ಭಾನುವಾರ, ಫೆಬ್ರವರಿ 3, 2019

ನಾಜೂಕಿನ ಹಸಿರು ಬಳೆಗಳು

ಗಾಜಿನ ಬಳೆಗಳು ಚೆಂದವೇ
ಆದರೆ ಈಗೀಗ ಪಟ್ಟಣದ
ಮಾಲ್ ಗಳಲ್ಲಿ ಇವು ದೊರಕುವುದಿಲ್ಲ

ಬಣ್ಣ ಬಣ್ಣದ ಪ್ಲಾಸ್ಟಿಕ್ ಬಳೆಗಳು
ಡಬ್ಬಿಯಲ್ಲಿ ರಾಶಿ ಬಿದ್ದಿವೆ ಜೀವವಿಲ್ಲದಂತೆ
ಆದರೆ ನನಗವು ಇಷ್ಟವೇ ಆಗುವುದಿಲ್ಲ

ಕಿಣಿ ಕಿಣಿ ಎಂದು ಸದ್ದು ಮಾಡುವ
ನನ್ನ ಓಡಾಟಕೆ ಜೀವ ತುಂಬುವ
ಗಾಜಿನ ಬಳೆಗಳು ಬಹಳವೇ ಇಷ್ಟ

ಆಡುವಾಗ ಒಡೆಯಬಹುದೆಂದು
ಗೆಳತಿಯರಂತೂ ಇದರಿಂದ ಬಹು ದೂರ
ಗಾಜು ಒಡೆಯದಿರಲು ಸಾಧ್ಯವೇ..?

ಇದು ಹಳೆಯ ಪ್ಯಾಷನ್ ಎನ್ನುತ್ತಾ
ಅಕ್ಕ ಗಾಜಿನ ಬಳೆಗಳಿಂದ ದೂರ..
ಹಿಂದಿನ ತಲೆಮಾರುಗಳಿಂದಲೂ ಸಹಾ..!

ಕೆಲಸಕ್ಕೆಂದು ಬಸ್ ನಲ್ಲಿ ಹೋಗುವಾಗ
ನೂಕುನುಗ್ಗಲಲ್ಲಿ ನುಜ್ಜುಗ್ಗುಜ್ಜಾಗುವುದೆಂದು
ಅಮ್ಮನೂ ಗಾಜಿನ ಬಳೆ ತೊಡುವುದಿಲ್ಲ..

ಆದರೆ ಅಜ್ಜಿಯ ಕೈ ತುಂಬೆಲ್ಲಾ
ಗಲಗಲಿಸುವ ಹಚ್ಚ ಹಸಿರು ಬಳೆಗಳು
ಹೆಣ್ತನಕೆ ಶೋಭಿಸುವ ಶುಭ ಕಳೆಗಳು

ಪಟ್ಟಣದಿಂದ ಬಂದಿಯೆ ಹಳ್ಳಿಗೆ
ಸಂಪ್ರದಾಯದ ಸೌಧದ ಮಡಿಲಿಗೆ
ಅಪರೂಪದ ಬಳೆಗಾರನೂ ಬಂದಿಹನು

ತರಹೇವಾರಿ ಬಳೆಗಳೆಲ್ಲವ ತಂದಿಹನು
ನನಗಂತೂ ಚುಕ್ಕಿಯ ಹಸಿರು ಬಳೆಗಳು
ಪುಟ್ಟಗೌರಿಗೆ ಪುಟ್ಟ ಬಳೆಯ ಅಲಂಕಾರ

ಒಡೆಯದ,ಸವೆಯದ ಬಳೆ ಏನು ಚೆಂದ?
ಒಡೆದರೆ ಸುಂದರ ಕಲಾಕೃತಿ ಮಾಡುವೆ
ಗಾಜಿನ ಬಳೆಗಳ ತೊಡದೆ ಬಿಡೆನು

ಅಜ್ಜಿಯಂದಳು ನಾಜೂಕಿನ ಬದುಕಿನಂತೆಯೇ
ಈ ಗಾಜಿನ ನಾಜೂಕಿನ ಬಳೆಗಳೂ..
ಸಂಭಾಳಿಸುವುದರ ಮೇಲೆ ನಿಂತಿದೆ ಬದುಕು

ಇಂದು ನಾನೂ ಬಳೆ ತೊಟ್ಟಿರುವೆ
ಅಜ್ಜಿಗೆ ಭಾಷೆಯನ್ನೂ ಕೊಟ್ಟಿರುವೆ
ಸಂಪ್ರದಾಯವ ಬಲಿ ನೀಡೆನೆಂದು

~ವಿಭಾ ವಿಶ್ವನಾಥ್
(ಚಿತ್ರ ಕೃಪೆ: ಶ್ರೀಮತಿ ಲತಾ ಜೋಷಿ)

ಸೋಮವಾರ, ಜನವರಿ 21, 2019

ನಮ್ಮ ಶಿಕ್ಷಣದ ಕಥೆ ನಿಮ್ಮ ಜೊತೆ..

ರೂಪಕವನ್ನು ವೀಕ್ಷಿಸಲು ಈ ಲಿಂಕ್ ಗೆ ಭೇಟಿ ನೀಡಿ. ಮಕ್ಕಳ ಅಭಿನಯವನ್ನು ಆನಂದಿಸಿ.

ಪಾತ್ರಗಳು:
1. ಕಿಟ್ಟಿ
2. ಕಿಟ್ಟಿಯ ತಾಯಿ
3. ರಾಜು
4. ರಾಜುವಿನ ತಾಯಿ
5. ರಾಜುವಿನ ತಂದೆ
6. ಹೂ ಮಾರುವ ಅಜ್ಜಿ

ದೃಶ್ಯ-01
-----------
(ಕಿಟ್ಟಿಯ ತಾಯಿ, ಕಿಟ್ಟಿ)

ಕಿಟ್ಟಿಯ ಅಮ್ಮ: ಕಿಟ್ಟಿ, ಏನ್ ಮಾಡ್ತಾ ಇದ್ದೀಯೋ ?

ಕಿಟ್ಟಿ: ಚಿತ್ರ ಬಿಡಿಸ್ತಾ ಇದ್ದೀನಿ ಕಣಮ್ಮಾ..

ಕಿಟ್ಟಿಯ ಅಮ್ಮ: ಯಾವಾಗ ನೋಡಿದ್ರೂ ಈ ಹಾಳಾದ ಚಿತ್ರ ಬಿಡಿಸ್ತಾನೇ ಕೂತಿರ್ತೀಯಾ. ಅದ್ಯಾವಾಗ ಓದಿಕೋತಿಯೋ..? ಗೊತ್ತಿಲ್ಲ..!
ಚಿತ್ರ ಬರಿಯೋದು ಬಿಟ್ರೆ ಕಥೆ ಪುಸ್ತಕ ಇಲ್ಲಾ ಅಂದ್ರೆ ಆಟ. ಇದೇ ಆಗೋಯ್ತು ಮೂರೊತ್ತು..
ಮುಂದಗಡೆ ಮನೆ ರಾಜೂನಾ ನೋಡಿ ಕಲಿತುಕೊಳ್ಳೋ, ಯಾವಾಗ್ಲೂ ಓದ್ತಾ ಇರ್ತಾನೆ. ನೀನೂ ಇದ್ದೀಯಾ ಬರೀ ದಂಡಕ್ಕೆ..

ಕಿಟ್ಟಿ: ಹೋಗಿ ಹೋಗಿ ಆ ಸೋಡಾಬುಡ್ಡಿ ತರಾ ಆಗು ಅಂತಾ ಹೇಳ್ತಾ ಇದ್ದೀಯಲ್ಲಮ್ಮ. ನಿಂಗೇನು ಬುದ್ದಿ ಇಲ್ವಾ..?

ಕಿಟ್ಟಿಯ ಅಮ್ಮ: ಬುದ್ದಿ ಇರೋದಕ್ಕೆ ಕಣೋ, ಹಂಗೆ ಹೇಳ್ತಾ ಇರೋದು. ಅವ್ನು ಯಾವಾಗ್ಲೂ ಫಸ್ಟ್ ರ್ಯಾಂಕ್. ನೀನೂ ಇದ್ದೀಯಾ..

ಕಿಟ್ಟಿ: ನಾನೂ ಫಸ್ಟ್ ಬರ್ತೀನಲ್ಲಮ್ಮಾ. ಅದ್ಯಾಕೆ ನಿನ್ನ ಕಣ್ಣಿಗೆ ಕಾಣಿಸೋಲ್ಲ..?

ಕಿಟ್ಟಿಯ ಅಮ್ಮ: (ವ್ಯಂಗ್ಯವಾಗಿ) ನೀನೂ ಫಸ್ಟ್ ಬರ್ತೀಯಾಪ್ಪಾ, ಆದರೆ ಫಸ್ಟ್ ಇಂದ ಅಲ್ಲ ಲಾಸ್ಟ್ ಇಂದ ಅಲ್ವಾ..?

ಕಿಟ್ಟಿ: ಬರೀ ಓದೋ ವಿಷಯಾನೇ ಹೇಳ್ತೀಯಲ್ಲಮ್ಮಾ.. ನಾನು ಎಲ್ಲಾ ಗೇಮ್ಸ್ ಅಲ್ಲೂ ಫಸ್ಟ್, ಡ್ರಾಯಿಂಗ್ ಅಲ್ಲೂ ಫಸ್ಟ್, ಜನರಲ್ ನಾಲೆಡ್ಜ್ ಅಲ್ಲೂ ಫಸ್ಟ್

ಕಿಟ್ಟಿಯ ಅಮ್ಮ: ಆದ್ರೇನಪ್ಪಾ ಬಂತು ಪ್ರಯೋಜನ? ನಿಂಗೆ ಮಾರ್ಕ್ಸ್ ಏ ಬರಲ್ವಲ್ಲೋ.. ನಮ್ಮ ಕಾಲದಲ್ಲಿ ನಿಮ್ಮಷ್ಟು ಓದ್ಸಿದ್ರೆ ನಾವು ಎಲ್ಲೋ ಇರ್ತಿದ್ವಿ.

ಕಿಟ್ಟಿ: (ವ್ಯಂಗ್ಯವಾಗಿ) ಅದ್ಕೆ ಓದ್ಸಿಲ್ಲ ಬಿಡು
(ಗಂಭೀರವಾಗಿ) ಅಮ್ಮಾ ಯಾವಾಗ್ಲೂ ಯಾಕೆ ಕಂಪೇರ್ ಮಾಡ್ಕೋತೀಯಾ? ಅವರಿಗೆ ಎಷ್ಟು ಸಾಧ್ಯಾನೋ ಅಷ್ಟು ಓದ್ಸಿದ್ದಾರೆ.
ಸರಿ,ಸರಿ ನಂಗೆ ಆಟ ಆಡೋಕೆ ಟೈಮ್ ಆಯ್ತು. ನಾನು ಆಟಕ್ಕೆ ಹೋಗ್ತೀನಿ. ಬಾಯ್
[ಕಿಟ್ಟಿ ಓಡುವನು, ಅಮ್ಮನೂ ಇತ್ತ ಬರುವಳು]

ದೃಶ್ಯ -2 
-------------
[ರಾಜುವಿನ ಅಪ್ಪ, ರಾಜುವಿನ ಅಮ್ಮ, ರಾಜು]
(ರಾಜುವಿನ ಮನೆ)

ರಾಜುವಿನ ಅಮ್ಮ: ರಾಜು,ರಾಜು. ಏನ್ ಮಾಡ್ತಾ ಇದ್ದೀಯೋ?

ರಾಜುವಿನ ಅಪ್ಪ: ಏನೇ ನಿಂದು..? ಅವ್ನು ಓದಿಕೊಳ್ತಾ ಇದ್ದಾನೆ.  ಏನಾಗ್ಬೇಕು ನಿಂಗೆ?

ರಾಜುವಿನ ಅಮ್ಮ: ಅಯ್ಯೋ, ಮಾರ್ಕೆಟ್ ಗೆ ಹೋಗಬೇಕಿತ್ತು ಕಣ್ರೀ. ಅದಕ್ಕೇ ಕೂಗಿದೆ. ಪೂಜೆಗೆ ಹೂವು ಹಣ್ಣು ಎಲ್ಲಾ ತರಬೇಕಿತ್ತು.

ರಾಜುವಿನ ಅಪ್ಪ: ಓದೋ ಹುಡುಗನಿಗ್ಯಾಕೆ ಹೇಳ್ತಿಯಾ ಅದನ್ನೆಲ್ಲಾ. ಅವನು 5 ನೇ ಕ್ಲಾಸು. ಅವ್ನಿಗೆಲ್ಲಿದೆಯೋ ಟೈಮು?
ಬೆಳಿಗ್ಗೆ ಎದ್ದ್ರೆ ಯೋಗಾಸನ, ಆಮೇಲೆ ಮ್ಯಾಥ್ಸ್ ಟ್ಯೂಷನ್, ಆಮೇಲೆ ಸ್ಕೂಲು, ಸಂಜೆ ಸ್ವಿಮ್ಮಿಂಗು ಆಮೇಲೆ ಅಬ್ಯಾಕಸ್  ಕ್ಲಾಸ್ ಕೊನೆಗೆ ಸೈನ್ಸ್ ಟ್ಯೂಷನ್.. ಅವ್ನು ಓದ್ಕೊಳ್ಳಿ ಬಿಡು. ನಾನೇ ತರ್ತೀನಿ ಬ್ಯಾಸ್ಕೆಟ್ ಕೊಡು.

ರಾಜುವಿನ ಅಮ್ಮ: ನೀವು ಹೀಗಂದು ಅಂದು ಅವನನ್ನು ಹಾಳು ಮಾಡಿದ್ದೀರ. ಅವನಿಗೆ ಸಕ್ಕರೆ ಯಾವುದು ಉಪ್ಪು ಯಾವುದು ಅಂತಾ ವ್ಯತ್ಯಾಸಾನೇ ಗೊತ್ತಿಲ್ಲ. ಮೊನ್ನೆ ಏನಾಯ್ತು ಗೊತ್ತಾ?

ರಾಜುವಿನ ಅಪ್ಪ: ಗೊತ್ತಿಲ್ಲ ಕಣೇ. ಹೇಳಿದ್ರೆ ತಾನೇ ಗೊತ್ತಾಗೋದು..

ರಾಜುವಿನ ಅಮ್ಮ: ಹೇಳ್ತೀನಿ ಕೇಳಿ.. ಮೊನ್ನೆ ಏನೋ ಕೆಲಸ ಮಾಡ್ತಾ ಇದ್ದೆ. ಸಾರಿಗೆ ಒಂದು ಸೌಟು ಉಪ್ಪು ಹಾಕು ಅಂದರೆ ಸಕ್ಕರೆ ಹಾಕಿ ಪಾಯಸ ಮಾಡಿ ಇಟ್ಟಿದಾನೆ.

ರಾಜುವಿನ ಅಪ್ಪ: ಹೌದೇನೋ ರಾಜು?

ರಾಜು: (ಮುಗ್ದವಾಗಿ) ಎರಡೂ ವೈಟ್ ಕಲರ್ ಇತ್ತು ಪಪ್ಪಾ, ನಂಗೆ ಗೊತ್ತಾಗಲೇ ಇಲ್ಲ. ಅಮ್ಮ ಆ ಡಬ್ಬಿಗಳ ಮೇಲೆ ಚೀಟೀನೇ ಅಂಟಿಸಿರಲಿಲ್ಲಾ

ರಾಜುವಿನ ಅಮ್ಮ:(ತಲೆ ಚಚ್ಚಿಕೊಳ್ಳುವಳು)

ರಾಜುವಿನ ಅಪ್ಪ: ಹೋಗ್ಲಿ ಬಿಡೆ ಮುಂದೆ ಸರಿಯಾಗ್ತಾನೆ

ರಾಜುವಿನ ಅಮ್ಮ: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಅಂತಾರಲ್ಲ ಹಾಗೇ. ಇವಾಗ ಕಲಿಯದೇ ಇರೋನು ಮುಂದೆ ಕಲೀತಾನಾ.. ಎಲ್ಲಾ ಈಗಿನ ಇಂಗ್ಲೀಷ್ ಸ್ಕೂಲ್ ಗಳ ಪ್ರಭಾವ.

