ಪುಸ್ತಕದ ಶೀರ್ಷಿಕೆ : ಅದು ನಿಜವಲ್ಲ..!
ಲೇಖಕರು : ಕೌಂಡಿನ್ಯ
ಪ್ರಕಾಶಕರು : ಕಲ್ಪವೃಕ್ಷ ಪ್ರಕಾಶನ
ಪ್ರಥಮ ಮುದ್ರಣ : 2020
ಪುಟಗಳು : 352
ಬೆಲೆ : 350 ರೂ.
ಅದು ನಿಜವಲ್ಲ..! ಕಾದಂಬರಿ ಸಾಮಾಜಿಕ ಕಾದಂಬರಿಯಾಗಿದ್ದರೂ.. ಸಾಕಷ್ಟು ನಿಗೂಢ, ಪತ್ತೇದಾರಿ ಹಾಗೂ ಹಾರರ್ ಅಂಶಗಳನ್ನು ಒಳಗೊಂಡು ರೋಚಕವಾಗಿ ಸಾಗುತ್ತದೆ.
"ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು" ಎಂದು ಹೇಳಿರುವ ಹಿರಿಯರ ಅನುಭವದ ಮಾತು ಎಷ್ಟು ಸತ್ಯವಲ್ಲವೇ..!? ನಾವು ಕಂಡದ್ದೇ ನಿಜ ಎಂಬ ತೀರ್ಮಾನಕ್ಕೆ ಬರುವ ಮುಂಚೆ ಅದನ್ನು ಮತ್ತೆ ಪರಿಶೀಲಿಸಬೇಕು. ಈ ಅಂಶ ಕಾದಂಬರಿಯ ಪ್ರತಿ ಘಟ್ಟದಲ್ಲಿಯೂ ನೆನಪಾಗುತ್ತದೆ. ಇಲ್ಲಿನ ಪ್ರತಿ ನಿಗೂಢದ ಹಿಂದೆಯೂ ಒಂದು ಉದ್ದೇಶವಿದೆ. ಅದೇನು ಎಂಬುದನ್ನು ನೀವೇ ಅರಿಯಬೇಕು. ವಿಶಿಷ್ಟ ಕಥಾಹಂದರ ಹೊಂದಿರುವ ಈ ಕಾದಂಬರಿ 'ಮಂಗಳ' ವಾರಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಗಿತ್ತು.
ಈ ಕಾದಂಬರಿಯ ಬಹುಭಾಗ ನಡೆಯುವುದು ಸೋನಾಪುರ ಎನ್ನುವ ಕುಗ್ರಾಮದಲ್ಲಿ. ಪ್ರಕೃತಿ ಸೌಂದರ್ಯ, ಪ್ರಪಾತ, ಗುಡ್ಡ, ಗುಹೆ, ರಾಜರ ಕಾಲದ ಕೋಟೆ, ಅರಮನೆಯ ಅವಶೇಷ ಇವೆಲ್ಲವೂ ಇದ್ದರೂ ಪ್ರವಾಸಿಗರ ಆಕರ್ಷಕ ತಾಣವೇನೂ ಆಗಿರಲಿಲ್ಲ. ಆದರೆ, ಇತಿಹಾಸ ಗೊತ್ತಿದ್ದವರಿಗೆ ಸೋನಾಪುರ ವೈಶಿಷ್ಟ್ಯವೇ..!
ಅರಣ್ಯದ ಮಧ್ಯೆ ಇರುವ ಊರು ಇದಾದರೂ.. ಸೇತುವೆ ಶಿಥಿಲಾವಸ್ಥೆಯಲ್ಲಿತ್ತು. ಮಳೆಗಾಲದಲ್ಲಿ ನದಿ ಪ್ರವಾಹ ಬಂದರೆ ಸೇತುವೆ ಮುಳುಗಿ ಗ್ರಾಮ ದ್ವೀಪವೇ ಆಗಿಬಿಡುತ್ತಿತ್ತು. 300 ಮನೆಗಳ ಈ ಊರಿನಲ್ಲಿ ದಾನ-ಧರ್ಮ, ಪರೋಪಕಾರ, ದೈವಭಕ್ತಿ ಎಲ್ಲದಕ್ಕೂ ಹೆಸರುವಾಸಿಯಾಗಿದ್ದವರು ಶಿವಹೋತ್ರಿ ಮನೆತನದವರು. ಊರಿನ ಹೊರಭಾಗದಲ್ಲಿ ನಿರ್ಜನ ಪ್ರದೇಶ, ಪ್ರಕೃತಿ ಸೌಂದರ್ಯದ ನಡುವೆ ಇವರ ಪ್ರಾಚೀನ ಕಾಲದ ಮನೆಯಿತ್ತು. ಇದನ್ನು ಅರಮನೆ ಮನೆ ಎಂದೇ ಕರೆಯುತ್ತಿದ್ದರು. ಕಾಲಕ್ಕೆ ತಕ್ಕಂತೆ ಬದಲಾದ ಕಲಾತ್ಮಕ ಹಾಗೂ ಆಧುನಿಕ ರೂಪವೂ ಇತ್ತು. ಈ ಮನೆಯ ಹೆಸರು ಶಿವನಿಲಯ. ಇದರ ಯಜಮಾನರು ಶಿವರಾಜೇಂದ್ರಬಾಬು.
