ಭಾನುವಾರ, ಜುಲೈ 26, 2026

ಕೇವಲ ನನಗಾಗಿ


ಸಾಕಷ್ಟು ಹಂಚಿಕೊಳ್ಳಲಿಕ್ಕಿತ್ತು

ಬೇಕಾದಷ್ಟು ಚರ್ಚಿಸಲಿಕ್ಕಿತ್ತು

ಮತ್ತಾರ ಬಳಿಯೂ ನಿರೀಕ್ಷಿಸಿಲಾಗದ

ಮಮತೆಯನ್ನು ಸವಿಯಬೇಕಿತ್ತು

ನಾಳೆ ಕರೆ ಮಾಡುವೆನೆಂದ 

ಕರೆಗೆ ನಿರೀಕ್ಷಿಸುತ್ತಲೇ ಇದ್ದೇನೆ

ಅದು ಬಾರದೆನ್ನುವ ಸತ್ಯದ ಅರಿವಿದ್ದರೂ..

ಪಪ್ಪ ನಿಮ್ಮ ಅಗತ್ಯವಿದದ್ದು ನನಗಾಗಿ

ಕೇವಲ ನನಗಾಗಿ

ನಾನು ನಾನೇ ಆಗಿರುವುದಕ್ಕಾಗಿ


~ವಿಭಾ ವಿಶ್ವನಾಥ್ 

ಪಪ್ಪನ ಹೆಗಲು


ನನ್ನ ವಿಶ್ವವೇ ಆಗಿದ್ದ ನನ್ನಪ್ಪ ಭೌತಿಕವಾಗಿ ನನ್ನೊಡನಿಲ್ಲದೆ ಎರಡೂವರೆ ವರ್ಷ. ಹಠಾತ್ ಹೃದಯಾಘಾತದಿಂದ ನಿಧನರಾದವರ ನೆನಪು ಪ್ರತಿಕ್ಷಣವೂ ನನ್ನೊಡನಿದೆ. ಪ್ರತಿನಿತ್ಯ ಎದ್ದು ನನ್ನ ಕೆಲಸದಲ್ಲಿ ತೊಡಗಿಸಿಕೊಂಡರೂ ಬೆಳಗಿನ ಅವರ ಕರೆ ಬರದೆ ಉಲ್ಲಾಸ ಮೂಡುತ್ತಿರಲಿಲ್ಲ. ದಿನ ಸಂತೃಪ್ತಿಯೆಂದೆನಿಸುತ್ತಿದದ್ದು ಅವರ ಮತ್ತೊಂದು ಕರೆಯೊಂದಿಗೆ. ಹಾಗೆಂದು, 24*7 ವರದಿ ಅಲ್ಲಿರುತ್ತಿರಲಿಲ್ಲ. ಅವರ ಆಪ್ತತೆಯ ಒಂದೆರಡು ಮಾತು, ಕಾಳಜಿ ನನ್ನ ಧೈರ್ಯ. ಸೋತಾಗ ಹುರಿದುಂಬಿಸಿ, ನನ್ನ ಸಣ್ಣ-ಪುಟ್ಟ ಗೆಲುವಿಗೂ ಸಂಭ್ರಮಿಸುತಿದ್ದ ಪಪ್ಪನಿಗೇ ನನ್ನ ಸೋಲು-ಗೆಲುವು, ಪ್ರಯತ್ನ ಎಲ್ಲವನ್ನೂ ಮೊದಲು ಹಂಚಿಕೊಳ್ಳುತ್ತಿದ್ದದ್ದು.


ಒಬ್ಬಳೇ ಮಗಳನ್ನು ರಾಜಕುಮಾರಿಯಂತೆ ನೋಡಿಕೊಂಡರೂ.. ಸಾಕಷ್ಟು ಧೈರ್ಯದಿಂದ ಒಬ್ಬಳೇ ಎಲ್ಲವನ್ನೂ ನಿಭಾಯಿಸುವ ಶಕ್ತಿಯನ್ನೂ ತುಂಬಿದವರು. ತಾನು ಬೇರೆಯವರ ಮನೆಯಲ್ಲಿದ್ದು ಕಷ್ಟಪಟ್ಟಂತೆ ಮಗಳು ಆಗಬಾರದೆಂದು ಹಾಸ್ಟೆಲ್ ಗೆ ಸೇರಿಸಲು ಹಿಂದೆ-ಮುಂದೆ ನೋಡಿದರೂ.. ಪರಿಸ್ಥಿತಿಯ ಪ್ರಭಾವ, ವಿದ್ಯೆಯ ಮಹತ್ವದಿಂದ ಮನಸ್ಸಿಲ್ಲದ ಮನಸಲ್ಲಿ ಕಳುಹಿಸಿದವರು. ಚಿಕ್ಕಮ್ಮ, ಮಾಮನ ಮಕ್ಕಳಷ್ಟೇ ಅಲ್ಲದೆ ಸುತ್ತಮುತ್ತಲಿನ ಮನೆಯ ಮಕ್ಕಳಿಗೆ ನಿಸ್ವಾರ್ಥದಿಂದ ಓದಿಸಿ, ಶಾಲೆಗೆ ಕರೆದು ಕಳುಹಿಸುವ ಜವಾಬ್ದಾರಿಯನ್ನು ತಾವಾಗಿಯೇ ತಮ್ಮ ಹೆಗಲ ಮೇಲೆ ಹೊತ್ತು ತನ್ನ ಮಕ್ಕಳಂತೆಯೇ ಜೋಪಾನ ಮಾಡಿದವರು. ಎಂದಿಗೂ ತಮ್ಮ ಕಷ್ಟದ ದಿನಗಳನ್ನು ನೆನೆದು ಕೊರಗಿದವರಲ್ಲ. ಬದಲಾಗಿ, ಮುಂದಿನ ಹಾದಿಯ ಆಲೋಚನೆ ಮಾಡುತ್ತಿದ್ದವರು.


ಫಾರ್ಮಸಿ ಅಧಿಕಾರಿಗಳಾಗಿದ್ದವರು ನಿವೃತ್ತಿ ನಂತರವೂ ಕೋವಿಡ್ ವಾರಿಯರ್ ಆಗಿ ದುಡಿದವರು. ದುಡ್ಡಿಲ್ಲ, ಕಷ್ಟ ಎಂದು ಬಂದವರನ್ನು ಬರಿಗೈಯಲ್ಲಿ ಕಳುಹಿಸಲಿಲ್ಲ. ರಕ್ತ ಸಂಬಂಧಕ್ಕಿಂತಲೂ ಹೆಚ್ಚಿನ ಬಾಂಧವ್ಯ ಬೆಳೆಸಿಕೊಂಡಿದ್ದರು ಎಷ್ಟೋ ಜನರು. 


"ತಾಯಿ, ನಿಮ್ಮಪ್ಪ ಅವತ್ತು ನನ್ನ ಆಸ್ಪತ್ರೆಗೆ ಸೇರಿಸಿ ಕಾಲು ಸರಿ ಮಾಡಿಸಿ ಇನ್ನೊಂದು ಜೀವ ಕೊಟ್ಟ ಪುಣ್ಯಾತ್ಮ" ಅನ್ನೋ ಅಜ್ಜನನ್ನು ತಂದೆಯ ಸ್ಥಾನದಲ್ಲಿಟ್ಟು, ಜಾತಿಬೇಧವಿಲ್ಲದೆ ಸಹಾಯ ಮಾಡಿದ್ದರು. ಇದು ಒಂದು ಉದಾಹರಣೆಯಷ್ಟೇ.. "ಶರಣರ ಸಾವನ್ನು ಮರಣದಲ್ಲಿ ನೋಡು" ಎಂಬಂತೆ ಅಂದು ಹರಿದು ಬಂದ ಜನಸಾಗರ ಅವರನ್ನು ನೆನಪಿಸಿಕೊಂಡ ರೀತಿ ಸಂಬಂಧಿಕರಿಗೆ.. ಮೌನಿಯಾಗಿಯೇ ಕಾಣುತ್ತಿದ್ದ ಗಟ್ಟಿ ವ್ಯಕ್ತಿತ್ವದ ನನ್ನಪ್ಪನ ಪರೋಪಕಾರಿ ಮುಖವನ್ನು ತೆರೆದಿಟ್ಟಿತ್ತು. 


"Empty mind is devil's workshop, ಸೋಮಾರಿಯಾಗಬಾರದು" ಎಂಬುದನ್ನು ಹೇಳಿಕೊಟ್ಟ ಪಪ್ಪ ಅಂತೆಯೇ ಬದುಕಿದವರು. ಕ್ರಿಕೆಟ್, ನ್ಯೂಸ್ ಪೇಪರ್, ರೇಡಿಯೋ ಇವುಗಳ ಜೊತೆಗೆ ಕಾಯಕಯೋಗಿಯಾಗಿದ್ದ ಪಪ್ಪ ನನ್ನ ಸದಾಕಾಲದ ದಾರಿದೀಪ. ಓದುವ, ಹಾಡುವ ಹವ್ಯಾಸವನ್ನು ಅಭ್ಯಾಸವಾಗಿಸಿದ್ದು.. "ಏನಾದರೂ ಮಾಡು, ನಿನ್ನ ಜೊತೆ ನಾನಿರುತ್ತೇನೆ", "Go and explore" ಎಂದದ್ದು ಈಗಲೂ ಕಿವಿಯಲ್ಲಿದೆ. ಸ್ವಾಭಿಮಾನ, ಸಹಾಯದ ಗುಣವನ್ನು ಬಿಡದೆ ಬೆಳೆಸಿದ ಅಪ್ಪನ ವ್ಯಕ್ತಿತ್ವವನ್ನು ಬಣ್ಣಿಸಹೊರಟರೆ ಕುರುಡ ಆನೆಯನ್ನು ಮುಟ್ಟಿದಂತಾಗಬಹುದು. ಅಪ್ಪನ ಹೆಗಲು ಕೊಟ್ಟಷ್ಟು ಧೈರ್ಯ, ವಿಸ್ತಾರತೆಯ ನೋಟ ಮತ್ತಾವುದೂ ಕೊಟ್ಟಿಲ್ಲ. ಬಹುಶಃ, ಪಪ್ಪ ನನ್ನೊಡನಿದ್ದು ಕಲಿಸುವ ಪಾಠಗಳು ಮುಗಿದಿದ್ದವೇನೋ..! ಜೊತೆಗಿಲ್ಲದೆ ಕಲಿಸುತ್ತಿದ್ದಾರಷ್ಟೇ...!


~ವಿಭಾ ವಿಶ್ವನಾಥ್

ತಿರುಗುಬಾಣ (ಬೆಳಕಿಂಡಿಯ ಕತೆಗಳು - 60)

 


ಪ್ರೀತಿಯ ನಾಟಕವಾಡಿ ಒಬ್ಬಳೇ ಮಗಳಾದ ಅವಳನ್ನು ಸೊಸೆಯಾಗಿಸಿಕೊಂಡು, ಮರುಳು ಮಾಡಿಕೊಂಡು ಅವಳ ಆಸ್ತಿಯನ್ನು ಉಪಾಯವಾಗಿ ತಮ್ಮ ಕೈವಶ ಮಾಡಿಕೊಳ್ಳಲು ಹೊರಟಿದ್ದರು ಅವರು.

ಅವಳು ಮುಗ್ಧಳಾಗಿದ್ದಳು. ಆದರೆ, ದಡ್ಡಿಯಾಗಿರಲಿಲ್ಲ. ನಂಬಿದವರೇ ಬೆನ್ನಿಗೆ ಚೂರಿ ಹಾಕುವ ಉಪಾಯ ತಿಳಿದವಳ ಚಾಲಾಕಿತನ ಈಗ ಅವರ ಉಪಾಯವನ್ನು ಅವರಿಗೇ ತಿರುಗುಬಾಣವಾಗಿಸಿತ್ತು.

ಸತ್ಯ ಅರಿತ ಮಗನ ತಿರಸ್ಕಾರ ಆಸ್ತಿಗಿಂತಲೂ ಮಿಗಿಲಾದ ಸಂಬಂಧದ ಬೆಲೆಯನ್ನು ಅರಿವಾಗಿಸಿತ್ತು.

~ವಿಭಾ ವಿಶ್ವನಾಥ್

ಪುಟ್ಟಿಯ ಕಥೆಗಾರಿಕೆ (ಬೆಳಕಿಂಡಿಯ ಕತೆಗಳು - 59)

 


"ಕಥೆ ಹೇಳುವೆ. ಕೇಳಮ್ಮ" ಎಂದು ಹೋದ ಪುಟ್ಟಿಗೆ "ಆಮೇಲೆ ಹೇಳುವೆಯಂತೆ ಕಂದಾ.. ಅಮ್ಮ ಆಫೀಸಿನಿಂದ ಈಗಷ್ಟೇ ಬಂದಿದ್ದಲ್ವಾ.. ಅಡುಗೆ ಮುಗಿಸಿ ಬರ್ತೀನಿ. ಅಷ್ಟೊತ್ತಿಗೆ ಅಪ್ಪನಿಗೆ ಕಥೆ ಹೇಳು" ಎಂದು ಸಾಗ ಹಾಕಿದಳು.

"ನನಗೀಗ ಮೀಟಿಂಗ್ ಇದೆ ಪುಟ್ಟಿ. ಹೋಗಿ ಅಣ್ಣನ ಹತ್ತಿರ ಹೇಳು" ಅಲ್ಲಿಂದ ಸಾಗ ಹಾಕಿದರು ಅಪ್ಪ

"ರಾಶಿ ಹೋಂವರ್ಕ್ ಇದೆ ನನಗೆ. ತಲೆ ತಿನ್ನಬೇಡ ಹೋಗು" ಎಂದು ಬೈದ ಅಣ್ಣನೂ...

ನಿನ್ನೆ ಕಥೆ ಹೇಳುವೆನೆಂದು ಬಂದ ಪುಟ್ಟಿಯ ಕಥೆ ಕೇಳದವರು ಇಂದು ಪುಟ್ಟಿಯ ಕಥೆ ಕೇಳಲು ಕಾಯುತ್ತಿದ್ದಾರೆ. ಆಕಾಶವಾಣಿಯ ಚಿಣ್ಣರ ಚಿಲಿಪಿಲಿಯಲ್ಲಿ ಪುಟ್ಟಿಯ ಕಥೆಗಳ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. ಶಾಲೆಯಲ್ಲಿ ಟೀಚರ್ ಅವಳ ವಿಶೇಷ ಪ್ರತಿಭೆ ಗಮನಿಸಿ ಕಾರ್ಯಕ್ರಮ ಕೊಡಿಸಿದ್ದರು. ಈಗ ಪುಟ್ಟಿಯ ಕಥೆಗಾರಿಕೆಗೆ ಹೆಚ್ಚಿನ ಮೌಲ್ಯ ಸಿಕ್ಕಿತ್ತು.

~ವಿಭಾ ವಿಶ್ವನಾಥ್

ಅರ್ಧ ಸತ್ಯ (ಪುಸ್ತಕ ಯಾನ - 475)


ಪುಸ್ತಕದ ಶೀರ್ಷಿಕೆ : ಅರ್ಧ ಸತ್ಯ

ಲೇಖಕರು : ಮಾಕೋನಹಳ್ಳಿ ವಿನಯ್ ಮಾಧವ್

ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್ 

ಪ್ರಥಮ ಮುದ್ರಣ : ನವೆಂಬರ್ 2021

ಪುಟಗಳು : 156

ಬೆಲೆ : 150 ರೂ. 


ಇಲ್ಲಿವೆ ಕ್ರೈಮ್ ರಿಪೋರ್ಟರ್ ಮಾಕೋನಹಳ್ಳಿ ವಿನಯ್ ಮಾಧವ್ ಅವರು ಬರೆದ ಆರು ಪ್ರಸಂಗಗಳು. ಆದರೆ, ಇದು ಸತ್ಯ ಘಟನೆಗಳು ಹಾಗೂ ಕಥೆಗಳು ಎರಡರ ಮಿಶ್ರಣದಂತೆ ಕಾಣಿಸುತ್ತದೆ. ಇವರ ಈ ಶೈಲಿ ನನಗೆ ಹೊಸದು ಹಾಗೂ ವಿಭಿನ್ನ ಓದಿನ ಅನುಭವ ಕೊಟ್ಟಿತು. 


ತಾನು ಮಾಡಿದ ಕ್ರೈಂ ರಿಪೋರ್ಟ್ ಗಳು ಹಾಗೂ ಸಂದರ್ಭ/ ಸುದ್ದಿಯ/ ವ್ಯಕ್ತಿಯ ವಿರುದ್ಧ ಪುಟಗಟ್ಟಲೆ ಬರೆದಿದ್ದವರೊಡನೆಯೇ ಪರೋಕ್ಷವಾಗಿ ಭಾಗಿಯಾಗಬೇಕಾದಾಗ... ತನಗೆ ಸುದ್ದಿ ಕೊಡುತ್ತಾರೆ ಎನ್ನುವ ಕಾರಣಕ್ಕೆ ಕೆಲವು ಅಧಿಕಾರಿಗಳನ್ನು ಒಳ್ಳೆಯವರಂತೆ ಬಿಂಬಿಸಿ ಕೊನೆಗೆ ಸತ್ಯ ತಿಳಿದಾಗ..? ನೊಂದವರಿಗೆ ಸಾಂತ್ವನ ಹೇಳಲು ಆಗದಿದ್ದಾಗ..? ಇಡೀ ವ್ಯವಸ್ಥೆಯಲ್ಲಿ ತಾನು ಹೀರೋ ಎಂದು ಕಾಣಿಸಿಕೊಳ್ಳುತ್ತಿರುವಾಗಲೇ ತಮಗೆ ಬೇಕಾದಂತಹ ಕಥೆಗಳನ್ನು ಬರೆಸಲು ಬಳಸಿಕೊಂಡ ಸಂದರ್ಭ ತಿಳಿದಾಗ..? 

"ಆಗ ಸಾಮಾನ್ಯ ಮನುಷ್ಯನಂತೆ ಯೋಚಿಸಲು ಆರಂಭಿಸುತ್ತೇನೆ" ಎನ್ನುತ್ತಾರೆ ಲೇಖಕರು. ಆದರೂ, ಪ್ರಪಂಚದ ಮಟ್ಟಿಗೆ ನಾನೊಬ್ಬ ಸೆಲೆಬ್ರಿಟಿ ಕ್ರೈಂ ರಿಪೋರ್ಟರ್... ಈ ಸಾಲು ಎಷ್ಟೆಲ್ಲ ದ್ವನಿಸುತ್ತದೆಯಲ್ಲವಾ..?


"ಇನ್ನುಳಿದಂತೆ ನನ್ನ ಮೂರ್ಖತನದ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ಅವೆಲ್ಲ ಬಹಳಷ್ಟು ಪಾಠ ಕಲಿಸಿದ ಗುರುಗಳು" ಎನ್ನುತ್ತಾರೆ. ಅರ್ಧಸತ್ಯ ಹಾಗೂ ಪ್ರಮೋಶನ್ ಪ್ರಸಂಗಗಳನ್ನು ಓದಿದಾಗ ನನಗೆ ಲೇಖಕರು ಹೀಗೆ ಯಾಕೆ ಉಲ್ಲೇಖಿಸಿದ್ದಾರೆ ಎಂಬುದು ಅರಿವಾಯಿತು.


ಪಾತ್ರಗಳು, ಕಥಾಹಂದರ ಕಾಲ್ಪನಿಕ ಎಂದು ಹೇಳಬಲ್ಲೆ. ಹೋಲಿಕೆ ಇದ್ದರೆ ಅದು ಕಾಕತಾಳೀಯ ಎಂದಿದ್ದಾರೆ.


ಈ ಆರು ಪ್ರಸಂಗಗಳ ಕುರಿತು ನೋಡುವುದಾದರೆ..


ಅರ್ಧ ಸತ್ಯ: ಗುರೂಜಿ ಹಾಗೂ ಸಿನಿಮಾ ಹೀರೋಯಿನ್ ಇಬ್ಬರ ಖಾಸಗಿ ವಿಡಿಯೋ ಸಿಕ್ಕು ಅದು ನ್ಯೂಸ್ ಚಾನೆಲ್ ಗಳನ್ನು ಆವರಿಸಿದ್ದಾಗಲೇ.. ಈ ಸಂಬಂಧದ ಸುದ್ದಿ ಇಷ್ಟಕ್ಕೆ ಮುಗಿಯದೆ ವಿಷಯ ಸೀರಿಯಸ್ ಆಗುತ್ತದೆ ಎಂದು ಗೊತ್ತಿದ್ದ ಇಂಗ್ಲಿಷ್ ನ್ಯೂಸ್ ಪೇಪರ್ ರಿಪೋರ್ಟರ್ ವಿಜಿತ್ ಆಶ್ರಮದ ಹತ್ತಿರ ಹೋಗುವುದರೊಳಗಾಗಿ ಅಲ್ಲಿ ಆಗಲೇ ನ್ಯೂಸ್ ಚಾನೆಲ್ ನವರು, ಪೊಲೀಸ್, ಒಂದಿಷ್ಟು ಜನರು ಸೇರಿದ್ದರು. ಆಶ್ರಮದ ಒಳಗುಟ್ಟುಗಳನ್ನು ಬಿಚ್ಚಿಡುತ್ತಲೇ.. ಈ ಸುದ್ದಿಯ ಮೂಲಗಳು ಹಲವಾರು ಕಡೆಗಳಿಂದ ತಿಳಿಯುತ್ತಾ ಸಾಗುತ್ತವೆ. ಎಕ್ಸ್ಕ್ಲೂಸಿವ್ ಸುದ್ದಿ, ತನ್ನಲ್ಲೇ ಮೊದಲು ಎಂಬ ಹಪಾಹಪಿಗೆ ಬಿದ್ದವರು ತಿಳಿದ ಸತ್ಯ ಎಷ್ಟಿತ್ತು..? 

ತಾನು ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಿದವರು ವಿಜಿತ್ ಗೆ ಗೊತ್ತಾಗದಂತೆ ನಿಭಾಯಿಸಿದ ರೀತಿ, ನಂತರ ತಿಳಿದ ಸತ್ಯ ಯಾವುದು..? ವ್ಯವಸ್ಥೆಯ ವ್ಯವಸ್ಥಿತ ಸಂಚಿನ ರಾಜಕೀಯ, ಆಧ್ಯಾತ್ಮದ ಮುಖವಾಡದ ಕೇಸ್ ಇಲ್ಲಿದೆ.


ಪ್ರಮೋಶನ್: ಎರಡನೇ ಶನಿವಾರ ಮತ್ತು ಭಾನುವಾರ ಕ್ರೈಂ ರಿಪೋರ್ಟರ್ ಗಳ ಸುದ್ದಿಯೇ ಮುಖ್ಯ ಜೀವಾಳವಾಗಿರುವ ಸಮಯದಲ್ಲಿ ಮನೀಶ್ ತೆಗೆದುಕೊಂಡು ಹೋದ ಸುದ್ದಿಯೇ ಮುಖ್ಯ ಸುದ್ದಿಯಾಗಿತ್ತು. ಅದು ಪ್ರಮೋಷನ್ ನ ವಿಚಾರ. ಆದರೆ, ಅರ್ಧ ಸತ್ಯ ಮಾತ್ರ ತಿಳಿದ ಮನೀಶ್ ಇಲ್ಲಿ ಅವಸರಿಸಿದನೇ..? ಸುದ್ದಿಲೋಕದಲ್ಲಿ ಟೆಕ್ನಿಕಲಿ ಪರ್ಫೆಕ್ಟ್ ಆಗಿರುವ ಸುದ್ದಿ ಬರೆದಿರುವಷ್ಟು ಸರಳವಾಗಿರುವುದಿಲ್ಲ. 

ರೌಡಿಯ ತಮ್ಮ ಪೊಲೀಸ್ ಆಗಬಾರದಾ..?

"ಎಲ್ಲರಿಗೂ ನ್ಯಾಯವಾಗಿ ಬದುಕೋಕೆ ಒಂದು ಚಾನ್ಸ್ ಕೊಡಬೇಕು. ಇಲ್ಲದೆ ಹೋದರೆ ನಾವು ಮನುಷ್ಯತ್ವದ ಬಗ್ಗೆ ಮಾತನಾಡಬಾರದು" ಎಂಬ ಸಾಲು ಅರ್ಥಪೂರ್ಣವೆನ್ನಿಸಿತು.


ಪರೀಕ್ಷೆ : ಇಂಜಿನಿಯರಿಂಗ್ನಲ್ಲಿ ಪ್ರತಿ ವರ್ಷ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗುತ್ತಿದ್ದ ಹುಡುಗ ಕೊನೆಯ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಎಲ್ಲದರಲ್ಲಿಯೂ ಸೊನ್ನೆ ಬಂದದ್ದು. ಹಾಗೆಂದು, ಅದು ಗೊತ್ತಿಲ್ಲದೆ ಆದ ಎಡವಟ್ಟಲ್ಲ. ವ್ಯವಸ್ಥಿತ ಸಂಚು. ಮಗನ ಕೇಸ್ ಏನಾಯಿತು ಎಂದು ತಿಳಿಯಲು ಅಲೆದಾಡುತ್ತಿದ್ದ ತಂದೆಯನ್ನು ನಾವಿಲ್ಲಿ ಕಾಣಬಹುದು.

ಕೇವಲ ನೊಂದವರಿಗೆ ಸಾಂತ್ವನ ಹೇಳಿದರೆ ಸಾಕೇ..?

ವ್ಯವಸ್ಥೆಯ ವಿರುದ್ಧ ಹೋಗಲಾಗದೆ ಸತ್ಯ ಗೊತ್ತಿದ್ದರೂ ಸುಮ್ಮನೆ ಇರಬೇಕಾದ ಪ್ರಸಂಗ. ಇಂತಹ ಪ್ರಸಂಗಗಳು ಎಷ್ಟು ಸರಿದು ಹೋಗಿರಬಹುದು..!


ಕನಿಷ್ಠ ಬಿಲ್ಲೆ : "ಮಗು ಹೆಣದ ಮೇಲೆ ನಿಂತು ಪ್ರಮೋಷನ್ ಅವಾರ್ಡ್ ತಗೊಳ್ಳೋದು ಯಾರಿಗೆ ಬೇಕು ಸರ್" ಎನ್ನುವ ಅವನ ಮಾತಂತೂ ಇಂದಿನ ಮಾಧ್ಯಮಗಳು ಕಲಿಯಬೇಕಾದದಡಮ್ಮಿ ಸ್ಪಷ್ಟವಾಗಿಸಿದೆ. ಇಲಾಖೆಯಲ್ಲಿ ಕನಿಷ್ಠ ಬಿಲ್ಲೆಯಾದರೂ ವ್ಯಕ್ತಿತ್ವದಿಂದ ಎತ್ತರಕ್ಕೇರಿದ ಮಾದೇಶ ಮಾಡಿದ ಸಾಹಸವೇನಿತ್ತು..? ಓದಿ ನೋಡಿ.


ಅತ್ಯಾಚಾರದ ಸುಳಿ : ಅತ್ಯಾಚಾರವಾದ ಹುಡುಗಿ ದೂರು ನೀಡಿದರೆ ವ್ಯವಸ್ಥೆಯೇ ಅವಳ ಪರ ನಿಲ್ಲುತ್ತದೆ ಅದರಲ್ಲಿಯೂ ದೆಹಲಿಯ ಅತ್ಯಾಚಾರದ ಪ್ರಸಂಗವಾದ ನಂತರದ ತೀರ್ಪು ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ. 

ಆದರೆ, ಇದನ್ನು ದುರುಪಯೋಗಪಡಿಸಿಕೊಂಡಾಗ..? 

ಅತ್ಯಾಚಾರ ಮಾಡಿಲ್ಲದಿದ್ದರೂ ಅದರ ಸುಳಿಯಲ್ಲಿ ಸಿಲುಕಿಕೊಂಡವನಿಗೆ ಸಿಕ್ಕ ತೀರ್ಪು ಏನಿತ್ತು ..? ಅಷ್ಟಕ್ಕೂ ಆತ ಈ ಸುಳಿಯೊಳಗೆ ಸಿಲುಕಿದ್ದು ಹೇಗೆ..? 


ನಕ್ಷತ್ರಗಳು : ಗೋವಾದ ಪ್ರಪಂಚ ಹಾಗೂ ಅಲ್ಲಿನ ರಾತ್ರಿಯ ಪ್ರಪಂಚ ಜೊತೆಗೆ ಅದರೊಳಗೆ ಸಿಲುಕಿಕೊಳ್ಳುವರ ಹಾಗೂ ಸಿಲುಕಿಸುವವರ ಜಾಲದ ನೋಟ ಇಲ್ಲಿದೆ.


ಇಲ್ಲಿನ ಪ್ರಸಂಗಗಳ ಕುರಿತು ಹೆಚ್ಚು ತೆರೆದಿಡಲಾಗದು. ಅಪರಾಧದ ಹಿಂದಿನ ನಗ್ನ ಸತ್ಯ ಓದುಗರಿಗೆ ಅರಿವಾಗುತ್ತದೆ. ಆಂತೆಯೇ ವ್ಯವಸ್ಥೆಯ ಒಳಗಿರುವವರಿಗೂ ಅದರ ಅರಿವಿರುತ್ತದೆ. ಆದರೆ, ಅದನ್ನು ತೆರೆದಿಡಲಾಗದ ಅಸಹಾಯಕತೆಯೂ ಇರುತ್ತದೆ. ಹಾಗಾಗಿ ಜಗತ್ತಿನ ಕಣ್ಣಿಗೆ ಅರ್ಧ ಸತ್ಯ ಮಾತ್ರ ಕಾಣುತ್ತದೆ.


ಈ ಪುಸ್ತಕ ಓದಿದ ನಂತರ ನನಗನಿಸಿದ್ದು


ಮಾಧ್ಯಮಗಳಲ್ಲಿ ಅದು ಪ್ರಿಂಟ್ ಮೀಡಿಯಾ ಆಗಿರಲಿ ಅಥವಾ ಟಿ.ವಿ ಮಾಧ್ಯಮವೇ ಆಗಿರಲಿ ಬರುವ ಸುದ್ದಿಗಳಲ್ಲಿ ಎಷ್ಟು ಸಂಪೂರ್ಣ ಸತ್ಯ..? 

ಯಾರೋ ಹರಡುವ ಅರ್ಧ ಸತ್ಯವನ್ನು ನಂಬಿಕೊಂಡು, ಒಬ್ಬ ವ್ಯಕ್ತಿಯ ಬದುಕನ್ನೇ ನಾಶಗೊಳಿಸುವ ಹುನ್ನಾರವೂ ಇರುತ್ತದಲ್ಲವಾ..?


ಒಂದೋ ಸತ್ಯ, ಇಲ್ಲವೇ ಸುಳ್ಳು.. ಎಂದು ನಂಬಿಕೊಂಡಿರುವವರಿಗೆ ಹೀಗೂ ಒಂದಿರುತ್ತದೆ ಎಂಬ ವಿಭಿನ್ನ ಲೋಕವನ್ನು ಅರಿವಾಗಿಸುವ ಪ್ರಸಂಗಗಳು ಇಲ್ಲಿವೆ.


