ಬುಧವಾರ, ಜೂನ್ 26, 2019

ಸ್ವಪ್ನಪ್ರಿಯ

ಯಮುನೆಯ ತೀರದಲ್ಲಿ ರಾಧೆ ಮಲಗಿ ಬಡಬಡಿಸುತ್ತಿದ್ದಾಳೆ.. "ಅಷ್ಟಕ್ಕೂ, ನಿನ್ನ ಒಲವಿಗೆ ನಾನು ಮನಸೋತದ್ದು ಏಕೆ? ಎಂಬ ಪ್ರಶ್ನೆಗೆ ಇವತ್ತಿಗೂ ನನ್ನ ಬಳಿ ಉತ್ತರ ದೊರಕದು. ಮನೆಯ, ಮನಸಿಜನ ಬಂಧನವನ್ನೆಲ್ಲಾ ತೊರೆದು ಧಿಕ್ಕರಿಸಿ ನಿನ್ನ ಮಾಯೆಯ ಪರಿಧಿಗೆ ಬರುತ್ತಿದ್ದದ್ದಾದರೂ ಯಾಕೆ? ಇವತ್ತಿಗೂ ಇವೆಲ್ಲದರ ಕುರಿತು ನನಗೇ ಉತ್ತರ ದೊರಕದ ಪ್ರಶ್ನೆಗಳಿವು.."

"ಹೌದು, ನಿನ್ನನ್ನು ದ್ವೇಷಿಸಲಾಗದಷ್ಟು, ತಿರಸ್ಕರಿಸಲಾಗದಷ್ಟು ನೀನು ಎಂದಾದರೂ ಬಿಟ್ಟು ಹೊರಡಬಹುದೆಂಬ ಕಲ್ಪನೆಯೇ ಮಾಡಿಕೊಳ್ಳಲಾಗದಷ್ಟು ನಿನ್ನ ಪ್ರೀತಿಯ ಮಾಯೆಯೊಳಗೆ ಸಿಲುಕಿಬಿಟ್ಟಿದ್ದೆ. ಆದರೆ ಇದೆಲ್ಲದಕ್ಕೂ ಮೊದಲು ನಿನ್ನೆಡೆಗೆ ಅಗಾಧ ತಿರಸ್ಕಾರವಿದ್ದದ್ದು ಸುಳ್ಳಲ್ಲ. ನಿನ್ನ ಮಾಯೆಗಳೆಲ್ಲವನ್ನೂ ಕಂಡು ನಕ್ಕು ಸುಮ್ಮನಾಗಿಬಿಡುತಿದ್ದೆ, ನೀನು ಮಾಡಿದ್ದು ಅಂತಹಾ ಮಹಾನ್ ಕೆಲಸವೇನೂ ಅಲ್ಲ ಎಂಬುದಾಗಿತ್ತು ನನ್ನ ಭಾವನೆ. ಆದರೆ ತಿರಸ್ಕಾರ, ದ್ವೇಷದ ಮೂಲೆಯಲ್ಲೆಲ್ಲೋ ಮಧುರ ಕಂಪನ ಮೂಡುತ್ತಿದ್ದದ್ದು ನನ್ನರವಿಗೆ ಬಂದರೂ ಅದನ್ನು ನಾನೇ ಬಚ್ಚಿಟ್ಟುಬಿಡುತ್ತಿದ್ದೆ. ಈ ಪರಿಯ ದ್ವೇಷ ಹೊಂದಿದ್ದ ಈ ರಾಧೆ ಮುರಳಿಯ ಮಾಯೆಗೆ ಸಿಕ್ಕಿದ್ದು ಆ ಒಂದು ಸಂಧರ್ಭದಲ್ಲಿಯೇ.."

"ಇದ್ದದ್ದು, ಬೆಳೆದದ್ದು ಒಂದೇ ಪರಿಸರದಲ್ಲಿಯಾದರೂ ನೀನು ಕಂಡರೂ ಕಾಣದಂತೆ ತಲೆತಗ್ಗಿಸಿ ಹೊರಟುಬಿಡುತ್ತಿದ್ದೆ. ಆಗಂತುಕನ ಕುರಿತಾಗಿ ಮತ್ತಾವ ಭಾವನೆಗಳೂ ಬೆಳೆಯಲು ಬಿಟ್ಟಿರಲಿಲ್ಲ. ಅಷ್ಟರಲ್ಲಾಗಲೇ ಪೂತನಿ, ಅಘಾಸುರ, ಶಕಟಾಸುರ ಮುಂತಾದ ಭೀಕರ ರಾಕ್ಷಸರ ಹತ್ಯೆಯನ್ನು ಮಾಡಿಬಿಟ್ಟು ನೀನು ಅದಾವುದನ್ನೂ ಮಾಡಿಯೇ ಇಲ್ಲವೇನೋ ಎಂಬಂತೆ ನಿರುಮ್ಮಳವಾಗಿದ್ದೆ.
ನಿನ್ನ ಬೆಣ್ಣೆ, ಹಾಲು, ಮೊಸರಿನ ಪ್ರೀತಿಯ ಕಥೆಗಳನ್ನು ಕೇಳಿದ್ದೆ. ಸುತ್ತಮುತ್ತಲಿನ ಮನೆಗಳಿಗೆ ನೀನು ನಿನ್ನ ಗೆಳೆಯರ ಪಟಾಲಂನೊಂದಿಗೆ ದಾಳಿ ಮಾಡಿದ್ದರೂ ನನ್ನ ಮನೆಗೆ ಬರುವ ಕೃಪೆ ತೋರಿರಲಿಲ್ಲ. ನೀಲವರ್ಣದ ನಿನ್ನ ರೂಪು ನೋಡಿದಷ್ಟೂ ನೋಡುವಂತೆ ಮಾಡುತ್ತಿತ್ತಂತೆ.. ಹಾಗೆಂದು ಉಳಿದವರು ಹೇಳಿದ್ದನ್ನು ಕೇಳಿದ್ದೆನಷ್ಟೇ, ಯಾಕೆಂದರೆ ಅದುವರೆಗೂ ನಾನು ನಿನ್ನನ್ನು ಕಣ್ಣೆತ್ತಿಯೂ ನೋಡಿರಲಿಲ್ಲ. ಅಕಸ್ಮಾತ್, ಮೊದಲೇ ನೋಡಿದ್ದರೆ ನನ್ನ ರಾಗದ್ವೇಷಗಳೆಲ್ಲಾ ಕರಗಿ ನೀರಾಗುತ್ತಿದ್ದವೋ ಏನೋ.. ಆದರೆ, ಎಲ್ಲದಕ್ಕೂ ಸಮಯ ಸಹಕಾರಿಯಾಗಿರಬೇಕಂತಲ್ಲಾ.. ಆ ಸಮಯ ನನ್ನ ಪಾಲಿಗೆ ಇನ್ನೂ ಯಾಕೋ ಕೃಪೆ ತೋರಿರಲಿಲ್ಲ.

ಆವತ್ತು, ನನ್ನ ಬಾಳಿನಲ್ಲಿ ನೆನಪಿಡಬೇಕಾದ ಒಂದು ದಿನ. ಮೊಗ್ಗು ಬಿರಿದು ಹೂವಾಗುವ ಸುಸಮಯವಂತೆ ಅದು ಆದರೆ ನನಗೆ ಹಾಗನ್ನಿಸಲೇ ಇಲ್ಲ. ಏಕೆಂದರೆ, ಬಿಟ್ಟೂ ಬಿಡದ್ದ್ ಕಾಡುವ ಹೊಟ್ಟೆನೋವು ನಾನು ಪುಷ್ಪವತಿಯಾದ ಸಂದರ್ಭದಲ್ಲಿ ಕಾಡುತ್ತಿತ್ತು. ಅದೇನೇನೋ ಶಾಸ್ತ್ರಗಳು ನಡೆಯುತ್ತಿದ್ದರೂ ಆ ಪರಿವೆಯೇ ನನಗಿರಲಿಲ್ಲ. ಆ ಸಂದರ್ಭದಲ್ಲಿ ನಿನ್ನಮ್ಮ ಯಶೋದೆ ಕೂಡಾ ಆ ಆರತಿಶಾಸ್ತ್ರಕ್ಕೆ ಬಂದಿದ್ದರು.ಪುರುಷರಿಗೆ ಆ ಸಂದರ್ಭದಲ್ಲಿ ನಿರ್ಬಂಧ ಎಂದಿದ್ದರೂ ನಿನಗೇಕೋ ಆ ನಿಯಮ ಅನ್ವಯಿಸಿರಲಿಲ್ಲ. ನಿನ್ನಮ್ಮನನ್ನು ಕಂಡು ಆ ರತ್ನಮಾಲೆಯನ್ನು ಕೊಡಲೆಂದು ಬಂದವನು ನನ್ನ ಕಣ್ಣಿಗೆ ಬಿದ್ದಿದ್ದೆ. ನಿನ್ನ ನೋಡಿದ ಆ ಘಳಿಗೆಯಲ್ಲಿ ಕಾಲ ಹೀಗೇ ನಿಲ್ಲಬಾರದೇ ಎಂದೆನಿಸುತ್ತಿತ್ತು, ಅಷ್ಟೊಂದು ಪೀಡಿಸುತ್ತಿದ್ದ ಹೊಟ್ಟೆನೋವು ಕೂಡಾ ಹೊರಟುಹೋಗಿತ್ತು. ಅದು ಕನಸೋ, ನನಸೋ ತಿಳಿಯಲಿಲ್ಲ. ದಿನಾ ರಾತ್ರಿ ಕನಸಲ್ಲಿ ಬಂದು ಕಾಡುವ ರೂಪ ಅಂದು ಕಣ್ಮುಂದೆ ಬಂದಿತ್ತು. ಪಕ್ಕದಲ್ಲಿದ್ದ ಗೆಳತಿಯನ್ನು ಕೇಳಿದೆ ಯಾರವನು? ಎಂದು.."ಅವನೇ ಮುರಳಿ" ಎಂದಳವಳು. ಮನದಲ್ಲಿ ದ್ವಂದ್ವ ಭಾವನೆಗಳ ತರಂಗ. ನಾನು ದ್ವೇಷಿಸುತ್ತಿದ್ದ ಮುರಳಿಗೂ, ನಾನು ಕಂಡಿದ್ದ ನನ್ನ ಸ್ವಪ್ನದ ಮುರಳಿಗೂ ತಾಳೆ ಹಾಕುತ್ತಾ ಕೂತಿದ್ದೆ. ವಿಧಿ ಹೀಗೂ ಇರಬಹುದೇ? ಅಂತೂ ಶಾಸ್ತ್ರಗಳೆಲ್ಲವೂ ಮುಗಿದಿದ್ದವು. ಮುಗಿದದ್ದು ಗೊತ್ತೇ ಆಗಿರಲಿಲ್ಲ. ಆ ನಂತರ ಗೆಳತಿಯೆಂದಳು "ಈ ಸಮಯದಲ್ಲಿ ಕಂಡ ಮೊದಲ ಹುಡುಗನೊಟ್ಟಿಗೇ ನಿನ್ನ ವಿವಾಹವಾಗುತ್ತದಂತೆ". ಈ ಮಾತು ಕೇಳಿಯೇ ಮನದಲ್ಲಿ ಪುಳಕವೆದ್ದಿತ್ತು. ಇಂತಹವುಗಳನ್ನೆಲ್ಲಾ ಕೇಳಿ ಧಿಕ್ಕರಿಸುತ್ತಿದ್ದ ನಾನು ಇದು ಈಡೇರಲೆಂದು ಹರಕೆ ಹೊತ್ತದ್ದೆಷ್ಟೋ? ಆದರೆ ಹರಕೆ ಫಲಿಸದಂತೆ ವಿಧಿ ಆಯನನ ಹೆಸರನ್ನು ನನ್ನ ಮಾಂಗಲ್ಯಕ್ಕೆ ಪೋಣಿಸಿದ್ದರೆ, ಯಾವ ಜಗನ್ನಿಯಾಮಕನಿಗೆ ತಿದ್ದಿ ಬರೆಯುವ ಭಾಗ್ಯವಿದೆ..?

ಇದಾದ ಕೆಲವು ದಿನ ನಾನು ಮನೆಯಿಂದ ಹೊರಗೆ ಕಾಲೇ ಇಡಲಿಲ್ಲ. ಆದರೆ, ಆವತ್ತು ಬಿಟ್ಟೂ ಬಿಡದಂತೆ ಮಳೆ ಸುರಿಯುತ್ತಿತ್ತು. ನೀನು ಹಟ ಮಾಡಿ ದೇವರಾಜ ಇಂದ್ರನಿಗೆ ಪೂಜೆ ಮಾಡದಂತೆ ತಡೆದಿದ್ದರ ಫಲ ವರುಣನ ಮೂಲಕ ಇಲ್ಲಿ ಎಲ್ಲರ ಮೇಲೂ ಪ್ರತಿಫಲನವಾಗುತ್ತಿತ್ತು. ಆಗಲೇ ಅಲ್ಲವೇ ನಿನ್ನ ವಿಶ್ವರೂಪದರ್ಶನ ಆದದ್ದು. ಗೋವರ್ಧನಗಿರಿಯನ್ನೆತ್ತಿ ಎಲ್ಲರಿಗೂ ಆಶ್ರಯವನ್ನಿತ್ತಿದ್ದೆ. ಅದೇ ಸಮಯದಲ್ಲಿ ಎಲ್ಲರ ಹತ್ತಿರಕ್ಕೂ ಬಂದು ಕ್ಷೇಮ ಸಮಾಚಾರವನ್ನೂ ವಿಚಾರಿಸುತ್ತಿದ್ದೆ. ಅದು ಹೇಗೆಂಬುದು ಅರ್ಥವಾಗಲೇ ಇಲ್ಲ. ಆದರೆ ನಿನ್ನ ವಿನಯ, ಹಿರಿಯರೆಡೆಗಿನ ಗೌರವ,ಕಾಳಜಿ ಎಲ್ಲವನ್ನೂ ನಾನು ಹತ್ತಿರದಿಂದ ಕಂಡಿದ್ದೆ. ಗೋಪಿಕೆಯರೊಡನೆ ವಿಶೇಷ ಸಲುಗೆಯೇನೂ ಇರಲಿಲ್ಲ. ಸ್ತ್ರೀಲೋಲ ಎಂಬ ಪದ ನಿನಗೆ ಇನಿತೂ ತಾಳೆಯಾಗುತ್ತಲೇ ಇರಲಿಲ್ಲ. ಆ 7 ದಿನಗಳಲ್ಲಿ ನಾನು ದ್ವೇಷಿಸುತ್ತಿದ್ದ ಮುರುಳಿಯ ರೂಪ ಮರೆಯಾಗಿ ನನಗೆ ಪ್ರೇಮಮಯವಾದ ಸ್ವಪ್ನಸುಂದರ ಮುರುಳಿ ನೆಲೆನಿಂತಿದ್ದ. ಎಲ್ಲೆಲ್ಲಿ ನೋಡಿದರೂ ಅಲ್ಲೆಲ್ಲಾ ನಿನ್ನ ರೂಪವೇ ಕಾಣುತ್ತಿತ್ತು. ಅದಕ್ಕೆ ಅಲ್ಲವೇ ಆಯನನೊಂದಿಗೆ ನಾನು ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದು. ದಿಬ್ಬಣದಲ್ಲಿ ಬಂದದ್ದು, ವಿವಾಹವಾಗುತ್ತಿದ್ದದ್ದೂ ಎಲ್ಲವೂ ನೀನೇ ಎಂದೇ ಭಾವಿಸಿದ್ದೆ. ಪತಿಯ ಹೆಸರೇಳಲು ಇಟ್ಟ ಒಡಪಿನ ಶಾಸ್ತ್ರದಲ್ಲಿಯೂ ನಿನ್ನ ಕುರಿತೇ ವರ್ಣಿಸಿದ್ದೆ. ಎಲ್ಲರೂ ಆಯನನನ್ನು ಅದೃಷ್ಟವಂತ ಎಂದು ಹೊಗಳಿ ನನ್ನೊಡನೆ ಕೂರಿಸಿ ಆರತಿ ಮಾಡುವಾಗ ಕೈ ಹಿಡಿದ ಆಯನನ ಸ್ಪರ್ಶ ಅಪರಿಚಿತವೆನಿಸಿತ್ತು. ಸುಂದರ ಸ್ವಪ್ನ ದುಃಸ್ವಪ್ನವಾಗಿತ್ತು, ಸುಮಧುರ ನಾದದಲ್ಲೊಂದು ಅಪಶೃತಿ ಕೇಳಿಸಿತ್ತು. ಮುರುಳಿಯನ್ನು ಹುಡುಕಿದಷ್ಟೂ ಆತ ದೂರದಲ್ಲೇ ಕಾಣಿಸಹತ್ತಿದ್ದ. 

ಸ್ವಪ್ನ ಕಳೆದು ವಾಸ್ತವ ಮರಳಿತ್ತು. ವಾಸ್ತವದಲ್ಲಿ ಬದುಕ ಹೊರಟಷ್ಟೂ ಮುರಳಿಯ ಕೊಳಲ ನಾದ ಕೆಣಕುತ್ತಿತ್ತು. ಇದೆಲ್ಲದಕ್ಕೂ ಅಂತ್ಯ ಹಾಡಬೇಕೆಂದು ನಿಶ್ಚಯಿಸಿ ಅಲ್ಲಿಂದ ಹೊರಟು ದಿನವೂ ಅಲೆಯುತ್ತಿದ್ದೆ. ಕೊಳಲ ನಾದವನ್ನೇ ಅರಸಿ ಮುರಳಿಯ ಜಾಡು ಹಿಡಿಯಲು ಎಲ್ಲೆಲ್ಲೂ ಅಲೆಯುತ್ತಿದ್ದೆ. ಇಲ್ಲೇ ಕಂಡ ಎಂದರೆ ಅದಾಗಲೇ ಮರುಭೂಮಿಯ ಮರೀಚಿಕೆಯಂತೆ ದೂರದಲ್ಲೆಲ್ಲೋ ಕಾಣುತ್ತಿದ್ದ. ಸಿಕ್ಕಿಯೇ ಬಿಟ್ಟ ಎನ್ನುವಷ್ಟರಲ್ಲೇ ಮರೆಯಾಗುತ್ತಿದ್ದ.

ಎಲ್ಲರೂ ನನ್ನನ್ನು ವಿಚಿತ್ರ ಎಂಬ ರೀತಿಯಲ್ಲೇ ನೋಡುತ್ತಿದ್ದರು. ತವರು ಮನೆಯಲ್ಲೂ, ಗಂಡನ ಮನೆಯಲ್ಲೂ ನಾನು ತಿರಸ್ಕೃತಳಾದಷ್ಟೂ ನನಗೆ ಕೊಳಲ ನಾದ ನಿಲ್ಲಿಸು ಎಂದು ಮುರಳಿಗೆ ಹೇಳುವ ಹಪಾಹಪಿ ಹೆಚ್ಚಾಗುತ್ತಿತ್ತು. "ಮುರಳಿಯ ಕಂಡಿರೇನೇ?" ಎಂದು ಗೋಪಿಕೆಯರನ್ನು ಕೇಳಿದರೆ "ಒಂದು ಕ್ಷಣವೂ ನಿನಗೆ ಅವನನ್ನು ಬಿಟ್ಟಿರಲಾಗದೇ?" ಎಂದು ಛೇಡಿಸುತ್ತಾ "ಸದಾ ನಿನ್ನೊಂದಿಗೇ ಇರುವವನು ಎಲ್ಲಿರುತ್ತಾನೆ ಎಂದು ನಮಗೇನು ಗೊತ್ತು?" ಎಂದು ಈರ್ಷ್ಯೆಯಿಂದ ಹೇಳುತ್ತಿದ್ದರು. ಆದರೆ, ನನಗೆಂದೂ ನನ್ನ ಮುರುಳಿ ಸಿಗಲೇ ಇಲ್ಲ, ಅವನ ನಾದ ನಿಲ್ಲಲೇ ಇಲ್ಲ.

