ಭಾನುವಾರ, ಆಗಸ್ಟ್ 30, 2026

ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ


"ಈಗಲೇ ಇಷ್ಟು ಕಟು ವಾಸ್ತವವಾದಿಯಾಗಬೇಡ್ವೆ. ಬರಹದಲ್ಲಿ ಅಷ್ಟು ಕೋಮಲ ಭಾವನೆಗಳನ್ನು ತುಂಬುವ ನೀನೇ ಇಷ್ಟು ಕಟುವಾದರೆ ಹೇಗೆ..?" ಕೇಳಿದ್ದಕ್ಕೆ 


"ಮತ್ತೆ.. ಹೇಗಿರಬೇಕು ನೀನೇ ಹೇಳು..?

ಕಾಗೆ ಹಸಿರು ಬಣ್ಣ ಅಂದರೆ ಹೂಂ ಅನ್ನಬೇಕಾ..?

ವಾಸ್ತವದ ನುಡಿಗಳು, ಸತ್ಯ ಎಲ್ಲವೂ ಕಟುವೇ. ಕಹಿ ಔಷಧಿಯೇ ಅಲ್ಲವಾ ರೋಗವನ್ನು ಗುಣಪಡಿಸೋದು" ಎಂದಳು.


ಅವಳ ಮಾತಿನಲ್ಲಿ ತಪ್ಪು ಕಾಣಲಿಲ್ಲವಾದರೂ.. ಗುಂಪಿನಲ್ಲಿ ಗೋವಿಂದ ಎನ್ನುವವರಿಗಿಂತ ವಿಭಿನ್ನವಾಗಿ ಕಂಡ ಇವಳೇ ಎಲ್ಲರಿಗೂ ಮೊದಲ ಗುರಿಯಾಗುತ್ತಿದ್ದಳಲ್ಲಾ ಎನ್ನಿಸಿತು.


"ಗುಂಪಿನಲ್ಲಿ ಸ್ಥಾನ ಇಲ್ಲ ಎಂದರೆ ಅವರ ಸ್ಥಾನ ವೇದಿಕೆಯ ಮೇಲೆ" ಎನ್ನುವ ಮಾತು ಆ ಕ್ಷಣಕ್ಕೆ ಅವಳಿಗೆ ಹೊಂದುವಂತೆ ಕಂಡಿತು. 

"ನೇರವಾದ ಮರಗಳೇ ಅಲ್ಲವಾ ಮೊದಲು ಕೊಡಲಿಯ ಏಟಿಗೆ ಬಲಿಯಾಗುವುದು.." ಎಂಬ ಮಾತು ನೆನಪಾಗಿ ಆತಂಕವೂ ಆಯಿತು.


ಅವಳ ಬಿಸಿರಕ್ತದ ವಯಸ್ಸು ಹೀಗೆಲ್ಲಾ ಮಾಡಿಸುತ್ತಿದೆ. ಹಾರಾಟ, ಕಟು ವಾಸ್ತವಗಳು ಕಾಲ ಕಳೆದಂತೆ ಮಾಗುತ್ತವೆ. ಪ್ರತಿಯೊಂದಕ್ಕೂ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಅರಿವಾಗುವ ಸಮಯ ಬರುತ್ತದೆ. ಅದು ಅವಳಿಗೆ ತಾನಾಗಿಯೇ ಅರ್ಥವಾಗುತ್ತದೆ ಎಂದುಕೊಂಡೆನಾದರೂ.. ಕಾಲ ಬಲು ಕಠೋರ. ಯಾವತ್ತಿಗೂ ರಿವರ್ಸ್ ಪ್ರಕ್ರಿಯೆ ಅನ್ನೋದೇ ಅಲ್ಲಿಲ್ಲ. ಅವಳು ಮಾಗುವಷ್ಟರಲ್ಲಿ ಮನಸ್ಸು ಕಲ್ಲಾದರೆ..!


ಹೀಗೆ ಯೋಚನೆಗಳ ಪ್ರವಾಹ ಸಾಗುತ್ತಿತ್ತು. ಅದು ಅವಳ ಮಾತುಗಳಿಂದಲೇ ಕಡಿಯಿತು. 


"ಯೋಚನೆ ಬೇಡ್ವೆ. ಮನಸ್ಸಲ್ಲಿ ಇರೋದನ್ನ ಒದರಿ ಹಗುರಾಗುವೆ. ಕೆಲವೊಮ್ಮೆ ಜನಗಳ ಎದುರಲ್ಲಿ.. ಹಲವೊಮ್ಮೆ ನನ್ನ ಬರಹದಲ್ಲಿ..

'ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ' ಅನ್ನೋ ನುಡಿ ಕೇಳಿಲ್ವಾ ನೀನು..?!

ಸಂಧರ್ಭಕ್ಕೆ ತಕ್ಕಂತೆ ಕಠಿಣವೋ.. ಮೃದುವೋ ನಿರ್ಧರಿಸುತ್ತೇನೆ. 

ತೀರಾ ತಲೆಕೆಡಿಸಿಕೊಳ್ಳಬೇಡ್ವೆ"


ಅವಳು ಹೀಗೆಯೇ ಇರಲಿ ಬದಲಾಗದಿರಲಿ ಎಂದು ಮನ ಹಾರೈಸಿದರೂ.. ಬಾಯಲ್ಲಿ ಬಂದ ಮಾತು..?!


ಈ ಮಾತುಕಥೆ ಒಂದು ಕಾಲದ ನನ್ನನ್ನೇ ನೆನಪಿಸಿತು. ಅಂದ ಹಾಗೆ ಅವಳ ಜೊತೆ ಆದ ಸಂಭಾಷಣೆ..?!


~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