ರಾಜುವಿನ ಅಪ್ಪ: ಇವಾಗ ಏನು ಮಾಡ್ಬೇಕು ಅಂತೀಯೇ ?

ರಾಜುವಿನ ಅಮ್ಮ: ಅವನನ್ನು ಟ್ಯೂಷನ್, ಅಬ್ಯಾಕಸ್ ಎಲ್ಲಾ ಬಿಡಿಸಿ, ಎಲ್ಲಾ ಮಕ್ಕಳ ತರ ಅವನೂ ಆಟ ಆಡಿಕೊಂಡು ಇರಲಿ.

ರಾಜುವಿನ ಅಪ್ಪ: ಅವನೂ ದಿನಾ ಆಟ ಆಡ್ತಾನಲ್ಲೇ..!?

ರಾಜುವಿನ ಅಮ್ಮ: ಯಾವಾಗ ಆಡ್ತಾನೆ? ಅವನು ರೂಂ ಬಿಟ್ಟು ಹೊರಗಡೆ ಹೋಗೋದನ್ನೇ ನಾನು ನೋಡಿಲ್ಲ.

ರಾಜು: ದಿನಾ ಕ್ರಿಕೆಟ್, ಫುಟ್ ಬಾಲ್ ಆಡ್ತೀನಲ್ಲಮ್ಮಾ..

ರಾಜುವಿನ ಅಮ್ಮ: (ಆಶ್ಚರ್ಯದಿಂದ) ಯಾವಾಗ್ಲೋ..? ಟ್ಯೂಷನ್ ಗೆ ಹೋದಾಗ ಅಲ್ಲಿ ಮಕ್ಕಳ ಜೊತೆಗೆ ಆಟ ಆಡ್ತೀಯೇನೋ? ಯಾವ,ಯಾವ ಆಟ ಆಡ್ತೀರೋ..?
ನಂಗೆ ಹೇಳ್ಲೇ ಇಲ್ವಲ್ಲೋ ಇದನ್ನ

ರಾಜು: ಅಯ್ಯೋ ಅಮ್ಮ.. ಅಲ್ಲಿ ಎಲ್ಲಿ ಆಟ ಆಡೋಕಾಗುತ್ತೆ? ದೊಡ್ಡ ದೊಡ್ಡ ಬಿಲ್ಡಿಂಗ್ ಮಾತ್ರ ಇರೋದು. ಫೀಲ್ಡ್ ಏ ಇಲ್ಲ, ರೋಡಲ್ಲಿ ಆಡ್ಬೇಕಾಗುತ್ತೆ ಅಷ್ಟೇ.

ರಾಜುವಿನ ಅಪ್ಪ: ನಾವಾದ್ರೇ ರೋಡಲ್ಲೂ ಆಡ್ತಾ ಇದ್ವಿ. ಆ ವೆಹಿಕಲ್ ಗಳ ಮಧ್ಯೆ ರೋಡಲ್ಲಿ ಆಡೋಕೂ ಆಗಲ್ಲ ಈಗ.
ಅದಿಕ್ಕೆ ಕಣೇ ಅವನು ದಿನಾ ಕ್ರಿಕೆಟ್, ಪುಟ್ ಬಾಲ್, ಚೆಸ್ ಎಲ್ಲಾನೂ ನನ್ನ ಮೊಬೈಲ್ ಅಲ್ಲೇ ಆಡ್ತಾನೆ.

ರಾಜುವಿನ ಅಮ್ಮ: ನಿಮ್ಮ ಕಥೆ ಕಟ್ಟಿಕೊಂಡು ಹೋದ್ರೆ ಆಯ್ತು.
ಏ ರಾಜು.. ಹೋಗೋ ಹೋಗಿ ಮಾರ್ಕೆಟ್ ಅಲ್ಲಿ ಹೂ,ಹಣ್ಣು, ಕಾಯಿ ತಗೊಂಡು ಬಾ
(ರಾಜು ಪೆನ್ಸಿಲ್ ನಿಂದ ಪೇಪರ್ ನಲ್ಲಿ ಹೂ,ಹಣ್ಣು, ಕಾಯಿ ಎಂದು ಬರೆದುಕೊಳ್ಳುವನು)

ರಾಜು: ಸರಿ ಅಮ್ಮ

ರಾಜುವಿನ ಅಮ್ಮ: ಹೋದ ಸಾರಿ ದುಡ್ಡು ಮರೆತು ಹೋದ್ಯಲ್ಲ ಹಾಗೆ ಹೋಗ್ಬೇಡ. ಅಲ್ಲೇ, ಅಕ್ಕಿ ಡಬ್ಬದ ಕೆಳಗಡೆ ದುಡ್ಡು ಇಟ್ಟಿದ್ದೀನಿ ತಗೊಂಡು ಹೋಗು.

ರಾಜು: ಆಯ್ತು ಅಮ್ಮ

ದೃಶ್ಯ-3 
-------------
(ಮಾರ್ಕೆಟ್ ನಲ್ಲಿ)
(ಅಜ್ಜಿ, ರಾಜು, ಕಿಟ್ಟಿ, ಕಿಟ್ಟಿಯ ಅಮ್ಮ)

ಅಜ್ಜಿ: ಏನು ಬೇಕಿತ್ತಪ್ಪಾ?

ರಾಜು: (ಜೋರು ಧ್ವನಿಯಲ್ಲಿ) ಹೂ, ಹಣ್ಣು, ಕಾಯಿ ಎಲ್ಲಾ ಬೇಕಿತ್ತಪ್ಪಾ.
(ಸ್ವಲ್ಪ ನಿಧಾನವಾಗಿ) ಆದರೆ ಎಷ್ಟು ಬೇಕಿತ್ತು ಅಂತಾ ಅಮ್ಮ ಹೇಳ್ಲೇ ಇಲ್ಲ. ಎಲ್ಲಾನು ಒಂದು ಒಂದೇ ಅನ್ಸುತ್ತೆ, ಜಾಸ್ತಿ ಬೇಕಿದ್ರೆ ಅಮ್ಮ ಹೇಳ್ತಿದ್ರು.

ಅಜ್ಜಿ: ಎಷ್ಟೆಷ್ಟು ಬೇಕು?

ರಾಜು: ಒಂದು ಹೂ, ಆಮೇಲೆ ಒಂದು ಕಾಯಿ, ಒಂದು ಹಣ್ಣು ಕೊಡಿ.

ಅಜ್ಜಿ: (ಜೋರಾಗಿ ನಗುತ್ತಾ) ಏನು? ಒಂದು ಹೂ, ಒಂದು ಹಣ್ಣಾ..?

ರಾಜು: (ಕೋಪದಿಂದ) ಯಾಕಜ್ಜಿ ನಗ್ತಾ ಇದ್ದೀಯಾ?

ಅಜ್ಜಿ: ಇನ್ನೇನಪ್ಪಾ ಮಾಡ್ಲಿ..? ಯಾರಾದ್ರೂ ಒಂದು ಹೂವು, ಒಂದು ಹಣ್ಣು ತಗೋತಾರಾ? ಒಂದು ಮಾರು ಹೂವು, ಒಂದು ಚಿಪ್ಪು ಹಣ್ಣು ಕೊಡ್ತೀನಿ ತಗೊಂಡು ಹೋಗು.

ರಾಜು: (ತಲೆ ಕೆರೆದುಕೊಳ್ಳುತ್ತಾ) ಸರಿ ಕೊಡಿ. ಮೊದಲು ಹೂ ಕೊಡಿ ಆಮೇಲೆ ಹಣ್ಣು ಆಮೇಲೆ ಕಾಯಿ ಕೊಡಿ

ಅಜ್ಜಿ: ಯಾಕಪ್ಪಾ?

ರಾಜು: ಅಮ್ಮ ತರೋಕೆ ಹೇಳಿರೋದೇ ಹಾಗೆ..

ಅಜ್ಜಿ: ಸರಿ, ಸರಿ. ಸೇವಂತಿಗೆ ಬೇಕೋ? ಕಾಕಡ ಬೇಕೋ? ಮಲ್ಲಿಗೆ ಬೇಕೋ? ಕನಕಾಂಬರ ಬೇಕೋ?

ರಾಜು: (ಆಶ್ಚರ್ಯದಿಂದ) ಅಷ್ಟೊಂದು ತರಹದ ಹೂಗಳು ಇದಿಯಾ? ಯಾವುದೋ ಒಂದು ಕೊಡಿ.

ಅಜ್ಜಿ: ಯಾಕಪ್ಪಾ ನಿಂಗೆ ಇವೆಲ್ಲಾ ಗೊತ್ತಿಲ್ವಾ? ಇನ್ನೂ ತುಂಬಾ ತರಹದ ಹೂಗಳು ಇದ್ದಾವೆ. ಸದ್ಯಕ್ಕೆ ಇಷ್ಟೇ ನನ್ನ ಹತ್ರ ಇರೋದು..
ಸರಿ ಸರಿ, ತೊಂಬತ್ತು ರೂಪಾಯಿ ಆಯ್ತು ಕೊಡಪ್ಪಾ
(ರಾಜು ನೂರು ರೂಪಾಯಿ ಕೊಟ್ಟು ಬುಟ್ಟಿಯಲ್ಲಿ ಮೊದಲು ಹೂ ನಂತರ ಹಣ್ಣು ಆಮೇಲೆ ಕಾಯಿ ಇಟ್ಟುಕೊಂಡು ವಾಪಾಸ್ ಹೊರಡುವನು)

ಅಜ್ಜಿ: ಚಿಲ್ಲರೆ ತಗಳಪ್ಪಾ.. ದಿನಾ ನಿಮ್ಮಂತಹವರು ಸಿಕ್ಕರೆ ನಾವು ಅಂಗಡಿ ಮೇಲೆ ಅಂಗಡಿ ಕಟ್ಟಿಸಬಹುದು. 
(ರಾಜು ಚಿಲ್ಲರೆ ತೆಗೆದುಕೊಂಡು ವಾಪಾಸ್ ಹೊರಡುವಾಗ ಕಿಟ್ಟಿ ಮತ್ತು ಅವರ ಅಮ್ಮ ಎದುರಾಗುತ್ತಾರೆ.)
(ಕಿಟ್ಟಿ ಅವನ ಕೈಯ್ಯಲ್ಲಿದ್ದ ಬ್ಯಾಸ್ಕೆಟ್ ನೋಡಿ ಜೋರಾಗಿ ನಗಲು ಶುರುಮಾಡುತ್ತಾನೆ)

ಕಿಟ್ಟಿಯ ಅಮ್ಮ: (ಗದರಿಸುವ ಧ್ವನಿಯಲ್ಲಿ) ಸುಮ್ನಿರೋ ಕಿಟ್ಟಿ, ಪಾಪ ಅವ್ನಿಗೆ ಗೊತ್ತಾಗಲ್ಲ..
(ರಾಜುವಿಗೆ) ಯಾಕಪ್ಪಾ ರಾಜು? ಬುಟ್ಟಿಯಲ್ಲಿ ಈ ತರಾ ಸಾಮಾನು ಜೋಡಿಸಿಕೊಂಡಿದ್ದೀಯಾ?

ರಾಜು: (ತೊದಲಿಸುತ್ತಾ) ಅದು.. ಅದು.. ಆಂಟಿ.., ಅಮ್ಮ ಹೂವು,ಹಣ್ಣು, ಕಾಯಿ ತಗೊಂಡು ಬಾ ಅಂದ್ರು. ನಾನೂ ಹಾಗೇ ಬರೆದ್ಕೊಂಡಿದ್ದೆ. ಅದಕ್ಕೇ ಈ ತರಾ ಜೋಡಿಸಿಕೊಂಡಿದ್ದೀನಿ.

ಕಿಟ್ಟಿ: ನೋಡಮ್ಮಾ ನಿಮ್ಮ ಫಸ್ಟ್ ರ್ಯಾಂಕ್ ರಾಜು ಕಥೆನಾ..

ಕಿಟ್ಟಿಯ ಅಮ್ಮ: ಸುಮ್ನಿರೋ ಕಿಟ್ಟಿ(ಜೋರಾಗಿ ಗದರುವರು)
(ಕಿಟ್ಟಿಗೆ) ಅವರು ಹೇಳುವಾಗ ಹಾಗೆ  ಹೇಳಿರ್ತಾರೆ ಅಷ್ಟೇ. ನೀನು ಇಟ್ಟಿರೋ ತರಾ ಇಟ್ಕೊಂಡು ಹೋದ್ರೆ ಹೂ, ಹಣ್ಣು ಎಲ್ಲಾ ಹಾಳಾಗತ್ತೆ ಅಷ್ಟೇ..
ಕೆಳಗಡೆ ಕಾಯಿ ಇಟ್ಟು ಆಮೇಲೆ ಹಣ್ಣು ಆಮೇಲೆ ಹೂವು ಇಡಬೇಕು ಆಯ್ತಾ..?

ರಾಜು: ಸರಿ ಆಂಟಿ ಹಾಗೇ ಮಾಡ್ತೀನಿ
(ರಾಜು ಹೊರಡುವನು)

ಕಿಟ್ಟಿ: ನೋಡಮ್ಮಾ ನಿಮ್ಮ ಫಸ್ಟ್ ರ್ಯಾಂಕ್ ರಾಜು ಕಥೆನಾ..ನಾನೂ ರಾಜೂ ತರಹಾನೇ ಆಗ್ಬೇಕಾ? ಯಾವಾಗ್ಲೂ ರಾಜೂನಾ ನೋಡಿ ಕಲಿ ಅಂತಾ ಹೇಳ್ತಾ ಇರ್ತೀಯಲ್ಲಾ.. ನಾನೂ ಹೇಳಬಹುದು ಅಲ್ವಾ, ನೀನೂ ಅವರ ಅಮ್ಮನ ನೋಡಿ ಕಲಿ ಅಂತಾ..

ಕಿಟ್ಟಿಯ ಅಮ್ಮ: ಬಿಡೋ ಹೋಗ್ಲಿ, ಇನ್ಮೇಲೆ ನಿನ್ನನ್ನ ಬೇರೆಯವರಿಗೆ ಕಂಪೇರ್ ಮಾಡಲ್ಲ ಆಯ್ತಾ..?
(ಎಲ್ಲರೂ ನಿರ್ಗಮಿಸುವರು)

ದೃಶ್ಯ-4
-----------
(ರಾಜುವಿನ ಅಮ್ಮ, ಕಿಟ್ಟಿಯ ಅಮ್ಮ)

ಕಿಟ್ಟಿಯ ಅಮ್ಮ: ಆಯ್ತೇನ್ರೀ ಎಲ್ಲಾ ಕೆಲಸ? ನಿಮ್ಮದೇ ಒಂತರಾ ಸುಖ ಬಿಡ್ರೀ.. ಫಸ್ಟ್ ರ್ಯಾಂಕ್ ಬರೋ ಮಗ, ನನ್ಮಗಾನು ಇದ್ದಾನೆ.. ದಂಡಕ್ಕೆ..

ರಾಜುವಿನ ಅಮ್ಮ: ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತಾರೆ, ಏನು ಸುಖಾನೋ ಏನೋ .. ನಿಮ್ಮದೇ ಪುಣ್ಯ ಬಿಡ್ರಿ, ನಿಮ್ಮ ಮಗ ನಿಮಗೆ ಎಲ್ಲಾದ್ರಲ್ಲೂ ಸಹಾಯ ಮಾಡ್ತಾನೆ. ಆಟ ಆಡೋದ್ರಲ್ಲಿ ಚಾಂಪಿಯನ್, ವ್ಯವಹಾರ ಜ್ಞಾನಾನೂ ತುಂಬಾ ಚೆನ್ನಾಗಿದೆ. ತುಂಬಾ ಬುದ್ದಿವಂತ.

