ಭಾನುವಾರ, ಆಗಸ್ಟ್ 2, 2026

ಮನಸಾಲಜಿ ಆಫ್ ಮಾನಿನಿ (ಪುಸ್ತಕ ಯಾನ - 478)


ಪುಸ್ತಕದ ಶೀರ್ಷಿಕೆ : ಮನಸಾಲಜಿ ಆಫ್ ಮಾನಿನಿ

ಲೇಖಕರು : ಭಾರ್ಗವಿ ಶೆಟ್ಟಿ

ಪ್ರಕಾಶಕರು : ಕದಂಬ ಪ್ರಕಾಶನ 

ಪ್ರಥಮ ಮುದ್ರಣ : 2026

ಪುಟಗಳು : 100

ಬೆಲೆ : 160 ರೂ.


ಹೆಣ್ಣೆಂದರೆ ಅವಳನ್ನು ಕಡಿಮೆ ಅಂದಾಜಿಸುವಂತೆಯೇ ಇಲ್ಲ. ಆ ಕಾಲಕ್ಕೂ.. ಈ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ಆದರೆ ನಮ್ಮ ನಡುವೆಯೇ ಇರುವ ಸ್ತ್ರೀಯರನ್ನು, ಅವರ ಆತ್ಮವಿಶ್ವಾಸ, ದೈರ್ಯ, ಸ್ವಾಭಿಮಾನವನ್ನು ಗುರುತಿಸಿ ಅವರನ್ನು ಪರಿಚಯಿಸಿದ್ದಾರೆ ಲೇಖಕಿ. ಅವರ ಭಾವಚಿತ್ರಗಳು, ಸಾಧನೆಗಳ ಜೊತೆಗೆ ಮನದಾಳದ ಮಾತುಗಳು ಇಲ್ಲಿವೆ. 


ಶಿಕ್ಷಣ ಕ್ರಾಂತಿಯ ಹರಿಕಾರಿಣಿ ಜ್ಞಾನವಾಹಿನಿ ದಾಕ್ಷಾಯಿಣಿ ಎನ್ನುತ್ತಾ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಶಿಕ್ಷಕಿ ದಾಕ್ಷಾಯಿಣಿ ಅವರನ್ನು ಪರಿಚಯಿಸುತ್ತಾರೆ. ಅವರ ಘೋಷವಾಕ್ಯ "ಕಷ್ಟಪಟ್ಟು ಮಾಡಬೇಡಿ, ಇಷ್ಟಪಟ್ಟು ಮಾಡಿ" ಎಂದು. ಜನ ಮೆಚ್ಚಿದ ಶಿಕ್ಷಕಿ ಶಿಕ್ಷಕ ವೃತ್ತಿಗೆ ತನ್ನನ್ನು ತಾನು ಅರ್ಪಿಸಿಕೊಂಡ ಬಗೆಯನ್ನು ಕಾಣಬಹುದು.


ಕಣ್ಣಿನ ನ್ಯೂನತೆ ಇದ್ದರೂ ಅದು ಸಾಧನೆಗೆ ಅಡ್ಡಿಯಾಗಲಿಲ್ಲ ತಿಪಟೂರಿನ ಡಾ|| ಜಿ. ಎನ್. ಸಂಗೀತಾ ಅವರಿಗೆ. 28ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಇವರು ಐದು ಪುಸ್ತಕಗಳನ್ನು ರಚಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧನ ಸಿದ್ದಿಧಾತ್ರಿ ಸಂಗೀತ ಅವರ ಜೀವನಗಾಥೆ ಇಲ್ಲಿದೆ.


ಕಾಯಕಕ್ಕೆ ಕಲ್ಪತರು ಅರ್ಧನಾರೀಶ್ವರಿ ಜೋಗತಿ ಮಂಜಮ್ಮ ಎನ್ನುತ್ತಾ ದೈಹಿಕವಾಗಿ ಮಂಜುನಾಥನಿಂದ ಬದಲಾದ ಇವರ ಜಾನಪದ ಲೋಕದ ಸಾಧನೆ ಹಾಗೂ ಹವ್ಯಾಸಿ ರಂಗಭೂಮಿ, ಸಿನಿಮಾ, ಕಿರುಚಿತ್ರದಲ್ಲಿಯೂ ತೊಡಗಿಸಿಕೊಂಡು ಜೋಗತಿಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಇವರನ್ನು ಕಾಣಬಹುದು.


