ಮೂಲ ಆಕರದ ಶೀರ್ಷಿಕೆ : ಕೋಗನೂರ ಸ್ವಾತಂತ್ರ್ಯ ಯೋಧರು
ಲೇಖಕರು (ಮೂಲ) : ನಲವಡಿ ಶ್ರೀಕಂಠಶಾಸ್ತ್ರಿಗಳು
ಸಂಪಾದಕರು : ಎಚ್. ಎಸ್. ಕೆಂಗುಡ್ಡಪ್ಪನವರ
ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ದಿಸೆಯಲ್ಲಿ ಹೆಸರೇ ಕೇಳದ ಹಳ್ಳಿಗಳು, ಪುಟ್ಟ ಗ್ರಾಮಗಳ ವೀರರು ತಮ್ಮ ಕೈಲಾದಂತೆ ಸೇವೆ ಸಲ್ಲಿಸಿದ್ದಾರೆ. ದೇಶದಲ್ಲೆಡೆ ಸ್ವಾತಂತ್ರ್ಯದ ಕಿಚ್ಚು ಹರಡಿರುವ ಸಂದರ್ಭದಲ್ಲಿ ಕರ್ನಾಟಕದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೋಗನೂರು ತನ್ನದೇ ವಿಶೇಷ ಛಾಪು ಮೂಡಿಸಿತು. ಪ್ರಮುಖವಾಗಿ ಮೈಲಾರ ಮಹದೇವಪ್ಪನವರು ಹಾಗೂ ಸಹಚರರ ಸಾಹಸಗಾಥೆಯನ್ನು ಹೇಳಬಯಸುವೆ. ಮೈಲಾರ ಮಹದೇವಪ್ಪನವರ ಸಹಚರರಾಗಿ ಅವರೊಡನೆ ಹುತಾತ್ಮರಾದ ತಿರುಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಕೋಗನೂರಿನವರು.
ಕೋಗನೂರಿನ ಗೋಣೆಪ್ಪ ಕಮತ, ಯಲ್ಲವ್ವ ಕಮತ, ಚನ್ನಪ್ಪ ಕೊರಗುಂದ, ನಿಂಗಪ್ಪ ಕೊರಗುಂದ, ನಿಶೀಮಪ್ಪ ಚನ್ನೂರ, ವೀರಭದ್ರಪ್ಪ ಪಾಟೀಲ, ವೀರಭದ್ರಪ್ಪ ಅಂಗಡಿ, ಗುಡ್ಡಪ್ಪ ದೇವಪ್ಪನವರ, ಭಗವಂತಪ್ಪ ಬೂದನೂರ ನೇರವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು. ಮಹದೇವಪ್ಪನವರ ನಾಯಕತ್ವದಲ್ಲಿ ಕೋಗನೂರಿನ 18 ಜನರು ಭಾಗವಹಿಸಿ ದೇಶಪ್ರೇಮ ತೋರಿದ ಇತಿಹಾಸ ಸ್ಮರಣೀಯ.
ಗೋಣೆಪ್ಪ ಕಮತ, ಯಲ್ಲವ್ವ ಕಮತ ಪತಿ-ಪತ್ನಿಯರು. ಬ್ರಿಟಿಷರು ಇವರಿಬ್ಬರನ್ನು ಜೈಲಿಗೆ ಹಾಕಿದ್ದಾಗ ಯಲ್ಲಮ್ಮ ಕಮತನವರು ಜೈಲಿನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದು ವೀರಯೋಧರ ದೇಶಪ್ರೇಮ ಹೇಗಿತ್ತು ಎಂಬುದರ ಸಾಕ್ಷಿಯಾಗಿದೆ. ಜೊತೆಗೆ ಹೆಣ್ಣು ಮಕ್ಕಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಿದ್ದ ಬಗೆ, ಗರ್ಭಿಣಿ ಹೆಣ್ಣು ಮಕ್ಕಳು ಹಿಂಜರಿಯದೆ ಹೋರಾಟದಲ್ಲಿ ಮುನ್ನುಗ್ಗುತ್ತಿದ್ದ ದಿನಗಳು ಭವಿಷ್ಯಕ್ಕೆ ಸ್ವಾತಂತ್ರ್ಯ ಎಷ್ಟು ಮುಖ್ಯ ಎಂಬುದರ ಪ್ರತಿಫಲನದಂತಿದೆ.
"ಭಾರತ ದೇಶದ ಬಂಧವಿಮೋಚನೆಗೆ ಭಾರೀ ಕಷ್ಟವ ಸೋಸಿದರು
ತಾರುಣ್ಯವೆಲ್ಲವ ತುರಂಗದಲ್ಲಿ ಕಳೆದು ಮಡಿದ ಮಹಾಶೂರ ಮೈಲಾರರು
ತುಂಟರ ತುಂಟನು, ಭಂಟರ ಭಂಟನು, ಸಾತ್ವಿಕರೊಳಗೆ ಸರದಾರ!
