ಸೋಮವಾರ, ಸೆಪ್ಟೆಂಬರ್ 3, 2018

ನಮಗೇನಂತೆ..?

ತೊಟ್ಟಿಯ ಪಕ್ಕದಲ್ಲೊಂದು ಹೆಣ್ಣುಹಸುಗೂಸಂತೆ
ಹಸಿವಿನಿಂದ ಅತ್ತು ಸತ್ತೇ ಹೋಯಿತಂತೆ..
ಸುಖಕ್ಕೆ, ಹಾಸಿಗೆಗೆ ಬೇಕಾಗಿತ್ತು ಹೆಣ್ಣು
ಮಗಳಾದಾಗ ಹೊರೆ ಎನ್ನಿಸಿ ಬಿಸಾಡಿದ್ದಂತೆ
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?

ಅವಳ ಮೇಲೆ ಅತ್ಯಾಚಾರವೆಸಗಿದರಂತೆ
ಯಾರೋ ಪಾಪಿಗಳ ಗುಂಪು ಮಾಡಿದ್ದಂತೆ
ಮಾಂಸದ ಮುದ್ದೆಯಂತೆ ನಡುರಸ್ತೆಯಲ್ಲಿ
ನರಳಾಡುತ್ತಾ ಬಿದ್ದಿದ್ದವಳು, ಸತ್ತೇ ಹೋದಳಂತೆ
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?

ಅವಳನ್ನು ಬೆಂಕಿ ಹಚ್ಚಿ ಸುಟ್ಟುಬಿಟ್ಟರಂತೆ
ಕಾರಣ ವರದಕ್ಷಿಣೆ ಕಿರುಕುಳವಂತೆ..
ಹಣ-ಆಸ್ತಿ, ಬಣ್ಣ ನೋಡಿ ಕಟ್ಟಿಕೊಂಡವನಿಗೆ
ಅವಳವಶ್ಯಕತೆ ಮುಗಿದ ಮೇಲೆ ಸಾಯಿಸಿದ್ದಂತೆ
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?

ಬೀದಿಯಲ್ಲೇ ಆ ಮುದುಕಿ ಸತ್ತಳಂತೆ
ಕಡೆಗಾಲದಲ್ಲಿ ಗುಟುಕು ನೀರಿಗೂ ತತ್ವಾರವಂತೆ
ಸಾಕಲು ಆಕೆ ನನಗೆ ಹೊರೆ ಎಂದ ಮಗ
ನಡುಬೀದಿಯಲ್ಲಿ ಬಿಟ್ಟು ಹೋಗಿದ್ದನಂತೆ..
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?

ಹಾಗ ಹಾಗೆಂದವರು, ಈಗ ಹೀಗನ್ನುತ್ತಿದ್ದಾರೆ
ಮನೆಮಗಳ ಮೇಲೆ ಅತ್ಯಾಚಾರವಾಗಿದೆ
ಮನೆಮಗಳು ಸುಟ್ಟು ಕರಕಲಾಗಿದ್ದಾಳೆ
ಆಗಲೇ ಇದಕ್ಕೆ ಅಂತ್ಯ ಹಾಡಿದ್ದಿದ್ದರೆ..!
ನಮಗೇನಂತೆ ಎಂದು ಬಿಟ್ಟದ್ದೇ ತಪ್ಪಾಯಿತು

ಮಗನ ಮದುವೆಗೆ ಹೆಣ್ಣೇ ಸಿಗುತ್ತಿಲ್ಲ
ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿದೆಯಂತೆ..
ತವರಿನಲ್ಲಿ ತಾಯಿ ಬೀದಿಗೆ ಬಿದ್ದು ಸತ್ತಳಂತೆ
ನಮಗೇನಂತೆ ಎಂದು ಬಿಟ್ಟದ್ದರ ಕರ್ಮ
ಮತ್ತೆ ನಮಗೇ ಬಂದು ಸುತ್ತಿಕೊಳ್ಳುತ್ತಲಿದೆ..!

ಅಂದಿನ ನಮಗೇನಂತೆ, ನಮಗೇಕಂತೆ
ಭೂತ ಕಾಲದ ತುಣುಕುಗಳಾಗಿ ಕಾಡುತ
ವರ್ತಮಾನದ ನಮ್ಮ ಸ್ಥಿತಿಯ ಕನ್ನಡಿಯಾಗಿ
ಪ್ರತಿಫಲಿಸುವ ಮುನ್ನವೇ ಎಚ್ಚೆತ್ತುಕೊಂಡು
ಬದಲಾವಣೆಯ ಹಾದಿಯತ್ತ ಮುನ್ನಡೆಯೋಣ.

~ವಿಭಾ ವಿಶ್ವನಾಥ್

ಸೋಮವಾರ, ಆಗಸ್ಟ್ 27, 2018

ರಕ್ಷೆಯ ಸುರಕ್ಷಾ ಬಂಧನ

ಸೋದರ-ಸೋದರಿಯರ ಬಂಧದಲ್ಲಿ ಬಂಧಿಯಾಗಲು ಒಡಹುಟ್ಟಲೇ ಬೇಕು ಎಂದೇನಿಲ್ಲ. ಕೆಲವೊಮ್ಮೆ ಯಾವುದೋ ಋಣಾನುಬಂಧ ಕೂಡಾ ಈ ನಂಟನ್ನು ಬೆಸೆಯುತ್ತದೆ. ತಮ್ಮ ಕೂಡಾ ಕೆಲವೊಮ್ಮೆ ಅಣ್ಣನೆಂಬ ಭಾವದಲ್ಲಿ ರಕ್ಷಣೆಯ ಭಾರ ಹೊರುತ್ತಾನೆ. ಕೆಲವೊಮ್ಮೆ ಅಣ್ಣ ಅವನ ದುರ್ಬಲ ಪರಿಸ್ಥಿತಿಯಲ್ಲಿ ತಂಗಿಯ ಆಸರೆ ಬಯಸುತ್ತಾನೆ.

ಅನಿವಾರ್ಯದ ಪರಿಸ್ಥಿತಿಯಲ್ಲಿ ಅಣ್ಣ ಆಸರೆಯಾಗುತ್ತಾನೆ, ಕಷ್ಟದಲ್ಲಿ ಜೊತೆ ನಿಲ್ಲುತ್ತಾನೆ. ಜೊತೆಯಲ್ಲಿ ಅಣ್ಣನಿದ್ದಾನೆ ಎಂಬ ಭಾವವೇ ಸಾಕು ಧೈರ್ಯ ತುಂಬುವುದಕ್ಕೆ. ಅಷ್ಟಲ್ಲದೆ ಜನಪದರು ಹೇಳಿದ್ದಾರೆಯೇ "ಹೆಣ್ಣಿನ ಜನುಮಕ್ಕೆ ಅಣ್ಣ-ತಮ್ಮರು ಬೇಕು, ಬೆನ್ನು ಕಟ್ಟುವರು ಸಭೆಯೊಳಗೆ". ಇಷ್ಟೇ ಅಲ್ಲದೆ ಇನ್ನೂ ಮುಂದುವರಿದು ಹಾಡುತ್ತಾರೆ "ಹೊನ್ನು ಕಟ್ಟುವರು ಉಡಿಯೊಳಗೆ". ಖಂಡಿತಾ ಆ ನಿರೀಕ್ಷೆ ಇರುವುದಿಲ್ಲ. ಉಡುಗೊರೆ ಕೊಟ್ಟರೆ, ಆಸ್ತಿಯಲ್ಲಿ ನೀಡಿದರೆ ಮಾತ್ರ ಅಣ್ಣನ ಪ್ರೀತಿ ಎಂದು ಎಂದಿಗೂ ಅಲ್ಲ. ಕೇವಲ ಅಣ್ಣನ "ನಾನು ನಿನ್ನೊಡನೆ ಇದ್ದೇನೆ" ಎಂಬ ವಚನ ಸಾಕು ಪ್ರೀತಿ ಮತ್ತು ಆಪ್ತತೆಯ ಭಾವ ಮೂಡಿಸಲು.

ಅಣ್ಣನ ಕೈಯೊಳಗೆ ಕೈ ಇಟ್ಟು ಒಂದರೆಕ್ಷಣ ಕೂತರೆ ಸಾಕು ಅದೇನೋ ಸುರಕ್ಷತೆಯ ಭಾವ. ಈ ಘಳಿಗೆ ಹೀಗೇ ಇದ್ದು ಬಿಡಬಾರದೇ ಎಂದೆನಿಸಿಬಿಡುತ್ತದೆ. ಇಷ್ಟೆಲ್ಲದರ ನಡುವೆ ಗೋಳು ಹುಯ್ದುಕೊಳ್ಳುವುದು, ಕೋಳಿ ಜಗಳ ಮಾಡುವುದು ಇದೆಲ್ಲಾ ಇದ್ದೇ ಇದೆ. ಆದರೆ ಅಷ್ಟೆಲ್ಲಾ ಮೂಡಿಸುವ ಅಣ್ಣನೂ ಒಂದೊಮ್ಮೆ ಬದಲಾದರೆ..?

ಬದಲಾದರೂ ಚಿಂತೆಯಿಲ್ಲ.ಏಕೆಂದರೆ ನಾನಂತೂ ಬದಲಾಗುವುದಿಲ್ಲ. ಪ್ರೀತಿ, ಆಪ್ತತೆ ಎಂದಿಗೂ ಕೊಟ್ಟು ತೆಗೆದುಕೊಳ್ಳುವಂತದಲ್ಲವಲ್ಲ. ಹಾಗೊಂದು ವೇಳೆ ಹಾಗೇನಾದರೂ ಕೊಟ್ಟು ಪಡೆದರೆ ಅದು ವ್ಯಾಪಾರ ಎನ್ನಿಸುತ್ತದೆ.

ನೀ ಬದಲಾದರೂ, ಬದಲಾಗದಿದ್ದರೂ ಅದೇ ಭಾವ, ಅದೇ ಆಪ್ತತೆ, ಅದೇ ಪ್ರೀತಿಯಿಂದ ನೀನು ಎಲ್ಲಿದರೂ, ಹೇಗಿದ್ದರೂ ನೀನು ಚೆನ್ನಾಗಿರಲೆಂದು ಸದಾ ಬೇಡುತ್ತಾ ರಕ್ಷೆಯ ಅಗೋಚರ ಸುರಕ್ಷಾ ಬಂಧನದಿಂದ ನಿನ್ನನ್ನು ಬಂಧಿಸುವೆ. ಕಾಲವೂ ಈ ಬಂಧನದ ಬೇಡಿಯನ್ನು ಗಟ್ಟಿಗೊಳಿಸಲಿ.
(ವಿಶೇಷ ಸೂಚನೆ: ಅಣ್ಣ ಎಂಬಲ್ಲಿ ತಮ್ಮ ಎಂದೂ ಸಹಾ ಓದಿಕೊಳ್ಳಬಹುದು)

~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 26, 2018

ಗೂಗಲ್ ಗಂಗಾ

ಹೇಳುವುದು ಒಂದು
ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೇ
ಸುಮಿತ್ರಾಪತಿ ಶ್ರೀಪತಿ...