ಆದರೆ, ಅವನ ನಾದ ನಿಲ್ಲುವ ಸಮಯ ಬಂದಿತ್ತೇನೋ.. ಅಕ್ರೂರ ಬಂದಿರುವನಂತೆ ಮಧುರೆಯಿಂದ. ಅದೂ ಮುರುಳಿಯನ್ನು.  ಕಾಣಲು ಎಂಬ ಮಾತು ಕಿವಿಗೆ ಬಿತ್ತು. ಇವತ್ತಾದರೂ ಮುರುಳಿ ಅವನ ಮನೆಯ ಮುಂಭಾಗದಲ್ಲಿ ಸಿಗಬಹುದೇನೋ ಎಂಬ ಆಸೆಯಿಂದ ಓಡೋಡಿ ಬಂದೆ. ಆದರೆ, ಎಲ್ಲರೂ ಸಾಲಾಗಿ ಅವನನ್ನು ಬೀಳ್ಕೊಡಲು ನಿಂತಿದ್ದರು. ಎಲ್ಲಿಗೆ ಹೊರಟ? ಯಾಕೆ ಹೊರಟ? ಎಂದು ನನಗೆ ತಿಳಿದಿರಲಿಲ್ಲ. ಅದರ ಪೂರ್ವಾಪರವೇ  ನನಗೆ ಗೊತ್ತಿರಲಿಲ್ಲ. ಮುರಳಿ ಅಲ್ಲಿ ನೆರೆದಿದ್ದವರ ಎಲ್ಲರ ಬಳಿಗೂ ಬಂದು ಏನನ್ನೋ ಕೇಳುತ್ತಿದ್ದ. ಒಬ್ಬರಿಗೆ ಕೇಳಿದ್ದು, ಹೇಳಿದ್ದು ಮತ್ತೊಬ್ಬರಿಗೆ ಗೊತ್ತೇ ಆಗುತ್ತಿರಲಿಲ್ಲ. ಹಾಗೆಯೇ, ನನ್ನ ಹತ್ತಿರಕ್ಕೂ ಬಂದ, "ಏನಾಗಬೇಕು?" ಎಂದ. "ನಿನ್ನ ನಾದವನ್ನು ನಿಲ್ಲಿಸಿ ನನ್ನಿಂದ ದೂರಾಗಬೇಕು"  ಎಂದೆ. ಆತ ಮರುಮಾತನಾಡದೆ ತನ್ನ ಕೊಳಲನ್ನು ನನ್ನ ಕೈಗಿತ್ತ. ಎಲ್ಲರಿಗೂ ದಿಗ್ಬ್ರಮೆಯಾಗಿತ್ತು. ರಾಧೆ ಮುರಳಿಯ ಮುಂದಿಟ್ಟ ಕೋರಿಕೆ ಎಲ್ಲರಿಗೂ ಕೇಳಿತ್ತು. ನಿಶ್ಶಬ್ಧದಲ್ಲಿ "ಹೋಗುತ್ತೇನೆ ರಾಧೆ" ಎಂದವನ ಧ್ವನಿ ಕೇಳಿ ನನ್ನೆದೆ ಒಡೆದು ಛಿದ್ರ-ಛಿದ್ರವಾಗಿತ್ತು. ಹಿಂದೆ ತಿರುಗಿಯೂ ನೋಡದಂತೆ ಮುನ್ನಡೆದಿದ್ದ, ಮುಂದೆಂದೂ ಅವನು ಬರಲೇ ಇಲ್ಲ. 

ಎಲ್ಲರ ಕಣ್ಣಲ್ಲೂ ನಾನು ಅಪರಾಧಿನಿಯಂತೆ ಭಾಸವಾದೆ. ಅಂತರಂಗದಲ್ಲಿ ಕೋಲಾಹಲವೇಳುತ್ತಿದ್ದರೂ ಬಾಹ್ಯದಲ್ಲಿ ನಿರ್ಲಿಪ್ತೆ ನಾನು. ನನ್ನ ಕೋರಿಕೆಯನ್ನು ಅವನು ಈಡೇರಿಸಿದ್ದ ಅದೂ ಯಾವುಧೇ ಮರುಮಾತಿಲ್ಲದೇ.. ಹಾಗಾದರೆ ಅವನಿಗೆ ನಾನು ಯಾರು? ಅವನಿಗೆ ನನ್ನ ಮೇಲಿರುವ ಭಾವನೆಗಳೇನು? ನಿಜಕ್ಕೂ ಅವನು ನನ್ನನ್ನು ಪ್ರೀತಿಸುತ್ತಿದ್ದನೇ? ಆ ಮಾತನ್ನು ಅವನು ಒಮ್ಮೆ ಹೇಳಿದ್ದರೆ ಸಾಕಾಗಿತ್ತು ಆ ಭಾವನೆಯಲ್ಲೇ ಇಡೀ ಬದುಕನ್ನು ಸವೆಸಿಬಿಡುತ್ತಿದ್ದೆ ಆದರೆ ಆತ ಏನೂ ಹೇಳದೆ ಮಾತು ಕೊಟ್ಟು ಹೊರಟ. ಇದಕ್ಕೇನರ್ಥ? ಅವನೇನೋ ಹೊರಟುಹೋದ. ಆದರೆ, ಅವತ್ತಿನಿಂದ ಇವತ್ತಿನವರೆಗೂ ನಾನು ಕೊಳಲ ನಾದಕ್ಕೆ ಹಾತೊರೆಯುತ್ತಿದ್ದೇನೆ. ಮುಕ್ತಿಯಿಲ್ಲದೆ ಆತ್ಮದಂತೆ ಅಂಡಲೆಯುತ್ತಿದ್ದರೂ ನಾನು ಸರ್ವವ್ಯಾಪಿಯ ಕೃಪಾದೃಷ್ಟಿಗೆ ಪಾತ್ರವಾಗಲೇ ಇಲ್ಲ. ಅಲೆದೆ, ಅಲೆದೆ ಹುಚ್ಚಿಯಂತೆ ಅಲೆದೆ. ಆಗ ರಾಧಾ-ಕೃಷ್ಣರ ಜೋಡಿ ನೋಡುತ್ತಿದ್ದವರು ಈಗ ಒಬ್ಬಂಟಿ ಹುಚ್ಚಿಯನ್ನು ಕನಿಕರದಿಂದ ನೋಡುತ್ತಿದ್ದರು. ಆಯನನ ಪ್ರೀತಿ  ಕಂಡರೂ ಕಾಣದವಳಂತೆ ಇದ್ದುಬಿಟ್ಟಿದ್ದೆ. ಇನ್ನೊಬ್ಬಳನ್ನು ಮದುವೆಯಾಗಿ ಆದರೂ ಅವನು ಸುಖವಾಗಿರಲೆಂಬ ನನ್ನಾಸೆ ನೆರವೇರಲೇ ಇಲ್ಲ. ನನ್ನನ್ನು ಸರಿಪಡಿಸಲೆತ್ನಿಸಿ ಯತ್ನಿಸಿ ಆಯನ ಸೋತು ಹೋಗಿದ್ದ, ನನ್ನಷ್ಟಕ್ಕೆ ನನ್ನನ್ನು ಬಿಟ್ಟುಬಿಟ್ಟಿದ್ದ.

ಇವತ್ತು,ಯಾಕೋ ಮುರಳಿಯ ಕೊಳಲನ್ನು ನುಡಿಸುವ ಆಸೆಯಾಯಿತು.ಅಂದು ಆತ ಕೊಟ್ಟಿದ್ದ ಕೊಳಲು ನನ್ನ ಮನೆಯ ದೇವರಮನೆಯಲ್ಲಿದ್ದ ಏಕೈಕ ವಸ್ತುವಾಗಿತ್ತು. ಅದನ್ನೆತ್ತಿಕೊಂಡು ನಡೆದು ಯಮುನೆಯ ತೀರಕ್ಕೆ ಬಂದೆ. ಮರಳಿನಲ್ಲಿ ನಿನ್ನ ಹೆಸರು ಬರೆದೆ. ಬಂದ ಗಾಳಿ ಆ ಹೆಸರನ್ನು ಅಳಿಸಿ, ನಿನ್ನ ರೂಪವನ್ನು ಮೂಡಿಸಿತು. ಈಗ ನೋಡಿದರೆ ನಾನು ನಿನ್ನ ತೊಡೆಯ ಮೇಲೆ ಮಲಗಿದ್ದೇನೆ. ಮುರಳಿ, ನನಗೊಮ್ಮೆ ಮುಕ್ತಿ ನೀಡಿಬಿಡು. ಕಾಮವಿಲ್ಲದ ಪ್ರೇಮವನ್ನು ತೋರಿದ ಆಯನನಿಗೊಂದು ನೆಲೆ ಮಾಡಿ, ನನಗೆ ಮುಕ್ತಿ ನೀಡು. ಈ ಕೊಳಲು ನುಡಿಸು..
ಎಷ್ಟೋ ಹೊತ್ತು ಹೀಗೇ ಮಾತನಾಡಿದ ರಾಧೆ ಆಯನನ ತೊಡೆಯ ಮೇಲೆ ಮಲಗಿದ್ದಳು. ಬೂದಿ ಬಳಿದುಕೊಂಡು ರೂಪಾಂತರ ಮಾಡಿಕೊಂಡಿದ್ದ ಆಯನ,ಎಂದೂ ಕೊಳಲನ್ನೇ ನುಡಿಸದಿದ್ದ ಆಯನ ಕೊಳಲು ಹಿಡಿದಿದ್ದ, ಜೊತೆಗೆ ಮನಮೋಹಕ ರಾಗವನ್ನು ನುಡಿಸಿದ್ದ ಕೂಡಾ. ತೃಪ್ತಿಯ ಉತ್ತುಂಗದಲ್ಲಿದ್ದ ರಾಧೆಯ ಮುಖದಲ್ಲಿ ಶಾಂತತೆ ನೆಲೆಸಿತ್ತು. ಮುಗುಳ್ನಗೆ ಸ್ಥಿರವಾಗಿತ್ತು ಮತ್ತೆಂದೂ ಮಾಸದಂತೆ.. ಆಯನನಿಂದ ಹೊರಬಂದ ಮುರುಳಿ ವಿಶ್ವರೂಪಿಯಾದ ರಾಧೆ-ಆಯನರ ಆತ್ಮ ಮುರುಳಿಯಲ್ಲಿ ಲೀನವಾಗಿತ್ತು. ಅವರ ದೇಹದ ಮೇಲೆ ಪಾರಿಜಾತದ ವೃಷ್ಟಿಯಾಯಿತು.

~ವಿಭಾ ವಿಶ್ವನಾಥ್

ಮಂಗಳವಾರ, ಜೂನ್ 18, 2019

ವಿದಾಯದ ಹಾದಿಯಲ್ಲಿ

ವಿದಾಯದ ಹಾದಿಯಲ್ಲಿ
ದುಗುಡಗಳು ಸಹಜವೇ..

ಮನಸ್ಸಿನ ತೂಗುಯ್ಯಾಲೆಯಲಿ
ನಿರ್ಧಾರವು ಜೀಕಾಡಿದರೂ
ಕಡೆಗೆ ವಿದಾಯದ ಹಾದಿ
ನಿಶ್ಚಿತವೇ ಅಲ್ಲವೇ..?

ವಿದಾಯ ಹೇಳಿದವರಿಗೂ
ವಿದಾಯ ಹೇಳಿಸಿಕೊಂಡವರಿಗೂ
ವಿರಹದ ಒಂದಿಷ್ಟು ಅಮಲು
ಎದೆಯಾಳಕ್ಕಿಳಿಯಬಹುದಲ್ಲವೇ?

ಒಂದೆರಡು ಹನಿ ಕಣ್ಣೀರು
ಒಂದೆರಡು ದಿನ ಬೇಜಾರು
ಒಂದಿಷ್ಟು ಹಳೆ ನೆನಪುಗಳು
ಉಳಿಯುವುದಿಷ್ಟೇ ಅಲ್ಲವೆ..?

ವಿದಾಯದ ಘಳಿಗೆಯ ಮಾತು
ವಿದಾಯದ ನಂತರದ ಮೌನ
ಪರಿಚಿತತೆಯ ಅಪರಿಚಿತತೆ
ಹೀಗಲಾದರೂ ಕಾಡಬಹುದಲ್ಲವೇ?

~ವಿಭಾ ವಿಶ್ವನಾಥ್

ಭಾನುವಾರ, ಜೂನ್ 16, 2019

'ಅಪ್ಪ'ನ ಆಯಾಮಗಳು

ಅವತಾರ
------------
ಮಗಳು ಹುಟ್ಟಿದಾಗಲೇ ಅವನ ಅವತಾರವೂ ಆಗಿತ್ತು. ದೇವರ ಆ ಅವತಾರದ ಹೆಸರೇ 'ಅಪ್ಪ'.

ಕಾಣದ ಪ್ರೀತಿ
------------------
ಕಾಣದಿದ್ದರೂ ಕಾಡುವ ಪ್ರೀತಿಯೆಂದರೆ ಅದು 'ಅಪ್ಪ'ನದ್ದೇ..

ಋಣ
--------
ಋಣಾನುಬಂಧ ಪಶು,ಪತ್ನಿ,ಮಗ ಮತ್ತು ಮನೆಗೇ ಏತಕ್ಕೆ? 'ಅಪ್ಪ'ನೂ ಋಣಾನುಬಂಧದಿಂದಲೇ ದಕ್ಕಿದವನೇ ಅಲ್ಲವೇ?

ಯಯಾತಿ
------------
ಮಗ ಪುರುವಿನ ಯೌವ್ವನವನ್ನು ಅನುಭವಿಸಿದ ಯಯಾತಿ ಇಂದಿಗೂ ಪಶ್ಚಾತ್ತಾಪದಲ್ಲಿ ಬೇಯುತ್ತಲೇ ಇದ್ದಾನೆ. ರಾಜನಾಗಿ ಬದುಕಿದ್ದಕ್ಕೆ.. 'ಅಪ್ಪ'ನಾಗಿ ಯೋಚಿಸದಿದ್ದಕ್ಕೆ..!

ಮಹಾಜ್ಞಾನಿ
----------------
ನನ್ನ ಅಸಂಬದ್ಧ ಪ್ರಶ್ನೆಗಳಿಗೂ ಸಮಾಧಾನದಿಂದಲೇ ಉತ್ತರ ನೀಡಿ, ಎಲ್ಲಾ ಜ್ಞಾನದಾಹವನ್ನು ತಣಿಸುವ ಜಗತ್ತಿನ ಮಹಾಜ್ಞಾನಿ 'ಅಪ್ಪ'.

ಶಿಲ್ಪಿ
-------
ಜವಾಬ್ದಾರಿಯ ನಿರ್ವಹಿಸುತ್ತಲೇ, ಬರೀ ಮಾತಲ್ಲೇ ಹೇಳದೆ ಕೃತಿಯಲ್ಲೂ ತೋರಿಸಿ ಜವಾಬ್ದಾರಿಯುತ ನಾಗರೀಕನನ್ನಾಗಿ ರೂಪಿಸುವ ಶಿಲ್ಪಿ 'ಅಪ್ಪ'

ಆಂತರ್ಯ
--------------
ಮುಪ್ಪಿನ ಮುದುರಿನಲ್ಲೂ ಅದೇ ಶಿಸ್ತು, ಗತ್ತು, ಗೈರತ್ತುಗಳೊಂದಿಗೆ ಬದುಕುತ್ತಾ ಆಂತರ್ಯದಲ್ಲಿ ಅಮ್ಮನ ಅಂತಃಕರಣವನ್ನು ಹೊಂದಿರುವವನೇ 'ಅಪ್ಪ'

ಬದಲಾಗುವ ಪಾತ್ರ
--------------------------
ಕಾಲಕ್ಕೆ ತಕ್ಕಂತೆ, ಪರಿಸ್ಥಿತಿಗಳಿಗೆ ಹೊಂದಿಕೆಯಾಗುತ್ತಾ ಕಿಂಚಿತ್ತೂ ಬದಲಾಗದಂತೆ ಕಂಡರೂ ಬದಲಾಗುವ ಪಾತ್ರವೇ 'ಅಪ್ಪ'

ಅಪ್ಪ ಅಂದರೆ ಅಕಾಶವಲ್ಲ
----------------------------------
ಅಪ್ಪ ಅಂದರೆ ಆಕಾಶ ಅನ್ನೋ ಮಾತನ್ನ ನಾನೊಪ್ಪಲ್ಲ. ಆಕಾಶ ನಿಲುಕದ್ದು, ಹರವಾದ್ರೂ ದೂರದ್ದು,ಆದರೆ 'ಅಪ್ಪ' ಆಗಲ್ವಲ್ಲಾ

ದಾನವತ್ವ-ದೈವತ್ವ
-----------------------
ಕೆಲಸದಲ್ಲಿ ದಾನವತ್ವವನ್ನೂ, ನಡೆಯಲ್ಲಿ ದೈವತ್ವವನ್ನು ಮೈಗೂಡಿಸಿ ಕೊಂಡಿಸಿಕೊಂಡವನೇ 'ಅಪ್ಪ'

ಶ್ರೀಮಂತಿಕೆಯ ಬಡವ
-----------------------------
ಹರಿದ ಬಟ್ಟೆಯ ಹಿಂದಿನ ಹೃದಯ ಶ್ರೀಮಂತಿಕೆಯ ಬಡವನೇ 'ಅಪ್ಪ'.

ಮಹಾಮೌನಿ
-----------------
ಬಡಬಡ ಮಾತನಾಡುವ ಅಮ್ಮನೆದುರಲ್ಲಿ ಮೌನದಿಂದಲೇ ಸಂವಹಿಸಿ ಪ್ರತಿಕ್ರಿಯಿಸುವ ಮಹಾಮೌನಿ 'ಅಪ್ಪ'.

ಗುರಾಣಿ
------------
ಅಮ್ಮನ ಕೋಪಕ್ಕೆ ಅಡ್ಡ ನಿಂತು ತನ್ನನ್ನೇ ಗುರಾಣಿಯಾಗಿಸಿಕೊಂಡು ರಕ್ಷಿಸುವುದು 'ಅಪ್ಪ' ಮಾತ್ರವೇ..

ಶಕ್ತ-ದುರ್ಬಲ
-------------------
ನನ್ನ ಬದುಕಿನ ಶಕ್ತಿ ಮತ್ತು ದುರ್ಬಲತೆ ಎರಡೂ ಅಪ್ಪನಂತಹಾ 'ಅಪ್ಪ' ಮಾತ್ರವೇ..

ಶಾಪಗ್ರಸ್ತ
-------------
ಶಾಪಗ್ರಸ್ತ ಗಂಧರ್ವನಿಗೆ ಅವತರಿಸಲು ಒಂದು ದೇಹದ ಅವಶ್ಯಕತೆ ಇತ್ತು. ಆತ ಸೃಷ್ಟಿಸಿಕೊಂಡ ಆ ದೇಹದ ನಾಮವೇ 'ಅಪ್ಪ'.