ದಿಟ್ಟನ ಹೆಸರನ್ನು ಹುಟ್ಟಿದ ಕೂಸಿಗೆ ಇಟ್ಟರೂ ತೀರದು ಉಪಕಾರ!"
1930ರಲ್ಲಿ ನಡೆದ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ ಮೈಲಾರಪ್ಪನವರು ಎಂಬುದು ಹೆಮ್ಮೆಯ ವಿಷಯ.
ಆಗಿನ ಅವಿಭಾಜಿತ ಧಾರವಾಡ ಜಿಲ್ಲೆ, ಈಗಿನ ಹಾವೇರಿ ಶಿರಹಟ್ಟಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಮಾರ್ತಂಡಪ್ಪ ಮತ್ತು ಬಸಮ್ಮ ದೇಶಪ್ರೇಮಿ ದಂಪತಿಗಳ ಪುತ್ರನೇ ಮಹದೇವಪ್ಪ ಮೈಲಾರ. 1920ರಲ್ಲಿ ಗಾಂಧೀಜಿಯವರು ಧಾರವಾಡಕ್ಕೆ ಆಗಮಿಸಿದಾಗ ಅವರ ಭಾಷಣ ಕೇಳಿ ಪ್ರಭಾವಿತರಾಗಿ ಅಹಿಂಸಾ ತತ್ವವನ್ನು ಅಳವಡಿಸಿಕೊಂಡು 16ನೇ ವರ್ಷದಿಂದ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ನಡೆದವರು.
ಬಿಜಾಪುರ ಜಿಲ್ಲೆಯ ಕಲಾದಗಿ ಗ್ರಾಮದ ಇದಕ್ಕೆ ಹೋಗಿ ಖಾದಿ ಬಟ್ಟೆ ತಯಾರಿಸುವುದು ಹೇಗೆಂದು ತಿಳಿದು ತಾನು ತಯಾರಿಸಿದ ಖಾದಿಯನ್ನು ಊರು ತಿರುಗಿ ಮಾರಾಟ ಮಾಡಿ ಅದರ ಪ್ರಚಾರ ಮಾಡುತ್ತಾರೆ. ಮುಂದೆ ತಮ್ಮ ಪತ್ನಿ ಸಿದ್ದಮ್ಮನವರ ಸಹಾಯದಿಂದ 1936ರಲ್ಲಿ ವರದಾ ನದಿತೀರದ ಕೊರಡೂರ ಗ್ರಾಮದಲ್ಲಿ ಸೇವಾಶ್ರಮವನ್ನು ಪ್ರಾರಂಭಿಸಿ ಅದರ ಸಂಚಾಲಕರಾಗಿ, ಪ್ರಕೃತಿ ಚಿಕಿತ್ಸೆ, ವ್ಯಾಯಾಮದ ಜೊತೆಗೆ ಖಾದಿ ತಯಾರಿಸುತ್ತಾರೆ. ಇದು 'ಮಹಾದೇವನ ಖಾದಿ' ಎಂದೇ ಪ್ರಸಿದ್ಧವಾಗುತ್ತದೆ.
ದಂಡಿ ಉಪ್ಪಿನ ಚಳುವಳಿಯಲ್ಲಿ ಸ್ವತಃ ಗಾಂಧೀಜಿಯವರೇ ನೀನಿನ್ನು ಚಿಕ್ಕವನಿದ್ದೀಯ ಜೊತೆಗೆ ಹುಷಾರಿಲ್ಲದ ಸಂದರ್ಭದಲ್ಲಿ ನಿನ್ನಿಂದ ಆಗುವುದಿಲ್ಲ ಎಂದು ಹೇಳಿ ಹಿಂದೆ ಕಳುಹಿಸಿದರೂ... ಅವರ ಮಾತು ಕೇಳದೆ ಉತ್ಸಾಹದಿಂದ ಭಾಗಿಯಾಗಿ ಗಾಂಧೀಜಿಯವರಿಗೆ ತನ್ನ ಧೈರ್ಯ, ಆತ್ಮಸ್ಥೈರ್ಯ ಎಂತಹದು ಎನ್ನುವುದನ್ನು ತೋರಿದರು. ಆಗಿನ್ನೂ ಅವರಿಗೆ 19 ವರ್ಷ. ಈ ಸತ್ಯಾಗ್ರಹದಲ್ಲಿ ಬ್ರಿಟಿಷ್ ಅಧಿಕಾರಿಗಳು ಒಂದು ಗೆರೆ ಹಾಕಿ ಯಾರೂ ದಾಟದಂತೆ ಸೂಚನೆ ನೀಡಿದ್ದರಾದರೂ.. ಅದನ್ನು ದಾಟಿ ಅವರ ಕಟ್ಟಳೆಯನ್ನು ಮುರಿದು 6 ತಿಂಗಳ ಜೈಲುವಾಸ ಅನುಭವಿಸಿದ್ದರು.
