ಪುಸ್ತಕದ ಶೀರ್ಷಿಕೆ : ಮಂಜು ಮುಸುಕಿದ ಹಾದಿ
ಲೇಖಕರು : ಶೈಲಜಾ ಪ್ರಕಾಶ್
ಪ್ರಕಾಶಕರು : ಶ್ರೀ ಕೃಷ್ಣ ಪ್ರಕಾಶನ
ಪ್ರಥಮ ಮುದ್ರಣ : 2022
ಈ ಪುಸ್ತಕ ಮಂಜು ಮುಸುಕಿದ ಹಾದಿ, ಟೀಚರ್ ಹಾಗೂ ಚಿಂಪು ಎನ್ನುವ ಮೂರು ಕಿರುಕಾದಂಬರಿಗಳು ಸಂಪುಟ ಇದು.
ಇಂದು ಮಂಜು ಮುಸುಕಿದ ಹಾದಿ ಕಾದಂಬರಿಯನ್ನು ಮಾತ್ರ ಪರಿಚಯಿಸುತ್ತಿದ್ದೇನೆ.
ಮಂಜು ಮುಸುಕಿದ ಹಾದಿ ಸಾಮಾಜಿಕ ಶೈಲಿಯ ಕಾದಂಬರಿ. ಮುಖ್ಯವಾಗಿ ಕೌಟುಂಬಿಕ ಪರಿಸರವನ್ನು ಕಟ್ಟಿಕೊಡುತ್ತಾ.. ಮನುಷ್ಯನ ಜೀವನ ಸದಾ ಬೆಳಕಿನಲ್ಲಿರದೆ ಮಂಜು ಮುಸುಕಿದ ಹಾದಿಯಲ್ಲಿಯೂ ನಡೆಯಬೇಕಾದ ಸಂದರ್ಭಗಳನ್ನು ತೋರಿಸುತ್ತಾರೆ. ಅಂತಹ ಸಂದರ್ಭದಲ್ಲಿ ದಾರಿ ಸರಿಯಾಗಿ ಕಾಣದೆ.. ಕಲ್ಲು, ಮಣ್ಣು, ಮುಳ್ಳು, ಹಳ್ಳ-ಕೊಳ್ಳಗಳನ್ನು ದಾಟುವ ಸಂದರ್ಭ ಬಂದಾಗ ಅವೆಲ್ಲವನ್ನು ಎದುರಿಸಿ ಹೇಗೆ ಸಾಗುತ್ತಾರೆ ಹಾಗೂ ಅವೆಲ್ಲವೂ ಅವರ ಬದುಕಿನಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ತರುತ್ತದೆ ಎಂಬುದನ್ನು ದಾರಿದೀಪದಂತೆ ತೋರಿದ್ದಾರೆ.
ಕಾದಂಬರಿಯ ನಾಯಕ ವಿಶ್ವನಾಥ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು, ನಂತರ ತಾಯಿಯನ್ನು ಕಳೆದುಕೊಂಡವನು. ಎಸ್. ಎಸ್. ಎಲ್. ಸಿ ಗೆ ಬರುವ ಹೊತ್ತಿಗೆ ಅನಾಥನಾಗಿದ್ದ ಆತನ ಹೊಣೆ ಹೊತ್ತವರು ಅವನ ಸೋದರ ಮಾವ ಸದಾಶಿವರಾವ್. ಸದಾಶಿವರಾವ್ ಅವರ ಮನೆಯಲ್ಲಿಯೇ ತನ್ನ ಮುಂದಿನ ದಿನಗಳನ್ನು ಕಳೆವ ಅವನಿಗೆ ಅಲ್ಲಿ ಸಿಗುತ್ತಿದ್ದದ್ದು ಊಟ ಹಾಗೂ ಉಳಿದುಕೊಳ್ಳುವ ಜಾಗವಷ್ಟೇ ಎಂದರು ತಪ್ಪಾಗಲಾರದು. ಆತ ಅದೆಲ್ಲಾ ಕಷ್ಟಗಳನ್ನು ದಾಟಿ ನಿಂತ ಬಗ್ಗೆ ಸ್ಪೂರ್ತಿದಾಯಕ.
"ಸಾಧನೆಗಳಲ್ಲಿ ನೆಲೆ ನಿಂತವನ ಬುದ್ಧಿಯು ಒಂದೇ ಮುಖವಾಗಿರುವುದು. ನೆಲೆ ಇಲ್ಲದವನ ಬುದ್ಧಿಯು ಮರದ ಅನೇಕ ಕೊಂಬೆಗಳ ತರಹ ಬೇರೆ ಬೇರೆಯಾಗಿರುತ್ತೆ
ಬದುಕುವುದು ಒಂದು ಕಲೆ!"