ಕಲಿ ಸರ್ವಸ್ವವೆಂದ ನಾಟ್ಯ ಮಯೂರಿ ವರ್ಷಿಣಿಗೆ ಅದು ಕೇವಲ ಹವ್ಯಾಸವಲ್ಲ.. ಬದುಕಿನ ಅಸ್ತಿತ್ವ. ಎಂಟು ವರ್ಷಗಳಿಂದ ಅಮೃತವರ್ಷಿಣಿ ನಾಟ್ಯದೇಗುಲವನ್ನು ಸ್ಥಾಪಿಸಿ ಈ ಕಲಾ ಕೇಂದ್ರದಲ್ಲಿ ಬಾಲಕಲಾವಿದರ ಕನಸುಗಳನ್ನು ರೂಪಿಸುತ್ತಿರುವ ಬಗೆಯನ್ನು ಕಾಣಬಹುದು.


ಬೆಳಗಾವಿಯ ಸವದತ್ತಿಯಲ್ಲಿ ಮೂರನೇ ಮಗಳಾಗಿ ಜನಿಸುವ ರೇಣುಕಾ ಪೋಲಿಯೋ ಲಸಿಕೆಯ ಬಗ್ಗೆ ಇದ್ದ ಮೂಢನಂಬಿಕೆಯಿಂದಾಗಿ ಶಾಶ್ವತವಾಗಿ ಅಂಗವಿಕಲಳಾದರೂ.. ತಂದೆಯನ್ನು ಕಳೆದುಕೊಂಡರೂ.. ಕಷ್ಟ-ಕೋಟಲೆಗಳೆಲ್ಲವನ್ನು ಮೀರಿ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದ ಸಾಧನೆ ಸುಲಭದಲ್ಲ. "ಹಠ ಸನ್ಮಾನಕ್ಕಾಗಿ ಅಲ್ಲ, ಸ್ವಾಭಿಮಾನಕ್ಕಾಗಿ" ಎನ್ನುತ್ತಾ ಇವರನ್ನು ನಮಗೆ ಪರಿಚಯಿಸುತ್ತಾರೆ.


"ತಾಯಿಗಿಂತ ಮಿಗಿಲಾದ ಯೋಧನಿಲ್ಲ ಜಗದಲ್ಲಿ" ಎನ್ನುತ್ತಾ ವಿಶೇಷ ಚೇತನಳಾದ ತಾಯಿ ಅಮೃತ ಕ್ರೀಡಾಲೋಕದಲ್ಲಿ ಮುನ್ನಡೆದು, ಬಾಲ್ಯ ವಿವಾಹದ ಕಷ್ಟ ಅನುಭವಿಸಿರೂ.. ಅದೆಲ್ಲವನ್ನು ಮೆಟ್ಟಿನಿಂತು ತನ್ನ ಮಗನನ್ನು ಡಾಕ್ಟರ್ ಆಗಿಸಲು ಬೆನ್ನೆಲುಬಾಗಿ ನಿಂತಿರುವ ಸ್ಪೂರ್ತಿದಾಯಕ ಗಾಥೆ ಇದು.


ಭಾರತದ ಮೊದಲ ಜಿಮ್ ತರಬೇತುದಾರರಾದ ಮಂಗಳಮುಖಿ, ಭಾರತದ ಮೊದಲ ಸಿನಿಮಾ ಲೈವ್ ಪ್ರೊಡ್ಯೂಸರ್ ಆಗಿರುವ ಮಂಗಳಮುಖಿ ಆನಿ ಪಟ್ಟ ಪಾಡುಗಳು ಒಂದೆರಡಲ್ಲ. ದೈಹಿಕ ಭಿನ್ನತೆಯಿಂದ ತಾವು ಪಟ್ಟ ಪಾಡನ್ನು ತನ್ನಂತಹವರು ಪಡಬಾರದು ಎಂಬುದಕ್ಕೆ ಅವರು ಶ್ರಮಿಸುತ್ತಿದ್ದಾರೆ. "ಸಾಧನೆ ಮಾಡಿದರೆ ಮಾತ್ರ ಅವಮಾನಗಳನ್ನು ಮೆಟ್ಟಿ ನಿಲ್ಲಬಹುದು" ಎನ್ನುವ ಅಮ್ಮನ ಮಾತು ಹೇಗೆ ಪ್ರೇರಣೆಯಾಗಿ ತೆಗೆದುಕೊಂಡರೋ ಅದಕ್ಕಿಂತ ಇವರ ಬದುಕು ಹೆಚ್ಚಿನ ಪ್ರೇರಣೆ ನೀಡುತ್ತದೆ.


