ಭಾನುವಾರ, ಜುಲೈ 26, 2026

ಬ್ಲಡ್ ಮನಿ (ಪುಸ್ತಕ ಯಾನ - 473)


ಪುಸ್ತಕದ ಶೀರ್ಷಿಕೆ : ಬ್ಲಡ್ ಮನಿ

ಲೇಖಕರು : ಗೀತಾ ಕುಂದಾಪುರ

ಪ್ರಕಾಶಕರು : ತೇಜು ಪಬ್ಲಿಕೇಷನ್ಸ್

ಪ್ರಥಮ ಮುದ್ರಣ : 2025

ಪುಟಗಳು : 150

ಬೆಲೆ : 160 ರೂ.


'ಬ್ಲಡ್ ಮನಿ' ಗೀತಾ ಕುಂದಾಪುರ ಅವರ ಐದನೇ ಕಥಾ ಸಂಕಲನ ಹಾಗೂ ಒಂಬತ್ತನೇ ಕೃತಿ. ಇದರಲ್ಲಿ 18 ಚಂದದ ಕಥೆಗಳಿವೆ. ಪ್ರತಿ ಕಥೆಯಲ್ಲಿಯೂ ಒಂದಲ್ಲಾ ಒಂದು ವಿಶೇಷಗಳಿವೆ. 

'ಕಾಫಿ ಡೇಟ್' ಕತೆ ವಿಜಯ ಕರ್ನಾಟಕ-ವೀರಲೋಕದ ದೀಪಾವಳಿ ಕಥೆಯ ಟಾಪ್ 25 ಕಥೆಗಳಲ್ಲೊಂದು. 'ಮನಸ್ಸು ಮಾಯಾಂಗನೆ' ಕಥೆಗೆ ಬೃಂದಾವನ ಕನ್ನಡ ಕೂಟ ನ್ಯೂಜರ್ಸಿ ಅವರ 'ಬೃಂದಾವನ ವಿಶಂತಿ ವೈಭವ-2024' ಕಥಾಸ್ಪರ್ಧೆಯ ಬಹುಮಾನ ಸಿಕ್ಕಿದೆ. 'ಜೋಡಿ ಕಣ್ಣುಗಳು' ವಾಣಿ ಕೌಟುಂಬಿಕ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದಿದ್ದರೆ.. 'ದೇವಿಕಾ' ಕಥೆ ಗುರುಕುಲ ಕಲಾ ಪ್ರತಿಷ್ಠಾನದ ಸಣ್ಣ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ. ಹಲವು ಕಥೆಗಳು ಮಂಗಳೂರು ಹಾಗೂ ಕುಂದಾಪುರ ಆಕಾಶವಾಣಿಯಲ್ಲಿ ಪ್ರಸಾರವಾಗಿವೆ.


ಕಾಫಿ ಡೇಟ್: ಇಂದಿನ ಯುವ ಜನಾಂಗದ ಪ್ರಸ್ತುತ ಚಿತ್ರಣ ಇಲ್ಲಿದೆ. ಸಂಬಂಧಗಳ ಸ್ವರೂಪವನ್ನು ನಿರ್ಧರಿಸುವಾಗ ಇಂದಿನ ದಿನಗಳಲ್ಲಿಯೂ ತಮ್ಮ ಗತದ ದಿನಗಳನ್ನು ಗಂಡು ಬಿಚ್ಚಿಡುವಷ್ಟೇ ಸಾರಾಗವಾಗಿ ಹೆಣ್ಣು ಬಿಚ್ಚಿಟ್ಟರೆ ಅದನ್ನು ಎಷ್ಟು ಸುಲಭವಾಗಿ ಒಪ್ಪಬಲ್ಲ ಆತ..? ಸಾಕ್ಷಿಗೆ ಈಶಾನ್ ನ ಇತಿಹಾಸದ ಕುರಿತು ಅಷ್ಟು ಆಸಕ್ತಿ ಇರಲಿಲ್ಲ. ಇತಿಹಾಸದ ಪೋಸ್ಟ್ ಮಾರ್ಟಂ ಮಾಡಿದ ಅವರಿಬ್ಬರ ಕಾಫಿ ಡೇಟ್ ಮುಂದೆ ಅವರಿಬ್ಬರನ್ನು ಯಾವ ನಿರ್ಧಾರ ತಳೆಯುವಂತೆ ಮಾಡಿತು..?


ಬ್ಲಡ್ ಮನಿ: ಕೆಲ ದಿನಗಳ ಹಿಂದೆ ನರ್ಸ್ ನಿಮಿಷ ಪ್ರಿಯಳ ಸಂಗತಿ ಓದಿದ್ದಾಗ ನನಗೆ ಮೊದಲು ನೆನಪಾಗಿದ್ದು ಈ ಕಥಾ ಸಂಕಲನದ ಶೀರ್ಷಿಕೆ. ಶೀರ್ಷಿಕೆ ನನಗೆ ಬಹಳ ಕುತೂಹಲ ಮೂಡಿಸಿತು. ದಮಾಮ್ ನಲ್ಲಿದ್ದ ಪ್ರಜ್ವಲನನ್ನು ಸೇರಲು ಹೊರಟ ಶೀಲಾಳ ಕಥೆ ಮುಂದೆ ರಕ್ತಕ್ಕೆ ರಕ್ತ ಇಲ್ಲವೇ ಬ್ಲಡ್ ಮನಿ ಎನ್ನುವ ಕಾನೂನಿನ ಚೌಕಟ್ಟಿನಲ್ಲಿ ಸಿಲುಕಿದ್ದು ಹೇಗೆ..? ಕುತೂಹಲಕರವಾಗಿ ಹೊಸ ವಿಚಾರವೊಂದು ತೆರೆದುಕೊಳ್ಳುತ್ತದೆ. ಕಾನೂನಿನ ದುರುಪಯೋಗವನ್ನು ಹೇಗೆಲ್ಲಾ ಪಡೆಯುತ್ತಾರೆ ಎಂದು ಹೇಳುವ ಕಥೆ ಇಲ್ಲಿದೆ.


