ಗುರುವಾರ, ಜನವರಿ 23, 2020

ನಯನ ಮನೋಹರಿ


ಶಿಲ್ಪ ಸೊಬಗಿನ ಬೀಡಿನೊಳಗೂ
ತನ್ನ ಸೊಬಗನು ಚೆಲ್ಲುತಿರುವ
ನೀ ಧರೆಗಿಳಿದ ಅಪ್ಸರೆಯೋ?
ಜೀವ ತಳೆದು ನಿಂತ ಶಿಲ್ಪವೋ?

ದೀಪವನಿಡಿದ ದೀಪಧಾರಿಣಿ
ಚೆಲ್ಲುತಿರುವ ಬೆಳಕು ಇಮ್ಮಡಿಸಿ
ಪಸರಿಸುತಿದೆ ಅವಳಂದವನು
ಕತ್ತಲೂ ನಾಚಿ  ಓಡುವಂತೆ..

ಕಲ್ಯಾಣಿಯಲಿ ಪ್ರತಿಫಲಿಸಿರುವ
ಸೊಗಸುಗಾತಿಯ ಬಿಂಬ ಕಂಡು
ಅರಳಿರುವ ನೈದಿಲೆಯೂ ನಾಚಿ
ಸ್ವಾಗತಿಸುತಿದೆ ನನ್ನ ಸ್ಪರ್ಶಿಸೆಂದು

ಕಲ್ಲುಕಂಬಕೆ ಆತು ನಿಂತಿರುವ
ಪ್ರತಿ ಶಿಲ್ಪಕೂ ಕಣ್ಣುಕುಕ್ಕುತಲಿದೆ
ನೀ ಧರಿಸಿದ ಸ್ವರ್ಣಾಭರಣ
ಜೊತೆಗೆ ಪತ್ತಲದ ಚಿತ್ತಾರವೂ

ಶಿಲಾಬಾಲಿಕೆಯರೆಲ್ಲರ ಚೆಲುವಿಂದ
ಎರಕ ಹೊಯ್ದು ತಯಾರಾದಂತೆ
ಜೀವ ತಳೆದು ಕಣ್ಮನ ಸೆಳೆವ ನೀನು
ನಿಜಕ್ಕೂ ನಯನ ಮನೋಹರಿಯೇ..!

~ವಿಭಾ ವಿಶ್ವನಾಥ್

ಭಾನುವಾರ, ಜನವರಿ 19, 2020

ಜೋಡೆತ್ತಿನ ಸವಾರಿ















ಜೋಡೆತ್ತುಗಳು ಜೊತೆಯಾಗಿ
ಸವೆಸುತಿವೆ ಮುಂದಿನ ಮಾರ್ಗವ
ಗೊತ್ತು-ಗುರಿಯಿಲ್ಲದ ಪಯಣಕೆ
ಮಾರ್ಗದರ್ಶಿ ಮೇಲಿರುವಾತ

ಹಚ್ಚ-ಹಸುರಿನ ಪ್ರಕೃತಿ
ಸುತ್ತ-ಮುತ್ತಲ ಸೊಬಗ ಸವಿಯದೆ
ತನ್ನ ಪಾಡಿಗೆ ತಾವು ಎಂಬಂತೆ
ನಿರ್ಲಿಪ್ತರಂತೆ ಹೆಜ್ಜೆ ಹಾಕುತಿವೆ

ಚಾವಟಿಯೇಟಿಗೆ ಬೇಸರಿಸದೆ
ಮಣಭಾರವಿದ್ದರೂ ಕುಗ್ಗದೆ
ನಿನಗೆ-ನಾನು, ನನಗೆ-ನೀನೆಂದು
ಸಮಭಾವದಿ ಜೊತೆಗೇ ಸಾಗುತಿವೆ

ಜನರ ನೋಟದ ಅರಿವಿಲ್ಲದೇ
ನೀರೆಯರ ಹೊತ್ತ ಬಿಂಕವಿಲ್ಲದೆ
ಸಕಲವೂ ನಮ್ಮಿಂದಲೇ ಎನ್ನದೆ
ಬೀಗದೇ-ಬಾಗದೇ ಚಲಿಸುತಿವೆ

ಮಣ್ಣಿನ ಹಾದಿ-ಬೀದಿಯಲಿ
ಸವಾರನ ಕೊರಳ ನಾದಕೆ
ಕೊರಳ ಘಂಟೆಯ ಕಿಂಕಿಣಿಸುತ
ಹೆಜ್ಜೆ-ಗೆಜ್ಜೆಗಳ ಸವಾರಿ ಸಾಗುತಿದೆ

~ವಿಭಾ ವಿಶ್ವನಾಥ್

ಗುರುವಾರ, ಜನವರಿ 16, 2020

ಶಾಲಿನಿಯ ಆಹಾರ

ಶಾಲಿನಿ ತಟ್ಟೆಯಲ್ಲಿದ್ದ ತಿಂಡಿಯಲ್ಲಿ ಸ್ವಲ್ಪ ಭಾಗವನ್ನೂ ತಿನ್ನದೆ ಹಾಗೇ ಬಿಟ್ಟು ಶಾಲೆಗೆ ಹೊರಡುತ್ತಿರುವಾಗ ಅಪ್ಪ ಕೇಳಿದರು "ಶಾಲಿನಿ ತಿಂಡಿ ಯಾಕೆ ತಿಂದಿಲ್ಲ ನೀನು?", ಆಗ ಶಾಲಿನಿ "ಪಪ್ಪಾ ನನಗೆ ಆ ಪಲ್ಯ ಇಷ್ಟ ಇಲ್ಲ, ಜೊತೆಗೆ ಅಮ್ಮ ರಾಗಿ ರೊಟ್ಟಿ ಮಾಡಿದ್ದಾರೆ. ನನಗೆ ರಾಗಿ ರೊಟ್ಟಿನೂ ಇಷ್ಟ ಇಲ್ಲ, ಅದಕ್ಕೆ ನಾನು ತಿಂಡಿ ತಿಂದಿಲ್ಲ" ಎಂದು ಹೇಳಿದಳು. ಅಷ್ಟರಲ್ಲಿ ಅಜ್ಜಿ ಬಂದು "ಹೋಗ್ಲಿ ಬಿಡೋ, ಬೇರೆ ತಿಂಡಿ ಮಾಡಿಕೊಟ್ಟರೆ ಆಯ್ತು." ಅಂದು ಶಾಲಿನಿಯನ್ನು ಅಪ್ಪನ ಕೈಯಿಂದ ಬಚಾವ್ ಮಾಡಿದರು. 

"ಯಾವ ತಿಂಡಿ ಬೇಕು ನಿನಗೆ?" ಅಂತಾ ಅಜ್ಜಿ ಕೇಳಿದ್ದಕ್ಕೆ "ನನಗೆ ಮ್ಯಾಗಿ ಬೇಕು. ಮ್ಯಾಗಿ ಆದರೆ ಚೆನ್ನಾಗಿರುತ್ತೆ. ಕೈಯಲ್ಲಿ ತಿನ್ನೋ ಆಗಿಲ್ಲ ಜೊತೆಗೆ ಗಟ್ಟಿಯಾಗಿಯೂ ಇರಲ್ಲ" ಅಂತಾ ಹೇಳಿದಳು ಶಾಲಿನಿ. ಆಗಿನ ಅವಳ ಸಮಾಧಾನಕ್ಕೆ ಮ್ಯಾಗಿ ಮಾಡಿ ತಿನ್ನಿಸಿ ಕಳುಹಿಸಿದರು.

ಸಂಜೆ ಮನೆಗೆ ಬಂದ ಶಾಲಿನಿಯನ್ನು ಅಜ್ಜಿ ಕೇಳಿದರು. "ಈ ಭಾನುವಾರ ಊರಲ್ಲಿರೋ ಮಾವನ ಮನೆಗೆ ಹೋಗಿ ಬರೋಣ. ಬರ್ತೀಯಾ?" ಅಂತಾ ಕೇಳಿದರು. "ಆಯ್ತು ಅಜ್ಜಿ ಬರುತ್ತೇನೆ" ಎಂದು ಒಪ್ಪಿಕೊಂಡಳು ಶಾಲಿನಿ. 

ಅವತ್ತು ರಾತ್ರಿ ಊಟಕ್ಕೆ ಕೂತಾಗ ಶಾಲಿನಿಯದ್ದು ಮತ್ತೆ ರಗಳೆ. "ನಂಗೆ ಮುದ್ದೆ ಬೇಡ, ಬರೀ ಅನ್ನ ಸಾಕು" ಅಂತಾ. ಹಾಕಿಕೊಟ್ಟ ಅನ್ನದಲ್ಲೂ ಅರ್ಧ ಅನ್ನವನ್ನು ಹಾಗೇ ಬಿಟ್ಟು 'ರೂಬಿ'ಗೆ ಹಾಕಮ್ಮ, ನನಗೆ ಸಾಕು ಅಂತಾ ಹೇಳಿ ಊಟವನ್ನು ಅರ್ಧಕ್ಕೇ ಬಿಟ್ಟು ಎದ್ದು ಹೋದಳು. ಶಾಲಿನಿಯದ್ದು ದಿನವೂ ಇದೇ ಕಥೆ. ಊಟ, ತಿಂಡಿಯನ್ನು ಸರಿಯಾಗಿ ತಿನ್ನದೇ ಇರುವುದು. ರಾಗಿ ರೊಟ್ಟಿ, ರಾಗಿ ಮುದ್ದೆ ತಿನ್ನದೆ ಬರೀ ಜಂಕ್ ಫುಡ್ ಅನ್ನೇ ತಿನ್ನುವುದು. ಯಾರು ಎಷ್ಟೇ ಬುದ್ದಿಮಾತು ಹೇಳಿದರೂ ಅವಳು ಕೇಳುತ್ತಲೇ ಇರಲಿಲ್ಲ. ಚಿಕ್ಕ ಮಗು ಹಟ ಮಾಡಿತು ಅಂತಾ ಅವಳು ಕೇಳಿದ್ದನ್ನೆಲ್ಲಾ ಕೊಡಿಸುತ್ತಾ ಬಂದಿದ್ದಕ್ಕೆ ಇವತ್ತೂ ಸಹಾ ಅವಳು ಅದೇ ಅಭ್ಯಾಸವನ್ನು ಮುಂದುವರಿಸಿದ್ದಳು. ಅಪ್ಪ, ಅಮ್ಮ, ಅಜ್ಜಿ ಸೇರಿ ಇದನ್ನು ಹೇಗಾದರೂ ಸರಿ ಮಾಡಲೇಬೇಕು ಅಂತಾ ಉಪಾಯ ಮಾಡಿ ಶಾಲಿನಿಯನ್ನು ಊರಿಗೆ ಹೊರಡಿಸಿದ್ದರು.

ಭಾನುವಾರ ಅಜ್ಜಿ, ಮೊಮ್ಮಗಳು ಇಬ್ಬರೂ ಊರಿಗೆ ಹೊರಟರು. ಅವತ್ತು ಬೆಳಿಗ್ಗೆ ಬೇಗನೆ ಹೊರಟಿದ್ದರಿಂದ ಶಾಲಿನಿ ಬೆಳಿಗ್ಗೆ ಹಾಲನ್ನೂ ಸಹಾ ಕುಡಿದಿರಲಿಲ್ಲ. ಬೆಳಿಗ್ಗೆ ಬೇಗ ಎದ್ದಿದ್ದರಿಂದ ಅವಳಿಗೆ ಹೊಟ್ಟೆ ಬೇರೆ ಹಸಿಯುತ್ತಿತ್ತು. ಹಳ್ಳಿಯಲ್ಲಿನ ಅವಳ ಮಾವನ ಮನೆಗೆ ಬಂದಾಗ ತಿಂಡಿಯ ಸಮಯವಾಗಿತ್ತು. ಅತ್ತೆ ಬಿಸಿ ಬಿಸಿ ರಾಗಿರೊಟ್ಟಿ ಹಾಕುತ್ತಾ ಕೂತಿದ್ದರು. ಜೊತೆಗೆ ತರಕಾರಿ ಪಲ್ಯ. ಶಾಲಿನಿ ಎಂದಿನಂತೆ ಅಂದೂ ಕೂಡಾ ತಿಂಡಿ ಬೇಡವೆಂದು ಹಟ ಮಾಡುತ್ತಾ ಕುಳಿತಿದ್ದಳು . ಅದರೆ ಅವಳ ಹಟಕ್ಕೆ ಮಣಿದು ಜಂಕ್ ಫುಡ್ ಅಥವಾ ಫಾಸ್ಟ್ ಫುಡ್ ಕೊಡಲು ಅಲ್ಲಿ ಯಾರೂ ಇರಲಿಲ್ಲ. ಕೊನೆಗೆ ಹೊಟ್ಟೆ ಹಸಿವು ತಾಳಲು ಆಗದೆ ಅದನ್ನೇ ತಿಂದಳು. ಆಮೇಲೆ ಅಜ್ಜಿಯ ಜೊತೆಗೆ ಹೇಳಿದಳು "ನನಗೆ ಅವು ಇಷ್ಟಾನೇ ಆಗುತ್ತಿರಲಿಲ್ಲ, ಆದರೆ ಅವು ತುಂಬಾ ಚೆನ್ನಾಗಿವೆ. ಹೊಟ್ಟೆ ತುಂಬಾ ತಿಂದೆ" ಎಂದು ಹೇಳಿದಳು. ಅದಕ್ಕೆ ಅಜ್ಜಿ "ರಾಗಿಯಲ್ಲಿ ತುಂಬಾ ಶಕ್ತಿ ಇರುತ್ತದೆ, ರಾಗಿ ತಿಂದವನಿಗೆ ರೋಗ ಬರುವುದಿಲ್ಲ. ಅದನ್ನು ತಿಂದರೆ ನೀನು ಗಟ್ಟಿಯಾಗುತ್ತೀಯ. ಅಲ್ಲದೇ ತರಕಾರಿಗಳಲ್ಲಿ ವಿಟಮಿನ್, ಪ್ರೋಟೀನ್ ಎಲ್ಲವೂ ಇರುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಇರುತ್ತದೆ. ಹಣ್ಣುಗಳು, ಸೊಪ್ಪುಗಳು ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಮುಂದೆ ಇದನ್ನೆಲ್ಲಾ ತಿನ್ನಬೇಕು. ಜಂಕ್ ಫುಡ್ ಅನ್ನು ತಿನ್ನಬಾರದು. ಹೆಚ್ಚು ಚಾಕಲೇಟ್ ತಿಂದರೆ ಹಲ್ಲೆಲ್ಲಾ ಹುಳುಕಾಗುತ್ತದೆ. ಮ್ಯಾಗಿ, ಚಿಪ್ಸ್, ಕರಿದ ತಿಂಡಿಗಳಲ್ಲಿ ನಿನ್ನ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಿಲ್ಲ" ಎಂದು ಹೇಳಿದರು. "ಸರಿ ಅಜ್ಜಿ, ನಾನು ಆಟ ಆಡಲು ಹೋಗಬೇಕು" ಅಂತಾ ಹೇಳಿ ಅಲ್ಲಿಂದ ಓಡಿದಳು.

ಸುತ್ತಮುತ್ತ ಇದ್ದ ನಿಂಗಿ, ಈರ, ಸುಮತಿ, ರಾಹುಲ್ ಎಲ್ಲರನ್ನೂ ಸೇರಿಸಿಕೊಂಡು ಆಟ ಆಡುತ್ತಾ ಇರುವಾಗ ಈರ ಇದ್ದಕ್ಕಿದ್ದಂತೆ ತಲೆ ಸುತ್ತಿ ಬಿದ್ದು ಬಿಟ್ಟ. ಶಾಲಿನಿಗೆ ಭಯವಾಗಿ ಮಾವನನ್ನು ಕರೆದಳು. ಈರನನ್ನು ಡಾಕ್ಟರ್ ಹತ್ತಿರ ಕರೆದುಕೊಂಡು ಹೋದಾಗ ಡಾಕ್ಟರ್ ಹೇಳಿದರು. "ಸರಿಯಾಗಿ ಊಟ, ತಿಂಡಿ ತಿನ್ನದೆ ಹೀಗಾಗಿದ್ದಾನೆ, ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗುತ್ತಿಲ್ಲ" ಎಂದು ಹೇಳಿ ಇಂಜೆಕ್ಷನ್ ಕೊಟ್ಟು, ಗ್ಲೂಕೋಸ್ ಹಾಕಿ, ಮಾತ್ರೆ,ಟಾನಿಕ್ ಎಲ್ಲವನ್ನೂ ಕೊಟ್ಟು ಕಳುಹಿಸಿದರು. ಶಾಲಿನಿ ಅಜ್ಜಿಯ ಹತ್ತಿರ ಎಲ್ಲವನ್ನೂ ಹೇಳಿ ಅಜ್ಜಿಗೆ "ನಾನೂ ಇನ್ನು ಊಟ, ತಿಂಡಿಯನ್ನು ಚೆನ್ನಾಗಿ ತಿನ್ನುತ್ತೇನೆ." ಎಂದು ಭಾಷೆ ನೀಡಿದಳು.

ಅವತ್ತಿನಿಂದ ಶಾಲಿನಿ ಯಾರ ಕೈಯಲ್ಲೂ ಹೇಳಿಸಿಕೊಳ್ಳದೆ ತಟ್ಟೆಯಲ್ಲಿ ಹಾಕಿಕೊಟ್ಟ ಊಟವನ್ನು ಚೂರೂ ಉಳಿಸದೆ ಖಾಲಿ ಮಾಡುತ್ತಾಳೆ. ಹಾಲು ಕುಡಿದು, ಹಣ್ಣು ತಿನ್ನುತ್ತಾಳೆ. ಜಂಕ್ ಫುಡ್ ತಿನ್ನುವುದಿಲ್ಲ. ಶಾಲಿನಿ ಬದಲಾದಳು. ನೀವೂ ಬದಲಾಗ್ತೀರಾ ಅಲ್ವಾ?

~ವಿಭಾ ವಿಶ್ವನಾಥ್

ಭಾನುವಾರ, ಜನವರಿ 12, 2020

ಪ್ರೀತಿಯೆಂದರೆ ಇದೇನೇ..

ಯಶೋಧೆಯ ಬಳಿ ಕುಳಿತ ರಾಧೆ ಯಶೋದೆಯ ಕಾಲನ್ನೊತ್ತುತ್ತಾ ಕೇಳುತ್ತಾಳೆ. "ಅಮ್ಮ, ನೀವು ನಿಜವಾಗಿಯೂ ಸುಖವಾಗಿರುವಿರಾ? ನಿಮ್ಮಲ್ಲಿ ಖುಷಿ ಇದೆಯಾ?". ಆಗ ಯಶೋದೆ ಹೇಳುತ್ತಾಳೆ "ನನ್ನ ಸುಖ ಸಂತೋಷಗಳೆಲ್ಲಾ ಇದ್ದದ್ದು ಕೃಷ್ಣನಲ್ಲಿ. ಕೃಷ್ಣನೇ ನನ್ನಿಂದ ದೂರಾದ ಮೇಲೆ ನನ್ನ ನೆಮ್ಮದಿ, ಶಾಂತಿ, ಸುಖ ಇವುಗಳೆಲ್ಲಾ ಎಲ್ಲಿವೆ? ನಿಜಕ್ಕೂ ನನ್ನ ಬದುಕು ಪ್ರೀತಿ ಇಲ್ಲದೆ ಬರಡಾಗಿದೆ." ಎಂದು ಹೇಳುತ್ತಾ ಯಶೋದೆ ರಾಧೆಗೆ ಮರು ಪ್ರಶ್ನಿಸುತ್ತಾಳೆ "ನೀನು ಕೃಷ್ಣನಿಲ್ಲದೆ, ಸುಖವಾಗಿ ಇರುವೆಯಾ?" ಇದಕ್ಕೆ ರಾಧೆ ಉತ್ತರಿಸುತ್ತಾಳೆ "ಕೃಷ್ಣ ಎಲ್ಲಿಗೆ ಹೋಗಿರುವನಮ್ಮಾ? ಇಲ್ಲೇ ಇದ್ದಾನಲ್ಲ. ನನ್ನ ಮಾಧವ ನನ್ನೊಳಗೇ ಇರುವನು. ಅವನು ಭೌತಿಕವಾಗಿ ಇಲ್ಲಿ ಪ್ರಸ್ತುತನಿಲ್ಲ ಅಷ್ಟೇ. ಅವನು ಎಂದೆಂದಿಗೂ ನನ್ನೊಳಗೆ ಸದಾ ಜೀವಂತವಾಗಿದ್ದಾನೆ."

