"ಅಯ್ಯೋ ಅಮ್ಮ, ನಿಮಗೆಲ್ಲಾ ಏನಾಗಿದೆ. ಏನು ಅವರೇನು ಈ ದೇಶದ ರಾಷ್ಟ್ರಪತಿನಾ.. ಅವರು ಬಂದರೆ ಎದ್ದು ನಿಲ್ಲುವುದೇನು.. ಅತಿ ಗೌರವ ಕೊಡುವುದೇನು..
ಅವರೇನು ಆಕಾಶದಿಂದ ಇಳಿದು ಬಂದಿದ್ದಾರಾ ಹೇಗೆ.. ಅವರು ಕೂಡಾ ನಮ್ಮ ಹಾಗೆಯೇ ಮನುಷ್ಯರು. ಅಲ್ಲವಾ ? ಶ್ರೀಮಂತರಾದರೆ ಅದು ಅವರ ಮನೆಯಲ್ಲಿ ದರ್ಪ ತೋರಿಸಲಿಕ್ಕೆ. ಅಷ್ಟೇ... ನಿಮ್ಮಂತಹವರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ ಅವರು. ನಿಮಗೆಲ್ಲಾ ಎಷ್ಟು ಹೇಳಿದರೂ ಬುದ್ದಿ ಬರುವುದಿಲ್ಲ ಬಿಡಿ" ಎಂದ ಶ್ರೀಕಾಂತನ ಮಾತನ್ನು ಕೇಳಿ
"ನಾಲ್ಕು ಅಕ್ಷರ ಕಲಿತ ಮಾತ್ರಕ್ಕೆ ನೀನು ದೊಡ್ಡ ಮನುಷ್ಯ ಆಗುವುದಿಲ್ಲ. ಅಥವಾ ನೀನು ಹೇಳಿದ್ದೇ ಸರಿ ಅಂತಾ ಇಲ್ಲಿ ಯಾರೂ ಸಹಾ ಕುಣಿಯುವುದಿಲ್ಲ. ನೀನೇನೋ ಹೇಳುತ್ತಿಯ... ಕಳೆದ ಬಾರಿ ನಿನ್ನಂತಹಾ ಮಂದ ಬುದ್ಧಿಯವರು ಅದನ್ನೇ ನಂಬಿಕೊಂಡು ಕುಣಿದರು. ಧಣಿಗಳು ಅವರಿಗೆ ಕೆಲಸಕ್ಕೆ ಕರೆಯುವುದನ್ನೇ ಬಿಟ್ಟರು. ಕೊನೆಗೆ ಅವರೇ ಧಣಿಗಳ ಹತ್ತಿರ ಹೋಗಿ ಕಾಲು ಹಿಡಿದು ಬೇಡಿಕೊಂಡರು. ನೀವುಗಳು ಹಳ್ಳಿಗೆ ಬರುತ್ತೀರ. ನಾಲ್ಕು ದಿನ ಇರುತ್ತೀರಿ.. ಹೋಗಬೇಕಾದರೆ ಏನನ್ನೋ ಹೇಳಿ ಆಸೆ ಹುಟ್ಟಿಸಿ ಹೋಗುತ್ತೀರಿ. ಕೊನೆಗೆ ಅದನ್ನೆಲ್ಲಾ ಅನುಭವಿಸಬೇಕಾಗಿರುವುದು ಇಲ್ಲಿ ಇರುವವರೇ ತಾನೇ.." ಎಂದ ಅಮ್ಮನ ಮಾತಿಗೆ
"ಅಮ್ಮ, ನಾವೇನು ಏನನ್ನೋ ಹೇಳುತ್ತಿಲ್ಲ. ಇಲ್ಲಿನ ನಿಮ್ಮ ಧಣಿಗಳು ನಿಮ್ಮನ್ನು ದಿನಗೂಲಿ ಅಂತಾ ಕರೆಸಿಕೊಳ್ಳುತ್ತಾರೆ. ಆದರೆ , ಕಡಿಮೆ ಸಂಬಳ ಎಣಿಸುತ್ತಾರೆ. ಕೇಳಿದರೆ, ಮುಂದಿನ ಸಲ ಅದಕ್ಕಿಂತ ಕಮ್ಮಿ. ನಿಮಗೆ ಬಗ್ಗಿ ಬಗ್ಗಿ ರೂಢಿಯಾಗಿ ತಲೆ ಎತ್ತಿ ನಿಂತು ಮಾತನಾಡುವುದನ್ನೇ ಮರೆತಿದ್ದೀರಿ. ನಾವು ಕೇಳಿದ ತಕ್ಷಣ ಅವರು ಸಾಲ ಕೊಡುವುದಿಲ್ಲವಾ ಅಂತಾ ನಮಗೇ ಪ್ರಶ್ನೆ ಮಾಡುತ್ತೀರಿ.