'ಚಲೇ ಜಾವ್' ಚಳುವಳಿಯ ಅಂಗವಾಗಿ ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ನಡೆದು ಚಾವಡಿ ರೈಲ್ವೇ ಸ್ಟೇಷನ್ ಸುಟ್ಟರು. ವಸೂಲಿಯಾದ ಹಫ್ತೆ ಲೂಟಿ ಮಾಡುವುದು ಮಾಡುತ್ತಾರೆ. ಇವರ ನೇತೃತ್ವದಲ್ಲಿ ಮುಂದೆ ಬ್ರಿಟಿಷರ ನೆಲೆಗಳನ್ನು ನಾಶ ಮಾಡುವುದು, ಬ್ರಿಟಿಷರಿಗೆ ಸಂಬಂಧಿಸಿದ ಟಪಾಲುಗಳನ್ನು ಬಸ್ ನಲ್ಲಿ ಸಾಗಿಸುವಾಗ ಅಪಹರಿಸುವುದು ಮಾಡಿ ಬ್ರಿಟಿಷರನ್ನು ಹೈರಾಣಾಗಿಸಿದ್ದರು. ಗಾಂಧಿ ಮಾರ್ಗದ ತಾತ್ವಿಕತೆಯನ್ನೂ.. ಯಾರಿಗೂ ತಲೆಬಾಗದ ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ ಆಜಾದರಂತಹ ದಿಟ್ಟ ಸಂಘರ್ಷದ ಹೋರಾಟವನ್ನು ಜೊತೆಜೊತೆಯಾಗಿಯೇ ನಿರ್ವಹಿಸಿದರು.
1943 ಏಪ್ರಿಲ್ 1ರಂದು ಹೊಸರಿತ್ತಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿಟ್ಟಿದ್ದ, ವಸೂಲಿಯಾದ ಹಣವನ್ನು ಅಪಹರಿಸಲು ಹೋದಾಗ ಪೊಲೀಸರ ಗುಂಡಿಗೆ, ಬ್ರಿಟಿಷರ ಗಾಳಕ್ಕೆ ಬಲಿಯಾದ ಸ್ವಾತಂತ್ರ್ಯ ಹೋರಾಟದ ಹುತಾತ್ಮರಿವರು. ಕೆಲವೆಡೆ ಬ್ರಿಟಿಷರೇ ಹಫ್ತಾ ವಸೂಲಿ ಮಾಡಿದ ಹಣವನ್ನು ಸಂಗ್ರಹಿಸಿಟ್ಟು ನಿಜವಾದ ಅಚ್ಚ ಕನ್ನಡಿಗರಾದರೆ ಆ ಹಣವನ್ನು ಅಪಹರಣ ಮಾಡಿ ಎಂದು ಸವಾಲು ಹಾಕಿದ್ದು ಎಂಬ ಉಲ್ಲೇಖಗಳೂ ಕಾಣಸಿಗುತ್ತವೆ. ಈ ಸವಾಲನ್ನು ಸ್ವೀಕರಿಸಿ ತಂಡವಾಗಿ ಕೆಲಸವನ್ನು ವಿಭಾಗಿಸಿ ತಮ್ಮಲ್ಲಿ ಯಾರು ಸತ್ತರೂ ಈ ಕಾರ್ಯ ನಿಲ್ಲುವಂತಿಲ್ಲ ಎಂದು ಹೇಳಿ ಮುನ್ನಡೆದ ವೀರ ಸೇನಾನಿ ಇವರು.
ಸಕಾರಾತ್ಮಕ ಅಂಶವೆಂದರೆ ಈ ಮೂವರು ಹುತಾತ್ಮರಾದ ನಂತರವೂ ಹೋರಾಟ ಮುಂದುವರಿಯಿತು. ಮಹಾತ್ಮ ಗಾಂಧೀಜಿಯವರ 75ನೇ ಹುಟ್ಟು ಹಬ್ಬದ ಅಂಗವಾಗಿ 75 ಕಾರ್ಯಕ್ರಮ ಹಮ್ಮಿಕೊಂಡಿದ್ದ ಅವರ ತಂಡದ 75 ನೇ ಕಾರ್ಯಕ್ರಮ ಇದಾಗಿತ್ತು.
ಕೋಗನೂರು ಸ್ವಾತಂತ್ರ್ಯ ಯೋಧರು ನಾಟಕದ ರೂಪದಲ್ಲಿದೆ. ಈ ಎಲ್ಲಾ ಅಂಶಗಳ ಜೊತೆಗೆ ಇನ್ನೂ ಹಲವು ವಿಶೇಷ ಅಂಶಗಳನ್ನು ಈ ಪುಸ್ತಕದಲ್ಲಿ ನಾವು ಕಾಣಬಹುದಾಗಿದೆ. ಇಲ್ಲಿ ಸ್ವಾತಂತ್ರ್ಯ ಪ್ರೇಮ, ಜಾತೀಯತೆ ನಿರ್ಮೂಲನೆ, ಕರ್ನಾಟಕ ಏಕೀಕರಣ ಜೊತೆಗೆ ಕೋಮು ಸಾಮರಸ್ಯವನ್ನು ಬಿಂಬಿಸಿದ್ದಾರೆ.
