"ಇಲ್ಲಿ ನೆರೆದಿರುವ ಎಷ್ಟು ಜನ ಕಥೆ ಕೇಳಲು ಸಿದ್ದರಾಗಿದ್ದೀರಿ..?" ಎಂಬ ಶಾರ್ವರಿಯ ಮಾತಿಗೆ ಸಭಾಂಗಣದಲ್ಲಿದ್ದ ಎಲ್ಲರೂ ಕೈ ಎತ್ತಿದ್ದರು. ಆದರೆ, ಒಬ್ಬನ ಹೊರತಾಗಿ. "ನೀವಿನ್ನೂ ಕತೆ ಕೇಳಲು ಸಿದ್ಧವಾಗಿಲ್ಲವಾ.. ಅಥವಾ ಕತೆ ಆಸಕ್ತಿಯೇ ಇಲ್ಲದೆ ಸುಮ್ಮನೆ ಟೈಮ್ ಪಾಸ್ ಗೆ ಎಂದು ಬಂದಿದ್ದೀರಾ..??" ಎಂದು ಆಕೆ ಪ್ರಶ್ನಿಸಿದಾಗ ಎಲ್ಲರೂ ಯಾರಿಗೆ ಎಂದು ಸುತ್ತ ಮುತ್ತ ಹುಡುಕುತ್ತಿದ್ದರು.
"ರೀ, ಮಿಸ್ಟರ್ ನಿಮ್ಮನ್ನೇ.. ಕೈ ಎತ್ತದ ನಿಮ್ಮನ್ನೇ ನಾನು ಕೇಳುತ್ತಾ ಇರುವುದು" ಎಂದಾಗ ಪ್ರದ್ಯುಮ್ನ ಎದ್ದು ನಿಂತು ಖ್ಯಾತ ಕಥೆಗಾರ್ತಿ ಶಾರ್ವರಿಗೆ ಕೇಳಿದ ಮೊದಲ ಪ್ರಶ್ನೆ "ನಾನ್ಯಾಕೆ ನಿಮ್ಮ ಕಥೆ ಕೇಳಬೇಕು ? ಅಷ್ಟಕ್ಕೂ ಕಥೆ ಕೇಳಲು ಆಸಕ್ತಿ ಇದೆಯಾ ಎಂದು ಪ್ರಶ್ನಿಸುವ ಬದಲಾಗಿ, ಕಥೆ ಹೇಳುತ್ತಾ ಕೇಳುಗರಲ್ಲಿ ಆಸಕ್ತಿ ಹುಟ್ಟಿಸಬೇಕೇ ಹೊರತು ಆಸಕ್ತಿ ಇರುವವರಿಗೆ ಮಾತ್ರ ಕತೆ ಹೇಳುವುದಲ್ಲ.. ಹಾಗಾದಲ್ಲಿ ನೀವು ಹೇಳುವ ಕತೆ ಎಷ್ಟು ಜನರಿಗೆ ತಲುಪಲು ಸಾಧ್ಯ..?" ಎಂದು ಪ್ರಶ್ನೆಯ ಸರಮಾಲೆಯನ್ನೇ ಶಾರ್ವರಿಯ ಎದುರಿಗಿಟ್ಟನು. ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಆತನ ತಾಯಿ ಆತನ ಕೈ ಜಗ್ಗಿಸಿ ನಿಲ್ಲಿಸು.. ನಿಲ್ಲಿಸು ಎಂಬಂತೆ ಸನ್ನೆ ಮಾಡುತ್ತಿದ್ದರೂ ಆತ ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ತನ್ನ ಪ್ರಶ್ನೆಗಳನ್ನೇ ಮುಂದುವರಿಸುತ್ತಿದ್ದುದನ್ನು ಕಂಡು ಕೊನೆಗೆ ಅವರೇ ಎದ್ದು ನಿಂತು ಆತನನ್ನು ತಡೆದರು.
