ಪುಸ್ತಕದ ಶೀರ್ಷಿಕೆ : ಜೊತೆಗಾರ
ಲೇಖಕರು : ಜಯಶ್ರೀ ಇಡ್ಕಿದು
ಪ್ರಕಾಶಕರು : ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ
ಪ್ರಥಮ ಮುದ್ರಣ : ಜನವರಿ 2012
ಪುಟಗಳು : 32
ಬೆಲೆ : 15 ರೂ.
ಜಯಶ್ರೀ ಇಡ್ಕಿದು ಅವರು ಹತ್ತನೇ ತರಗತಿಯಲ್ಲಿರುವಾಗಲೇ ಪ್ರಕಟಿಸಿರುವ ಕವನ ಸಂಕಲನ ಇದು. 2012ರಲ್ಲಿ ಪ್ರಕಟವಾಗಿದೆ. ಸಾಮಾನ್ಯವಾಗಿ ಆ ವಯಸ್ಸಿನಲ್ಲಿ ಕವಿತೆಗಳನ್ನು ಪ್ರಕಟಿಸಬೇಕಿದ್ದರೆ ಪ್ರಬುದ್ಧ ಆಲೋಚನೆಗಳು ಜೊತೆಗೆ ಕವಿ ಮನಸ್ಸು, ವಿಭಿನ್ನ ಆಲೋಚನಾ ಶೈಲಿ ಇರಬೇಕು. ಇಲ್ಲಿ ನಾವು ಅದನ್ನು ಸ್ಪಷ್ಟವಾಗಿ ಕಾಣಬಹುದು. ಇವು ರಾಗ ಹಾಕಿ ಹಾಡಬಹುದಾದ ಕವಿತೆಗಳು ಹೌದು
ಇವರ ತಂದೆ ಜನಾರ್ಧನ ಕುಲಾಲ್ ಹಾಗೂ ತಾಯಿ ಲಲಿತಾರವರು. 10ನೇ ತರಗತಿಯಲ್ಲಿರುವಾಗ ಈ ಪುಸ್ತಕ ಪ್ರಕಟವಾದರೂ.. ಐದಾರು ವರ್ಷಗಳಿಂದಲೂ ಬರೆಯುತ್ತಿದ್ದವರು. ಎಂಟನೇ ತರಗತಿಯಲ್ಲಿದ್ದಾಗ ಬಂಟ್ವಾಳದ ಐದನೇ ಮಕ್ಕಳ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದಾಗ ಸಿಕ್ಕ ಪ್ರೋತ್ಸಾಹ ಇವರ ಸಾಹಿತ್ಯ ಹಾದಿಯಲ್ಲಿ ಪ್ರಮುಖ ಹೆಜ್ಜೆ.
ಭಾಷಣ ಇವರಿಗೆ ಇಷ್ಟವಾದ ವಿಚಾರ. ಭಾಷಣ ಮಾಡುವಾಗಲೆಲ್ಲ ಇವರದ್ದೇ ದಾಟಿಯಲ್ಲಿ ಬರೆಯಲು ತೊಡಗಿದ್ದರಂತೆ. ಅದನ್ನು ಮಾತಿನ ಮೂಲಕ ಅಭಿವ್ಯಕ್ತಗೊಳಿಸುವಾಗ ಇರುತ್ತಿದ್ದ ವಿಭಿನ್ನ ಶೈಲಿಯೇ ಬಹುಮಾನಗಳನ್ನು ತಂದುಕೊಟ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದ ಬಗೆಯನ್ನು ನೆನಪಿಸಿಕೊಂಡಿದ್ದಾರೆ.
ಈ ಕವನ ಸಂಕಲನದಲ್ಲಿ 18 ಚಂದದ ಕವನಗಳಿವೆ
ತಾಯಿಯನ್ನು ಹಲವಾರು ರೂಪಗಳಲ್ಲಿ 'ತಾಯಿ' ಕವನದಲ್ಲಿ ನೆನೆಯುತ್ತಾರೆ. ಒಂದೆರಡು ಸಾಲನ್ನು ನೋಡುವುದಾದರೆ..