ಬ್ಯಾಂಡ್, ಬಾಜಾ, ಬಾರಾತ್: ಅವನಿ ರೆಸಾರ್ಟ್ ನಲ್ಲಿ 'ಅಲಕಾ ವೆಡ್ಸ್ ಆಕಾಶ್' ಮದುವೆಯ ಸಂಭ್ರಮದಲ್ಲಿಯೇ ಅಂದು ಮತ್ತೊಂದು ಮದುವೆಯೂ ಆಗಿತ್ತು. ಆದರೆ, ಎರಡು ವಿವಾಹಗಳೂ ವಿರುದ್ಧ ಧ್ರುವಗಳಂತೆ ಎಂದರೂ ತಪ್ಪಾಗಲಾರದು. ಅಲಕಾ ಹೇಳುವಂತೆ "ದಾಂಪತ್ಯಕ್ಕೆ ಬೇಕಾಗಿರುವುದು ಪರಸ್ಪರ ಪ್ರೀತಿ,ಗೌರವ ಜೊತೆಗೆ ...." ಮತ್ತೇನು..? 


ಸಿಹಿ-ಕಹಿ: ಪಾಂಡುರಂಗ ಕಮ್ತಿಯವರ 60 ರ ಶಾಂತಿಯ ಚಿತ್ರಣದಲ್ಲಿ ಅವರ ಸಕ್ಕರೆ ಕಾಯಿಲೆಯ ಜೊತೆಗೆ ಅವರ ಬದುಕಿನ ಸಿಹಿ -ಹಿ ಪ್ರಸಂಗಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ಕೆಲವೊಮ್ಮೆ ನಾವು ಸಿಹಿಯ ವಿಚಾರದಲ್ಲಿ ತುಸು ಹೆಚ್ಚೇ ಸ್ಟ್ರಿಕ್ಟ್ ಆದೆವು ಎಂದು ಅರಿತುಕೊಳ್ಳುವಷ್ಟರಲ್ಲಿ ಕಾಲ ಮಿಂಚಿ ಹೋಗುತ್ತದಾ..? ಇಲ್ಲಿ ಸಿಹಿ ಹೆಚ್ಚೋ ಕಹಿ ಹೆಚ್ಚೋ ಓದಿ ನೋಡಿ.


ಮೂಗೂರಿನ ಮೂಗರು: ನನಗೆ ಬಹಳ ಇಷ್ಟವಾದ ಕಥೆ ಇದು. ಜಿಂಕೆಗಳು ಬಾರದಂತೆ ತಡೆಯಲು ಲಕ್ಷ್ಮಿಯ ನೈಲಾನ್ ಸೀರೆಯ ಪರದೆಗಳು ಹರಿದಿದ್ದವು. ಭಾಸ್ಕರನ ಕೃಷಿ ಬದುಕಿನ ಬವಣೆಯ ಜೊತೆಗೆ ಆತ ತನ್ನೊಡನಿರುವ ಜೀವಗಳಿಗೆ ಇಟ್ಟಿರುವ ಹೆಸರುಗಳು ಸೆಳೆಯುತ್ತವೆ. ಸದ್ದಾಮ, ಪುಟಿನ್, ಶ್ರೀದೇವಿ, ರಾಣಿ ಪದ್ಮಿನಿ ಹೀಗೆ. ಇದರೊಡನೆ ಜೊತೆಯಾದ ಶೇಖಾಮೌಸಾ. ಈ ಹೆಸರಿಗೆ ಕಾರಣ ಕಂಡುಹಿಡಿದ ಮಗ, ಆಟಿಸಂನ ಪುಟ್ಟಿ ಚುರುಕಾದ ಬಗೆ.. ಬ್ಯಾಂಕ್ ಮ್ಯಾನೇಜರ್ ಬಂದು ಹೋದ ನಂತರ ಹರಡಿದ ಸುದ್ದಿ.. ಕಷ್ಟಗಳಲ್ಲಿ ನೆರಳುತ್ತಿದ್ದ ಕುಟುಂಬಕ್ಕೆ ಶೇಖಾಮೌಸಾ ದಾರಿ ತೋರಿದ ಬಗೆ ಹೇಗೆ..? ನಿಮಗೆ ಶೇಖಾಮೌಸಾ ಯಾರೆಂದು ತಿಳಿಯಿತೇ..? ಇಲ್ಲವಾದಲ್ಲಿ ಕಥೆ ಓದಿ.


ಬಿಲದೊಳಗಿನ ಬದುಕು: ಸುವರ್ಣಳ ಕಣ್ಣಿಗೆ ಬಿದ್ದ ಬಾಲದಿಂದ ಅದು ಹಾವು ಇರಬಹುದೇ ಎನ್ನುವ ಊಹೆಯಲ್ಲಿ ಹುಡುಕಲು ಹೊರಟಾಗ ನಿಜಕ್ಕೂ ಸಿಕ್ಕದ್ದು ಕಾಳಿಂಗನ ದರ್ಶನ. ಮನೆಯ ಪರಿಸ್ಥಿತಿಯೇ ಬುಡಮೇಲಾಗಿ ಮುಂದೇನು ಗತಿ ಎನ್ನುವಾಗ ಬಿಲದೊಳಗೆ ಹೊಕ್ಕ ಕಾಳಿಂಗನ ದಯೆ ಹೇಗಿತ್ತು..? ಓದಿ ನೋಡಿ.


ಮನಸು ಮಾಯಾಂಗನೆ: ಮೃದುಲಾ ಹಾಗೂ ಶ್ರೀಕಾಂತ್ ಮಗಳ ಮನೆಗೆ ಹೋಗಿ ಅವಳ ಬಾಣಂತನ ಮುಗಿಸಿ ಕ್ಯಾಲಿಫೋರ್ನಿಯಾದಿಂದ ಬಂದ ನಂತರ ಮೃದುಲಾ ತರಕಾರಿ ತರಲು ಹೋಗಿ ಮಾರ್ಕೆಟ್ ನಿಂದ ಕಾಣೆಯಾಗಿದ್ದಳು. 36 ವರ್ಷಗಳ ದಾಂಪತ್ಯದಲ್ಲಿ ಅವರಿಬ್ಬರ ಅನ್ಯೋನ್ಯತೆ ಹೇಗಿತ್ತು..? ಆಸ್ಟ್ರೇಲಿಯಾದಲ್ಲಿದ್ದ ಮಗ ಹಾಗೂ ಕ್ಯಾಲಿಫೋರ್ನಿಯಾದಲ್ಲಿದ್ದ ಮಗಳು ಅಮ್ಮನ ಕಣ್ಮರೆಗೆ ಸ್ಪಂದಿಸಿದ ಬಗೆ ಹೇಗೆ..? ಮೃದುಲಾ ಸ್ಥಿತಿಗೆ ಕಾರಣರು ಯಾರು..? ಶ್ರೀಕಾಂತ್ ನಿಗೆ ಮೃದುಲ ಸಿಕ್ಕ ಮುನ್ನಿನ ಬವಣೆ ಹೇಗಿತ್ತು..? ಇಲ್ಲಿ ಪ್ರತಿಯೊಬ್ಬರ ಮನಸ್ಸಿನ ಮಾತುಗಳ ಸ್ಪಷ್ಟ ಚಿತ್ರಣವಿದೆ.


