ಶನಿವಾರ, ಆಗಸ್ಟ್ 29, 2026

ಪುರುಷಸಿಂಹ (ಪುಸ್ತಕ ಯಾನ - 484)


ಪುಸ್ತಕದ ಶೀರ್ಷಿಕೆ : ಪುರುಷಸಿಂಹ

ಲೇಖಕರು : ಜಿ. ಪ್ರಕಾಶ್

ಪ್ರಕಾಶಕರು : ಕ್ರಿಯೇಟಿವ್ ಪುಸ್ತಕಮನೆ 

ಎರಡನೇ ಮುದ್ರಣ : 2026

ಪುಟಗಳು : 104

ಬೆಲೆ : 100 ರೂ. 


1980 ರಿಂದ ಸ್ಪೈ ನಾವೆಲ್ ಗಳನ್ನು ಬರೆಯಲು ಶುರು ಮಾಡಿರುವ ಜಿ. ಪ್ರಕಾಶ್ ಅವರ 100ನೇ ಕಾದಂಬರಿ ಇದು. ಈ ಕಾದಂಬರಿಯ ಮುಖ್ಯ ನಾಯಕ ಪ್ರದೀಪ. 


ಪುಸ್ತಕ ಮನೆ ಪ್ರಕಾಶನದವರ "ಅಪರಂಜಿ ಮಾಲೆ" ಮಾಲಿಕೆಯಡಿ ಈ ಕಾದಂಬರಿ ಮರುಮುದ್ರಣಗೊಂಡಿದೆ.


ಸ್ಪೈ ನಾವೆಲ್ ಆದ್ದರಿಂದ ಈ ಕಾದಂಬರಿಯ ಪೂರ್ಣ ಕಥೆಯನ್ನು, ರೋಚಕ ತಿರುವುಗಳನ್ನು ನಾನು ಬಿಚ್ಚಿಡಲಾರೆ. ಕಾದಂಬರಿಯ ಪ್ರವೇಶಿಕೆ ಹಾಗೂ ಕುತೂಹಲ ಮೂಡಿಸುವಂತಹ ವಿಚಾರಗಳನ್ನು ಹೇಳುವ ಪ್ರಯತ್ನ ಮಾಡುವೆ.


ಕಾದಂಬರಿ ಶುರುವಾಗುವುದು ಸಿ.ಬಿ.ಐ ಡೈರೆಕ್ಟರ್ ಡಿಸೋಜ ಹಾಗೂ 65 ವರ್ಷದ ದಿವಾಕರ್ ಅವರ ಮಾತುಕತೆಯಿಂದ. ದಿವಾಕರ್ ಅವರಿಗೆ ಸಹಾಯ ಬೇಕಿರುತ್ತದೆ. ವಿಜ್ಞಾನಿಯಾಗಿದ್ದವರು ಡಿಫೈನ್ಸ್ ಇನ್ಸ್ಟಿಟ್ಯೂಟ್ ನಲ್ಲಿ ಚೀಫ್ ಸೈಂಟಿಸ್ಟ್ ಆಗಿ ಎರಡು ವರ್ಷದ ಹಿಂದೆ ರಿಟೈರ್ಡ್ ಆಗಿದ್ದವರು. ಇಬ್ಬರೂ ಬಾಲ್ಯದ ಗೆಳೆಯರು. ರಾಷ್ರಾಷ್ಟ್ರಾಧ್ಯಕ್ಷರಿಂದ ಪ್ರಶಸ್ತಿಯನ್ನೂ ಪಡೆದಿದ್ದವರು. ಅವರ ಆವಿಷ್ಕಾರಗಳು, ಸಂಶೋಧನೆಗಳ ವಿಚಾರಗಳನ್ನು ತೆರೆದಿಡುತ್ತಲೇ.. ಬುದ್ಧಿವಂತಿಕೆಯೇ ಅವರ ಬದುಕಿನಲ್ಲಿ ಮುಳುವಾದ ಸಂದರ್ಭದಲ್ಲಿ ಈಗ ಡಿಸೋಜಾ ಅವರ ಸಹಾಯ ಕೋರಿ ಬಂದಿರುತ್ತಾರೆ.


ದಿವಾಕರ್ ಅವರ ಮೊಮ್ಮಗಳು ನಿ ತಿಷಾ ಕಾಣೆಯಾಗಿರುತ್ತಾಳೆ. ಅದು ಕೇವಲ ಕಾಣೆಯಾಗಿದ್ದಲ್ಲ. ಅಪಹರಣವಾಗಿರುವುದು. ಹಾಗೆಂದು ಇದು ಊಹಾಪೋಹವೂ ಅಲ್ಲ. ಖಚಿತವಾದ ಮಾಹಿತಿ. ಕಣ್ಮುಂದೆ ನಡೆದ ಘಟನೆಯೇ.. ಆದರೆ, ಅದನ್ನು ತಪ್ಪಿಸಲಾಗಿರಲಿಲ್ಲ.


