ಗುರುವಾರ, ಮಾರ್ಚ್ 5, 2020

ಚಿಂತೆ ತರವೇ ಬೆಡಗಿಯೇ?


ಎಳೆಬಿಸಿಲು, ಮರದ ತಂಪು
ಅಡಿಯ ಹುಲ್ಲು, ಹೂವ ಕಂಪು
ಮೂಡಿಸಿದರೂ ಮಧುರ ಭಾವವ..
ನೀ ಹೀಗೇಕಿರುವೆ ಹೇಳೇ ಬೆಡಗಿ?
ನಿನಗೆ ಚಿಂತೆ ಇಷ್ಟು ತರವೇ?
ನಿನ್ನಂತೆ ನೀ ನಡೆಯಲು ಶುರುಮಾಡು
ಎದುರಿನ ವಾದ್ಯವ ಕೈಗೆತ್ತಿಕೊಂಡು
ದುಗುಡ ಮರೆತು ಲೀನವಾಗು ಅದರಲಿ...

~ವಿಭಾ ವಿಶ್ವನಾಥ್

ಭಾನುವಾರ, ಮಾರ್ಚ್ 1, 2020

ಹವ್ಯಾಸ

ಮೌನವೀಣೆಯ ತೊರೆದು
ನುಡಿಸು ಮುಂದಿರುವುದನು
ಬೇಸರವೆಲ್ಲವ ಮರೆತು
ನೀಡು ಎಲ್ಲರ ಮನಕೆ ತಂಪನು
ಒಳ ಬೇಗುದಿಯ ತಣಿಸಿ
ಚಿಮ್ಮು ಸಂತಸದ ಬುಗ್ಗೆಯನು
ತಲ್ಲಣವ ಮೂಲೆಗಿರಿಸಿ
ರೂಡಿಸಿಕೋ ಮೆಚ್ಚಿನ ಹವ್ಯಾಸವನು

~ವಿಭಾ ವಿಶ್ವನಾಥ್

ಗುರುವಾರ, ಫೆಬ್ರವರಿ 27, 2020

ದಾಸ್ಯ-ಸ್ವಾತಂತ್ರ್ಯ-ಸ್ವೇಚ್ಛೆ


ಮಳೆಯ ಪ್ರಮಾಣ ಹೆಚ್ಚು-ಕಡಿಮೆಯಾದರೆ ಅತಿವೃಷ್ಟಿ-ಅನಾವೃಷ್ಟಿಗಳು ಉಂಟಾಗುತ್ತವೆ. ಹಾಗೆಯೇ ಸ್ವತಂತ್ರ್ಯತೆಯ ಏರಿಳಿತವೂ ದಾಸ್ಯ ಮತ್ತು ಸ್ವೇಚ್ಛೆಯನ್ನು ಸೃಷ್ಟಿ ಮಾಡುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ನಿಜ, ಆದರೆ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಸ್ವಾತಂತ್ರ್ಯ ಸಿಕ್ಕಿದೆಯೇ? ನಿಜವಾಗಿಯೂ ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರನಾಗಿ ಬಾಳ್ವೆ ನಡೆಸುತ್ತಿದ್ದಾನೆ ಎಂದಾದಲ್ಲಿ ಜೀತ ಪದ್ಧತಿ, ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿರುವುದೇಕೆ?

ಮಹಾತ್ಮ ಗಾಂಧೀಜಿಯವರ ಹೇಳಿಕೆಯಂತೆ ನಡುರಾತ್ರಿ ಮಹಿಳೆಯೊಬ್ಬಳು ನಿರ್ಭೀತಿಯಿಂದ ನಡೆದಾಡುವಂತಾದರೆ ಅದೇ ಸ್ವಾತಂತ್ರ್ಯ. ಹಾಡುಹಗಲೇ ಪುಟ್ಟ ಬಾಲಕಿಯಿಂದ ಹಿಡಿದು ವೃದ್ಧೆಯವರೆಗೂ ಅತ್ಯಾಚಾರ ನಡೆಯುತ್ತಿರುವಾಗ ನಡುರಾತ್ರಿಯ ಮಾತೆಲ್ಲಿ? ಇದಕ್ಕೆ ಅಪವಾದ ಎಂಬಂತೆ ಸ್ವೇಚ್ಛೆಯಿಂದ ಬಾಳ್ವೆ ನಡೆಸುವವರೂ ಇದ್ದಾರೆ.

ತ್ಯಾಗ,ಶಾಂತಿ ಮತ್ತು ಸಮೃದ್ಧಿಯ ಕುರುಹಾಗಿ ಇರುವ ಕೇಸರಿ,ಬಿಳಿ,ಹಸಿರಿನ ಬಾವುಟ ಇಂದು ಹಿಂದು,ಕ್ರೈಸ್ತ ಮತ್ತು ಮುಸಲ್ಮಾನರ ಧರ್ಮಗಳ ಪ್ರತ್ಯೇಕ ಸಂಕೇತವೆಂಬಂತೆ ಆಯಾ ಧರ್ಮಗಳ ಮುಖಂಡರಿಂದ ಬಿಂಬಿತವಾಗುತ್ತಿದೆ.ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆ ಮೀರುತ್ತಿರುವಂತೆ ಭಾಸವಾಗುವುದಿಲ್ಲವೇ..?

ಸ್ವಾತಂತ್ರ್ಯ ಸಿಕ್ಕಿದೆ ಎಂಬುದಕ್ಕೆ ಆಡಂಭರದ ಅವಶ್ಯಕತೆ ಇಲ್ಲ. ಅದು ಸರಳವಾಗಿ, ಸಾಂಕೇತಿಕವಾಗಿ ದೇಶಭಕ್ತಿಯ ಪ್ರತೀಕವಾಗಿ ಬಿಂಬಿತವಾದರಷ್ಟೇ ಚೆನ್ನ. ಸ್ವಾತಂತ್ರ್ಯದ ಹಿಂದೆ ಹಲವಾರು ದೇಶಭಕ್ತರ ನೆತ್ತರ ತರ್ಪಣವಿದೆ. ಹೆಸರೇ ಹೇಳಲಿಚ್ಚಿಸದ ಅನಾಮಿಕ ಹೋರಾಟಗಾರರ ಮತ್ತು ಅವರ ಕುಟುಂಬದವರ ಅದ್ವಿತೀಯ ಛಲವಿದೆ, ಬಲವಿದೆ. ಶಾಂತಿ, ಅಹಿಂಸೆ, ಪ್ರತಿಭಟನೆ, ತ್ಯಾಗ, ಬಲಿದಾನ ಇವೆಲ್ಲದರ ಮಿಳಿತವಿದೆ. ಸ್ವಾತಂತ್ರ್ಯದ ಸದುಪಯೋಗಪಡಿಸಿಕೊಂಡು ಸ್ವತಂತ್ರವಾಗಿಯೇ ಬದುಕೋಣ. ದಾಸ್ಯದ ಸಂಕೋಲೆಯಲ್ಲಿ ಬಂಧಿಯಾಗಿಯೂ ಅಲ್ಲ, ಸ್ವೇಚ್ಛಾಚಾರಿಗಳಾಗಿಯೂ ಅಲ್ಲ.