ಯಾರೋ ಹರಡುವ ಜಾಲದಲ್ಲಿ ನಮಗೇ ಅರಿವಿರದಂತೆ ನಾವು ಸಿಲುಕಿಕೊಂಡಾಗ ಅದರಿಂದ ಹೊರಬರುವ ಮಾರ್ಗವನ್ನಷ್ಟೇ ಕಾಣುತ್ತೇವೆ. ಅಂತಹ ಎಷ್ಟು ಜೀವಗಳು ಅಲ್ಲಿರುತ್ತವಲ್ಲವಾ..? 

ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರೂ.. ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವ ಧ್ಯೇಯ ವಾಕ್ಯ ಎಷ್ಟು ಸಂದರ್ಭಗಳಲ್ಲಿ ಹೊಂದುತ್ತದೆ..?


ಕ್ರೈಂ ರಿಪೋರ್ಟಿಂಗ್ ಮಾಡುವವರು ಎಲ್ಲವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲಾಗದು. ಅಂತೆಯೇ ನಿರ್ಲಿಪ್ತವಾಗಿಯೂ ತೆಗೆದುಕೊಳ್ಳಲಾಗದಲ್ಲ.


ಒಬ್ಬ ವ್ಯಕ್ತಿಯ ನಂಬಿಕೆಯನ್ನು ಆತನ ಚಾಣಾಕ್ಷತೆಯನ್ನು ತಮಗೆ ಬೇಕಾದಂತೆ ತಿರುಗಿಸಿಕೊಳ್ಳುವಷ್ಟು ಚಾಕಚಕ್ಯತೆ ಹೊಂದಿದವರು ಇರುವಾಗ ನೈಜ ಸುದ್ದಿಗಳು ಅರ್ಧ ಸತ್ಯವಾಗಿ ತಲುಪಿದರೆ..?


ಬಹುಶಃ ಸುಳ್ಳಾದರೂ ಒಂದು ದಿನ ಸಾಬೀತಾಗಬಹುದು. ಆದರೆ, ಅರ್ಧ ಸತ್ಯ ಬಹಳಷ್ಟು ಅಪಾಯಕಾರಿ. ಸತ್ಯ ಗೊತ್ತಿರುತ್ತದೆ. ಆದರೆ, ನಿರೂಪಿಸಲು ಸಾಧ್ಯವಾಗದವರಿಗೆ ತಲುಪಿರುತ್ತದೆ. ಪ್ರಯೋಜನವಾಗದಂತೆ...

ವಿಪರ್ಯಾಸವೆಂದರೆ ಇದೇ ಅಲ್ಲವೇ..?


ಇಲ್ಲಿ ಪ್ರತಿಯೊಂದು ಘಟನೆಗಳಿಗೂ ಪ್ರವೇಶಿಕೆ ಅಥವಾ ಇಂಟ್ರೋ ಇಲ್ಲ . ಬದಲಾಗಿ ಸಂಭಾಷಣೆಗಳೇ ಎಲ್ಲವನ್ನು ಬಿಚ್ಚಿಡುತ್ತವೆ. ಮೊದಲಾರ್ಧ ಅಥವಾ ಒಂದು ಪುಟವನ್ನು ನಾವು ಅರ್ಥೈಸಿಕೊಂಡರೆ, ಹೊಂದಿಕೊಂಡರೆ ವಿಭಿನ್ನವಾದ ಓದು ನಮ್ಮದಾಗುತ್ತದೆ. ಸಂಭಾಷಣೆಗಳು ತೀರಾ ನಯ- ನಾಜೂಕಿನಿಂದೇನೂ ಸಾಗುವುದಿಲ್ಲವಾದರೂ.. ಅಶ್ಲೀಲ್ಲತೆಯೂ ಇಲ್ಲಿಲ್ಲ. ಕ್ರೈಂ ಹಾಗೂ ರಿಪೋರ್ಟಿಂಗ್ ಲೋಕದ ಸಂಭಾಷಣೆಗಳು ಕಾಣಸಿಗುತ್ತವೆ.

~ವಿಭಾ ವಿಶ್ವನಾಥ್

ಬದುಕ ಭಿತ್ತಿಯ ಚಿತ್ರಗಳು (ಪುಸ್ತಕ ಯಾನ - 474)


ಪುಸ್ತಕದ ಶೀರ್ಷಿಕೆ : ಬದುಕ ಭಿತ್ತಿಯ ಚಿತ್ರಗಳು

ಲೇಖಕರು : ಶೈಲಜಾ ಸುರೇಶ್

ಪ್ರಕಾಶಕರು : ಗೀತಾಂಜಲಿ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2019

ಪುಟಗಳು : 148

ಬೆಲೆ : 150 ರೂ.


ಈ ಕಥಾ ಸಂಕಲನದಲ್ಲಿ 2 ಪುರಾಣದ ಕಥೆಗಳು, ಸಾಮಾಜಿಕ ಕಥೆಗಳು ಒಂದು ವೈಜ್ಞಾನಿಕ ಕಥೆ ಹೀಗೆ ಎಲ್ಲವನ್ನೂ ಸುಂದರವಾಗಿ ಸಣ್ಣ ಕಥೆಗಳ ಚೌಕಟ್ಟಿನಲ್ಲಿ ಹೆಣೆಯಲಾಗಿದೆ. ಸ್ಪರ್ಧಾ ವಿಜೇತ ಹಾಗೂ ವಿವಿಧ ಮಾಸಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳನ್ನು ನಾವಿಲ್ಲಿ ಓದಬಹುದು. ಈ ಕಥಾ ಸಂಕಲನದಲ್ಲಿ 14 ವೈವಿಧ್ಯಮಯ ಕಥೆಗಳಿವೆ. 


ಮೌಲ್ಯ : ಹಣಕ್ಕೆ ಸರ್ಕಾರದವರು ಕಾಗದದಲ್ಲಿ ಮುದ್ರಿಸಿದ ಬೆಲೆ ಮೌಲ್ಯವಾಗುತ್ತದೆ. ಇಲ್ಲವಾದಲ್ಲಿ ಅದು ಬರಿಯ ಕಾಗದವಾಗುತ್ತದೆ. ಮನುಷ್ಯನ ಜೀವನವೂ ಅಂತೆಯೇ .. ಉಸಿರು ನಿಂತ ನಂತರ ಆ ಶರೀರ ಹೆಣ ಎನಿಸಿಕೊಳ್ಳುತ್ತದೆ. ಇಂತಹ ಆಲೋಚನೆ ಹುಟ್ಟಿಸಿದ ಈ ಕಥೆಯಲ್ಲಿ ಅಪ್ಪನ ಆಪರೇಷನ್ ಗೆ ಎಂದು ಹಣ ಹೊಂದಿಸಿದ ಮಗ ಹಾಗೂ ಪತ್ನಿ, ಇನ್ಸುರೆನ್ಸ್ ಕ್ಲೈಮ್ ಗಾಗಿ ಕಾಯುತ್ತಿರುವ ಸಂದರ್ಭದಲ್ಲಿಯೇ ನೋಟಿನ ಅಮಾನ್ಯತೆ ಹಾಗೂ ಅದಲು-ಬದಲಿನ ಕಾರ್ಯ ನಡೆಯುತ್ತಿರುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸಿದ್ದು ಹೇಗೆ..? ಮನುಷ್ಯ ಹಾಗೂ ಹಣ ಎರಡರ ಮೌಲ್ಯವೂ ಇಲ್ಲಿದೆ.ಇದು ಕರ್ನಾಟಕ ಲೇಖಕಿಯರ ಸಂಘದ 2017ರ ನಿರೂಪಮಾ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತ.


ಬದುಕ ಭಿತ್ತಿಯ ಚಿತ್ರಗಳು : ಲಾಯರ್ ಊರ್ಮಿಳಾ ಕುಲಕರ್ಣಿಯವರ ಬಳಿ ಬಂದ ಕರುಣಾ ಹಾಗೂ ವನಿತಾ ಇಬ್ಬರ ಮಾತುಕತೆಯ ಅವರಿಬ್ಬರ ಸಾಂಸಾರಿಕ ಬದುಕನ್ನು ಬಿಚ್ಚಿಡುತ್ತದೆ. ಕೆರಿಯರ್ ಮುಖ್ಯವಾಗಿ ಎರಡು ವರ್ಷದ ಮಗುವನ್ನು ಬಿಟ್ಟು ವಿದೇಶಕ್ಕೆ ಹಾರಿದ ತಾಯಿ ಮತ್ತೊಂದು ಬದುಕು ಕಟ್ಟಿಕೊಂಡು.. ಈಗ ಮಗಳಿಗಾಗಿ ಹಂಬಲಿಸುತ್ತಾ ಇದ್ದ ವನಿತಾ ಕೇಸು ಗೆದ್ದಳೆ? ಅವಳ ಬದುಕಿನ ಘಟನೆ ಕರುಣಾಳಲ್ಲಿ ಮೂಡಿಸಿದ ಭಾವವೇನು..? ಈ ಕಥೆ ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ.


ಶಿಕ್ಷೆ : 19ರ ಪ್ರಾಯದ ಎಳೆಯ ತರುಣಿಯ ಮೇಲೆ ದಾರುಣವಾಗಿ ಅತ್ಯಾಚಾರವಾಗಿತ್ತು. ಆದರೆ ಅಸಹಾಯಕ ಸ್ಥಿತಿಯಲ್ಲಿದ್ದ ಎಸ್.ಐಗೆ ಅವರು ಯಾರೆಂದು ತಿಳಿದಿದ್ದರೂ ಶಿಕ್ಷೆ ಕೊಡಿಸುವ ಭರವಸೆ ಇರಲಿಲ್ಲ. ಪ್ರಭಾವಿಗಳಾಗಿದ್ದವರ ಮಗನೇ ಸ್ವತಃ ತಪ್ಪೊಪ್ಪಿಗೆ ಪಡೆಯುವಂತೆ ಮಾಡಿದ ಡಾಕ್ಟರ್ ಸಮರ್ಥ ಅವರ ಸಮರ್ಥತೆ ಇಲ್ಲಿ ಕಾಣುತ್ತದೆ. ಅವರು ಹಾಗೆ ಮಾಡಿದ್ದಾದರೂ ಹೇಗೆ..? ಓದಿ ನೋಡಿ. ಮಂಗಳದಲ್ಲಿ ಪ್ರಕಟಿತ ಕಥೆ ಇದು.


ತೀರ್ಪು : ಬದುಕ ಭಿತ್ತಿಯ ಚಿತ್ರ ಕತೆಯ ಛಾಯೆ ಇಲ್ಲಿ ಕಾಣುತ್ತದಾದರೂ.. ಇಲ್ಲಿ ಮಗಳು ತಾಯಿ ಎದುರಾಗುತ್ತಾರೆ. ಮಗಳ ಭಾವಗಳು ತಾಯಿಗೆ ತಿಳಿಯುತ್ತದಾದರೂ.. ತಾಯಿಯ ಭಾವಗಳು ಮಗಳಿಗೆ ದಕ್ಕುವುದಿಲ್ಲ. ಕೋರ್ಟಿನಲ್ಲಿ ಬಂದ ತೀರ್ಪು, ತಾಯಿ ನೀಡುವ ತೀರ್ಪು ಎರಡರಲ್ಲಿ ಯಾವುದು ಸರಿ ನೀವೇ ನಿರ್ಧರಿಸಿ. ಮಯೂರದಲ್ಲಿ ಪ್ರಕಟಿತ ಕಥೆ.


ಜಾನಕಿ : ಇದು ರಾಮಾಯಣದ ಕಥೆಯೇ.. ಲಕ್ಷ್ಮಣ ಜಾನಕಿಯನ್ನು ದಟ್ಟಡವಿಯಲ್ಲಿ ಬಿಡಲು ಬಂದಾಗ ಅವರಿಬ್ಬರ ನಡುವಿನ ಮಾತುಕತೆ ಜಾನಕಿ ತಾನೇ ಮುಂದಾಗಿ ಋಷ್ಯಾಶ್ರಮದಲ್ಲಿ ಅಪರಿಚಿತ, ಪರಿತ್ಯಕ್ತೆಯಾಗಿರಲು ನಿರ್ಧರಿಸಿದ ಕುರಿತು ಹೇಳುತ್ತಾಳೆ. ಕೊಂಚ ವಿಭಿನ್ನ ನಿರೂಪಣೆಯಿಂದ ಕಾಡುವ ಕಥೆ. ಜಾನಕಿ ಹಾಗೆ ನಿರ್ಧರಿಸಿದ್ದಾದರೂ ಏಕೆ..? 


ಮಾಧವಿ : ಅನುಪಮಾ ನಿರಂಜನ ಅವರ ಮಾಧವಿಗಿಂತಲೂ ಕೊಂಚ ವಿಭಿನ್ನವಾದ ಮಾಧವಿ ಇಲ್ಲಿ ಕಾಣಿಸುತ್ತಾಳೆ. ಗಾಲವನ ಮೇಲೆ ಪ್ರೇಮ ಹೊಂದಿದ ಮಾಧವಿ ಆತನಿಗಾಗಿ ಕಾಯುತ್ತಾ ಇದ್ದಾಗ ಕೊನೆಗೂಮತ್ತೆ ಬರುತ್ತಾನೆ ಗಾಲವ. ಅರಮನೆಯ ಅಂತಃಪುರಗಳ ಬಂಗಾರದ ಪಂಜರದಿಂದ ಬಿಡಿಸಿಕೊಂಡು ಹೋದ ಅವನು ತನ್ನನ್ನು ಗುರುದಕ್ಷಿಣೆ ನೀಡಲು ಬಳಸಿಕೊಂಡರೂ ಆತನ ಮೇಲೆ ಬದಲಾಗದ ನಿರ್ಮಲ ಪ್ರೀತಿ, ಆತ ನಿರಾಕರಿಸಿದ ಮಾಧವಿ ಏನಾಗುತ್ತಾಳೆ..? ಕನ್ಯಾವಲ್ಲರಿ ಆಕೆಯ ಪಾಲಿಗೆ ಶಾಪವಾದ ಕಥೆ ಇಲ್ಲಿದೆ. ಮಯೂರದಲ್ಲಿ ಪ್ರಕಟಿತ ಕಥೆ ಇದು.


ವಿಪರ್ಯಾಸ : ನರರೂಪ ರಾಕ್ಷಸನಂತಹ ಗಂಡನ ಜೊತೆ ಅಷ್ಟು ದಿನವೂ ಬದುಕಿದ ಅವಳ ಮಗ ಅದರ ವಿರುದ್ಧವಾಗಿ ಬೆಳೆಯುತ್ತಾನೆ. ಇನ್ನೇನು ಅವಳ ಎಲ್ಲಾ ಕಷ್ಟಗಳಿಗೆ ಮುಕ್ತಿ ಎಂದುಕೊಂಡು ಮಗನ ಜೊತೆ ಆತನ ಪುಟ್ಟ ಗೂಡಿಗೆ ಹೊರಡುವ ಸಂದರ್ಭದಲ್ಲಿ ಬಂದ ಕರೆಯೊಂದು ತನ್ನದಲ್ಲದ ಮತ್ತೊಂದು ನಿರ್ಧಾರಕ್ಕೆ ಕಾರಣವಾಯಿತೇ..? ತುಷಾರದಲ್ಲಿ ಪ್ರಕಟಿತ ಕಥೆ ಇದು.


ಆಂಟೀ : ಅಮ್ಮನ ತಂಗಿಯಾಗಿದ್ದ ಆಂಟಿಯನ್ನು ವಿನಾಯಕ ಹಾಗೂ ಜಯ ಪ್ರೀತಿಯಿಂದಲೇ ಸ್ವಾಗತಿಸುತ್ತಾರೆ. ಅಕ್ಕನ ಶ್ರಾದ್ಧ ಕಾರ್ಯವನ್ನು ಯಾವ ಅಡಚಣೆಯೂ ಇಲ್ಲದೆ ಮಾಡಬೇಕೆಂಬ ಅವಳ ಆಸೆ ಹಾಗೂ ಅಕ್ಕನ ಮೇಲಿನ ಅಪರಿಮಿತ ಪ್ರೀತಿಯ ಜೊತೆಗೆ ನಂಟಿನ ನೆನಪು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ. ಅವಳ ಏಕೈಕ ಮಗ ಪ್ರಹ್ಲಾದನಂತಾಗಬೇಕು ತನ್ನ ಮಗ ಎನ್ನುವ ಜಯಳ ಆಸೆಗೆ ಆಂಟಿ ಬೇಡವೆಂದಿದ್ದೇಕೆ..? "ಇವತ್ತಿನ ಸುಖವನ್ನು ಇವತ್ತಿನ ನೆಮ್ಮದಿಯನ್ನು ಅನುಭವಿಸು. ನಾಳೆ ಏನಾಗುತ್ತೋ ಯಾರಿಗೆ ಗೊತ್ತು" ಎನ್ನುತ್ತಲೇ ಅವರ ವರ್ತಮಾನವನ್ನು ತೆರೆದಿಡುವ ಕಥೆ ಇಲ್ಲಿದೆ.


ತಾಯಮ್ಮ : ಕೆಲಸಕ್ಕೆ ಬರುತ್ತಿದ್ದ ತಾಯವ್ವನ ಸ್ವಾಭಿಮಾನ, ನಿಷ್ಠೆ ಸಮಯ ಪಾಲನೆ, ಒಬ್ಬರ ಮನೆಯ ಕುರಿತು ಮತ್ತೊಬ್ಬರ ಮನೆಯಲ್ಲಿ ಮಾತಾಡಿ ಎಂದಿಗೂ ಹರಡದ ಗಾಳಿ ಸುದ್ದಿ ಹೀಗೆ ತಾಯವ್ವನ ಕುರಿತು ಮೆಚ್ಚುಗೆಯನ್ನು ಹೇಳುತ್ತಾ ಪರಿಚಯಿಸುತ್ತಲೇ.. ನಾಲ್ಕು ವರ್ಷದ ನಂತರ ತಾಯಿ ಕರೆದರೆಂದು ತನ್ನ ತವರಿಗೆ ಹೋಗಿ ಬರುವೆನೆಂದು ಹೊರಟವಳು ಒಂದೇ ದಿನಕ್ಕೆ ವಾಪಾಸ್ ಬಂದವಳ ಮಾತುಗಳನ್ನು ಕೇಳಿ ಅವಳೊಬ್ಬ ನಿರಕ್ಷರಕುಕ್ಷಿ ಅವಳಿಗೇನು ತಿಳಿಯುತ್ತೆ ಎಂದುಕೊಂಡಿದ್ದ ತಾತ್ಸಾರ ಕರಗಿದ ಕಥೆ ನಮ್ಮನ್ನೂ ಕರಗಿಸುತ್ತದೆ. ಈ ಕಥೆ ಮಯೂರದಲ್ಲಿ ಪ್ರಕಟಿತ.


ಬಿಸಿಲುಗುದುರೆ :ಬಿಸಿಲುಗುದುರೆಯ ಬೆಂಬತ್ತಿದ್ದ, ಅದರ ಮೇಲೆಯೇ ಆಕರ್ಷಕ ಸವಾರಿ ಮಾಡುತ್ತಿದ್ದ ಲಕ್ಷ್ಮಿ ದೇಸಾಯಿಯನ್ನು ಮತ್ತೆ ಸಂಸಾರಕ್ಕೆ ಎಳೆದು ತರಲು ಪ್ರಯತ್ನಿಸುತ್ತಿದ್ದ ಕಾಂತರಾಜ ದೇಸಾಯಿ ಮಾಡದ ಪ್ರಯತ್ನಗಳಿಲ್ಲ. ಪ್ರತಿಯೊಬ್ಬರಿಂದಲೂ ಕರೆ ಮಾಡಿಸಿ, ಆಕೆಯನ್ನು ಮತ್ತೆ ಕರೆತರಲು ಪ್ರಯತ್ನಿಸುತ್ತಿದ್ದರು. ಆದರೆ, ಅವರ ಬದುಕನ್ನು ಅವರೇ ಕಟ್ಟಿಕೊಳ್ಳುವ ಬೇರೆ ಪ್ರಯತ್ನ ಮಾಡುವ ಸಲಹೆ ಬಂದಿದ್ದೇಕೆ..? ಸ್ವಚ್ಛಂದವಾಗಿ ಹಾರುವ ಲಕ್ಷ್ಮಿಯ ಬದುಕು ಇಲ್ಲಿ ಎಷ್ಟು ಸೂಕ್ತ..? ಪಂಜರದ ಪಕ್ಷಿಯಾಗಲು ಒಪ್ಪದ ಲಕ್ಷ್ಮಿ ತನ್ನ ಬದುಕನ್ನು ತೆರೆದಿಟ್ಟಿದ್ದೇಗೆ..? 


ಮನೆ : ತಾನು ಮನೆ ಕಟ್ಟಿಸಲು ಕಡಿಮೆ ಬಿದ್ದ ಹಣಕ್ಕಾಗಿ ತನ್ನ ತಂದೆ ಕಟ್ಟಿಸಿದ ಮನೆಯನ್ನು ಮಾರಲು ಸಿದ್ದನಾದ ಅಣ್ಣನಿಗೆ ತಂಗಿ ಮಾಡಿಸಿದ ಜ್ಞಾನೋದಯವೇನು..? ಅಣ್ಣ-ತಂಗಿಯರ ಬಾಂಧವ್ಯ ಹೀಗಿದ್ದರೆ ಎಷ್ಟು ಚಂದವಲ್ಲವೇ ಎನ್ನಿಸಿತು.


ಚಿಂಟೂ : ಇದು ವೈಜ್ಞಾನಿಕ ಕಥೆ. ಸುಕನ್ಯಾ ಮತ್ತು ಶಿವಾನಂದರ ಅನ್ಯೋನ್ಯ ದಾಂಪತ್ಯಕ್ಕೆ ಪುಟ್ಟಿ ಇದ್ದರೂ... ಅನಾಥನಾಗಿದ್ದ ಚಿಂಟುವೇ ತನ್ನ ಮಗನೆಂಬಷ್ಟು ಪ್ರೀತಿ ತೋರಿಸಿದಳು ಸುಕನ್ಯ. ಆದರೆ ಬದಲಾದ ಚಿಂಟುವಿನ ನಡೆ-ನುಡಿ, ಸಿಡಿಮಿಡಿಯನ್ನು ಎಷ್ಟು ಸಹನೆಯಿಂದ ತಿದ್ದಲು ಹೋದರೂ ಆಗುತ್ತಿರಲಿಲ್ಲ. ಪ್ರೊಫೆಸರ್ ಶಿವಾನಂದ್ ಹಾಗೂ ಚಿಂಟು ಇಬ್ಬರೂ ಸರಿ ರಾತ್ರಿಯಲ್ಲಿ ನಡೆಸುತ್ತಿದ್ದ ಮಾತುಕತೆಯನ್ನು, ಕೆಲಸವನ್ನು ತಿಳಿಯಲು ಹೊರಟವಳು ಸಿಕ್ಕಿಬಿದ್ದದ್ದೆಲ್ಲಿ.? ರಾಜಶೇಖರ ಭೂಸನೂರು ಮಠ ಅವರ ವೈಜ್ಞಾನಿಕ ಕಥಾ ಶಿಬಿರದಲ್ಲಿ ಬರೆದ ಕಥೆ ಇದು.


ನಿರಂತರ...!? : ಹೆಣ್ಣಿನ ಮೇಲೆ ಶೋಷಣೆ ನಿರಂತರವಾಗಿ ನಡೆಯುತ್ತಲೇ ಬರುತ್ತಿರುತ್ತದೆ. ಕೆಲವರು ಸಿಡಿದು ನಿಂತರೆ ಕೆಲವರು ಅದನ್ನು ಸಹಿಸಿಕೊಂಡು ಸಾಗುತ್ತಾರೆ. ತಿದ್ದುವ ಪ್ರಯತ್ನ ಮಾಡುವವರು ಕೆಲವರು. ಮೀರಾ ಇಲ್ಲಿ ಅಂತಹ ಗುಂಪಿಗೆ ಸೇರುತ್ತಾಳೆ. ಗಂಡು ಎಂದು ಆತ ಏನೇ ಮಾಡಿದರು ಸರಿ ಎಂದು ಪರವಹಿಸುತ್ತಿದ್ದ ಅತ್ತೆ ಹಾಗೂ ಸೋಮಾರಿಯಾಗಿ ಹೆಂಡತಿಯ ದುಡಿಮೆಯ ಜೊತೆಗೆ ಸರ್ವಾಧಿಕಾರ ತೋರುತ್ತಿದ್ದ ಮುಕುಂದನನ್ನು ಆಕೆ ಯಾವ ರೀತಿ ಸರಿ ದಾರಿಗೆ ತರುತ್ತಾಳೆ..? ಇದೆಲ್ಲದರ ಜೊತೆಗೆ ಹಲವಾರು ಹೆಣ್ಣುಮಕ್ಕಳ ವಿವಿಧ ಅನುಭವಗಳನ್ನು ಕಾಣಬಹುದಾಗಿದೆ.


ಸಾಕ್ಷಿಯಾದವರು... : ಸುಬ್ರಾಯರ ಕಾದಂಬರಿ ಓದಿ, ಬದಲಾಗಿ ಅವರ ಬಹುದೊಡ್ಡ ಅಭಿಮಾನಿಗಳಾಗಿದ್ದ ಮಂಗಳ ಹಾಗೂ ರಾಧಾರನ್ನು ಗೆಳತಿ ವಿಜಯ ಮನೆಯ ತನ್ನ ಮನೆಯ ಗೃಹಪ್ರವೇಶದಲ್ಲಿ ಅವರಿಗೆ ಪರಿಚಯಿಸಿದ್ದಳು. ಅವರ ನಿಜ ಜೀವನಕ್ಕೂ ಬರಹಕ್ಕೂ ಬಹಳಷ್ಟು ವ್ಯತ್ಯಾಸ ಕಂಡು ಬಂದಿತ್ತು, ಅದರ ಬದುಕಿನ ಕಥೆ ಸುಖಾಂತ್ಯವಾದದಕ್ಕೆ ಸಾಕ್ಷಿಯಾದವರ ನೋಟವನ್ನು ನಾವಿಲ್ಲಿ ಕಾಣಬಹುದು.


ಬದುಕ ಭಿತ್ತಿಯ ಚಿತ್ರ ಕಥಾ ಸಂಕಲನದಲ್ಲಿ ಹಲವಾರು ರೀತಿಯ ಬದುಕುಗಳು ಕಾಣಸಿಗುತ್ತವೆ. ಹೆಣ್ಣು ಮಕ್ಕಳ ಬದಲಾದ ದಿನಗಳು, ಬದಲಾದ ಆಲೋಚನೆ, ನಡೆಗಳು ಅವರ ದಿಟ್ಟ ನಿಲುವುಗಳನ್ನು ಇಲ್ಲಿ ಮುಖ್ಯವಾಗಿ ಗಮನಿಸಬಹುದು. ಹಾಗೆಂದು.. ಎಲ್ಲಾ ನಡೆಗಳನ್ನೂ ಸಮರ್ಥಿಸುವುದಿಲ್ಲ. ಹಲವಾರು ಬದುಕಿನ ಹಲವಾರು ಮಗ್ಗುಲುಗಳು ತೆರೆದುಕೊಂಡಿವೆ ಇಲ್ಲಿ. 

~ ವಿಭಾ ವಿಶ್ವನಾಥ್

ಬ್ಲಡ್ ಮನಿ (ಪುಸ್ತಕ ಯಾನ - 473)


ಪುಸ್ತಕದ ಶೀರ್ಷಿಕೆ : ಬ್ಲಡ್ ಮನಿ

ಲೇಖಕರು : ಗೀತಾ ಕುಂದಾಪುರ

ಪ್ರಕಾಶಕರು : ತೇಜು ಪಬ್ಲಿಕೇಷನ್ಸ್

ಪ್ರಥಮ ಮುದ್ರಣ : 2025

ಪುಟಗಳು : 150

ಬೆಲೆ : 160 ರೂ.


'ಬ್ಲಡ್ ಮನಿ' ಗೀತಾ ಕುಂದಾಪುರ ಅವರ ಐದನೇ ಕಥಾ ಸಂಕಲನ ಹಾಗೂ ಒಂಬತ್ತನೇ ಕೃತಿ. ಇದರಲ್ಲಿ 18 ಚಂದದ ಕಥೆಗಳಿವೆ. ಪ್ರತಿ ಕಥೆಯಲ್ಲಿಯೂ ಒಂದಲ್ಲಾ ಒಂದು ವಿಶೇಷಗಳಿವೆ. 

'ಕಾಫಿ ಡೇಟ್' ಕತೆ ವಿಜಯ ಕರ್ನಾಟಕ-ವೀರಲೋಕದ ದೀಪಾವಳಿ ಕಥೆಯ ಟಾಪ್ 25 ಕಥೆಗಳಲ್ಲೊಂದು. 'ಮನಸ್ಸು ಮಾಯಾಂಗನೆ' ಕಥೆಗೆ ಬೃಂದಾವನ ಕನ್ನಡ ಕೂಟ ನ್ಯೂಜರ್ಸಿ ಅವರ 'ಬೃಂದಾವನ ವಿಶಂತಿ ವೈಭವ-2024' ಕಥಾಸ್ಪರ್ಧೆಯ ಬಹುಮಾನ ಸಿಕ್ಕಿದೆ. 'ಜೋಡಿ ಕಣ್ಣುಗಳು' ವಾಣಿ ಕೌಟುಂಬಿಕ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದಿದ್ದರೆ.. 'ದೇವಿಕಾ' ಕಥೆ ಗುರುಕುಲ ಕಲಾ ಪ್ರತಿಷ್ಠಾನದ ಸಣ್ಣ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ. ಹಲವು ಕಥೆಗಳು ಮಂಗಳೂರು ಹಾಗೂ ಕುಂದಾಪುರ ಆಕಾಶವಾಣಿಯಲ್ಲಿ ಪ್ರಸಾರವಾಗಿವೆ.


ಕಾಫಿ ಡೇಟ್: ಇಂದಿನ ಯುವ ಜನಾಂಗದ ಪ್ರಸ್ತುತ ಚಿತ್ರಣ ಇಲ್ಲಿದೆ. ಸಂಬಂಧಗಳ ಸ್ವರೂಪವನ್ನು ನಿರ್ಧರಿಸುವಾಗ ಇಂದಿನ ದಿನಗಳಲ್ಲಿಯೂ ತಮ್ಮ ಗತದ ದಿನಗಳನ್ನು ಗಂಡು ಬಿಚ್ಚಿಡುವಷ್ಟೇ ಸಾರಾಗವಾಗಿ ಹೆಣ್ಣು ಬಿಚ್ಚಿಟ್ಟರೆ ಅದನ್ನು ಎಷ್ಟು ಸುಲಭವಾಗಿ ಒಪ್ಪಬಲ್ಲ ಆತ..? ಸಾಕ್ಷಿಗೆ ಈಶಾನ್ ನ ಇತಿಹಾಸದ ಕುರಿತು ಅಷ್ಟು ಆಸಕ್ತಿ ಇರಲಿಲ್ಲ. ಇತಿಹಾಸದ ಪೋಸ್ಟ್ ಮಾರ್ಟಂ ಮಾಡಿದ ಅವರಿಬ್ಬರ ಕಾಫಿ ಡೇಟ್ ಮುಂದೆ ಅವರಿಬ್ಬರನ್ನು ಯಾವ ನಿರ್ಧಾರ ತಳೆಯುವಂತೆ ಮಾಡಿತು..?


