ಪುಸ್ತಕದ ಶೀರ್ಷಿಕೆ : ಹರಸು ಬಾ ನನ್ನನು
ಲೇಖಕರು : ಸಿ. ಎನ್. ಮುಕ್ತಾ
ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಶನ್ಸ್
ಪ್ರಥಮ ಮುದ್ರಣ : 2023
ಪುಟಗಳು : 328
ಬೆಲೆ : 325 ರೂ.
ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡು ತಂದೆಯ ಜೊತೆ ಬೆಳೆಯದೆ, ತಾಯಿಯ ತಾಯಿ ಅಜ್ಜಿಯ ಆಶ್ರಯದಲ್ಲಿ ಬೆಳೆದು ಸಂಸ್ಕಾರ ಹಾಗೂ ವಿದ್ಯೆ ಕಲಿತ ಯುವತಿಯೊಬ್ಬಳು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವ ಪರಿ ಈ ಕಾದಂಬರಿಯ ಕಥಾವಸ್ತು. ಜೊತೆಗೆ ಕೌಟುಂಬಿಕ ಮೌಲ್ಯವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.
ಕೌಶಿಕಿ ಈ ಕಥೆಯ ನಾಯಕಿ. ರಾಜಾರಾಯರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಪಾತಜ್ಜಿ ಕೌಶಿಕಿಯನ್ನು ಬೆಳೆಸಿ ದೊಡ್ಡವಳನ್ನಾಗಿಸಿದಳು.
ಇಲ್ಲಿ ರಾಜರಾಯರ ಮನೆಯ ಪರಿಸರವನ್ನು ತಿಳಿದುಕೊಳ್ಳುವ ಅಗತ್ಯ ಕಾಣುತ್ತದೆ. ಮುಂದೆ ಕೌಶಿಕಿಗೆ ಈ ಮನೆಯ ನಂಟು ಬೆಳೆಯುವ ಬಗೆಯೂ ಈ ಕಥೆಯಲ್ಲಿದೆ.
ರಾಜಾರಾಯರಿಗೆ ನಾಲ್ಕರ ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು. ಪತ್ನಿ ಶಂಕರಮ್ಮ. ಮೊದಲ ಮಗ ಸುಧಾಕರ್ ಲಾಯರ್ ಆತನ ಪತ್ನಿ ಇರಲಿಲ್ಲ. ಎರಡನೆಯ ಮಗ ಪ್ರಭಾಕರ ಕಾಲೇಜು ಅಧ್ಯಾಪಕ, ಹೆಂಡತಿ ಅನುರಾಧ. ಮೂರನೆಯ ಮಗ ಸೋಮೇಶ್ವರ ಇಂಜಿನಿಯರ್ ಆಗಿದ್ದವನು. ಆತನ ಪತ್ನಿ ಸರಳ. ಕೊನೆಯ ಮಗ ದಿನಕರನಿಗಿನ್ನೂ ವಿವಾಹವಾಗಿರಲಿಲ್ಲ. ಒಬ್ಬಳೇ ಮಗಳು ಚಿನ್ಮಯಿ. ಅವಳ ಗಂಡ ಶರತ್ ಸಹ ಡಾಕ್ಟರ್. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ದಿನಕರನಿಗಿಂತ ಮೊದಲು ಹುಟ್ಟಿದವಳು ಚಿನ್ಮಯಿ.
ಚಿನ್ಮಯಿ ಡಾಕ್ಟರ್ ಆಗಿದ್ದರೂ ತನ್ನ ನರ್ಸಿಂಗ್ ಹೋಮ್ ನಲ್ಲಿ ಹಣದಾಸೆಗೆ ಬಿದ್ದಿದ್ದಳು. ನೆಂಟರಿಗೂ ರಿಯಾಯಿತಿ ತೋರಿಸುತ್ತಿರಲಿಲ್ಲ. ಅತ್ತಿಗೆಯರ ಜೊತೆ ಆತ್ಮೀಯ ಭಾವವಿರಲಿಲ್ಲ. ಎಲ್ಲರಿಗೂ ಎಲ್ಲೆಡೆಯೂ ದರ್ಪ ತೋರುತ್ತಿದಳು. ಕೆಲಸದವರನ್ನು ಆತ್ಮೀಯವಾಗಿ ಕಂಡಿರಲಿಲ್ಲ. ಅತ್ತೆ-ಮಾವನ ಜೊತೆ ಇರಲಿಲ್ಲ. ಗಂಡ ಶರತ್ ಗೂ ನೆರವಾಗದೆ ತನ್ನ ಊಟ-ತಿಂಡಿ, ಮಕ್ಕಳ ಆರೈಕೆಗೆ ಅಮ್ಮನ ಮನೆಯನ್ನು ನೆಚ್ಚಿದ್ದವಳು.