ಮುಂದೆ ಥಿಯೇಟರ್ ಕೆಲಸಕ್ಕೆ ಸೇರಿದಾಗ ಅಲ್ಲಿನ ಓನರ್ ಮಂಜಯ್ಯನವರ ಪ್ರೋತ್ಸಾಹದಿಂದ ನೈಟ್ ಕಾಲೇಜಿಗೆ ಹೋಗಿ ಓದಿ ಡಿಗ್ರಿ ಮುಗಿಸಿ ಒಳ್ಳೆಯ ಕೆಲಸಕ್ಕೂ ಸೇರುತ್ತಾನೆ.
ಇತ್ತ ಮತ್ತೊಂದು ಕುಟುಂಬದ ಪರಿಚಯ ಮಾಡಿಸುತ್ತಾರೆ. ಅದು ಅಡ್ವಕೇಟ್ ಆನಂದ ರಾವ್ ಅವರ ಕುಟುಂಬ. ಅವರ ಪತ್ನಿ ಮಂಗಳ. ಮದುವೆಯಾಗಿ 10 ವರ್ಷವಾದರೂ ಅವರಿಗೆ ಮಕ್ಕಳಿರಲಿಲ್ಲ. ಆನಂದರಾವ್ ಅವರ ಬುದ್ಧಿವಂತಿಕೆ ಹಾಗೂ ಗಳಿಸುವ ಕಲೆಯನ್ನು ಸೊಗಸಾಗಿ ಚಿತ್ರಿಸಿದ್ದಾರೆ.
ಆನಂದರಾಯರ ಏಕೈಕ ತಂಗಿ ಸರಸ್ವತಮ್ಮ. ಅವರ ಒಬ್ಬಳೇ ಮುದ್ದಿನ ಮಗಳು ಮಾಲತಿ. ಗಂಡನನ್ನು ಕಳೆದುಕೊಂಡಿದ್ದ ಸರಸ್ವತಮ್ಮನವರ ಆರೋಗ್ಯವು ಅಷ್ಟು ಸರಿ ಇರಲಿಲ್ಲ. ಆನಂದರಾಯರು ತಂಗಿಯ ಕಷ್ಟಕ್ಕಾಗುತ್ತಿದ್ದರು. ತಿಂಗಳಿಗೊಮ್ಮೆ ಬಂದು ಅವರ ಸಂಸಾರದ ನಿಗಾ ನೋಡುತ್ತಿದ್ದರು.
ಮುಂದೆ ವಿಶ್ವನಾಥ ಹಾಗೂ ಮಾಲತಿ ಇಬ್ಬರ ವಿವಾಹವಾಗುತ್ತದೆ. ಇದಕ್ಕೆ ಕಾರಣರು ಯಾರು..? ಅವರ ಬಂಧ ಕೂಡಿಬಂದದ್ದು ಹೇಗೆ..?
ಸೋದರಸೊಸೆ ಮಾಲತಿಯ ಬದುಕಿನಲ್ಲಿ ಮೊದಲಿನಿಂದಲೂ ಕಾಳಜಿ ಮಾಡುತ್ತಿದ್ದ ಆನಂದರಾಯರ ಮನಸ್ಸಿನಲ್ಲಿ ಏನಿತ್ತು ..?
ಆನಂದರಾಯರು ಅವರ ಸಂಸಾರಕ್ಕೆ ನೆರವಾಗುವಾಗ ಮಂಗಳಮ್ಮನವರ ಮನಸ್ಸಿನ ಭಾವಗಳೇನು..?
ಮದುವೆಯಾದ ನಂತರವೂ ಮಾಲತಿ ಓದಿನಲ್ಲಿ ಪ್ರಗತಿ ಸಾಧಿಸುವ ಬಗೆ ಸ್ಪೂರ್ತಿದಾಯಕವೆನಿಸಿತು. ಅಷ್ಟೇ ಅಲ್ಲದೆ ಮಾಲತಿಯ ಗಟ್ಟಿತನದ ವ್ಯಕ್ತಿತ್ವ ಇಲ್ಲಿದೆ. ಗಂಡನನ್ನು ವ್ಯರ್ಥವಾಗಿ ಕಾಲ ಕಳೆಯಲು ಬಿಡದೆ ಡಿಪಾರ್ಟ್ಮೆಂಟ್ ಎಕ್ಸಾಮ್ ಗಳನ್ನು ತೆಗೆದುಕೊಳ್ಳುವಂತೆ ಸ್ಪೂರ್ತಿ ತುಂಬಿ ಆತನ ವೃತ್ತಿ ಬದುಕಿನ ಮುನ್ನಡೆಗೆ ಕಾರಣವಾಗುತ್ತಾಳೆ. ವಿಶ್ವನಾಥ ಪತ್ನಿಯ ಬಗ್ಗೆ ಯಾವ ಭಾವವನ್ನು ಹೊಂದಿದ್ದ..?