~ವಿಭಾ ವಿಶ್ವನಾಥ್

ಶುಕ್ರವಾರ, ಮೇ 17, 2019

ದೇವರಿಗಿಂತ ದೊಡ್ಡವರು

ಇವತ್ತು ಯಾರೋ ಕೇಳಿದ ಮಾತು ನನ್ನನ್ನು ಈ ಯೋಚನೆಗೆ ಹಚ್ಚಿತ್ತು." ಎಲ್ಲರೂ ಆಹ್ವಾನ ಪತ್ರಿಕೆಗಳಲ್ಲಿ ದೇವರ ಹೆಸರನ್ನು ಮೊದಲು ಹಾಕಿಸಬೇಕು ಆದರೆ ಕೆಲವರು ಮಕ್ಕಳ ಹೆಸರನ್ನು ಮೊದಲು ಹಾಕಿಸಿ ಆನಂತರ ದೇವರ ಹೆಸರನ್ನು ಹಾಕಿಸುತ್ತಾರೆ.ಹಾಗಾದರೆ ಮಕ್ಕಳು ದೇವರಿಗಿಂತಾ ದೊಡ್ಡವರಾ?" ಪ್ರಶ್ನೆ ಬಂದದ್ದು ಯಾವುದೋ ವಿಷಯದಿಂದ ಆದರೂ ಉದಾಹರಣೆ ಕೊಟ್ಟದ್ದು ಇದನ್ನು, ಪ್ರಶ್ನೆ ಕೇಳಿದವರ ಸ್ಥಾನಮಾನಗಳೇ ಬೇರೆ.. ಅವರ ಎತ್ತರಕ್ಕೆ ಏರಿ ಉತ್ತರ ನೀಡಲಾಗುವುದಿಲ್ಲ, ಅವರಷ್ಠು ಕೀಳು ಮಟ್ಟಕ್ಕಿಳಿದು ವಾದ ಮಾಡಲೂ ಆಗುವುದಿಲ್ಲ. ಆದರೆ, ಆ ಪ್ರಶ್ನೆಗೆ ನನ್ನ ಉತ್ತರ ಬೇರೆಯೇ ಇದೆ. ಆ ಉತ್ತರ ತಿಳಿಯಲು ಮುಂದೆ ಓದಿ.

ದೈವತ್ವಕ್ಕೇರಿದ ದೇವರು ಕೂಡಾ ಬೆಳೆದಿರುವುದು ಬಾಲ್ಯದಿಂದಲೇ, ಅಲ್ಲವೇ? ಬಾಲ್ಯದ ಮುಗ್ದತನ, ಬೆಳೆದು ನಿಂತ ದೇವರಿಗಿಲ್ಲ. ದೇವಾನುದೇವತೆಗಳಲ್ಲಿ ಬರುವ ಅಸೂಯೆ  ಮುದ್ದು ಮಕ್ಕಳಲ್ಲಿ ಇರುವುದೇ ಇಲ್ಲ. ಅಲ್ಲದೇ ಪುರಾಣದ ಪ್ರಕಾರ 14 ವರ್ಷದವರೆಗೂ ಮಕ್ಕಳು ಮಾಡುವ ತಪ್ಪಿಗೆ ಲೆಕ್ಕ ಇಡುವುದಿಲ್ಲವಂತೆ, ಪಾಪ-ಪುಣ್ಯದ ಲೆಕ್ಕಗಳೇನಿದ್ದರೂ ಮಕ್ಕಳು ಪ್ರಬುದ್ದರೆನಿಸಿಕೊಂಡ ಮೇಲೆಯೇ. ಆದರೆ ದೇವರ ವಿಚಾರಗಳು ಹಾಗಲ್ಲ, ಪ್ರತಿಯೊಂದು ನಡೆಗೂ,ಪ್ರತಿಯೊಂದು ಕ್ರಿಯೆಗೂ ಪಾಪ-ಪುಣ್ಯದ ಲೆಕ್ಕದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇದೆಲ್ಲವನ್ನೂ ಬಿಟ್ಟು ಇಷ್ಟದ ವಿಚಾರಕ್ಕೆ ಬಂದರೆ ನಮ್ಮ ಪ್ರೀತಿಯಲ್ಲಿ, ಇಷ್ಟದಲ್ಲಿ ಮಕ್ಕಳದ್ದೇ ಮೊದಲ ಪಾಲು. ದೇವರುಗಳು ಕೋಟ್ಯಾನುಕೋಟಿ ಇರಬಹುದು ಆದರೆ ಮಕ್ಕಳು ಒಬ್ಬರು ಅಥವಾ ಇಬ್ಬರೇ ಅಲ್ಲವೇ? ಅಷ್ಟಕ್ಕೂ, ದೇವರ ಮೊರೆ ಹೋಗುವುದು ಸಂಕಟ ಬಂದಾಗಲೇ ಇಲ್ಲವೇ ಏನಾದರೂ ಆಗಬಹುದು ಎಂಬ ಭಯಕ್ಕೇ ಅಲ್ಲವೇ? ಪ್ರೀತಿಯಿಂದ ದೇವರ ಮೊರೆ ಹೋಗುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಪ್ರೀತಿಯಿಂದ ದೇವರನ್ನು ಆರಾಧಿಸಿದರೆ ಸರಿ, ಆದರೆ ಭಯದಿಂದ ಎಂದಾದರೆ ಅಲ್ಲಿ ಪ್ರೀತಿ ಹುಟ್ಟುವುದು ಅಸಾಧ್ಯ. ಭಯದಿಂದ ದೊರೆತ ಗೌರವ ಎಷ್ಟು ಕಾಲ ಉಳಿಯಲು ಸಾಧ್ಯ? ಪ್ರೀತಿ, ಭಯ ಎಂಬ ಎರಡು ಆಯ್ಕೆ ಬಂದರೆ ಮೊದಲನೆಯದು ಪ್ರೀತಿಯೇ ಅಲ್ಲವೇ? ಪ್ರೀತಿಯೆಲ್ಲವೂ ಎರಕ ಹೊಯ್ದಂತಿರುವುದು ಮಕ್ಕಳಲ್ಲಿಯೇ, ಅಲ್ಲವೇ?

ಇದಲ್ಲದೇ ಇನ್ನೊಂದು ಪ್ರಸಂಗ ಇಲ್ಲಿ ನೆನಪಿಗೆ ಬರುತ್ತದೆ. ಸರ್ವೇಸಾಮಾನ್ಯವಾಗಿ ಈ ಘಟನೆ ಎಲ್ಲರ ಮನೆಯಲ್ಲೂ ನಡೆಯುವಂತಹದ್ದೇ ದೇವರ ಪೂಜೆಗೆ, ನೈವೇದ್ಯಕ್ಕೆ ಎಂದೂ ಎಂಜಲು ಮಾಡದಂತೆ ಎತ್ತಿಟ್ಟದ್ದನ್ನು ಮಕ್ಕಳು ತಿಂದರೆ ಯಾರೂ ಏನೂ ಅನ್ನುವುದಿಲ್ಲ. "ಮಕ್ಕಳಿಗಿಲ್ಲದ್ದು ದೇವರಿಗ್ಯಾಕೆ?"ಎಂಬ ಪ್ರಶ್ನೆಯಂತೂ ಮೂಡಿಯೇ ಮೂಡುತ್ತದೆ. "ಮಕ್ಕಳು ದೇವರ ರೂಪವೇ ಅಲ್ಲವಾ?" ಎನ್ನುವುದನ್ನು ಕೇಳಿರುತ್ತೇವೆ ಇಲ್ಲಾ ಹೇಳಿರುತ್ತೇವೆ. ಮಕ್ಕಳು ದೇವರಿಗಿಂತಾ ಹೆಚ್ಚೇ ಅಲ್ಲವಾ?

ಆಸ್ತಿಕತೆ-ನಾಸ್ತಿಕತೆಯ ನಡುವೆ ಬಹುದೊಡ್ಡ ವಿರೋಧಾಭಾಸಗಳಿವೆ.ಆದರೆ, ಮಕ್ಕಳು ದೇವರು ಎಂದರೆ ಯಾರೂ ವಿರೋಧಿಸಲಾರರು. ದೇವರ ಹೆಸರು ಮೊದಲು ಹಾಕಿಸಿದ ಮಾತ್ರಕ್ಕೆ ಆ ಶುಭ ಕಾರ್ಯ ಸುಗಮವಾಗಿ ನಡೆಯುತ್ತದೆಯಾ? ಎಲ್ಲವೂ ನಂಬಿಕೆ ಮತ್ತು ಕಾಲದ ಮೇಲೆ ನಿರ್ಣಯವಾಗಬೇಕಷ್ಟೇ..

ದೇವರಿಗಿಂತಾ ದೊಡ್ಡವರು ಯಾರು? ಎಂಬ ಪ್ರಶ್ನೆಗೆ ಉತ್ತರ ನೀಡುವಂತೆ ಇಲ್ಲೊಂದು ದೃಷ್ಟಾಂತದ ಕಥೆ ಇದೆ. ಅದೂ ಅಕ್ಬರ್-ಬೀರಬಲ್ ಕಥೆ.

ಅಕ್ವರ್ ಒಮ್ಮೆ ಬೀರಬಲ್ ನನ್ನು ಕೇಳುತ್ತಾನೆ. "ರಾಜ ದೊಡ್ಡವನೋ? ಅಥವಾ ದೇವರು ದೊಡ್ಡವನೋ?" ಎಂದು. ಬೀರಬಲ್ ಗೆ ಸಂದಿಗ್ಧ ಕಾಡುತ್ತದೆ. "ರಾಜ ದೊಡ್ಡವನು ಎನ್ನದಿದ್ದರೆ ರಾಜನಿಗೆ ಕೋಪ ಬರುತ್ತದೆ. ದೇವರು ದೊಡ್ಡವನು ಎನ್ನದಿದ್ದರೆ ಇಲ್ಲಿರುವವರೆಲ್ಲಾ ವಿರೋಧಿಸುತ್ತಾರೆ." ಎಂದು ಯೋಚಿಸುತ್ತಿರುತ್ತಾನೆ.

ಬೀರಬಲ್ ನ ವಿರೋದಿಗಳಿಗೆಲ್ಲಾ ಖುಷಿಯೋ ಖುಷಿ, ಇವತ್ತು ಬೀರಬಲ್ ಕಥೆ ಮುಗಿಯಿತು ಅಂತಾ. ಆದರೆ ಅವರೆಲ್ಲಾ ಮನಸ್ಸಿನಲ್ಲೇ ಮಂಡಿಗೆ ಮೆಲ್ಲುತ್ತಾ ಇರುವಾಗ ಬೀರಬಲ್ ಹೇಳಿಯೇ ಬಿಟ್ಟ "ರಾಜನೇ ದೊಡ್ಡವನು" ಅಂತಾ. ಆಗ ಅಕ್ಬರ್ ಕೇಳ್ತಾನೆ "ಅದು ಹೇಗೆ? ಎಲ್ಲರಿಗಿಂತಾ ದೇವರು ದೊಡ್ಡವನಲ್ಲವೇ?" ಎಂದು.

ಅಷ್ಟೊತ್ತಿಗೆ ಬೀರಬಲ್ ನ ಜಾಣತನದ ಉತ್ತರ ಸಿದ್ದವಾಗಿರುತ್ತದೆ." ದೇವರು ಮಾಡಲಾಗದ್ದನ್ನು ರಾಜ ಮಾಡಿದರೆ ರಾಜನೇ ದೊಡ್ಡವನಲ್ಲವಾ? ಎಂದು ಮರುಪ್ರಶ್ನೆ ಹಾಕುತ್ತಾನೆ. ಎಲ್ಲರೂ ಒಕ್ಕೊರಲಿನಿಂದ "ಹೌದು" ಎನ್ನುತ್ತಾರೆ. ಆಗ ಬೀರಬಲ್ ಹೇಳುತ್ತಾನೆ "ಯಾರಾದರೂ ತಪ್ಪು ಮಾಡಿದರೆ ಗಡಿಪಾರು ಮಾಡುವ ಅಧಿಕಾರ ದೇವರಿಗಿಲ್ಲ ಆದರೆ ರಾಜನಿಗೆ ಆ ಅಧಿಕಾರ ಇದೆ. ಆದ್ದರಿಂದ "ರಾಜನೇ ದೊಡ್ಡವನು" ಎಂದು ಹೇಳುತ್ತಾನೆ. ಬೀರಬಲ್ ನ ಜಾಣತನ ಮತ್ತೊಮ್ಮೆ ಸಾಬೀತಾಗುತ್ತದೆ. ಸಭೆಯ ತುಂಬೆಲ್ಲಾ ಗಡಚಿಕ್ಕುವ ಚಪ್ಪಾಳೆಗಳು ಪ್ರತಿಧ್ವನಿಸುತ್ತವೆ.

ಆದರೆ, ಅಕ್ಬರ್ ಗೆ ಆವತ್ತಿನಿಂದ ಸ್ವಲ್ಪ ಜಂಭ ಬಂದುಬಿಡುತ್ತದೆ. ನಾನು ದೇವರಿಗಿಂತಾ ದೊಡ್ಡವನಲ್ಲವೇ? ಎಂದು. ಜಾಣ ಬೀರಬಲ್ ಗೆ ಇದರ ಸುಳಿವು ಗೊತ್ತಾಗುತ್ತದೆ. ಹೀಗೇ ಮಾತಾಡ್ತಾ ಮಾತಾಡ್ತಾ ಇರುವಾಗ ಅಕ್ಬರ್ ಮಾತಲ್ಲಿ ಅಹಂಕಾರ ಇಣುಕುವುದು ಗೊತ್ತಾಗುತ್ತದೆ. ಉಪಾಯವಾಗಿ ಇದನ್ನು ಇಳಿಸುವ ಯೋಚನೆ ಮಾಡುತ್ತಿರುವಾಗಲೇ ಅಕ್ಬರ್ ಕೇಳುತ್ತಾನೆ "ದೇವರಿಗಿಂತ ನಾನೇ ಶ್ರೇಷ್ಟ ಎಂದು ನೀನು ಒಪ್ಪುತ್ತೀಯಲ್ಲ, ನನ್ನನ್ನು ಮೀರಿಸುವವರು ಯಾರಾದಾರೂ ಇದ್ದಾರಾ?" ಎಂದು. ಆಗ ಬೀರಬಲ್ ಹೇಳುತ್ತಾನೆ "ಮಕ್ಕಳು ಜಗತ್ತಿನಲ್ಲಿ ಎಲ್ಲರಿಗಿಂತಾ ಸರ್ವಶ್ರೇಷ್ಟ, ಅವರನ್ನು ಮೀರಿಸುವವರು ಯಾರೂ ಇಲ್ಲ" ಎಂಬುದಾಗಿ. ಅಕ್ಬರ್ ಗೆ ಸಿಟ್ಟು ಬರುತ್ತದೆ. ಸರಿ, ಹಾಗಾದರೆ ಅದನ್ನು ನಿರೂಪಿಸಿ ತೋರಿಸು ಎಂದು ಹೇಳುತ್ತಾನೆ. ಸರಿ ಎಂದ ಬೀರಬಲ್ ಆಗ ಅಲ್ಲಿಂದ ಹೊರಡುತ್ತಾನೆ.

 ಮಾರನೇ ದಿನ ಸಭೆಗೆ ಎಷ್ಟೊತ್ತಾದರೂ ಬೀರಬಲ್ ಬರುವುದೇ ಇಲ್ಲ. ದೂತ ಒಬ್ಬನನ್ನು ಅವನ ಮನೆಗೆ ಕಳುಹಿಸುತ್ತಾನೆ ಅಕ್ಬರ್. ಆಗ ಬೀರಬಲ್ ಹೇಳ್ತಾನೆ "ನನ್ನ ಮಗು ಒಂದೇ ಸಮ ಹಠ ಮಾಡ್ತಾ ಇದೆ. ಅದನ್ನು ಸಮಾಧಾನ ಮಾಡಿ ಬರುತ್ತೇನೆ" ಎಂದು. ದೂತ ರಾಜಸಭೆಗೆ ಬಂದು ಹಾಗೇ ಹೇಳ್ತಾನೆ. ಮಧ್ಯಾಹ್ನವಾದರೂ ಬೀರಬಲ್ ಬರದಿದ್ದಾಗ ಅಕ್ಬರ್ ತಾನೇ ಅವನ ಮನೆಗೆ ಹೊರಡುತ್ತಾನೆ. "ಒಂದು ಮಗುವನ್ನು ಸಮಾಧಾನ ಮಾಡಲಾಗಲಿಲ್ಲವೇ ನಿನಗೆ..? ಆ ಮಗುವನ್ನು ನಾನು ಸಮಾಧಾನ ಮಾಡುತ್ತೇನೆ." ಅಂತಂದು ಮಗುವನ್ನು ಕೇಳುತ್ತಾನೆ "ಕಂದಾ, ಏನು ಬೇಕಪ್ಪಾ ನಿನಗೆ?". ಆಗ ಮಗು "ಈ ಕಬ್ಬನ್ನು ನಾಲ್ಕು ತುಂಡು ಮಾಡಿಕೊಡು " ಎನ್ನುತ್ತೆ. ಅಷ್ಟೇನಾ ಎನ್ನುತ್ತಾ ಮೀಸೆಯಂಚಿನಲ್ಲೇ ನಗುತ್ತಾ ಅಕ್ಬರ್ ಆ ಕಬ್ಬನ್ನು ತುಂಡು ಮಾಡಿಕೊಡುತ್ತಾನೆ.

ಒಂದೆರಡು ನಿಮಿಷ ಸುಮ್ಮನಾದ ಮಗು ಮತ್ತೆ ಅದನ್ನೆಲ್ಲಾ ತೆಗೆದು ಎಸೆದು ಜೋರಾಗಿ ರಂಪಾಟ ಮಾಡಲು ಶುರು ಮಾಡುತ್ತೆ. ನೆಲದಲ್ಲಿ ಬಿದ್ದು ಒದ್ದಾಡುತ್ತಾ, ಅಕ್ಬರ್ ನನ್ನು ಹೊಡೆಯುತ್ತಾ "ನಂಗಿದು ಬೇಡ, ಇದು ಚಿಕ್ಕದಾಯ್ತು, ಮತ್ತೆ ಇದನ್ನು ಮೊದಲಿನ ಹಾಗೇ ಮಾಡು. ನನಗೆ ದೊಡ್ಡ ಕಬ್ಬೇ ಬೇಕು" ಎನ್ನುತ್ತದೆ.

ಅಕ್ಬರ್ ನಿಗೆ ಈಗ ಪೀಕಲಾಟಕ್ಕಿಟ್ಟುಕೊಂಡರೆ ಬೀರಬಲ್ ಗೆ ಮೀಸೆಯ ಮರೆಯಲ್ಲೇ ನಗು. ನಂತರ, ಅಕ್ಬರ್ ನ ಈ ಒದ್ದಾಟವನ್ನು ನೋಡಲಾಗದೆ ಬೀರಬಲ್ ಮಗುವನ್ನು ಒಳಗೆ ಕಳುಹಿಸುತ್ತಾನೆ.

ಆನಂತರ ಅಕ್ಬರ್ ಗೆ ಹೇಳುತ್ತಾನೆ. "ರಾಜನನ್ನೇ ತನ್ನ ಬಳಿಗೆ ಕರೆಸಿಕೊಂಡ, ರಾಜನ ಅಸಹಾಯಕತೆಯನ್ನೇ ಎತ್ತಿ ತೋರಿಸಿದ ಮತ್ತು ರಾಜನನ್ನು ಹೊಡೆದರೂ ರಾಜ ಶಿಕ್ಷೆ ನೀಡದ ಮಗು ರಾಜನಿಗಿಂತಲೂ ಮಿಗಿಲಲ್ಲವೇ?". ಆಗ ಅಕ್ಬರ್ ಗೆ ಜ್ಙಾನೋದಯವಾಗುತ್ತದೆ. ಅಕ್ಬರ್ ಹೇಳುತ್ತಾನೆ "ಮಕ್ಕಳೇ ಎಲ್ಲರಿಗಿಂತಲೂ ದೊಡ್ಡವರು ಎಂದು".

ಅಕ್ಬರ್ ಅಂತಹಾ ರಾಜನೇ ಒಪ್ಪಿಕೊಂಡ ಮೇಲೆ ಮತ್ತೆ ನಮ್ಮದು, ನಿಮ್ಮದು ಕೊಸರಾಟ ಏನ್ರೀ? ಒಪ್ಪಿಕೊಂಡು ಬಿಡಿ "ಮಕ್ಕಳು ದೇವರಿಗಿಂತಲೂ ದೊಡ್ಡವರು" ಎಂದು.

~ವಿಭಾ ವಿಶ್ವನಾಥ್ 

ಭಾನುವಾರ, ಮೇ 12, 2019

ಅಮ್ಮ 'ಅಮ್ಮ'ನಾಗಿಯೇ ಉಳಿಯಬೇಕೇ?