ಬ್ಲಡ್ ಮನಿ: ಕೆಲ ದಿನಗಳ ಹಿಂದೆ ನರ್ಸ್ ನಿಮಿಷ ಪ್ರಿಯಳ ಸಂಗತಿ ಓದಿದ್ದಾಗ ನನಗೆ ಮೊದಲು ನೆನಪಾಗಿದ್ದು ಈ ಕಥಾ ಸಂಕಲನದ ಶೀರ್ಷಿಕೆ. ಶೀರ್ಷಿಕೆ ನನಗೆ ಬಹಳ ಕುತೂಹಲ ಮೂಡಿಸಿತು. ದಮಾಮ್ ನಲ್ಲಿದ್ದ ಪ್ರಜ್ವಲನನ್ನು ಸೇರಲು ಹೊರಟ ಶೀಲಾಳ ಕಥೆ ಮುಂದೆ ರಕ್ತಕ್ಕೆ ರಕ್ತ ಇಲ್ಲವೇ ಬ್ಲಡ್ ಮನಿ ಎನ್ನುವ ಕಾನೂನಿನ ಚೌಕಟ್ಟಿನಲ್ಲಿ ಸಿಲುಕಿದ್ದು ಹೇಗೆ..? ಕುತೂಹಲಕರವಾಗಿ ಹೊಸ ವಿಚಾರವೊಂದು ತೆರೆದುಕೊಳ್ಳುತ್ತದೆ. ಕಾನೂನಿನ ದುರುಪಯೋಗವನ್ನು ಹೇಗೆಲ್ಲಾ ಪಡೆಯುತ್ತಾರೆ ಎಂದು ಹೇಳುವ ಕಥೆ ಇಲ್ಲಿದೆ.


ಬ್ಯಾಂಡ್, ಬಾಜಾ, ಬಾರಾತ್: ಅವನಿ ರೆಸಾರ್ಟ್ ನಲ್ಲಿ 'ಅಲಕಾ ವೆಡ್ಸ್ ಆಕಾಶ್' ಮದುವೆಯ ಸಂಭ್ರಮದಲ್ಲಿಯೇ ಅಂದು ಮತ್ತೊಂದು ಮದುವೆಯೂ ಆಗಿತ್ತು. ಆದರೆ, ಎರಡು ವಿವಾಹಗಳೂ ವಿರುದ್ಧ ಧ್ರುವಗಳಂತೆ ಎಂದರೂ ತಪ್ಪಾಗಲಾರದು. ಅಲಕಾ ಹೇಳುವಂತೆ "ದಾಂಪತ್ಯಕ್ಕೆ ಬೇಕಾಗಿರುವುದು ಪರಸ್ಪರ ಪ್ರೀತಿ,ಗೌರವ ಜೊತೆಗೆ ...." ಮತ್ತೇನು..? 


ಸಿಹಿ-ಕಹಿ: ಪಾಂಡುರಂಗ ಕಮ್ತಿಯವರ 60 ರ ಶಾಂತಿಯ ಚಿತ್ರಣದಲ್ಲಿ ಅವರ ಸಕ್ಕರೆ ಕಾಯಿಲೆಯ ಜೊತೆಗೆ ಅವರ ಬದುಕಿನ ಸಿಹಿ -ಹಿ ಪ್ರಸಂಗಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ಕೆಲವೊಮ್ಮೆ ನಾವು ಸಿಹಿಯ ವಿಚಾರದಲ್ಲಿ ತುಸು ಹೆಚ್ಚೇ ಸ್ಟ್ರಿಕ್ಟ್ ಆದೆವು ಎಂದು ಅರಿತುಕೊಳ್ಳುವಷ್ಟರಲ್ಲಿ ಕಾಲ ಮಿಂಚಿ ಹೋಗುತ್ತದಾ..? ಇಲ್ಲಿ ಸಿಹಿ ಹೆಚ್ಚೋ ಕಹಿ ಹೆಚ್ಚೋ ಓದಿ ನೋಡಿ.


ಮೂಗೂರಿನ ಮೂಗರು: ನನಗೆ ಬಹಳ ಇಷ್ಟವಾದ ಕಥೆ ಇದು. ಜಿಂಕೆಗಳು ಬಾರದಂತೆ ತಡೆಯಲು ಲಕ್ಷ್ಮಿಯ ನೈಲಾನ್ ಸೀರೆಯ ಪರದೆಗಳು ಹರಿದಿದ್ದವು. ಭಾಸ್ಕರನ ಕೃಷಿ ಬದುಕಿನ ಬವಣೆಯ ಜೊತೆಗೆ ಆತ ತನ್ನೊಡನಿರುವ ಜೀವಗಳಿಗೆ ಇಟ್ಟಿರುವ ಹೆಸರುಗಳು ಸೆಳೆಯುತ್ತವೆ. ಸದ್ದಾಮ, ಪುಟಿನ್, ಶ್ರೀದೇವಿ, ರಾಣಿ ಪದ್ಮಿನಿ ಹೀಗೆ. ಇದರೊಡನೆ ಜೊತೆಯಾದ ಶೇಖಾಮೌಸಾ. ಈ ಹೆಸರಿಗೆ ಕಾರಣ ಕಂಡುಹಿಡಿದ ಮಗ, ಆಟಿಸಂನ ಪುಟ್ಟಿ ಚುರುಕಾದ ಬಗೆ.. ಬ್ಯಾಂಕ್ ಮ್ಯಾನೇಜರ್ ಬಂದು ಹೋದ ನಂತರ ಹರಡಿದ ಸುದ್ದಿ.. ಕಷ್ಟಗಳಲ್ಲಿ ನೆರಳುತ್ತಿದ್ದ ಕುಟುಂಬಕ್ಕೆ ಶೇಖಾಮೌಸಾ ದಾರಿ ತೋರಿದ ಬಗೆ ಹೇಗೆ..? ನಿಮಗೆ ಶೇಖಾಮೌಸಾ ಯಾರೆಂದು ತಿಳಿಯಿತೇ..? ಇಲ್ಲವಾದಲ್ಲಿ ಕಥೆ ಓದಿ.


ಬಿಲದೊಳಗಿನ ಬದುಕು: ಸುವರ್ಣಳ ಕಣ್ಣಿಗೆ ಬಿದ್ದ ಬಾಲದಿಂದ ಅದು ಹಾವು ಇರಬಹುದೇ ಎನ್ನುವ ಊಹೆಯಲ್ಲಿ ಹುಡುಕಲು ಹೊರಟಾಗ ನಿಜಕ್ಕೂ ಸಿಕ್ಕದ್ದು ಕಾಳಿಂಗನ ದರ್ಶನ. ಮನೆಯ ಪರಿಸ್ಥಿತಿಯೇ ಬುಡಮೇಲಾಗಿ ಮುಂದೇನು ಗತಿ ಎನ್ನುವಾಗ ಬಿಲದೊಳಗೆ ಹೊಕ್ಕ ಕಾಳಿಂಗನ ದಯೆ ಹೇಗಿತ್ತು..? ಓದಿ ನೋಡಿ.


ಮನಸು ಮಾಯಾಂಗನೆ: ಮೃದುಲಾ ಹಾಗೂ ಶ್ರೀಕಾಂತ್ ಮಗಳ ಮನೆಗೆ ಹೋಗಿ ಅವಳ ಬಾಣಂತನ ಮುಗಿಸಿ ಕ್ಯಾಲಿಫೋರ್ನಿಯಾದಿಂದ ಬಂದ ನಂತರ ಮೃದುಲಾ ತರಕಾರಿ ತರಲು ಹೋಗಿ ಮಾರ್ಕೆಟ್ ನಿಂದ ಕಾಣೆಯಾಗಿದ್ದಳು. 36 ವರ್ಷಗಳ ದಾಂಪತ್ಯದಲ್ಲಿ ಅವರಿಬ್ಬರ ಅನ್ಯೋನ್ಯತೆ ಹೇಗಿತ್ತು..? ಆಸ್ಟ್ರೇಲಿಯಾದಲ್ಲಿದ್ದ ಮಗ ಹಾಗೂ ಕ್ಯಾಲಿಫೋರ್ನಿಯಾದಲ್ಲಿದ್ದ ಮಗಳು ಅಮ್ಮನ ಕಣ್ಮರೆಗೆ ಸ್ಪಂದಿಸಿದ ಬಗೆ ಹೇಗೆ..? ಮೃದುಲಾ ಸ್ಥಿತಿಗೆ ಕಾರಣರು ಯಾರು..? ಶ್ರೀಕಾಂತ್ ನಿಗೆ ಮೃದುಲ ಸಿಕ್ಕ ಮುನ್ನಿನ ಬವಣೆ ಹೇಗಿತ್ತು..? ಇಲ್ಲಿ ಪ್ರತಿಯೊಬ್ಬರ ಮನಸ್ಸಿನ ಮಾತುಗಳ ಸ್ಪಷ್ಟ ಚಿತ್ರಣವಿದೆ.


ಮನೆಗೆ ಬಂದ ಗುಡ್ಡ: ಪುಟ್ಟ-ಪುಟ್ಟ ಎರಡು ಕೋಡು ಮೂಡಿದ್ದ ಗುಡ್ಡ ಮನೆಗೆ ಬಂದದ್ದು ಹಾಗೂ ಮನೆಯಿಂದ ಹೊರಟದ್ದು ಎರಡು ಅನಿರೀಕ್ಷಿತವೇ. ಆದರೆ.. ಈ ನಡುವೆ ಗುಡ್ಡನ ದೆಸೆಯಿಂದ ಪವಾಡವೇ ಆಯಿತೆನ್ನಬಹುದು. ಕಾವೇರಿಯ ಮನೆಗೆ ಬಂದ ಗುಡ್ಡನ ಕಥೆ ಇಲ್ಲಿದೆ.


ಆ ಜೋಡಿ ಕಣ್ಣುಗಳು: ಜೀವನೋತ್ಸಾಹವನ್ನೇ ತುಂಬಿಕೊಂಡಿದ್ದ ಎಲ್ಲರಿಗೂ ಅರ್ಥವಾಗುತ್ತಿದ್ದ ಮಾಧುರಿ ಬ್ರೈನ್ ಡೆಡ್ ಆಗಿ ಆಸ್ಪತ್ರೆಯಲ್ಲಿದ್ದಾಗ ಮನೆಯವರು ತೆಗೆದುಕೊಂಡ ನಿರ್ಧಾರಗಳು.. ಸೊಸೆ ಅಲಕಾಳ ಕುರಿತು ಎದ್ದ ಗಾಳಿಸುದ್ದಿಗಳು, ಮಾಧುರಿಯ ಅಂಗಾಂಗ ದಾನ ಮಾಡಿದ ನಂತರ ಜೋಡಿ ಕಣ್ಣುಗಳನ್ನು ಮಾತ್ರ ಪತಿ ಶ್ರೀಕಾಂತ್ ಅರಸಿ ಹೊರಟದ್ದೇಕೆ..? ಅಂತ್ಯದಲ್ಲಿ ಅಲಕಾಳ ದಿಟ್ಟ ನಿರ್ಧಾರ ಇಲ್ಲಿ ಆಪ್ತವಾಗುತ್ತದೆ.


ಗಿರ್ಗಿಟ್ಲಿ: ವಕೀಲ ಸೋಮಣ್ಣನ ಮಗ ಅವನಂತೆ ವಕೀಲನಾಗಲಿಲ್ಲ. ಅಂತೆಯೇ ಕಾಯಿ ಕೆಡವುವ ಸೀನನ ಮಗ ಅವನಂತಾಗದೆ ವಕೀಲನಾದ. ಮೊದಮೊದಲಿಗೆ ಸೀನನ ಮಗ ಅಶೋಕನ ಕುರಿತು ಹೆಮ್ಮೆಯಾದರೆ, ಸೋಮಣ್ಣ ಅದುವರೆಗೂ ಅವರು ಹಳಿಯುತ್ತಿದ್ದ ಮಗ ಸೂರಜ್ ಕುರಿತು ಹೆಮ್ಮೆಯಾಗುವ ಕಥೆ ಇಲ್ಲಿದೆ. ಗಿರ್ಗಿಟ್ಲಿಯಂತಹ ಬದುಕಿನ ಚಿತ್ರಣ ಇಲ್ಲಿದೆ.


ಸ್ವಾರ್ಥ-ನಿಸ್ವಾರ್ಥ: ಮೊದಮೊದಲು ಬಾಂಧವ್ಯದಿಂದಲೇ ಇದ್ದ ತಂಗಿ ಆಶಾ ಹಾಗೂ ತನ್ನ ಬಾಂಧವ್ಯ ದೂರಾಗುತ್ತಿರುವ ಕುರಿತು ಹುಟ್ಟಿದ ಆಲೋಚನೆಯ ಜೊತೆಯಲ್ಲೇ.. ಪಕ್ಕದಲ್ಲಿ ಶೆಡ್ಡಿನಲ್ಲಿದ್ದ ವಸಂತಳ ಬದುಕು, ನಂತರ ಅವಳ ತಂಗಿ ಜೊತೆಯಾಗಿ ಅವರ ಬದುಕಿನ ಬಂಡಿ ಸಾಗುವಾಗ ಆದ ಜ್ಞಾನೋದಯ, ಸಂಬಂಧಗಳ ಸ್ವಾರ್ಥ-ನಿಸ್ವಾರ್ಥತೆಯ ಜೊತೆಗೆ ಮನಸ್ಸು ಅವುಗಳನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತದೆ ಎಂಬುದರ ಚಿತ್ರಣವು ಇಲ್ಲಿದೆ.


ಮುಸ್ಸಂಜೆಯಲ್ಲರಳಿದ ಪ್ರೀತಿ: ಶಾಂತಿವನದಲ್ಲಿ ಎಲ್ಲರೂ ತಮ್ಮ ಮುಸ್ಸಂಜೆಯ ಬದುಕನ್ನು ಕಳೆಯುತ್ತಿರುವಾಗ ಸದಾನಂದ ಹಾಗೂ ಮೀರಾರ ಕುರಿತಾಗಿ ಎದ್ದ ಗಾಳಿಸುದ್ದಿಯೇ ನಿಜವಾಯಿತು ಎನ್ನುವಷ್ಟರಲ್ಲಿ.. ಸದಾನಂದನ ಮನೆಯವರ ಪ್ರವೇಶವಾಗುತ್ತದೆ. ಮೀರಾಳ ಹಿಂದಿನ ಬದುಕು ಗೊತ್ತಿದ್ದ ಸದಾನಂದ ತಳೆಯುವ ನಿರ್ಧಾರವೇನು..? ಮುಸ್ಸಂಜೆಯ ಈ ಪ್ರೀತಿ ಅರಳಿದ ಬಗೆ ಇಲ್ಲಿದೆ.


ಬಾಬಕ್ಕ: ಎಲ್ಲರಿಗೂ ಬೇಕಾಗಿದ್ದ ಬಾಬಕ್ಕ, ಅವಳ ಕಾಫಿ ಪ್ರೀತಿ, ಸಾಂತಾವರದ ಜನ ಅವಳನ್ನು ಆದರಿಸಿದ ಬಗೆ ಹೀಗೆ ಕಥೆ ಸಾಗುತ್ತಿರುವಾಗಲೇ ಎಲ್ಲರೂ ಸಾಮೂಹಿಕವಾಗಿ ಅವಳನ್ನು ಬಹಿಷ್ಕರಿಸಿದಂತೆ ಒಬ್ಬಂಟಿಯಾಗಿದ್ದ ಬಾಬಕ್ಕನ ಬದುಕಿನಲ್ಲಿ ಬಂದ ಆಶಾಕಿರಣವೇನು..? ಅಷ್ಟಕ್ಕೂ ಎಲ್ಲರೂ ಆಕೆಯನ್ನು ದೂರಾಗಿಸಿದ್ದೇಕೆ..? ಎಷ್ಟೇ ಉಪಕಾರ ಮಾಡಿದರೂ ಅವಶ್ಯಕತೆ ಮುಗಿದ ನಂತರ ಮನುಷ್ಯನನ್ನು ಯಾವ ರೀತಿ ಕಾಣುತ್ತಾರೆ ಎನ್ನುವ ಕಟು ವಾಸ್ತವದ ಚಿತ್ರಣವೂ ಇಲ್ಲಿದೆ.


ಮೂರು ಹೆಜ್ಜೆಗಳು: ಈ ಕಥೆಯ ಕುರಿತು ಹೆಚ್ಚು ತೆರೆದಿಡಲಾರೆ. ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ವರ್ಗಕ್ಕೂ ಹೊಂದಿಕೆಯಾಗುವ ಈ ಕಥೆಯಲ್ಲಿ ಮೂರು ಹೆಜ್ಜೆಗಳು ಕಾಣುತ್ತವೆ.


ಬದುಕು ಬಯಲಾದಾಗ: ಮಶೀನಿಗೆ ಸಿಕ್ಕ ದಾರದ ಸಿಕ್ಕನ್ನು ಬಿಡಿಸುವಂತೆ ತನ್ನ ಸಿಕ್ಕುಗಳು ಬಿಡಿಸುವಂತಾಗಿದ್ದರೆ..! ಎಂದು ಆಲೋಚಿಸುತ್ತಿದ್ದ ಸುರೇಖಳಿಗೆ ಈಗ ತವರಿನ ಆಸರೆ ಇಲ್ಲ. ಪ್ರೀತಿಸಿದ ಗಂಡ ಮಗ ಜೊತೆಗಿಲ್ಲ. ಸಾಧಾರಣ ಬದುಕಿಗೆ ಕಷ್ಟಪಡುತ್ತಿದ್ದ ಅವಳ ಜೊತೆಗಿದ್ದದ್ದು ಯಾರದ್ದೋ ತಪ್ಪಿಗೆ ಕಣ್ಣು ಕಳೆದುಕೊಂಡ ಮಗಳು ಶ್ವೇತ. ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತು ಶ್ವೇತಳ ಭವಿಷ್ಯದ ಭವ್ಯ ಬದುಕನ್ನು ಕಟ್ಟಿಕೊಡುವ ತಾಯಿ ಸುರೇಖಳ ಬದುಕನ್ನು ಕಾಣಬಹುದು. ನತದೃಷ್ಟೆ ಎಂದುಕೊಂಡಳ ಬದುಕು ಅದೃಷ್ಟದ ಹಾದಿ ಹಿಡಿದ ಕಥನ ಇಲ್ಲಿದೆ.


ಸುವರ್ಣ ರೇಖೆ: ಅನಕ್ಷರಸ್ಥಳಾದ ತಾಯಿ ಸರಸೋತಿಗೆ ವಿದೈಯ ಮಹತ್ವ ಅರಿವಿರಲಿಲ್ಲ. ಗಂಗಾ, ಗೌರಿ, ಗಾಯತ್ರಿ ಎನ್ನುವ ಮೂವರು ಹೆಣ್ಣು ಮಕ್ಕಳು. ಪೌರಕಾರ್ಮಿಕಳಾಗಿ ಕೆಲಸಕ್ಕೆ ಸೇರುವ ಗೌರಿ ಅನುಭವಿಸುವ ನೋವು, ಅದನ್ನು ಮೆಟ್ಟಿನಿಂತು ಇಡೀ ಕುಟುಂಬವನ್ನು ದಡ ಸೇರಿಸುವ ಕಥೆ ಇಲ್ಲಿದ್ದರೂ ಇದು ಹೂವಿನ ಹಾದಿಯಲ್ಲ. ಪೌರಕಾರ್ಮಿಕರ ಬದುಕನ್ನು ಉಳಿದವರು ನೋಡುವ ಬಗೆ ಹಾಗೂ ಅವರ ದೃಷ್ಟಿ ಎರಡರ ಚಿತ್ರಣವೂ ಇಲ್ಲಿ ಕಾಣುತ್ತದೆ. ಗಂಗಾಳಂತಹವರ ಕುರಿತಾಗಿ ಗೌರವ ಹೆಚ್ಚಾಗುತ್ತದೆ.


ದೇವಿಕಾ: ಕೆಲಸವಿಲ್ಲದೆ ತಿರುಗಾಡಿಕೊಂಡಿದ್ದ ಮಗ ಕೃಷ್ಣನಿಗೆ ದಾಮು ಬುದ್ಧಿ ಹೇಳುತ್ತಿದ್ದ. ಆದರೆ ಕೃಷ್ಣನ ಆಲೋಚನೆಯೇ ಬೇರೆ ಇತ್ತು. ಸಮುದ್ರದ ಹಿತ್ತಲಿನ ಮರಳಿನಲ್ಲಿ ನಿಂತ 'ದೇವಿಕಾ ರಾಣಿ' ಕೃಷ್ಣನ ಕೈಯಲ್ಲಿ ಸಿಲುಕಿ ಏನಾದಳು? ಸತ್ಯ ತಿಳಿದ ದಾಮುವಿನ ಪರಿಸ್ಥಿತಿ ಕಣ್ಣಿಗೆ ಕಟ್ಟಿದಂತಿದೆ.


ದೊಡ್ಮನೆ: ಎಷ್ಟೋ ಬಾರಿ ನಮಗಿಂತ ಸುಖವಾಗಿರುವವರನ್ನು ಕಂಡಾಗ ಅವರಂತೆಯೇ ಆಗುವ ಆಸೆಯಾಗುತ್ತದೆ. ಒಳ್ಳೆಯ ವಿಚಾರಕ್ಕೆ ಇದು ತಪ್ಪಲ್ಲವಾದರೂ.. ಮನಸ್ಥಿತಿ ಕೆಡಿಸಿಕೊಳ್ಳುವಷ್ಟು ಪರಿಸ್ಥಿತಿ ಹದಗೆಡಬಾರದು. ಗಾಯಿತ್ರಿ ಮತ್ತೆ ಮನೆಯನ್ನು ವಿಸ್ತಾರಗೊಳಿಸುವ ಪ್ರಸ್ತಾಪವಿಟ್ಟಾಗ ಬಂದ ಖಾರವಾದ ಪ್ರತಿಕ್ರಿಯೆ ಜೊತೆಗೆ ಮುಂದಿನ ಶೆಡ್ಡಿನಲ್ಲಿ ಬದುಕುತ್ತಿದ್ದ ಸುಮಿತ್ರಾಳ ಬದುಕು ಎರಡನ್ನೂ ಕಂಡ ಗಾಯತ್ರಿಯ ಪ್ರತಿಕ್ರಿಯೆ ಏನಿತ್ತು..?


ಈ ಕಥಾ ಸಂಕಲನದಲ್ಲಿ ಸಂಭಾಷಣೆಗಳು ಪ್ರಮುಖವಾಗಿ ಸೆಳೆಯುತ್ತವೆ. ಆಯಾ ಪರಿಸರ, ವಯಸ್ಸು ಹಾಗೂ ಪರಿಸ್ಥಿತಿಗೆ ತಕ್ಕಂತಹ ಸಂಭಾಷಣೆಗಳಿವೆ. ಕಥಾವಸ್ತುಗಳು ವೈವಿಧ್ಯಮಯವಾಗಿವೆ ಜೊತೆಗೆ ಕಥಾ ಪರಿಸರ ಕಣ್ಣಿಗೆ ಕಟ್ಟುವಂತೆ ನಿರೂಪಣೆಯಿದೆ. 


"ಬದುಕಿನ ಕೊನೆಯಲ್ಲಿ ಸಾವು ನಿಶ್ಚಿತವಾದರೂ ಜೀವನ ದುಃಖಾಂತ್ಯವಾಗಬೇಕೆಂದಿಲ್ಲ ತಾನೇ? ಎಷ್ಟೇ ಕತ್ತಲಿದ್ದರೂ ಸುಖದ ಕೋಲ್ಮಿಂಚು ಬರಲು ಎಷ್ಟು ಹೊತ್ತು ಬೇಕು? ಜೀವನದ ಎಳೆಗಳೇ ಕಥೆಯ ಬೆನ್ನೆಲುಬಾದರೆ ಕಥೆಯ ಕೊನೆಯಲ್ಲಿ ಆಶಾಕಿರಣವೇಕಿರಬಾರದು ?" ಎಂಬ ಸಾಲುಗಳು 'ಬಾಬಕ್ಕ' ಕಥೆಯಲ್ಲಿವೆ. 


ಈಕೆ ಕಥೆಯ ಅಂತ್ಯಗಳೆಲ್ಲವೂ ಆಶಾಕಿರಣದಿಂದ ಕೂಡಿರುವುದು ಇಷ್ಟವಾಯಿತು. ಒಳ್ಳೆಯ ಕಥಾ ಸಂಕಲನದ ಚಂದದ ಓದು. 


~ವಿಭಾ ವಿಶ್ವನಾಥ್

ನಂದಾದೀಪ ನಗುತ್ತಿತ್ತು (ಪುಸ್ತಕ ಯಾನ - 472)


ಪುಸ್ತಕದ ಶೀರ್ಷಿಕೆ : ನಂದಾದೀಪ ನಗುತ್ತಿತ್ತು

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಇಂದಿರಾ ಪ್ರಕಾಶನ

ಪ್ರಥಮ ಮುದ್ರಣ : 2004

ದ್ವಿತೀಯ ಮುದ್ರಣ : 2024 (ನನ್ನ ಓದಿಗೆ ಸಿಕ್ಕಿದ್ದು)


ಎಂದಿಗೂ ನಮ್ಮ ಬದುಕಿನ ರೀತಿ ನಮ್ಮದು. ಅದರಲ್ಲಿ ಸುಖ-ದುಃಖ, ನೋವು-ನಲಿವು ಏನೇ ಇದ್ದರೂ ಅದನ್ನು ನಾವೇ ಅನುಭವಿಸಬೇಕು. ಅದರ ಬದಲಾಗಿ ಬೇರೆಯವರ ಮೇಲೆ ಪೈಪೋಟಿಗಿಳಿದರೆ ನಮ್ಮ ಬದುಕಿನ ಸುಖ ಯಾವುದಕ್ಕೂ ಸಾಲದು ಎಂಬಂತೆ ಹಪಾಹಪಿಯಿಂದ ಅವರಂತಾಗಬೇಕು ಎನ್ನುವ ಓಟದಲ್ಲಿ ಇರುವುದನ್ನು ಕಳೆದುಕೊಳ್ಳುತ್ತಾ.. ನೆಮ್ಮದಿಯಿಲ್ಲದ ಬದುಕಿನತ್ತ ಸಾಗುತ್ತೇವೆ. ಇಲ್ಲಿ ಎರಡು ಸುಂದರ ಸಂಸಾರಗಳು ಹೀಗೆ ಪೈಪೋಟಿಗಿಳಿದು ತಮ್ಮ ರಕ್ತಸಂಬಂಧವನ್ನು ಮರೆತು ಒಬ್ಬರ ನಾಶಕ್ಕೆ ಒಬ್ಬರು ಪಣತೊಟ್ಟು ನಿಂತಂತೆ ಪೈಪೋಟಿಗಿಳಿದಾಗ ಮಕ್ಕಳ ಬದುಕು ಏನಾಗುತ್ತದೆ ಎಂಬ ಚಿತ್ರಣವಿದೆ. 


ಗೋಪಿನಾಥ ಹಾಗೂ ಶ್ರೀಪತಿ ಅಣ್ಣ-ತಮ್ಮಂದಿರು. ಗೋಪಿನಾಥ ಹಾಗೂ ಸರಸ್ವತಿಯ ಮಗಳು ಪುಣ್ಯಶ್ರೀ. ಶ್ರೀಪತಿ ಹಾಗೂ ಪಾರ್ವತಿಯ ಮಗಳು ಚಿನ್ಮಯಿ. ಇಬ್ಬರು ಮಕ್ಕಳು ಒಂದೇ ಓರಿಗೆಯವರು. 


ಶ್ರೀಪತಿ ಲೆಕ್ಚರರ್. ಪಾಠ ಹೇಳುವ ರೀತಿ ಚೆನ್ನಾಗಿತ್ತು. ಮಗಳು ಚಿನ್ಮಯಿ ಸಹ ಎರಡು ವರ್ಷದಿಂದ ಟ್ಯೂಷನ್ ಹೇಳಿ ಸಂಪಾದಿಸುತ್ತಿದ್ದಳು. ರೂಪವತಿ ಸಹ. ತಂದೆ-ತಾಯಿಗೆ ಹೆಮ್ಮೆಯ ಮಗಳು. 17 ವರ್ಷಗಳ ಹಿಂದೆ ಭೋಗ್ಯಕ್ಕೆ ಹಾಕಿಸಿಕೊಂಡ ಮನೆಯಲ್ಲಿಯೇ ಅವರ ಬದುಕು ನೆಮ್ಮದಿಯಾಗಿಯೇ ಸಾಗುತ್ತಿತ್ತು. ಒಂದು ಪತ್ರ ಬರುವವರೆಗೂ...


ಸರಸ್ವತಿಯ ಮನೆಯಲ್ಲಿ ಶ್ರೀಮಂತಿಕೆಯಿತ್ತು. ತಂದೆ-ತಾಯಿಯಿಂದ ಬಂದ ಆಸ್ತಿಯಿಂದಾಗಿ ಅದರೊಡನೆ ಅಹಂಕಾರವೂ ಬೆರೆತಿತ್ತು. ಮಗಳು ಪುಣ್ಯಶ್ರೀ ಸಹ ಅಂತಹದ್ದೇ ನಡವಳಿಕೆಯನ್ನು ರೂಪಿಸಿಕೊಂಡಿದ್ದಳು. ಅಷ್ಟೇನೂ ರೂಪವತಿಯೂ ಅಲ್ಲದ, ನವನವೀನ ರೀತಿಯ ಹುಡುಗಿ ಅಲಂಕಾರಕ್ಕೆ ಅಪ್ಪಿಕೊಂಡಿದ್ದವಳು.


ಶ್ರೀಪತಿ ಗೋಪಿನಾಥರ ಮೂರು ಅಕ್ಕಂದಿರಲ್ಲಿ ಮೂರನೇ ಅಕ್ಕನಿಗೆ ಮೂವರು ಗಂಡು ಮಕ್ಕಳು. ಅದರಲ್ಲಿ ಮೊದಲನೆಯ ಅವನು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಶ್ರೀಕಾಂತ್. ಪಾರ್ವತಿಗೆ ಆತನಿಗೆ ತನ್ನ ಮಗಳನ್ನು ಕೊಡುವ ಆಸೆ. ಆದರೆ, ಕಾವೇರಮ್ಮನಿಗೆ ಪುಣ್ಯಶ್ರೀಯನ್ನು ತಂದುಕೊಳ್ಳುವ ಆಸೆ. ಹಾಗೆಂದು ಬಾಯಿಬಿಟ್ಟು ಹೇಳದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದರು. 


ಪುಣ್ಯಶ್ರೀ (ಪುನ್ನಿ) ಹಾಗೂ ಶ್ರೀಕಾಂತನ ಲಗ್ನ ಪತ್ರಿಕೆಗೆ ಬರಬೇಕೆಂದು.. ಜೊತೆಗೆ ಚಿನ್ನಿಯನ್ನು ಕಾವೇರಮ್ಮನ ಎರಡನೇ ಮಗನಿಗೆ ಗಂಟು ಹಾಕಲು ಮಾಡಿದ ಪ್ರಸ್ತಾಪವನ್ನು ನೋಡಿ ಪಾರ್ವತಿ ಕುದಿದು ಹೋದಳು. ತನ್ನ ನಾಲ್ಕನೇ ತಂಗಿ ಸಾವಿತ್ರಿ ಮನೆಗೆ ಹೋಗಿ ಬರುವಾಗ ಡಾಕ್ಟರ್ ವರನ ಪ್ರಸ್ತಾಪ ತಂದಿದ್ದಳು. 


