ಸೋಮವಾರ, ಸೆಪ್ಟೆಂಬರ್ 11, 2017

ಕತ್ತಲು-ಬೆಳಕಿನ ಕಣ್ಣಾಮುಚ್ಚಾಲೆಯಲಿ ಸತ್ಯ-ಮಿಥ್ಯೆ

ಕಡು ಕಪ್ಪು ಕತ್ತಲು ಇಷ್ಟವೆಂದರೆ,
ಬೆಳಕು ಇಷ್ಟವಿಲ್ಲವೆಂದೇನಲ್ಲ.
ಬೆಳಕು ಬರುತ್ತದೆಯೆಂದು ಕಾಯಲೇಬೇಕು
ಹಾಗೆ ಕಾಯುತ್ತಲೇ ಇರುವವರು ಅನಾಥರು
ಬದುಕಿನ ಸತ್ಯ ತಿಳಿಯುವುದಕ್ಕಿಂತ,
ಇರುವ ಬದುಕೇ ಸುಖವಾಗಿರುವುದು.
ಸತ್ಯ ಸ್ವೀಕರಿಸಲೇಬೇಕು, ಇಲ್ಲವೆಂದಲ್ಲ
ಇಷ್ಟು ವರ್ಷ ಸತ್ಯವಿಲ್ಲದೆ ಬದುಕಿರಲೇ ಇಲ್ಲವೇ?
ಸುಖವಾಗಿ, ಎಲ್ಲರೊಳಗೊಂದಾಗಿ ಬದುಕಿದ್ದೆವು
ಬೆಳಕು, ಸತ್ಯದ ಬೆಳಕು ಬಂದಿತು
ಬೇರ್ಪಡಿಸಿತು ಎಲ್ಲರ ಒಗ್ಗಟ್ಟು.
ಬೆಳಕಿನಿಂದ ಒಗ್ಗಟ್ಟು ಒಡೆದು ಹೋಗುವುದಕ್ಕಿಂತ,
ಎಲ್ಲರಿಂದ ದೂರವಾಗುವುದಕ್ಕಿಂತ,
ಕಡುಕತ್ತಲೆಯೇ ಸಾಕಲ್ಲವೇ? ಅದೇ ಇಷ್ಟವಲ್ಲವೇ?
ಕತ್ತಲೆಂದರೆ ಅಜ್ಞಾನವಲ್ಲ, ರಾತ್ರಿಯಲ್ಲ
ಕತ್ತಲು ನಮ್ಮಂತೆ ನಾವು ಬದುಕಲು ಬಿಡುವ ಸೊಬಗು
ಕತ್ತಲು-ಬೆಳಕಿನ ಈ ಕಣ್ಣಾಮುಚ್ಚಾಲೆಯಲ್ಲಿ,
ಸತ್ಯ-ಮಿಥ್ಯೆಯಲ್ಲಿ ಕಾಣುವುದು ನಮ್ಮದೇ ಬದುಕು
                                               -vಭಾ

