ಭಾನುವಾರ, ಆಗಸ್ಟ್ 23, 2026

ಅವಳು ಮತ್ತು ಅಡುಗೆಮನೆ


 'ಇದೊಂದು ಕೆಲಸ ಮುಗಿಯೋದೇ ಇಲ್ಲ, ಸಾಕು, ನಾ ಇವತ್ತಿಂದ ಅಡುಗೆ ಮಾಡೋದೇ ಇಲ್ಲ, ನಂಗೂ ಸಾಕಾಗಿಹೋಗಿದೆ ಜೀವನ, ಅಡುಗೆ ಮಾಡಲು ಆಲಸ್ಯ ಇರೋ ಹೆಣ್ ಮಕ್ಕಳ ಸಂಘ ಕಟ್ಬೇಕು ನಾನು ' ಎಂದು ಅವಳು ಗೊಣಗಿದಳು. 


ಅವಳ ಈ ಗೊಣಗಾಟ ಮನೆಯಲ್ಲಿ ಯಾರಿಗೇನೂ ಹೊಸತಲ್ಲ.  ಆ ಮನೆಯಲ್ಲಿ ಇದ್ದ ಉಳಿದಿಬ್ಬರು ಗಂಡಸರು. ಆಕರ್ಷಳ ಗಂಡ ಪ್ರೇಕ್ಷಿತ್ ಹಾಗೂ ಮಾವ ಸುಂದರ್. ಹಾಗೆಂದು ಗೊಣಗುತ್ತಿದ್ದಾಗ ಮೊದಲೆಲ್ಲಾ ಇಬ್ಬರಲ್ಲಿ ಒಬ್ಬರು ಹೋಗಿ ತರಕಾರಿ ಹೆಚ್ಚುವುದು ಇಲ್ಲವೇ ಪಾತ್ರೆ ತೊಳೆಯುವ ಕೆಲಸಕ್ಕೆ ನಿಂತುಕೊಳ್ಳುತ್ತಿದ್ದರು. ಆದರೆ, ಅವಳನ್ನು ಮೆಚ್ಚಿಸಲು ಯಾರಿಂದಲೂ ಆಗುತ್ತಿರಲಿಲ್ಲ. 'ಇಲ್ಲೊಂಚೂರು ಸೋಪು ಹೋಗಿಲ್ಲ'.. 'ಈ ಜಿಡ್ಡು ಹಾಗೆಯೇ ಇದೆ' ಎಂದೋ ಏನಾದರೊಂದು ಹೇಳುತ್ತಾ ತಾನೇ ಮತ್ತೆ ಆ ಕೆಲಸಕ್ಕೆ ನಿಲ್ಲುತ್ತಿದ್ದಳು. ತರಕಾರಿ ಹೆಚ್ಚಲು ಹೋದರೆ ಉದ್ದ, ಅಡ್ಡ, ದಪ್ಪ, ಸಣ್ಣ ಎಂದು ಏನಾದರೊಂದು ಹೇಳಿ ತಾನೇ ಮಾಡುತ್ತಿದ್ದಳು. ಅವಳ ಈ ಪರಿ ಕಂಡು ಯಾರೂ ಅವಳ ತಂಟೆಗೆ ಹೋಗುತ್ತಿರಲಿಲ್ಲ. ಅಲ್ಲದೇ, ಕೆಲಸದವಳ ಕೆಲಸ ಕೂಡಾ ಮೆಚ್ಚುಗೆಯಾಗುತ್ತಿರಲಿಲ್ಲ. ಹಾಗೆಂದು, ಆಕರ್ಷ ರುಚಿಯಾಗಿ ಅಡುಗೆ ಮಾಡುತ್ತಿದ್ದಳು ಎಂದಲ್ಲ. ಅವಳ ದೃಷ್ಟಿಯಲ್ಲಿ ಶುಚಿಗೆ ಹೆಚ್ಚಿನ ಪ್ರಾಮುಖ್ಯತೆ. ಪ್ರೇಕ್ಷಿತ್ ಕೂಡಾ ಅಡುಗೆ ಮಾಡುತ್ತಿದ್ದ. ಅವಳಿಗಿಂತಲೂ ರುಚಿಯಾಗಿಯೇ ಅಡುಗೆ ಮಾಡುತ್ತಿದ್ದ. ಆದರೆ, ಅವನ ಶುಚಿಯಿಲ್ಲದ ಅಡುಗೆ ಕಂಡು ಅವಳೇ ಬೇಡವೆಂದಿದ್ದಳು.


