ಭಾನುವಾರ, ಜುಲೈ 26, 2026

ಅರ್ಧ ಸತ್ಯ (ಪುಸ್ತಕ ಯಾನ - 475)


ಪುಸ್ತಕದ ಶೀರ್ಷಿಕೆ : ಅರ್ಧ ಸತ್ಯ

ಲೇಖಕರು : ಮಾಕೋನಹಳ್ಳಿ ವಿನಯ್ ಮಾಧವ್

ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್ 

ಪ್ರಥಮ ಮುದ್ರಣ : ನವೆಂಬರ್ 2021

ಪುಟಗಳು : 156

ಬೆಲೆ : 150 ರೂ. 


ಇಲ್ಲಿವೆ ಕ್ರೈಮ್ ರಿಪೋರ್ಟರ್ ಮಾಕೋನಹಳ್ಳಿ ವಿನಯ್ ಮಾಧವ್ ಅವರು ಬರೆದ ಆರು ಪ್ರಸಂಗಗಳು. ಆದರೆ, ಇದು ಸತ್ಯ ಘಟನೆಗಳು ಹಾಗೂ ಕಥೆಗಳು ಎರಡರ ಮಿಶ್ರಣದಂತೆ ಕಾಣಿಸುತ್ತದೆ. ಇವರ ಈ ಶೈಲಿ ನನಗೆ ಹೊಸದು ಹಾಗೂ ವಿಭಿನ್ನ ಓದಿನ ಅನುಭವ ಕೊಟ್ಟಿತು. 


ತಾನು ಮಾಡಿದ ಕ್ರೈಂ ರಿಪೋರ್ಟ್ ಗಳು ಹಾಗೂ ಸಂದರ್ಭ/ ಸುದ್ದಿಯ/ ವ್ಯಕ್ತಿಯ ವಿರುದ್ಧ ಪುಟಗಟ್ಟಲೆ ಬರೆದಿದ್ದವರೊಡನೆಯೇ ಪರೋಕ್ಷವಾಗಿ ಭಾಗಿಯಾಗಬೇಕಾದಾಗ... ತನಗೆ ಸುದ್ದಿ ಕೊಡುತ್ತಾರೆ ಎನ್ನುವ ಕಾರಣಕ್ಕೆ ಕೆಲವು ಅಧಿಕಾರಿಗಳನ್ನು ಒಳ್ಳೆಯವರಂತೆ ಬಿಂಬಿಸಿ ಕೊನೆಗೆ ಸತ್ಯ ತಿಳಿದಾಗ..? ನೊಂದವರಿಗೆ ಸಾಂತ್ವನ ಹೇಳಲು ಆಗದಿದ್ದಾಗ..? ಇಡೀ ವ್ಯವಸ್ಥೆಯಲ್ಲಿ ತಾನು ಹೀರೋ ಎಂದು ಕಾಣಿಸಿಕೊಳ್ಳುತ್ತಿರುವಾಗಲೇ ತಮಗೆ ಬೇಕಾದಂತಹ ಕಥೆಗಳನ್ನು ಬರೆಸಲು ಬಳಸಿಕೊಂಡ ಸಂದರ್ಭ ತಿಳಿದಾಗ..? 

"ಆಗ ಸಾಮಾನ್ಯ ಮನುಷ್ಯನಂತೆ ಯೋಚಿಸಲು ಆರಂಭಿಸುತ್ತೇನೆ" ಎನ್ನುತ್ತಾರೆ ಲೇಖಕರು. ಆದರೂ, ಪ್ರಪಂಚದ ಮಟ್ಟಿಗೆ ನಾನೊಬ್ಬ ಸೆಲೆಬ್ರಿಟಿ ಕ್ರೈಂ ರಿಪೋರ್ಟರ್... ಈ ಸಾಲು ಎಷ್ಟೆಲ್ಲ ದ್ವನಿಸುತ್ತದೆಯಲ್ಲವಾ..?


