"ಯಾವಾಗಲೂ ನನ್ನ ಮಗಳು ಸತ್ಯವನ್ನೇ ಹೇಳುತ್ತಾಳೆ ಅಂತಾ ಅಂದುಕೊಂಡಿದ್ದೆನಲ್ಲಮ್ಮ. ಈಗ ಏನು ಆಗಿ ಹೋಗಿದೆ ನೋಡು. ಯಾವಾಗಲೂ ನಿಜ ಹೇಳುತ್ತಾ ಇದ್ದವಳು ಇದೊಂದು ಸುಳ್ಳನ್ನು ಯಾಕೆ ಹೇಳಿದೆಯಮ್ಮಾ.. ಮಾತಾಡು ತಾಯಿ ಮಾತಾಡು..." ಎನ್ನುತ್ತಾ ಸರಸ್ವತಿಯ ಅಪ್ಪ ಮಾತನಾಡಿಸುತ್ತಿದ್ದರೆ ಮಾತನಾಡದೆ ಮಲಗಿದ್ದಳು ಮಗಳು.
"ಯಾವಾಗಲೂ ಕೇಳುತ್ತಾ ಇದ್ದೆಯಲ್ಲಮ್ಮ.. ಅಪ್ಪ, ಸುಳ್ಳು ಹೇಳಿದ್ರೆ ಪಾಪ ಬರುತ್ತೆ. ಆದರೆ, ಒಳ್ಳೆಯದಕ್ಕಾಗಿ ಮತ್ತೆ ಇನ್ನೊಬ್ಬರ ಸಂತೋಷಕ್ಕಾಗಿ ನಿಜ ಹೇಳಿದರೆ ಆ ಪಾಪ ಪುಣ್ಯದ ಲೆಕ್ಕದಲ್ಲಿ ತೊಳೆದು ಹೋಗುತ್ತಂತೆ. ಹೌದಾ..?? ಅಂತಾ
ನಾನು ಹೌದು ಅನ್ನಬಾರದಿತ್ತು. ಬಹುಶಃ, ನಾನವತ್ತು ಸುಳ್ಳು ಹೇಳಿದ ಪಾಪ ಪಾಪವೇ.. ಅಂತಾ ಅಂದಿದ್ದರೆ ನೀನು ಸುಳ್ಳು ಹೇಳುವ ಧೈರ್ಯ ಮಾಡುತ್ತಾ ಇರಲಿಲ್ಲ ಅನ್ನಿಸುತ್ತೇನೋ ಅಲ್ಲವಾ ಸರಸು. ನಾನೇ ನಿನಗೆ ಸುಳ್ಳು ಹೇಳುವಂತೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿಬಿಟ್ಟೆ ಅನ್ನಿಸುತ್ತೆ. ಅಲ್ವಾ.. ಈ ಪಾಪಿ ಅಪ್ಪನಿಗಾಗಿ, ಇಂದೋ ನಾಳೆಯೋ ಬಿದ್ದು ಹೋಗುವ ಮರಕ್ಕಾಗಿ ಯಾಕಮ್ಮಾ ನಿನ್ನ ಜೀವನವನ್ನು ನೀನು ಕೈಯ್ಯಾರೆ ಹಾಳು ಮಾಡಿಕೊಂಡೆ ? ಹೇಳು ಸರಸು ಹೇಳು.." ಎನ್ನುತ್ತಿದ್ದರೆ ಅಲ್ಲಿದ್ದ ಎಂಥಹವರಿಗಾದರೂ ಕರುಳು ಕಿತ್ತು ಬರುತ್ತಿತ್ತು.
"ನೀನು ಸುಳ್ಳು ಹೇಳಿದ್ದಿಯ.. ನೀನು ನನಗೆ ಮುಖ ತೋರಿಸಬೇಡ. ಇಲ್ಲಿಂದ ಎದ್ದು ಎಲ್ಲಿಗಾದರೂ ಹೋಗು.. ಹೋಗು.. ಬೇಡ ಬಿಡು.. ನಾನೇ ಹೋಗ್ತೀನಿ." ಎಂದು ಹುಚ್ಚು ಹಿಡಿದವನಂತೆ ಮಾತನಾಡುತ್ತಿದ್ದ ಪಾಪಯ್ಯ.
ಪಾಪಯ್ಯನ ಹೆಂಡತಿ ಸರಸ್ವತಿ ಜನ್ಮ ನೀಡಿ ತೀರಿ ಹೋಗಿದ್ದಳು. ಅದಾದ ನಂತರ ಪಾಪಯ್ಯನಿಗೆ ಸರಸ್ವತಿ.. ಸರಸ್ವತಿಗೆ ಪಾಪಯ್ಯ. ಇಷ್ಟೇ ಅವರ ಲೋಕ. ಮಗಳಿಗೆ ಕಷ್ಟವಾಗಬಾರದೆಂದು ಅವಳಿಗೆ ಮಲತಾಯಿಯನ್ನು ತಾರದೆ ತಾನೇ ತಂದೆ - ತಾಯಿ ಎರಡೂ ಆಗಿ ಅವಳನ್ನು ಸಾಕುತ್ತಿದ್ದ. ಸರಸ್ವತಿಗೂ ಅಷ್ಟೇ ಅಪ್ಪನೆಂದರೆ ಎಲ್ಲಿಲ್ಲದ ಮಮತೆ. ಅಪ್ಪನೆಂದರೆ ಸಾಕು ಜೀವ ಬಿಡಲೂ ಸಿದ್ದವಿದ್ದಳು. ಹೀಗಿದ್ದ ಇಬ್ಬರ ಬಾಂಧವ್ಯ ಇಡೀ ಹಳ್ಳಿಯೇ ಕೊಂಡಾಡುವಂತಿತ್ತು.