ಅಂತಾ ಎಲ್ಲರೂ ಅಂತ್ಯಾಕ್ಷರಿ ಹಾಡ್ತಾ ಶ್ರೀಪತಿ ಅಲಿಯಾಸ್ ಸುಮಿತ್ರಾಪತಿಯನ್ನ ರೇಗಿಸ್ತಾ ಇದ್ವಿ.
"ಯಾವ್ದಾದ್ರೂ ಲಾಂಗ್ ಟ್ರಿಪ್ ಹೋಗೋಣಾ ಕಣ್ರೋ, ನಂಗಂತೂ ಈ ಗಿಜಿ ಗಿಜಿ ಟ್ರಾಫಿಕ್ಕೂ,ನನ್ನ ಪ್ರಾಜೆಕ್ಟ್ ಮ್ಯಾನೇಜರ್ ಆ ಸಿಡುಕು ಮೂತಿ ಸಿದ್ದಮ್ಮ,ಅದೇ ಕಂಪ್ಯೂಟರ್ ಸಿಸ್ಟಮ್ ನ ನೋಡೀ,ನೋಡೀ ತಲೆ ಕೆಟ್ಟು ಹೋಗಿಬಿಟ್ಟಿದೆ. ವೀಕೆಂಡ್ ಯಾವಾಗ ಬರುತ್ತೆ ಅಂತಾ ಕಾಯ್ತಾ ಇದ್ದೀನಿ..ಬೆಳಿಗ್ಗೆ ಆಫೀಸ್ ಗೆ ಹೋಗೋ ಅಷ್ಟೊತ್ತಿಗೇ ಮೂಡ್ ಕೆಟ್ಟು ಕೆರ ಹಿಡಿದಿರುತ್ತೆ ಅಂತಾದ್ರಲ್ಲಿ, ಅವಳು ಬೇರೆ ಅದು ಸರಿ ಇಲ್ಲ, ಕೆಲಸ ಮಾಡೋಕೆ ಇಷ್ಟ ಇಲ್ಲ ಅನ್ನುವವರು ಯಾಕ್ರೀ ಇಲ್ಲಿ ಬರ್ತಿರಾ ನಮ್ಮ ತಲೆ ತಿನ್ನೋಕೆ  ಅಂತಾ  ಕೇಳಿ ನನ್ನಕೆಲಸದ ಬಗ್ಗೆ ನನಗೇ ರೇಜಿಗೆ ಹುಟ್ಟೋ ಹಾಗೆ ಮಾಡ್ತಾಳೆ. ಬೆಳಿಗ್ಗೆ-ಬೆಳಿಗ್ಗೆನೇ ಮೂಡ್ ಆಗಿರುತ್ತೆ.. ಅಂತಾದ್ರಲ್ಲೂ 5 ದಿನ ವರ್ಕ್ ಮಾಡ್ತಿನಿ.. ನಮ್ಮ ಊರಲ್ಲಿ ಆಗಿದ್ರೆ ಟ್ರಕ್ಕಿಂಗ್ ಆದ್ರೂ ಹೋಗಿ ಕಾಲ ಕಳೀಬಹುದು. ಕಡೇಪಕ್ಷ ಪಿಕ್ ನಿಕ್ ಗಾದ್ರೂ ಹೋಗೋಣ ಅಂತಾ ಹೇಳೋ ಈ ಭೂಪನ್ನ ವೀಕೆಂಡ್ ಅಲ್ಲಿ ಎಲ್ಲಿಗಾದ್ರೂ ಕರಿಯೋಣಾ ಅಂದ್ರೆ ಅವನ ಗರ್ಲ್ ಫ್ರೆಂಡ್ ಸುಮಿತ್ರಾ ಅಲಿಯಾಸ್ ಸುಮಿ ಅಲಿಯಾಸ್ ಸಿಡುಕು ಮೂತಿ ಸಿದ್ದಮ್ಮನ ಜೊತೆ ಕಾಫಿ ಡೇ ಕೂತು "ನಾನು ತುಂಬಾ ಇಂಪಾರ್ಟೆಂಟ್ ಕೆಲಸದಲ್ಲಿ ಇದ್ದೀನಿ. ನೀವು ಹೋಗಿ ಬನ್ನಿ" ಅಂತಾ ಸಾಗ ಹಾಕಿಬಿಡುತ್ತಾನೆ.

ಅದಕ್ಕೆ ಎಲ್ಲರೂ ಅವನ ಬೆನ್ನು ಬಿದ್ದು ಪೀಡಿಸಿ ಅವನ ಊರಿಗೆ ಹೊರಟಿದ್ದೀವಿ. ನಮ್ಮ ಕಾಲ ಕಳಿಯೋಕೆ ಅವನ ಕಾಲು ಎಳೆದು ಹೀಗೆ ಕಾಟ ಕೊಡ್ತಾ ಇದ್ದೀವಿ ಅಷ್ಟೇ..

"ಇನ್ನೂ ನನ್ನ ರೇಗಿಸ್ತಾ ಇರ್ತಿರೋ ಅಥ್ವಾ ಮನೆ ಒಳಗೆ ಬರ್ತೀರೋ, ಬೆಳಿಗ್ಗೆ ಬೇಗ ಎದ್ದು ಹೊರಡಬೇಕು. ಟ್ರಕ್ಕಿಂಗ್ ಗೆ ಬರ್ತೀರೋ ಅಥ್ವಾ ಹೀಗೇ ಮಾತಾಡ್ತಾ ಬೆಳಿಗ್ಗೆ ಮಾಡ್ತೀರೋ" ಅಂದಾಗ ಸಮಯ ನೋಡಿದ್ರೆ 12 ಘಂಟೆ.

"ದೆವ್ವಗಳು ಓಡಾಡೋ ಹೊತ್ತಲ್ಲಿ, ಹೀಗೆ ಕೂತಿದಿರಲ್ಲ ಒಳಗಡೆ ಹೋಗಿ" ಅಂದ್ರು ಅಜ್ಜಯ್ಯ.. ನಿಮಗಿಂತಾ ಕಾಟ ಕೊಡೋ ದೆವ್ವ ಇನ್ನೆಲ್ಲಿರೋಕೆ ಸಾಧ್ಯ ಅಂತಾ ಅಂದುಕೊಂಡು ಎಲ್ಲರೂ ಒಲ್ಲದ ಮನಸ್ಸಿಂದ ಒಳಗಡೆ ಹೋದ್ವಿ.
ಬೆಳಿಗ್ಗೆ 5 ಘಂಟೆಗೇ ಹೊರಡಬೇಕಾಗಿದ್ದವರು ಹೊರಟಾಗ 8 ಘಂಟೆ. ಶ್ರೀಪತಿ ಅವರ ಅಮ್ಮ "ಕಾಫಿ ಕುಡ್ದು, ತಿಂಡಿ ತಿಂದುಕೊಂಡು ಹೋಗ್ರೋ.. ಇನ್ನೊಂದು ಅರ್ಧ ಘಂಟೆ" ಅಂದಾಗ, ನಾವೇನು ನೆಂಟರ ಮನೆಗೆ ಹೋಗ್ತಾ ಇಲ್ಲ, ಹೋಗ್ತಾ ಇರೋದು ಟ್ರಕ್ಕಿಂಗ್ ಗೆ ಅಂತಾ ಬಿಲ್ಡಪ್ ತಗೊಂಡು ಮನೆಲಿದ್ದಿದ್ದ ಕುರುಕು ತಿಂಡಿಗಳನ್ನೆಲ್ಲಾ ಬ್ಯಾಗಿಗೆ ತುಂಬಿಕೊಂಡು, ಹಿಮಾಲಯ ಹತ್ತೋಕೆ ಹೋಗುವವರ ತರ ಫೋಸು ಕೊಡ್ತಾ ಹೊರಟ್ವಿ. ಜೀಪ್ ಹತ್ತಿ ಕೂತುಕೊಂಡು ಇನ್ನೇನು ಹೊರಡುವಾಗ ಒಂದು ಬೆಕ್ಕು ಅಡ್ಡ ಬಂತು. ಅದಕ್ಕೆ ಸುಬ್ಬ ಅಲಿಯಾಸ್ ಸುಬ್ರಹ್ಮಣ್ಯ ಶಾಸ್ತ್ರಿ "ಒಳ್ಳೆ ಕೆಲಸಕ್ಕೆ ಹೊರಡುವಾಗ ಈ ಬೆಕ್ಕನ್ನು ದಾಟಿಕೊಂಡು ಹೋಗ್ತಾ ಇದ್ದೀನಿ, ಏನಾಗುತ್ತೋ" ಅಂದಾಗ , ನಾವೆಲ್ಲ "ಬೆಕ್ಕು ನಿನ್ನನ್ನು ದಾಟಿಕೊಂಡು ಹೋಗ್ತಾ ಇದೆ, ಅದಕ್ಕೇನು ಆಗುತ್ತೋ" ಅಂತಾ ಅಂದ್ವಿ.

ಅವನು ಅಂದಿದ್ದಕ್ಕೆ ಸರಿಯಾಗಿ ಆ ಡಕೋಟಾ ಜೀಪ್ ಅರ್ಧ ದಾರೀಲೇ ಕೆಟ್ಟು ನಿಂತುಕೊಳ್ತು. ಹಿಂದಕ್ಕೂ ಹೋಗೋ ಆಗಿಲ್ಲ, ಮುಂದಕ್ಕೂ ಬರೋ ಹಾಗಿಲ್ಲ, ಅಷ್ಟೊತ್ತಿಗೆ ಬಸ್ಯಾ ಅಲಿಯಾಸ್ ಬುಲೆಟ್ ಬಸ್ಯಾ ಇದ್ದವನು "ನಾನು ಹೇಳಿದೆ ಬುಲೆಟ್ ಅಲ್ಲಿ ಹೋಗೋಣಾ ಅಂತಾ,ನೀವೇ ಜೀಪ್ ಅಲ್ಲಿ ಹೋದ್ರೇ ಮಜಾ ಇರುತ್ತೆ ಅಂದಿದ್ದು, ಮಜಾ ಅಲ್ಲ ಇದು ಸಜಾ" ಅಂದ.

"ಹೇ ಸುಮ್ನಿರೋ,ಇವನೊಬ್ಬ .. ಕಟ್ಕೊಂಡ ಹೆಂಡತೀನೂ ಹಿಂಗೇ ನೋಡ್ಕೋತೀಯೋ ಇಲ್ವೋ, ಬುಲೆಟ್ ನ ಮಾತ್ರ ಬಿಡಲ್ಲ.. ಸೀಮೆಗಿಲ್ಲದೆ ಇರೋ ಬುಲೆಟ್ ಇವನದ್ದು" ಅಂತಾ ಸಿಡುಕಿದ್ಲು ಸಿಡುಕು ಮೂತಿ ಸಿದ್ದಮ್ಮ ಅಲಿಯಾಸ್ ಸುಮಿ.

ಕೊನೆಗೆ ಹರಸಾಹಸ ಮಾಡಿ ಇವರಿಬ್ಬರನ್ನು ಸಮಾಧಾನ ಮಾಡಿ ಮೆಕ್ಯಾನಿಕ್ ನ ಕರೆದುಕೊಂಡು ಬರೋ ಹೊತ್ತಿಗೆ ಸೂರ್ಯ ನಡು ನೆತ್ತಿಗೆ ಬಂದಿದ್ದ. ಅವನು ಇದನ್ನ ರೆಡಿ ಮಾಡೋಕೆ 1 ರಿಂದ 2 ಘಂಟೆ ಆಗುತ್ತೆ ಅಂದ. ಟ್ರಕ್ಕಿಂಗ್ ಪ್ಲಾನ್ ಕ್ಯಾನ್ಸಲ್ ಅಂದಾಗ ಆ ಕಡೆಯಿಂದ ಒಂದು ಐಡಿಯಾ ಬಂತು. ಅದನ್ನು ಕೊಟ್ಟಿದ್ದು ಗಂಗಾ ಅಲಿಯಾಸ್ ಗೂಗಲ್ ಗಂಗಾ.
ಇಲ್ಲೇ ಪಕ್ಕದಲ್ಲೇ ಒಂದು ಫಾಲ್ಸ್ ಇದೆ, ನಾನು ಗೂಗಲ್ ಅಲ್ಲಿ ನೋಡಿದೆ. ಬೇಕಾದ್ರೆ ಚೆಕ್ ಮಾಡಿ ,ಬರಿ ಎರಡು ಕಿಲೋಮೀಟರ್ ಅಷ್ಟೇ ಇರೋದು ಅಂತಾ ಹೇಳಿದ್ಲು. ಅಂದ ಹಾಗೆ ಈ ಗೂಗಲ್ ಗಂಗಾ ಏನು ಹೇಳಿದ್ರೂ ಅವಳು ಗೂಗಲ್ ಅಲ್ಲಿ ಅದನ್ನು ಚೆಕ್ ಮಾಡಿನೇ ಹೇಳೋದು.