ಕಂದನ ಸೋಲಲಿ ಒಬ್ಬಳಾದಳು
ಗೆಲುವು ಬರಲು ದೂರದಿ ನಗುವಳು
ಸೋಲು ಗೆಲುವಲು ಜೊತೆಯಾಗಿರುವಳು
ಅವಳು ಧೈರ್ಯ ನೀಡಿದ ತಾಯಿ
ಆಕೆ ಸ್ನೇಹಮಯಿ
ಒಲವಿನ ಜೀವ ಕವಿತೆಯನ್ನು ಶುರು ಮಾಡುವಾಗ ಒಲವಿನ ಜೀವ ಯಾವುದಿರಬಹುದು ಎಂದು ಆಸಕ್ತಿಯಿಂದಲೇ ಓದುತ್ತಾ ಹೋದೆ. ಇಲ್ಲಿ ಅಪ್ಪನನ್ನು ಚೆಂದವಾಗಿ ಚಿತ್ರಿಸಿದ್ದಾರೆ.
ದೂರ ಮಾಡಿದಿರಿ ನನ್ನ
ಮನದ ನೂರು ಭಯ
ಅಂದಿನಿಂದಲೇ ಅಪ್ಪ
ನೀವೇ ನನ್ನ ನೆಚ್ಚಿನ ಗೆಳೆಯ
ಮಳೆಗಾಲದ ಒಂದು ದಿನ ಎಂಬ ಕವಿತೆಯಲ್ಲಿ ಮಳೆಯ ರಭಸ, ಮಳೆ ಬಂದಾಗ ಸಿಗುವ ಹರುಷ, ರೈತನ ಬದುಕನ್ನು ಸ್ಮರಣೀಯವಾಗಿಸುತ್ತಾರೆ.
ಮಳೆರಾಯ ನೀನೊಮ್ಮೆ ಸುರಿದು ಹೋಗು
ಮತ್ತೆ ಬರುವಾಗ ಶಾಂತನಾಗು
ರೈತರದೆಯಲ್ಲಿ ತಾ ಹರುಷ
ನೋವು ಬೇಡ ಸಾವಿರ ವರುಷ
ಈ ಅರ್ಥಪೂರ್ಣ ಸಾಲುಗಳಲ್ಲಿ ಮಳೆರಾಯ ವಿದ್ವಾಂಸಕನಾಗಿ ಬರದೆ, ರೈತರಿಗೆ ಹರುಷ ತರುವಂತೆ ಶಾಂತನಾಗಿ ಬಾ ಎನ್ನುತ್ತಾ ಹೇಳುವ ಮಾತು ನನಗೆ ಬಹಳ ಇಷ್ಟವಾಯಿತು.
'ಎಲ್ಲವೂ ಅವನದೇ'ಎನ್ನುವ ಕವಿತೆಯಲ್ಲಿ ಸಮಾಜದ ಹಾಗೂ ಹಲವಾರು ಸಾಮಾಜಿಕ ಅಂಶಗಳ ಜೊತೆ ಜೊತೆಗೆ ಆಧ್ಯಾತ್ಮದ ಶೈಲಿಯ ಆಲೋಚನೆಯ ಕವಿತೆಯಾಗಿ ಅರ್ಥೈಸಿಕೊಂಡೆ.
ಕನ್ನಡಿಯೆದುರು ನಿಂತರೆ
ಬಿಂಬವೊಂದು ಮೂಡುವುದು
ಆ ಬಿಂಬ ನನ್ನದು
ಆದರೆ ಆ ಬಿಂಬವೇ ನಾನಲ್ಲ
ಹೀಗೆ ಶುರುವಾಗುವ ಕವಿತೆಯಲ್ಲಿ ಈ ಸಾಲುಗಳನ್ನೂ ಕಾಣಬಹುದು.
ನಾ ಮಾತನಾಡಿದೆ
ಕೇಳುವವರು ಸಿಕ್ಕಿದರು
ಅದು ಮಾತು ಹೌದು
ಆದರೆ ಆ ಮಾತು ನನ್ನದಲ್ಲ
ಯಾವುದು ನನ್ನದು, ಯಾವುದು ನನ್ನದಲ್ಲ ಎನ್ನುತ್ತಲೇ.. ಯಾವುದೂ ನನ್ನದಲ್ಲ.. ಅವನ ಚಿತ್ತ, ಅವನಾಡಿಸಿದಂತೆ ಎಂದು ದೇವರ ಆಟವನ್ನು ಹಾಗೂ ನಮ್ಮ ನಿಮಿತ್ತವನ್ನು ಸೊಗಸಾಗಿ ತೋರುತ್ತಾರೆ.