ಮನೆಗೆ ಬಂದ ಗುಡ್ಡ: ಪುಟ್ಟ-ಪುಟ್ಟ ಎರಡು ಕೋಡು ಮೂಡಿದ್ದ ಗುಡ್ಡ ಮನೆಗೆ ಬಂದದ್ದು ಹಾಗೂ ಮನೆಯಿಂದ ಹೊರಟದ್ದು ಎರಡು ಅನಿರೀಕ್ಷಿತವೇ. ಆದರೆ.. ಈ ನಡುವೆ ಗುಡ್ಡನ ದೆಸೆಯಿಂದ ಪವಾಡವೇ ಆಯಿತೆನ್ನಬಹುದು. ಕಾವೇರಿಯ ಮನೆಗೆ ಬಂದ ಗುಡ್ಡನ ಕಥೆ ಇಲ್ಲಿದೆ.


ಆ ಜೋಡಿ ಕಣ್ಣುಗಳು: ಜೀವನೋತ್ಸಾಹವನ್ನೇ ತುಂಬಿಕೊಂಡಿದ್ದ ಎಲ್ಲರಿಗೂ ಅರ್ಥವಾಗುತ್ತಿದ್ದ ಮಾಧುರಿ ಬ್ರೈನ್ ಡೆಡ್ ಆಗಿ ಆಸ್ಪತ್ರೆಯಲ್ಲಿದ್ದಾಗ ಮನೆಯವರು ತೆಗೆದುಕೊಂಡ ನಿರ್ಧಾರಗಳು.. ಸೊಸೆ ಅಲಕಾಳ ಕುರಿತು ಎದ್ದ ಗಾಳಿಸುದ್ದಿಗಳು, ಮಾಧುರಿಯ ಅಂಗಾಂಗ ದಾನ ಮಾಡಿದ ನಂತರ ಜೋಡಿ ಕಣ್ಣುಗಳನ್ನು ಮಾತ್ರ ಪತಿ ಶ್ರೀಕಾಂತ್ ಅರಸಿ ಹೊರಟದ್ದೇಕೆ..? ಅಂತ್ಯದಲ್ಲಿ ಅಲಕಾಳ ದಿಟ್ಟ ನಿರ್ಧಾರ ಇಲ್ಲಿ ಆಪ್ತವಾಗುತ್ತದೆ.


ಗಿರ್ಗಿಟ್ಲಿ: ವಕೀಲ ಸೋಮಣ್ಣನ ಮಗ ಅವನಂತೆ ವಕೀಲನಾಗಲಿಲ್ಲ. ಅಂತೆಯೇ ಕಾಯಿ ಕೆಡವುವ ಸೀನನ ಮಗ ಅವನಂತಾಗದೆ ವಕೀಲನಾದ. ಮೊದಮೊದಲಿಗೆ ಸೀನನ ಮಗ ಅಶೋಕನ ಕುರಿತು ಹೆಮ್ಮೆಯಾದರೆ, ಸೋಮಣ್ಣ ಅದುವರೆಗೂ ಅವರು ಹಳಿಯುತ್ತಿದ್ದ ಮಗ ಸೂರಜ್ ಕುರಿತು ಹೆಮ್ಮೆಯಾಗುವ ಕಥೆ ಇಲ್ಲಿದೆ. ಗಿರ್ಗಿಟ್ಲಿಯಂತಹ ಬದುಕಿನ ಚಿತ್ರಣ ಇಲ್ಲಿದೆ.


ಸ್ವಾರ್ಥ-ನಿಸ್ವಾರ್ಥ: ಮೊದಮೊದಲು ಬಾಂಧವ್ಯದಿಂದಲೇ ಇದ್ದ ತಂಗಿ ಆಶಾ ಹಾಗೂ ತನ್ನ ಬಾಂಧವ್ಯ ದೂರಾಗುತ್ತಿರುವ ಕುರಿತು ಹುಟ್ಟಿದ ಆಲೋಚನೆಯ ಜೊತೆಯಲ್ಲೇ.. ಪಕ್ಕದಲ್ಲಿ ಶೆಡ್ಡಿನಲ್ಲಿದ್ದ ವಸಂತಳ ಬದುಕು, ನಂತರ ಅವಳ ತಂಗಿ ಜೊತೆಯಾಗಿ ಅವರ ಬದುಕಿನ ಬಂಡಿ ಸಾಗುವಾಗ ಆದ ಜ್ಞಾನೋದಯ, ಸಂಬಂಧಗಳ ಸ್ವಾರ್ಥ-ನಿಸ್ವಾರ್ಥತೆಯ ಜೊತೆಗೆ ಮನಸ್ಸು ಅವುಗಳನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತದೆ ಎಂಬುದರ ಚಿತ್ರಣವು ಇಲ್ಲಿದೆ.


ಮುಸ್ಸಂಜೆಯಲ್ಲರಳಿದ ಪ್ರೀತಿ: ಶಾಂತಿವನದಲ್ಲಿ ಎಲ್ಲರೂ ತಮ್ಮ ಮುಸ್ಸಂಜೆಯ ಬದುಕನ್ನು ಕಳೆಯುತ್ತಿರುವಾಗ ಸದಾನಂದ ಹಾಗೂ ಮೀರಾರ ಕುರಿತಾಗಿ ಎದ್ದ ಗಾಳಿಸುದ್ದಿಯೇ ನಿಜವಾಯಿತು ಎನ್ನುವಷ್ಟರಲ್ಲಿ.. ಸದಾನಂದನ ಮನೆಯವರ ಪ್ರವೇಶವಾಗುತ್ತದೆ. ಮೀರಾಳ ಹಿಂದಿನ ಬದುಕು ಗೊತ್ತಿದ್ದ ಸದಾನಂದ ತಳೆಯುವ ನಿರ್ಧಾರವೇನು..? ಮುಸ್ಸಂಜೆಯ ಈ ಪ್ರೀತಿ ಅರಳಿದ ಬಗೆ ಇಲ್ಲಿದೆ.