ಹೌದು, ಕಡೆಯ ಕ್ಷಣದವರೆಗೂ ಅಮ್ಮ ಅಮ್ಮನಾಗಿಯೇ ಉಳಿಯಬೇಕೇ? ನಾವು ಬದಲಾಗ್ತೀವಿ. ಖಂಡಿತಾ, ನಾವೆಲ್ಲರೂ ಕೊನೆಯ ಕ್ಷಣದವರೆಗೂ ಬದಲಾಗ್ತಾನೇ ಹೋಗ್ತೀವಿ. ಆದರೆ 'ಅಮ್ಮ' ಮಾತ್ರ ಬದಲಾಗಬಾರದು. ಯಾಕೆ?

ಹೆಣ್ಣಿಗೆ ತಾಯ್ತನ ಅನ್ನುವುದು ಒಂದು ವರ. ಹೀಗಂದುಕೊಂಡೇ ಎಲ್ಲಾ ಅಮ್ಮಂದಿರು ತಮ್ಮ ತಾಯ್ತನದೊಳಗೆ ಬಂಧಿಯಾಗಿ ಬಿಡುತ್ತಾರಾ? ಹೆಣ್ಣು ಮಗಳು, ಸೊಸೆ, ಹೆಂಡತಿ, ಸ್ನೇಹಿತೆ, ಸಹೋದರಿ ಎಲ್ಲವೂ ಆಗ್ತಾಳೆ. ಆದರೆ ಅವಳು ಹೆಚ್ಚು ಜವಾಬ್ದಾರಿ ಹೊಂದಿರುವ, ಹೆಚ್ಚು ಕಾಲ ನಿರ್ವಹಿಸುವ ಪಾತ್ರ ಅಮ್ಮನಾಗಿ ಮಾತ್ರ.. ಮದುವೆಯಾಗಿ ಬಂದ ಮೇಲೆ ಎಲ್ಲರ ಮನ ಮತ್ತು ಮನೆ ತುಂಬಿರುವ ಅವಳಿಗೆ ತನ್ನ ಮಡಿಲು ತುಂಬುವ ಸೂಚನೆ ಸಿಕ್ತಾ ಇದ್ದಂತೆ ಅವಳಲ್ಲೊಂದು ಜಾಗೃತ ಪ್ರಜ್ಞೆ ಮೂಡಿಬಿಡುತ್ತೆ. ಇಷ್ಟು ದಿನ ತನಗಾಗಿ, ತನ್ನ ಗಂಡ ಮತ್ತು ತನ್ನ ಮನೆಯವರಿಗಾಗಿ ಎನ್ನುವಂತೆ ಇದ್ದವಳು, ಮಗುವಿಗಾಗಿ ಎಂಬಂತೆ ಬದುಕುವುದಕ್ಕೆ ಶುರು ಮಾಡುತ್ತಾಳೆ. ಬಹುಶಃ ಕಾಣದಿದ್ದರೂ ಕಾಡುವ ಪ್ರೀತಿ ಅಂದರೆ ಇದೇ ಇರಬೇಕು. 

ಕೂಸು ಹುಟ್ಟುವ ಮುಂಚೆಯೇ ತನ್ನ ಎಲ್ಲಾ ಜವಾಬ್ದಾರಿ ನಿರ್ವಹಿಸುವುದಕ್ಕೆ ಸಿದ್ದವಾಗಿ ಬಿಟ್ಟಿರುತ್ತಾಳೆ. ಮಗು ಹುಟ್ಟಿದ ಕ್ಷಣದಿಂದ ಪೊಸೆಸ್ಸಿವ್ ಆಗುವುದಕ್ಕೆ ಶುರು ಮಾಡ್ತಾಳೆ. ಮಗುವಿಗೆ ಶೀತ ಆದರೆ ಅಮ್ಮನಿಗೆ ಚಡಪಡಿಕೆ, ಮಗು ಅತ್ತರೆ ಅವಳ ಕಣ್ಣಲ್ಲಿ ನೀರು ಹೀಗೇ ಪಟ್ಟಿ ಮಾಡುತ್ತಾ ಹೋದರೆ ನಿಲ್ಲುವುದೇ ಇಲ್ಲ ಅನ್ನಿಸುತ್ತೆ. ಅಮ್ಮನ ಪ್ರಪಂಚದಲ್ಲಿ ಮಕ್ಕಳು ಎಷ್ಟೇ ದೊಡ್ಡವರಾದರೂ ಇನ್ನೂ ಚಿಕ್ಕವರೇ. ಆದರೆ ಮಕ್ಕಳ ಪ್ರಪಂಚದಲ್ಲಿ..??

ಮಕ್ಕಳ ಪ್ರಪಂಚದಲ್ಲಿ ಅಮ್ಮ ಅನ್ನುವವಳ ಪಾತ್ರ ತಾವು ಸ್ವಾವಲಂಭಿಗಳಾಗುವವರೆಗೆ ಮಾತ್ರ. ಆಮೇಲೆ ಅವಳೆಡೆಗೆ ದಿವ್ಯ ನಿರ್ಲಕ್ಷ್ಯ, ಆದರೂ ಅಮ್ಮನ ಕಾಳಜಿ ತಮ್ಮ ಮೇಲೆ ಹಾಗೇ ಇರಬೇಕು ಅನ್ನುವ ಧಿಮಾಕು ಬೇರೆ.

ಗಂಡು ಮಕ್ಕಳಿಗೆ ಹೆಂಡತಿ ಬಂದ ನಂತರ ಅಮ್ಮನ ಮೇಲಿನ ಲಕ್ಷ್ಯ ಸ್ವಲ್ಪ ಕಡಿಮೆಯಾಗುತ್ತದೆ. ಮುಂದಿನ ದಿನಗಳಲ್ಲಿ ಇಬ್ಬರಿಗೂ ಮನಸ್ತಾಪ ಬಂದರೆ "ಅಮ್ಮಾ, ಸ್ವಲ್ಪ ಅನುಸರಿಸಿಕೊಂಡು ಹೋಗೋಕಾಗಲ್ವಾ..?" ಅನ್ನೋ ದರ್ಪದ ಮಾತು. ಇಷ್ಟು ವರ್ಷವೂ ಸಹಿಸಿಕೊಂಡು ಬಂದ ಅಮ್ಮ ಹಾಗೇ ಮಾತನಾಡಿರಬಹುದಾ? ಎಂಬ ಸಣ್ಣ ಯೋಚನೆಯೂ ಬರುವುದಿಲ್ಲ. ಅಕಸ್ಮಾತ್ ಮಾತನಾಡಿದರೂ ಅವತ್ತೆಲ್ಲೋ ಕೊಂಚ ಸಹನೆ ಮೀರಿ ಮಾತನಾಡಿರಬಹುದು ಅನ್ನೋ ಕನಿಷ್ಠ ಯೋಚನೆ ಕೂಡಾ ಬರಲ್ಲ. ಆದರೂ, ಅಮ್ಮ ಅನುಸರಿಸಿಕೊಂಡು, ಸಹಿಸಿಕೊಂಡು ಹೋಗುವ ಅಮ್ಮನಾಗಿಯೇ ಉಳಿದುಬಿಡಬೇಕೇ?

ಗಂಡು ಮಕ್ಕಳದ್ದು ಹೀಗಾದರೆ ಹೆಣ್ಣು ಮಕ್ಕಳದ್ದು ಬೇರೆಯದ್ದೇ ಕಥೆ. ಮದುವೆಗೆ ಮುಂಚೆ ಅಮ್ಮ-ಅಮ್ಮ ಅಂತಾ ಅವಳ ಹಿಂದೆಯೇ ಸುತ್ತುತ್ತಾ ಇದ್ದವಳು, ಗಂಡ ಬಂದ ನಂತರ ಅಮ್ಮನನ್ನು ನಿರ್ಲಕ್ಷ್ಯ ಮಾಡುವುದೇನೂ ಸುಳ್ಳಲ್ಲ. ಆದರೆ ತಾನು ತವರು ಮನೆಗೆ ಬಂದಾಗ ಅಮ್ಮ ತನ್ನಿಷ್ಟದ ಅಡುಗೆ ಮಾಡಬೇಕು, ಚಟ್ನಿಪುಡಿ, ಸಾಂಬಾರು ಪುಡಿ, ತುಪ್ಪ, ಹಾಲು ಹೀಗೇ ಮುಂತಾದವುಗಳನ್ನೆಲ್ಲಾ ಕಟ್ಟಿಕೊಡಬೇಕು ಅನ್ನೋ ಒಂದು ಸಣ್ಣ ನಿರೀಕ್ಷೆಯನ್ನಾದರೂ ಇಟ್ಟುಕೊಂಡಿರುತ್ತಾಳೆ. ಆದರೆ, ಈ ನಿರೀಕ್ಷೆ ಹುಸಿಯಾದರೆ ಸಿಡಿಮಿಡಿ. ತನ್ನ ಮನೆಗೆ ಅಮ್ಮ ಬಂದು ಹೋಗುವಾಗ ತಾನು ಆಕೆಗೆ ಕೊಟ್ಟು ಕಳಿಸುವುದೆಷ್ಟು?(ಕೆಲವರು ಇದಕ್ಕೆ ಹೊರತು). ಯಾವಾಗಲೂ ತನಗೆ ಏನನ್ನೂ ಮಾಡಿಕೊಳ್ಳದೆ, ಮಕ್ಕಳಿಗಾಗಿಯೇ ಮಾಡುವ ಅಮ್ಮ ಆ ರೀತಿಯ ಅಮ್ಮ ಆ ರೀತಿಯ ಅಮ್ಮನಾಗಿಯೇ ಉಳಿಯಬೇಕೇ ?

ತಾನು ಹೊರಗೆ ಹೋದರೆ ಮನೆಯವರಿಗೆ, ಮಕ್ಕಳಿಗೆ ತೊಂದರೆಯಾಗುತ್ತೆ ಎನ್ನುವ ಕಾರಣಕ್ಕೆ ತನ್ನ ತಿರುಗಾಟವನ್ನೆಲ್ಲಾ ತ್ಯಜಿಸುವ ಅಮ್ಮ, ಇತರರ ಖುಷಿಗಾಗಿಯೇ ಬದುಕುವ ಅಮ್ಮನಾಗಿಯೇ ಉಳಿಯಬೇಕೇ?

ದೀಪಾವಳಿ, ಯುಗಾದಿ ಬಂದರೆ ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸಿ ತಾನು ಖುಷಿ ಪಡುವ ಅಮ್ಮ ದೀಪಾವಳಿ, ಯುಗಾದಿಗೆ ತನಗೆ ಎಣ್ಣೆ ಸ್ನಾನ ಮಾಡು ಎಂದು ಹೇಳುವವರೂ ಇಲ್ಲದಂತೆ ಬದುಕುವ ಅಮ್ಮನಾಗಿಯೇ ಉಳಿಯಬೇಕಾ?

ಮಕ್ಕಳಿಗೆ ತೊಂದರೆಯಾಗಬಾರದು ಅಂತಾ ಬೆಳ್ಳಂಬೆಳಗ್ಗೆಯಿಂದಲೇ ಪುರುಸೊತ್ತಿಲ್ಲದೆ ಕೆಲಸ ಮಾಡಿ, ರುಚಿ-ರುಚಿಯಾಗಿ ಅಡುಗೆ ಮಾಡುವ ಅಮ್ಮ ದುಡಿಯುವ ಯಂತ್ರದಂತೆಯೇ ಬದುಕುವ ಅಮ್ಮನಾಗಿಯೇ ಉಳಿಯಬೇಕಾ?

ತನ್ನ ಜ್ವರವನ್ನೂ ಲೆಕ್ಕಿಸದೆ, ಮಗುವಿನ ಶೀತಕ್ಕೆ ಔಷಧಿ ಮಾಡಿ ಹುಷಾರು ಮಾಡುವ ಅಮ್ಮ, ತನ್ನ ಅನಾರೋಗ್ಯವನ್ನೂ ಹಳಿಯದ ಅಮ್ಮನಾಗಿಯೇ ಉಳಿಯಬೇಕೇ?

ಮಕ್ಕಳ ವಿದ್ಯಾಭ್ಯಾಸದ ಭರಾಟೆಯಲ್ಲಿ ತನ್ನ ಹವ್ಯಾಸಗಳಾದ ಹಾಡು, ನೃತ್ಯ, ಕ್ರಾಫ್ಟ್, ಕಸೂತಿ, ರಂಗೋಲಿ ಎಲ್ಲವನ್ನೂ ಬಿಟ್ಟು ಬದುಕುವ ಅಮ್ಮನಾಗಿಯೇ ಉಳಿಯಬೇಕೇ?

ಅಮ್ಮ ಮತ್ತೊಂದು ಮಗುವನ್ನು ಪ್ರೀತಿಯಿಂದ ಮಾತನಾಡಿಸಿದರೇ ವಿನಾಕಾರಣ ಪೊಸೆಸ್ಸೀವ್ ಆಗುವ ನಾವು ಅಮ್ಮನ ಬಗ್ಗೆ ಗಮನ ಕೊಟ್ರೆ, ನಾವು ಬಟ್ಟೆ ತೆಗೆದುಕೊಂಡಾಗ ಅವಳಿಗೂ ಒಂದು ಜೊತೆ ಕೊಡಿಸಿದ್ರೆ, ಅಮ್ಮನ ಆರೋಗ್ಯಕ್ಕೆ ಕಾಳಜಿ ತೋರಿಸಿದ್ರೆ, ಅಮ್ಮನ ಹವ್ಯಾಸಗಳಿಗೆ ಪ್ರೋತ್ಸಾಹಿಸುತ್ತಾ, ಅವಳ ಕೆಲಸಗಳಲ್ಲೊಂದಿಷ್ಟು ಭಾಗಿಯಾಗಿ ಅವಳ ಸುತ್ತಾಟಗಳಿಗೂ ಅನುವು ಮಾಡಿಕೊಟ್ಟು ಪ್ರೀತಿಯಿಂದ ಕಾಲ ಕಳೆದರೆ ಅಮ್ಮನಂತಾ ಅಮ್ಮನೂ ಒಂದರೆಕ್ಷಣ ಮಗುವಾಗ್ತಾಳೆ. ಅಮ್ಮ ಅಮ್ಮನಾಗಿಯೇ ಉಳಿಯಬೇಕು ಆದರೆ ಅವಳ ಸ್ವಂತ ಮತ್ತು ಸ್ವತಂತ್ರ್ಯ ವ್ಯಕ್ತಿತ್ವದ ಜೊತೆಗೆ.. ಇನ್ನಾದರೂ ಅಮ್ಮ ಕೊಂಚ ರಿಲೀಫ್ ಆಗಿ ಅವಳ ಬದುಕನ್ನು ಎಂಜಾಯ್ ಮಾಡುವ ಅಮ್ಮನಾಗಲಿ..

~ವಿಭಾ ವಿಶ್ವನಾಥ್

ಮಂಗಳವಾರ, ಮೇ 7, 2019

ಹಸಿರು ಡಾಲರ್

ಅವಳು ಧಾತ್ರಿ. ಧಾತ್ರಿ ಅಂದ ತಕ್ಷಣ ಅವಳ ಹೆಸರು ಕೇಳಿ ಭೂಮಿಗೆಲ್ಲಾ ಹೋಲಿಸೋದಕ್ಕೆ ಹೋಗಬೇಡಿ. ಹಾಗಂದುಕೊಂಡರೂ ಬಹುಶಃ ತಪ್ಪೇನೂ ಆಗಲಾರದು.ಅವಳಿಗೆ ತಾಳ್ಮೆ ಎಷ್ಟಿದೆಯೋ, ಸಿಡಿಮಿಡಿ ಮಾಡಿಕೊಳ್ಳೋ ಗುಣ ಅದಕ್ಕಿಂತ ಕಡಿಮೆ ಇದೆ. ಎರಡನ್ನು ತುಲನೆ ಮಾಡಿದ್ರೆ ತಾಳ್ಮೆಯ ತೂಕವೇ ಹೆಚ್ಚು. ಅಂದುಕೊಂಡದ್ದನ್ನು ತಕ್ಷಣ ಹೇಳುವುದಿಲ್ಲ ಅದರ ಬದಲಿಗೆ ಅದನ್ನು ವಿಮರ್ಶಿಸಿ ಹೇಳುತ್ತಾಳೆ.

ಕೆಲವೊಮ್ಮೆ ಭೂಮಿ ತನಗಿಷ್ಟವಾದರೆ ಮಾತ್ರ ಫಲ ಕೊಡುತ್ತದೆ, ಇಲ್ಲವಾದರೆ ಜಪ್ಪಯ್ಯಾ ಅಂದರೂ, ಅದೆಷ್ಟೇ ಆರೈಕೆ ಮಾಡಿದರೂ ನಳನಳಿಸುವುದೇ ಇಲ್ಲ. ಧಾತ್ರಿಯ ಮೂಡ್ ಕೂಡಾ ಹಾಗೆಯೇ.. ಅವಳಿಗಿಷ್ಟವಾದರೆ ಮಾತ್ರ ಅವಳು ಆ ಕೆಲಸ ಮಾಡುವುದು ಇಲ್ಲ ಅಂದರೆ ಸುಮ್ಮನಿದ್ದು ಬಿಡುತ್ತಾಳೆ. ಬೇರೆಯವರಿಗೆ ಅಡ್ಡಿ ಮಾಡುವುದಿಲ್ಲ, ಬದಲು ಹೇಳುವುದಿಲ್ಲ, ಪ್ರತಿಭಟಿಸುವುದಿಲ್ಲ. ಅವಳಿಗೆ ಇಷ್ಟವಾಗಲಿಲ್ಲ ಅಂದರೆ ಬೇರೆಯವರಿಗೆ ತೊಂದರೆ ನೀಡದೆ ದೂರ ಉಳಿದುಬಿಡುತ್ತಾಳೆ. ವಯಸ್ಸಿಗೆ ಮೀರಿದ ಗಾಂಭೀರ್ಯ ಇದು ಅಂತನ್ನಿಸಿದರೂ ಅವಳಿಗೆ ಅವಳ ಮೂಲ ಗುಣದ ವಿರುದ್ದ, ತನ್ನ ಮನಸ್ಸಾಕ್ಷಿಯ ವಿರುದ್ದ ಹೋಗಲು ಇಷ್ಟವಾಗುವುದಿಲ್ಲ. ಇವಳ ಈ ಗುಣವೇ ಅವಳನ್ನು ಅವಳ ವಯಸ್ಸಿನ ಹುಡುಗಿಯರಿಂದ ಪ್ರತ್ಯೇಕವಾಗಿ ನಿಲ್ಲುವಂತೆ ಮಾಡುತ್ತದೆ. ಈ ಗುಣದಿಂದಲೇ ಅವಳು ಎಲ್ಲರ ಕಣ್ಣಿಗೆ ಸ್ಪೆಸಿಮನ್ ತರಹಾ ಕಾಣಲಿಕ್ಕೆ ಶುರುವಾಗುತ್ತಾಳೆ. ಅವಳ ಬಣ್ಣ, ರೂಪ ಸಾಧಾರಣವೇ.. ನೋಡಲು ತೀರಾ ಅಂದವೇನೂ ಇಲ್ಲ ಆದರೆ ನಿರ್ಲಕ್ಷಿಸುವಷ್ಟು ಕೆಟ್ಟದಾಗೇನೂ ಇಲ್ಲ. ಧಾತ್ರಿ ಬಗ್ಗೆ ಇಷ್ಟೆಲ್ಲಾ ಯಾಕೆ ಹೇಳ್ತಾ ಇದ್ದೀನಿ ಅಂದುಕೊಂಡ್ರಾ? ಅವಳೇ ಈ ನನ್ನ ಕಥೆಯ ಹೀರೋಯಿನ್.