ಕೌಶಿಕಿ ತನ್ನ ಕಂಪ್ಯೂಟರ್ ಸೈನ್ಸ್ ಬಿ .ಎಸ್ಸಿ ಮುಗಿಸಿದ ನಂತರ ಎಂ .ಎಸ್ಸಿಗೆ ಹೋಗುವ ಆಸೆ ಇದ್ದರೂ ತಾನೇ ದುಡಿದು ಓದಬೇಕೆಂದು ಕೆಲಸ ಹುಡುಕುತ್ತಿರುವಾಗ.. ರಾಜಾರಾಯರಲ್ಲಿಯೇ ಕೆಲಸ ಸಿಕ್ಕಿತ್ತು. ಬೆಳಗ್ಗೆ ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಬಿಟ್ಟು ಬಂದು, ಸಾಯಂಕಾಲ ಹೋಮ್ ವರ್ಕ್ ಮಾಡಿಸುವುದು. ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಮಕ್ಕಳ ಮನೆಗೆದ್ದಿದ್ದಳು. ಅನುರಾಧ ಹಾಗೂ ಸರಳರು ಇದರಿಂದ ತೃಪ್ತಿ ಹೊಂದಿದ್ದರು. ಆದರೆ, ಚಿನ್ಮಯಿ ಆಕೆಗೆ ಹೊಂದಿಕೊಂಡಿರಲಿಲ್ಲ. ಆಕೆಯನ್ನು ಕೆಲಸದವಳ ಹಾಗೆ ನಡೆಸಿಕೊಳ್ಳಲು ಹೋದಾಗ ಸ್ವಾಭಿಮಾನದಿಂದಲೇ ಉತ್ತರಿಸಿದ್ದಳು ಕೌಶಿಕಿ.
ಚಿನ್ಮಯಿಯ ಅಹಂಕಾರದ ಗುಣಕ್ಕೆ ಶರತ್ ಸಹ ಪಾಠ ಕಲಿಸಲು ತೀರ್ಮಾನಿಸಿದ. ಇದಕ್ಕೆ ಶಂಕರಮ್ಮನ ಸಹಕಾರವೂ ಇತ್ತು. ತಂದೆ-ತಾಯಿಯ ಅನುಪಸ್ಥಿತಿ ಮಕ್ಕಳಿಗೆ ಕಾಡಿತ್ತು. ಅದರಲ್ಲಿಯೂ ಹಿರಿಯ ಮಗಳಾದ ಚಾರುಲತಾಳಿಗೆ ಹೆಚ್ಚು. ಮುಂದೆ ಮತ್ತೊಬ್ಬ ಮಗಳು ಚಿನ್ಮಯಿಯೂ ಅದೇ ಹಾದಿ ಹಿಡಿಯುವುದೇನು ಕಷ್ಟವಿರಲಿಲ್ಲ. ಚಾರುವನ್ನು ಮನೋವೈದ್ಯರ ಬಳಿಗೆ ಕರೆದುಯ್ದ ಚಿನ್ಮಯಿ ಯಲ್ಲಿ ಕ್ರಮೇಣ ಆದ ಬದಲಾವಣೆಗಳೇನು..? ಹೆಣ್ಣುಮಕ್ಕಳ ಹೊಂದಾಣಿಕೆಯಿಂದ ಸಂಸಾರದ ಸುಖ, ಮಕ್ಕಳ ಭವಿಷ್ಯ, ನೆಮ್ಮದಿಯ ಬದುಕು ಅಡಗಿರುವುದನ್ನು ಇಲ್ಲಿ ಗಮನಿಸಬಹುದು.