ಕಿಟ್ಟಿಯ ಅಮ್ಮ: ಏನು ಬುದ್ದಿವಂತ ಆದ್ರೆ ಏನ್ರೀ..? ಮಾರ್ಕ್ಸ್ ಏ ಬರಲ್ಲ.. ಮುಂದೆ ಹೇಗೋ ಏನೋ ಅಂತಾ ಚಿಂತೆಯಾಗೋಗಿದೆ, ಇವನು ಓದಲಿ ಅಂತಾ ಕೇಬಲ್ ಕನೆಕ್ಷನ್ ತೆಗೆಸಿದ್ವಿ, ನಮ್ಮನೆಯವ್ರ ಆಫೀಸ್ ಗೆ ದೂರ ಆದ್ರೂ ಇಲ್ಲಿ ಮನೆ ಮಾಡಿದ್ವಿ, ಆದ್ರೆ ಇವನು ಹೀಗಾದ.. 
   
ರಾಜುವಿನ ಅಮ್ಮ: ಎಲ್ಲರೂ ವಿಶ್ವೇಶ್ವರಯ್ಯ ಆಗೋಕಾಗಲ್ಲ
ಐದು ಬೆರಳೂ ಒಂದೇ ಸಮ ಇರಲ್ಲ ನೊಡ್ಡಿ.ಓದು, ಮಾರ್ಕ್ಸ್ ಬೇಕು ಆದರೆ ಆರೋಗ್ಯ, ಚಟುವಟಿಕೆ,ವ್ಯವಹಾರ ಜ್ಞಾನ ತುಂಬಾನೇ ಮುಖ್ಯ.
ಮೀನು ಮರ ಹತ್ತೋಕಾಗಲ್ಲಾ, ಹಕ್ಕಿ ಈಜೋಕಾಗಲ್ಲ, ಅವರವರ ರೀತಿ ಅವರವರಿಗೆ ಕಣ್ರೀ.. ಇತ್ತೀಚಿನ ಎಜುಕೇಶನ್ ಸಿಸ್ಟಂ ಹೀಗಾಗೋಗಿದೆ, ಆದ್ರೆ ಇದಕೆಲ್ಲಾ ಅಪವಾದ ಅನ್ನೋ ಹಾಗೇ ಒಂದು ಸ್ಕೂಲ್ ಇದೆ ಕಣ್ರೀ..

ಕಿಟ್ಟಿಯ ಅಮ್ಮ: ಹೌದಾ? ಯಾವುದ್ರೀ ಅದು?

ರಾಜುವಿನ ಅಮ್ಮ: ಮೈತ್ರಿ ಕಾನ್ವೆಂಟ್ ಅಂತಾ ಕಣ್ರೀ, ಅಲ್ಲಿ ಓದೋದರ ಜೊತೆಜೊತೆಗೆ ಆಟಕ್ಕೂ ಪ್ರಾಮುಖ್ಯತೆ ಇದೆ. ಸ್ಮಾರ್ಟ್ ಕ್ಲಾಸ್, ಯೋಗ, ಕರಾಟೆ, ಸಂಗೀತ, ಡ್ರಾಯಿಂಗ್ ಎಲ್ಲಾ ಇದೆ, ಜೊತೆಗೆ ಥಿಯೇಟರ್ ಎಜುಕೇಶನ್ ಅಂದರೆ ರಂಗ ಶಿಕ್ಷಣದ ಅನುಕೂಲ ಸಹಾ ಇದೆ.
ಮಕ್ಕಳಿಗೆ ವ್ಯವಹಾರ ಜ್ಞಾನ ಕಲಿಸೋದಕ್ಕೆ ಕ್ಯಾಂಟೀನ್ ಡೇ ಮಾಡ್ತಾರೆ.ಅಲ್ಲಿ ಮಕ್ಕಳ ಮೊದಲ ಅಭ್ಯಾಸವನ್ನು ಅಕ್ಕಿ ಮೇಲೆ ಅಕ್ಷರ ಬರೆಸೋದ್ರಿಂದ ಅವರ ಅಪ್ಪ-ಅಮ್ಮನೇ ಶುರು ಮಾಡ್ತಾರೆ. ತಂದೆ-ತಾಯಿ ಪಾದ ಪೂಜೆ ಮಾಡಿಸ್ತಾರೆ. ಗ್ರಾಮೀಣ ಕ್ರೀಡೆಗಳು, ಸಂಸ್ಕೃತಿಯ ಮೌಲ್ಯ ಎಲ್ಲವನ್ನೂ ಅಲ್ಲಿ ಕಲಿಸಿಕೊಡುತ್ತಾರೆ.

ಕಿಟ್ಟಿಯ ಅಮ್ಮ: ಹೌದೇನ್ರೀ ಗೊತ್ತೇ ಇರ್ಲಿಲ್ಲ. ಎಲ್ಲಿದೆ ಅದು? ಯಾರು ಅದನ್ನು ನಡೆಸುತ್ತಾ ಇರೋದು?

ರಾಜುವಿನ ಅಮ್ಮ: ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿ ಮೈತ್ರಿ ಕಾನ್ವೆಂಟ್ ಇರೋದು. ಎಲೆಮರೆ ಕಾಯಿಯ ತರ ಆ ಶಿಕ್ಷಣ ಸಂಸ್ಥೆ ಕಾರ್ಯ ನಿರ್ವಹಿಸುತ್ತಾ ಇದೆ. ಧರ್ಮರಾಜ್ ಕಡಗ ಸರ್ ಆ ಶಿಕ್ಷಣ ಸಂಸ್ಥೆಯನ್ನು ಶುರು ಮಾಡಿದವರು ಹಾಗು ನಡೆಸುತ್ತಾ ಇರುವವರು
ನಾನೂ ಈ ಸಾರಿ ರಾಜೂನಾ ಅಲ್ಲಿಗೇ ಸೇರಿಸ್ತಾ ಇದ್ದೀನಿ.

ಕಿಟ್ಟಿಯ ಅಮ್ಮ: ನನಗೂ ನೀವೇಳಿದ  ಮೇಲೆ ಜ್ಞಾನೋದಯ ಆಯ್ತು. ನಾನೂ ಕಿಟ್ಟೀನಾ ಅಲ್ಲಿಗೇ ಸೇರಿಸ್ತೀನಿ.
[ಇಬ್ಬರೂ ಒಟ್ಟಿಗೆ]
ನಾವಂತೂ ಮೈತ್ರಿ ಕಾನ್ವೆಂಟ್ ಜೊತೆ ಕೈ ಜೋಡಿಸಿದ್ದೇವೆ. ನೀವೂ ನಮ್ಮೊಟ್ಟಿಗೆ ಕೈ ಜೋಡಿಸಿ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಾಕ್ಷಿಯಾಗಿ.

~ವಿಭಾ ವಿಶ್ವನಾಥ್ 

ಭಾನುವಾರ, ಜನವರಿ 13, 2019

ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದುತ್ತಾ..

ಭಯ ಜೀವನದಲ್ಲಿ ಮುಖ್ಯವಾದ ಒಂದು ಭಾವನೆಯೇ. ಆದರೆ ಅದರ ಪ್ರಮಾಣ ಎಷ್ಟಿರಬೇಕು ಎಂಬುದು ಸಹಾ ಅಷ್ಟೇ ಮುಖ್ಯ. ಒಂದರೆಕ್ಷಣ ಅನ್ನಿಸುವುದೂ ಉಂಟು ಭಯವೇ ಇಲ್ಲದಿದ್ದರೆ..!? 

ಹಿರಿಯರ ಭಯವಿಲ್ಲದಿದ್ದರೆ ಗೌರವ ಕೊಡಬೇಕೆನ್ನುವ ಪಾಠ ತಪ್ಪಿಹೋಗುತ್ತಿತ್ತು. ಗುರುಗಳ, ತಾಯಿ-ತಂದೆಯರ ಭಯವಿರದಿದ್ದರೆ ಒಳ್ಳೆಯ ಸಂಸ್ಕಾರ ಕಲಿಯುವುದು ತಪ್ಪಿಹೋಗುತ್ತಿತ್ತು. ಪರೀಕ್ಷೆಯ ಭಯವಿಲ್ಲದಿದ್ದರೆ ಓದುವ, ಅಭ್ಯಾಸ ಮಾಡುವುದೇ ತಪ್ಪಿ ಹೋಗುತ್ತಿತ್ತು, ವಿಪರ್ಯಾಸವೆಂದರೆ ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಾಗಿ ಮಾತ್ರ ಅಭ್ಯಾಸ ಮಾಡುತ್ತಿದ್ದಾರೆ. ದೇವರ ಮತ್ತು ಅವನು ನೀಡುವ ಶಿಕ್ಷೆಗಳ ಕುರಿತ ಭಯವಿಲ್ಲದಿದ್ದರೆ ಒಳ್ಳೆಯ ನಡತೆಗಳೇ ಕಡಿಮೆಯಾಗುತ್ತಿದ್ದವೇನೋ ಆದರೆ ಭಯ ಈ ರೀತಿಯಲ್ಲಿ ಇರುವುದು ಒಳ್ಳೆಯದು ಆದರೆ ಕೆಲವು ಅವ್ಯಕ್ತ ಭಯಗಳೂ ಇವೆ ಹೇಗೆಂದರೆ ಅವುಗಳು ಬದುಕಿನಲ್ಲಿ ಭವಿಷ್ಯಕ್ಕೇ ಮಾರಕವಾಗಿಬಿಡುತ್ತವೆ. ಆದರಿಂದ ಇಂಗ್ಲೀಷ್ ನಲ್ಲಿರುವ ಒಂದು ಮಾತು "ಲೈಫ್ ಬಿಗಿನ್ಸ್ ವ್ಹೇರ್ ಫಿಯರ್ ಎಂಡ್ಸ್" ಎಂಬ ಮಾತನ್ನು ನಂಬಲಾರದೇ ನಂಬುತ್ತೇನೆ.

ಆದರೆ ಕೆಲವೊಮ್ಮೆ ಪೋಷಕರೇ ಮಕ್ಕಳ ಧೈರ್ಯವನ್ನು ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದಿಬಿಡುತ್ತಾರೆ.

"ಆಟ ಆದುವಾಗ ಹುಷಾರು, ಬಿದ್ದು ಬಿಟ್ಟೀಯಾ" ಎನ್ನುತ್ತಾರೆ, ಬೀಳದೆ, ಏಳದೆ ಆಟ ಆಡುವುದುಂಟೇ..? ತಾಯಿಯ ಮಮತೆಯ ಮನಸ್ಸಿನಲ್ಲಿ ಅಮ್ಮನ ಪ್ರೀತಿ ತುಂಬಿಕೊಂಡೇ ಈ ಮಾತನ್ನು ಆಡಿಸಿರುತ್ತದೆ ಆದರೆ ಹುಷಾರು ಎನ್ನುವ ಆ ಪದ ಮಕ್ಕಳ ಮನದ ಮೂಲೆಯಲ್ಲಿ ಅಲ್ಲೆಲ್ಲೋ ಅವಿತು ಕುಳಿತು ಮತ್ತೆಲ್ಲೋ ಪರಿಣಾಮ ಬೀರಬಹುದು.

"ಅಮ್ಮಾ ಪರೀಕ್ಷೆಯಲ್ಲಿ ನನ್ನ ಪಕ್ಕದಲ್ಲಿದ್ದವನು ಕಾಪಿ ಚೀಟಿ ನೋಡಿಕೊಂಡು ಬರೆಯುತ್ತಿದ್ದ ಅದಕ್ಕೆ ನಾನು ಮಿಸ್ ಗೆ ಹೇಳಿದಕ್ಕೆ ಅವನನ್ನು ಹೊಡದು ನನ್ನ ಧೈರ್ಯವನ್ನು ಹೊಗಳಿದರು ಗೊತ್ತಾ?" ಎಂದು ಮನೆಯಲ್ಲಿ ಬಂದು ಹೇಳಿದ ಮರುಕ್ಷಣವೇ ಅವನ ಧೈರ್ಯದ ಬಲೂನು ಠುಸ್ ಎಂದು ಹೊಡೆದಿರುತ್ತದೆ ಕಾರಣ ಇಷ್ಟೇ.. "ಯಾಕೋ ಹಾಗೆ ಮಾಡಿದೆ? ಅವನು ಸೇಡು ಇಟ್ಟುಕೊಂಡು ನಾಳೆ ನಿನಗೆ ಏನಾದರೂ ಮಾಡಿದರೆ..? ನಿನಗೆ ಯಾಕೆ ಬೇಕಿತ್ತು ಊರಿನವರೆಲ್ಲರ ಉಸಾಬರಿ..? ಯಾರಾದರೂ ಏನಾದರೂ ಮಾಡಿಕೊಳ್ಳಲಿ ನಿನಗೇನು..? ಇನ್ನೊಂದು ಸಲ ಹಾಗೆಲ್ಲಾ ಮಾಡೋದಕ್ಕೆ ಹೋಗಬೇಡ". ಅದರಲ್ಲೂ ಹೆಣ್ಣು ಮಕ್ಕಳು ಏನಾದರೂ ಹೇಳಿದರು ಅಂದರೆ ಅವರು ಮಾಡಿ ಬಂದದ್ದು ದೊಡ್ಡ ತಪ್ಪೇನೋ ಎಂಬಂತೆ ಬಿಂಬಿಸಲಾಗಿತ್ತಿರುತ್ತದೆ. ಇದರ ಪರಿಣಾಮವೇ ಇಂದಿನ ದಿನಗಳಲ್ಲಿ ನಾವು ನಮ್ಮ ಮನೆಯಲ್ಲಿ ಏನಾದರೂ ಸಂಭವಿಸದೆ ಇದ್ದರೆ ಇತರರ ಸಮಸ್ಯೆಗಳಿಗೆ ಪ್ರತಿಕ್ರಿಯಿಸದೇ ಇರುವುದು.. ಅರ್ಥಾತ್ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಆಕ್ಸಿಡೆಂಟ್ ಇವೆಲ್ಲವುಗಳಿಗೂ ಮೂಕ ಪ್ರೇಕ್ಷಕರಾಗಿರುವುದು.

ಇದು ಮನೆಯಲ್ಲಿ ಸಂಭವಿಸುವ ಒಂದೆರಡು ಅವ್ಯಕ್ತ ಭಯಗಳಿಂದ ಉಂಟಾಗುವ ಪರಿಣಾಮವಾದರೆ ಶಾಲೆಗಳ, ಕಾಲೇಜುಗಳ ಕಥೆ ಕೇಳಿ..

ಅಂಕಗಳ ವಿಚಾರದಲ್ಲಿ ಪಕ್ಷಪಾತ ಮಾಡುವ ಶಿಕ್ಷಕರ ವಿಷಯವನ್ನು ಖಂಡಿಸಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಶಿಕ್ಷಕರ ಪೂರ್ವಾಗ್ರಹಪೀಡಿತ ಮನಸ್ಥಿತಿಯಿಂದ ಒಂದಲ್ಲಾ ಒಂದು ರೀತಿಯಲ್ಲಿ ಶಿಕ್ಷೆ ಆಗಿರುತ್ತದೆ. ಮನೆಯಲ್ಲಿ ಬಂದು ಹೇಳಿದರೆ ನಮ್ಮ ಧೈರ್ಯದ ವರ್ತನೆಯೇ ಇದಕ್ಕೆಲ್ಲಾ ಕಾರಣ ಎಂಬಂತೆ ಬಿಂಬಿತವಾಗುತ್ತದೆ. ಸರಿ, ಮೇಲಿನ ಮಟ್ಟದ ಶಿಕ್ಷಕರೊಂದಿಗೆ ನಾನೇ ಮಾತನಾಡುತ್ತೇನೆ ಎಂದರೂ ಇದಕ್ಕೆಲ್ಲಾ ತಡೆಗೋಡೆ.