ಆದರೆ ಈಗ ಬಂಗಲೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಅಂದಾನಪ್ಪ ಬ್ಯಾಡಗಿ. ಬಂಗಲೆಯ ಪ್ರತಿ ಕೋಣೆಯನ್ನು ತೊಳೆದು, ಒರೆಸಿ ಶುಚಿ ಮಾಡಿ ಗಿಡಗಳ ಆರೈಕೆ ಮಾಡಿ ಮನೆ ತನ್ನದೇ ಎನ್ನುವಂತೆ ನಿಷ್ಠೆಯಿಂದ ಕೆಲಸ ಮಾಡಿ ಸಂಜೆಗೆ ಮನೆಗೆ ಹೊರಡುತ್ತಿದ್ದ. ಅದೂ ಬಂಗಲೆಯ ಬೀಗ ಹಾಕಿಕೊಂಡು.
ದಾರಿ ತಪ್ಪಿ ಬಂದವರು ಅಥವಾ ಕಷ್ಟದಲ್ಲಿರುವವರಿಗೆ ಈ ಮನೆಯಲ್ಲಿ ಜಾಗ ಸಿಗುತ್ತಿತ್ತು. ಅದೆಲ್ಲವೂ ಬಂದವರಿಗೆ ಪವಾಡದಂತೆ ಕಾಣುತ್ತಿತ್ತು. ಅಂತಹ ಹಲವಾರು ನಿದರ್ಶನಗಳಿವೆ ಇಲ್ಲಿ. ಅನೈತಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕಿ, ಅವರನ್ನು ರಕ್ಷಿಸಿ ಅವರ ಬದುಕನ್ನು ನೆನಪಿಟ್ಟುಕೊಳ್ಳುವಂತೆ ಮಾಡುತ್ತಿದ್ದ ಆ ನಿಗೂಢ ವ್ಯಕ್ತಿ ಯಾರು..? ಬಂದವರೆಲ್ಲರಿಗೂ ಆ ನಿರ್ಜನ ಮನೆಯಲ್ಲಿ ಶಿವ ಸ್ತುತಿ ಕೇಳಿ ಬರುತ್ತಲೇ ಇತ್ತು. ಹಾಗಾಗಿ ದೈವಭಕ್ತಿಯೂ ಭಯ ಹುಟ್ಟಿಸುತ್ತಿತ್ತು.
ಆ ಊರಿನ ಪೊಲೀಸ್ ಸ್ಟೇಷನ್ ನ ಸಬ್ ಇನ್ಸ್ಪೆಕ್ಟರ್ ಮಾರ್ತಾಂಡ ಕಲ್ಲಂಗಡಿ. ಆತನಿಗೆ ಅಂದಾನಪ್ಪನ ಮೇಲೆ ಬಹಳ ಅನುಮಾನ. ಏಕೆಂದರೆ, ಕುಟುಂಬದ ಯಜಮಾನರು ಸತ್ತು ಆರು ತಿಂಗಳಾಗಿತ್ತು. ಆದರೂ.. ಅವನ ರಹಸ್ಯ ಕಾರ್ಯಾಚರಣೆ ನಡೆಯುತ್ತಲೇ ಇತ್ತು. ಶಿವರಾಜೇಂದ್ರ ಬಾಬು ಅವರ ಹೆಂಡತಿ, ಇಬ್ಬರು ಮಕ್ಕಳು ಅಸಹಜ ರೀತಿಯಲ್ಲಿ ಸತ್ತಿದ್ದರು. ಇನ್ನೂ ತನಿಖೆ ನಡೆಯುತ್ತಲೇ ಇತ್ತು. ಅವರ ಉಳಿದಿದ್ದ ಮಗ ವಿದೇಶದಿಂದ ಬಂದಿರಲಿಲ್ಲ. ಅಂದನಪ್ಪ ನೇ ಈಗ ಸತ್ಯದ ಮನೆಯ ಉಸ್ತುವಾರಿ. ಹಾಗಾಗಿ ಅವನ ಮೇಲೆ ಅನುಮಾನ. ಅವನ ಸಂಬಳ ಜಮಾ ಆಗುತ್ತಿದ್ದದ್ದು ಹೇಗೆ..?