ಬಾಬಕ್ಕ: ಎಲ್ಲರಿಗೂ ಬೇಕಾಗಿದ್ದ ಬಾಬಕ್ಕ, ಅವಳ ಕಾಫಿ ಪ್ರೀತಿ, ಸಾಂತಾವರದ ಜನ ಅವಳನ್ನು ಆದರಿಸಿದ ಬಗೆ ಹೀಗೆ ಕಥೆ ಸಾಗುತ್ತಿರುವಾಗಲೇ ಎಲ್ಲರೂ ಸಾಮೂಹಿಕವಾಗಿ ಅವಳನ್ನು ಬಹಿಷ್ಕರಿಸಿದಂತೆ ಒಬ್ಬಂಟಿಯಾಗಿದ್ದ ಬಾಬಕ್ಕನ ಬದುಕಿನಲ್ಲಿ ಬಂದ ಆಶಾಕಿರಣವೇನು..? ಅಷ್ಟಕ್ಕೂ ಎಲ್ಲರೂ ಆಕೆಯನ್ನು ದೂರಾಗಿಸಿದ್ದೇಕೆ..? ಎಷ್ಟೇ ಉಪಕಾರ ಮಾಡಿದರೂ ಅವಶ್ಯಕತೆ ಮುಗಿದ ನಂತರ ಮನುಷ್ಯನನ್ನು ಯಾವ ರೀತಿ ಕಾಣುತ್ತಾರೆ ಎನ್ನುವ ಕಟು ವಾಸ್ತವದ ಚಿತ್ರಣವೂ ಇಲ್ಲಿದೆ.


ಮೂರು ಹೆಜ್ಜೆಗಳು: ಈ ಕಥೆಯ ಕುರಿತು ಹೆಚ್ಚು ತೆರೆದಿಡಲಾರೆ. ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ವರ್ಗಕ್ಕೂ ಹೊಂದಿಕೆಯಾಗುವ ಈ ಕಥೆಯಲ್ಲಿ ಮೂರು ಹೆಜ್ಜೆಗಳು ಕಾಣುತ್ತವೆ.


ಬದುಕು ಬಯಲಾದಾಗ: ಮಶೀನಿಗೆ ಸಿಕ್ಕ ದಾರದ ಸಿಕ್ಕನ್ನು ಬಿಡಿಸುವಂತೆ ತನ್ನ ಸಿಕ್ಕುಗಳು ಬಿಡಿಸುವಂತಾಗಿದ್ದರೆ..! ಎಂದು ಆಲೋಚಿಸುತ್ತಿದ್ದ ಸುರೇಖಳಿಗೆ ಈಗ ತವರಿನ ಆಸರೆ ಇಲ್ಲ. ಪ್ರೀತಿಸಿದ ಗಂಡ ಮಗ ಜೊತೆಗಿಲ್ಲ. ಸಾಧಾರಣ ಬದುಕಿಗೆ ಕಷ್ಟಪಡುತ್ತಿದ್ದ ಅವಳ ಜೊತೆಗಿದ್ದದ್ದು ಯಾರದ್ದೋ ತಪ್ಪಿಗೆ ಕಣ್ಣು ಕಳೆದುಕೊಂಡ ಮಗಳು ಶ್ವೇತ. ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತು ಶ್ವೇತಳ ಭವಿಷ್ಯದ ಭವ್ಯ ಬದುಕನ್ನು ಕಟ್ಟಿಕೊಡುವ ತಾಯಿ ಸುರೇಖಳ ಬದುಕನ್ನು ಕಾಣಬಹುದು. ನತದೃಷ್ಟೆ ಎಂದುಕೊಂಡಳ ಬದುಕು ಅದೃಷ್ಟದ ಹಾದಿ ಹಿಡಿದ ಕಥನ ಇಲ್ಲಿದೆ.


ಸುವರ್ಣ ರೇಖೆ: ಅನಕ್ಷರಸ್ಥಳಾದ ತಾಯಿ ಸರಸೋತಿಗೆ ವಿದೈಯ ಮಹತ್ವ ಅರಿವಿರಲಿಲ್ಲ. ಗಂಗಾ, ಗೌರಿ, ಗಾಯತ್ರಿ ಎನ್ನುವ ಮೂವರು ಹೆಣ್ಣು ಮಕ್ಕಳು. ಪೌರಕಾರ್ಮಿಕಳಾಗಿ ಕೆಲಸಕ್ಕೆ ಸೇರುವ ಗೌರಿ ಅನುಭವಿಸುವ ನೋವು, ಅದನ್ನು ಮೆಟ್ಟಿನಿಂತು ಇಡೀ ಕುಟುಂಬವನ್ನು ದಡ ಸೇರಿಸುವ ಕಥೆ ಇಲ್ಲಿದ್ದರೂ ಇದು ಹೂವಿನ ಹಾದಿಯಲ್ಲ. ಪೌರಕಾರ್ಮಿಕರ ಬದುಕನ್ನು ಉಳಿದವರು ನೋಡುವ ಬಗೆ ಹಾಗೂ ಅವರ ದೃಷ್ಟಿ ಎರಡರ ಚಿತ್ರಣವೂ ಇಲ್ಲಿ ಕಾಣುತ್ತದೆ. ಗಂಗಾಳಂತಹವರ ಕುರಿತಾಗಿ ಗೌರವ ಹೆಚ್ಚಾಗುತ್ತದೆ.