ಎಲ್ಲಾ ಮನೆಯ ಹೆಣ್ಣು ಮಕ್ಕಳೂ ತವರಿನಿಂದ ದೂರವಾಗುವ ಸಂಧರ್ಭ ಇರುವ ಹಾಗೆ ಸರಸ್ವತಿಗೂ ಆಗಿತ್ತು. ಪಾಪಯ್ಯನೇ ಮಗಳಿಗೆ ಒದಗಿ ಬಂದ ಪಟ್ಟಣದ ಗಂಡು ಒಪ್ಪಿದ್ದ. ಒಬ್ಬನೇ ಮಗ.. ಓದಿದ್ದ, ಒಳ್ಳೆಯ ಕೆಲಸದಲ್ಲಿದ್ದ. ಪಾಪಯ್ಯ ಹಿಂದೆ ಮುಂದೆ ನೋಡದೆ ಒಪ್ಪಿ ಮಗಳನ್ನು ಕೊಟ್ಟಿದ್ದ. ಸರಸ್ವತಿಯ ರೂಪ ಹಾಗೂ ಗುಣ ನೋಡಿದ್ದ ಅವರೂ ನಿರಾಕರಿಸಲಿಲ್ಲ.
ಮನಸ್ಸಿಲ್ಲದ ಮನಸ್ಸಲ್ಲಿ ಸರಸ್ವತಿ ಮದುವೆಯಾಗಿ ಹೊರಟಳು. ಆನಂತರ ತಿಳಿದು ಬಂದಿತ್ತು ಅವರ ಯೋಗ್ಯತೆ. ಮನೆಯಲ್ಲಿ ಅವಳು ಕೆಲಸದ ಆಳಿಗಿಂತಲೂ ಕಡೆ. ಕೂರಲು, ನಿಲ್ಲಲು ಮನೆಯಲ್ಲಿ ಮತ್ತೊಬ್ಬರ ಅನುಮತಿ ಪಡೆಯಬೇಕಿತ್ತು. ಗಂಡನೋ ಅನುಮಾನದ ಪಿಶಾಚಿ.
ಅಪ್ಪನ ಕರೆ ಬಂದಾಗಲೆಲ್ಲಾ ಸರಸ್ವತಿ "ನಾನಿಲ್ಲಿ ಸುಖವಾಗಿದ್ದೇನೆ ಅಪ್ಪ. "
"ಹೋ.. ಇಲ್ಲಿ ಇವರೆಲ್ಲಾ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ" ಎಂದು ಹೇಳುತ್ತಿದ್ದಳು.
ಪತ್ರದಲ್ಲಿಯೂ "ನಾನಿಲ್ಲಿ ಕ್ಷೇಮ. ನೀವು.. " ಅಷ್ಟೇ..
ಅಪ್ಪನ ಮನಸ್ಸಿಗೆ ನೋವಾಗಬಾರದೆಂದು ಒಂದೇ ಸುಳ್ಳನ್ನು ವಿಧವಿಧವಾಗಿ ಆಗಾಗ ಹೇಳುತ್ತಿದ್ದಳು.
ಹಳ್ಳಿಯವರಾರೋ ಒಂದೆರಡು ಬಾರಿ ಸರಸ್ವತಿಯ ನಿಜ ಬದುಕನ್ನು ನೋಡಿ ಪಾಪಯ್ಯನಿಗೆ ಹೇಳಿದಾಗ ಅವನು ನಂಬಿರಲಿಲ್ಲ. ಅವನು ಹೋದಾಗ ಅಲ್ಲಿ ಅಂತಹದ್ದೇನೂ ಕಂಡಿರಲಿಲ್ಲ. ಸರಸ್ವತಿ ಕೂಡಾ ಅದೇ ಸುಳ್ಳನ್ನು ಚರ್ವಿತ ಚರ್ವಣದಂತೆ ಹೇಳಿದ್ದಳು. ಇಳಿದು ಹೋದ ಮಗಳನ್ನು ಕಂಡಾಗಲೂ ಅವಳು ಹೇಳಿದ್ದನ್ನು ನಂಬಿ ನನ್ನ ಮಗಳು ಯಾವತ್ತೂ ಸುಳ್ಳು ಹೇಳುವುದಿಲ್ಲ ಎಂದು ಬಂದಿದ್ದನು. ಆದರೆ.. ಮಗಳು ಮನೆಗೆ ಬಂದದ್ದು ಹೆಣವಾಗಿಯೇ.. ಬೆಂಕಿ ಹಚ್ಚಿ ಕೊಂದಿದ್ದರು. ಬಹುಶಃ , ಅರೆ ಜೀವವಾಗಿದ್ದರೂ ಆಕೆ ಅಪ್ಪನ ನೆಮ್ಮದಿಗೆ ಅದೇ ಸುಳ್ಳನ್ನೇ ಹೇಳುತ್ತಿದ್ದಳೋ ಏನೋ..
"ಅವಳು ಹೇಳಿದ್ದು ಒಂದೇ ಸುಳ್ಳು. ಸಾಯುವವರೆಗೂ ಆಕೆಯಾಡಿದ್ದು ಒಂದೇ ಸುಳ್ಳು" ಎನ್ನುತ್ತಾ ಮನೆಮನೆಗೂ ಹೋಗಿ ಹೇಳುತ್ತಾ ಸರಸ್ವತಿಯನ್ನು ನೆನೆದು ಕಣ್ಣೀರು ಹಾಕಿಕೊಂಡೇ ಹುಚ್ಚನಂತೆ ತಿರುಗುತ್ತಿದ್ದಾನೆ ಪಾಪಯ್ಯ.
~ವಿಭಾ ವಿಶ್ವನಾಥ್

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