಕೆಣಕುವುದೇಕೆ..?! ಗೊತ್ತಿದ್ದೂ.. ಬೇಡವೆಂದರೂ ಮತ್ತೊಬ್ಬರ ನೋವನ್ನು ಹೆಚ್ಚಿಸುವುದೇ ಅವರ ಗುರಿಯಿರಬಹುದೇನೋ..


ಅದೂ ಒಂದಷ್ಟು ದಿನಗಳಷ್ಟೇ.. ಮತ್ತೆ ಅವರನ್ನು ನೋಡಿದಾಗ ಬರುತ್ತಿದ್ದ ಕೋಪ-ತಾಪ, ಅಸಹನೆ ಎಲ್ಲವೂ ಮರೆತಂತೆ ಮರೆಗೆ ಸರಿಯುತ್ತದೆ. ಅದೂ ಒಂದಷ್ಟು ದಿನಗಳಷ್ಟೇ.. ಮತ್ತೆ ನಾವು ಅವರ ಇರುವಿಕೆಯನ್ನೇ ನಿರ್ಲಕ್ಷಿಸಿ ನಿರ್ಲಿಪ್ತಿಗೆ ಜಾರಿ ಬಿಡುತ್ತೇವೆ ಅಥವಾ ಅವರು ಎದುರಾದರೂ ಮತ್ತೆ ಮೊದಲಿನಷ್ಟಂತೂ ಮನಸ್ಸು ಕೆಡಿಸಿಕೊಳ್ಳುವುದಿಲ್ಲ.


ಒಂದೇ ನೋವಿಗೆ ಎಷ್ಟೆಂದು ಘಾಸಿಗೊಳ್ಳುವುದು..? 

ದೈಹಿಕ ಹಾಗೂ ಮಾನಸಿಕ ನೋವು ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗದು. ಆದರೆ, ಮನಸ್ಸಿನ ನೆಮ್ಮದಿಗೆ, ನಿರಾಳತೆಗೆ ನಿರ್ಲಕ್ಷಿಸುವುದೋ ಇಲ್ಲವೇ ಕ್ಷಮಿಸಿಬಿಡುವುದೋ ಮಾಡುತ್ತೇವೆ. ಇದೆಲ್ಲದರಾಚೆಗೆ ನಮಗೆ ನೆನಪಿರಬೇಕಾಗುವುದು ಪದೇಪದೇ ಅಂತಹ ಮೋಸ, ಘಾಸಿಗೆ ಒಳಗಾಗದಂತೆ ನಮ್ಮನ್ನು ರಕ್ಷಿಸಿಕೊಳ್ಳುವುದು. ಕೆಲವೊಮ್ಮೆ ಕ್ಷಮಿಸುವುದು ಅನಿವಾರ್ಯವಾಗುತ್ತದೆ. ಆದರೆ, ಮರೆಯುವುದಿಲ್ಲ. ಹಾಗೆಂದು ಅದನ್ನೇ ಸಾಧಿಸುವುದೂ ಅಲ್ಲ. ಮರೆಯುವಷ್ಟೇ ಮರೆಯದಿರುವುದೂ ಮುಖ್ಯವಾಗುತ್ತದೆ. ಇಲ್ಲವಾದಲ್ಲಿ, ಅದೇ ಪಾಠವನ್ನು ಬದುಕು ನಾವು ಕಲಿಯುವವರೆಗೂ ಬೇರೊಂದು ರೂಪದಲ್ಲಿ ಕಲಿಸುತ್ತಲೇ ಇರುತ್ತದೆ. ಅಲ್ಲವೇ..?!


~ವಿಭಾ ವಿಶ್ವನಾಥ್ 

ಆತಂಕ ಕರಗಿ

 


ಪ್ರತಿ ಆತಂಕವೂ ಸೃಷ್ಟಿಯಾಗಿದ್ದು

ಭವಿಷ್ಯದ ಮುಂದಾಲೋಚನೆಯಲ್ಲಿ

ದೂರಾಲೋಚನೆಯಲ್ಲಿ


ಪ್ರತಿ ಆತಂಕವೂ ಕರಗಿದ್ದು

ಆ ಕ್ಷಣ ಕಳೆದಾಗ 

ವಾಸ್ತವದ ನಿಜ ಹಿತವಾದಾಗ


ನಿರಾತಂಕದ ಹಿಂದೆ

ಭವಿಷ್ಯದ ಭಯವಿರಲಿಲ್ಲ

ವಾಸ್ತವ ಹೆದರಿಸಲಿಲ್ಲ


~ವಿಭಾ ವಿಶ್ವನಾಥ್

ಬಂಧ

 


ನಿಷ್ಠುರವಾದ ನಿರಾಕರಣೆ

ವಾದ - ಪ್ರತಿವಾದಗಳು

ಒಮ್ಮೆ ಘಾಸಿಗೊಳಿಸಿದರೂ

ಒಳ್ಳೆಯದಕ್ಕೆಂದು ಅರಿವಾದಾಗ

ಬಂಧ ಗಟ್ಟಿಯಾಗಿತ್ತು


ನಾಟಕದ ಪ್ರೀತಿ ತೋರಿ

ಬೆನ್ನಿಗೆ ಇರಿದದ್ದು

ಜೀವನವಿಡೀ ನೆನಪಲ್ಲುಳಿಯಿತು

ಬಂಧ ಮಾತ್ರ ಕಳಚಲಿಲ್ಲ

ಅಳಿದದ್ದು ನಂಬಿಕೆಯೂ..!


~ವಿಭಾ ವಿಶ್ವನಾಥ್

ಮಾನದಂಡ

 


ಬುದ್ಧಿವಂತಿಕೆಯ ಮಾನದಂಡ 

ಅಂಕ, ಜ್ಞಾನಾರ್ಜನೆ ಮಾತ್ರವಲ್ಲ..!

ಓದಿದ್ದನ್ನು ಉಪಯೋಗಿಸುವುದು

ಕಲಿತಿದ್ದನ್ನು ಹಂಚಿಕೊಳ್ಳುವುದು

ಅಷ್ಟೇ ಅಲ್ಲ..!

ಕಲಿತದ್ದು ಸಾಸಿವೆಯಷ್ಟಿದ್ದರೆ

ಕಲಿಯುವುದು ಸಾಗರದಷ್ಟಿದೆ 

ಎಂಬುದ ಮರೆಯದಿರುವುದು

ಹಾಗೆಯೇ.. ಯಶಸ್ಸಿನ ಮಾನದಂಡ

ಕೇವಲ ಗೆಲುವಲ್ಲ

ಎಲ್ಲ ಸಿಕ್ಕ ನಂತರವೂ

ವಿನಯತೆಯನ್ನು ಮರೆಯದಿರುವುದು

ಮೆರೆಯದಿರುವುದು..!


