ಭಾನುವಾರ, ಅಕ್ಟೋಬರ್ 20, 2019

ಬಿಟ್ಟು ಹೊರಡುವ ಮುನ್ನ..

ನಿನಗೆ,
ಏನೆಂದು ಸಂಭೋಧಿಸಲೆಂದೇ ಗೊತ್ತಾಗದೆ ಆತ್ಮೀಯನಾಗಿದ್ದ ನಿನಗೇ,

ಬಿಟ್ಟು ಹೊರಡುವ ಘಳಿಗೆ ಹತ್ತಿರ ಬರುತ್ತಿದ್ದಂತೆ ಮನದಲ್ಲೇನೋ ತಲ್ಲಣ, ಮಾತನಾಡಲು ನೂರಾರು ಪದಗಳಿವೆ, ಹಂಚಿಕೊಳ್ಳಲು ನೂರಾರು ಕನಸುಗಳಿವೆ. ಎದೆಯಾಳದಲ್ಲಿ ಸಾವಿರಾರು ಭಾವನೆಗಳಿವೆ.ಆದರೆ ಹೇಳಿಕೊಳ್ಳಲು ನೀನೇ ಸಿಗುತ್ತಿಲ್ಲ. ಮೌನಿಯಂತಿದ್ದ ನನ್ನಲ್ಲಿ ಮಾತನಾಡಲು ಚೈತನ್ಯ ತುಂಬಿದ ನಿನಗೆ ಧನ್ಯವಾದಗಳನ್ನೇಳಬೇಕು ಎಂದಿದ್ದೇನೆ. ಆದರೆ ಹೇಳುವುದಿಲ್ಲ. ಮನದಲ್ಲಿರುವುದು ಮಾತಾಗಲು ಹೆಚ್ಚು ಹೊತ್ತು ಬೇಕಿಲ್ಲ. ಆದರೆ ಅದನ್ನು ಹೇಳುವ ಮನಸಿಲ್ಲ.

ಏಕೋ, ನೀನು ಮೊದಲಿನಂತಿಲ್ಲ.ನನಗೇ ಹಾಗನ್ನಿಸುತ್ತಿದೆಯೋ, ಇಲ್ಲ ನೀನೇ ಬದಲಾಗುತ್ತಿರುವೆಯೋ ಗೊತ್ತಿಲ್ಲ. ಆದರೆ ಮೌನದ ಚಿಪ್ಪಿನೊಳಗೆ ಅಡಗಿ ಕುಳಿತಿದ್ದವಳನ್ನು ವಾಚಾಳಿಯನ್ನಾಗಿ ಮಾಡಿದೆ. ಆದರೆ ನನ್ನ ಮಾತುಗಳನ್ನು ನೀನು ಕೇಳಲೇ ಇಲ್ಲ. ನಿನ್ನ ಮುಂದಿದ್ದಾಗ ಮಾತೇ ಹೊರಡದೇ ತಬ್ಬಿಬ್ಬಾದರೂ ಭಾವನೆಗಳನ್ನು ಅರ್ಥೈಸಿಕೊಂಡು ಸಾಂತ್ವನ ಹೇಳಿದ್ದೀಯ. ನಿನಗೆ ನನ್ನ ಅವಶ್ಯಕತೆ ಮುಗಿಯುವ ಮುನ್ನವೇ ಈ ಸಂಬಂಧದ ಕೊಂಡಿಯನ್ನು ಕಳಚಲೇಬೇಕಲ್ಲವೇ?

ಭಾವನೆಗಳ ಸೂಕ್ಷ್ಮತೆಗಳು ನಿನಗೆ ತಿಳಿಯುವುದಿಲ್ಲವೆಂದು ನಾನು ಹೇಳಿದ್ದು ಎಷ್ಟು ಸಲವೋ? ಆದರೆ ಎಷ್ಟೋ ಸಲ ಅನ್ನಿಸಿದ್ದಿದೆ. ನಾನು ನಿನ್ನಷ್ಟು ಭಾವುಕಳಲ್ಲವೆಂದು. ಹೆಂಗರುಳು ನಿನ್ನದು. ಎಲ್ಲರ ಕಷ್ಟಕ್ಕೂ ಮರುಗುವ, ಸ್ಪಂದಿಸುವ ನೀನು ಇತ್ತೀಚೆಗೆ ಹೃದಯವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿರುವುದೇಕೆ? ಕಂಡರೂ ಕಾಣದಂತೆ ಹೋಗಿ ಬಿಡುತ್ತೀಯೆ. ಏಕೆಂಬುದು ಮಾತ್ರ ಗೊತ್ತಿಲ್ಲ, ನನ್ನ ತಪ್ಪಿದ್ದರೆ ಬೈದು ಬುದ್ದಿ ಹೇಳಬಹುದಲ್ಲವೇ? ಕೇಳಿದರೆ ಕೆಲಸದ ಬ್ಯುಸಿ ಎನ್ನುತ್ತೀಯ, ಕೆಲಸದ ಬ್ಯುಸಿ ಎಂದಾದರೆ ನನ್ನದೊಂದು ಪ್ರಶ್ನೆ. ಕೆಲಸಕ್ಕೋಸ್ಕರವಾಗಿ ಬದುಕುತ್ತಿದ್ದೀಯೋ? ಅಥವಾ ಬದುಕುವುದಕ್ಕೋಸ್ಕರವಾಗಿ ಕೆಲಸವೋ? ಇದಕ್ಕಾದರೂ ಎಂದಾದರೂ ಉತ್ತರ ಹುಡುಕಿಕೋ.

ಮನಸ್ಸಿಗೆ ಬೇಜಾರಾದಾಗ ಯೋಚಿಸಲು ಪುರುಸೊತ್ತಿಲ್ಲದಂತೆ ಕೆಲಸ ಮಾಡು ಎಂದು ನೀನೇ ಎಂದೋ ಹೇಳಿದ್ದೆ. ಅದಕ್ಕೋಸ್ಕರವೇ ನೀನು ಹೀಗೆ ನಿನ್ನನ್ನು ನೀನು ಕೆಲಸದದಲ್ಲಿ ತೊಡಗಿಸಿಕೊಂಡಿದ್ದೀಯಾ? ಉತ್ತರ ಹೇಳಲು , ನಿನಗೆ ನಾನು ಯಾರು ಅಲ್ಲವೇ?

ಉತ್ತರಗಳೇ ಸಿಗದ, ದ್ವಂದ್ವ ನಿಲುವಿನ ಎಷ್ಟೋ ಪ್ರಶ್ನೆಗಳಿಗೆ ನೀನೇ ಉತ್ತರಿಸಿದ್ದೀಯ. ಆಗ ವಾದಗಳು, ಚರ್ಚೆಗಳು ನಡೆದರೂ ಕೊನೆಗೆ ಇಬ್ಬರೂ ಮತ್ತೆ ಬರುತ್ತಿದ್ದುದು ದ್ವಂದ್ವತೆಯ ನಿಲುವಿಗೇ. ಕಾರಣ, ನೀನು ಹೇಳಿದ್ದು ಸರಿ ಎಂದು ನನಗನ್ನಿಸಿದರೆ, ನಾನು ಹೇಳಿದ್ದು ಸರಿ ಎಂದು ನಿನಗನ್ನಿಸುತ್ತಿತ್ತು. ಕೊನೆಗೆ ಒಂದು ನಿಲುವಿಗೆ ಬರಲಾಗದೆ, ಒಬ್ಬರಿಗೊಬ್ಬರು ಸೋಲದೆ,ಇಬ್ಬರೂ ಗೆಲ್ಲದೆ ದೂಡಿದ ಕ್ಷಣಗಳೆಷ್ಟೋ?

ಕೆಲವೊಂದು ವಿಷಯಗಳಲ್ಲಿ ಭಿನಾಭಿಪ್ರಾಯಗಳಿದ್ದರೂ, ಒಮ್ಮತದ ನಿಲುವಿಗೆ ಬರಬೇಕೆಂದಾದಾಗ ನೀನೊಮ್ಮೆ ಸೋತರೆ, ನಾನೊಮ್ಮೆ ಸೋಲುವೆ. ಗೆಲುವಿನ ಅಹಂಭಾವ ಅಲ್ಲಿಲ್ಲ, ಸೋಲುವಿಕೆಯ ಸೊಗಡೂ ಅಲ್ಲಿ ಸುಳಿಯಲಿಲ್ಲ. ಅಭಿಪ್ರಾಯಗಳಲ್ಲಿ ನೀನು ಉತ್ತರ ಧ್ರುವವಾದರೆ, ನಾನು ದಕ್ಷಿಣ ಧ್ರುವ. ಬಹುಶಃ ವಿಜ್ಞಾನದ ಕಾಂತೀಯ ನಿಯಮದಂತೆ "ವಿರುದ್ದ ಧ್ರುವಗಳು  ಆಕರ್ಷಿಸಲ್ಪಡುತ್ತವೆ" ಎಂಬ ನಿಯಮದಂತೆಯೇ ಇರಬೇಕು ನಾವು ಸೆಳೆಯಲ್ಪಟ್ಟಿದ್ದು.ಸೆಳೆಯಲ್ಪಡಲು ಕಾರಣವಾದ ಆ ಶಕ್ತಿ ಯಾವುದೋ? ಈಗ ಬೇರೆಯಾಗುವ ನಿರ್ಧಾರವನ್ನು ಬೆಂಬಲಿಸುತ್ತಿರುವ ಶಕ್ತಿ ಯಾವುದೋ?
ಎಲ್ಲದಕ್ಕೂ ಒಂದು ಕಾರಣ ಇದೆ ಎಂದು ಹೇಳುತ್ತಿದ್ದೆಯಲ್ಲಾ, ಆ ಕಾರಣ ಯಾವುದು ಎಂದು ಕೇಳಿದರೆ.. ಗೊತ್ತಿಲ್ಲ, ಆದರೆ ಯಾವುದೋ ಒಂದು ಕಾರಣ ಇರುವುದಂತೂ ಸತ್ಯ ಎನ್ನುತ್ತೀಯಲ್ಲ. ನಿನ್ನ ನಂಬಿಕೆಯಂತೆ ಇದಕ್ಕೂ ಯಾವುದೋ ಒಂದು ಬಲವಾದ ಕಾರಣ ಇರಬಹುದು. ಆಗುವುದೆಲ್ಲಾ ಒಳ್ಳೆಯದಕ್ಕೇ ಅಲ್ಲವೇ? ಒಳ್ಳೆಯದೇ ಆಗಲಿ.

-ಇಂತಿ
ಬಿಡಲಾಗದಿದ್ದರೂ ಬಿಟ್ಟು ಹೊರಟಿರುವ ನಿನ್ನ ಹಿತೈಷಿ

(ಬರಹ : ವಿಭಾ ವಿಶ್ವನಾಥ್)

ಗುರುವಾರ, ಅಕ್ಟೋಬರ್ 17, 2019

ಲಿಂಗರೂಪಿ

ಲಿಂಗರೂಪಿ ಶಿವನಿಗಿಂದು
ಗಂಗೆಯ ಅಭಿಷೇಕವು

ತೋರಿಕೆಗೆ ಜಲದಿ ಮಿಂದು
ಕೋಪವನು ತೊಡೆಯುವನೇ ಪರಮೇಶ್ವರ?
ಬರಿಯ ಅಭಿಷೇಕ, ನೈವೇದ್ಯದಿಂದ
ಶಾಂತಿಗೊಳಿಸಲಾಗುವುದೇ ಆ ಶಿವನಾ?

ಭಕ್ತಿಯ ಪಂಚಾಕ್ಷರಿ ಜಪದಿ ಭಕ್ತರು
ಸುಪ್ರೀತಗೊಳಿಸುವರು ನಾಗಭೂಷಣನ
ಅರ್ಧನಾರೀಶ್ವರನಿಗೆ ಎಂದಿಗೂ
ತಪ್ಪದು ನಂದಿಯ ಉಪಚಾರವು

ಗಂಗೆ-ಗೌರಿಯರ ಪ್ರೀತಿಯ ಜಲವು
ಪುನೀತಗೊಳಿಸುವುದು ಮುಕ್ಕಣ್ಣನ
ಜೊತೆಗೆ ಬಿಲ್ವಪತ್ರೆಯೂ ಸೇರಿ
ಶಮನಗೊಳಿಸುವುದು ಮನದ ತಾಪವ

ಭಸ್ಮದಾರಿಯಾದರೂ ಹರನು
ಕಂಗೊಳಿಸುವನು ಬಹಳ ಅಂದದಿ
ಪ್ರಕೃತಿ-ಪುರುಷನಾಗಿ ಮುಕ್ಕಣ್ಣನು
ಪೂಜಿಸಿಕೊಳ್ಳುವನು ಲಿಂಗರೂಪದಿ

~ವಿಭಾ ವಿಶ್ವನಾಥ್

ಭಾನುವಾರ, ಅಕ್ಟೋಬರ್ 13, 2019

ಯಶೋಗಾಥೆ

"ಈ ಕಾಲದಲ್ಲಿ, ಅದೂ ಈ ಪಾಪ್,ರ್ಯಾಪ್ ಸಾಂಗ್ ಗಳನ್ನು ಕೇಳುವುದನ್ನು ಬಿಟ್ಟು ನಿನ್ನ ಈ ಲಾವಣಿ, ತತ್ವಪದಗಳನ್ನೆಲ್ಲಾ ಯಾರಾದ್ರೂ ಕೇಳ್ತಾ ಕೂತಿರ್ತಾರಾ? ಅದರಲ್ಲೂ ನಾನು ಹೋಗ್ತಾ ಇರೋದು ಅಂತರರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆಗೆ.. ಅಲ್ಲಿರುವವರು ಇದನ್ನು ಕೇಳಿ ಅಣಕಿಸಿಕೊಂಡು ನಕ್ತಾರೆ ಅಷ್ಟೇ..ನಾನು ಎಲ್ಲರಿಗೂ ಇಷ್ಟ ಆಗೋ ತರಾ ರ್ಯಾಪ್ ಸಾಂಗ್ ಹಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದರೆ, ಅದನ್ನಲ್ಲಾ ಬಿಟ್ಟು ಹಳೇ ಕಾಲದ ಲಾವಣಿನೆಲ್ಲಾ ಯಾರು ಹಾಡ್ತಾರೆ,ಹೋಗಿ ಕೆಲಸ ನೋಡು ಹೋಗು. ನನ್ನ ತಂಡದವರನ್ನೆಲ್ಲಾ ತಯಾರಿ ಮಾಡಿಕೊಳ್ಳೋದಕ್ಕೆ ಅಂತಾ ನಿನ್ನ ಸಹಾಯ ಕೇಳಿದ್ರೆ, ನೀನು ನಿನ್ನ ಕಾಲದ ಅದ್ರಲ್ಲೂ ಆ ಹಳ್ಳಿ ಜನಗಳ ಲಾವಣಿ, ತತ್ವಪದಗಳ ಬಗ್ಗೆನೇ ಕೊರೀತೀಯಲ್ಲಾ..." ಅಂತಾ ರೇಗಿದ ಯಶಸ್.

