ಮಂಗಳವಾರ, ಫೆಬ್ರವರಿ 13, 2018

ಗಣತಂತ್ರ್ಯ-ಪಾರತಂತ್ರ್ಯ-ಸ್ವಾತಂತ್ರ್ಯ

ಗಣಗಳಿಂದ ಗಣಗಳಿಗಾಗಿ
ಮಾಡಿದರು ಗಣತಂತ್ರ್ಯ

ಅದೇ ಗಣಗಳ ಸ್ವಾರ್ಥತೆ,
ಮಾಡುತಿದೆ ಅದನು ಪಾರತಂತ್ರ್ಯ

ಮೂಡಲಿ ಎಚ್ಚರಿಕೆ ಗಣಗಳಲಿ
ಸಾರ್ಥಕವಾಗಲಿ ಸ್ವಾತಂತ್ರ್ಯ

-ವಿಭಾ ವಿಶ್ವನಾಥ್

ವಿಪರ್ಯಾಸ

ಗಣಕೂಟಗಳು ಚೆನ್ನಾಗಿ ಕೂಡಿದರೂ,
ಮನಸುಗಳೇಕೋ ಕೂಡಲಿಲ್ಲ
ಇದುವೇ ಎಂಥ ವಿಪರ್ಯಾಸ!

ಜನಗಳೆಲ್ಲ ಮನದುಂಬಿ ಹರಸಿದರೂ,
ವಿಧಿಯು ಏಕೋ ಹರಸಲಿಲ್ಲ
ಇದುವೇ ಎಂಥ ವಿಪರ್ಯಾಸ!

-ವಿಭಾ ವಿಶ್ವನಾಥ್

ಮೊಗ್ಗಿನ ಯಾತ್ರೆ

ಭೂತಾಯಿಯಿಂದ ಜೀವ ಪಡೆದು
ಸಸ್ಯಕಾಶಿಯಲಿ ಒಲವ ಪಡೆದು

ನೇಸರನ ಹೊಂಗಿರಣಕೆ ಕಾಯತಲಿ
ನಳನಳಿಸುತ ಎಲ್ಲರ ಆರೈಕೆಯಲಿ

ಅರಳುತಿವುದು ಮೊದಲ ಮೊಗ್ಗು
ದಿನವು ಅದಕೆ ಹಿಗ್ಗೋ-ಹಿಗ್ಗು

ದುಂಬಿಗೆ ತನ್ನ ಮಧುವ ನೀಡುತ
ಮುಗಿಸುತಲಿತ್ತು ತನ್ನ ಯಾತ್ರೆಯ ಧನ್ಯವಾಗುತ

-ವಿಭಾ ವಿಶ್ವನಾಥ್

ಜೀವದ ಮೊಗ್ಗು

ಮೂಡಿದೆ ಮನದಲಿ
ನಲ್ಮೆಯ ಹಿಗ್ಗು
ಗರ್ಭದಿ ಪಡಿಮೂಡಿದೆ
ಮೊದಲ ಮೊಗ್ಗು
ಹೆಣ್ಣೆಂಬ ಒಂದೇ ಕಾರಣಕೆ
ಚಿವುಟಿದರು ಅದನು ಮೊಗ್ಗಲೇ
ಕಮರಿತು ಜೀವವು ಚಿಗುರಲೇ
ಅರಳಿ ಹೂವಾಗುವ ಮೊದಲೇ

-ವಿಭಾ ವಿಶ್ವನಾಥ್

ಅಲೆಮಾರಿ ವಿಹಾರ

ಎಷ್ಟೇ ಅಲೆದರೂ ಈ ವಾರ,
ತಂಗಳು ಅನ್ನಕೂ ತತ್ವಾರ
ನಡೆದಿದೆ ಹೊಟ್ಟೆಯ ಮುಷ್ಕರ
ಸಿಗುವುದೇ ಆಹಾರ ?
ಇದುವೇ ಅಲೆಮಾರಿಯ ವಿಹಾರ
ದೊರೆವುದೇ ಇದಕೆ ಪರಿಹಾರ?