ಅವ್ಯಕ್ತ ಭಯವನ್ನು ನಮ್ಮಲ್ಲಿ ತುಂಬುವ ಕೆಲಸ ಎಲ್ಲೆಡೆಯಿಂದಲೂ ಸಾಗುತ್ತಲೇ ಇರುತ್ತದೆ. ಈ ರೀತಿಯ ಭಯದ ಮೂಸೆಯಲ್ಲಿ ನಮ್ಮನ್ನು ಅದ್ದದ್ದಿದ್ದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರಲು ಅಷ್ಟು ವರ್ಷ ಬೇಕಾಗುತ್ತಿರಲಿಲ್ಲ. ಅಲ್ಲದೇ ಗರ್ಭದಲ್ಲಿರುವಾಗ ಮಗುವಿಗೆ ಧೈರ್ಯ ತುಂಬಲು ಗರ್ಭಿಣಿಯರಿಗೆ ಅಭಿಮನ್ಯುವಿನ ಪೌರುಷದ ಕಥೆ ಹೇಳುತ್ತಾರೆಯೇ ಹೊರತು ಉತ್ತರಕುಮಾರ ಹೆದರಿ ಯುದ್ದರಂಗದಿಂದ ಓಡಿದ ಕಥೆಯನ್ನು ಹೇಳುವುದಿಲ್ಲ. ಆದರೆ ಬೆಳೆಯುತ್ತಾ ಎಲ್ಲರೂ ಅವ್ಯಕ್ತ ಭಯವನ್ನು ಬಿತ್ತಿ ಬೆಳೆಸಿಬಿಡುತ್ತಾರೆ. "ಭಗತ್ ಸಿಂಗ್ ಅಂತಹವರು ಇರಬೇಕು ಆದರೆ ನಮ್ಮ ಮನೆಯಲ್ಲಲ್ಲ ಪಕ್ಕದ ಮನೆಯಲ್ಲಿ" ಎನ್ನುವ ಮನಸ್ಥಿತಿಯನ್ನು ತಲುಪಿರುವುದು ವಿಪರ್ಯಾಸ.

ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದಿದರೂ ಆ ಭಾವನೆಯನ್ನು ಹೀರದೆ ಬದುಕಬಹುದು. ಅಂಟಿಯೂ ಅಂಟದಂತಹಾ ಭಯವನ್ನು ಮನಸ್ಸಿನಲ್ಲಿಟ್ಟುಕೊಂಡು ಬದುಕುವ, ಇದರಿಂದ ಬೇರೆಯವರೂ ಹೀಗೆ ಬದಲಾಗಬಹುದೇನೋ..
ಬರಹದಿಂದ ಬದುಕು ಬದಲಾಗುತ್ತದಾ? ಗೊತ್ತಿಲ್ಲ..??! ಆದರೆ ಪ್ರೇರಣೆಯಾಗಬಹುದು ಎಂಬ ನಂಬುಗೆಯಂತೂ ಇದೆ. ಅದೇ ಧೈರ್ಯದಿಂದ ಬರೆದಿದ್ದೇನೆ. ನೀನೇನು ಬರೀತೀಯಾ? ನಿಜವಾಗಲೂ ಇದನ್ನು ಓದ್ತಾರಾ? ಎಂಬೆಲ್ಲಾ ಅವ್ಯಕ್ತ ಭಯ ಬಿತ್ತಲು ಹವಣಿಸಿದ ಪ್ರಶ್ನೆಗಳನ್ನು ಒತ್ತರಿಸಿ ಬರೆದಿದ್ದೇನೆ.
ಓದಿ ಸಾಧ್ಯವಾದರೆ ಮರುತ್ತರ ನೀಡಿ ಪ್ರತಿಕ್ರಿಯಿಸಿ.

~ವಿಭಾ ವಿಶ್ವನಾಥ್

ಗುರುವಾರ, ಜನವರಿ 10, 2019

ಪರಿಭ್ರಮಣ

ಸಂಜಯ್ ಕಣ್ಮುಚ್ಚಿ ಎಲ್ಲವನ್ನೂ ಒಮ್ಮೆ ನೆನಪಿಸಿಕೊಳ್ಳುತ್ತಿದ್ದ.

ತಾನು ಕೇಳುವ ಮುಂಚೆಯೇ ಎಲ್ಲವೂ ಕಣ್ಮುಂದೆ ಇರುವಂತೆ ನೋಡಿಕೊಳ್ಳುತ್ತಿದ್ದ ಅಪ್ಪ-ಅಮ್ಮ, ತನ್ನ ಸೇವೆಗೆಂದೇ ಇದ್ದ ಆಳು-ಕಾಳುಗಳು, ಹಸಿವೆಂಬುದರ ಅರ್ಥವೇ ಗೊತ್ತಿಲ್ಲದಂತೆ ಹೊತ್ತೊತ್ತಿಗೆ ಸರಿಯಾಗಿ ಹಾಲು-ಹಣ್ಣು, ಊಟ-ತಿಂಡಿ ತಿನ್ನಿಸುತ್ತಿದ್ದ ಅಮ್ಮ, ಇಂದು ನಾನು ಯಾವ ಬಟ್ಟೆ ಹಾಕಿಕೊಳ್ಳಲಿ ಎಂದು ಯೋಚಿಸುವಷ್ಟಿದ್ದ ಬಟ್ಟೆ-ಬರೆ, ಚಳಿಗೆ ಬೆಚ್ಚನೆಯ ರಗ್ಗು, ಬೇಸಿಗೆಯ ಧಗೆಗೆ ಎ.ಸಿ, ಮಳೆಗೆ ನೆನೆಯದಂತೆ ರೇನ್ ಕೋಟ್. ಓಡಾಡಲು ತರಾವರಿ ಕಾರು,ಬೈಕು, ಬೇಜಾರಾದರೆ ಟಿ.ವಿ ಅಥವಾ ಮೊಬೈಲು ಮುಂದಿನ ಬದುಕಿನ ಬಗ್ಗೆ ಯೋಚನೆಯೇ ಇಲ್ಲದಂತೆ ಯಾವುದರಲ್ಲೂ ಕೊರತೆ ಇಲ್ಲದಂತೆ ಜೀವನ ಸಾಗುತ್ತಿತ್ತು.

ಆದರೆ ಅಂದು ಕೆಲವೇ ಘಂಟೆಗಳ ಅಂತರದಲ್ಲಿ ಏನೆಲ್ಲಾ ಆಗಿ ಹೋಗಿತ್ತು. ಮಳೆಗೆ ನದಿ ನೀರಿನ ಏರುವಿಕೆಯ ಜೊತೆಗೆ ಒಡೆದುಕೊಂಡ ಅಣೆಕಟ್ಟು ನೋಡ ನೋಡುತ್ತಿರುವಂತೆಯೇ ಮನೆಯನ್ನೆಲ್ಲಾ ಕೊಚ್ಚಿ ಕೊಂಡೊಯ್ದುಬಿಟ್ಟಿತ್ತು. ಅಲ್ಲಿ ಒಂದು ಮನೆ ಇತ್ತು ಎಂಬುದಕ್ಕೆ ಕುರುಹೇ ಇಲ್ಲವೇನೋ ಎಂಬಂತೆ..! ಅಪ್ಪ-ಅಮ್ಮ ಮನೆಯೊಳಗೆ ಇದ್ದರೋ ಇಲ್ಲವೋ ಎಂಬುದೂ ತಿಳಿಯಲಿಲ್ಲ. ಒಂದರೆಕ್ಷಣ ಜಗತ್ತಿನಲ್ಲಿ ನಾನೊಬ್ಬನೇ, ನನ್ನವರು-ನನ್ನದು ಎಂಬುದು ಇಲ್ಲವೇನೋ ಎಂಬ ಭಾವ ಆವರಿಸಿತ್ತು. ಒಂದು ಸುತ್ತು ತೋಟದಲ್ಲಿ ತಿರುಗಾಡಿ ಬರುವಷ್ಟರಲ್ಲಿ ಏನೆಲ್ಲಾ ಆಗಿ ಹೋಗಿತ್ತು. ನೀರಿನ ಪ್ರಮಾಣ ಹೆಚ್ಚಾಗುತ್ತಲೇ ಇತ್ತು. ತಿಮ್ಮ ಬಂದು ಎಳೆದೊಯ್ಯದಿದ್ದಿದ್ದರೆ ನಾನೂ ಅದರೊಟ್ಟಿಗೇ ಕೊಚ್ಚಿ ಹೋಗುತ್ತಿದ್ದೆನೇನೋ..

ಎಂದೂ ಮತ್ತೊಬ್ಬರ ಮನೆಯ ಬಾಗಿಲಿಗೆ ಹೋಗದ ನಾನು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದವರ ಮನೆಯ ಬಾಗಿಲಲ್ಲಿ ಆಶ್ರಯ ಪಡೆದಿದ್ದೆ. ಅಲ್ಲಾದರೂ ಎಷ್ಟು ಹೊತ್ತು..? ಕ್ರಮೇಣ ಹೆಚ್ಚಾಗುತ್ತಲೇ ಇದ್ದ ನೀರಿನ ಆವೇಗಕ್ಕೆ ಹೆದರಿ ಅವರೊಡನೆ ಗಂಜೀ ಕೇಂದ್ರಕ್ಕೆ ಪಯಣ. ಆ ಅಮ್ಮಂದಿರು ಆ ಕಷ್ಟದಲ್ಲಿಯೂ ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ನನ್ನನ್ನು ನೋಡಿಕೊಂಡರು. ನಾನು ಸಿರಿವಂತನಾಗಿದ್ದಾಗ ನೋಡಿಕೊಂಡಷ್ಟೇ ಅಸ್ಥೆಯಿಂದ ಆಗಲೂ ಅವರು ನನ್ನನ್ನು ನೋಡಿಕೊಂಡರು. ಹಣಕ್ಕಿಂತ ಹೃದಯ ಶ್ರೀಮಂತಿಕೆಗೇ ಹೆಚ್ಚಿನ ಬೆಲೆ ಇತ್ತು ಅಲ್ಲಿ. ಆತ್ಮೀಯತೆಯ ಬೆಲೆ ಆಗ ಅರಿವಾಗತೊಡಗಿತ್ತು. ಬೆಚ್ಚನೆಯ ರಗ್ಗುಗಳಿರಲಿಲ್ಲ ಆದರೆ ಬೆಚ್ಚನೆಯ ಬಂಧವಿತ್ತು. ರಕ್ತ ಸಂಬಂಧಕ್ಕಿಂತ ಋಣಾನುಬಂಧದ ಅನುಬಂಧವಿತ್ತು. ಹಳೆ ಬಾಳು ಸತ್ತು ಹೊಸ ಬಾಳಿನ ಉದಯವಾಗುತಲಿತ್ತು. ನೀರಿನ ಹಠಾತ್ ಹರಿವಿನಂತೆಯೇ, ಬಾಳಿನಲ್ಲಿಯೂ ಹಠಾತ್ ತಿರುವು ಸಿಕ್ಕಿತ್ತು.

ನಂತರ ಗಂಜೀ ಕೇಂದ್ರದಲ್ಲಿ ಒಬ್ಬ ಸ್ವಯಂ ಸೇವಕನಾದೆ. ಜೀವನದ ಹೊಸ ಮಗ್ಗುಲಿನ ಪರಿಚಯ ಮಾಡಿಕೊಂಡೆ. ನೆರೆ ಇಳಿದ ನಂತರ ಹೊಸ ಬದುಕು ಕಟ್ಟಿಕೊಳ್ಳುವವರಿಗೆ ನೆರವಾದೆ. ಅಷ್ಟೊತ್ತಿಗೆ ಐಷಾರಾಮದ ಬದುಕು ನಡೆಸುತ್ತಿದ್ದ ನನ್ನೊಳಗಿನ ಸಂಜಯ್ ಸತ್ತಾಗಿತ್ತು. ಅಷ್ಟರಲ್ಲಿ ಅಪ್ಪ-ಅಮ್ಮ ಇನ್ನಿಲ್ಲವೆಂಬ ಸತ್ಯವನ್ನೂ ಅರಗಿಸಿಕೊಂಡಾಗಿತ್ತು. ಬದುಕಿನಲ್ಲಿ ಸ್ಪಷ್ಟ ಗುರಿಯೇ ಇಲ್ಲ ಎಂಬಂತಿದ್ದವನಿಗೆ ಯಾವುದನ್ನೂ ಲಕ್ಷಿಸದೆ, ಜೀವದ ಹಂಗು ತೊರೆದು ಅಲ್ಲಿ ಸೇವೆ ಮಾಡುತ್ತಿದ್ದ ಸೈನಿಕರನ್ನು ನೋಡಿ ನಾನೂ ಸೈನ್ಯಕ್ಕೆ ಸೇರಿ ಸೇವೆ ಸಲ್ಲಿಸುವ ಆಸೆ ಬಂದಿತ್ತು. ಆ ಆಸೆಯನ್ನು ನೆರವೇರಿಸಿಕೊಂಡೆ ಸಹಾ.

ಆದರೆ, ಇಪ್ಪತ್ತು ವರ್ಷದ ನಂತರ ಕಾಲ ಮತ್ತೆ ಅದೇ ಸ್ಥಳ, ಅದೇ ಪರಿಸ್ಥಿತಿಯನ್ನು ನೋಡು ಎಂಬಂತೆ ಮತ್ತೆ ಇಲ್ಲಿಗೇ ಕರೆತಂದು ನಿಲ್ಲಿಸಿದೆ. ಆದರೆ ಅಲ್ಪ ಬದಲಾವಣೆಯೊಂದಿಗೆ.. ಈಗ ನನಗೆ ನನ್ನ ಕರ್ತವ್ಯದ ಅರಿವಿದೆ, ಹೊಣೆ ಇದೆ. ಮತ್ತಷ್ಟು ಸಂಜಯರನ್ನು ಕಾಣುವ, ರೂಪಿಸುವ ಅವಕಾಶ ದೊರೆತಿದೆ.

ಅಷ್ಟರಲ್ಲಿ ಕೇಳಿ ಬಂದ ಹಾರ್ನ್ ಶಬ್ಧ ಅವನ ಯೋಚನಾ ಲಹರಿಯನ್ನು ತುಂಡರಿಸಿತ್ತು. ಸುತ್ತುವ ಕಾಲದೊಂದಿಗೆ ಹಿಂದಕ್ಕೆ ಹೋಗಿಬಂದಿದ್ದ ಸಂಜಯ್ ಈಗ ಹೊಸದಾಗಿ ಶಿಬಿರಕ್ಕೆ ಬಂದ ನಿರಾಶ್ರಿತರಿಗೆ ನೆಲೆ ಕಲ್ಪಿಸಿಕೊಡುವತ್ತ ಹೆಜ್ಜೆ ಹಾಕಿದ.     

~ವಿಭಾ ವಿಶ್ವನಾಥ್

ಮಂಗಳವಾರ, ಜನವರಿ 1, 2019

ಹಳತ ನೋಡಿ ತಾ ಕಿಲಕಿಲ ನಗುತಲಿ..

ಘಳಿಗೆ, ಘಳಿಗೆಗೂ ಹೊಸಹೊಸ ರೀತಿಗೆ
ಈ ಜಗ ಓಡುತಿದೆ
ಹಳತ ನೋಡಿ ತಾ ಕಿಲಕಿಲ ನಗುತಲಿ
ಈ ಜಗ ಓಡುತಿದೆ

ಇದು ಪು.ತಿ.ನ ಭಾವಗೀತೆಯೊಂದರ ಪಲ್ಲವಿ. ಹೊಸ ವರ್ಷದಲ್ಲಿ ಪಾಲ್ಗೊಳ್ಳುವ ಖುಷಿಯ ನಡುವಲ್ಲಿ ಇದು ಏಕೋ ನೆನಪಾಯಿತು ಅಷ್ಟೇ.

