"ಅವಳು ಅಡುಗೆಯ ತಯಾರಿಯ ಹಂತದಲ್ಲಿದ್ದಳು. ತನ್ನದೇ ಗುಂಗಿನಲ್ಲಿ ಮುಳುಗಿರುವಾಗ ಅದೇನೋ ಸದ್ದಾಯಿತು! ಅವಳು ಬೆಚ್ಚಿ ಬಿದ್ದಳು!"
ತಟ್ಟನೆ "ಪಾಪು, ಪಾಪು.. ಪಾಪು, ಪಾಪು" ಎಂದು ಕರೆಯುತ್ತಾ ಇಡೀ ಮನೆ ಹುಡುಕಿದಳು. ಯಾಕೋ ಮನಸ್ಸು ಕೇಡನ್ನೇ ಶಂಕಿಸುತ್ತಿತ್ತು. ದೇವರ ಬಳಿ ಮನಸ್ಸಿನಲ್ಲಿಯೇ ಬೇಡುತ್ತಾ ಮನೆಯ ಮುಂದಿನ ತೊಟ್ಟಿಯ ಬಳಿ ಬಂದಳು. ತೊಟ್ಟಿಯ ಬಳಿ ಯಾರೂ ಕಾಣಲಿಲ್ಲ. ಅಲ್ಲೇ ಕೊಂಚ ಮುಂದೆ ಇದ್ದ ಬಾವಿಯ ಬಳಿ ಬಂದಳು. ಅಲ್ಲಿ ಬಗ್ಗಿ ನೋಡಿದರೆ ಜೀವ ಬಾಯಿಗೆ ಬಂದಿತ್ತು. ಪಾಪುವನ್ನು ಹಿಡಿದುಕೊಂಡು ಸರಳಾ ಬಾವಿಯಿಂದ ಹೊರ ಬರಲು ಸೆಣೆಸಾಡುತ್ತಿದ್ದಳು. ತಕ್ಷಣವೇ ಅಲ್ಲಿ ನಿಂತು ಜೋರು ಬೊಬ್ಬೆ ಹೊಡೆದು ಕೆಲಸದವರನ್ನೆಲ್ಲಾ ಕರೆದಳು. ಮಂಜ ಮಿಂಚಿನಂತೆ ಹಾರಿ ಇಬ್ಬರನ್ನೂ ಮೇಲೆ ತಂದಿದ್ದ. ಆದರೆ, ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು.
ಸುಮಿತ್ರಾ ಪ್ರಲಾಪಿಸುತ್ತಿದ್ದಳು. ಹಾಗೆಯೇ, ಅವಳ ಗಮನ ಹಿಂದಕ್ಕೆ ಓಡಿತು. ಪಾಪು ಮತ್ತು ಸರಳಾ ಇಬ್ಬರೂ ಮನೆಯಲ್ಲಿ ಒಂದು ರೀತಿ ಅಬ್ಬೇಪಾರಿಗಳೇ.. ಕೇಳುವವರೇ ದಿಕ್ಕಿಲ್ಲ.
ಸುಮಿತ್ರಾ ಪಾಪುವನ್ನು ಹೆತ್ತಾಗ ಗಂಡನ ಕಡೆಯಿಂದ ಬಂದು ನೋಡಿದ್ದವರು ಮೂಗು ಮುರಿದಿದ್ದರು. "ಹುಟ್ಟಿದ್ದು ಹೆಣ್ಣು" ಎಂದು.. ಮಗುವಿಗೆ ನಾಮಕರಣ ಮಾಡುವ ಸೌಜನ್ಯವನ್ನು ತೋರದೆ ಕಾಳಜಿಯನ್ನೂ ಮಾಡದೆ ಹಾಗೆಯೇ ಬಿಟ್ಟು ಬಿಟ್ಟಿದ್ದರು. ಅದಕ್ಕೆ ಅವಳು ಇನ್ನು "ಪಾಪು". ಜೊತೆಗೆ ದಿನ ಕಳೆದಂತೆ ಅರಿವಾಗಿದ್ದು ಅವಳು ಮೂಕಿ ಮತ್ತು ಕಿವುಡಿ. ಮೇಲೆ ಹೆಣ್ಣು ಬೇರೆ..