-ವಿಭಾ ವಿಶ್ವನಾಥ್

ತಂಗಳು ಮಾತುಗಳು

ಯಾವ ನೈಜತೆಯಿಲ್ಲದಿದ್ದರೂ
ನೀಚ ನಾಲಿಗೆಯು ಆಡಿದ 
ತಂಗಳು ಮಾತುಗಳ,
ತಿಂಗಳಾದರೂ ಮರೆಯರು..
ಅವೇ ಇರಬೇಕು
ಹಸಿದ ನಾಲಿಗೆಗೆ ಹೆಚ್ಚು ರುಚಿ

-ವಿಭಾ ವಿಶ್ವನಾಥ್

ಉರುಳುತಲೇ ಇದೆ...

ಉರುಳುತಿದೆ ಜೀವನಚಕ್ರ,
ಯಾರ ಅಪ್ಪಣೆಗೂ ಕಾಯದೆ.
ಕಾಲದ ಪರಿಮಿತಿ ಇದಕಿಲ್ಲ
ಯಾರ ಅಪ್ಪಣೆಯೂ ಬೇಕಿಲ್ಲ
ಯಾವ ದ್ವಂದ್ವದ ನಿಲುವಿಲ್ಲ
ಹುಟ್ಟು-ಸಾವು , ಸುಖ-ದುಃಖ
ಯಾವುದಕೂ ಅಂಜದೆ, ಅಳುಕದೆ
ಉರುಳುತಲೇ ಇದೆ ಜೀವನಚಕ್ರ...

-ವಿಭಾ ವಿಶ್ವನಾಥ್

ಶನಿವಾರ, ಜನವರಿ 13, 2018

ಬಣ್ಣಗಳೇ ಸಾರುತಿವೆ...











ಬಣ್ಣಗಳೇ ಸಾರುತಿವೆ ನೂರಾರು ಕಥೆಯ...
ಕಣ್ಣಿಲ್ಲದವನಿಗೆ ಬೇಕಿರುವಂತೆ ಬೆಳಕು,
ಕಣ್ಣಿರುವವನಿಗೆ ಬೇಕಂತೆ ಬಣ್ಣಗಳು.
ಬಣ್ಣಗಳ ನೆಲೆಗಟ್ಟು ಮನಸಿನಾಲೋಚನೆ
ಮೂಡುತಲಿದೆ ಕುಂಚದಲಿ ನೂರಾರು ತರದಿ
ತದ್ವಿರುದ್ಧ ಭಾವಗಳು ಒಂದಾಗುತಲಿವೆ ಈಗ...
ಮಾಯಗಾರನ ಮಾಯಾವಿ ಕುಂಚದಲಿ,
ತಳುಕು-ಬಳುಕಿನ ನೂರಾರು ಕಥೆಗಳಿವೆಯಿಲ್ಲಿ.
ಕ್ರೌರ್ಯಕ್ಕೂ,ಶಾಂತಿಗೂ ಬಣ್ಣ ಬೆಸೆದಿದೆ ಬಂಧ.
ಬಂಧಿಯಾಗಿವೆ ಎಲ್ಲವೂ ಈ ಚೌಕಟ್ಟಿನೊಳಗೆ
ಜಾತಿ-ಬಣಗಳ ಮೀರಿವೆ ಈ ಬಣ್ಣಗಳು
ಒಂದಾಗಿ ಬೆರೆತಿವೆ ತಮ್ಮತನದೊಂದಿಗೆ
ನಾನು ಮೇಲು, ನೀನು ಕೀಳೆಂಬುದು ಇಲ್ಲಿಲ್ಲ
ಮೇಳೈಸಿವೆ ಎಲ್ಲ ಒಂದೇ ಜೀವದಂತೆ
ಸಾರುತಿವೆ ಎಲ್ಲರಿಗೂ ಸಮಾನತೆಯ ನೀತಿಪಾಠವನು.
ನಮ್ಮಂತೆ ಒಂದಾಗಿ ಬಾಳಿರೆಂದು,
ಬಣ್ಣಗಳೇ ಸಾರುತಿವೆ ನೂರಾರು ಕಥೆಯ...
                                                            -vಭಾ