ಭಾವಗೀತೆಗಳು ನೆನಪನ್ನು ಹೊತ್ತು ತರುವುದರ ಜೊತೆಜೊತೆಗೆ ಕಾಡುತ್ತವೆ. ಒಂದೊಂದು ಸಾಲಿನಲ್ಲೂ ನೂರಾರು ಅರ್ಥಗಳು, ಬಣ್ಣಿಸಲಾಗದಷ್ಟು ಭಾವಗಳು. 2018 ನ್ನು ದಾಟಿ 2019ಕ್ಕೆ ಕಾಲಿಡುವ ನಾವು ಕೂಡಾ ಹಳತನ್ನು ನೋಡಿ ಹೀಗೇ ಭಾವಿಸಬಹುದೇ..? ಕೆಲವೊಂದು ವಿಷಯಗಳಿಗೆ ಹೌದು, ಕೆಲವೊಂದು ವಿಚಾರಗಳಿಗೆ ಇಲ್ಲ.. ಇದು ಬರೀ ಹಳೆ ಹೊಸ ವರ್ಷಗಳ ವಿಚಾರ ಮಾತ್ರವಲ್ಲ, ನಮ್ಮ ದಿನನಿತ್ಯದ ಬದುಕಿನಲ್ಲಿಯೂ ಹೀಗೇ ಅಲ್ಲವೇ..?

ಕಾಲ ಓಡುತ್ತಲೇ ಇರುತ್ತದೆ, ಕಾಲಾಯ ತಸ್ಮೈ ನಮಃ ಎನ್ನುತ್ತಾ ಓಡುವ ಕಾಲದ ಜೊತೆಗೆ ನಾವು ಓಡುತ್ತಲೇ ಇರುತ್ತೇವೆ ಕೆಲವೊಮ್ಮೆ ನಮ್ಮ ನಿರ್ಧಾರದ ಅನುಗುಣವಾಗಿ ಆದರೆ ಕೆಲವೊಮ್ಮೆ ಇತರರಿಗಾಗಿ. ಬಂದ ಬದಲಾವಣೆಗೆಲ್ಲಾ ನಾವು ಹೊಂದಿಕೊಳ್ಳುವ ಕಾರಣ ಕೊಡಲು ಒಪಯೋಗಿಸುವುದು ಕಾಲಾಯ ತಸ್ಮೈ ನಮಃ ಎಂದು ಮಾತ್ರ. ಹೊಸತನಕ್ಕೆ ಹೊಂದಿಕೊಳ್ಳುವ ಭರದಲ್ಲಿ ಏಕೋ ಹಳೆಯದೆಲ್ಲವನ್ನು ಮೂಲೆಗುಂಪು ಮಾಡುತ್ತಿದ್ದೇವೆ.

ಹೊಸ ನೀರು ಬಂದ ಮೇಲೆ ಹಳೆಯ ನೀರಿನ ಅವಶ್ಯಕತೆ ಮುಗಿದಂತೆ ಎಂದೇ ಭಾವಿಸುತ್ತೇವೆ ಆದರೆ ಇಷ್ಟು ಬದುಕಲು ಅವಶ್ಯಕತೆಯಾಗಿ ಜೀವದಾಯಿನಿಯಾಗಿದ್ದುದು ಆ ಹಳೆಯ ನೀರೇ ಎಂಬುದನ್ನು ಮಾತ್ರ ಮರೆತುಬಿಡುತ್ತೇವೆ. ತಾತ್ಸಾರದಲ್ಲಿ ಹಳೆಯದ್ದು ಮೂಲೆಗುಂಪಾಗಿಬಿಡುತ್ತದೆ. ಎಲ್ಲೋ ಯಾವಾಗಲೋ ಓದಿದ ಕಥೆಯೊಂದು ನೆನಪಾಗುತ್ತಿದೆ ಅದು ಹೀಗಿದೆ.

ಒಬ್ಬ ಶ್ರೀಮಂತ ತನ್ನ ಮನೆಯ ಹಿಂದಿರುವ ಒಂದು ಮರವನ್ನು ಕಡಿಸಲು ಆಲೋಚಿಸಿ ಒಬ್ಬ ಮರಕಡಿಯುವವನನ್ನು ಅರಸುವಾಗ ಅಲ್ಲಿಗೆ ಒಬ್ಬ ಮರಕಡಿಯುವವನು ಬರುತ್ತಾನೆ.  ಮರಕಡಿಯುವವನು ಆ ಮರಕ್ಕೆ  ನೂರು ಕೊಡಲಿ ಪೆಟ್ಟು ಕೊಟ್ಟರೂ ಆ ಮರ ತುಂಡಾಗುವುದಿಲ್ಲ ಆಗದು ಎಂದು ಕೈ ಚೆಲ್ಲಿ ಕುಳಿತಿದಿದ್ದಾಗ ಮತ್ತೊಬ್ಬ ಬಂದು ನಾನು ಈ ಮರವನ್ನು ಕಡಿಯುತ್ತೇನೆ ಎಂದು ಹೇಳಿ ಮರ ಕಡಿಯಲು ಶುರು ಮಾಡುತ್ತಾನೆ. ಅವನ ಹತ್ತನೇ ಕೊಡಲಿ ಪೆಟ್ಟಿಗೆ ಮರ ತುಂಡಾಗಿ ಬೀಳುತ್ತದೆ. ಆಗ ಅವನು ಗರ್ವದಿಂದ "ನೋಡಿ ನನ್ನ ತಾಕತ್ತು, ನನ್ನ ಹತ್ತೇ ಹತ್ತು ಪೆಟ್ಟಿಗೆ ಹೇಗೆ ಮರ ಉರುಳಿ ಬಿತ್ತು" ಎನ್ನುವಾಗ ಧನಿಕ ಹೇಳುತ್ತಾನೆ ಆ ಮರ ಉರುಳಿ ಬಿದ್ದದ್ದು ಬರೀ ಹತ್ತು ಪೆಟ್ಟಿಗಲ್ಲ, ಅದರ ಹಿಂದೆ ನೂರು ಕೊಡಲಿ ಪೆಟ್ಟುಗಳ ಶ್ರಮವಿದೆ ಎಂದು.

ನನ್ನಿಂದಲೇ ಆದದ್ದು, ನಾನಿಲ್ಲದೆ ಏನೂ ಇಲ್ಲ ಎಂದು ಹೇಳುವವರಿಗೂ ಮತ್ತು ಹಳತನ್ನು ಮರೆತು ಹೊಸತನಕ್ಕೆ ಬೆಲೆಕೊಡುವ ಎಲ್ಲರಿಗೂ ಇದು ಒಳ್ಳೆಯ ನೀತಿಯನ್ನೇ ಸಾರುತ್ತದೆ.

ಹಣ್ಣೆಲೆಯನ್ನು ನೋಡಿ ನಕ್ಕ ಚಿಗುರೆಲೆಗೆ ಹಣ್ಣೆಲೆ ಹೇಳಿತಂತೆ "ನನ್ನಂತೆ ನಾಳೆ ನೀನೂ ಉದುರುವುದೇ ಅಲ್ಲವೇ?" ಎಂದು. ಇಂದು ಹೊಸದಾಗಿರುವುದು ನಾಳೆ ಹಳತಾಗಲೇ ಬೇಕಲ್ಲವೇ..? ಇಂದಿನ ಹಳೆವರ್ಷ ಹಿಂದಿನ ಹೊಸವರ್ಷವೇ ಆಗಿತ್ತಲ್ಲವೇ? ನಾವು ಸಂಭ್ರಮಿಸುವುದು ಹೊಸತನವನ್ನು ಸ್ವಾಗತಿಸಲೋ ಅಥವಾ ಹಳೆಯದೆಲ್ಲಾ ಮುಗಿಯಿತಲ್ಲಾ ಎಂಬ ಸಂತಸಕ್ಕೋ ಗೊತ್ತಿಲ್ಲ ಆದರೆ ನಮ್ಮ ಸಡಗರ, ಸಂಭ್ರಮ ಹಳೆಯದನ್ನು ನೋಡಿ ಮಾಡುವ ವ್ಯಂಗ್ಯವಾಗಬಾರದು ಮತ್ತು ಮತ್ತೊಬ್ಬರ ನೋವಿಗೂ ಕಾರಣವಾಗಬಾರದು. ಅದು ಹೊಸ ವರ್ಷಕ್ಕೂ ಅನ್ವಯ, ಕಾಲದೊಂದಿಗೆ ಓಡುವ ಹೊಸ ಬದುಕಿಗೂ ಅನ್ವಯ. ಸಂಭ್ರಮಿಸುವುದಕ್ಕೆ ಅಡ್ಡಿಯಿಲ್ಲ. ಸಣ್ಣ ಸಣ್ಣ ಖುಷಿಗಳ ಮೂಲ ಸಂಭ್ರಮವೇ ಅಲ್ಲವೇ? ಆದರೆ ಅರ್ಥಪೂರ್ಣವಾದ ಆಚರಣೆ ಈ ಸಂಭ್ರಮಗಳ ಸಾರ್ಥಕತೆಗೆ ಕಾರಣವಾಗುತ್ತದಲ್ಲವೇ? ನನ್ನ ಉತ್ತರವಂತೂ ಹೌದು ಎಂಬುದಾಗಿಯೇ.. ನಿಮ್ಮದು..?

~ವಿಭಾ ವಿಶ್ವನಾಥ್   

ಭಾನುವಾರ, ಡಿಸೆಂಬರ್ 23, 2018

ಕಥೆಯುಳ್ಳ ಹಾಡಿನ ಕಥೆ


ತಂಬೂರಿ ಮೀಟಿಕೊಂಡು ಹಾಡುವವರನ್ನು ಕಂಡು, ಆ ಹಾಡುಗಳನ್ನು ಕೇಳಿ ಎಷ್ಟೋ ವರ್ಷಗಳೇ ಕಳೆದು ಹೋಗಿದ್ದವು. ನಾನು ಚಿಕ್ಕಂದಿನಲ್ಲಿದ್ದಾಗ ಹಳ್ಳಿಹಳ್ಳಿಗಳ ಮೇಲೆ ಹೋಗುತ್ತಿದ್ದವರು ಹೇಳುತ್ತಿದ್ದ ಹಾಡುಗಳನ್ನು ಕೇಳುತ್ತಿದ್ದದ್ದು ರೂಡಿ, ಹೆಚ್ಚಿನಂಶ ಅವರುಗಳು ಬರುತ್ತಿದ್ದದ್ದು ಬೆಳಗಿನ ವೇಳೆ ತಂಬೂರಿ ಮೀಟುತ್ತಾ ಹಾಡು ಹಾಡಿ ತಿಂಡಿ ತಿಂದು ಅಕ್ಕಿಯನ್ನೋ ಕಾಯನ್ನೋ ಪಡೆದುಕೊಂಡು ಹೊರಡುತ್ತಿದ್ದರು, ಅವರ ಪ್ರತಿಭೆಗೆ ಗೌರವಾರ್ಥವಾಗಿ ಹಳ್ಳಿಗಳಲ್ಲಿ ಅಕ್ಕಿ ಅಥವಾ ತೆಂಗಿನಕಾಯಿಯನ್ನೋ ಕೊಟ್ಟು ಸ್ವಲ್ಪ ಸಮಯ ಆ ಹಾಡಿನ ಕುರಿತೋ ಅಥವಾ ಹಳ್ಳಿಗಳ ಕುರಿತೋ ಮಾತನಾಡಿ ಕಳುಹಿಸಿ ಕೊಡುತ್ತಿದ್ದರು ನಂತರದ ದಿನಗಳಲ್ಲಿ ಬದಲಾದ ತಂತ್ರಜ್ಞಾನ ಯುಗದಲ್ಲಿ ಮರೆಯಾಗಿಯೇ ಬಿಟ್ಟಿದ್ದರು. ತೀರಾ ಚಿಕ್ಕ ವಯಸ್ಸಿನಲ್ಲಿ ಆ ಹಾಡುಗಳು ಅರ್ಥವಾಗುತ್ತಿರಲಿಲ್ಲ ನಂತರದ ದಿನಗಳಲ್ಲಿ ಕಥೆಗಳನ್ನು ಹೇಳುತ್ತಿದ್ದ ಆ ಹಾಡುಗಳು ಸ್ವಲ್ಪ ಸ್ವಲ್ಪ ಅರ್ಥವಾಗುತ್ತಿತ್ತು, ಆನಂತರ ಕೇಳಬೇಕೆಂದರೂ ಆ ಅವಕಾಶ ದೊರೆತಿರಲಿಲ್ಲ. ಅಚಾನಕ್ಕಾಗಿ ಈ ಅವಕಾಶ ದೊರೆತದ್ದು ಅದೃಷ್ಟ ಅಂದರೂ ತಪ್ಪಾಗಲಾರದು.

ಅಂದ ಹಾಗೆ ಇದು ಕೇಳಿದ್ದು ಹಳ್ಳಿಯಲ್ಲಲ್ಲ. ನಾನವರನ್ನು ನೋಡಲೂ ಇಲ್ಲ. ಬೆಳಿಗ್ಗೆ ನಾನು ನನ್ನ ಚಿಕ್ಕಿ(ಚಿಕ್ಕಮ್ಮ) ಜೊತೆಗೆ ಫೋನ್ ನಲ್ಲಿ ಮಾತನಾಡುತ್ತಾ ಇರುವಾಗ ಯಾರೋ ಹಾಡು ಹೇಳುತ್ತಿದ್ದದ್ದು ಕೇಳಿಸ್ತು. ಆಗ ಕೇಳಿದ್ದಕ್ಕೆ ಒಬ್ಬರು ಅಜ್ಜಿ ಇಲ್ಲೇ  ಹಾಡ್ತಾ ಇದ್ದಾರೆ ಅಂದ್ರು. ಜೊತೆಗೆ ನನ್ನ ಹುಚ್ಚು ಗೊತ್ತಿದ್ದ ಅವರೂ ತಾಳು ಇಲ್ಲೇ ಕರೀತೀನಿ ಅಂದ್ರು, ನಂಗಂತೂ ತುಂಬಾ ಖುಷಿ ಆಯ್ತು. ಸರಿ, ಲೌಡ್ ಸ್ಪೀಕರ್ ಆನ್ ಮಾಡಿ ಹಾಗೇ ರೆಕಾರ್ಡ್ ಮಾಡಿಕೊಳ್ತೀನಿ ಅಂದೆ, ಸರಿ ಅಜ್ಜಿನೂ ಬಂದ್ರು ವಾಡಿಕೆಯಂತೆ ಉಭಯ ಕುಶಲೋಪರಿ ಕೂಡಾ ಆಯ್ತು, ನಂತರ ಒಂದು ಜಾನಪದ ಹಾಡನ್ನು ಶುರು ಮಾಡಿದರು.

ಶಿವ ಮತ್ತು ಗೌರಿ(ಪಾರ್ವತಿ)ಯರ ಕಲ್ಯಾಣದ ಕಥೆಯನ್ನು ಕಥಾವಸ್ತುವನ್ನಾಗಿ ಉಳ್ಳಂತಹಾ ಹಾಡು. ದೇವರು ಶಾಪಗ್ರಸ್ಥವಾಗೇ ಭೂಮಿಯಲ್ಲಿ ಹುಟ್ಟಬೇಕಾಗಿಲ್ಲ ಎಂಬುದು ಯಾಕೋ ಅಪ್ರಯತ್ನವಾಗೇ ಮನಸ್ಸಿಗೆ ಹೊಳೆಯಿತು. ನಾವು ಗೌರಿ ಹಬ್ಬವನ್ನು ಆಚರಿಸುವ ಹಿಂದಿನ ಪರಿಕಲ್ಪನೆಯೂ ಬಹುಶಃ ಈ ಪರಿಕಲ್ಪನೆಯಿಂದಲೇ ಹುಟ್ಟಿರಬಹುದೇನೋ.. ಭೂಲೋಕದ ತನ್ನ ತಾಯಿ(ತವರು) ಮನೆಗೆ ಬರುವಂತಹಾ ಸಂಧರ್ಭ..