ಮಹೇಂದ್ರ ಬಾಬು ಹಾಗೂ ಪದ್ಮಿನಿ ದಂಪತಿಗಳಿಗೆ ಮದುವೆಯಾಗಿ 10 ವರ್ಷವಾದರೂ ಮಕ್ಕಳಿರಲಿಲ್ಲ. ಮಹೇಂದ್ರ ಬಾಬು ಅವರ ತಮ್ಮ ಜೀವನ್ ಅವರ ಜೊತೆಯಲ್ಲಿಯೇ ಇದ್ದ. ಅವನ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದ್ದರು. ಪದ್ಮಿನಿಯ ತಂಗಿ ಚೈತ್ರಳಿಗೆ ಜೀವನ್ ಮೇಲೆ ಪ್ರೇಮವಿತ್ತು.
ಆದಿತ್ಯ ತಡಕಲ್ ಇತಿಹಾಸ ಉಪನ್ಯಾಸಕರಾಗಿದ್ದವರು ಅವರ ಪತ್ನಿ ಕಾವ್ಯ. ಇಬ್ಬರಿಗೂ ವಯಸ್ಸಿನ ಅಂತರ ಬಹಳವಿತ್ತು. ಸಮಾನಾಸಕ್ತರೂ ಆಗಿರಲಿಲ್ಲ.
ಪ್ರಭುಶಂಕರ್ ಇತಿಹಾಸ ವಿಷಯದ ಅತಿಥಿ ಉಪನ್ಯಾಸಕ. ಅವನ ಕೆಲಸ ಖಾಯಂ ಆಗಿರಲಿಲ್ಲ. ಆತನ ತಂದೆ, ತಾತನ ಆಸ್ತಿ ಯಥೇಚ್ಛವಾಗಿತ್ತು. ಬೇರೆ ಮೂಲಗಳಿಂದ ಆದಾಯವೂ ಇತ್ತು. ಕೆಲಸ ಕೇವಲ ಆತ್ಮತೃಪ್ತಿಗಾಗಿ ಮಾತ್ರವಾಗಿತ್ತು. ವೃತ್ತಿಯ ಜೊತೆಗೆ ಕರಾಟೆ, ಸಾಹಸದ ಪ್ರವೃತ್ತಿಯೂ ಇತ್ತು.
ಮೈತ್ರಿ ತಂದೆ-ತಾಯಿ ಪದ್ಮಿನಿ ಕುಟುಂಬಕ್ಕೆ ಆತ್ಮೀಯರು. ಪದ್ಮಿನಿಯನ್ನು ಅಕ್ಕ ಎಂದು ಸಂಭೋಧಿಸುತ್ತಿದ್ದಳು. ಜೀವನ್ ಹಾಗೂ ಪ್ರಭುಶಂಕರ್ ಇಬ್ಬರೂ ಪದ್ಮಿನಿಯ ಮೇಲೆ ಕಣ್ಣಿಟ್ಟಿದ್ದರು. ನಿಜಕ್ಕೂ ಮೈತ್ರಿಗೆ ಯಾರ ಮೇಲೆ ಪ್ರೀತಿ ಇತ್ತು..?
ಇವರಿಷ್ಟು ಜನರು ಎಲ್ಲಿಗಾದರೂ ಪ್ರವಾಸ ಹೋಗಬೇಕು ಎಂದಾಗ ಪ್ರಭುಶಂಕರ್ ಸೋನಾಪುರವನ್ನು ಸೂಚಿಸಿದ. ಅಲ್ಲಿನ ವಿಶೇಷತೆಗಳ ಬಗ್ಗೆ ತಿಳಿಸಿದ್ದ. ಆದರೆ ಉಳಿಯುವ ವ್ಯವಸ್ಥೆ ಸರಿಯಾಗಿಲ್ಲವೆಂದು ಹೇಳಿದರೂ ನಗರದ ಜಂಜಾಟದಿಂದ ದೂರವಾಗಿ ಪ್ರಕೃತಿ ಸೌಂದರ್ಯದಲ್ಲಿ ಮೈಮರೆಯಲು ಎಲ್ಲರೂ ಅಲ್ಲಿಗೆ ಹೊರಟರು. ಹತ್ತಿರದಲ್ಲಿಯೇ ಇದ್ದ ಮೈಲಾರಿಪುರದಲ್ಲಿ ಉಳಿಯುವ ವ್ಯವಸ್ಥೆ ಮಾಡಿಕೊಂಡರು
ಇವರೆಲ್ಲರ ಜೊತೆ ಅಡುಗೆಗೆಂದು ಪಾಂಡು ಹಾಗೂ ಆತನ ಪತ್ನಿ ಸೇರಿಕೊಂಡರು.