ಆ ಯಪ್ಪಾ ಏನು ಸುಮ್ಮನೆ ಸಾಲ ಕೊಡುತ್ತಾನಾ ಹೇಳು. ನೀವು ಅದಕ್ಕೆ ಬಡ್ಡಿ, ಚಕ್ರ ಬಡ್ಡಿ ಎಲ್ಲವನ್ನೂ ಕಟ್ಟುತ್ತೀರಿ. ಅಲ್ಲವಾ ? ಏನೂ ಆಧಾರವಾಗಿ ಇರಿಸಿಕೊಳ್ಳದೆ ಸುಮ್ಮನೆ ಸಾಲ ಕೊಟ್ಟು ಬಿಡುತ್ತಾರಾ ಹೇಳು. ಜಮೀನನ್ನೋ ಇಲ್ಲವೇ ಮನೆಯನ್ನೋ ಅಥವಾ ಪ್ರಾಣಿಗಳನ್ನೋ ಅಡ ಇರಿಸುತ್ತೀರಿ ತಾನೇ.. ನೀವು ಈ ಯಪ್ಪನ ಬಳಿ ಹೀಗೆ ಸಾಲ ತೆಗೆದುಕೊಳ್ಳುವುದರ ಬದಲಾಗಿ ಬ್ಯಾಂಕ್ ಗೆ ಹೋಗಿ ಸಾಲ ಕೇಳಿದರೆ ಸಾಲ ಕೊಡುತ್ತಾರೆ ತಾನೇ ? ನಿಮ್ಮ ಅನಕ್ಷರತೆಯನ್ನು, ಮುಗ್ಧತೆಯನ್ನು ಸರಿಯಾಗಿಯೇ ಉಪಯೋಗಿಸಿಕೊಳ್ಳುತ್ತಾ ಇದ್ದಾನೆ. ಸಿರಿತನ ಯಾವತ್ತಿಗೂ ಶಾಶ್ವತ ಅಲ್ಲ ತಾನೇ..?? " ಎಂದು ಒಂದೇ ಸಮನೆ ಮಾತನಾಡುತ್ತಿದ್ದವನನ್ನು ಕಂಡ ಶ್ರೀಕಾಂತನ ತಾಯಿ
"ನಿಮ್ಮಪ್ಪನೂ ಹೀಗೆ ಮಾಡುವುದಕ್ಕೆ ಹೋಗಿ ಸತ್ತಿದ್ದು. ನೀನೂ ಹಾಗೆ ಆಡಿ ನನ್ನ ಹೊಟ್ಟೆ ಉರಿಸುತ್ತಾ ಇದ್ದೀಯ.
ಅವರತ್ರ ದುಡ್ಡಿದೆ. ಆದರೆ, ನಮ್ಮ ಹತ್ತಿರ ಏನೂ ಇಲ್ಲ. ನಾವೂ ಒಬ್ಬರಿಗೆ ಸಮನಾಗಿ ನಿಂತು ವಿರೋಧಿಸಬೇಕು ಅಂತಾ ಅಂದರೆ ಜನಬಲ ಮತ್ತು ಹಣಬಲ ಇರಬೇಕು. ಜನಬಲವನ್ನು ಹಣದಿಂದ ಕೊಂಡುಕೊಳ್ಳಬಲ್ಲ ಆತ. ಹಣಬಲ ಬೇಕು ಅಂದರೆ ದುಡಿಯಬೇಕು. ಆದರೆ, ನೀನೂ ಅಡ್ಡ ದಾರಿ ಹಿಡಿದು ಸಿರಿವಂತ ಆಗುತ್ತೇನೆ ಅಂತಾ ಹೊರಟರೆ ಅವನಿಗೂ ನಿನಗೂ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲ. ನೀನು ನ್ಯಾಯವಾಗಿ ಸಂಪಾದನೆ ಮಾಡಬೇಕು.
ಬಗ್ಗುವುದು ಅವನಿಗೆ ಅಥವಾ ಅವನ ಸಿರಿತನಕ್ಕೆ ಮಣಿದು ಅಲ್ಲ. ನಿಮ್ಮಂತಹಾ ಭವಿಷ್ಯದ ಪೀಳಿಗೆ ಎದ್ದು ನಿಲ್ಲಬೇಕು ಅಂತಾ ಅಂದರೆ ಅದು ನಮಗೆ ಅನಿವಾರ್ಯ. ನಿಮ್ಮ ರೀತಿ ಮಾತನಾಡುತ್ತಾ ಕಾಲಹರಣ ಮಾಡುತ್ತಾ ಕುಳಿತರೆ ಅವನು ಮತ್ತಷ್ಟು ಬೆಳೆಯುತ್ತಾ ಹೋಗುತ್ತಾನೆ. ಅದರ ಬದಲಾಗಿ ಹೋಗಿ ದುಡಿ. ಅದಕ್ಕಿಂತ ಹೆಚ್ಚು ಬಲಶಾಲಿಯಾಗಿ ಬಾ.. ಅದೂ ನ್ಯಾಯವಾದ ರೀತಿಯಲ್ಲಿ.
ಆಗ ಬಾ. ಸಿರಿತನಕ್ಕಲ್ಲ ಆ ಸಿರಿವಂತನ ದರ್ಪಕ್ಕೆ ಸಡ್ಡು ಹೊಡೆದು ನಿಲ್ಲಲು ಎಲ್ಲರೂ ಜೊತೆಯಾಗುತ್ತೇವೆ. " ಎಂದ ಅಮ್ಮನ ಮಾತು ಶ್ರೀಕಾಂತನಿಗೆ ಸಿರಿತನಕ್ಕೆ ಸಡ್ಡು ಹೊಡೆದು ನಿಲ್ಲಲು ಬೇರೆಯದ್ದೇ ಹಾದಿ ತೋರಿತ್ತು.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