ಶಿವ ಮತ್ತು ಪಾರ್ವತಿ ಇಬ್ಬರೂ ಸಹಾ ಭೂಲೋಕದಲ್ಲಿ ಹುಟ್ಟಿದ್ದಾರೆ ಆದರೆ ಪರಸ್ಪರರ ಪರಿಚಯವಿಲ್ಲ. ಇತ್ತ ಗೌರಿ ಹನ್ನೆರಡು ವರ್ಷಕ್ಕೆ ಮೈನೆರೆಯುತ್ತಾಳೆ, ಆಗಿನ ಸಂಪ್ರದಾಯದಂತೆ ಆಕೆಗೆ ವಿವಾಹಯೋಗ್ಯ ವಯಸ್ಸು.. ಹಾಗಾಗಿ ಮನೆಯಲ್ಲಿ ವರನನ್ನು ಹುಡುಕಲು ಶುರು ಮಾಡುತ್ತಾರೆ, ಆದರೆ ಗೌರಿಗೆ ಕೇಳುತ್ತಾರೆ ಈ ವರ ಆಗಬಹುದೇ ಎಂಬ ಪ್ರಶ್ನೆಯನ್ನು ಅವಳ ಒಪ್ಪಿಗೆಗಾಗಿ ಕೇಳುತ್ತಾರೆ, ಇದು ಆಗಿನ ಕಾಲದಲ್ಲಿದ್ದ ಸ್ವಯಂವರ ಪದ್ದತಿಯನ್ನು ನೆನಪಿಸುತ್ತದೆ, ಜೊತೆಗೆ ಸ್ತ್ರೀಯರಿಗೆ ಕೊಡುತ್ತಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನೆನಪು ಮಾಡಿಕೊಡುತ್ತದೆ. ಜೊತೆಗೆ ಯಾರನ್ನೂ ಜರಿಯಬೇಡವೆಂಬ ಕಿವಿಮಾತು ಕೂಡಾ ಕೇಳಿಬರುತ್ತದೆ, ಅವರವರಿಗೆ ಅವರದ್ದೇ ಆದಂತಹಾ ವ್ಯಕ್ತಿತ್ವಗಳಿರುತ್ತವೆ, ಅವರದ್ದೇ ಆದ ಗೌರವವಿರುತ್ತದೆ ಅದು ನಮಗೆ ಸರಿ ಬರದಿದ್ದರೆ ಅದು ನಮ್ಮ ಆಲೋಚನೆಗೆ ಸಂಬಂಧಪಟ್ಟಿರುವುದಷ್ಟೇ.. ಇದು ಇಂದಿನ ದಿನಗಳಲ್ಲೂ ಎಲ್ಲರಿಗೂ ಅನ್ವಯಿಸುವಂತಹಾ ಮಾತು ಎಂದರೂ ತಪ್ಪಾಗಲಾರದು. ಈ ಎಲ್ಲಾ ಮಾತುಗಳೂ ನಡೆದು ಗೌರಿ ತಿಳಿಸಿದಂತಹಾ ವರ ಶಿವನೇ ಆಗಿ ಅವರಿಬ್ಬರ ಕಲ್ಯಾಣವಾಗುತ್ತದೆ. ರಸವತ್ತಾದ ಸಂಭಾಷಣೆಗಳಿರುವ ಈ ಹಾಡು ನಿಜಕ್ಕೂ ಆ ಪಾತ್ರಗಳನ್ನು ನಮ್ಮ ಕಣ್ಮುಂದೆ ತಂದು ನಿಲ್ಲಿಸುತ್ತದೆ.

ನಾನು ಈ ಹಾಡಿನಲ್ಲಿ ರೆಕಾರ್ಡ್ ಮಾಡಿ ಹಾಕಿರುವುದು ಕೆಲವೇ ನಿಮಿಷಗಳು. ಬಹುಷಃ ನಮ್ಮ ಮುಂದಿನ ಜನರೇಷನ್ಗಳಿಗೆ ಹೋಲಿಸಿಕೊಂಡರೆ ನಾವೇ ಲಕ್ಕಿ ಎನ್ನಿಸುತ್ತದೆ, ನಮ್ಮ ಮುಂದಿನ ಜನರೇಷನ್ಗಳು ಇದರ ಕುರಿತು ತಿಳಿದುಕೊಂಡರೂ ನೋಡುವುದು ಅಪರೂಪವೇ ಆಗಬಹುದು. ಅಷ್ಟಕ್ಕೂ ಆ ಅಜ್ಜಿಗೆ ಓದು ಬರಹ ತಿಳಿದಿಲ್ಲ, ನೆನಪಿನಶಕ್ತಿಯಿಂದಲೇ ಇಷ್ಟು ಚೆಂದವಾಗಿ ಹಾಡಬಹುದಾದರೆ ಓದು ಬರಹ ತಿಳಿದಿದ್ದರೆ..? ಅವರ ಮುಗ್ದತೆ ಕೂಡಾ ಚೆಂದವೇ.. ಅವರು ಹಾಡಿದ ನಂತರ ಕಾಣದ ಕೇಳುಗಳಾದ ನನ್ನ ಹತ್ತಿರ ಹಾಡು ಹೇಗಿತ್ತು? ಇಷ್ಟವಾಯಿತಾ? ಎಂದು ಕೇಳಿದರು. ರೆಕಾರ್ಡ್ ಮಾಡಿದ ಧ್ವನಿಯನ್ನು ಅವರಿಗೆ ಕೇಳುವ ಆಸೆ ಕೂಡಾ ಇತ್ತು. ಕೇಳಿದರು ಕೂಡಾ.. ಟೆಕ್ನಾಲಜಿ ಕೆಲವೊಮ್ಮೆ ವರ ಕೂಡಾ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳುವೆ.

ಅವರು ಹಾಡಿದ ಆ ಹಾಡು, ನಾನು ರೆಕಾರ್ಡ್ ಮಾಡಿದಷ್ಟು ನಿಮ್ಮ ಮುಂದಿದೆ, ಕೇಳಿ.. ಇದೆಲ್ಲಾ ಹುಚ್ಚಾಟ ಅನ್ನಿಸಿದರೆ ಒಮ್ಮೆ ನಕ್ಕು ಸುಮ್ಮನಾಗಿ ಅಷ್ಟೇ..

~ವಿಭಾ ವಿಶ್ವನಾಥ್

ಗುರುವಾರ, ಡಿಸೆಂಬರ್ 20, 2018

ಆ ಪಾದಗಳು

ನಸುಗೆಂಪಿನ ಗುಲಾಬಿ ಪಕಳೆಗಳಂತಹಾ
ಪುಟ್ಟ ಪುಟ್ಟ ಪಾದಗಳನ್ನು ಕಂಡಾಗ
ನನ್ನ ದೃಷ್ಟಿಯೇ ತಗುಲಬಹುದೆಂಬ ಭಯದಿ
ನನ್ನ ಏಳುಸುತ್ತಿನ ಮಲ್ಲಿಗೆ ತೂಕದ
ರಾಜಕುಮಾರಿಯ ಅಂಗಾಲಿಗೆ ದೃಷ್ಟಿಬೊಟ್ಟಿಡುತ್ತೇನೆ
ಗರ್ಭದಲ್ಲಿದ್ದಾಗ ಒದ್ದ ಪಾದಗಳ
ಹಣೆಗೊತ್ತಿಕೊಂಡು ಮುದ್ದಾಡುತ್ತೇನೆ ಈಗ
ಫಕ್ಕನೆ, ಅಮ್ಮ ನೆನಪಾಗುತ್ತಾಳೆ..
ಅವಳೂ ಹೀಗೇ ಪುಳಕಿತಳಾಗಿದ್ದಳೇ..?
ಯೋಚಿಸಿದರೇ ಮೈ ನವಿರೇಳುತ್ತದೆ
ಅಮ್ಮ ಬಂದಾಕ್ಷಣ ಕೇಳಬೇಕು..!
ಎಂದುಕೊಂಡೇ ರಾಜಕುಮಾರಿಯ ಅಂಗಾಲಿನ
ಮೃದುವಿಗೆ ಮೈ ಮರೆತು ಬಿಡುತ್ತೇನೆ..
ರಾತ್ರಿ ಊಟವೆಲ್ಲಾ ಮುಗಿದು
ಅರೆಕ್ಷಣ ಕುಳಿತ ಅಮ್ಮನ ದಿಟ್ಟಿಸುತ್ತೇನೆ..
ಚಳಿಗೆ ಬಿರುಕು ಬಿಟ್ಟ ಪಾದಗಳಿಗೆ
ವ್ಯಾಸಲೀನ್ ಹಚ್ಚುವವಳ ಕಂಡು
ನಿಟ್ಟುಸಿರು ಬಿಟ್ಟು ಸುಮ್ಮನಾಗುತ್ತೇನೆ..
ನನ್ನ ಪುಟ್ಟ ರಾಜಕುಮಾರಿಯೂ ಸಹಾ
ಮುಂದೊಮ್ಮೆ ಹೀಗೇ ದಿಟ್ಟಿಸಬಹುದೇ..?
ಎಂದು ಯೋಚಿಸುತ್ತಾ ಯೋಚಿಸುತ್ತಾ
ಪುಟಾಣಿಯ ಪಾದಗಳಿಗೆ ಹೊದಿಕೆ ಹೊದಿಸುತ್ತಾ
ಅಮ್ಮನಾದ ಸಾರ್ಥಕತೆಯಲ್ಲೇ ಮಿಂದೇಳುತ್ತಾ
ಅಮ್ಮನನ್ನೇ ಮರೆತ ನಾನೂ ಸಹಾ
ಅಮ್ಮನಂತಾ ಅಮ್ಮನೇ ಆಗಿ ಬಿಡುತ್ತೇನೆ..

~ವಿಭಾ ವಿಶ್ವನಾಥ್ 

ಶುಕ್ರವಾರ, ಡಿಸೆಂಬರ್ 14, 2018

ಹಸನು

ಯಶಸ್ ತನಗೆ ಬೆಂಗಳೂರಲ್ಲಿ ಸಿಕ್ಕಿದ್ದ ಉತ್ತಮ ಸಂಬಳದ ಕೆಲಸವನ್ನು ಬಿಟ್ಟು ಮತ್ತೆ ತನ್ನ ಹಳ್ಳಿಗೆ ಬಂದಾಗ ಸುತ್ತಮುತ್ತಲಿನವರಿಂದ ಸಿಕ್ಕಿದ್ದು ಚುಚ್ಚು ಮಾತು, ವ್ಯಂಗ್ಯದ ನೋಟಗಳೇ. ಆದರೆ ಅಂದಿನ ಪರಿಸ್ಥಿತಿಗೆ ಹೆದೆಗುಂದದೆ ತನ್ನ ನಿಲುವಿಗೇ ಅಂಟಿಕೊಂಡು ಇಂದು ಯಶಸ್ಸು ಸಾಧಿಸಿದ್ದ ಯಶಸ್.

ಅದೇಕೋ ಯಶಸ್ ಗೆ ಹುಟ್ಟಿ ಬೆಳೆದ ಪರಿಸರದ ಮೇಲೆ ಅಪಾರ ವ್ಯಾಮೋಹ. "ಎಷ್ಟೇ ಓದಿದ್ದರೂ, ಹಳ್ಳಿಯಲ್ಲಿದ್ದರೆ ಹೆಣ್ಣು ಕೊಡುವುದಿಲ್ಲ ಆದರೆ ಪಟ್ಟಣದಲ್ಲಿ ಸಣ್ಣ ಕೆಲಸದಲ್ಲಿದ್ದರೂ ಹೆಣ್ಣು ಕೊಡಲು ನಾ ಮುಂದು, ತಾ ಮುಂದು" ಎಂದು ಬರುವ ಕನ್ಯಾಪಿತೃಗಳ ಮನಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡ ಯಶಸ್ ನ ತಂದೆ-ತಾಯಿ ಅವನನ್ನು ಇಂಜಿನಿಯರಿಂಗ್ ಗೆ ಸೇರಿಸಿದರು. ಯಶಸ್ ಮನೆಯಿಂದಲೇ ಕಾಲೇಜಿಗೆ ಹೋಗಿ ಬಂದು ಮಾಡುತ್ತಿದ್ದುದರಿಂದ ಅವನಿಗೆ ಆಗ ಸಮಸ್ಯೆ ಎನ್ನಿಸಿರಲಿಲ್ಲ. ಅದೂ ಅಲ್ಲದೆ ಅವನಿಗೆ ಇಂಜಿನಿಯರಿಂಗ್ ಗಿಂತಲೂ ಹೊಲ-ಗದ್ದೆ, ತೋಟ, ತೊರೆಗಳ ಮೇಲೆಯೇ ಅವನಿಗೆ ಹೆಚ್ಚು ಪ್ರೀತಿ. ಹಾಗೆಂದು ಓದಿನಲ್ಲೇನೂ ಹಿಂದುಳಿಯಲಿಲ್ಲ ಅವನು.

ನಾಲ್ಕು ವರ್ಷದ ಇಂಜಿನಿಯರಿಂಗ್ ನ ನಂತರ ಕೆಲಸ ಸಿಕ್ಕಿದ್ದು ದೂರದ ಬೆಂಗಳೂರಿನಲ್ಲಿ. ಅದೂ ಅಲ್ಲದೆ ಅಲ್ಲಿನ ಯಾಂತ್ರಿಕ ಜೀವನ ಮೂರೇ ದಿನದಲ್ಲಿ ಬೇಸರ ತರಿಸಿತ್ತು. ಅಷ್ಟೇ ಅಲ್ಲದೆ ಅವನಿಗೆ ಆಶ್ಚರ್ಯ ತರಿಸಿದ್ದು ಅಲ್ಲಿನ ವಿರೋಧಾಭಾಸಗಳ ಸಂಗತಿ. ಹಳ್ಳಿಯಲ್ಲಿರುವವರು ಕೆಲಸಕ್ಕೆಂದು ದೂರದ ಪಟ್ಟಣಗಳತ್ತ ಮುಖ ಮಾಡಿದ್ದರೆ, ಅಲ್ಲಿರುವವರು ಕಲುಷಿತ ವಾತಾವರಣಕ್ಕೆ ಬೇಸತ್ತು ಹಳ್ಳಿಯ ಸ್ವಚ್ಚಂದವಾದ ಹಳ್ಳಿಯ ಪರಿಸರಕ್ಕೆ ಮುಖ ಮಾಡಿದ್ದರು. ಇದೆಲ್ಲವನ್ನು ಕಂಡು ತಾನೂ ಧೃಡ ನಿರ್ಧಾರ ಮಾಡಿ ಭೂ ತಾಯಿಯ ಸೇವೆ ಮಾಡಲು ಹಳ್ಳಿಗೆ ಮರಳಿದ್ದ.

ಇಷ್ಟಲ್ಲದೆ ಕೃಷಿ ಅಲ್ಲಿ ವ್ಯಾಪಾರೀಕರಣದ ಭಾಗವೇ ಆದಂತೆ ಭಾಸವಾಗುತ್ತಿತ್ತು. ಆರ್ಗಾನಿಕ್ ಫಾರ್ಮಿಂಗ್ ಇದಕ್ಕೊಂದು ಉದಾಹರಣೆ. ಆರ್ಗಾನಿಕ್ ಫಾರ್ಮಿಂಗ್ ನಲ್ಲಿ ಒಂದಿಷ್ಟು ಜಾಗವನ್ನು ಇಂತಿಷ್ಟು ಹಣ ಎಂದು ನೀಡಿ ಇಂತಿಷ್ಟು ದಿನಕ್ಕೆ ಎಂದು ಕೊಂಡುಕೊಂಡು ಅದರಲ್ಲಿ ನಮ್ಮಿಷ್ಟದ ತರಕಾರಿ, ಸೊಪ್ಪುಗಳನ್ನು ರಾಸಾಯನಿಕಗಳನ್ನು ಬಳಸದೆ ಬೆಳೆಯಬೇಕಿತ್ತು. ಈ ಪದ್ದತಿಯಿಂದ ಹೆಚ್ಚು ಖುಷಿ ಪಟ್ಟವರು ಮಕ್ಕಳು. ಮಕ್ಕಳು ಇದರಿಂದ ಪುಳಕಿತರಾಗಿ ಕೃಷಿಯತ್ತ ಒಲವು ತೋರುತ್ತಿದ್ದರು. ಕೃಷಿ ಹೊಸ ರೀತಿಯ ಪ್ರಯೋಗದಿಂದ ಮತ್ತೆ ಬೆಳಕಿಗೆ ಬರುತ್ತಿದ್ದುದು ಖುಷಿಯ ವಿಚಾರವಾದರೆ, ವ್ಯಾಪಾರೀಕರಣವಾಗುತ್ತಿರುವುದು ವಿಪರ್ಯಾಸ.