ಅವಳೇ ನಮ್ಮ ಗ್ಯಾಂಗ್ ನ ಲೀಡರ್ ಆಗಿದ್ದರಿಂದ ಅವಳ ಮಾತನ್ನು ಮೀರದೆ ಗೂಗಲ್ ಗಂಗಾಳ ಮಾತು ಕೇಳಿ "ಗಂಗಾ ಮಾತೆ"ಯನ್ನು ಅರಸಿಕೊಂಡು ಹೊರಟೆವು. ಹೊರಡುವುದಕ್ಕಿಂತ ಮುಂಚೆ ಅಲ್ಲೇ ಪಕ್ಕದಲ್ಲಿದ್ದ ಟೀ ಅಂಗಡಿಯಲ್ಲಿ ಆ ಫಾಲ್ಸ್ ಬಗ್ಗೆ ವಿಚಾರಿಸಿದೆವು. ಅವರು ಹೇಳಿದ ಪ್ರಕಾರ ಅಲ್ಲಿ ಸುತ್ತಮುತ್ತಲಿನ ಎರಡು ಕಿಲೋಮೀಟರ್ ಅಲ್ಲಿ ಫಾಲ್ಸ್ ಯಾವುದೂ ಇಲ್ಲ. ನಿಮಗ್ಯಾರೋ 'ಫಾಲ್ಸ್'(ತಪ್ಪು) ಆಗಿ ಹೇಳಿರಬೇಕು ಅಂತಾ ಹೇಳಿ ಗಹಗಹಿಸಿ ನಕ್ಕರು.

ಅವರ ಆ ಕಂಗ್ಲೀಷು,ಕೆಂಪು ಹಲ್ಲು, ಬಾಯಲ್ಲಿದ್ದ ಎಲೆ-ಅಡಿಕೆ,ತಲೆಗೆ ಮೆತ್ತಿದ್ದ ಎಣ್ಣೆ ಎಲ್ಲವನ್ನೂ ನೋಡಿದ ಗಂಗಾ ಥೇಟ್ ಆಪ್ತಮಿತ್ರದ "ಗಂಗಾ"ಳಂತೆಯೇ ಭುಸುಗುಡುತ್ತಾ "ಬನ್ರೋ, ಆ ಗೂಗಲ್ ಗಿಂತಾ ಗೊತ್ತಾ ಇವ್ನಿಗೆ" ಅಂತಾ ದಂಡಿನ ಸಮೇತ ಹೊರಟೇ ಬಿಟ್ಳು.

ಆ ಕಾಡಿನ ಮದ್ಯೆ ಕಿಲೋಮೀಟರ್ ಗೋ, ಎರಡು ಕಿಲೋ ಮೀಟರ್ ಗೋ ಒಂದು ಮನೆ. ಅದರಲ್ಲಿ ಅಪರೂಪವಾಗಿ ಕಾಣಿಸೋ ಜನಗಳು ಅಂತಾದ್ರಲ್ಲಿ ಸಿಕ್ಕಿದ ಆ ಟೀ ಅಂಗಡಿಯವನನ್ನೂ ಬೈಕೊಂಡು ದಾರಿ ಕೇಳದೆ ಬಂದೆವಲ್ಲಾ, ನಮ್ಮ ಆಪ್ತರಕ್ಷಕ ಯಾರಪ್ಪಾ? ಅಂತಾ ಪೇಚಾಡ್ತಾ ಇರುವಾಗ, ಗಂಗಾ ಗೂಗಲ್ ಗುರುವಿನ ಬ್ರಹ್ಮಾಂಡ ರೂಪದ ಮತ್ತೊಂದು ಸ್ವರೂಪ 'ಗೂಗಲ್ ಮ್ಯಾಪ್' ನ ದರ್ಶನ ಮಾಡಿಸಿದಳು. ಪುಣ್ಯಕ್ಕೆ ಇಂಟರ್ನೆಟ್ ಇತ್ತು. ಸುತ್ತ-ಮುತ್ತಲಿನ ಕಾಡು, ಆ ಮರಗಳನ್ನು ನೋಡಿದ್ರೆ '6-5=2' ನೆನಪಾಗ್ತಾ ಇತ್ತು. ಬಂದಿದ್ದ ಆ ಜೀಪ್ ಕೂಡಾ ಇಂಥಾ ರಾಜರಸ್ತೆಯಲ್ಲಿ ನನಗೆ ಬರೋದಕ್ಕೆ ಯೋಗ ಇಲ್ಲ, ಅಲ್ಲಿ ರಾಜರ ಹಾಗೆ ಒಬ್ಬೊಬ್ಬರೇ ನಡ್ಕೊಂಡು ಹೋಗಿ ಅಂತಾ ಹೇಳಿ ಕಳುಹಿಸಿ ಬಿಟ್ಟಿತ್ತು.

ಟ್ರಕ್ಕಿಂಗ್ ಗೆ ಅಂತಾನೇ ಬಂದದ್ದಲ್ವಾ,ನಡೆಯೋದ್ರಲ್ಲಿ ಏನಿದೆ ಅಂತಾ ನಡ್ಕೊಂಡು ಹೊರಟ್ವಿ.ಹಾಗೆ ನಡೀತಾ,ನಡೀತಾ ಬ್ಯಾಗ್ ನಲ್ಲಿದ್ದ ಚಕ್ಕುಲಿ,ಕೋಡುಬಳೆ,ರವೆ ಉಂಡೆ ಇವುಗಳ ಜೊತೆಗೆ ಕಸಿನ್ಸ್ ಲೇಸ್, ಕುರ್-ಕುರೆ, ಚಿಪ್ಸ್ ಎಲ್ಲಾ ಜೊತೆಯಾದ್ದರಿಂದ ಕೈ-ಕಾಲಿಗಿಂತ ಬಾಯಿ-ಹೊಟ್ಟೆಗೇ ಕೆಲಸ ಹೆಚ್ಚಾಗಿತ್ತು.

ಅಷ್ಟರಲ್ಲೇ ರಮೇಶ ಕಿರುಚಿಕೊಂಡ, "ನೋವು-ನೋವು ನಂಗೆ ನಡೆಯೋದಕ್ಕೆ ಆಗ್ತಾ ಇಲ್ಲ" ಅಂತಾ, ಇಷ್ಟೊತ್ತು ಚೆನ್ನಾಗಿದ್ದ ಇವಾಗ ಏನಾಯ್ತಪ್ಪ ಅಂತಾ ನೋಡಿದ್ರೆ, ಜಿಗಣೆ ಆರಾಮಾಗಿ ಅವನ ಕಾಲಿಂದ ರಕ್ತ ಹೀರುತ್ತಾ ಇತ್ತು. ಇವನು ನೋವು-ನೋವು ಅಂತಾ ನಮ್ಮ ಜೀವ ಹೀರುತ್ತಾ ಇದ್ದ.ಪ್ಯಾಂಟ್ ಹಾಕೋ ಅಂದ್ರೇ ಪ್ಯಾಷನ್ ಅಂತಾ ಚಡ್ಡಿ ಹಾಕ್ಕೊಂಡು ಬಂದ್ಯಲ್ಲಾ ನಿಂಗೆ ಹಿಂಗೇ ಆಗಬೇಕು ಅಂತಾ ಮನಸಲ್ಲೇ ಅಂದ್ಕೊಂಡು  "ಇಷ್ಟಕ್ಕೇ ಹಿಂಗಾಡ್ತಾರೇನೋ, ಬಾರೋ" ಅಂತಾ ಆ ಜಿಗಣೆಯನ್ನ ಅಲ್ಲೆ ಬಿಟ್ಟು ಇವನನ್ನು ಎಳ್ಕೊಂಡು ಹೊರಟ್ವಿ.
"ಲಾಸ್ಟ್ ಟರ್ನ್,ಟೇಕ್ ಲೆಫ್ಟ್" ಅಂತಾ ಇತ್ತು. ಅಲ್ಲಿ ಹೋಗಿ ನೋಡ್ತೀವಿ..
ಅಬ್ಬಬ್ಬಾ! ಎಂತಾ ನೀರು ಅಂತೀರಾ..? ಜೀವಮಾನದಲ್ಲೇ ಇನ್ಯಾವತ್ತೂ ಅಂಥಾ ಫಾಲ್ಸ್ ನೋಡೋಕೆ ಸಾಧ್ಯಾನೇ ಇಲ್ಲ. ಎಲ್ಲಾ ಗೂಗಲ್ ಮಹಾತ್ಮೆ..

ಆ ಫಾಲ್ಸ್ ಹೇಗಿತ್ತು ಅಂದ್ರೆ 5 ಅಡಿ ಆಳದ ಚಿಕ್ಕ ಗುಂಡೀಲಿ 2 ಅಡಿ ನೀರಿತ್ತು, ನಕ್ಕು-ನಕ್ಕು ನಮ್ಮ ಕಣ್ಣಲ್ಲೂ ನೀರಿತ್ತು. ನಾವೇ ಅದಕ್ಕೊಂದು ಹೊಸ ನಾಮಕರಣ ಮಾಡಿದ್ವಿ 'ಗೂಗಲ್ ಗಂಗಾ' ಅಂತಾ. ವಾಪಸ್ ಬರ್ತಾ ಒಂದಷ್ಟು ಸೆಲ್ಫಿ ತೆಕ್ಕೊಂಡು, ತುಂಬಾ ಅದ್ಭುತ ಪ್ರಯಾಣ, ದಾರಿ ಸುಗಮವಾಗಿದೆ ಅಂತಾ ಗೂಗಲ್ ಮ್ಯಾಪ್ ಅಲ್ಲಿ ರಿವ್ಯೂ ಮಾಡಿ,ನಮ್ಮಂತೆ ಇನ್ನೊಂದಷ್ಟು ಜನ 'ಗೂಗಲ್ ಗಂಗಾ'ನ ದರ್ಶನ ಮಾಡಿ ಪಾವನವಾಗಲಿ ಅಂದ್ಕೊಂಡು ಬಂದ ದಾರಿಗೆ ಸುಂಕ ಇಲ್ಲ ಅನ್ನೋ ಹಾಗೆ 'ಗೂಗಲ್ ಗಂಗಾ'ನ ಹಿಂಬಾಲಿಸಿದ್ವಿ..

~ವಿಭಾ ವಿಶ್ವನಾಥ್

ನಿನ್ನೊಡನೆ ನಾ..

ನಿನ್ನಯ ನೂರಾರು ಮಾತುಗಳಿಗೆ
ನಾ ಸಾಂದ್ರಗೊಂಡಿರುವೆ..
ನೀ ಹೇಳುವ ಪ್ರತಿ ಉಕ್ತಿಗೂ
ನಾ ಲಯಗೊಂಡಿರುವೆ..

ನೀನಾಡಿದ ಎಲ್ಲಾ ನುಡಿಗಳಿಗೂ
ನಾ ಕಿವಿಗೊಟ್ಟಿರುವೆ..
ನೀ ಮಾಡಿದ ಕರೆಗಳಿಗೆಲ್ಲಾ
ನಾ ತಡಮಾಡದೆ ಓಗೊಟ್ಟಿರುವೆ..