"ಸ್ಸಾರಿ, ಅವನು ಸ್ವಲ್ಪ ಹೀಗೆಯೇ.. ಎಲ್ಲಿ ಹೋದರೂ ಹೀಗೆಯೇ ಅಧಿಕ ಪ್ರಸಂಗ ಮಾಡಿ ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಾನೆ. ನಾನು ನಿಮ್ಮ ದೊಡ್ಡ ಅಭಿಮಾನಿ. ನಿಮ್ಮ 100 ನೇ ಪುಸ್ತಕದ ಬಿಡುಗಡೆಗೆ ನಿಮ್ಮನ್ನು ನೋಡಿ ಮಾತನಾಡಿಸಲು ಬಹಳ ಕಾತುರಳಾಗಿದ್ದೆ. ಒಬ್ಬಳನ್ನೇ ಕಳುಹಿಸಲು ಇಷ್ಟ ಪಡದ ಅವನೂ ನನ್ನೊಡನೆ ಬಂದಿದ್ದಾನೆ. ಅವನಿಗೆ ಕತೆಗಳೆಂದರೆ ಅಷ್ಟಕ್ಕಷ್ಟೇ.. " ಎಂದು ಅವನಮ್ಮ ಹೇಳಿದಾಗ ಶಾರ್ವರಿಯವರು ನಗುತ್ತಾ "ತೊಂದರೆಯಿಲ್ಲ.. ನನ್ನ ಬದುಕಿನ ಅನುಭವದಷ್ಟು ಅವನಿಗೆ ವಯಸ್ಸಾಗಿಲ್ಲ. ಆದರೆ, ಹಾಗೆಂದು ಅವನ ಪ್ರಶ್ನೆಯನ್ನು ಸುಮ್ಮನೆ ನಿರಾಕರಿಸಲು ಅಥವಾ ಪಕ್ಕಕ್ಕಿಡಲು ಸಾಧ್ಯವಿಲ್ಲ. ಅವನ ಮಾತಿನಲ್ಲಿ ತಪ್ಪು ಕಾಣುತ್ತಿಲ್ಲ. ಬದಲಾಗಿ ಅವನ ಕುತೂಹಲ ಕಾಣುತ್ತಿದೆ. ಅದಕ್ಕೆ ಉತ್ತರಿಸುವೆ" ಎನ್ನುತ್ತಾ ತಮ್ಮ ಆಲೋಚನೆ ಹಾಗೂ ವಯಸ್ಸಿನ ಪ್ರಬುದ್ಧತೆಯನ್ನು ತಮ್ಮ ಮಾತುಗಳ ಮೂಲಕ ತೋರಿದರು.
ಅದಾದ ನಂತರ ತಮ್ಮ ಮಾತುಗಳನ್ನು ಶುರು ಮಾಡಿದರು. " ಕತೆ ಬದುಕಿನಲ್ಲಿ ಯಾಕಷ್ಟು ಮುಖ್ಯವಾಗುತ್ತದೆ ಎನ್ನುವುದಕ್ಕಿಂತ ನಮಗೆ ಕತೆಗಳೆಂದರೆ ಏಕೆ ಆಸಕ್ತಿ ಗೊತ್ತೇ..??
ನಮ್ಮದೇ ಬದುಕನ್ನು ಬೇರೆಯವರ ಕನ್ನಡಕದಲ್ಲಿ ಕಂಡರೆ ಅಥವಾ ನಾವು ನಮ್ಮ ಕಣ್ಣಿನ ಮೂಲಕ ಬೇರೆಯವರ ಬದುಕನ್ನು ಕಂಡರೆ ಕೆಲವು ಬಣ್ಣ ಬಣ್ಣದ ಬದುಕುಗಳು ಕಾಣುತ್ತವೆ. ಬೇರೆಯವರ ಬದುಕುಗಳು ಕತೆಗಳಾದಾಗ ಅವು ರುಚಿಕಟ್ಟಾದ ಭೋಜನದಂತೆ ಭಾಸವಾಗುತ್ತವೆ. ದಿನಾ ಅದೇ ಅನ್ನ, ಸಾರು ತಿನ್ನುವವರಿಗೆ ಮಸಾಲೆ ದೋಸೆ ಕಂಡಾಗ ಹೇಗೆ ಮನಸ್ಸು ಅದನ್ನೇ ಬಯಸುವುದೋ.. ಹಾಗೆ ನಮ್ಮ ಬದುಕಿನಲ್ಲಿ ಇಲ್ಲದ್ದನ್ನು ಹಾಗೆಯೇ ನಾವು ಬದುಕಬೇಕು ಎನ್ನಿಸಿದ್ದನ್ನು ಕತೆಯಲ್ಲಿ ಕಂಡು ಅಲ್ಲಿ ನಮ್ಮನ್ನೇ ನಾವು ಕಲ್ಪಿಸಿಕೊಳ್ಳುತ್ತಾ ಹೋಗುತ್ತೇವೆ. ಆಗ ಕತೆಗಳು ನಮ್ಮ ಕನಸಿನ ಬದುಕಾಗುತ್ತವೆ. ವಾಸ್ತವಕ್ಕಿಂತ ಕಲ್ಪನೆಗಳು, ಕತೆಗಳು ವರ್ಣರಂಜಿತವಾಗಿ ತೋರುತ್ತವೆ. ಆಸಕ್ತಿ ಹೆಚ್ಚುತ್ತಾ ಹೋಗುತ್ತದೆ. ಕೆಲವರು ತಮ್ಮ ಕಲ್ಪನೆಗಳಿಗೆ ಗರಿ ಹಚ್ಚಿ ಕತೆಗಳನ್ನು ಕಟ್ಟುತ್ತಾ.. ಹೇಳುತ್ತಾ.. ಬರೆಯುತ್ತಾ ಹೋದರೆ, ಹಲವರು ಅವುಗಳನ್ನು ಕಂಡು, ಕೇಳಿ, ಓದಿ ಕಲ್ಪನೆಗಳನ್ನು ಗರಿಗೆದರಿಸಿಕೊಳ್ಳುತ್ತಾರೆ.