ದೇವಿಕಾ: ಕೆಲಸವಿಲ್ಲದೆ ತಿರುಗಾಡಿಕೊಂಡಿದ್ದ ಮಗ ಕೃಷ್ಣನಿಗೆ ದಾಮು ಬುದ್ಧಿ ಹೇಳುತ್ತಿದ್ದ. ಆದರೆ ಕೃಷ್ಣನ ಆಲೋಚನೆಯೇ ಬೇರೆ ಇತ್ತು. ಸಮುದ್ರದ ಹಿತ್ತಲಿನ ಮರಳಿನಲ್ಲಿ ನಿಂತ 'ದೇವಿಕಾ ರಾಣಿ' ಕೃಷ್ಣನ ಕೈಯಲ್ಲಿ ಸಿಲುಕಿ ಏನಾದಳು? ಸತ್ಯ ತಿಳಿದ ದಾಮುವಿನ ಪರಿಸ್ಥಿತಿ ಕಣ್ಣಿಗೆ ಕಟ್ಟಿದಂತಿದೆ.


ದೊಡ್ಮನೆ: ಎಷ್ಟೋ ಬಾರಿ ನಮಗಿಂತ ಸುಖವಾಗಿರುವವರನ್ನು ಕಂಡಾಗ ಅವರಂತೆಯೇ ಆಗುವ ಆಸೆಯಾಗುತ್ತದೆ. ಒಳ್ಳೆಯ ವಿಚಾರಕ್ಕೆ ಇದು ತಪ್ಪಲ್ಲವಾದರೂ.. ಮನಸ್ಥಿತಿ ಕೆಡಿಸಿಕೊಳ್ಳುವಷ್ಟು ಪರಿಸ್ಥಿತಿ ಹದಗೆಡಬಾರದು. ಗಾಯಿತ್ರಿ ಮತ್ತೆ ಮನೆಯನ್ನು ವಿಸ್ತಾರಗೊಳಿಸುವ ಪ್ರಸ್ತಾಪವಿಟ್ಟಾಗ ಬಂದ ಖಾರವಾದ ಪ್ರತಿಕ್ರಿಯೆ ಜೊತೆಗೆ ಮುಂದಿನ ಶೆಡ್ಡಿನಲ್ಲಿ ಬದುಕುತ್ತಿದ್ದ ಸುಮಿತ್ರಾಳ ಬದುಕು ಎರಡನ್ನೂ ಕಂಡ ಗಾಯತ್ರಿಯ ಪ್ರತಿಕ್ರಿಯೆ ಏನಿತ್ತು..?


ಈ ಕಥಾ ಸಂಕಲನದಲ್ಲಿ ಸಂಭಾಷಣೆಗಳು ಪ್ರಮುಖವಾಗಿ ಸೆಳೆಯುತ್ತವೆ. ಆಯಾ ಪರಿಸರ, ವಯಸ್ಸು ಹಾಗೂ ಪರಿಸ್ಥಿತಿಗೆ ತಕ್ಕಂತಹ ಸಂಭಾಷಣೆಗಳಿವೆ. ಕಥಾವಸ್ತುಗಳು ವೈವಿಧ್ಯಮಯವಾಗಿವೆ ಜೊತೆಗೆ ಕಥಾ ಪರಿಸರ ಕಣ್ಣಿಗೆ ಕಟ್ಟುವಂತೆ ನಿರೂಪಣೆಯಿದೆ. 


"ಬದುಕಿನ ಕೊನೆಯಲ್ಲಿ ಸಾವು ನಿಶ್ಚಿತವಾದರೂ ಜೀವನ ದುಃಖಾಂತ್ಯವಾಗಬೇಕೆಂದಿಲ್ಲ ತಾನೇ? ಎಷ್ಟೇ ಕತ್ತಲಿದ್ದರೂ ಸುಖದ ಕೋಲ್ಮಿಂಚು ಬರಲು ಎಷ್ಟು ಹೊತ್ತು ಬೇಕು? ಜೀವನದ ಎಳೆಗಳೇ ಕಥೆಯ ಬೆನ್ನೆಲುಬಾದರೆ ಕಥೆಯ ಕೊನೆಯಲ್ಲಿ ಆಶಾಕಿರಣವೇಕಿರಬಾರದು ?" ಎಂಬ ಸಾಲುಗಳು 'ಬಾಬಕ್ಕ' ಕಥೆಯಲ್ಲಿವೆ. 


ಈಕೆ ಕಥೆಯ ಅಂತ್ಯಗಳೆಲ್ಲವೂ ಆಶಾಕಿರಣದಿಂದ ಕೂಡಿರುವುದು ಇಷ್ಟವಾಯಿತು. ಒಳ್ಳೆಯ ಕಥಾ ಸಂಕಲನದ ಚಂದದ ಓದು. 


~ವಿಭಾ ವಿಶ್ವನಾಥ್

ನಂದಾದೀಪ ನಗುತ್ತಿತ್ತು (ಪುಸ್ತಕ ಯಾನ - 472)


ಪುಸ್ತಕದ ಶೀರ್ಷಿಕೆ : ನಂದಾದೀಪ ನಗುತ್ತಿತ್ತು

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಇಂದಿರಾ ಪ್ರಕಾಶನ

ಪ್ರಥಮ ಮುದ್ರಣ : 2004

ದ್ವಿತೀಯ ಮುದ್ರಣ : 2024 (ನನ್ನ ಓದಿಗೆ ಸಿಕ್ಕಿದ್ದು)


ಎಂದಿಗೂ ನಮ್ಮ ಬದುಕಿನ ರೀತಿ ನಮ್ಮದು. ಅದರಲ್ಲಿ ಸುಖ-ದುಃಖ, ನೋವು-ನಲಿವು ಏನೇ ಇದ್ದರೂ ಅದನ್ನು ನಾವೇ ಅನುಭವಿಸಬೇಕು. ಅದರ ಬದಲಾಗಿ ಬೇರೆಯವರ ಮೇಲೆ ಪೈಪೋಟಿಗಿಳಿದರೆ ನಮ್ಮ ಬದುಕಿನ ಸುಖ ಯಾವುದಕ್ಕೂ ಸಾಲದು ಎಂಬಂತೆ ಹಪಾಹಪಿಯಿಂದ ಅವರಂತಾಗಬೇಕು ಎನ್ನುವ ಓಟದಲ್ಲಿ ಇರುವುದನ್ನು ಕಳೆದುಕೊಳ್ಳುತ್ತಾ.. ನೆಮ್ಮದಿಯಿಲ್ಲದ ಬದುಕಿನತ್ತ ಸಾಗುತ್ತೇವೆ. ಇಲ್ಲಿ ಎರಡು ಸುಂದರ ಸಂಸಾರಗಳು ಹೀಗೆ ಪೈಪೋಟಿಗಿಳಿದು ತಮ್ಮ ರಕ್ತಸಂಬಂಧವನ್ನು ಮರೆತು ಒಬ್ಬರ ನಾಶಕ್ಕೆ ಒಬ್ಬರು ಪಣತೊಟ್ಟು ನಿಂತಂತೆ ಪೈಪೋಟಿಗಿಳಿದಾಗ ಮಕ್ಕಳ ಬದುಕು ಏನಾಗುತ್ತದೆ ಎಂಬ ಚಿತ್ರಣವಿದೆ. 