ಯಶೋದೆಗೆ ಬೆರಗು. ರಾಧೆ ಮುಂದುವರಿಸುತ್ತಾಳೆ "ಪ್ರೀತಿ ಎಂದರೆ ಏನಮ್ಮ? ಪ್ರೀತಿಸುವವರಿಲ್ಲದೆ ಬದುಕಲೇ ಆಗುವುದಿಲ್ಲವೇ? ಈಗ ಕೆಲ ಹೊತ್ತಿಗೆ ಮುಂಚೆ ನೀವೇ ಹೇಳಿದಿರಿ.. ಕೃಷ್ಣನೇ ನನ್ನ ಪ್ರೀತಿ, ನೆಮ್ಮದಿ ಎಂದೆಲ್ಲಾ. ಕೃಷ್ಣನನ್ನು ನೀವು ಪ್ರೀತಿಸುತ್ತಾ ಇದ್ದಿರಿ. ಕೃಷ್ಣ ನಿಮ್ಮನ್ನು ಪ್ರೀತಿಸಿದರೂ, ಪ್ರೀತಿಸದಿದ್ದರೂ ನೀವು ಅವನನ್ನು ಇಷ್ಟ ಪಡುತ್ತಲೇ ಇದ್ದೀರಿ. ಇಷ್ಟ ಪಡುತ್ತಲೇ ಇರುತ್ತೀರಿ. ಪ್ರೀತಿ ಏನನ್ನೂ ಬಯಸುವುದಿಲ್ಲ. ನಿಸ್ವಾರ್ಥ ಪ್ರೀತಿಗೆ ಯಾರ ಅನುಕಂಪ, ಮರುಪ್ರೀತಿ ಯಾವುದೂ ಬೇಕಾಗಿಯೇ ಇಲ್ಲ. ಕೆಲವೊಮ್ಮೆ ನಾವು ಪ್ರೀತಿಸುವ ಭರದಲ್ಲಿ, ಯಾವುದೋ ಜಿದ್ದಿಗೆ ಬಿದ್ದಂತೆ ಒಬ್ಬರನ್ನು ಪ್ರೀತಿಸುತ್ತಲೇ ಹೋಗುತ್ತೇವೆ. ಆ ಭರದಲ್ಲಿ ನಮ್ಮ ಸುತ್ತಮುತ್ತಲಿನವರು ತೋರುತ್ತಿರುವ ಪ್ರೀತಿ ನಮಗೆ ಕಾಣಿಸುವುದೇ ಇಲ್ಲ. ನಿಮ್ಮ ಪತಿ ನಿಮ್ಮನ್ನು ಅಗಾಧವಾಗಿ ಪ್ರೀತಿಸುತ್ತಾರೆ. ನಂದಗೋಕುಲದ ನಿವಾಸಿಗಳೂ ನಿಮ್ಮನ್ನು ಇನ್ನಿಲ್ಲದಂತೆ ಪ್ರೀತಿಸುತ್ತಾರೆ. ಅಂತಹಾ ನಿರ್ಮಲವಾದ ಪ್ರೀತಿಯೇ ನಿಮ್ಮನ್ನು ಬದುಕಿಸಿಕೊಂಡಿರುವುದು. ಒಲವಿನಿಂದಲೇ ಅಲ್ಲವೇ ಈ ಪ್ರಕೃತಿ ಇರುವುದು. ಪ್ರೀತಿ ಎಂಬುದು ಎಂದಿಗೂ ಹೂವು-ದುಂಬಿಯಂತೆ ಇದ್ದರೇ ಚೆಂದವೆನಿಸುತ್ತದೆ. ಜನನ, ಕಾಯುವಿಕೆ, ಸಾರ್ಥಕತೆ ನಂತರ ಮರಣ. ರಾಗ-ದ್ವೇಷಗಳಿಲ್ಲದ ಪ್ರೀತಿಯ ಭಾವವೇ ಪುಳಕ ತರುವುದಲ್ಲವೇ? ಈಗ ಹೇಳಿ ಅಮ್ಮ, ನಿಮ್ಮ ಪ್ರೀತಿ ಬರೀ ಕೃಷ್ಣನಿಗೇ ಮೀಸಲಾಗಿರುವುದೇಕೆ?"

ಯಶೋದೆ ಹೇಳುತ್ತಾಳೆ "ವಯಸ್ಸಿನಲ್ಲಿ ನೀನು ನನಗಿಂತ ಕಿರಿಯಳಾಗಿರುವೆ ಹುಡುಗಿ ಆದರೆ ನಿನ್ನ ಅನುಭವ, ತರ್ಕದ ಎದುರು ನಾನೆಷ್ಟರವಳು ಹೇಳು? ನನ್ನ ಪ್ರೀತಿ ಕೃಷ್ಣನಿಗೆ ಮಾತ್ರ ಮೀಸಲಾಗಿಲ್ಲ. ಪ್ರೀತಿಯ ಬಹು ದೊಡ್ಡ ಪಾಲು ಅವನಿಗೆ ಅಷ್ಟೆ, ಪ್ರೀತಿ ಹಂಚಿದಷ್ಟೂ ಅನಂತ ಕಣೇ, ಕಡಿಮೆಯಾದರೆ ಅದು ಪ್ರೀತಿಯೇ ಅಲ್ಲ. ಪ್ರೀತಿಯ ಈ ವ್ಯಾಖ್ಯಾನವನ್ನು ಇಷ್ಟು ಚೆಂದವಾಗಿ ಹೇಳುತ್ತೀಯಲ್ಲ. ನಿನಗೆ ಅದು ಹೊಳೆದದ್ದಾದರೂ ಹೇಗೆ? ನಿನಗದನ್ನು ಹೇಳಿದವರಾದರೂ ಯಾರು?". ರಾಧೆ ಉತ್ತರಿಸುತ್ತಾಳೆ. "ಪ್ರೀತಿಯ ಪಾಠವನ್ನು ಹೇಳಿಕೊಟ್ಟೇ ಕಲಿಯಬೇಕೇನು? ಅನುಭವಕ್ಕಿಂತ ದೊಡ್ಡ ಗುರುವಾದರೂ ಎಲ್ಲಿ ದಕ್ಕಬೇಕು? ಹೇಳಿ. ಆದರೆ, ಅನುಭವದ ಅನುಭೂತಿಗೆ ನನ್ನನ್ನು ತಳ್ಳಿದವನು ಕೃಷ್ಣ ಎಂಬುದೂ ಸುಳ್ಳಲ್ಲ."

ಯಶೋದೆ ಕೇಳುತ್ತಾಳೆ. "ನಿನಗಿಂತ ಹಿರಿಯಳು ನಾನು, ನಿನಗಿಂತ ಕೃಷ್ಣನೊಡನೆ ಹೆಚ್ಚು ಸಮಯ ಕಳೆದಿರುವವಳು ನಾನು. ನನಗೆ ದೊರೆಯದ ಅನುಭೂತಿ ನಿನಗೆ ದೊರೆತದ್ದಾದರೂ ಹೇಗೆ?" ರಾಧೆ ಹೇಳುತ್ತಾಳೆ "ಪ್ರೀತಿ ದಕ್ಕಿದವರಿಗೆ ದಕ್ಕಿಸಿಕೊಂಡಷ್ಟೂ ದೊರೆಯುತ್ತದೆ. ನೀವು ಪ್ರೀತಿಯನ್ನು ನೀಡುವುದರಲ್ಲೇ ತಲ್ಲೀನರಾಗಿದ್ದಿರಿ. ನಾನು ಪ್ರೀತಿಯನ್ನು ಪಡೆದುಕೊಳ್ಳುವುದರಲ್ಲೇ ತಲ್ಲೀನಳಾಗಿದ್ದೆ. ನೀವು ಕೃಷ್ಣನಿಗೆ ಕಲಿಸುವ ಗುರುವಾಗಿದ್ದಿರಿ. ನಾನು ಅವನಿಂದ ಕಲಿಯುವ ಶಿಷ್ಯೆಯಾಗಿದ್ದೆ. ಗುರುವಿಗೆ ಕಲಿಸುವ ಶಿಷ್ಯ ಇರುವುದುಂಟೇ? ಕೃಷ್ಣನಿಂದ ಪ್ರೀತಿಯ ಅನುಭೂತಿ ದಕ್ಕಿರುವುದು ನನಗಾದರೂ.. ಕೃಷ್ಣನಿಗೆ ಪ್ರೀತಿಸುವುದನ್ನು ಕಲಿಸಿದ ಗುರು ನೀವೇ ಅಲ್ಲವೇ? ನಿರ್ಮಲ ಪ್ರೀತಿಯ ಸವಿಯುಣಿಸಲು ಪ್ರಥಮ ಪಾಠ ಮಾಡಿದವರು ನೀವೇ ಅಲ್ಲವೇ? ಹೆತ್ತ ಮಗನಲ್ಲದಿದ್ದರೂ, ಹೆತ್ತ ಮಗನಿಗಿಂತಲೂ ಹೆಚ್ಚು ಪ್ರೀತಿಸಿದಿರಿ. ನಿಷ್ಟೂರವಾದ ಸತ್ಯ ಕೂಡಾ ನಿಮ್ಮೆದುರು ತಲೆಬಾಗಿ ನಿಂತು ಸುಳ್ಳಿನ ಮುಖವಾಡ ಧರಿಸುವಂತೆ ಮಾಡಿದ್ದೀರಿ. ಯಾರು ತಾನೇ ಹೇಳಬಲ್ಲರು ನೀವು ಕೃಷ್ಣನ ಸಾಕುತಾಯಿ ಎಂದು..? ಪ್ರೀತಿಯ ಭಾವವಿರುವುದು ಭಾವಿಸುವ ಮನಸ್ಸಿನಲ್ಲಿ, ತೋರಿಸುವ ಮಮತೆಯಲ್ಲಿ, ನಿಷ್ಕಲ್ಮಶ ಅಂತಃಕರಣದಲ್ಲಿ. ನೀವು ತೋರ್ಪಡಿಸಿದ್ದು ಪ್ರೀತಿಯನ್ನು, ಬರೀ ಪ್ರೀತಿಯನ್ನು. ಆದರೆ ನೀವು ಅನುಭವಿಸುತ್ತಿರುವುದು ದುಃಖವನ್ನು, ವಿರಹವನ್ನು. ಪ್ರೀತಿ ಕೊಟ್ಟವರಿಗೆಲ್ಲಾ ಕೃಷ್ಣ ಯಾವ ರೂಪದಲ್ಲಾದರೂ ಒಳಿತು ಮಾಡುತ್ತಾನೆ ಎಂಬ ಮಾತಿಗೆ ನೀವೇ ಕಪ್ಪು ಚುಕ್ಕಿಯಾಗಲು ಹೊರಟಿರುವಿರಲ್ಲ ಅಮ್ಮ. ಇದು ಸರಿಯೇ?"

ಯಶೋದೆಯ ಆಲೋಚನಾ ಲಹರಿ ಮಗನ ಅಭ್ಯುದಯದತ್ತ ಹೊರಳಿತ್ತು. "ಪ್ರೀತಿ ಹಂಚಿದವರಿಗೆ, ಪ್ರೀತಿಯೇ ಪ್ರತ್ಯುತ್ತರವಾಗಿತ್ತು. ಅಂತಹಾ ಕೃಷ್ಣ ತನ್ನ ತಾಯಿಗೆ ಪ್ರೀತಿ ಹಂಚಲಿಲ್ಲವೆಂದು ಹೇಳುವವರಾದರೂ ಯಾರು? ಹಾಗೆ ಹೇಳುವವರು ಮೂಢರು ಅಷ್ಟೇ. ಭಯವಿದ್ದೆಡೆ ಗೌರವವೂ ಇರುವಂತೆ, ಪ್ರೀತಿ ಇದ್ದೆಡೆ ವಿರಹವೂ ಸಾಮಾನ್ಯ. ಆದರೆ ಅದರಲ್ಲಿ ಪ್ರೀತಿಯ ಪಾಲೇ ಹೆಚ್ಚು. ಕೃಷ್ಣ ಎಂದಿಗೂ ನನ್ನಿಂದ ದೂರಾಗುವುದಿಲ್ಲ. ಹಿಡಿಸಲಾರದಷ್ಟು ಸಂತಸ ಕೊಟ್ಟ ಕೃಷ್ಣನ ನೆನಪುಗಳು ಪ್ರೀತಿಯ ಪ್ರತಿರೂಪವಾಗಿ ನನ್ನ ಬಳಿಯೇ ಇವೆ. ನನ್ನ ಕನಸು ಮನಸ್ಸಿನಲ್ಲಿರುವ ಕೃಷ್ಣ ಇನ್ನು ಇಲ್ಲಿರುವ ಅಣು-ಅಣುವಿನಲ್ಲಿಯೂ ಪಸರಿಸುತ್ತಾನೆ. ಪ್ರೀತಿ ನೀಡುತ್ತಾನೆ." ಎಂದು ಹೇಳುತ್ತಾ ಲಗುಬಗೆಯಿಂದ ಎಲ್ಲರ ಯೋಗಕ್ಷೇಮದ ಕಡೆ ಗಮನ ಹರಿಸಲು ಎದ್ದು ಹೊರಟಳು ಯಶೋದೆ.

ಇತ್ತ ವಾದ-ವಿವಾದ ಮಾಡಿ ಅಮ್ಮನನ್ನು ಸಂತುಷ್ಟಗೊಳಿಸಿ, ಚಿಂತಾಮುಕ್ತಳನ್ನಾಗಿ ಮಾಡಿದ ಖುಷಿಯಲ್ಲಿ ರಾಧೆಯಲ್ಲಡಗಿದ್ದ ಕೃಷ್ಣ ತನ್ನಲ್ಲೇ ಅಂದುಕೊಂಡ "ಪ್ರೀತಿಯೆಂದರೆ ಇದೇನೇ.."

~ವಿಭಾ ವಿಶ್ವನಾಥ್

ಗುರುವಾರ, ಜನವರಿ 9, 2020

ಅಮ್ಮನ ಒಡನಾಟ

ಎಲ್ಲರಿಗಿಂತ ಮನಸ್ಸಿಗೆ ಹತ್ತಿರ ಆಗುವುದು, ನನಗೆ ಅನ್ನಿಸಿದ್ದನ್ನೆಲ್ಲಾ ಹೇಳೋಕೆ ಅಂತಾ ಇರೋ ಒಬ್ಬಳು ಬೆಸ್ಟ್ ಫ್ರೆಂಡ್ ಅಮ್ಮ. ಅಮ್ಮ ನಿಂಗೊತ್ತಾ, ನಾನು ಮನಸ್ಸು ಬಿಚ್ಚಿ ನಗುವುದು, ಎಲ್ಲಾ ವಿಷಯ ಅಂದರೆ ನಾನು ತೆಗೆದುಕೊಳ್ಳೊ ಪುಟ್ಟ ಕ್ಲಿಪ್ ನಿಂದ ಹಿಡಿದು ನನಗೆ ಬರೋ ಮಾರ್ಕ್ಸ್, ಜೊತೆಗೆ ನನ್ನ ಕನಸನ್ನೆಲ್ಲಾ ಹಂಚಿಕೊಳ್ಳುವುದು ನಿನ್ನ ಹತ್ತಿರಾನೇ.ಮಾತಾಡ್ತಾ ಹೋದರೆ ಫಿಲ್ಟರ್ ಇಲ್ಲದಂತೆ ಎಲ್ಲವನ್ನೂ ಹಂಚಿಕೊಂಡು ನಿರಾಳ ಆಗಿಬಿಡ್ತೀನಿ. ಅಪ್ಪನ ಹತ್ತಿರ ಮುಖ್ಯ ಅನ್ನಿಸಿದ ವಿಷಯಗಳನ್ನು ಮಾತ್ರ ಮಾತಾಡಿದ್ರೆ, ನಿನ್ನ ಹತ್ತಿರ ಬೀದಿ ಬದಿಯಲ್ಲಿ,ಬಸ್ಸಿನಲ್ಲಿ ನೋಡಿದ ಜನರಿಂದ ಹಿಡಿದು ರಾಜ್ಯದ ರಾಜ್ಯಕಾರಣದವರೆಗೂ ಮಾತಾಡ್ತೀನಿ. ಹೀಗೇ ನಾನು ಮಾತಾಡ್ತಾ ಹೋದ್ರೆ ನಿನ್ನ ಮುಖದಲ್ಲಿ ನಿಲ್ಲಿಸು ಅನ್ನೋ ಭಾವನೇನೇ ಸುಳಿಯುವುದಿಲ್ಲ. ಬದಲಿಗೆ ಅಲ್ಲಿ ಕಂಡೂ ಕಾಣದಂತಾ ಮುಗುಳ್ನಗು ಇರುತ್ತೆ. ನಿಂಗೊತ್ತಾ, ನಿನ್ನ ಆ ಮುಗುಳ್ನಗುವೇ ನನಗೆ ಸ್ಫೂರ್ತಿ ಅಂತಾ? ಎಷ್ಟೇ ಕಷ್ಟ ಇದ್ರೂ, ಏನೇ ನೋವಿದ್ದರೂ ನಿನ್ನ ಮುಖದ ಮುಗುಳ್ನಗು ಹಾಗೇ ಇರುತ್ತೆ. ಹಾಗೇ ಇರಲಿ ಅಮ್ಮ. ನಾನಂತೂ ಕಣ್ಣು ಹಾಕಲ್ಲ.

ಮನೆಗೆ ಎಷ್ಟೇ ಜನ ಬಂದ್ರೂ, ಅವರ ಸ್ಟೇಟಸ್ ನ ನೀನು ಗಮನಿಸುವುದೇ ಇಲ್ಲ. ಅದೇ ಪರಿಚಯದ ಮುಗುಳ್ನಗು ಜೊತೆಗೆ ಕಾಫಿ,ಟೀ,ಊಟ,ತಿಂಡಿ ಎಲ್ಲವನ್ನೂ ವಿಚಾರಿಸಿಕೊಂಡು ಉಪಚಾರ ಮಾಡ್ತೀಯ. ಆ ವಿಷಯದಲ್ಲಿ ನೀನು ಸ್ವಲ್ಪ ಕೂಡಾ ಗೊನಗುವುದಿಲ್ಲ. ಅದನ್ನು ನಾನು ಕೂಡಾ ಕಲೀತಾ ಇದ್ದೀನಿ, ಇನ್ನೂ ಪೂರ್ತಿ ಕಲಿತಿಲ್ಲ. ಯಾಕಂದ್ರೆ, ನಿನ್ನಿಂದ ಕಲಿಯುವುದಕ್ಕೆ ತುಂಬಾ ಇದೆ.

ಅವತ್ತು ನೀನು ಆ ಹುಡುಗೀನಾ ನೋಡಿ ಹೇಳ್ತಾ ಇದ್ಯಲ್ಲಾ, "ಆ ಹುಡುಗಿ ಬಾಬ್ ಕಟ್ ಮಾಡಿಸಿಕೊಂಡು ಎಷ್ಟು ಚೆನ್ನಾಗಿ ಕಾಣಿಸ್ತಾ ಇದ್ದಾಳೆ" ಅಂತಾ, ಅದರ ಜೊತೆಗೆ ಮಾಡ್ರನ್ ಆಗಿ ಟ್ರೆಂಡಿ ಆಗಿರೋದೂ ನಿನಗೆ ಇಷ್ಟ ಅಲ್ವಾ?
ಅವತ್ತು ನೀನು ಮನೆಯಲ್ಲಿ ಇರಲಿಲ್ಲ. ನನ್ನಕೂದಲು ಉದುರಿ ಸಣ್ಣ ಆಗ್ತಾ ಇತ್ತು, ಸ್ವಲ್ಪ ಕಟ್ ಮಾಡಿಸಿಕೊಳ್ಳೋಣ ಅಂದುಕೊಂಡವಳು, ಹೇಗೂ ನಿನಗೆ ಗಿಡ್ಡ ಕೂದಲು ಇಷ್ಟ ಆಗುತ್ತೆ ಅಲ್ವಾ ಅಂದುಕೊಂಡು ನಿನಗೆ ಸರ್ಪ್ರೈಜ್ ಕೊಡಬೇಕು ಅಂದುಕೊಂಡು ಸ್ವಲ್ಪ ಜಾಸ್ತಿನೇ ಕಟ್ ಮಾಡಿಸಿಕೊಂಡು ಬಂದಿದ್ದೆ. ಆದ್ರೆ ಅವತ್ತು ನೀನು ಬಂದು ನೋಡಿ ಬೇಜಾರು ಮಾಡಿಕೊಂಡು, ಅಷ್ಟು ಉದ್ದ ಇದ್ದಿದ್ದ ಕೂದಲನ್ನು ಇಷ್ಟು ಕಟ್ ಮಾಡಿಸಿಕೊಂಡು ಬಂದಿದ್ದೀಯಲ್ಲ ಅಂದೆ. ನಿಜ ಹೇಳ್ಲಾ, ನನಗೂ ಅಷ್ಟು ಉದ್ದದ ಕೂದಲು ಕಟ್ ಮಾಡಿಸಿಕೊಂಡದ್ದಕ್ಕೆ ಬೇಜಾರಿತ್ತು,ಆದ್ರೆ ಅವತ್ತು ಬೇಜಾರಾಗಿದ್ದು, ನೀನು ಬೇಜಾರಾಗಿದ್ದನ್ನು ನೋಡಿ.