ಬಾಣಂತನ ಮುಗಿಯುವ ಮೊದಲೇ ಇಲ್ಲಿನ ಚಾಕರಿ ಕಾಯುತ್ತಿತ್ತು. ಮಗುವನ್ನು ಆಡಿಸಲು ಯಾರೂ ಮುಂದೆ ಬಾರದಿದ್ದಾಗ ಈ ಮನೆಯಲ್ಲಿ ಅವಳ ಜೊತೆಯಾಗಿದ್ದು ಸರಳಾ. ಮನೆಯವರ ಪಾಲಿಗೆ ಅವಳು "ಹುಚ್ಚಿ ಸರಳಾ". ಈ ಮನೆ ಮಗಳು. ಅವಳ ಮದುವೆಯ ದಿನ ಮದುವೆಯ ನಂತರ ಮಂಟಪದಿಂದ ಗಂಡನ ಮನೆಗೆ ಹೋಗುತ್ತಿರುವಾಗ ದೊಡ್ಡ ಅಪಘಾತವಾಗಿ ಗಂಡನನ್ನು ಕಳೆದುಕೊಂಡಳು. ಅದೇ ಆಘಾತಕ್ಕೆ ಹುಚ್ಚಿಯಾದಳು. ಅವಳನ್ನು ಸರಿಪಡಿಸುವ ಕೆಲಸವನ್ನು ಯಾರೂ ಮಾಡಲಿಲ್ಲ. ಗಂಡನ ಮನೆಯವರು ಅವಳನ್ನು ಕೂಡಲಿಲ್ಲವಾದ್ದರಿಂದ ಈ ಮನೆಯಲ್ಲಿ ಹುಟ್ಟಿದ ತಪ್ಪಿಗೆ ಇಲ್ಲಿಯೇ ಉಳಿದುಕೊಂಡಳು. ಅದೂ ಹುಚ್ಚಿಯಾಗಿ...
"ಅವಳಿಗೆ ಹುಚ್ಚು, ಮಗುವನ್ನು ಅವಳ ಬಳಿ ಬಿಡಬೇಡ" ಎಂದ ಅತ್ತೆಗೆ "ಆಯ್ತು ಅತ್ತೆ, ಹಾಗೇ ನೀವೇ ಸ್ವಲ್ಪ ಗಮನ ಕೊಡಿ" ಎಂದಾಗ "ದೇವಸ್ಥಾನಕ್ಕೆ ಹೊತ್ತಾಯ್ತು" ಎನ್ನುತ್ತಾ ನುಣುಚಿಕೊಂಡಿದ್ದರು. ಮಾವ, ಗಂಡ, ಮೈದುನರನ್ನಂತೂ ಮಾತನಾಡಿಸುವ ಹಾಗೆಯೇ ಇಲ್ಲ. ಇದೇ ಹುಚ್ಚಿ ಪಾಪುವನ್ನು ಎದೆಗವಚಿಕೊಂಡು ತನ್ನದೇ ಮಗು ಎಂಬಂತೆ ಬೆಳೆಸತೊಡಗಿದ್ದು.. ಮಗುವಿಗೆ ಇನ್ನೇನು ಒಂದು ವಾರದಲ್ಲಿ ಮೂರು ವರ್ಷ ತುಂಬುವುದರಲ್ಲಿತ್ತು.