ಸೋಮವಾರ, ಡಿಸೆಂಬರ್ 25, 2017

ನೆನಪು-ನಿನಾದ

ಹೇಳದ ನೂರಾರು ನೆನಪುಗಳು
ಅಂತರಂಗದಲ್ಲಿ ಬೆರೆತು ನಾದವಾಗಿವೆ...
ನೆನಪಿನ ನಿನಾದವೀಗ ಹೆದೆಯಾಂತರಾಳದಲಿ,
ನೂರಾರು ಹೆಗ್ಗುರುತ ಮೂಡಿಸಿದೆ,
ಅಂತರಾತ್ಮದಲಿ ಅರಿತು ಬೆರೆತಿದೆ.
ನೆನಪಿನಾ ಅಲೆಗಳು ಮೂಡುತಾ ಮರೆಯಾಗಿವೆ
ಸುಸ್ಥಿರತೆಯ ಸುಗುಣಗಳೆಲ್ಲವೂ ಕೂಡಿವೆ
ದುಃಸ್ವಪ್ನಗಳೆಲ್ಲವೂ ಮೂಡಿ ಮರೆಯಾಗಿವೆ
ಎಲ್ಲವೂ ಅಳಿಯುತಾ ಉಳಿದಿರುವುದೀಗ,
ನಾದದೊಡಲ ಝೇಂಕಾರ,ಓಂಕಾರ...
ನೆನಪಿನ ಸರಿಗಮ ಹೊಮ್ಮುತಿರುವುದೀಗ..!
ರಾಗ-ದ್ವೇಷಗಳಳಿಯುತಾ ಮೂಡುತಿರುವುದೀಗ!!
ಮನದಾಳದಿ ನಡೆದಿದೆ ಇವುಗಳ ಸಂಗಮ..
ನೆನಪಿನ ನಿನಾದದಾ ಸರಿಗಮ...
                                                  -vಭಾ

ಬುಧವಾರ, ನವೆಂಬರ್ 29, 2017

ಬಿಂದುವಿನಲಿ ಬಂಧ

ಯಾವುದೋ ಬಿಂದುವಿನಲಿ ಕೂಡಿದಾ ಬಂಧವಿದು...
ದಿನ ಕಳೆದಂತೆ ಸಾಗುತಿದೆ, ಮಾಗುತಿದೆ
ಋತುಗಳುರುಳಿದಂತೆ ಮುಗಿಯಲೂಬಹುದು.
ಯಾರನೋ ಅರಸಿ ಹೊರಟಾಗ ಮತ್ತಾರೋ ಸಿಕ್ಕರು
ಯಾವ ಜನುಮದ ಪುಣ್ಯದ ಫಲವೋ?
ಏನನ್ನೋ ಬಯಸಿದರೆ, ಮತ್ತೇನೋ ಸಿಕ್ಕಿತು.
ಸಿಕ್ಕಿದ್ದು ಶಾಶ್ವತವೆಂಬ ಭ್ರಮೆಯು ಕಾಡುತ್ತಿತ್ತು
ಮಾಗಿದಾ ಬಂಧವೂ ಮುಗಿಯಲೇಬೇಕಲ್ಲವೇ?
ಮುಗಿದ ಮೇಲೆ ಮತ್ತೆ ಕಾಡಲೇಬೇಕಲ್ಲವೇ?
ಅಸ್ತಮಿಸುವ ಬಂಧಗಳಿಗೇ  ಬೆಲೆಕಟ್ಟುತಿರುವಾಗ,
ಮರುಕಳಿಸುವ ನನಸುಗಳಿಗೆಷ್ಟು ಬೆಲೆಯೋ?
ಸಿಕ್ಕಿರುವುದೆಲ್ಲವೂ ಮರೆಯಾಗುವುದೆಷ್ಟೊತ್ತು?
ಕಳೆದುಹೋಗುವ ಮುನ್ನವೇ ಅನುಭವಿಸಬೇಕೆಲ್ಲವನು,
ಸಿಕ್ಕವರನು ಹಿಡಿದು ನಿಲ್ಲಿಸಿ ಕೇಳಬೇಕಿದೆ
ಬಿಟ್ಟು ಹೋಗಿ ನೀ ನನ್ನನು, ಪಡೆಯುವೆಯೇನನು?
ಬಿಂದುವಿನಲಿ ಸಿಕ್ಕ ಬಂಧ ಹಾಗೇ ಇರಲಿ...
ಬಿಂದು ರೇಖೆಯಲ್ಲಡಗಿ ಮರೆಯಾಗದಿರಲಿ...
ಇರುವ ಬಂಧ ಗಟ್ಟಿಯಾಗಿ,
ಬಿಂದು ಸಿಂಧೂರವಾಗಲಿ...
                                                                            -vಭಾ