ಎಲ್ಲಾದ್ರೂ ಹೊರಟರೆ,ಅಥವಾ ಯಾವುದಾದರೂ ಹೊಸಾ ಬಟ್ಟೆ ಹಾಕಿಕೊಂಡ್ರೆ ಮೊದಲ ಕಾಂಪ್ಲಿಮೆಂಟ್ ಅಂತೂ ನಿನ್ನದೇ, ಚೆನ್ನಾಗಿ ಕಾಣಿಸ್ತಾ ಇದ್ದೀಯಾ ಅಂತಾ(ಚೆನ್ನಾಗಿ ಕಾಣಿಸದೇ ಇದ್ದರೂ ಕೂಡಾ), ಎಷ್ಟಾದರೂ ಹೆತ್ತವರಿಗೆ ಹೆಗ್ಗಣ ಮುದ್ದು ಅಲ್ವಾ? ಆದರೆ ನಿನಗೆ ನಾನು ಬೇರೆ ಹೇರ್ ಸ್ಟೈಲ್ ಮಾಡಿಕೊಂಡರೆ ಇಷ್ಟಾನೇ ಆಗಲ್ಲ. ಅಲ್ವಾ? ನೀನು ಮಾಮೂಲಾಗೇ ಇರು,ಆ ತರ ಜಡೆ ಹಾಕ್ಕೊಂಡಿದ್ರೇನೇ ನೀನು ಚೆನ್ನಾಗಿ ಕಾಣ್ತೀಯಾ ಅಂತಾ ಹೇಳ್ತೀಯಾ. ಅದಕ್ಕೇ ಯಾರು ಎಷ್ಟೇ ಒತ್ತಾಯ ಮಾಡಿದರೂ, ಎಷ್ಟೇ ದೊಡ್ಡ ಫಂಕ್ಷನ್ ಆದ್ರೂ, ಆ ಹೇರ್ ಸ್ಟೈಲ್ ನನಗೆ ಇಷ್ಟ ಇಲ್ಲ. ಸಾಕು ಅಂತಾ ಹೇಳ್ಬಿಡ್ತೀನಿ.
ಆದ್ರೆ,ನೀನು ಹೇಗೇ ಇದ್ರೂ ಎಷ್ಟು ಚೆಂದ. ಆ ಮುಗುಳ್ನಗುವೇ ನಿನ್ನ ಮುಖಕ್ಕೆ ಹೆಚ್ಚು ಮೆರುಗು. ನೀನು ನಿನ್ನ ಬಾಬ್ ಕಟ್ ಹೇರ್ ಸ್ಟೈಲ್ ಜೊತೆಗೆ ಯಾವ ಸೀರೆ ಹಾಕಿಕೊಂಡರೂನೂ ನನ್ನ ಕಣ್ಣಿಗಂತೂ ಸಂದರೀನೇ.ಅದಕ್ಕೆ ನಾನೂ ಅವಾಗವಾಗ "ಮಾಡರ್ನ್ ಅಮ್ಮ, ಟ್ರೆಡಿಷನಲ್ ಮಗಳು" ಅಂತಾ ರೇಗಿಸೋದು. ನೆನಪಿಡೆ ಅಲ್ವಾ? ನಿನ್ನ ಯೊಚನೆಗಳು ಯಾವಾಗ್ಲೂ ಮಾಡರ್ನ್.

ಅಡುಗೆ ಅಂದ್ರೆ ಹೀಗೇ ಇರಬೇಕು ಅನ್ನೋ ಹಳೇ ಮಾರ್ಗಗಳನ್ನು ಬಿಟ್ಟು, ಅದರಲ್ಲೇ ಹೊಸರುಚಿ ಟ್ರೈ ಮಾಡೋದಕ್ಕೆ ಹೇಳಿ ಕೊಟ್ಟದ್ದು ನೀನೇ,ಆದರೆ ಅದ್ಯಾಕೋ ನಿನ್ನಷ್ಟು ರುಚಿಯಾಗಿ ಅಡುಗೆ ಮಾಡೋದಕ್ಕೆ ಬರುವುದೇ ಇಲ್ಲ. ಬಹುಶಃ ಅದಕ್ಕೆ ಅನ್ಸುತ್ತೆ ಹೇಳೋದು "ಕೈ ರುಚಿ ಅಂದ್ರೆ, ಅಮ್ಮನ ಕೈ ರುಚಿನೇ" ಅಂತಾ.

ನನಗೆ ನೀನು ತಲೆಗೆ ಎಣ್ಣೆ ಹಚ್ಚುವ ಕ್ಷಣಗಳಿಗಿಂತಾ, ನಾನು ನಿನಗೆ ಮೆಹಂದಿ ಹಚ್ಚಿಕೊಡೋ ಕ್ಷಣಗಳೇ ಅಚ್ಚುಮೆಚ್ಚು. ಅಮ್ಮ, ಆ ಸೀರೆ ಉಟ್ಕೋ, ಈ ತರಾ ಡ್ರೆಸ್ ಮಾಡ್ಕೋ ಅಂತಾ ಹೇಳೋಕೇ ಹೆಚ್ಚು ಖುಷಿ. ಎಲ್ಲರೂ ಅಮ್ಮನ ಮಡಿಲಲ್ಲಿ ಅಕ್ಕರೆಯ ಸವಿಯನ್ನು ಸವಿಯಬೇಕು ಅಂತಾ ಅಂದ್ರೆ, ನಾನು ಅಮ್ಮನಿಗೇ ನನ್ನ ಪ್ರೀತಿಯನ್ನೆಲ್ಲಾ ಕೊಡಬೇಕು ಅಂತಾ ಅಂದುಕೊಳ್ಳುತ್ತೇನೆ.

ಆದ್ರೆ ಕೆಲವೊಮ್ಮೆ ನೀನು ಹೆಚ್ಚು ಪೊಸೆಸ್ಸೀವ್ ಆಗಿಬಿಡ್ತೀಯಾ ಅನ್ಸುತ್ತೆ. ಯಾರಾದ್ರೂ ನನ್ನನ್ನು ಮಗಳು ಅಂತಾ ಕರೆದಾಗ, ಅಥವಾ ನಿನ್ನ ಮುಂದೆ ನಾನು ಯಾರ ಬಗ್ಗೆ ಆದ್ರೂ ಹೆಚ್ಚು ಮಾತಾಡುವಾಗ, ಮೆಚ್ಚುಗೆ ಇದ್ದರೂ, ಅದರ ಜೊತೆಗೆ ಸ್ವಲ್ಪ ಅಸಮಾಧಾನ ಕೂಡಾ ಇರುತ್ತೆ. ಆದರೆ, ಎಲ್ಲರಿಗಿಂತ ನೀನೇ ನನಗೆ ಮುಖ್ಯ. ಆದ್ರೆ, ನಿನಗೆ ಕಾಡಿಸಬೇಕು ಅಂತಾನೇ, ನಾನು ಅದರ ಬಗ್ಗೆ ಹೆಚ್ಚು ಮಾತಾಡ್ತೀನಿ. ಬೇಜಾರಿಲ್ಲ. ಅಲ್ವಾ?
ಬರೀ ಪ್ರೀತಿ ಅಷ್ಟೇ ಅಲ್ಲ,ನಮ್ಮ ಮಧ್ಯೆ ನಡೆಯೋ ಜಗಳಗಳಿಗೂ ಲೆಕ್ಕ ಇಲ್ಲ ಅಲ್ವಾ? ಆದರೆ, ಅದೆಲ್ಲಾ ಎಷ್ಟು ಹೊತ್ತು? ಒಂದೋ ನಾನು ಅಮ್ಮಾ ಅಂದ್ರೆ ಕರಗೊಗ್ತೀಯಾ, ಇಲ್ಲಾ ನೀನೇ 'ಪಾಪು' ಅಂತಾ ಮಾತಾಡಿಸ್ತೀಯಾ.. ಆದರೆ ಅವಾಗೆಲ್ಲಾ ನಿನ್ನ ಬಾಯಿಮಾತುಗಳೇ ಜೋರು. ಅದಕ್ಕೆ ನಾನು ಹೇಳ್ತಾ ಇರೋದು "ಪುಣ್ಯ, ನಿನಗೆ ಮಗ ಇಲ್ಲ. ಅಕಸ್ಮಾತ್ ಏನಾದ್ರೂ ಇದ್ದು ಸೊಸೆ ಬಂದಿದ್ರೆ, ಅವಳು ನಿನ್ನ ಈ ಅವತಾರ ನೋಡಿದ್ರೆ, ಒಂದೋ ಅವಳು ಮನೆ ಬಿಟ್ಟು ಹೋಗ್ತಾ ಇದ್ಲು, ಇಲ್ಲಾ ನಿನ್ನ ಓಡಿಸ್ತಾ ಇದ್ಲು" ಅಂತಾ. ಅವಾಗೆಲ್ಲಾ ನಿನ್ನ ನಗುವೇ ಉತ್ತರ.

ಆದ್ರೆ,ನಿನಗೆ ಅಡುಗೆ ಮಾಡಿ ಒಪ್ಪಿಸುವುದೋ, ಅಥವಾ ಬೇರೆ ಯಾವುದನ್ನಾದ್ರೂ ಒಪ್ಪಿಸುವುದೇ ಬಹಳ ಕಷ್ಟ. ಯಾಕಂದ್ರೆ ಎಲ್ಲದರಲ್ಲೂ ಪರ್ಫೆಕ್ಷ್ನ್ ಬಯಸ್ತೀಯಲ್ಲಾ ನೀನು.. ನಾನು ಬರೆಯೋ ಬರಹಗಳ ಮೊದಲ ವಿಮರ್ಷಕಿ ನೀನೇ. ನೀನು ಮೆಚ್ಚಿಕೊಂಡರೆ ಅದು ಚೆನ್ನಾಗಿದೆ ಅನ್ನೋ ಭಾವನೆ ನನಗೆ. ಆದ್ರೆ ನಿನಗೆ ಇಷ್ಟ ಆಗ್ಲಿಲ್ಲಾ ಅಂದ್ರೂ ಅದನ್ನು ಮುಚ್ಚುಮರೆ ಮಾಡಲ್ಲ. ನಿನ್ನ ನೇರನುಡಿ ನನಗೆ ಬಹಳ ಇಷ್ಟ.

"ನಂಗೆ ವಾಟ್ಸಾಪ್ ಎಲ್ಲಾ ಯಾಕೆ? ,ಬೇಡ ಅದೆಲ್ಲ" ಅಂತಾ ಅಂದರೂ ವಾಟ್ಸಾಪ್ ಬಂದ ಮೇಲೆ ಫೋಟೋ ಕಳಿಸುವುದು ಹೇಗೆ? ನೋಡುವುದು ಹೇಗೆ ಅಂತೆಲ್ಲಾ ಕೇಳಿಕೊಂಡು, ಒಳ್ಳೆಯ ಕುತೂಹಲ ತುಂಬಿದ ವಿದ್ಯಾರ್ಥಿನಿ ತರಹ ಕಲಿಯೋದು ಚೆಂದ. ಆ ಕ್ಷಣ ನಾನು ನಿನಗೆ ಮಿಸ್ ಆಗಿ, ನೀನು ಸ್ಟೂಡೆಂಟ್ ಆಗಿಬಿಡ್ತೀಯಾ.. ಎಷ್ಟು ಚೆಂದ ಅಲ್ವಾ ಆ ಘಳಿಗೆ.
ಬರೆಯುತ್ತಾ ಹೋದ್ರೆ ಬಹಳಷ್ಟಿದೆ. ಇನ್ನೊಮ್ಮೆ, ಅಲ್ಲಲ್ಲಾ ಇನ್ನೊಂದಿಷ್ಟು ಸಲ ಬರೀತೀನಿ. ಆಯ್ತಾ?ಅಮ್ಮ, ನಾನು ನಿನ್ನ ಒಡನಾಟದಲ್ಲಿ ಎಲ್ಲವನ್ನೂ ಮರೆಯುತ್ತೇನೆ. ನೀನು ಒಬ್ಬಳು ಬೆಸ್ಟ್ ಫ್ರೆಂಡ್, ನನ್ನ ಗೈಡ್, ನನ್ನ ಬರಹಗಳ ವಿಮರ್ಶಕಿ, ಸ್ವಲ್ಪ ಪೊಸೆಸ್ಸೀವ್ ಆಗೋ ಭಾವುಕ ಅಮ್ಮ, ಕೋಳಿಜಗಳಗಳ ಜೊತೆಗಾತಿ,ಒಳ್ಳೆ ಶಿಕ್ಷಕಿ ಹಾಗೇ ವಿದ್ಯಾರ್ಥಿನಿ ಕೂಡಾ, ಎಲ್ಲದಕ್ಕೂ ಒಳ್ಲೆ ಕಾಂಪ್ಲಿಮೆಂಟ್ ಕೊಡೋ ಅಮ್ಮ, ಮುಗುಳ್ನಗು ತುಂಬಿರೋ ಸ್ಪೂರ್ತಿದಾತೆ. ನಿನ್ನ ಒಡನಾಟ ಎಂದೆಂದೂ ಹೀಗೇ ಇರಲಿ ಅಮ್ಮ.

~ವಿಭಾ ವಿಶ್ವನಾಥ್

ಭಾನುವಾರ, ಜನವರಿ 5, 2020

ಬೀರ ಮತ್ತು ಆ ರಾತ್ರಿ...

ಆ ದಿನ ಮಡಿಕೇರಿಯಲ್ಲಿ ಅಜ್ಜಿ ಮನೆಯಲ್ಲಿ ಬಹಳ ದಿನಗಳ ನಂತರ ನಮ್ಮ ಸಂಬಂಧಿಕರ ಮಕ್ಕಳೆಲ್ಲ ಒಟ್ಟಾಗಿ ಸೇರಿಕೊಂಡಿದ್ದೆವು. ನಮ್ಮಜ್ಜಿ ಕಥೆ ಹೇಳುವುದರಲ್ಲಿ ಎತ್ತಿದ ಕೈ. ಅಲ್ಲದೆ ಕರೆಂಟ್ ಕೂಡ ಕೈಕೊಟ್ಟಿದ್ದರಿಂದ ಅಜ್ಜಿಯನ್ನು ಕಥೆ ಹೇಳಲು ಪೀಡಿಸುತ್ತಾ ಇದ್ದೆವು.
ಆಗ ಅಜ್ಜಿ "ಇಷ್ಟು ದಿನ ಆದ ಮೇಲೆ ಬಂದಿದ್ದೀರ, ಅಲ್ಲದೆ ಇಷ್ಟೊಂದು ಕೇಳಿಕೊಳ್ಳುತ್ತಾ ಇದ್ದೀರ ಅಂದ ಮೇಲೆ ಹೇಳದೆ ಇರುವುದಕ್ಕೆ ಆಗುತ್ತಾ? ಯಾವ ಕಥೆ ಬೇಕು?" ಅಂತಾ ಕೇಳಿದ್ರು. ಎಲ್ಲರೂ ಒಟ್ಟಿಗೆ ದೆವ್ವದಕಥೆ ಬೇಕು ಅಂತಾ ಕಿರುಚಿಕೊಂಡ್ವಿ. ಅದಕ್ಕೆ ಅಜ್ಜಿ, ಕಥೆ ಅಲ್ಲ ಆದರೆ ನಿಜವಾಗಿ ನಡೆದ ಒಂದು ಘಟನೆಯನ್ನೇ ಹೇಳ್ತಿನಿ ಕೇಳಿ ಅಂತಾ ಶುರು ಮಾಡಿದ್ರು.
ಅವತ್ತು ಈಗಿನ ಹಾಗೇ ಒಂದು ಮಳೆಗಾಲ. ಆಗ ನಿಮ್ಮ ತಾತ ಮತ್ತು ಅವರ ಅಣ್ಣ ರಾತ್ರಿ ಮೀನು ಹಿಡಿಯುವುದಕ್ಕೆ ಹೋಗೋಣ ಅಂತಾ ಮಾತಾಡಿಕೊಳ್ತಾ ಇದ್ರು. ಅಷ್ಟರಲ್ಲೇ ನಾವೆಲ್ಲಾ ಇವತ್ತು ಅಮವಾಸ್ಯೆ, ಇವತ್ತು ಬೇಡ, ಇವಾಗ ಬೀರನ ಕಾಟ ಬೇರೆ ಜಾಸ್ತಿ ಆಗ್ತಾ ಇದೆ ಅಂತಾ ಹೇಳಿದ್ವಿ. 'ಗಂಡಸರು ಯಾವಾಗಾದ್ರೂ ನಮ್ಮ ಮಾತು ಕೇಳಿದಾರಾ?' ಬೇಡ ಅಂತಾ ಎಷ್ಟು ಹೇಳಿದ್ರೂ ಕೇಳದೆ ಹೊರಡೋ ತೀರ್ಮಾನಮಾಡಿಯೇ ಬಿಟ್ರು.
ಅಷ್ಟರಲ್ಲಿ ನಾನು "ಬೀರ ಅಂದ್ರೆ ಯಾರು ಅಜ್ಜಿ ?" ಅಂತಾ ಕೇಳಿದೆ.
ಅದಕ್ಕೆ ಅಜ್ಜಿ "ಅದು ಒಂದು ಬೇಕಾದ ಹಾಗೆ ವೇಷ ಧರಿಸುವ ದೆವ್ವ. ಮತ್ತು ಕಚಗುಳಿ ಇಟ್ಟು ಮನುಷ್ಯರನ್ನು ಸಾಯಿಸುತ್ತದೆ, ಅದಕ್ಕೆ ದೇವರು ಮತ್ತು ಕುಂಕುಮ ಅಂದ್ರೆ ಆಗುವುದಿಲ್ಲ." ಅಂತಾ ಹೇಳಿದ್ರು.
ಮುಂದೆ ಏನು ಅಂತಾ ಕೇಳಿದ್ವಿ ಅದಕ್ಕೆ ಅಜ್ಜಿ "ಮುಂದೆ ಊಟ" ಅಂದ್ರು. ನಾವೆಲ್ಲರೂ ಅಚ್ಚರಿಯಿಂದ "ಊಟಾನಾ...?" ಅಂತಾ ರಾಗ ಎಳೆದಿದ್ದಕ್ಕೆ ಅಜ್ಜಿ ನಗುತ್ತಾ ನಗುತ್ತಾ "ಊಟ ಮಾಡಿಕೊಂಡು ಬನ್ರೋಆಮೇಲೆ ಮುಂದಿನ ಕತೆ ಹೇಳ್ತಿನಿ ಅಂತಾ ಹೇಳಿದ್ರು. ಇಲ್ಲಾ ನೀನು ಕತೆ ತಪ್ಪಿಸುತ್ತೀಯ ಈಗಲೇ ಹೇಳು ಅಂತಾ ಗೋಗರೆದಿದ್ದಕ್ಕೆ ಕಥೆಯನ್ನು ಮುಂದುವರಿಸಿದರು.
ಅಂತೂ, ಇಂತೂ ಅವತ್ತು ಸಂಜೆ ಆಯ್ತು. ನಿಮ್ಮ ತಾತ ಮೀನು ಹಿಡಿಯುವುದಕ್ಕೆ ಬುಟ್ಟಿ, ಗಾಳ ಮತ್ತು ಕುಡುಗೋಲು ಹಿಡಿದುಕೊಂಡು ದೇವರ ಪೂಜೆ ಮಾಡಿ ಅವರ ಅಣ್ಣನಿಗೆ ಕಾಯ್ತಾ ಹೊರಟುತುದಿಗಾಲಲ್ಲಿ ನಿಂತಿದ್ರು. ಅಷ್ಟರಲ್ಲಿ ಅವರ ಅಣ್ಣನೂ ಬಂದ್ರು. ಇಬ್ಬರೂ ಹೊರಟ್ರು.ಆಮೇಲೆ ಏನಾಯ್ತು ಅಂತಾ ನಿಮ್ಮ ತಾತ ಹೇಳ್ತಾರೆ ಕೇಳಿ ಅಂದ್ರು.
ಆಮೇಲೆ ತಾತ ಆ ಘಟನೆಯನ್ನು ಹೇಳುವುದಕ್ಕೆ ಶುರು ಮಾಡಿದರು. "ಅವತ್ತು ನಮ್ಮಣ್ಣ ಬಂದು ಬಾಗಿಲಲ್ಲಿ ನಿಂತ. ಆಮೇಲೆ ಇಬ್ಬರೂ ಅಲ್ಲಿಂದ ಹೊರಟೆವು. ನಾನು ಎಷ್ಟೇ ಮಾತಾಡಿದ್ರೂ ಅವನುಮಾತಾನಾಡುತ್ತಲೇ ಇರಲಿಲ್ಲ. ಬರಿ ಹೂಂ, ಹೂಂ ಅಂತಾ ಹೂಂಗುಟ್ತಾ ಇದ್ದ. ನಂಗೆ ಅನುಮಾನ ಬಂದ್ರೂ ಮನೆಯಲ್ಲೇನೋ ಜಗಳ ಮಾಡಿಕೊಂಡು ಬಂದಿರಬೇಕೇನೋ ಅಂತಾ ಸುಮ್ಮನಾದೆ. ಅಷ್ಟರಲ್ಲಿಹೊಳೆ ಸಿಕ್ಕಿತು. ಮೀನು ಹಿಡಿಯೋದಕ್ಕೆ ಅಂತಾ ಎಲ್ಲಾ ತಯಾರಿ ಮಾಡಿಕೊಳ್ಳಬೇಕಾದರೆ ಅವನು ನನ್ನ ಮೇಲೆ ನೀರನ್ನು ಎರಚಲು ಶುರು ಮಾಡಿದ. ನಂಗೇಕೋ ಅನುಮಾನ ಬಂದು ಕುಡುಗೋಲನ್ನು ಅವನಕಡೆ ಎಸೆದು ತಿರುಗಿ ಸಹ ನೋಡದೆ ಓಡಲು ಶುರು ಮಾಡಿದೆ. ಅರ್ಧ ದಾರಿಯಲ್ಲಿ ನನ್ನನ್ನೇ ಹುಡುಕಿಕೊಂಡು ಬರುತ್ತಿದ್ದ, ಅಣ್ಣ ಮತ್ತು ನಿಮ್ಮಜ್ಜಿ ಸಿಕ್ಕಿ ನನ್ನನ್ನು ಬೀರನಿಂದ ಬಚಾವಾಗಿ ಬಂದಿರುವುದು ನಿನ್ನಪುಣ್ಯ ಬಾ ಅಂತಾ ಕರೆದುಕೊಂಡು ಬಂದರು" ಎಂದು ಹೇಳಿದರು.
ನನಗೊಂದು ಅನುಮಾನ ಬಂತು, "ಬೀರ ನಿನ್ನ ಮೇಲೆ ನೀರು ಯಾಕೆ ಎರಚಿತು? ಮತ್ತೆ ದಾರಿಯಲ್ಲೇ ನಿನಗೆ ಕಚಗುಳಿ ಯಾಕೆ ಇಡ್ಲಿಲ್ಲ? ಅಂತಾ ಕೇಳಿಯೇ ಬಿಟ್ಟೆ. ಅದಕ್ಕೆ ತಾತ "ಸಂಜೆ ನಾನು ಇಲ್ಲಿಂದಹೊರಡುವ ಮುಂಚೆ ಪೂಜೆ ಮಾಡಿ ಕುಂಕುಮ ಇಟ್ಟುಕೊಂಡಿದ್ದೆನಲ್ಲ ಅದಕ್ಕೆ ಅದು ನನ್ನಿಂದ ದೂರದಲ್ಲಿತ್ತು ಮತ್ತು ಅದು ನನ್ನನ್ನು ಏನೂ ಮಾಡಲಿಲ್ಲ. ಹೊಳೆಯ ಹತ್ತಿರ ನೀರನ್ನು ಎರಚಿ ನನ್ನ ಕುಂಕುಮವನ್ನು ಅಳಿಸಲು ಪ್ರಯತ್ನ ಮಾಡಿತು. ದೇವರ ದಯೆಯಿಂದ ನಾನು ಬದುಕಿ ಉಳಿದಿದ್ದೇನೆ" ಎಂದರು.
ಅದಾದ ನಂತರ ನನ್ನ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಿದವು. "ದೆವ್ವಗಳು ನಿಜವಾಗಿಯೂ ಇವೆಯಾ? ಹಾಗಾದರೆ ನನಗೆ ಇನ್ನೂ ಏಕೆ ಕಾಣಿಸಿಲ್ಲ? ದೆವ್ವಗಳು ನಮ್ಮ ಭ್ರಮೆ, ಕಲ್ಪನೆಯಲ್ಲಿ ಮಾತ್ರಇರುವುದೇ? ಅಂತಾ ಯೋಚನೆ ಮಾಡುತ್ತಾ ಅವತ್ತು ನಿದ್ದೆ ಮಾಡಿಬಿಟ್ಟೆ. ನನಗೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವ ಸಮಯ ದೂರ ಇರಲಿಲ್ಲ.