~ವಿಭಾ ವಿಶ್ವನಾಥ್

ಭಾನುವಾರ, ಫೆಬ್ರವರಿ 23, 2020

ಸೌಹಾರ್ದ ಭಾರತ

ಸೌಹಾರ್ದತೆಯಲಿ ಬದುಕಿ ಬಾಳಲು
ಅವಕಾಶ ನೀಡಿದೆ ತಾಯ್ನೆಲ ಭಾರತ

ಗಿರಿ-ಸಿರಿ, ತೊರೆಗಳ ಭವ್ಯ ನಾಡಲಿ
ಜಾತೀಯತೆಯನು ಮೆಟ್ಟಿ ನಿಲ್ಲುತ
ಒಂದಾಗಿ ಬಾಳಲು ಅವಕಾಶವಾಗಿದೆ
ಸ್ವತಂತ್ರ ಭಾರತದ ಭವ್ಯತೆಯಿಂದ

ಹಲವರ ತ್ಯಾಗ-ಬಲಿದಾನಗಳ ಕುರುಹಾಗಿ
ಶಾಂತಿಯತೆ-ಶೌರ್ಯಗಳ ಮಿಲನದಿಂದ
ಅಡಿಯಾಳಾಗಿ ಬಾಳುವುದರ ಬದಲಿಗೆ
ಸಿಕ್ಕಿದೆ ಬಹುತ್ವ ಭಾರತಕೆ ಸ್ವಾತಂತ್ರ್ಯ

ತ್ಯಾಗ-ಶಾಂತಿ-ಸಮೃದ್ಧತೆಯ ಕುರುಹಾಗಿ
ಹಾರುತಿಹ ಬಾವುಟ ಸಾರುತಲಿದೆ
ಬದುಕಿನ ಮಹತ್ವದ ಪಾಠವೊಂದನು
ಅದುವೇ ಮನುಜನ ಬಾಳಿನ ಸಮಾನತೆಯನು

ವಿವಿಧತೆಯಲ್ಲಿ ಏಕತೆಯ ಸಾರುತ
ಜನ-ಮನದಲ್ಲಿ ಸ್ಥಿರವಾಗಿ ನೆಲೆ ನಿಂತಿರುವ
ದೇಶದ ಕೀರ್ತಿಪತಾಕೆಯ ಎತ್ತಿ ಹಿಡಿಯಲು
ಸ್ವಾತಂತ್ರ್ಯ-ಸೌಹಾರ್ದತೆಯಲಿ ಬಾಳ್ವೆ ಮಾಡುವ

~ವಿಭಾ ವಿಶ್ವನಾಥ್

ಗುರುವಾರ, ಫೆಬ್ರವರಿ 20, 2020

ನೇತ್ರದಾನ

ಇಂದೇ ನಿಮ್ಮ ಒಳಗಣ್ಣ ತೆರೆದು ನಿರ್ಧರಿಸಿ
ನೇತ್ರದಾನವ ಮಾಡಲೇ ಬೇಕೆಂದು

ಸ್ವಾರ್ಥವ ತೋರದೆ ನಿಸ್ವಾರ್ಥಿಯಾಗಿ
ಲೋಕವ ಕಾಣದ ಅಂಧರಿಗೆ
ಬಾಳನು ತೋರಲು ನಿರ್ಧರಿಸಿ
ಸತ್ತ ನಂತರ ನೇತ್ರದಾನವ ಮಾಡಿ


ಬದುಕಿರುವಾಗ ನಾವು ಮಾಡುವ
ಹಣದ ದಾನ-ಧರ್ಮಗಳಿಗಿಂತ
ಶನ್ತ ಮೇಲೆಯೂ ಉಪಕಾರಿಯಾಗುವ
ನೇತ್ರದಾನದ ಕುರಿತು ಯೋಚಿಸಿ

ಭವಿಷ್ಯದ ಜೀವಗಳ ನೆನೆದು
ಅಂಧಕಾರವ ನೀಗಿಸುವ ಪಣತೊಟ್ಟು
ಅವರ ಬಾಳಲಿ ಬೆಳಕಾಗುವ
ಅವಕಾಶವ ಉಪಯೋಗಿಸಿಕೊಳ್ಳಿ

ಮಣ್ಣ ಸೇರುವ ದೇಹದಭಿಮಾನಕೆ
ಮರುಳಾಗಿ ಬಾಳದೆ, ಎಲ್ಲರೂ
ನೇತ್ರದಾನ ಮಹಾದಾನವೆಂದರಿತು
ಎಚ್ಚೆತ್ತು ಎಲ್ಲರಲೂ ಅರಿವು ಮೂಡಿಸೋಣ

~ವಿಭಾ ವಿಶ್ವನಾಥ್

ಭಾನುವಾರ, ಫೆಬ್ರವರಿ 16, 2020

ಗಿರಗಿರ ಗಿರಗಿಟ್ಲೆ

ಗಿರಗಿರನೆಂದು ತಿರುಗುವ ಭರದಿ
ಮನವೂ ಕೂಡಾ ಗಿರಗಿಟ್ಲೆಯಾಗಿದೆ

ಅಮ್ಮನು ಕೊಟ್ಟ ಹುಂಡಿಯ ಕಾಸಲಿ 
ಜಾತ್ರೆಯ ಸುತ್ತಿದರೂ, ಆಸೆಯು ತಣಿಯದೆ
ಕೊನೆಗೇರಿದೆವು ಗಿರಿಗಿಟ್ಲೆಯನೇ...

ಮನದಾಳದ ಸುಪ್ತ ಭೀತಿಗಳನೂ
ಗಿರಗಿರ ಎಂದು ಗಿರಕಿ ಹೊಡೆಸುತ
ಆಚೆಗೆಸೆಯುತಲಿದೆ ಗಿರಗಿಟ್ಲೆ...

ಎಷ್ಟು ಸುತ್ತಿದರೂ ತಣಿಯದ
ನನ್ನೊಳಗೆಲ್ಲಾ ಮುಗಿಯದ  ಬಯಕೆ
ಮನವು ಸಹಾ ಗಿರಗಿಟ್ಲೆಯಂತೇ ಸುತ್ತುತಿದೆ

ನನ್ನೊಡನೆ ನನ್ನ ದೋಸ್ತಿಯು ಇರಲು
ನಮಗಾರು ಸರಿಸಾಟಿಯೆಂದು ಎಂಬ
ಅಮಲಿನಲ್ಲಿಯೇ ತೇಲುತಿಹೆ ಗಿರಗಿಟ್ಲೆಯಂತೆಯೇ..

-ವಿಭಾ ವಿಶ್ವನಾಥ್

ಗುರುವಾರ, ಫೆಬ್ರವರಿ 13, 2020

ಬಣ್ಣದ ಓಕುಳಿಯೊಳಗೆ..

ಬಣ್ಣ-ಬಣ್ಣದಿ ಮಿಂದು
ಬಿಳಿಯ ಬಣ್ಣವನೆಲ್ಲಾ ಕಳೆದು
ಏತಕೀಗೆ ಮೌನದಿ ಕುಳಿತಿರುವೆ?

