ಪುಸ್ತಕದ ಶೀರ್ಷಿಕೆ : ಬದುಕ ಭಿತ್ತಿಯ ಚಿತ್ರಗಳು
ಲೇಖಕರು : ಶೈಲಜಾ ಸುರೇಶ್
ಪ್ರಕಾಶಕರು : ಗೀತಾಂಜಲಿ ಪಬ್ಲಿಕೇಶನ್ಸ್
ಪ್ರಥಮ ಮುದ್ರಣ : 2019
ಪುಟಗಳು : 148
ಬೆಲೆ : 150 ರೂ.
ಈ ಕಥಾ ಸಂಕಲನದಲ್ಲಿ 2 ಪುರಾಣದ ಕಥೆಗಳು, ಸಾಮಾಜಿಕ ಕಥೆಗಳು ಒಂದು ವೈಜ್ಞಾನಿಕ ಕಥೆ ಹೀಗೆ ಎಲ್ಲವನ್ನೂ ಸುಂದರವಾಗಿ ಸಣ್ಣ ಕಥೆಗಳ ಚೌಕಟ್ಟಿನಲ್ಲಿ ಹೆಣೆಯಲಾಗಿದೆ. ಸ್ಪರ್ಧಾ ವಿಜೇತ ಹಾಗೂ ವಿವಿಧ ಮಾಸಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳನ್ನು ನಾವಿಲ್ಲಿ ಓದಬಹುದು. ಈ ಕಥಾ ಸಂಕಲನದಲ್ಲಿ 14 ವೈವಿಧ್ಯಮಯ ಕಥೆಗಳಿವೆ.
ಮೌಲ್ಯ : ಹಣಕ್ಕೆ ಸರ್ಕಾರದವರು ಕಾಗದದಲ್ಲಿ ಮುದ್ರಿಸಿದ ಬೆಲೆ ಮೌಲ್ಯವಾಗುತ್ತದೆ. ಇಲ್ಲವಾದಲ್ಲಿ ಅದು ಬರಿಯ ಕಾಗದವಾಗುತ್ತದೆ. ಮನುಷ್ಯನ ಜೀವನವೂ ಅಂತೆಯೇ .. ಉಸಿರು ನಿಂತ ನಂತರ ಆ ಶರೀರ ಹೆಣ ಎನಿಸಿಕೊಳ್ಳುತ್ತದೆ. ಇಂತಹ ಆಲೋಚನೆ ಹುಟ್ಟಿಸಿದ ಈ ಕಥೆಯಲ್ಲಿ ಅಪ್ಪನ ಆಪರೇಷನ್ ಗೆ ಎಂದು ಹಣ ಹೊಂದಿಸಿದ ಮಗ ಹಾಗೂ ಪತ್ನಿ, ಇನ್ಸುರೆನ್ಸ್ ಕ್ಲೈಮ್ ಗಾಗಿ ಕಾಯುತ್ತಿರುವ ಸಂದರ್ಭದಲ್ಲಿಯೇ ನೋಟಿನ ಅಮಾನ್ಯತೆ ಹಾಗೂ ಅದಲು-ಬದಲಿನ ಕಾರ್ಯ ನಡೆಯುತ್ತಿರುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸಿದ್ದು ಹೇಗೆ..? ಮನುಷ್ಯ ಹಾಗೂ ಹಣ ಎರಡರ ಮೌಲ್ಯವೂ ಇಲ್ಲಿದೆ.ಇದು ಕರ್ನಾಟಕ ಲೇಖಕಿಯರ ಸಂಘದ 2017ರ ನಿರೂಪಮಾ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತ.