ನಿಸ್ವಾರ್ಥವಾಗಿ, ಸಮಾಜದ ಏಳಿಗೆಗಾಗಿ ತನ್ನನ್ನೇ ತಾನು ಮುಡಿಪಾಗಿಸಿಕೊಂಡ ಶಕ್ತಿದೀಪವಾಗಿ ಕಾಣುವ ನಳಿನಮ್ಮ ಹಾಗೂ ಅವರ ಪತಿಯನ್ನು ನಾವಿಲ್ಲಿ ಕಾಣಬಹುದು. ಟೈಲರಿಂಗ್ ಹಾಗೂ ಯೋಗ ತರಬೇತಿಯ ಮೂಲಕ ಸಂಸ್ಕೃತಿಯ ರಾಯಭಾರಿಯಾಗಿ ಯೋಗದೀಕ್ಷಿಣಿಯಾಗಿರುವ ನಳಿನಾಕ್ಷಿಯವರ ಬದುಕು ಇಲ್ಲಿದೆ.


ಬದುಕಿನಲ್ಲಿ ಸಾಕಷ್ಟು ಇದ್ದವರೇ ದಾನ-ಧರ್ಮ ಮಾಡುವುದು ಕಷ್ಟ. ಆದರೆ, ತಮ್ಮ ಮಿತಿಯನ್ನು ಮೀರಿ ನಿಸ್ವಾರ್ಥವಾಗಿ ಬದುಕುತ್ತಿರುವ ನಂದಿನಿಯವರನ್ನು ನಾವಿಲ್ಲಿ ಕಾಣಬಹುದು. ತಮ್ಮ ಮನೆಯಲ್ಲಿ ಬೆಳಕು ವಾತ್ಸಲ್ಯಧಾಮಕ್ಕೆ ಬರೆದುಕೊಟ್ಟು ಅಸಹಾಯಕ ಜೀವಗಳಿಗೆ ಆಸರೆಯಾಗಿ ನಿಂತಿರುವ ಇವರ ನಿಸ್ವಾರ್ಥ ಬದುಕಿನ ಕಥೆ ಇಲ್ಲಿದೆ.


ತನ್ನೆಲ್ಲಾ ಕನಸುಗಳಿಗೆ ಒತ್ತಾಸೆಯಾಗಿ ನಿಂತ ಗಂಡನಿಗೆ ಬೆನ್ನೆಲುಬಾಗಿ ನಿಲ್ಲಲು ಅವರ ಊರಿನಲ್ಲೇ ನೆಲೆಸಿ ರೈತ ಮಹಿಳೆಯಾಗುವ ಕುಸುಮಾರನ್ನು ನಾವಿಲ್ಲಿ ಕಾಣಬಹುದು. ವಿವಾಹ ಹಾಗೂ ಮಗುವಾದ ನಂತರ ಬಿಎ ವ್ಯಾಸಂಗ ಮುಗಿಸಿ, ಎಂ . ಎಸ್ . ಡಬ್ಲ್ಯೂ ಪ್ರವೇಶ ಪಡೆದು ಕಾಲೇಜ್ ಟಾಪರ್ ಆಗಿ ವಿದ್ಯಾರ್ಥಿವೇತನದಿಂದಲೇ ಓದಿನಲ್ಲಿ ಮುಂದೆ ಬಂದು ವೆಲ್ ಫೇರ್ ಆಫೀಸರ್ ಆಗಿ ನೌಕರಿ ಗಿಟ್ಟಿಸಿಕೊಂಡ ನಂತರವೂ ತಮ್ಮನ್ನು ತಾವು ಕೃಷಿಗೆ ಮುಡಿಪಾಗಿಸಿಕೊಂಡ ಕುಸುಮಾರ ಜೀವನಗಾಥೆ ಇಲ್ಲಿದೆ.


ತಂದೆ-ತಾಯಿ ಇದ್ದರೂ ಹೆಣ್ಣು ಮಗುವೆಂಬ ಕಾರಣಕ್ಕೆ ಒಂಟಿಯಾಗಿ ಅಜ್ಜಿಯ ಮಡಿಲಿಗೆ ಬಿದ್ದ ಹಿರಣ್ಮಯಿಯನ್ನು ಇಂದಿಗೂ ತಂದೆ-ತಾಯಿ ನೋಡುತ್ತಿಲ್ಲ. ವಯಸ್ಸಿಗೂ ಮೀರಿದ ಪ್ರೌಢತೆಯಿಂದ ಅಜ್ಜಿಯ ಜವಾಬ್ದಾರಿ ಹೊತ್ತ ಹಿರಣ್ಮಯಿಯ ದಿಟ್ಟ ನಡೆ ಯಾವ ಸಾಧಕಿಗೂ ಕಡಿಮೆ ಏನಲ್ಲ. ಹಾಗಾದರೆ, ಹಿರಣ್ಮಯಿಯ ಮನಸ್ಸಿನ ಮಾತುಗಳೇನು ನೀವೇ ಓದಿ ನೋಡಿ.