ಇನ್ ಫ್ಯಾಕ್ಟ್ ಆಕರ್ಷ ಪ್ರೇಕ್ಷಿತ್ ನನ್ನು ಇಷ್ಟಪಟ್ಟದ್ದೇ ಆತನಿಗೆ ಅಡುಗೆ ಮಾಡಲು ಬರುತ್ತದೆ ಎಂದು. ನಂತರ ಅವನ ಕೈ ರುಚಿ ನೋಡಿ ಅದಕ್ಕೆ ಮನಸೋತಿದ್ದಳು. ಮದುವೆಯಾಗಿ ಬಂದ ನಂತರ ಅಡುಗೆ ಮನೆ ನೋಡಿ, ಪ್ರೇಕ್ಷಿತ್ ಮಾಡುವ ಕೊಳಕು ನೋಡಿ ತಲೆ ತಿರುಗಿ ಬೀಳದೆ ಇರುವುದು ಪುಣ್ಯ. ನಂತರ, ಅವಳೂ ಕೆಲಸಕ್ಕೆ ಹೋಗುವಾಗ ಏನೋ ಒಂದು ಬೇಯಿಸಿ ಹಾಕಿಕೊಂಡೋ ಇಲ್ಲವೇ ಏನಾದರೂ ಆರ್ಡರ್ ಮಾಡಿಕೊಂಡು ತಿಂದರೆ ಮುಗಿಯುತ್ತಿತ್ತು.


ಅತ್ತೆ ಅಚಾನಕ್ಕಾಗಿ ತೀರಿ ಹೋಗಿ ಮಾವ ಅಲ್ಲೇ ಬಂದು ಇರುವಂತಾದಾಗ ಅವಳೂ ಮನೆಯಿಂದ ಕೆಲಸ ಮಾಡಲು ಶುರು ಮಾಡಿದ್ದಳು. ಆಗಲೇ, ಅಷ್ಟೋ ಇಷ್ಟೋ ಅಡುಗೆ ಮಾಡಲು ಕಲಿತದ್ದು. ಯಾವ ಕೆಲಸವನ್ನಾದರೂ ಶ್ರದ್ಧೆಯಿಂದ ಮಾಡುವ ಅವಳಿಗೆ ಅದೇಕೋ ಅಡುಗೆ ಮನೆ ಕೆಲಸ, ಅಡುಗೆ ಎಂದರೆ ಮಾರು ದೂರ. ದಿನವಿಡೀ ಮನೆಯ ಧೂಳು ತೆಗೆದು ಸ್ವಚ್ಛ ಮಾಡಿ ಇಬ್ಬರಿಬ್ಬರ ಕಚೇರಿ ಕೆಲಸ ಒಬ್ಬಳೇ ನಿಭಾಹಿಸುವಳಾದರೂ ಅಡುಗೆ ಕೆಲಸವೆಂದರೆ ಆಲಸ್ಯ. ಮುಕ್ಕಾಲು ಗಂಟೆಗಿಂತ ಹೆಚ್ಚು ಅವಳು ಅಡುಗೆ ಮನೆಯಲ್ಲಿ ಕಾಲ ಕಳೆದದ್ದೇ ಕಡಿಮೆ.