ನಿನ್ನ ಪ್ರೀತಿ-ಪ್ರೇಮದ ಭಾಷ್ಯಗಳಿಗೆಲ್ಲಾ
ನಾ ಮನ ಮಿಡಿದಿರುವೆ..
ನಿನ್ನ ದುಃಖ-ದುಮ್ಮಾನಗಳಿಗೆಲ್ಲಾ
ನಾ ಕಂಬನಿಯಾಗಿರುವೆ..

ಲಯ ತಪ್ಪಿದ ನಿನ್ನ ಬಡಿತಕೆ
ನಾ ಉಸಿರ ಬೆಸೆದಿರುವೆ..
ಇಷ್ಟೆಲ್ಲಾ ಮಾಡಿದ ಬಳಿಕವೂ
ನಾ ನನ್ನತನವ ಬಿಡದಾಗಿರುವೆ..

ಅದೇಕೋ ನಿನ್ನ ಚುಚ್ಚುಮಾತಿಗೆ
ನಾ ಮನಪೂರ್ತಿ ಅತ್ತಿರುವೆ..
ನಿನ್ನ ಜರ್ಜರಿತಗೊಳಿಸುವ ವಾಕ್ಯಗಳಿಗೆಲ್ಲಾ
ನಾ ಇಂಚಿಂಚೂ ಸೊರಗುತ್ತಿರುವೆ..

ಬಿಟ್ಟೂ ಬಿಡದೆ ಕಾಡುತಿರುವ ಗೊಂದಲಕ್ಕೆಲ್ಲಾ
ನಾ ಅಕಾರಣವಾಗಿ ಭಯ ಪಡುತ್ತಿರುವೆ..
ನಿನ್ನ ಬಿಟ್ಟು ಹೊರಡಬೇಕೆಂಬ ಆಲೋಚನೆಗೇ
ನಾ ದಿನಪೂರ್ತಿ ದಿಗಿಲಾಗಿರುವೆ..

ಎಷ್ಟಾದರೂ ನೀ ಲೇಖನಿ
ನಾ ಕಾಗದ ಅಲ್ಲವೇ..?
ನೀ ಅಕ್ಷರಗಳ ಸೃಷ್ಠಿಕರ್ತನಾದರೆ
ನಾನು ನಿಮಿತ್ತ ಮಾತ್ರ ಅಲ್ಲವೇ..?

~ವಿಭಾ ವಿಶ್ವನಾಥ್

ಮಂಗಳವಾರ, ಆಗಸ್ಟ್ 21, 2018

ಎಲ್ಲಾ ಇದ್ದರೂ ಏನೋ ಇಲ್ಲದಂತೆ..

ಹೌದು, ಅಲ್ಲಿನ ಪರಿಸ್ಥಿತಿಯೇ ಹಾಗಿತ್ತು. ಅಲ್ಲಿ ಸುಖ ಮತ್ತು ಆರೋಗ್ಯಕರ ಜೀವನಕ್ಕೆ ಬೇಕಾದ ಎಲ್ಲಾ ಪರಿಸ್ಥಿತಿಯೂ ಇತ್ತು. ಆದರೂ ಏನೋ ಒಂದು ರೀತಿಯ ಕೊರತೆ, ಆ ಕೊರತೆಯೇ ಪ್ರೀತಿ.

ಅದೊಂದು ವೃದ್ದಾಶ್ರಮ, ಗಲಾಟೆ-ಗದ್ಧಲಗಳಿಲ್ಲದ ಸ್ಥಳದಲ್ಲಿದೆ. ಸುತ್ತ-ಮುತ್ತಲೆಲ್ಲಾ ವಿಶಾಲವಾದ ಹಸಿರು ಪ್ರದೇಶ, ಗೋಶಾಲೆ ಕೂಡಾ ಇದೆ ಜೊತೆಗೆ ದೇವಾಲಯವೂ ಇದೆ. ಆದರೆ ಅದರ ಸುತ್ತ ಎತ್ತರದ ಕಾಂಪೌಂಡ್ ಕೂಡಾ ಇದೆ. ಗೇಟಿಗೆ ಸದಾ ಬೀಗ ಜೊತೆಗೊಬ್ಬ ಕಾವಲುಗಾರ. ಅಲ್ಲಿಂದ ಹೊರ ಹೋಗಲು ಮತ್ತು ಒಳಬರಲು ಅಲ್ಲಿನವರ ಅನುಮತಿ ಪಡೆದು ಅದನ್ನು ಪುಸ್ತಕದಲ್ಲಿ ನಮೂದಿಸಿಯೇ ಹೋಗಬೇಕು.ಅದೊಂದು ಚಿನ್ನದ ಪಂಜರದ ತರಹ..

ಒಳ ಹೊಕ್ಕರೆ ಆ ಚಿನ್ನದ ಪಂಜರದಲ್ಲಿ ಮತ್ತೆರಡು ವಿಭಾಗ. ಬಡ ಮತ್ತು ಮಧ್ಯಮ ವರ್ಗದವರಿಗೆ ಒಂದು ರೀತಿಯ ವಸತಿ ಸೌಲಭ್ಯವಾದರೆ, ಶ್ರೀಮಂತ ವರ್ಗದವರಿಗೇ ಮತ್ತೊಂದು ರೀತಿಯ ವಸತಿ ಸೌಲಭ್ಯ. ಆದರೆ ಊಟ-ತಿಂಡಿಯ ವ್ಯವಸ್ಥೆ ಎಲ್ಲರಿಗೂ ಒಂದೇ. ಆದರೆ ವಸತಿ ವ್ಯವಸ್ಥೆಯಿಂದ ಅಗೋಚರ ಹೆರೆ ಎಳೆದಂತೆ ಭಾಸವಾಗುವ ವೃದ್ಧಾಶ್ರಮ. ಅವರು ಇವರ ಜೊತೆ ಬೆರೆಯರು, ಇವರು ಅವರ ಜೊತೆ ಬೆರೆಯರು..

ತಮ್ಮಷ್ಟಕ್ಕೆ ಸುಮ್ಮನೆ ಕುಳಿತವರು ಕೆಲವರಾದರೆ, ಮತ್ತೆ ಕೆಲವರು ದೇವಾಲಯದಲ್ಲಿ, ಮತ್ತಷ್ಟು ಮಂದಿ ಆಕಾಶ ನೋಡುತ್ತಾ, ಇನ್ನು ಕೆಲವರು ಕಸೂತಿ ಹಾಕುತ್ತಾ, ಮತ್ತಷ್ಟು ಜನ ಟಿ.ವಿ ಯ ಮುಂದೆ, ಮತ್ತೆ ಕೆಲವರು ಮಾತನಾಡುತ್ತಾ ಕೂತಿದ್ದರೆ, ಮತ್ತೆ ಕೆಲವರು ಬಟ್ಟೆ ಒಗೆಯುತ್ತಾ, ಮತ್ತೆ ಕೆಲವರದು ನಿದ್ರೆ. ಹೀಗೇ ಅವರವರ ಲೋಕಕ್ಕೆ ಅವರವರು ಹೊಂದಿಕೊಂಡು ಬಿಟ್ಟಿದ್ದರು. ಕೆಲವರಿಗೆ ಮಾತನಾಡುವ ಅಸ್ಥೆಯಿದ್ದರೆ ಮತ್ತೆ ಕೆಲವರಿಗೆ ಸಂಕೋಚ.

ಕೆಲವರು ವೃದ್ಧಾಶ್ರಮ ಶುರುವಾದಾಗಿನಿಂದ ಅಲ್ಲಿಯೇ ಇದ್ದರೆ ಮತ್ತೆ ಹಲವರು ಇತ್ತೀಚೆಗೆ ಬಂದವರು. ಹೀಗೇ ಒಬ್ಬರು ಅಜ್ಜಿಯನ್ನು ಮಾತನಾಡಿಸಿದಾಗ "ಇಲ್ಲಿಗೆ ಹೊಂದಾಣಿಕೆ ಆಗಿದ್ದೀರಾ..?" ಎಂದೆ. ಅದಕ್ಕೆ ಅವರು ಕಣ್ಣು ತುಂಬಾ ನೀರು ತುಂಬಿಕೊಂಡು "ವಿಧಿ ಇಲ್ಲವಲ್ಲಾ, ಮತ್ತೇನು ಮಾಡುವುದು ? ಮಗ ತಂದು ಸೇರಿಸಿ ಹೋಗಿದ್ದಾನೆ" ಎಂದರು. ಕೆಲವರು ಇಷ್ಟಪಟ್ಟು ಅಲ್ಲಿದ್ದರೆ ಕೆಲವರದು ಅನಿವಾರ್ಯತೆ.

ಅಲ್ಲಿನ ಆಡಳಿತ ವರ್ಗದವರು ಎಲ್ಲಾ ಸೌಕರ್ಯಗಳನ್ನೂ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲಿ ಮೇಲ್ನೋಟಕ್ಕೆ ಎಲ್ಲವೂ ಇದೆ ಎಂದೆನಿಸಿದರೂ, ಪ್ರೀತಿಯ ಕೊರತೆ ಇದೆ ಎಂದು ನನಗನ್ನಿಸಿತು. ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಅಲ್ಲಿ ಅನಾಥ ಮಕ್ಕಳು ಸಹಾ ಕೆಲವರಿದ್ದಾರೆ. ಆದರೆ ಈ ವೃದ್ಧರು ಯಾರೂ ಅಲ್ಲಿಗೆ ಸುಳಿಯುವುದಿಲ್ಲ. ಅದು ಅಲ್ಲಿನ ರೀತಿ-ನೀತಿಯೋ ಅಥವಾ ತಮ್ಮ ಪ್ರೀತಿಯನ್ನು ಹಂಚಲು ಅವರಿಗೆ ಇಷ್ಟವಿಲ್ಲವೋ ಗೊತ್ತಿಲ್ಲ.

ಗೇಟಿಗೆ ಹಾಕಿದ ಬೀಗದ ಕುರಿತು ಕೇಳಿದಾಗ ತಿಳಿದು ಬಂದದ್ದಿಷ್ಟು. ಇಲ್ಲಿನ ಕೆಲವರು ತಪ್ಪಿಸಿಕೊಂಡು ಹೋಗುತ್ತಾರೆ, ಹಾಗಾಗಿ ಈ ಬೀಗ ಎಂದರು. ಸ್ವಚ್ಛಂದ ಪರಿಸರದಲ್ಲಿ ಬೆಳೆದಿದ್ದವರನ್ನು ತಂದು ಬಂಧಿಸಿದ ಪರಿಸ್ಥಿತಿಯಲ್ಲಿ ಅವರಾದರೂ ಏನು ಮಾಡಲು ಸಾಧ್ಯ? ಮತ್ತೆ ಕೆಲವರು ಮನೆಯಲ್ಲಿ ಜಗಳವಾಡಿಕೊಂಡು ಇಲ್ಲಿಗೆ ಬಂದು ಬಿಡುತ್ತಾರೆ. ಹಾಗಾಗಿ ಇಲ್ಲಿಗೆ ಸೇರಲು ಮಕ್ಕಳ ಅಥವಾ ಸಂಬಂಧಿಕರ ಒಪ್ಪಿಗೆಯೂ ಬೇಕು. ಮನೆಯಲ್ಲಿ ಬೈಗುಳ ಕೇಳಿಕೊಂಡು, ಸರಿಯಾಗಿ ಊಟ-ತಿಂಡಿ ಇಲ್ಲದೆ ಬದುಕುವುದಕ್ಕಿಂತ ಇದು ಲೇಸು ಎನ್ನುವವರೂ ಇದ್ದರು. 