1954ರಲ್ಲಿ ಮೂರು ತಿಂಗಳು ನಲವಡಿ ಶ್ರೀಕಂಠಶಾಸ್ತ್ರಿಗಳು ಕೋಗನೂರಿನಲ್ಲಿ ತಂಗಿದ್ದರು. ಇದಕ್ಕೆ ಕಾರಣ ಕೋಗನೂರಿನ ಗೋಣೆಪ್ಪ ಕಮತ ಹಾಗೂ ಅವರ ಆತ್ಮೀಯರಾದ ಗುಡ್ಡೆಪ್ಪ ಡಿಳ್ಳೆಪ್ಪ. ಗೋಣೆಪ್ಪನವರು ಮಹದೇವರ ಆತ್ಮೀಯರು ಹಾಗೂ ಹೊಸರಿತ್ತಿಯ ಗೋಲಿಬಾರ್ ನಲ್ಲಿ ತಮ್ಮ ಮೂವರು ಆತ್ಮೀಯರ ಜೊತೆಗೆ ಬಲಗೈ ನಡುವಿನ ಮೂರು ಬೆರಳನ್ನು ಕಳೆದುಕೊಂಡಿದ್ದವರು. ತಮ್ಮ ಹಾಗೂ ಸಹಚರರ ಹೋರಾಟವನ್ನು ರಂಗಕ್ಕೆ ಅಳವಡಿಸುವ ಆಶಯದಿಂದ ಸ್ವಾತಂತ್ರ್ಯ ಪ್ರೇಮಿಗಳು ಹಾಗೂ ಖ್ಯಾತ ನಾಟಕಕಾರರೂ ಆಗಿದ್ದ ಶ್ರೀ ನಲವಡಿ ಶ್ರೀಕಂಠಶಾಸ್ತ್ರಿಗಳನ್ನು ಸಂಪರ್ಕಿಸಿ ಕೋಗನೂರಿನಲ್ಲಿ ತಂಗಲು ಅನುವು ಮಾಡಿಕೊಟ್ಟಿದ್ದರು.
ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದವರ ನೈಜ ಅನುಭವಗಳು, ಸನ್ನಿವೇಶಗಳು ಎದುರಿಸಿದ್ದ ಬಿಕ್ಕಟ್ಟು, ಮಹದೇವರ ಕಾರ್ಯನಿರ್ವಹಣೆ, ಕಾರ್ಯತಂತ್ರ, ಅಪ್ರತಿಮ ದೇಶಪ್ರೇಮ, ಗಾಂಧೀಜಿಯ ಬಗೆಗಿನ ಅಭಿಮಾನ, ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಪಣತೊಟ್ಟ ಬಗ್ಗೆ, ಸಂಘಟನಾ ಶಕ್ತಿ, ಸಾಮೂಹಿಕ ಚಟುವಟಿಕೆಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದ ರೀತಿ ಎಲ್ಲವನ್ನೂ ಟಿಪ್ಪಣಿ ರೂಪದಲ್ಲಿ ಬರೆದುಕೊಂಡು ನಾಟಕ ರಚಿಸುತ್ತಾರೆ.
1980 ಏಪ್ರಿಲ್ 1ರಂದು ಕೋಗನೂರಿನಲ್ಲಿ ಕಾರಣಾಂತರದಿಂದ ಈ ನಾಟಕದ ಹಸ್ತಪ್ರತಿ ನಾಶವಾಗಿದ್ದರಿಂದ ಹೆಚ್ಚು ಕೆಂಗುಡಪ್ಪನವರು ನಾಟಕದಲ್ಲಿ ಪಾತ್ರ ಮಾಡಿದ್ದವರ ಬಾಯಿಂದ ಬಾಯಿಗೆ ಕಂಠಪಾಠವಾಗಿದ್ದ ಸಂಭಾಷಣೆಯನ್ನು ಹೇಳಿಸಿ, ಬರೆದುಕೊಂಡು, ಸಂಗ್ರಹಿಸಿರುವುದು ಈಗ ನಮಗೆ ಪುಸ್ತಕ ರೂಪದಲ್ಲಿ ಲಭ್ಯವಾಗಿದೆ.
ಮುಂದಿನ ಪೀಳಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಪಟ್ಟ ಕಷ್ಟಗಳನ್ನು ತಿಳಿದಾಗ ಮಾತ್ರವೇ ಸ್ವಾತಂತ್ರ್ಯಎಷ್ಟೆಲ್ಲಾ ಕಷ್ಟದ ಹೋರಾಟದಿಂದ ದೊರೆತ ಫಲ, ಅದನ್ನು ಕಾಪಾಡಿಕೊಳ್ಳುವ ಹಾಗೂ ಗೌರವಿಸುವ ಕುರಿತ ಅರಿವು ಮೂಡಿಸಿಕೊಳ್ಳಲು ಸಾಧ್ಯ.