ಭೈರನ್ ಸಿಂಗ್ ಭೈರಾಗಿ ಎನ್ನುವ ಕುಖ್ಯಾತ ಅಪರಾಧಿಯೊಬ್ಬ ನಿತಿಷಾಳನ್ನು ಅಪಹರಿಸುತ್ತಾನೆ. ಅದೂ.. ತಾತನ ಎದುರುನಲ್ಲಿಯೇ..!


ಗುರುದಾಸಪುರ್ ಜೈಲಿನಲ್ಲಿ ತಮ್ಮ ಹೆಂಡತಿಯ ಪುಣ್ಯತಿಥಿಯ ದಿನದಂದು ಅಲ್ಲಿನ ಖೈದಿಗಳಿಗೆ ಹಾಗೂ ರೋಗಿಗಳಿಗೆ ಹಣ್ಣು, ಔಷಧಿ, ಸಿಹಿ ಹಂಚಲು ಹೋಗಿರುತ್ತಾರೆ. ದಿವಾಕರ್ ಅವರು ಸಾಮಾನ್ಯವಾಗಿ ವಿಸಿಟರ್ಸ್ ಅನ್ನು ಬಿಡದಿದ್ದವರು ಇವರ ಮೇಧಾವಿತನದ ಅರಿವಿದ್ದು ಹಾಗೂ ವಿ.ಐ.ಪಿ ಆದ್ದರಿಂದ ಒಳಬಿಟ್ಟಿರುತ್ತಾರೆ. ಆದರೆ, ಅವರ ಅದೃಷ್ಟ ಕೆಟ್ಟು ಎಲ್ಲರ ಎದುರಿನಲ್ಲಿಯೇ ಬೈರನ್ ಸಿಂಗ್ ಭೈರಾಗಿ ನಿತಿಶಾಳೊಂದಿಗೆ ಮಾಯವಾಗಿರುತ್ತಾನೆ. ತೀವ್ರವಾದಿಗಳ ಪಾಲಾದ ಮೊಮ್ಮಗಳ ಪತ್ತೆ ಮಾಡಲು ಈಗ ದಿವಾಕರ್ ಸಹಾಯ ಕೋರಿ ಬಂದಿರುವುದು. ಅವರಿಗಿದ್ದ ಒಬ್ಬಳೇ ಮಗಳ ಮಗಳ ಮಗಳು ಅವಳ. ಇದು ಕೇವಲ ಸಂಬಂಧದಿಂದ ಮಾತ್ರ ಕನೆಕ್ಟ್ ಆಗುವ ಕಥೆಯಲ್ಲ. ಅವಳನ್ನೇ ಅಪಹರಿಸುವ ಉದ್ದೇಶವಿತ್ತೇ..?! ಅದರ ಹಿಂದಿನ ಮರ್ಮವೇನು..?


ಮುಂದೆ ಈ ಕಥೆ ದೇಶಪ್ರೇಮಕ್ಕೂ ಸಂಬಂಧಿಸಿದಂತೆ ಮುಂದುವರೆಯುತ್ತದೆ.


ದಿವಾಕರ್ ಅವರ ಕುಟುಂಬದ ಪರಿಚಯದ ಜೊತೆಗೆ ತೀವ್ರಗಾಮಿ ಭೈರನ್ ಸಿಂಗ್ ಭೈರಾಗಿ ಎಷ್ಟು ಅಪಾಯಕಾರಿ ಎನ್ನುವುದನ್ನು ಕಟ್ಟಿಕೊಡುತ್ತಾ ಹೋಗುತ್ತಾರೆ.


ಭಯೋತ್ಪಾದನೆ ಜೊತೆಗೆ ಪಾಕಿಸ್ತಾನ ಹಾಗೂ ಭೈರನ್ ಸಿಂಗ್ ಭೈರಾಗಿಗೆ ಆ ದೇಶದ ಜೊತೆಗಿದ್ದ ಸಂಬಂಧ ಎನ್ನುವುದನ್ನು ಹೇಳುತ್ತಲೇ ಆ ಕೃತ್ಯದ ದುಷ್ಪರಿಣಾಮ ಎಷ್ಟಿದೆ ಎಂಬುದರ ಅಂದಾಜನ್ನು ನಾವು ಮಾಡಿಕೊಳ್ಳಬಹುದು.