ಇದಾದ ಸುಮಾರು ಒಂದು ತಿಂಗಳಿಗೆ ನನ್ನ ಗೆಳೆಯನ ಮದುವೆ ಅಂತಾ ಶಿವಮೊಗ್ಗ ಹತ್ತಿರದ ಒಂದು ಹಳ್ಳಿಗೆ ಹೊರಟಿದ್ದೆ. ಆಗ ಅಮ್ಮ ಬೇಗ ಹೊರಡೋ ಕತ್ತಲಾಗೋ ಹೊತ್ತಿಗೆ ಅಲ್ಲಿಗೆ ಹೋಗು ಅಂತಾ ಹೇಳ್ತಾಇದ್ದರೂ, "ಸುಮ್ನಿರಮ್ಮ ಏನೂ ಆಗಲ್ಲ ನೀನೋ, ನಿನ್ನ ಕಲ್ಪನೆನೋ" ಅಂತ ಹೇಳಿ ಹೊರಟ್ಟಿದ್ದು ಮಧ್ಯಾಹ್ನವೇ. ಬಸ್ಸು ಸಿಕ್ಕಿ ಎಲ್ಲೋ ಮೂಲೆಯಲ್ಲಿರೋ ಆ ಊರಿನ ಹತ್ತಿರಕ್ಕೆ ತಲುಪಿದಾಗ ರಾತ್ರಿ 11.45. ಅಲ್ಲಿಂದ ಇನ್ನೂ 7-8 ಕಿ.ಮೀ ದೂರದಲ್ಲಿರೋ ಹಳ್ಳಿಗೆ ಹೋಗಬೇಕಿತ್ತು. ನನ್ನ ಇನ್ನೊಬ್ಬ ಗೆಳೆಯ ಬೇರೆ ಯಾವುದೂ ಗಾಡಿ ಸಿಗದೆ ಲಗೇಜ್ ಆಟೋ ತೆಗೆದುಕೊಂಡು ಬಂದಿದ್ದ. ಹಾಗೆ ಅಜ್ಜಿ ಹೇಳಿದ ಬೀರನ ಕಥೆಯನ್ನು ಅವನಿಗೆ ಹೇಳಿದ್ದಕ್ಕೆ ನಕ್ಕು ದೆವ್ವ, ಭೂತ ಅಂತಾ ಈ ಕಾಲದಲ್ಲೂ ನಂಬುತ್ತೀಯಾ? ಅಂತ ಗೇಲಿ ಮಾಡಿದ. ಹಾಗೆ ಕೆರೆ ಏರಿ ಮೇಲೆ ಹೋಗ್ತಾ ಇರುವಾಗ ಆಟೋ ಯಾಕೋ ಜಗ್ಗಿದ ಹಾಗೆ ಆಯ್ತು. ತಿರುಗಿ ನೋಡಿದರೆ ಬಿಳಿ ಸೀರೆ ಉಟ್ಟು ಕೂದಲು ಬಿಟ್ಟಿರೋ ಆಕೃತಿ ಉಲ್ಟಾ ತಿರುಗಿ ಕೂತಿದೆ. ನನ್ನ ಗೆಳೆಯನಿಗೆ ಆಗ ಭಯ ಶುರು ಆಯ್ತು. ಇಬ್ಬರಿಗೂ ಏನು ಮಾಡಬೇಕೋ ತೋಚಲಿಲ್ಲ. ಆಗಿದ್ದು ಆಗಲಿ ಅಂತಾ ಅವನು ಆಟೋನಾ ಜೋರಾಗಿ ಓಡಿಸಿದ. ಅಷ್ಟರಲ್ಲಿ ಒಂದು ದಿಬ್ಬ ಸಿಕ್ಕಿತು ಅಂತಾ ಸಡನ್ ಆಗಿ ಬ್ರೇಕ್ ಹಾಕಿದ. ಆಮೇಲೆ ತಿರುಗಿ ನೋಡಿದ್ರೇ ಆ ದೆವ್ವ ಕಾಣಿಸಲೇ ಇಲ್ಲ. ಇಬ್ಬರೂ ಮರುಮಾತನಾಡದೆ "ಬದುಕಿದೆಯಾ ಬಡ ಜೀವವೇ" ಅಂದುಕೊಂಡು ಮನೆ ಸೇರಿದೆವು.

ಮಾರನೇ ದಿನ ನಾವು ಅದರ ಬಗ್ಗೆ ವಿಚಾರಿಸಿದ್ದಕ್ಕೆ ಆ ದೆವ್ವ ಅಲ್ಲಿ ಸುಮಾರು ಜನಕ್ಕೆ ಕಾಣಿಸಿಕೊಂಡಿದೆ, ಆದರೆ ಯಾರಿಗೂ ಏನೂ ತೊಂದರೆ ನೀಡಿಲ್ಲ ಎಂದು ತಿಳಿಯಿತು. ನನ್ನ ಗೆಳೆಯನಂತೂ ಜ್ವರ ಬಂದುಒಂದು ವಾರ ಮೇಲೇಳಲಿಲ್ಲ. ನಾನಂತೂ ದೆವ್ವಗಳು ಕಥೆ,ಕಲ್ಪನೆಗೆ ಮಾತ್ರ ಸೀಮಿತ ಎಂದುಕೊಂಡಿದ್ದವ, ಈ ಘಟನೆಯ ನಂತರ ದೇವರ ಅಸ್ಥಿತ್ವದಂತೆ, ದೆವ್ವದ ಅಸ್ಥಿತ್ವವನ್ನೂ ಸಹ ನಂಬಿದ್ದೇನೆ. ಕೆಲವು ಪೂರ್ವಾಗ್ರಹಪೀಡಿತ ದೆವ್ವಗಳ ಹೊರತು ಒಳ್ಳೆಯ ದೆವ್ವಗಳೂ ಇವೆಯೆಂದು ಭಾವಿಸೋಣ.

ಗುರುವಾರ, ಜನವರಿ 2, 2020

ಋಣಾನುಬಂಧ


ಅಂದು ಶೇಖರನ ತಿಥಿ. ಎಲ್ಲರೂ ತಿಂಡಿ ತಿನ್ನಲು ಕೂರಬೇಕೆಂದುಕೊಳ್ಳುವಷ್ಟರಲ್ಲಿ ಅವನ ಹೆಂಡತಿಯಿಂದ ಜೋರಾದ ಮಾತು ಕೇಳಿಸಿತು. "ಬನ್ನಿ,ಬನ್ನಿ, ತಿಂಡಿ ತಿನ್ನಿ. ಅವರಿದ್ದಿದ್ದರೆ ತಿಂಡಿ ತಿನ್ನಿಸದೆ ಕಳುಹಿಸುತ್ತಾ ಇದ್ರಾ?", "ಇವರು ನಿಂಬೆಹಣ್ಣು ಮಾರ್ತಾರೆ, ಶೇಖರ್ ಗೆ ಇವರಂದ್ರೆ ಅದೇನೋ ಮಮತೆ, ಮಮ್ಮಿ ತರಹಾನೇ ಇದ್ದಾರೆ ಅಂತಾ ಬಂದಾಗಲೆಲ್ಲಾ ಕೂರಿಸಿ, ಮಾತಾಡಿಸಿ ಕಳುಹಿಸುತ್ತಾ ಇದ್ರು."ಅಂತಾ ಎಲ್ಲರಿಗೂ ಕೇಳಿಸುವ ಹಾಗೆ ದೊಡ್ಡ ದ್ವನಿಯಲ್ಲಿ ಮಾತನಾಡಿಸಿ, ಯಾರಿಗೋ ಕೈ ಸನ್ನೆಯಲ್ಲೇ ಕರೆದು ತಿಂಡಿ ಕೊಡು ಅಂತಾ ಹೇಳಿ, ಆ ದೊಡ್ಡ ಬಂಗಲೆಯೊಳಗೆ ಹೋಗಿಬಿಟ್ಟಳು.

ಕಣ್ಣಲ್ಲಿ ನೀರು ತುಂಬಿಕೊಂಡ ವಯಸ್ಸಾದ ಅಜ್ಜಿಯೊಬ್ಬರು ಬಂದು ತಿಂಡಿ ತಿಂದು ಹೊರಡುವುದಕ್ಕೆ ಎದ್ದು ನಿಂತಾಗ, ಹೈ ಸೊಸೈಟಿ ಜನ ಎನ್ನಿಸಿಕೊಂಡವರು ಯಾರೂ, ಅವರನ್ನು ಮಾತಾಡಿಸುವುದಕ್ಕೂ ಮುಂದೆ ಬರದೆ ಅಲ್ಲೇ ನಿಂತು ಅನುಕಂಪದ ದೃಷ್ಟಿಯಿಂದ ನೋಡುವಾಗ, ನನಗೆ ತಡೆಯಲಾಗದೆ , "ಬನ್ನಿ ಅಮ್ಮ, ಒಳಗಡೆ ಬಂದು ಅವರಿಗೆ ಪೂಜೆ ಮಾಡಿ ಹೋಗಿ" ಅಂದಾಗ, ಇಲ್ಲ ತಾಯಿ ಹೊರಡುತ್ತೇನೆ ಎಂದು ಗೇಟಿನ ಹೊರಗೆ ಬಂದು ಅವರ ನಿಂಬೆ ಹಣ್ಣಿನ ಬುಟ್ಟಿಯನ್ನು ಯಾರಾದರೂ ಹೊರಿಸುತ್ತಾರೇನೋ ಅಂತಾ ನೋಡುತ್ತಾ ನಿಂತಿದ್ದಾಗ ಹೋಗಿ ಕೇಳಿದೆ. "ಶೇಖರಾ, ಅಷ್ಟೊಂದು ಪ್ರೀತಿಯಿಂದ ಕರೆದು ತಿಂಡಿ ಕೊಡುತ್ತಾ ಇದ್ದನಂತೆ, ನೀವ್ಯಾಕೆ ಅವನಿಗೆ ಪೂಜೆ ಕೂಡಾ ಮಾಡದೆ ಹೊರಟು ನಿಂತಿದ್ದೀರಾ? ಅದೂ ಒಳಗಡೆಗೂ ಬರದೆ..?" ಅಂದೆ.

ಅದಕ್ಕೆ ಆ ಅಜ್ಜಿ "ನೀವು ಕೂಡಾ ಅವಳ ಮಾತಿಗೆ ಬೆರಗಾಗಿ ಬಿಟ್ರಾ?" ಅಂದ್ರು. ನನಗೆ ಆಶ್ಚರ್ಯ ಆಯ್ತು, ಎಲ್ಲರೂ ಶೇಖರನ ಹೆಂಡತಿಯ ನಾಟಕೀಯ ವರ್ತನೆ ಮತ್ತು ಮಾತುಗಳ ಬಗ್ಗೆ ಹೇಳಿದ್ದರೂ ನನಗೇಕೋ ನಂಬಿಕೆ ಬಂದಿರಲಿಲ್ಲ. ಅದೇಕೋ ಈ ಮುಗ್ದ ಅಜ್ಜಿಯ ಮಾತನ್ನು ಕೇಳುತ್ತಾ ಹೋದಂತೆ ಶೇಖರನ ಮತ್ತು ಅವನ ಹೆಂಡತಿಯ ಮತ್ತೊಂದು ಮುಖ ಪರಿಚಯವಾಗುತ್ತಾ ಹೋಯಿತು.

ನನಗೆ ಅದನ್ನು ಅಜ್ಜಿ ಹೇಳಿದ್ದು ಹೀಗೆ.

"ಆ ಯಪ್ಪಾ ತುಂಬಾ ಒಳ್ಳೆಯವರು, ಆದರೆ ಯಾಕೆ ಇವರನ್ನು ಮದುವೆ ಮಾಡಿಕೊಂಡನೋ ಗೊತ್ತಿಲ್ಲ. ಮನೆ-ಅಳಿಯನ ರೀತಿ ಬದುಕುತ್ತಾ ಇದ್ದ ಇವರಿಗೆ, ಅಮ್ಮನ ಬಗ್ಗೆ ಪ್ರೀತಿ-ಕಾಳಜಿ ಇದ್ದರೂ ಅಮ್ಮನನ್ನು ಕರೆದುಕೊಂಡು ಬಂದು ಇಟ್ಟುಕೊಳ್ಳೋ ಸ್ವಾತಂತ್ರ್ಯ ಕೂಡಾ ಇರಲಿಲ್ಲ. ದುಡಿಯುತ್ತಾ ಇದ್ದದ್ದು ಇವರೇ ಆಗಿದ್ರೂ, ನಿರ್ಧಾರ ಅವಳದ್ದೇ.

ನಾನು ಬಂದಾಗಲೆಲ್ಲಾ 20 ರೂಪಾಯಿಗಳ ನಿಂಬೆಹಣ್ಣು ತೆಗೆದುಕೊಂಡು 50 ರೂಪಾಯಿ ಕೊಡ್ತಾ ಇದ್ರು. ಚಿಲ್ಲರೆ ಇಲ್ಲ ಅಂದ್ರೆ, ಚಿಲ್ಲರೆ ಬೇಡ ಇಟ್ಕೊಳ್ಳಿ ಅಂತಾ ಹೇಳ್ತಾ ಇದ್ರು. ಅವರ ಹೆಂಡತಿಗೆ ಬೀದಿಯಲ್ಲಿ ನನ್ನ ಜೊತೆಯಲ್ಲಿ ವ್ಯಾಪಾರ ಮಾಡುತ್ತಾ ಇದ್ದದ್ದು ಅವರ ದೊಡ್ಡಸ್ತಿಕೆಗೆ ಕುಂದು ಅಂತಾ ಅಂದುಕೊಳ್ತಾ ಇದ್ರು. ಅಷ್ಟೆಲ್ಲಾ ಇದ್ರೂ ನನಗೆ ಹೆಚ್ಚಿಗೆ ದುಡ್ಡು ಕೊಡುತ್ತಾ ಇದ್ದುದ್ದಕ್ಕಾಗಿ ಹಂಗಿಸುತ್ತಾ ಇದ್ರು, ಇವರು ಕೂಡಾ ಆಮೇಲಾಮೇಲೆ ಅದನ್ನು ನೋಡಲೂ ಆಗದೆ, ಆಯಮ್ಮನಿಗೆ ಜೋರು ಮಾಡಲೂ ಆಗದೆ ನಿಂಬೆಹಣ್ಣು ಕೊಂಡು ಅದನ್ನು ಅವರ ಕೈಯಲ್ಲಿ ಒಳಗಿಡುವುದಕ್ಕೆ ಕೊಟ್ಟು ಕಳಿಸಿ,ಆಮೇಲೆ ದುಡ್ಡು ಕೊಡ್ತಾ ಇದ್ರು.

ಕೆಲವೊಮ್ಮೆ ರಗಳೆ ತೆಗೆದು "ಮನೆಯಲ್ಲಿ ನಿಂಬೆಹಣ್ಣು ಇದ್ದಾವೆ, ಸುಮ್ಮನೆ ಯಾಕೆ ತೆಗೆದುಕೊಳ್ಳೂತ್ತೀರಾ?" ಅಂತಾ ತೆಗೆದುಕೊಳ್ಳುವುದಕ್ಕೆ ಬಿಡದೆ ಇರುವಾಗ, "ಅದನ್ನೆಲ್ಲಾ ಜೂಸ್ ಮಾಡಿ ಕೊಡು , ಇವತ್ತೇ ಕುಡಿದು ಖಾಲಿ ಮಾಡುತ್ತೇನೆ, ಈಗ ಸುಮ್ನಿರು" ಅಂದು ನಿಂಬೆಹಣ್ಣು ಕೊಂಡುಕೊಳ್ತಾ ಇದ್ರು.

ಕೆಲವೊಮ್ಮೆ ಇವರ ಮನೆ ಕಡೆ ಬರೋದೇ ಬೇಡ ಅಂದುಕೊಳ್ಳುತ್ತಾ ಇದ್ದರೂ,ಆ ಯಪ್ಪ ಹೇಳಿದ ಮಾತು ಆ ಯೋಚನೆಯನ್ನು ಬಿಡುವ ಹಾಗೆ ಮಾಡಿತು."ಅಮ್ಮನ್ನಂತೂ ಚೆನ್ನಾಗಿ ನೋಡಿಕೊಂಡು,ಅವರ ಜೊತೆ ಮಾತಾಡೋ ಯೋಗ ಇಲ್ಲದ ಹಾಗೆ ಆಯ್ತು. ನೀವು ನಮ್ಮಮ್ಮನ ತರಹಾನೇ ಇದ್ದೀರಾ.. ನೀವೂ ಬರದೇ ಇರಬೇಡಿ" ಅಂತಿದ್ರು.

ಬಂದಾಗಲೆಲ್ಲಾ ತಿಂಡಿ ಕೊಡು ಅಂದ್ರೆ ಮನೆಯಲ್ಲಿ ಮಿಕ್ಕಿದ್ದನ್ನೆಲ್ಲಾ ತಂದು ಕೊಡ್ತಾ ಇದ್ಲು ಆ ಮಹಾತಾಯಿ.ಕೆಲವೊಮ್ಮೆ ಹಳಸಿದ ಪದಾರ್ಥ ಕೂಡಾ ಇರ್ತಾ ಇತ್ತು. ಜೊತೆಗೆ "ಇಷ್ಟು ದೊಡ್ಡ ಮನೆಯ ಅನ್ನ ತಿನ್ನೋಕೂ ಪುಣ್ಯ ಮಾಡಿರಬೇಕು" ಅಂತಾ ಹಂಗಿಸುತ್ತಿದ್ದಳು. ಆ ಮನುಷ್ಯನ ಮನಸ್ಸಿಗೆ ಬೇಜಾರಾಗದೇ ಇರಲಿ ಅಂತಾ ಅದನ್ನು ತೆಗೆದುಕೊಂಡು, "ಈಗಷ್ಟೇ ತಿಂಡಿ ತಿಂದು ಬಂದಿದ್ದೀನಿ,ಆಮೇಲೆ ತಿಂತೀನಿ" ಅಂತಾ ಹೇಳಿ ಹೊರಟು ಬಿಡ್ತಾ ಇದ್ದೆ.

"ಹೊರಗಡೆ ಮಾತಾಡಿದ್ರೇ ಸಹಿಸದವಳು, ಮನೆ ಒಳಗಡೆ ಬಂದ್ರೇ ಸಹಿಸುತ್ತಾಳಾ? ನನ್ನನ್ನು ಕರೆದು ಅಷ್ಟು ಜೋರಾಗಿ ಮಾತನಾಡಿ ತಿಂಡಿ ತಿನ್ನಿ ಅಂದಿದ್ದು ಪ್ರತಿಷ್ಟೆಗೇ ಹೊರತು ಮತ್ತೇನಿಲ್ಲ."