ಇವರೆಲ್ಲರೂ ಊಹಿಸಿರದ ಘಟನೆಯೊಂದು ನಡೆಯಿತು. ವಿಪರೀತ ಮಳೆಯ ಕಾರಣ ಹೋಗುತ್ತಿದ್ದ ವಾಹನ ಕೆಟ್ಟು ಅವರೆಲ್ಲರೂ ಸೋನಾಪುರದ ಶಿವ ನಿಲಯದಲ್ಲಿ ಉಳಿಯುವಂತಾಯಿತು. ಇದಕ್ಕೆ ಕಾರಣ ನಿಗೂಢ ಮುದುಕ.
ಇದುವರೆಗೂ ಯಾವುದೇ ಸಾಕ್ಷಿ ಸಿಕ್ಕಿರದ ಮಾರ್ತಾಂಡ ನಿಗೆ ಇದರ ಇರುವಿಕೆ ಪುಷ್ಟಿ ನೀಡಿತು. ಮಳೆಯ ಕಾರಣದಿಂದ ಸೇತುವೆಗಳ ಸಂಪರ್ಕ ಕಡಿದು ಹೋಗಿ ಮತ್ತಷ್ಟು ಕಾಲ ಅಲ್ಲಿಯೇ ನಿಲ್ಲುವಂತಾದಾಗ ಹಲವಾರು ವಿಶೇಷ, ನಿಗೂಢ ಸಂಗತಿಗಳು ಜರುಗುತ್ತಾ ಸಾಗುತ್ತವೆ.
ಶಿವನಿಲಯದಲ್ಲಿ ಸದಾ ಬರುತ್ತಿದ್ದ ಶಿವಸ್ತುತಿ ನಿಂತು ಹೋಗಿದ್ದಕ್ಕೆ ಕಾರಣವೇನು..? ಪ್ರಭುಶಂಕರ ರಹಸ್ಯ ಕಂಡುಹಿಡಿದದ್ದು ಹೇಗೆ..?
ಇದಲ್ಲದರ ನಡುವೆ ಪದ್ಮಿನಿ ನಿಗೂಢವಾಗಿ ಕಾಣೆಯಾಗುತ್ತಾಳೆ. ಅದಕ್ಕೆ ಕಾರಣ ಅವರಷ್ಟೂ ಜನರಲ್ಲಿಯೇ ಒಬ್ಬರು. ಏಕೆಂದರೆ, ಹೊರಗಿನಿಂದ ಬೇರೆ ಯಾರೂ ಅಲ್ಲಿಗೆ ಬರಲು ಸಾಧ್ಯವಿರಲಿಲ್ಲ. ಮಾರ್ತಾಂಡನಿಗೆ ಈ ಅವಕಾಶ ಮತ್ತೊಂದು ವಿಚಾರ ತಿಳಿಯಲು ದಾರಿ ಮಾಡಿಕೊಡುತ್ತದೆ. ಆತ ಕಾವ್ಯಳ ಬೆನ್ನು ಬೀಳಲು ಕಾರಣವೇನು..? ಪದ್ಮಿನಿ ಸಿಕ್ಕಳೇ..?
ಶಿವರಾಜೇಂದ್ರ ಬಾಬು ಅವರ ಹಾಗೂ ಕುಟುಂಬದವರ ಅಂತ್ಯ ಹೇಗಾಗಿತ್ತು..?
ಆದಿತ್ಯ ತಡಕಲ್ ಹಾಗೂ ಕಾವ್ಯ ಅವರ ದಾಂಪತ್ಯದ ಮೇಲೆ ಈ ಪ್ರವಾಸ ಹೇಗೆ ಪರಿಣಾಮ ಬೀರಿತು..?