ಮೊದಮೊದಲು ಸುಂದರ್ ಅವಳು ಗೊಣಗುತ್ತಿದುದ್ದನ್ನು ಕಂಡು ತಾನು ಬಂದದ್ದು ಅವಳಿಗೆ ತೊಂದರೆಯಾಯಿತೋ ಏನೋ ಎಂದುಕೊಂಡರೆ ಅವಳು ತನ್ನ ನಡವಳಿಕೆಯಿಂದ ಅದು ತೊಂದರೆಯೇ ಅಲ್ಲ ಎನ್ನುವಂತೆ ತೋರಿಸುತ್ತಿದ್ದಳು. ಹುಡುಕಿದರೂ ಒಂದೇ ಒಂದು ಕೊರತೆ ಕಂಡು ಬರುತ್ತಿರಲಿಲ್ಲ ಅವಳು ಆದರಿಸುವ ರೀತಿಯಲ್ಲಿ. ಕೊನೆಗೆ, ಸುಂದರ್ ರವರು ಇದಕ್ಕೆ ಕಾರಣವೇನೆಂದು ತಿಳಿಯಲು ವಿಚಾರಿಸಿದಾಗ ಅವರಿಗೆ ತಿಳಿದದ್ದು.. ಅವಳು ಬೆಳೆದದ್ದು ಅಜ್ಜಿ ಮನೆಯಲ್ಲಿ.. ಅಲ್ಲಿ ಅಡುಗೆ ಮನೆಯಲ್ಲಿ ತಯಾರಾಗುವ ಅಡುಗೆಗೆ ಶುಚಿ- ರುಚಿ ಎರಡೂ ಮುಖ್ಯವಾಗಿದ್ದವು. ಒಂದು ಚಿಟಿಕೆ ಉಪ್ಪು, ಒಂದು ಹರಳು ಸಕ್ಕರೆ ಆಚೀಚೆಯಾದರೂ ಅವಳ ಅಜ್ಜಿ ಬೈಗುಳ ತಿನ್ನುತ್ತಿದ್ದರು. ಹಾಗೆಯೇ ಅತ್ತೆಗೂ ಅದೇ ಸ್ಥಿತಿ. ಅವರಿಬ್ಬರ ಗೈರು ಹಾಜರಿಯಲ್ಲಿ ಒಮ್ಮೆ ಇವಳು ಬಾರದ ಅಡುಗೆಯನ್ನು ಮಾಡಿದಾಗ ಸಿಕ್ಕಿದ್ದು ಇದೇ ಕಟು ಮಾತುಗಳು. ಅವಳನ್ನು ಅಡುಗೆ ಮನೆಯಿಂದ, ಅಡುಗೆ ಕೆಲಸದಿಂದ ದೂರ ಇರುವಂತೆ, ವಿಮುಖ ಮಾಡುವಂತೆ ಮಾಡುತ್ತಿದ್ದವು. ಎಲ್ಲದರಲ್ಲಿಯೂ ಹೊಗಳಿಸಿಕೊಳ್ಳುವ ಅವಳಿಗೆ ಅಡುಗೆ ಮಾಡಿದರೆ ಎಲ್ಲಿ ಕೊಂಕು ಕೇಳಬೇಕಾದೀತೋ ಎಂಬ ಭಯ.


ಕೊನೆಗೆ, ಅಡುಗೆ ಮನೆಯಲ್ಲಿ ತೀರಾ ಕಡಿಮೆ ಸಮಯ ಇರುವುದು.. ತನಗೆ ಅದು ಆಗಿ ಬರುವುದಿಲ್ಲ ಎಂದು ಹೇಳುವುದನ್ನು ರೂಢಿಸಿಕೊಂಡಳು. ಅದರ ಪ್ರತಿಫಲವೇ ಇದು.


ಈಗ ಅವಳು ತನ್ನದೇ ಕೆಲಸಗಳಲ್ಲಿ, ಹವ್ಯಾಸಗಳಲ್ಲಿ ತೊಡಗಿಕೊಂಡಿದ್ದಾಳೆ. ಮಾವನ ಕೈರುಚಿ, ಶುಚಿ ಎರಡೂ ಹಿಡಿಸುತ್ತದೆ.

ಬಂದ ಹಾಗೆ ಮಾಡಿ ಹಾಕು ಎಂದೋ.. ಅಡುಗೆ ಮಾಡಲೇ ಬೇಕು ನೀನು ಎಂದೋ.. ಹೆಣ್ಣು ಹುಟ್ಟಿದ್ದೇ ಅಡುಗೆ ಕೆಲಸ ಮಾಡಲಿಕ್ಕೆ ಎಂದೋ.. ಭಾವಿಸುವ ಮಾವಂದಿರ ನಡುವೆ ಅಮ್ಮನಂತಹಾ ಮಾವ ದೊರೆತಿದ್ದಾರೆ. ಎಂದೂ ಸವಿಯದ ಅಮ್ಮನ ಕೈರುಚಿ ಹೀಗೆಯೇ ಇದ್ದಿರಬಹುದು ಎನ್ನಿಸುತ್ತದೆ ಅವಳಿಗೆ..


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