"ನಮ್ಮ ಆಡಳಿತ ಪರಕೀಯರ ಕೈಯಲ್ಲಿದೆ ಎಂದು ಹೇಳುವುದು ಹೇಳಿತನದ ಲಕ್ಷಣವಲ್ಲವೇ..?"
"ಆಲಸ್ಯವೇ ಎಲ್ಲರನ್ನೂ ಅದೋಗತಿಗೆ ಒಯ್ಯುವ ವೈರಿ. ನಾವೀಗ ಜಾಗೃತ ಜನಾಂಗವನ್ನು ನೋಡಿ ಎಚ್ಚರಾಗಬೇಕಿದೆ."
ಇಂತಹ ಮಿಂಚಿನ ಮಾತುಗಳಿಂದ ಭಾರತ ಬಂಧನಮುಕ್ತವಾಗಬೇಕು, ದಾಸ್ಯ ಹರಿದು ಹೋಗಬೇಕು ಎನ್ನುವ ಯುವ ಉತ್ಸಾಹಿ ಮೈಲಾರ ಮಹದೇವಪ್ಪ ತಮ್ಮ ಸ್ನೇಹಿತರನ್ನು ಸ್ವಾತಂತ್ರ್ಯಕ್ಕೆ ಹುರಿದುಂಬಿಸುವ ಬಗೆ ಇಲ್ಲಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಸಹೋದರರಿಗೆ ನೆರವಾಗಬೇಕು. ಸಂಗ್ರಾಮದ ಕರೆ ಬಂದಾಗ ಗುಂಪು ಗುಂಪಾಗಿ ಹೋರಾಡಬೇಕು. ಜೀವದಾನ ಮಾಡುವ ಪ್ರಸಂಗ ಬಂದರೂ ಸಾವಿಗಂಜದೆ ಮುನ್ನುಗ್ಗಬೇಕು ಎನ್ನುತ್ತಾ ಗತಕಾಲದ ವೀರನಾರಿಯರ ನೆನಪು ಮಾಡಿ ಹೆಣ್ಣು ಮಕ್ಕಳನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿ ಮಾಡುತ್ತಿದ್ದ ದಿನಗಳಿವೆ.
ಅಸ್ಪೃಶ್ಯ ನೀತಿಯನ್ನು ತಡೆಗಟ್ಟಿ, ಖಾದಿ ತೊಡುವ ಗಾಂಧೀಜಿಯವರ ನಿಲುವನ್ನು ಎತ್ತಿ ಹಿಡಿಯುವ ಯುವ ಜನರು ಕಾಣುತ್ತಾರೆ.
ಮೈಲಾರ ಮಹದೇವಪ್ಪನವರು ಹರ್ಡೇಕರ್ ಮಂಜಪ್ಪನವರಿಂದಲೂ ಪ್ರೇರಿತವಾಗಿದ್ದಾರೆ. ಅವರ ಕೆಲ ಮಾತುಗಳನ್ನು ತಮ್ಮ ಜೊತೆಗಾರರಿಗೆ ಹೇಳುವಾಗ ಉಲ್ಲೇಖಿಸುತ್ತಾರೆ ಸಹ.
"ಸಾವಿಗಂಚದವರು ಸತ್ಯಾಗ್ರಹಿಗಳಂತೆ. ಸತ್ಯಾಗ್ರಹದಿಂದಲೇ ಸ್ವರಾಜ್ಯ ಸಿದ್ದಿಯಂತೆ. ಸತ್ಯಾಗ್ರಹಿಗಳು ಸ್ವದೇಶಿ ವ್ರತವನ್ನು ಆಚರಿಸಬೇಕಂತೆ. ಹಿಂದೂಸ್ಥಾನದ ಬಡತನ ಕಳೆಯುವುದು ರಾಟೆ, ಖಾದಿ, ಸ್ವಉದ್ಯೋಗದಿಂದ." ಇದೇ ಮೊದಲಾಗಿ ಭಾರತವನ್ನು ಸ್ವತಂತ್ರಗೊಳಿಸುವ ಸರಳ ಮಾರ್ಗದ ಸ್ಪಷ್ಟ ನಿರೂಪಣೆಯಿದೆ.