ಮಂಗಳವಾರ, ಸೆಪ್ಟೆಂಬರ್ 5, 2017

ಗುರುನಮನ

"ಗುರು ಬ್ರಹ್ಮ,ಗುರು ವಿಷ್ಣು, ಗುರು ದೇವೋ ಮಹೇಶ್ವರಃ,
ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ".
ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿ ರೂಪವೇ ಆಗಿರುವ ಗುರುವಿಗೆ ವಂದನೆಗಳು. ಹೌದು, ಗುರುಗಳು ಯಾವ ದೇವರಿಗೂ ಕಡಿಮೆ ಇಲ್ಲ. ಏನೂ ಗೊತ್ತಿಲ್ಲದೆ ಇರುವ ಎಳೆಯ ಮುಗ್ಧ ಜೀವವನ್ನು ಸಮಾಜದ ಅತ್ಯುನ್ನತ ನಾಗರೀಕನನ್ನಾಗಿ ರೂಪಿಸಲು ತನ್ನ ಜೀವನವನ್ನೇ ಮುಡುಪಾಗಿಡುವ ಗುರುಗಳು ಅತ್ಯುನ್ನತ ಸ್ಥಾನದಲ್ಲಿಯೇ ಸ್ಥಾಪಿತರಾಗಿರುತ್ತಾರೆ.
         ಗುರು ಅಥವಾ ಶಿಕ್ಷಕರು ಶಿಕ್ಷಣವನ್ನಷ್ಟೇ ಅಲ್ಲದೇ, ಜೀವನಕ್ಕೆ ಬೇಕಾದ ಮೌಲ್ಯಗಳು, ಉತ್ತಮ ನಡತೆಗಳನ್ನೂ ಭೋಧಿಸುತ್ತಾರೆ. ತಾಯಿಯೇ ನಮ್ಮ ಜೀವನದ ಮೊದಲ ಗುರು. ನಂತರ ಆ ಸಾಲಿನಲ್ಲಿ ತಂದೆ,ಸಹೋದರ-ಸಹೋದರಿಯರು, ಶಿಕ್ಷಕರು, ಬಂಧು-ಮಿತ್ರರೂ ಸೇರುತ್ತಾರೆ. ಜೀವನದಲ್ಲಿ ಒಂದಕ್ಷರ ಕಲಿಸಿದವರೂ ಸಹ ಗುರುಗಳೇ. ಪರಿಸರವೂ ಒಂದರ್ಥದಲ್ಲಿ ಮನುಷ್ಯನ ಗುರು.
ಆದರೆ, ಶಾಲೆಯಲ್ಲಿ ಕಲಿಯುವ ಪಾಠ ಇದೆಲ್ಲಕ್ಕೂ ಭಿನ್ನವಾದುದು. ಶಿಕ್ಷಿಸಿ,ಕ್ಷಮಿಸಿ,ಕಲಿಸುವವರು (ಶಿಕ್ಷಕರು) ಇದಕ್ಕೆ ಕಾರಣೀಕರ್ತರು. ಶಿಕ್ಷೆ ಕೂಡಾ ಶಿಕ್ಷಣದ ಒಂದು ಭಾಗವೇ ಆಗಿದೆ. "ಹರ ಮುನಿದರೆ ಗುರು ಕಾಯ್ವನು, ಆದರೆ ಗುರು ಮುನಿದರೆ..?"
ಗುರು ಮುನಿದ ಉದಾಹರಣೆಗಳು ಅತಿ ವಿರಳವೇ ಆಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಗುರುಗಳು ಶಿಕ್ಷೆ ನೀಡುತ್ತಾರೆಯೇ ಹೊರತು ಯಾವುದೇ ದ್ವೇಷದಿಂದಲ್ಲ. ಆದರೆ ಇಂದಿನ ಶಿಕ್ಷಣದ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗುತ್ತಿರುವುದು ಶೋಚನೀಯ.
"ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು
ಸಾಗುತ್ತಿತ್ತು ರಣವೀರರ ದಂಡು"
ಎಂಬುದು ಹಿಂದಿನ ನುಡಿಯಾದರೆ
"ಹಿಂದೆ ಗುರುವೂ ಇಲ್ಲ, ಮುಂದೆ ಗುರಿಯೂ ಇಲ್ಲ
ಸಾಗುತ್ತಿದೆ ರಣ ಹೇಡಿಗಳ ಹಿಂಡು"
ಎಂಬುದು ಇಂದಿನ ನುಡಿಯಾಗುತ್ತಿದೆ.
ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿದರೆ, ಶಿಕ್ಷಕರ ಶ್ರಮಕ್ಕೆ ತಕ್ಕ ಪ್ರತಿವಂದನೆಗಳನ್ನು ಸಲ್ಲಿಸಬಹುದು.ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರ ಋಣವನ್ನು ಅಲ್ಪಮಟ್ಟಿಗೆ ತೀರಿಸಿದ ತೃಪ್ತಿ ಸಿಗುತ್ತದೆ.
     ಶಿಕ್ಷಕರ ಸ್ಥಾನವನ್ನು ನಿರೂಪಿಸುವ ದೃಷ್ಟಾಂತ ಹೀಗಿದೆ. ಒಮ್ಮೆ ಒಂದು ರಾಜ್ಯದ ರಾಜನಿಗೆ ವಿದ್ಯೆ ಕಲಿಯುವ ಆಸೆಯಾಯಿತು.ಆದ್ದರಿಂದ ರಾಜ ಒಬ್ಬರು ಗುರುಗಳನ್ನು ನೇಮಿಸಿಕೊಂಡ. ಪಾಠ ಕಲಿಯುವಾಗಲೂ ರಾಜ ತನ್ನ ಸಿಂಹಾಸನವನ್ನು ಬಿಡದೆ ಅಲ್ಲಿಯೇ ಕುಳಿತು ಪಾಠ ಹೇಳಿಸಿಕೊಳ್ಳುತ್ತಿದ್ದ. ಎಷ್ಟೇ ಪ್ರಯತ್ನಪಟ್ಟರೂ, ರಾಜನಿಗೆ ವಿದ್ಯೆ ಕಲಿಯಲು ಆಗಲೇ ಇಲ್ಲ. ನಂತರ ವಿಶ್ಲೇಷಿಸಿ ನೋಡಿದಾಗ ರಾಜನಿಗೆ ಅದರ ಕಾರಣ ದೊರೆಯಿತು. ಅದರ ಕಾರಣವೇನೆಂದರೆ , ರಾಜ ಕುಳಿತುಕೊಳ್ಳುವ ಜಾಗ ಆತನ ಗುರು ಕುಳಿತುಕೊಳ್ಳುವ ಜಾಗದಿಂದ ಎತ್ತರದಲ್ಲಿದ್ದಿತು. ಶಿಷ್ಯನ ತನ್ನ ಸ್ಥಾನ ಎಂದೆಂದಿಗೂ ಗುರುವಿಗಿಂತ ಕೆಳಗೆ ಎಂದರಿತು ಅಹಂಕಾರವನ್ನು ತೊರೆದಾಗ ವಿದ್ಯೆ ಒಲಿಯುತ್ತದೆ. ಅದಕ್ಕಾಗಿಯೇ ಹಿರಿಯರು ಹೇಳಿರುವುದು "ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ."
ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಪಾಠ ಕಲಿಸಿದ ಎಲ್ಲಾ ಗುರುಗಳಿಗೂ ಧನ್ಯವಾದಗಳು.
                                                                                                -vಭಾ