ವರುಣ್ ಎಂಬ ವಿಕಲಚೇತನ ಮಗುವನ್ನು ದೇವರ ಮಗುವೆಂದುಕೊಂಡು ಪೋಷಿಸುತ್ತಿರುವ ತಾಯಿ ಗೌರಿಯವರ ಧೈರ್ಯ ಚಿಕ್ಕಪುಟ್ಟ ಕಷ್ಟಗಳಿಗೆ ಅಳುಕುವವರಿಗೆ ನಿಜಕ್ಕೂ ಮಾದರಿಯಂತಿದೆ.


ಹುಟ್ಟಿದಾಗಿನಿಂದಲೇ ಬಳ್ಳಿಗಳಂತೆ ನಲುಚಿಕೊಂಡಿದ್ದ ಕೈಗಳು ಜೊತೆಗೆ ಹೃದಯ ಸಂಬಂಧಿ ಕಾಯಿಲೆ. ಹೀಗಿದ್ದ ಮಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾದ ತಾಯಿಯ ಧೈರ್ಯ ಇಂದು ಕೈಗಳೇ ಇಲ್ಲದಿದ್ದರೂ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿರುವ ಅರ್ಪಿತ ಎಂಬ ದಿಟ್ಟ ಯುವತಿಯನ್ನು ಪರಿಚಯಿಸುತ್ತವೆ.


"ನಾನು ಹಾದಿ ಹುಡುಕಿಲ್ಲ-ನಾನು ಹಾದಿ ನಿರ್ಮಿಸಿದ್ದೇನೆ. ನಾನು ನಿಲ್ಲಲಿಲ್ಲ-ನಾನು ಮುಂದಾಳತ್ವ ವಹಿಸಿದೆ" ಎನ್ನುವ ಆತ್ಮವಿಶ್ವಾಸದ ಮಾತುಗಳನ್ನಾಡುವ ಶಿಕ್ಷಣ ಕ್ರಾಂತಿಯ ಹರಿಕಾರಿಣಿ ಕಾಂಚನರವರು "ಶಿಕ್ಷಣ ನನ್ನ ಆಯ್ಕೆಯಲ್ಲ. ನನ್ನ ದೃಷ್ಟಿ, ಸಾಧನೆ, ನನ್ನ ಗುರಿಯಲ್ಲ, ನನ್ನ ಸ್ವಭಾವ" ಎಂದು ಸಾಧನೆಯ ಹಾದಿಯನ್ನು ಸ್ಪಷ್ಟವಾಗಿ ಹೇಳುವ ಬಗೆ ಇಲ್ಲಿದೆ.


"ನೋವು ನನ್ನನ್ನು ಮುರಿಯಲಿಲ್ಲ

ಹೋರಾಟ ನನ್ನನ್ನು ದೃಢವಾಗಿಸಿತು

ಧೈರ್ಯ ನನ್ನನ್ನು ನಾಯಕಿಯಾಗಿಸಿತು"

ಎನ್ನುವ ಅನಿತಾ ರ ಬದುಕಿನಲ್ಲಿ ಬಂದ ಕಷ್ಟಗಳು ಒಂದೆರಡಲ್ಲ. ಅವೆಲ್ಲವನ್ನು ಮೆಟ್ಟಿ, ನಾಯಕಿಯಾಗಿ ನಿಂತಿರುವ ಅವರ ಕೆಲಸ ಊರಿಗಷ್ಟೇ ಸೀಮಿತವಾಗಿಲ್ಲ. ದೇಶಗಳನ್ನು ದಾಟಿರುವ ಪರಿ ಇಲ್ಲಿದೆ.


"ಧೈರ್ಯೇ ಸಾಹಸೇ ರಾಜಲಕ್ಷ್ಮಿ" ಎನ್ನುತ್ತಾ ಪೋಲಿಯೋ ಪೀಡಿತ ರಾಜಲಕ್ಷ್ಮಿ ಅವರ ಬದುಕಿನಲ್ಲಿ ಬಂದ ಸವಾಲುಗಳು.. ಪ್ರಸ್ತುತ, 9 ಶಸ್ತ್ರಚಿಕಿತ್ಸೆಗಳಾದ ತೂ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಅವರ ಪರಿಚಯ ಇಲ್ಲಿದೆ.