 ಎದ್ದು ನಿಂತು ಬೊಗಳದೆ
ಬಣ್ಣದಲ್ಲೆಲ್ಲಾ ಹೊರಳಾಡಿ
ಚುಕ್ಕಿಗಳಾ ಮೂಡಿಸಿಕೊಂಡಿರುವೆಯೇನು?

 ಚಿತ್ತಾರದ ಮುದ್ದು ಗೊಂಬೆಯಾಗಿ
ನನ್ನ ಮನವ ಗೆಲ್ಲಲೆಂದು
ವರ್ಣದಲಿ ಮಿಂದು ಬಂದೆಯಾ?

 ನಿನ್ನ ಬಿಳಿಯ ತುಪ್ಪಳಕ್ಕಿಂತ
ಇದುವೆ ನಿನಗೆ ಚಂದ ಕಂಡಿದೆ
ನೀನು ದಿನವೂ ಹೀಗೇ ಇರುವೆಯಾ?

 ಸೊಗಸುಗಾರ ನಿನ್ನ ಮುಗ್ಧತೆಗೆ
ಮನಸೋತು ನಾ ಕೂಡಾ ನಿನ್ನಂತೆ
ಬಣ್ಣವ ಬಳಿದುಕೊಳ್ಳುವೆ ಒಪ್ಪುವೆಯಾ?

 ಹೋಳಿಯ ಓಕುಳಿಯಂತೆ ಚಂದ
ನಿನ್ನ ಮೈಯ್ಯ ಬಣ್ಣದ ಚಿತ್ತಾರ
ನೀ ನನ್ನೊಡನೆಯೂ ಬಣ್ಣದೋಕುಳಿ ಆಡುವೆಯಾ?

-ವಿಭಾ ವಿಶ್ವನಾಥ್

ಭಾನುವಾರ, ಫೆಬ್ರವರಿ 9, 2020

ಒಂದಿಷ್ಟು ಸಮಯ ಬೇಕಿದೆ


ಒಂದಿಷ್ಟು ಸಮಯ ಬೇಕಿದೆ
ನನ್ನದೇ ಆದ ಬದುಕ ಬದುಕಲು

ಮರಳಿ ಬಾರದ ಗತದ ನೆನಪಲ್ಲಿ
ಮುಚ್ಚಿ ಹೋದ ಹವ್ಯಾಸಗಳ ರೂಢಿಸಿಕೊಳ್ಳಲು
ಒತ್ತಡಗಳಿಂದ ಕೊಂಚ ನಿರಾಳವಾಗಲು
ಒಂದಿಷ್ಟು ಸಮಯ ಬೇಕಿದೆ..

ಒಡೆದು ಬಿದ್ದ ಕನಸುಗಳ ಕಟ್ಟಲು
ಪುನಃ ಒಡೆಯದಂತೆ ಎಚ್ಚರಿಕೆ ವಹಿಸಲು
ಆತ್ಮಶಕ್ತಿಯ ಗಟ್ಟಿಗೊಳಿಸಿಕೊಳ್ಳಲು
ಒಂದಿಷ್ಟು ಸಮಯ ಬೇಕಿದೆ..

ಮತ್ತೊಬ್ಬರ ಸಂಚಿಗೆ ಬಲಿಯಾಗದಂತೆ
ಅವರಿವರ ಚುಚ್ಚುಮಾತಿಗೆ ತಲೆಕೆಡಿಸಿಕೊಳ್ಳದಂತೆ
ನನ್ನದೇ ನಿರ್ಧಾರಗಳಂತೆ ನಡೆದುಕೊಳ್ಳಲು
ಒಂದಿಷ್ಟು ಸಮಯ ಬೇಕಿದೆ..

ಆಗದಿರುವುದಕ್ಕೆ ಕೊರಗುತ್ತಾ ಕೂರದೆ
ಮುಂದಾಗುವುದಕ್ಕೆ ಮಾತ್ರ ಗಮನ ನೀಡುತ್ತಾ
ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದುಕೊಳ್ಳಲು
ಒಂದಿಷ್ಟು ಸಮಯ ಬೇಕಿದೆ..

ಅವರಿವರೊಂದಿಗೆ ಹೋಲಿಸಿಕೊಳ್ಳದೆಯೇ
ನಮ್ಮತನವನ್ನು ತೊರೆಯದೆ ಬದುಕಲು
ಬದುಕ ಬಯಲಿನ ಅಲೆಮಾರಿಯಂತಾಗಲು
ಒಂದಿಷ್ಟು ಸಮಯ ಬೇಕಿದೆ..

ಬಯಸಿದ್ದೆಲ್ಲಾ ಆ ಕ್ಷಣಕ್ಕೇ ನೆರವೇರಲು
ನಮ್ಮ ಬಳಿ ಮಂತ್ರದಂಡವೂ ಇಲ್ಲ
ಬದುಕು ಮಾಯಾಜಾಲವೂ ಅಲ್ಲ
ಎಲ್ಲದಕ್ಕೂ ಒಂದಿಷ್ಟು ಸಮಯ ಬೇಕಿದೆ
~ವಿಭಾ ವಿಶ್ವನಾಥ್


ಗುರುವಾರ, ಫೆಬ್ರವರಿ 6, 2020

ಮುನ್ಸೂಚನೆ

ಬೆಳಿಗ್ಗೆ ಎದ್ದಾಗ ಏಕೋ ಮನಸ್ಸಿಗೆ ನೆಮ್ಮದಿ ಇಲ್ಲ. ಇದು ಒಂದೆರಡು ದಿನದ ಕಥೆಯಲ್ಲ. ಕಳೆದ ನಾಲ್ಕು ದಿನದಿಂದ ಹೀಗಾಗುತ್ತಿದೆ. ಏನೇನೋ ವಿಚಿತ್ರ ಕನಸುಗಳು. ಭಯದಿಂದ ಅರೆನಿದ್ದೆಯಲ್ಲೇ ಎಚ್ಚರ. ಮತ್ತೆ ನೀರು ಕುಡಿದು ಮಲಗಿದಾಗಲೂ ಮತ್ತೆ ಅದೇ ರೀತಿ ಆಗುತ್ತಲಿದೆ. ಯಾವ ಕೆಡುಕಿಗೆ ಮುನ್ಸೂಚನೆಯೋ ಇದು..? ಅರಿವಿಗೆ ಬರುತ್ತಿಲ್ಲ. ನಾಳೆ ಬೆಳಿಗ್ಗೆ ಎದ್ದು ಮೊದಲು ಯಾವುದಾದರೂ ದೇವಸ್ಥಾನಕ್ಕೆ ಹೋಗಿ ಬರಬೇಕು. ಹೇಗೂ ನಾಳೆ ಭಾನುವಾರ, ತಪ್ಪದೆ ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ಬರಬೇಕು ಎಂದುಕೊಂಡು ಮಲಗಿದಳು ಸಂಯುಕ್ತ.