ಗೋಪಿನಾಥ ಹಾಗೂ ಶ್ರೀಪತಿ ಅಣ್ಣ-ತಮ್ಮಂದಿರು. ಗೋಪಿನಾಥ ಹಾಗೂ ಸರಸ್ವತಿಯ ಮಗಳು ಪುಣ್ಯಶ್ರೀ. ಶ್ರೀಪತಿ ಹಾಗೂ ಪಾರ್ವತಿಯ ಮಗಳು ಚಿನ್ಮಯಿ. ಇಬ್ಬರು ಮಕ್ಕಳು ಒಂದೇ ಓರಿಗೆಯವರು. 


ಶ್ರೀಪತಿ ಲೆಕ್ಚರರ್. ಪಾಠ ಹೇಳುವ ರೀತಿ ಚೆನ್ನಾಗಿತ್ತು. ಮಗಳು ಚಿನ್ಮಯಿ ಸಹ ಎರಡು ವರ್ಷದಿಂದ ಟ್ಯೂಷನ್ ಹೇಳಿ ಸಂಪಾದಿಸುತ್ತಿದ್ದಳು. ರೂಪವತಿ ಸಹ. ತಂದೆ-ತಾಯಿಗೆ ಹೆಮ್ಮೆಯ ಮಗಳು. 17 ವರ್ಷಗಳ ಹಿಂದೆ ಭೋಗ್ಯಕ್ಕೆ ಹಾಕಿಸಿಕೊಂಡ ಮನೆಯಲ್ಲಿಯೇ ಅವರ ಬದುಕು ನೆಮ್ಮದಿಯಾಗಿಯೇ ಸಾಗುತ್ತಿತ್ತು. ಒಂದು ಪತ್ರ ಬರುವವರೆಗೂ...


ಸರಸ್ವತಿಯ ಮನೆಯಲ್ಲಿ ಶ್ರೀಮಂತಿಕೆಯಿತ್ತು. ತಂದೆ-ತಾಯಿಯಿಂದ ಬಂದ ಆಸ್ತಿಯಿಂದಾಗಿ ಅದರೊಡನೆ ಅಹಂಕಾರವೂ ಬೆರೆತಿತ್ತು. ಮಗಳು ಪುಣ್ಯಶ್ರೀ ಸಹ ಅಂತಹದ್ದೇ ನಡವಳಿಕೆಯನ್ನು ರೂಪಿಸಿಕೊಂಡಿದ್ದಳು. ಅಷ್ಟೇನೂ ರೂಪವತಿಯೂ ಅಲ್ಲದ, ನವನವೀನ ರೀತಿಯ ಹುಡುಗಿ ಅಲಂಕಾರಕ್ಕೆ ಅಪ್ಪಿಕೊಂಡಿದ್ದವಳು.


ಶ್ರೀಪತಿ ಗೋಪಿನಾಥರ ಮೂರು ಅಕ್ಕಂದಿರಲ್ಲಿ ಮೂರನೇ ಅಕ್ಕನಿಗೆ ಮೂವರು ಗಂಡು ಮಕ್ಕಳು. ಅದರಲ್ಲಿ ಮೊದಲನೆಯ ಅವನು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಶ್ರೀಕಾಂತ್. ಪಾರ್ವತಿಗೆ ಆತನಿಗೆ ತನ್ನ ಮಗಳನ್ನು ಕೊಡುವ ಆಸೆ. ಆದರೆ, ಕಾವೇರಮ್ಮನಿಗೆ ಪುಣ್ಯಶ್ರೀಯನ್ನು ತಂದುಕೊಳ್ಳುವ ಆಸೆ. ಹಾಗೆಂದು ಬಾಯಿಬಿಟ್ಟು ಹೇಳದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದರು. 


ಪುಣ್ಯಶ್ರೀ (ಪುನ್ನಿ) ಹಾಗೂ ಶ್ರೀಕಾಂತನ ಲಗ್ನ ಪತ್ರಿಕೆಗೆ ಬರಬೇಕೆಂದು.. ಜೊತೆಗೆ ಚಿನ್ನಿಯನ್ನು ಕಾವೇರಮ್ಮನ ಎರಡನೇ ಮಗನಿಗೆ ಗಂಟು ಹಾಕಲು ಮಾಡಿದ ಪ್ರಸ್ತಾಪವನ್ನು ನೋಡಿ ಪಾರ್ವತಿ ಕುದಿದು ಹೋದಳು. ತನ್ನ ನಾಲ್ಕನೇ ತಂಗಿ ಸಾವಿತ್ರಿ ಮನೆಗೆ ಹೋಗಿ ಬರುವಾಗ ಡಾಕ್ಟರ್ ವರನ ಪ್ರಸ್ತಾಪ ತಂದಿದ್ದಳು. 


ದೊಡ್ಡಮ್ಮನ ಮೇಲಿನ ಹಠಕ್ಕೆ ಹಿಂದೆ-ಮುಂದೆ ವಿಚಾರಿಸದೆ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡವೆಂದು ಚಿನ್ನಿ ಹೇಳಿದರೂ.. ಡಾಕ್ಟರ್ ವರನ ರೂಪ, ಅಂತಸ್ತು ದಂಪತಿಗಳಿಬ್ಬರನ್ನೂ ಕನಸು ಕಾಣುವಂತೆ ಮಾಡಿತ್ತು. ಹತ್ತು ವರ್ಷಗಳ ಅಂತರವಿದ್ದರೂ ಆತನ ಜೊತೆ ಮಾತನಾಡಿದ ಚಿನ್ಮಯಿ ಡಾಕ್ಟರ್ ಭಾಸ್ಕರ್ ಜೊತೆಗೆ ಮಾತನಾಡಿದ ನಂತರ ಪರಸ್ಪರ ಒಪ್ಪಿ ವಿಜೃಂಭಣೆಯಿಂದ ಲಗ್ನಪತ್ರಿಕೆಯೂ ಆಯಿತು. 