"ಹೆತ್ತ ಮಕ್ಕಳು ನನ್ನನ್ನು ಸಾಕುವುದಕ್ಕೆ ದುಡ್ಡು ಕೇಳ್ತಾರೆ, ಅದನ್ನು ಕೊಟ್ಟರೂ ಪ್ರೀತಿಯಿಂದ ಒಂದು ದಿನವೂ ಮಾತನಾಡಿಸುವುದಿಲ್ಲ.ಅಂತಾದ್ರಲ್ಲಿ ನನ್ನಲ್ಲಿ ಅವರ ಅಮ್ಮನ ರೂಪ ಕಂಡು ಮಾತಾಡಿಸ್ತಾ ಇದ್ದ ಈತ ನಿಜವಾಗಲೂ ಒಳ್ಳೆಯ ಮನುಷ್ಯ" ಅಂತಾ ಹೇಳಿ ಬುಟ್ಟಿ ಹೊರಿಸಿಕೊಂಡು ಹೊರಟೇ ಬಿಟ್ಟರು.

"ಶೇಖರಾ ಯಾರಿಗೂ ಬಿಡಿಗಾಸು ಬಿಚ್ಚೋದಿಲ್ಲ, ಅಮ್ಮ ಸತ್ತಾಗಲೂ 2 ದಿನ ಉಳಿಯದೆ ದೊಡ್ಡಸ್ತಿಕೆ ತೋರಿಸಿ ಹೊರಟ" ಎಂಬ ಸುತ್ತಮುತ್ತಲಿನವರ ಅಪವಾದಗಳಿಗೆ ಕಾರಣ ಸಿಕ್ಕಿತು.

ಮಕ್ಕಳ ದುರಾಸೆಯಿಂದ ಬೀದಿ-ಬೀದಿಯಲ್ಲಿಅಲೆಯುತ್ತಿರುವ ಅಮ್ಮನಿಗೆ ಮಗನಾದ.ಹೆತ್ತ ತಾಯಿಯನ್ನು ನೋಡಿಕೊಳ್ಳಲಾಗದ ಅಸಹಾಯಕತೆಯಲ್ಲಿ ಕೊರಗಿ ತನ್ನದೇ ಮಾರ್ಗದಿಂದ ಒಬ್ಬಳು ಮಮತಾಮಯಿ ತಾಯಿಯನ್ನು ಪಡೆದುಕೊಂಡ. ಮಕ್ಕಳ ಪ್ರೀತಿಗೆ ಹಂಬಲಿಸುತಿದ್ದ ಅಮ್ಮನಿಗೆ ಮಗನ ಪ್ರೀತಿ ಸಿಕ್ಕಿತು. ತಾಯಿಯ ಪ್ರೀತಿಗೆ ಹಂಬಲಿಸುತ್ತಿದ್ದವನಿಗೆ ದೊಡ್ಡಸ್ತಿಕೆಯ ಅಹಂ ಅನ್ನು ತೊರೆದು ಶರಣಾದಾಗ ತಾಯಿಯ ವಾತ್ಸಲ್ಯ ಸಿಕ್ಕಿತು.

ಜನ್ಮ ಮಾತ್ರ ತಾಯಿ-ಮಕ್ಕಳ ಬಂಧವನ್ನು ಬೆಸೆಯುವುದಿಲ್ಲ, ಜೀವನ ಕೂಡಾ ತಾಯಿ-ಮಕ್ಕಳನ್ನು ಹತ್ತಿರ ತಂದು ಯಾವುದೋ ಎಳೆಯಿಂದ ಸೇರಿಸುತ್ತದೆ ಎಂಬ ಸತ್ಯ ದರ್ಶನವನ್ನು ಶೇಖರ ಮಾಡಿಸಿದ್ದ. ಋಣಾನುಬಂಧ ಕೇವಲ ಪಶು, ಪತ್ನಿ, ಮಕ್ಕಳು, ಮನೆಗೆ ಮಾತ್ರವಲ್ಲ. ಮಮತೆಯಿಂದ ಕೂಡಿದ ಇಂತಹಾ ತಾಯಿ ಮಕ್ಕಳ ಸಂಬಂಧವೂ ಋಣಾನುಬಂಧವೇ...

~ವಿಭಾ ವಿಶ್ವನಾಥ್

ಭಾನುವಾರ, ಡಿಸೆಂಬರ್ 29, 2019

ಸೋಷಿಯಲ್ ಸಂಬಂಧ


ಪೃಥ್ವಿಯ ವಾಟ್ಸಾಪ್ ಸ್ಟೇಟಸ್, ಇನ್ ಸ್ಟಾಗ್ರಾಂ,ಫೇಸ್ ಬುಕ್ ಎಲ್ಲವೂ ತಾನು ಅಮ್ಮನಿಗೆ ಅವರ ಹುಟ್ಟುಹಬ್ಬದ ದಿನ ಕೊಡಿಸಿರುವ ಸ್ಮಾರ್ಟ್ ಫೋನ್ ಹಾಗೂ ಅವರಿಗೆ ಅದನ್ನು ಬಳಸಲು ಹೇಳಿಕೊಡುತ್ತಿರುವ ಕುರಿತೇ ಆಗಿದ್ದು, ಹುಟ್ಟುಹಬ್ಬದ ಶುಭಾಶಯಗಳು ಅಮ್ಮ ಎಂಬ ಟ್ಯಾಗ್ ಲೈನ್ ನೊಂದಿಗೆ. ಹೀಗೆ ಹೇಳಿದವನ ಬದುಕಿನ ದೊಡ್ಡ ವಿಪರ್ಯಾಸ ಏನು ಗೊತ್ತಾ? ಅವನು ಅವನ ಅಮ್ಮನಿಗೆ ಹುಟ್ಟುಹಬ್ಬದ ಶುಭಾಷಯ ಹೇಳಿಯೇ ಇರಲಿಲ್ಲ. ಇನ್ನೊಂದು ಸಂಗತಿ ಏನಪ್ಪಾ ಅಂದ್ರೆ ಅಮ್ಮನ ಹುಟ್ಟುಹಬ್ಬ ಅಂದು ಎಂದು ತಿಳಿದದ್ದು ಕೂಡಾ ಜಿ-ಮೇಲ್ ಅಕೌಂಟ್ ಕ್ರಿಯೇಟ್ ಮಾಡಲು ಹೋದಾಗ, ಅಮ್ಮ ಅವರ ಜನ್ಮ ದಿನಾಂಕವನ್ನು ತಿಳಿಸಿದ ಮೇಲೆಯೇ. ತಕ್ಷಣಕ್ಕೆ ಅವನಿಗೆ ನೆನಪಾಗಿದ್ದು ಸಾಮಾಜಿಕ ಜಾಲತಾಣಗಳು ಅರ್ಥಾತ್ ಸೋಶಿಯಲ್ ಮೀಡಿಯಾಗಳು. ತಕ್ಷಣವೇ ಫೋಟೋ ಕ್ಲಿಕ್ ಮಾಡಿ ಅಪ್ಲೋಡ್ ಮಾಡಿ "ಫೀಲಿಂಗ್ ಹ್ಯಾಪಿ ವಿಥ್ ಅಮ್ಮ" ಎಂಬ ಸಾಲನ್ನೂ ಟೈಪಿಸಿ ಹರಿಬಿಟ್ಟದ್ದ. ನಿಮಿಷಗಳಲ್ಲೇ ನೂರಾರು ಲೈಕ್, ಕಾಮೆಂಟ್ ಗಳೂ ಬಂದು ಬಿದ್ದದ್ದೂ ಆಯ್ತು.

ಆದರೆ ಅಮ್ಮನಿಗೆ ಅವತ್ತು ಮೊಬೈಲ್ ತಂದು ಕೊಡಲೂ ಒಂದು ಕಾರಣವಿತ್ತು. ಅವನ ಹೆಂಡತಿಯೂ ಇನ್ನು ಮುಂದೆ ಕೆಲಸಕ್ಕೆ ಹೋಗಲು ತೀರ್ಮಾನ ಮಾಡಿದ್ದರಿಂದ ಮಗುವನ್ನು ಮೈಸೂರಿನಲ್ಲಿದ್ದ ಅಮ್ಮನ ಸುಪರ್ದಿಗೆ ಸೇರಿಸಲು ಬಂದಾಗ, ತನ್ನ ಮಗುವಿನ ಆಟ-ಪಾಠಗಳನ್ನೆಲ್ಲಾ ಫೋಟೋ ತೆಗೆದು, ವೀಡಿಯೋ ಮಾಡಿ ಕಳುಹಿಸಲು ಹೇಳುವ ಕಾರಣಕ್ಕೆ ಅಮ್ಮನಿಗೆ ಸ್ಮಾರ್ಟ್ ಫೋನ್ ತಂದು ಕೊಟ್ಟಿದ್ದ.

ಮಗನ ಉತ್ಸಾಹಕ್ಕೆ ತಣ್ಣೀರೆರಚಲು ಇಷ್ಟಪಡದ ಅಮ್ಮ, ಸ್ಮಾರ್ಟ್ ಫೋನ್ ಬಳಸಲು ಪಟ್ಟು ಹಿಡಿದು ಕುಳಿತೂ ಆಯ್ತು. ಸಂಜೆ ಆಗ್ತಾ ಇರುವಾಗ ಆಮ್ಮ ಬಂದು "ಏ ನೋಡೋ, ವಾಟ್ಸಾಪ್ ಇಂದ ಈ ಫೋಟೋ ಸೆಂಡ್ ಆಗ್ತಾನೇ ಇಲ್ಲ" ಅಂದ್ರು. ಆಗ ಪೃಥ್ವಿ "ಅಯ್ಯೋ ಅಮ್ಮ, ಇಂಟರ್ ನೆಟ್ ಡೇಟಾ ಆನ್ ಮಾಡಿಯೇ ಇಲ್ಲವಲ್ಲ" ಅಂದು ಡೇಟಾ ಆನ್ ಮಾಡಿಕೊಟ್ಟ. ಇನ್ನೊಂದು ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಬಂದ ಅಮ್ಮ "ನೀನು ಆವಾಗ ಏನೋ ಸರಿ ಮಾಡಿ ಕೊಟ್ಟಿದ್ಯಲ್ಲಾ, ಮತ್ತೆ ಮಾಡಿಕೊಡು. ಯಾಕೋ ಮತ್ತೆ ಅದೇತರಾ ಆಗ್ತಾ ಇದೆ" ಅಂದ್ರು.ಸ್ವಲ್ಪ ಸಿಟ್ಟು ಮಾಡಿಕೊಂಡ ಪೃಥ್ವಿ "ಏನಮ್ಮಾ ನಿಂದು, ಒಂದು ಸರಿ ಹೇಳಿದ್ರೆ ಗೊತ್ತಾಗಲ್ವಾ?" ಅಂತಾ ಹೇಳಿ ಸರಿ ಮಾಡಿಕೊಟ್ಟ. ಇನ್ನೊಂದು ಅರ್ಧ ಘಂಟೆ ಬಿಟ್ಟು ಅಮ್ಮ ಮತ್ತೆ ಬಂದು "ಏ ಪೃಥ್ವಿ, ಮರೆತೇ ಹೋಯ್ತು ನೀನು ಆವಾಗ ಹೇಳಿಕೊಟ್ಟಿದ್ದು. ಮತ್ತೆ ಹೇಳಿಕೊಡೋ" ಅಂದ್ರು. ಸಿಡಿಸಿಡಿ ಅಂತಾ ಸಿಟ್ಟು ಮಾಡಿಕೊಂಡ ಪೃಥ್ವಿ "ಎಷ್ಟು ಸಲ ಅಂತಾ ಹೇಳಿಕೊಡಬೇಕು? ಈ ಸಣ್ಣ-ಪುಟ್ಟ ವಿಷಯಗಳನ್ನೂ ನೆನಪಿಟ್ಟುಕೊಂಡು ಕಲಿಯೋಕೆ ಆಗಲ್ವಾ? ಅಷ್ಟೂ ತಿಳುವಳಿಕೆ ಬೇಡ್ವಾ..? " ಅಂತಾ ಹಿಗಾಮುಗ್ಗಾ ಬೈದು ಅಲ್ಲಿಂದ ಧಡಾರಂತಾ ಎದ್ದು ಹೊರಟ. ಇತ್ತ ಅಮ್ಮನ ಕಣ್ಣಲ್ಲಿ ನೀರು ತುಂಬಿತ್ತು. ಅಮ್ಮ ರೂಮಿಗೆ ಹೋಗಿ ಪತ್ರ ಬರೆಯುವುದಕ್ಕೆ ಶುರು ಮಾಡಿದ್ರು.

ಪೃಥ್ವಿ,

ಆಗ ನೀನಿನ್ನೂ ಚಿಕ್ಕ ಹುಡುಗ, ಬಹುಶಃ ನಿನಗೆ ಈ ಘಟನೆ ನೆನಪಿರಲಿಕ್ಕಿಲ್ಲ ಅನ್ಸುತ್ತೆ. ಅವತ್ತು ನಿನಗೆ ಅಕ್ಷರಗಳನ್ನು ತಿದ್ದಿಸುತ್ತಾ, ಅಡುಗೆ ಕೆಲಸಾನೂ ಮಾಡ್ತಾ ಇದ್ದೆ. ಸ್ಲೇಟ್ ಅಲ್ಲಿ 'ಅ' ಮತ್ತು 'ಆ' ಬರೆದು ಒಂದೆರಡು ಬಾರಿ ತಿದ್ದಿಸಿ, ಅಡುಗೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಾ ಇದ್ದೆ. ಆವಾಗ ನೀನು ತಿದ್ದಲು ಹಾಕಿಕೊಟ್ಟದ್ದನ್ನು ಅಳಿಸಿ, ಹೊಸದಾಗಿ ಹೊಸದಾಗಿ ಬರೆಯಲು ಪ್ರಯತ್ನ ಮಾಡುತ್ತಾ, 'ಅ' ಬರೆಯಲು ಶುರುಮಾಡಲು ಗೊತ್ತಾಗದೆ ಬಂದಿದ್ದೆ. ಅವತ್ತು ಹೀಗೀ ಒಂದಲ್ಲಾ, ಎರಡಲ್ಲಾ, ಹತ್ತು ಸಾರಿ ನಡೆಯಿತು. ನನಗೆ ಅವತ್ತು ಕೋಪ ಬರಲಿಲ್ಲ, ಕಿರಿಕಿರಿ ಅನ್ನಿಸಲಿಲ್ಲ. ಬದಲಾಗಿ ನೀನು ಮಾಡುತ್ತಿದ್ದ ಹೊಸ ಪ್ರಯತ್ನ ಕಂಡು ಖುಷಿ ಆಯ್ತು. ನೀನು ಇವತ್ತು ಸಿಡುಕಿದ ಹಾಗೆ ನಾನೂ ನಿನ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದರೆ ಬಹುಶಃ ನೀನಿವತ್ತು ಕೆಲಸಕ್ಕೆ ಹೋಗುವುದು ಸಾಧ್ಯವೇ ಇರ್ತಾ ಇರಲಿಲ್ಲ. ಇರಲಿ ಬಿಡು, ಹಳೆಯದನ್ನೆಲ್ಲಾ ಇವಾಗ ನೆನಪು ಮಾಡಿಕೊಂಡು ಪ್ರಯೋಜನ ಆದ್ರೂ ಏನು?

ಇನ್ನೊಂದು ಮಾತು, ಇಂಟರ್ನೆಟ್ ನಿಂದ ಇವತ್ತು ಪ್ರಪಂಚ ತುಂಬಿಹೋಗಿದೆ. ಅಪರಿಚಿತರೂ ಪರಿಚಿತವಾಗುವ ಹೊತ್ತು, ಆದರೆ.. ಪರಿಚಿತರ ಸಂಬಂಧದ ಸಂಕೋಲೆಯ ಕೊಂಡಿ ಸವೆಯುತ್ತಾ ಬರ್ತಾ ಇದೆ.

ನಿನ್ನ ವಾಟ್ಸಾಪ್, ಫೇಸ್ ಬುಕ್ ಗಳಿಗೋಸ್ಕರ ನೀನು ನನ್ನ ಜೊತೆ ತೆಗೆದುಕೊಂಡ ಸೆಲ್ಫಿ ಮತ್ತು ಫೋಟೋಗಳು ನನ್ನನ್ನು ಖುಷಿಪಡಿಸಲಿಲ್ಲ. ಬದಲಿಗೆ ಬೇಜಾರು ಮಾಡಿದವು. ಯಾಕೆ ಗೊತ್ತಾ? ನನ್ನ ಹುಟ್ಟುಹಬ್ಬಕ್ಕೆ ನೀನು ವಿಷ್ ಮಾಡಲಿಲ್ಲ ಅಂತಾ ಅಲ್ಲ. ತೋರಿಕೆಯ ಪ್ರಪಂಚಕ್ಕೋಸ್ಕರ ಕೃತಕ ನಗುವನ್ನು ಮುಖದ ಮೇಲೆ ತಂದುಕೊಂಡು ನಿನ್ನ ಅಮ್ಮನ ಜೊತೆಗೇ ನಟಿಸಿದ್ದಕ್ಕೋಸ್ಕರ. ಹುಟ್ಟುಹಬ್ಬ ಬರುತ್ತೆ, ಹೋಗುತ್ತೆ.. ಅದರಲ್ಲೇನಿದೆ ವಿಶೇಷ..? ಆದರೆ ಎಷ್ಟು ಜನರ ಹುಟ್ಟುಹಬ್ಬ ನಿನಗೆ ನೆನಪಿರುತ್ತೆ..? ಫೇಸ್ ಬುಕ್ ನೋಟಿಫಿಕೇಶನ್ ಇಂದ ಅಥವಾ ವಾಟ್ಸಾಪ್ ಗ್ರೂಪ್ ಅಲ್ಲಿ ಬೇರೆ ಯಾರೋ ಹಾಕಿರೋ ಮೆಸೇಜ್ ಇಂದ ಅವರ ಹುಟ್ಟುಹಬ್ಬ ಅಂತಾ ನೆನಪಾಗುತ್ತೆ(ಅಲ್ಲಲ್ಲಾ, ಗೊತ್ತಾಗುತ್ತೆ..!). ಆಮೇಲೆ ಕುರಿಮಂದೆಯ ತರಹಾ ನಾ ಮುಂದೆ, ತಾ ಮುಂದೆ ಅಂತಾ ವಿಷ್ ಮಾಡೋದಕ್ಕೆ ಶುರು ಮಾಡ್ತೀರಾ.

ಇಷ್ಟು ದಿನ ನಾನು ಸ್ಮಾರ್ಟ್ ಫೋನ್ ಕೊಂಡುಕೊಳ್ಳದೇ ಇದ್ದದ್ದು ಹಣ ಇಲ್ಲ ಅಥವಾ ಇಂಟರ್ನೆಟ್ ಬಳಸೋಕೆ ಬರಲ್ಲಾ ಅಂತಾ ಅಲ್ಲ. ಜೀವನದ ಪಾಠವನ್ನೇ ಕಲಿತು ಅರಗಿಸಿಕೊಂಡವರಿಗೆ ಇಂಟರ್ ನೆಟ್ ನ ಪಾಠ ಒಂದು ಲೆಕ್ಕವೇ? ನಾನು ಅದರ ಅವಶ್ಯಕತೆ ಇಲ್ಲದೆಯೂ ಸುಖವಾಗಿ ಬದುಕಿರಬಲ್ಲೆ ಎಂಬ ಕಾರಣಕ್ಕೆ ಅದನ್ನು ಉಪಯೋಗಿಸುತ್ತಾ ಇರಲಿಲ್ಲ ಅಷ್ಟೇ.. ಅಲ್ಲದೇ, ನಾನೇ ನೋಡಿದ ಎಷ್ಟೋ ಮಂದಿ ಹೀಗೇ ಸೋಶಿಯಲ್ ಮೀಡಿಯಾ ಚಟಕ್ಕೆ ಬಿದ್ದು, ಯಾರೋ.., ಎಲ್ಲೋ ಹಾಕಿದ ತೋರಿಕೆಯ ಪ್ರಪಂಚದ ಪೋಸ್ಟ್ ಗಳಿಗೆ ಲೈಕ್ ಒತ್ತಿ, ತಮ್ಮ ಜೀವನದಲ್ಲಿ ಇವೆಲ್ಲಾ ಇಲ್ಲವಲ್ಲಾ ಅಂತಾ ಕೊರಗುತ್ತಾ ತಮ್ಮ ಲೈಫ್ ನ ಖಿನ್ನತೆಯ ಬಟನ್ ಅನ್ನು ಕೂಡಾ ಒತ್ತಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮೊದಲಿಗಿಂತ ಒಂದು ಲೈಕ್ ಕಡಿಮೆ ಆದರೂ, ಯಾಕಿರಬಹುದು ಅಂತಾ ಚಿಂತಿಸುತ್ತಾ ಕೊರಗುತ್ತಾ ಸೊರಗುತ್ತಿದ್ದಾರೆ.