ಕಳೆದ ತಿಂಗಳು ಕೂಡಾ ಹೀಗೇ ಆಗುತ್ತಿತ್ತಲ್ಲವೇ.. ಆಗಲೇ ಅಲ್ಲವೇ ಅವನು ಬಂದದ್ದು..? ಎಂಬ ಆಲೋಚನೆ ಮೂಡುತ್ತಿದ್ದರೂ ಅವನು ಮತ್ತೆ ಬರುವುದಿಲ್ಲ, ಬಂದರೂ ಅಷ್ಟು ದೊಡ್ಡ ಕಚೇರಿಯಲ್ಲಿ ನಾನು ಎಲ್ಲೋ ಒಂದು ಮೂಲೆಯಲ್ಲಿರುತ್ತೇನೆ. ನಾನ್ಯಾಕೆ ಭಯ ಪಡಬೇಕು? ಎಂದು ಸ್ವತಃ ಸಮಾಧಾನ ಮಾಡಿಕೊಂಡು ಮತ್ತೆ ನಿದ್ರಾ ದೇವಿಯ ಮಡಿಲಿಗೆ ಜಾರಿದಳು. 

"ನನ್ನ ಬಿಟ್ಟು ಬೇರೆ ಎಲ್ಲೂ ಹೋಗಲ್ಲ ಅಲ್ವಾ..?" ಎಂದವಳ ತಲೆ ಸವರಿ "ಇಲ್ಲಮ್ಮಾ, ನಿನ್ನ ಬಿಟ್ಟು ನಾನೆಲ್ಲಿ ಹೋಗಲಿ..? ನೀನು ಈಗ ಮಲಗು" ಎಂದವನ ಕೈಗೆ ಕೈ ಬೆಸೆದು ಮಲಗಿದ್ದವಳು ಬೆಳಿಗ್ಗೆ ಎದ್ದಾಗ ಸಾಕೇತ್ ನನ್ನು ಹುಡುಕುತ್ತಿದ್ದಳು. ಆದರೆ ಸಾಕೇತ್ ಅಲ್ಲಿರಲಿಲ್ಲ. ಅಲ್ಲಿರಲು ಸಾಧ್ಯವೂ ಇರಲಿಲ್ಲ. ಯಾಕೆಂದರೆ ಸಾಕೇತ್ ಗೆ ಅವಳು ಆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂಬುದು ಗೊತ್ತಿತ್ತೋ ಇಲ್ಲವೋ ಅದೂ ಇವಳಿಗೆ ಗೊತ್ತಿರಲಿಲ್ಲ. ಆದರೆ, ಸಾಕೇತ್ ಎಂದರೆ ಸಂಯುಕ್ತಾಗೆ ಅಚ್ಚುಮೆಚ್ಚು. ಅವನೇ ಇವಳ ಪಾಲಿನ ದೈವ, ಅವನ ಮಾತೇ ವೇದವಾಕ್ಯ. ಅವನ ನಡತೆಯನ್ನು ಮೆಚ್ಚಿ ಅವನನ್ನು ಆರಾಧಿಸುವವರಲ್ಲಿ ಇವಳೂ ಒಬ್ಬಳು. ಅವನೆಂದರೆ ಧೈರ್ಯ, ಸ್ಥೈರ್ಯ. ಅವನ ಹೆಸರೇ ಇವಳಲ್ಲಿ ಒಂದು ಬಗೆಯ ಶಕ್ತಿ ತುಂಬುತ್ತಿತ್ತು ಎಂದರೂ ತಪ್ಪಾಗಲಾರದು.

ಸಂಯುಕ್ತ ಚಿಕ್ಕಂದಿನಿಂದಲೂ ಅನಾಥಾಶ್ರಮದಲ್ಲಿ ಬೆಳೆದ ಹುಡುಗಿ. ಅವಳ ಹುಟ್ಟಿನ ಕುರಿತು ಹೊರಗಿನವರ ಕೊಂಕು ಮಾತುಗಳು ಕೆಲವೊಮ್ಮೆ ಅವಳನ್ನು ಘಾಸಿಗೊಳಿಸುತ್ತಿತ್ತು. ಆಗ, ಅದನ್ನೆಲ್ಲಾ ಮರೆಯುವುದಕ್ಕೆ ಅವಳು ಮೊರೆ ಹೋಗುತ್ತಿದ್ದದ್ದು ಪುಸ್ತಕವನ್ನು. ಹೀಗೆ ಓದಿನಲ್ಲಿ ತೊಡಗಿಸಿಕೊಂಡ ಅವಳು ಎಂ.ಕಾಂ ಮುಗಿಸಿ "ಶ್ರೀ ಸಾಯಿ ಪ್ರೈವೇಟ್ ಲಿಮಿಟೆಡ್" ನಲ್ಲಿ ಕೆಲಸಕ್ಕೆ ಸೇರಿಕೊಂಡಳು. ಮೊದಲ ದಿನದ ಟ್ರೈನಿಂಗ್ ಅಲ್ಲಿಯೇ ಅವಳು ಸಾಕೇತ್ ನನ್ನು ನೋಡಿದ್ದು. ಸುಮಾರು 60 ರಿಂದ 70 ಜನ ಇವಳಂತೆಯೇ ಟ್ರೈನಿಂಗ್ ಎಂದು ಬಂದಿದ್ದರು. ಇವಳು ಹಿಂದೆಯೂ ಹೋಗದೆ, ಮುಂದೆಯೂ ಬಾರದೇ ಮಧ್ಯದಲ್ಲಿ ಕುಳಿತಿದ್ದಳು. ಟ್ರೈನಿಂಗ್ ನೀಡಲೆಂದು ಬಂದವನು ಸಾಕೇತ್. ಅವನನ್ನು ನೋಡಿದಾಗ "ಇವನು ಎಂಥಾ ಟ್ರೈನಿಂಗ್ ಕೊಡುತ್ತಾನೆ" ಎಂಬ ಉಪೇಕ್ಷೆಯಲ್ಲಿ ಕುಳಿತಿದ್ದವಳು ಆ ದಿನ ಮಧ್ಯಾಹ್ನದ ಟ್ರೈನಿಂಗ್ ಮುಗಿಯುವಷ್ಟರಲ್ಲಿ ಅವನ ಅಭಿಮಾನಿಯಾಗಿಬಿಟ್ಟಿದ್ದಳು.

ಸಂಯುಕ್ತಾಳ ಅಪ್ಪಟ ವಿರುದ್ಧ ಸಾಕೇತ್. ಸಂಯುಕ್ತಳದ್ದು ಉನ್ಮಾದಕಾರಿ ಸೌಂದರ್ಯವಲ್ಲ, ಅಪ್ಪಟ ಸ್ಥಿಗ್ಧ ಸೌಂದರ್ಯ. ಮತ್ತೆ ಮತ್ತೆ ತಿರುಗಿ ನೋಡುವಂತಲ್ಲದಿದ್ದರೂ ಒಮ್ಮೆ ಸರಿಯಾಗಿ ಗಮನಿಸಿದರೆ ಅವಳ ಲಕ್ಷಣತೆ ಮನಸ್ಸಿನಲ್ಲಿ ನೆಲೆ ನಿಲ್ಲುತ್ತಿತ್ತು. ಮಾತು ಎಷ್ಟು ಬೇಕೋ ಅಷ್ಟೇ, ಸರಳವಾದ ವೇಷಭೂಷಣ. ಆದರೆ, ಸಾಕೇತ್ ನದ್ದು ಎಲ್ಲರನ್ನೂ ಸೆಳೆಯುವ ಸೌಂದರ್ಯ. ಒಮ್ಮೆ ಬಾಯಿ ತೆಗೆದರೆ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದಂತೆ ತನ್ನ ಕಡೆಗೆ ಸೆಳೆಯುವಂತಹಾ ಮಾತು. ಸರಳವಾಗಿ ಅನ್ನಿಸಿದರೂ ದುಬಾರಿ ಬೆಲೆಯ ಬಟ್ಟೆ, ವಾಚು ಹೀಗೇ.. ಆದರೆ, ಅಪ್ಪಟ ಸ್ವಾಭಿಮಾನಿ ಮತ್ತು ದೇಶಪ್ರೇಮಿ. 