ಶನಿವಾರ, ಸೆಪ್ಟೆಂಬರ್ 2, 2017

ಕನಸುಗಳ ಜೊತೆಗೆ ಒಂದಿಷ್ಟು...

ಒಂದಿಷ್ಟು ಬಣ್ಣ ಬೇಕಾಗಿದೆ,
ಕನಸುಗಳಿಗೆ ಬಳಿಯಲು...

ಒಂದಿಷ್ಟು ಸಮಯ ಬೇಕಾಗಿದೆ,
ಕನಸುಗಳನು ಹಂಚಿಕೊಳ್ಳಲು...

ಒಂದಿಷ್ಟು ಧೈರ್ಯ ಬೇಕಾಗಿದೆ,
ಕನಸುಗಳ ಸಾಕಾರಗೊಳಿಸಲು...

ಒಂದಿಷ್ಟು ಸಹನೆ ಬೇಕಾಗಿದೆ,
ಕನಸುಗಳ ನನಸಿನ ಹಾದಿ ಸವೆಸಲು...

ಒಂದಿಷ್ಟು ತ್ಯಾಗ ಬೇಕಾಗಿದೆ,
ಕನಸಿನ ಬದುಕ ಬದುಕಲು...
                               -vಭಾ

ಋಣ

ತೀರಬಲ್ಲದೇ ಇವರೆಲ್ಲರ ಋಣ?
ತೀರಲಾರದು ಎಷ್ಟೇ ಜನುಮವೆತ್ತಿದರೂ...

ಜನುಮ ನೀಡಿದ ತಾಯ್ತಂದೆಯರ ಋಣ,
ಉಸಿರು ನೀಡಿದ ಗಾಳಿಯ ಋಣ
 ತೀರಬಲ್ಲದೇ ಇವರೆಲ್ಲರ ಋಣ?

ಬೆಳಕು ,ಶಾಖ ನೀಡಿದ ರವಿಯ ಋಣ,
ವಿದ್ಯೆ ಕಲಿಸಿ, ತಿದ್ದಿ ತೀಡಿದ ಗುರುಗಳ ಋಣ
 ತೀರಬಲ್ಲದೇ ಇವರೆಲ್ಲರ ಋಣ?