"ಇನ್ನುಳಿದಂತೆ ನನ್ನ ಮೂರ್ಖತನದ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ಅವೆಲ್ಲ ಬಹಳಷ್ಟು ಪಾಠ ಕಲಿಸಿದ ಗುರುಗಳು" ಎನ್ನುತ್ತಾರೆ. ಅರ್ಧಸತ್ಯ ಹಾಗೂ ಪ್ರಮೋಶನ್ ಪ್ರಸಂಗಗಳನ್ನು ಓದಿದಾಗ ನನಗೆ ಲೇಖಕರು ಹೀಗೆ ಯಾಕೆ ಉಲ್ಲೇಖಿಸಿದ್ದಾರೆ ಎಂಬುದು ಅರಿವಾಯಿತು.


ಪಾತ್ರಗಳು, ಕಥಾಹಂದರ ಕಾಲ್ಪನಿಕ ಎಂದು ಹೇಳಬಲ್ಲೆ. ಹೋಲಿಕೆ ಇದ್ದರೆ ಅದು ಕಾಕತಾಳೀಯ ಎಂದಿದ್ದಾರೆ.


ಈ ಆರು ಪ್ರಸಂಗಗಳ ಕುರಿತು ನೋಡುವುದಾದರೆ..


ಅರ್ಧ ಸತ್ಯ: ಗುರೂಜಿ ಹಾಗೂ ಸಿನಿಮಾ ಹೀರೋಯಿನ್ ಇಬ್ಬರ ಖಾಸಗಿ ವಿಡಿಯೋ ಸಿಕ್ಕು ಅದು ನ್ಯೂಸ್ ಚಾನೆಲ್ ಗಳನ್ನು ಆವರಿಸಿದ್ದಾಗಲೇ.. ಈ ಸಂಬಂಧದ ಸುದ್ದಿ ಇಷ್ಟಕ್ಕೆ ಮುಗಿಯದೆ ವಿಷಯ ಸೀರಿಯಸ್ ಆಗುತ್ತದೆ ಎಂದು ಗೊತ್ತಿದ್ದ ಇಂಗ್ಲಿಷ್ ನ್ಯೂಸ್ ಪೇಪರ್ ರಿಪೋರ್ಟರ್ ವಿಜಿತ್ ಆಶ್ರಮದ ಹತ್ತಿರ ಹೋಗುವುದರೊಳಗಾಗಿ ಅಲ್ಲಿ ಆಗಲೇ ನ್ಯೂಸ್ ಚಾನೆಲ್ ನವರು, ಪೊಲೀಸ್, ಒಂದಿಷ್ಟು ಜನರು ಸೇರಿದ್ದರು. ಆಶ್ರಮದ ಒಳಗುಟ್ಟುಗಳನ್ನು ಬಿಚ್ಚಿಡುತ್ತಲೇ.. ಈ ಸುದ್ದಿಯ ಮೂಲಗಳು ಹಲವಾರು ಕಡೆಗಳಿಂದ ತಿಳಿಯುತ್ತಾ ಸಾಗುತ್ತವೆ. ಎಕ್ಸ್ಕ್ಲೂಸಿವ್ ಸುದ್ದಿ, ತನ್ನಲ್ಲೇ ಮೊದಲು ಎಂಬ ಹಪಾಹಪಿಗೆ ಬಿದ್ದವರು ತಿಳಿದ ಸತ್ಯ ಎಷ್ಟಿತ್ತು..? 

ತಾನು ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಿದವರು ವಿಜಿತ್ ಗೆ ಗೊತ್ತಾಗದಂತೆ ನಿಭಾಯಿಸಿದ ರೀತಿ, ನಂತರ ತಿಳಿದ ಸತ್ಯ ಯಾವುದು..? ವ್ಯವಸ್ಥೆಯ ವ್ಯವಸ್ಥಿತ ಸಂಚಿನ ರಾಜಕೀಯ, ಆಧ್ಯಾತ್ಮದ ಮುಖವಾಡದ ಕೇಸ್ ಇಲ್ಲಿದೆ.