~ವಿಭಾ ವಿಶ್ವನಾಥ್

ಸಣ್ಣ ತಪ್ಪಿನ ಹಿಂದೆ (ಬೆಳಕಿಂಡಿಯ ಕತೆಗಳು - 62)

 


ರಾತ್ರಿಯ ಸಣ್ಣ ಮನಸ್ತಾಪ ಅವಳು ಹಾಕುತ್ತಿದ್ದ ರಂಗೋಲಿಯನ್ನೂ ಪ್ರಭಾವಿಸಿತ್ತು. ಎಷ್ಟೇ ಕೇಂದ್ರೀಕರಿಸಿದರೂ ಸಣ್ಣ ತಪ್ಪು ಆಗುತ್ತಲೇ ಇತ್ತು. ಒಮ್ಮೆ ಚುಕ್ಕಿ ಕಡಿಮೆ, ಮತ್ತೊಂದು ಸಾಲಿನಲ್ಲಿ ಹೆಚ್ಚು. ಎಲ್ಲಿಗೋ ಎಳೆಯಬೇಕಾದ ಎಳೆ ಮತ್ತೆಲ್ಲೋ..!

ಒಳಗಿನಿಂದ ತೇಲಿ ಬಂದ ಕಾಫಿಯ ಘಮಲು ಮನಸ್ತಾಪವನ್ನು ಮಾತ್ರವಲ್ಲ ಸಣ್ಣ ತಪ್ಪುಗಳನ್ನೂ ಸರಿಪಡಿಸಿತ್ತು.

~ವಿಭಾ ವಿಶ್ವನಾಥ್

ಹೊಣೆ (ಬೆಳಕಿಂಡಿಯ ಕತೆಗಳು - 61)

 


ತಮ್ಮ ಊರಿನಲ್ಲಿ ಮಾತ್ರವಲ್ಲದೆ ಅಕ್ಕ-ಪಕ್ಕದ ಹಳ್ಳಿಗಳಲ್ಲಿಯೂ ಹೂಳು ತೆಗೆದು, ಬಾವಿ ಕಟ್ಟೆ ಸರಿಪಡಿಸಿ, ಬತ್ತಿ ಹೋಗಿದ್ದ ಬೋರ್ ಗಳ ಪಕ್ಕದಲ್ಲಿ ಹಾಗೂ ಬೇರೆಡೆಗಳಲ್ಲಿ ಇಂಗು ಗುಂಡಿ ಮಾಡಿಸಿ, ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವ ಹಾಗೂ ಇಂತಹದ್ದೇ ಯಾವುದಾದರೊಂದು ಚಟುವಟಿಕೆಯನ್ನು ವಾರಕ್ಕೊಮ್ಮೆ ತಪ್ಪದೆ ಮಾಡುವ ಕಾಲೇಜು ಡ್ರಾಪ್ ಔಟ್ ಗಳ ಗುಂಪನ್ನು ವಿಚಿತ್ರವಾಗಿ ನೋಡುತ್ತಿದ್ದರು ಜನ. 

ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮಾಡುತ್ತಾ, ಮಣ್ಣಿನ ಮಕ್ಕಳಾದವರು ಪರಿಸರ ಸಂರಕ್ಷಣೆಯನ್ನು ಅತ್ಯಂತ ಸಮರ್ಪಕವಾಗಿ ಮಾಡುತ್ತಿದ್ದರು. ಹೆಚ್ಚೇನಿಲ್ಲ.. ಐದು ವರ್ಷಗಳಲ್ಲಿಯೇ ಜನರಿಗೆ ಅದರ ಮಹತ್ವ ಅರಿವಾಗಿ ಅವರೊಡನೆ ಕೈಜೋಡಿಸಿದರು. "ಪ್ರಕೃತಿ ಸಂರಕ್ಷಣೆ ಎಲ್ಲರ ಹೊಣೆ" ಎಂದು ಮಕ್ಕಳಿಗೂ ಹೇಳಿಕೊಡುತ್ತಿದ್ದಾರೆ.

~ವಿಭಾ ವಿಶ್ವನಾಥ್

ಹರಸು ಬಾ ನನ್ನನು (ಪುಸ್ತಕ ಯಾನ - 479)


ಪುಸ್ತಕದ ಶೀರ್ಷಿಕೆ : ಹರಸು ಬಾ ನನ್ನನು

ಲೇಖಕರು : ಸಿ. ಎನ್. ಮುಕ್ತಾ

ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2023

ಪುಟಗಳು : 328

ಬೆಲೆ : 325 ರೂ. 


ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡು ತಂದೆಯ ಜೊತೆ ಬೆಳೆಯದೆ, ತಾಯಿಯ ತಾಯಿ ಅಜ್ಜಿಯ ಆಶ್ರಯದಲ್ಲಿ ಬೆಳೆದು ಸಂಸ್ಕಾರ ಹಾಗೂ ವಿದ್ಯೆ ಕಲಿತ ಯುವತಿಯೊಬ್ಬಳು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವ ಪರಿ ಈ ಕಾದಂಬರಿಯ ಕಥಾವಸ್ತು. ಜೊತೆಗೆ ಕೌಟುಂಬಿಕ ಮೌಲ್ಯವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.


ಕೌಶಿಕಿ ಈ ಕಥೆಯ ನಾಯಕಿ. ರಾಜಾರಾಯರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಪಾತಜ್ಜಿ ಕೌಶಿಕಿಯನ್ನು ಬೆಳೆಸಿ ದೊಡ್ಡವಳನ್ನಾಗಿಸಿದಳು. 


ಇಲ್ಲಿ ರಾಜರಾಯರ ಮನೆಯ ಪರಿಸರವನ್ನು ತಿಳಿದುಕೊಳ್ಳುವ ಅಗತ್ಯ ಕಾಣುತ್ತದೆ. ಮುಂದೆ ಕೌಶಿಕಿಗೆ ಈ ಮನೆಯ ನಂಟು ಬೆಳೆಯುವ ಬಗೆಯೂ ಈ ಕಥೆಯಲ್ಲಿದೆ. 