ದೊಡ್ಡಮ್ಮನ ಮೇಲಿನ ಹಠಕ್ಕೆ ಹಿಂದೆ-ಮುಂದೆ ವಿಚಾರಿಸದೆ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡವೆಂದು ಚಿನ್ನಿ ಹೇಳಿದರೂ.. ಡಾಕ್ಟರ್ ವರನ ರೂಪ, ಅಂತಸ್ತು ದಂಪತಿಗಳಿಬ್ಬರನ್ನೂ ಕನಸು ಕಾಣುವಂತೆ ಮಾಡಿತ್ತು. ಹತ್ತು ವರ್ಷಗಳ ಅಂತರವಿದ್ದರೂ ಆತನ ಜೊತೆ ಮಾತನಾಡಿದ ಚಿನ್ಮಯಿ ಡಾಕ್ಟರ್ ಭಾಸ್ಕರ್ ಜೊತೆಗೆ ಮಾತನಾಡಿದ ನಂತರ ಪರಸ್ಪರ ಒಪ್ಪಿ ವಿಜೃಂಭಣೆಯಿಂದ ಲಗ್ನಪತ್ರಿಕೆಯೂ ಆಯಿತು. 


ಕಾವೇರಮ್ಮ ಹಾಗೂ ಸರಸ್ವತಿ ಇಬ್ಬರೂ ಪಾರ್ವತಿಯನ್ನು ತಾವು ಸೋಲಿಸಿದ್ದೇವೆ ಎನ್ನುವ ಅಹಂಕಾರದಲ್ಲಿರುವಾಗ ಪಾರ್ವತಿ ಬಂದಿದ್ದಾಯ್ತು. ಆದರೆ, ಅಷ್ಟರಲ್ಲಾಗಲಿ ಶ್ರೀಕಾಂತ್ ಹಾಗೂ ಪುಣ್ಯಶ್ರೀಯರಲ್ಲಿ ಮನಸ್ತಾಪವಾಗಿತ್ತು. ಅವರಿರಲು ಬಾಡಿಗೆ ಮನೆಯ ಅಡ್ವಾನ್ಸ್, ಕಂಪನಿ ಹೊಡಲು ಕೊಟ್ಟ 20 ಲಕ್ಷ ಹಣ, ಅತ್ತೆಗೆ ಹಣ ಕೊಡುತ್ತಿದ್ದ ವಿಚಾರ ತಿಳಿದು ಪುಣ್ಯಶ್ರೀ ತಗ್ಗಿ-ಬಗ್ಗಿ ನಡೆಯಲು ಸಿದ್ಧವಿರಲಿಲ್ಲ. ಅದರ ಜೊತೆಗೆ ಪಾರ್ವತಿ ತನ್ನ ಮಗಳ, ಡಾಕ್ಟರ್ ಅಳಿಯನ ಲಗ್ನ ಪತ್ರಿಕೆಯ ವಿಡಿಯೋ ತೋರಿಸಿದ್ದು ಮತ್ತಷ್ಟು ಮನಸ್ಸು ಕೆರಳಿಸಿತು. ಅಲ್ಲಿ ಸಂತಸ ಪಟ್ಟವರು ಗೋಪಿನಾಥ್ ಒಬ್ಬರೇ.. ಪಾರ್ವತಿ ಹೇಳಿದ ಯಾವುದೋ ಮಾತಿಗೆ ಕೆರಳಿದ ಪುಣ್ಯಶ್ರೀ ಶ್ರೀಕಾಂತನ ಮೇಲೆ ಸಾಕಷ್ಟು ಕೋಪ ತೋರಿದಳು. ಅಲ್ಲಿಗೆ ಅವನ ಅವಳ ಲಗ್ನಪತ್ರಿಕೆ ಮುರಿದುಬಿದ್ದು.. ಅವನ ತಮ್ಮ ಟೀಚರ್ ಆಗಿದ್ದ, ಕಪ್ಪಗಿದ್ದ, ಕುಳ್ಳ ಶ್ರೀವತ್ಸನ ಜೊತೆಗೆ ಆಯಿತು. ಅದಕ್ಕೆ ಕಾರಣವೂ ಇತ್ತು. ಸರಸ್ವತಿಗೆ ತನ್ನ ಮಗಳ ಮೇಲಿದ್ದ ಅಪನಂಬಿಕೆ. ಹೀಗಾಗಿ ತರಾತುರಿಯಲ್ಲಿಯೇ ಲಗ್ನಪತ್ರಿಕೆ ನಿಶ್ಚಯವಾದರೂ.. ಮತ್ತೆ ಪುಣ್ಯಶ್ರೀ ಅವನಿಗೆ ಮನಸೋಲದೆ ಶ್ರೀಕಾಂತನಿಗೆ ಪತ್ರ ಬರೆದರೂ ಸಂಧಾನ ಫಲಿಸಲಿಲ್ಲ. 


ಈ ನಡುವೆ ಪುಣ್ಯಶ್ರೀ ತನ್ನ ದುರ್ಬುದ್ಧಿಯಿಂದ ಚಿನ್ನಿಯ ಮದುವೆ ಕೆಡಿಸಲು ಪ್ರಯತ್ನ ಮಾಡುತ್ತಾಳೆ. ಆ ಪ್ರಯತ್ನವೇನು..? ಅದು ಫಲ ಕೊಟ್ಟಿತೇ..? 


ಶ್ರೀಕಾಂತ್ ತಾನು ಮನಸಾರೆ ಪ್ರೀತಿಸಿರುವ ತನ್ನ ಗೆಳತಿ ಮನೋಹರಿಯನ್ನು ವಿವಾಹವಾಗಿರುವುದಾಗಿ ಪತ್ರ ಬರೆಯುತ್ತಾನೆ. 


ಚಿನ್ನಿ ಡಾಕ್ಟರ್ ಇವರನೊಂದಿಗೆ ಮದುವೆ ತಪ್ಪಿ ಹೋಯಿತೆಂದು, ಬೇರೆಯವನನ್ನು ವಿವಾಹವಾಗುತ್ತಿರುವ ವಿಚಾರ ಕೇಳಿ ಸಂತಸ ಪಟ್ಟ ಪುಣ್ಯಶ್ರೀ ಶ್ರೀವತ್ಸನನ್ನೇ ಮದುವೆಯಾಗುವುದಾಗಿ ಒಪ್ಪುತ್ತಾಳೆ. ಆದರೆ, ಅದು ಸಂತಸದಿಂದಲ್ಲ. 


ಪುಣ್ಯಶ್ರೀ ಹಾಗೂ ಶ್ರೀವತ್ಸರ ವಿವಾಹ ನಡೆದ ನಂತರ ಚಿನ್ನಿಯ ವಿವಾಹ ಮೊದಲು ನಿಶ್ಚಯವಾಗಿದ್ದ ಡಾಕ್ಟರ್ ವರನೊಂದಿಗೆ ನಡೆಯುವುದು ಪುನ್ನಿಗೆ ಆಘಾತ ತರುತ್ತದೆ. ಪುನ್ನಿ ಹಾಗೂ ಶ್ರೀವತ್ಸನ ವಿವಾಹ ಮುರಿದು ಬಿದ್ದದ್ದೇಕೆ..? 


ಇಲ್ಲಿಂದ ಕಾದಂಬರಿಯ ಮತ್ತೊಂದು ರೂಪ ಕಣ್ಣೆದುರಿಗೆ ಬರುತ್ತದೆ. 


ಮನುಷ್ಯನ ಗುಣ-ಸ್ವಭಾವಗಳು ಯಾವಾಗ ಬೇಕಾದರೂ ಬದಲಾಗಬಹುದು. ಹಾಗೆ ಬದಲಾದ ಪಾರ್ವತಿ ಹಾಗೂ ಪುಣ್ಯಶ್ರೀಯರನ್ನು ಕಾಣಬಹುದು. 


ಪುಣ್ಯಶ್ರೀ ಓದಿನಲ್ಲಿ ಆಸಕ್ತಿಯೇ ಇರದೆ ಸುಖದ ಜೀವನ ನಡೆಸುತ್ತಿದ್ದವಳು. ಬದುಕಿನಲ್ಲಿ ನಡೆದ ದುರಂತದಿಂದ ಮತ್ತೆ ಓದಿನತ್ತ ಗಮನಹರಿಸುತ್ತಾಳೆ. ಛಲದಿಂದ ಓದುತ್ತಾಳೆ. ಎಷ್ಟೆಂದರೆ, ಅವಳು ಡಾಕ್ಟರ್ ಆಗಿ ಹೆಸರುವಾಸಿಯಾಗುತ್ತಾಳೆ. ಚಿನ್ನಿ ಡಾಕ್ಟರ್ ವರನನ್ನು ವಿವಾಹವಾದರೆ, ಪುನ್ನಿ ಸ್ವತಃ ಡಾಕ್ಟರ್ ಆಗುತ್ತಾಳೆ. 


ಪ್ರತಿಯೊಂದು ವಿಚಾರದಲ್ಲಿಯೂ ತಮ್ಮ, ತಮ್ಮನ ಹೆಂಡತಿಯನ್ನು ಬಿಟ್ಟು ಕೊಡದಿದ್ದ ಗೋಪಿನಾಥ್ ಸಹ ಪಾರ್ವತಿಯ ಮೇಲೆ ಸಿಡಿಮಿಡಿಯಾಗುವುದೇಕೆ..? 


ಶ್ರೀಕಾಂತ ಹಾಗೂ ಆತನ ಆತನ ತಾಯಿ ಹೆಣೆದ ಜಾಲಕ್ಕೆ ಬಲಿಯಾಗದೆ ಪುಣ್ಯಶ್ರೀ ತಪ್ಪಿಸಿಕೊಂಡ ಬಗೆ ಹೇಗೆ..? ಶ್ರೀಕಾಂತನ ವಿವಾಹದ ಬದುಕು ಹೇಗಿತ್ತು..?


ಡಾಕ್ಟರ್ ಆದ ಪುಣ್ಯಶ್ರೀಯ ವಿವಾಹದ ಕುರಿತು, ಅದರಲ್ಲಿಯೂ ಎರಡನೆಯ ವಿವಾಹದ ಕುರಿತು ಪ್ರಸ್ತಾಪಿಸಿದವರು ಯಾರೆಲ್ಲ..? ಅವಳಿಗೆ ಯಾರೆಲ್ಲ ವರನನ್ನು ತೋರುತ್ತಾರೆ ಹಾಗೂ ಅವರು ಹೇಗಿದ್ದರು..?


ಕೆಲವೊಮ್ಮೆ ಹರೆಯದ ಎಡವಟ್ಟುಗಳಿಂದ ಅಥವಾ ಬುದ್ಧಿ ಸಾಲದ ವಯಸ್ಸಿನಿಂದ ಇಲ್ಲವೇ ಮನೆಯಲ್ಲಿ ತಿದ್ದಿ ಬುದ್ದಿ ಹೇಳದ ತಂದೆ-ತಾಯಿಯಿಂದ, ಅಹಂಕಾರದಿಂದ ಹೀಗೆ ಯಾವುದೋ ಒಂದು ಪ್ರಭಾವದಿಂದ ಹೇಗೋ ಇದ್ದರೂ.. ತನ್ನನ್ನು ತಿದ್ದಿಕೊಂಡು ಬದುಕಿದ ಪುಣ್ಯಶ್ರೀ ಮಾದರಿಯಾಗುತ್ತಾಳೆ. 


ಕಾದಂಬರಿಯ ಮೊದಲಲ್ಲಿ ಇಷ್ಟವಾಗಿದ್ದ ಚಿನ್ನಿ ಕಾದಂಬರಿಯ ಕೊನೆಯಲ್ಲಿ ಹೇಗನಿಸುತ್ತಾಳೆ..?


ಒಳ್ಳೆಯ ಕೆಲಸ ಮಾಡುತ್ತಿದ್ದರೆ ಅದರ ಪ್ರಭಾವವು ಒಳ್ಳೆಯದೇ ಆಗಿರುತ್ತದೆ ಎನ್ನುವಂತೆ ಪುಣ್ಯಶ್ರೀ ಬದುಕಲ್ಲಿ ಯಾವ ವ್ಯಕ್ತಿಯಿಂದ ಒಳ್ಳೆಯ ಹಾದಿ ತೆರೆಯುತ್ತದೆ..?


ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ನಂದಾದೀಪ ನಗುತ್ತಿತ್ತು' ಕಾದಂಬರಿಯನ್ನು. 


ಒಬ್ಬರಿಗೆ ಬದುಕಿನ ಒಂದೊಂದು ಹಂತದಲ್ಲಿ ಜ್ಞಾನೋದಯವಾಗುತ್ತದೆ. ಒಬ್ಬರ ಅನುಭವ ಮತ್ತೊಬ್ಬರದಲ್ಲ. ಅಂತೆಯೇ ಒಬ್ಬರ ನಾಶ ಮತ್ತೊಬ್ಬರ ಸಂತೋಷವಾಗಲಾರದು. "ಒಳಿತಿಗೆ ಜಯ"ವಿದೆ ಎನ್ನುವ ರಾಧಾದೇವಿಯವರ ಈ ಕಾದಂಬರಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.


~ವಿಭಾ ವಿಶ್ವನಾಥ್

ಶ್ರೀನಿಧಿಪುರದ ವಿಸ್ಮಿತ (ಪುಸ್ತಕ ಯಾನ - 471)


ಪುಸ್ತಕದ ಶೀರ್ಷಿಕೆ : ಶ್ರೀನಿಧಿಪುರದ ವಿಸ್ಮಿತ

ಲೇಖಕರು : ಸಾಯಿಸುತೆ

ಪ್ರಕಾಶಕರು : ಸುಧಾ ಎಂಟರ್ ಪ್ರೈಸಸ್

ಪ್ರಥಮ ಮುದ್ರಣ : 2025

ಪುಟಗಳು : 176

ಬೆಲೆ : 220 ರೂ.


ಅಮ್ಮ ವಸುಧಾಳ ತವರನ್ನು ಹುಡುಕಿಕೊಂಡು ಶ್ರೀನಿಧಿಪುರಕ್ಕೆ ಬರುವ ವಿಸ್ಮಿತ ಈ ಕಥೆಯ ನಾಯಕಿ. 


ಶ್ರೀನಿಧಿಪುರ ಎನ್ನುವ ಚಂದದ ಊರು ಪುರಾತನತೆಯಿಂದ ಹಾಗೂ ಭೌಗೋಳಿಕವಾಗಿ ತನ್ನದೇ ಅಸ್ತಿತ್ವ ಪಡೆದಿತ್ತು. ಅಂತಹ ಊರಿಗೆ ವಿದೇಶದಲ್ಲಿ ಹುಟ್ಟಿ ಬೆಳೆದ ವಿಸ್ಮಿತ ಮೊದಲ ಬಾರಿಗೆ ಕಾಲಿಡುತ್ತಿದ್ದಳು. ಆಕೆ ಬಂದದ್ದು ಪದ್ಮನಾಭಯ್ಯನವರ ಸಲುವಾಗಿ. ಆದರೆ, ಉಳಿದುಕೊಂಡದ್ದು ಪಯಸ್ವಿನಿ ಹೋಟೆಲ್ ನಲ್ಲಿ. 


ಮೊದಲಿಗೆ ಬಂದದ್ದು ಶ್ರೀನಿಧಿಪುರದ ಶ್ರೀನಿಧಿಯ ದೇವಾಲಯಕ್ಕೆ. ಭವ್ಯವಾದ ಶ್ರೀನಿಧಿಯ ಪರಿಚಯ ಆತನ ದಿವ್ಯ ಸಾನಿಧ್ಯದಲ್ಲಿ ಹಾಗೂ ಅಚ್ಚಯ್ಯ ಜೋಯಿಸರಿಂದ ತಿಳಿಯುತ್ತದೆ. ಆದರೆ, ತಾನು ಶ್ರೀನಿಧಿಪುರಕ್ಕೆ ಬಂದದ್ದೇಕೆ ಎನ್ನುವ ವಿಚಾರವನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ಗೂಗಲ್ ನಲ್ಲಿ ಸರ್ಚ್ ಮಾಡಿ ಹಾಗೂ ಕೆಲವರ ಬಾಯಿಯಿಂದ ತಿಳಿದ ವಿಚಾರಕ್ಕೆ ಇನ್ನಷ್ಟು ವಿಚಾರವನ್ನು ಇಲ್ಲಿ ಸಂಗ್ರಹಿಸಿ ಪುಸ್ತಕ ಬರೆಯಬೇಕೆನಿಸಿದೆ ಎಂದು ತನ್ನ ಬರುವಿಕೆಯ ಕಾರಣ ಕೊಟ್ಟಿದ್ದಳು. 


ಮೊದಲಿಗೆ ಸಿಕ್ಕಿದ್ದು ಅಚ್ಚಯ್ಯ ಜೋಯಿಸರು ಹಾಗೂ ಪದ್ದಮ್ಮನವರ ಆತ್ಮೀಯವಾದ ಆಥಿತ್ಯ. ಮುಂದೆ ಸಾಂಬಶಿವಯ್ಯ ಹಾಗೂ ಅವರ ಪತ್ನಿ ಪಾರ್ವತಮ್ಮ ಆಪ್ತರಾಗುತ್ತಾರೆ.


ಒಳ್ಳೆಯ ಎಜುಕೇಶನ್, ವಿವಾಹಕ್ಕೆ ಸಂಬಂಧ ಬೆಳೆಸಲು ಬಹಳ ಸ್ಟೇಟಸ್ ಇರುವ ಫ್ಯಾಮಿಲಿಗಳು ಬರುವ ಸಂದರ್ಭದಲ್ಲಿಯೇ ವಿಸ್ಮಿತ ಅಲ್ಲಿಂದ ಕಾಲು ಕಿತ್ತದ್ದು ಅಲ್ಲಿ ಎಲ್ಲರ ಕಣ್ಣು ಕೆಂಪಾಗಿಸಿತ್ತು. ವಸುಧಾ ತನ್ನ ತಾತ ಅತ್ಯಂತ ನಿಷ್ಟುರ ನುಡಿಗಳಿಂದ ಶ್ರೀನಿಧಿಪುರಕ್ಕೆ ಕಾಲಿಡಬಾರದೆಂದು ಶಪಿಸಿದ್ದನ್ನು ಹೇಳಿದ್ದರು. ವಿಸ್ಮಿತ ಹಿಂತೆಗೆದಿರಲಿಲ್ಲ. ವಸುಧ ಹಾಗೂ ವಿಲಿಯಂ ಇಬ್ಬರೂ ಪ್ರೇಮಿಸಿ ವಿವಾಹವಾಗಿದ್ದರೂ.. ವಿವಾಹಕ್ಕೆ ವಸುಧಳ ಸಂಪ್ರದಾಯಸ್ಥ ಮನೆತನದವರು ಒಪ್ಪಿರಲಿಲ್ಲ. ಇಂದಿಗೂ ವಸುಧಳ ತವರಿನ ಕೊಂಡಿ ಬೆಸೆದಿರಲಿಲ್ಲ. ಇಬ್ಬರು ಮಕ್ಕಳಲ್ಲಿ ಮಗ ವಿನ್ಸೆಂಟ್, ವಿಲಿಯಂ ತಾಯಿಯ ಸುಪರ್ದಿಯಲ್ಲಿ ಬೆಳೆದಿದ್ದು. ವಿಸ್ಮಿತ ಬಹಳ ವಿಭಿನ್ನವಾಗಿ ವಸುಧಾಳ ತೆಕ್ಕೆಯಲ್ಲಿ ಬೆಳೆದಳು. ಅದಕ್ಕೆ ಕಾರಣವೇನು..?


ಪಯಸ್ವಿನಿ ವಿಶ್ವನಾಥರ ಕನಸು. ಶ್ರೀಮಂತ ಮನೆತವನದವರಿಗೆ, ಪ್ರಭಾವಿಗಳಿಗೆ ಅದು ವಾಸ್ತವ್ಯದ ತಾಣ. ವಿದೇಶಿ ಸಂಜಾತೆಯಾಗಿದ್ದರೂ ವಿಸ್ಮಿತ ಅವರನ್ನು ವಿಭಿನ್ನವಾಗಿ ಸೆಳೆದಿದ್ದಳು. ಆಕೆಯ ಹಿನ್ನೆಲೆಯನ್ನು ವಿಚಾರಿಸಿದ್ದರಲ್ಲದೆ ಆಕೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು. 


ವಿಶ್ವನಾಥ್ ಅವರ ಏಕೈಕ ಮಗ ಪ್ರತಾಪ್ ಸ ಓದಿನಲ್ಲಿ ಬುದ್ಧಿವಂತ. ಪೂರ್ಣ ಸ್ವಾತಂತ್ರ್ಯ ನೀಡಿ ಬೆಳೆಸಿದ್ದರು. ಪಯಸ್ವಿನಿಯವರ ಆಕಸ್ಮಿಕ ಮರಣದ ನಂತರ ವಿಶ್ವನಾಥರ ಜಗತ್ತೇ ಅವನಾಗಿದ್ದ. ಹಾಗಾಗಿ ಮಗ ಕೇಳಿದ್ದಕ್ಕೆ ಬೇಡವೆನ್ನುತ್ತಿರಲಿಲ್ಲ. ಗೆಳೆಯರ ದಂಡು ಯಾವಾಗಲೂ ಅವನ ಜೊತೆಗಿರುತ್ತಿತ್ತು. ಮೊದಮೊದಲು ಇದು ದೊಡ್ಡ ಸಮಸ್ಯೆಯಾಗಿ ಕಂಡಿರಲಿಲ್ಲ. ಆದರೆ, ಈಗ ಜವಾಬ್ದಾರಿ ಹೊರಲು ಸಿದ್ಧವಿರದ ಪ್ರತಾಪ್ ಅವರ ಪಾಲಿಗೆ ಪ್ರಶ್ನೆಯಾಗಿದ್ದ. ಜೀವದ ಗೆಳೆಯರಾಗಿದ್ದ ರಾಜಗೋಪಾಲ್ ಅವರ ಸಲಹೆ ಹೆಚ್ಚು ಮನಸ್ಸಿಗೆ ಬಂದಿತ್ತು. ಅದು ಅವನಿಗೆ ವಿವಾಹ ಮಾಡುವುದು. 


ಇವರ ಇಂಡಸ್ಟ್ರಿಗಳ ಹಲವು ಆಯಾಮಗಳನ್ನು ಅರ್ಥ ಮಾಡಿಕೊಂಡಿದ್ದ ಹಾಗೂ ಎಲ್ಲ ರೀತಿಯಲ್ಲೂ ಅಪ್ಡೇಟೆಡ್ ಆಗಿದ್ದ ಕಾಮಿನಿ ಪ್ರತಾಪ್ ನನ್ನು ವಿವಾಹವಾಗಲು ಮುಂದಾದಾಗ ವಿಶ್ವನಾಥರಿಗೆ ಆತಂಕವಾಗಿತ್ತು. ಅದೇಕೆ..? ಆ ಆತಂಕ ಕರಗಿದ್ದು ಪ್ರತಾಪ್ ನಿಂದಲೇ. ಅದು ಹೇಗೆ..? 


ಪ್ರತಾಪ್ ಅವರಂದುಕೊಂಡಷ್ಟು ಮುಗ್ಧನಾಗಿರಲಿಲ್ಲ. ಆದರೆ, ಇನ್ನಷ್ಟು ಅನುಭವ ಬೇಕಿತ್ತು. ಅದಕ್ಕಾಗಿ ರಾಜಗೋಪಾಲ್ ಅವರ ಬಳಿ ಬೇರೆ ಸಲಹೆ ಇತ್ತು. ಆದರೆ, ಇಬ್ಬರೂ ಅದನ್ನು ಒಪ್ಪುತ್ತಾರೋ ಇಲ್ಲವೋ ಎಂಬ ಅನುಮಾನವೂ ಇತ್ತು


ಪಾರ್ವತಮ್ಮನವರಿಗೆ ವಿಸ್ಮಿತಳ ಬಳಿ ಮಾತನಾಡಲು ಕೇಳಲು ಸಾಕಷ್ಟು ವಿಚಾರಗಳಿದ್ದವು. ಅಮೆರಿಕದಲ್ಲಿರುವ ತನ್ನ ಮಗ ವೇಣುವಿಗೆ ಹೆಣ್ಣು ಹುಡುಕುವ, ಅವನ ವಿವಾಹ ಮಾಡುವ ಕನಸಿಗೆ ಈಗ ರೆಕ್ಕೆ ಬಂದಿತ್ತು. ಅದಕ್ಕಾಗಿ ವಿಸ್ಮಿತಳನ್ನು ಅವಲಂಬಿಸಿದರು. ಸತ್ಯ ಗೊತ್ತಿದ್ದ ಸಾಂಬಶಿವಯ್ಯನವರು ಇದಕ್ಕೆ ಹೆಚ್ಚು ಆಸಕ್ತಿ ತೋರಲಿಲ್ಲ. ಒಂದು ಸಮಯದಲ್ಲಿ ವಿಸ್ಮಿತಳಿಗೂ ನಿಜ ಗೊತ್ತಾಗಿತ್ತಾದರೂ ಪಾರ್ವತಮ್ಮನವರಿಗೆ ಹೇಳುವಂತಿರಲಿಲ್ಲ. ಅವರೆಂದರೆ ಅಪರಿಮಿತ ಪ್ರೀತಿ ಹಾಗೂ ಗೌರವ. ಇಲ್ಲಿ ಸಾಂಬಶಿವಯ್ಯನವರ ಉನ್ನತ ವ್ಯಕ್ತಿತ್ವ ಸೆಳೆಯುತ್ತದೆ.


ಸಾಂಬಶಿವಯ್ಯನವರ ಸಲಹೆಯಂತೆ ಸಂಭಾವಿತ ಡ್ರೈವರ್ ನ ಅಗತ್ಯ ಅವಳಿಗೂ ಕಂಡಿತ್ತು. ಅವರ ಗಾಬರಿ, ಕಾಳಜಿ ಅರ್ಥವಾಗಿತ್ತು 


ಶ್ರೀನಿಧಿಪುರಕ್ಕೆ ಬಂದಿದ್ದ ವಿಸ್ಮಿತಾಳಿಗೆ ವಸುಧಳ ಹಳೆಯ ಮನೆಯ ಸಂಪೂರ್ಣ ಪರಿಚಯವಾಗಿತ್ತು. ಅದು ಯಾವಾಗ..? ಅದೂ ಮನೆಯೊಡೆಯರ ಅನುಪಸ್ಥಿತಿಯಲ್ಲಿ ಅದು ಹೇಗೆ..?


ರಾಜಗೋಪಾಲ್ ಅವರು ಸಾಮಾನ್ಯ ಮನುಷ್ಯರಂತೆ ಕಂಡರೂ.. ಅಂತಹವರು ಲಕ್ಷಕೊಬ್ಬರು. ಅಂತಹ ಶ್ರೀಮಂತ ಗೆಳೆತನವನ್ನು ಎಂದಿಗೂ ದುರುಪಯೋಗ ಪಡಿಸಿಕೊಂಡವರಲ್ಲ. ಸಹಾಯಹಸ್ತವನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸುತ್ತಿದ್ದರು. ಅಪ್ಪಟ ಸ್ನೇಹವಷ್ಟೇ ಇಬ್ಬರಲ್ಲಿಯೂ.. ಅಂತಹ ರಾಜಗೋಪಾಲ್ ಪ್ರತಾಪ್ ನಿಗೆ ನಿಶ್ಚಯಿಸಿದ ಕೆಲಸ ಶ್ರೀನಿಧಿಪುರದ ಅಧ್ಯಯನಕ್ಕೆ ಬಂದಿರುವ ವಿಸ್ಮಿತಳಿಗೆ ಬೇಕಾಗಿದ್ದ ಡ್ರೈವರ್ ಕಮ್ ಸೆಕ್ಯೂರಿಟಿಯನ್ನು. 


ಪಯಸ್ವಿನಿ ಎಂಬ ಪಂಚತಾರಾ ಹೋಟೆಲ್ ಓನರ್ ಮಗ, ಹಲವು ಉದ್ಯಮಗಳ ಪಾರ್ಟ್ನರ್ ನ ಮಗ ಅದರ ಭಾವಿ  ಮಾಲೀಕ ಡ್ರೈವರ್ ಆಗಲು ಒಪ್ಪಿದ್ದು ಹೇಗೆ..? 


ಆತ ಪಯಸ್ವಿನಿಯ ಭಾವಿ ಯಜಮಾನ ಎಂಬುದನ್ನು ತಿಳಿಯದಂತೆ ನೋಡಿಕೊಳ್ಳುವುದು ಹೋಟೆಲ್ ಮ್ಯಾನೇಜ್ಮೆಂಟ್ ನ ಅನಿವಾರ್ಯವೂ ಆಗಿತ್ತು. ವಿಸ್ಮಿತಾಳ ಡ್ರೈವರ್ ಆಗಿದ್ದ ವಿಶ್ವನಾಥನ ನಂಬಿಕಸ್ತ ಡ್ರೈವರ್ ರಾಜೇಂದ್ರನ್ ಬದಲಾಗಿ ಪ್ರತಾಪ್ ಬಂದಿದ್ದ. 


ವಸುಧಾರ ತಂದೆ ಪದ್ಮನಾಭನಯ್ಯನವರ ತಂದೆ ಅನಂತರಾಮಯ್ಯನವರು. ಅವರು ಅವರ ಕೊನೆಯ ದಿನಗಳಲ್ಲಿ ವಸುಧಾಳನ್ನು ಕ್ಷಮಿಸಿದ್ದರೇ.? ಈಗ ವಸುಧಾಳ ತಂದೆ-ತಾಯಿ ಅವಳ ಕುರಿತಾಗಿ ಯಾವ ಮನಸ್ಥಿತಿಯಲ್ಲಿದ್ದರು..?


ವಸುಧಾಳ ತಂದೆಯ ತಾಯಿ ಫಿಲೋಮಿನಾ ಮಾತು ಆ ಫ್ಯಾಮಿಲಿಗೆ ಶಾಸನದಂತೆ. ಅದನ್ನು ದಾಟಿದವರು ಯಾರೂ ಇರಲಿಲ್ಲ. ಈಗ ಅದನ್ನು ವಿಸ್ಮಿತ ದಾಟಿದ್ದರ ಪರಿಣಾಮವಾಗಿ ಮೊದಲಿಗೆ ಅವಳನ್ನು ಕರೆಸಿಕೊಳ್ಳುವ ಪ್ರಯತ್ನಗಳು ನಿರಂತರವಾಗಿ ನಡೆದರೂ ಬಗ್ಗದಿದ್ದಾಗ ಏನಾಯ್ತು ..? ಕೊನೆಯ ಪ್ರಯತ್ನವೆಂಬಂತೆ ಮೈಕಲ್ ಅವಳ ಮೇಲೆ ಅಧಿಕಾರ ಸ್ಥಾಪಿಸಲು ಹೊರಟಾಗ, ಮೈಕಲ್ ಸಂಬಂಧವನ್ನು ವಿಸ್ಮಿತ ಒಪ್ಪುತ್ತಾಳೆಯೇ ..? ತನ್ನ ತಂದೆಯ ಕಡೆಯಿಂದ ಬರುತ್ತಿದ್ದ ಎಲ್ಲಾ ಹಣದ ಮೂಲವೂ ನಿಂತಾಗ ವಿಸ್ಮಿತ ವಾಪಸ್ ಹೋಗುತ್ತಾಳೆಯೇ ..?