1918ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಅನಾಚಾರವು ಜನರನ್ನು ರೊಚ್ಚಿಗೆಬ್ಬಿಸಿತ್ತು. ಇದಾದ ನಂತರ ಧಾರವಾಡದ ಬೀದಿಗಳಲ್ಲಿ ಸವಿನಯ ಕಾಯ್ದೆ ಭಂಗ, ಬ್ರಿಟಿಷ್ ಸರ್ಕಾರದಿಂದ ದೊರೆತ ವಿಧಾನ ಮಂಡಲಗಳ ಚುನಾವಣೆಗಳ ಬಹಿಷ್ಕಾರ, ಪರದೇಶಿ ಬಟ್ಟೆ, ಶಿಕ್ಷಣ ಸಂಸ್ಥೆಗಳ ಬಹಿಷ್ಕಾರ, ಶಾಸನಭಂಗಗಳು ನಡೆದವು.
ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಆತಂಕ, ನಿರ್ಬಂಧಗಳನ್ನು ಲಕ್ಷಿಸದೆ ಉಪ್ಪಿನ ಪಾರತಂತ್ರವನ್ನು ಕಿತ್ತೊಗೆದ ಮಹಾದೇವರ ಶೌರ್ಯ ನಂತರ ಜೈಲುವಾಸದ ಕುರಿತ ಚಿತ್ರಣಗಳಿವೆ.
1942ಕ್ಕೆ ಸ್ಟಾಫೋರ್ಡ್ ಕ್ರಿಪ್ಸ್ ಅವರು ರಾಜಕೀಯ ಕೊಡುಗೆ ನೀಡುವುದಾಗಿ ಭಾರತಕ್ಕೆ ಬಂದಾಗ ಅವರ ಅನಿಶ್ಚಿತ ಹೇಳಿಕೆಯನ್ನು ನಿರಾಕರಿಸಿ ಕಮಿಟಿಯಲ್ಲಾದ ತೀರ್ಮಾನ ಮುಂದಕ್ಕೆ ಕ್ವಿಟ್ ಇಂಡಿಯಾ, ಭಾರತ ಬಿಟ್ಟು ತೊಲಗಿ ಎಂದು ಮಹಾತ್ಮರು ನೀಡಿದ ಕರೆಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ಕೋಗನೂರ ವೀರಯ್ಯನವರ ಸಂಘಟನೆ ಹಾಗೂ ಮೈಲಾರ ಮಹದೇವಪ್ಪನವರ ನಾಯಕತ್ವ ಶುರುವಾಗುತ್ತದೆ. ಧಾರವಾಡದಿಂದ ಬುರ್ಲಿ ಬಿಂದುಮಾಧವರಾಯರ ಪತ್ರ ತಲುಪಿ ಮುಂದೆ ಗುಂಪಿನ ಚಟುವಟಿಕೆಗಳು ನಿರ್ಧರಿಸಿದಂತೆ ಸಾಗುತ್ತವೆ. ಗುಪ್ತಚರ ಕಾರ್ಯ ಮಾಡುವವರು, ಹಳ್ಳಿ ಹಳ್ಳಿಗಳಲ್ಲಿಯೂ ತಮ್ಮ ಕೈಲಾದ ಸೇವೆ ಮಾಡುವವರು ಸ್ವಾತಂತ್ರ್ಯಕ್ಕೆ ನೆರವಾದ ಬಗೆ ಇಲ್ಲಿದೆ.
ಮೈಲಾರ ಮಹಾದೇವರು ತಮ್ಮ ಪತ್ನಿಗೂ ಧೈರ್ಯ ತುಂಬಿ ಅವರನ್ನು ಉಳಿದ ಹೆಣ್ಣು ಮಕ್ಕಳೊಡನೆ ದೇಶ ಸೇವೆಗಾಗಿ ಬರಲು ಪ್ರೇರೇಪಿಸುತ್ತಾರೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರಿಗೆ ಜಯ ಹಾರೈಸುವುದರ ಜೊತೆಗೆ ಅವರ ಪತ್ನಿಯ ದಿಟ್ಟತನ ಕಾಣುತ್ತದೆ. ಪೊಲೀಸರು ಅವರನ್ನು ಹಿಡಿದುಕೊಂಡು ಹೋಗಲು ವಾರೆಂಟ್ ತಂದಿರುವಾಗ ಕೊಡುವ ದಿಟ್ಟ ಉತ್ತರ ಇಲ್ಲಿ ಕಾಣುತ್ತದೆ. ಮಹದೇವಪ್ಪನವರು ಬೇರೆಲ್ಲಿಯೂ ಸಿಗದಿದ್ದಾಗ ಪ್ರತಿ ಊರಿನಲ್ಲಿಯೂ ಅವರು ಬಂದಿದ್ದಾರೆಯೇ ಎಂದು ವಿಚಾರಿಸುವ ಸಂದರ್ಭದಲ್ಲಿ ಕುರಿಗಾಹಿಗಳು ಸಹ ಅವರು ಹೋದ ಜಾಗದ ಸುಳಿವನ್ನು ನೀಡುವುದಿಲ್ಲ.