ಸುಧಾಕರನ ಮೊದಲ ಪತ್ನಿ ತೀರಿ ಹೋದದ್ದು ಹೇಗೆ..? ಸುಧಾಕರ ಅದಕ್ಕಿಂತಲೂ ಮೊದಲು ಪ್ರೀತಿಸಿದ ಶ್ಯಾಮಲಾ ಡಾಕ್ಟರ್ ಆಗಿದ್ದಳು. ಈಗಲೂ ಅವಳು ಅವಿವಾಹಿತೆಯಾಗಿಯೇ ಇದ್ದಳು. ಸುಧಾಕರನ ಜೊತೆಗೆ ಅವಳ ಮರು ವಿವಾಹವಾಗಿ ಮಕ್ಕಳು ಅವಳನ್ನು ಅಮ್ಮ ಎಂದು ಸ್ವೀಕರಿಸುವಲ್ಲಿ ಕೌಶಿಕಿ ಪಾತ್ರ ಏನಿತ್ತು..? ಶ್ಯಾಮಲಾಳ ನೇರವಂತಿಕೆಯ ಸ್ವಭಾವವನ್ನು ಇಲ್ಲಿ ಕಾಣಬಹುದಾದರೂ ಅದು ನಕಾರಾತ್ಮಕ ರೀತಿಯಲ್ಲಲ್ಲ. ಶಂಕರಮ್ಮ ತಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಬಾಯಮ್ಮನನ್ನು ಬಿಡಿಸುವುದಕ್ಕೂ ಶ್ಯಾಮಲಾ ಹಾಗೂ ಸುಧಾಕರನ ವಿವಾಹ ತಪ್ಪಿಸುವುದಕ್ಕೂ ನೀಡಿದ ಕಾರಣವೇನು..?
ರಾಜರಾಯರ ತಮ್ಮನ ಮಗ ಹರೀಶ ತನ್ನ ತಂಗಿ ಹರಿಣಿ ಮದುವೆಗೆ ಕರೆಯಲು ಬಂದಾಗ ಕೌಶಿಕಿಗೂ ಆತನಿಗೂ ಪರಿಚಯವಾಗಿತ್ತು. ಆತ ಮೈಸೂರಿನ ಹತ್ತಿರದ ಹಳ್ಳಿಯಲ್ಲಿದದ್ದು. ಕೌಶಿಕಿಗೆ ಆತ ಮನಸೋತ. ಬಡವರಾಗಿದ್ದರೂ.. ಗ್ರಾಜುಯೇಟ್ ಆಗಿರುವ, ಹಳ್ಳಿಯಲ್ಲಿ ಇರಲು ಒಪ್ಪುವ ಹುಡುಗಿ ಆತನ ಸಂಗಾತಿಯಾಗಿ ಬರಲು ಆತನಿಗೆ ಆಸೆ ಇತ್ತು.
ಹರಿಣಿಯ ಮದುವೆ ಹಳ್ಳಿಯಲ್ಲಿ ಆಗದೇ ಇದ್ದದ್ದು ರಾಜರಾಯರು ಹಳ್ಳಿಗೆ ಬರದೇ ಇರಲು ಶಪಥ ಮಾಡಿದ್ದು, ರಾಜರಾಯರ ತಮ್ಮ ಗಣೇಶರಾಯರ ಮೊದಲ ಪತ್ನಿ ತುಳಸಿಯ ಸಾವು, ಈಗಿನ ಪತ್ನಿ ಸುವರ್ಣಮ್ಮ ಹಾಗೂ ಅವರ ಮಗ ಹರೀಶ ಹೀಗೆ ಎಲ್ಲರ ವಿಚಾರವನ್ನು ಪಾತಜ್ಜಿ ಕೌಶಿಕಿಗೆ ತಿಳಿಸುತ್ತಾರೆ. ಸಿರಿವಂತರ ಮನೆಯ ಹಿನ್ನೆಲೆ ಬಿಚ್ಚಿಕೊಳ್ಳುತ್ತದೆ. ಹಿನ್ನೆಲೆ ಓದಿ ನೋಡಿ
ವಠಾರದಲ್ಲಿದ್ದ ಶಾಂತಮ್ಮನವರು ಕೌಶಿಕಿಯನ್ನು ಮಗಳಂತೆಯೇ ಕಾಣುತ್ತಿದ್ದವರು. ಪಾತಜ್ಜಿಯನ್ನು ಬಹಳ ಗೌರವಿಸುತ್ತಿದ್ದವರು. ಶಾಂತಮ್ಮನವರ ಅಣ್ಣನ ಮಗಳು ಮೇಘಳ ವಿವಾಹದಲ್ಲಿ ಕೌಶಕಿಯ ಪಾತ್ರವೇನಿತ್ತು...?