ವಿಸ್ಮಿತಾಳ ಕಥೆಯಲ್ಲಿ ಪೆರುಮಾಳ್ ಗೆ ಜಾಗ ಸಿಕ್ಕಿತೇ..?


ವಿಸ್ಮಿತಾಳ ಡ್ರೈವರ್ ಆಗಿ ನೇಮಕವಾಗಿದ್ದ ಪ್ರತಾಪ್ ತನ್ನ ಪ್ರತಿ ನಡವಳಿಕೆಯನ್ನು ಎಚ್ಚರದಿಂದ ನಿಭಾಯಿಸಬೇಕಿತ್ತು . ವಿಸ್ಮಿತ ಎಂದಿಗೂ ಆತನಿಗೆ ಅಗೌರವದಿಂದ ನಡೆಸಿಕೊಳ್ಳಲಿಲ್ಲ. ಅವಳ ಸ್ವಭಾವ ಯಾರನ್ನೂ ಅಗೌರವದಿಂದ ನಡೆಸಿಕೊಳ್ಳುವಂತೆಯೇ ಇರಲಿಲ್ಲ. ದಿನೇದಿನೇ ಅವಳ ಕೆಲಸದ ಹಾಗೂ ಅವಳ ನಡೆಯ ಕುರಿತಾಗಿ ತಿಳಿದುಕೊಳ್ಳುತ್ತಾ.. ಗಮನಿಸುತ್ತಾ ಇದ್ದ ಪ್ರತಾಪನ ವರ್ತನೆಯಲ್ಲಿ ಅವನಿಗೇ ಅರಿವಾಗದಂತೆ ಬದಲಾದ ಎಷ್ಟೋ ವಿಷಯಗಳನ್ನು ಕಾಣಬಹುದು.


ಪಯಸ್ವಿನಿಯ ಭವಿಷ್ಯ ಭದ್ರವಾದ ದಿನಗಳು ಓದಿಗೆ ಆಪ್ತತೆಯನ್ನು ನೀಡುತ್ತವೆ.


ಸಂಬಂಧಗಳ ಸ್ಪರ್ಶದಿಂದ ಬೇರೆಯದ್ದೇ ಜಗತ್ತು ಕಂಡವರು ಯಾರು ಯಾರು..?


ವಿಸ್ಮಿತ ಬರೆದ ಶ್ರೀನಿಧಿಪುರದ ವಿಸ್ಮಿತ ಕಾದಂಬರಿಯಲ್ಲಿ ಯಾರು ಯಾರ ಪಾತ್ರ ಹೇಗಿತ್ತು..? ಅದಕ್ಕೆ ಮುನ್ನುಡಿ ಬರೆದವರು ಯಾರು..? ವಿಸ್ಮಿತಾಳ ಪ್ರಯತ್ನ ಎಷ್ಟು ಫಲ ಕೊಟ್ಟಿತು..?


ಮಾನವೀಯತೆಯ ಸ್ಪರ್ಶದ ಜೊತೆಗೆ ನೈತಿಕ ಸಂಸ್ಕಾರಗಳ ಬದುಕನ್ನು ಇಲ್ಲಿ ಕಾಣಬಹುದಾಗಿದೆ. ಸಂಸ್ಕೃತಿ, ಪರಂಪರೆ, ದೈವಿಕತೆ, ಪರಸ್ಪರ ಗೌರವ ಒಬ್ಬರಿಗಿಂತ ಮತ್ತೊಬ್ಬರ ಉನ್ನತವಾದ ವ್ಯಕ್ತಿತ್ವ.. ಹೀಗೆ ಹಲವಾರು ಚಿತ್ರಣಗಳಿಂದ ಕಾದಂಬರಿ ಸೆಳೆಯುತ್ತದೆ. ಆಹ್ಲಾದಕರ ಹಾಗೂ ಉನ್ನತ ಆಲೋಚನೆಗಳ ಜೊತೆಗೆ ಮನಸ್ಸಿಗೆ ಹತ್ತಿರವಾಗುವ ಓದನ್ನು ನಿರೀಕ್ಷಿಸುತ್ತಿದ್ದರೆ ಇದು ಅದಕ್ಕೆ ಹೇಳಿ ಮಾಡಿಸಿದ ಕಾದಂಬರಿ. ಎಂದಿನಂತೆ ಸಾಯಿಸುತೆ ಅಮ್ಮನವರ ಕಾದಂಬರಿಯ ಓದು ಮುದ ನೀಡಿತು.


~ ವಿಭಾ ವಿಶ್ವನಾಥ್

ಭಾನುವಾರ, ಜುಲೈ 19, 2026

ಅವಳು ಕಳೆದುಕೊಂಡಿದ್ದು ನಂಬಿಕೆಯನ್ನು..!


ಹೀಗೆಯೇ ನನ್ನ ಅವಳ ಮಾತು ಸಾಗುತ್ತಾ ಇತ್ತು. ತಡೆಯಿರದಂತೆ..!


ಮಾತಿನ ನಡುವಲ್ಲಿ "ನಂಬಿಕೆ ಅನ್ನೋದು ಎರಡಲಗಿನ ಕತ್ತಿಯಂತೆ.. ಯಾರನ್ನು ನಂಬುವುದೋ ಯಾರನ್ನು ಬಿಡುವುದೋ ಗೊತ್ತಾಗ್ತಾ ಇಲ್ಲ" ಎಂಬ ವೇದಾಂತದಂತಹ ಮಾತು ಕೇಳಿದಾಗ ಯಾರನ್ನೋ ನಂಬಿ ಹಣ ಕೊಟ್ಟು ಕಳೆದುಕೊಂಡಿರಬಹುದಾ..?! ಎಂದೆನಿಸಿತು. ಅವಳಾಗಿಯೇ ಬಾಯಿ ಬಿಡಲಿ ಎಂದುಕೊಂಡು ಹೆಚ್ಚು ಕೆದಕಲು ಹೋಗಲಿಲ್ಲ.


"ಕೌಸಲ್ಯೆ, ಸುಮಿತ್ರೆ, ಕೈಕೇಯಿಯರಲ್ಲಿ ನಿನಗೆ ತಾಯಿಯಾಗಿ ಯಾರು ಇಷ್ಟ" ಎಂದಳು. "ಯಾಕೆ..?" ಎಂಬ ಮರುಪ್ರಶ್ನೆಗೆ "ಕಾಲ ಕಳೆದಂತೆ ನನ್ನ ಆಯ್ಕೆ ಬದಲಾಗುತ್ತೆ ಬಿಡು"

"ನಿನಗೆ ಯಾರಿಷ್ಟ.. ಯಾಕೆ?" ಎಂದೆ ನಾನು.

"ಈಗ ಯಾರೂ ಇಲ್ವೆ.." ಎಂಬ ಮಾತು ನನ್ನನ್ನು ಅಚ್ಚರಿಗೆ ದೂಡಿತ್ತು. ಅವಳೇ ಮುಂದುವರಿಸಿದಳು..

"ಸ್ವಂತ ಮಗನ ಪರ ವಹಿಸಿ ಧ್ವನಿ ಎತ್ತಲಾಗದ ಕೌಸಲ್ಯೆ, ಧ್ವನಿ ಎತ್ತಲು ಹೊರಟ ಮಗನನ್ನು ಸುಮ್ಮನಾಗಿಸಿ ಅನುಯಾಯಿಯಾಗಿಸಿದ ಸುಮಿತ್ರೆ ಮೊದಲಿಂದೇನೂ ಅಷ್ಟು ಪ್ರಭಾವಿಸಿದ ಪಾತ್ರಗಳಲ್ಲ." ಎಂದು ನಿಲ್ಲಿಸಿದಳು.

"ಕೆಟ್ಟ ಮಗನಿದ್ದರೂ ಕೆಟ್ಟ ತಾಯಿ ಇರಲಾರಳು. ಭರತನಿಗಾಗಿ ಎಲ್ಲವನ್ನೂ ಮಾಡಿದ ಕೈಕೇಯಿ ನಿನಗಿಷ್ಟವೇ ಹಾಗಾದರೆ..!?" ಎಂದು ಕೇಳಿದೆ. 


"ಭರತನ ಹಾಗೆ ರಾಮನನ್ನೂ ಪ್ರೀತಿಸಿದ್ದ, ಮಮತೆಯಿಂದ ಕಂಡಿದ್ದ ತಾಯಿ ರಾಮನಿಗೆ ಎಸಗಿದ್ದ ನಂಬಿಕೆದ್ರೋಹವನ್ನು ಕಂಡ ಮೇಲೂ ಮತ್ತೆ ಕೈಕೇಯಿ ಇಷ್ಟ ಅನ್ನೋಕಾಗುತ್ತದೆಯೇ..?" ಎಂದು ಪ್ರಶ್ನಿಸಿದಳು.


"ರಾಮನೇ ಅವಳನ್ನು ಕ್ಷಮಿಸಲಿಲ್ಲವಾ..?! ಮಂಥರೆ ತಾನೆ ಅವಳ ಮನದಲ್ಲಿ ಕಹಿ ಮೂಡಿಸಿದ್ದು" ಎಂದೆ. 


"ರಾಮ ಕೈಕೇಯಿಯನ್ನು ಕ್ಷಮಿಸಿದ. ಮಣಿಕಂಠ ಪೆರುಮಾದೇವಿಯನ್ನು ಕ್ಷಮಿಸಿದ. ಅದಕ್ಕೆ ಅವರು ದೇವರಾದರು. ಸ್ವಂತ ಮಕ್ಕಳ ಮೇಲಿನ ಮೋಹಕ್ಕೆ ಇದೆಲ್ಲವನ್ನೂ ಮಾಡಿದ್ದಕ್ಕೆ ಬೇರಾರನ್ನೋ ಕಾರಣ ಅನ್ನುವುದು ಹೇಗೆ..?


ಇವತ್ತಿನ ಕಾಲಘಟ್ಟದಲ್ಲಿಯೂ ಇಂತಹವರು ಇರುತ್ತಾರೆ. ನಮ್ಮಂಥ ದಡ್ಡರು ಅಮ್ಮನಷ್ಟೇ ಮಮತೆ ತೋರುತ್ತೇವೆ. ಕೆಲವೊಮ್ಮೆ ಅಮ್ಮನಿಗಿಂತಲೂ ಹೆಚ್ಚೇ ಪ್ರಾಶಸ್ತ್ಯ ನೀಡುತ್ತೇವೆ. ಅಮ್ಮನ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ಅದು ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ ಯಾರೂ ಆಗಿರಬಹುದು. ಅವರ ವಿಶ್ವಾಸದ್ರೋಹ ಅಮ್ಮನ ಸ್ಥಾನವನ್ನಷ್ಟೇ ಕಳೆಯುವುದಿಲ್ಲ. ಮನುಷ್ಯರ ಮೇಲಿನ ನಂಬಿಕೆ, ವಿಶ್ವಾಸ ಎಲ್ಲವನ್ನೂ ಕಸಿದುಕೊಳ್ಳುತ್ತದೆ. ಹಾಗೆಂದು, ವನವಾಸ ಮಾಡೋದಿಲ್ಲ ನಾವು. ಆದರೆ, ಮತ್ತೆಂದೂ ಯಾರನ್ನೂ ನಂಬುವುದಕ್ಕೆ ಹೋಗೋದೇ ಇಲ್ಲ." ಎಂದು ಮನಸ್ಸಿನ ಕಹಿಯನ್ನು ಪ್ರಾಮಾಣಿಕವಾಗಿ ಹೊರ ಹಾಕುತ್ತಿದ್ದಳು.


"ಮತ್ತೆ ನನ್ನನ್ನೂ..?!" ಪ್ರಶ್ನಿಸಿದೆ ನಾನು.


"......" ನಿರುತ್ತರಳಾದ ಅವಳು ತನ್ನ ಮನಸ್ಸಿನ ಘಾಸಿಯನ್ನು ನನ್ನ ಬಳಿಯೂ ಸಂಪೂರ್ಣವಾಗಿ ಬಿಚ್ಚಿಡಲು ಸಿದ್ದಳಿರಲಿಲ್ಲ.


ಬಹುಶಃ, ಅವಳು ಹಣ ಕಳೆದುಕೊಂಡಿದ್ದರೆ ಯಾವುದಾದರೂ ರೂಪದಲ್ಲಿ ಮರಳಿ ಸಿಗುತ್ತಿತ್ತೇನೋ.. ಅವಳು ಕಳೆದುಕೊಂಡಿದ್ದು ನಂಬಿಕೆಯನ್ನು. 

ಕೇವಲ ನಂಬಿಕೆಯನ್ನಲ್ಲ...! ಸಂಬಂಧಗಳ ಅಡಿಪಾಯವೇ ಆಗಿದ್ದ ನಂಬಿಕೆಯನ್ನು. ಮತ್ತೆಂದೂ ಗಟ್ಟಿಯಾಗದ ಬಾಂಧವ್ಯವನ್ನು.


~ವಿಭಾ ವಿಶ್ವನಾಥ್ 

ಹಕ್ಕುದಾರ (ಬೆಳಕಿಂಡಿಯ ಕತೆಗಳು - 58)


 ಕಾರ್ಗತ್ತಲು, ಕುಳಿರ್ಗಾಳಿ ಬೀಸುತ್ತಿದ್ದ ಆ ಅಪರಾತ್ರಿಯಲ್ಲೂ ಕಣ್ಣಲ್ಲಿ ಬೆಳಕು ಮೂಡಿಸಿಕೊಂಡು ಬಾಗಿಲು ತೆಗೆದು ಅಲ್ಲೇ ಕೂರುತ್ತಾಳೆ ಅಮ್ಮ, ಎಂದಿನಂತೆ... ಅಂದು ಹೋದ ಈ ಜೀವದ ಹಕ್ಕುದಾರ ಇಂದಾದರೂ ಮರಳುತ್ತಾನೇನೋ ಎಂಬ ಆಸೆಯಿಂದ.


ಕೆಲಸ ಹುಡುಕುತ್ತೇನೆಂಬ ನೆಪಹೇಳಿ, ಮನೆಯಿಂದ ಇಂತದ್ದೇ ಒಂದು ಮಳೆಗಾಲದ ಕಾರ್ಗತ್ತಲ ರಾತ್ರಿಯಲ್ಲಿ ನಗ-ನಾಣ್ಯಗಳನ್ನೆಲ್ಲಾ ಗಂಟು ಕಟ್ಟಿ ಹೊರಟವ.. ಇಂದಾದರೂ ಬಂದಾನೇನೋ ಎಂಬ ಆಸೆಯಿಂದ ಕುಟುಕು ಜೀವ ಹಿಡಿದು ಕಾಯುತ್ತಿದ್ದಾಳೆ. ಎಷ್ಟಾದರೂ ಮಾತೃಹೃದಯವಲ್ಲವೇ? 

ಮಗ ಅತ್ತ ಐಷಾರಾಮಿ ಜೀವನ ನಡೆಸುತ್ತಾ ಬಂಗಲೆಯಲ್ಲಿ ಹೆಂಡತಿಯೊಡನೆ ಬೆಚ್ಚಗೆ ಹೊದ್ದು ಮಲಗಿದ್ದಾನೆ, ತನಗೊಬ್ಬಳು ತಾಯಿ ಇರುವಳು ಎಂಬುದನ್ನೂ ಮರೆತು..!


ತಾಯಿ ಕಾದಿರುವ ಮನೆಗೆ ಕಾರ್ಗತ್ತಲಿನಲ್ಲಿ ಬಂದನೊಬ್ಬ ಅತಿಥಿ. ಆತ ಆಕೆಯ ಮಗನಲ್ಲ, ಸಾವಿನ ರೂಪದ ವಿಧಿ.ಆತ ಮಗನಷ್ಟು ಕಲ್ಲು ಹೃದಯಿಯಲ್ಲ. ಕಾಯದಿದ್ದರೂ ಸಮಯಕ್ಕೆ ಸರಿಯಾಗಿ ಬರುತ್ತಾನೆ. ಸಿಡಿಲಿನ ರೂಪದಲ್ಲಿ ಬಂದಿಳಿದ ಆತ, ಆಕೆಗೇ ಅರಿವಾಗದಂತೆ ತನ್ನ ನುಣ್ಣನೆ ತೋಳಿನಲ್ಲಿ ಬರಸೆಳೆದು ಮಗುವಿನಂತೆ ಮಲಗಿಸಿಕೊಂಡ. ತಾನೇ ಅವಳ ಹಕ್ಕುದಾರ ಎಂಬಂತೆ...


~ವಿಭಾ ವಿಶ್ವನಾಥ್

ಆಯ್ಕೆ (ಬೆಳಕಿಂಡಿಯ ಕತೆಗಳು - 57)

 


ಮಗುವಿನ ಲಾಲನೆ ಪಾಲನೆ ಅಥವಾ ಕೆಲಸ ಎಂಬ ಎರಡು ಆಯ್ಕೆಗಳಿದ್ದವು ಕಣ್ಣ ಮುಂದೆ. ಬದುಕಿನ ದಾರಿ ಕವಲೊಡೆಯುತ್ತಿದ್ದ ಕ್ಷಣ ಅದು. ಎರಡೂ ಮುಖ್ಯವೇ.. ಈ ಭರಾಟೆಯ ಬೆಂಗಳೂರಿನ ಬದುಕಿನಲ್ಲಿ ಕೆಲಸದವರನ್ನು ನಂಬಿ ಮಗುವನ್ನು ಬಿಟ್ಟು ಹೋಗುವಂತಿರಲಿಲ್ಲ. ಮಗುವಿನ ಭವಿಷ್ಯವನ್ನು ರೂಪಿಸಲು, ಅದಕ್ಕೆ ಬೇಕಾಗಿರುವ ಸವಲತ್ತುಗಳನ್ನು ಕೊಡಲು ಇಬ್ಬರ ಸಂಬಳವೂ ಅಗತ್ಯವಿತ್ತು.


ಆದರೆ, ಈ ಆಯ್ಕೆಯ ತಲೆ ಬಿಸಿ ಇರುವಾಗಲೇ ಕೋವಿಡ್ ಬಂದದ್ದು.. ಪುಣ್ಯಕ್ಕೆ ವರ್ಕ್ ಫ್ರಮ್ ಹೋಮ್ ದೊರೆತು ಮಗು ಹಾಗೂ ಕೆಲಸ ಎರಡನ್ನೂ ನಿಭಾಯಿಸುವ ಹಾಗಾಯಿತು. 

ಬದುಕಲ್ಲಿ ಕೆಲವೊಮ್ಮೆ ಕವಲೊಡೆದ ದಾರಿಯೂ ಮತ್ತೆ ಒಂದಾಗುವ ಆಯ್ಕೆ ಸಿಗುತ್ತದೆ. ಅದೃಷ್ಟವಿದ್ದರೆ..


~ವಿಭಾ ವಿಶ್ವನಾಥ್

ಈ ಶಿಕ್ಷೆ ಸಾಲದು.. (ಬೆಳಕಿಂಡಿಯ ಕತೆಗಳು - 56)

 


ಆತ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವನು ಎಂಬ ಕಾರಣಕ್ಕೆ ಆತನಿಗೆ ಶಿಕ್ಷೆ ಕಡಿಮೆಯಾದರೆ ಆತ ಮಾಡಿದ್ದ ಪಾಪದ ಹೊರೆ ಕಡಿಮೆಯದ್ದಾ..?? ಜೀವಾವಧಿ ಶಿಕ್ಷೆಯಿಂದ, ಮರಣ ದಂಡನೆಯಿಂದ ತಪ್ಪಿಸಬೇಕಾದರೆ ಇದೊಂದು ಕ್ಷುಲ್ಲಕ ಕಾರಣವನ್ನಿಟ್ಟುಕೊಂಡು ತಪ್ಪಿಸುತ್ತಾರಲ್ಲಾ.. ಅವರ ಮನಸ್ಸಿನಲ್ಲಿ ದಯೆ, ಮಾನವೀಯತೆ ಎಲ್ಲವೂ ಸತ್ತು ಯಾವ ಕಾಲವಾಗಿ ಹೋಗಿದೆಯೋ.. ಹದಿನೆಂಟು ವರ್ಷ ಕಳೆದಂತೆ ಆತನಿಗೆ ಜೈಲಿನಿಂದ ಬಿಡುಗಡೆ. ಅಷ್ಟು ದೊಡ್ಡ ತಪ್ಪು ಮಾಡಿ ಆತ ಒಂದೇ ವರ್ಷಕ್ಕೆ ಹೊರಬರುತ್ತಾನೆ. ಅವನ ಮನಸ್ಸು ಸಹಾ ಪರಿವರ್ತನೆಯಾಗಿರಬಹುದು.. ಆದರೆ, ಆ ಮುಗ್ಧ ಹೆಣ್ಣು ಮಗು ಯಾವ ತಪ್ಪು ಮಾಡಿತ್ತು..??


ಈ ದುರುಳರ ಅಟ್ಟಹಾಸಕ್ಕೆ, ವಿಕೃತಿಗೆ ಸಿಲುಕಿ ಸತ್ತ ಆ ಮಗು ಯಾವ ತಪ್ಪು ಮಾಡಿತ್ತು..?? ಈತನ ವಯಸ್ಸು ಅಲ್ಲಿ ತಪ್ಪು ಮಾಡುವಾಗ ಮುಖ್ಯವೇ ಆಗಿರಲಿಲ್ಲವೇ..??


ಕಡೆಗೂ, ಕೋರ್ಟು ತನ್ನ ನಿರ್ಧಾರ ಬದಲಿಸಿ ಆತನಿಗೂ ಜೀವಾವಧಿ ಶಿಕ್ಷೆ ನೀಡಿತು. ಆದರೂ, ನನಗನ್ನಿಸಿದ್ದು ಆತ್ಯಾಚಾರಿಗಳಿಗೆ ಆ ಶಿಕ್ಷೆಯೂ ಸಾಲದು.


~ವಿಭಾ ವಿಶ್ವನಾಥ್

ನಾನು ಮಾಡಿದ್ದು ತಪ್ಪಾ..?? (ಬೆಳಕಿಂಡಿಯ ಕತೆಗಳು - 55)

 


ಮಕ್ಕಳಿಗೆ ಶಿಕ್ಷಣವನ್ನು ಬರೀ ಒಳ್ಳೆಯ ಮಾತಿನಲ್ಲಿ ಹೇಳಿದರೆ ಕೇಳಿ ಬಿಡುತ್ತಾರಾ..?? ತಪ್ಪು ಮಾಡಿದಾಗ ತಿದ್ದಬೇಕಾದರೆ ಕೆಲವೊಮ್ಮೆ ಶಿಕ್ಷಕಿಯಾಗಿ ನಾನು ಶಿಕ್ಷೆ ನೀಡಬೇಕಾಗುತ್ತದೆ. ನಾನು ಕೂಡಾ ಆ ಮಗುವಿನ ರಕ್ಷಕಿಯೇ ತಾನೇ..? ಒಂದು ಮಗುವನ್ನೇ ಸಂಭಾಳಿಸಲು ಅಮ್ಮ ಕಷ್ಟ ಪಡುವಾಗ ಇಲ್ಲಿ ನಾನು ಒಂದು ತರಗತಿಯಲ್ಲಿ ಕಡಿಮೆ ಎಂದರೂ 30 ಮಕ್ಕಳನ್ನು ಸಂಭಾಳಿಸಬೇಕು. ಹಾಗಿದ್ದಲ್ಲಿ, ಅವರನ್ನು ಒಳ್ಳೆ ಮಾತಿನಿಂದಲೇ ತಿದ್ದಬೇಕೆನ್ನುವ ಕಾನೂನು ಎಷ್ಟು ಪಾಲನೆಯಾಗಲು ಸಾಧ್ಯ..??


ಮಗು ಹೋಮ್ ವರ್ಕ್ ಮಾಡಿರಲಿಲ್ಲ ಎಂಬ ಕಾರಣಕ್ಕೆ ಕ್ಲಾಸ್ ನಿಂದ ಹೊರಗೆ ನಿಲ್ಲುವ ಶಿಕ್ಷೆ ನೀಡಿದ್ದೆ. ಆದರೆ, ಆತ ಹತ್ತು ನಿಮಿಷಕ್ಕೆಲ್ಲಾ ಬಿದ್ದು ಬಿಟ್ಟಿದ್ದನಂತೆ. ತಿಂಡಿ ತಿಂದು ಬಂದಿರಲಿಲ್ಲವಂತೆ. 

ಇದಕ್ಕೆಲ್ಲಾ ನಾನೇ ಕಾರಣ ಎಂಬಂತೆ ದೂಷಿಸುತ್ತಾರೆ. ಮಗುವನ್ನು ಸರಿ ದಾರಿಯಲ್ಲಿ ನಡೆಸುವ ಸಲುವಾಗಿ ನೀಡಿದ ಶಿಕ್ಷೆ ಈಗ ನನಗೇ ಶಿಕ್ಷೆಯಾಗಿದೆ. ಸಹೋದ್ಯೋಗಿಗಳು ಮಾತ್ರವಲ್ಲ.. ನನ್ನ ವಿದ್ಯಾರ್ಥಿಗಳು ಸಹಾ ನೋಡುವ ದೃಷ್ಟಿ ಬೇರೆಯಾಗಿದೆ. ನಾನು ಮಾಡಿದ್ದು ತಪ್ಪಾ..??


~ವಿಭಾ ವಿಶ್ವನಾಥ್

ಬದುಕು ನಿಲ್ಲಬಲ್ಲದೇ..? (ಬೆಳಕಿಂಡಿಯ ಕತೆಗಳು - 54)

 


"ಕರೋನಾ ಮಹಾಮಾರಿ ವಕ್ಕರಿಸಿರುವುದರಿಂದ ಎಲ್ಲರಿಗೂ ತೊಂದರೆಯೇ.. ಹಾಗೆಂದು ಮನೆಯಲ್ಲಿಯೇ ಸುಮ್ಮನೆ ಕುಳಿತುಕೊಳ್ಳಲಾಗುತ್ತದೆಯೇ..?? ಹಾಗೆ ಕುಳಿತರೆ ಬದುಕು ನಿಲ್ಲಬಲ್ಲದೇ..?? ಸಮಯ ಓಡುತ್ತಲೇ ಇದೆ. ನಾವು ನಿಂತ ಮಾತ್ರಕ್ಕೆ ಬದುಕು ಸಮಯ ನಿಲ್ಲುತ್ತದೆಯೇ..?? 


ಮುನ್ನೆಚ್ಚರಿಕೆಯಾಗಿ ಮಾಸ್ಕ್ ಧರಿಸಿಕೊಳ್ಳಬೇಕು, ಸ್ಯಾನಿಟೈಜರ್ ಹಾಕಿಕೊಳ್ಳಬೇಕು. ಮನೆಯಲ್ಲಿ ಕರೆದ ಹಾಲು ಮಾರುತ್ತಾ, ಮನೆಯಂಗಳದಲ್ಲಿಯೇ ಬೆಳೆದಿದ್ದ ಹೂಗಳನ್ನು ಕಟ್ಟುತ್ತಾ, ಅಲ್ಲೇ ಬೆಳೆದ ಸೊಪ್ಪು-ತರಕಾರಿಗಳನ್ನು ಮಾರುತ್ತಾ ಬದುಕು ಸಾಗಿಸಬೇಕು." ಎಂದರು ಅಜ್ಜಿ. 


"ಅಜ್ಜಿ ನೀವು ಈ ವಯಸಲ್ಲಿ, ಅದೂ ಕರೋನಾ ಕಾಲದಲ್ಲಿ ಹೀಗೆ ಬಂದಿದ್ದೀರಾ.. ಮನೆಯಲ್ಲಿಯೇ ಕುಳಿತುಕೊಳ್ಳುವುದಲ್ಲವೇ" ಎಂದು ಪ್ರಶ್ನಿಸಿದ್ದಕ್ಕೆ... 

ಅವರು ಹೇಳಿದ್ದರಲ್ಲಿ ತಪ್ಪೇನಿದೆ.. "ನಾವು ಸುಮ್ಮನೆ ಕುಳಿತ ಮಾತ್ರಕ್ಕೆ ಸಮಯ, ಬದುಕು ನಿಲ್ಲುವುದಿಲ್ಲ.. ಅಲ್ಲವೇ..??"


~ವಿಭಾ ವಿಶ್ವನಾಥ್

ಈಗಿಲ್ಲಿ ಎಲ್ಲವೂ ಮೆಸ್ಸಿ! (ಪುಸ್ತಕ ಯಾನ - 470)


ಪುಸ್ತಕದ ಶೀರ್ಷಿಕೆ : ಈಗಿಲ್ಲಿ ಎಲ್ಲವೂ ಮೆಸ್ಸಿ!

ಲೇಖಕರು : ಎಂ ಆರ್ ಕಮಲ

ಪ್ರಕಾಶಕರು : ಬಹುರೂಪಿ 

ಪ್ರಥಮ ಮುದ್ರಣ : ಡಿಸೆಂಬರ್ 2024

ಪುಟಗಳು : 104

ಬೆಲೆ : 150 ರೂ.


ನನಗೆ ಎಂ. ಆರ್ ಕಮಲ ಮೇಡಂ ಅವರ ಗದ್ಯಗಂಧಿ ಕವಿತೆಗಳು ಬಹಳ ಇಷ್ಟ. ಜೊತೆಗೆ ಅವರ ಸಕಾರಾತ್ಮಕ ನೋಟವೂ..


ಗದ್ಯಗಂಧಿ ಶೈಲಿಯ ಜೊತೆಗೆ ಲೇಖಕಿ 2015ರಲ್ಲಿ ಅರಬ್ ಹೆಣ್ಣು ಮಕ್ಕಳ ಕಾವ್ಯದ ಅನುವಾದದಲ್ಲಿ ತೊಡಗಿಕೊಂಡಿದ್ದಾಗ ಅವರ ಬರವಣಿಗೆಯ ಶೈಲಿಗಳು ಬದಲಾಗಿರುವುದಕ್ಕೆ ಕಾರಣ ಹಾಗೂ ಹೆಚ್ಚಿನ ಅರಬ್ ಮಹಿಳಾ ಕವಿಗಳ ಗದ್ಯಗಂಧಿ ಕವಿತೆಗಳ ಕುರಿತಾಗಿ ಪುಸ್ತಕದ ಪ್ರವೇಶಿಕೆಯಲ್ಲಿ ತೆರೆದಿಡುತ್ತಾರೆ. 


ಸಾಮಾನ್ಯವಾಗಿ ಇವರ ಗದ್ಯಗಂಧಿ ಕವಿತೆಗಳಲ್ಲಿ ಅವಳು ಎನ್ನುವುದನ್ನು ಕಾಣಬಹುದು. ಇದು ಹಲವಾರು ಹೆಣ್ಣುಮಕ್ಕಳಿಗೆ ಕನೆಕ್ಟ್ ಆಗುತ್ತದೆ ಸಹ. ಇಲ್ಲಿ ಅವಳ ಭಾವಗಳು ಕಾಣುತ್ತವೆ. ಜೊತೆಗೆ ವಲಸೆ, ವಿಸ್ಮೃತಿ, ಹೆಣ್ಣಿನ ಅಸ್ಮಿತೆ, ಮನುಷ್ಯನ ಸೋಗಲಾಡಿತನ, ಸಾಮಾಜಿಕ ಜಾಲತಾಣ ಹೀಗೆ ಹಲವಾರು ವಿಚಾರಗಳನ್ನು ನಾವಿಲ್ಲಿ ಕಾಣಬಹುದು. ಶೀರ್ಷಿಕೆಯೇ ಸೂಚಿಸುವಂತೆ ಮೆಸ್ಸಿ ಅಂದರೆ ಗೊಂದಲವಿರುವ ಭಾವಗಳು ಹಾಗೂ ಅವುಗಳ ಮೇಳ್ಳೆಸುವಿಕೆಯ ಜೊತೆಗೆ ಹೊಸದೊಂದು ಸಕಾರಾತ್ಮಕ ಹೊಳಹು ಸಹ ಸಿಗುತ್ತದೆ.