ಪ್ರತಿಯೊಬ್ಬನೊಳಗೂ ಒಂದು ಕತೆ ಇರುತ್ತದೆ. ಆ ಕತೆ ಅವರಿಂದ ಬಿಡುಗಡೆ ಪಡೆಯುವುದು ಅಥವಾ ಅವಿತು ಕುಳಿತುಕೊಳ್ಳುವುದು ಎರಡಕ್ಕೂ ಅವರವರೇ ಕಾರಣ.
ಇನ್ನು ಕತೆ ಕೇಳುವ ಆಸಕ್ತರಿಗೆ ಮಾತ್ರ ಕತೆ ಹೇಳಬೇಕು ಎಂಬುದು ನನ್ನ ಉದ್ದೇಶವಷ್ಟೇ.. ಏಕೆಂದರೆ, ಆಸಕ್ತಿ ಎಂಬುದು ಇಂದಿಗೂ ಹೊರಗಿನಿಂದ ಹುಟ್ಟುವುದಲ್ಲ. ತಮ್ಮ ಮನಸ್ಸಿನಿಂದ ಮುಡಿಸಿಕೊಳ್ಳದ ಹೊರತು ಯಾವ ಆಸಕ್ತಿಯೂ ತನ್ನಿಂದ ತಾನೇ ಉದ್ಭವಿಸಲಾರದು. ನೀನು ಕತೆ ಕೇಳಲು ಆಸಕ್ತಿ ಇಲ್ಲವೆಂದು ತೋರಿಸಿಕೊಂಡರೂ ನಿನ್ನ ಸುಪ್ತ ಮನಸ್ಸಿನಲ್ಲಿ ಕತೆ ಎಂದರೆ ಹೇಗಿರಬಹುದು.. ಕತೆ ಎಂದರೆ.. ಈ ಕತೆ ಯಾರನ್ನು ನೆನಪಿಸಬಹುದು ಎಂಬುದನ್ನು ಆಲೋಚಿಸುತ್ತಲೇ ಒಲ್ಲದ ಮನಸ್ಸಿನಿಂದ ಕತೆ ಕೇಳಲು ಆರಂಭಿಸಿರುತ್ತೀಯ. ಕತೆ ಓದುವವರಿಗೆ, ಕಥೆ ಕೇಳುವುದು ರುಚಿಸದೇ ಇರಬಹುದು. ಕತೆ ಎಂಬುದು ಎಲ್ಲೆಡೆಯೂ ಇದೆ. ಅದನ್ನು ಕಾಣುವ, ಕೇಳುವ ಮನಸ್ಸಿರಬೇಕಷ್ಟೇ..
ನನ್ನ ಕತೆಗಳು ಎಷ್ಟು ಜನರಿಗೆ ತಲುಪಬಹುದು ಎಂಬುದಕ್ಕಿಂತ ನನಗೆ ಒಂದು ಕತೆ ಒಬ್ಬರ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂಬುದನ್ನು ಆಲೋಚಿಸುತ್ತೇನೆ. 100 ಜನ ಕತೆ ಕೇಳಿ, 90 ಜನ ಅದನ್ನು ಮರೆತು ಮುಂದಕ್ಕೆ ಸಾಗುವುದಕ್ಕಿಂತಲೂ.. 10 ಜನ ಕತೆ ಕೇಳಿ 10 ಜನರೂ ಪರಿಣಾಮಕಾರಿಯಾಗಿ ಅದನ್ನು ಬಳಸಿಕೊಳ್ಳುವುದೋ ಅಥವಾ ಸಾರ್ಥಕವಾಗಿ ಉಪಯೋಗಿಸುವುದೋ ಮಾಡಿದಾಗ ಅದಕ್ಕೊಂದು ಸಾರ್ಥಕ ಭಾವ ಬರುತ್ತದೆ.
ಕತೆ ಹೊಡೆದಿದ್ದು ಸಾಕು ಇನ್ನು ಕತೆ ಹೇಳಿ ಎಂದು ಬಹಳ ಜನ ಬೈದುಕೊಳ್ಳುತ್ತಿರಬಹುದು. ಕತೆ ಶುರು ಮಾಡೋಣ್ವಾ..? ಎಷ್ಟು ಜನ ಕಥೆ ಕೇಳಲು ಸಿದ್ದರಾಗಿದ್ದೀರಿ..?" ಎಂದಾಗ ಎಲ್ಲರೂ ತಮ್ಮ ಕೈಯೆತ್ತಿದ್ದರು. ಪ್ರದ್ಯುಮ್ನನಂತೂ ತನ್ನ ಎರಡೂ ಕೈಗಳನ್ನು ಮೇಲೆತ್ತಿದ್ದ.
~ವಿಭಾ ವಿಶ್ವನಾಥ್

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