ಜೊತೆಯಲಿದ್ದು ಆಸರೆಯಾದ ಸ್ನೇಹಿತರ ಋಣ,
ನೋವು-ನಲಿವಿಗೆ ಜೊತೆಯಾಗಿದ್ದ ಬಂಧುಗಳ ಋಣ
 ತೀರಬಲ್ಲದೇ ಇವರೆಲ್ಲರ ಋಣ?

ಗೊತ್ತಿದ್ದೋ, ಗೊತ್ತಿಲ್ಲದೆಯೋ ಪಾಠ ಕಲಿಸಿದವರ ಋಣ
ಮುಗುಳ್ನಗೆಯಂದದಿ ಜಗವನ್ನೇ ಗೆಲ್ಲಲು ಕಲಿಸಿದವರ ಋಣ
 ತೀರಬಲ್ಲದೇ ಇವರೆಲ್ಲರ ಋಣ?

ತೀರಿಸಲು ಹೊರಟಿಲ್ಲ ಈ ಋಣವ
ನಮಗೆ ದಾರಿದೀಪವಾದವರ ನೆನೆಸುತ್ತಾ,
ಮಿನುಗುವ ಹಣತೆಯಾಗುವಾಸೆ...

ತೀರಬಲ್ಲದೇ ಇವರೆಲ್ಲರ ಋಣ?
ತೀರಲಾರದು ಎಷ್ಟೇ ಜನುಮವೆತ್ತಿದರೂ...
                                     -vಭಾ 

ಬುಧವಾರ, ಆಗಸ್ಟ್ 30, 2017

ಹೆಜ್ಜೆ ಗುರುತುಗಳು














ನಿನ್ನ ಹೆಜ್ಜೆ ಗುರುತುಗಳ ಅರಸಿ ಹೊರಟಿರುವೆ ನಾನು,
ನನ್ನ ಕಣ್ಣೀರಿನಲಿ ಕಲಸಿಹೋಗಿವೆ ಅವು...
ಕಾಲಾಂತರಾಳದಲಿ ಹುದುಗಿ ಹೋಗಿವೆ ಹೆಜ್ಜೆಗಳು...
ನೀ ತೊರೆದ ನಂತರ ಭಾವಭೃಂಗವ ತಲುಪಿ,
ನಿಶ್ಶಬ್ಧದ ರೂಪು-ರೇಷೆಗಳಾಗಿ ಬದಲಾಗಿವೆ ಅವು.
ಅಂದು ನೀ ತುಳಿದ ಸಪ್ತಪದಿಯ ಹೆಜ್ಜೆಗಳು,
ಮರಳ ಮೇಲೆ ನೀ ಮೂಡಿಸಿದ ಹೆಜ್ಜೆಗಳು,
ಗೆಜ್ಜೆ ಕಟ್ಟಿಕೊಂಡು ನಾಟ್ಯ ಮಾಡಿದ ಹೆಜ್ಜೆಗಳು,
ಸಪ್ಪಳವಿಲ್ಲದಂತೆ ನನ್ನಂತರಂಗವ ತುಂಬಿರುವ ಹೆಜ್ಜೆಗಳು,
ಹೇಗೆಂದು ಬಣ್ಣಿಸಲಿಎಷ್ಟೆಂದು ವರ್ಣಿಸಲಿ?!
ನೀ ನನ್ನೆದೆಯಾಳದಲಿ ಮೂಡಿಸಿದ ಹೆಜ್ಜೆ ಗುರುತುಗಳ,
ಸಪ್ತಪದಿಯಲಿ ಜೊತೆಯಲಿ ತುಳಿದ ಹೆಜ್ಜೆಗಳು ಮಾಯವಾಗಿವೆ,
ಮರಳ ಮೇಲೆ ಮೂಡಿದ ಹೆಜ್ಜೆಯ ಅಲೆಯಳಿಸಿದೆ,
ಗೆಜ್ಜೆಗಳು ನರ್ತಿಸುವ ಹೆಜ್ಜೆಗಳಿರದೆ ನಲುಗಿ ಹೋಗಿವೆ.
ನನ್ನಂತರಂಗ ಮಾತ್ರ ನಿನ್ನನ್ನು ಎಲ್ಲೆಲ್ಲೂ ಅರಸಿದೆ.
ನಾನು ಬರುತ್ತಿರುವೆ ನಿನ್ನ ಹೆಜ್ಜೆ ಗುರುತುಗಳನ್ನನುಸರಿಸಿ,
ಮೂಡಿಸುವ ನಮ್ಮೆಜ್ಜೆಗುರುತುಗಳ ಎಂದೆಂದು ಜೊತೆಯಾಗಿ...
                                                       -vಭಾ

ಕನಸುಗಳಿಗೆ ಸಾವಿಲ್ಲ...