ಬದುಕ ಭಿತ್ತಿಯ ಚಿತ್ರಗಳು : ಲಾಯರ್ ಊರ್ಮಿಳಾ ಕುಲಕರ್ಣಿಯವರ ಬಳಿ ಬಂದ ಕರುಣಾ ಹಾಗೂ ವನಿತಾ ಇಬ್ಬರ ಮಾತುಕತೆಯ ಅವರಿಬ್ಬರ ಸಾಂಸಾರಿಕ ಬದುಕನ್ನು ಬಿಚ್ಚಿಡುತ್ತದೆ. ಕೆರಿಯರ್ ಮುಖ್ಯವಾಗಿ ಎರಡು ವರ್ಷದ ಮಗುವನ್ನು ಬಿಟ್ಟು ವಿದೇಶಕ್ಕೆ ಹಾರಿದ ತಾಯಿ ಮತ್ತೊಂದು ಬದುಕು ಕಟ್ಟಿಕೊಂಡು.. ಈಗ ಮಗಳಿಗಾಗಿ ಹಂಬಲಿಸುತ್ತಾ ಇದ್ದ ವನಿತಾ ಕೇಸು ಗೆದ್ದಳೆ? ಅವಳ ಬದುಕಿನ ಘಟನೆ ಕರುಣಾಳಲ್ಲಿ ಮೂಡಿಸಿದ ಭಾವವೇನು..? ಈ ಕಥೆ ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ.
ಶಿಕ್ಷೆ : 19ರ ಪ್ರಾಯದ ಎಳೆಯ ತರುಣಿಯ ಮೇಲೆ ದಾರುಣವಾಗಿ ಅತ್ಯಾಚಾರವಾಗಿತ್ತು. ಆದರೆ ಅಸಹಾಯಕ ಸ್ಥಿತಿಯಲ್ಲಿದ್ದ ಎಸ್.ಐಗೆ ಅವರು ಯಾರೆಂದು ತಿಳಿದಿದ್ದರೂ ಶಿಕ್ಷೆ ಕೊಡಿಸುವ ಭರವಸೆ ಇರಲಿಲ್ಲ. ಪ್ರಭಾವಿಗಳಾಗಿದ್ದವರ ಮಗನೇ ಸ್ವತಃ ತಪ್ಪೊಪ್ಪಿಗೆ ಪಡೆಯುವಂತೆ ಮಾಡಿದ ಡಾಕ್ಟರ್ ಸಮರ್ಥ ಅವರ ಸಮರ್ಥತೆ ಇಲ್ಲಿ ಕಾಣುತ್ತದೆ. ಅವರು ಹಾಗೆ ಮಾಡಿದ್ದಾದರೂ ಹೇಗೆ..? ಓದಿ ನೋಡಿ. ಮಂಗಳದಲ್ಲಿ ಪ್ರಕಟಿತ ಕಥೆ ಇದು.
ತೀರ್ಪು : ಬದುಕ ಭಿತ್ತಿಯ ಚಿತ್ರ ಕತೆಯ ಛಾಯೆ ಇಲ್ಲಿ ಕಾಣುತ್ತದಾದರೂ.. ಇಲ್ಲಿ ಮಗಳು ತಾಯಿ ಎದುರಾಗುತ್ತಾರೆ. ಮಗಳ ಭಾವಗಳು ತಾಯಿಗೆ ತಿಳಿಯುತ್ತದಾದರೂ.. ತಾಯಿಯ ಭಾವಗಳು ಮಗಳಿಗೆ ದಕ್ಕುವುದಿಲ್ಲ. ಕೋರ್ಟಿನಲ್ಲಿ ಬಂದ ತೀರ್ಪು, ತಾಯಿ ನೀಡುವ ತೀರ್ಪು ಎರಡರಲ್ಲಿ ಯಾವುದು ಸರಿ ನೀವೇ ನಿರ್ಧರಿಸಿ. ಮಯೂರದಲ್ಲಿ ಪ್ರಕಟಿತ ಕಥೆ.