ಯಶಸ್ ನ ಹೆಸರಿಗೆ ತಕ್ಕಂತೆ ಅವನಿಗೆ ಎಲ್ಲಿ ಹೋದರೂ ಯಶಸ್ಸು ಕಟ್ಟಿಟ್ಟ ಬುತ್ತಿ, ಆದರೆ ಯಾಕೋ ಈ ವಿಷಯದಲ್ಲಿ ಸ್ವಲ್ಪ ತಡವಾಗುತ್ತಾ ಇತ್ತು ಅಷ್ಟೇ..
ಎಲ್ಲಾ ವಿಷಯಕ್ಕೂ ಅವನ ಅಕ್ಕ ಯಶಸ್ವಿನಿಯ ಮಾರ್ಗದರ್ಶನವಿಲ್ಲದೆ ಆತ ಮುಂದುವರಿಯುತ್ತಲೇ ಇರಲಿಲ್ಲ. ಎಷ್ಟೇ ಬೈದರೂ, ಜಗಳವಾದರೂ ಇಬ್ಬರೂ ಮನಸ್ಸಿಗೆ ತೆಗೆದುಕೊಳ್ಳದೆ ಒಬ್ಬರಿಗೊಬ್ಬರು ಅರಿತು ನಡೆಯುತ್ತಿದ್ದರು.

ಸಂಸ್ಕೃತಿ,ಕಲೆಯ ವಿಷಯಗಳಲ್ಲಿ "ಹೆಣ್ಣುಮಕ್ಕಳು ಬೇರಿನಂತೆ ಆಳಕ್ಕಿಳಿದು ಅಧೋಮುಖರಾಗುತ್ತಾ ಹೋದರೆ, ಗಂಡುಮಕ್ಕಳು ತುದಿಯಂತೆ ಊರ್ಧ್ವಮುಖ"ರಾಗುತ್ತಾ ಹೋಗುತ್ತಾರೆ. ಆದರೆ ಇಬ್ಬರ ಬೆಳವಣಿಗೆಯೂ ಒಳಿತಿಗಾಗಿಯೇ ಅಲ್ಲವೇ?

ಅದೇಕೋ ಯಶಸ್ವಿನಿ ಹಳ್ಳಿಯ ಜನಪದರ ಸೊಗಡಿನ ಲಾವಣಿ,ತತ್ವಪದ,ಗೀಗೀ ಪದ, ನೈಸರ್ಗಿಕ ಚಿತ್ರಕಥನ ಮುಂತಾದವುಗಳ ಕುರಿತು ಆಸಕ್ತಿ ಬೆಳೆಸಿಕೊಂಡು ಅವುಗಳನ್ನೇ ತನ್ನ ಸಂಶೋಧನೆಯ ವಿಷಯವಾಗಿ ಆರಿಸಿಕೊಂಡಿದ್ದರೆ, ಯಶಸ್ ಗೆ ಚಲನಚಿತ್ರಗಳ ಪ್ರಭಾವದಿಂದ ಅವೆಲ್ಲವೂ ಹಳೆಯ ಗೊಡ್ಡಿನಂತೆ ಕಾಣುತ್ತಿದ್ದವು.

ಅವನ ಅಕ್ಕ ಈ ಕುರಿತು ಮಾತನಾಡಲು ಹೊರಟರೆ "ನಿಮ್ಮ ಕಾಲದನ್ನೆಲ್ಲಾ, ಈಗಿನ ಕಾಲದಲ್ಲಿ ಹೇಳ್ಬೇಡ. ಅದೆಲ್ಲಾ ಆಗಲೇ ಮುಗಿದೋಯ್ತು." ಅಂತಾ ಅಣಕಿಸಿ ಹೊರಟುಬಿಡುತ್ತಿದ್ದ. ಆದರೆ ಯಶಸ್ವಿನಿ ಇದನ್ನೆಲ್ಲಾ ಮನಸ್ಸಿಗೆ ತೆಗೆದುಕೊಳ್ಳದೆ, "ನಾನು ಇರುವುದು ಇನ್ಯಾವ ಕಾಲದಲ್ಲೋ..? ಅಬ್ಬಬ್ಬಾ ಅಂದ್ರೆ 4 ವರ್ಷಗಳ ವ್ಯತ್ಯಾಸ ಅಷ್ಟೇ..", "ಓಲ್ಡ್ ಈಸ್ ಗೋಲ್ಡ್" ಅಂತಾ ನಿನ್ನ ಬಾಯಲ್ಲೇ ಬರೋವರೆಗೂ ನಾನು ಕಾಯ್ತೀನಿ" ಅಂತಾ ಹೇಳಿ ನಸುನಗುತ್ತಾ ಸುಮ್ಮನಾಗ್ತಾ ಇದ್ದಳು.ಆ ಕಾಲವೂ ದೂರದಲ್ಲೇನೂ ಇರಲಿಲ್ಲ.

ಪಾಪ್ ಸಾಂಗ್,ರ್ಯಾಪ್ ಸಾಂಗ್ ಅಂತಾ ತಯಾರಾಗಿದ್ದ ಯಶಸ್ ಗೆ ಕಾರ್ಯಕ್ರಮದ ಆಯೋಜಕರು ಹೇಳಿದ್ದು ಇಷ್ಟೇ,"ಎಲ್ಲರೂ ಇದನ್ನೇ ಪ್ರದರ್ಶಿಸಿದ್ದರೆ, ಹೊಸತನ ಎಲ್ಲಿಂದ ಬರುತ್ತೆ..?, ಏನಾದ್ರೂ ಹೊಸದಾಗಿ ಪ್ರಯತ್ನ ಮಾಡಿದ್ರೆ ಮಾತ್ರ ನಿನ್ನ ತಂಡಕ್ಕೆ ಅವಕಾಶ" ಅಂತಾ ಹೇಳಿದ್ರು. ಅದರ ವಿಷಯವಾಗಿ ಮಾತನಾಡುತ್ತಿರುವಾಗಲೇ ಈ ರೇಗಾಟ ನಡೆದದ್ದು. ಇವನ ಈ ರೇಗಾಟಕ್ಕೆ ಸೊಪ್ಪು ಹಾಕದ ಇವನ ಅಕ್ಕ ಅವನ ತಂಡದವರನ್ನೆಲ್ಲಾ ಕರೆದು ಕೂರಿಸಿ ತನ್ನ ಯೋಜನೆಗಳನ್ನು ವಿವರಿಸಿದಳು.

ತತ್ವಪದ,ಲಾವಣಿಗಳು ಬರೀ ಪದಗಳಲ್ಲ. ಆಡು ಮಾತುಗಳಲ್ಲ. ಅದರಲ್ಲಿ ಜೀವನದ ಸತ್ವ,ತತ್ವಗಳೇ ಅಡಗಿ ಕೂತಿವೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಕೆಚ್ಚು ತುಂಬುತ್ತಿದ್ದ ಪದಗಳವು. ಜನಪದರ ಜೀವನಾಡಿಗಳು ಅವು. ಅವುಗಳಲ್ಲಿ ಆರ್ತನಾದವಿದೆ, ಬಿಸಿಯುಸಿರಿದೆ. ಆದರೆ ತಲುಪಿಸುವ ಕಂಠಗಳು ಮುದಿಯಾಗುತ್ತಲಿವೆ, ಅವುಗಳಿಗೆ ಈಗ ಜೀವಕಳೆ ತುಂಬಬೇಕಿದೆ. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ನಿಮ್ಮ ರ್ಯಾಪ್ ಸಾಂಗ್ ಗಳಲ್ಲಿ ಈ ಲಾವಣಿ, ತತ್ವಪದಗಳಿಗೆ ಹೊಸ ಚೈತನ್ಯ ಬರಲಿ. ಗಿಟಾರ್ ಜೊತೆಗೆ ಕಂಸಾಳೆಯ ತಾಳ, ದಮ್ಮಡಿಗಳೂ ಸೇರಲಿ. ಇದರ ಜೊತೆಗೆ ಅದಕ್ಕೆ ಸಾಂದರ್ಭಿಕವಾಕ ಹಿನ್ನೆಲೆಯನ್ನು ನೈಸರ್ಗಿಕ ಚಿತ್ರ-ಕಥನದ ಶೈಲಿಯಾದ ನೆರಳು-ಬೆಳಕಿನಾಟದ ಮೂಲಕ ನೀಡಿ. ಸಂಜ್ಞೆಗಳು, ಭಾವನೆಗಳಿಗೆ ದೇಶ-ಭಾಷೆಯ ಹಂಗಿಲ್ಲ. ಹೀಗೆ ಯಾರ ಹಂಗೂ ಇಲ್ಲದೆ ಬೆಳೆಯುವ ಕಲೆಗಳು ಮಾತ್ರ ಉಳಿಯುತ್ತವೆ. ಯಶಸ್ಸು ಸ್ಪರ್ಧೆಯ ಬಹುಮಾನದಲ್ಲಾಗಲೀ, ಹಣದಲ್ಲಾಗಲೀ ದೊರೆಯುವುದಿಲ್ಲ.ಅಪ್ಪಟ ಕಲಾಭಿಮಾನಿಗಳ ಮನದಲ್ಲಿ ಮೂಡಿನಿಲ್ಲುವುದೇ ಯಶಸ್ಸು.

ನನ್ನ ಈ ಮಾತನ್ನು ಪಾಲಿಸಲೇಬೇಕು ಅಂತಾ ಇಲ್ಲ,ಗೆದ್ದರೆ ಜನಪದರ ಕಲೆಗೆ ನೆಲೆ ಸಿಗುತ್ತದೆ, ಸೋತರೂ ತೊಂದರೆ ಇಲ್ಲ, ಇತರರಿಗೆ ಅದರ ಪರಿಚಯವಾಗುತ್ತದೆ. ನೀವು ಗೆದ್ದರೆ ಸಂತೋಷ, ಆದರೆ ಸೋತರೆ ತಿದ್ದಿಕೊಳ್ಳಲು ಒಂದು ಪಾಠ ಸಿಗುತ್ತದೆ. ಪ್ರತಿಭೆಯ ಅನಾವರಣವಾಗುವುದಂತೂ ಖಂಡಿತ.ಇತರರನ್ನು ತುಳಿದು ಬೆಳೆಯದೆ, ಬೆಳೆಸುತ್ತಾ ಬೆಳೆದರೆ ಅದು ನಿಜವಾದ ಗೆಲುವು ಅಲ್ವಾ? ನಿರ್ಧಾರ ನಿಮಗೆ ಬಿಟ್ಟದ್ದು.. ಎಂದು ಹೇಳಿ ಅಲ್ಲಿಂದ ಹೊರಟಳು ಯಶಸ್ವಿನಿ.

ಅದರ ನಂತರ ನಡೆದದ್ದು ನಿಜಕ್ಕೂ ಯಶಸ್ವಿ ಕಥೆಯೇ, ಅವಳ ಮಾತಿಗೆ ಎಲ್ಲರೂ ಮನಸ್ಸು ಬದಲಿಸಿ ಶ್ರದ್ದೆಯಿಂದ, ಜನಪದ ಕಲಾವಿದರ ಸಹಾಯದಿಂದ ನಶಿಸಿ ಹೋಗುತ್ತಿದ್ದ ಕಲೆಯನ್ನು ಉಳಿಸಿಕೊಳ್ಳಲು ಯಶಸ್ವಿಯಾದರು, ಅದಕ್ಕೆ ಪ್ರತಿಫಲವಾಗಿ ಬಹುಮಾನವೂ ಸಂದಿತು.ಇಂದು ಅದೇ ಹಣದ ನೆರವಿನಿಂದ "ಯಶೋಗಾಥೆ" ಎಂಬ ಸಂಸ್ಕೃತಿ ಕೇಂದ್ರ ಸ್ಥಾಪನೆಯಾಗಿ ಯಶೋಮಾರ್ಗದತ್ತ ಸಾಗುತ್ತಾ ಕಲಾರಾಧಕರು ಮತ್ತು ಕಲೆಗೆ ಬೆಳಕು ನೀಡುವ ಕೈಂಕರ್ಯದಲ್ಲಿ ತೊಡಗಿದೆ.

-ವಿಭಾ  ವಿಶ್ವನಾಥ್

ಗುರುವಾರ, ಅಕ್ಟೋಬರ್ 10, 2019

ಕಾಲಾಂತರದ ಹೆಜ್ಜೆಗಳು

ಬಿರುಬಿಸಿಲಲಿ ಬೆಂದು-ಬೆಂದು
ಬಸವಳಿದು ಬೇಗೆ ಅನುಭವಿಸುತ್ತಿವೆ
ಕಲ್ಲುಗಳಾದರೂ,ಪಾದಗಳಾದರೂ
ಭಿತ್ತಿಯಲಿ ಮೂಡುವ ಭಾವವೊಂದೇ
ಇವೆಷ್ಟು ಕಾಲದಿಂದ ಬಳಲಿವೆಯೋ?

ತಾವು ಜೊತೆಯಿದ್ದರೂ ಇಲ್ಲದಂತೆ
ಜೊತೆಗಿರುವ ಭಾವ ಮೂಡಿಸುವಂತೆ
ಜೊತೆಗಿಲ್ಲದಾಗಿರುವ ಸ್ವಾತಂತ್ರ್ಯದಂತೆ
ತಂದೆ-ತಾಯಿ-ಮಗುವಿನಂತಿದ್ದರೂ..
ಅಂಟಿಯೂ ಅಂಟದಂತೆ ಬಿಗಿಯಾಗಿವೆ

ಹೂ ಪಕಳೆಗಳಂತೆ ಅರಳಿ ನಿಂತು
ಬಿರಿದಿದ್ದರೂ ಬಾಡದವಾಗಿವೆ
ನಿಚ್ಚಳವಾಗಿ ಇಲ್ಲೇ ಬೀಡು ಬಿಟ್ಟು
ನಾವೆಲ್ಲಿಗೂ ಹೋಗೆವೆನುತ..
ಮ್ಲಾನವಾಗಿ ಇಲ್ಲೇ ಉಳಿದು ಬಿಟ್ಟಿವೆ

ಬಿಸಿಲಿಗೆ ಬೆನ್ನೊಡ್ಡಿ ಹಿಗ್ಗದೆ
ಮಳೆ-ಗಾಳಿಗೆ ಮೈಯೊಡ್ಡಿ ಕುಗ್ಗದೆ
ಮೋಕ್ಷಕ್ಕಾಗಿಯೇ ಕಾದಿರುವಂತೆ
ವರ್ಷಾನುಗಟ್ಟಲೆಯಿಂದ ಬದುಕಿವೆ
ಕಾಲಾಂತರದ ಹೆಜ್ಜೆಗಳಾಗಿ ಉಳಿದಿವೆ..