ಪ್ರಮೋಶನ್: ಎರಡನೇ ಶನಿವಾರ ಮತ್ತು ಭಾನುವಾರ ಕ್ರೈಂ ರಿಪೋರ್ಟರ್ ಗಳ ಸುದ್ದಿಯೇ ಮುಖ್ಯ ಜೀವಾಳವಾಗಿರುವ ಸಮಯದಲ್ಲಿ ಮನೀಶ್ ತೆಗೆದುಕೊಂಡು ಹೋದ ಸುದ್ದಿಯೇ ಮುಖ್ಯ ಸುದ್ದಿಯಾಗಿತ್ತು. ಅದು ಪ್ರಮೋಷನ್ ನ ವಿಚಾರ. ಆದರೆ, ಅರ್ಧ ಸತ್ಯ ಮಾತ್ರ ತಿಳಿದ ಮನೀಶ್ ಇಲ್ಲಿ ಅವಸರಿಸಿದನೇ..? ಸುದ್ದಿಲೋಕದಲ್ಲಿ ಟೆಕ್ನಿಕಲಿ ಪರ್ಫೆಕ್ಟ್ ಆಗಿರುವ ಸುದ್ದಿ ಬರೆದಿರುವಷ್ಟು ಸರಳವಾಗಿರುವುದಿಲ್ಲ. 

ರೌಡಿಯ ತಮ್ಮ ಪೊಲೀಸ್ ಆಗಬಾರದಾ..?

"ಎಲ್ಲರಿಗೂ ನ್ಯಾಯವಾಗಿ ಬದುಕೋಕೆ ಒಂದು ಚಾನ್ಸ್ ಕೊಡಬೇಕು. ಇಲ್ಲದೆ ಹೋದರೆ ನಾವು ಮನುಷ್ಯತ್ವದ ಬಗ್ಗೆ ಮಾತನಾಡಬಾರದು" ಎಂಬ ಸಾಲು ಅರ್ಥಪೂರ್ಣವೆನ್ನಿಸಿತು.


ಪರೀಕ್ಷೆ : ಇಂಜಿನಿಯರಿಂಗ್ನಲ್ಲಿ ಪ್ರತಿ ವರ್ಷ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗುತ್ತಿದ್ದ ಹುಡುಗ ಕೊನೆಯ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಎಲ್ಲದರಲ್ಲಿಯೂ ಸೊನ್ನೆ ಬಂದದ್ದು. ಹಾಗೆಂದು, ಅದು ಗೊತ್ತಿಲ್ಲದೆ ಆದ ಎಡವಟ್ಟಲ್ಲ. ವ್ಯವಸ್ಥಿತ ಸಂಚು. ಮಗನ ಕೇಸ್ ಏನಾಯಿತು ಎಂದು ತಿಳಿಯಲು ಅಲೆದಾಡುತ್ತಿದ್ದ ತಂದೆಯನ್ನು ನಾವಿಲ್ಲಿ ಕಾಣಬಹುದು.

ಕೇವಲ ನೊಂದವರಿಗೆ ಸಾಂತ್ವನ ಹೇಳಿದರೆ ಸಾಕೇ..?

ವ್ಯವಸ್ಥೆಯ ವಿರುದ್ಧ ಹೋಗಲಾಗದೆ ಸತ್ಯ ಗೊತ್ತಿದ್ದರೂ ಸುಮ್ಮನೆ ಇರಬೇಕಾದ ಪ್ರಸಂಗ. ಇಂತಹ ಪ್ರಸಂಗಗಳು ಎಷ್ಟು ಸರಿದು ಹೋಗಿರಬಹುದು..!


ಕನಿಷ್ಠ ಬಿಲ್ಲೆ : "ಮಗು ಹೆಣದ ಮೇಲೆ ನಿಂತು ಪ್ರಮೋಷನ್ ಅವಾರ್ಡ್ ತಗೊಳ್ಳೋದು ಯಾರಿಗೆ ಬೇಕು ಸರ್" ಎನ್ನುವ ಅವನ ಮಾತಂತೂ ಇಂದಿನ ಮಾಧ್ಯಮಗಳು ಕಲಿಯಬೇಕಾದದಡಮ್ಮಿ ಸ್ಪಷ್ಟವಾಗಿಸಿದೆ. ಇಲಾಖೆಯಲ್ಲಿ ಕನಿಷ್ಠ ಬಿಲ್ಲೆಯಾದರೂ ವ್ಯಕ್ತಿತ್ವದಿಂದ ಎತ್ತರಕ್ಕೇರಿದ ಮಾದೇಶ ಮಾಡಿದ ಸಾಹಸವೇನಿತ್ತು..? ಓದಿ ನೋಡಿ.