ಮನದ ಬಾಂದಳದಲಿ ನಿಂತು,
ಸುತ್ತ-ಮುತ್ತಲ್ಲೆಲ್ಲಾ ಅವಲೋಕಿಸಿದಾಗ
ಅರೆರೆ! ಕನಸಿನ ಕಲ್ಪವೃಕ್ಷಗಳು
ಯಾವುದೋ ಅರೆಗಳಿಗೆಯಲಿ ಕಂಡ ಕನಸುಗಳು,
ನಿದ್ದೆಯಲಿ ಕಂಡ ಕನಸುಗಳಲ್ಲ ಅವು,
ಎಚ್ಚರವಿದ್ದಾಗ ಪಡಿಮೂಡಿದ ಕೂಸುಗಳು
ನಂತರ ಯಾರದೋ ದರ್ಪಕೆ, ಹೀಯಾಳಿಕೆಗೆ
ಅವಮಾನಕೆ ಸಿಕ್ಕು ನಲುಗಿದ್ದ ಕನಸುಗಳು.
ನಂಬಿಕೆಯೆಂಬ ಹನಿ ಅಮೃತದೊಂದಿಗೆ ಬದುಕಿದವು.
ಕಂಡ ಕನಸುಗಳಾವು ಕಳೆದು ಹೋಗಿಲ್ಲ,
ಸತ್ತಂತಿರುವ ಕನಸುಗಳಿಗೂ ನನಸೆಂಬ ಮರುಹುಟ್ಟು
ಹಾಲಾಹಲವ ನುಂಗಿ ಬದುಕುವ ಅಮೃತಫಲಗಳಿವು
ಯಾರ, ಯಾವ ಕನಸಿಗೂ ಸಾವಿಲ್ಲ.
ಯಾರದೋ ಕನಸುಗಳು, ಯಾವುದೋ ಕಂಗಳಲಿ...
ಬದುಕಿ ಬಾಳುವ ಕನಸುಗಳಿಗೆಂದಿಗೂ ಸಾವಿಲ್ಲ...
                                                    -vಭಾ

ಬುಧವಾರ, ಆಗಸ್ಟ್ 23, 2017

ವೇಣುಗಾನದ ಮೋಡಿ...

ನಿನ್ನ ವೇಣುಗಾನದಿ ಎಂಥ ಮೋಡಿಯೋ?
ಮರುಳಾಗಿದೆ ಮನ ಆ ನಿನ್ನ ಗಾನಕೆ
ಎಲ್ಲಾ ಚಿಂತೆಗಳ ಮರೆತು ಕುಳಿತು,
ಎಲ್ಲಾ ಬಿಗುಮಾನಗಳ ಬಿಟ್ಟು ಆಲಿಸೆ...
ಮನದ ನೋವೆಲ್ಲವೂ ಮರೆವುದು.
ಹಿರಿಯ-ಕಿರಿಯರೆಲ್ಲರಿಗೂ ಚೈತನ್ಯದ ಚಿಲುಮೆಯು,
ನಿನ್ನ ಕೊಳಲ ಗಾನದುಲಿಗೆ ಸರಿಸಾಟಿ ಯಾರಿಹರು?
ಬಾಳಿನಲಿ ಹೊಸ ಹರ್ಷ ನೀಡುವ ಗಾನಕೆ,
ಮನಸೋತಿಹೆವು ನಿನ್ನ ಮಾಂತ್ರಿಕ ಸ್ಪರ್ಷಕೆ
ಇಂಪಾದ ದನಿಯಲಿ ಎಲ್ಲರಿಗೂ ಮಾಡಿರುವೆ ಮೋಡಿ
ಹಾತೊರೆಯುತಿದೆ ಮನ ಮತ್ತದೇ ಗಾನಕೆ... 
ಮುಗಿದ ನಿನ್ನ ಮುರಳಿಗಾನ ಕೂಡ ಧ್ವನಿಸುತಿಹುದು ಇಲ್ಲಿಯೇ,
ಮತ್ತೆ,ಮತ್ತೆ  ಭ್ರಮಿಸುತಿರುವೆವು ನೀ ಇಲ್ಲೇ ಇರುವೆಯೆಂದು
ನೀಲ ವರ್ಣ, ನವಿಲುಗರಿ, ಕೈಯ್ಯಲ್ಲೊಂದು ಕೊಳಲು
ನೀಲ ಶ್ಯಾಮನ ಗಾನಕೆ ಸ್ವರ್ಗವೇ ಇಳೆಗಿಳಿದಿದೆ.
ಸುಪ್ತ ಭಾವಗಳೂ ಗರಿಗೆದರಿ ನರ್ತಿಸುತ್ತಲಿವೆ...
ಮನದೆಲ್ಲಾ ಕಾರ್ಮೋಡಗಳು ಕರಗಿ ಕಂಬನಿಯಾಗಿವೆ
ನಿನ್ನ ಗಾನದ ಮೋಡಿಗೆ, ಸಕಲ ಸೃಷ್ಟಿಯೂ ಸಿಲುಕಿದೆ 
                                                        -vಭಾ