ಹುಷಾರಿಲ್ಲದಿರುವಾಗ ಅಥವಾ ವೃದ್ಧರು ತೀರಿಕೊಂಡಾಗ ಹೇಳಿದರೂ ಬಾರದ ಮಕ್ಕಳು ಹಣ, ಒಡವೆಗಳಿಗಾಗಿ ಆನಂತರ ಬಂದದ್ದೂ ಇದೆ ಎಂದಾಗ ನಿಜಕ್ಕೂ ಆಶ್ಚರ್ಯವಾಯಿತು. ಯಾವುದೋ ಸಿನಿಮಾದಲ್ಲಿ ನೋಡಿದ್ದ ಸ್ಥಳ ಭೇಟಿ ನೀಡಿದಾಗ ಬೇರೆಯದೇ ಅನುಭವ ನೀಡಿತು. ಎಲ್ಲಾ ವೃದ್ಧಾಶ್ರಮಗಳೂ 'ರಾಜಕುಮಾರ'ದ 'ಕಸ್ತೂರಿ ನಿವಾಸ'ಗಳಾಗಲು ಸಾಧ್ಯವಿಲ್ಲವಲ್ಲಾ.

ವೃದ್ಧಾಶ್ರಮಗಳು ಅನಿವಾರ್ಯವಲ್ಲ, ಬದುಕಿನ ಅವಶ್ಯಕತೆಗೆ ಪ್ರೀತಿ, ಅನುಬಂಧಗಳು ಮುಖ್ಯ.ಮಕ್ಕಳು ತಮ್ಮ ತಂದೆ-ತಾಯಂದಿರನ್ನು ವೃದ್ಧಾಶ್ರಮಗಳಿಗೆ ಸೇರಿಸದಿದ್ದರೇ ಒಳಿತು. ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಇಂದಿನ ಚಿಗುರೆಲೆಗಳೇ ನಾಳಿನ ಹಣ್ಣೆಲೆಗಳು. ಅಲ್ಲವೇ? ಮಕ್ಕಳ ಹಟ, ಕೋಪ, ತುಂಟಾಟಗಳನ್ನೆಲ್ಲಾ ಸಹಿಸಿಕೊಂಡು ತಿದ್ದಿ-ತೀಡಿ ಬುದ್ದಿ ಹೇಳಿ ಕಾಡುಕಲ್ಲನ್ನು ಮೂರ್ತಿಗಳನ್ನಾಗಿಸಿದ ಶಿಲ್ಪಿಗಳನ್ನು ಸ್ವಲ್ಪ ಸಹಿಸಿಕೊಳ್ಳಬಹುದಲ್ಲವೇ? ಕಳೆದು ಹೋದ ಕಾಲವಂತೂ ಮತ್ತೆ ಬಾರದು. ಇನ್ನಾದರೂ ಎಲ್ಲರೂ ಎಚ್ಚೆತ್ತು ವೃದ್ಧಾಶ್ರಮಗಳ ಸಂಖ್ಯೆಯನ್ನು ಇಳಿಮುಖಗೊಳಿಸಿದರೆ ಒಳಿತು.

~ವಿಭಾ ವಿಶ್ವನಾಥ್

ಶನಿವಾರ, ಜುಲೈ 14, 2018

ಪೌರ್ಣಮಿ

ಕತ್ತಲ ಕಾಲಗರ್ಭದೊಳಗೆ
ಚಂದ್ರ ವಿಲೀನವಾದ..
ಸಮುದ್ರದ ಉಬ್ಬರವಿಳಿತಗಳಿಗೆ
ಸ್ಪಂದಿಸದೆ ಮರೆಯಾಗಿ ಹೋದ..
ದಿನದಿನವೂ ಕೊಂಚ-ಕೊಂಚವೇ ಮಂಕಾಗಿ
ಕರಗುತಾ ತೀರಿಯೇ ಹೋದ..
ನಕ್ಷತ್ರಗಳೊಡನೆ ಚಕ್ಕಂದವಾಡದೆ ದೂರಾಗಿ
ತನ್ನ ಮುಸುಕಿನೊಳಗೇ ಹುದುಗಿ ಹೋದ..
ಮನದಾಳದಿ ಮಾಸಿಯೇ ಹೋದಂತಿದ್ದ
ನೆನಪುಗಳ ನೆನೆದು ಬಿಕ್ಕುತ್ತಾ ಕೂತ
ಭಗ್ನ ಪ್ರೇಮಿಗಳಿಗೂ ನಿಲುಕದೆ,
ತನ್ನ ಬಿಂಬದಲ್ಲೇ ಹೊಸ ಪ್ರೀತಿಯ ಕಾಣುವ
ಹೊಸ ಪ್ರೇಮಿಗಳಿಗೂ ಎಟುಕದೆ,
ತನ್ನೊಳಗೇ ಅವಿತ ಹೊತ್ತಲಿ..
ಮರೆಯಾದ ಚಂದಿರನ ನೆನೆದು
ಊಳಿಡುವ ನಾಯಿಯೂ ಮೌನವಾಗಿ
ಚಂದಿರನ ನೆನಪೇ ಮಾಸಿಹೋಗುವಂತಾದಾಗ
ತನ್ನ ನೆನೆಯುವವರಾರಿಲ್ಲವೆಂದು ಕೊರಗುತ್ತಾ,
ಹೀಗೆಯೇ ಕರಾಳ ರಾತ್ರಿಯ
ಮಡಿಲಲ್ಲೇ ಕಾಲವಾಗಬೇಕೆಂದುಕೊಂಡವ!
ಊಟ ಮಾಡದೆ, ತನ್ನ ಕಾಣಬಯಸುವ
ಪುಟ್ಟ ಕಂದನ ಅಳುವಿಗೆ,ಹಸಿವಿಗೆ ಕರಗಿ..
ಬಾಲಭಾಷೆಯ ಕರೆಗೆ ಓಗೊಟ್ಟು..
ಮೋಡದ ಮರೆಯಿಂದ ಇಷ್ಟಿಷ್ಟೇ ಇಣುಕಿ.!
ಪ್ರಪುಲ್ಲತೆಯಿಂದ ಪ್ರಕಾಶಿಸುವುದ ಕಂಡು
ಅಮ್ಮನೆಂದಳು ಇಂದು "ಪೌರ್ಣಮಿ"

~ವಿಭಾ ವಿಶ್ವನಾಥ್

ಶನಿವಾರ, ಜೂನ್ 23, 2018

ಅಂತರಗಳ ಅಂತರಂಗ

ಹಸಿರು ಸಿರಿ, ಹೊಲ-ಗದ್ದೆಗಳ ಸಾಲು, ಶುದ್ಧವಾದ ಗಾಳಿ, ರೈತನೆಂಬ ಅನ್ನದಾತ, ತುಂಬಿದ ಕೆರೆ-ಕಟ್ಟೆಗಳು, ಸ್ವಚ್ಛಂದವಾಗಿ ಆಡುತ್ತಿರುವ ಪುಟಾಣಿಗಳು ಇದು ಹಳ್ಳಿ. ಬೆಂಕಿಪೊಟ್ಟಣದಂತೆ ಒಂದಕ್ಕೊಂದು ಅಂಟಿಕೊಂಡಿರುವ ಕಾಂಕ್ರೀಟ್ ಕಟ್ಟಡಗಳು, ಒಂದು ಅಂತಸ್ತಿನ ಮೇಲೆ ಮತ್ತೊಂದು ಅಂತಸ್ತಿನಂತೆ ಪೇರಿಸಿಟ್ಟ ಬಹುಮಹಡಿ ಮನೆಗಳು, ಟ್ರಾಫಿಕ್ ನಲ್ಲಿ ಗಿಜಿಗುಡುವ ವಾಹನಗಳು ಇದು ಪಟ್ಟಣವೆಂದು ನಾವೇ ಊಹಿಸಿಕೊಂಡುಬಿಡುವ ದೃಶ್ಯಗಳು.
    ಆದರೆ ಗ್ರಾಮೀಣ ಮತ್ತು ಪಟ್ಟಣಗಳ ಜೀವನದ ಆಂತರ್ಯ ಈಗೀಗ ಬದಲಾಗುತ್ತಿದೆ. ಒಬ್ಬರಿಗೊಬ್ಬರು ನೆರವಾಗುತ್ತಾ, ಕಷ್ಟ-ಸುಖಗಳಲ್ಲಿ ಹಳ್ಳಿ ಜನರು ನೆರವಾಗುತ್ತಿದ್ದರೆ, ಈಗೀಗ ಪಟ್ಟಣಗಳಲ್ಲೂ ಈ ಸಂಸ್ಕೃತಿ ಮತ್ತೆ ನೆಲೆಸುತ್ತಿದೆ.
        ದೂರದರ್ಶನ ಮತ್ತು ಮುಂದುವರಿದ ಆಲೋಚನೆಗಳಿಂದ ಹಳ್ಳಿಯ ಜನರು ಪಟ್ಟಣಗಳತ್ತ, ಆಢಂಬರದ ಜೀವನಕ್ಕೆಂದು ಮುಖ ಮಾಡುತ್ತಿದ್ದರೆ, ಪಟ್ಟಣದ ಜನರು ಕಲುಷಿತ ವಾತಾವರಣ ಮತ್ತು ಒತ್ತಡಗಳಿಂದ ಬೇಸತ್ತು ಹಳ್ಳಿಯ ಜೀವನದತ್ತ ಮುಖ ಮಾಡುತ್ತಿದ್ದಾರೆ.
     ಅತಿವೃಷ್ಠಿ-ಅನಾವೃಷ್ಠಿ, ಬೆಲೆಕುಸಿತ ಮುಂತಾದ ಕಾರಣಗಳಿಂದ ಬೇಸತ್ತ ರೈತನೆಂಬ ಕೃಷಿ ಬಿಡುವ ನಿರ್ಧಾರ ಮಾಡುತ್ತಿದ್ದರೆ, ರಾಸಾಯನಿಕ ತರಕಾರಿ ಮತ್ತು ಜಂಕ್ ಫುಡ್ ಗಳಿಂದ ಬೇಸತ್ತ ಪಟ್ಟಣದ ಮಂದಿ ಸಾವಯವ ಕೃಷಿಯ ಬಗ್ಗೆ ಒಲವು ತೋರುತ್ತಿದ್ದಾರೆ.
     ಗ್ರಾಮೀಣ ಮತ್ತು ಪಟ್ಟಣದ ಜೀವನಗಳ ಅಂತರಗಳು ಸೃಷ್ಠಿಯಾದಂತೆ ಜನರ ಆಂತರ್ಯಗಳು ವಿರುದ್ಧ ಧ್ರುವಗಳತ್ತ ಆಕರ್ಷಿತವಾಗುತ್ತಿವೆ.

~ವಿಭಾ ವಿಶ್ವನಾಥ್

ಸೋಮವಾರ, ಜೂನ್ 11, 2018

ಮಳೆರಾಯನ ಜೊತೆ...