ಇಂತಹ ಸಂದರ್ಭದಲ್ಲಿ ಕವಿತಾ ಮಿಶ್ರ ಎಂಬ ಮಹಿಳೆಯ ಸಾಧನೆ ಯಶಸ್ ಅನ್ನು ಅಚ್ಚರಿಗೊಳಿಸಿತ್ತು. ಸೈಕಾಲಜಿ, ಕಂಪ್ಯೂಟರ್ ಸೈನ್ಸ್ ಓದಿದ್ದರೂ ಕೃಷಿಯ ಕಡೆ ಮುಖ ಮಾಡಿದ್ದ ಮಹಿಳೆ ಕವಿತಾ. ರಾಯಚೂರಿನಂತಹಾ ಬರಡು ಭೂಮಿಯಲ್ಲಿ ಬಂಗಾರದಂತಹಾ ಬೆಳೆ ತೆಗೆದವರು ಆಕೆ. ಆಕೆ ಬಳಸಿದ್ದ ಹನಿ ನೀರಾವರಿ ಮತ್ತು ಸಾವಯವ ಕೃಷಿ ಪದ್ದತಿ ಯಶಸ್ ನ ಮನಸೆಳೆಯಿತು. ಇದಿಷ್ಟೇ ಅಲ್ಲದೆ ಕಡಿಮೆ ಜಾಗದಲ್ಲಿ ಹೆಚ್ಚಿನ ಬೆಳೆ ಬೆಳೆಯಬಹುದಾದ ವರ್ಟಿಕಲ್ ಗಾರ್ಡನಿಂಗ್, ಅತಿ ಕಡಿಮೆ ನೀರು ಬಳಸಿ ಬೆಳೆಯುವ ಹೈಡ್ರೋಫೋನಿಕ್ ಕೃಷಿ ವಿಧಾನ ಇವುಗಳನ್ನು ಅರಿತು ಅಳವಡಿಸಿಕೊಂಡ ಯಶಸ್.

ಕಷ್ಟ ಪಟ್ಟವರಿಗೆ ಫಲ ಸಿಕ್ಕೇ ಸಿಗುತ್ತದೆ, ಆದರೆ ತುಸು ಕಾಯಬೇಕಾಗುತ್ತದೆ. ಯಶಸ್ ನ ವಿಷಯದಲ್ಲೂ ಹೀಗೇ ಆಯಿತು. ಮೊದಲೆರಡು ವರ್ಷ ಮಳೆಯ ಅಭಾವ, ಅತಿ ಮಳೆ ಬಂದು ಹಾಳು ಮಾಡಿದರೆ ನಂತರದಲ್ಲಿ ಕಾಡು ಪ್ರಾಣಿಗಳ ಕಾಟ, ಕಲಬೆರಕೆ ಗೊಬ್ಬರ, ಮಧ್ಯವರ್ತಿಗಳಿಂದ ಬೆಳೆಗೆ ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸಬೇಕಾಯಿತು.

ನಂತರ ತಾನು ಕಲಿತ ಇಂಜಿನಿಯರಿಂಗ್ ಅನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಕೃಷಿ ಇಳುವರಿಯನ್ನು ಅತ್ಯುತ್ತಮಗೊಳಿಸಿದ, ಕಾಡು ಪ್ರಾಣಿಗಳ ಕಾಟದಿಂದ ಮುಕ್ತನಾದ. ಕಲಬೆರಕೆ ಗೊಬ್ಬರದ ಬದಲಿಗೆ ಸಗಣಿಯನ್ನು ಉಪಯೋಗಿಸಿ ತಯಾರಿಸಿದ ಸಾವಯವ ಗೊಬ್ಬರವನ್ನು ಬಳಸಿದ. ಮಳೆನೀರಿಗಾಗಿ ಇಂಗು ಗುಂಡಿಗಳನ್ನು ತೆಗೆಸಿದ. ಹೈನುಗಾರಿಕೆಯ ಜೊತೆ ಮೀನು ಸಾಕಾಣಿಕೆಯನ್ನೂ ಶುರು ಮಾಡಿದ. ಇದರ ಜೊತೆಗೆ ವಿವಿಧ ಹಣ್ಣಿನ ಮರಗಳು, ತೇಗ, ಗಂಧ, ಹೊನ್ನೆಯಂತಹ ಮರಗಳನ್ನು ನೆಟ್ಟ. ಇವುಗಳ ಜೊತೆಗೆ ತನ್ನೂರಿನಲ್ಲಿ ಸಿಗುವ ವಿಶಿಷ್ಟ ಹೂ ಮತ್ತು ಹಣ್ಣಿನ ಗಿಡಗಳನ್ನು ಬೋನ್ಸಾಯ್ ಪದ್ದತಿಗೆ ಅಳವಡಿಸಿದ.

ಈಗ ಯಶಸ್ ಜಿಲ್ಲೆಯ ಮಾದರಿ ರೈತ ಎನ್ನಿಸಿಕೊಂಡಿದ್ದಾನೆ. ಈ ಕುರಿತಂತೆ ತನ್ನ ಅಭಿಪ್ರಾಯ ಕೇಳಿದ ವರದಿಗಾರನಿಗೆ ಯಶಸ್ ಹೇಳಿದ್ದಿಷ್ಟು, "ಭೂಮಿಯಲ್ಲಿ ಉತ್ತಮವಾಗಿ ಬಿತ್ತನೆ ಮಾಡಿದ್ದರೂ, ಕಲುಷಿತ ವಾತಾವರಣವಿದ್ದರೆ ಬೆಳೆ ಸರಿಯಾಗಿ ಬಾರದು., ಹಾಗೆಯೇ ಭೂಮಿಯೇ ಕಲುಷಿತವಾದರೆ ಅಥವಾ ಬಿತ್ತನೆಯ ಬೀಜದ ಗುಣಮಟ್ಟ ಸರಿಯಾಗಿರದಿದ್ದರೆ, ವಾತಾವರಣ ಚೆನ್ನಾಗಿದ್ದರೂ ಫಲ ಸರಿಯಾಗಿ ಬಾರದು. ಜೀವನವೂ ಹಾಗೆಯೇ.. ನಾವು ಹದಗೊಳಿಸಿಕೊಂಡಂತೆ ಜೀವನ, ಹಸನುಗೊಳಿಸಿಕೊಂಡಂತೆ ಬದುಕು. ರೈತನ ಜಾಣ್ಮೆ,ಶ್ರಮ, ಭೂಮಿಯ ಫಲವತ್ತತೆ, ಉತ್ತಮ ವಾತಾವರಣ ಇಳುವರಿಯ ಮೇಲೆ ಪ್ರಭಾವ ಬೀರಿದಂತೆ.. ಒಂದು ಸರಿಯಾದ ನಿರ್ಧಾರ, ಸಹಕಾರ ತುಂಬಿದ ವಾತಾವರಣ, ಅಚಲ ನಂಬಿಕೆ, ಪರಿಶ್ರಮಗಳು ಬದುಕನ್ನು ಹಸನು ಮಾಡುತ್ತವೆ."

~ವಿಭಾ ವಿಶ್ವನಾಥ್

ಬುಧವಾರ, ಡಿಸೆಂಬರ್ 5, 2018

'ನಾನು' ಸತ್ತರೆ..

ಸುನಿಧಿಯ ಆಲೋಚನೆ ಹಿಂದಕ್ಕೋಡಿತ್ತು. ಅದರ ಹಿಂದಿನ ಪ್ರಶ್ನೆ ಇದ್ದದ್ದು.. "'ನಾನು' ಸತ್ತರೆ..?

ತಾನು ಬಂದದ್ದು ತುಂಬಿದ ಸಂಸಾರದ ಸೊಸೆಯಾಗಿಯೇ.. ಹಿಂದೆಂದೂ ಇಲ್ಲದ ಹೊಸ ರೀತಿಯ ಭಾವನೆಗಳು, ಈ ಕುಟುಂಬವನ್ನು ನೋಡಿದೊಡನೆ ಉಂಟಾಯಿತು. ಬಹುಶಃ ನನ್ನಮ್ಮ ನೋಡಿ ಮಾಡಿದ ಮದುವೆಯೇ ಆಗಿದ್ದಿದ್ದರೆ ಅಮ್ಮ ಹೇಳುವ ಹಾಗೆಯೇ  ಹೈ ಸೊಸೈಟಿ ಫ್ಯಾಮಿಲಿಯ, ಯಾವುದೋ ಸಾಫ್ಟ್ವೇರ್ ಗಂಡ ಸಿಕ್ಕಿರುತ್ತಿದ್ದ. ಆದರೆ ಇದು ನಾನೇ ಬೇಕೆಂದು ಆರಿಸಿಕೊಂಡ ಸಂಬಂಧವಲ್ಲವೇ..?

ಬೇಕೆಂದಾಗ ಹೊಕ್ಕು, ಬೇಡವೆನ್ನಲು ಇದು ಬಿಟ್ಟು ಹೊರಡುವ ಸಂಬಂಧವಲ್ಲವಲ್ಲಾ..!? ಸಾತ್ವಿಕ್ ನನ್ನು ಮದುವೆಯಾಗುವಾಗ ಅವನು ತಿಳಿಸಿದ್ದ "ನೀನು ಮದುವೆಯಾಗುವುದು ನನ್ನನ್ನು ಮಾತ್ರವಲ್ಲ.. ನನ್ನ ಕುಟುಂಬವನ್ನು" ಎಂದು. ಹದಿಹರೆಯದ ಪ್ರೀತಿ, ಬಿಸಿ ರಕ್ತ ಎಲ್ಲವನ್ನೂ ಎಲ್ಲರನ್ನೂ ಒಪ್ಪಿಕೊಳ್ಳುವಂತೆ ಮಾಡಿತ್ತು. ನಾನು ನೋಡಿದ ದಾಂಪತ್ಯಗೀತೆಗಳೂ ಹಾಗೆಯೇ ಇದ್ದವಲ್ಲಾ.. ಮೊದಮೊದಲಿಗೆ ಮನೆಯವರೆಲ್ಲಾ ಸರ್ವಸ್ವ, ಮನೆಯವರು ಹೇಳಿದಂತೆಯೇ.., ಆದರೆ ನಂತರ ನನ್ನ ಮನೆದೇವರು ಹೇಳಿದಂತೆಯೇ.. ನನ್ನ ಮನೆಯಾಕೆಯೇ ನನ್ನ ಸರ್ವಸ್ವ.

ಆದರೆ ನಾನು ನೋಡಿದ ಹೆಚ್ಚಿನ ದಾಂಪತ್ಯಗಳೆಲ್ಲಾ ವಿಷಮಗೀತೆಗಳೇ.. ದಾಂಪತ್ಯ ಇನ್ನೂ ಚೆನ್ನಾಗಿ ಹೊಂದಿಕೊಂಡಿದೆಯೆಂದರೆ ಅದಕ್ಕೆ ಕಾರಣ ಒಡೆದ ಮನೆಗಳು ಅರ್ಥಾತ್ ಅವಿಭಕ್ತ ಕುಟುಂಬಗಳು. ಅತ್ತೆ-ಸೊಸೆ ಬೇರೆ ಬೇರೆ ಇರುವುದು ಆಷಾಡದಲ್ಲಿ ಮಾತ್ರವಲ್ಲ.. ಯಾವಾಗಲೂ..!

ಅಜ್ಜಿ ಅತ್ತೆಯರ ಸಂಬಂಧವೂ ಹಾಗೇ ಇದ್ದಿತ್ತು. ಒಂದೇ ನಾಣ್ಯದ ಎರಡು ಮುಖಗಳಂತೆಯೇ..? ಅಜ್ಜಿಯದ್ದು ಮಾತು ಜಾಸ್ತಿ ಆದರೂ ಮಾತುಗಳಲ್ಲಿ ಕೊಂಕು ಇರುತ್ತಿರಲಿಲ್ಲ.ಅತ್ತೆಯೂ ಅನುಸರಿಸಿಕೊಂಡು ಹೋಗದವರೇನೂ ಅಲ್ಲ. ಆದರೆ ಅವರ ಹೊಂದಾಣಿಕೆ ಮನೆಯವರೊಂದಿಗೆ ಮಾತ್ರ ಅಲ್ಲ ಎಂಬುದು ವಿಪರ್ಯಾಸ. ಅಮ್ಮ ಕೂಡಾ ಬಾಳಿದ್ದು ಕೂಡು ಕುಟುಂಬದಲ್ಲೇನೂ ಅಲ್ಲ. ಅಲ್ಲದೆ ಅತ್ತೆ ಮನೆಯಲ್ಲಿ ಹೀಗೇ ಇರಬೇಕೆಂದೂ ಅಮ್ಮ ಹೇಳಿಕೊಡಲಿಲ್ಲ. ಹೀಗೇ ಇರಬೇಕೆಂಬುದನ್ನು ಹೇಳಿಕೊಡಲು ಅಮ್ಮನಿಗೆ ಸಮಯವಾದರೂ ಎಲ್ಲಿತ್ತು..?  ಲೇಟ್ ನೈಟ್ ಪಾರ್ಟಿಗಳು, ಸೊಸೈಟಿ, ಕ್ಲಬ್ ಗಳ ಮೀಟಿಂಗ್ ಗಳು ಇದೆಲ್ಲದರ ನಡುವೆಯೇ ಅಮ್ಮ ಅಲ್ಲಲ್ಲ ಮಮ್ಮಿ ಕಳೆದುಹೋಗಿದ್ದಳು.

ಆದರೆ ನಾನು ಹೀಗಿರಲು ಕೊಂಚ ಮಟ್ಟಿಗೆ ಕಾರಣ ಅಪ್ಪನೇ.. ಸಾತ್ವಿಕ್ ನ ಸಂಬಂಧವನ್ನೂ ಯಾವ ತಕರಾರೂ ಇಲ್ಲದೆ ಒಪ್ಪಿಕೊಂಡಿದ್ದರು. ಅಲ್ಲದೆ ನನ್ನನ್ನು ಬೆಂಬಲಿಸಿದ್ದರು. ಅಲ್ಲದೆ ಹೊರಡುವ ಮುನ್ನ ಕೂಡ ಒಂದು ಕಿವಿಮಾತನ್ನೂ ಹೇಳಿದ್ದರು. "ಮನಸ್ಸೆಂಬುದು ನೀನು ಹರಿಯಬಿಟ್ಟಂತೆ, ಲಂಗು ಲಗಾಮು ನಿನ್ನೆಡೆಯೇ ಇರಲಿ".

ಆದರೆ ಈ ಮಾತನ್ನು ಮೀರುವ ಅಥವಾ ಮತ್ತೆ ನೆನಪಿಸಿಕೊಳ್ಳುವ ಸಂದರ್ಭ ಇದುವರೆಗೂ ಬಂದಿರಲಿಲ್ಲ. ಆದರೆ ಅಮ್ಮ ಇತ್ತೀಚೆಗೆ ಹೇಳಿದ ಮಾತು ತುಲನೆ ಮಾಡುವಂತೆ ಮಾಡಿತು ಅಷ್ಟೇ.  ಅಮ್ಮ ಅಲ್ಲಲ್ಲಾ ಮಮ್ಮಿ ಹೇಳಿದ್ದು, "ಆದಷ್ಟು ಬೇಗ ಆ ಜಾತ್ರೆಯಿಂದ ಹೊರಗಡೆ ಬಾ."