ಬಸ್ಸಿನಲ್ಲಿದ್ದ ಟಪಾಲು ಕದಿಯುವುದಕ್ಕೆ ಡ್ರೈವರ್ ಕಂಡಕ್ಟರ್ರಿಗೆ ಬ್ಯಾಡಗಿ ಬಾಂಬ್ ಹಾಕುವ ಸಂದರ್ಭವಿದೆ. ಬ್ಯಾಡಗಿ ಬಾಂಬ್ ಎಂದರೆ ಮತ್ತೇನಲ್ಲ ಬ್ಯಾಡಗಿ ಮೆಣಸಿನಕಾಯಿ ಕಾರದಪುಡಿಯನ್ನು ಅವರ ಕಣ್ಣಿಗೆ ಎರಚುವುದು. ಬಸ್ಸಿನಲ್ಲಿರುವ ಬೇರೆ ಯಾರಿಗೂ ಯಾವುದೇ ತೊಂದರೆ ಮಾಡದೆ, ಯಾರಿಗೂ ಪ್ರಾಣ ಹಾನಿ ಮಾಡದೆ, ತಮಗೆ ಬೇಕಾದ ಟಪಾಲು ಕಸಿದುಕೊಂಡು ಹೋಗುತ್ತಾರೆ.
ಹತ್ತಿಮತ್ತೂರು ಸ್ಟೇಷನ್ ಸುಡುವ ಕಾರ್ಯಕ್ರಮವಿದ್ದಾಗ ಅಲ್ಲಿರುವ ಪೊಲೀಸರನ್ನು ದಿಕ್ಕು ತಪ್ಪಿಸಲು ಮಾರುವೇಷದಲ್ಲಿ ಕಬ್ಬು ಮಾರುವವರಂತೆ ಹೋಗಿ ಅವರಿಗೆ ಆಸೆ ತೋರಿಸಿ, ಪೊಲೀಸರ ಬಂದೂಕು ಕೆಳಗಿಡುವಂತೆ ಮಾಡಿ ಉಪಾಯದಿಂದ ಅವರನ್ನು ಕಟ್ಟಿ ಹಾಕಿ ಬಂದೂಕು ಅಪಹರಿಸಿ ಸ್ಟೇಷನ್ ಸುಡುತ್ತಾರೆ.
ಕಚವಿ ಸರ್ದಾರ ವೀರನಗೌಡರ ಪತ್ನಿ ನಾಗಮ್ಮ ಮತ್ತು ಹೊಸರಿತ್ತಿ, ಹಾಲಗಿಯ 15 ಜನ ಯುವತಿಯರು, ಕೋಗನೂರಿನ ಗೋಣೆಪ್ಪನವರ ಪತ್ನಿ ಯಲ್ಲಮ್ಮ, ಹುಬ್ಬಳ್ಳಿಯ ಹರಿಜನ ಆಶ್ರಮದಿಂದ ಯಶೋದ, ಕೃಷ್ಣೆ, ಇಂದಿರಾಬಾಯಿ, ಲಕ್ಷ್ಮಿದೇವಿ ಹೀಗೆ ಮೂರು ನಾಲ್ಕು ತಿಂಗಳಿನ ಕೂಸಿನ ತಾಯಂದಿರು ಪುಟ್ಟ ಮಕ್ಕಳಿರುವವರು ಪ್ರಭಾತ ಪೇರಿಯಲ್ಲಿ ಹಾವೇರಿಯಲ್ಲಿ ಬುಲೆಟಿನ್ ಹಂಚುವಾಗ ಹಾಗೂ ಸ್ವರಾಜ್ಯ ಸಾಧನೆಗೆ ಹೋರಾಡಿ ಎಂದು ಸಾಹೇಬರಿಗೆ ಹೇಳಿ, ಅವರಿಗೆ ಗಾಂಧಿ ಟೋಪಿ ಕೊಡುವಾಗ... ಕೋರ್ಟಿನಲ್ಲಿರುವ ಮುನಸೂಫ್ ಸಾಹೇಬರು, ಮಜೀದ, ಪೌಜದಾರರಿಗೂ, ಮಾಮಲೆದಾರರಿಗೂ ಬುದ್ಧಿ ಬರುವಂತೆ ಪತ್ರ ಓದುವಾಗ ಬಂಧಿಯಾಗಿ ಜೈಲಿಗೆ ಹೋಗುತ್ತಾರೆ
ನೆಗಳೂರ ಚಾವಡಿ, ಕೋಗನೂರ ಚಾವಡಿ, ಹೆಬ್ಬಾಳ ಚಾವಡಿ ಇಲ್ಲೆಲ್ಲ ಹಪ್ತೆ ವಸೂಲಿ ಮಾಡುವ ಒಂದೊಂದು ಸಂದರ್ಭಗಳೂ ರೋಮಾಂಚನಗೊಳಿಸುತ್ತವೆ.