ಮೇಘಾಳ ತಂದೆ ದಯಾನಂದ ಹಾಗೂ ತಾಯಿ ಮಂದಾಕಿನಿ ಕೌಶಿಕಿಯನ್ನು ಮುಕ್ತ ಮನಸ್ಸಿನಿಂದ ಹೊಗಳಿದರು. ಅದು ಕೇವಲ ಬಾಯಿ ಮಾತಿನ ಹೊಗಳಿಕೆಯಾಗಿರಲಿಲ್ಲ.
ಮುಂದೆ ದಯಾನಂದ ಅವರ ಸಹಾಯ ಹಾಗೂ ಶಾಂತಮ್ಮನವರ ಸಹಕಾರದಿಂದ ರಾಜರಾಯರ ಮನೆಯ ಕೆಲಸ ಬಿಟ್ಟು ಅಜ್ಜಿ ಮೊಮ್ಮಗಳಿಬ್ಬರು ಮೈಸೂರಿಗೆ ಹೋಗುವ ಕಾರಣವೇನು..? ಇದಕ್ಕೆ ಶಂಕರಮ್ಮನವರು ಒಪ್ಪಿದರೇ..?
ಕೌಶಿಕಿಯ ವಿವಾಹದ ಸಂದರ್ಭದಲ್ಲಿ ನೀಡಲು ಅವರು ಶಾಂತಮ್ಮನವರ ಬಳಿ ಕೊಟ್ಟ ಒಡವೆ ಅವರದಲ್ಲವೆಂಬ ಸುಳಿವು ಸಿಕ್ಕದ್ದು ಹೇಗೆ..?
ರಾಜರಾಯರ ಒಟ್ಟು ಮನೆ ಬೇರೆಯಾದದ್ದು ಹೇಗೆ..? ಕಾಲ ಎಲ್ಲವನ್ನು ಬದಲಿಸುತ್ತದೆ. ದಿನಕರನ ವಿವಾಹ ಶಂಕರಮ್ಮನವರು ಅಂದುಕೊಂಡಂತೆ ನಡೆಯದ್ದಕ್ಕೆ ಕಾರಣವೇನು..? ಕೌಶಿಕಿಗೂ ಇದಕ್ಕೂ ಸಂಬಂಧವಿತ್ತೆ..?
ತನ್ನದಲ್ಲದ ಕ್ಷೇತ್ರದಲ್ಲಿಯೂ ಕೌಶಿಕಿ ದುಡಿದು ದಯಾನಂದ ಅವರ ಮೇಘಾ ಗಾರ್ಮೆಂಟ್ ಫ್ಯಾಕ್ಟರಿಯನ್ನು ಬದಲಾಯಿಸಿದ್ದು ಹೇಗೆ..? ಇದಕ್ಕೆ ಮಂದಾಕಿನಿ ಅವರ ಒಪ್ಪಿಗೆ ಸಿಕ್ಕಿತೇ..?
ದಯಾನಂದರಿಗೆ ಹರೀಶ ಮೊದಲೇ ಪರಿಚಿತ. ಫ್ಯಾಕ್ಟರಿಯ ಹಗರಣವನ್ನು ಬಯಲು ಮಾಡಲು ಹರೀಶ ಯಾವ ನಾಟಕ ಮಾಡಿದ..?