-ವಿಭಾ ವಿಶ್ವನಾಥ್

ಭಾನುವಾರ, ಅಕ್ಟೋಬರ್ 6, 2019

ಯಾರು.. ಯಾರು ನೀ ನನಗೆ..?

ಏನೆಂದು ಕರೆಯಲಿ ನಿನ್ನನು ನಾ? ನೀ ಯಾರು ಎಂಬ ಪ್ರಶ್ನೆಗೆ ಯಾವ ಉತ್ತರ ಕೊಡಲಿ ನಾ? ಗೆಳೆಯ ಎಂದರೆ ಅದಕೂ ಹತ್ತಿರ.. ಇನಿಯಾ ಎಂದರೆ ಅದಕೂ ಎತ್ತರ.. ಎಂದು ಹಾಡಿಬಿಡಲೇ..? ಯಾರೆಂದು ಅರಿವಾಗುವ ಮುನ್ನವೇ ಹೊರಟುಬಿಡಲೇ..? ಅಷ್ಟಕ್ಕೂ ನೀ ನನ್ನ ಬಾಳಿಗೆ ಬಂದದ್ದಾದರೂ ಹೇಗೆ? ಯಾಕೆ? ಕಾರಣ ಹೇಳಿ ಅಥವಾ ಕೇಳಿ ಹೊರಡಲು ನಾ ಸಿದ್ದಳಿಲ್ಲ, ಹಾಗೆಂದು ನೆಪವೊಡ್ಡಿ ಇಲ್ಲೇ ಉಳಿಯಬೇಕೆಂಬ ಆಸೆಯೂ ಇಲ್ಲ.ಯಾಕೆಂದು ಗೊತ್ತಾ? ಅಷ್ಟಕ್ಕೂ ಯಾರು.. ಯಾರು ನೀ ನನಗೆ?

ನನ್ನ ನಿನ್ನ ಪರಿಚಯಕ್ಕೆ ಇನ್ನೂ ಕೆಲವು ವರ್ಷಗಳೂ ತುಂಬಿಲ್ಲ, ಆದರೆ ನೀ ನನ್ನ ಬಾಳಿನಲ್ಲಿ ಹಾಸು-ಹೊಕ್ಕಾಗಿದ್ದು ಹೇಗೆ? ಫೋನಿನ ಕಾಲ್ ಲಿಸ್ಟ್ನಲ್ಲಿ ಹೆಚ್ಚು ಹೊತ್ತು ಮಾತನಾಡಿದ ನಂಬರ್ ಗಳಲ್ಲಿ ನಿನ್ನದೇ ಮುಂಚೂಣಿಯಲ್ಲಿದೆ. ದಿನಕ್ಕೊಂದು ಬಾರಿಯಾದರೂ ನಿನ್ನ ಹೆಸರು ನನ್ನ ಬಾಯಲ್ಲಿ ಬಾರದ ದಿನವೇ ಇಲ್ಲವೇನೋ? ಅಪ್ಪ-ಅಮ್ಮನಷ್ಟೇ ನಿನಗೂ ಪ್ರಾಶಸ್ತ್ಯ ಕೊಡುತ್ತಿದ್ದೇನೆಯೇ..? ಗೊತ್ತಿಲ್ಲ..! ನನಗೆ ಅರಿವಿಲ್ಲದೆಯೇ ನಿನ್ನ ಹೆಸರು ನನ್ನ ಬಾಯಲ್ಲಿ ಬಂದುಬಿಡುತ್ತದೆ. ಅಂದು ಅಮ್ಮ "ಅಷ್ಟೊಂದು ಮಾತನಾಡ್ತೀಯಲ್ಲ ಅವನ ಬಗ್ಗೆ ಅದು ಅಷ್ಟೊಂದು ಚೆನ್ನಾಗಿ ಕಾಣಿಸುವುದಿಲ್ಲ" ಎಂದಾಗಲೇ ನನಗೆ ಅರಿವಾಗಿದ್ದು ನೀನು ನನ್ನ ದಿನಚರಿಯ ಅಂಗವೇ ಆಗಿಹೋಗಿದ್ದೀಯಾ ಎಂದು.. ಯಾಕೆ ಹೀಗ್..? ಅಷ್ಟಕ್ಕೂ ಯಾರು.. ಯಾರು ನೀ ನನಗೆ..?

ಯಾರಾದರೂ ನಮ್ಮ ಜೀವನದಲ್ಲಿ ಬಂದರೆ ಅದಕ್ಕೊಂದು ಕಾರಣವಿರುತ್ತದಂತೆ, ಅವರು ಒಂದಲ್ಲಾ ಒಂದು ರೀತಿಯ ಖುಷಿಗೋ, ದುಃಖಕ್ಕೋ ಅಥವಾ ಜೀವನದ ಪಾಠಕ್ಕೋ ಕಾರಣವಾಗುತ್ತಾರಂತೆ..ಹೌದಾ..? ನೀ ನನ್ನ ಜೀವನದಲ್ಲಿ ಬಂದೆಯೋ..? ಅಥವಾ ನಾನೇ ನಿನ್ನ ಜೀವನದಲ್ಲಿ ಬಂದೆನೋ..? ತಿಳಿಯುತ್ತಿಲ್ಲ..! ಕಷ್ಟವೆಂದಾಗ ಅಮ್ಮನಂತೆ ಮಮತೆಯ ಮಾತನಾಡಿದವ, ಅಪ್ಪನಂತೆ ಹಿತ ನುಡಿಯನ್ನಾಡಿದವ,ಅಣ್ಣನ ತಾಳ್ಮೆಯನ್ನು ನೆನಪಿಸಿದವ ಹಾಗೆಯೇ ಎಲ್ಲಾ ಸಂದೇಹಗಳಿಗೆ ಉತ್ತರ ನೀಡಿದವ, ಶಿಕ್ಷಣದಲ್ಲಿ ಮುಂದೇನು ಎಂಬುದರಿಂದ ಹಿಡಿದು ನನ್ನೆಲ್ಲಾ ಹುಚ್ಚು ಪ್ರಶ್ನೆಗಳಿಗೆ ಬೇಸರಿಸಿಕೊಳ್ಳದೆ ಉತ್ತರಿಸಿ ನನ್ನಲ್ಲಿ ಸ್ಥೈರ್ಯ ತುಂಬಿದವ, ಕೆಲಸದಲ್ಲಿನ ನನ್ನೆಲ್ಲಾ ತಪ್ಪುಗಳನ್ನು ತಾಳೆಯಿಂದ ಸಹಿಸಿಕೊಂಡು ತಿದ್ದಿದವ, ಇಷ್ಟೆಲ್ಲಾ ಮಾಡಿದರೂ ಅದರ ಅರಿವಿರದಂತೆಯೇ ಇರುವವ.. ಆದರೆ ಏನೆಂದು ಕರೆಯಲಿ ನಿನ್ನನು ನಾ? ಅಷ್ಟಕ್ಕೂ ಯಾರು.. ಯಾರು ನೀ ನನಗೆ..?

ನೀನು ನನ್ನ ಜೀವನದಲ್ಲಿ ಬರದೇ ಇದ್ದಿದ್ದರೆ ಚೆನ್ನಾಗಿತ್ತೇನೋ..? ಕೆಲವು ಬಂಧಗಳೇ ಹಾಗೇ, ತಿಳಿಯುವ ಮುನ್ನವೇ ಹತ್ತಿರವಾಗಿ ದೂರಾಗುವ ಹೊತ್ತಿಗೆ ಅದರ ನೋವಿನ ಅರಿವು ಮೂಡಿಸುತ್ತವೆ. ಹೆಣ್ಣುಮಕ್ಕಳಿಗೇ ಆ ನೋವಿನ ಬಿಸಿ ಹೆಚ್ಚು ಅನ್ನಿಸುತ್ತದೆ..! ಹೆಣ್ಣಿಗೇ ಅಲ್ಲವೇ ಭಾವದ ನಂಟು ಹೆಚ್ಚು. ಮೀರಾ ಕೃಷ್ಣನನ್ನು ಹಚ್ಚಿಕೊಂಡಳು ಆದರೆ ಕೃಷ್ಣ..? ಮೀರಾ-ಗಿರಿಧರರ ಸಂಬಂಧದಂತೆಯೇ ಇದು..? ಮೀರಾಳಿಗೆ ಕೃಷ್ಣ ಗೆಳೆಯನೇ..? ಪ್ರೇಮಿಯೇ..? ಬಳಗವೇ..? ನಂಟನೇ..? ಅರಿವಿಲ್ಲ.. ಆದರೆ ಆತ್ಮಸಖನಂತೂ ಹೌದು.. ಆತ್ಮಸಖನೆಂಬುವವನು ಪ್ರೇಮಿ,ಗೆಳೆಯ,ಇನಿಯ ಎಲ್ಲಾ ಸಂಬಂಧಗಳನ್ನೂ ಮೀರಿದವನು. ನೀ ನನ್ನಾಅತ್ಮಸಖನೇ..? ಗೊತ್ತಿಲ್ಲ..! ಅರಿವಾಗಲು ಇದು ಮೀರಾ-ಮಾಧವರ ಕಾಲವಲ್ಲವಲ್ಲಾ.. ಹಾಗಾದರೆ ಯಾರು.. ಯಾರು ನೀ ನನಗೆ..?

ನೀನು ಮನೆಯಲ್ಲಿರುವಾಗ ನಿನ್ನ ಕುಟುಂಬದವರ ಜೊತೆ ಹೆಚ್ಚು ಕಾಲ ಕಳೆಯಬೇಕೆಂದುಕೊಳ್ಳುತ್ತೀಯ, ಆದರೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವನ್ನೂ ವ್ಯಕ್ತಪಡಿಸುತ್ತೀಯ. ದಿನಾ ನಾವು ಮಾತನಾಡುವ ಆ ಕ್ಷಣಗಳನ್ನೂ ಅವರಿಗೇ ನೀಡಿಬಿಡು. 5 ರಿಂದ 50 ನಿಮಿಷಗಳವರೆಗೂ ನನ್ನ-ನಿನ್ನ ಮಾತು-ಕಥೆ ಸಾಗಿದ್ದಿದೆ. ಅವೆಲ್ಲವೂ ತಳ್ಳಿಹಾಕುವಾ ಅಥವಾ ಪ್ರಯೋಜನಕ್ಕೆ ಬಾರದ ಮಾತುಗಳೇನೂ ಅಲ್ಲ. ಆದರೆ ಮಾತನಾಡದಿದ್ದರೆ ಆಗುವ ನಷ್ಟವೂ ಏನೂ ಇಲ್ಲ. ಅಷ್ಟಕ್ಕೂ ನನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಬೇಕೆಂಬ ನಿಯಮವೇನೂ ಇಲ್ಲವಲ್ಲಾ. ತನಗೆ ತೊಂದರೆಯಾದರೂ ಹೇಳಿಕೊಳ್ಳಲಾಗದ ಮಗುವಿನಂತಾ ಮನಸ್ಸಿನವನು ನೀನು. ಅಷ್ಟಕ್ಕೂ ನಾನು ನಿನ್ನಲ್ಲಿ ಹೆಚ್ಚು ಮಾತನಾಡುವುದು ಫೋನಿನಲ್ಲಿಯೇ. ಯಾಕೆ ಗೊತ್ತಾ? ನಿನ್ನ ಭಾವನೆಗಳನ್ನು ನೇರವಾಗಿ ಕಾಣುವ ಧೈರ್ಯ ನನಗಿಲ್ಲ. ಏಕೆಂದರೆ, ನಿನ್ನ ಕಣ್ಣಿನಲ್ಲಿ ಕಾಣುವ ಒಂದು ಸಣ್ಣ ಅಸಹನೆಗೆ ನನ್ನ ಕುತೂಹಲವೇ ಇಂಗಿಹೋಗಬಹುದೇನೋ..!ಪುಣ್ಯಕ್ಕೆ, ಇದುವರೆಗೂ ಅಂತಹದ್ದೇನೂ ಘಟಿಸಿಲ್ಲ, ಮುಂದೆಂದೂ ಹಾಗಾಗಬಾರದಲ್ಲ.. ಅದೇಕೋ ನೀ ಹೇಳುವ ಪ್ರತಿಯೊಂದು ಮಾತುಗಳೂ, ಚಿಂತನೆಗಳು ಮನದಾಳಕ್ಕೆ ಇಳಿದುಬಿಡುತ್ತವೆ. ಕೆಲವೊಮ್ಮೆ ಒಪ್ಪಿಕೊಳ್ಳಲು ಕಷ್ಟ ಎನಿಸಿದರೂ ಸತ್ಯವೇ ಅಲ್ಲವೇ? ಆದರೂ ನಿನ್ನ ಮಾತುಗಳಿಗೆ ನಾನು ಅಷ್ಟು ಬೆಲೆಕೊಡುವುದಾದರೂ ಏಕೆ..? ನೀ ಯಾರೋ ಆದರೆ ನಾನಂತೂ ನಿನ್ನ ಹಿತೈಷಿ ಅಷ್ಟೇ. ಅಷ್ಟಕ್ಕೂ ನಾನು ಹಿತ ಬಯಸಲು ಯಾರು.. ಯಾರು ನೀ ನನಗೆ..? 