ಜಾನಕಿ : ಇದು ರಾಮಾಯಣದ ಕಥೆಯೇ.. ಲಕ್ಷ್ಮಣ ಜಾನಕಿಯನ್ನು ದಟ್ಟಡವಿಯಲ್ಲಿ ಬಿಡಲು ಬಂದಾಗ ಅವರಿಬ್ಬರ ನಡುವಿನ ಮಾತುಕತೆ ಜಾನಕಿ ತಾನೇ ಮುಂದಾಗಿ ಋಷ್ಯಾಶ್ರಮದಲ್ಲಿ ಅಪರಿಚಿತ, ಪರಿತ್ಯಕ್ತೆಯಾಗಿರಲು ನಿರ್ಧರಿಸಿದ ಕುರಿತು ಹೇಳುತ್ತಾಳೆ. ಕೊಂಚ ವಿಭಿನ್ನ ನಿರೂಪಣೆಯಿಂದ ಕಾಡುವ ಕಥೆ. ಜಾನಕಿ ಹಾಗೆ ನಿರ್ಧರಿಸಿದ್ದಾದರೂ ಏಕೆ..?
ಮಾಧವಿ : ಅನುಪಮಾ ನಿರಂಜನ ಅವರ ಮಾಧವಿಗಿಂತಲೂ ಕೊಂಚ ವಿಭಿನ್ನವಾದ ಮಾಧವಿ ಇಲ್ಲಿ ಕಾಣಿಸುತ್ತಾಳೆ. ಗಾಲವನ ಮೇಲೆ ಪ್ರೇಮ ಹೊಂದಿದ ಮಾಧವಿ ಆತನಿಗಾಗಿ ಕಾಯುತ್ತಾ ಇದ್ದಾಗ ಕೊನೆಗೂಮತ್ತೆ ಬರುತ್ತಾನೆ ಗಾಲವ. ಅರಮನೆಯ ಅಂತಃಪುರಗಳ ಬಂಗಾರದ ಪಂಜರದಿಂದ ಬಿಡಿಸಿಕೊಂಡು ಹೋದ ಅವನು ತನ್ನನ್ನು ಗುರುದಕ್ಷಿಣೆ ನೀಡಲು ಬಳಸಿಕೊಂಡರೂ ಆತನ ಮೇಲೆ ಬದಲಾಗದ ನಿರ್ಮಲ ಪ್ರೀತಿ, ಆತ ನಿರಾಕರಿಸಿದ ಮಾಧವಿ ಏನಾಗುತ್ತಾಳೆ..? ಕನ್ಯಾವಲ್ಲರಿ ಆಕೆಯ ಪಾಲಿಗೆ ಶಾಪವಾದ ಕಥೆ ಇಲ್ಲಿದೆ. ಮಯೂರದಲ್ಲಿ ಪ್ರಕಟಿತ ಕಥೆ ಇದು.
ವಿಪರ್ಯಾಸ : ನರರೂಪ ರಾಕ್ಷಸನಂತಹ ಗಂಡನ ಜೊತೆ ಅಷ್ಟು ದಿನವೂ ಬದುಕಿದ ಅವಳ ಮಗ ಅದರ ವಿರುದ್ಧವಾಗಿ ಬೆಳೆಯುತ್ತಾನೆ. ಇನ್ನೇನು ಅವಳ ಎಲ್ಲಾ ಕಷ್ಟಗಳಿಗೆ ಮುಕ್ತಿ ಎಂದುಕೊಂಡು ಮಗನ ಜೊತೆ ಆತನ ಪುಟ್ಟ ಗೂಡಿಗೆ ಹೊರಡುವ ಸಂದರ್ಭದಲ್ಲಿ ಬಂದ ಕರೆಯೊಂದು ತನ್ನದಲ್ಲದ ಮತ್ತೊಂದು ನಿರ್ಧಾರಕ್ಕೆ ಕಾರಣವಾಯಿತೇ..? ತುಷಾರದಲ್ಲಿ ಪ್ರಕಟಿತ ಕಥೆ ಇದು.