ರೂಪ, ಬಣ್ಣ ಕಳಪೆಯಾಗಿದ್ದರೂ ಅವನ್ನು ಅಂದವನ್ನಾಗಿ ಮಾರ್ಪಡಿಸಿಕೊಳ್ಳುವುದು ಇವತ್ತಿನ ಟ್ರೆಂಡ್. ಆದರೆ ಧಾತ್ರಿಗೆ ಅದರ ಬಗ್ಗೆ ದಿವ್ಯ ನಿರ್ಲಕ್ಷ್ಯ. ಚೆನ್ನಾಗಿ ಕಂಡು ಯಾರಿಗೆ ಏನಾಗಬೇಕಿದೆ? ಅಂದ, ಚೆಂದ ನೋಡಿ ಕಟ್ಟಿಕೊಳ್ಳುವವನು ಸೌಂದರ್ಯ ಮಾಸಿದ ಮೇಲೆ ತನ್ನನ್ನು ನಿರ್ಲಕ್ಷಿಸಲ್ಲ ಅಂತಾ ಏನು ಗ್ಯಾರೆಂಟಿ? ಮನಸ್ಸಿನ ಆಲೋಚನೆಗಳು ಅಂದವಾಗಿರಬೇಕು, ಅದೇ ನಿಜವಾದ ಸೌಂದರ್ಯ ಅನ್ನುವುದು ಅವಳ ವಿಶ್ಲೇಷಣೆ. ತೀರಾ ಸೈಲೆಂಟ್ ಏನೂ ಅಲ್ಲದಿದ್ದರೂ ಅವಳ ಮಾತುಗಳನ್ನು ಕೇಳುವ ಭಾಗ್ಯ ಅವಳ ಆಪ್ತವಲಯಕ್ಕಷ್ಟೇ ಸೀಮಿತ.

ಅವಳ ಅಲಂಕಾರದ ವಿಷಯಕ್ಕೆ ಬಂದರೆ ಕಿವಿಗೊಂದು ಜೊತೆ ಪುಟ್ಟ ರಿಂಗ್. ಕತ್ತಿನಲ್ಲಿ ಹಸಿರು ಡಾಲರ್ ನ ಪುಟಾಣಿ ಸರ. ಕಿವಿಯಲ್ಲಿ ಚಿನ್ನದ ಓಲೆಗಳು ಆಗಾಗ ಬದಲಾದರೂ ಅದೇಕೋ ಅವಳಿಗೆ ಆ ಹಸಿರು ಡಾಲರ್ ನ ಸರದ ಮೇಲೆ ತುಂಬಾ ವ್ಯಾಮೋಹ. ಅವಳ ತಂಗಿ ಹೇಳ್ತಿರ್ತಾಳೆ "ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕಣೇ.. ಹೀಗೇ ಗೂಬೆ ತರ ಇದ್ದರೆ ಆಗಲ್ಲ". "ತಗೋ ಈ ಸಿಲ್ವರ್ ಕಲರ್ ಜುಮುಕಿ ಟ್ರೈ ಮಾಡು" ಅಂತಾ ಚೆಂದದ ಜುಮುಕಿಯೊಂದನ್ನು ಅವಳಿಗೆ ಕೊಟ್ಟಳು. ಅದನ್ನು ತೆಗೆದುಕೊಂಡ ಧಾತ್ರಿ "ಈ ಡಿಸೈನ್ ಏನೋ ಚೆನ್ನಾಗೇ ಇದೆ ಕಣೆ, ಇದೇ ತರಹದ್ದು ಚಿನ್ನದ್ದು ಮಾಡಿಸಿಕೋಬೇಕು" ಅಂತಂದ್ಲು. ಅದಕ್ಕೆ ಅವಳ ತಂಗಿ " ಮಂಗನ ತರಹಾ ಆಡಬೇಡ, ಇಷ್ಟ ಆಗಿರೋ ಜುಮುಕಿ ಎಲ್ಲವನ್ನೂ ಚಿನ್ನದ್ದು ಮಾಡಿಸಿಕೊಳ್ಳೋಕಾಗುತ್ತಾ? ಸುಮ್ನೆ ಹಾಕೋ" ಅಂತಂದ್ಲು."ಬೇಡಮ್ಮ ನೀನೇ ಹಾಕೋ ನನಗೆ ಸೂಟ್ ಆಗಲ್ಲ, ಅಲ್ಲದೇ ಇವುಗಳು ಇಷ್ಟಾನೂ ಆಗಲ್ಲ" ಅಂತಂದ್ಲು ಧಾತ್ರಿ. "ಹೋಗಿ ಹೋಗಿ ನಿಂಗೆ ಹೇಳ್ತೀನಲ್ಲ ನನಗೆ ಬುದ್ದಿ ಇಲ್ಲ, ಏನಾದ್ರೂ ಮಾಡಿಕೋ ಹೋಗು, ಮಾಡರ್ನ್ ಆಗಿರೆ ಅಂದ್ರೆ ಅಡಗೂಲಜ್ಜಿ ತರಾನೇ ಅಂತೀಯಾ.. ನಾನೇನು ಮಾಡೋಕಾಗುತ್ತೆ? ನಿನ್ನ ಕರ್ಮ ಅನುಭವಿಸು" ಅಂತಂದು ಹೊರಟಳು ಅವಳ ತಂಗಿ ಸುಗುಣ.

ಧಾತ್ರಿ, ಸುಗುಣ ಇಬ್ಬರೂ ಒಂದೇ ತಾಯಿಯ ಮಕ್ಕಳಾದ್ರೂ ಇಬ್ಬರದ್ದೂ ವಿಭಿನ್ನ ಯೋಚನಾ ಶೈಲಿ. ಅವಳು ಉತ್ತರವಾದರೆ, ಇವಳು ದಕ್ಷಿಣ, ಆದರೂ ಅವರ ಭಾಂದವ್ಯ, ಪ್ರೀತಿಯನ್ನು ಇವು ಸೋಂಕಿರಲಿಲ್ಲ. ನೋಡಿದವರಿಗೆಲ್ಲಾ ಹೊಟ್ಟೆಕಿಚ್ಚು ಉಂಟುಮಾಡೋ ಅನ್ಯೋನ್ಯತೆ ಇಬ್ಬರದ್ದೂ. ಇಷ್ಟೆಲ್ಲಾ ಮಾತುಗಳು ಸರ್ವೇಸಾಮಾನ್ಯ ಅವರ ಮನೆಯಲ್ಲಿ. ಆದರೆ ಆವತ್ತು ಈ ವಾಗ್ವಾದ ಸ್ವಲ್ಪ ಜೋರಾಗಿತ್ತು ಅಷ್ಟೇ. ಧಾತ್ರಿಗೆ ಜುಮುಕಿಗಳಂದರೆ ಪಂಚಪ್ರಾಣ. ಆದರೆ ಅವಳು ಚಿನ್ನದ ಒಡವೆಗಳನ್ನು ಬಿಟ್ಟು ಬೇರೆ ಒಡವೆಗಳನ್ನು ಹಾಕಿದ್ದನ್ನು ನಾನು ನೋಡಿದ್ದೇ ಇಲ್ಲ. ಹಾಗೆಂದು ಅವಳಿಗೆ ಚಿನ್ನದ ವ್ಯಾಮೋಹ ಏನಿಲ್ಲ ಅವಳು ಸಿಂಪಲ್ ಹುಡುಗಿಯೇ ಆದರೆ ಕಿವಿಯ ಓಲೆ, ಸರ ಚಿನ್ನದ್ದೇ ಆಗಿರಬೇಕಿತ್ತು. 

ಆ ಹಸಿರು ಡಾಲರ್ ನ ಸರ ಅವಳ ಕತ್ತಿನಲ್ಲಿದ್ದುದ್ದಕ್ಕೂ ಹೀಗೇ ಒಂದು ಸಣ್ಣ ಫ್ಲಾಶ್ ಬ್ಯಾಕ್ ಇತ್ತು. ತೀರಾ ಸಣ್ಣ ಫ್ಲಾಶ್ ಬ್ಯಾಕ್ ಆದರೂ ಅದರ ಹಿಂದಿನ ಸೆಂಟಿಮೆಂಟ್ ಸ್ವಲ್ಪ ದೊಡ್ಡದೇ.. ಸರ ಅಂದರೆ ಮೊದಲೆಲ್ಲಾ ಮಾರುದೂರ ಓಡುತ್ತಿದ್ದವಳು ಅಣ್ಣನ ಒಂದೇ ಒಂದು ಮಾತಿಗೆ ಹೂಂ ಅಂದಿದ್ಲು. ಅಣ್ಣನ ಮಾತಂದ್ರೆ ಅವಳಿಗೆ ವೇದವಾಕ್ಯ. ಹೆಣ್ಣುಮಕ್ಕಳು ಹೀಗೇ ಖಾಲಿ ಕತ್ತಲ್ಲಿ ಇರಬಾರದು, ಇನ್ಮುಂದೆ ಸರ ಹಾಕಿಕೋ ಅಂದಾಗ ಯಾಕೆ ಏನು ಅಂತಲೂ ಕೇಳದೆ ಸುಮ್ಮನೆ ಒಪ್ಪಿಕೊಂಡಿದ್ದಳು. ಆದರೆ ಅಮ್ಮನ ಹತ್ತಿರ ವರಾತ ಶುರುವಾಗಿತ್ತು. ನನಗೆ ಚಿನ್ನದ ಸರ ಬೇಡ  ಕಳೆದುಹೋದರೆ..? ಬೆಳ್ಳಿಯ ಸರವೇ ಸಾಕು ಅಂತಾ.. ಅವಳಮ್ಮ ಹಾಗೂ, ಹೀಗೂ ಪೂಸಿ ಮಾಡಿ ಸರ ಕಳೆದುಹೋದರೂ ಚಿಂತೆ ಇಲ್ಲ, ಇದೇ ಸರ ಹಾಕಿಕೋ ಅಂತಾ ಸರ ಹಾಕಿದ್ರು. ಆವತ್ತಿಂದ ಆ ಸರಕ್ಕೆ ಅವಳ ಕತ್ತು, ಅವಳ ಕತ್ತಿಗೆ ಆ ಸರ ಹೊಂದಾಣಿಕೆ ಆಗಿಬಿಟ್ಟಿತ್ತು. ಆದರೂ ಅವಳಿಗೆ ಭಯ, ಎಲ್ಲಾದ್ರೂ ಸರ ಕಳೆದುಹೋದ್ರೆ.. ಅಂತಾ. ಆದರೆ ಅವಳಿಗೆ ಆ ಹಸಿರು ಡಾಲರ್ ಅಚ್ಚುಮೆಚ್ಚು. ಅವಳು ಸರ ಹಾಕಿಕೊಳ್ಳಲು ಒಪ್ಪಿದ್ದೇ ಈ ಡಾಲರ್ ನೋಡಿ.. ಸರ ಬಿಚ್ಚಿದರೆ ಡಾಲರ್ ಕೂಡಾ ಕಳೆದುಕೊಳ್ಳಬೇಕಾಗುತ್ತಲ್ಲಾ ಅಂತಾನೇ ಸರಕ್ಕೆ ಇನ್ನೂ ಅವಳ ಕತ್ತಿನಲ್ಲಿ ಉಳಿದುಕೊಳ್ಳುವ ಭಾಗ್ಯ ಸಿಕ್ಕಿತ್ತು. ಫ್ಲಾಶ್ ಬ್ಯಾಕ್ ಇಂದ ಹೊರಗಡೆ ಬರೋಣ ಈಗ..

ಸುಗುಣ ಮತ್ತು ಧಾತ್ರಿಯ ಜಟಾಪಟಿಗೆ ಕಾರಣ ಅವರ ಅತ್ತೆ ಮಗನ ಮದುವೆ ಸಂಭ್ರಮ. ಅತ್ತೆ ಮಗ ಆದರೂ ಅಣ್ಣ ಅಂತಲೇ ಕರೆಯುತ್ತಿದ್ದದ್ದು ಅವನನ್ನು. ಅಣ್ಣನ ಮದುವೆಯ ದಿನ ಬಂದೇಬಿಟ್ಟಿತು. ಧಾತ್ರಿಗಂತೂ ಖುಷಿಯೋ ಖುಷಿ. ಅಣ್ಣನ ಮದುವೆ ಅಲ್ವಾ, ನಾನು ಸೀರೆ ಉಡುತ್ತೇನೆ ಅಂತಾ ಸೀರೆ ಉಟ್ಟುಕೊಂಡಳು.  ಅವಳಮ್ಮ ಅಂದರು ಇದಕ್ಕೆ ನೆಕ್ಲೇಸ್ ಮ್ಯಾಚಿಂಗ್ ಆಗುತ್ತೆ ಅದನ್ನೇ ಹಾಕಿಕೋ ಅಂತಾ ಜೊತೆಗೆ ಸುಗುಣ ಕೂಡಾ ಸೇರಿಕೊಂಡಳು. "ಯಾವಾಗಲೂ ಆ ಲಾಂಗ್ ಚೈನ್ ಯಾಕೆ ಹಾಕೋತೀಯಾ? ಒಂಚೂರೂ ಡ್ರೆಸ್ ಸೆನ್ಸ್ ಇಲ್ವಾ ನಿನಗೆ..? ಇವತ್ತೊಂದು ದಿನ ಆದರೂ ನಾನು ಹೇಳಿದ ಹಾಗೆ ಕೇಳು" ಅಂತಾ ಒತ್ತಾಯ ಮಾಡಿದಳು. ಧಾತ್ರಿಗೆ ಈಗ ಪೀಕಲಾಟಕ್ಕಿಟ್ಟುಕೊಂಡಿತು. ಆ ಹಸಿರು ಡಾಲರ್ ತೆಗೆದಿಡಬೇಕಲ್ಲಾ ಅಂತಾ ಒಲ್ಲದ ಮನಸ್ಸಿನಿಂದಲೇ ಆ ಸರ ಬಿಚ್ಚಿಟ್ಟು ನೆಕ್ಲೇಸ್ ಹಾಕಿಕೊಂಡಳು ಅಲ್ಲಲ್ಲ ಹಾಕಿಸಿಕೊಂಡಳು. 

ಮದುವೆ ಮುಗಿದ ನಂತರ ಅವಳು ಮಾಡಿದ ಮೊದಲ ಕೆಲಸ ರೂಮಿಗೆ ಬಂದು ಆ ನೆಕ್ಲೇಸ್ ಬಿಚ್ಚಿಟ್ಟು ಹಸಿರು ಡಾಲರ್ ನ ಸರ ಹಾಕಿಕೊಂಡದ್ದು. ಧರ್ಮಸ್ಥಳದಿಂದ ಮತ್ತೆ ಎಲ್ಲರೂ ಊರಿನ ಕಡೆಗೆ ಪ್ರಯಾಣ ಹೊರಟದ್ದಾಯಿತು. ಹೋಗುತ್ತಾ ಇದ್ದ ಹಾಗೆ ಇದ್ದಂತೆಯೇ ಬರುವಾಗಲೂ ಬಸ್ ನಲ್ಲಿ ಮೋಜು, ಮಸ್ತಿ, ಕುಣಿತ ಎಲ್ಲವೂ ಶುರುವಾದವು. ಒಟ್ಟಿನಲ್ಲಿ ಎಲ್ಲರೂ ಎಂಜಾಯ್ ಮಾಡ್ತಾ ಇದ್ರು. ಊರೆಲ್ಲಾ ಒಂದು ದಾರಿ ಆದರೆ ಇವಳದ್ದೇ ಒಂದು ದಾರಿ ಅನ್ನೋ ಹಾಗೆ ಇವಳಿಗೆ ಅದರೆಡೆಗೆ ಆಸಕ್ತಿಯೇ ಇರಲಿಲ್ಲ, ಮನಸ್ಸೆಲ್ಲಾ ಕಿಟಕಿಯಿಂದ ಹೊರಗಡೆಯೇ ಇತ್ತು. ಪಶ್ಚಿಮ ಘಟ್ಟದ ಸೌಂದರ್ಯ ಸವಿಯುತ್ತಾ ಕೂತಿದ್ಲು. ಹಸಿರು, ನೀರು ಕಂಡರೆ ಸುತ್ತಮುತ್ತಲಿನ ಯಾವುದೂ ಬೇಡ ಅವಳಿಗೆ. ಡ್ಯಾನ್ಸ್ ಅಂದರೆ ತೀರಾ ಅಲರ್ಜಿ ಅಂತಾ ಏನೂ ಅಲ್ಲದಿದ್ದರೂ ಅವಳು ಇದೆಲ್ಲದರಿಂದ ದೂರವೇ..ಕಾರಣ ಇಂತಹದ್ದೇ ಎಂಬುದು ಸ್ಪಷ್ಟವಿಲ್ಲ, ಕಾರಣಗಳನ್ನು ಹುಡುಕುತ್ತಾ ಹೊರಟರೆ ಕಾರಣಗಳು ನೂರಾರು ಸಿಗುತ್ತವೆ. ಇಂತಹಾ ಗದ್ದಲ, ಗೌಜಿಗಳ ನಡುವೆಯೂ ಅವಳತನವನ್ನು ಅವಳು ಕಳೆದುಕೊಳ್ಳದಿರುವುದೇ ಅವಳಿಗಿಷ್ಟ. ಡ್ಯಾನ್ಸ್ ಗೆಂದು ಕರೆದದ್ದನ್ನು ನಯವಾಗಿಯೇ ತಿರಸ್ಕರಿಸಿ, ಪಟ್ಟಾಗಿ ಕಿಟಕಿ ಪಕ್ಕ ಕುಳಿತಳು. ಇವಳ ಸ್ವಭಾವದ ಅರಿವಿದ್ದ ಸುಗುಣ ಎದ್ದು ಅವರೊಂದಿಗೇ ಸೇರಿಕೊಂಡಳು. ಮನೆಯವರಿಗೆಲ್ಲಾ ಇವಳ ಈ ಸ್ವಭಾವ ಗೊತ್ತಿದ್ದರಿಂದ ಯಾರೂ ಬದಲಿ ಹೇಳಲಿಲ್ಲ, ಅವರಿಗೆ ಅರಿವಿತ್ತು ಏನಾದರೂ ಹೇಳಿದ್ದರೆ ಕಣ್ಣಿನಿಂದ ಗಂಗಾ-ಕಾವೇರಿ ಧುಮುಕುವುದು ಖಚಿತ ಎಂದು.