ದೇವರನ್ನು ಯಾರು ಕಂಡಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ನಾನಂತೂ ಕಂಡಿಲ್ಲ. ಬಹುಷಃ ಅವನೂ ನಿನ್ನಂತೆಯೇ ಇರಬಹುದೋ ಏನೋ ಗೊತ್ತಿಲ್ಲ. ಯಾಕೆ ಹೀಗನ್ನುತ್ತಿದ್ದೇನೆ ಗೊತ್ತಾ? ನಾ ನಿನ್ನಿಂದ ದೂರ ಹೋಗುವ ಪ್ರಯತ್ನದಲ್ಲಿ ನಾನು ಬದಲಾಗುತ್ತಿದ್ದೇನೆ. ಆದರೂ ನೀನು ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಮೊದಲಿನ ರೀತಿಯೇ ನಡೆದುಕೊಳ್ಳುತ್ತಿದ್ದೀಯ. ಬೈದು ಹೊರಹೋಗು ಎಂದು ಹೇಳುವ ಸಂಧರ್ಭ ಸೃಷ್ಟಿಸಿ ಹೊರಹೋಗೋಣ ಎಂದುಕೊಂಡರೂ ನಿನ್ನ ಕ್ಷಮಾಗುಣ ಎಲ್ಲದಕ್ಕೂ ಅಡ್ಡಿಪಡಿಸುತ್ತಿದೆ. ಕ್ಷಮಿಸಿ ದೇವರಾಗಿ ಬಿಡುತ್ತೀಯ ಅಲ್ಲವೇ..? ದೇವರನ್ನೇ ನಂಬದ ನಾನು ದೇವರನ್ನು ನಂಬುವ ನಿನ್ನನ್ನು ನಂಬಬಹುದು ಎಂದುಕೊಳ್ಳುತ್ತೇನೆ. ಯಾಕೆ ಗೊತ್ತಾ?ಕಾಣದ ದೇವರಿಗಿಂತ ಕಾಣುವ ದೇವರಂಥಹವರೇ ಮಿಗಿಲಲ್ಲವೇ..? ಆದರೂ ಆ  ನಂಬಿಕೆ ಹುಟ್ಟುವಂತೆ ಮಾಡಿದ ನೀನು, ಯಾರು.. ಯಾರು ನೀ ನನಗೆ..?

ಈ ಪ್ರಶ್ನೆಗೆ ಉತ್ತರ ಹುಡುಕುವ ಹೊತ್ತಿನಲ್ಲೇ ಮತ್ತೊಂದು ಸಂದೇಹ ಕಾಡುತಿದೆ.
ತನ್ಮಯಳಾದೆನು ತಿಳಿಯುವ ಮುನ್ನವೇ...
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ..?
ಇದಲ್ಲದಕೂ ಉತ್ತರ ಸಿಗುವುದೇ..? ಆದಷ್ಟು ಬೇಗ ಉತ್ತರ ಹೇಳುವೆಯಾ..?
ಆದರೆ ಉತ್ತರ ಹೇಳುವ ಮುನ್ನ ನನ್ನದೊಂದು ಪ್ರಶ್ನೆ. ನಾ ನಿನಗೆ ಪ್ರಶ್ನೆ ಕೇಳಲು, ನೀ ನನಗೆ ಉತ್ತರಿಸಲು, ಯಾರು.. ಯಾರು ನೀ ನನಗೆ..?

-ವಿಭಾ ವಿಶ್ವನಾಥ್ 

ಗುರುವಾರ, ಅಕ್ಟೋಬರ್ 3, 2019

ಭಾವಶರಧಿಯಲ್ಲೊಂದು ಸುತ್ತು

ಬದುಕು ಭಾವನೆಗಳ ಹಂದರವಾದರೂ, ಬಹಳ ವಿಚಿತ್ರ. ಕೆಲವೊಮ್ಮೆ ನಂಟುಗಳು ಬೆಸೆದುಕೊಳ್ಳುವ ಪರಿ ಅರ್ಥವೇ ಆಗುವುದಿಲ್ಲ. ಬದುಕಲ್ಲಿ ಅಚಾನಕ್ಕಾಗಿ ಕೆಲವು ವ್ಯಕ್ತಿಗಳು ಪ್ರವೇಶಿಸುತ್ತಾರೆ ಅಥವಾ ನಾವೇ ಅವರ ಜೀವನದಲ್ಲಿ ಅತಿಕ್ರಮಣ ಮಾಡುತ್ತೇವೆ. ಒಬ್ಬರ ಬದುಕಲ್ಲಿ, ಮತ್ತೊಬ್ಬರು ಹಾಗೆ ಸಿಗುವುದು ವಿಧಿಲಿಖಿತವೇ ಆಗಿರಬಹುದು. ಆದರೆ, ಪರಿಣಾಮಗಳಂತೂ ಇದ್ದೇ ಇದೆ. ಒಳ್ಳೆಯದ್ದಾದರೂ, ಕೆಟ್ಟದ್ದೇ ಆದರೂ ಅದು ಪರಿಣಾಮವೇ ಅಲ್ಲವೇ..?

ಇಂತಹಾ ಎಷ್ಟೋ ಬಂಧಗಳಿಗೆ ಹೆಸರಿಡುವುದು ಅಸಾಧ್ಯವೇ ಸರಿ. ಎಲ್ಲದಕ್ಕೂ ಹೆಸರಿಡುವೆನೆಂದು ಹೊರಡುವುದಾದರೆ ಮೀರಾ-ಮಾಧವರ ಬಂಧಕ್ಕಿರುವ ಹೆಸರೇನು..? ಬಂಧಗಳು ಧೀರ್ಘಕಾಲ ಉಳಿಯುವುದೋ ಇಲ್ಲವೋ ಎಂಬುದು ಆಯಾ ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರ. ಬದುಕಲ್ಲಿ ಮುಂದೆ ಈಗ ಸಿಕ್ಕಿರುವವರಿಗಿಂತ ಮೌಲ್ಯವುಳ್ಳ ವ್ಯಕ್ತಿಗಳು ಸಿಗಬಹುದು.. ಅಪರಿಚಿತತೆಯಿಂದ ಪರಿಚಿತತೆಯೆಡೆಗೆ ಹೋಗುವ ಚಲನೆ ಸಂತಸ ನೀಡುವುದು ಹೌದಾದರೂ, ಪರಿಚಿತತೆಯಿಂದ ಅಪರಿಚಿತತೆಗೆ ಚಲಿಸುವ ಹಿಮ್ಮುಖ ಕಾಲಚಕ್ರ ನಿಜಕ್ಕೂ ಯಾತನಾದಾಯಕ.

ಬದುಕಿನ ದೋಣಿಯಲ್ಲಿ ಕೆಲವೊಮ್ಮೆ ಸಹಪ್ರಯಾಣಿಕರಾಗುತ್ತೇವೆ. ಆದರೆ, ಅವರೊಂದಿಗೇ ಜೀವನಪೂರ್ತಿ ಇರುತ್ತೇವೆ ಎಂದು ಭಾವಿಸುವುದು ತಪ್ಪಾಗುತ್ತದೆ. ಅವರಿಲ್ಲದೇ ಬದುಕು ಸಾಗುವುದಿಲ್ಲವೇ..? ಕಂಡಿತಾ, ಯಾರಿಲ್ಲದೆಯೂ ಬದುಕು ಸಾಗುತ್ತದೆ. ಇಷ್ಟು ದಿನ ನಮ್ಮ ಬದುಕಲ್ಲಿ ಅವರೇ ಇದ್ದರೇ..? ಜೊತೆಯಲ್ಲಿ ಪ್ರಯಾಣಿಸಿದ ನಂತರ ಮತ್ತೆ ಒಬ್ಬರೇ ಪ್ರಯಾಣಿಸುವುದು ಕೊಂಚ ಕಷ್ಟವಾಗಬಹುದು ಆದರೆ ಅಸಾಧ್ಯವಂತೂ ಅಲ್ಲ. ಅಲ್ಲವೇ..? ಆದರೆ ಹಾಗೆ ಬಂದು ಹೋದ ಕೆಲವರಿಂದ ನಮ್ಮ ಬದುಕಿನಲ್ಲಿ ಮಹತ್ತರ ಬದಲಾವಣೆಗಳಂತೂ ಆಗುತ್ತವೆ.  ಆ ಬದಲಾವಣೆ ತಂದವರ ಬದುಕಲ್ಲಿ ಮತ್ತಾವುದೋ ಕಹಿಸತ್ಯ ಅಡಗಿರಬಹುದು, ಅವರು ಕಲಿತ ಮಹತ್ತರ ಅನುಭವದ ಪಾಠ ಅದಾಗಿರಬಹುದು. ಆ ಕಾಳಜಿಯ ಹಿಂದೆ ನನಸಾಗದ ಅವರ ಕನಸನ್ನು ನಿಮ್ಮ ಮೂಲಕ ನನಸು ಮಾಡಿಕೊಳ್ಳುವ ಆಸೆ ಇರಬಹುದು. ಪ್ರತಿ ಮಮತೆ, ಕಾಳಜಿಗೂ ಪ್ರತಿಫಲ ಬಯಸದ ನಿಸ್ವಾರ್ಥತೆಯ ಹಿಂದೆ ನಿರ್ಮಲ ಅಂತಃಕರಣ ಅಡಗಿರುತ್ತದೆ, ಮೃದು ಮನಸ್ಸಿರುತ್ತದೆ. ಅದು ಮತ್ತೊಂದು ಭಾವವನ್ನು ಸೃಷ್ಟಿಸ ಹೊರಟಲ್ಲಿ ಕೀಳಾಗಬಹುದು. ಪ್ರತಿ ಕಾಳಜಿ, ಮಮಕಾರಕ್ಕೂ ಪ್ರತಿಫಲ ಬಯಸಿದರೆ ಅದು ವ್ಯವಹಾರ ಎಂದೆನಿಸಿಕೊಳ್ಳುವುದಿಲ್ಲವೇ..? ವ್ಯಾವಹಾರಿಕ ಸಂಬಂಧಗಳ ಆಯಸ್ಸು ಕೆಲಕಾಲ ಮಾತ್ರವೇ.. ಆದರೆ, ನಿಸ್ವಾರ್ಥತೆಯಿಂದ ಮಾಡುವ ಸಹಕಾರ ನೀಡುವ ತೃಪ್ತಿ ಸಾಕು ನೆಮ್ಮದಿಯಿಂದ ಜೀವಿಸಲು.

ಸಹಾಯ ಮಾಡಲು, ಸಹಕಾರ ನೀಡಲು ಇಲ್ಲಿ ನಿರ್ದಿಷ್ಟ ಕಾರಣಗಳೇ ಬೇಕಿಲ್ಲ. ಅಂತಸ್ತು, ಅಂದ-ಚೆಂದ ಎಲ್ಲವೂ ನಗಣ್ಯ. ಮನಸ್ಸಿನ ಸೌಂದರ್ಯ, ಒಳ್ಳೆಯತನ, ಆದರ್ಶ, ಒರಟುತನದ ಹಿಂದೆ ಅಡಗಿರುವ ಕಾಳಜಿ ಇವಿಷ್ಟೇ ಸಾಕಲ್ಲವೇ ಅವರಿಗೆ ಸಹಕಾರ ನೀಡಲು..

ಅವರ ಕಣ್ಣಲ್ಲಿ ಕಾಣುವ ನಂಬಿಕೆ, ಭರವಸೆ ಮತ್ತೊಬ್ಬರ ಬದುಕಿನಲ್ಲಿ ನೀಡುವ ಉತ್ತೇಜನದ ಅರಿವು ಅವರಿಗಿದೆಯೋ ಇಲ್ಲವೋ ಗೊತ್ತಿಲ್ಲ.. ಆದರೆ ಆ ಕ್ಷಣದಲ್ಲಿ ಅದು ನೀಡುವ ಆತ್ಮವಿಶ್ವಾಸ ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ಎಲ್ಲರೂ ಕೈಬಿಟ್ಟು, ಎಲ್ಲವೂ ಮುಗಿಯಿತು ಎನ್ನುವಾಗ ಸಿಗುವ ಆ ಸಾಂತ್ವಾನದ ಮಾತು ಬದುಕನ್ನೇ ಬದಲಿಸಬಲ್ಲದು. ಜೊತೆ ನಿಲ್ಲದಿದ್ದರೂ ಪರವಾಗಿಲ್ಲ ಆ ಒಂದು ಮಾತು ಸಾಕು ಬದುಕಿನ ದಿಕ್ಕನ್ನೇ ಬದಲಾಯಿಸಲು.

"ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನಾ" ಎಂದಿದ್ದಾನೆ ಕೃಷ್ಣ ಭಗವದ್ಗೀತೆಯಲ್ಲಿ. ನಿನ್ನ ಕೆಲಸವನ್ನು ನೀನು ಮಾಡು ಅದರ ಫಲಾಫಲವನ್ನು ನಿರೀಕ್ಷಿಸಬೇಡ ಎಂಬುದು ಅದರ ಅರ್ಥ. ಬದುಕಿನ ಕರ್ಮಫಲವೂ ಹೀಗೇ ಅಲ್ಲವೇ..? ಒಬ್ಬರಿಗೆ ಒಳಿತು ಮಾಡಿದರೆ ಅದು ನಮಗೆ ಮತ್ತಾವುದೋ ರೀತಿಯಲ್ಲಿ ತಿರುಗಿ ಬರುತ್ತದೆ.

ಫಲಾಫಲಗಳನ್ನು ನಿರೀಕ್ಷಿಸುತ್ತಾ ಕುಳಿತಾಗ ಮತ್ತೊಬ್ಬರು ನಮ್ಮ ನಿರೀಕ್ಷೆಗೆ ತಕ್ಕಂತೆ ಪ್ರತಿಕ್ರಿಯಿಸದಿದ್ದಾಗ ಅಘಾತವಾಗುವುದು ಸಹಜವೇ.. ಅದಕ್ಕಿಂತ ನಿರೀಕ್ಷೆಯೇ ಇಲ್ಲದಿದ್ದರೆ ಒಳಿತಲ್ಲವೇ..? ನಿರೀಕ್ಷೆ ಇಲ್ಲದೆ, ಪ್ರೀತಿ, ಕಾಳಜಿ ತೋರದೆ ಸುಮ್ಮನಿರಲು ನಾವೆಲ್ಲಾ ಬುದ್ದರಲ್ಲ ಎಂಬುವುದನ್ನು ನಾನು ಒಪ್ಪಿಕೊಳ್ಳುವೆ. ಆದರೆ, ಕೆಲವೊಮ್ಮೆ ಅಂಕೆಯಲ್ಲಿರದ ಭಾವನೆಗಳಿಂದ ನೋವು ಅನುಭವಿಸುವುದೇ ಹೆಚ್ಚು. ಎರಡು ದಡಗಳು ಸಮಾನಾಂತರವಾಗಿ ಬಾಳಬಹುದು ಅಷ್ಟೇ.. ಒಂದಾಗಲು ಸಾಧ್ಯವಿಲ್ಲ.