ಆಂಟೀ : ಅಮ್ಮನ ತಂಗಿಯಾಗಿದ್ದ ಆಂಟಿಯನ್ನು ವಿನಾಯಕ ಹಾಗೂ ಜಯ ಪ್ರೀತಿಯಿಂದಲೇ ಸ್ವಾಗತಿಸುತ್ತಾರೆ. ಅಕ್ಕನ ಶ್ರಾದ್ಧ ಕಾರ್ಯವನ್ನು ಯಾವ ಅಡಚಣೆಯೂ ಇಲ್ಲದೆ ಮಾಡಬೇಕೆಂಬ ಅವಳ ಆಸೆ ಹಾಗೂ ಅಕ್ಕನ ಮೇಲಿನ ಅಪರಿಮಿತ ಪ್ರೀತಿಯ ಜೊತೆಗೆ ನಂಟಿನ ನೆನಪು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ. ಅವಳ ಏಕೈಕ ಮಗ ಪ್ರಹ್ಲಾದನಂತಾಗಬೇಕು ತನ್ನ ಮಗ ಎನ್ನುವ ಜಯಳ ಆಸೆಗೆ ಆಂಟಿ ಬೇಡವೆಂದಿದ್ದೇಕೆ..? "ಇವತ್ತಿನ ಸುಖವನ್ನು ಇವತ್ತಿನ ನೆಮ್ಮದಿಯನ್ನು ಅನುಭವಿಸು. ನಾಳೆ ಏನಾಗುತ್ತೋ ಯಾರಿಗೆ ಗೊತ್ತು" ಎನ್ನುತ್ತಲೇ ಅವರ ವರ್ತಮಾನವನ್ನು ತೆರೆದಿಡುವ ಕಥೆ ಇಲ್ಲಿದೆ.
ತಾಯಮ್ಮ : ಕೆಲಸಕ್ಕೆ ಬರುತ್ತಿದ್ದ ತಾಯವ್ವನ ಸ್ವಾಭಿಮಾನ, ನಿಷ್ಠೆ ಸಮಯ ಪಾಲನೆ, ಒಬ್ಬರ ಮನೆಯ ಕುರಿತು ಮತ್ತೊಬ್ಬರ ಮನೆಯಲ್ಲಿ ಮಾತಾಡಿ ಎಂದಿಗೂ ಹರಡದ ಗಾಳಿ ಸುದ್ದಿ ಹೀಗೆ ತಾಯವ್ವನ ಕುರಿತು ಮೆಚ್ಚುಗೆಯನ್ನು ಹೇಳುತ್ತಾ ಪರಿಚಯಿಸುತ್ತಲೇ.. ನಾಲ್ಕು ವರ್ಷದ ನಂತರ ತಾಯಿ ಕರೆದರೆಂದು ತನ್ನ ತವರಿಗೆ ಹೋಗಿ ಬರುವೆನೆಂದು ಹೊರಟವಳು ಒಂದೇ ದಿನಕ್ಕೆ ವಾಪಾಸ್ ಬಂದವಳ ಮಾತುಗಳನ್ನು ಕೇಳಿ ಅವಳೊಬ್ಬ ನಿರಕ್ಷರಕುಕ್ಷಿ ಅವಳಿಗೇನು ತಿಳಿಯುತ್ತೆ ಎಂದುಕೊಂಡಿದ್ದ ತಾತ್ಸಾರ ಕರಗಿದ ಕಥೆ ನಮ್ಮನ್ನೂ ಕರಗಿಸುತ್ತದೆ. ಈ ಕಥೆ ಮಯೂರದಲ್ಲಿ ಪ್ರಕಟಿತ.