ಊರು ಹತ್ತಿರಕ್ಕೆ ಬಂದಾಗ ಕತ್ತಲ್ಲಿ ಏನೋ ಮುಲುಗಾಡಿದ ಹಾಗಾಯ್ತು ಕತ್ತಿಗೆ ಕೈ ಹಾಕಿದ್ರೆ ಸರ ಕೈಗೆ ಬಂದಿತ್ತು. ಆದರೆ ಕೈಗೆ ಸಿಕ್ಕಿದ್ದ ಆ ಸರದಲ್ಲಿ ಹಸಿರು ಡಾಲರ್ ಇರಲಿಲ್ಲ. ಒಂದರೆಕ್ಷಣ ಎದೆ ಹೊಡಕೊಳ್ತು, ಆದ್ರೂ ಅವಳಿಗೆ ಅದೇನೋ ನಂಬಿಕೆ ಡಾಲರ್ ಕಳೆದುಹೋಗಿಲ್ಲ ಸಿಕ್ಕೇ ಸಿಗುತ್ತೆ ಅಂತಾ. ಕೆಳಗಡೆಯೂ ಬಿದ್ದಿರಲಿಕ್ಕಿಲ್ಲ ಡ್ರೆಸ್ ಒಳಗಡೆಯೇ ಬಿದ್ದಿರಬಹುದು ಅನ್ನೋ ಅನಿಸಿಕೆಯೂ ಇತ್ತು. ಅವಳ ಆ ಆಲೋಚನೆಯಲ್ಲೂ ಅವಳ ತಂಗಿ ಹೇಳುತ್ತಿದ್ದ ಮಾತು ನೆನಪಾಗಿತ್ತು. ಸುಗುಣ ಧಾತ್ರಿಗೆ ಅವಳು ದುಪ್ಪಟ್ಟಾ ಹಾಕಿಕೊಳ್ಳುವ ಸ್ಟೈಲ್ ನೋಡಿ ಅವಾಗಾವಾಗ ರೇಗಿಸುವುದಿತ್ತು, "ಒಳ್ಳೆ ಕಂಬಳಿ ಹೊದ್ದುಕೊಳ್ಳೋ ಹಾಗೆ ವೇಲ್ ಹಾಕಿಕೊಳ್ತೀಯಲ್ಲೇ.. ಡ್ರೆಸ್ ಡಿಸೈನ್ ಕಾಣಿಸೋದು ಬೇಡವಾ? ಇನ್ನೂ ಯಾವ ಕಾಲದಲ್ಲಿದ್ದೀಯೇ ನೀನು?" ಅಂತಾ. ಧಾತ್ರಿಗೆ ಸರ ಬಿಚ್ಚಿಕೊಂಡದ್ದನ್ನು ಯಾರಿಗಾದರೂ ಹೇಳಿಕೊಳ್ಳಬೇಕು ಅಂತಾ ಅನ್ನಿಸಿತ್ತು. ಪಕ್ಕದಲ್ಲೇ ಕೂತಿದ್ದ ಅತ್ತೆಗೆ ಡಾಲರ್ ಬಿದ್ದು ಹೋಗಿದೆ ಅಂತಾ ಹೇಳಿದ್ದಕ್ಕೆ ಕೊನೆವರೆಗೂ ಇದ್ದು ನೋಡಿಕೊಂಡು ಬಾ ಅಂದ್ರು. ಅವರು ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ತರಾತುರಿಯಲ್ಲಿದ್ದರು. ಸರಿ ಅಂತಂದ ಧಾತ್ರಿ ಅವಳಮ್ಮನಿಗೆ ಇದನ್ನು ಹೇಳಿದಳು. ಅವಳಮ್ಮನದ್ದು ಒಂತರಾ ನಿರ್ಲಕ್ಷ್ಯ, ಡಾಲರ್ ಹೋದರೆ ಹೋಯ್ತು ಬಿಡು ಏನಾಗಲ್ಲ. ನಿನಗೆ ಸಮಾಧಾನ ಆಗೋದಿದ್ರೆ ನೋಡಿಕೊಂಡು ಬಾ ಅಂತಾ ಅವರೂ ಅಲ್ಲಿಂದ ಹೊರಟರು.

ಉಳಿದದ್ದು ಧಾತ್ರಿ ಮತ್ತು ಅವಳ ಚಿಕ್ಕಮ್ಮ . ಅವಳ ಚಿಕ್ಕಮ್ಮನಿಗೆ ಹೇಳಿದ್ಲು ಎಲ್ಲಾರೂ ಹೋಗಲಿ ಕೊನೆಯಲ್ಲಿ ಹೋಗೋಣ ಅಂತಾ. ಬಹುಶಃ ಪೀರಿಯೆಡ್ಸ್ ಇರಬಹುದು, ಬಟ್ಟೆಗೆ ಕಲೆ ಆಗಿರಬಹುದೇನೋ ಅಂತಾ ಅವರು ಯೋಚಿಸುತ್ತಾ ಅವರು ಅಲ್ಲೇ ಉಳಿದುಕೊಂಡರು. ಆದರೆ ಸಮಸ್ಯೆ ಅದಲ್ಲ ಇದು ಅಂತಂದ್ಲು. ಆಗ ಅವರು ಸರಿ ಅಂತಾ ಅಂದ್ರು. ಆದರೆ ಸಮಸ್ಯೆ ಇದ್ದದ್ದು ಇಲ್ಲೆಲ್ಲೂ ಅಲ್ಲ, ಅವಳ ಹಿಂದಿನ ಸೀಟ್ ನಲ್ಲಿ. ಅದು ಸಮಸ್ಯೆ ಎಂದು ಭಾಸವಾಗುತ್ತಿದ್ದದ್ದು ಧಾತ್ರಿಗೆ ಮಾತ್ರ. ಕಾರಣ ಅಲ್ಲಿ ಕೂತಿದದ್ದು ಅವಳ ಸೀನಿಯರ್, ಅಣ್ಣನ ಫ್ರೆಂಡ್. ಅವನು ಧಾತ್ರಿಯ ಬ್ರ್ಯಾಂಚ್ ಏನೂ ಅಲ್ಲದಿದ್ದರೂ ಅಣ್ಣನ ಫ್ರೆಂಡ್ ಆಗಿ ಪರಿಚಿತ.

ಪರಿಚಿತತೆ, ಅಪರಿಚಿತತೆಯ ನಡುವಲ್ಲಿನ ವ್ಯಕ್ತಿಯಾದರೂ ಅವಳ ಪಾಲಿಗೆ ಅವನು ಆಗಂತುಕನೇ, ಹಾಗಾಗಿ ಸಂಕೋಚದ ತೆರೆ ಸಹಜವೇ. ಅವರು ಎದ್ದು ಹೋಗಲಿ ಅಂತಾ ಇವಳು, ಇವಳು ಎದ್ದುಹೋಗಲಿ ಅಂತಾ ಅವನೂ ಇಬ್ಬರೂ ಕಾಯುತ್ತಾ ಇದ್ದರು. ಅವನ ಧ್ವನಿ ಕೂಡಾ ಸ್ವಲ್ಪ ಜೋರು, ಮೊದಲಿನಿಂದಲೂ ಮೆತ್ತಗೆ ಬೆಳೆದ ಇವಳಿಗೆ ಅವನು ಮಾಮೂಲಿಯಾಗಿಯೇ ಮಾತನಾಡಿದರೂ ಜೋರು ಮಾಡಿದಂತೆಯೇ ಅನ್ನಿಸುತ್ತಿತ್ತು. ಅಂತಹಾ ಸಂಧರ್ಭದಲ್ಲಿ "ನೀವು ಹೋಗಿ" ಅಂದರೆ "ಇಲ್ಲಾ, ನೀನೇ ಹೋಗು" ಅಂತ ಅಂದದ್ದು ಆರ್ಡರ್ ಮಾಡಿದಂತೆಯೇ ಅನ್ನಿಸಿತ್ತು ಧಾತ್ರಿಗೆ. ಭಯ, ಸಂಕೋಚ, ಅಸಹಾಯಕತೆ ಎಲ್ಲವೂ ಮಿಳಿತವಾಗಿ ಇವಳಿಗೆ ಧ್ವನಿಯೇ ಹೊರಡಲಿಲ್ಲ. ಅಷ್ಟೋತ್ತಿಗೆ ಅವ್ಲ ಚಿಕ್ಕಮ್ಮ ಡಾಲರ್ ಕಳೆದು ಹೋಗಿದ್ದನ್ನು ಅವನಿಗೆ ಹೇಳಿಯಾಗಿತ್ತು. ಅವನೂ ಆಲ್ಲಿ ಹುಡುಕಲು ತೊಡಗಿ ಆಗಿತ್ತು. ಅವರು ಬಸ್ ನಿಂದ ಇಳಿದು ಹೋಗಿದ್ದರೆ ಡ್ರೆಸ್ ಕೊಡವಿ ಆದರೂ ನೋಡಬಹುದಾಗಿತ್ತು ಅನ್ನೋ ಯೋಚನೆ ಇತ್ತಾದರೂ ಅದನ್ನು ಬಾಯಿ ಬಿಟ್ಟು ಹೇಳುವ ಮನಸ್ಸಾದರೂ ಅವರ ನಡೆಯಿಂದ ಇದು ಸಾಧ್ಯವಾಗಿರಲಿಲ್ಲ. ಕೆಲವರಿಗೆ ಸೂಕ್ಷ್ಮಪ್ರಜ್ಞೆ ಕಡಿಮೆ ಅಥವಾ ಅಥವಾ ಹೆಣ್ಣುಮಕ್ಕಳ ಆಲೋಚನೆಯಂತೆ ಗಂಡುಮಕ್ಕಳ ಆಲೋಚನೆಗಳು ಇರುವುದಿಲ್ಲವಲ್ಲ.. ಅಷ್ಟೊತ್ತಿಗೆ "ಇವಳು ಸೀಟ್ ಬಿಟ್ಟು ಎದ್ದೇ ಇರಲಿಲ್ಲ, ಇಲ್ಲೇ ಎಲ್ಲೋ ಇರುತ್ತೆ. ಮಧ್ಯ ಸಕಲೇಶಪುರದಲ್ಲಿ ಇಳಿದಾಗ ಇತ್ತಾ? ನಿನಗೆ ಯಾವಾಗ ಗೊತ್ತಾಯ್ತು? ಸರ ಇದೆಯಾ? ಡಾಲರ್ ಯಾವ ಕಲರ್? ಹೇಗಿತ್ತು?" ಎಲ್ಲಾ ಪ್ರಶ್ನೆಗಳು ಪೋಲೀಸ್ ವಿಚಾರಣೆ ತರಹ ಅನ್ನಿಸುತ್ತಿತ್ತು. ಡಾಲರ್ ಸಿಗದಿದ್ದರೂ ಪರವಾಗಿಲ್ಲಾ ಈ ರೀತಿಯ ವಿಚಾರಣೆ ನಿಂತರೆ ಸಾಕು ಅನ್ನಿಸುತ್ತಿತ್ತು. ಅತೀ ಒಳ್ಳೆಯತನ ಕೂಡಾ ಕೆಲವರಿಗೆ ಹಿಂಸೆಯಾಗುತ್ತಿರುತ್ತದೆ ಅನ್ನೋ ಪರಿವೆಯೇ ಇಲ್ಲದೇ ಶೋಧನೆ ಕಾರ್ಯ ಮುಂದುವರಿದಿತ್ತು. ಅಷ್ಟರಲ್ಲಿ ಸಣ್ಣಗಿದ್ದ ವಿಷಯ ಬಾಯಿಂದ ಬಾಯಿಗೆ ಹಬ್ಬಿ ದೊಡ್ಡದಾಗಿತ್ತು. "ಇಲಿ ಹೋಯ್ತು ಅಂದರೆ ಹುಲಿ ಹೋಯ್ತು" ಅನ್ನೋ ಜನ ಡಾಲರ್ ಕಳೆದು ಹೋಗಿದ್ದನ್ನು ಸರವೇ ಕಳೆದುಹೋಯ್ತಂತೆ ಅಂತಾ ಮಾತಾಡ್ತಿದ್ರು. ಧಾತ್ರಿ ಸಿಟ್ಟು, ಅಳು ಎಲ್ಲವೂ ಬರುತ್ತಿತ್ತು, ಆದರೆ ಈಗ ಅವಳು ಏನೂ ಮಾಡುವ ಪರಿಸ್ಥಿತಿಯಲ್ಲಿರಲ್ಲ. "ಬಟ್ಟೆ ಒಳಗೇ ಡಾಲರ್ ಇರಬಹುದು ಹೋಗಿ ಒಂದ್ಸಲ ಹೋಗಿ ಚೆಕ್ ಮಾಡ್ತೀನಿ" ಅಂತಾ ಅವಳ ಚಿಕ್ಕಮ್ಮನಿಗೆ ಹೇಳಿ ಅಲ್ಲಿಂದ ಹೊರಟಳು. ಮನೆಯೊಳಗೆ ಬಂದು ಬಟ್ಟೆ ಕೊಡವಿದ್ರೆ ಅಲ್ಲೇ ಸಿಕ್ಕಿತ್ತು ಅಮೂಲ್ಯ ನಿಧಿ. ಆ ಹಸಿರು ಡಾಲರ್. ಆಗ ಅವಳಿಗೆ ಆದ ಖುಷಿ ಮಾತಲ್ಲಿ ಹೇಳುವಂತಹದ್ದಲ್ಲ.

ಅದಾದ ನಂತರ ಅವಳೇ ಈ ಘಟನೆ ಹೇಳಿಕೊಳ್ಳುವಾಗ ಹೇಳ್ತಾ ಇದ್ಲು, ಅವತ್ತು ಅವರಿಲ್ಲ ಅಂದಿದ್ದರೆ ಆ ಘಟನೆ ಸಣ್ಣದಾಗಿ ಮುಗಿದು ಹೋಗುತ್ತಿತ್ತು. ಇನ್ನೊಮ್ಮೆ ಅವಳ ಯೋಚನಾಲಹರಿ ಮತ್ತೊಂದು ಬಗೆಯಲ್ಲಿ ಓಡುತ್ತಿತ್ತು. ಅಕಸ್ಮಾತ್ ಅವತ್ತು ಆ ಹಸಿರು ಡಾಲರ್ ಅಲ್ಲೇ ಬಿದ್ದಿದ್ದು ನಮ್ಮ ಕಣ್ಣಿಗೆ ಬೀಳದಿದ್ದಿದ್ದರೆ..., ಮತ್ತೊಬ್ಬರ ಕಷ್ಟಕ್ಕಾಗುವವರು ಈ ಕಾಲದಲ್ಲಿ ಎಷ್ಟು ಜನ ಇರುತ್ತಾರೆ, ಎಲ್ಲರೂ ತಮ್ಮ ತಮ್ಮ ಸ್ವಾರ್ಥವನ್ನೇ ಯೋಚಿಸುತ್ತಿರುವಾಗ ಇಂಥಹವರೂ ಇರುತ್ತಾರಾ? ಬರೀ ಬೊಗಳೆ ಬಿಡುತ್ತಾ ಮಾತನಾಡುತ್ತಾ ಕಾಲ ಕಳೆಯುವವರ ನಡುವೆ ಯಾವ ಫಲಾಪೇಕ್ಷೆಯೂ ಇಲ್ಲದೇ ಸಹಾಯ ಮಾಡುವವರು ಎಷ್ಟು ಜನ? ರಾವಣನಂತೆ ಕಂಡಿದ್ದವ ರಾಮನಂತೆ ಕಾಣಲು ಭಾಸವಾಗಿದ್ದ. ಆದರೂ ಅವಳ ಆಲೋಚನೆ ತಕ್ಕಮಟ್ಟಿಗೆ ತಹಬದಿಗೆ ಬಂದಿತ್ತು. ಎಷ್ಟಾದರೂ ಮನಸ್ಸಿನಂತೆ ಮಹಾದೇವ ಅಲ್ಲವೇ..?

ಈ ಚಿನ್ನದಿಂದಲೇ ಅಲ್ಲವೇ ಇಷ್ಟೆಲ್ಲಾ ಆಗಿದ್ದು ಅಂತಾ ಚಿನ್ನದ ಒಡವೆಗಳನ್ನು ಬಿಚ್ಚಿಟ್ಟು ಬೋಳು ಕತ್ತು, ಖಾಲಿ ಕಿವಿಯಲ್ಲಿದ್ದವಳು ಆ ಹಸಿರು ಡಾಲರ್ ಅನ್ನು ಬಿಟ್ಟಿರಲಾರದೆ ಮತ್ತೆ ತನ್ನ ಕತ್ತಿನಲ್ಲಿ ಜಾಗ ನೀಡಿದ್ದಳು. ಹಾಗೇ ಹಳೆಯ ಆಲೋಚನೆಗಳಿಗೂ ಜಾಗ ನೀಡಿದ್ದಳು. ಬದುಕಲ್ಲಿ ಯಾವುದನ್ನಾದರೂ ಪಡೆದುಕೊಳ್ಳುವುದು ದೊಡ್ಡದಲ್ಲ ಆದರೆ ಅದನ್ನು ಅದನ್ನು ಜತನವಾಗಿ ಕಾಯ್ದುಕೊಳ್ಳುವುದೂ ಮುಖ್ಯ. ಅದು ಒಬ್ಬರ ಮೇಲಿನ ಅಭಿಪ್ರಾಯವೇ ಆಗಿರಬಹುದು ಅಥವಾ ಅವಳ ಜೀವನದ ಭಾಗವೇ ಆದ ಆ ಹಸಿರು ಡಾಲರ್ ಕೂಡಾ ಆಗಿರಬಹುದು. ಕಳೆದುಕೊಂಡದ್ದೆಲ್ಲಾ ಮರಳಿ ಸಿಗುವುದಿಲ್ಲ, ಸಿಕ್ಕ ನಂತರ ಜೋಪಾನವಾಗಿ ಕಾಯ್ದುಕೊಳ್ಳಬೇಕು. ಇಷ್ಟೆಲ್ಲವನ್ನೂ ಸೃಷ್ಟಿಸಿ ಮರೆಯಾಗಿಸಿದ ಹಸಿರು ಡಾಲರ್ ಜೀವನದ ಬಹುಮುಖ್ಯ ಪಾಠವೊಂದನ್ನು ಹೇಳಿಕೊಟ್ಟು ಬದುಕನ್ನು ನೋಡುವ ಬಗೆಯನ್ನೇ ಬದಲಾಯಿಸಿ ತಾನು ಮಾತ್ರ ಧಾತ್ರಿಯ ಕತ್ತಲ್ಲಿ ತಣ್ಣಗೆ ಮಿನುಗುತ್ತಾ ಕುಳಿತಿತ್ತು.

~ವಿಭಾ ವಿಶ್ವನಾಥ್

ಶುಕ್ರವಾರ, ಏಪ್ರಿಲ್ 26, 2019

ಅರೆಬರೆದ ಕವಿತೆ



ಅರೆಬರೆದ ಕವಿತೆ ಕಾಯುತಲಿತ್ತು
ಜೀವ  ತಳೆಯುವುದಕ್ಕೆಂದು
ಜೀವ ತಳೆದು ಬದುಕುವುದಕ್ಕೆಂದು
ಬದುಕಿ ಬಾಳುತ್ತಾ ಮನೆಮಾತಾಗಲೆಂದು

ಅವನ ಜೋಳಿಗೆಯಲಿ ಅವಿತು
ಅವನಿಗರ್ಪಣೆಯಾಗಲೆಂದು
ಅವಳ ಹೊಗಳಿಕೆಯ ಸವಿಯಲೆಂದು
ಅವರಲ್ಲಿ ಭಾಂದವ್ಯವ ಬೆಸೆಯಲೆಂದು

ಪುಸ್ತಕದಿ ತಾನು ಪ್ರಕಟವಾಗುತಲಿ 
ತಾನು ಜನಜನಿತವಾಗಲೆಂದು
ಅವರಿವರ ವಾಚನದಿ ಬೆಳೆಯಲೆಂದು
ಅವರಿವರ ವಿಮರ್ಶೆಗೆ ಪಕ್ಕಾಗಲೆಂದು

ಅರೆಬರೆಸಿಕೊಂಡ ಕವಿತೆಗೆ ಅರಿವಿರಲಿಲ್ಲ
ತನಗೂ ಪ್ರತಿಸ್ಪರ್ಧಿಗಳಿರುವರೆಂದು
ಅವಳಿಂದ ತಾನು ತಿರಸ್ಕೃತವಾಗುವೆನೆಂದು
ಅವರಿವರಿಂದಲೇ ಮೂಲೆಗುಂಪಾಗುವೆನೆಂದು

ಕೊನೆಗೂ ಕವಿತೆಗೆ ಜೀವ ಕೊಡಲಿಲ್ಲ
ಅದು ಕಾಯುತ್ತಲೇ ಇರಲೆಂದು
ತಿರಸ್ಕಾರಕ್ಕಿಂತ ಕಾಯುವಿಕೆಯೇ ಲೇಸೆಂದು
ಸಮಯ ನೀಡಿದಷ್ಟೂ ಪ್ರಬುದ್ಧವಾಗುವುದೆಂದು

~ವಿಭಾ ವಿಶ್ವನಾಥ್

ಸೋಮವಾರ, ಏಪ್ರಿಲ್ 22, 2019

ನನ್ನ ಹಾಡು ನನ್ನದೇ

ಆ ಹಾಡು ನಿನ್ನದಾಗುವ ಪ್ರಮೇಯವಿಲ್ಲ
ನನ್ನ ಹಾಡದು, ನನಗೆ ಮಾತ್ರ ಮೀಸಲು

ನನ್ನ ಜೋಗುಳದ ದನಿಗೆ ನೀ ಕಣ್ಮುಚ್ಚುತ್ತಿದ್ದೆ
ತುಟಿಯಂಚಿನಲಿಷ್ಟು ಮಾಸದ ಮುಗುಳ್ನಗು
ನಿನ್ನ ಮೊಗದ ಆ ಹಾಡು ನಿನ್ನದೆನಿಸಿದರೂ
ನಿನಗೆ ದಕ್ಕದು, ನನ್ನದೇ ಹಾಡದು..