ಮೂರು ದಿನ ಟ್ರೈನಿಂಗ್ ಕಳೆಯುವುದರಲ್ಲಿ ಸಂಯುಕ್ತ ಸಾಕೇತ್ ನ ಅಪ್ಪಟ ಆರಾಧಕಳಾಗಿದ್ದಳು. ಆತನ ಮಾತಿನಿಂದ ಪ್ರಭಾವಿತಳಾಗಿ ಆತ್ಮವಿಶ್ವಾಸದ ಚಿಲುಮೆಯಾದಳು. ಆದರೆ, ನಾಲ್ಕನೇ ದಿನದ ಟ್ರೈನಿಂಗ್ ಗೆ ಆತನ ಬದಲಿಗೆ ಮತ್ತಾರೋ ಬಂದರು, ಅವಳಿಗೆ ನಿರಾಶೆ. ಅಂದು ಸಂಜೆ ತಿಳಿದದ್ದು ಸಾಕೇತ್ ಇನ್ನು ಮುಂದೆ ಇಲ್ಲಿಗೆ ಬರುವುದಿಲ್ಲ ಎಂದು. ಕಚೇರಿಯಲ್ಲಿ ನಡೆಯುತ್ತಿದ್ದ ಮಹಿಳಾ ಕಿರುಕುಳದ ಕುರಿತು ದನಿಯೆತ್ತಿದವನಿಗೆ "ಕಚೇರಿಯ ಹಣ ದುರ್ಬಳಕೆ ಮಾಡಿಕೊಂಡಿದ್ದಾನೆ" ಎಂಬ ಸುಳ್ಳು ಆರೋಪ ಹೊರಿಸಿ ಅಲ್ಲಿಂದ ಹೊರ ಹಾಕಿದ್ದರು. 

ಆವತ್ತಿನ ಹಿಂದಿನ ದಿನವೇ ಯಾಕೋ ಸಂಯುಕ್ತಾಳಿಗೆ ಆ ರೀತಿ ಕೆಟ್ಟ ಕನಸು ಬಿದ್ದದ್ದು. ಮರುದಿನ ಟ್ರೈನಿಂಗ್ ನಲ್ಲಿ ಬಂದುದ್ದು ಅವನು "ಅನೂಪ್". ಟ್ರೈನಿಂಗ್ ಮತ್ತು ಪರಿಚಯದ ನೆಪದಲ್ಲಿ ಎಲ್ಲರ ಪರಿಚಯ ಮಾಡಿಕೊಂಡು ಸ್ನೇಹಮಯಿ ಎಂದು ವರ್ತಿಸುವವನ ಗೋಮುಖ ವ್ಯಾಘ್ರತನ ಅಂದೇ ಅವಳಿಗೆ ಪರಿಚಿತವಾಗಿತ್ತು. ಸಲುಗೆಯಿಂದ ಮಾತನಾಡಿಸುವ ನೆಪದಲ್ಲಿ ಮೈ ಕೈ ಮುಟ್ಟಿ ಮಾತನಾಡಿಸುವ ರೀತಿ ಅವಳಿಗೆ ಹಿಂಸೆಯಾಗಿತ್ತು. ಮರುದಿನವೇ ಅವನ ದುರ್ವರ್ತನೆ ಕುರಿತು ಸಾಕ್ಷಿ ಸಮೇತ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಳು. ಜೊತೆಗೆ ಸಾಕೇತ್ ಇದನ್ನು ಈಗಾಗಲೇ ಖಂಡಿಸಿದ್ದರು ಎಂಬ ಅಂಶವನ್ನು ಮನದಟ್ಟು ಮಾಡಿದ್ದಳು. ಇದೆಲ್ಲದರ ವಿಚಾರಣೆಗೆ ಎಂದು ಸಾಕೇತ್ ನನ್ನು ಮತ್ತೆ ಆ ಕಂಪೆನಿಗೆ ಕರೆದಿದ್ದರು. ಆಗಲೇ ಸಾಕೇತ್ ನ ಕಣ್ಣಿಗೆ ಅವಳು ಬಿದ್ದಿದ್ದು. ಅವಳ ದಿಟ್ಟತನವನ್ನು ಶ್ಲಾಘಿಸಿದರೆ ಅವಳು "ಇದೆಲ್ಲವೂ ನಿಮ್ಮ ಪ್ರಭಾವ" ಎಂದಿದ್ದಳು. ಸಾಕೇತ್ ತನ್ನ ಮೇಲಿನ ಆರೋಪವನ್ನೆಲ್ಲಾ ಸುಳ್ಳು ಎಂದು ಸಾಬೀತು ಮಾಡಿ ತಾನೇ ಕೆಲಸವನ್ನು ತೊರೆದಿದ್ದ. "ನೀವು ಇಲ್ಲೇ ಉಳಿಯಬಹುದಲ್ಲಾ..?" ಎಂದದ್ದಕ್ಕೆ "ನನ್ನ ಆತ್ಮಾಭಿಮಾನಕ್ಕೆ ಧಕ್ಕೆ ಮಾಡಿಕೊಂಡು ನಾನು ಇಲ್ಲಿ ಉಳಿಯಲಾರೆ" ಎಂದಿದ್ದ. "ನನ್ನ ಮೇಲಿದ್ದ ಆರೋಪವನ್ನು ಸುಳ್ಳು ಎಂದು ಸಾಬೀತು ಮಾಡುವಲ್ಲಿ ನಿಮ್ಮ ಪಾತ್ರ ಬಹು ಮುಖ್ಯ. ನಿಮ್ಮ ಸಹಾಯಕ್ಕೆ ಧನ್ಯವಾದಗಳು. ನಿಮಗೆ ಯಾವುದೇ ಸಮಯದಲ್ಲಿ, ಯಾವುದೇ ಸಹಾಯ ಬೇಕಾದಲ್ಲಿ ಸಂಪರ್ಕಿಸಿ" ಎಂದು ತನ್ನ ಮೊಬೈಲ್ ನಂಬರ್ ಅನ್ನು ನೀಡಿ ಹೊರಟಿದ್ದ. 