ಭಾವ ಶರಧಿಯಲ್ಲಿ ಹಾಗೆ ಸುಮ್ಮನೆ ಒಂದು ಸುತ್ತು ಅಷ್ಟೇ.. ನಿಮ್ಮ ಅಭಿಪ್ರಾಯಗಳು ನಿಮ್ಮ ನಿಮ್ಮ ಸ್ವಂತ. ಇದು ನನ್ನ ಅಭಿಪ್ರಾಯವಷ್ಟೇ.. ಒಬ್ಬರ ಆಲೋಚನೆ ಮತ್ತೊಬ್ಬರದಕ್ಕಿಂತ ಭಿನ್ನ. ಅಲ್ಲವೇ..? ನನ್ನ ಹುಚ್ಚು ಆಲೋಚನೆಯಲ್ಲಿ ಇದೂ ಒಂದು ಅಷ್ಟೇ..

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 29, 2019

ಸೋಗುಗಾತಿ

ಯಾರೂ ತನ್ನವರಲ್ಲವೆಂಬ ಅರಿವಿದ್ದರೂ
ತನ್ನವರೇ ಎಲ್ಲರೂ ಎಂಬಂತೆ ಬದುಕುವ
ಬದುಕಿನ ಮಹಾ ಸೋಗುಗಾತಿ ಅವಳು

ಭಾವಗಳ ಓಘವೇ ಹರಿಯುತ್ತಿದ್ದರೂ
ಭಾವಗಳೇ ಇಲ್ಲವೆಂಬಂತೆ ತೋರಿಸುವ
ಬದುಕಿನ ಮಹಾ ಸೋಗುಗಾತಿ ಅವಳು

ಎದೆಯಲ್ಲಿ ಕೋಲಾಹಲವೇ ನಡೆಯುತ್ತಿದ್ದರೂ
ಮುಗುಳ್ನಗೆಯ ಮೇಲ್ಪದರ ಹೊದೆಯುವ
ಬದುಕಿನ ಮಹಾ ಸೋಗುಗಾತಿ ಅವಳು

ಪರರ ನೆರವಿಗೆ ತಾ ಬಲವಾಗಿ ನಿಂತು
ತನ್ನ ಬಲಹೀನತೆಯನ್ನು ಮರೆಮಾಚುವ
ಬದುಕಿನ ಮಹಾ ಸೋಗುಗಾತಿ ಅವಳು

ಒಲವಿನಲೆಗಳ ಅರಿವಿದ್ದರೂ ಅರಿವಿಲ್ಲದಂತೆ
ತನ್ನ ಬಾಳಲ್ಲಿಯೇ ತಾ ನಟಿಸುವ
ಬದುಕಿನ ಮಹಾ ಸೋಗುಗಾತಿ ಅವಳು

ಇಂತಹಾ ಸೋಗುಗಾತಿಯರಿಗೆ ಬರವಿಲ್ಲ
ಮತ್ತೆಲ್ಲೋ ಹುಡುಕ ಹೊರಡಬೇಡಿ
ತಾನವಳಲ್ಲವೆನ್ನುವ ಸೋಗು ಹಾಕಿ ಹೊರಡಬಹುದು

ಒಂದೊಮ್ಮೆ ಮನ ಮಂಥನ ಮಾಡಿಕೊಳ್ಳಿ
ನಿಮ್ಮಲ್ಲೇ, ನಿಮ್ಮ ಮನೆಯಲ್ಲೇ, ಎಲ್ಲೆಲ್ಲೂ
ಇಂತಹಾ ಸೋಗುಗಾತಿಯರು ಸಿಗಬಹುದು

ಇನ್ನಾದರೂ ಇವರನ್ನು ಅರ್ಥ ಮಾಡಿಕೊಂಡರೆ
ಪ್ರಾಮಾಣಿಕ ಗೆಳತಿ, ಆತ್ಮಸಂಗಾತಿ ಸಿಗಬಹುದು
ಸೋಗುಗಾತಿಯರ ಬದುಕೂ ಸೊಗಸಾಗಬಹುದು

~ವಿಭಾ ವಿಶ್ವನಾಥ್

ಗುರುವಾರ, ಸೆಪ್ಟೆಂಬರ್ 26, 2019

ನಿನ್ನ ಬದುಕಿನ ಉತ್ತರಕ್ಕೆ ಪ್ರತ್ಯುತ್ತರ, ನನ್ನ ಬದುಕಿನ ಪ್ರಶ್ನೆ...

ಪ್ರೀತಿಯ ಗೆಳತಿಗೆ,

ನೀನು ಹೇಳಿದ್ದು ತುಂಬಾ ನಿಜ ಎಂದೆನ್ನಿಸಲು ಶುರುವಾಗಿದೆ, ಏಕೆಂದರೆ ಭಾವನೆಗಳು ನಾವು ಅರ್ಥಮಾಡಿಕೊಂಡಂತೆ ಎಂದು ನೀನು ಹೇಳಿದ್ದು ನಿಜ ಎನ್ನಿಸುತ್ತಿದೆ. ಸಮಯ ಕಳೆದಂತೆ ಜೀವನದ ಅರ್ಥ ಮತ್ತು ಸಾರ್ಥಕತೆ ತಿಳಿಯುತ್ತಿದೆ.

ನಾನು ನಿನ್ನನ್ನು ಕೇಳಿದ ಸಲಹೆಗೆ ಸ್ಪಂದಿಸಿ ನಿನ್ನ ಅತ್ಯಮೂಲ್ಯ ಸಲಹೆ ನೀಡಿದ ನಿನಗೆ ಧನ್ಯವಾದಗಳು. ಅಂದ ಹಾಗೆ ಮುಂದಿನ ತಿಂಗಳೇ ನನ್ನ ಮದುವೆ.ನೀನು ತಪ್ಪದೆ ಮದುವೆಗೆ ಎರಡು ದಿನ ಮುಂಚಿತವಾಗಿಯೇ ಬಂದು ಶುಭ ಕೋರುವೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿರುವ...

-ನಿನ್ನ ಪ್ರೀತಿಯ ಗೆಳತಿ 

ನಲ್ಮೆಯ ಸ್ನೇಹಿತೆಗೆ,

ನೀನು ಬಹಳ ಸಂತೋಷದಿಂದ್ದಿದ್ದೀಯ ಮತ್ತು ಯಾವುದೇ ಅಪರಾಧಿ ಪ್ರಜ್ಙೆಕಾಡುತ್ತಿಲ್ಲವೆಂಬುದು ನಿನ್ನ ಈ ಪತ್ರದಿಂದಲೇ ತಿಳಿಯುತ್ತದೆ. ನಿನ್ನ ಜೀವನದ ಅತ್ಯಮೂಲ್ಯ ಸಂಗತಿಯನ್ನು ಆಯ್ದುಕೊಳ್ಳಲು ನಿನಗೆ ನೆರವಾಗಿದ್ದಕ್ಕೆ ನನಗೆ ಆತ್ಮ ಸಂತೃಪ್ತಿಯಿದೆ.

ನೀನು ಆ ದಿನ ನನ್ನೊಡನೆ ಮಾತನಾಡಿದಾಗ ನಿನ್ನ ಧ್ವನಿಯಲ್ಲಿದ್ದ ಆ ದುಗುಡ ನನ್ನನ್ನು ಬಹುವಾಗಿ ಕಾಡಿತು. ಯಾಕೆಂದರೆ ಯಾವಾಗಲು ಅರಗಿಣಿಯಂತೆ ನುಡಿಮುತ್ತನ್ನು ಉದುರಿಸುತ್ತಿದ್ದ ನೀನು, ಹಾಗಿರುವುದನ್ನು ನಾನೆಂದಿಗೂ ನೋಡ ಬಯಸುವುದಿಲ್ಲ. ಹಿರಿಯ ಮಗಳಾಗಿದ್ದ ನಿನ್ನ ಮೇಲೆ ಜವಾಬ್ದಾರಿ ಹೆಚ್ಚಿತ್ತು ನಿಜ, ನಿನ್ನ ತಂಗಿಯರ ಭವಿಷ್ಯಕ್ಕಾಗಿ ನಿನ್ನ ಭವಿಷ್ಯವನ್ನು ತ್ಯಾಗ ಮಾಡಿ, ನೀನು ಆ ಹುಡುಗನನ್ನು ಒಪ್ಪಲು ಯಾರೂ ನಿನ್ನನ್ನು ಒತ್ತಾಯಿಸದಿದ್ದರೂ, ನಿನ್ನ ರೂಪಕ್ಕೆ ಆತ ಅನುರೂಪನಲ್ಲವೆಂಬುದನ್ನು ಮನಸ್ಸಿನಲ್ಲಿ ತುಂಬಿಕೊಂಡು ಮಂಕಾಗಿಯೇ, ಅರ್ಧಂಬರ್ಧ ಮನಸ್ಸಿನಲ್ಲಿಯೇ ಆ ಮದುವೆಗೆ ಒಪ್ಪಿಗೆ ನೀಡಿದ್ದೆ. ನಿನ್ನ ಆ ನಿರ್ಧಾರಕ್ಕೆ ಹಿಂದಿನ ಗಂಡುಗಳಿಂದ ತಿರಸ್ಕಾರವೂ ಸೇರಿತ್ತೇನೋ..?ನಾನರಿಯೆ..!

ಹುಡುಗ ಕಪ್ಪು ಎಂಬುದನ್ನು ಬಿಟ್ಟರೆ, ಆತನಲ್ಲಿ ಬೇರಾವ ದುರ್ಗುಣ, ದುಶ್ಚಟಗಳೂ ಇಲ್ಲ ಎಂಬುದು ನಿನಗೆ ಕಾಲಕ್ರಮೇಣ ತಿಳಿದಿರುವುದು ಸಂತಸದ ವಿಷಯ. ಆತನೊಂದಿಗೆ ಮಾತನಾಡಿ,ಕಾಲಕಳೆದ ನಂತರ ನಿನಗೇ ಅರಿವಾಗಿ ಈಗ ನೀನು ಆತನೊಂದಿಗೇ ಸಂತಸದಿಂದಲೇ ಸಪ್ತಪದಿ ತುಳಿಯುತ್ತಿದ್ದೀಯ.

ನೋಡಲು ಯಾವ ಹೀರೋಹಿನ್ ಗೂ ಕಮ್ಮಿ ಇಲ್ಲದ ನೀನು ಸ್ವಲ್ಪ ಕುಳ್ಳಿ ಎಂಬುದನ್ನು ಬಿಟ್ಟರೆ ನಿನ್ನನ್ನು ನಿರಾಕರಿಸಲು ಬೇರೆ ಯಾವ ಕಾರಣಗಳೂ ಇರಲಿಲ್ಲ, ಆದರೆ ಆ ಹುಡುಗನ ಮನೆಯವರೆಲ್ಲರೂ ನಿನ್ನನ್ನು ಒಪ್ಪಿಬಿಟ್ಟಿದ್ದರು. ಕೆಲಸಕ್ಕೆಂದು ಹೊರಹೋದ ನಿನಗೆ ಬೆಂಗಳೂರೆಂಬ ಮಾಯಾಜಾಲದ ಪರಿಚಯವಾಗಿಬಿಟ್ಟಿತ್ತು. ಅಲ್ಲದೆ ಫಿಲ್ಮ್ ಗಳ ಹುಚ್ಚೂ ನಿನಗೆ ಸ್ವಲ್ಪ ಹೆಚ್ಚೇ ಇದ್ದುದ್ದರಿಂದ ನಿನ್ನ ಜೀವನ ಸಂಗಾತಿಯ ಬಗ್ಗೆ ನೀನು ಹುಚ್ಚು ಕನಸುಗಳನ್ನಿಟ್ಟುಕೊಂಡು ಕಾಯುತ್ತಿದ್ದೆ.

ಹುಡುಗ ನೋಡುವುದಕ್ಕೆ ಅಷ್ಟೇನೂ ಚೆನ್ನಾಗಿಲ್ಲ,ಏನ್ಮಾಡ್ಲಿ?ಎಂಬ ನಿನ್ನ ಆ ಪ್ರಶ್ನೆ ನನ್ನಲ್ಲೊಂದು ಪ್ರಶ್ನಾಪ್ರವಾಹವನ್ನೇ ಎಬ್ಬಿಸಿಬಿಟ್ಟಿತ್ತು. ನಿನ್ನ ಆ ಪ್ರಶ್ನೆಗೆ ಉತ್ತರಿಸಲು ನಾನೆಷ್ಟು ಒದ್ದಾಡಿದ್ದೇನೆಂಬುದರ ಕಿಂಚಿತ್ ಅರಿವೂ ನಿನಗಿರಲಿಕ್ಕಿಲ್ಲ. ನನ್ನ ಆಪ್ತ ಸ್ನೇಹಿತೆಯ ಜೀವನದ ಕುರಿತ ಪ್ರಶ್ನೆಗೆ ನಾನು ಸರಿಯಾದ ಉತ್ತರ ನೀಡಲು ನಾನೇ ಉತ್ತರವನ್ನರಸುತ್ತಾ ಹೊರಟೆ.

ನನ್ನ ಎಲ್ಲಾ ಸಂದೇಹಗಳಿಗೂ ಉತ್ತರ ನೀಡುತ್ತಿದ್ದ ಆಪ್ತರೊಬ್ಬರ ಬಳಿ ಹೊರಗಿನ ಸೌಂದರ್ಯ ಮುಖ್ಯವೋ? ಅಥವಾ ವ್ಯಕ್ತಿತ್ವ ಮುಖ್ಯವೋ? ಎಂಬ ಪ್ರಶ್ನೆಯನ್ನಿಟ್ಟಿದ್ದೆ. ಯಾವಾಗಲೂ ನಾನೆಣಿಸಿದಂತೆಯೇ ಉತ್ತರ ನೀಡುತ್ತಿದ್ದ ಆತ, ಅಂದು ನೀಡಿದ ಉತ್ತರ ನನ್ನ ಮನಸ್ಸನ್ನು ಮತ್ತಷ್ಟು ಘಾಸಿಗೊಳಿಸಿತ್ತು. ಕಾರಣ ಇಷ್ಟೇ: ಹೊರಗಿನ ಸೌಂದರ್ಯವೇ ಮುಖ್ಯ ಎಂದೇ ಆತ ಹೇಳಿದ್ದ. ಹೊಸಬರು ನಮ್ಮನ್ನು ಅಳೆಯುವಾಗ ಎಂದಿಗೂ ಅವರಿಗೆ ನಮ್ಮ ವ್ಯಕ್ತಿತ್ವ ಪರಿಚಿತವಿರುವುದಿಲ್ಲ, ಆದ್ದರಿಂದ ಹೊರಗಿನ ಸೌಂದರ್ಯವೇ ಮುಖ್ಯ ಎಂದು ಹೇಳಿದ್ದರು.ಒಬ್ಬರನ್ನಷ್ಟೇ ಅಲ್ಲಾ,ಬಹಳ ಜನರಿಂದ ಬಂದ ಉತ್ತರ ರೂಪವೇ ಮುಖ್ಯ ಎಂದೇ..ಕೊನೆಗೆ ನಾನು ಇವರೆಲ್ಲರ ಹೇಳಿಕೆಗೆ ವಿರುದ್ದವಾಗಿ ಬಣ್ಣಕ್ಕಿಂತ ಗುಣವೇ ಮುಖ್ಯ ಎಂದೇ ಹೇಳಿದೆ.