ಬೆಳಿಗ್ಗೆಯಿಂದ ಒಂದೇ ಸಮ ಸುರಿಯುತ್ತಿರುವ ಮಳೆಯನ್ನು ನೋಡಿದರೆ ಇದು ಮಲೆನಾಡೇನೋ ಎಂಬ ಸಂದೇಹ ಬಂದದ್ದಂತೂ ಸುಳ್ಳಲ್ಲ. ಆದರೆ ವ್ಯಾವಹಾರಿಕ ಪ್ರಪಂಚದಲ್ಲಿಯೇ ಮುಳುಗಿ ಹೋಗಿರುವ ನಮ್ಮಂತಹವರಿಗೆ ಇತ್ತೀಚಿನ ವರ್ಷಗಳಲ್ಲಿ ಮಳೆ ಬಂದರೆ ಕಿರಿಕಿರಿ. ಅನಗತ್ಯವಾಗಿ ಯೋಚಿಸಿಕೊಂಡು "ಛತ್ರಿ ತಗೊಂಡೇ ಹೋಗ್ಬೇಕಾ?", "ರೇನ್ ಕೋಟ್ ಬೇರೆ ಜೊತೆ ಮಾಡಿಕೊಂಡು ಹೋಗ್ಬೇಕಾ?", "ಬೆಂಗಳೂರಿನ ಟ್ರಾಫಿಕ್ ಅಲ್ಲಿ ಈ ಮಳೆ ಬೇರೆ" ಎಂಬಂಥಹಾ ರೇಜಿಗೆ ಹುಟ್ಟಿಸುವ ಮಾತುಗಳ ದಿನಚರಿಯಲ್ಲಿ ಮಳೆಯನ್ನು ಸವಿಯುವ ನೆನಪುಗಳೇ ಮರೆವಾಗಿಬಿಟ್ಟಿವೆ. ರೈತಾಪಿ ವರ್ಗದ ಜನರಿಗೆ ಈ ಮಳೆ ಬೇಕಿತ್ತು ಅನ್ನಿಸಿದರೂ, ಕಾರ್ಪೊರೇಟ್ ವರ್ಗದ ಜನರಿಗೆ ವೀಕೆಂಡ್ ಅಲ್ಲೂ ಎಲ್ಲಿಗೂ ಹೋಗಲಾರದಂತೆ ಮಾಡಿ ಧೋ ಎನ್ನುತ್ತಾ ಸುರಿಯುತ್ತಾ ಇರೋ ಈ ಮಳೆ ಬೇಕಿತ್ತಾ? ಅನ್ನಿಸಿಬಿಟ್ಟಿದೆ.

ಈಗ ಎಲ್ಲಾ ಕಡೆ ಕಾಂಕ್ರೀಟ್, ಟಾರು ರೋಡುಗಳ ಭರಾಟೆ. ಆದರೆ ಆಗ ಸುತ್ತಮುತ್ತಲೂ ಮಣ್ಣಿನದ್ದೇ ಪಾರುಪತ್ಯ. ಅಂತಹಾ ಸಮಯದಲ್ಲಿ ಮಣ್ಣಿಗೆ ಮೊದಲು ಬಿದ್ದ ಹನಿ ತನ್ನ ಸುಮಧುರ ಸುವಾಸನೆಯನ್ನು ಎಲ್ಲಾ ಕಡೆ ಪಸರಿಸುತ್ತಾ , ಈಗಿನ ಪರ್ಫೂಮ್ ಗಳಿಗಿಂತಾ ಚೆಂದದ ಸುಗಂಧ ಬೀರುತ್ತಾ ಮನಸನ್ನೆಲ್ಲಾ ಆವರಿಸುತ್ತಾ ಇತ್ತು. ಅದರ ಜೊತೆಗೆ ಮೆಲ್ಲಗೆ ಬರೋ ತಂಗಾಳಿಯಲ್ಲಿ ಬಡಿದ "ಇರುಚಲು" ಮನೆಯನ್ನಷ್ಟೇ ಅಲ್ಲ, ಮನೆ ಮುಂದೆ ಮಳೆ ನೋಡ್ತಾ ಸುಮ್ಮನೆ ನಿಂತಿರುತ್ತಾ ಇದ್ದ ನಮ್ಮನ್ನೂ ನೆನೆಸಿಬಿಟ್ಟಿರುತ್ತಿತ್ತು. ಜೋರು ಮಳೆ ಬಂದು ಆಲಿಕಲ್ಲು ಬೀಳ್ತಾ ಇದ್ರೆ, ದೊಡ್ಡ ಛತ್ರಿಯನ್ನು ಉಲ್ಟಾ ಮಾಡಿ ಅದರಲ್ಲಿ ಆಲಿಕಲ್ಲನ್ನು ಹಿಡಿದು ತಿಂತಾ ಇದ್ದ ಮಜವೇ ಬೇರೆ.

ತುಂತುರು ಮಳೆ, ಸೋನೆ ಮಳೆ, ಜೋರು ಮಳೆ ಹೀಗೆ ಮಕ್ಕಳು ಮಳೆಯನ್ನು ಅಳತೆ ಮಾಡುತ್ತಾ ಇದ್ದರೆ, ದೊಡ್ಡವರದ್ದು ಮಳೆನಕ್ಷತ್ರಗಳ ಲೆಕ್ಕ, ಸ್ವಾತಿ ಮಳೆ, ಭರಣಿ ಮಳೆ ಅಂತೆಲ್ಲಾ.. ಈಗ ಇದೆಲ್ಲಾ ಇದೆಲ್ಲಾ ಮಾಯವಾಗಿ ಗೂಗಲ್ ಮುಖೇನ ಎಲ್ಲಿ, ಎಷ್ಟು ಸೆಂಟಿಮೀಟರ್ ಮಳೆಯಾಗಿದೆ ಅಂತಾ ತಿಳಿದುಕೊಳ್ಳುವ ಹಾಗಾಗಿದೆ.

ಮಳೆಯಲ್ಲಿ ನೆನೆದು ಅಮ್ಮನಿಂದ ಬೈಸಿಕೊಂಡು ಬಿಸಿನೀರಲ್ಲಿ ಸ್ನಾನ ಮಾಡಿ ಒಲೆ ಮುಂದೆ ಕೂತು ಕಾಲ ಕಳೆಯುತ್ತಾ ಇದ್ದದ್ದೆಲ್ಲಾ ಹೋಗಿ , "ಅಯ್ಯೋ, ಈ ಹಾಳಾದ ಮಳೆ ಈಗಲೇ ಬರಬೇಕಿತ್ತಾ?" ಅಂತಾ ಯಾವುದಾದರೂ ಅಂಗಡಿ ಮುಂಭಾಗದಲ್ಲೋ, ಬಸ್ ಸ್ಟ್ಯಾಂಡ್ ಅಲ್ಲೋ ನಿಂತು ಈ ಮಳೆ ಯಾವಾಗ ಬಿಡುತ್ತೆ ಅಂತಾ ಕಾಯೋ ಕಾಲ.

ಆದರೆ ಮಳೆಗಾಲದ ಬಗ್ಗೆ ಪುಳಕ ಮೂಡಿಸೋ ಸಿನೆಮಾಗಳು ಬಂದ ಮೇಲೆ ಯುವಜನತೆ ಮಳೆಯಲ್ಲಿ ನೆನೆಯೋ ಟ್ರೆಂಡ್ ಶುರು ಮಾಡಿದ್ರು. ಆದರೆ ಅದು ಮಳೆಯ ಪುಳಕವನ್ನು ಅನುಭವಿಸುವುದಕ್ಕಿಂತ ವಾಟ್ಸಾಪ್ ಸ್ಟೇಟಸ್, ಫೇಸ್ ಬುಕ್, ಇನ್ಸ್ಟಾಗ್ರಾಂಗೆ ಅಪ್ ಲೋಡ್ ಮಾಡುವುದಕ್ಕೇ ಅನ್ನೋದು ಸುಳ್ಳಲ್ಲ.

ಆವಾಗೆಲ್ಲಾ ಶಾಲೆ ಬಿಡೋ ಟೈಮ್ ಗೆ ಬರುತ್ತಾ ಇದ್ದ ಮಳೆ, ಈಗ ಆಫೀಸ್ ಬಿಡೋ ಟೈಮ್ ಗೆ ಬರುತ್ತಾ ಇದೆ. ಆಗೆಲ್ಲಾ ಅಮ್ಮ ಮಾಡಿಕೊಡುತ್ತಾ ಇದ್ದ ಬಿಸಿ ಬಿಸಿ ಕಾಫಿ ಜೊತೆ ಬಿಸಿ ಬಿಸಿ ತಿಂಡಿ ಸವಿಯುತ್ತಾ ಇದ್ದ ನಾವು ಇವತ್ತು ಬೇರೆಯವರಿಗಾಗಿ ಕಾಫಿ, ತಿಂಡಿ ಮಾಡ್ತಾ ಇದ್ದೀವಿ ಅಷ್ಟೇ. ಮಳೆರಾಯ ಆವತ್ತೂ ಬದಲಾಗಿಲ್ಲ, ಇವತ್ತೂ  ಬದಲಾಗಿಲ್ಲ.... ಆದರೆ ನಾವು ಯಾಕೆ ಬದಲಾಗ್ತಾ ಇದ್ದೀವಿ...? 

ಇನ್ನಾದರೂ ತೆಗೆದು ಒಮ್ಮೆ ಆ ತಂಗಾಳಿಯ ಜೊತೆ ಮಳೆಯ ಹನಿಯನ್ನೂ ಆಸ್ವಾದಿಸೋಣ. ಮಳೆ ನಿಂತ ಮೇಲೆ ಬೀಳೋ ಆ ಹನಿಯ ಪ್ರತಿ ಶಬ್ಧವನ್ನೂ ಕೇಳೋಣ... ಬಹುಷಃ ಮಾತುಗಳೆಲ್ಲಾ ಮುಗಿದರೂ ಕಾಡುವ ಧ್ವನಿಯ ಹಾಗೆ, ಮಳೆನಿಂತ ಮೇಲೂ ಆ ಹನಿ ಕಾಡಬಹುದು... ತೆರೆದ ಕಿಟಕಿಯಿಂದ ಬೀಸುವ ತಂಗಾಳಿಗೆ ಮುಂಗುರುಳು ಹಾರಿ ಮುತ್ತಿಕ್ಕುವುದನ್ನು ಅನುಭವಿಸೋಣ... ಸಾಧ್ಯವಾದರೆ ಬಿಸಿ ಕಾಫಿಯೊಂದಿಗೆ ಮಳೆರಾಯನೊಡನೆ ಕಾಲ ಕಳೆಯೋಣ..

ಇಷ್ಟೇನಾ ಅನ್ನೋವ್ರು, ಮಳೆಯಲ್ಲಿ ಹೋಗಿ ಒಂದು ಸಾರಿ ನೆನೆದು ಬನ್ನಿ. ಅದರ ಮಜಾ ಇನ್ನೂ ಹೆಚ್ಚು.
ಆಂ! ಶೀತ ಆಗಿ ಜ್ವರ ಬಂದರೆ ಮತ್ತೆ ನನ್ನನ್ನ ಹೊಣೆ ಮಾಡ್ಬೇಡಿ. ಆಯ್ತಾ..?

ಮತ್ತೆ ಸಿಗೋಣ...ಮಳೆರಾಯನ ಜೊತೆ ನನಗೂ ತುಂಬಾ ಮಾತಾಡೋದಕ್ಕಿದೆ. ಮುಗಿಯದ ಮಾತುಗಳ ಮೂಟೆಯಿಂದ ಒಂದಿಷ್ಟನ್ನು ಮೊಗೆದು ಅವನಿಗೂ ಕೊಡಬೇಕಾಗಿದೆ.ಅದೆಲ್ಲಾ ಮುಗಿಸಿ ಬರ್ತೀನಿ.. ಅವನ ಜೊತೆಗೆ ಕಳೆಯೋ ಕ್ಷಣಗಳನ್ನು ಮಿಸ್ ಮಾಡ್ಕೊಳ್ಳೋಕೆ ನನಗೂ ಇಷ್ಟ ಇಲ್ಲ. ನಿಮಗೆ ಮತ್ತೊಮ್ಮೆ ಸಿಕ್ತೀನಿ. ಅಲ್ಲೀವರೆಗೂ ಬಾಯ್..!

-ವಿಭಾ ವಿಶ್ವನಾಥ್   

ಗುರುವಾರ, ಮೇ 31, 2018

ಯಾರಿಗಿಲ್ಲ ಕಷ್ಟ-ನೋವುಗಳು..?