ಎಂ.ಎ ಪದವೀಧರರಾದರೂ ಸರಿಯಾದ ಅವಕಾಶ ಸಿಗದೇ ಬದುಕಿನ ಹೋರಾಟದ ಹಾದಿಯಲ್ಲಿ.. ಮಹಿಳಾ ಸಬಲೀಕರಣದ ಪ್ರಾಜೆಕ್ಟ್, ಫೀಲ್ಡ್ ವರ್ಕ್ ನಂತರ ಆಯ್ದುಕೊಂಡದ್ದು ಆಕಾಶವಾಣಿಯನ್ನು. ಅನುಭವವಿಲ್ಲದ ಕ್ಷೇತ್ರದಲ್ಲಿ 2000 ಅಭ್ಯರ್ಥಿಗಳನ್ನು ಹಿಂದಿಕ್ಕಿ ಮಡಿಕೇರಿಯ ಆಕಾಶವಾಣಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಆಕಾಶವಾಣಿಯ ಸ್ಪೂರ್ತಿದನಿಯಾಗಿರುವ ಚಂದು ಅವರು ಇಲ್ಲಿದ್ದಾರೆ.


ಅಂತರಪಟ ಹಾಗೂ ಆತ್ಮಾನುಸಂಧಾನ ಕಾದಂಬರಿಗಳನ್ನು ಬರೆದಿರುವ ಲೇಖಕಿ ಉಷಾ ರವಿ ಅವರು ಕನ್ನಡಕ್ಕೆ ಜ್ಞಾನಪೀಠ ಹೆಬ್ಬಯಕೆಯನ್ನು ಹೊಂದಿದ್ದಾರೆ. ಅವರ ಬದುಕು ಹಾಗೂ ಮನದಾಳದ ಮಾತುಗಳು ಇಲ್ಲಿವೆ.


ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ ಎಂಬ ವಿಭಿನ್ನ ಮೂಳೆಯ ಅನುವಂಶಿಕ ಅಸ್ವಸ್ಥತೆಯನ್ನು ಹೊಂದಿರುವ ಅರ್ಚನಾ ರವಿಯವರು ಬಾಲ್ಯವನ್ನು ಕಳೆದದ್ದು ಎಲ್ಲರಂತಲ್ಲ. ಬಹಳ ಎಚ್ಚರಿಕೆಯಿಂದ ಬೆಳೆದವರು ಈಗ ಭಾರತೀಯ ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ. "ದುರ್ಬಲತೆ ಮೂಳೆಗಳಿಗಷ್ಟೇ, ಆತ್ಮವಿಶ್ವಾಸ ಬಂಡೆಯಷ್ಟಿದೆ" ಎನ್ನುವ ಇವರ ಬದುಕಿನ ಕಥೆ ಇಲ್ಲಿದೆ.


ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರು ತನ್ನ ಮಗನ ಭವಿಷ್ಯಕ್ಕಾಗಿ ಕ್ಷಮಿಸುತ್ತಿರುವ ತಾಯಿ ರಂಜಿತಾರನ್ನು ಇಲ್ಲಿ ಕಾಣಬಹುದು.


"ಹೊರ ಜಗತ್ತಿನಿಂದ ಜಾರಿಗೊಳ್ಳುವ ಸ್ಪೂರ್ತಿ ಅಲ್ಪಾವಧಿಯದ್ದು. ಅಂತರಂಗದಾಳದಿಂದ ಹೊರಹೊಮ್ಮುವ ಸ್ಫೂರ್ತಿ ನಿಚ್ಚಳವಾದದ್ದು" ಎನ್ನುತ್ತಾ ಪ್ರತಿ ಸ್ತ್ರೀಯಲ್ಲಿರುವ ಶಕ್ತಿ ಸ್ವರೂಪಿಣಿಯನ್ನು ಉದ್ದೀಪಿಸುತ್ತಾರೆ. ಇದರ ಜೊತೆಗೆ ಭಾರ್ಗವಿ ಶೆಟ್ಟಿಯವರು ಬರೆದಿರುವ ಕವಿತೆಗಳನ್ನು ನಾವಿಲ್ಲಿ ಕಾಣಬಹುದು. ಚಿಕ್ಕ-ಪುಟ್ಟ ಕಷ್ಟಗಳಿಗೂ ಅಂಜುವವರು ನಮ್ಮ ಜೊತೆಗಿರುವ ಇಂತಹ ಶಕ್ತಿಸ್ವರೂಪಿಣಿಯರನ್ನು ಕಂಡು ಸ್ಪೂರ್ತಿ ಪಡೆಯಬಹುದು. ಸ್ಪೂರ್ತಿದಾಯಕ ಓದು.

~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