ರಾಜಾರಾಯರಿಗೆ ನಾಲ್ಕರ ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು. ಪತ್ನಿ ಶಂಕರಮ್ಮ. ಮೊದಲ ಮಗ ಸುಧಾಕರ್ ಲಾಯರ್ ಆತನ ಪತ್ನಿ ಇರಲಿಲ್ಲ. ಎರಡನೆಯ ಮಗ ಪ್ರಭಾಕರ ಕಾಲೇಜು ಅಧ್ಯಾಪಕ, ಹೆಂಡತಿ ಅನುರಾಧ. ಮೂರನೆಯ ಮಗ ಸೋಮೇಶ್ವರ ಇಂಜಿನಿಯರ್ ಆಗಿದ್ದವನು. ಆತನ ಪತ್ನಿ ಸರಳ. ಕೊನೆಯ ಮಗ ದಿನಕರನಿಗಿನ್ನೂ ವಿವಾಹವಾಗಿರಲಿಲ್ಲ. ಒಬ್ಬಳೇ ಮಗಳು ಚಿನ್ಮಯಿ. ಅವಳ ಗಂಡ ಶರತ್ ಸಹ ಡಾಕ್ಟರ್. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ದಿನಕರನಿಗಿಂತ ಮೊದಲು ಹುಟ್ಟಿದವಳು ಚಿನ್ಮಯಿ. 


ಚಿನ್ಮಯಿ ಡಾಕ್ಟರ್ ಆಗಿದ್ದರೂ ತನ್ನ ನರ್ಸಿಂಗ್ ಹೋಮ್ ನಲ್ಲಿ ಹಣದಾಸೆಗೆ ಬಿದ್ದಿದ್ದಳು. ನೆಂಟರಿಗೂ ರಿಯಾಯಿತಿ ತೋರಿಸುತ್ತಿರಲಿಲ್ಲ. ಅತ್ತಿಗೆಯರ ಜೊತೆ ಆತ್ಮೀಯ ಭಾವವಿರಲಿಲ್ಲ. ಎಲ್ಲರಿಗೂ ಎಲ್ಲೆಡೆಯೂ ದರ್ಪ ತೋರುತ್ತಿದಳು. ಕೆಲಸದವರನ್ನು ಆತ್ಮೀಯವಾಗಿ ಕಂಡಿರಲಿಲ್ಲ. ಅತ್ತೆ-ಮಾವನ ಜೊತೆ ಇರಲಿಲ್ಲ. ಗಂಡ ಶರತ್ ಗೂ ನೆರವಾಗದೆ ತನ್ನ ಊಟ-ತಿಂಡಿ, ಮಕ್ಕಳ ಆರೈಕೆಗೆ ಅಮ್ಮನ ಮನೆಯನ್ನು ನೆಚ್ಚಿದ್ದವಳು.


ಕೌಶಿಕಿ ತನ್ನ ಕಂಪ್ಯೂಟರ್ ಸೈನ್ಸ್ ಬಿ .ಎಸ್ಸಿ ಮುಗಿಸಿದ ನಂತರ ಎಂ .ಎಸ್ಸಿಗೆ ಹೋಗುವ ಆಸೆ ಇದ್ದರೂ ತಾನೇ ದುಡಿದು ಓದಬೇಕೆಂದು ಕೆಲಸ ಹುಡುಕುತ್ತಿರುವಾಗ.. ರಾಜಾರಾಯರಲ್ಲಿಯೇ ಕೆಲಸ ಸಿಕ್ಕಿತ್ತು. ಬೆಳಗ್ಗೆ ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಬಿಟ್ಟು ಬಂದು, ಸಾಯಂಕಾಲ ಹೋಮ್ ವರ್ಕ್ ಮಾಡಿಸುವುದು. ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಮಕ್ಕಳ ಮನೆಗೆದ್ದಿದ್ದಳು. ಅನುರಾಧ ಹಾಗೂ ಸರಳರು ಇದರಿಂದ ತೃಪ್ತಿ ಹೊಂದಿದ್ದರು. ಆದರೆ, ಚಿನ್ಮಯಿ ಆಕೆಗೆ ಹೊಂದಿಕೊಂಡಿರಲಿಲ್ಲ. ಆಕೆಯನ್ನು ಕೆಲಸದವಳ ಹಾಗೆ ನಡೆಸಿಕೊಳ್ಳಲು ಹೋದಾಗ ಸ್ವಾಭಿಮಾನದಿಂದಲೇ ಉತ್ತರಿಸಿದ್ದಳು ಕೌಶಿಕಿ.


ಚಿನ್ಮಯಿಯ ಅಹಂಕಾರದ ಗುಣಕ್ಕೆ ಶರತ್ ಸಹ ಪಾಠ ಕಲಿಸಲು ತೀರ್ಮಾನಿಸಿದ. ಇದಕ್ಕೆ ಶಂಕರಮ್ಮನ ಸಹಕಾರವೂ ಇತ್ತು. ತಂದೆ-ತಾಯಿಯ ಅನುಪಸ್ಥಿತಿ ಮಕ್ಕಳಿಗೆ ಕಾಡಿತ್ತು. ಅದರಲ್ಲಿಯೂ ಹಿರಿಯ ಮಗಳಾದ ಚಾರುಲತಾಳಿಗೆ ಹೆಚ್ಚು. ಮುಂದೆ ಮತ್ತೊಬ್ಬ ಮಗಳು ಚಿನ್ಮಯಿಯೂ ಅದೇ ಹಾದಿ ಹಿಡಿಯುವುದೇನು ಕಷ್ಟವಿರಲಿಲ್ಲ. ಚಾರುವನ್ನು ಮನೋವೈದ್ಯರ ಬಳಿಗೆ ಕರೆದುಯ್ದ ಚಿನ್ಮಯಿ ಯಲ್ಲಿ ಕ್ರಮೇಣ ಆದ ಬದಲಾವಣೆಗಳೇನು..? ಹೆಣ್ಣುಮಕ್ಕಳ ಹೊಂದಾಣಿಕೆಯಿಂದ ಸಂಸಾರದ ಸುಖ, ಮಕ್ಕಳ ಭವಿಷ್ಯ, ನೆಮ್ಮದಿಯ ಬದುಕು ಅಡಗಿರುವುದನ್ನು ಇಲ್ಲಿ ಗಮನಿಸಬಹುದು. 


ಸುಧಾಕರನ ಮೊದಲ ಪತ್ನಿ ತೀರಿ ಹೋದದ್ದು ಹೇಗೆ..? ಸುಧಾಕರ ಅದಕ್ಕಿಂತಲೂ ಮೊದಲು ಪ್ರೀತಿಸಿದ ಶ್ಯಾಮಲಾ ಡಾಕ್ಟರ್ ಆಗಿದ್ದಳು. ಈಗಲೂ ಅವಳು ಅವಿವಾಹಿತೆಯಾಗಿಯೇ ಇದ್ದಳು. ಸುಧಾಕರನ ಜೊತೆಗೆ ಅವಳ ಮರು ವಿವಾಹವಾಗಿ ಮಕ್ಕಳು ಅವಳನ್ನು ಅಮ್ಮ ಎಂದು ಸ್ವೀಕರಿಸುವಲ್ಲಿ ಕೌಶಿಕಿ ಪಾತ್ರ ಏನಿತ್ತು..? ಶ್ಯಾಮಲಾಳ ನೇರವಂತಿಕೆಯ ಸ್ವಭಾವವನ್ನು ಇಲ್ಲಿ ಕಾಣಬಹುದಾದರೂ ಅದು ನಕಾರಾತ್ಮಕ ರೀತಿಯಲ್ಲಲ್ಲ. ಶಂಕರಮ್ಮ ತಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಬಾಯಮ್ಮನನ್ನು ಬಿಡಿಸುವುದಕ್ಕೂ ಶ್ಯಾಮಲಾ ಹಾಗೂ ಸುಧಾಕರನ ವಿವಾಹ ತಪ್ಪಿಸುವುದಕ್ಕೂ ನೀಡಿದ ಕಾರಣವೇನು..?