ಈ ಕವಿತೆಗಳ ಮಾಲೆಯ ಮೊದಲ ಪುಸ್ತಕಕ್ಕೆ ಗದ್ಯಗಂಧಿ ಎಂಬ ಚಂದದ ಹೆಸರಿಟ್ಟ ಡಾ. ಎಚ್. ಎಸ್ ಸತ್ಯನಾರಾಯಣ ಅವರಿಗೆ ಈ ಸಂಕಲನವನ್ನು ಅರ್ಪಿಸಿದ್ದಾರೆ. 


ಇಲ್ಲಿ 76 ಸೊಗಸಾದ ಗದ್ಯಗಂಧಿ ಕವಿತೆಗಳಿವೆ. ನನಗಿಷ್ಟವಾದ ಕೆಲವನ್ನು ನನಗರ್ಥವಾದಂತೆ ಪ್ರಸ್ತಾಪಿಸುತ್ತೇನೆ.


**************


ಅವರು ಕೇಳುತ್ತಾರೆ :

ಅವರು ಕೇಳುತ್ತಾರೆ: ನಿನ್ನೊಳಗೆ ಕಹಿಯೇ ಇಲ್ಲವೇ?


ನಾನು ಹೇಳುತ್ತೇನೆ: ಇಲ್ಲಿ ಎಲ್ಲರೂ ಕಹಿ ತುಂಬಿದ

ಪಾತ್ರೆಯಾಗಿದ್ದಾರೆ. ಎಲ್ಲ ಕಡೆಯೂ ಅದನ್ನೇ ಹೀರುತ್ತ, ಉಗುಳುತ್ತ

ಹೊಳೆಯಂತೆ ಹರಿಯುತ್ತಿದ್ದಾರೆ. ಯಾವಾಗ ಕಹಿಯೊಂದು

ಕಡಲಾಗುವುದೋ? ಅದಕ್ಕೆಂದೇ ಜೇನುಹುಟ್ಟಿಯಾಗಿದ್ದೇನೆ. 


ಎಲ್ಲರೂ ಕಹಿ ತುಂಬಿಕೊಂಡು.. ಕಹಿಯನ್ನೇ ಕಕ್ಕುವಾಗ ಸಿಹಿಯಾಗಿರುವರು ಮಾದರಿಯಾಗಬೇಕಿದೆ. ಪ್ರತಿಯೊಂದಕ್ಕೂ ಏಕೆ, ಹೇಗೆ ಎಂದು ಪ್ರಶ್ನಿಸುವವರಿಗೆ ಇಲ್ಲಿ ಎಲ್ಲರಂತೆಯೇ ತಾನೂ ಆದರೆ ಹೇಗೆ..?! ಎಂಬ ವಿಭಿನ್ನತೆಯ ಜೊತೆಗೆ ಮನುಷ್ಯ ಏನಾಗಬೇಕಿದೆ ಎಂಬುದನ್ನು ಬೋಧಿಸದೆ ತಾನೇ ಮಾದರಿಯಾಗಿ ನಿಲ್ಲುವ ಬಗೆ ಕಾಣಸಿಗುತ್ತದೆ. 


**************


ಹೀಗಿಲ್ಲಿ ಎಲ್ಲವೂ ಮೆಸ್ಸಿ! :

ಇಲ್ಲಿ ಮೆಸ್ಸಿ ಎಂಬ ಪದ ಗೋಜಲು, ಗೊಂದಲ ಎಂಬರ್ಥ ನೀಡುತ್ತದೆ. 

ಬದಲಾದ ದಿನಗಳು ಬದಲಾದ ರೀತಿ-ನೀತಿಗಳು, ಬದುಕಿನ ರೀತಿಗಳು, ಅಪ್ಡೇಟ್ ಆಗುವ ನೆಪದಲ್ಲಿ ಬದಲಾಗಿರುವ ನಮಗೆ ಕನ್ನಡಿ ಹಿಡಿದಂತಿದೆ ಇದು. 


**************


ಉದುರಿದ ಪದಗಳನ್ನು ಅಂಟಿಸಲಾಗುವುದಿಲ್ಲ :


'ಪದಗಳೆಂದರೆ' ಮರದಿಂದ ಉದುರಿದ ಎಲೆಗಳು 

ಎಂಬ ಸಾಲು ಮರದಿಂದ ಉದುರಿದ ಎಲೆಗಳನ್ನು ಮತ್ತೆ ಹೇಗೆ ಮೊದಲಿನಂತಾಗಿಸುವುದಿಲ್ಲವೋ ಹಾಗೆಯೇ ಒಮ್ಮೆ ಆಡಿದ ಮಾತುಗಳು ಎಲ್ಲೆಲ್ಲಾ ಹಾರಿ, ಹೊತ್ತಿ ಉರಿಯಬಹುದು ಅಥವಾ ಹೇಗೆಲ್ಲಾ ವಿನ್ಯಾಸವಾಗಬಹುದು, ಯಾವ ರೀತಿಯಲ್ಲಿ ಬಳಕೆಯಾಗಬಹುದು ಎಂಬುದನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. 


ಉದುರಿದ ಪದಗಳನ್ನು ಹಿಂತೆಗೆದು ಅಂಟಿಸಲಾಗುವುದಿಲ್ಲವಲ್ಲ! 

ಎಂಬ ಸಾಲು ಅದೆಷ್ಟು ಅರ್ಥಪೂರ್ಣವಲ್ಲವೇ..!


**************


ತನ್ನದೇ ಸಾಲುಗಳನ್ನು ಮರೆಯುತ್ತಿದ್ದಾನೆ! :


ಫೇಸ್ಬುಕ್ ನ ಅನ್ ಫ್ರೆಂಡ್ ಆಗುವ ವಿಚಾರವನ್ನು ಪ್ರಸ್ತಾಪಿಸುತ್ತಲೇ.. ಚಿಕ್ಕವರಿದ್ದಾಗ ನೆಂಟರು ಬರುವ ಸಂದರ್ಭದ ಸಂಭ್ರಮ ಜೊತೆಗೆ ಅವರ ನಿರ್ಗಮನದ ನಂತರದ ಖಾಲಿತನ ಎರಡರ ಅನುಭವವನ್ನು ಪ್ರಸ್ತಾಪಿಸುತ್ತಾರೆ. ಅದಕ್ಕೂ.. ಇಂದಿನ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಗೂ ಲಿಂಕ್ ಆಗುತ್ತದೆ. ಬರುವವರ, ಹೋಗುವವರ, ಹೊಂದುವವರ ಕುರಿತು ಹೇಳುತ್ತಾರೆ.


ಬರುವವರ ಹೋಗುವವರ ಎಣಿಕೆಯಲ್ಲಿ ಕವಿಗೀಗ ವಿಸ್ಮೃತಿ.

ತನ್ನನ್ನು, ತನ್ನದೇ ಸಾಲುಗಳನ್ನು ಮರೆಯುತ್ತಿದ್ದಾನೆ! 


**************


ನಕ್ಷತ್ರಗಳನ್ನು ಹುಡುಕುವುದು! :

ಚಿಕ್ಕಂದಿನಿಂದ ಇದ್ದ ನಕ್ಷತ್ರಗಳ ಹುಚ್ಚಿನಲ್ಲಿ ಕೆಂಪು ಕಲ್ಲಿನ ನಕ್ಷತ್ರದ ಓಲೆ, ನಂತರ ಅದು ಕಳೆದು ಹೋಗಿದ್ದು, ನಕ್ಷತ್ರ ಕತ್ತಿನ ಫ್ರಾಕು ಹೀಗೆ ನಕ್ಷತ್ರದ ಆಸೆಗಳು ಹಲವಿದ್ದವು. ಆದರೆ ನಕ್ಷತ್ರಗಳು ಸಿಕ್ಕಿದ್ದೇ ಬೇರೆ ರೀತಿಯಲ್ಲಿ. ಇವು ಕಳೆದುಹೋಗದ ನಕ್ಷತ್ರಗಳು. ಅವು ಹೇಗಿವೆ ಎಂದರೆ ಹೀಗಿವೆ ನೋಡಿ.


ಪಾಠ ಮಾಡಿದರೆ ಮಕ್ಕಳ ಕಣ್ಣಲ್ಲಿ ನೂರಾರು ನಕ್ಷತ್ರ, ಅಡುಗೆ

ಮುಗಿಸಿದರೆ ಕೈಯಲ್ಲೊಂದು, ನೆಟ್ಟ ಮಲ್ಲಿಗೆಯ ಬಳ್ಳಿಯಲ್ಲಿ

ಲೆಕ್ಕವಿರದಷ್ಟು! ಕಾಲಿಟ್ಟಲ್ಲೆಲ್ಲ ನಕ್ಷತ್ರಗಳ ಬಳ್ಳಿ ತೊಡರಿಕೊಳ್ಳುತ್ತಿವೆ.

ಮನಸ್ಸಿಗೆ ಮಂಕು ಕವಿದಿದೆ ಎನ್ನಿಸಿದರೆ ಎದ್ದು ಕೆಲಸ ಹುಡುಕುತ್ತಾಳೆ.

ನಕ್ಷತ್ರಗಳು ದಳದಳ ಉದುರುತ್ತವೆ!


**************


ಮಾತನಾಡಿಸಬೇಕಾಗಿಯೇ ಇಲ್ಲ! :

"ಬೆಳಗಾದರೆ ಅದದೇ ಮನೆಯ ರಂಗೋಲಿ ನೋಡುತ್ತಾ ನಡೆಯುತ್ತಾಳೆ. ಕವಿ ನಿಸಾರರಿಗಿದ್ದ ಜಿಜ್ಞಾಸೆ, ಬೆರಗುಗಣ್ಣು ಯಾವುದೂ ಇಲ್ಲ. ಪ್ರಶ್ನೆಗಳು ಇಲ್ಲ ಹೆಚ್ಚಿನವು ಉತ್ತರಗಳೇ!"


ಹೆಣ್ಣುಮಕ್ಕಳ ಮನಸ್ಸು ರಂಗೋಲಿಯ ಮೂಲಕ ಚಿತ್ರಿತವಾಗಿರುವ ಪರಿಯನ್ನು ನಮಗೂ ಕಟ್ಟಿಕೊಡುತ್ತಾರೆ. ಕಾಟಾಚಾರಕ್ಕೆ ಎಳೆದ ರಂಗೋಲಿ, ಬಿಳಿಯ ರಂಗೋಲಿ ಜೊತೆಗೆ ಕೆಮ್ಮಣಿನ ಅಲಂಕಾರ, ಬಣ್ಣದ ರಂಗೋಲಿ, ಬಣ್ಣ ಬೇಡದ ಕಡೆ ಬಣ್ಣ ಸೇರಿಸಿ ಅಂದಗೆಟ್ಟ ರಂಗೋಲಿ, ಹೆಚ್ಚು ಎಳೆಗಳಿದ್ದ ರಂಗೋಲಿಯನ್ನು ಹಿಗ್ಗಿಸುತ್ತಾ ಸಾಗಿರುವ ಪರಿ, ಬದಲಾಗದ ಒಂದು ಮನೆಯ ರಂಗೋಲಿ, ಹೀಗೆ ವಿವಿಧ ರಂಗೋಲಿಗಳು ಅವರ ಮನಸ್ಸನ್ನೇ ಬಿಚ್ಚಿಡುವಂತೆ ಕಾಣುತ್ತವೆ. 

ಗದ್ಯಗಂಧಿ ಕೊನೆಯಲ್ಲಿನ ಈ ಸಾಲು ಎಲ್ಲವನ್ನೂ ಹೇಳುತ್ತದೆ.


ಈ ಹೆಣ್ಣು ಮಕ್ಕಳನ್ನು ಅರಿಯಲು ಮಾತನಾಡಿಸಬೇಕಾಗಿಯೇ ಇಲ್ಲ!


**************


ಸ್ವಯಂ ಸಂಭ್ರಮೆಗೆ ಯಾವ ಹಂಗಿಲ್ಲ! :

ಯಾತನೆಯ ಒರೆಸಿ ಹಾಕಿರುವ ನೂತನೆಯ ಕಣ್ಣ ಕಾಡಿಗೆ

ನೀರಾಗುವುದಿಲ್ಲ, ತುಟಿ ರಂಗು ಅಳಿಯುವುದಿಲ್ಲ, ಅಳಿಸುವುದೂ

ಇಲ್ಲ. ಬರುವನೋ, ಬಾರನೋ ಎಂಬ ಗೊಂದಲವೇ ಇಲ್ಲ.

ಸ್ವಯಂ ಸಂಭ್ರಮೆಗೆ ಯಾವುದರ ಹಂಗಿಲ್ಲ.


ಸ್ವಯಂ ಸಂಭ್ರಮೆಯರಾಗಿ ಮೊದಲಿಗೆ ತಮ್ಮನ್ನು ತಾವು ಪ್ರೀತಿಸಿಕೊಳ್ಳುವ ಹಾಗೂ ಯಾರಲ್ಲೂ ತಮ್ಮ ಸಂತೋಷವಿಲ್ಲ ಎಂಬ ಅರಿವನ್ನು ಮೂಡಿಸಿಕೊಳ್ಳುವ, ಸ್ವಯಂ ಸಂಭ್ರಮೆ ಇಲ್ಲಿ ಮಾದರಿಯಾಗುತ್ತಾಳೆ ಹಾಗೂ ಇಷ್ಟವಾಗುತ್ತಾಳೆ. ಇಲ್ಲಿ ಸ್ವಯಂ ಸಂಭ್ರಮೆಯ ಅರಳುವಿಕೆ ಹಾಗೂ ಅವಳ ಪರಿ ಆವರಿಸಿಕೊಳ್ಳುತ್ತದೆ.


**************


ವಿರುದ್ಧ ಪದಗಳ ಹುಡುಕುತ್ತ ! :


ಎಲ್ಲದಕ್ಕೂ ನಿಮ್ಮದು 'ಏರುದ್ಧ ಪದ'ದ ಹುಡುಕಾಟ. ಸಿಗದಿದ್ದರೆ ತತ್ತರಿಸಿ ಎಂಥದ್ದನ್ನೋ ಎದುರಿಗೆ ತಂದು ನಿಲ್ಲಿಸಿ ಕಾದಾಡಲೇಬೇಕು.

ಮಾಗಿಯ ಕೋಗಿಲೆಯಂತೆ ಯಾರೂ ಇಲ್ಲಿ ಮೂಗರಾಗಬಾರದು.

ಹುಲಿಯೋ, ನರಿಯೋ ಯಾವುದೋ ವೇಷ ತೊಟ್ಟು

ಕುಣಿಯುತ್ತಿರಬೇಕು.


ಎಲೆ ಕಳಚಿ ನಿಂತ ಮರದ ಮೌನ, ವಿಷಾದ, ಚಿಗುರ ಭರವಸೆ

ಯಾವುದೂ ವಿರುದ್ಧ ಪದಗಳ' ಹುಡುಕಾಡುವವರಿಗೆ

ಅರ್ಥವಾಗುವುದಿಲ್ಲ.


ಪಕ್ಷಿಗಳಿಗೆ ಮರಗಳಿಗೆ ಹೀಗೆ ಪರಿಸರದಲ್ಲಿ ವಿರುದ್ಧ ಎಂಬುದಿಲ್ಲ. ಅವುಗಳಿಗೆ ನಿಯಮವೂ ಇಲ್ಲ. ತಮ್ಮ ಪಾಡಿಗೆ ಚಿಗುರಿ, ಅರಳಿ ನಳನಳಿಸುತ್ತವೆ. ಮನುಷ್ಯನಂತೆ ಹುನ್ನಾರಗಳಿಲ್ಲ ಎಂದು ಹೇಳುತ್ತಲೇ ಮನುಷ್ಯರ ವಿರುದ್ಧ ಪದದ ಹುಡುಕಾಟದ ಪ್ರಯತ್ನವನ್ನು ಬದಿಗಿರಿಸಿ, ಏನೋ ಒಂದು ಮಾಡುತ್ತಲಿದ್ದಾಗ ಹೇಗಿರುತ್ತದೆ ಎಂದು ಹೇಳಿದ್ದಾರೆ. 


**************


ಅರಳುವುದಷ್ಟೇ ತನ್ನ ಸಹಜ ಗುಣ! :

ತನ್ನೊಳಗೊಂದು ಭಾಷೆಯಿದೆಯೆಂದೇ ತಿಳಿದಿರಲಿಲ್ಲ ತನಗೆ

ತಾನೇ ಹೂವಂತೆ ಅರಳುವವರೆಗೂ! ಈಗವಳು ಹೊರಗಿನೆಲ್ಲ

ಭಾಷೆಯನ್ನು ಆಚೆಗಟ್ಟಿದ್ದಾಳೆ. ಅರಳುವುದಷ್ಟೇ ತನ್ನ ಸಹಜ ಗುಣ!


ಕೆಲವೊಮ್ಮೆ ಪರಿಸರದ ಅಥವಾ ಕುಟುಂಬದ ಯಾರದ್ದೋ ಭಾಷೆಯನ್ನೋ, ಭಾವವನ್ನೋ ನಮ್ಮೊಳಗೆ ಅಳವಡಿಸಿಕೊಳ್ಳುತ್ತಾ ಸಾಗುತ್ತೇವೆ. ಆದರೆ, ನಮ್ಮ ನೈಜತೆಯ ಅರಿವಾಗುವುದು ನಮ್ಮ ಭಾವ, ಭಾಷೆಯ ಅರಿವಾಗುವುದು ಸಹಜವಾದ ಪ್ರಕ್ರಿಯೆ. ಹೂವರಳುವಂತೆ.. ಜೊತೆಗೆ ಅದರ ನಂತರದ ಜ್ಞಾನೋದಯ, ಪರಿಪಕ್ವತೆ ಯಾವುದನ್ನು ಆಚೆಗಿಡಬೇಕು ಎನ್ನುವುದನ್ನು ನಿರ್ಧರಿಸುತ್ತದೆ. ಅಲ್ಲವೇ..?


**************


ಅರ್ಥಪೂರ್ಣವಾದ ಹಾಗೂ ಮನಸ್ಸಿಗೆ ಹತ್ತಿರವಾಗುವ ಹಲವು ಸಾಲುಗಳಿವೆ ಇಲ್ಲಿ. ಪ್ರಸ್ತಾಪಿಸಲು ಹೊರಟರೆ ಈ ಪುಸ್ತಕದ ಸಾಕಷ್ಟು ಸಾಲುಗಳನ್ನು ಪ್ರಸ್ತಾಪಿಸಬೇಕಾಗುತ್ತದೆ. ರೂಪಕಗಳನ್ನು ಇಷ್ಟಪಡುವ ಗದ್ಯದ ಪ್ರಿಯರು ಹಾಗೂ ಪದ್ಯದ ಪ್ರಿಯರು, ಕಾವ್ಯಾತ್ಮಕ ಭಾಷೆಯನ್ನು ಇಷ್ಟಪಡುವವರು ಹೀಗೆ ಎಲ್ಲರೂ ಓದಬಹುದಾದ ಗದ್ಯಗಂಧಿ ಕವಿತೆಗಳಿವೆ ಇಲ್ಲಿ. ಸೊಗಸಾದ ಓದು.


~ವಿಭಾ ವಿಶ್ವನಾಥ್

ಗಂಡು ಮುತ್ತೈದೆ (ಪುಸ್ತಕ ಯಾನ - 469)


ಪುಸ್ತಕದ ಶೀರ್ಷಿಕೆ : ಗಂಡು ಮುತ್ತೈದೆ 

ಲೇಖಕರು : ಮಂಜುಳಾ ಪ್ರಸಾದ್

ಪ್ರಕಾಶಕರು : ಅಕ್ಷರನಾದ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2025

ಪುಟಗಳು : 106

ಬೆಲೆ : 150 ರೂ. 


ಇದು ಮಂಜುಳಾ ಪ್ರಸಾದ್ ಅವರ ಮೂರನೇ ಪುಸ್ತಕ. 'ಮಂದಾರ' ಎಂಬ ಕಿರುಕಥೆಗಳ ಸಂಕಲನ ಹಾಗೂ 'ಬಿಡಿ ಹೂಗಳು' ಎಂಬ ಕವನ ಸಂಕಲನಗಳು ಪ್ರಕಟವಾಗಿವೆ. ಇದು ನಾನು ಓದುತ್ತಿರುವ ಇವರ ಮೊದಲ ಪುಸ್ತಕ. 


ಈ ಕಥಾಸಂಕಲನದಲ್ಲಿ ಮೂರು ಕಥೆಗಳಿವೆ. ಶೀರ್ಷಿಕೆಯಾಗಿರುವುದು ಇಲ್ಲಿರುವ ನೀಳ್ಗತೆ. ಅಪ್ಪನ ವಾಚು ಹಾಗೂ ದೊಡ್ಡತನ ಎಂಬ ಇನ್ನೆರಡು ಕಥೆಗಳು ಓದಿಗೆ ಸಿಗುತ್ತವೆ. ಡಿ. ಮಲ್ಲಾರೆಡ್ಡಿ ಸರ್ ಅವರ ಬೆನ್ನುಡಿ ಇದೆ. 


ಗಂಡು ಮುತ್ತೈದೆ : ಶೀರ್ಷಿಕೆ ವಿಭಿನ್ನವಾಗಿದೆ. ಆದರೆ, ಈ ಹೆಸರಿನಲ್ಲಿ ಕರೆಸಿಕೊಳ್ಳುವವರಿಗೆ ಇದು ಮುಜುಗರವನ್ನು ತಂದೊಡ್ಡುತ್ತದೆ. ಆದರೆ, ಸೃಷ್ಟಿಯಲ್ಲಿ ಕೆಲವೊಮ್ಮೆ ದೈಹಿಕ ಭಿನ್ನತೆಯಿಂದ ಹೀಗಾಗುವವರು ಯಾವೆಲ್ಲಾ ರೀತಿಯ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಕಟ್ಟಿರುವ ಕಥೆ ಇದು. 


ಸಾಮಾನ್ಯವಾಗಿ ಹೆಣ್ಣೆಂದರೆ ಹೀಗಿರಬೇಕು ಹಾಗೂ ಗಂಡೆಂದರೆ ಹೀಗಿರಬೇಕು ಎಂಬ ಅಲಿಖಿತ ನಿಯಮಗಳು ನಮ್ಮನ್ನು ಪ್ರಭಾವಿಸುವುದಿದೆ. ಆದರೆ, ಈ ಕಥೆ ಅಂತಹ ಮನಸ್ಥಿತಿಯನ್ನು ಬದಲಾಯಿಸಲು ಪರಿಣಾಮಕಾರಿಯಾಗಿದೆ. 


ಪೂಜೆ, ವ್ರತ, ಸಂಪ್ರದಾಯ ಎಲ್ಲವನ್ನು ಪಾಲಿಸುತ್ತಿದ್ದ ಅಮ್ಮನಿಗೆ ಪಾರ್ಶ್ವವಾಯು ಬಡಿದು ಎರಡು ಕಾಲುಗಳು ಹಾಗೂ ಒಂದು ಕೈ ಸ್ವಾಧೀನ ಕಳೆದುಕೊಂಡಿದ್ದಾಗಲೂ.. ದೈಹಿಕ ಕೆಲಸಗಳು ಕಷ್ಟವಾಗುತ್ತಿದ್ದರೂ ಯಾವುದನ್ನೂ ಬಿಡಲೊಪ್ಪದ ಅಮ್ಮನಿಗೆ ಆಕೆಯ ಆರೋಗ್ಯ ಸುಧಾರಿಸಲು ಮರು ಮಾತಾಡದೆ ಸಹಾಯಕನಾಗಿದ್ದ ಸುಶೀಲ್. ಸುಶೀಲ್ ತಂದೆ ಸಹ ಆತನ ಸಹಾಯಕ್ಕೆ ಮೆಚ್ಚುತ್ತಿದ್ದರು. ಆದರೂ.. ಹಬ್ಬದ ದಿನ ಅವರ ಬಾಯಿಯಿಂದ ಬಂದ ಒಂದು ಶಬ್ದ ಆತನನ್ನು ಹೆಚ್ಚು ನೋಯಿಸಿತು.


ಮೂವರು ಹೆಣ್ಣುಮಕ್ಕಳ ನಂತರ ಎಂಟು ವರ್ಷ ಚಿಕ್ಕವನಾಗಿ ಹುಟ್ಟಿದ್ದ ಸುಶೀಲ್. ಅಕ್ಕಂದಿರ ಮಧ್ಯೆ ಅವರಿಗಿಂತಲೂ ಹೆಚ್ಚು ಜಾಗೃತಿ ವಹಿಸಿ ಬೆಳೆಸಿದ್ದಕ್ಕೋ ಏನೋ ಹೆಣ್ಣು ಮಕ್ಕಳಿಗೆ ಬರುತ್ತಿದ್ದ ಪ್ರತಿ ಕೆಲಸವೂ ಅವರಿಗಿಂತಲೂ ನಾಜೂಕಾಗಿ ಇವನಿಗೆ ಬರುತ್ತಿತ್ತು. ವಿದ್ಯೆಯಲ್ಲಿ ಮಾತ್ರವಲ್ಲದೆ.. ಅಡುಗೆ, ಮನೆ ಸುಧಾರಿಸುವಿಕೆ ಎಲ್ಲವನ್ನು ನಿಭಾಯಿಸುತ್ತಿದ್ದವನಿಗೆ ಬೇರೆಯದ್ದೇ ಹೆಸರು ಆಂಟಿದ್ದು ವಿಪರ್ಯಾಸ.


ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದು ಬ್ಯಾಂಕಿನ ಕ್ಷೇತ್ರವನ್ನು ಆರಿಸಿಕೊಂಡು ಇನ್ನೇನು ಮದುವೆಯೂ ಆಗಿ ಸುಖವಾಗಿರಬೇಕು ಎನ್ನುವಾಗ ಅಕ್ಕನ ಮಗಳ ಸಂಬಂಧ ಕೂಡಿ ಬರಲಿಲ್ಲ. ಇದೇ ನೆಪವಾಗಿ, ಮದುವೆಯ ವಿಚಾರವಾಗಿ ಒಬ್ಬೊಬ್ಬರಾಗಿ ತವರಿನ ನೆಟನ್ನು ಹೆಚ್ಚು ಅಂಟಿಸಿಕೊಳ್ಳದೆ ದೂರವೇ ಉಳಿದರು ಅಕ್ಕಂದಿರು. ಅಷ್ಟಕ್ಕೂ ಅಕ್ಕನ ಮಗಳ ಜೊತೆಗಿನ ವಿವಾಹ ಹಾಗೂ ನಂತರದ ವಿವಾಹ ಸಂಬಂಧಗಳು ತಪ್ಪಿ ಹೋಗುತ್ತಿರುವುದಕ್ಕೆ ಕಾರಣವೇನಿತ್ತು..?


ಅದೇ ಸಂದರ್ಭದಲ್ಲಿ ಹೊಸ ಪ್ರಮೋಷನ್ ಸಿಕ್ಕಾಗ.. ಹೊಸ ಜಾಗ ಅದೃಷ್ಟವನ್ನು ಬದಲಾಯಿಸಬಹುದು ಎಂದು ದಾವಣಗೆರೆಗೆ ಹೋದವನಿಗೆ ಅಲ್ಲಿ ನಡೆದ ಘಟನೆಯೊಂದು ಆತನ ಬದುಕಿನಲ್ಲಿ ಕಪ್ಪುಚುಕ್ಕಿಯಾಗಿಬಿಡಬಹುದು ಎನ್ನುವ ಆಲೋಚನೆ ಕನಸಿನಲ್ಲಿಯೂ ಇರಲಿಲ್ಲ. ಹೆಣ್ಣುಮಕ್ಕಳ ನಡುವೆ ಬೆಳೆದಿದ್ದವನು, ಹೆಣ್ಣುಮಕ್ಕಳಿಗೆ ಗೌರವ ನೀಡುತ್ತಿದ್ದವನು ತಾನೇ ಸುಳ್ಳು ಹೇಳಿ ಪರಿಸ್ಥಿತಿಯನ್ನು ನಿಭಾಯಿಸಲು ಹೋಗಿ ಅದನ್ನೇ ಉರುಳಾಗಿಸಿಕೊಂಡಿದ್ದ. ಅಷ್ಟಕ್ಕೂ ಘಟನೆ ಹಾಗೂ ಸುಶೀಲ್ ಹೇಳಿದ ಸುಳ್ಳು ಏನಿತ್ತು ..?


ಅದಾದ ನಂತರದ ವರ್ಗಾವಣೆ, ವಿವಾಹ ಸಂಬಂಧ, ವಿವಾಹ ನಂತರದ ಬದುಕು ಎಲ್ಲವೂ ಸುಶೀಲ್ ನ ಬವಣೆಯ ಜೊತೆಗೆ ಗಂಡು ದೈಹಿಕವಾಗಿ ಬದಲಾವಣೆ ತೋರಿದಾಗ ಸಮಾಜದಲ್ಲಿ ಯಾವ ದೃಷ್ಟಿಯಲ್ಲಿ ಕಾಣಿಸುತ್ತಾನೆ ಹಾಗೂ ಸುತ್ತಲಿನವರ ಪ್ರತಿಕ್ರಿಯೆ, ಮನಸ್ಥಿತಿ, ಪರಿಸ್ಥಿತಿ ಏನಿರುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. 


ಸುಶೀಲ್ ಹಾಗೂ ಆತನ ಪತ್ನಿ ಸುಮ ಇಬ್ಬರೂ ಮನೋವೈದ್ಯರನ್ನು ಸಂಪರ್ಕಿಸಿದ್ದೇಕೆ..? ಮುಂದೆ ಗಂಡು ಮುತ್ತೈದೆ ಎಂಬ ಪದ ಆತನಿಗೆ ಹೆಮ್ಮೆ ತಂದದ್ದೇಕೆ? ಓದಿ ನೋಡಿ.


ಅಪ್ಪನ ವಾಚು : 

"ಹೌದು! ಸಂಜೆಯ ಗೋಧೂಳಿ ಟೈಮ್... ಅದು ಪ್ರಕೃತಿಗೆ; ಆದರೆ ಈ ವಾಚ್ ನ ಅಂಗಡಿಯವನಿಗೆ ಪ್ರತಿಕ್ಷಣವೂ ಅವನ ಅಂಗಡಿಯ ತುಂಬ ನೇತು ಹಾಕಿರುವ ಆ ಗಡಿಯಾರಗಳ ನಿರಂತರ ಶಬ್ದಗಳಿಗೆ ಒಳ್ಳೆಯ ಸಮಯ ಯಾವುದು? ಕೆಟ್ಟ ಸಮಯ ಯಾವುದು? ಕಾಲಚಕ್ರ ಉರುಳುತ್ತಿರುವಾಗ!"