ಅತ್ಯಾಚಾರದ ಸುಳಿ : ಅತ್ಯಾಚಾರವಾದ ಹುಡುಗಿ ದೂರು ನೀಡಿದರೆ ವ್ಯವಸ್ಥೆಯೇ ಅವಳ ಪರ ನಿಲ್ಲುತ್ತದೆ ಅದರಲ್ಲಿಯೂ ದೆಹಲಿಯ ಅತ್ಯಾಚಾರದ ಪ್ರಸಂಗವಾದ ನಂತರದ ತೀರ್ಪು ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ. 

ಆದರೆ, ಇದನ್ನು ದುರುಪಯೋಗಪಡಿಸಿಕೊಂಡಾಗ..? 

ಅತ್ಯಾಚಾರ ಮಾಡಿಲ್ಲದಿದ್ದರೂ ಅದರ ಸುಳಿಯಲ್ಲಿ ಸಿಲುಕಿಕೊಂಡವನಿಗೆ ಸಿಕ್ಕ ತೀರ್ಪು ಏನಿತ್ತು ..? ಅಷ್ಟಕ್ಕೂ ಆತ ಈ ಸುಳಿಯೊಳಗೆ ಸಿಲುಕಿದ್ದು ಹೇಗೆ..? 


ನಕ್ಷತ್ರಗಳು : ಗೋವಾದ ಪ್ರಪಂಚ ಹಾಗೂ ಅಲ್ಲಿನ ರಾತ್ರಿಯ ಪ್ರಪಂಚ ಜೊತೆಗೆ ಅದರೊಳಗೆ ಸಿಲುಕಿಕೊಳ್ಳುವರ ಹಾಗೂ ಸಿಲುಕಿಸುವವರ ಜಾಲದ ನೋಟ ಇಲ್ಲಿದೆ.


ಇಲ್ಲಿನ ಪ್ರಸಂಗಗಳ ಕುರಿತು ಹೆಚ್ಚು ತೆರೆದಿಡಲಾಗದು. ಅಪರಾಧದ ಹಿಂದಿನ ನಗ್ನ ಸತ್ಯ ಓದುಗರಿಗೆ ಅರಿವಾಗುತ್ತದೆ. ಆಂತೆಯೇ ವ್ಯವಸ್ಥೆಯ ಒಳಗಿರುವವರಿಗೂ ಅದರ ಅರಿವಿರುತ್ತದೆ. ಆದರೆ, ಅದನ್ನು ತೆರೆದಿಡಲಾಗದ ಅಸಹಾಯಕತೆಯೂ ಇರುತ್ತದೆ. ಹಾಗಾಗಿ ಜಗತ್ತಿನ ಕಣ್ಣಿಗೆ ಅರ್ಧ ಸತ್ಯ ಮಾತ್ರ ಕಾಣುತ್ತದೆ.


ಈ ಪುಸ್ತಕ ಓದಿದ ನಂತರ ನನಗನಿಸಿದ್ದು


ಮಾಧ್ಯಮಗಳಲ್ಲಿ ಅದು ಪ್ರಿಂಟ್ ಮೀಡಿಯಾ ಆಗಿರಲಿ ಅಥವಾ ಟಿ.ವಿ ಮಾಧ್ಯಮವೇ ಆಗಿರಲಿ ಬರುವ ಸುದ್ದಿಗಳಲ್ಲಿ ಎಷ್ಟು ಸಂಪೂರ್ಣ ಸತ್ಯ..? 

ಯಾರೋ ಹರಡುವ ಅರ್ಧ ಸತ್ಯವನ್ನು ನಂಬಿಕೊಂಡು, ಒಬ್ಬ ವ್ಯಕ್ತಿಯ ಬದುಕನ್ನೇ ನಾಶಗೊಳಿಸುವ ಹುನ್ನಾರವೂ ಇರುತ್ತದಲ್ಲವಾ..?


ಒಂದೋ ಸತ್ಯ, ಇಲ್ಲವೇ ಸುಳ್ಳು.. ಎಂದು ನಂಬಿಕೊಂಡಿರುವವರಿಗೆ ಹೀಗೂ ಒಂದಿರುತ್ತದೆ ಎಂಬ ವಿಭಿನ್ನ ಲೋಕವನ್ನು ಅರಿವಾಗಿಸುವ ಪ್ರಸಂಗಗಳು ಇಲ್ಲಿವೆ.