ಮನುಷ್ಯನ ಬದುಕಿನಲ್ಲಿ ಸುಖ ಬಂದ ಹಾಗೆಯೇ ದುಃಖಗಳೂ ಹಿಂದೆಯೇ ಬರುತ್ತವೆ. ಸುಖಕ್ಕೆ ಅಣಿಯಾದಂತೆ ಕಷ್ಟಕ್ಕೂ ಅಣಿಯಾಗಿರಬೇಕು.
ಹಲವು ಸುಖಗಳನ್ನು ಮಾನವನು ಬಯಸಿ, ಬೇಡಿ ಪಡೆದರು ಮುಂದೆ ಅವೇ ಮುಳುವಾಗುತ್ತವೆ. ಮಾಲತಿ ಹಾಗೂ ವಿಶ್ವನಾಥರ ಬದುಕಿನಲ್ಲಿಯೂ ಅಂತಹ ಪ್ರಸಂಗ ಬಂದಿತು. ಅವರ ಬದುಕಿನಲ್ಲಿ ಮೂರು ವರ್ಷದಲ್ಲಿ ಬಹಳ ಬದಲಾವಣೆಗಳಾಗಿದ್ದು.. ಅವರ ಬದುಕಿನಲ್ಲಿ ಮಗಳು ಮೀನಾ ಬಂದಿದ್ದರೆ, ಉಳಿದವರೆಲ್ಲರೂ ಇದ್ದು ಇರದಂತಾಗಿದ್ದೇಕೆ.?
ಇದಾದ ಆರು ವರ್ಷಗಳಲ್ಲಿ ಮತ್ತೆ ಗಂಭೀರವಾದ ಬದಲಾವಣೆಗಳಾದವು. ಸಂಸಾರದಲ್ಲಿ ನಂಬಿಕೆ ಎನ್ನುವುದು ಎಷ್ಟು ಮುಖ್ಯ ಎನ್ನುವುದರ ಅರಿವಾಗುತ್ತದೆ. ಎಷ್ಟೇ ನಂಬಿಕೆ ಇದ್ದರೂ ಅದರ ಬುಡವನ್ನು ಅಲುಗಾಡಿಸುವಂತಹ ಕೆಲವು ಘಟನೆಗಳು, ಬೇರೆಯ ಕೋನದ ನೋಟ ಸುಖ ಸಂಸಾರಕ್ಕೆ ಎರವಾಗಬಲ್ಲವು. ಇದೆಲ್ಲವನ್ನು ಮೀರಿ ವಿಶ್ವನಾಥ ಹಾಗೂ ಮಾಲತಿಯರು ಗಟ್ಟಿಯಾದರೇ..?
ಅಕಸ್ಮಾತ್ ಇದೆಲ್ಲವನ್ನು ಬಗೆಹರಿಸಿಕೊಂಡರೂ.. ವಿಧಿಯ ಆಟ ಬೇರೆಯೇ ಇದ್ದರೆ..?
ವ್ಯಕ್ತಿಗಳ ನಡೆ ಸಮಯ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಇಲ್ಲಿಯೂ ಯಾರೂ ಅದಕ್ಕೆ ಹೊರತಾದವರಲ್ಲ. ಮಾಲತಿಯ ವ್ಯಕ್ತಿತ್ವ ಮಾತ್ರ ಮೊದಲಿನಿಂದ ಕೊನೆಯವರೆಗೂ ಬದಲಾದದ್ದು ಕಂಡುಬರಲಿಲ್ಲ. ಯಾರ ಮನಸ್ಸಿನಲ್ಲಿ ಯಾವ ಭಾವವಿರುತ್ತದೆಯೋ ಯಾರೂ ಅರಿತವರಲ್ಲ. ಆದರೆ, ನಕಾರಾತ್ಮಕ ಗುಣವನ್ನು ಬೆಳೆಯಲು ಬಿಡದೆ ಸಕಾರಾತ್ಮಕವಾಗಿ ಆಲೋಚಿಸುವ ಹಾಗೂ ಅಂತೆಯೇ ನಡೆಯುವ ಗುಣವಷ್ಟೇ ಸಮಾಜದಲ್ಲಿ ಅವರ ವ್ಯಕ್ತಿತ್ವವನ್ನು ಉಳಿಸಿಕೊಡಬಲ್ಲದು.
ವಿಶ್ವನಾಥ ಮಾಲತಿಯರ ಬದುಕಿನ ಮಂಜು ಮುಸುಕಿದ ಹಾದಿಯ ಚಿತ್ರಣ ಇಲ್ಲಿದೆ.
ಹಲವಾರು ನೋಟ್ ಮಾಡುವಂತಹ ಕೋಟ್ ಗಳಂತಹ ಮೌಲ್ಯಯುತ ಸಾಲುಗಳನ್ನು, ಗೂಡಾರ್ಥ ಉಳ್ಳ ನಿರೂಪಣೆಯನ್ನು ನಾವಿಲ್ಲಿ ಕಾಣಬಹುದಾಗಿದೆ. ಸೊಗಸಾದ ಕಾದಂಬರಿಯ ಓದು.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