ನೆರಳು-ಬೆಳಕು

ನೆರಳು ಬೆಳಕಿನ ಕಣ್ಣುಮುಚ್ಚಾಲೆಯಲಿ,
ಕಂಡದೆಷ್ಟೋಅರ್ಥವಾದುದು ಎಷ್ಟೋ?
ಬೆಳಕಿನ ಪತ್ತಲಕೆ ಕತ್ತಲ ಕಸೂತಿ,
ಕಪ್ಪು-ಬಿಳುಪಿನ ಹಿಂದೆ ಮನಸಿನ ಭ್ರಾಂತಿ.
ಹೋದ ಹೊತ್ತು ಮರಳಿಯಂತೂ ಬಾರದು
ಬಣ್ಣದ ಪ್ರಪಂಚದಲಿ ತಮ್ಮ ನೆರಳನೇ ಮರೆತವರೆಷ್ಟೋ?
ಅಗಣಿತ ತಾರೆಗಳ ಸ್ವಚ್ಚಂದ ಬೆಳಕಿನಲಿ,
ಆಗಸದಿ ಚಂದಿರನ ಕಣ್ಣುಮುಚ್ಚಾಲೆ...
ಹಗಲಲ್ಲಿ ನೇಸರನ ನೆರಳ ಹುಡುಕುವವರಿವರು,
ಮರೆತ ಗತ ವೈಭವಗಳ ಬೆಳಕ ತೋರುತ,
ಇರುಳಲ್ಲಿ ಬೆಳಕಿನ ಸ್ಪರ್ಧಾಳುಗಳಾಗುವರು.
ಬೆಳಕಿಲ್ಲದೆ ನೆರಳಿಗೆ ಅಸ್ತಿತ್ವವಿಲ್ಲ
ಮಿಂದ ಮೈ ಮನಕೆ ನೆರಳಿನಾ ಚಿತ್ರ
ನೆರಳಿಲ್ಲದ ಬೆಳಕಿಗೆ ಬೆಲೆಯೆಂದಿಗೂ ಇಲ್ಲ,
ಇದುವೆ ನೆರಳು-ಬೆಳಕಿನ ಮಿಳಿತ ಸೆಳೆತ
                                       -vಭಾ

ಬುಧವಾರ, ಆಗಸ್ಟ್ 9, 2017

ಹೆಣ್ಣೆಂಬ ಕಾರಣಕೆ....