ರಾಜರಾಯರ ತಮ್ಮನ ಮಗ ಹರೀಶ ತನ್ನ ತಂಗಿ ಹರಿಣಿ ಮದುವೆಗೆ ಕರೆಯಲು ಬಂದಾಗ ಕೌಶಿಕಿಗೂ ಆತನಿಗೂ ಪರಿಚಯವಾಗಿತ್ತು. ಆತ ಮೈಸೂರಿನ ಹತ್ತಿರದ ಹಳ್ಳಿಯಲ್ಲಿದದ್ದು. ಕೌಶಿಕಿಗೆ ಆತ ಮನಸೋತ. ಬಡವರಾಗಿದ್ದರೂ.. ಗ್ರಾಜುಯೇಟ್ ಆಗಿರುವ, ಹಳ್ಳಿಯಲ್ಲಿ ಇರಲು ಒಪ್ಪುವ ಹುಡುಗಿ ಆತನ ಸಂಗಾತಿಯಾಗಿ ಬರಲು ಆತನಿಗೆ ಆಸೆ ಇತ್ತು.


ಹರಿಣಿಯ ಮದುವೆ ಹಳ್ಳಿಯಲ್ಲಿ ಆಗದೇ ಇದ್ದದ್ದು ರಾಜರಾಯರು ಹಳ್ಳಿಗೆ ಬರದೇ ಇರಲು ಶಪಥ ಮಾಡಿದ್ದು, ರಾಜರಾಯರ ತಮ್ಮ ಗಣೇಶರಾಯರ ಮೊದಲ ಪತ್ನಿ ತುಳಸಿಯ ಸಾವು, ಈಗಿನ ಪತ್ನಿ ಸುವರ್ಣಮ್ಮ ಹಾಗೂ ಅವರ ಮಗ ಹರೀಶ ಹೀಗೆ ಎಲ್ಲರ ವಿಚಾರವನ್ನು ಪಾತಜ್ಜಿ ಕೌಶಿಕಿಗೆ ತಿಳಿಸುತ್ತಾರೆ. ಸಿರಿವಂತರ ಮನೆಯ ಹಿನ್ನೆಲೆ ಬಿಚ್ಚಿಕೊಳ್ಳುತ್ತದೆ. ಹಿನ್ನೆಲೆ ಓದಿ ನೋಡಿ 


ವಠಾರದಲ್ಲಿದ್ದ ಶಾಂತಮ್ಮನವರು ಕೌಶಿಕಿಯನ್ನು ಮಗಳಂತೆಯೇ ಕಾಣುತ್ತಿದ್ದವರು. ಪಾತಜ್ಜಿಯನ್ನು ಬಹಳ ಗೌರವಿಸುತ್ತಿದ್ದವರು. ಶಾಂತಮ್ಮನವರ ಅಣ್ಣನ ಮಗಳು ಮೇಘಳ ವಿವಾಹದಲ್ಲಿ ಕೌಶಕಿಯ ಪಾತ್ರವೇನಿತ್ತು...? 


ಮೇಘಾಳ ತಂದೆ ದಯಾನಂದ ಹಾಗೂ ತಾಯಿ ಮಂದಾಕಿನಿ ಕೌಶಿಕಿಯನ್ನು ಮುಕ್ತ ಮನಸ್ಸಿನಿಂದ ಹೊಗಳಿದರು. ಅದು ಕೇವಲ ಬಾಯಿ ಮಾತಿನ ಹೊಗಳಿಕೆಯಾಗಿರಲಿಲ್ಲ. 


ಮುಂದೆ ದಯಾನಂದ ಅವರ ಸಹಾಯ ಹಾಗೂ ಶಾಂತಮ್ಮನವರ ಸಹಕಾರದಿಂದ ರಾಜರಾಯರ ಮನೆಯ ಕೆಲಸ ಬಿಟ್ಟು ಅಜ್ಜಿ ಮೊಮ್ಮಗಳಿಬ್ಬರು ಮೈಸೂರಿಗೆ ಹೋಗುವ ಕಾರಣವೇನು..? ಇದಕ್ಕೆ ಶಂಕರಮ್ಮನವರು ಒಪ್ಪಿದರೇ..?


ಕೌಶಿಕಿಯ ವಿವಾಹದ ಸಂದರ್ಭದಲ್ಲಿ ನೀಡಲು ಅವರು ಶಾಂತಮ್ಮನವರ ಬಳಿ ಕೊಟ್ಟ ಒಡವೆ ಅವರದಲ್ಲವೆಂಬ ಸುಳಿವು ಸಿಕ್ಕದ್ದು ಹೇಗೆ..?


ರಾಜರಾಯರ ಒಟ್ಟು ಮನೆ ಬೇರೆಯಾದದ್ದು ಹೇಗೆ..? ಕಾಲ ಎಲ್ಲವನ್ನು ಬದಲಿಸುತ್ತದೆ. ದಿನಕರನ ವಿವಾಹ ಶಂಕರಮ್ಮನವರು ಅಂದುಕೊಂಡಂತೆ ನಡೆಯದ್ದಕ್ಕೆ ಕಾರಣವೇನು..? ಕೌಶಿಕಿಗೂ ಇದಕ್ಕೂ ಸಂಬಂಧವಿತ್ತೆ..?


ತನ್ನದಲ್ಲದ ಕ್ಷೇತ್ರದಲ್ಲಿಯೂ ಕೌಶಿಕಿ ದುಡಿದು ದಯಾನಂದ ಅವರ ಮೇಘಾ ಗಾರ್ಮೆಂಟ್ ಫ್ಯಾಕ್ಟರಿಯನ್ನು ಬದಲಾಯಿಸಿದ್ದು ಹೇಗೆ..? ಇದಕ್ಕೆ ಮಂದಾಕಿನಿ ಅವರ ಒಪ್ಪಿಗೆ ಸಿಕ್ಕಿತೇ..?


ದಯಾನಂದರಿಗೆ ಹರೀಶ ಮೊದಲೇ ಪರಿಚಿತ. ಫ್ಯಾಕ್ಟರಿಯ ಹಗರಣವನ್ನು ಬಯಲು ಮಾಡಲು ಹರೀಶ ಯಾವ ನಾಟಕ ಮಾಡಿದ..? 