ಹಾಗೆಂದು.. ಇಲ್ಲಿ ಪ್ರದೀಪ್ ತೀವ್ರವಾದ ಹೊಡೆದಾಟದ ಅಥವಾ ಕಾರ್ಯಾಚರಣೆಯ ಹಾದಿಯ ಬದಲಾಗಿ ಬೇರೆಯ ಹಾದಿಯನ್ನೇ ಹಿಡಿಯಬೇಕಾಗಿ ಬರುತ್ತದೆ. ಅದು ಅವನ ಶೈಲಿಯಲ್ಲಿಯೇ ಎಂದುಕೊಂಡರೆ.. ಅಷ್ಟರೊಳಗೆ ಡಿಸೋಜಾ ಅವರು ಆತನ ಮುಂದಿನ ಹೆಜ್ಜೆಯನ್ನು ಪ್ಲಾನ್ ಮಾಡಿ ಅದರ ಪ್ರಕಾರವೇ ನಡೆಯಬೇಕೆಂದು ನಿರ್ದೇಶಿಸುತ್ತಾರೆ. ಹಾಗಿದ್ದಲ್ಲಿ, ಪ್ರದೀಪನ ಸಾಹಸ ಶುರುವಾಗುವುದು ಎಲ್ಲಿಂದ..?


ಅಲ್ಲಿಂದ ಶುರುವಾಗುವ ಪ್ರದೀಪನ ಸಾಹಸಗಾಥೆಯನ್ನು ನಾವಿಲ್ಲಿ ಕಂಡುಕೊಳ್ಳಬಹುದು.


ಕೆ.ವನ್ ವೇಷ ಮರೆಸಿಕೊಂಡು ಹೋಗುವುದರ ಜೊತೆಗೆ ಮಕನ್ ಸಿಂಗ್ ಎನ್ನುವ ತೀವ್ರಗಾಮಿಯ ನಂಬಿಕೆ ಗಳಿಸುವಲ್ಲಿಂದ ಶುರುವಾಗುವ ಕಥೆ ಹಲವಾರು ರೋಚಕ ತಿರುವುಗಳೊಂದಿಗೆ ನೌಗುತ್ತಾ ಹೋಗುತ್ತದೆ.


ಕ್ರಾಂತಿಕಾರಿಗಳು ಹಾಗೂ ತೀವ್ರಗಾಮಿಗಳು ಇಬ್ಬರಿಗೂ ಇರುವ ವ್ಯತ್ಯಾಸವನ್ನು ನಾವಿಲ್ಲಿ ಕಾಣಬಹುದು.


ಮಿಂಚಿನ ಕಾರ್ಯಚರಣೆಯಂತೆ.. ಮುಂದಿನ ಪ್ರತಿ ಹಂತವು ಸಾಗುತ್ತಾ ಹೋಗುವಂತೆ ಕಥೆಯನ್ನು ವೇಗವಾಗಿ ಹಾಗೂ ರೋಚಕವಾಗಿ ಕಟ್ಟಿಕೊಡುತ್ತಾರೆ.


ಮಕನ್ ಸಿಂಗ್, ಭೈರನ್ ಸಿಂಗ್ ಭೈರಾಗಿ ಹಾಗೂ ಸುಖಿಯಾ ಸಿಂಗ್ ಇವರೆಲ್ಲರಿಗೂ ಶೇರ್ ಸಿಂಗ್ ಮಣ್ಣುಮುಕ್ಕಿಸಿದ್ದು ಹೇಗೆ..?


ಕೆಲವು ಸಿನಿಮಾ ಶೈಲಿಯ ನಡೆಗಳ ಜೊತೆಗೆ ಮುಂದಿನ ಗುಟ್ಟು ಬಿಟ್ಟುಕೊಡದಂತೆ ಈ ಸ್ಟೈ ನಾವೆಲ್ ಸಾಗುತ್ತದೆ.


ಪಾಕಿಸ್ತಾನದ ವಾತಾವರಣ, ಅಲ್ಲಿಯ ಗೂಢಚಾರರು, ಕಾರ್ಯಾಚರಣೆ ಜೊತೆಗೆ ಪ್ರದೀಪನ ಸಾಹಸವನ್ನು ಕಾಣಬಹುದು.


ಉಗ್ರವಾದಿಗಳ ಬಂಧನದಲ್ಲಿದ್ದ ನಿತಿಷಾ ಬಿಡುಗಡೆಯಾಗಿದ್ದು ಯಾವಾಗ..? ಇದಕ್ಕೆ ಪ್ರದೀಪನ ಜೊತೆಯಾದವರು ಯಾರು ಹಾಗೂ ಯಾವೆಲ್ಲ ಸಾಹಸಗಳನ್ನು ಪ್ರದೀಪ ಮಾಡಿದ..? 


ಮುಮ್ತಾಜ್ ಮಾಡಿದ್ದು ಸರಿಯೋ ತಪ್ಪೋ..? ನೀವೇ ಓದಿ ಅರಿಯಿರಿ.


ಇದು ನಾನು ಓದಿದ ಜಿ. ಪ್ರಕಾಶ್ ಅವರ ಮೊದಲ ಕಾದಂಬರಿ. ವಿಭಿನ್ನ ಓದಿನ ಅನುಭವ ಕಟ್ಟಿಕೊಟ್ಟಿತು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