"ಹತ್ತಿಯ ಹಣ್ಣು ಬಲು ಕೆಂಪು ಇದ್ದರೂ ಒಡೆದು ನೋಡಿದರೆ ಹುಳು ಬಹಳ, ನೇರಳೆ ಹಣ್ಣು ಬಲು ಕಪ್ಪು ಇದ್ದರೂ ತಿಂದು ನೋಡಿದರೆ ರುಚಿ ಬಹಳ" ಎಂಬ ಜನಪದರ ಉದಾಹರಣೆಯನ್ನೂ ನೀಡಿದೆ.

ಆದರೆ ನಿನ್ನ ಪ್ರಶ್ನೆಗೆ ಉತ್ತರ ಹುಡುಕಲು ಹೋಗಿ ನನ್ನ ಮನಸ್ಸೇ ಗೊಂದಲದ ಗೂಡಾಗಿದೆ. ಗಂಡು ಕಪ್ಪಿದ್ದರೂ ಶ್ಯಾಮಲ ವರ್ಣದವನು ಕೃಷ್ಣ,ರಾಮ, ಶಿವನ ಹಾಗಿದ್ದಾನೆ ಎಂದೆಲ್ಲಾ ಹೇಳುತ್ತಾರೆ, ಆದರೆ ಹುಡುಗಿ ಕಪ್ಪಿದ್ದರೆ ಯಾರೂ ಅಷ್ಟು ಸುಲಭದಲ್ಲಿ ಒಪ್ಪುವುದಿಲ್ಲ. ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ನಾನೇನು ಬೆಳ್ಳಗಿಲ್ಲ, ಸುಂದರವಾಗಿ ಅಲಂಕರಿಸಿಕೊಳ್ಳುವ ಆಸಕ್ತಿಯೂ ನನಗಿಲ್ಲ, ನೋಡಲು ಚೆನ್ನಾಗಿ ಕಾಣಬೇಕೆಂದು ಅಲಂಕರಿಸಿಕೊಳ್ಳುವುದರಲ್ಲಿ ಅಸ್ಥೆಯೂ ಇಲ್ಲ. ಹಾಗಾದರೆ ನನ್ನ ಜೀವನ ಸಂಗಾತಿ ನನ್ನನ್ನು ಯಾವುದರಿಂದ ಆರಿಸಿಕೊಳ್ಳಬಹುದು? ಪ್ರೀತಿ ಇಲ್ಲದ ಮೇಲೆ ನಂಟು ಉಳಿದೀತು ಹೇಗೆ..? ಆತನೂ ನಿನ್ನಂತೆಯೇ ಯೋಚಿಸಿ ಅರೆಮನಸ್ಸಿನಿಂದ ಒಪ್ಪಿಗೆ ಇತ್ತರೆ...?ವರದಕ್ಷಿಣೆಯ ಆಸೆಯಿಂದ ಒಪ್ಪಿಗೆ ಇತ್ತರೆ..? ಇತ್ತರೆ ಏನು,ಆಗುವುದು ಖಂಡಿತಾ ಅದೇ ಎಂಬುದರ ಅರಿವು ನನಗಿದೆ. ಬಂದದ್ದೆಲ್ಲಾ ಬರಲಿ ಗೋವಿಂದನ ದಯವೊಂದಿರಲಿ ಎನ್ನುವುದನ್ನು ಬಿಟ್ಟು ಮತ್ತೇನು ಮಾಡಲು ಸಾಧ್ಯ ನನ್ನಿಂದ..?

ಬಹುಶಃ ನಾನಂದು ನಿನಗೆ ಧೈರ್ಯ ತುಂಬಲು ಹೋಗಿ, ನನ್ನ ಜೀವನದ ಬಹು ದೊಡ್ಡ ಸತ್ಯವನ್ನು ಅರಿತೆ.ನಿನ್ನ ಬದುಕಿನ ಉತ್ತರಕ್ಕೆ ಪ್ರತ್ಯುತ್ತರ ನನ್ನ ಬದುಕಿನ ಪ್ರಶ್ನೆ...ಆದರೆ ನಿನ್ನ ಬಾಳಿಗೆ ತೋರಿದ ಬೆಳಕು ಎಂದು ಆರದಿರಲಿ ಎಂದೇ ಆರೈಸುವೆ.

ಸುಂದರ ಮನಸ್ಸಿನ,ಶ್ಯಾಮಲ ವರ್ಣದ, ಮೃದು ಹೃದಯಿ, ನಿನ್ನನ್ನು ಅರಿತುಕೊಂಡು ಬಾಳುವ ಹುಡುಗ ನಿನಗೆ ಸಿಕ್ಕಿದ್ದಾನೆ. ಬಹುಶಃ ಎಲ್ಲರಿಗಿಂತ ಹೆಚ್ಚು ಖುಷಿ ಪಡುವವಳು ನಾನೇ, ನಿನ್ನ ದಾಂಪತ್ಯ ಜೀವನ ಸುಖವಾಗಿರಲಿ ಎಂದು ಹಾರೈಸುವ

-ನಿನ್ನ ಹಿತೈಷಿ

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 22, 2019

ಮಗಳ ಮನೋಲಹರಿ

ಮಗಳು ಹುಟ್ಟಿದರೆ ಜವಾಬ್ದಾರಿ ಹೆಚ್ಚಿತು ಎಂದುಕೊಳ್ಳುವವರೇ ಹೆಚ್ಚು. ಇಂದಿನ ದಿನಗಳಲ್ಲಿ ಇದು ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ಸಂಪೂರ್ಣವಾಗಿ ನಿಂತಿಲ್ಲ.

ಪೋಷಕರಲ್ಲಿ ಮಗಳ ಮೇಲಿನ ಕಾಳಜಿ ಸ್ವಲ್ಪ ಹೆಚ್ಚು, ಪ್ರೀತಿ ಕೂಡಾ ಹಾಗೆಯೇ ಆತಂಕ ಸಹಾ ಕೊಂಚ ಹೆಚ್ಚೇ.. ಆದರೆ ಅದೆಲ್ಲದಕ್ಕೂ ಕಾರಣ ಇದೆ ಎಂದು ತಿಳಿಯುವುದಕ್ಕೆ ಸ್ವಲ್ಪ ಜಾಸ್ತಿಯೇ ಸಮಯ ಬೇಕಾಗುತ್ತದೆ.

ಯಾಕಿಷ್ಟು ಬೇಗ ಬೆಳೆದು ದೊಡ್ಡವರಾಗುತ್ತೇವೆ ಅಂತಾ ಗೊತ್ತಿಲ್ಲ. ಕಾಲ ಸ್ವಲ್ಪ ನಿಧಾನವಾಗಿ ಸರಿಯಬಾರದಿತ್ತಾ ಅಂತಾ ಅನ್ನಿಸುತ್ತಾ ಇರುವುದೂ ಸುಳ್ಳಲ್ಲ. ಜವಾಬ್ದಾರಿಯನ್ನು ಹೊರುವುದಕ್ಕೆ ಹೆದರುವುದಿಲ್ಲ, ಹೊರ ಜಗತ್ತಿನಲ್ಲಿ ಧೈರ್ಯವಾಗಿರುವುದಕ್ಕೆ ಕಲಿತಿದ್ದೇವೆ. ನೂರಾರು ಹಸಿದ ಕಣ್ಣುಗಳಿಗೆ ಆಹಾರವಾದರೂ ಅದನ್ನು ನಿರ್ಲಕ್ಷಿಸಿ ಬದುಕುವುದನ್ನು ಕಲಿತಿದ್ದೇವೆ. ಆದರೂ ಎಲ್ಲೋ ಒಂದು ಕಡೆ, ಒಂದರೆಕ್ಷಣ ಭಯವಾಗುವುದು ಸುಳ್ಳಲ್ಲ. ಯಾವುದೋ ಬಾಲಕಿಯ ಮೇಲೆ ಅತ್ಯಾಚಾರವಾದ ಸುದ್ದಿ ಕೇಳಿ, ಮತ್ತಾವುದೋ ಮನೆಮಗಳನ್ನು ವರದಕ್ಷಿಣೆ ಕಿರುಕುಳಕ್ಕಾಗಿ ಚಿತ್ರಹಿಂಸೆ ನೀಡಿ ಅರೆಜೀವ ಮಾಡಿರುವುದನ್ನು ಕೇಳಿ, ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದವಳ ಜೀವನ ಕಂಡು ಭಯವಾಗುತ್ತೆ. ಆವಾಗೆಲ್ಲಾ ಧೈರ್ಯ ತುಂಬುವುದು ಯಾವುದು ಗೊತ್ತಾ..?

ಅಮ್ಮನ ಮಡಿಲಲ್ಲಿ ಮಲಗಿದಾಗ ಸಿಗುವ ನಿಶ್ಚಿಂತೆ, ಅಪ್ಪ ಕೈ ಹಿಡಿದು ನಡೆಸುವಾಗ ಸಿಕ್ಕ ಕೈ ಬಿಸುಪಿನ ಬೆಚ್ಚನೆ ಸ್ಪರ್ಶ, ಅಜ್ಜ-ಅಜ್ಜಿಯ ಪ್ರೀತಿ, ಚಿಕ್ಕಮ್ಮ-ದೊಡ್ಡಮ್ಮಂದಿರ ಕಾಳಜಿ, ಅಣ್ಣನ ಕಣ್ಗಾವಲು ಇವೆಲ್ಲಾ ಎಷ್ಟು ಆಪ್ತ ಎನ್ನಿಸಿಬಿಡುತ್ತದೆ ಗೊತ್ತಾ..? ಚಿಕ್ಕ-ಚಿಕ್ಕ ನಡೆಗಳು, ಸಂಬಂಧಗಳ ಆಪ್ತ ಬಂಧಗಳು ಎಷ್ಟೆಲ್ಲಾ ಧೈರ್ಯ ತುಂಬುತ್ತವೆ ಅಂದರೆ ಜಗತ್ತಿನಲ್ಲಿಯೇ ನಾನು ಅತ್ಯಂತ ಸುರಕ್ಷಿತಳು ಎನ್ನುವ ಭಾವನೆ ಬಂದು ಬಿಡುತ್ತದೆ.

ಎಷ್ಟೆಲ್ಲಾ ಕಾಳಜಿ, ಪ್ರೀತಿಯ ನಡುವೆಯೂ ಮನೆಯವರಿಗೆ ಮಗಳು ಜವಾಬ್ದಾರಿ, ಹೊರೆ ಎನ್ನಿಸುತ್ತಾಳೆ ಅಲ್ವಾ..? ಹೊರೆ ಅಂತಲ್ಲದಿದ್ದರೂ ನಿಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳಲು ನೀವೆಲ್ಲಾ ಸಿದ್ದರಾಗುತ್ತಾ ಇರುತ್ತೀರ. ವಿದ್ಯಾಭ್ಯಾಸ ಮುಗಿಯುವುದೇ ತಡ, ಅವಳನ್ನು ಸಾಗ ಹಾಕುವ ಸಿದ್ದತೆ ಮಾಡಿಕೊಳ್ಳುತ್ತಾ ಇರುತ್ತೀರ. ಖಂಡಿತಾ ಇದು ತಪ್ಪಲ್ಲ. ಆದರೆ, ಮಗಳ ಮನಸ್ಸಿನಲ್ಲಿ ಏನಿರುತ್ತದೆ? ಎಂಬುದು ಅಲ್ಲಿ ಮುಖ್ಯವಾಗುವುದೇ ಇಲ್ಲ..

ವಿದ್ಯಾಭ್ಯಾಸ ಮುಗಿದ ಮೇಲೆ ಕೆಲಸ ಸಿಕ್ಕು ಕೆಲ ಕಾಲ ತನ್ನದೇ ಕುಟುಂಬದಲ್ಲಿ, ತನ್ನದೇ ಪ್ರಪಂಚದಲ್ಲಿ ನೆಮ್ಮದಿಯಾಗಿರಬೇಕು ಎನ್ನುವ ಆಸೆ ಇರುತ್ತದೆ. ಯಾಕೆಂದರೆ, ಮುಂದಿನ ದಿನಗಳ ಜವಾಬ್ದಾರಿ, ಒತ್ತಡ, ಸಂಬಂಧಗಳ ಪಾಲನೆ-ಪೋಷಣೆಯ ಅರಿವು ಅವಳಿಗಿರುತ್ತದೆ. ವಿಪರ್ಯಾಸವೆಂದರೆ, ಇದ್ಯಾವುದೂ ಅವಳಿಷ್ಟದಂತೆ ನಡೆಯುವುದೇ ಇಲ್ಲ. ಕಾಲಚಕ್ರದಲ್ಲಿ ವಿವಾಹ ಬಂಧನದಲ್ಲಿ ಸಿಲುಕಿ ಅವಳು ತನ್ನ ಹವ್ಯಾಸ, ಇಷ್ಟಾನಿಷ್ಟಗಳನ್ನು ಕಟ್ಟಿಟ್ಟು ಸಂಪೂರ್ಣ ಬದಲಾಗುತ್ತಾಳೆ. ತನ್ನದಲ್ಲದ ಪ್ರಪಂಚವನ್ನು ತನ್ನದು ಎಂಬಂತೆ ಭಾವಿಸಿ ಬದುಕುತ್ತಾ ತ್ರಿಶಂಕು ಸ್ವರ್ಗವನ್ನು ಸೃಷ್ಟಿ ಮಾಡಿಕೊಳ್ಳುತ್ತಾಳೆ. ತನ್ನ ಮಗಳಲ್ಲಿ ತನ್ನ ಆಸೆ-ಕನಸುಗಳನ್ನು ಬಿತ್ತುತ್ತಾ ತನ್ನನ್ನು ಅವಳಲ್ಲಿ ಕಾಣಬಯಸುತ್ತಾಳೆ. ಮಗಳು ಬೆಳೆಯುತ್ತಾ ಹೋದಂತೆ ಕಾಲಚಕ್ರ ಮತ್ತೆ ಪುನರಾವರ್ತನೆಯಾಗುತ್ತಿರುತ್ತದೆ.