ಈಗಿನ ಕಾಲಕ್ಕೆ ತಕ್ಕಂತೆ ಬೊಟಿಕ್ ಹಾಗೂ ಶೋರೂಮ್ ನಿರ್ಮಿಸಿದ ದಯಾನಂದರ ಹೊಸ ಬ್ಯುಸಿನೆಸ್ ಹೇಗೆ ನಡೆಯಿತು..? ನಿಷ್ಠಾವಂತ ಕೆಲಸಗಾತಿ ಫಿಲೋಮಿನಾ ಕೂಡ ತ ಸೆಳೆಯುತ್ತಾರೆ. 


ಹರೀಶ ಹಾಗೂ ಕೌಶಿಕಿ ಇಬ್ಬರ ವಿವಾಹ ನಿಶ್ಚಯವಾಗುತ್ತದೆ. ಆದರೆ, ಇದು ಹೂವಿನ ಹಾಸಿಗೆಯಂತೇನಿರಲಿಲ್ಲ. ಅವರ ಕುಟುಂಬದ ಇತಿಹಾಸ ಗೊತ್ತಿದ್ದ ಪಾತಜ್ಜಿ ಇದಕ್ಕೆ ಒಪ್ಪಿದ್ದು ಹೇಗೆ..? ಶಂಕರಮ್ಮನವರಿಗೆ ಇದು ಇಷ್ಟವಾಗದೆ ಹೋದದ್ದೇಕೆ..? ಹರೀಶನೇನೋ ಆದರ್ಶ ಯುವಕ. ಆದರೆ, ಆತನ ತಂದೆ-ತಾಯಿಯೂ ಹಾಗೆಯೇ ಇದ್ದರೆ..?


ಕೌಶಿಕಿಯ ಓದುವ ಕನಸಿನ ಬದಲಾಗಿ ಅವಳು ಬೆನ್ನುತ್ತಿದ ಮತ್ತೊಂದು ಕನಸು ಯಾವುದು..? ವಿವಾಹದ ನಂತರ ಕೌಶಿಕಿ ಕುಟುಂಬವನ್ನು ಬೆಸೆಯುವ ಪರಿ ಹೇಗಿದೆ..?


ಹರಿಣಿಯ ಮಗಳಿಗೆ ಇಡುವ ಐದು ಹೆಸರುಗಳಲ್ಲಿ ಒಂದನ್ನು ಕೌಶಿಕಿ ಆರಿಸಿ ತುಳಸಿಯವರ ಹೆಸರು ಇಟ್ಟದ್ದೇಕೆ..?


ಮೊದಲಿಗೆ ಸಾಮಾಜಿಕ ಹಾಗೂ ಕೌಟುಂಬಿಕ ಕಾದಂಬರಿಯಂತೆ ಕಂಡರೂ.. ಕುತೂಹಲಕರವಾಗಿ ರೋಚಕವಾಗಿ ಸಾಗುವ ಕಥೆ ಕೊನೆಯವರೆಗೂ ಊಹಿಸಲಾಗದ ತಿರುವನ್ನು ಹೊತ್ತು ಸಾಗಿದೆ. ಈ ನಿಗೂಢತೆ ಮುಂದೇನು ಎಂದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಮನುಷ್ಯ ನೆಮ್ಮದಿಯ ಜೀವನ ನಡೆಸಲು ಅಗತ್ಯವಾದುದೇನು ಎಂಬುದನ್ನು.. ಜೊತೆಗೆ ಸ್ವಾಭಿಮಾನ, ನೇರವಂತಿಕೆ, ಬದುಕಿನಲ್ಲಿ ವ್ಯಕ್ತಿತ್ವಕ್ಕೆ ಕೊಡುವ ಮೆರುಗೇನು ಎನ್ನುವುದನ್ನು ಹಾಗೂ ಕೌಟುಂಬಿಕ ಮೌಲ್ಯಗಳನ್ನು ಕಟ್ಟಿಕೊಡುವ ಕಾದಂಬರಿ ಇದು. 


~ ವಿಭಾ ವಿಶ್ವನಾಥ್

ಮನಸಾಲಜಿ ಆಫ್ ಮಾನಿನಿ (ಪುಸ್ತಕ ಯಾನ - 478)


ಪುಸ್ತಕದ ಶೀರ್ಷಿಕೆ : ಮನಸಾಲಜಿ ಆಫ್ ಮಾನಿನಿ

ಲೇಖಕರು : ಭಾರ್ಗವಿ ಶೆಟ್ಟಿ

ಪ್ರಕಾಶಕರು : ಕದಂಬ ಪ್ರಕಾಶನ 

ಪ್ರಥಮ ಮುದ್ರಣ : 2026

ಪುಟಗಳು : 100

ಬೆಲೆ : 160 ರೂ.


ಹೆಣ್ಣೆಂದರೆ ಅವಳನ್ನು ಕಡಿಮೆ ಅಂದಾಜಿಸುವಂತೆಯೇ ಇಲ್ಲ. ಆ ಕಾಲಕ್ಕೂ.. ಈ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ಆದರೆ ನಮ್ಮ ನಡುವೆಯೇ ಇರುವ ಸ್ತ್ರೀಯರನ್ನು, ಅವರ ಆತ್ಮವಿಶ್ವಾಸ, ದೈರ್ಯ, ಸ್ವಾಭಿಮಾನವನ್ನು ಗುರುತಿಸಿ ಅವರನ್ನು ಪರಿಚಯಿಸಿದ್ದಾರೆ ಲೇಖಕಿ. ಅವರ ಭಾವಚಿತ್ರಗಳು, ಸಾಧನೆಗಳ ಜೊತೆಗೆ ಮನದಾಳದ ಮಾತುಗಳು ಇಲ್ಲಿವೆ. 


ಶಿಕ್ಷಣ ಕ್ರಾಂತಿಯ ಹರಿಕಾರಿಣಿ ಜ್ಞಾನವಾಹಿನಿ ದಾಕ್ಷಾಯಿಣಿ ಎನ್ನುತ್ತಾ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಶಿಕ್ಷಕಿ ದಾಕ್ಷಾಯಿಣಿ ಅವರನ್ನು ಪರಿಚಯಿಸುತ್ತಾರೆ. ಅವರ ಘೋಷವಾಕ್ಯ "ಕಷ್ಟಪಟ್ಟು ಮಾಡಬೇಡಿ, ಇಷ್ಟಪಟ್ಟು ಮಾಡಿ" ಎಂದು. ಜನ ಮೆಚ್ಚಿದ ಶಿಕ್ಷಕಿ ಶಿಕ್ಷಕ ವೃತ್ತಿಗೆ ತನ್ನನ್ನು ತಾನು ಅರ್ಪಿಸಿಕೊಂಡ ಬಗೆಯನ್ನು ಕಾಣಬಹುದು.