ಆದರೆ ನನಗೆಂದೂ ಇಲ್ಲಿ ಜಾತ್ರೆ ಅಥವಾ ಇಕ್ಕಟ್ಟಿನ ಅಥವಾ ಮತ್ತಾವುದೇ ಇರುಸುಮುರುಸಿನ ಅನುಭವವಾಗಿರಲಿಲ್ಲ. ಯಾವ ಕೆಲಸವೂ ಬರದ ನನಗೆ ಅತ್ತೆ ಅಮ್ಮನಾಗಿ.. ಓರಗಿತ್ತಿಯರು ಗೆಳತಿಯರಾಗಿ ಸಹಕರಿಸಿದರು. ಮೈದುನ, ಭಾವ, ಮಾವ ಎಲ್ಲರೂ ಒಳ್ಳೆಯವರೇ..

ಎಲ್ಲವನ್ನೂ ತಿದ್ದುತ್ತಿದ್ದ ಎಲ್ಲರೂ ಇಂದು ಅಷ್ಟು ಕಠೋರವಾಗಿ ನಡೆದುಕೊಂಡದ್ದಾದರೂ ಏಕೆ..?

ಕೆಲಸದವರನ್ನು ನಮ್ಮ ಮನೆಯಲ್ಲಿ ನಡೆಸಿಕೊಳ್ಳುತ್ತಿದ್ದದ್ದೇ ಹಾಗೆ..!

ಕೆಲಸದವನಾಗಿ ನನಗೇ ಏಕವಚನದಿಂದ ಮಾತನಾಡಿಸಿದ್ದೇ ಅಲ್ಲದೆ ನನ್ನ ಚಪ್ಪಲಿ ಹೊಲಿಸಿಕೊಂಡು ಬಾ ಎಂದದ್ದಕ್ಕೆ "ಆಗುವುದಿಲ್ಲ, ನಮಗೂ ಆತ್ಮಗೌರವವಿದೆ, ಹಿರಿಯರಿಗೆ ಗೌರವ ಕೊಡುವುದನ್ನು ಕಲಿ, ಅವರು ಕೆಲಸದವರಾದರೂ ಸರಿಯೇ" ಎಂದರು. ಕೋಪ ಬಂದು ಹೊಡೆದದ್ದೇ ತಪ್ಪಾ?

ಮನೆಯಲ್ಲಿ ಎಲ್ಲರೂ ಅಂದು ಕೋಪ ಮಾಡಿಕೊಂಡು ನನ್ನನ್ನೇ ದೂಷಿಸಿದರು. ನನ್ನ ಕೋಪವೂ ಮೇರೆ ಮೀರಿ ಮಾತಿಗೆ ಮಾತು ಬೆಳೆಯಿತು. ಒಳ್ಳೆಯತನದ ಮತ್ತೊಂದು ಮುಖದ ಪರಿಚಯವಾಗಿತ್ತು.

ಸೋಲಲು ನನಗಿಷ್ಟವಿಲ್ಲ ಆದರೆ ಸೋಲದೆ ವಿಧಿಯಿಲ್ಲ. ಸೋಲದೆ ಸಂಬಂಧದಲ್ಲಿ ಗೆಲ್ಲಲ್ಲೂ ಸಾಧ್ಯವಿಲ್ಲ. ಹಾಗೆಂದು ಮನೆಯವರೆಲ್ಲರನ್ನೂ ಎದುರುಹಾಕಿಕೊಂಡು ಬದುಕಲು ಸಾಧ್ಯವೇ..?

ಇದಕ್ಕೆಲ್ಲಾ ಒಂದೇ ಪರಿಹಾರ 'ನಾನು' ಸಾಯಬೇಕು. ಹೌದು ಇದಕ್ಕೆ ಇದನ್ನು ಬಿಟ್ಟು ಬೇರೆ ಪರಿಹಾರವಿಲ್ಲ.

ಇದೆಲ್ಲದಕ್ಕೂ ಪರಿಹಾರ ಸಿಕ್ಕಿತ್ತು. ಅಪ್ಪನನ್ನು ಸಲಹೆ ಕೇಳಿದಾಗ 'ವಸುದೈವ ಕುಟುಂಬಕಂ' ಎಂದರಷ್ಟೇ.

'ನಾನು' ಸತ್ತಾಗಿತ್ತು. ಸುನಿಧಿ ಸಾಯಲಿಲ್ಲ, ಸುನಿಧಿಯೊಳಗಿನ 'ನಾನು' ಎಂಬ ಅಹಂಕಾರ ಸತ್ತಿತ್ತು. ಮನೆಯೊಳಗೆ ಪಂಕ್ತಿ ಭೋಜನ ಸುನಿಧಿಯ ಮುಂದಾಳತ್ವದಲ್ಲಿ ನಡೆದಿತ್ತು.

~ವಿಭಾ ವಿಶ್ವನಾಥ್

ಶುಕ್ರವಾರ, ನವೆಂಬರ್ 16, 2018

ನಿಮಗೋಸ್ಕರ...


ಪ್ರೀತಿಯ ಕಂದ,

ಪರೀಕ್ಷೆಗಳು ಹತ್ತಿರ ಬರ್ತಾ ಇವೆ ಓದ್ಕೋ, ಹೆಚ್ಚು ಅಂಕ ತೆಗೆದು ಒಳ್ಳೆ ಕಾಲೇಜಿನಲ್ಲಿ ಸೀಟು ತೆಗೆದುಕೊಳ್ಳಬೇಕು ಅಂದಾಗಲೆಲ್ಲಾ ನೀನು ಮುಖ ಪೆಚ್ಚು ಮಾಡ್ಕೊಂಡು ಓದೋದಕ್ಕೆ ಕೂತ್ಕೊಳ್ಳೋದನ್ನು ನೋಡಿದ್ರೆ, ನಮಗೂ ಮನಸ್ಸಿಗೆ ಒಂಥರಾ ಆಗುತ್ತೆ. ಆದ್ರೆ ಏನ್ಮಾಡ್ಲಿ? ನಿನಗೆ ಇವಾಗ ಹೇಳದೆ ಮತ್ತಿನ್ಯಾವಾಗ ಹೇಳೋಕಾಗುತ್ತೆ ಓದ್ಕೋ ಅಂತಾ? ನಮ್ಮಪ್ಪ-ಅಮ್ಮನೂ ಹೀಗೇ ಹೇಳಿ ಓದ್ಸಿದ್ದಿದ್ರೆ ನಾವೂ ಇನ್ನೂ ಒಳ್ಳೆ ಸ್ಥಿತಿಯಲ್ಲಿರ್ತಾ ಇದ್ವು.ನಮ್ ಹಾಗೇ ನೀನೂ ನಾಳೆ ನಮ್ಮನ್ನು ದೂಷಿಸಬಾರದು ಅಂತಾ ನಿನಗೆ ಇದನ್ನ ಹೇಳೋದು. 

ಒಳ್ಳೆ ಕಡೆ ಟ್ಯೂಷನ್ ಗೂ ಸೇರ್ಸಿದ್ದೀವಿ. ಈ ಸಿಟಿಲಿರೋ ಒಳ್ಳೆ ಕಾನ್ವೆಂಟ್ ಗೇ ಸೇರ್ಸಿದ್ದೀವಿ. ಮನೆಯಲ್ಲಿ ಟಿ.ವಿ ಸೌಂಡ್ ಕೂಡಾ ಇಲ್ಲ, ಬೇರೆ ಮಕ್ಕಳಿಂದ ನಿನಗೆ ಓದೋದಕ್ಕೆ ಕಷ್ಟ ಆಗುತ್ತೆ ಅಂತಾ ನಮ್ಮ ಆಫೀಸ್ ಗೆ ದೂರ ಆದ್ರೂ ಈ ಪ್ರಶಾಂತವಾದ ಜಾಗದಲ್ಲಿ ಮನೆ ಮಾಡಿದ್ದೇನೆ. ಆದ್ರೂ ನೀನ್ಯಾಕೆ ಚಿತ್ರ ಬಿಡಿಸ್ತಿನಿ, ಬಣ್ಣ ಹಚ್ತೀನಿ ಅಂತಾ ಏನೇನೋ ಮಾಡೋದಕ್ಕೆ ಹೊರಡ್ತೀಯಾ, ಅದೇ ಸಮಯಾನ ಓದೋದಕ್ಕೆ ಉಪಯೋಗಿಸಿದ್ರೆ ಎಷ್ಟು ಒಳ್ಳೆ ಅಂಕ ಬರುತ್ತೆ ಅಲ್ವಾ?
ಓದ್ಕೋ ಪುಟ್ಟ, ಬೇರೆ  ವೇಳೆಲಿ ಚಿತ್ರ ಬಿಡಿಸಿ, ಬಣ್ಣ ತುಂಬಬಹುದು

-ಇಂತಿ
ನಿನ್ನ ಹಿತಚಿಂತಕರು
**********************************************

ಮುದ್ದಿನ ಅಪ್ಪ,ಅಮ್ಮ

ನೀವಂದ್ರೆ ನನಗೆ ತುಂಬಾ ಇಷ್ಟ. ಆದ್ರೆ, ನೀವು ಯಾವಾಗಲೂ ಓದ್ಕೋ, ಓದ್ಕೋ ಅಂದ್ರೆ ನನಗೂ ಕಿರಿಕಿರಿಯಾಗಲ್ವಾ? ನಂಗೆ ಚಿತ್ರ ಬಿಡಿಸೋದು ಅಂದ್ರೆ ತುಂಬಾ ಇಷ್ಟ. ಹಾಗಂತ ನಾನೇನೂ ದಿನಪೂರ್ತಿ ಅದನ್ನೇ ಮಾಡಲ್ಲ ತಾನೇ? ಇಂಟರ್ ಸ್ಕೂಲ್ ಕಾಂಪಿಟೇಷನ್ ಲ್ಲೂ ನಾನೇ ಫಸ್ಟ್,ಆದ್ರೆ ನೀವು ಯಾವತ್ತಾದ್ರೂ ನಾನು ಬಿಡಿಸಿರೋ ಚಿತ್ರದ ಬಗ್ಗೆ ಒಂದಾದ್ರೂ ಒಳ್ಳೆ ಮಾತಾಡಿದ್ರಾ? ನಾನೇ ನನ್ನ ಚಿತ್ರಗಳನ್ನು ಮುಂದೆ ತಂದಿಟ್ಟರೂ ನೀವು ಅದನ್ನು ಆಮೇಲೆ ನೋಡ್ತೀನಿ ಅಂತಾ ಆ ಕಡೆ ಇಟ್ಟು ಬಿಡ್ತೀರಿ.ಯಾಕೆ?

"ಮೀನು ಮರ ಹತ್ತೋಕಾಗಲ್ಲ,ಹಕ್ಕಿ ಈಜೋಕಾಗಲ್ಲ", ಹಾಗೇ ನಾವೂ ಯಾವುದನ್ನು ಇಷ್ಟ ಪಡ್ತೀವೋ ಅದನ್ನೇ ಮಾಡೋದಕ್ಕೆ ನಮಗೆ ಅವಕಾಶ ಕೊಡಿ."ನಾವು ಒಳ್ಳೆ ಹವ್ಯಾಸ ಬೆಳೆಸಿಕೊಂಡರೆ,ಅದು ನಮ್ಮನ್ನು ಬೆಳೆಸುತ್ತೆ" ಎನ್ನುವುದು ನಿಮಗೆ ಗೊತ್ತಿಲ್ಲದೇ ಇರುತ್ತಾ?ಪರೀಕ್ಷೆಗಳು ನಮ್ಮನ್ನು ಅಳೆಯೋ ಮಾಪಕಗಳಲ್ಲ, ಜೀವನದ ಪರೀಕ್ಷೆಗಳು  ನಮ್ಮನ್ನು ಅಳೆಯುವ ಮಾಪಕಗಳು.

ನಿಮ್ಮ ಹಾಗೆ ನಾನು ಹಿಂದಿನದ್ದಕ್ಕೆ ಕೊರಗುತ್ತಾ ಕುಳಿತುಕೊಳ್ಳುವುದಿಲ್ಲ. ನಿಮ್ಮಪ್ಪ-ಅಮ್ಮ ಅವರ ಶಕ್ತ್ಯಾನುಸಾರ ನಿಮ್ಮನ್ನು ಈ ಹಂತಕ್ಕೆ ದಾಟಿಸಿದ್ದಾರೆ, ಅದಕ್ಕೆ ನಿಮಗೆ ಅವರ ಬಗ್ಗೆ ಅಭಿಮಾನ ಇರಬೇಕಾಗಿತ್ತು. ಆದರೆ, ನನ್ನ ಮಗು ಈಗ  ಎಸ್.ಎಸ್.ಎಲ್.ಸಿ. ಅವನಿಗೆ ತೊಂದರೆಯಾಗೋದು ಬೇಡ ಅಂತಾ ಹಳ್ಳಿಯಲ್ಲೇ ಬಿಟ್ಟು ಬಂದ್ರಿ. ಮುಂದೆ ನಾನೂ ನಿಮಗೆ ಹಾಗೇ ಮಾಡಿದ್ರೆ..?

ಗಿಳಿಯನ್ನು ಚಿನ್ನದ ಪಂಜರದಲ್ಲಿ ಕೂಡಿ ಹಾಕಿ, ರಾಶಿ ಕಾಳು ಸುರಿದ್ರೂ ನೀವು ಅದಕ್ಕೆ ಅದರ ಸ್ವಾತಂತ್ರ್ಯದ ಸಂತೋಷ ಕೊಡುವುದಕ್ಕೆ ಆಗುತ್ತಾ? ನನ್ನ ಪಾಡು ಕೂಡಾ ಈಗ ಅದೇ ಆಗಿದೆ,ಜೊತೆಯಲ್ಲಿ ಆಟ ಆಡುವುದಕ್ಕೆ ಸ್ನೇಹಿತರಿಲ್ಲ,ಸ್ವಲ್ಪ ಹೊತ್ತು ಕಾಲ ಕಳೆಯುವುದಕ್ಕೆ ಟಿ.ವಿ ನೋಡೋಣಾ ಅಂದ್ರೂ ನೋಡುವುದಕ್ಕೆ ಆಗುವುದಿಲ್ಲ. ಸ್ವಲ್ಪ ಹೊತ್ತು ನಿಮ್ಮ ಜೊತೆ ಕೂತು ಮಾತಾಡೋಣಾ ಅಂದ್ರೂ ನೀವು ನಿಮ್ಮ ಆಫೀಸ್ ಕೆಲಸದ ಒಳಗೇ ಮುಳುಗಿ ಹೋಗಿರ್ತೀರ, ಕೇಳಿದ್ರೆ ಇದೆಲ್ಲಾ ನಿನಗೋಸ್ಕರಾನೇ ಅಂತೀರಾ..

ಆದರೂ ನನ್ನ ಕೈಲಾದಷ್ಟು ಪ್ರಯತ್ನ ಮಾಡಿ, ಒಳ್ಳೇ ಅಂಕಗಳನ್ನೇ ತೆಗಿತೀನಿ. ನನಗೋಸ್ಕರ ಅಲ್ಲದಿದ್ರೂ, ನಿಮಗೋಸ್ಕರ...

ಚಿತ್ರಕಲೆಯನ್ನು ಯಾವಾಗ ಬೇಕಾದ್ರೂ ಮಾಡಬಹುದು. ಅಲ್ವಾ?

-ಇಂತಿ
ನಿಮ್ಮ ಪ್ರೀತಿಯ ಕಂದ..
****************************************
~ವಿಭಾ ವಿಶ್ವನಾಥ್