ಸಂಯುಕ್ತಳ ಮೊಬೈಲ್ ನಂಬರ್ ಸಾಕೇತ್ ಬಳಿ ಇರಲಿಲ್ಲ, ಇವಳೂ ಅವನನ್ನು ಸಂಪರ್ಕಿಸುವ ಧೈರ್ಯ ಮಾಡಿರಲಿಲ್ಲ. ಸಾಕೇತ್ ಗೆ ಬಹುಶಃ ಸಂಯುಕ್ತಳ ನೆನಪು ಸಹಾ ಇರಲಿಕ್ಕಿಲ್ಲ. ಆದರೆ, ಸಂಯುಕ್ತ ಪಾಲಿಗೆ ಸಾಕೇತ್ ಪ್ರತ್ಯಕ್ಷ ದೈವ. ಅವಳ ಕಲ್ಪನೆಯ ಲೋಕದಲ್ಲಿ ಅವನೇ ಎಲ್ಲಾ.. ಆದರೂ, ಸಾಕೇತ್ ಕುರಿತಂತೆ ಕಚೇರಿಯಲ್ಲಿ ಅನೇಕರು ಹಲವು ತರಹದ ಅಭಿಪ್ರಾಯಗಳನ್ನು ಹೊಂದಿದ್ದರು. ಹಲವರಿಗೆ ಒಳ್ಳೆಯವನು, ಕೆಲವರಿಗೆ ಅವನ ಕೋಪದ ಮೂಲಕ ಕೆಟ್ಟವನು. ಇವಳು ಸಾಕೇತ್ ನನ್ನು ಹೊಗಳಿದಾಗಲೆಲ್ಲಾ ಅವಳ ಸೀನಿಯರ್ ಸಹೋದ್ಯೋಗಿ ಅಂಕಿತಾ "ಅವನಿಗೆ ಈಗಾಗಲೇ ಇರುವ ಅಭಿಮಾನಿ ಹುಡುಗಿಯರ ಪಟ್ಟಿ ದೊಡ್ಡದಾಗೇ ಇದೆ. ಹುಷಾರು, ಲವ್ ಅಲ್ಲಿ ಬೀಳಬೇಡ" ಎಂದಿದ್ದಳು. ಜೊತೆಗೆ "ಅವನಿಗೆ ಕುಡಿಯುವ ಖಯಾಲಿ ಕೂಡಾ ಇದೆ" ಎಂದೂ ಹೇಳಿದ್ದಳು. ಸಂಯುಕ್ತಾಳಿಗೆ ಅವಳ ಅಭಿಮಾನದ ಮುಂದೆ ಇದೆಲ್ಲವೂ ನಗಣ್ಯ. "ಅವರ ವೈಯಕ್ತಿಕ ಬದುಕಿನ ಕುರಿತು ತಿಳಿಯುವ ಅಸ್ಥೆ ನನಗಿಲ್ಲ, ಅವರ ಮಾತು, ನಡೆ-ನುಡಿ ಮಾತ್ರ ಸಾಕು. ಹೆಣ್ಣು ಮಕ್ಕಳ ಕುರಿತ ಆಸ್ಥೆ, ಕಾಳಜಿ, ಸ್ವಾಭಿಮಾನ ಇದಕ್ಕೆ ಅಭಿಮಾನಿ ನಾನು" ಎಂದು ಉತ್ತರಿಸಿದ್ದಳು. ಹೀಗೇ ಸಂಯುಕ್ತಾಳ ಕನಸಲ್ಲಿ, ಕಲ್ಪನೆಯಲ್ಲಿ ಅವಳಿಗೆ ಧೈರ್ಯ-ಸ್ಥೈರ್ಯ ತುಂಬಲು ಸಾಕೇತ್ ಸದಾ ಜೀವಂತ.

ಇದೆಲ್ಲವನ್ನೂ ನೆನೆಸಿಕೊಂಡು ಮಲಗಿದ್ದವಳು ಎದ್ದು ಅಂದುಕೊಂಡಂತೆ ದೇವಸ್ಥಾನಕ್ಕೂ ಹೋಗಿಬಂದಳು. ದೇವರಲ್ಲಿ ಅವಳ ಪ್ರಾರ್ಥನೆ ಯಾವಾಗಲೂ ಹೀಗೆಯೇ ಇರುತ್ತಿತ್ತು. "ಒಳ್ಳೆಯವರಿಗೆ ಒಳ್ಳೆಯದನ್ನು ಮಾಡು, ಕೆಟ್ಟವರಿಗೂ ಒಳ್ಳೆಯ ಬುದ್ಧಿ ನೀಡಿ ಒಳ್ಳೆಯದನ್ನೇ ಮಾಡು."
"ಬದುಕನ್ನು ಸುಲಭಗೊಳಿಸಬೇಡ ಬದಲಿಗೆ ಕಷ್ಟಗಳನ್ನು ಎದುರಿಸುವ ಶಕ್ತಿ ನೀಡು. ನಿನ್ನ ಕುರಿತು ಸದಾ ನನ್ನ ಶ್ರದ್ಧೆ, ನಂಬಿಕೆಗಳು ಹೀಗೇ ಉಳಿಯಲಿ. ಬದುಕು ನಾನಂದುಕೊಂಡಂತೆ ಸಾಗುತ್ತಿಲ್ಲ ಎಂದು ನನಗೆ ಅರಿವಿದೆ. ಸದಾ ನಿನ್ನ ಕೃಪೆ ಇರಲಿ. ನಿನ್ನ ಪ್ಲಾನ್ ನಂತೆಯೇ ಬದುಕು ಸಾಗಲಿ. ಯಾಕೆಂದರೆ, ನಿನ್ನ ದೃಷ್ಟಿಕೋನ ಯಾವಾಗಲೂ ವಿಶಾಲವಾದುದು. ಜೊತೆಗೆ ನನಗೆ ನನಗಿಂತ ನಿನ್ನ ಮೇಲೆಯೇ ಹೆಚ್ಚು ನಂಬಿಕೆ."
ಎಂದಿನಂತೆಯೇ ಬಾಬಾಗೆ ತನ್ನ ಪ್ರಾರ್ಥನೆ ಸಲ್ಲಿಸಿ ಹೊರಬಂದವಳಿಗೆ ಯಾವಾಗಿನ ನೆಮ್ಮದಿ ಇರಲಿಲ್ಲ.ಅವಳ ಆತಂಕ, ತಳಮಳಕ್ಕೆ ಉತ್ತರ ಸಿಗುವ ದಿನ ದೂರದಲ್ಲೇನೂ ಇರಲಿಲ್ಲ. ಆದರೆ, ಈ ಮುನ್ಸೂಚನೆಯ ಅರ್ಥ ಸದ್ಯಕ್ಕೆ ಅರ್ಥವಾಗಿರಲಿಲ್ಲ ಅಷ್ಟೇ..