ಕಣ್ಣಿನ ನ್ಯೂನತೆ ಇದ್ದರೂ ಅದು ಸಾಧನೆಗೆ ಅಡ್ಡಿಯಾಗಲಿಲ್ಲ ತಿಪಟೂರಿನ ಡಾ|| ಜಿ. ಎನ್. ಸಂಗೀತಾ ಅವರಿಗೆ. 28ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಇವರು ಐದು ಪುಸ್ತಕಗಳನ್ನು ರಚಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧನ ಸಿದ್ದಿಧಾತ್ರಿ ಸಂಗೀತ ಅವರ ಜೀವನಗಾಥೆ ಇಲ್ಲಿದೆ.


ಕಾಯಕಕ್ಕೆ ಕಲ್ಪತರು ಅರ್ಧನಾರೀಶ್ವರಿ ಜೋಗತಿ ಮಂಜಮ್ಮ ಎನ್ನುತ್ತಾ ದೈಹಿಕವಾಗಿ ಮಂಜುನಾಥನಿಂದ ಬದಲಾದ ಇವರ ಜಾನಪದ ಲೋಕದ ಸಾಧನೆ ಹಾಗೂ ಹವ್ಯಾಸಿ ರಂಗಭೂಮಿ, ಸಿನಿಮಾ, ಕಿರುಚಿತ್ರದಲ್ಲಿಯೂ ತೊಡಗಿಸಿಕೊಂಡು ಜೋಗತಿಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಇವರನ್ನು ಕಾಣಬಹುದು.


ಕಲಿ ಸರ್ವಸ್ವವೆಂದ ನಾಟ್ಯ ಮಯೂರಿ ವರ್ಷಿಣಿಗೆ ಅದು ಕೇವಲ ಹವ್ಯಾಸವಲ್ಲ.. ಬದುಕಿನ ಅಸ್ತಿತ್ವ. ಎಂಟು ವರ್ಷಗಳಿಂದ ಅಮೃತವರ್ಷಿಣಿ ನಾಟ್ಯದೇಗುಲವನ್ನು ಸ್ಥಾಪಿಸಿ ಈ ಕಲಾ ಕೇಂದ್ರದಲ್ಲಿ ಬಾಲಕಲಾವಿದರ ಕನಸುಗಳನ್ನು ರೂಪಿಸುತ್ತಿರುವ ಬಗೆಯನ್ನು ಕಾಣಬಹುದು.


ಬೆಳಗಾವಿಯ ಸವದತ್ತಿಯಲ್ಲಿ ಮೂರನೇ ಮಗಳಾಗಿ ಜನಿಸುವ ರೇಣುಕಾ ಪೋಲಿಯೋ ಲಸಿಕೆಯ ಬಗ್ಗೆ ಇದ್ದ ಮೂಢನಂಬಿಕೆಯಿಂದಾಗಿ ಶಾಶ್ವತವಾಗಿ ಅಂಗವಿಕಲಳಾದರೂ.. ತಂದೆಯನ್ನು ಕಳೆದುಕೊಂಡರೂ.. ಕಷ್ಟ-ಕೋಟಲೆಗಳೆಲ್ಲವನ್ನು ಮೀರಿ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದ ಸಾಧನೆ ಸುಲಭದಲ್ಲ. "ಹಠ ಸನ್ಮಾನಕ್ಕಾಗಿ ಅಲ್ಲ, ಸ್ವಾಭಿಮಾನಕ್ಕಾಗಿ" ಎನ್ನುತ್ತಾ ಇವರನ್ನು ನಮಗೆ ಪರಿಚಯಿಸುತ್ತಾರೆ.


"ತಾಯಿಗಿಂತ ಮಿಗಿಲಾದ ಯೋಧನಿಲ್ಲ ಜಗದಲ್ಲಿ" ಎನ್ನುತ್ತಾ ವಿಶೇಷ ಚೇತನಳಾದ ತಾಯಿ ಅಮೃತ ಕ್ರೀಡಾಲೋಕದಲ್ಲಿ ಮುನ್ನಡೆದು, ಬಾಲ್ಯ ವಿವಾಹದ ಕಷ್ಟ ಅನುಭವಿಸಿರೂ.. ಅದೆಲ್ಲವನ್ನು ಮೆಟ್ಟಿನಿಂತು ತನ್ನ ಮಗನನ್ನು ಡಾಕ್ಟರ್ ಆಗಿಸಲು ಬೆನ್ನೆಲುಬಾಗಿ ನಿಂತಿರುವ ಸ್ಪೂರ್ತಿದಾಯಕ ಗಾಥೆ ಇದು.


ಭಾರತದ ಮೊದಲ ಜಿಮ್ ತರಬೇತುದಾರರಾದ ಮಂಗಳಮುಖಿ, ಭಾರತದ ಮೊದಲ ಸಿನಿಮಾ ಲೈವ್ ಪ್ರೊಡ್ಯೂಸರ್ ಆಗಿರುವ ಮಂಗಳಮುಖಿ ಆನಿ ಪಟ್ಟ ಪಾಡುಗಳು ಒಂದೆರಡಲ್ಲ. ದೈಹಿಕ ಭಿನ್ನತೆಯಿಂದ ತಾವು ಪಟ್ಟ ಪಾಡನ್ನು ತನ್ನಂತಹವರು ಪಡಬಾರದು ಎಂಬುದಕ್ಕೆ ಅವರು ಶ್ರಮಿಸುತ್ತಿದ್ದಾರೆ. "ಸಾಧನೆ ಮಾಡಿದರೆ ಮಾತ್ರ ಅವಮಾನಗಳನ್ನು ಮೆಟ್ಟಿ ನಿಲ್ಲಬಹುದು" ಎನ್ನುವ ಅಮ್ಮನ ಮಾತು ಹೇಗೆ ಪ್ರೇರಣೆಯಾಗಿ ತೆಗೆದುಕೊಂಡರೋ ಅದಕ್ಕಿಂತ ಇವರ ಬದುಕು ಹೆಚ್ಚಿನ ಪ್ರೇರಣೆ ನೀಡುತ್ತದೆ.