ಕೈ ಬೆರಳು ಹಿಡಿದು ದಾರಿ ತೋರಿದವಳನ್ನು
ಕೈ ಬಿಟ್ಟು ಹೊರಡುವಾಗ ಆಡಿದ ಮರುನುಡಿ
ನಿನ್ನ ದರ್ಪದ, ನನ್ನ ವೇದನೆಯ ಹಾಡು
ನಿನಗೆ ಅರಿವಾಗಲಿಲ್ಲ, ನನ್ನದೇ ಹಾಡದು..

ನೀ ಬಿಕ್ಕಿ ಅಳುವಾಗ ನಾ ಸಂತೈಸಿದರೂ
ನಿನ್ನಿಂದಾಗಿ ನಾ ಅಳುವಾಗಿನ ಬಿಕ್ಕುವಿಕೆ
ನಿನ್ನ ಪಾಲಿಗೆಂದಿಗೂ ಕೇಳದ ರಾಗವದು
ನೀ ಕೊಟ್ಟ ವೇದನೆಯಾದರೂ, ನನ್ನದೇ ಹಾಡದು..

ನಿದಿರೆಯ ಮತ್ತಿನಂತಹಾ ಸಾವಿನಲ್ಲಿಯೂ
ನಿನ್ನದೇ ದಯೆಯಿಂದ ಅಡಿ ಇಡುವಾಗ
ಹಾಡದಿದ್ದರೂ ಅರಿವಾಗುವ ಮೃತ್ಯುಛಾಪದ ರಾಗ
ವರವಲ್ಲದೇ ಶಾಪವಾದರೂ, ನನ್ನದೇ ಹಾಡದು..

~ವಿಭಾ ವಿಶ್ವನಾಥ್

ಭಾನುವಾರ, ಏಪ್ರಿಲ್ 21, 2019

ನೋವಿನಲೆಯ ನಡುವೆ

"ಸಂಭ್ರಮದ ಸವಿಯಲೊಂದು
ಹೊಸ ನೋವು ಗೋಚರಿಸಿತು
ಹಳೆ ಗಾಯದ ಮುಲಾಮು
ಹೊಸ ನೋವಿಗೆ ಸಾಂತ್ವನಿಸಲಿಲ್ಲ"

ಎಂದು ಆಗ ತಾನೇ ಅಪ್ಡೇಟ್ ಮಾಡಿದ ಸ್ಟೇಟಸ್ ಅನ್ನು ನೋಡಿ "ವೈ, ವಾಟ್ ಹ್ಯಾಪನ್ಡ್?", "ಕ್ಯಾನ್ ಐ ಹೆಲ್ಪ್ ಯೂ?", ಎಂಬೆಲ್ಲಾ ರಿಪ್ಲೈಗಳು ಕ್ಷಣಾರ್ಧದಲ್ಲಿ ಅದಿತಿಯ ಮೆಸೆಂಜರ್ ನಲ್ಲಿ ಬಂದು ಬಿದ್ದಿದ್ದವು.       

ತಾನು ಬರೆದವುಗಳನ್ನೆಲ್ಲಾ ಫೇಸ್ಬುಕ್ ಮತ್ತು ವಾಟ್ಸಾಪ್ ಸ್ಟೇಟಸ್ ಗಳಿಗೆ ಹಾಕುವುದು ಒಂದು ರೀತಿಯ ಗೀಳಾಗಿತ್ತು ಅದಿತಿಗೆ. ಒಂದರ್ಥದಲ್ಲಿ ವಿವಿಧ ಅರ್ಥ, ಭಾವನೆಗಳನ್ನು ಧ್ವನಿಸುವ ಸ್ಟೇಟಸ್ ಗಳು ಒಬ್ಬೊಬ್ಬರಿಗೆ ಒಂದೊಂದು ಭಾವದ ಅಲೆಗಳನ್ನು ತಲುಪಿಸುತ್ತಿದ್ದವು. ಆದರೆ, ಅದಿತಿ ಮನಬಿಚ್ಚಿ ಮಾತನಾಡುತ್ತಿದ್ದುದ್ದೇ ಅಪರೂಪ. ತನ್ನ ಮನಸ್ಸಿನ ಭಾವನೆಗಳನ್ನು ಆಕೆ ತೋಡಿಕೊಳ್ಳುತ್ತಿದ್ದದ್ದು ಹೆಚ್ಚಾಗಿ ಪುಸ್ತಕ, ಲೇಖನಿಗಳ ಜೊತೆಗೇ.. ಆಕೆಗೂ ಅರಿವಾಗಿತ್ತು ಮೋಸದ ಮಾಯಾ ಪ್ರಪಂಚದಲ್ಲಿ ತನ್ನದೆಂಬ ಭಾವನೆಗಳಿಗೆ ಸ್ಪಂದಿಸುವವರೆಲ್ಲರೂ ತನ್ನವರಲ್ಲವೆಂದು. ಹಾಗಾಗಿ ನಗುವಿನ ಮುಖವಾಡ ತೊಟ್ಟು ಹೆಚ್ಚು ಮಾತಿಲ್ಲದೆ ಕಾಲ ಕಳೆಯುತ್ತಿದ್ದದ್ದೇ ಹೆಚ್ಚು.ಸಂಗೀತ, ಪುಸ್ತಕ, ಡೈರಿ, ಕಥೆ-ಕವನಗಳು, ಅನಾಥಾಶ್ರಮದ ಮಕ್ಕಳು, ಜೊತೆಗೆ ದ್ವಂದ್ವದ ನಿಲುವಿನ ಸ್ಟೇಟಸ್ ಗಳು, ಅದನ್ನೋದುವ ಮತ್ತು ಪ್ರತಿಕ್ರಿಯಿಸುವ ಜನರ ಮನೋಭಾವ ಇವುಗಳೇ ಒಂದರ್ಥದಲ್ಲಿ ಅವಳ ನೆಚ್ಚಿನ ಸಂಗಾತಿಗಳು.

ಅದಿತಿಯ ಬಾಳ ಸಂವತ್ಸರದಲ್ಲಿ ಈಗ 24 ವಸಂತಗಳು ಕಳೆದಿವೆ. ಎಂ.ಎನ್.ಸಿ ಕಂಪೆನಿಯಲ್ಲಿ ಕೈ ತುಂಬಾ ಸಂಬಳದ ಕೆಲಸ, ಆಗಾಗ ಫಾರಿನ್ ಟ್ರಿಪ್ ಗಳು, ವಾಸಿಸಲು ಒಳ್ಳೆಯ ಫ್ಲಾಟ್, ಮನೆಕೆಲಸಕ್ಕೆ ಕೆಲಸದವರು ಹೀಗೇ ಮಧ್ಯಮ ವರ್ಗದವರಿಗೆ ದುಬಾರಿ ಎನ್ನಿಸುವಂತಹ ಆದರೆ ಎಲ್ಲರೂ ಬದುಕಲಿಚ್ಚಿಸುವಂತಹಾ ಸುಭದ್ರ ಜೀವನ. ಆದರೆ ಅವಳದ್ದು ಸುಖೀ ಕುಟುಂಬವಾ? ಸುಖೀ ಬದುಕಾ? ಎಂಬ ಪ್ರಶ್ನೆಗೆ ಅವಳಲ್ಲೇ ಉತ್ತರವಿರಲಿಲ್ಲ.

ಪ್ರತೀಕ್ ಅದಿತಿಯ ಬದುಕಲ್ಲಿ ಬಂದು ಹೋದ ಬಳಿಕ ಅವಳಿಗೇ ಅರಿವಾಗದಂತೆ ಅವಳು ಪ್ರಬುದ್ದಳಾಗಿದ್ದಳು. ಮುಗ್ದತೆ ಇದ್ಡೆಡೆ ಈಗ ಆತ್ಮಸ್ಥೈರ್ಯವಿದೆ ಆದರೆ ಈಗ ಅವಳ ಬಾಳಲ್ಲಿ ಪ್ರತೀಕ್ ಮಾತ್ರ ಇಲ್ಲ.ಪ್ರತೀಕ್ ಇದ್ದಿದ್ದರೆ ಇಷ್ಟು ಸುಖವಾಗಿರುತ್ತಿದ್ದೆನಾ ಎಂಬ ಪ್ರಶ್ನೆ ಅವಳಲ್ಲಿ ಮೂಡದೆಯಂತೂ ಇಲ್ಲ.

ಇಂಜಿನಿಯರಿಂಗ್ ಮುಗಿದು ಕೆಲಸ ಸಿಕ್ಕಾಗ ಬೋನಸ್ ಎಂಬಂತೆ ಮನೆಯಲ್ಲಿ ನೋಡಿದ ಹುಡುಗ ಪ್ರತೀಕ್ ನೊಂದಿಗೆ ಅದಿತಿಯ ಮದುವೆಯೂ ಆಗಿತ್ತು. ವಿವಾಹದ ಮುಂಚೆಯೂ ಅಷ್ಟೇನು ಸಲಿಗೆಯಿಂದಿಲ್ಲದ ಹುಡುಗನ ವರ್ತನೆ ವಿವಾಹದ ನಂತರ ಸ್ವಲ್ಪ ಬದಲಾಗಿತ್ತು. ಅದು ಬದಲಾದ ವರ್ತನೆಯಲ್ಲ, ಅತಿರೇಕದ ವರ್ತನೆ ಎಂದು ಅವಳಿಗೆ ಅರಿವಾಗಲು ಕೆಲಕಾಲ ಬೇಕಾಯಿತು. ತನ್ನ ವ್ಯಕ್ತಿಸ್ವಾತಂತ್ರ್ಯದ ಪ್ರತಿಯೊಂದು ಹಂತದಲ್ಲೂ ಅಡ್ಡಗಾಲು ಹಾಕುತ್ತಿದ್ದುದ್ದು ಬಹಳ ಹಿಂಸೆಯೆನಿಸುತ್ತಿತ್ತು. ನೋಡುವವರ ಕಣ್ಣಿಗದು ಸುಖದ ಸಂಸಾರ. ಹುಡುಗನಿಗೆ ಕುಡಿತದ ಚಟವಿಲ್ಲ, ಬೀಡಿ-ಸಿಗರೇಟ್ ಗಳ ಚಟವೂ ಇಲ್ಲ. ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್ ಒಂದರಲ್ಲಿ ಲೆಕ್ಚರರ್, ಒಳ್ಳೆಯ ಸಂಬಳ, ಐಷಾರಾಮಿ ಜೀವನ, ಅತ್ತೆ-ಮಾವನವರಿಲ್ಲದ, ಅತ್ತಿಗೆ,ನಾದಿನಿ,ಮೈದುನನಂದಿರಿಲ್ಲದ ಮನೆ. ಇನ್ನೇನು ಬೇಕಿತ್ತು ಒಳ್ಳೆಯ ಸಂಸಾರಕ್ಕೆ..?

ಆದರೆ, ಹೇಳಿದರೆ ಅವಳ ಮಾತನ್ನು ಯಾರೂ ನಂಬುವವರಿರಲಿಲ್ಲ. ಅದಿತಿ ಅವನ ವರ್ತನೆಯಿಂದ ಕಂಗೆಟ್ಟು ಹೋಗಿದ್ದಳು. ಪ್ರತೀಕ್ ಅವಳ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದ. ಉಗುಳುವಂತೆಯೂ ಇಲ್ಲ, ನುಂಗುವಂತೆಯೂ ಇಲ್ಲ..! ಪ್ರತಿಯೊಂದಕ್ಕೂ ಪ್ರಶ್ನೆ, ಪ್ರತಿದಿನವೂ ಬಂದ ತಕ್ಷಣ ಅವಳ ಮೊಬೈಲ್ ಕರೆಗಳು ಮತ್ತು ಮೆಸೇಜ್ ಚೆಕ್ ಮಾಡುತ್ತಿದ್ದದ್ದು ಇವೆಲ್ಲವೂ ಕಿರಿಕಿರಿ ಉಂಟು ಮಾಡುತ್ತಿದ್ದವು. "ಅಲ್ಯಾಕೆ ಹೋಗಿದ್ದೆ?"," ಇವರ ಜೊತೆ ಮಾತನಾಡಬೇಡ", "ಇವತ್ಯಾಕೆ ಲೇಟು?","ಫೇಸ್ಬುಕ್ ಗೆ ಫೋಟೋ ಅಪ್ಡೇಟ್ ಮಾಡಬೇಡ" ಇಂತಹವೇ ನಿರ್ಬಂಧಗಳು.. ಪ್ರತೀಕ್ ಕಾಲೇಜ್ ನಲ್ಲಿ ಅಷ್ಟೇ ಲೆಕ್ಚರರ್ ಆಗಿರಲಿಲ್ಲ. ಮನೆಯಲ್ಲೂ ಅದೇ ರೀತಿ ಬಿಹೇವ್ ಮಾಡುವುದಕ್ಕೆ ಶುರು ಮಾಡಿದ್ದ. ಸಹಿಸಿಕೊಂಡರೆ ಸರಿ ಎದುರು ವಾದಿಸಿದರೆ ಅತಿಯಾದ ಅತಿರೇಕದ ಪ್ರಶ್ನೆಗಳು, ಅತಿ ಎನ್ನಿಸುವಷ್ಟು ನಿರ್ಬಂಧ, ಜೋರು ಮಾತು, ಅಪ್ಪಣೆ, ತಾನೇ ಸರ್ವಾಧಿಕಾರಿ ಎಂಬಂತಹಾ ಧೋರಣೆ. ಇಷ್ಟೇ ಆಗಿದ್ದರೆ ಪರವಾಗಿರುತ್ತಿರಲಿಲ್ಲವೇನೋ.. ಅದಿತಿಯ ಕವಿತೆಗಳ, ಕಥೆಗಳ ಭಾವನೆಗಳ ಕೆದಕುವಿಕೆಗೂ ಶುರು ಮಾಡಿದ್ದ.

"ಓ, ಇವತ್ತೇನು ಪ್ರೇಮ ಕವಿತೆ ಬರೆದಿದ್ದೀಯಾ.. ಯಾರನ್ನು ನೋಡಿ ಬರೆದಿದ್ದೀಯಾ..?", "ವಿರಹದ ಕಥೆಗಳೂ ಇವೆ. ಹಾಗಾದರೆ ಬ್ರೇಕ್ ಅಪ್ ಸ್ಟೋರಿ ಕೂಡಾ ಇರಲೇ  ಬೇಕು. ಯಾರದು..?" ಎಂಬ ಕುಹಕದ ಮಾತುಗಳು. "ನಿಮ್ಮಂತಹಾ ನೂರಾರು ಇಂಜಿನಿಯರಿಂಗ್ ಸ್ಟೂಡೆಂಟ್ ಗಳಿಗೆ ಪಾಠ ಮಾಡುವವನು ನಾನು, ನಿಮ್ಮ ಕಥೆಗಳೆಲ್ಲಾ ಗೊತ್ತಿಲ್ಲದಂತಹವುಗಳಾ, ಹೇಳು..?" ಇದೇ ರೀತಿಯ ಸಂದೇಹ. ಎದುರುತ್ತರ ನೀಡಿದರೆ, ವಾದಿಸಿದರೆ ಬೈಗುಳಗಳ ಪ್ರವಾಹ. ಯಾವತ್ತೂ ದೈಹಿಕವಾಗಿ ಹಿಂಸಿಸಿದವನೇ ಅಲ್ಲದ ಪ್ರತೀಕ್, ಮಾನಸಿಕವಾಗಿ ಅದಿತಿಯನ್ನು ಬಹಳವೇ ಹಿಂಸಿಸುತ್ತಿದ್ದ.
   
ಆದರೆ ಅವತ್ತು ಬೆಳಿಗ್ಗೆ ಅದಿತಿ ಬರೆಯುತ್ತಿದ್ದ 'ನೋವಿನಲೆಯ ನಡುವೆ' ಕಾದಂಬರಿಯ ಹಸ್ತಪ್ರತಿಯನ್ನು ಕಂಡವನೇ ವಿನಾಕಾರಣ ಜಗಳ ಮಾಡಿದ್ದ.  ಅದಿತಿಗೂ ಸಿಟ್ಟು ಹೆಚ್ಚಾಗಿ ಜಗಳ ತಾರಕ್ಕೇರಿತ್ತು. ಹೀಗೆ ಸಿಟ್ಟಲ್ಲೇ ಮನೆಯಿಂದ ಹೊರಬಿದ್ದವ ಯಾವುದೋ  ಆಕ್ಸಿಡೆಂಟ್ ಮಾಡಿಕೊಂಡು ಶವವಾಗಿದ್ದ. ಮದುವೆಯಾಗಿ ವರ್ಷ ತುಂಬುವ ಮೊದಲೇ ಅದಿತಿಯ ಸೌಭಾಗ್ಯ ಮುಗಿದಿತ್ತು. ಎಲ್ಲರೂ ಅದಿತಿಯ ಕಾಲ್ಗುಣವನ್ನೇ ದೂಷಿಸಿದ್ದರು.

ನಂತರ, ಒಂಟಿ ಹೆಣ್ಣು ಎಂದು ಸಂತಾಪ ಸೂಚಿಸಿ ಸ್ವಂತಕ್ಕೆ ಬಳಸಿಕೊಳ್ಳಲು ನೋಡಿದವರೇ ಹೆಚ್ಚು. ಅದಿತಿಗೆ ಪ್ರತೀಕ್ ಸಾವಿನಿಂದ ದುಃಖವೂ ಆಗಲಿಲ್ಲ, ಸಂತಸವೂ ಆಗಲಿಲ್ಲ, ಅಂದಿನಿಂದ ಒಂದು ರೀತಿಯ ನಿರ್ಲಿಪ್ತತೆ ಆವರಿಸಿತ್ತು.  ಇವೆಲ್ಲಾ ಬವಣೆಗಳಿಂದ ಪಾರಾಗಲು ಕೆಲಸದ,ಬರಹದ ಕಡೆ ಹೆಚ್ಚಿನ ಗಮನ ನೀಡಿದಳು. ಒಂಟಿ ಬದುಕು ಒಂದು ರೀತಿ ಅಪ್ಯಾಯಮಾನವೇ ಆಗಿತ್ತು ಅವಳಿಗೆ. ಇಲ್ಲಿಯವರೆಗೂ...!

ಗೆಳತಿಯ ಮದುವೆಗೆಂದು  ಬಂದವಳಿಗೆ ಹೊಸ ರೀತಿಯ ಭಾವನೆಗಳು, ತನ್ನ ಜೀವನದಲ್ಲಿಲ್ಲದ ಭಾಂದವ್ಯಗಳು ಗೋಚರಿಸತೊಡಗಿದವು. ಅದೇ ಸಮಯಕ್ಕೆ ಮನೆಯಲ್ಲೂ ಮರುಮದುವೆಯ ಪ್ರಸ್ತಾಪ ನಡೆದಿತ್ತು.

ಬಂದವರೆಲ್ಲರಿಗೂ ಅದಿತಿಯ ಆಸ್ತಿ, ಹಣ, ರೂಪದ ಮೇಲೆಯೇ ಕಣ್ಣು. ಅದೇಕೋ ಅದಿತಿಗೆ ಬಂದವರೆಲ್ಲರೂ ಪ್ರತೀಕ್ ನ ಪ್ರತಿರೂಪದಂತೆಯೇ ಭಾಸವಾಗುತ್ತಿದ್ದಾರೆ. ಬರುವ ಮುಂದಿನ ಜೀವನದ ಪ್ರತೀಕ್ಷೆಯಲ್ಲೇ ಕಾಲ ಕಳೆಯಬೇಕೇ ಎಂದುಕೊಂಡವಳಿಗೆ ಪ್ರತೀಕ್ ನ ರೂಪ ಬಿಟ್ಟು ಬೇರೆ ರೂಪ ಗೋಚರಿಸುವುದೇ..?
 