ನಿನ್ನ ಮಗುವಿನ ಆಟ-ಪಾಠಗಳನ್ನು ವಾಟ್ಸಾಪ್ ಫೋಟೋ ಮತ್ತು ವೀಡಿಯೋಗಳಿಂದ ಕಣ್ತುಂಬಿಸಿಕೊಳ್ಳಬೇಡ. ನಿನ್ನ ಮಗುವಿನ ಆಟ-ಪಾಠಗಳನ್ನು ಕಣ್ತುಂಬಿಸಿಕೊಳ್ಳಲು ದಿನಾ ಅದರ ಜೊತೆಸ್ವಲ್ಪ ಸಮಯ ಕಳಿ. ಇಲ್ಲವಾದರೆ ನಿನ್ನ ಮಗುವನ್ನೂ ಅಂತರ್ಜಾಲದಲ್ಲೇ ಜಾಲಾಡುವ ಪರಿಸ್ಥಿತಿ ಬರಬಹುದು.ಯಾಕಂದ್ರೇ ಅವರು ನಿನ್ನ ಮುಂದಿನ ಪೀಳಿಗೆ ಅಲ್ವಾ? ನಿನಗಿಂತ ಮುಂದಿರುತ್ತಾರೆ. ಅಂದ ಹಾಗೆ ಕೊನೆ ಮಾತು.. ಅಂತರ್ಜಾಲದ ಕುರಿತು ನನಗೇನೂ ಬೇಸರ ಇಲ್ಲ. ಉಪಯೋಗ ಇದೆ, ಆದರೆ ಅದನ್ನು ಅರ್ಥ ಮಾಡಿಕೊಂಡು ಬಳಸಬೇಕು ಅಷ್ಟೇ. ಆಮೇಲೆ ಈ ಸ್ಮಾರ್ಟ್ಫೋನ್ ಕೂಡಾ ಬೇಡ. ಯಾಕಂದ್ರೆ ಈಗಾಗಲೇ ಇನ್ನೂ ಚೆನ್ನಾರುವ ಫೀಚರ್ ಇರುವ ಸ್ಮಾರ್ಟ್ ಫೋನ್ ತೆಗೆದುಕೊಳ್ಳುವೆ, ಇನ್ನು ಮುಂದೆ ಪತ್ರ ಬರೆಯುವ ಅವಶ್ಯಕತೆ ಇರಲ್ಲ ಅನ್ಸುತ್ತೆ. ಯಾಕಂದ್ರೆ.. ಹೇಗೂ ಇಂಟರ್ ನೆಟ್ ಇದ್ದೇ ಇರುತ್ತೆ. ಅಲ್ವಾ? ವಾಟ್ಸಾಪ್ ಮಾಡ್ತೀನಿ.

ಇಂತಿ
ನಿನ್ನ ಅಮ್ಮ

ಅಮ್ಮನ ಪತ್ರ ಮತ್ತು ಮೊಬೈಲ್ ಎರಡೂ ಬೆಳಿಗ್ಗೆ ಟೀಪಾಯ್ ಮೇಲಿತ್ತು. ಅದನ್ನು ಓದಿ ಅಮ್ಮನನ್ನು ಕ್ಷಮೆ ಕೇಳಲು ಹೊರಟ ಪೃಥ್ವಿಗೆ ಅಮ್ಮ ಕಾಣಿಸಲಿಲ್ಲ. ಮನೆಯಲ್ಲಿ ಇದ್ದರಲ್ಲವೇ? ಅಮ್ಮ ಕಾಣಿಸುವುದು...

ಗಾಬರಿಯಿಂದ ಪೃಥ್ವಿ ಹುಡುಕಲು ಶುರು ಮಾಡುವ ಹೊತ್ತಿಗೆ ಅಮ್ಮ ವಾಟ್ಸಾಪ್ ಗೆ ವೀಡಿಯೋ ಕಾಲ್ ಮಾಡಿದ್ರು .. ಅದನ್ನು ರಿಸೀವ್ ಮಾಡುವ ಹೊತ್ತಿಗೆ, ಅವನ ಮಗು ಅವನ ಕಿರುಬೆರಳಿಡಿದು ಜಗ್ಗುತ್ತಾ ಟಿ.ವಿ ಯಲ್ಲಿ ಬರುತ್ತಾ ಇರುವ ಸ್ಮಾರ್ಟ್ ಫೋನ್ ನ ಜಾಹೀರಾತಿನ ಕಡೆ ನೋಡುತ್ತಾ ಇತ್ತು.

-ವಿಭಾ ವಿಶ್ವನಾಥ್

ಗುರುವಾರ, ಡಿಸೆಂಬರ್ 26, 2019

ಪ್ರೀತಿ ಹೀಗೇನಾ?

ಶುಭ ಮಾಧವನಿಗೆ ತನ್ನ ಪ್ರೀತಿಯನ್ನು ತಿಳಿಸಿದರೂ ಮಾಧವ ನಿರಾಕರಿಸುತ್ತಾನೆ. ಮಾಧವನಿಗೆ ಶುಭ ಇಷ್ಟವಿಲ್ಲ ಎಂದೇನೂ ಅಲ್ಲ ನಂತರ ಮಾಧವ ಮತ್ತು ಶುಭಾಳ ನಡುವಿನ ಸಂಭಾಷಣೆ ಹೀಗೆ ಸಾಗುತ್ತದೆ.

"ಯಾಕೆ ನಿನಗೆ ನಾನು ಇಷ್ಟ ಇಲ್ಲ?" ಎಂದು ಶುಭ ಪ್ರಶ್ನಿಸಿದಾಗ ಮಾಧವ ಹೇಳುತ್ತಾನೆ. "ನೀನು ಇಷ್ಟ ಇಲ್ಲ ಎಂದೇನೂ ಅಲ್ಲ, ನಿನ್ನ ಮೇಲೆ ಪ್ರೀತಿ ಇಲ್ಲ ಎಂತಲೂ ಅಲ್ಲ. ನನಗೆ ನನ್ನದೇ ಆದ ನೂರಾರು ಸಮಸ್ಯೆಗಳಿವೆ. ಅದರೊಡನೆ ನಿನ್ನ ಜವಾಬ್ದಾರಿಯೂ ಸೇರಿದರೆ ನಿಭಾಯಿಸಲು ಕಷ್ಟವಾಗುತ್ತದೆ."

"ಪ್ರೀತಿ ಜವಾಬ್ದಾರಿಯಲ್ಲ, ಪ್ರೀತಿ ಬಂಧನವೂ ಅಲ್ಲ, ಅದೊಂದು ಸಹಜ ಸಂಬಂಧ ಅಷ್ಟೇ, ಜವಾಬ್ದಾರಿಯೆಂದ ಒಡನೆ ಹೆದರಿ ಓಡುವ ಹೇಡಿಯನ್ನು ನಾನು ಪ್ರೀತಿಸಿದ್ದೆನೇ ಎಂಬುದೇ ನನಗೆ ಅಚ್ಚರಿಯಾಗುತ್ತಿದೆ. ಆದರೆ ಜ್ಞಾನೋದಯವಾಗಲು ಹೆಚ್ಚು ಸಮಯ ಹಿಡಿದಿಲ್ಲ ಎನ್ನುವುದೇ ನನಗೆ ಸಂತೋಷದ ವಿಷಯ. ಇದು ನನ್ನ ಬದುಕಿನಲ್ಲಿ ಒಂದು ಮುಗಿದ ಅಧ್ಯಾಯವೇ ಸರಿ ಇನ್ನೆಂದೂ ನಾನು ನಿನಗೆ ತೊಂದರೆ ನೀಡುವುದಿಲ್ಲ. ನಮ್ಮ ಬದುಕಿನ ಹಾದಿಗಳು ಇಲ್ಲಿ ಕವಲೊಡೆದಿವೆ, ಸದ್ಯಕ್ಕೆ ಅಲ್ಲಲ್ಲ ಇನ್ನು ಮುಂದೆ ಬೇರೆ ಬೇರೆಯಾಗಿ ಬದುಕುವುದೇ ವಿಧಿಬರಹ ಎನ್ನಿಸುತ್ತದೆ. ಆದರೆ ನೆನಪಿನಲ್ಲಿಟ್ಟುಕೋ ನನ್ನ ಪ್ರೀತಿ ಸುಳ್ಳಲ್ಲ, ನೀನು ನನ್ನನ್ನು ಪ್ರೀತಿಸಿದ್ದೂ ಸುಳ್ಳಲ್ಲ ಇದು ನಿಜವೇ ಆಗಿದ್ದರೆ ಸೇರೋಣ. ಗುಡ್ ಬೈ" ಎಂದು ಹೇಳಿದ ಶುಭ ಹಿಂದಿರುಗಿ ನೋಡದಂತೆ ಹೊರಟುಬಿಡುತ್ತಾಳೆ.

ಆಕೆ ಹಿಂತಿರುಗಿ ನೋಡಲೇ ಇಲ್ಲ, ಆದರೆ ಮಾಧವ ತನ್ನ ಬದುಕನ್ನೊಮ್ಮೆ ಸಿಂಹಾವಲೋಕನ ಕ್ರಮದಲ್ಲಿ ನೆನಪಿಸಿಕೊಂಡ.

ರಾಘವ ಅಯ್ಯರ್, ಮಾಧವ ಅಯ್ಯರ್ ಇಬ್ಬರೂ ಯಮುನಾ ಮತ್ತು ಶಂಕರ್ ಅಯ್ಯರ್ ಅವರ ಇಬ್ಬರು ಗಂಡು ಮಕ್ಕಳು, ಇವರೆಲ್ಲರ ಮುದ್ದಿನ ಕಣ್ಮಣಿ ಮನೆಮಗಳು ಭೂಮಿ. ರಾಘವ ಮತ್ತು ಮಾಧವರ ಮುದ್ದಿನ ತಂಗಿ ಭೂಮಿ. ಹೆಚ್ಚು ಮಾತಾಡುವ ಮಾಧವನಿಗೂ, ಏಕಾಂತವನ್ನೇ ಇಷ್ಟಪಡುವ ರಾಘವನಿಗೂ ಭೂಮಿ ಅಚ್ಚುಮೆಚ್ಚು. ಎಲ್ಲರ ಗುಟ್ಟೂ ಗೊತ್ತಿರುವ ಭೂಮಿ ಸಹನಾಶೀಲೆ ಅಲ್ಲದೆ ಬುದ್ದಿವಂತೆ ಸಹಾ.

ಹೆಚ್ಚಿನ ಗೆಳೆಯರಿದ್ದರೂ ಮಾಧವ ತನ್ನ ಮನದ ಮಾತುಗಳನ್ನೆಲ್ಲಾ ಹಂಚಿಕೊಳ್ಳುವದು ಭೂಮಿಯಲ್ಲಿಯೇ. ಮಾಧವ ಮತ್ತು ರಾಘವರ ವಯಸ್ಸಿನ ಅಂತರ ಕಡಿಮೆ ಇದ್ದರೂ ಅಣ್ಣನೊಂದಿಗೆ ಮಾಧವನ ಒಡನಾಟ ಕಡಿಮೆಯೇ, ಹೆಚ್ಚು ಕಡಿಮೆ ಇಲ್ಲವೆಂದರೂ ತಪ್ಪಿಲ್ಲ. ತನ್ನ ಗೆಳೆಯ-ಗೆಳತಿಯರು, ಆಟ, ಶಾಲೆ, ಪ್ರವಾಸ ಹೋದ ಕ್ಷಣಗಳನ್ನು ಹಂಚಿಕೊಳ್ಳುವಷ್ಟು ನಿರ್ಭೀತಿಯಿಂದಲೇ ತನ್ನ ಪ್ರೀತಿ, ಪ್ರೀತಿಸುವ ಹುಡುಗಿಯ ಕುರಿತು ಹೇಳುತ್ತಿದ್ದ ಭೂಮಿಗೆ.

ರಾಘವ ಬಹಳ ಬುದ್ದಿವಂತ, ಸಹಜವಾಗಿಯೇ ಮಾಧವನ ಓದಿನ ಮೇಲೆಯೂ ಸಹಾ ಅಷ್ಟೇ ನಿರೀಕ್ಷೆಗಳಿದ್ದವು ಆದರೆ ಮಾಧವನಿಗೆ ಆಟ, ಗೆಳೆಯರು, ಪರೋಪಕಾರದಲ್ಲಿಯೇ ಒಲವು ಹೆಚ್ಚು. ಇಬ್ಬರ ವಯಸ್ಸಿನ ಅಂತರ 3 ವರ್ಷಗಳೇ ಆದರೂ ಅವರಿಬ್ಬರ ಒಡನಾಟದ ಮೇಲೆ ಯಾವ
ಪ್ರಭಾವವನ್ನೂ ಬೀರಿರಲಿಲ್ಲ, ಆದರೆ ತನ್ನಣ್ಣನಿಂದಾಗಿ ತನ್ನ ಮೇಲೆ ಪ್ರಭಾವವಿರುವುದು ಅವನನ್ನು ಪ್ರತಿಯೊಂದರಲ್ಲೂ ಯೋಚಿಸಿ ಹೆಜ್ಜೆ ಇಡುವಂತೆ ಮಾಡಿತ್ತು. ಹೀಗಿರುವಾಗ ಅಣ್ಣ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಅನ್ನು ಆಯ್ಕೆ ಮಾಡಿದ್ದರಿಂದ ಮನೆಯವರ ಆಯ್ಕೆಯ ಮೇರೆಗೆ ತಾನೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಗೆ ಸೇರುತ್ತಾನೆ.

ಮೊದಲನೇ ವರ್ಷ ಎಲ್ಲರಿಗೂ ಕಾಮನ್ ಸಬ್ಜೆಕ್ಟ್, ಆದುದರಿಂದ ಮೊದಲ ವರ್ಷದಲ್ಲಿ ಎಲ್ಲರೂ ಇರುತ್ತಾರೆ. ಎರಡನೇ ವರ್ಷದ ಬ್ರಾಂಚ್ ಎಂಟ್ರಿಯಲ್ಲಿ ಬರೀ ಸಿ.ಎಸ್ ವಿದ್ಯಾರ್ಥಿಗಳು ಒಂದಾಗುತ್ತಾರೆ, ಮೂರನೇ ಸೆಮ್ ಬಳಿಕವಂತೂ ಎಲ್ಲರಿಗೂ ಎಲ್ಲರೂ ಪರಿಚಿತರಾಗುತ್ತಾರೆ. ಅವರ ತರಗತಿಯಲ್ಲಿ ಲಕ್ಷ್ಮಿ ಪಾಟೀಲ್ ಹೆಚ್ಚು ಅಂಕ ಗಳಿಸುವ ಹುಡುಗಿ. ಲಕ್ಷ್ಮಿಯ ನಂತರದ ರಿಜಿಸ್ಟರ್ ನಂಬರ್ ಮಾಧವನದ್ದು. ಪರೀಕ್ಷೆಗಳಲ್ಲೆಲ್ಲಾ ಲಕ್ಷ್ಮಿಯ ಹಿಂದೆಯೇ ಮಾಧವನ ಸ್ಥಾನ. ಆದರೆ ರ್ಯಾಂಕ್ ನಲ್ಲಿ ಲಕ್ಷ್ಮಿಯದ್ದು ಮೊದಲಾದರೆ, ಮಾಧವನದ್ದು ಕೊನೆಯಿಂದ ಮೊದಲು.

ಮಾಧವನಿಗೆ ಗೆಳೆಯರ ಬಳಗ ಹೆಚ್ಚು. ಕಲ್ಲನ್ನು ಬೇಕಾದರೂ ಮಾತನಾಡಿಸುವ ಛಾತಿ ಮಾಧವನಿಗೆ ಇತ್ತು. ಕಾಲೇಜಿನ ವಾಚ್ ಮ್ಯಾನ್ ನಿಂದ ಹಿಡಿದು ಹೆಚ್.ಓ.ಡಿ ವರೆಗೂ ಎಲ್ಲರಿಗೂ ಆತ ಚಿರಪರಿಚಿತ. ಲಕ್ಷ್ಮಿಯದ್ದು ತಾನಾಯಿತು, ತನ್ನ ಓದಾಯಿತು ಎನ್ನುವ ಸ್ವಭಾವ, ತಾನಾಗಿಯೇ ಹೆಚ್ಚು ಯಾರನ್ನೂ ಮಾತನಾಡಿಸದ ಆಕೆಗೆ ಹೆಚ್ಚು ಗೆಳೆಯರಿರಲಿಲ್ಲ. ಅಲ್ಲದೇ ತಾನು ಚೆನ್ನಾಗಿಲ್ಲವೆಂಬ ಕೀಳಿರಿಮೆಯೂ ಅವಳಿಗಿತ್ತು. ಆಕೆ ಸ್ವಲ್ಪ ಹೆಚ್ಚೆನ್ನಿಸುವಷ್ಟೇ ದಪ್ಪವಿದ್ದ ಕಾರಣ ಆಕೆಗೆ ಗುಂಪಿನಲ್ಲಿ ಬೆರೆಯಲು ಹಿಂಜರಿಕೆ. ಮಾಧವ ಎಲ್ಲವನ್ನೂ ಗಮನಿಸುತ್ತಿದ್ದ. ಅವನಿಗೆ ಸುಮ್ಮನಿರಲು ಆಗದೆ ಆಕೆಯನ್ನು ಮಾತನಾಡಿಸಲು ಯತ್ನಿಸಿ ಸಫಲನಾಗಿದ್ದ. ನೋಡಲು ಚೆನ್ನಾಗಿದ್ದರೂ ಕೊಂಚ ದಪ್ಪವಾಗಿದ್ದ ಅವಳನ್ನು ಸ್ನೇಹ ಮಾಡಲು ಮಾಧವನಿಗೆ ಯಾವ ಹಿಂಜರಿಕೆಯೂ ಇರಲಿಲ್ಲ. ಅಲ್ಲದೇ ಸ್ನೇಹ ನೋಟ, ಜಾತಿಗಳ ಆಧಾರದ ಮೇಲೆ ನಿರ್ಧಾರವಾಗುವುದೂ ಇಲ್ಲವಲ್ಲ. ನಂಬರ್, ನೋಟ್ಸ್ ಗಳ ಬದಲಾವಣೆಯಿಂದ ಆರಂಭವಾದ ಸ್ನೇಹವು ಲಕ್ಷ್ಮಿಯ ಮನದಲ್ಲಿ ಅನುರಾಗದ ಅಲೆಯನ್ನು ಬೀಸಿತ್ತು. ಇದರಿಂದ ಅವಳೂ ಕಾಲಕ್ರಮೇಣ
ಬದಲಾಗುತ್ತಲಿದ್ದಳು. ಮಾಧವನ ಸ್ನೇಹದಿಂದ ಅವಳೂ ಆತ್ಮಸ್ಥೈರ್ಯ ತುಂಬಿಕೊಂಡು ಬದಲಾದಳು. ಆದರೂ ಓದಿನಲ್ಲಿ ಮೊದಲ ಸ್ಥಾನವನ್ನು ಬಿಟ್ಟುಕೊಡಲಿಲ್ಲ. ನಾಲ್ಕನೇ ಸೆಮ್ ನ ಅಂತ್ಯದಿಂದ ಆರಂಭವಾದ ಪ್ರೀತಿಯು ಹೆಮ್ಮರವಾಗಿ ಬೆಳೆದಿತ್ತು. ಆದರೆ ಮಾಧವನಿಗೆ ಪ್ರೀತಿಯಿದ್ದರೂ ಆತ ಅದನ್ನು ತೋರ್ಪಡಿಸಿಕೊಳ್ಳಲಿಲ್ಲ, ಕೊನೆಯ ವರ್ಷದಲ್ಲಿ ಆಕೆಯೇ ಮಾಧವನಿಗೆ ತನ್ನ ಪ್ರೀತಿಯನ್ನು ನಿವೇದಿಸಿದಳು. ಆದರೆ ಮಾಧವ ನಯವಾಗಿಯೇ ಆಕೆಯ ಮನವಿಯನ್ನು ತಿರಸ್ಕರಿದ್ದ.

ಪ್ರೀತಿ ಒಂದುಗೂಡಲು ಎಲ್ಲವೂ ಸಹಕಾರಿಯಾಗಿಬೇಕು ಆದರೆ ಇಲ್ಲಿ ವ್ಯತಿರಿಕ್ತವಾಗಿತ್ತು. ಮಾಧವ ತನ್ನ ಪ್ರೀತಿಯನ್ನು ಮುಚ್ಚಿಟ್ಟು ಅವಳ ಪ್ರೀತಿಯನ್ನೂ ತಿರಸ್ಕರಿಸಲು ಕಾರಣ ಅವಳ ದಪ್ಪವೂ ಆಗಿರಲಿಲ್ಲ, ಇಬ್ಬರ ಜಾತಿ ಬೇರೆಯಾದರೂ ಜಾತಿಯೂ ಅದಕ್ಕೆ ಕಾರಣವಾಗಿರಲಿಲ್ಲ. ತಿರಸ್ಕರಿಸಲು ಮಾಧವನಿಗೆ ಅವನದ್ದೇ ಆದ ಕಾರಣವೊಂದಿತ್ತು, ಯಾರಿಗೂ ತಿಳಿಸಲಾರದ ನೋವೊಂದಿತ್ತು, ಆದರೂ ಅವನ ನಿರ್ಧಾರವೂ ಅಷ್ಟೇ ಧೃಡವಾಗಿತ್ತು. "ನಿನ್ನ ಜೀವನದುದ್ದಕ್ಕೂ ನಾನೊಬ್ಬ ಒಳ್ಳೆಯ ಗೆಳೆಯನಾಗಿರಬಲ್ಲೆ" ಎಂದಷ್ಟೇ ಹೇಳಿ ಅಲ್ಲಿಂದ ಹೊರಟಿದ್ದ.