ನಿಸ್ವಾರ್ಥವಾಗಿ, ಸಮಾಜದ ಏಳಿಗೆಗಾಗಿ ತನ್ನನ್ನೇ ತಾನು ಮುಡಿಪಾಗಿಸಿಕೊಂಡ ಶಕ್ತಿದೀಪವಾಗಿ ಕಾಣುವ ನಳಿನಮ್ಮ ಹಾಗೂ ಅವರ ಪತಿಯನ್ನು ನಾವಿಲ್ಲಿ ಕಾಣಬಹುದು. ಟೈಲರಿಂಗ್ ಹಾಗೂ ಯೋಗ ತರಬೇತಿಯ ಮೂಲಕ ಸಂಸ್ಕೃತಿಯ ರಾಯಭಾರಿಯಾಗಿ ಯೋಗದೀಕ್ಷಿಣಿಯಾಗಿರುವ ನಳಿನಾಕ್ಷಿಯವರ ಬದುಕು ಇಲ್ಲಿದೆ.


ಬದುಕಿನಲ್ಲಿ ಸಾಕಷ್ಟು ಇದ್ದವರೇ ದಾನ-ಧರ್ಮ ಮಾಡುವುದು ಕಷ್ಟ. ಆದರೆ, ತಮ್ಮ ಮಿತಿಯನ್ನು ಮೀರಿ ನಿಸ್ವಾರ್ಥವಾಗಿ ಬದುಕುತ್ತಿರುವ ನಂದಿನಿಯವರನ್ನು ನಾವಿಲ್ಲಿ ಕಾಣಬಹುದು. ತಮ್ಮ ಮನೆಯಲ್ಲಿ ಬೆಳಕು ವಾತ್ಸಲ್ಯಧಾಮಕ್ಕೆ ಬರೆದುಕೊಟ್ಟು ಅಸಹಾಯಕ ಜೀವಗಳಿಗೆ ಆಸರೆಯಾಗಿ ನಿಂತಿರುವ ಇವರ ನಿಸ್ವಾರ್ಥ ಬದುಕಿನ ಕಥೆ ಇಲ್ಲಿದೆ.


ತನ್ನೆಲ್ಲಾ ಕನಸುಗಳಿಗೆ ಒತ್ತಾಸೆಯಾಗಿ ನಿಂತ ಗಂಡನಿಗೆ ಬೆನ್ನೆಲುಬಾಗಿ ನಿಲ್ಲಲು ಅವರ ಊರಿನಲ್ಲೇ ನೆಲೆಸಿ ರೈತ ಮಹಿಳೆಯಾಗುವ ಕುಸುಮಾರನ್ನು ನಾವಿಲ್ಲಿ ಕಾಣಬಹುದು. ವಿವಾಹ ಹಾಗೂ ಮಗುವಾದ ನಂತರ ಬಿಎ ವ್ಯಾಸಂಗ ಮುಗಿಸಿ, ಎಂ . ಎಸ್ . ಡಬ್ಲ್ಯೂ ಪ್ರವೇಶ ಪಡೆದು ಕಾಲೇಜ್ ಟಾಪರ್ ಆಗಿ ವಿದ್ಯಾರ್ಥಿವೇತನದಿಂದಲೇ ಓದಿನಲ್ಲಿ ಮುಂದೆ ಬಂದು ವೆಲ್ ಫೇರ್ ಆಫೀಸರ್ ಆಗಿ ನೌಕರಿ ಗಿಟ್ಟಿಸಿಕೊಂಡ ನಂತರವೂ ತಮ್ಮನ್ನು ತಾವು ಕೃಷಿಗೆ ಮುಡಿಪಾಗಿಸಿಕೊಂಡ ಕುಸುಮಾರ ಜೀವನಗಾಥೆ ಇಲ್ಲಿದೆ.


ತಂದೆ-ತಾಯಿ ಇದ್ದರೂ ಹೆಣ್ಣು ಮಗುವೆಂಬ ಕಾರಣಕ್ಕೆ ಒಂಟಿಯಾಗಿ ಅಜ್ಜಿಯ ಮಡಿಲಿಗೆ ಬಿದ್ದ ಹಿರಣ್ಮಯಿಯನ್ನು ಇಂದಿಗೂ ತಂದೆ-ತಾಯಿ ನೋಡುತ್ತಿಲ್ಲ. ವಯಸ್ಸಿಗೂ ಮೀರಿದ ಪ್ರೌಢತೆಯಿಂದ ಅಜ್ಜಿಯ ಜವಾಬ್ದಾರಿ ಹೊತ್ತ ಹಿರಣ್ಮಯಿಯ ದಿಟ್ಟ ನಡೆ ಯಾವ ಸಾಧಕಿಗೂ ಕಡಿಮೆ ಏನಲ್ಲ. ಹಾಗಾದರೆ, ಹಿರಣ್ಮಯಿಯ ಮನಸ್ಸಿನ ಮಾತುಗಳೇನು ನೀವೇ ಓದಿ ನೋಡಿ.


ವರುಣ್ ಎಂಬ ವಿಕಲಚೇತನ ಮಗುವನ್ನು ದೇವರ ಮಗುವೆಂದುಕೊಂಡು ಪೋಷಿಸುತ್ತಿರುವ ತಾಯಿ ಗೌರಿಯವರ ಧೈರ್ಯ ಚಿಕ್ಕಪುಟ್ಟ ಕಷ್ಟಗಳಿಗೆ ಅಳುಕುವವರಿಗೆ ನಿಜಕ್ಕೂ ಮಾದರಿಯಂತಿದೆ.


ಹುಟ್ಟಿದಾಗಿನಿಂದಲೇ ಬಳ್ಳಿಗಳಂತೆ ನಲುಚಿಕೊಂಡಿದ್ದ ಕೈಗಳು ಜೊತೆಗೆ ಹೃದಯ ಸಂಬಂಧಿ ಕಾಯಿಲೆ. ಹೀಗಿದ್ದ ಮಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾದ ತಾಯಿಯ ಧೈರ್ಯ ಇಂದು ಕೈಗಳೇ ಇಲ್ಲದಿದ್ದರೂ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿರುವ ಅರ್ಪಿತ ಎಂಬ ದಿಟ್ಟ ಯುವತಿಯನ್ನು ಪರಿಚಯಿಸುತ್ತವೆ.


"ನಾನು ಹಾದಿ ಹುಡುಕಿಲ್ಲ-ನಾನು ಹಾದಿ ನಿರ್ಮಿಸಿದ್ದೇನೆ. ನಾನು ನಿಲ್ಲಲಿಲ್ಲ-ನಾನು ಮುಂದಾಳತ್ವ ವಹಿಸಿದೆ" ಎನ್ನುವ ಆತ್ಮವಿಶ್ವಾಸದ ಮಾತುಗಳನ್ನಾಡುವ ಶಿಕ್ಷಣ ಕ್ರಾಂತಿಯ ಹರಿಕಾರಿಣಿ ಕಾಂಚನರವರು "ಶಿಕ್ಷಣ ನನ್ನ ಆಯ್ಕೆಯಲ್ಲ. ನನ್ನ ದೃಷ್ಟಿ, ಸಾಧನೆ, ನನ್ನ ಗುರಿಯಲ್ಲ, ನನ್ನ ಸ್ವಭಾವ" ಎಂದು ಸಾಧನೆಯ ಹಾದಿಯನ್ನು ಸ್ಪಷ್ಟವಾಗಿ ಹೇಳುವ ಬಗೆ ಇಲ್ಲಿದೆ.