ಬಿಸಿಲುಗುದುರೆ :ಬಿಸಿಲುಗುದುರೆಯ ಬೆಂಬತ್ತಿದ್ದ, ಅದರ ಮೇಲೆಯೇ ಆಕರ್ಷಕ ಸವಾರಿ ಮಾಡುತ್ತಿದ್ದ ಲಕ್ಷ್ಮಿ ದೇಸಾಯಿಯನ್ನು ಮತ್ತೆ ಸಂಸಾರಕ್ಕೆ ಎಳೆದು ತರಲು ಪ್ರಯತ್ನಿಸುತ್ತಿದ್ದ ಕಾಂತರಾಜ ದೇಸಾಯಿ ಮಾಡದ ಪ್ರಯತ್ನಗಳಿಲ್ಲ. ಪ್ರತಿಯೊಬ್ಬರಿಂದಲೂ ಕರೆ ಮಾಡಿಸಿ, ಆಕೆಯನ್ನು ಮತ್ತೆ ಕರೆತರಲು ಪ್ರಯತ್ನಿಸುತ್ತಿದ್ದರು. ಆದರೆ, ಅವರ ಬದುಕನ್ನು ಅವರೇ ಕಟ್ಟಿಕೊಳ್ಳುವ ಬೇರೆ ಪ್ರಯತ್ನ ಮಾಡುವ ಸಲಹೆ ಬಂದಿದ್ದೇಕೆ..? ಸ್ವಚ್ಛಂದವಾಗಿ ಹಾರುವ ಲಕ್ಷ್ಮಿಯ ಬದುಕು ಇಲ್ಲಿ ಎಷ್ಟು ಸೂಕ್ತ..? ಪಂಜರದ ಪಕ್ಷಿಯಾಗಲು ಒಪ್ಪದ ಲಕ್ಷ್ಮಿ ತನ್ನ ಬದುಕನ್ನು ತೆರೆದಿಟ್ಟಿದ್ದೇಗೆ..?
ಮನೆ : ತಾನು ಮನೆ ಕಟ್ಟಿಸಲು ಕಡಿಮೆ ಬಿದ್ದ ಹಣಕ್ಕಾಗಿ ತನ್ನ ತಂದೆ ಕಟ್ಟಿಸಿದ ಮನೆಯನ್ನು ಮಾರಲು ಸಿದ್ದನಾದ ಅಣ್ಣನಿಗೆ ತಂಗಿ ಮಾಡಿಸಿದ ಜ್ಞಾನೋದಯವೇನು..? ಅಣ್ಣ-ತಂಗಿಯರ ಬಾಂಧವ್ಯ ಹೀಗಿದ್ದರೆ ಎಷ್ಟು ಚಂದವಲ್ಲವೇ ಎನ್ನಿಸಿತು.
ಚಿಂಟೂ : ಇದು ವೈಜ್ಞಾನಿಕ ಕಥೆ. ಸುಕನ್ಯಾ ಮತ್ತು ಶಿವಾನಂದರ ಅನ್ಯೋನ್ಯ ದಾಂಪತ್ಯಕ್ಕೆ ಪುಟ್ಟಿ ಇದ್ದರೂ... ಅನಾಥನಾಗಿದ್ದ ಚಿಂಟುವೇ ತನ್ನ ಮಗನೆಂಬಷ್ಟು ಪ್ರೀತಿ ತೋರಿಸಿದಳು ಸುಕನ್ಯ. ಆದರೆ ಬದಲಾದ ಚಿಂಟುವಿನ ನಡೆ-ನುಡಿ, ಸಿಡಿಮಿಡಿಯನ್ನು ಎಷ್ಟು ಸಹನೆಯಿಂದ ತಿದ್ದಲು ಹೋದರೂ ಆಗುತ್ತಿರಲಿಲ್ಲ. ಪ್ರೊಫೆಸರ್ ಶಿವಾನಂದ್ ಹಾಗೂ ಚಿಂಟು ಇಬ್ಬರೂ ಸರಿ ರಾತ್ರಿಯಲ್ಲಿ ನಡೆಸುತ್ತಿದ್ದ ಮಾತುಕತೆಯನ್ನು, ಕೆಲಸವನ್ನು ತಿಳಿಯಲು ಹೊರಟವಳು ಸಿಕ್ಕಿಬಿದ್ದದ್ದೆಲ್ಲಿ.? ರಾಜಶೇಖರ ಭೂಸನೂರು ಮಠ ಅವರ ವೈಜ್ಞಾನಿಕ ಕಥಾ ಶಿಬಿರದಲ್ಲಿ ಬರೆದ ಕಥೆ ಇದು.