ಅಂದು ಭೂಮಿಯ ಬಳಿ ಅದೆಲ್ಲವನ್ನೂ ಹೇಳಿ ಬೇಸರಿಸಿಕೊಂಡಿದ್ದ. ಅಲ್ಲದೇ ಅವಳಿಗೂ ಆ ಕಾರಣದ ಅರಿವು ಇದ್ದುದರಿಂದ ಅವಳೂ ಇಲ್ಲಿ ನಿಸ್ಸಹಾಯಕಳು. ಕಾಲ ಎಲ್ಲವನ್ನೂ ಬದಲಾಯಿಸುತ್ತದೆ. ಹಾಗೆಯೇ ಮಾಧವ ಮತ್ತು ಲಕ್ಷ್ಮಿಯ ಜೀವನ ಪಥಗಳೂ ಬದಲಾದವು.

ಮಾಧವ ಅಣ್ಣನ ಸ್ಟಾರ್ಟಪ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರೆ, ಲಕ್ಷ್ಮಿಗೆ ಕೆಲದಿನಗಳ ನಂತರ ಎಂ.ಎನ್.ಸಿ ಯಲ್ಲಿ ಒಳ್ಳೆಯ ಸಂಬಳದ ಕೆಲಸವೇ ಸಿಕ್ಕಿತ್ತು. ನಿರಾಕರಣೆಯಾದ ಪ್ರೇಮದ ಫಲವೋ, ಬೆಂಗಳೂರಿನ ಜೀವನ ಶೈಲಿಯೋ ಲಕ್ಷ್ಮಿ ಸಂಪೂರ್ಣವಾಗಿ ಬದಲಾಗಿದ್ದಳು. ಕನಿಷ್ಟ ತನ್ನ ಗೆಳೆಯ-ಗೆಳತಿಯರೊಂದಿಗೆ ಮಾತನಾಡಲೂ ಸಮಯ ನೀಡಲಿಲ್ಲ. ಎಲ್ಲವನ್ನೂ,ಎಲ್ಲರನ್ನೂ ನಿರ್ಲಕ್ಷಿಸಿದ್ದಳು. ಮಾಧವ ಕೂಡಾ ಇದರಿಂದ ಸಂಪೂರ್ಣವಾಗಿ ನೊಂದಿದ್ದ. ಇದರಿಂದ ಹೊರಬರಲು ಕೆಲದಿನ ರಜೆ ಹಾಕಿ ಆತ ತನ್ನ ಆತ್ಮೀಯ ಗೆಳೆಯ ಶಶಾಂಕ್ ಊರಿಗೆ ಹೊರಟ.

ಶಶಾಂಕ್ ಮಾಧವನ ಇಂಜಿನಿಯರಿಂಗ್ ನ ಗೆಳೆಯ. ಮೂಡಿಗೆರೆಯಲ್ಲಿದ್ದ ಶಶಾಂಕ್ ಮನೆಗೆ ಮಾಧವ ಹೋಗಿದ್ದ. ಸ್ನೇಹ , ಪ್ರೀತಿಯ ಮೋಡಿಯಿಂದ ಹೊರಬರಬೇಕೆಂದುಕೊಂಡಿದ್ದವನು ಪ್ರೀತಿಯ ಬಲೆಗೆ ಸಿಲುಕಿದ್ದ. ಶಶಾಂಕ್ ತನ್ನ ತಂಗಿ ಶುಭಾಳಿಗೆ ಮಾಧವನ ಕುರಿತು ಎಲ್ಲವನ್ನೂ ಹೇಳಿರುತ್ತಾನೆ. ಶುಭಾಳಿಗೆ ಅವನನ್ನು ನೋಡದೆಯೇ ಅವನ ಕುರಿತು ಒಲವು ಮೂಡಿರುತ್ತದೆ. ಇತ್ತ ಶುಭಾಳ ನಡತೆ ಮತ್ತು ಉಪಚಾರಕ್ಕೆ ಮನಸೋತಿದ್ದ ಮಾಧವ. ಶಶಾಂಕ್ ಗೆ ಇದೆಲ್ಲದರ ಅರಿವಿದ್ದರೂ ಅವನು ಇದಕ್ಕೆ ಅಡ್ಡಿಪಡಿಸುವುದಿಲ್ಲ. ಒಂದು ತಿಂಗಳಿದ್ದರೂ ಇಬ್ಬರೂ ಇದರ ಕುರಿತು ಮಾತನಾಡಿರುವುದಿಲ್ಲ. ಇವನು ಊರಿಗೆ ಹೊರಟ ಕೊನೆಯ ದಿನ ಶುಭಾಳೇ ತನ್ನ ಪ್ರೀತಿಯನ್ನು ತಿಳಿಸಿದರೂ ಈತ ನಿರಾಕರಿಸುತ್ತಾನೆ.

ಶುಭಾ ಇದನ್ನು ಶಶಾಂಕ್ ಗೆ ತಿಳಿಸಿದಾಗ ಅವನು ಗೆಳೆಯನ ಕುರಿತೂ ಏನೂ ಹೇಳಲಾಗದೆ, ತನ್ನ ತಂಗಿಗೆ ಸಮಾಧಾನ ಮಾಡಲು "ಎಲ್ಲದಕ್ಕೂ ಸಮಯ ಕೂಡಿಬರಬೇಕು" ಎಂದು ಸುಮ್ಮನಾಗಿದ್ದ.

ಇತ್ತ ಇದೆಲ್ಲವನ್ನೂ ನೆನಪಿಸಿಕೊಂಡು ಊರಿಗೆ ಬಂದ ಮಾಧವ ಬಹಳ ಬೇಸರದಲ್ಲಿದ್ದ. ಭೂಮಿಯ ಬಳಿ ಬಂದ ಮಾಧವ ಇದೆಲ್ಲವನ್ನೂ ತಿಳಿಸಿ ಬಹಳವೇ ಬೇಸರಪಟ್ಟುಕೊಂಡಿದ್ದ."ನನಗೆ ನನ್ನ ಪ್ರೀತಿ ದಕ್ಕಲು ಸಾಧ್ಯವಿಲ್ಲ, ನಾನೊಬ್ಬ ದುರಾದೃಷ್ಟವಂತ" ಎಂದು ಪೇಚಾಡಿಕೊಳ್ಳುತ್ತಿರುವಾಗ ರಾಘವ ಇದನ್ನೆಲ್ಲಾ ಕೇಳಿಸಿಕೊಂಡು ಆಶ್ಚರ್ಯ ಪಟ್ಟಿದ್ದ, ಬೇಕುಬೇಕೆಂದು ಇದನ್ನೆಲ್ಲಾ ಕೇಳಿಸಿಕೊಳ್ಳದಿದ್ದರೂ ಅಚಾನಕ್ ಆಗಿ ರಾಘವ ಇದನ್ನು ಕೇಳಿಸಿಕೊಂಡಿದ್ದ.

ಅಂದೇ ಸಂಜೆ ರಾಘವ ಭೂಮಿಯೊಂದಿಗೆ ಈ ವಿಚಾರವಾಗಿ ಚರ್ಚಿಸಿದ್ದ. ಭೂಮಿಗೆ ಮಾಧವನ ಕುರಿತು ರಾಘವ ಕಾಳಜಿ ತೋರುತ್ತಿರುವುದು ಆಶ್ಚರ್ಯ ತಂದಿತ್ತು. ಆದರೂ ಅವಳು ಅದನ್ನು ತೋರ್ಪಡಿಸದೆ ಮಾಧವನ ಪ್ರೇಮದ ಎಲ್ಲಾ ವಿಚಾರವನ್ನೆಲ್ಲಾ ರಾಘವನೆದುರಿಗೆ
ತೆರೆದಿಟ್ಟಿದ್ದಳು, ಆದರೆ ಆ ಒಂದು ವಿಚಾರವನ್ನು ಬಿಟ್ಟು. ಮಾಧವ ತನ್ನ ಪ್ರೀತಿಯನ್ನು ಮುಚ್ಚಿಟ್ಟು ತಾನಾಗಿಯೇ ತನ್ನ ಪ್ರೀತಿಯನ್ನು ನಿರಾಕರಿಸುವುದು ಯಾಕೆಂದು ಮಾತ್ರ ತಿಳಿಸಲಿಲ್ಲ. ಅವಳಾದರೂ ಅದನ್ನು ಹೇಗೆ ಹೇಳಿಯಾಳು?

ಮಾಧವ ತನ್ನ ಪ್ರೀತಿಯನ್ನು ನಿರಾಕರಿಸುವುದರ ಹಿಂದಿರುವ ಕಾರಣವೇ ರಾಘವ. ಹೌದು, ರಾಘವನ ಪ್ರೇಮ ಪ್ರಕರಣವೇ ಇದೆಲ್ಲದರ ಹಿಂದಿನ ಕಾರಣ. ಅದೂ ಒಂದೆರಡು ವರ್ಷದ್ದಲ್ಲ, 15 ವರ್ಷಗಳಿಂದ ನಡೆಯುತ್ತಾ ಬಂದಿರುವ ನಿಲ್ಲದ ತೆರೆಮರೆಯ ಪ್ರೀತಿ. ಆದರೆ ಇದು ಸಫಲವಾಗಲು
ತೊಡಕೊಂದಿತ್ತು.

ಯಮುನಾ ಮತ್ತು ಶಂಕರ್ ಅಯ್ಯರ್ ದಂಪತಿಗಳದ್ದು ಸಂಪ್ರದಾಯಬದ್ದವಾದ ಜೀವನ. ಪ್ರೀತಿಯಷ್ಟೇ ದ್ವೇಷವನ್ನೂ ತೀವ್ರವಾಗಿ ಬದುಕುತ್ತಿದ್ದವರು ಅಯ್ಯರ್. ತನ್ನ ತಮ್ಮ ಕೇಶವ ಅಯ್ಯರ್ ಪ್ರೀತಿಸಿ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾದನೆಂಬ ಒಂದೇ ಕಾರಣಕ್ಕೆ ಅವನನ್ನು 30 ವರ್ಷಗಳಿಂದ ದೂರವೇ ಇಟ್ಟಿದ್ದರು ಕಡೇಪಕ್ಷ ನೋಡಲೂ ಇಚ್ಚಿಸಿರಲಿಲ್ಲ. ಮತ್ತೆ ರಾಘವನದ್ದೂ ಅದೇ ಕತೆಯಾಗಿತ್ತು. ಪ್ರೀತಿ ಎಂದರೆ ಸಿಡಿದು ಬೀಳುವ ತಂದೆ ರಾಘವನ ಪ್ರೇಮ ವಿವಾಹವನ್ನು ಒಪ್ಪಲು ಸಾಧ್ಯವೇ ಇರಲಿಲ್ಲ, ರಾಘವ ನೋಡಲು ಸೌಮ್ಯವಾಗಿದ್ದರೂ ಅವನೂ ಹಠವಾದಿಯೇ, ಅವನೂ ತನ್ನ 15 ವರ್ಷದ ಪ್ರೀತಿಯನ್ನು ಬಿಡಲು ಸಿದ್ದವಿರುವುದಿಲ್ಲ. ಅಲ್ಲದೇ ಮೊದಲ ಮಗನ ಪ್ರೇಮ ಪ್ರಕರಣದಿಂದಲೇ ಘಾಸಿಯಾಗಿರುತ್ತದೆ. ಅಲ್ಲದೇ ತಾನೂ ಅದೇ ದಾರಿ ತುಳಿದರೆ ತಪ್ಪಾಗುತ್ತದೆ ಎಂಬ ದೂರಾಲೋಚನೆಯಿಂದ ಮಾಧವ ಪ್ರೀತಿಗಿಂತ ಮಗನ ಕರ್ತವ್ಯವೇ ಹೆಚ್ಚು ಎಂದು ಅದನ್ನು ಪಾಲಿಸಲು ತ್ಯಾಗಮಯಿಯಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಲೇ ಬಂದಿದ್ದ. ಉಳಿದವರ ಕಣ್ಣಿಗೆ ಅವನೊಬ್ಬ ಮೋಸಗಾರನಂತೆ ಕಂಡುಬಂದರೂ ಭೂಮಿಗೆ ಮಾತ್ರ ಅವನದ್ದು ನಿರ್ಮಲವಾದ ಪ್ರೀತಿ. ಇತ್ತ ರಾಘವನಿಗೂ ಹೇಳಲಾಗದೆ, ಮಾಧವನಿಗೂ ಸಹಾಯ ಮಾಡಲಾಗದೆ ಆಕೆ ತೊಳಲಾಡುತ್ತಿದ್ದಳು. ಆದರೆ ಸಮಯವೇ ಅವಳ
ತೊಳಲಾಟಕ್ಕೊಂದು ವಿರಾಮ ಹಾಡುವುದರಲ್ಲಿತ್ತು.

ಭೂಮಿಯ ಹತ್ತಿರ ರಾಘವ ಮಾತನಾಡಿ ಹೊರಟ ನಂತರ ಅರ್ಧಘಂಟೆಯ ನಂತರ ಮಾಧವ ಬಂದ. ಆಗ ಭೂಮಿ ನಿನ್ನ ಪ್ರೀತಿಯ ವಿಚಾರವೆಲ್ಲಾ ತಿಳಿಯಿತು ಎಂದಳು. "ನಾನು ತಿರಸ್ಕರಿಸುವುದಕ್ಕೆ ಕಾರಣ ಅವನ ಪ್ರೀತಿ ಎಂಬುದನ್ನು ಹೇಳಿಬಿಟ್ಟೆಯಾ?" ಎಂದನು."ಇಲ್ಲ" ಎಂದಳು ಅಷ್ಟರಲ್ಲಿ ರೂಂ
ಬಳಿ ಏನೋ ಸದ್ದಾಯಿತು. ಆ ವಿಚಾರವನ್ನೂ ಅಲ್ಲೇ ಬಿಟ್ಟು ಇಬ್ಬರೂ ಬಾಗಿಲ ಬಳಿ ಹೋದರು ಆಗ ಅಲ್ಲಿ ಯಾರೂ ಇರಲಿಲ್ಲ. ನಮ್ಮ ಭ್ರಮೆ ಇರಬೇಕು ಎಂದುಕೊಂಡ ಇಬ್ಬರೂ ಸುಮ್ಮನಾದರು.

ಇದಾದ ಒಂದು ವಾರದ ನಂತರ, ಯಾವತ್ತೂ ತಮ್ಮನೊಡನೆ ಮನಬಿಚ್ಚಿ ಮಾತನಾಡಿರದ ರಾಘವ ಮೊದಲ ಬಾರಿಗೆ ತನ್ನ ತಮ್ಮನೊಡನೆ ಮಾತನಾಡಿದ್ದ. ಅವನ ಅಂತರಂಗದ ನೋವುಗಳನ್ನು ಹಂಚಿಕೊಂಡಿದ್ದ. "ನಿನ್ನ ನೋವು ನನಗೆ ಅರ್ಥವಾಗುತ್ತದೆ ಆದರೆ ನಿನ್ನ ಭಾವನೆಗಳು, ತಳಮಳಗಳು ನನಗೆ ಅರ್ಥವಾಗುತ್ತದೆ, ಆದರೆ ಇಷ್ಟು ದಿನ ಸ್ವಾರ್ಥಿಯಾಗಿಬಿಟ್ಟಿದ್ದೆ, ನಿನ್ನ ಭಾವನೆಗಳು ನನಗೆ ಕಾಣಿಸಲೇ ಇಲ್ಲ. ಎಲ್ಲವನ್ನೂ ನನ್ನಿಂದ ಮುಚ್ಚಿಟ್ಟು ನೋವು ಪಡುವುದಾದರೂ ಏಕೆ?
ಪ್ರೀತಿಸಿದವರು ಬಿಟ್ಟು ಹೋದ ನೋವು ನನಗೆ ತಿಳಿದಿದೆ. 15 ವರ್ಷಗಳ ಪ್ರೀತಿಯನ್ನು ಕಳೆದುಕೊಂಡು ನಾನೂ ನೋವು ಪಡುತ್ತಿದ್ದೇನೆ. ನೀನಾದರೂ ಚೆನ್ನಾಗಿರು" ಎನ್ನುತ್ತಾ "ನೀನು ನಿನ್ನ ಪ್ರೀತಿಯನ್ನು ನಿರಾಕರಿಸಲು ಕಾರಣ ತಿಳಿಸು, ನಾನು ಅದನ್ನು
ಸರಿಪಡಿಸುತ್ತೇನೆ." ಎಂದನು ರಾಘವ. ಅಣ್ಣನ ವರ್ತನೆ, ಮಾತುಗಳು ಮಾಧವನಿಗೆ ಅಚ್ಚರಿಯುಂಟು ಮಾಡಿದ್ದವು. ಅಲ್ಲದೇ ಅವನ ಪ್ರೀತಿ ತಪ್ಪಿಹೋಗಲು ಕಾರಣ ತಿಳಿಯಲು
ಬಯಸಿದ್ದ. ಅದನ್ನು ಅರಿತವನಂತೆ ರಾಘವನೇ ಮುಂದುವರಿಸಿದ, "ಎಲ್ಲಾ ಹಂತದಲ್ಲಿಯೂ ಸರಿಯಾಗಿದ್ದ ನನ್ನ ಪ್ರೀತಿ ಮದುವೆಯ ನಂತರದ ನನ್ನ ಕನಸುಗಳಿಗೆ ಅಡ್ಡವಾಗಿತ್ತು. ಅಪ್ಪ, ಅಮ್ಮ, ನಿಮ್ಮಿಂದ ದೂರವಾಗಿ ಹೋಗಬೇಕೆಂಬುದು ಅವಳ ಆಸೆಯಾಗಿತ್ತು. ಪ್ರೀತಿ ಎಲ್ಲರನ್ನೂ ಒಂದುಗೂಡಿಸಬೇಕೇ ವಿನಃ ಯಾರನ್ನೂ ದೂರಗೊಳಿಸಬಾರದು. ಆದ್ದರಿಂದ ನಾನೇ ನಮ್ಮಿಬ್ಬರ ಪ್ರೀತಿಗೆ ಅಂತ್ಯ ಹಾಡಿದೆ. ಮನೆಯಲ್ಲಿ ಈಗಾಗಲೇ ಹಲವಾರು ಸಂಬಂಧಗಳನ್ನು ನೋಡುತ್ತಿದ್ದಾರೆ. ಎಲ್ಲರಿಗೂ ಇಷ್ಟವಾದವಳನ್ನೇ ನಾನು ಮದುವೆಯಾಗುವೆ. ಮದುವೆಯ ನಂತರವೂ ಪ್ರೀತಿ ಮೂಡಬಹುದು. ಆದರೆ ನಿನ್ನ ಬದುಕು ಹಾಗಾಗದಿರಲಿ. ಆ ಹುಡುಗಿಯ ಜೊತೆಗೇ ನಿನ್ನ ಮದುವೆ ಮಾಡಿಸುವೆ" ಎಂದು ಎಲ್ಲವನ್ನೂ ತಾನೇ ಮಾತನಾಡಿದ ರಾಘವ.

ಇದೆಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಭೂಮಿಗೆ ಯಾರ ತ್ಯಾಗ ದೊಡ್ಡದು, ಯಾರ ಪ್ರೀತಿ ಹೆಚ್ಚಿನದ್ದು ಎಂದು ತೀರ್ಮಾನಿಸಲೇ ಕಷ್ಟವಾಗುತ್ತಿತ್ತು. ಅನುರಾಗ ಗಂಡು-ಹೆಣ್ಣಿನ ಮಧ್ಯೆ ಅರಳಿದರೆ, ಪ್ರೀತಿ ಪ್ರತಿ ಮನುಷ್ಯರ ಮನವನ್ನೂ ಬೆಸೆಯುತ್ತದೆ.

ರಾಘವ ಎಲ್ಲರೂ ಒಪ್ಪಿದ ಹುಡುಗಿಯನ್ನೇ ಮದುವೆಯಾಗಿ ಪ್ರೀತಿಸತೊಡಗಿದ, ಆನಂತರ ಮಾಧವನ ಜೀವನಕ್ಕೆ ರಾಘವ ಶುಭಾಳನ್ನೇ ಜೋಡಿಯಾಗಿಸಿದ. ಆತ ಪ್ರೀತಿಸಿದ್ದ ಹುಡುಗಿ ಶುಭಾ ಎಂಬ ಸುಳಿವನ್ನೆ ಬಿಟ್ಟುಕೊಡದೆ ಅವರಿಬ್ಬರ ನಿಶ್ಚಿತಾರ್ಥವನ್ನು ಮಾಡಿ ಮುಗಿಸಿದ್ದ.