ಸ್ವಾತಂತ್ರ್ಯ ಹೋರಾಟದಲ್ಲಿ ಲಾವಣಿಗಳು, ಸ್ವಾತಂತ್ರ್ಯದ ಕುರಿತ ಹಾಡುಗಳು ಇದ್ದ ಬಗೆಯನ್ನು ನಾವು ಕೇಳಿರುತ್ತೇವೆ. ಹೆಣ್ಣು ಮಕ್ಕಳ ಗುಂಪು ಪ್ರಭಾತ ಪೇರಿಯಲ್ಲಿ ಆಳುವ ಈ ಪದಗಳು ಅರ್ಥಪೂರ್ಣವಾಗಿದೆ. ಇಂತಹ ಕೆಲ ಸಾಲುಗಳನ್ನು ಇಲ್ಲಿ ಕಾಣಬಹುದಾಗಿದೆ
ಸಾಗಿರಿ ಮುಂದೆ ಸಾಗಿರಿ ಮುಂದೆ
ನಾರಿಯರೆಲ್ಲಾ ಒಂದಾಗಿ ಸಾಗಿರಿ ಮುಂದೆ
ಲಕ್ಷಿಬಾಯಿ ಚನ್ನಮ್ಮರಂತೆ
ಸುಭಾಶ್ಚಂದ್ರ ಭೋಸರಂತೆ
ವಿಜಯದ ಕಹಳೆ ಊದುತ ಮುಂದೆ
ಸಾಗಿರಿ ಮುಂದೆ ಸಾಗಿರಿ ಮುಂದೆ
ಜೈ ಹಿಂದ್... ಜೈ ಹಿಂದ್.... ಜೈ ಹಿಂದ್
ಸಿಂಧೂರ ಲಕ್ಷ್ಮಣ ರಾಯಣ್ಣನಂತೆ
ಸಾಗುವ ಮುಂದೆ ಸಾಗುವ ಮುಂದೆ
ಹೊಸರಿತ್ತಿಯ ಘಟನೆಯ ನಂತರವೂ ಸ್ವಾತಂತ್ರ್ಯ ಹೋರಾಟ ನಡೆಯುವ ಘಟನೆಗಳೊಂದಿಗೆ ನಾಟಕ ಮುಕ್ತಾಯವಾಗುತ್ತದೆ.
ಮಹಾದೇವರ ತಂಡದ ಹಲವು ಸದಸ್ಯರು 'ಹೋರಾಟವೇ ಉಸಿರು' ಎಂದು ಬದುಕಿದವರು. ಚಳುವಳಿಯ ಕೆಚ್ಚು, ಪ್ರಾಮಾಣಿಕತೆ, ಬಡವರಿಗೆ ಮಿಡಿಯುವ ಹೃದಯದ ಕೆಲವರು ಭೂಮಾಲೀಕರ ಕುತಂತ್ರಕ್ಕೆ ಬಲಿಯಾದರೆ.. ಇನ್ನು ಕೆಲವರು ಸ್ವಾತಂತ್ರ್ಯ ಚಳುವಳಿಯ ಪಿಂಚಣಿಯನ್ನು ಪಡೆದು ಗೌರವಕ್ಕೂ ಪಾತ್ರರಾದರು.
2001 ಏಪ್ರಿಲ್ ಒಂದರಂದು ಕೋಗನೂರು ಗ್ರಾಮದಲ್ಲಿ ಹೊಸ ರೀತಿಯಲ್ಲಿ ಮಾಡಿದ ಮೂವರಿಗೆ ಹುತಾತ್ಮತ್ರಯರ ಸ್ಮಾರಕ ಕಟ್ಟಿಸಿ ಅಂದೆ ಹುತಾತ್ಮರ ದಿನವನ್ನು ಆಚರಿಸುತ್ತಾರೆ.
2015 ರ ಪರಿಷ್ಕೃತ ಮುದ್ರಣದಲ್ಲಿ 7 ನೇ ತರಗತಿಗೆ ಮೈಲಾರ ಮಹಾದೇವ ಅವರ ಕುರಿತ ಪಾಠವಿದೆ.
ಗ್ರಂಥಋಣಿ:
ವೃತ್ತ ಪತ್ರಿಕೆಗಳು, ಮಾಸಿಕ ಪತ್ರಿಕೆಗಳು, ಸಿರಿಗನ್ನಡ ಪಠ್ಯ, ಇಂದಿರಾ ಕೃಷ್ಣಪ್ಪನವರ ಸಂಪಾದಿತ ಕವನಗಳಲ್ಲಿ ಮೂಡಿದ ಗಾಂಧಿ, ಪ್ರೊ. ಬಿ. ಪೊಲೀಸ್ ಪಾಟೀಲ ಅವರ ನಾನೆಂಬುದು ನಾನಲ್ಲ, ಹುತಾತ್ಮ ತಿಮ್ಮನ ಗೌಡ ಪಾಟೀಲ (ಮೆಣಸಿನಹಾಳ) ಇವುಗಳಿಂದಲೂ ಆಯ್ದ ಮಾಹಿತಿಗಳನ್ನು ಉಲ್ಲೇಖಿಸಿರುವೆ.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