ಕಾವೇರಮ್ಮ ಹಾಗೂ ಸರಸ್ವತಿ ಇಬ್ಬರೂ ಪಾರ್ವತಿಯನ್ನು ತಾವು ಸೋಲಿಸಿದ್ದೇವೆ ಎನ್ನುವ ಅಹಂಕಾರದಲ್ಲಿರುವಾಗ ಪಾರ್ವತಿ ಬಂದಿದ್ದಾಯ್ತು. ಆದರೆ, ಅಷ್ಟರಲ್ಲಾಗಲಿ ಶ್ರೀಕಾಂತ್ ಹಾಗೂ ಪುಣ್ಯಶ್ರೀಯರಲ್ಲಿ ಮನಸ್ತಾಪವಾಗಿತ್ತು. ಅವರಿರಲು ಬಾಡಿಗೆ ಮನೆಯ ಅಡ್ವಾನ್ಸ್, ಕಂಪನಿ ಹೊಡಲು ಕೊಟ್ಟ 20 ಲಕ್ಷ ಹಣ, ಅತ್ತೆಗೆ ಹಣ ಕೊಡುತ್ತಿದ್ದ ವಿಚಾರ ತಿಳಿದು ಪುಣ್ಯಶ್ರೀ ತಗ್ಗಿ-ಬಗ್ಗಿ ನಡೆಯಲು ಸಿದ್ಧವಿರಲಿಲ್ಲ. ಅದರ ಜೊತೆಗೆ ಪಾರ್ವತಿ ತನ್ನ ಮಗಳ, ಡಾಕ್ಟರ್ ಅಳಿಯನ ಲಗ್ನ ಪತ್ರಿಕೆಯ ವಿಡಿಯೋ ತೋರಿಸಿದ್ದು ಮತ್ತಷ್ಟು ಮನಸ್ಸು ಕೆರಳಿಸಿತು. ಅಲ್ಲಿ ಸಂತಸ ಪಟ್ಟವರು ಗೋಪಿನಾಥ್ ಒಬ್ಬರೇ.. ಪಾರ್ವತಿ ಹೇಳಿದ ಯಾವುದೋ ಮಾತಿಗೆ ಕೆರಳಿದ ಪುಣ್ಯಶ್ರೀ ಶ್ರೀಕಾಂತನ ಮೇಲೆ ಸಾಕಷ್ಟು ಕೋಪ ತೋರಿದಳು. ಅಲ್ಲಿಗೆ ಅವನ ಅವಳ ಲಗ್ನಪತ್ರಿಕೆ ಮುರಿದುಬಿದ್ದು.. ಅವನ ತಮ್ಮ ಟೀಚರ್ ಆಗಿದ್ದ, ಕಪ್ಪಗಿದ್ದ, ಕುಳ್ಳ ಶ್ರೀವತ್ಸನ ಜೊತೆಗೆ ಆಯಿತು. ಅದಕ್ಕೆ ಕಾರಣವೂ ಇತ್ತು. ಸರಸ್ವತಿಗೆ ತನ್ನ ಮಗಳ ಮೇಲಿದ್ದ ಅಪನಂಬಿಕೆ. ಹೀಗಾಗಿ ತರಾತುರಿಯಲ್ಲಿಯೇ ಲಗ್ನಪತ್ರಿಕೆ ನಿಶ್ಚಯವಾದರೂ.. ಮತ್ತೆ ಪುಣ್ಯಶ್ರೀ ಅವನಿಗೆ ಮನಸೋಲದೆ ಶ್ರೀಕಾಂತನಿಗೆ ಪತ್ರ ಬರೆದರೂ ಸಂಧಾನ ಫಲಿಸಲಿಲ್ಲ. 


ಈ ನಡುವೆ ಪುಣ್ಯಶ್ರೀ ತನ್ನ ದುರ್ಬುದ್ಧಿಯಿಂದ ಚಿನ್ನಿಯ ಮದುವೆ ಕೆಡಿಸಲು ಪ್ರಯತ್ನ ಮಾಡುತ್ತಾಳೆ. ಆ ಪ್ರಯತ್ನವೇನು..? ಅದು ಫಲ ಕೊಟ್ಟಿತೇ..? 


ಶ್ರೀಕಾಂತ್ ತಾನು ಮನಸಾರೆ ಪ್ರೀತಿಸಿರುವ ತನ್ನ ಗೆಳತಿ ಮನೋಹರಿಯನ್ನು ವಿವಾಹವಾಗಿರುವುದಾಗಿ ಪತ್ರ ಬರೆಯುತ್ತಾನೆ. 


ಚಿನ್ನಿ ಡಾಕ್ಟರ್ ಇವರನೊಂದಿಗೆ ಮದುವೆ ತಪ್ಪಿ ಹೋಯಿತೆಂದು, ಬೇರೆಯವನನ್ನು ವಿವಾಹವಾಗುತ್ತಿರುವ ವಿಚಾರ ಕೇಳಿ ಸಂತಸ ಪಟ್ಟ ಪುಣ್ಯಶ್ರೀ ಶ್ರೀವತ್ಸನನ್ನೇ ಮದುವೆಯಾಗುವುದಾಗಿ ಒಪ್ಪುತ್ತಾಳೆ. ಆದರೆ, ಅದು ಸಂತಸದಿಂದಲ್ಲ. 


ಪುಣ್ಯಶ್ರೀ ಹಾಗೂ ಶ್ರೀವತ್ಸರ ವಿವಾಹ ನಡೆದ ನಂತರ ಚಿನ್ನಿಯ ವಿವಾಹ ಮೊದಲು ನಿಶ್ಚಯವಾಗಿದ್ದ ಡಾಕ್ಟರ್ ವರನೊಂದಿಗೆ ನಡೆಯುವುದು ಪುನ್ನಿಗೆ ಆಘಾತ ತರುತ್ತದೆ. ಪುನ್ನಿ ಹಾಗೂ ಶ್ರೀವತ್ಸನ ವಿವಾಹ ಮುರಿದು ಬಿದ್ದದ್ದೇಕೆ..? 