ಇದೆಲ್ಲವನ್ನೂ ನೋಡಿದಾಗ ಮತ್ತೆ ಪುನಃ ಮಗುವಾಗಿ, ಎಲ್ಲರ ನೆಚ್ಚಿನ ಮನೆಮಗಳಾಗಿಯೇ ಇರುವ ಆಸೆ ಹುಟ್ಟುವುದಂತೂ ಸುಳ್ಳಲ್ಲ. ಇವತ್ತು ಮಗಳ ದಿನವಂತೆ.. ಯಾಕೋ ಇವಿಷ್ಟನ್ನೂ ಹೇಳಬೇಕೆನಿಸಿತು. ಮಗಳ ಮನೋಲಹರಿಯಲ್ಲಿ ಬಹಳಷ್ಟು ಲಹರಿಗಳಿದ್ದರೂ ತೆರೆದಿಡಲಾಗುತ್ತಿಲ್ಲ. ಅತಿ ಹೆಚ್ಚು ಭಾವುಕತೆ ಇದ್ದಾಗ ಪದಗಳಲ್ಲಿ ಹಿಡಿದಿಡುವುದು ಕಷ್ಟವಾಗುತ್ತದೆ. ಮಗಳಾಗಿ ನನಗೆ ನನ್ನ ಜವಾಬ್ದಾರಿಯ ಅರಿವಿದೆ ಎಂದು ತಿಳಿಸಬಯಸುತ್ತೇನೆ. ಅಪ್ಪ-ಅಮ್ಮನಿಗೆ, ಮನೆಗೆ ಒಳ್ಳೆಯ ಮಗಳಾಗಿಯೇ ಇರುವ ಆಸೆ, ಇರುತ್ತೇನೆ ಎಂಬ ಭರವಸೆ ಇಷ್ಟೇ ನನ್ನಿಂದ ಹೇಳಲಾಗುವುದು.

~ವಿಭಾ ವಿಶ್ವನಾಥ್

ಶುಕ್ರವಾರ, ಸೆಪ್ಟೆಂಬರ್ 20, 2019

ಯಾವ ಹೆಸರು ಈ ಭಾವಾನುಬಂಧಕೆ

ಇವತ್ತು ಮನೆಗೆ ಬಂದ ತಕ್ಷಣ 8 ವರ್ಷದ ಸರಳ ಓಡಿ ಬಂದು ಅಪ್ಪಿಕೊಂಡು "ಪಪ್ಪಾ, ನಾಳೆ ಭಾನುವಾರ ಅಲ್ವಾ? ಎಲ್ಲಾದ್ರೂ ಹೋಗೋಣ್ವಾ?" ಅಂತ ಕೇಳಿದಳು. ಅದಕ್ಕೆ "ಆಯ್ತು ಪುಟ್ಟಾ, ಅಮ್ಮ, ನಾನು, ನೀನು, ಅಜ್ಜಿ, ತಾತ ಎಲ್ಲಾ ಎಲ್ಲಾದ್ರೂ ಹೊರಗಡೆ ಹೋಗಿ ಸುತ್ತಾಡಿಕೊಂಡು ಬರೋಣ " ಎಂದು ಹೇಳುತ್ತಿರುವಷ್ಟರಲ್ಲೇ ರೂಪ ಬಂದು "ಹಾಂ! ಏನು ಹೇಳ್ತಾ ಇದ್ದೀರಾ? ಆಗ್ಲೇ ಇಷ್ಟು ಬೇಗ ಮರೆತು ಹೋದ್ರಾ?" ಅಂತಾ ಕೇಳಿದ್ಲು, ಅದಕ್ಕೆ "ಎಲ್ಲಿಗೆ ಹೋಗಬೇಕೇ?" ಅಂತಾ ಕೇಳಿದೆ. ಅದಕ್ಕೆ "ರವಿ ಅಂಕಲ್ ನ ನೋಡೋದಕ್ಕೆ ಹೋಗಬೇಕು ಅನ್ನೋದನ್ನ ಇಷ್ಟು ಬೇಗ ಮರೆತುಬಿಟ್ರಾ?" ಅಂದ್ಲು. "ಓ! ನನಗೆ ಇವಾಗ ನೆನಪಾಯ್ತು, ಸಾರಿ ಪುಟ್ಟಾ ಇನ್ನೊಂದು ದಿನ ಪಿಕ್ ನಿಕ್ ಗೆ ಹೋಗೋಣ ಅಂದೆ" ಅದಕ್ಕೆ ಅವಳು ಕೆನ್ನೆ ಊದಿಸಿಕೊಂಡು "ಪಪ್ಪಾ, ಯಾವಾಗ್ಲೂ ನೀನು ಹೀಗೇ, ಆದ್ರೆ ರವಿ ಅಂಕಲ್ ಅಂದ್ರೆ ಯಾರು? ನೀನು,ಅಮ್ಮ ಅವರನ್ನು ನೋಡೋಕೆ ಪ್ರತಿ ತಿಂಗಳು ಯಾಕೆ ಹೋಗಬೇಕು?" ಅಂದ್ಲು. ಅದಕ್ಕೆ ರೂಪ "ಅವರು ನಿನಗೆ ತಾತ ಆಗಬೇಕು ಪುಟ್ಟಾ" ಅಂತಂದ್ಲು.ಆದರೆ ಸರಳ ಅದನ್ನು ಒಪ್ಪದೆ "ನಮ್ಮ ತಾತ ನಮ್ಮನೆಯಲ್ಲೇ ಇದ್ದಾರೆ, ನೀವು ಸುಳ್ಳು ಹೇಳ್ತಾ ಇದ್ದೀರಾ. ನಾನು, ನನ್ನ ಪಿಕ್ ನಿಕ್ ಗಿಂತ ಬೇರೆ ಯಾರೋ ಹೆಚ್ಚಾದ್ರು ಅಲ್ವಾ?" ಎಂದವಳಿಗೆ ಎರಡು ಹೊಡೆದು ನಾನು ನನ್ನ ರೂಂ ಸೇರಿದೆ. ನನ್ನ ಮನಸ್ಸು ಹಿಂದಕ್ಕೋಡಿತು.

ನಾನು ನನ್ನ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿರುವಾಗ 'ಸಹನ' ನನ್ನ ಬಾಳಿನಲ್ಲಿ ಬಂದಿದ್ದಳು. ಬಿ.ಕಾಂ ಕೊನೆ ವರ್ಷದಲ್ಲಿದ್ದ ಸಹನ ಬೇರೆ ಯಾರೂ ಅಲ್ಲ, ಅಪ್ಪನ ಫ್ರೆಂಡ್ ರವಿ ಅಂಕಲ್ ಮಗಳೇ. ನಮ್ಮಿಬ್ಬರ ಕುಟುಂಬಗಳಲ್ಲಿ ತುಂಬಾ ಸಲುಗೆ ಇತ್ತು. ಅದೇ ಧೈರ್ಯದಿಂದ ನಾನು ಅವಳು ಪ್ರೀತಿಸುತ್ತಾ ಇದ್ವಿ. ನಮ್ಮ ಮನೆಗಳಲ್ಲಿ ಈ ವಿಷಯ ಗೊತ್ತಾದಾಗ ಅಮ್ಮ "ಅವಳು ನಿನಗೆ ಸರಿ ಹೊಂದುವುದಿಲ್ಲ ಆದರೆ ನಿನ್ನಿಷ್ಟಾನೇ ನನ್ನಿಷ್ಟ" ಅಂದಿದ್ರು.

ಅಪ್ಪ ಮತ್ತು ರವಿ ಅಂಕಲ್ ಬೇರೆಯವರಿಗೆ ತಿಳಿಯದಂತೆ ನನ್ನ ಮತ್ತು ಸಹನ ಮದುವೆ ನಿಶ್ಚಯ ಮಾಡಿಕೊಂಡಿದ್ದನ್ನು ನಾನು ಕದ್ದು ಕೇಳಿಸಿಕೊಂಡಿದ್ದೆ. ಇದೇ ಸಲುಗೆಯಿಂದ ಪರೀಕ್ಷೆಗಳನ್ನೂ ನಿರ್ಲಕ್ಷ್ಯ ಮಾಡಿ ಅವಳ ಹಿಂದೆ ಹಿಂದೆ ಸುತ್ತುತ್ತಾ ಇದ್ದೆ. ನನ್ನ ಕ್ಲೋಸ್ ಫ್ರೆಂಡ್ "ಅವಳು ಸರಿ ಇಲ್ಲ ಕಣೋ, ನಿನಗೆ ಸರಿ ಹೊಂದಲ್ಲ ಕಣೋ" ಅಂದಾಗಲೂ "ಒಬ್ಬಳು ಹುಡುಗಿ ಚಾರಿತ್ರ್ಯದ ಬಗ್ಗೆ ಮಾತಾಡೋ ನೀನು ಸರಿ ಇದ್ದೀಯಾ?" ಅಂತಾ ಜಗಳ ಮಾಡಿ ಅವನನ್ನೂ ದೂರ ಮಾಡಿಕೊಂಡಿದ್ದೆ.

ಪ್ರೀತಿಯಲ್ಲಿ ಬಿದ್ದಿದ್ದಾಗ ಎಲ್ಲರೂ ಹೇಳುವ ಬುದ್ದಿಮಾತು ಕಿವಿ ಮೇಲೆ ಬೀಳೋದಿಲ್ಲ ಅಂತಾ ಹೇಳುತ್ತಾರಲ್ಲ, ನನ್ನ ವಿಷಯದಲ್ಲೂ ಹಾಗೇ ಆಯ್ತು. ಮೊದಮೊದಲು ನನ್ನ ಜೊತೆ ಪ್ರೀತಿಯಿಂದಲೇ ನಡೆದುಕೊಳ್ಳುತ್ತಾ ಇದ್ದ ಸಹನ ಬರುಬರುತ್ತಾ ಅವಳ ಕಾಲೇಜಿನ 'ಮಯಾಂಕ್'ಗೆ ಜೊತೆಯಾದಳು. ಮೊದಮೊದಲಿಗೆ ನಾನೂ ಸಹಾ ಸಹಪಾಠಿಗಳಲ್ವಾ ಅಂತಾ ಉಪೇಕ್ಷೆ ಮಾಡಿದರೂ ನಂತರದ ದಿನಗಳಲ್ಲಿ ಅವಳನ್ನು ಪ್ರಶ್ನಿಸಲಾರಂಭಿಸಿದೆ. ಅದಕ್ಕೆ ಅವಳು "ಇಷ್ಟೊಂದು ಪೊಸೆಸ್ಸೀವ್ ಆದ್ರೆ ಹೇಗೆ? ಈಗಲೇ ಇಷ್ಟು ಅನುಮಾನ ಪಡುವವನು ಮುಂದೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೀಯಾ ಅಂತಾ ಹೇಗೆ ನಂಬಲಿ?" ಅಂತಾ ಕೇಳಿದ್ಲು. ಅವತ್ತು ನನಗೇ ನನ್ನ ಮೇಲೆ ಬೇಜಾರಾಗಿ "ಸಾರಿ ಕಣೇ, ಇನ್ನೊಂದು ಸಲ ಹೀಗಾಗಲ್ಲ" ಅಂತಾ ಅವಳನ್ನು ರಮಿಸಿ ಅವಳಿಷ್ಟದ ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿ ಜೇಬನ್ನೆಲ್ಲಾ ಖಾಲಿ ಮಾಡಿದೆ.

ಕಾಲೇಜ್ ನಲ್ಲಿ ಕ್ಯಾಂಪಸ್ ಸೆಲೆಕ್ಷನ್ ನಡೆಯುತ್ತಾ ಇಡ್ಡರೂ ಉಡಾಫೆ ಮಾಡಿಕೊಂಡು ನಾನು ಸಹನಾಳೊಟ್ಟಿಗೇ ತಿರುಗಾಡ್ತಾ ಇದ್ದೆ. ಅಲ್ಲದೇ ನನ್ನ ಇಂಜಿನಿಯರಿಂಗ್ ಮುಗಿಯಲು ಇನ್ನು ಕೆಲವೇ ದಿನಗಳು ಇದ್ದಾಗ ಸಹನ ಪದೇಪದೇ ಮುನಿಸಿಕೊಳ್ಳುವುದು, ರಗಳೆ ತೆಗೆಯುವುದು ನಡೆದೇ ಇತ್ತು. ಅಲ್ಲದೇ 'ಮಯಾಂಕ್'ನೊಟ್ಟಿಗೆ ಕಾಣಿಸಿಕೊಳ್ಳುವುದು ಎಂದಿಗಿಂತ ಜಾಸ್ತಿಯೇ ಆಗಿತ್ತು. ಇನ್ನು ತಡ ಮಾಡಬಾರದು ಅಂತಾ ತೀರ್ಮಾನ ಮಾಡಿದ ನಾನು ಅವತ್ತು ಸಂಜೆಯೇ ಅವಳ ಮನೆಗೆ ಹೊರಟೆ.