ಎಲ್ಲಿದ್ದರೋ ಅತ್ತೆ ಲಬಲಬನೆ ಬಾಯಿ ಬಡಿದುಕೊಂಡು "ಅಯ್ಯೋ ಪಾಪಿ, ಮಗುವನ್ನು ಕೊಂದುಬಿಟ್ಟೆಯಲ್ಲೇ.." ಎನ್ನುತ್ತಾ ಓಡೋಡಿ ಬಂದರು. ಸರಳಾ ಕಾಣಲಿಲ್ಲವಾಗಿ "ಅತ್ತೆ, ಮಗುವಿನ ಮೇಲೆ ಹಾಗೇ ಕಣ್ಣಿಟ್ಟಿರಿ" ಎಂದಿದ್ದಕ್ಕೆ ಹೂಂಗುಟ್ಟಿದ್ದರು. ಆದರೆ, ಅದ್ಯಾವ ಮಾಯದಲ್ಲೋ ಮಾಯವಾಗಿದ್ದರು. ಅತ್ತೆ ಇರುತ್ತಾರೆ ಎಂಬ ಒಂದೇ ಭರವಸೆಯ ಮೇಲಲ್ಲವಾ ಅಡುಗೆ ತಯಾರಿಗೆ ನಿಂತದ್ದು. ಅಷ್ಟರಲ್ಲಿ...
"ಈ ಹುಚ್ಚಿನೇ ಮಗುವನ್ನು ಬಾವಿಗೆ ದೂಡಿದ್ದು.."
"ಹುಚ್ಚು ನೆತ್ತಿಗೇರಿತ್ತೇನೋ.. ಮಗುವನ್ನು ತಳ್ಳಿಯೇ ಬಿಟ್ಟಿದ್ದಾಳೆ. "
"ಮಗುವನ್ನು ಹುಚ್ಚಿ ಜೊತೆ ಬಿಡುತ್ತಾರಾ.. ಇವರಿಗೆ ಸ್ವಲ್ಪವಾದರೂ ಜ್ಞಾನ ಬೇಡವಾ.."
ಆಳಿಗೊಂದೊಂದು ಕಲ್ಲು ಎಸೆಯುತ್ತಿದ್ದರು. ನನಗೇನೋ ನಂಬಲು ಆಗಲಿಲ್ಲ. ಸರಳಾ ಮಗುವನ್ನು ಕಾಪಾಡಿದ್ದು ಎಂದು ಸಾರಿ ಸಾರಿ ಹೇಳಬೇಕೆಂದುಕೊಂಡರೂ ಧ್ವನಿ ಈಚೆಯೇ ಬರಲಿಲ್ಲ. ಅವಳು ಮಗುವನ್ನು ಅವಚಿಕೊಂಡು ರಕ್ಷಿಸುತ್ತಿದ್ದ ಪರಿ ಕಂಡಿದ್ದೆನಲ್ಲಾ.. ಅಲ್ಲದೇ, ಅವಳ ಕಣ್ಣಲ್ಲಿ ಕಾಣುತ್ತಿದ್ದ ಮಾತೃಭಾವ ಸುಳ್ಳೇನು..??
ಪಾಪು ಎಚ್ಚರವಾಗಿದ್ದಳು. ಸರಳಾ ಬಾರದ ಲೋಕಕ್ಕೆ ಪಯಣಿಸಿದ್ದಳು. ಈಗ ಮಾತುಕತೆ ಬೇರೆಯೇ ಆಯಾಮ ಪಡೆದಿತ್ತು. "ಮಗುವಿನಿಂದ ಈ ಮನೆ ಮಗಳ ಪ್ರಾಣ ಹೋಯಿತು.. "
ಯಾರು ಏನು ಕಳೆದುಕೊಂಡರೋ ತಿಳಿಯಲಿಲ್ಲ. ಪಾಪು ಅವಳನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದನ್ನು ಕಂಡು ಅಯ್ಯೋ ಎನ್ನಿಸುತ್ತಿತ್ತು.
ಹುಚ್ಚಿ ಸತ್ತದಲ್ಲ.. ಅಮ್ಮ ಸತ್ತಿದ್ಲು..
ಅತ್ತೆಯಂತಹಾ ಅಮ್ಮ ಪಾಪುವನ್ನು ಬದುಕಿಸಿ ತಾನು ಸತ್ತಿದ್ಲು.
ಮಾನವೀಯತೆ ಕಳೆದುಕೊಂಡ ನಾವೆಲ್ಲರೂ ಬದುಕಿದ್ದೂ ಹೆಣವಾಗಿದ್ವಿ.
~ ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