ಯಾರೋ ಹರಡುವ ಜಾಲದಲ್ಲಿ ನಮಗೇ ಅರಿವಿರದಂತೆ ನಾವು ಸಿಲುಕಿಕೊಂಡಾಗ ಅದರಿಂದ ಹೊರಬರುವ ಮಾರ್ಗವನ್ನಷ್ಟೇ ಕಾಣುತ್ತೇವೆ. ಅಂತಹ ಎಷ್ಟು ಜೀವಗಳು ಅಲ್ಲಿರುತ್ತವಲ್ಲವಾ..? 

ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರೂ.. ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವ ಧ್ಯೇಯ ವಾಕ್ಯ ಎಷ್ಟು ಸಂದರ್ಭಗಳಲ್ಲಿ ಹೊಂದುತ್ತದೆ..?


ಕ್ರೈಂ ರಿಪೋರ್ಟಿಂಗ್ ಮಾಡುವವರು ಎಲ್ಲವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲಾಗದು. ಅಂತೆಯೇ ನಿರ್ಲಿಪ್ತವಾಗಿಯೂ ತೆಗೆದುಕೊಳ್ಳಲಾಗದಲ್ಲ.


ಒಬ್ಬ ವ್ಯಕ್ತಿಯ ನಂಬಿಕೆಯನ್ನು ಆತನ ಚಾಣಾಕ್ಷತೆಯನ್ನು ತಮಗೆ ಬೇಕಾದಂತೆ ತಿರುಗಿಸಿಕೊಳ್ಳುವಷ್ಟು ಚಾಕಚಕ್ಯತೆ ಹೊಂದಿದವರು ಇರುವಾಗ ನೈಜ ಸುದ್ದಿಗಳು ಅರ್ಧ ಸತ್ಯವಾಗಿ ತಲುಪಿದರೆ..?


ಬಹುಶಃ ಸುಳ್ಳಾದರೂ ಒಂದು ದಿನ ಸಾಬೀತಾಗಬಹುದು. ಆದರೆ, ಅರ್ಧ ಸತ್ಯ ಬಹಳಷ್ಟು ಅಪಾಯಕಾರಿ. ಸತ್ಯ ಗೊತ್ತಿರುತ್ತದೆ. ಆದರೆ, ನಿರೂಪಿಸಲು ಸಾಧ್ಯವಾಗದವರಿಗೆ ತಲುಪಿರುತ್ತದೆ. ಪ್ರಯೋಜನವಾಗದಂತೆ...

ವಿಪರ್ಯಾಸವೆಂದರೆ ಇದೇ ಅಲ್ಲವೇ..?


ಇಲ್ಲಿ ಪ್ರತಿಯೊಂದು ಘಟನೆಗಳಿಗೂ ಪ್ರವೇಶಿಕೆ ಅಥವಾ ಇಂಟ್ರೋ ಇಲ್ಲ . ಬದಲಾಗಿ ಸಂಭಾಷಣೆಗಳೇ ಎಲ್ಲವನ್ನು ಬಿಚ್ಚಿಡುತ್ತವೆ. ಮೊದಲಾರ್ಧ ಅಥವಾ ಒಂದು ಪುಟವನ್ನು ನಾವು ಅರ್ಥೈಸಿಕೊಂಡರೆ, ಹೊಂದಿಕೊಂಡರೆ ವಿಭಿನ್ನವಾದ ಓದು ನಮ್ಮದಾಗುತ್ತದೆ. ಸಂಭಾಷಣೆಗಳು ತೀರಾ ನಯ- ನಾಜೂಕಿನಿಂದೇನೂ ಸಾಗುವುದಿಲ್ಲವಾದರೂ.. ಅಶ್ಲೀಲ್ಲತೆಯೂ ಇಲ್ಲಿಲ್ಲ. ಕ್ರೈಂ ಹಾಗೂ ರಿಪೋರ್ಟಿಂಗ್ ಲೋಕದ ಸಂಭಾಷಣೆಗಳು ಕಾಣಸಿಗುತ್ತವೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