ಕಥೆಯ ಶೀರ್ಷಿಕೆ ಹಾಗೂ ಈ ಅರ್ಥಪೂರ್ಣ ಸಾಲುಗಳನ್ನು ಓದುವಾಗಲೇ ಕುರಿತಾಗಿ ನಮಗೊಂದು ಕಲ್ಪನೆ ಬರುತ್ತದೆ. ಅಪ್ಪ ಸಾಯುವ ಕೊನೆಯ ಗಳಿಗೆಯಲ್ಲಿ ದೃಷ್ಟಿ ನೆಟ್ಟದ್ದು ಹಾಗೂ ಬದುಕಿನುದ್ದಕ್ಕೂ ಅಪ್ಯಾಯತೆಯಿಂದ ಅಪ್ಪಿಕೊಂಡದ್ದು ವಾಚ್ ಅನ್ನು. ಅಪ್ಪನ ವರ್ಷಾಂತಕದ ಕಾರ್ಯಕ್ಕೆ ಬೇಕಾಗಿದ್ದು ಮಾಡುವುದರ ಜೊತೆಗೆ, ಅಂದೇ ವಾಚ್ ರಿಪೇರಿ ಕೆಲಸವನ್ನು ಅಂಟಿಸಿಕೊಂಡಿದ್ದೇಕೆ..?


ಅಪ್ಪನ ಬಾಲ್ಯದ ದಿನಗಳು, ಪೊಲೀಸ್ ಆದ ಸಂದರ್ಭ ಆ ಸಮಯದಲ್ಲಿಯೂ ವಾಚ್ ವ್ಯಾಮೋಹ, ಅಮ್ಮನೊಡನೆ ಜೊತೆಯಾದ ವಾಚ್.. ಹೀಗೆ ಜೀವನದ ಪ್ರತಿ ಪ್ರಮುಖ ಘಟ್ಟದಲ್ಲಿಯೂ ಜೊತೆಯಾಗಿದ್ದ ವಾಚ್ ನ ಚಿತ್ರಣ ನಮಗೆ ಸಿಗುತ್ತಾ ಹೋಗುತ್ತದೆ


"ವಾಚು ಸುಬ್ಬಣ್ಣನ ತಿಥಿಯಲ್ಲಿ ಅವರ ಮಗ ಎಲ್ಲರಿಗೂ ವಾಚುಗಳನ್ನು ದಾನವಾಗಿ ಕೊಡಲಿದ್ದಾನೆ" ಎಂಬ ಗಾಳಿಸುದ್ದಿಯ ಹಿಂದಿನ ಸತ್ಯಾಸತ್ಯತೆ ಏನಿತ್ತು ಹಾಗೂ ಅಪ್ಪನ ವಾಚು ಏನಾಯ್ತು..? ನೀವೇ ಓದಿ ನೋಡಿ.


ದೊಡ್ಡತನ : ತಾನು ಹುಟ್ಟಿ ಬೆಳೆದ ಊರಿಗೆ, ಬಾಲ್ಯವನ್ನು ಕಳೆದ ಊರಿಗೆ ಮತ್ತೆ ಮರಳಿ ಬರುತ್ತಿದ್ದ. ಅದಕ್ಕೆ ಕಾರಣವಿತ್ತು. ಹಾಗೆಂದು, ಆತ ಇಷ್ಟಪಟ್ಟು ಬರುತ್ತಿದ್ದ ಕಾರಣವಲ್ಲ. ಸಾಕಷ್ಟು ದ್ವೇಷ, ಹಗೆಯನ್ನು ಬೆಳೆಸಿಕೊಂಡು ಊರಿನಿಂದ ದೂರವೇ ಇದ್ದವನು ಅಮ್ಮನಿಗೆ ಕೊಟ್ಟ ಆ ಒಂದು ಮಾತಿಗೆ ಮತ್ತೆ ಅಲ್ಲಿ ಬಂದಿದ್ದ .


ಕೂಡು ಕುಟುಂಬದ ಮನೆಯ ನೆನಪಿನ ಜೊತೆಗೆ ಆ ಮನೆಯಲ್ಲಿದ್ದವರ ಸಣ್ಣತನಗಳು ಹಾಗೂ ಪರಿಸ್ಥಿತಿಗಳು ಜೊತೆಗೆ ಅಪ್ಪ ಎಲ್ಲರಿಂದ ದೂರಾದ ಪ್ರಸಂಗ ಎಲ್ಲವೂ ಕಾಣಿಸುತ್ತದೆ. ವಿಪರ್ಯಾಸವೆಂದರೆ ಚಿಕ್ಕಪ್ಪ ಹಾಗೂ ಮಕ್ಕಳಿಗೆ ತಾನು ಬಂದಿದ್ದ ಕೆಲಸಕ್ಕಿಂತ ಅವರವರ ಸಮಸ್ಯೆಯೇ ದೊಡ್ಡದಾಗಿ ಕಂಡದ್ದು. ಹಾಗೂ ಅದರ ಪರಿಹಾರವನ್ನು ಕಂಡುಕೊಳ್ಳಲು ಹೊರಟದ್ದು.


ಇಲ್ಲಿ ದೊಡ್ಡತನ ಮೆರೆದವರು ಯಾರು..? ಅಮ್ಮನ ಭಾಷೆ ಏನಿತ್ತು ಅವನ ಕಾರ್ಯ ಸಂಪೂರ್ಣವಾಯಿತೇ ಓದಿ ನೋಡಿ.


ನೀಳ್ಗತೆ ಹಾಗೂ ಉಳಿದೆರಡು ಕಥೆಗಳು ಕಥೆಯ ಅಂತ್ಯಗಳು ಅಷ್ಟು ಸುಲಭವಾಗಿ ಊಹಿಸಲಾಗದಂತಿವೆ. ಎಲ್ಲ ಕಥೆಗಳಲ್ಲಿಯೂ ಪ್ರಮುಖವಾಗಿ ಮನಸ್ಸಿನ ಭಾವನೆಗಳು ಅತ್ಯಂತ ಸ್ಪಷ್ಟವಾಗಿ ಹಾಗೂ ಆಪ್ತವಾಗುವಂತೆ ಚಿತ್ರಿತವಾಗಿವೆ. ವಾಸ್ತವಕ್ಕೆ ಹತ್ತಿರವಾದ ಕಥೆಗಳು ಇಲ್ಲಿವೆ. ಸೊಗಸಾದ ಕಥೆಗಳ ಓದು.


~ವಿಭಾ ವಿಶ್ವನಾಥ್

ದೇವರಿದ್ದಾನೆ (ಪುಸ್ತಕ ಯಾನ - 468)


ಪುಸ್ತಕದ ಶೀರ್ಷಿಕೆ : ದೇವರಿದ್ದಾನೆ

ಲೇಖಕರು : ಭಾರತಿ ಪ್ರಸಾದ್ ಕೊಡ್ವಕೆರೆ

ಪ್ರಕಾಶಕರು : ಸಾಹಿತ್ಯಸುಧೆ ಪ್ರಕಾಶನ

ಪ್ರಥಮ ಮುದ್ರಣ : 2025

ಪುಟಗಳು : 212

ಬೆಲೆ : 260 ರೂ.


ಕೌಟುಂಬಿಕ ಹಾಗೂ ಸಾಮಾಜಿಕ ಕಥೆಗಳನ್ನು ನೈತಿಕತೆಯ ಚೌಕಟ್ಟಿನಲ್ಲಿ ಹೆಣೆದಿರುವ 40 ಕಥೆಗಳ ಸಂಕಲನ ಭಾರತಿ ಪ್ರಸಾದ್ ಕೊಡ್ವಕೆರೆ ಅವರ ದೇವರಿದ್ದಾನೆ. ಶೀರ್ಷಿಕೆ ಆಶಾಭಾವ, ಭರವಸೆ ಹುಟ್ಟಿಸುವಂತಿದೆ. ಇದು ಅವರ ಎರಡನೇ ಕಥಾಸಂಕಲನ. 


ಅಮ್ಮ: ಅಮ್ಮನೇ ಇಷ್ಟಪಟ್ಟು ಮಗಳ ಜೊತೆ ಬೆಂಗಳೂರಿಗೆ ಬರಲು ಹೊರಟಿದ್ದು ಮೊದಲ ಬಾರಿ. ಆದರೆ, ಆ ಬಾರಿ ಅಮ್ಮನ ಆಸೆ ಈಡೇರುವಂತಿರಲಿಲ್ಲ. ಅದೇಕೆ..? ಕೆಲವೊಂದು ವಿಚಾರಗಳು ಕಾಲ ಮಿಂಚಿ ಹೋಯಿತೆನ್ನುವಂತೆ ಪಶ್ಚಾತ್ತಾಪ ಮೂಡಿಸುವುದೇಕೆ..?


ತರವಾಡು: ಅಪ್ಪನ ಕಾಲದಲ್ಲಿ, ಅಪ್ಪ ತೀರಿಹೋದ ನಂತರ ತಪ್ಪಿ ಹೋಗಿದ್ದ ಅಜ್ಜನ ಮನೆ ಲೇಖಳ ಪಾಲಿಗೆ ದಕ್ಕಿದ್ದರ ಹಿಂದಿನ ಕಥೆ ಇಲ್ಲಿದೆ.


ಸೋದರತ್ತೆ: ಅಮ್ಮನ ನಂತರದ ಅಮ್ಮನಂತಿದ್ದ ಸೋದರತ್ತೆಯ ಸಾವು, ಅವರ ಆಸೆ ಹಾಗೂ ಸಹನಾಗೆ ತನ್ನ ಸಾವಿನ ವಿಚಾರವನ್ನು ಹೇಗೆ ಹೇಳಬೇಕು ಎಂದು ಹೇಳಿದ ಅವರ ಆದೇಶ, ಎಲ್ಲದರ ಅಂತಃಕರಣದಿಂದ ಕಾಡುವ ಕಥೆ.


ಆದದ್ದೆಲ್ಲಾ ಒಳಿತೇ ಆಯಿತು: ಆದದ್ದೆಲ್ಲಾ ಒಳಿತೇ ಆಯಿತು ಎಂಬಂತೆ ಬಾಳುತ್ತಿರುವ ಸುಮಾ ಹಾಗೂ ಮಾಧವರ ದಾಂಪತ್ಯ ಜೀವನದ ಜೊತೆಗೆ ಪಶ್ಚಾತ್ತಾಪ ಪಡುತ್ತಿರುವ ಸೀತಮ್ಮನ ತಪ್ಪು ಏನಿತ್ತು..? ಕಾಲ ಕಲಿಸಿದ ಪಾಠ ಯಾವುದು..?


ಅಪಸ್ವರ: ಸಾಮಾನ್ಯವಾಗಿ ಹಿರಿಯರಿಂದ ದಾಂಪತ್ಯದಲ್ಲಿ ಅಪಸ್ವರ ಮೂಡುವ ಕಥೆಗಳನ್ನು ಓದಿದ್ದೆ. ಆದರೆ, ಇಲ್ಲಿ ಸುಶ್ಮಿತಾ ಹಾಗೂ ಸುಹಾಸ್ ದಂಪತಿಗಳ ನಡುವಿನ ಅಪಸ್ವರ ಸುಸ್ವರವಾದ ಹಿನ್ನೆಲೆಗೆ ಹಿರಿಯರ ಹಿರಿತನವಿರುವುದು ಖುಷಿ ತಂದಿತು.


ಹೊಸಹಾದಿ: ಲಿವ್-ಇನ್ ರಿಲೇಶನ್ ಶಿಪ್ ನಲ್ಲಿದ್ದ ಇಬ್ಬರ ಗತ ಮುಂದೆ ವಿಭಿನ್ನ ಭವಿಷ್ಯ ಕಂಡುಕೊಂಡ ಕಥೆ ಇದು.


ಸಿರಿ: ಅಪ್ಪ-ಅಮ್ಮನ ದಾಂಪತ್ಯದ ದಿನಗಳನ್ನು ಕಂಡಿದ್ದ ಸಿರಿಗೆ ಸಂಸಾರದ ಕುರಿತು ಹುಟ್ಟಿದ ಹೇವರಿಕೆಯ ಭಾವ ಹಾಗೂ ಅಪ್ಪನನ್ನು ದ್ವೇಷಿಸುತ್ತಿದ್ದ ಸಿರಿ ತನ್ನ ವೈವಾಹಿಕ ಜೀವನವನ್ನು ಕಟ್ಟಿಕೊಂಡದ್ದು ಹೇಗೆ..?


ಆರಂಭ-ಅಂತ್ಯ: ಒಂದು ಸಂಬಂಧದ ಅಂತ್ಯ ಮತ್ತೊಂದರ ಆರಂಭವೂ ಆಗಿರಬಹುದು. ಒಂದೇ ದೋಣಿಯ ಪಯಣಿಗರಂತಿದ್ದ ಇಬ್ಬರು ತಮ್ಮ ಮುಂದಿನ ಜೀವನದ ಆರಂಭದ ನಾಂದಿ ಹಾಡಿದ ಕಥೆ.


ಆತ್ಮತೃಪ್ತಿ: ಇಳಿ ವಯಸ್ಸಿನ ಸಂಬಂಧಗಳ ಸವಿ ಇರುವುದು ಅವರ ಸಿಹಿ-ಸವಿ ಮಾತುಕತೆಯಲ್ಲಿ. ಕದ್ದು ಸಿಹಿತಿಂದ ವಿಚಾರ ಸಂಗಾತಿಗೆ ತಿಳಿದಾಗ ಅವರ ಪ್ರತಿಕ್ರಿಯೆ ಹೇಗಿತ್ತು..?


ಋಣಾನುಬಂಧ ರೂಪೇಣ: ಋಣಾನುಬಂಧ ಇಲ್ಲದೆ ತಪ್ಪಿ ಹೋದ ಸಂಬಂಧದ ಹೆಣ್ಣುಮಗಳು ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕಾಗ.. ತಪ್ಪಿತಸ್ಥ ಭಾವದಲ್ಲಿ ಬೇಯುತ್ತಿದ್ದವರು ಅವಳ ಪ್ರಬುದ್ಧ ಆಲೋಚನೆಗೆ ಮನಸೋತದ್ದೇಗೆ..?


ಕಾಕನ ಹೋಟೆಲ್: ಮದುವೆಗೂ ಮುನ್ನ ಕೆಲಸದಲ್ಲಿದ್ದ ಅಂಗಡಿಯ ಪಕ್ಕದಲ್ಲಿ ಪರಿಚಿತರಾಗಿದ್ದ ಆಪ್ತಜೀವ ಕಾಕಾರಿಗೆ ಈಗ ಇಳಿವಯಸ್ಸು ಹಾಗೂ ಆಪ್ತಬಂಧ ಮನಸ್ಸಿಗೆ ಹತ್ತಿರವಾಗುವ ಕಥೆಯಿದು.


ದೇವರಿದ್ದಾನೆ: ಕಥಾಸಂಕಲನದ ಶೀರ್ಷಿಕೆಯ ಕಥೆ. ಅಮ್ಮನ ಪ್ರೇರಣೆ ಇದ್ದರೂ.. ಅಮ್ಮ, ಸದಾ ದೇವರಿದ್ದಾನೆ ಎಂದು ಯಶಸ್ಸನ್ನು ದೇವರಿಗೆ ಸಮರ್ಪಿಸುತ್ತಿದ್ದರು. "ನಿಜಕ್ಕೂ ಅಮ್ಮ ಹೇಳುವ ಆ ದೇವರಿದ್ದಾನಾ..?" ಎಂದು ಲೇಖಕಿ ಕೇಳುವುದೇಕೆ..?


ನನ್ನ ಪ್ರೀತಿಯ ಹುಡುಗಿ: ಈತನಿಗೆ ತಾನು ಪ್ರೀತಿಸಿದ ಹುಡುಗಿ ತನ್ನವಳಾಗಲಿ ಎನ್ನುವ ಆಸೆ. ಆದರೆ, ಪ್ರೀತಿಸಿದ ಹುಡುಗಿಯ ಮನಸ್ಸಿನಲ್ಲಿದ್ದ ಮಾತೇನು..?


ಅಪ್ಪ: ಅಮ್ಮನಿಲ್ಲದ ದಿನಗಳಲ್ಲಿ ಅಪ್ಪನಿದ್ದ ಬಗೆ, ಅಮ್ಮನಿದ್ದ ದಿನಗಳಲ್ಲಿ ಅಪ್ಪನಿದ್ದ ಬಗೆ.. ಎರಡೂ ಮಗಳ ನೋಟಕ್ಕೆ ಕಂಡದ್ದೇಗೆ.? 


ನಿರ್ಧಾರ: ತಂದೆ ತಾಯಿ ನೋಡಿ ಅನುರೂಪ ಎಂದು ಸಹನಾಳಿಗೆ ಜೋಡಿ ಮಾಡಿದ ಹುಡುಗ ಶ್ರೀಕಾಂತ್. ಅನುರೂಪ ದಾಂಪತ್ಯದಂತೆ ಸಾಗುತ್ತಿದ್ದವರ ಬದುಕಲ್ಲಿ ಈಗ ಬದಲಾವಣೆ ನಿಚ್ಚಳವಾಗಿತ್ತು. ಅದು ಮೊದಲು ಕಾಡಿದ್ದು ಸಹನಾಳಿಗೆ ಬ ಅವಳ ನಿರ್ಧಾರವೇನು..? ಅದು ಖಂಡಿತವಾಗಿಯೂ ವಿಚ್ಛೇದನವಲ್ಲ. ಹಾಗಾದರೆ ಮತ್ತೇನು..?


ತುಮುಲ(ನೀಳ್ಗತೆ): ಅರವಿಂದ ಅಚಾನಕ್ಕಾಗಿ ಕಂಡ, ಭೇಟಿಯಾದ ಹುಡುಗಿಯನ್ನು ಮೆಚ್ಚಿದ್ದ. ಅವಳ ಜೊತೆಯಲ್ಲಿ ಮಗುವೂ ಇತ್ತು. ಕಾಕತಾಳೀಯವೆಂಬಂತೆ ಆಕೆಯ ಮನೆಗೆ ವಧುಪರೀಕ್ಷೆಗೆ ಹೋಗುವ ಸಂದರ್ಭವೂ ಬಂದಿತು. ಆದರೆ, ಅಲ್ಲಿ ನಡೆದ ಪ್ರಸಂಗವೊಂದು ಅವನ ಮನದ ತುಮುಲವನ್ನು ಹೆಚ್ಚಾಗಿಸಿದ ನವಿರಾದ ಪ್ರೇಮ ಕಥೆ ಇಲ್ಲಿದೆ.


ಕೃತಜ್ಞಳೋ, ಕೃತಘ್ನಳೋ: 23 ವರ್ಷಗಳ ಹಿಂದಿನ ಸ್ನೇಹ ಮತ್ತೆ ಬೆಸೆದದ್ದು ಒಂದು ಕರೆಯ ಮೂಲಕ. ಹಾಗೆ ಕರೆ ಬಂದದ್ದು ಸಹಾಯಕ್ಕೋಸ್ಕರ. ಹೇಗೋ ಬೇಡಿಕೆ ಈಡೇರಿತ್ತು. ಅದಕ್ಕೆ ಸಹಾಯ ಮಾಡಿದವರಿಗೂ.. ಈಕೆಗೂ ಕೃತಜ್ಞತೆಯನ್ನು ಸಲ್ಲಿಸಿದ್ದವಳು ಮುಂದಿನ ದಿನಗಳಲ್ಲಿ ಹೇಗಿದ್ದಳು..? ಆಕೆ ಕೃತಜ್ಞಳೋ, ಕೃತಘ್ನಳೋ..?


ಜೇಡರಬಲೆ: ಯಾರು ಏನೇ ಅಂದರೂ ತನ್ನಿಷ್ಟದ ಬದುಕು ಕಟ್ಟಿಕೊಳ್ಳಬೇಕು. ಅಲ್ಪ ಸ್ವಾತಂತ್ರ್ಯವಾದರೂ ತನ್ನದಾಗಬೇಕು ಎಂದು ಮಹತ್ವಾಕಾಂಕ್ಷೆಯಿಂದ ನಿರ್ಧರಿಸಿ ಹೊರಟವಳ ಆಸೆಗೆ ಅಡ್ಡಿಯಾದದ್ದೇನು..? ಸಂಸಾರವೆಂಬ ಜೇಡರಬಲೆಯಲ್ಲಿ ಸಿಕ್ಕಿದವಳ ಪರಿಸ್ಥಿತಿ ಏನಿತ್ತು..?


ಉಡುಗೊರೆ: ವ್ಯಾಸ ಹಾಗೂ ಸುನಂದ ತಮ್ಮ ಅನ್ಯೋನ್ಯ ದಾಂಪತ್ಯದಲ್ಲಿ ಇಚ್ಛೆಯನ್ನರಿತು ಬಾಳುವ ಸತಿಪತಿಗಳಂತಿದ್ದವರು. ವ್ಯಾಸನ ಒಂದು ದುಡುಕು ಮಾತಿನಿಂದ ಸುನಂದಾ ಮನಸ್ಸು ಘಾಸಿಯಾದದ್ದು ಹೇಗೆ..? ವ್ಯಾಸ ಅದನ್ನು ಸರಿಪಡಿಸಿದನೇ..? ಒಂದು ಆದರ್ಶ ದಾಂಪತ್ಯದ ಕಥೆ ಇದು.


ಆಸ್ತಿ: ತನ್ನ ಪಾಲಿನ ಆಸ್ತಿ ಕೇಳಲು ಹೊರಟಾಗ ಹೆಂಡತಿ ಬೇಡವೆಂದು ತಡೆದರೂ ಅವಳ ಮಾತಿಗೆ ಬೆಲೆ ಕೊಡದವನು ಬದಲಾದದ್ದೇಗೆ..?


ಹೆತ್ತವರು: ಹೆತ್ತವರು ತಮ್ಮ ಕಷ್ಟವನ್ನು ಮಕ್ಕಳಿಗೆ ತಿಳಿಸುವುದಿಲ್ಲ. ಮಕ್ಕಳು ಅದರ ಅರಿವಿರದೆ ದುಂದು ವೆಚ್ಚ ಮಾಡಲು ಹೊರಟಾಗ ಅಚಾನಕ್ಕಾಗಿ ತನ್ನ ಹೆತ್ತವರ ಕಷ್ಟದ ಸ್ಥಿತಿ ಕಣ್ಮುಂದೆ ನಿಂತರೆ..? 


ನೈತಿಕತೆ: ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ 14 ವರ್ಷಗಳ ನಂತರ ತವರೂರಿಗೆ ವರ್ಗಾವಣೆಯಾಗಿತ್ತು. ತಾನು ಓದಿದ ಶಾಲೆಗೆಯನ್ನು ಹೋಗಿ ನೋಡಬೇಕೆಂಬ ಆಸೆ ಇದ್ದಾಗಲೇ ಅದೇ ಶಾಲೆಯಿಂದ ಕಾರ್ಯಕ್ರಮದ ಅತಿಥಿಯಾಗಿ ಆಹ್ವಾನವೂ ಸಿಕ್ಕಿತ್ತು. ಹೋಗುವಾಗ ಇದ್ದ ಉತ್ಸಾಹ, ಖುಷಿ ಬರುವಾಗ ಹೇಗಿತ್ತು..?


ನಿನ್ನ ನೆರಳಿನಾಸರೆ: ಪತಿ ಸುಹಾಸ್ ನದ್ದು ಹೇಳುವಂತಹ ತಕರಾರಿಲ್ಲದಿದ್ದರೂ.. ಅಖಿಲಾಳಿಗೆ ಅವನ ಒಂದು ನಡೆ ಸರಿ ಕಂಡಿರಲಿಲ್ಲ. ಆದರೆ, ಅದು ಸರಿ ಎಂದು ಸಾಬೀತಾದ ಗಳಿಗೆ ಮತ್ತೆ ಅವನ ಒಲವಿನಾಸರೆಗೆ ದಾರಿಯಾಯಿತೇ..?


ನೀನಿಲ್ಲದ ಈ ಬಾಳು: ಹೊರಗೆ ದುಡಿದು, ಮನೆಯಲ್ಲಿಯೂ ಕೆಲಸ ಮಾಡುವ ಗೃಹಿಣಿ ಸಾಮಾನ್ಯವಾಗಿ ಗಂಡ-ಮಕ್ಕಳ ಸ್ವಲ್ಪ ಸಹಾಯವನ್ನು ಬಯಸುತ್ತಾಳೆ. ಅದು ಅವರ ಕರ್ತವ್ಯವೂ ಹೌದು. ಪ್ರಶಾಂತಿಯೂ ಇದಕ್ಕೆ ಹೊರತಾಗಿರಲಿಲ್ಲ. ಆಕೆಯ ಗಂಡ-ಮಕ್ಕಳಿಗೆ ಅವಳಿಲ್ಲದ ಸಂದರ್ಭ ಹೇಗನ್ನಿಸಿತು..?


ಶಿಕ್ಷೆ: ಮದುವೆ, ಸಂಸಾರ, ಮಕ್ಕಳು ಎಂದು ಕಷ್ಟದ ಬದುಕು ಬದುಕುತ್ತಿದ್ದ ಗೆಳತಿ ಪದ್ಮಿನಿಗೆ ಸಿಕ್ಕಿದ್ದು ಇನ್ನೂ ಮದುವೆಯಾಗದ ಭಾವನಾ. ಅಚಾನಕ್ಕಾಗಿ ಆದ ಇವರಿಬ್ಬರ ಭೇಟಿ ಯಾರಿಗೆ ಯಾವ ಭಾವ ಹುಟ್ಟಿಸಿತು. ಭಾವನಾಳ ಬದುಕಲ್ಲಿ.. ಯಾರ ತಪ್ಪಿಗೆ ಅವಳಿಗೆ ಶಿಕ್ಷೆಯಾಗಿತ್ತು..?


ತುಡಿತ: ಇಚ್ಛೆಯನರಿತು ನಡೆವ ಪತಿರಲು ಎನ್ನುವ ಆಸೆಯೇ ಎಲ್ಲರಲ್ಲೂ ಕಾಣುತ್ತದೆ. ಇಲ್ಲಿ ಚೇತನಾಳಿಗೆ ಇಚ್ಛೆಯನ್ನರಿತು ನಡೆದ ಪತಿಯ ಅಮ್ಮ ಸಿಕ್ಕಿದರು. ಅವರು ತಮ್ಮ ಮಗನಿಗೆ ಹೇಳಿದ ಬುದ್ಧಿಮಾತೇನು..? ಚೇತನ ಹಾಗೂ ಯಶೋಧಾರ ಹೂವಿನ ಮನಸ್ಸುಗಳು ಇಷ್ಟವಾದವು.


ಅವನಿಕಾ: 33 ನಾಯಿಗಳನ್ನು ತನ್ನ ಮಕ್ಕಳಂತೆ ಪೋಷಣೆ ಮಾಡುತ್ತಿದ್ದ ಅವನಿ ಕಾಳಿಗೆ ಅವಳು ಕೊಟ್ಟ ಪ್ರೀತಿಯ ಎರಡರಷ್ಟು ಪ್ರೀತಿ ಅವುಗಳಿಂದ ಸಿಗುತ್ತಿತ್ತು. ಅವನಿಕಾಳ ಬದುಕಿನ ಬದಲಾದ ರೀತಿ ಮಧುವಿನ ಕಣ್ಣಲ್ಲಿ ಕಂಡ ಕಥೆ ಇದು.


ಮುನಿಸು: ದಂಪತಿಗಳು ಪುಟ್ಟ ಕಾರಣವೊಂದಕ್ಕೆ ಮುನಿಸಿಕೊಂಡಿದ್ದ ಮನಸ್ಸುಗಳೆರಡು ಒಂದಾಗಬೇಕಾದರೆ, ಅವರು ಪಡುವ ಪಶ್ಚಾತ್ತಾಪ, ಬದಲಾವಣೆಯನ್ನು ತೋರಿದ ಹಾದಿ ಮಾದರಿಯಂತಿದೆ.


ಪಶ್ಚಾತ್ತಾಪ: ಕೆಲವೊಮ್ಮೆ ಅವಸರ ಅಥವಾ ಸಮಯ ಎರಡೂ ಹೇಳಬೇಕಾದ ವಿಚಾರವನ್ನು ಹಾಗೂ ಕೇಳಬೇಕಾದ ವಿಚಾರವನ್ನು ತಪ್ಪಿಸುವುದಿದೆ. ಮಗನನ್ನು ಅಮ್ಮನಂತೆಯೇ ಸಾಕಿದ ಪಾಪಮ್ಮನ ಸಾವಿನ ಸುದ್ದಿ ಐದು ದಿನದ ನಂತರ ತಿಳಿದಾಗ ಪಟ್ಟ ಪಶ್ಚಾತ್ತಾಪ ನಮ್ಮನ್ನೂ ಕಾಡುತ್ತದೆ.


ಜವಾಬ್ದಾರಿ: ಸುರೇಶ ತನ್ನ ಅಪ್ಪ-ಅಮ್ಮನ ತಪ್ಪನ್ನು ತನ್ನ ಅಕ್ಕನಿಗೆ ಹಾಗೂ ಅವಳ ದುಡುಕಿನ ತೀರ್ಮಾನವನ್ನು ಮನದಟ್ಟು ಮಾಡಿಸಿ, ಜವಾಬ್ದಾರಿಯನ್ನು ಹಂಚಿದ ಕಥೆ ನಿಜಕ್ಕೂ ಮಾದರಿಯಂತಿದೆ. ಇಂತಹ ಸಹಕಾರ ಎಲ್ಲರಿಗೂ ಸಿಕ್ಕರೆ ಸಂಸಾರಗಳೆಷ್ಟು ಸುಮಧುರ..!


ಸಂಚು(ನೀಳ್ಗತೆ): ನಕ್ಸಲರಾಗಿ ಬದುಕುತ್ತಿದ್ದವರ ಗುಂಪನ್ನು ಚಾಕಚಕ್ಯತೆಯಿಂದ ಹಿಡಿದ ಕಥೆ ಇದು. ಅಷ್ಟೇ ಅಲ್ಲದೆ ಅವರ ಗುಂಪಿನಲ್ಲಿ ಹುಚ್ಚಿಯಂತೆ ವರ್ತಿಸುತ್ತಿದ್ದ ಹುಡುಗಿಯೊಬ್ಬಳಿದ್ದಳು. ಆದರೆ, ಅವಳು ಅವರೊಡನೆ ಮೊದಲಿನಿಂದಲೂ ಇರಲಿಲ್ಲ. ಕಥೆಯ ತಿರುವಿರುವುದು ಇಲ್ಲಿ ನ ಅವರಿಗಿಂತ ಕ್ರೂರಿಯಾಗಿದ್ದ ಅವಳ ಸಂಚು ಬಯಲಾದದ್ದು ಹೇಗೆ..? ಒಂದೊಳ್ಳೆ ರೋಚಕ ಕಥೆ.


ಮುನಿಸು: "ನಾಳೆ ಹುಟ್ಟುವ ಮಗು ನಿಮ್ಮ ಹಾದಿ ಹಿಡಿದರೆ.." ಎನ್ನುವ ಸಾಕ್ಷಿಯ ಮಾತಿನಲ್ಲಿ ಇದ್ದ ಎರಡರ್ಥವನ್ನು ಆತ ಗಮನಿಸದೆ ಮುನಿಸಿಕೊಂಡು ಹೊರಟಿದ್ದವನಿಗೆ ವಿರುದ್ಧ ದಂಪತಿಗಳು ಅರ್ಥ ಮಾಡಿಸಿದ ಸತ್ಯ ಏನಿತ್ತು..?