ಇವೆಲ್ಲದರ ನಡುವೆ ಯಾರಿಗೂ ಅರಿವಿಗೇ ಬಾರದ ಸಂಗತಿಯೊಂದಿತ್ತು. ರಾಘವ ಪ್ರೀತಿಸಿದ್ದ ಹುಡುಗಿ ಪ್ರತಿಮಾ ಬೇಕಂತಲೇ ಆತನಿಂದ ದೂರಾಗಿದ್ದಳು. ರಾಘವನ ಮನೆಯವರಿಗೆ ತಾನು ಅವನ ಗೆಳತಿಯಾಗಿ ಮಾತ್ರ ಗೊತ್ತು ಅವನ ಹೆಂಡತಿಯಾಗಿ ತನ್ನನ್ನು ಒಪ್ಪಿಕೊಳ್ಳುವರೋ ಇಲ್ಲವೋ ಎಂಬ ದ್ವಂದ್ವದಲ್ಲಿದ್ದಾಗ ರಾಘವನನ್ನು ಭೇಟಿ ಮಾಡಲು ಆತನ ಮನೆಗೆ ಬಂದಿದ್ದಳು. ಆ ಸಮಯದಲ್ಲಿಯೇ ಅವಳು ಭೂಮಿ ಮತ್ತು ಮಾಧವ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡಿದ್ದಳು.ತಮ್ಮ ಪ್ರೀತಿಯೇ ಅಡ್ಡಿಯಾಗಿರುವುದನ್ನು ಕೇಳಿಸಿಕೊಂಡ ಆಕೆ ಅಂದೇ ಒಂದು ನಿರ್ಧಾರಕ್ಕೆ ಬಂದಿದ್ದಳು. ಪ್ರೀತಿ ಎಂದಿಗೂ ವಿವಾಹದಲ್ಲೇ ಪರ್ಯಾವಸಾನವಾಗಬೇಕಿಲ್ಲ. ಅಲ್ಲದೇ ಒಳ್ಳೆಯ ರೀತಿಯಿಂದ ದೂರಾದರೆ ರಾಘವ ನನ್ನ ನೆನಪಿನಲ್ಲೇ ಕೊರಗುತ್ತಾನೆ. ದೂರಾಗದಿದ್ದರೆ ಮತ್ತೊಂದು ಪ್ರೀತಿ ದೂರಾಗುತ್ತದೆ.ಮತ್ತೊಬ್ಬರ ಪ್ರೀತಿಯ ಸಮಾಧಿಯ ಮೇಲೆ ತನ್ನ ಪ್ರೀತಿಯ ಸೌಧ ಕಟ್ಟುವುದಾದರೂ ಹೇಗೆ? ಎಂದು ಆಲೋಚಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಳು.

ಪ್ರೀತಿಗೆ ಕೊನೆಯಾದರೂ ಎಲ್ಲಿ? ಎಲ್ಲೋ ಹುಟ್ಟಿದ ಪ್ರೀತಿ, ಯಾರಿಗೋ ಅರ್ಪಿತವಾಗಿ ಮತ್ತಾರಲ್ಲೋ ಪರ್ಯಾವಸಾನವಾಗುತ್ತದೆ. ಅರಿವಿಗೇ ಬಾರದೆ ಬೆಸೆದುಕೊಳ್ಳುವ ನಂಟೇ ಪ್ರೀತಿಯಾ? ತ್ಯಾಗವಿಲ್ಲದ ಪ್ರೀತಿ ಇದೆಯಾ? ನನಗಂತೂ ಯಾವಾಗಲೂ ಕಾಡುವ ಪ್ರಶ್ನೆ "ಪ್ರೀತಿ ಹೀಗೇನಾ?"

-ವಿಭಾ ವಿಶ್ವನಾಥ್

ಭಾನುವಾರ, ಡಿಸೆಂಬರ್ 22, 2019

ದಾರಿದೀಪ

ಮೈಸೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್ಸನ್ನು ತಲುಪುವುದು ಕಷ್ಟವೇನೋ ಅನ್ನಿಸುತ್ತಿತ್ತು ಆದರೂ ಆ ಬಸ್ಸನ್ನು ಅದು ಹೊರಡುವುದಕ್ಕಿಂತ ಮುನ್ನವೇ ತಲುಪಬೇಕೆಂಬ ಹಟದಲ್ಲಿ ಕೊಂಚ ಬಿರುಸಾಗಿಯೇ ಹೆಜ್ಜೆ ಹಾಕಿ ಆ ಬಸ್ಸನ್ನು ಹತ್ತಿ ಕುಳಿತೆ ಆದರೂ ನನಗೇಕೋ ಇಂದು ಆಯಾಸ ಎನ್ನಿಸಲಿಲ್ಲ, ನನಗಾಗಿಯೇ ಈ ಬಸ್ಸು ಕಾಯುತ್ತಿತ್ತೇನೋ ಎಂಬಂತೆ ನಾನು ಬಂದ ತಕ್ಷಣವೇ ಬಸ್ಸು ಹೊರಟುಬಿಟ್ಟಿತು. ಎರಡು ಸೀಟುಗಳಿರುವ ಕಡೆ ಕಿಟಕಿಯ ಪಕ್ಕದಲ್ಲೇ ಸೀಟು ಸಿಕ್ಕಿತ್ತು. ಪಕ್ಕದಲ್ಲಿ ಯಾರೂ ಕುಳಿತಿರಲಿಲ್ಲ, ಒಂದರ್ಥದಲ್ಲಿ ಇದು ಒಳ್ಳೆಯದೇ ಆಯಿತು ಎಂದುಕೊಂಡು ನೆಮ್ಮದಿಯಾಗಿಯೇ ಕುಳಿತೆ. ಅಷ್ಟರಲ್ಲಿ ನೆಮ್ಮದಿಯನ್ನು ಭಂಗಗೊಳಿಸುವನಂತೆ ಬಂದ ಕಂಡಕ್ಟರ್ "ಟಿಕೆಟ್, ಟಿಕೆಟ್ ಎಲ್ಲಿಗಪ್ಪಾ..?" ಎನ್ನುತ್ತಾ ಟಿಕೆಟ್ ನೀಡಲು ಬಂದ. ಹೌದು ನಾನು ಎಲ್ಲಿಗೆ ಹೊರಟಿದ್ದೆ ಎಂದು ನೆನಪಿಸಿಕೊಂಡೆ ನೆನಪಾಗಲಿಲ್ಲ.

ಮರೆತಿದ್ದರಲ್ಲವೇ ನೆನೆಪಿಕೊಳ್ಳಲು..? ಗೊತ್ತುಗುರಿ ಇಲ್ಲದ ಪಯಣಕ್ಕೆ ಅಣಿಯಾಗಿ ಹೊರಟಿದ್ದೆ ಆದರೆ ಮನಸ್ಸಿನ ಮೂಲೆಯಲ್ಲೆಲ್ಲೋ ಶಿವಮೊಗ್ಗ ಎಂಬ ಹೆಸರು ಸುಳಿದು ಮರೆಯಾಗಿತ್ತು. ಅಷ್ಟರಲ್ಲಿ ಕಣ್ಣಿಗೆ ಕಂಡ ಶಿವಮೊಗ್ಗದ ಬಸ್ಸನ್ನು ಹತ್ತಿದ್ದೆ. ಗೊತ್ತು ಗುರಿಯಿಲ್ಲದೆ ತಿರುಗುವ ಈ ಮುದುಕನ ಬಗ್ಗೆ ಕಾಳಜಿಯಾದರೂ ಯಾರಿಗಿದೆ? ಮತ್ತೊಮ್ಮೆ ಕಂಡಕ್ಟರ್ ಕೇಳಿದ "ಅಯ್ಯಾ, ಎಲ್ಲಿಗೆ ಹೋಗಬೇಕು..?" 

"ಶಿವಮೊಗ್ಗಕ್ಕೆ ಒಂದು ಟಿಕೆಟ್ ಕೊಡಿ" ಎಂದು ಹಣ ಕೊಟ್ಟೆ ಬರಬೇಕಾದ ಬಾಕಿ ಚಿಲ್ಲರೆಯನ್ನು ಟಿಕೆಟ್ ಹಿಂದೆಯೇ ಬರೆದು ಟಿಕೆಟ್ ಅನ್ನು ವಾಪಸ್ ಕೊಟ್ಟ ಕಂಡಕ್ಟರ್. ಈ ಕಂಡಕ್ಟರ್ ಗಳೇ ಹೀಗಲ್ಲವೇ..? ಮುದುಕ ಮರೆತು ಹೋದರೆ ನನಗೇ ಲಾಭ ಎಂದುಕೊಂಡು ಟಿಕೆಟ್ ನ ಹಿಂದೆ ಚಿಲ್ಲರೆಯನ್ನು ಬರೆದು ಕೊಟ್ಟ ಆದರೆ ಅವನಿಗೇನು ಗೊತ್ತು ನನ್ನ ನೆನಪಿನ ಶಕ್ತಿಯ ಬಗ್ಗೆ..? ಎಂದು ಒಂದು ಮುಗುಳ್ನಗು ಮುಖದ ಮೇಲೆ ಹಾದು ಹೋಗುವಷ್ಟರಲ್ಲಿ ಆಗಲೇ ಮೈಸೂರಿನ ಹೊರವಲಯವನ್ನು ದಾಟಿಯಾಗಿತ್ತು. ಆದರೆ ಅದಕ್ಕಿಂತ ವೇಗವಾದ ನನ್ನ ಮನೋವೇಗದಲ್ಲಿ ನಾನು ಆಗಲೇ ಶಿವಮೊಗ್ಗ ತಲುಪಿ ಆಗಿತ್ತು.

ಶಿವಮೊಗ್ಗದಿಂದ 3 ಕಿಲೋಮೀಟರ್ ದೂರದ ಸಂಪಿಗೆಪುರ ನನ್ನ ಊರು. ಅಂದಿನ ಬಾಲ್ಯದ ದಿನಗಳು ಎಷ್ಟು ಚೆಂದವಲ್ಲವೇ? ಸ್ಕೂಲಿಗೆ ಚಕ್ಕರ್ ಹಾಕಿ ಕೆರೆಯಲ್ಲಿ ಮನದಣಿಯುವವರೆಗೂ ಈಜುತ್ತಿದ್ದುದು, ಸೀಬೆ, ಮಾವಿನ ತೋಪುಗಳಿಗೆ ಲಗ್ಗೆ ಹಾಕಿ ಅಲ್ಲಿನ ಹಣ್ಣುಗಳನ್ನು ತಿನ್ನುತ್ತಿದ್ದದ್ದು.. ಸಂತೆ, ಜಾತ್ರೆಯ ದಿನಗಳನ್ನು ಮರೆಯುವಂತೆಯೇ ಇರಲಿಲ್ಲ. ಆದರೆ ಕಾಲ ಎಷ್ಟು ನಿರ್ದಯಿ ಎಂದರೆ ಯಾರನ್ನೂ ಲೆಕ್ಕಿಸದೆ ಓಡುತ್ತಲೇ ಇರುತ್ತದೆ. ಹಾಗೇ ಓಡುವ ಕಾಲದ ಜೊತೆಗೆ ಓಡಿದ ನಾನು ಸರ್ಕಾರಿ ಕೆಲಸಕ್ಕೆ ಸೇರಿ ಹುಟ್ಟಿದೂರನ್ನು ಮರೆತು ಇದ್ದಬದ್ದ ಊರುಗಳನ್ನೆಲ್ಲಾ ಅಲೆದು ಕೊನೆಗೆ ಮೈಸೂರಿನಲ್ಲಿ ನೆಲೆಯಾದೆ. ಕೈಯಲ್ಲಿ ಇಂದು ಹಣ ಇರುವುದಕ್ಕೆ ಪರವಾಗಿಲ್ಲ ನನಗಿಷ್ಟ ಬಂದಂತೆ ಬದುಕುತ್ತಿದ್ದೇನೆ. ಅಪ್ಪ,ಅಮ್ಮ,ಹೆಂಡತಿ ಎಲ್ಲರೂ ತಮ್ಮ ಕಾಲ ಮುಗಿಸಿ ಹೊರಟರು. ಈಗ ಮಗನ ಯಜಮಾನಿಕೆಯಲ್ಲಿ ಸೊಸೆಯ ದರ್ಬಾರು ನಡೆಯುತ್ತಿದೆ. ಆ ಸ್ವೀಟ್ ತಿನ್ನಬೇಡಿ, ಆ ತಿಂಡಿ ತಿನ್ನಬೇಡಿ ಅದು ಎಣ್ಣೆ ತಿಂಡಿ, ಸಿಗರೇಟ್ ಸೇದಬೇಡಿ, ಒಬ್ಬರೇ ಎಲ್ಲೂ ಹೋಗಬೇಡಿ.. ಹೀಗೆ ನನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹಾ ವಿಚಾರಗಳೇ.. ಒಂದೆರಡು ಸಲ ಇದೆಲ್ಲಾ ಅತಿ ಎನ್ನಿಸಿ ಮನೆಬಿಟ್ಟು ಹೊರಟಾಗ ಹುಡುಕಿದ್ದರು ಆಮೇಲಾಮೇಲೆ ಅವರೇ ಸುಮ್ಮನಾದರು. ಈಗಲೂ ಹಾಗೇ ಆಗುತ್ತದೆ ಎಂದು ಒಂದು ನಗೆ ನಗುವಷ್ಟರಲ್ಲಿ ಮಂಡ್ಯ ಬಂದಿತ್ತು.

ಮಂಡ್ಯದಲ್ಲಿ ಹತ್ತಿದ ಒಬ್ಬ ಹುಡುಗ ಸೀದಾ ಬಂದು ನನ್ನ ಪಕ್ಕ ಕುಳಿತ. ನನ್ನ ಮಗನಿಗಿಂತ ಚಿಕ್ಕ ವಯಸ್ಸು. ಹಾಗೆ ಕುಳಿತವನನ್ನು ಏಕೋ ಮಾತಾಡಿಸಬೇಕು ಎನ್ನಿಸಿತು ಹಾಗೆ ಮಾತನಾಡಿಸಲು ಶುರು ಮಾಡಿದೆ. ಏನಪ್ಪಾ ನಿನ್ನ ಹೆಸರು ಅಂದೆ ಅದಕ್ಕೆ ಅವನು "ಶಂಕರ್ ಅಂತಾ.. ನಿಮ್ಮ ಹೆಸರೇನು ಅಂಕಲ್? ಎಲ್ಲಿಗೆ ಹೊರಟಿದ್ದೀರಾ..?" ಎಂದು ಕೇಳಿದ. "ನನ್ನ ಹೆಸರು ಮಾಧವರಾವ್ ಅಂತಾ ಶಿವಮೊಗ್ಗಕ್ಕೆ ಹೊರಟಿದ್ದೇನೆ" ಎಂದೆ. "ಏನಂಕಲ್ ಒಬ್ಬರೇ ಹೋಗ್ತಾ ಇದ್ದೀರಿ? ಆಂಟಿ ಬಂದಿಲ್ವಾ?" ಎಂದ. ಅದಕ್ಕೆ ನಾನು "ಆಂಟಿ ನನ್ನ ಬಿಟ್ಟು ಮೊದಲೇ ಹೋಗಿದ್ದಾಳೆ ಕಣಪ್ಪಾ ಆದರೆ ಶಿವಮೊಗ್ಗಕ್ಕಲ್ಲ.. ದೇವರ ಹತ್ತಿರ" ಎಂದೆ. "ಹೋ ಸ್ಸಾರಿ ಅಂಕಲ್, ಮತ್ಯಾಕೆ ಹೋಗ್ತಾ ಇದ್ದೀರಾ ಅಲ್ಲಿಗೆ? ನಿಮ್ಮ ಮಕ್ಕಳನ್ನು ನೋಡೋಕಾ?" ಎಂದೆ. "ಇಲ್ಲಪ್ಪಾ ಆಲ್ಲಿ ಯಾರೂ ಇಲ್ಲ, ಮಕ್ಕಳನ್ನು ನೋಡೋಕಲ್ಲ.. ಮಕ್ಕಳನ್ನು ನೋಡದೇ ಇರೋದಕ್ಕೆ ಐ ಮೀನ್ ಮನೆ ಬಿಟ್ಟು ಹೊರಟಿದ್ದೇನೆ" ಅಂದೆ. ಅದಕ್ಕೆ ಅವನು " ನಿಮಗೆ ಒಂದು ಕಥೆ ಹೇಳ್ಲಾ ಅಂಕಲ್? " ಎಂದ. "ಸರೀನಪ್ಪಾ ಹೇಳು" ಎಂದೆ . 

ಅವನು ಹೇಳಿದ್ದನ್ನು ಸ್ವಲ್ಪ ಚಿಕ್ಕದಾಗಿ ನಾನೇ ಹೇಳುತ್ತೇನೆ ಕೇಳಿ. ಮಂಜಣ್ಣನವರಿಗೆ ವಯಸ್ಸಾಗಿತ್ತು ಆದರೆ ತಿನ್ನುವ ಬಾಯಿಚಪಲ ಜಾಸ್ತಿ ಆಗಿತ್ತು. ಕೊಲೆಸ್ಟ್ರಾಲ್, ಬೀ.ಪಿ, ಶುಗರ್, ಎಲ್ಲವೂ ಇತ್ತು ಆದರೂ ಸಿಹಿತಿಂಡಿ, ಎಣ್ಣೆತಿಂಡಿಗಳ ಚಪಲ ಬೇಡ ಎಂದರೂ ಬಿಡುವ ಸ್ಥಿತಿಯಲ್ಲಿರಲಿಲ್ಲ. ಜೊತೆಗೆ ಹೊರಗಡೆ ಹೋದಾಗ ಒಂದೆರಡು ಸಾರಿ ಬಿದ್ದು ಗಾಯವನ್ನೂ ಮಾಡಿಕೊಂಡಿದ್ದರು. ಹಾಗಾಗಿ ಒಬ್ಬರನ್ನೇ ಹೊರಗೆ ಹೋಗಬೇಡಿ ಎಂದದಕ್ಕೆ ಸಿಟ್ಟು ಮಾಡಿಕೊಂಡು ಮನೆಬಿಟ್ಟು ಹೋಗಿದ್ದರು. ಅವರನ್ನು ಹುಡುಕಲು ಪೋಲೀಸ್ ಕಂಪ್ಲೈಂಟ್ ಕೂಡಾ ಕೊಟ್ಟಿದ್ದೆವು ಆದರೆ ಎರಡು ದಿನ ಬಿಟ್ಟು ಅವರೇ ವಾಪಸ್ ಬಂದಿದ್ದರು, ಇದು ಮತ್ತೆರಡು ಸರಿ ಮರುಕಳಿಸಿದಾಗ ಪೋಲೀಸರು ಬೈದರು ಹಾಗಾಗಿ ಹೇಗೂ ಬರುತ್ತಾರಲ್ಲ ಎಂದು ಸುಮ್ಮನಾದಾಗ ಅವರು ಬಂದದ್ದು ಶವವಾಗಿ.. 

ಅದಾದ ನಂತರ ಅವನೇ ಮುಂದುವರಿಸಿದ "ಈ ಕಥೆಯಲ್ಲಿ ಬರುವ ಮಂಜಣ್ಣ ಬೇರಾರೋ ಅಲ್ಲ ಆತ ನನ್ನ ತಂದೆ" ಎಂದ. ನಾನಿನ್ನೂ ಅದೇ ಆಘಾತದಲ್ಲಿರುವಾಗ ಹೇಳಿದ " ಇನ್ನಾದರೂ ಆ ಕಥೆ ಮರುಕಳಿಸದಿರಲಿ, ಚಿಕ್ಕವನೆಂದು ನನ್ನ ಮಾತನ್ನು ನಿರ್ಲಕ್ಷ್ಯ ಮಾಡದಿರಿ. ಯೋಚಿಸಿ" ಎಂದ. ಅದೇ ಗುಂಗಿನಲ್ಲಿ ಯೋಚನೆ ಮಾಡುತ್ತಾ ನನ್ನ್ ಭವಿಷ್ಯವನ್ನು ನೆನಪಿಸಿಕೊಳ್ಳುತ್ತಾ ನಿದ್ದೆ ಮಾಡಿ ಎದ್ದಾಗ ಮನ ತಿಳಿಯಾಗಿತ್ತು, ಬಸ್ಸು ಗಂಡಸಿ ದಾಟಿತ್ತು.
ಆದರೆ ನನ್ನ ಪಕ್ಕದಲ್ಲಿದ್ದ ಆ ಹುಡುಗನ ಪತ್ತೆಯೇ ಇರಲಿಲ್ಲ..

ಮೂರು ಸೀಟಿನಲ್ಲಿ ಕೂತಿದ್ದವರನ್ನು ಹೇಗೂ ಮೈಸೂರಿನಿಂದ ಇದ್ದರಲ್ಲಾ ಎಂದು "ನನ್ನ ಪಕ್ಕ ಕುಳಿತಿದ್ದ ಹುಡುಗ ಎಲ್ಲಿ ಇಳಿದ?" ಎಂದು ಕೇಳಿದಾಗ ಅವರು " ಯಾವ ಹುಡುಗ? ಏನು ಕನಸು ಕಾಣ್ತಾ ಇದ್ದೀರಾ, ಹೇಗೆ? ಮೈಸೂರಿನಿಂದ ನೀವು ಒಬ್ಬರೇ ಇರೋದು.." ಎಂದರು.

ಅಯೋಮಯ ಸ್ಥಿತಿಯಲ್ಲೇ ನಾನು ಅರಸೀಕೆರೆಯಲ್ಲಿ ಇಳಿದು ವಾಪಾಸ್ ಮೈಸೂರಿಗೆ ಹೊರಟೆ.

~ವಿಭಾ ವಿಶ್ವನಾಥ್