ಸೋಮವಾರ ಕಚೇರಿಗೆ ಬಂದವಳಿಗೆ ಒಂದು ತಿಂಗಳ ಸಸ್ಪೆಂಡ್ ಅವಧಿ ಮುಗಿಸಿ ಬಂದಿದ್ದ ಅನೂಪ್ ಕಾಣಿಸಿದ್ದ. ಅವಳ ದುರಾದೃಷ್ಟವೋ ಎಂಬಂತೆ ಅವಳು ಅವನ ಟೀಮ್ ಅಲ್ಲಿಯೇ ಕೆಲಸ ಮಾಡಬೇಕಿತ್ತು. ಮೊದಲ ಒಂದೆರಡು ದಿನ ಎಲ್ಲವೂ ಸರಿಯಾಗಿತ್ತು. ಅವನು ಬದಲಾಗಿದ್ದಾನೆ ಎಂದುಕೊಳ್ಳುವಷ್ಟರಲ್ಲಿ ಸಾಕೇತ್ ಕುರಿತಂತೆ ನೆಗೆಟಿವ್ ಆಗಿ ಮಾತನಾಡುತ್ತಾ ತನ್ನನ್ನು ಒಳ್ಳೆಯವನಂತೆ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ಇದೆಲ್ಲವೂ ಸಂಯುಕ್ತಾಳಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. 

ಅದೇಕೋ ಬುಧವಾರ ರಾತ್ರಿ ಸರಿಯಾದ ನಿದ್ದೆ ಇಲ್ಲ, ಏನೋ ಕೆಡುಕು ಸಂಭವಿಸಬಹುದು ಎಂಬ ಮುನ್ಸೂಚನೆ ಕಾಡುತ್ತಿತ್ತು. ರಾತ್ರಿ ಎಲ್ಲಾ ಸರಿಯಾದ ನಿದ್ದೆ ಇಲ್ಲ. ಏನನ್ನಿಸಿತೋ ಏನೋ ಗುರುವಾರ ಬೆಳಿಗ್ಗೆ ಎದ್ದವಳೇ ಸಾಕೇತ್ ಗೆ ಕಾಲ್ ಮಾಡಿದ್ದಳು. ತನ್ನ ಗುರುತು ಹಿಡಿಯವನೋ ಇಲ್ಲವೋ ಎಂಬ ಅನುಮಾನದಲ್ಲಿದ್ದವಳಿಗೆ ಅರೆಕ್ಷಣದಲ್ಲಿಯೇ ತನ್ನ ಅನುಮಾನ ಸುಳ್ಳು ಎಂದು ಸಾಬೀತಾಯಿತು. "ಇಂದು ಸಂಜೆ ಆ ಕಂಪೆನಿಯ ಪಕ್ಕದಲ್ಲೇ ಇರುವ ಕಾಫಿ ಶಾಪ್ ನಲ್ಲಿ ಸಿಗುವಿರಾ? ಸ್ವಲ್ಪ ಮಾತನಾಡಬೇಕಿದೆ. ನಿಮ್ಮಿಂದ ನನಗೊಂದು ಸಲಹೆ ಬೇಕಿದೆ" ಎಂದಳು. ಖಂಡಿತಾ ಎಂಬ ಉತ್ತರ ಸಿಕ್ಕಿತ್ತು. ಆದರೆ, ಅವರಬ್ಬರ ಭೇಟಿ ಹೇಗಿರಬೇಕಿತ್ತು ಎಂಬುದನ್ನು ಕಾಲವೇ ನಿರ್ಧರಿಸಿದಂತಿತ್ತು.

ಅವಳ ದುರಾದೃಷ್ಟವೋ ಎಂಬಂತೆ ಅಂದು ಸಂಜೆ ಅನೂಪ್ ಹೆಚ್ಚಿನ ಕೆಲಸ ನೀಡಿದ್ದ. ಇದನ್ನು ಮುಗಿಸಿಯೇ ಹೋಗಬೇಕು ಎಂದು ಕಟ್ಟುನಿಟ್ಟಾಗಿ ಹೇಳಿಬಿಟ್ಟಿದ್ದ. ಎಲ್ಲರಂತೆ ಅವನಿಗೆ ಸಹಕರಿಸದೆ ಇದ್ದುದ್ದಕ್ಕೆ ಸಂಯುಕ್ತಾಳ ಪಾಲಿಗೆ ಈ ಶಿಕ್ಷೆ. ಎಲ್ಲರೂ ಹೊರಟರೂ ಅವಳ ಕೆಲಸ ಮುಗಿದಿರಲಿಲ್ಲ. ಮೊಬೈಲ್ ಬಳಸುವುದನ್ನು ಕೂಡಾ ಅನೂಪ್ ನಿಷೇಧಿಸಿದ್ದ. ಇತ್ತ ಸಂಯುಕ್ತಾಳಿಗೆ ಧರ್ಮಸಂಕಟ. ಸಾಕೇತ್ ಬಂದಿರುವನೇನೋ ಎಂಬ ಚಿಂತೆ. ಅವನ ಕೋಪದ ಕುರಿತು ಕೇಳಿದ್ದವಳಿಗೆ, ಅವನ ಸಮಯ ಪರಿಪಾಲನೆ ಕುರಿತು ತಿಳಿದಿದ್ದವಳಿಗೆ ಆತಂಕ. ಮೊದಲ ಬಾರಿಗೆ ತನ್ನ ಪ್ರತ್ಯಕ್ಷ ದೈವದೊಂದಿಗೆ ಮಾತನಾಡಬೇಕೆಂದುಕೊಂಡಿದ್ದವಳಿಗೆ ಕಡಿವಾಣ ಹಾಕಿದಂತಿತ್ತು.

ಅದೇ ಯೋಚನೆಯಲ್ಲಿದ್ದವಳಿಗೆ ಅನೂಪ್ ಎಂಬ ಘೋಮುಖ ವ್ಯಾಘ್ರನ ದುಷ್ಟ ಯೋಚನೆಯ ಅರಿವಿರಲಿಲ್ಲ. ಸಮಯ 7.30 ಆದರೂ ಸಂಯುಕ್ತಾಳ ಪತ್ತೆ ಇರಲಿಲ್ಲ. ಸಾಕೇತ್ ಕಾದು ಕಾದು ಸಾಕಾಗಿ ಹೊರಡಬೇಕು ಎಂದುಕೊಂಡ, ಮೊಬೈಲ್ ಗೆ ಕಾಲ್ ಮಾಡಿದರೂ ತೆಗೆಯುತ್ತಿಲ್ಲ ಅಲ್ಲದೇ ಅವಳಾಗಿಯೇ ಕರೆ ಮಾಡಿ ಬರಲು ಹೇಳಿದ್ದಳು. ಅವಳು ಎಲ್ಲರಂತಲ್ಲ, ಬಹಳ ವಿಭಿನ್ನ. ಅವಳಿಗೆ ಏನಾದರೂ ತೊಂದರೆ ಆಗಿರಬಹುದೇ..? ಎಂಬ ಆಲೋಚನೆ ಒಮ್ಮೆ ಅವನ ತಲೆಗೆ ಬಂದಿತು. ಮತ್ತೆ ತಡಮಾಡದೆ ಪಕ್ಕದಲ್ಲೇ ಇದ್ದ ಕಂಪೆನಿಯತ್ತ ಹೊರಟ. ಅಲ್ಲಿಯೇ ಇದ್ದ ವಾಚ್ ಮ್ಯಾನ್ ಸಂಯುಕ್ತಾಳ ಕುರಿತು ಕೇಳಿದ್ದಕ್ಕೆ "ಗೊತ್ತಿಲ್ಲ ಸರ್, ಹೋಗಿರಬಹುದೇನೋ.." ಎಂದ. ಹಳೆಯ ಪರಿಚಯ ಆದುದರಿಂದ ಮತ್ತು ಸಾಕೇತ್ ನ ಕಾರ್ಯದಕ್ಷತೆಯ ಅರಿವಿದ್ದುದರಿಂದ "ಒಂದು ಸಾರಿ ಬೇಕಾದರೆ ಒಳಗಡೆ ಹೋಗಿ ನೋಡಿ ಬನ್ನಿ, ಸರ್" ಎಂದ. ಸಾಕೇತ್ ಒಂದು ಕ್ಷಣ ಆಲೋಚನೆ ಮಾಡಿ ನಂತರ ಒಲ್ಲದ ಮನಸ್ಸಿನಿಂದಲೇ ಒಳಗೆ ಕಾಲಿಟ್ಟ.