ಈಗಿನ ಕಾಲಕ್ಕೆ ತಕ್ಕಂತೆ ಬೊಟಿಕ್ ಹಾಗೂ ಶೋರೂಮ್ ನಿರ್ಮಿಸಿದ ದಯಾನಂದರ ಹೊಸ ಬ್ಯುಸಿನೆಸ್ ಹೇಗೆ ನಡೆಯಿತು..? ನಿಷ್ಠಾವಂತ ಕೆಲಸಗಾತಿ ಫಿಲೋಮಿನಾ ಕೂಡ ತ ಸೆಳೆಯುತ್ತಾರೆ.
ಹರೀಶ ಹಾಗೂ ಕೌಶಿಕಿ ಇಬ್ಬರ ವಿವಾಹ ನಿಶ್ಚಯವಾಗುತ್ತದೆ. ಆದರೆ, ಇದು ಹೂವಿನ ಹಾಸಿಗೆಯಂತೇನಿರಲಿಲ್ಲ. ಅವರ ಕುಟುಂಬದ ಇತಿಹಾಸ ಗೊತ್ತಿದ್ದ ಪಾತಜ್ಜಿ ಇದಕ್ಕೆ ಒಪ್ಪಿದ್ದು ಹೇಗೆ..? ಶಂಕರಮ್ಮನವರಿಗೆ ಇದು ಇಷ್ಟವಾಗದೆ ಹೋದದ್ದೇಕೆ..? ಹರೀಶನೇನೋ ಆದರ್ಶ ಯುವಕ. ಆದರೆ, ಆತನ ತಂದೆ-ತಾಯಿಯೂ ಹಾಗೆಯೇ ಇದ್ದರೆ..?
ಕೌಶಿಕಿಯ ಓದುವ ಕನಸಿನ ಬದಲಾಗಿ ಅವಳು ಬೆನ್ನುತ್ತಿದ ಮತ್ತೊಂದು ಕನಸು ಯಾವುದು..? ವಿವಾಹದ ನಂತರ ಕೌಶಿಕಿ ಕುಟುಂಬವನ್ನು ಬೆಸೆಯುವ ಪರಿ ಹೇಗಿದೆ..?
ಹರಿಣಿಯ ಮಗಳಿಗೆ ಇಡುವ ಐದು ಹೆಸರುಗಳಲ್ಲಿ ಒಂದನ್ನು ಕೌಶಿಕಿ ಆರಿಸಿ ತುಳಸಿಯವರ ಹೆಸರು ಇಟ್ಟದ್ದೇಕೆ..?
ಮೊದಲಿಗೆ ಸಾಮಾಜಿಕ ಹಾಗೂ ಕೌಟುಂಬಿಕ ಕಾದಂಬರಿಯಂತೆ ಕಂಡರೂ.. ಕುತೂಹಲಕರವಾಗಿ ರೋಚಕವಾಗಿ ಸಾಗುವ ಕಥೆ ಕೊನೆಯವರೆಗೂ ಊಹಿಸಲಾಗದ ತಿರುವನ್ನು ಹೊತ್ತು ಸಾಗಿದೆ. ಈ ನಿಗೂಢತೆ ಮುಂದೇನು ಎಂದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಮನುಷ್ಯ ನೆಮ್ಮದಿಯ ಜೀವನ ನಡೆಸಲು ಅಗತ್ಯವಾದುದೇನು ಎಂಬುದನ್ನು.. ಜೊತೆಗೆ ಸ್ವಾಭಿಮಾನ, ನೇರವಂತಿಕೆ, ಬದುಕಿನಲ್ಲಿ ವ್ಯಕ್ತಿತ್ವಕ್ಕೆ ಕೊಡುವ ಮೆರುಗೇನು ಎನ್ನುವುದನ್ನು ಹಾಗೂ ಕೌಟುಂಬಿಕ ಮೌಲ್ಯಗಳನ್ನು ಕಟ್ಟಿಕೊಡುವ ಕಾದಂಬರಿ ಇದು.
~ ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