ಮಹೇಂದ್ರ ಬಾಬು ಯಾವುದಾದರೂ ಮಗುವನ್ನು ದತ್ತು ತೆಗೆದುಕೊಳ್ಳಲು ಅಥವಾ ಜೀವನ್ ನನ್ನೇ ತಮ್ಮ ವಾರಸುದಾರ ಎಂದು ಘೋಷಿಸಲು ಹೊರಟಾಗ ಪದ್ಮಿನಿ ಒಪ್ಪದೇ ತೀವ್ರವಾಗಿ ವಿರೋಧಿಸಿದ್ದೇಕೆ..? ಈ ಪ್ರವಾಸ ಮುಗಿಯುವಷ್ಟರಲ್ಲಿ ಯಾರ ನಿರ್ಧಾರ ಬದಲಾಯಿತು..?
ಚೈತ್ರ, ಜೀವನ್ ಅನ್ನು ಪ್ರೀತಿಸುತ್ತಿದ್ದರೆ ಜೀವನ ಮೈತ್ರಿಯ ಬೆನ್ನು ಬಿದ್ದಿದ್ದ. ಮೈತ್ರಿ ಪ್ರಭುಶಂಕರನಿಗೆ ಮನಸೋತಿರುತ್ತಾಳೆ. ಯಾರು ಯಾರಿಗೆ ಜೋಡಿಯಾಗುತ್ತಾರೆ..?
ಶಿವರಾಜೇಂದ್ರ ಬಾಬು ಅವರು ತಮ್ಮ ಗುರಿ ಸಾಧಿಸಲು ಪ್ರಭುಶಂಕರನನ್ನೆ ಆಯ್ಕೆ ಮಾಡಿಕೊಂಡದ್ದು ಹೇಗೆ..? ಏಕೆ..?
ಪೊಲೀಸ್ ಆದರೂ ಮಾರ್ತಂಡ ಕಲ್ಲಂಗಡಿಯ ವ್ಯಕ್ತಿತ್ವ ಅದಕ್ಕೆ ತಕ್ಕನಾದುದಲ್ಲ. ಆತನ ಕರಾಳ ಮುಖ ಹೇಗಿತ್ತು ಅದಕ್ಕೆ ಸಹಕಾರ ನೀಡಿದವರು ಯಾರು.?
ಹಲವಾರು ರೋಚಕ, ನಿಗೂಢ ವಿಚಾರಗಳಿಂದ ಕಾದಂಬರಿ ಆಸಕ್ತಿಕರವಾಗಿ ಓದಿಸಿಕೊಂಡು ಹೋಗುತ್ತದೆ.
ಈ ಕಾದಂಬರಿ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದುದರಿಂದ ಓದುಗರಿಗೆ ನೆನಪಿಸಲೇನೋ ಎಂಬಂತೆ ಹಲವಾರು ವಿಚಾರಗಳನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ ಹಾಗೂ ನೆನಪಿಸುತ್ತಾರೆ. ಕಾದಂಬರಿಯ ಓದಿನ ವೇಗಕ್ಕೆ ಇದು ಕೆಲವೊಮ್ಮೆ ತಡೆಯೊಡ್ಡುತ್ತದೆ. ಒಂದೇ ಬಾರಿಗೆ ಇದನ್ನು ಓದಲು ಹೊರಟವರಿಗೆ ಈ ಮಾಹಿತಿಗಳು ಅನವಶ್ಯಕ ಎಂದೆನಿಸಬಹುದು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಓದುವುದು ಒಳ್ಳೆಯದು.
ನಿಗೂಢ ನಡೆಯಲ್ಲಿ ಯಾವುದು ಸತ್ಯ ಹಾಗೂ ಯಾವುದು ಸುಳ್ಳು..? ಅದನ್ನು ಕಂಡುಹಿಡಿಯುವುದು ಯಾರು, ಹೇಗೆ ಎಂಬುದು ಹಂತಹಂತವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ.
ಇಡೀ ಕಾದಂಬರಿಯ ಕುರಿತು ಹೇಳಿದರೂ ಮುಖ್ಯವಾದದನ್ನು ಉಲ್ಲೇಖಿಸಲೇಬೇಕು. ಅದೆಂದರೆ ದೇಶಭಕ್ತಿ. ಯಾರ ದೇಶಭಕ್ತಿ ಯಾವ ರೀತಿಯಲ್ಲಿತ್ತು ಎಂಬುದನ್ನು ನೀವೇ ಓದಿ ಅರಿಯಿರಿ.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