ಮೊದಲನೇ ಫ್ಲೋರ್ ಹತ್ತುವಷ್ಟರಲ್ಲೇ ಯಾರೋ ಕಿರುಚಿದ ಸದ್ದಾಯಿತು. ಬೇಗನೆ ಎರಡನೇ ಫ್ಲೋರ್ ತಲುಪಿದ. ಅಲ್ಲಿನ ದೃಶ್ಯ ಕಂಡು ಸಾಕೇತ್ ನ ರಕ್ತ ಕುದಿಯುತ್ತಿತ್ತು. ಅನೂಪ್ ಸಂಯುಕ್ತಾಳನ್ನು ಬಲಾತ್ಕಾರ ಮಾಡಲು ಪ್ರಯತ್ನಿಸುತ್ತಿದ್ದ. ಒಂದು ಬಾರಿ "ಅನೂಪ್" ಎಂದು ಅಬ್ಬರಿಸಿದ ಸಾಕೇತ್. ಸಂಯುಕ್ತಾಳಿಗೆ ಹೋದ ಜೀವ ಬಂದಂತಾಯಿತು. ಸಂಯುಕ್ತಾಳ ಓಡಿ ಬಂದವಳೇ ಸಾಕೇತ್ ಅನ್ನು ಅಪ್ಪಿ ಹಿಡಿದಳು. ಸಾಕೇತ್ ನಿಗೆ ಇದು ಅನಿರೀಕ್ಷಿತ. ಅವಳನ್ನು ಸಾಂತ್ವಾನಗೊಳಿಸಿ ಅನೂಪ್ ಅನ್ನು ಹಿಗ್ಗಾಮುಗ್ಗಾ ಥಳಿಸಿದ. ಅಷ್ಟಾದರೂ ಅನೂಪ್ ದುರ್ಬುದ್ಧಿ ಹೋಗಿರಲಿಲ್ಲ. "ನನ್ನ ಜೊತೆ ನಾಜೂಕಮ್ಮನಂತೆ ನಾಟಕವಾಗುವವಳು ಅವನ ಜೊತೆ ಚಕ್ಕಂದವಾಡುತ್ತಿದ್ದೀಯ" ಎಂದು ಕೆಟ್ಟದಾಗಿ ಮಾತನಾಡಿದ. ಮತ್ತೆ ಅವನನ್ನು ಹೊಡೆಯಲು ಹೊರಟವನನ್ನು ತಡೆದ ಸಂಯುಕ್ತ ಅಲ್ಲಿಂದ ಕರೆದುಕೊಂಡು ಹೊರಟಳು.

ಮರುದಿನ ತನ್ನ ತಪ್ಪನ್ನು ಮುಚ್ಚಲು ಅನೂಪ್ ಬೇರೆಯದ್ದೇ ಕಥೆ ಹೆಣೆದಿದ್ದ. ಅವನ ಮೋಸದ ಜಾಲವನ್ನು ಸಾಕ್ಷಿ ಬಯಲು ಮಾಡಿದ ಸಂಯುಕ್ತ ಒಂದರೆಕ್ಷಣವೂ ಅಲ್ಲಿ ನಿಲ್ಲಲಿಲ್ಲ. ಅಂದು ಮರೆಯಾದ ಸಂಯುಕ್ತ ಮತ್ತೆಲ್ಲೂ ಕಾಣಿಸಿಕೊಂಡಿರಲಿಲ್ಲ.

3 ವರ್ಷಗಳ ನಂತರ ಸಂಯುಕ್ತ ಕಾಣ ಸಿಕ್ಕಳು. ಈಗ ಅವಳು ಮೊದಲಿನ ಸಂಯುಕ್ತ ಅಲ್ಲ. 
"ಮುನ್ಸೂಚನೆ" ಸಂಸ್ಥೆ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕಿರುಕುಳವನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಪ್ರತಿ ಶಾಲೆ, ಕಾಲೇಜು, ಮತ್ತು ಕಚೇರಿಯಲ್ಲಿ ಉಚಿತವಾಗಿ ಇವುಗಳನ್ನು ತಡೆಯುವ ಕೆಲಸ ಮಾಡುತ್ತಿದೆ. ಇವೆಲ್ಲದರ ಜೊತೆ ಸಂಯುಕ್ತಳ ಬದುಕಿನ "ಮುನ್ಸೂಚನೆ"ಯ ಆ ಕ್ಷಣಗಳು ಸಹಾ ಬಿಚ್ಚಿಟ್ಟುಕೊಳ್ಳುತ್ತವೆ. ಇವೆಲ್ಲದರ ಅರಿವು ಮೂಡಿಸುತ್ತಿರುವುದು ಸಾಕೇತ್-ಸಂಯುಕ್ತ ದಂಪತಿಗಳು.

ಈಗ ಸಂಯುಕ್ತಾಳಿಗೆ ಕೆಟ್ಟ ಕನಸುಗಳು ಬೀಳುತ್ತಿಲ್ಲ, ತಳಮಳಗಳಿಲ್ಲ. ಸಾಯಿಬಾಬಾ ದಯೆಯಿಂದ ಅವಳ ಜೀವನದ ಪ್ರತ್ಯಕ್ಷ ದೈವ ಅವಳ ಜೊತೆಯಿದ್ದಾನೆ. ನಾನಿದ್ದೇನೆ ಎಂಬ ಭರವಸೆ ತುಂಬುತ್ತಾನೆ. ಬದುಕಿನ ಕೊಂಡಿಗಳು ಬೆಸುಗೆಯಾಗಿವೆ. ಅವಳ ಕನಸು-ಮನಸು-ಬದುಕಿನ ತುಂಬೆಲ್ಲಾ ಅವನು ಮತ್ತು ಅವನು ನೀಡಿದ ಸ್ಥೈರ್ಯವೇ ತುಂಬಿದೆ. "ಮುನ್ಸೂಚನೆ"ಯಿಂದಾಗಿ ಬದುಕು ಮತ್ತೊಂದು ಹೊಸ ಆಶಾಕಿರಣದೊಂದಿಗೆ ಹುರುಪಿನಿಂದ ಸಾಗುತ್ತಲಿದೆ.

~ವಿಭಾ ವಿಶ್ವನಾಥ್