"ನೋವು ನನ್ನನ್ನು ಮುರಿಯಲಿಲ್ಲ

ಹೋರಾಟ ನನ್ನನ್ನು ದೃಢವಾಗಿಸಿತು

ಧೈರ್ಯ ನನ್ನನ್ನು ನಾಯಕಿಯಾಗಿಸಿತು"

ಎನ್ನುವ ಅನಿತಾ ರ ಬದುಕಿನಲ್ಲಿ ಬಂದ ಕಷ್ಟಗಳು ಒಂದೆರಡಲ್ಲ. ಅವೆಲ್ಲವನ್ನು ಮೆಟ್ಟಿ, ನಾಯಕಿಯಾಗಿ ನಿಂತಿರುವ ಅವರ ಕೆಲಸ ಊರಿಗಷ್ಟೇ ಸೀಮಿತವಾಗಿಲ್ಲ. ದೇಶಗಳನ್ನು ದಾಟಿರುವ ಪರಿ ಇಲ್ಲಿದೆ.


"ಧೈರ್ಯೇ ಸಾಹಸೇ ರಾಜಲಕ್ಷ್ಮಿ" ಎನ್ನುತ್ತಾ ಪೋಲಿಯೋ ಪೀಡಿತ ರಾಜಲಕ್ಷ್ಮಿ ಅವರ ಬದುಕಿನಲ್ಲಿ ಬಂದ ಸವಾಲುಗಳು.. ಪ್ರಸ್ತುತ, 9 ಶಸ್ತ್ರಚಿಕಿತ್ಸೆಗಳಾದ ತೂ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಅವರ ಪರಿಚಯ ಇಲ್ಲಿದೆ.


ಎಂ.ಎ ಪದವೀಧರರಾದರೂ ಸರಿಯಾದ ಅವಕಾಶ ಸಿಗದೇ ಬದುಕಿನ ಹೋರಾಟದ ಹಾದಿಯಲ್ಲಿ.. ಮಹಿಳಾ ಸಬಲೀಕರಣದ ಪ್ರಾಜೆಕ್ಟ್, ಫೀಲ್ಡ್ ವರ್ಕ್ ನಂತರ ಆಯ್ದುಕೊಂಡದ್ದು ಆಕಾಶವಾಣಿಯನ್ನು. ಅನುಭವವಿಲ್ಲದ ಕ್ಷೇತ್ರದಲ್ಲಿ 2000 ಅಭ್ಯರ್ಥಿಗಳನ್ನು ಹಿಂದಿಕ್ಕಿ ಮಡಿಕೇರಿಯ ಆಕಾಶವಾಣಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಆಕಾಶವಾಣಿಯ ಸ್ಪೂರ್ತಿದನಿಯಾಗಿರುವ ಚಂದು ಅವರು ಇಲ್ಲಿದ್ದಾರೆ.


ಅಂತರಪಟ ಹಾಗೂ ಆತ್ಮಾನುಸಂಧಾನ ಕಾದಂಬರಿಗಳನ್ನು ಬರೆದಿರುವ ಲೇಖಕಿ ಉಷಾ ರವಿ ಅವರು ಕನ್ನಡಕ್ಕೆ ಜ್ಞಾನಪೀಠ ಹೆಬ್ಬಯಕೆಯನ್ನು ಹೊಂದಿದ್ದಾರೆ. ಅವರ ಬದುಕು ಹಾಗೂ ಮನದಾಳದ ಮಾತುಗಳು ಇಲ್ಲಿವೆ.


ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ ಎಂಬ ವಿಭಿನ್ನ ಮೂಳೆಯ ಅನುವಂಶಿಕ ಅಸ್ವಸ್ಥತೆಯನ್ನು ಹೊಂದಿರುವ ಅರ್ಚನಾ ರವಿಯವರು ಬಾಲ್ಯವನ್ನು ಕಳೆದದ್ದು ಎಲ್ಲರಂತಲ್ಲ. ಬಹಳ ಎಚ್ಚರಿಕೆಯಿಂದ ಬೆಳೆದವರು ಈಗ ಭಾರತೀಯ ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ. "ದುರ್ಬಲತೆ ಮೂಳೆಗಳಿಗಷ್ಟೇ, ಆತ್ಮವಿಶ್ವಾಸ ಬಂಡೆಯಷ್ಟಿದೆ" ಎನ್ನುವ ಇವರ ಬದುಕಿನ ಕಥೆ ಇಲ್ಲಿದೆ.


ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರು ತನ್ನ ಮಗನ ಭವಿಷ್ಯಕ್ಕಾಗಿ ಕ್ಷಮಿಸುತ್ತಿರುವ ತಾಯಿ ರಂಜಿತಾರನ್ನು ಇಲ್ಲಿ ಕಾಣಬಹುದು.


"ಹೊರ ಜಗತ್ತಿನಿಂದ ಜಾರಿಗೊಳ್ಳುವ ಸ್ಪೂರ್ತಿ ಅಲ್ಪಾವಧಿಯದ್ದು. ಅಂತರಂಗದಾಳದಿಂದ ಹೊರಹೊಮ್ಮುವ ಸ್ಫೂರ್ತಿ ನಿಚ್ಚಳವಾದದ್ದು" ಎನ್ನುತ್ತಾ ಪ್ರತಿ ಸ್ತ್ರೀಯಲ್ಲಿರುವ ಶಕ್ತಿ ಸ್ವರೂಪಿಣಿಯನ್ನು ಉದ್ದೀಪಿಸುತ್ತಾರೆ. ಇದರ ಜೊತೆಗೆ ಭಾರ್ಗವಿ ಶೆಟ್ಟಿಯವರು ಬರೆದಿರುವ ಕವಿತೆಗಳನ್ನು ನಾವಿಲ್ಲಿ ಕಾಣಬಹುದು. ಚಿಕ್ಕ-ಪುಟ್ಟ ಕಷ್ಟಗಳಿಗೂ ಅಂಜುವವರು ನಮ್ಮ ಜೊತೆಗಿರುವ ಇಂತಹ ಶಕ್ತಿಸ್ವರೂಪಿಣಿಯರನ್ನು ಕಂಡು ಸ್ಪೂರ್ತಿ ಪಡೆಯಬಹುದು. ಸ್ಪೂರ್ತಿದಾಯಕ ಓದು.

~ ವಿಭಾ ವಿಶ್ವನಾಥ್