ಹೆಣ್ಣೆಂಬ ಕಾರಣಕೆ ಕಣ್ಬಿಡುವ ಮುನ್ನವೇ,
ಹೊಸಕದಿರಿ ಈ ಜೀವವನು.
ಚಿಗುರಲ್ಲೆ ಚಿವುಟದಿರಿ ನನ್ನನು,
ಅವಕಾಶ ನೀಡಿ ನೋಡಿ ಎನಗೊಂದು.
ನನ್ನದಲ್ಲದ ತಪ್ಪಿಗೆ ನನಗೇಕೆ ಶಿಕ್ಷೆ?
ತಲೆತಗ್ಗಿಸುವ ತಪ್ಪು ನಾನೆಂದು ಮಾಡೆನು
ಜೀವನದಲ್ಲಿ ಯಾರಿಗೂ ಹೊರೆಯಾಗೆನು
ನಾನು ಸಮಾಜಕ್ಕಂಟಿರುವ ಶಾಪವಲ್ಲ,
ಬಾಳುವೆನು ಹಠದಲಿ, ಸಾಧನೆಯ ಹಾದಿಯಲಿ.
ರೂಪುಗೊಳ್ಳುವೆ ನೀವೆ ಹೆಮ್ಮೆಪಡುವಂತೆ.
ದೌರ್ಜನ್ಯವೆಸಗದಿರಿ ಹೆಣ್ಣೆಂಬ ಕಾರಣಕೆ,
ಕತ್ತರಿಸದಿರಿ ನಿಮ್ಮ ಕರುಳ ಕುಡಿಯನು,
ನಿಮ್ಮನ್ನು ಹಡೆದ ತಾಯಿ ಹೆಣ್ಣಲ್ಲವೇ?
ಮಗು ಹೆಣ್ಣೆಂಬ ಕಾರಣಕೆ ಏಕೆ ಈ ಕಲ್ಲುಮನಸು?
                                         -vಭಾ

ಬುಧವಾರ, ಆಗಸ್ಟ್ 2, 2017

ಪುಟ್ಟ ಮನಸಿನ ದೊಡ್ಡ ಆಸೆಗಳು

ಪುಟ್ಟ-ಪುಟ್ಟ ಕೈಗಳಿಂದ,
ಆಕಾಶವನ್ನು ಮುಟ್ಟುವ ಬಯಕೆ.
ಪುಟ್ಟ-ಪುಟ್ಟ ಕಂಗಳು ಕಾಣುತಿವೆ,
ಅದಮ್ಯ ಅವಕಾಶಗಳ ಕನಸುಗಳನ್ನು.
ಪುಟ್ಟ ಮನಸಿನಲ್ಲಿ, ಎಷ್ಟೋ ದೊಡ್ಡ ಆಸೆಗಳು
ತೀರದಾ ಆಸೆಯೊಂದಿಗೆ, ಮುಗಿಯದ ಕನಸುಗಳು
ಮುಗಿಯದ ಕನಸುಗಳೊಂದಿಗೆ, ತೀರದಾ ಬಯಕೆಗಳು
ಕಂಡ ಕನಸುಗಳಲ್ಲಿ ನನಸಾಗುವವೆಷ್ಟೋ?
ಮುಗಿಯದಾ ಬಯಕೆಗಳು ತುಂಬಿರುವುದೆಷ್ಟೋ?
ಗುರಿ ಮುಟ್ಟಲು ಬೇಕಾಗಿದೆ ಸಲಹೆ,
ಕನಸ ನನಸು ಮಾಡಲು ಬೇಕಿದೆ ಸಹಕಾರ
ಸಿಗುವುದೆಷ್ಟೋ? ಬಿಡುವುಷ್ಟೋ?
ಪುಟ್ಟ ಕಂಗಳು ದೊಡ್ಡವಾಗುವಷ್ಟರಲ್ಲಿ,
ವಿಶ್ವಮಾನವನಿಂದ ಅಲ್ಪಮಾನವನಾಗಿಯಾಗಿದೆ.
ದೊಡ್ಡ ಕಣ್ಣುಗಳಲ್ಲಿ ಈಗ ಅಧಿಕಾರದ ದಾಹ,
ದೊಡ್ಡ ಮನಸುಗಳಲ್ಲಿ ಮೂಡಿದೆ ಹಣದ ವ್ಯಾಮೋಹ.
ಬೇಕಿಲ್ಲ ಜಗದಲಿ ಈ ಬದಲಾವಣೆಯು
ನಿತ್ಯವೂ ಶ್ರಮಿಸುವ ಈ ಪುಟ್ಟ,ಮುಗ್ಧ ಮನಸುಗಳಿಗಾಗಿ
ಆಗ ಉದಯಿಸಿದ ಆಸೆ, ಕನಸುಗಳ ನನಸಾಗಿಸಲು.
                                               -vಭಾ