ನಿರಂತರ...!? : ಹೆಣ್ಣಿನ ಮೇಲೆ ಶೋಷಣೆ ನಿರಂತರವಾಗಿ ನಡೆಯುತ್ತಲೇ ಬರುತ್ತಿರುತ್ತದೆ. ಕೆಲವರು ಸಿಡಿದು ನಿಂತರೆ ಕೆಲವರು ಅದನ್ನು ಸಹಿಸಿಕೊಂಡು ಸಾಗುತ್ತಾರೆ. ತಿದ್ದುವ ಪ್ರಯತ್ನ ಮಾಡುವವರು ಕೆಲವರು. ಮೀರಾ ಇಲ್ಲಿ ಅಂತಹ ಗುಂಪಿಗೆ ಸೇರುತ್ತಾಳೆ. ಗಂಡು ಎಂದು ಆತ ಏನೇ ಮಾಡಿದರು ಸರಿ ಎಂದು ಪರವಹಿಸುತ್ತಿದ್ದ ಅತ್ತೆ ಹಾಗೂ ಸೋಮಾರಿಯಾಗಿ ಹೆಂಡತಿಯ ದುಡಿಮೆಯ ಜೊತೆಗೆ ಸರ್ವಾಧಿಕಾರ ತೋರುತ್ತಿದ್ದ ಮುಕುಂದನನ್ನು ಆಕೆ ಯಾವ ರೀತಿ ಸರಿ ದಾರಿಗೆ ತರುತ್ತಾಳೆ..? ಇದೆಲ್ಲದರ ಜೊತೆಗೆ ಹಲವಾರು ಹೆಣ್ಣುಮಕ್ಕಳ ವಿವಿಧ ಅನುಭವಗಳನ್ನು ಕಾಣಬಹುದಾಗಿದೆ.
ಸಾಕ್ಷಿಯಾದವರು... : ಸುಬ್ರಾಯರ ಕಾದಂಬರಿ ಓದಿ, ಬದಲಾಗಿ ಅವರ ಬಹುದೊಡ್ಡ ಅಭಿಮಾನಿಗಳಾಗಿದ್ದ ಮಂಗಳ ಹಾಗೂ ರಾಧಾರನ್ನು ಗೆಳತಿ ವಿಜಯ ಮನೆಯ ತನ್ನ ಮನೆಯ ಗೃಹಪ್ರವೇಶದಲ್ಲಿ ಅವರಿಗೆ ಪರಿಚಯಿಸಿದ್ದಳು. ಅವರ ನಿಜ ಜೀವನಕ್ಕೂ ಬರಹಕ್ಕೂ ಬಹಳಷ್ಟು ವ್ಯತ್ಯಾಸ ಕಂಡು ಬಂದಿತ್ತು, ಅದರ ಬದುಕಿನ ಕಥೆ ಸುಖಾಂತ್ಯವಾದದಕ್ಕೆ ಸಾಕ್ಷಿಯಾದವರ ನೋಟವನ್ನು ನಾವಿಲ್ಲಿ ಕಾಣಬಹುದು.
ಬದುಕ ಭಿತ್ತಿಯ ಚಿತ್ರ ಕಥಾ ಸಂಕಲನದಲ್ಲಿ ಹಲವಾರು ರೀತಿಯ ಬದುಕುಗಳು ಕಾಣಸಿಗುತ್ತವೆ. ಹೆಣ್ಣು ಮಕ್ಕಳ ಬದಲಾದ ದಿನಗಳು, ಬದಲಾದ ಆಲೋಚನೆ, ನಡೆಗಳು ಅವರ ದಿಟ್ಟ ನಿಲುವುಗಳನ್ನು ಇಲ್ಲಿ ಮುಖ್ಯವಾಗಿ ಗಮನಿಸಬಹುದು. ಹಾಗೆಂದು.. ಎಲ್ಲಾ ನಡೆಗಳನ್ನೂ ಸಮರ್ಥಿಸುವುದಿಲ್ಲ. ಹಲವಾರು ಬದುಕಿನ ಹಲವಾರು ಮಗ್ಗುಲುಗಳು ತೆರೆದುಕೊಂಡಿವೆ ಇಲ್ಲಿ.
~ ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