ಈ ಪುಸ್ತಕದ ಶೀರ್ಷಿಕೆಯೂ ಆಗಿರುವ ಕವಿತೆ 'ಜೊತೆಗಾರ' ಯಾರೆಂಬುದನ್ನು ಚಂದವಾಗಿ ಹೇಳುತ್ತದೆ. ಈ ಕವನ ಸಂಕಲನದ ಮುಖಪುಟದ ಚಿತ್ರವೂ ಸಹ ಸೂಕ್ಷವಾಗಿ ಅದನ್ನೇ ತೋರುತ್ತದೆ. ಸಾಮಾನ್ಯವಾಗಿ ಜೊತೆಗಾರ ಎಂದಾಕ್ಷಣ ಸ್ನೇಹಿತನನ್ನೋ ಅಥವಾ ಒಲವಿನ ಇನಿಯನ ನ್ನೋ ನಾವಿಲ್ಲಿ ನೆನೆಯುವಂತಿಲ್ಲ. ಇಲ್ಲಿನ ಜೊತೆಗಾರನೇ ಬೇರೆ. ಈ ವಿಭಿನ್ನ ಜೊತೆಗಾರ ಯಾರೆಂಬುದನ್ನು ಊಹಿಸಬಲ್ಲಿರಾ..?
ಹೀಗೆ ಶೀರ್ಷಿಕೆ ಗುಟ್ಟು ಬಿಟ್ಟುಕೊಡದಂತೆ ಕವಿತೆ ಬೇರೊಬ್ಬರನ್ನೇ ಪರಿಚಯಿಸುವ ಮತ್ತೊಂದು ಕವಿತೆ "ಕ್ಷಮಿಸಲಾರೆಯಾ ನನ್ನ ಓ ಜೀವ". ಮನೆಯ ನಿಯತ್ತಿನ ಜೀವವೊಂದನ್ನು ನೆನಪಿಸಿಕೊಂಡಿರುವ ಪರಿ ಚೆನ್ನಾಗಿದೆ.
ಲೋಕದ ನೋವುಗಳ ತೊಡೆಯುವಲ್ಲಿ
ಒಬ್ಬರಾಗಿ ಬಾಳೋಣ ಪ್ರೀತಿ ಸ್ನೇಹದಲ್ಲಿ
ಲೋಕದ ನಗುವೊಳು ನಗುತಿರೆಂದು ಖುಷಿಯಲ್ಲಿ
ಎನ್ನುತ್ತಾ ಮನುಷ್ಯ ಬದುಕಬೇಕಾದ ರೀತಿ ಹಾಗೂ ಎಲ್ಲರೊಳಗೊಂದಾಗುವ ಬಗೆಯನ್ನು 'ಅನಾಥರಲ್ಲ ಯಾರೂ ಇಲ್ಲಿ' ಎಂಬ ಕವಿತೆಯಲ್ಲಿ ಹೇಳುತ್ತಾರೆ.
ಇಂತಹ ಹಲವಾರು ಸೊಗಸಾದ ಸಾಲುಗಳ ಇನ್ನಷ್ಟು ಕವಿತೆಗಳು ಇಲ್ಲಿವೆ. ಪರಿಸರ ಪ್ರೇಮ, ದೇವರನ್ನು ನೆನಪಿಸಿಕೊಳ್ಳುವ, ಭಗವಂತನಿಗೆ ವಂದಿಸುವ, ಕಿರಿಮೆಯನ್ನು ಸಾರುವ ಪರಿ ಕಾಣುತ್ತದೆ. ತಂದೆ-ತಾಯಿಯ ಮೇಲಿನ ಅಕ್ಕರೆ, ಗೆಳತಿ ಹಾಗೂ ಜೊತೆಗಾರರು, ಸುತ್ತಮುತ್ತಲಿನ ಪರಿಸರದ ಚಿತ್ರಣಗಳ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪರಿ ಇಲ್ಲಿದೆ.
ನಿಜಕ್ಕೂ ನನಗೆ ಈ ಕವನಗಳ ಓದು ಅಚ್ಚರಿ ಹಾಗೂ ಆಪ್ತತೆಯನ್ನು ಕಟ್ಟಿಕೊಟ್ಟವು.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