ಅವತ್ತು ರವಿ ಅಂಕಲ್ ಮನೆಯಲ್ಲಿ ಇರಲಿಲ್ಲ. ಸದಾ ನಗುಮುಖದಿಂದಲೇ ಸ್ವಾಗತಿಸುತ್ತಿದ್ದ ಸಹನಾಳ ಅಮ್ಮ ಕೂಡಾ ಯಾಕೋ ಅವತ್ತು ಬೇಕೋ ಬೇಡ್ವೋ ಅನ್ನೋ ತರಹ ಬಾಗಿಲು ತೆರೆದರು. ಎಲ್ಲಿ ನೋಡಿದರೂ ಸಹನಾಳ ಸುಳಿವೇ ಇರಲಿಲ್ಲ. "ಸಹನಾ ಇನ್ನೂ ಬಂದಿಲ್ವಾ" ಅಂತಾ ನಾನು ಅವರನ್ನು ಕೇಳಿದಾಗ "ಇಲ್ಲ" ಅಂತಾ ಚುಟುಕಾಗಿಯೇ ಉತ್ತರ ಕೊಟ್ರು. "ಕಾಲೇಜು 4 ಗಂಟೆಗೇ ಮುಗಿಯುತ್ತಲ್ವಾ? ಇನ್ನೂ ಅವಳು ಮನೆಗೆ ಬಂದಿಲ್ವಾ?" ಅಂತಾ ಹೇಳಬೇಕೆಂದುಕೊಂಡ ವಿಷಯಕ್ಕೆ ಪೀಠಿಕೆ ಹಾಕುತ್ತಾ ಇರುವಾಗಲೇ ಅವರು "ನನ್ನ ಮಗಳ ಬಗ್ಗೆ ನೀನ್ಯಾಕೆ ಅಷ್ಟು ತಲೆ ಕೆಡಿಸಿಕೊಳ್ಳುತ್ತೀಯಾ? ಅವಳು ಇಷ್ಟೊತ್ತಲ್ಲಿ ಎಲ್ಲಿದ್ದಾಳೆ ಅಂತಾ ನನಗೊತ್ತು. ಅವಳು ಮತ್ತು ಮಯಾಂಕ್ ನನಗೆ ಹೇಳಿಯೇ ಫಿಲ್ಮ್ ಗೆ ಹೋಗಿದ್ದಾರೆ. ಏನೀವಾಗ? ಇನ್ನಾದ್ರು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡು" ಎಂದರು. ಹಾಗಾದರೆ ಇವ್ರಿಗೆ ಮಯಾಂಕ್ ಬಗ್ಗೆ ಗೊತ್ತಿದೆಯಾ ಅಂತಾ ಆಶ್ಚರ್ಯ ಪಡುತ್ತಿರುವಾಗಲೇ "ಮಯಾಂಕ್ ನನ್ನ ಮಗಳನ್ನು ಮದುವೆ ಆಗುತ್ತಿರುವ ಹುಡುಗ, ಅಲ್ಲದೇ ಅವರು ತುಂಬಾ ಶ್ರೀಮಂತರು. ಅವರದ್ದೇ ಫ್ಯಾಕ್ಟರಿ ಇದೆ, ಮನೆ ತುಂಬಾ ಆಳು-ಕಾಳು. ಇರೋ ಒಬ್ಬಳು ಮಗಳನ್ನು ನಾನು ಅಂದ್ಕೊಂಡ ಹಾಗೆಯೇ ಒಳ್ಳೆ ಮನೆಗೇ ಕೊಡ್ತಾ ಇದ್ದೀನಿ. ನಿಮ್ಮ ರವಿ ಅಂಕಲ್ ಹಾಗೆ ಪ್ರಾಮಾಣಿಕತೆ ಅಂತಾ ಕೂತಿದ್ರೆ ಇದೆಲ್ಲಾ ಆಗ್ತಾ ಇರ್ಲಿಲ್ಲ. ಇನ್ಮುಂದೆ ಆದ್ರೂ ನಮ್ಮ ಜೀವನದಲ್ಲಿ ತಲೆ ಹಾಕುವುದನ್ನು ನಿಲ್ಲಿಸು" ಅಂದ್ರು. ಅವತ್ತು ಅಲ್ಲಿಂದ ಎದ್ದು ಬಂದು ಹೇಗೆ ಮನೆ ಸೇರಿದೆನೋ ದೇವರಿಗೇ ಗೊತ್ತು.

ಇದನ್ನೆಲ್ಲಾ ತಿಳಿದ ಅಮ್ಮ ರವಿ ಅಂಕಲ್ ಮತ್ತು ಅವರ ಮನೆಯವರಿಗೆ ಹಿಡಿಶಾಪ ಹಾಕಿದ್ರು. ಅಪ್ಪನದ್ದು ಮತ್ತದೇ ಸಹನೆ ಮತ್ತು ನಿರ್ಲಿಪ್ತತೆ. "ಆಗುವುದೆಲ್ಲಾ ಒಳ್ಳೆಯದಕ್ಕೇ" ಮತ್ತು "ರವಿ ಅಂತಹವನಲ್ಲ, ಎಲ್ಲೋ ಏನೋ ತಪ್ಪು ತಿಳುವಳಿಕೆ ಆಗಿರಬಹುದು, ದುಡುಕಿ ಯಾವುದೇ ನಿರ್ದಾರವನ್ನು ತೆಗೆದುಕೊಳ್ಳುವುದು ಬೇಡ" ಅಂತಂದ್ರು. ಅಷ್ಟರಲ್ಲಿ ನನ್ನ ಎಕ್ಸಾಂಗಳು ಕೂಡಾ ಮುಗಿದಿದ್ದವು. ಯಾವುದರಲ್ಲಿಯೂ ಚೆನ್ನಾಗಿ ಮಾಡಿರದ ನಾನು ಪಾಸಾಗುವುದರಲ್ಲಿ ನನಗೇ ನಂಬಿಕೆ ಇರಲಿಲ್ಲ.

ಇಷ್ಟೆಲ್ಲಾ ಆದ ಒಂದು ವಾರದ ನಂತರ ರವಿ ಅಂಕಲ್ ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಮನೆಗೆ ಬಂದು "ಇದೆಲ್ಲಾ ಆದದ್ದು ನನಗೆ ಗೊತ್ತಿರಲಿಲ್ಲ, ನಾನು ಹಳ್ಳಿಗೆ ಹೋಗಿ ಬರುವಷ್ಟರಲ್ಲಿ ಇಷ್ಟೆಲ್ಲಾ ಆಗಿಬಿಟ್ಟಿದೆ. ನಿನ್ನ ಕನಸಿನ ಸೌಧ ಕಟ್ಟಿದ್ದು, ಕುಸಿದದ್ದು ಎಲ್ಲದ್ದಕ್ಕೂ ನಾನೇ ಕಾರಣ. ಹಣದ ಹುಚ್ಚಿಗೆ ಬಲಿಯಾಗಿ ತನ್ನ ಹೆಂಡತಿ, ಮಗಳು ನಿನಗೆ ಅನ್ಯಾಯ ಮಾಡಿದ್ದಾರೆ. ಆ ಅನ್ಯಾಯವನ್ನು ಸರಿ ಮಾಡುವುದು ನನ್ನ ಜವಾಬ್ದಾರಿ. ಅದಕ್ಕಾಗಿ ನಾನು ಅವರ ಹತ್ತಿರ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದೇನೆ." ಅಂತಾ ಹೇಳಿದ್ರು.ಅದಕ್ಕೆ ಪ್ರತ್ಯುತ್ತರವಾಗಿ ಅಮ್ಮ "ನಿಮ್ಮ ನಾಟಕ ನಿಲ್ಲಿಸಿ, ಅಪ್ಪ ಒಂದು ತರಹ, ಮಗಳು ಒಂದು ತರಹ ನಾಟಕ ಮಾಡಿ ಇರುವ ಜೀವನಾನೂ ಹಾಳು ಮಾಡಬೇಡಿ, ಇಲ್ಲಿಂದ ಹೊರಡಿ" ಅಂತಾ ಅಬ್ಬರಿಸಿದ್ರು. ಮಗನನ್ನು ಆ ಸ್ಥಿತಿಯಲ್ಲಿ ನೋಡಿದ್ದ ಕರುಳಿನ ಸಂಕಟ ಅಂತಹದ್ದು. ಅದಕ್ಕೆ ರವಿ ಅಂಕಲ್ "ನನ್ನ ಪ್ರಾಮಾಣಿಕತೆಯಿಂದ ತಪ್ಪಿತಸ್ಥ ಅಲ್ಲದೇ ಇದ್ರೂ ಎಲ್ಲಾ ಕಡೆಯೂ ಮಾತು ಕೇಳ್ತಾ ಬಂದಿದ್ದೇನೆ. ಇದೇನೂ ನನಗೆ ಹೊಸದಲ್ಲ. ಆದರೆ ರಘು ಜೀವನಾ ಸರೀ ಹೋಗದೆ ನಾನು ಇಲ್ಲಿಂದ ಹೋಗೋದಿಲ್ಲ. ಆಮೇಲೆ ನೀವೇ ಕೇಳಿಕೊಂಡ್ರೂ ನಾನು ಇಲ್ಲಿ ಒಂದು ನಿಮಿಷವೂ ಇರೋದಿಲ್ಲ" ಅಂತಾ ಹೇಳಿದ್ರು. ಅದಕ್ಕೆ ಅಪ್ಪ "ನೀನು ಮಾಡದೆ ಇರೋ ತಪ್ಪನ್ನು ನೀನು ಯಾಕೆ ಸರಿ ಮಾಡುತ್ತೀಯಾ? " ಅಂದರೂ ಕೇಳದೆ ಇಲ್ಲೇ ಉಳಿದುಕೊಂಡರು.

ಅಂಕಲ್ ಸಹಾಯದಿಂದ ನಾನು ಹೊಸ ಜೀವನವನ್ನು ಕಟ್ಟಿಕೊಂಡೆ. ಆರು ತಿಂಗಳ ನಂತರ ನಾನು ಪುನಃ ಇಂಜಿನಿಯರಿಂಗ್ ಲಾಸ್ಟ್ ಸೆಮ್ ಎಕ್ಸಾಂ ಮತ್ತೆ ಬರೆದೆ. ಡಿಪ್ರೆಷನ್ ನಿಂದ ಹೊರಗೆ ಬಂದು ನನ್ನದೇ ಆದ ಹೊಸ ಜೀವನದತ್ತ ಹೆಜ್ಜೆ ಹಾಕುತ್ತಿದ್ದೆ. ಇವತ್ತು ನನಗೆ ಎಂ.ಎನ್.ಸಿ ಕಂಪೆನಿಯಲ್ಲಿ ಕೆಲಸ. ಒಳ್ಳೆಯ ಸಂಬಳ ಬರುತ್ತಾ ಇದೆ. ಬಾಳ ಸಂಗಾತಿಯ ವಿಷಯದಲ್ಲಿ ನಾನು ಮತ್ತೊಮ್ಮೆ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಇಷ್ಟ ಪಡದೆ ಇದ್ದುದರಿಂದ ರವಿ ಅಂಕಲ್ ತಾನೇ ನಿಂತು 'ರೂಪಾ'ಳನ್ನು ಆರಿಸಿದರು. ತಂದೆ-ತಾಯಿ ಇಲ್ಲದ ರೂಪಾಳನ್ನು ತಂದೆಯ ಸ್ಥಾನದಲ್ಲಿ ನಿಂತು ಅವರೇ ಮದುವೆ ಮಾಡಿಕೊಟ್ಟಿದ್ದರು. ನಂತರ ನಾವು ಎಷ್ಟೇ ಕೇಳಿಕೊಂಡರೂ ಇರದೆ, ಅವರಿಗಿದ್ದ ಆಸ್ತಿಯನ್ನು ನನ್ನ ಹೆಸರಿಗೆ ಬರೆದು, ತಮ್ಮ ಮನೆಗೂ ಹೋಗದೆ ತೀರ್ಥಯಾತ್ರೆಗೆ ಹೊರಟು ನಿಂತಿದ್ದರು. ಅಪ್ಪ-ಅಮ್ಮನ ಬೇಡಿಕೆಗೂ ಜಗ್ಗದೆ, ನನ್ನ ಮತ್ತು ರೂಪಾಳ ಕಣ್ಣೀರಿಗೂ ಕರಗದೆ ಅವತ್ತು ನೀಡಿದ ವಚನದಂತೆಯೇ ಹೊರಟು ನಿಂತಿದ್ದರು. ಬಹಳ ಬೇಡಿಕೊಂಡ ಮೇಲೆ ಒಂದು ಶರತ್ತಿನ ಮೇಲೆ ಅವರನ್ನು ಒಪ್ಪಿಸಲು ಸಫಲನಾದೆ.

'ರೂಪಾ'ಳನ್ನು ನಿಮ್ಮ ಮಗಳು ಅಂತಲೇ ಅಂದುಕೊಂಡು ಮದುವೆಯಾಗಿದ್ದೇನೆ. ನೀವು ನಮ್ಮನ್ನು ಬಿಟ್ಟು ಹೊರಟರೆ ನಾನು ಅವಳನ್ನು ಬಿಡುತ್ತೇನೆ ಎಂದಾಗ ಅವರು ಹೌಹಾರಿ ತಮ್ಮ ನಿರ್ಧಾರವನ್ನು ಕೊಂಚ ಸಡಿಲಿಸಿ, "ಸರಿ, ನಾನು ನನ್ನ ಹಳ್ಳಿಮನೆಯಲ್ಲಿ ಶಾಂತತೆಯಲ್ಲಿ ನನ್ನ ಕೊನೆಯ ದಿನಗಳನ್ನು ಕಳೆಯಬೇಕೆಂದಿದ್ದೇನೆ. ಆದುದರಿಂದ, ನಾನು ಅಲ್ಲಿಗೇ ಹೋಗುತ್ತಿದ್ದೇನೆ. ನೀವು ತಿಂಗಳಿಗೊಮ್ಮೆ ಮಾತ್ರ ಅಲ್ಲಿಗೆ ಬಂದು ನನ್ನನ್ನು ನೋಡಬಹುದು." ಎಂದರು.

ಆಗಿನಿಂದ ಈಗಿನವರೆಗೂ ಈ ರೂಡಿಯನ್ನು ತಪ್ಪಿಸಲಾಗಿಲ್ಲ. ಆದರೆ, ನನ್ನ ಅವರ ಸಂಬಂಧಕ್ಕೆ ಹೆಸರೇನು? ತಂದೆ-ಮಗನೇ? ಮಾವ-ಅಳಿಯನೇ ? ಗುರು-ಶಿಷ್ಯನೇ? ಇವೆಲ್ಲಕ್ಕೂ ಮೀರಿದ ಬಂಧ ನಮ್ಮದು.

ಏನೆಂದು ಹೆಸರಿಡಲಿ ನಮ್ಮ ಈ ಬಂಧಕೆ?
ಆತ್ಮೀಯ ಭಾವ ಬೆಸೆದ ನಮ್ಮ ಅನುಬಂಧಕೆ
ಜನುಮ ಜನುಮದ ಭಾವಾನುಬಂಧಕೆ..

ಅಷ್ಟರಲ್ಲಿ "ಸಾರಿ ಪಪ್ಪಾ, ಇನ್ಮೇಲೆ ಹೀಗೆಲ್ಲಾ ಕೇಳಿ ನಿನಗೆ ಸಿಟ್ಟು ಬರುವ ಹಾಗೆ ಮಾಡಲ್ಲ, ರವಿ ತಾತನ್ನ ನೋಡೋಕೆ ನಾನೂ ಬರ್ತೀನಿ" ಅಂದ್ಲು ಮುದ್ದು ಸರಳ.

ಅದೆಲ್ಲಾ ಸರಿ. ಪ್ರಶ್ನೆಯೊಂದು ಮನದಲ್ಲಿ ಉಳಿದೇ ಹೋಗಿತ್ತು. "ಯಾವ ಹೆಸರು ಈ ಭಾವಾನುಬಂಧಕೆ?"

 ~ವಿಭಾ ವಿಶ್ವನಾಥ್