ಗಂಗಾ ಕೌಸಲ್ಯ: ತವರಿನಿಂದ ಬಂದಿದ್ದ ಹಸು ಗಂಗೆ ಹಾಗೂ ಕೌಸಲ್ಯಳ ಅನುಬಂಧದ ಅನುಭೂತಿಯ ವಿಭಿನ್ನ ಕಥೆ. ಈ ಕಥಾ ಸಂಕಲನದಲ್ಲಿ ನನಗೆ ಅಚ್ಚುಮೆಚ್ಚಿನ ಕಥೆ ಇದು.


ಮಾಡಿದ್ದುಣ್ಣೋ ಮಹಾರಾಯ: ಪಲ್ಲವಿ ಊರಿಗೆ ಬಂದಿದ್ದ ಸಮಯದಲ್ಲಿ ನಡೆದ ಘಟನೆಯೊಂದು ಅವಳಿಗೆ ಅವನ ಹಿಂದಿನ ಬದುಕನ್ನು ನೆನಪಿಸಿತ್ತು ಜೊತೆಗೆ ಈಗಿನ ಗತಿಯನ್ನೂ .. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ತನ್ನ ಕೆಟ್ಟ ಕರ್ಮಗಳ ಫಲ ತಾನೇ ಅನುಭವಿಸುವಂತಾದ ಘಟನೆ ಇದು.


ಇಷ್ಟು ಕಾಲ ಒಟ್ಟಿಗಿದ್ದು: ಎಷ್ಟು ಕಾಲ ಒಟ್ಟಿಗಿದ್ದವರೇ ಆರಿಯದ ವಿಚಾರಗಳನ್ನು ಆರು ತಿಂಗಳ ದಾಂಪತ್ಯದಲ್ಲಿದ್ದವರು ಎಷ್ಟು ಅರಿತಿದ್ದರು..?


ಓ ಮೌನ ಮಾತಾಡು: ಸಾವಿತ್ರಿ ಅಷ್ಟು ದಿನವೂ ಒಳಗೊಳಗೆ ಮನಸ್ಸಿನಲ್ಲಿ ಬಿಕ್ಕಿ ಬಿಕ್ಕಿ ಅತ್ತ ದಿನಗಳು ಮುಗಿದ ಸಂದರ್ಭದಲ್ಲಿ, ನಾನು ಅತ್ತರೆ ಇನ್ನೂ ಆನಂದಭಾಷ್ಪವೇ ಎಂದುಕೊಂಡಿದ್ದವಳು ಜೀವಕ್ಕೆ ಕೊಟ್ಟ ಬೆಲೆ ಏನಿತ್ತು ..?


ತಪ್ಪಿದ್ದೆಲ್ಲಿ?: ಪ್ರೀತಿ-ಪ್ರೇಮದ ಹೆಸರಿನಲ್ಲಿ ತಪ್ಪಿ ನಡೆಯುವ ಯುವಜನತೆ ತಮ್ಮ ತಪ್ಪಿಗೆ ತಾವೇ ಅನುಭವಿಸಬೇಕಾದ ಶಿಕ್ಷೆಯ ವಾಸ್ತವದ ಕಥೆ ಇಲ್ಲಿದೆ.


ಸಪ್ತಸಾಗರದಾಚೆ: ಕಲಿಯಬೇಕು ಎಂದಿದ್ದ ವಳನ್ನು ಮಗು ನೋಡಿಕೊಳ್ಳಲು ಸಪ್ತಸಾಗರದ ಆಚೆಗೆ ಕಳುಹಿಸಿದ್ದ ತಾಯಿಯ ಕೊರಗು ಮಗಳನ್ನು ನೋಡಿದಾಗ ಏನಾಗಿತ್ತು..? ಎಲ್ಲವನ್ನು ಮೀರುವಂತೆ ಬೆಳೆದಿದ್ದ ಮಗಳು ಅಲ್ಲಿಗೆ ಬಂದದ್ದೇಗೆ..?


ಮಳೆಗಾಲದ ಒಂದು ಮುಂಜಾನೆ: ಮಳೆಗಾಲದ ಒಂದು ಮುಂಜಾನೆಯಲ್ಲಿ ಆಕೆ ಕಾಯುತ್ತಿದ್ದವರು ಬಂದಾಗಿನ ಅವಳ ಭಾವ ತುಂಬಿದ ಸ್ವಗತ ಇಲ್ಲಿದೆ.


ಆದರ್ಶವಾದಿ: ಕಾಲೇಜಿನಲ್ಲಿದ್ದಾಗ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾಶೀಲನಾಗಿದ್ದ ವರುಣ್ ಆದರ್ಶವಾದಿಯೂ ಆಗಿದ್ದ. ಓದುವಾಗ ಇದ್ದ ಆದರ್ಶ ಮುಂದುವರೆಯುವುದು ಕಡಿಮೆ. ಆದರೆ, ವರುಣ್ ಅಂತಹವನಲ್ಲ ಎಂದು ಅರಿವಾದ ಗಳಿಗೆ ಯಾವುದು..?


ಸಣ್ಣ ಕಥೆಗಳನ್ನು ಅದರಲ್ಲಿಯೂ ಕೌಟುಂಬಿಕ ಇಷ್ಟಪಟ್ಟು ಓದುವ ನನಗೆ ಇದು ಭರ್ಜರಿ ಓದು. ಹಲವಾರು ಕಥೆಗಳಲ್ಲಿ ನೀಡಿರುವ ಮುಕ್ತಾಯ ಭಾವ, ಯುನಿಕ್ ಟಚ್ ಎರಡನ್ನು ಮೇಳೈಸಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ, ಆದರ್ಶಗಳು ಅಡಗಿರುವ ಕಥೆಗಳ ಓದು ಇಷ್ಟವಾಯಿತು.

~ ವಿಭಾ ವಿಶ್ವನಾಥ್

ಗತ್ಯಂತರ (ಪುಸ್ತಕ ಯಾನ - 467)


ಪುಸ್ತಕದ ಶೀರ್ಷಿಕೆ : ಗತ್ಯಂತರ

ಲೇಖಕರು : ಶ್ರೀಮತಿ ಮಾಲತಿ ರಾಮಕೃಷ್ಣ ಭಟ್

ಪ್ರಕಾಶಕರು : ರೇಖಾ ಪ್ರಕಾಶನ

ಪ್ರಥಮ ಮುದ್ರಣ : 2024

ಪುಟಗಳು : 156

ಬೆಲೆ : 195 ರೂ.


ಇದು ನಾನು ಓದುತ್ತಿರುವ ಇವರ ಎರಡನೇ ಕೃತಿ. ಲೇಖಕಿಯ ಮೂರನೇ ಕಾದಂಬರಿ.


ಮೊದಲಿಗೆ ನನಗೆ ಈ ಕೃತಿಯ ಅರ್ಪಣೆ ಬಹಳ ಇಷ್ಟವಾಯಿತು. "ಆತ್ಮವಿಶ್ವಾಸ ಬದುಕಿನ ಪಥವನ್ನು ಹಿಗ್ಗಿಸುತ್ತದೆ ಎಂದು ನಂಬಿದ ಲೋಕದ ಎಲ್ಲಾ ಹೆಣ್ಣು ಮಕ್ಕಳಿಗೆ ಈ ಕೃತಿಯನ್ನು ಅರ್ಪಿಸುತ್ತಿದ್ದೇನೆ" ಎನ್ನುತ್ತಾರೆ ಲೇಖಕಿ.


"ಎಲ್ಲರ ಜೀವನದಲ್ಲೂ ಏಳು ಬೀಳುಗಳು ಸರ್ವೇಸಾಮಾನ್ಯ. ಬಿದ್ದು ಎದ್ದೇಳಬೇಕೇ ಹೊರತು ಎದ್ದು ಬೀಳಬಾರದು." ಎಂಬ ಲೇಖಕಿಯ ನುಡಿ ಎಚ್ಚರಿಕೆಯಂತೆಯೂ, ಬುದ್ಧಿ ಮಾತಿನಂತೆಯೂ ಸೂಕ್ತವಾಗಿದೆ.


ಅಪರ್ಣಳ ಬದಲಾದ ಬದುಕು ತೆರೆದುಕೊಳ್ಳುವಂತೆಯೇ ಅವಳ ಗತ ಜೀವನವು ತೆರೆದುಕೊಳ್ಳುತ್ತದೆ. ಹಳ್ಳಿಯಲ್ಲಿ ಹೈನುಗಾರಿಕೆಯಿಂದ ಹಾಲು ಹಂಚುತ್ತಾ ನ್ಯಾಯಯುತವಾಗಿ ಬದುಕುತ್ತಿದ್ದ ಕನ್ನೇಶಗೌಡರ ಕುಟುಂಬದ ಪರಿಚಯವಾಗುತ್ತದೆ. ಅದು ಅವರ ಅಮ್ಮನ ತಂದೆಯ ಮನೆ ನ


ಅಪರ್ಣಳ ಬಾಲ್ಯ ಕಳೆದದ್ದು ಅಜ್ಜನ ಊರು ಪಿರಿಯಾಪಟ್ಟಣದಲ್ಲಿಯೇ. ಕನ್ನೇಶಗೌಡರಿಗೆ ಮೂವರು ಮಕ್ಕಳು ಶಿವಪ್ಪ, ಸೋಮು ಹಾಗೂ ಮಗಳು ಲಕ್ಷ್ಮಿ.


ಹಿರಿಯ ಮಗ ಶಿವಪ್ಪನಿಗೆ ರವೀಂದ್ರ, ಸುಧೀಂದ್ರ ಎಂಬ ಗಂಡು ಮಕ್ಕಳು. ಕಿರಿಯ ಮಾವ ಸೋಮುವಿಗೆ ರಂಜನ ಎಂಬ ಮಗಳು. ಅಪರ್ಣಳನ್ನು ಯಾರೂ ಬೇರೆ ಎಂಬಂತೆ ನೋಡದೆ ಮಮತೆ, ವಾತ್ಸಲ್ಯದಿಂದ ಕಾಣುತ್ತಿದ್ದರು. ಅಪರ್ಣ ಎಲ್ಲರ ಬಾಯಲ್ಲೂ ಅಪ್ಪಿಯಾಗಿ ಮನಸ್ಸಿಗೆ ಹತ್ತಿರವಾಗಿದ್ದಳು.


ಅಜ್ಜ-ಅಜ್ಜಿ ಇಳಿಯ ವಯಸ್ಸಿನಲ್ಲಿಯೂ ತಮ್ಮ ಗಂಡು ಮಕ್ಕಳಿಗೆ ಮಗಳನ್ನು ಯಾವುದಕ್ಕೂ ಕೊರತೆ ಮಾಡುವಂತೆ ನೋಡಿಕೊಳ್ಳಿರೆಂದು ಪದೇಪದೇ ಹೇಳುತ್ತಿದ್ದರು. ಅಷ್ಟಕ್ಕೂ ಲಕ್ಷ್ಮಿಯ ಬಾಳಿನ ಕಥೆ ಏನಿತ್ತು ..?


ಅತ್ತೆ-ಮಾವನಿಗೆ ತಮ್ಮ ಹಿರಿಯ ಮಗ ರವೀಂದ್ರ ಹಾಗೂ ಅಪ್ಪುವನ್ನು ಜೋಡಿಯಾಗಿ ಕಾಣುವಾಸೆ. ಆದರೆ ಅಪರ್ಣಳ ಮನಸ್ಸಿಗೆ ಇದು ಹಿಡಿಸುತ್ತಿರಲಿಲ್ಲ.ಕಷ್ಟದಲ್ಲಿ ಆಸರೆಯಾಗಿದ್ದ ಅಣ್ಣನ ಮಾತನ್ನು ತೆಗೆದು ಹಾಕದ ಅಮ್ಮನ ಅಸಹಾಯಕತೆ, ಜೊತೆಗೆ ತಾನು ಮುಂದಕ್ಕೆ ಓದಬೇಕು ಎನ್ನುವ ಅವಳ ಆಸೆ ಅಮ್ಮನ ಬಳಿ ಮನಬಿಚ್ಚಿ ಮಾತನಾಡುವಂತೆ ಮಾಡಿತು. ರವೀಂದ್ರ ಹಾಗೂ ಸುಧೀಂದ್ರ ಹರೆಯದ ಅಪರ್ಣ ಕಣ್ಣಲ್ಲಿ ಕಾಣುತ್ತಿದ್ದದ್ದು ಹೇಗೆ..?


ಅಮ್ಮ ತನ್ನ ಓದಿನ ಕುರಿತಾಗಿ ಮಾವನ ಬಳಿ ಮಾತನಾಡುವುದಾಗಿ ಹೇಳಿದವರು ಸೋಮು ಮಾವ ಕಮಲತ್ತೆಯ ಜೊತೆಗೆ ಪುಣ್ಯಕ್ಷೇತ್ರದ ಯಾತ್ರೆಗೆಂದು ಹೊರಟು, ಅವರೊಡನೆ ಹೋಗಿ ಬಂದು ಮಾತನಾಡುತ್ತೇನೆಂದು ಹೇಳಿದ್ದರು. ಆದರೆ ಅಲ್ಲಿಂದ ವಾಪಾಸ್ ಬಂದದ್ದು ಕಮಲತ್ತೆ ಮಾತ್ರವೇ..!


ಮನೆಯ ಇಬ್ಬರು ಸದಸ್ಯರನ್ನು ಕಳೆದುಕೊಂಡ ಮನೆಗೆ ಹೇಗಿತ್ತು..? ಶಿವಪ್ಪ ಮಾವ ಮತ್ತು ದೊಡ್ಡತ್ತೆ ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಿದ ಪರಿ ಹೇಗೆ..?


ಅಮ್ಮನನ್ನು ಕಳೆದುಕೊಂಡ ದುಃಖದಿಂದ ಹೊರಬರಲೆಂದು ತಾತ್ಕಾಲಿಕವಾಗಿ ಅಪರ್ಣ ಓದಲು ಒಪ್ಪಿದರೂ.. ನಂತರ ರವೀಂದ್ರ ಹಾಗೂ ಆಕೆಯ ವಿವಾಹದ ಪ್ರಸ್ತಾಪವನ್ನು ಮಾಡಿದಾಗ ಗಟ್ಟಿಯಾಗಿ ನಿರಾಕರಿಸಿದ ಅಪರ್ಣಳಿಗೆ ಧೈರ್ಯ ತುಂಬಿದ್ದು ಯಾವುದು..? ಒಲ್ಲದ ಮದುವೆ ಬೇಡವೆಂದು ಶಿವಪ್ಪನವರು ತಳೆದ ಪ್ರಬುದ್ಧ ನಿರ್ಧಾರವೂ ಇಲ್ಲಿದೆ.


ರವೀಂದ್ರನಿಗೇನೋ ಅಹಲ್ಯಾ ಎಂಬ ದೂರದ ಸಂಬಂಧಿಕರ ಮಗಳೊಡನೆ ಮದುವೆಯಾಯಿತು. ಆದರೆ, ಅಪರ್ಣಳನ್ನು ಮನೆಯಲ್ಲಿ ಕಾಣುವ ಬಗೆ ಹೇಗಿತ್ತು..?


ಮುಂದೆ ರಂಜನಿಯ ಮದುವೆಯೂ ದೂರವೇನಿರಲಿಲ್ಲ. ರಾಘವ ಎನ್ನುವ ಗುಣವಂತ ಹುಡುಗ ಮನೆಯ ಅಳಿಯನಾಗಿ ಬಂದಿದ್ದ. ದೊಡ್ಡಪ್ಪನ ನೆರಳಿನಲ್ಲಿ ಬೆಳೆದ ರಂಜನಿ ಮನೆಯ ಜವಾಬ್ದಾರಿ ಹೊರದಿದ್ದರೂ.. ತನ್ನದೇ ಪುಟ್ಟ ಆದಾಯದ ದಾರಿ ಕಂಡುಕೊಂಡಿದ್ದ ಬಗೆ ಹೇಗಿತ್ತು..? ಕೇವಲ ವಿದ್ಯೆಯಿಂದ ಮಾತ್ರವೇ ಕೆಲಸ ಎನ್ನುವವರಿಗೆ ಹೆಚ್ಚು ಓದದ, ತನ್ನದೇ ದುಡಿಮೆಯ ದಾರಿ ಹಿಡಿದ ರಂಜನಿ ಮಾದರಿಯಾಗುತ್ತಾಳೆ. ಸದ್ಯಕ್ಕೆ ಆ ಮನೆಯಲ್ಲಿ ಅಪ್ಪನ ಆಪ್ತ ಜೀವವೆಂಬಂತಿದ್ದ ರಂಜನಿಯಿಂದಲೇ ಮನೆಯ ವಿದ್ಯಾಮಾನಗಳು ಅರಿವಾಗುತ್ತವೆ. 


ಮದುವೆ ಮುಗಿಸಿ ಹೊರಟುವಷ್ಟರಲ್ಲಿ ರವೀಂದ್ರ ಅಲ್ಲದಿದ್ದರೆ ಸುರೇಂದ್ರನನ್ನಾದರೂ ಮದುವೆಯಾಗು ಎನ್ನುವ ಪ್ರಸ್ತಾಪವನ್ನು ನಿರಾಕರಿಸಿ ದಿಟ್ಟವಾಗಿ ತನ್ನ ಪ್ರೀತಿಯ ವಿಚಾರವನ್ನು ಹೇಳಿಯೇ ಹೊರಡುತ್ತಾಳೆ. ಅದರ ಪರಿಣಾಮವೇನಿತ್ತು..? 


ಮುಂದೆ ಆ ಮನೆಯ ನಂಟು ಕಡಿದೇ ಹೋಯಿತು ಎನ್ನುವಂತೆ ಬದುಕುವ ಅಪರ್ಣಳ ಬದುಕಿನಲ್ಲಿ ವೇಣುವಿನ ಅಧ್ಯಾಯ. ಆತನ ಮನೆಯಲ್ಲಿ ಒಪ್ಪಲಿಲ್ಲವಾದ ಕಾರಣ ದೇವಸ್ಥಾನವೊಂದರಲ್ಲಿ ವಿವಾಹವಾಗುತ್ತಾರೆ. ಸರ್ಕಾರಿ ಸ್ವಾಮ್ಯದ ಕೃಷಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿಯ ಕೆಲಸವೂ ಸಿಗುತ್ತದೆ. ತಾಯಿಯಾಗುವ ಸೂಚನೆಯೂ ಸಿಗುವ ಅಪರ್ಣಳ ಬಾಳು ಪರಿಪೂರ್ಣವಾಯಿತು ಎನ್ನುವಷ್ಟರಲ್ಲಿ ಎಲ್ಲವೂ ತಲೆಕೆಳಗಾಗುತ್ತದೆ.


ವೇಣು ಅಪರ್ಣಳಿಂದ ದೂರವಾದ ಸಂದರ್ಭ ಯಾವುದು..? ಹೇಗೆ..? ಅನುರಾಧಳೊಡನೆ ಅಪರ್ಣ ಬರುಕು ಕಟ್ಟಿಕೊಂಡ ಬಗೆ ಹೇಗಿತ್ತು..? ಎಲ್ಲಿಯೂ ಅಡ್ಡದಾರಿ ಹಿಡಿಯದೆ, ಕೆಟ್ಟ ವಿಚಾರವನ್ನು ಮಾಡದೆ ಬದುಕುವ ಅಪರ್ಣಳ ಸಂಸ್ಕಾರವನ್ನು ತೋರುತ್ತದೆ ಬದುಕಿನ ರೀತಿ. ಹಳಿ ತಪ್ಪಿದ ತನ್ನ ಬದುಕು ತನ್ನವರಿಗೆ ಗೊತ್ತಾಗದಂತೆ ದೂರದಲ್ಲಿಯೇ ಬದುಕುತ್ತಿದ್ದಳು ಅಪರ್ಣ. ಎಲ್ಲರ ಕಣ್ಮಣಿಯಂತಿದ್ದ ಅಪರ್ಣಳನ್ನು ಮನೆಯವರು ಹುಡುಕಲಿಲ್ಲವೇ..?


ಎಷ್ಟೋ ಬಾರಿ ರಕ್ತ ಸಂಬಂಧಗಳಲ್ಲದ ಬಂಧಗಳು ಬೆಸೆದುಕೊಳ್ಳುತ್ತವೆ. ಹಾಗೆ ಬೆಸೆದುಕೊಂಡ ಬಂಧ ಕುಮುದಾಳದ್ದು. ಸ್ವಂತ ಸೋದರಿ ಎನ್ನುವಷ್ಟು ಅಕ್ಕರೆ ತೋರುವ, ಹಿಂದಿನ ವಿಚಾರವನ್ನು ಕೆದಕದ ಕುಮುದಾ ಆಸರೆಯಾದಳು ಎಂದರೂ ತಪ್ಪಾಗಲಾರದು. ಮುಂದೆ ಕುಮುದಾಳ ಓತ್ತಾಯದಿಂದ ಮನೆಯಲ್ಲಿ ದೇವರನಾಮ, ಭಾವಗೀತೆ ಎಂದು ಲಘುಸಂಗೀತದ ತರಗತಿ ಮಾಡಿ ತನ್ನ ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳುತ್ತಿದ್ದಳು. ಸಂಗೀತ ಅವಳ ಮನದ ಮದ್ದಾಯಿತು ಸಹ.


ಅಚಾನಕ್ಕಾಗಿ ಎದುರಾದ ಸಂದರ್ಭದಲ್ಲಿ ರಂಜನಿ ಹಾಗೂ ಸುರೇಂದ್ರರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡುತ್ತಾಳೆ. ಆ ಸಂದರ್ಭ ಯಾವುದು..?


ತವರಿನಲ್ಲಿ ಜನಗಳು ಬದಲಾಗಿದ್ದರು. ಅವರ ವಾತ್ಸಲ್ಯವಂತೂ ಬದಲಾಗಿರಲಿಲ್ಲ ಎಂದು ಅರಿವಾಗಲು ರಂಜನಿ ಸೇತುವೆಯಾದಳು. ಮುರಿದಿದ್ದ ಮನಗಳು ಬೆಸೆದವು ಎನ್ನುವಂತೆ ಅಪರ್ಣ ತನ್ನ ಮಗಳೊಂದಿಗೆ ಅಲ್ಲಿಗೂ ಹೋಗಿ ಬಂದಳು. ಎಲ್ಲರಿಗೂ ಅವಳ ಬದುಕಿನ ವಿಚಾರ ತಿಳಿದಿದ್ದರೂ.. ತೀರಾ ನೋಯಿಸಲು ಮುಂದಾಗುತ್ತಿರಲಿಲ್ಲ. 


ರವೀಂದ್ರನಾಥ್ ಇಬ್ಬರು ಹೆಣ್ಣುಮಕ್ಕಳು, ರಂಜನಿಯ ಗಂಡು ಮಗುವಿನ ಜೊತೆಗೆ ಅನುರಾಧ ಚೆನ್ನಾಗಿ ಹೊಂದಿಕೊಂಡಳು. 


ಸುರೇಂದ್ರ ಇನ್ನು ಅವಿವಾಯಿತನಾಗಿದ್ದ. ಕೃಷಿ ಕುಟುಂಬದ ಬದುಕು ಹೇಗಿರುತ್ತದೆ ಎಂಬುದನ್ನು ರವೀಂದ್ರ ಹಾಗೂ ರಾಘವರ ಮೂಲಕ ತಿಳಿಯಬಹುದು. ಅಲ್ಲದೆ, ಸುರೇಂದ್ರನ ವಿವಾಹ ಇನ್ನು ಕೂಡಿ ಬರದ್ದಕ್ಕೆ ಕಾರಣವೇನು..? ಅವನ ನೆಚ್ಚಿನ ಹವ್ಯಾಸಕ್ಕೆ ಮನೆಯವರ ಸಹಕಾರ ಹೇಗಿತ್ತು..?


ಈಗಲೂ ಮನೆಯವರ ಮನಸ್ಸಿನಲ್ಲಿ ಅಪರ್ಣ ಹಾಗೂ ಸುರೇಂದ್ರರ ಜೋಡಿಯ ಕನಸಿದ್ದರೂ ಪ್ರಸ್ತಾಪಿಸಲು ಹಿಂದೆಗೆದಿದ್ದರು. ಮುಂದೇನಾಯಿತು ..?


ಮಾಗಿದ ಮನಸ್ಥಿತಿ ಬಹಳವೇ ಪಾಠ ಕಲಿಸಿತ್ತು. ಅವಿಭಕ್ತ ಕುಟುಂಬದ ಮೂಲಮಂತ್ರವಾದ ಒಗ್ಗಟ್ಟು ಇಲ್ಲಿ ಎದ್ದು ಕಾಣುತ್ತಿತ್ತು. ಹಿರಿಯ ಸೊಸೆಯಾಗಿ ಅಹಲ್ಯಾಳ ಗಂಭೀರ ನಡೆ ಅಪರ್ಣಳನ್ನು ಆಕರ್ಷಿಸಿತ್ತು. ಆಕೆಯೇ ಸರಿಯಾದ ಸೊಸೆ ಎಂದೆನಿಸಿತ್ತು. ಅಲ್ಲಿ ಹೊಟ್ಟೆಕಿಚ್ಚು, ಸೋಮಾರಿತನಕ್ಕೆ ಆಸ್ಪದವಿರಲಿಲ್ಲ.


ಎಲ್ಲರ ಬದುಕಿನ ಮುಂದಿನ ಹದಿನೈದು ವರ್ಷಗಳ ಬದುಕನ್ನು, ಪ್ರಬುದ್ಧ ನಡೆಯನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಹೊಂದಾಣಿಕೆ, ಸುಧಾರಣೆಗಳು ಕೆಲವೊಮ್ಮೆ ಹಿರಿಯರಿಗೂ.. ಕಿರಿಯರಿಗೂ.. ಇರುಸುಮುರಿಸಾದರೂ ಹೊಂದಿಬಾಳುವ ಗುಣ ಎಲ್ಲರಲ್ಲಿಯೂ ಇತ್ತು.


ಎಷ್ಟೋ ಹೆಣ್ಣುಮಕ್ಕಳು ಅಪರ್ಣಾಳ ಹಾದಿಯನ್ನೇ ಹಿಡಿದು ಬಿದ್ದಿರಬಹುದು. ಆದರೆ, ಮೇಲೆದ್ದು.. ಮತ್ತೆ ಬೀಳದಂತೆ ಬದುಕಲು ಅಪರ್ಣ ಆದರ್ಶವಾಗಿದ್ದಾಳೆ.


ಈ ಕಾದಂಬರಿ ಕೌಟುಂಬಿಕ ಮೌಲ್ಯಗಳನ್ನು, ಬದುಕಿನ ರೀತಿ ನೀತಿಗಳನ್ನು ತೆರೆದಿಟ್ಟಂತೆಯೇ.. ಕೃಷಿ ಕುಟುಂಬದ ಗಂಡು ಮಕ್ಕಳ ಮದುವೆಯ ಸಮಸ್ಯೆಯನ್ನೂ ಓದುಗರಿಗೆ ತೋರುತ್ತದೆ. ಕೂಡು ಕುಟುಂಬದ ಮೌಲ್ಯವನ್ನು ಅರಿವಾಗಿಸುತ್ತದೆ. ಅಲ್ಲಿಯ ಸಂಸ್ಕೃತಿ ನೀಡುವ ಸಾಂಸ್ಕೃತಿಕ ಮೌಲ್ಯಗಳು ಹೊಂದಾಣಿಕೆ, ಹೊಂದಿ ಬಾಳುವಿಕೆ ಎಲ್ಲವೂ ಇಷ್ಟವಾಯಿತು. ಇಲ್ಲಿ ಯಾರೂ ಕೆಟ್ಟವರಂತೆ ಬಿಂಬಿತವಾಗಿಲ್ಲ. ಬದಲಾಗಿ, ಬದಲಾದ ಬದುಕಿನಲ್ಲಿ ಸಮಯವೇ ಅವರನ್ನು ಬದಲಾಯಿಸುತ್ತದೆ. ಮನುಷ್ಯ ನೋಡುವ ನೋಟ ಕಾಲದೊಡನೆ ಬದಲಾಗುತ್ತದೆ. ಅಂತೆಯೇ .. ಕೆಲವೊಮ್ಮೆ ಸಂದರ್ಭ ಮನುಷ್ಯನನ್ನು ಕೆಟ್ಟವನನ್ನಾಗಿ ತೋರಬಹುದೇನೋ.. ಆದರೆ ಸ್ವಭಾವತಃ ಕೆಟ್ಟವರಿರಲಾರರು ಎನ್ನುವ ಸಾತ್ವಿಕ ನೋಟ ಬಹಳವೇ ಹಿಡಿಸಿತು. ಸುಂದರ ಕಾದಂಬರಿಯ ಚೆಂದದ ಓದು. ಲೇಖಕಿಯ ನುಡಿಯ ಸಾಲುಗಳನ್ನು, ಆಶಯವನ್ನು ಸಮರ್ಥವಾಗಿ ಬಿಂಬಿಸಿದೆ.


ಫೀಲ್ ಗುಡ್, ರಿಫ್ರೆಶಿಂಗ್ ಎನಿಸುವ ಹಾಗೂ ಮನಸ್ಸಿಗೆ ಬಹಳ ಮುದ ನೀಡುವ ಕಾದಂಬರಿಯ ಓದು. 


~ವಿಭಾ ವಿಶ್ವನಾಥ್

ಭಾನುವಾರ, ಜುಲೈ 12, 2026

ಮಗಳಿಗೋಸ್ಕರ ಮಾತ್ರವೇ..! (ಬೆಳಕಿಂಡಿಯ ಕತೆಗಳು - 53)


ಪರಿಚಯವಿದ್ದರೂ ಮುಗುಳ್ನಗೆ ಬೀರಿ ಸುಮ್ಮನಾಗುತ್ತಿದ್ದ ಅಮ್ಮ ಮಗಳ ಖುಷಿಗಾಗಿ ಈಗ ಅಪರಿಚಿತರನ್ನೂ ಪರಿಚಯವೆಂಬಂತೆ ಮಾತನಾಡಿಸುತ್ತಾಳೆ.. ಮುಗುಳ್ನಗುತ್ತಾಳೆ, ಸ್ನೇಹಿತರಾಗಿಸಿಕೊಳ್ಳಲು ಮುಂದಾಗುತ್ತಾಳೆ. 

ಮಗಳಿಗೆ ಹೊಸ ಜಗತ್ತನ್ನು ಪರಿಚಯಿಸಲು ತನ್ನ ಜಗತ್ತನ್ನು ಹಿಗ್ಗಿಸಿಕೊಳ್ಳುತ್ತಿದ್ದಾಳೆ. ಅಂತರ್ಮುಖಿ ಅಮ್ಮನೀಗ ಎಕ್ಸ್ಟ್ರೋವರ್ಟ್ ಆಗುತ್ತಿದ್ದಾಳೆ. ಮಗಳಂತೆಯೇ... ಮಗಳಿಗೋಸ್ಕರ ಮಾತ್ರವೇ..!

~ವಿಭಾ ವಿಶ್ವನಾಥ್