"ನನ್ನಷ್ಟು ಕಷ್ಟ ಯಾರಿಗೂ ಇಲ್ಲ..."," ನನಗಿರುವ ಹಾಗೆ ತೊಂದರೆಗಳು ಬಂದಿದ್ದರೆ...","ನಾನು ಅನುಭವಿಸಿದ ನೋವನ್ನು ನೀವು ಅನುಭವಿಸಿದ್ದರೆ ನೀವು ಹೀಗಿರಲು ಸಾಧ್ಯವೇ ಇರುತ್ತಿರಲಿಲ್ಲ." ಎನ್ನುವವರೆಲ್ಲ ಗಮನಿಸಲೇಬೇಕಾದ ಅಂಶವೆಂದರೆ ನಿಮಗಿಂತ ಕಷ್ಟ ಪಟ್ಟವರು, ನಿಮಗಿಂತ ಕಷ್ಟಪಡುತ್ತಿರುವವರು ಇದ್ದೇ ಇರುತ್ತಾರೆ. ಆದರೆ ಕಷ್ಟಕ್ಕೆದರಿ ಪಲಾಯನ ಮಾಡಿದ್ದರೆ ಅಥವಾ ಕಷ್ಟ ಬಂದಿತೆಂದು ಹಾಗೆಯೇ ಇದ್ದುಬಿಟ್ಟಿದ್ದರೆ ಇಂದಿನ ಮುಕ್ಕಾಲು ಪಾಲು ಸಾಧಕರು ತಮ್ಮ ಗಮ್ಯವನ್ನು ಸಾಧಿಸುತ್ತಲೇ ಇರಲಿಲ್ಲ.

"ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು"

ಹೌದು, ಬದುಕಿನಲ್ಲಿ ನೋವು-ಕಷ್ಟಗಳಿಲ್ಲದೇ ಇರುವವರು ಯಾರು? ನಾವು ಮೊದಲು ಭೂಮಿಗೆ ಕಾಲಿಡುವುಡುವಾಗ ಅಮ್ಮ ಅನುಭವಿಸಿದ್ದೂ ನೋವೇ. ನೋವು-ಕಷ್ಟ ಎಂದುಕೊಂಡು ಅಮ್ಮಂದಿರು ಭಾವಿಸಿ ಹೆರಿಗೆ ನೋವನ್ನು ಅನುಭವಿಸದೇ ಇದ್ದಿದ್ದರೆ ಇಂದು ನಮಗೆ ಅಸ್ತಿತ್ವವೇ ಇರುತ್ತಿರಲಿಲ್ಲವೇನೋ?ಆಟ ಆಡುವಾಗ ಬಿದ್ದು ನೋವಾಯಿತು ಎಂಬ ಕಾರಣಕ್ಕೆ ಹೆದರಿ ಮಕ್ಕಳು ಅಳುತ್ತಾ ಕುಳಿತು ಆಟವನ್ನೇ ಆಡದಿದ್ದಿದ್ದರೆ ಮಕ್ಕಳ ಬೆಳವಣಿಗೆ ಆರೋಗ್ಯವಾಗಿರುತ್ತಿತ್ತೇ?ಕಷ್ಟಪಟ್ಟು ಓದುವುದೇತಕೆ?ಎಂದು ಸುಮ್ಮನೆ ಕುಳಿತಿದ್ದರೆ ವಿದ್ಯಾವಂತರೆನಿಸಿಕೊಳ್ಳಲಾಗುತ್ತಿತ್ತೇ?ಸಾಮಾಜಿಕ ಬದಲಾವಣೆಗಳಾಗುತ್ತಿದ್ದವೇ?

ಆದರೆ ಈ ಸಂದರ್ಭಗಳಲೆಲ್ಲ ಅಷ್ಟಾಗಿ ಕಾಡದ ಕಷ್ಟ ಎನ್ನುವ ಪದ ಕಾಡಲು ಶುರುವಾಗುವುದು ಉದ್ಯೋಗ ಅರಸಿಕೊಂಡು ಹೋಗಿ ಉದ್ಯೋಗ ದೊರಕದಿದ್ದಾಗ ಅಥವಾ ಸಣ್ಣ ಸಂಬಳದ ಉದ್ಯೋಗ ದೊರೆತಾಗ. "ನನಗೇ ಈ ಕಷ್ಟ ಏತಕೆ..?" ಎಂಬ ಪ್ರಶ್ನೆ ಕಾಡಲು ಶುರುವಾಗುತ್ತದೆ.

ಎಷ್ಟೋ ಜನರಿಗೆ ಉದ್ಯೋಗವೇ ಇರುವದಿಲ್ಲ ಅಥವಾ ದೇಹದ ಯಾವುದೋ ಭಾಗ ನ್ಯೂನತೆಯಿಂದ ಕೂಡಿರುತ್ತದೆ. ಅವರಿಗೆ ಹೋಲಿಸಿದರೆ ನಮ್ಮ ಪರಿಸ್ಥಿತಿ ಉತ್ತಮವೇ ಆಗಿರುತ್ತದೆ.ಆದರೆ ನಾವು ಅದನ್ನು ಗಮನಿಸುವ ಅಥವಾ ಯೋಚಿಸುವ ಮನಸ್ಥಿತಿಯಲ್ಲಿರುವುದಿಲ್ಲ ಅಷ್ಟೇ. ವ್ಯರ್ಥವಾಗಿ ಚಿಂತಿಸಿ ಸಿಕ್ಕ ಚಿಕ್ಕ ಖುಷಿಯನ್ನೂ ಕಳೆದುಕೊಂಡು ನಮ್ಮ ಬಾಳಲ್ಲಿ ಕಷ್ಟವೇ ತುಂಬಿದೆ ಎಂದು ವ್ಯಥೆಪಡುತ್ತೇವೆ.

ಹಾಗೆಂದು ಎಲ್ಲರ ಕಷ್ಟಗಳು ಚಿಕ್ಕವು ಅಂತಲೋ ಅಥವಾ ಏನೇನೂ ಇಲ್ಲ ಎಂದಲ್ಲ."ಆನೆಯ ಕಷ್ಟ ಆನೆಗಾದರೆ, ಇರುವೆಯ ಕಷ್ಟ ಇರುವೆಗೆ". ಅವರವರ ನೋವು-ಕಷ್ಟಗಳು ಅವರವರಿಗೆ ಹೆಚ್ಚು. ಆದರೆ ಕಷ್ಟ ಎಂದು ಕೊರಗಿದರೆ, ನೋವು ಎಂದು ಮರುಗಿದರೆ ಅವೆಲ್ಲಾ ಬಗೆಹರಿದುಬಿಡುತ್ತವೆಯೇ? ಸುಖ ಈ ಘಳಿಗೆಯೇ ಬರಬೇಕೆಂದುಕೊಂಡರೆ ಮಾತ್ರ ಸಾಧ್ಯವೇ?

"ಯಾವುದೂ ಕೂಡಾ ಸುಲಭವಾಗಿ ಅಥವಾ ಉಚಿತವಾಗಿ ದೊರೆಯುವುದಿಲ್ಲ. ಹಾಗೆ ದೊರೆತರೂ ಅದು ಶಾಶ್ವತವಾಗಿ ಇರುವುದೂ ಇಲ್ಲ" ಎಂಬ ಮಾತುಗಳನ್ನು ಆಗಾಗ ಓದುತ್ತಲೋ ಅಥವಾ ಕೇಳುತ್ತಲೋ ಇರುತ್ತವೆ. ಆದರೂ ಈ ಕ್ಷಣ ನನ್ನ ಕಷ್ಟಗಳೆಲ್ಲಾ ದೂರವಾಗಬೇಕು ಎನ್ನುತ್ತಾ ಅದನ್ನು ಒಪ್ಪಲು ತಯಾರಿರುವುದಿಲ್ಲ. ಒಟ್ಟಾರೆ ಗಿಣಿಪಾಠದಂತೆ ಅದನ್ನು ಜಪಿಸುತ್ತೇವೆ ಅಷ್ಟೇ.

ಕಷ್ಟಗಳನ್ನು ಸಹಿಸುವ ಸಾಮರ್ಥ್ಯ ಉಳ್ಳವರಿಗೆ ಮಾತ್ರ ಕಷ್ಟಗಳು ಬರುತ್ತವೆ. ಜೊತೆಗೆ ಅವು ನಮ್ಮ ಬಾಳಿನಲ್ಲಿ ಹೊಸ ಪಾಠವೊಂದನ್ನು ಕಲಿಸಿ ಹೋಗುತ್ತವೆ. ಕಷ್ಟದಲ್ಲಿ ಜೊತೆಯಲ್ಲಿ ನಿಲ್ಲುವವರಾರು, ನಮ್ಮ ಹಿತಚಿಂತಕರು ಮತ್ತು ಹಿತಶತ್ರುಗಳು ಯಾರು ಎಂಬುದರಿಂದ ಹಿಡಿದು ಕಷ್ಟವನ್ನು ಸಹಿಸಿ ನಿಲ್ಲುವ ಸೈರಣೆಯನ್ನೂ ಅದು ತಿಳಿಸಿಕೊಡುತ್ತೇವೆ. ಯಾವುದೇ ಕಷ್ಟ,ಯಾವುದೇ ನೋವು ಬಂದರೂ ಅದನ್ನು ಮೆಟ್ಟಿ ನಿಲ್ಲುತ್ತೇವೆ ಎಂಬುದು ನಿಜವಾದ ಶಕ್ತಿ.ಆ ಸಮಯದಲ್ಲಿ ಮುಖದಲ್ಲಿ ಮುಗುಳ್ನಗು, ಶಾಂತತೆಯ ಜೊತೆಗೆ ಸರಿಯಾದ ನಿರ್ಧಾರ ನಮ್ಮನ್ನು ಕಷ್ಟದಿಂದ ಬಿಡಿಸಲು ಸಹಾಯಕ. ಅಕಸ್ಮಾತ್ ಈ ಪರಿಸ್ಥಿತಿಯಲ್ಲಿ ನಾವಿಲ್ಲದೇ ಇದ್ದರೂ, ನಮ್ಮ ಹತ್ತಿರದವರು ಅಥವಾ ಪರಿಚಿತರು ಆ ಪರಿಸ್ಥಿತಿಯಲ್ಲಿದ್ದರೆ ಅವರಿಗೆ ಸಾಂತ್ವನ, ಧೈರ್ಯ ತುಂಬುವ ಆತ್ಮವಿಶ್ವಾಸದಾಯಕ ಮಾತುಗಳನ್ನಾಡೋಣ. ಇದು ಸಾಧ್ಯವಾಗದಿದ್ದಲ್ಲಿ ಕುಗ್ಗಿಸುವ ಮಾತುಗಳಂತೂ ಬೇಡ.

ದೇವರೆನಿಸಿಕೊಂಡ ರಾಮನಿಗೇ ವನವಾಸದ ಕಷ್ಟ ತಪ್ಪಲಿಲ್ಲ, ಕೃಷ್ಣನಿಗೆ ಶ್ಯಮಂತಕ ಮಣಿಯನ್ನು ಕದ್ದ ಎಂಬ ಅಪವಾದ ಕಾಡದೇ ಬಿಡಲಿಲ್ಲ. ಆದರೆ ಅವರು ಈ ಸಂಧರ್ಭಗಳಿಗೆ ಅಂಜದೆ, ಅವುಗಳನ್ನು ಅನುಭವಿಸಿ ಮುನ್ನಡೆದರು. ಕಷ್ಟ ಕಳೆದ ಮೇಲೆ ಸುಖ ಬಂದೇ ಬರುವುದು. ಒಳ್ಳೆಯ ಕಾಲಕ್ಕಾಗಿ ಕಾಯೋಣ. ಇಂದಿನ ಕಷ್ಟದ ದಿನಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಪ್ರತಿಫಲ ಸಿಕ್ಕೇ ಸಿಗುವುದು ಎಂಬ ಭರವಸೆಯೊಂದಿಗೆ ಕಾಯೋಣ. ರಾಮ-ಕೃಷ್ಣರಷ್ಟು ಸೈರಣೆ ಇಲ್ಲದಿದ್ದರೂ, ನಮಗೆ ಸಾಧ್ಯವಾಗುವಷ್ಟು ಸಮಾಧಾನ ತಂದುಕೊಂಡು ಧೈರ್ಯವಾಗಿ ಕಷ್ಟದ ದಿನಗಳನ್ನು ಕಳೆಯೋಣ.

"ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನಮ್ಮದೆನ್ನುವ ನಂಬಿಕೆಗಳು ಬೇಕು"  
ಹೌದು, ಈ ಮಾತಿನಂತೆಯೇ ಭರವಸೆಯನ್ನು ಮೂಡಿಸಿಕೊಳ್ಳುತ್ತಾ ನಂಬಿಕೆಯೊಡನೆ ಹೆಜ್ಜೆ ಹಾಕೋಣ. ನೆಮ್ಮದಿಯ ನಾಳೆಗಳಿಗಾಗಿ..

-ವಿಭಾ ವಿಶ್ವನಾಥ್

ಭಾನುವಾರ, ಮೇ 27, 2018

ಮಾರಿಯೇ..? ಮಹಾಲಕ್ಷ್ಮಿಯೇ..?

ಪರಿಮಳ ಅವಳ ದೊಡ್ಡಮ್ಮನ ಜೊತೆ ಮಾತನಾಡುತ್ತಿರುವಾಗ, ಅಣ್ಣನ ಮದುವೆಯ ವಿಚಾರ ಬಂದಿತು. "ಅತ್ತಿಗೆಯನ್ನು ಮನೆಗೆ ಕರೆದುಕೊಂಡು ಬರುವುದು ಯಾವಾಗ?, ಅಣ್ಣನ ಮದುವೆಗೆ ನಾನು ಆ ಸೀರೆಗೆ ಬ್ಲೌಸ್ ಹೊಲೆಸಿಕೊಳ್ಳಬೇಕು.. ಅವನಿಗೆ ಬೇಗ ಮದುವೆ ಮಾಡಿ" ಎಂದು ಹೇಳುತ್ತಿರುವಾಗ ಅಣ್ಣ ಮಧ್ಯದಲ್ಲಿ ಬಂದು "ಮೊದಲು ನಿನ್ನ ಮದುವೆ,ಆಮೇಲೆ ನನ್ನದು" ಎಂದ. "ಯಾಕೆ? ಎಲ್ಲದಕ್ಕೂ ನಾನೇ ಮೊದಲು ಅಂತಾ ಹೇಳ್ತಾ ಇರುತ್ತೀಯಾ, ಮೊದಲು ನೀನೇ ಮದುವೆ ಆಗು" ಎಂದ ಕನಕಳಿಗೆ ಪ್ರತ್ಯುತ್ತರವಾಗಿ ದೊಡ್ಡಮ್ಮ "ಮಾರಿಯನ್ನು ಕಳುಹಿಸಿ, ಮಹಾಲಕ್ಷ್ಮಿಯನ್ನು ಮನೆಗೆ ಕರೆದುಕೊಂಡು ಬಾ" ಎನ್ನುವ ಗಾದೆಯನ್ನು ಕೇಳಿಲ್ಲವೇ?" ಎಂದರು.

ಅದಕ್ಕೆ ಹುಸಿಕೋಪವನ್ನು ನಟಿಸುತ್ತಾ ಪರಿಮಳ "ಹಾಗಾದರೆ, ನಾವುಗಳು ಅಂದರೆ ಹೆಣ್ಣುಮಕ್ಕಳು ಅಂದರೆ ನಾವುಗಳು ಮಾರಿ ಎಂದು ತಾನೇ ನೀವು ಹೇಳುತ್ತಿರುವುದು" ಎಂದಾಗ ಅದು "ಆ ಅರ್ಥದಲ್ಲಲ್ಲಾ ನಾನು ಹೇಳಿದ್ದು." ಎಂದರು.
"ಈ ಮನೆಗೆ ನಾವು ಮಾರಿಯರಾದರೂ, ಇನ್ನೊಂದು ಮನೆಗೆ ನಾವು ಮಹಾಲಕ್ಷ್ಮಿಯರೇ ತಾನೇ?" ಎಂದು ಹೇಳಿ ಆ ಸಂಧರ್ಭವನ್ನು ತಿಳಿಗೊಳಿಸಿದಳು ಪರಿಮಳ.

"ಮಾರಿ ಎಂದರೆ ಮಾರಾಟ ಎಂದೂ ಅರ್ಥ ಬರುತ್ತದೆ, ಅಂದರೆ ಬರಿಗೈಯಲ್ಲಿ ಕಳುಹಿಸದೇ ನಿಮ್ಮನ್ನು ಕೈತುಂಬಾ ಜೀವನಕ್ಕಾಗುವಂತೆ ವರದಕ್ಷಿಣೆಯನ್ನೂ ಕೊಟ್ಟು ಕಳುಹಿಸುತ್ತೇವಲ್ಲಾ" ಎಂದರು ದೊಡ್ಡಮ್ಮ.
"ಅದನ್ನೆಲ್ಲಾ ನಮಗೆ ಕೊಡಿ ಎಂದವರು ಯಾರು?" ಎಂದದ್ದಕ್ಕೆ ಪ್ರತ್ಯುತ್ತರವಾಗಿ ದೊಡ್ಡಮ್ಮ "ಕೊಡದಿದ್ದರೆ ಸುಮ್ಮನೆ ಬಿಡುತ್ತೀರಾ ನೀವು? ನೀವು ಬಿಟ್ಟರೂ ಉಳಿದವರು ಸುಮ್ಮನಿರುತ್ತಾರಾ?"  ಎಂದರು.

"ನೀವು ಕೇಳಿದಂತೆಯೇ ಅಲ್ಲವೇ? ಅವರೂ ಕೇಳುವುದು..
ನೀವು ಅಪೇಕ್ಷಿಸಿದಂತೆಯೇ ಅಲ್ಲವೇ? ಅವರೂ ಅಪೇಕ್ಷಿಸುವುದು..
ನೀವು ಯೋಚಿಸಿದಂತೆಯೇ ಅಲ್ಲವೇ? ಅವರೂ ಯೋಚಿಸುವುದು..
ಮನೆಗೆ ಬರುವ ಸೊಸೆಯಿಂದ ಏನನ್ನೂ ಅಪೇಕ್ಷಿಸಬೇಡಿ, ಮಗಳಿಗೂ ಏನನ್ನೂ ಕೊಟ್ಟು ಕಳುಹಿಸಬೇಡಿ" ಎಂದಳು ಪರಿಮಳ.
"ಸರಿ ಆಯ್ತಮ್ಮಾ, ಹಾಗೇ ಮಾಡುತ್ತೇವೆ." ಎಂದು ಆ ಸಂಧರ್ಭಕ್ಕೆ ತೆರೆ ಎಳೆದರು ದೊಡ್ಡಮ್ಮ.

ಇದು ಬರೀ ಪರಿಮಳ ಮತ್ತು ದೊಡ್ಡಮ್ಮನ ನಡುವೆ ನಡೆಯುವ ಮಾತು-ಕಥೆಯಲ್ಲ. ಪ್ರತಿ ಮನೆಯಲ್ಲೂ ಇಂತಹದ್ದೊಂದು ಸಂಭಾಷಣೆ ಯಾರ ನಡುವೆಯಾದರೂ ನಡೆದೇ ಇರುತ್ತದೆ.

ವೇದ ಸುಳ್ಳಾದರೂ, ಗಾದೆ ಸುಳ್ಳಾಗದು ಎಂಬ ಒಂದು ಮಾತಿದೆ. ಆದರೆ ಈ ಸಂಧರ್ಭಕ್ಕೆ ಅದನ್ನು ಹೇಗೆ ಬಳಸಿಕೊಳ್ಳಬೇಕೋ ಗೊತ್ತಿಲ್ಲ. ಬಹುಶಃ ಮನೆಯಲ್ಲಿದ್ದ ಹಠಮಾರಿ ಮಗಳು , ಇನ್ನೊಂದು ಮನೆಯಲ್ಲಿ ಸೌಮ್ಯರೂಪಿಯಾದ ದೇವತೆ ಮಹಾಲಕ್ಷ್ಮಿಯಂತೆ ಬಾಳಬಹುದು ಎಂಬ ಅರ್ಥ ಬರಬಹುದೇನೋ?

ಹೆಣ್ಣುಮಕ್ಕಳು ಅಣ್ಣ-ತಮ್ಮಂದಿರ ಕಾಟ ಕೊಟ್ಟಿರಬಹುದೇನೋ, ಆದರೆ ಮಾರಿಯಷ್ಟು ಹಟಮಾರಿ, ಉಗ್ರರೂಪಿ ಖಂಡಿತಾ ಆಗಿರುವುದಿಲ್ಲ. ಮಾರಿಯೇ ಆದರೆ, ಹಾಗೇ ಅನ್ನಿಸಿದರೂ ಅವಳೂ ದೇವತೆಯೇ ಅಲ್ಲವೇ? ಅಕಸ್ಮಾತ್ ಮನೆಮಗಳು ಅಷ್ಟು ಕಾಟ ಕೊಟ್ಟರೂ ಅವಳನ್ನು ಕಳುಹಿಸುವಾಗ ಎಲ್ಲರ ಕಣ್ಣಲ್ಲೂ ನೀರು ತುಂಬಿ ಬೇಸರವಾಗುವುದೇಕೆ?

ಇನ್ನು ಕೊಡು-ಕೊಳ್ಳುವಿಕೆಯ ವಿಷಯದಲ್ಲಿ ವರದಕ್ಷಿಣೆ ಎಂಬ ಪದ ನೇಪಥ್ಯಕ್ಕೆ ಸರಿಯುತ್ತಿದ್ದರೂ ಮಗಳು ಸುಖವಾಗಿರಲೆಂಬ ಕಾರಣಕ್ಕೆ ಹೆತ್ತವರು ಉಡುಗೊರೆ ನೀಡಿ ಕಳುಹಿಸುತ್ತಾರೆ. ಅದನ್ನುತಮ್ಮ ಮಗನ ಜೀವನದಲ್ಲಿಯೂ ಅಪೇಕ್ಷಿಸುತ್ತಾರೆ ಸಹಾ... ಇದು ಬದಲಾಗದೇ?

ಹೆಣ್ಣು ಮಕ್ಕಳಿಗೆ ಇಂದು ವಿದ್ಯೆ ನೀಡಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿ ಸ್ವಾತಂತ್ರ್ಯ, ಸ್ವಾಭಿಮಾನದ ಉಡುಗೊರೆಯನ್ನು ಉಡಿ ತುಂಬಿಸಿದ ಮೇಲೆ ಅವರು ಖಂಡಿತಾ ಮತ್ತೇನನ್ನೂ ಅಪೇಕ್ಷಿಸುವುದಿಲ್ಲ, ಹೆತ್ತವರ ಮತ್ತು ಒಡಹುಟ್ಟಿದವರ ಪ್ರೀತಿಯ ಹೊರತು.

ಮಾರಿಯನ್ನು ಕಳುಹಿಸಿ,ಮಹಾಲಕ್ಷ್ಮಿಯನ್ನು ಮನೆತುಂಬಿಸಿಕೊಳ್ಳುತ್ತಿದ್ದೇವೆ ಎನ್ನುವುದಕ್ಕಿಂತ ಮಹಾಲಕ್ಷ್ಮಿಯನ್ನು ಕಳುಹಿಸಿ,ಮಹಾಲಕ್ಷ್ಮಿಯನ್ನೇ ಮನೆತುಂಬಿಸಿಕೊಳ್ಳುತ್ತಿದ್ದೇವೆ ಎನ್ನಬಾರದೇಕೆ?

-ವಿಭಾ ವಿಶ್ವನಾಥ್