ಇವೆಲ್ಲಾ ಗೋಜಲುಗಳ ನಡುವಲ್ಲೇ ಹಾಕಿದ ಸ್ಟೇಟಸ್ ಗೆ ಪ್ರತ್ಯುತ್ತರವಾಗಿ ಕಂಡದ್ದು ಇನ್ನೊಂದು ಕವನದ ಸ್ಟೇಟಸ್.

"ನೋವಿನಲೆಯ ನಡುವಲ್ಲಿಯೂ ನಿಲ್ಲದೆಯೇ
ತೇಲಿ ಬರುವುದು ಸಂತಸದ ಸಾಂತ್ವನದ ಹಾಯಿದೋಣಿ"

ಯಾಕೋ ಅದಿತಿ ಈ ಸಾಲುಗಳ ಮೂಲ ಹುಡುಕಿಕೊಂಡು ಹೊರಟಾಗ ಸಿಕ್ಕಿದ್ದು ಸಾಧನಾ. ಸಾಧನಾಳ ಕಥೆಯೂ ಬಹುಪಾಲು ಅದಿತಿಯಂತೆಯೇ.. ಆದರೆ ಸಾಧನಾ ಈಗ 'ಸಾಂತ್ವನ' ಎಂಬ ಸಂಸ್ಥೆಯ ಸ್ಥಾಪಕಿ ಮತ್ತು ಸಂಚಾಲಕಿ. ಬದುಕಿನಲ್ಲಿ ನೊಂದವರಿಗೆ ಸಾಂತ್ವನ ತುಂಬುವ ಮಮತಾಮಯಿ, ಅನಾಥ ಮಕ್ಕಳ ಮೆಚ್ಚಿನ ಅಮ್ಮ. ಅದಿತಿಗೆ ಇದೆಲ್ಲವನ್ನೂ ಕಂಡು ಆಶ್ಚರ್ಯದ ಜೊತೆಗೆ ಹೊಸ ಬೆಳಕೂ ಗೋಚರಿಸಿತು. ಈಗ ಅದಿತಿಯೂ 'ಸಾಂತ್ವನ'ದ ಮತ್ತೊಬ್ಬಳು ಸಕ್ರಿಯ ಸಂಚಾಲಕಿ. ಅಲ್ಲದೇ ಇಂದು ಅವಳು ತನ್ನ ಚೊಚ್ಚಲ ಕಾದಂಬರಿ 'ನೋವಿನಲೆಯ ನಡುವೆ' ಯನ್ನು 'ಸಾಂತ್ವನ'ದ ಸದಸ್ಯರ ಜೊತೆಯಲ್ಲೇ ಬಿಡುಗಡೆ ಮಾಡುತ್ತಿದ್ದಾಳೆ.

~ವಿಭಾ ವಿಶ್ವನಾಥ್

ಶನಿವಾರ, ಏಪ್ರಿಲ್ 13, 2019

ಇಲ್ಲಿ ಸೀತೆ, ಅಲ್ಲಿ ರಾಮ..



ಸೀತೆಯ ಸ್ವಗತ
............................
ಮುಗಿಯದ ಮೌನ,ಎಣೆಯಿಲ್ಲದ ಧ್ಯಾನ
ಎಡೆಬಿಡದ ಕಾರ್ಯದೊಳಗೂ ಏಕಾಂತ
ಕಾಯುತ್ತಿರುವೆ ನಿನ್ನ ಒಂದೇ ಮಾತಿಗೆ
ಹಂಬಲಿಸುತ್ತಿರುವೆ ನಿನ್ನ ಒಂದು ನುಡಿಗೆ
ನಿನ್ನ ಬದುಕಿನ ಒಂದು ಕ್ಷಣ ನೀಡು ನನಗಾಗಿ
ಮುಕ್ತವಾಗಿ ಮಾತನಾಡೆಯಾ ನೀನು ನನ್ನೊಡನೆ?
ಮುಕ್ತಿ ನೀಡು ನನ್ನೆಲ್ಲಾ ಪ್ರಶ್ನೆಗಳಿಗೆ

ರಾಮ, ನಿನಗಾಗಿ ಕಾದು-ಕಾದು ಬಳಲಿ ನಾನು ಬರೆಯುತ್ತಿರುವ ಕಾಗದ ಎಷ್ಟನೆಯದೋ, ಬರೆದು ಹರಿದುದೆಷ್ಟೋ... ಕಾಗದ ಬರೆಯುತ್ತೇನೆ ಅಷ್ಟೇ, ನಿನಗಾಗಿ ಕೊಡಲು ಅಥವಾ ತೋರಿಸಲೆಂದೇನೂ ಅಲ್ಲ, ನನ್ನೊಳಗಿನ ನೋವನ್ನು ಹಗುರ ಮಾಡಿಕೊಳ್ಳಲು ಇದೊಂದು ವಿಧಾನ ಅಷ್ಟೇ..

ಶಬರಿಯೂ ನಿನಗಾಗಿ ಕಾದಳು.ನೀ ಸಿಕ್ಕಿದ ನಂತರ ಮುಕ್ತಿ ಹೊಂದಿದಳು, ವನವಾಸದಲ್ಲಿ ರಾವಣನ ಬಂಧನದಿಂದ ಬಿಡಿಸಿಕೊಂಡು ಹೋಗಲು ಬರುವೆಯೆಂದು ನಾನೂ ಕಾದೆ. ಕೌಸಲ್ಯೆ, ಸುಮಿತ್ರೆ, ಕೈಕೇಯಿ, ಭರತ-ಶತ್ರುಘ್ನರು ಅಷ್ಟೇ ಏಕೆ? ಇಡೀ ನಗರವಾಸಿಗಳೇ ನಿನಗಾಗಿ ಕಾದರು. ಈ ಕಾಯುವಿಕೆಯಲ್ಲೂ ಒಂದು ತೆರನಾದ ಸುಖವಿದೆ. ಆದರೆ ಆ ಕಾಯುವಿಕೆಯಲ್ಲಿ ವರ್ಷಗಳ ನಿರೀಕ್ಷೆಯಿತ್ತು, ನೀನು ಬಂದೇ ಬರುವೆಯೆಂಬ ನಂಬಿಕೆಯಿತ್ತು. ಆದರೆ ಈಗ..?

ಯಾರೋ ಆಡಿದ ಮಾತಿನ ಸತ್ಯಾಸತ್ಯತೆಯನ್ನೂ ಪರೀಕ್ಷೆ ಮಾಡದಷ್ಟು ನಿರ್ದಯಿ ನೀನೇಕಾದೆ? ಕಾಡಿಗಟ್ಟುವ ನಿರ್ಧಾರವನ್ನು ನೀನೇ ತಿಳಿಸದಷ್ಟು ಪಲಾಯನವಾದಿ ನೀನೇಕಾದೆ?

ಶೀಲವೇ ದೊಡ್ಡದೆಂಬ ಪಾಠ ಚಿಕ್ಕಂದಿನಿಂದಲೂ ಹೇಳಿಕೊಂಡು ಬಂದರು. ಹಾಗೇ ನಡೆದುಕೊಂಡ ನನಗೆ ಬೆಲೆಯೇ ಇಲ್ಲವೇ? ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂದು ನೀನೂ ನಿರ್ಧಾರ ಮಾಡಿದೆಯಾ..?ಅದಕ್ಕೆ ನನ್ನನ್ನು ಮಿಥಿಲೆಗೆ ಕಳುಹಿಸಲಿಲ್ಲವೇ? ನನಗೆ ಅತ್ತ ತಂದೆಯ ಮನೆಯೂ ಇಲ್ಲ, ಇತ್ತ ಗಂಡನ ಮನೆಯೂ ಇಲ್ಲದಂತೆ ಮಾಡಿ ನಡುನೀರಿನಲ್ಲೇ ಕೈ ಬಿಟ್ಟೆಯಾ..? ಜೀವನ ಮಾಡಲು ಬೇಕಾದಷ್ಟು ಸಂಪಾದಿಸಲು ಅರಿವಿರಬೇಕಿದ್ದ ವಿದ್ಯೆಯೂ ಇಲ್ಲ, ಮನೆಗೆಲಸ ಮಾಡುವೆನೆಂದರೂ ಕೆಲಸ ಕೊಡುವವರು ಯಾರು? ಕೆಲಸ ಸಿಕ್ಕಿದರೂ ಮಾಡುವುದಾದರೂ ಹೇಗೆ, ತುಂಬಿದ ಆ ಗರ್ಭವನ್ನೊತ್ತು..!

ಅರಮನೆಯಲ್ಲಿ ಕಣ್ಗಾವಲಿನಲ್ಲಿಯೇ ಇದ್ದ ನನಗೆ ಸ್ವಾತಂತ್ರ್ಯ ಬೇಕಾಗಿತ್ತು, ಅದನ್ನು ನಿನ್ನೊಡನೆ ಹೇಳುತ್ತಲೂ ಇದ್ದೆ. ಅದಕ್ಕೆಂದೇ ಇಷ್ಟು ಸ್ವತಂತ್ರ್ಯ ನೀಡಿದೆಯಾ..?

ಕಾಡಿಗೆ ಬಂದ ಕೆಲವು ದಿನಗಳಲ್ಲೇ ನನ್ನ ಕಣ್ಣೀರು ಬತ್ತಿ ಹೋಗಿದೆ. ಅಳಲು ಹೊರಟರೆ ಕಣ್ಣೀರು ಬರುವುದಿಲ್ಲ, ನಗಲು ಕಾರಣಗಳಿಲ್ಲ. ನಿರ್ಲಿಪ್ತ ಸೀತೆಯಿಂದ ನಿನಗಾವ ಆಶೋತ್ತರಗಳೂ ಸಿಗುವುದಿಲ್ಲ. ನಾಡಿನೊಡೆಯನಿಗೆ ಕಾಡ ಮಲ್ಲಿಗೆಯೇಕೆ ಅಲ್ಲವೇ? ನಾಡಿನ ದೇವರಿಗೆ ಪೂಜೆಗೆ ಅರ್ಪಿತವಾಗದಿದ್ದರೂ, ಕಾಡ ಮಲ್ಲಿಗೆ ಅರಳುವದನ್ನು ಬಿಡುವುದಿಲ್ಲ, ಹಾಗೆಯೇ ನಾನೂ ನೀ ಬರದಿದ್ದರೂ ಜೀವ ಕಳೆದುಕೊಳ್ಳಲಾರೆ..

ನೀನು ಬಂದರೂ ನಿನ್ನೊಡನೆ ಸಂತಸದಿಂದ ಅರಮನೆಗೆ ಮರಳಲಾರೆ. ಏಕೆಂದರೆ ಇಷ್ಟು ವರ್ಷಗಳೇ ಕಾಡಿನಲ್ಲಿದ್ದವಳಿಗೆ ಅರಮನೆಯ ಆಸೆಯೆಂದೋ ಬತ್ತಿ ಹೋಗಿದೆ. ಭೂಮಿಯಲ್ಲಿ ಹುಟ್ಟಿ, ಬೆಳೆದವಳಿಗೆ ಕಡೆ ಘಳಿಗೆಯಲ್ಲಿ ಭೂಮಿಯ ಮಡಿಲು ದೊರೆಯದೇ?ಆದರೂ ನೀನೊಮ್ಮೆ ಇಲ್ಲಿಗೆ ಬರುವೆಯಾ? ಶಬರಿಯಷ್ಟು ಪುಣ್ಯವಂತೆ ನಾನಾಗಿದ್ದರೆ ನೀನು ಬರುವವರೆಗೂ ಜೀವ ಹಿಡಿದು ಕಾದಿರುವೆ. ನಿನ್ನೊಡನೆ ಬದುಕುವುದಕ್ಕೇನೂ ಅಲ್ಲ, ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು...

ನೀನು ಎಲ್ಲರಿಂದಲೂ ಪುರಸ್ಕೃತನಾದರೂ, ಈ ಸೀತೆಯಿಂದ ಪರಿತ್ಯಕ್ತ.

-ಇಂತಿ
ನಿರ್ಲಿಪ್ತಳಾಗುತ್ತಿರುವ ಸೀತೆ

ರಾಮನ ಸ್ವಗತ
.............................
ಬಯಕೆಯನು ಚಿಗುರಲೇ ಚಿವುಟಿ
ಮನಸು ಅರಳುವ ಮುನ್ನವೇ,
ಅದನು ನರಳುವಂತೆ ಮಾಡಿ
ನನ್ನ ಬಾಳಿನ ನೀಲಾಂಜನೆಯನೇ
ದೂರ ಮಾಡಿಕೊಂಡು ನರಳುತಲಿರುವೆ
ನೀ ಒಮ್ಮೆಯಾದರೂ ಕ್ಷಮಿಸುವೆಯಾ?
ನೀ ನನ್ನನು ಕ್ಷಮಿಸಿದರೂ...
ನಾನೇ ನನ್ನನು ಕ್ಷಮಿಸಿಕೊಳ್ಳಲಾರೆ

ನೀನು ನನ್ನನ್ನು ಕ್ಷಮಿಸುವೆಯೆಂಬ ಭರವಸೆ ನನ್ನಲ್ಲಿ ಎಳ್ಳಷ್ಟೂ ಉಳಿದಿಲ್ಲ. ಲೋಕ ನನ್ನನ್ನು ನಿರ್ದಯಿಯೆಂದು ಜರಿದರೂ ನಾನು ಅಳುಕಲಾರೆ, ಆದರೆ ನೀನು ನನ್ನನ್ನು ನಿರ್ದಯಿಯೆಂದು ಜರಿದರೆ ಅದನ್ನು ತಾಳುವ ಚೈತನ್ಯ ನನ್ನಲ್ಲಿ ಉಳಿದಿಲ್ಲ. ನಾಡಿನ ರಾಣಿಯಾಗಿ ಮೆರೆಯಬೇಕಾಗಿದ್ದವಳನ್ನು, ಕಾಡಿಗೆ ಅಟ್ಟಿ ನಾನಿಲ್ಲಿ ಮೆರೆಯುತ್ತಿಲ್ಲ. ಯಾವ ತಪ್ಪನ್ನೂ ಮಾಡದೆ ಶಿಕ್ಷೆಗೆ ಒಳಪಟ್ಟಾಗ ಅನುಭವಿಸುವ ನೋವಿನ ಅರಿವು ನನಗಿದೆ. ಕೈಕೇಯಿ ಚಿಕ್ಕಮ್ಮನಿಂದ ನನಗಾಗಿದ್ದೂ ಅದೇ, ಆದರೆ ನನಗಾಗ ಪ್ರತಿಭಟಿಸುವ ಅವಕಾಶವಿತ್ತು ಆದರೆ ನಿನಗೆ ಆ ಅವಕಾಶವನ್ನೂ ನೀಡದಂತಾ ನಿರ್ದಯಿ ನಾನೇಕಾದೆನೆಂದು ನನಗೇ ಗೊತ್ತಿಲ್ಲ.ಸಮಯ ಎಲ್ಲವನ್ನೂ ಮರೆಸುತ್ತದೆಂದರೂ ಮನದಲ್ಲಿನ ಕಹಿ ನೆನಪುಗಳನ್ನು ಮರೆಸುವುದಿಲ್ಲ, ನಾನು ಬರೀ ನಿನಗೆ ಶಿಕ್ಷೆ ನೀಡಲಿಲ್ಲ,
ನನಗೆ ನಾನೇ ಶಿಕ್ಷೆ ವಿಧಿಸಿಕೊಂಡಿದ್ದೇನೆ. ಕಾಣದ ಪ್ರಜೆಯ ಒಂದು ಮಾತಿಗೆ ಹೆದರಿ ನಾನು ನಿನ್ನನ್ನು ಕಾಡಿಗೆ ಅಟ್ಟಿದ ಮೇಲೆ ನನಗನ್ನಿಸುತ್ತಿರುವುದು ಹೀಗೆ:

ರಾಮರಾಜ್ಯದ ಪ್ರಜೆಗಳಿಗೆ ರಾಮನ ಸ್ವಂತ ಜೀವನದ ಕುರಿತ ಅಕ್ಕರೆಯಿಲ್ಲ, ನಿನ್ನನ್ನು ಮತ್ತೆ ನನ್ನಲ್ಲಿಗೆ ಕರೆಸಿಕೋ ಎಂದು ಯಾರೂ ಹೇಳಲಿಲ್ಲ. ಬಹುಶಃ ಅವರಿಗೂ ಭಯವೇನೋ...? ಸೀತೆಯನ್ನೇ ಕಾಡಿಗೆ ಕಳುಹಿಸಿದವನು ನಾಳೆ ನಮ್ಮನ್ನೂ ಕಾಡಿಗಟ್ಟುವನೆಂದು..

ಸೀತೆಯಿಲ್ಲದ ರಾಮ ಎಂದಿಗೂ ಅಪೂರ್ಣನೇ, ನಿನ್ನನ್ನು ಕಾಡಿಗೆ ಕಳುಹಿಸಿದ ಮೇಲೆ ನೀ ಮರಳಿ ಬರುವುದಿಲ್ಲವೇ ಎಂದು.., ಮರಳಿ ಬಂದರೆ ಮುಂದೇನು ಮಾಡುವುದೋ ಎಂದು ಯೋಚಿಸಿದ್ದೇನೆ.ಆದರೆ ನಿನ್ನ ದಾರಿ ಕಾಯ್ದು ನಾನು ಹಣ್ಣಾದೆನೇ ಹೊರತು, ನೀನೆಂದು ಮರಳಿ ಬರಲೇ ಇಲ್ಲ.

ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು ಎನ್ನುತ್ತಾರೆ. ನನ್ನಲ್ಲಿ ಚಟವಿಲ್ಲ ಆದರೆ ನಿನ್ನಲ್ಲಿ ಹಟವಿದೆ, ನಮ್ಮ ಸಂಸಾರ ಒಂದುಗೂಡಲು ನೀನೂ ಪ್ರಯತ್ನಿಸಬಹುದಾಗಿತ್ತು.ನೀನು ಸ್ವಲ್ಪ ನಿನ್ನ ಹಟ ಬಿಟ್ಟು ನನ್ನನ್ನು ಕೇಳಿದ್ದರೆ,ಇಬ್ಬರ ಗೋಳು ಕೊನೆಯಾಗುತ್ತಿತ್ತೇನೋ?ಆದರೆ, ನನಗೀಗ ಅನ್ನಿಸುತ್ತಿದೆ, ಸೀತೆ ರಾಮನಿಂದ ಪರಿತ್ಯಕ್ತಳಲ್ಲವೆಂದು, ರಾಮನೇ ಸೀತೆಯನ್ನು ಹೊಂದದ ದುರದುಷ್ಟವಂತನೆಂದು. ನೀನು ಬರದಿದ್ದರೂ, ನಾನೇ ಬರಬಹುದಿತ್ತಲ್ಲವೇ?ನಾನು ಬರೆದ ಪತ್ರವನ್ನೇ ನಿನಗೆ ಕಳುಹಿಸಿದರೆ ತಿರಸ್ಕರಿಸುತ್ತೀಯೆಂದು ಅವುಗಳನ್ನೇ ಕಳುಹಿಸದ ನಾನು, ಬಂದು ನಿನ್ನಿಂದ ತಿರಸ್ಕೃತನಾಗಿದ್ದರೆ....

ಬದುಕಿಯೂ ಸತ್ತಂತೆಯೇ ಅಲ್ಲವೇ..?

ಇಂತಿ
-ಸೀತೆಯ ಜೊತೆಯಿರಲಾಗದ ದುರದೃಷ್ಟ ರಾಮ

~ವಿಭಾ ವಿಶ್ವನಾಥ್