ಇಲ್ಲಿಂದ ಕಾದಂಬರಿಯ ಮತ್ತೊಂದು ರೂಪ ಕಣ್ಣೆದುರಿಗೆ ಬರುತ್ತದೆ. 


ಮನುಷ್ಯನ ಗುಣ-ಸ್ವಭಾವಗಳು ಯಾವಾಗ ಬೇಕಾದರೂ ಬದಲಾಗಬಹುದು. ಹಾಗೆ ಬದಲಾದ ಪಾರ್ವತಿ ಹಾಗೂ ಪುಣ್ಯಶ್ರೀಯರನ್ನು ಕಾಣಬಹುದು. 


ಪುಣ್ಯಶ್ರೀ ಓದಿನಲ್ಲಿ ಆಸಕ್ತಿಯೇ ಇರದೆ ಸುಖದ ಜೀವನ ನಡೆಸುತ್ತಿದ್ದವಳು. ಬದುಕಿನಲ್ಲಿ ನಡೆದ ದುರಂತದಿಂದ ಮತ್ತೆ ಓದಿನತ್ತ ಗಮನಹರಿಸುತ್ತಾಳೆ. ಛಲದಿಂದ ಓದುತ್ತಾಳೆ. ಎಷ್ಟೆಂದರೆ, ಅವಳು ಡಾಕ್ಟರ್ ಆಗಿ ಹೆಸರುವಾಸಿಯಾಗುತ್ತಾಳೆ. ಚಿನ್ನಿ ಡಾಕ್ಟರ್ ವರನನ್ನು ವಿವಾಹವಾದರೆ, ಪುನ್ನಿ ಸ್ವತಃ ಡಾಕ್ಟರ್ ಆಗುತ್ತಾಳೆ. 


ಪ್ರತಿಯೊಂದು ವಿಚಾರದಲ್ಲಿಯೂ ತಮ್ಮ, ತಮ್ಮನ ಹೆಂಡತಿಯನ್ನು ಬಿಟ್ಟು ಕೊಡದಿದ್ದ ಗೋಪಿನಾಥ್ ಸಹ ಪಾರ್ವತಿಯ ಮೇಲೆ ಸಿಡಿಮಿಡಿಯಾಗುವುದೇಕೆ..? 


ಶ್ರೀಕಾಂತ ಹಾಗೂ ಆತನ ಆತನ ತಾಯಿ ಹೆಣೆದ ಜಾಲಕ್ಕೆ ಬಲಿಯಾಗದೆ ಪುಣ್ಯಶ್ರೀ ತಪ್ಪಿಸಿಕೊಂಡ ಬಗೆ ಹೇಗೆ..? ಶ್ರೀಕಾಂತನ ವಿವಾಹದ ಬದುಕು ಹೇಗಿತ್ತು..?


ಡಾಕ್ಟರ್ ಆದ ಪುಣ್ಯಶ್ರೀಯ ವಿವಾಹದ ಕುರಿತು, ಅದರಲ್ಲಿಯೂ ಎರಡನೆಯ ವಿವಾಹದ ಕುರಿತು ಪ್ರಸ್ತಾಪಿಸಿದವರು ಯಾರೆಲ್ಲ..? ಅವಳಿಗೆ ಯಾರೆಲ್ಲ ವರನನ್ನು ತೋರುತ್ತಾರೆ ಹಾಗೂ ಅವರು ಹೇಗಿದ್ದರು..?


ಕೆಲವೊಮ್ಮೆ ಹರೆಯದ ಎಡವಟ್ಟುಗಳಿಂದ ಅಥವಾ ಬುದ್ಧಿ ಸಾಲದ ವಯಸ್ಸಿನಿಂದ ಇಲ್ಲವೇ ಮನೆಯಲ್ಲಿ ತಿದ್ದಿ ಬುದ್ದಿ ಹೇಳದ ತಂದೆ-ತಾಯಿಯಿಂದ, ಅಹಂಕಾರದಿಂದ ಹೀಗೆ ಯಾವುದೋ ಒಂದು ಪ್ರಭಾವದಿಂದ ಹೇಗೋ ಇದ್ದರೂ.. ತನ್ನನ್ನು ತಿದ್ದಿಕೊಂಡು ಬದುಕಿದ ಪುಣ್ಯಶ್ರೀ ಮಾದರಿಯಾಗುತ್ತಾಳೆ. 


ಕಾದಂಬರಿಯ ಮೊದಲಲ್ಲಿ ಇಷ್ಟವಾಗಿದ್ದ ಚಿನ್ನಿ ಕಾದಂಬರಿಯ ಕೊನೆಯಲ್ಲಿ ಹೇಗನಿಸುತ್ತಾಳೆ..?


ಒಳ್ಳೆಯ ಕೆಲಸ ಮಾಡುತ್ತಿದ್ದರೆ ಅದರ ಪ್ರಭಾವವು ಒಳ್ಳೆಯದೇ ಆಗಿರುತ್ತದೆ ಎನ್ನುವಂತೆ ಪುಣ್ಯಶ್ರೀ ಬದುಕಲ್ಲಿ ಯಾವ ವ್ಯಕ್ತಿಯಿಂದ ಒಳ್ಳೆಯ ಹಾದಿ ತೆರೆಯುತ್ತದೆ..?


ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ನಂದಾದೀಪ ನಗುತ್ತಿತ್ತು' ಕಾದಂಬರಿಯನ್ನು. 


ಒಬ್ಬರಿಗೆ ಬದುಕಿನ ಒಂದೊಂದು ಹಂತದಲ್ಲಿ ಜ್ಞಾನೋದಯವಾಗುತ್ತದೆ. ಒಬ್ಬರ ಅನುಭವ ಮತ್ತೊಬ್ಬರದಲ್ಲ. ಅಂತೆಯೇ ಒಬ್ಬರ ನಾಶ ಮತ್ತೊಬ್ಬರ ಸಂತೋಷವಾಗಲಾರದು. "ಒಳಿತಿಗೆ ಜಯ"ವಿದೆ ಎನ್ನುವ ರಾಧಾದೇವಿಯವರ ಈ ಕಾದಂಬರಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.


~ವಿಭಾ ವಿಶ್ವನಾಥ್

ಶ್ರೀನಿಧಿಪುರದ ವಿಸ್ಮಿತ (ಪುಸ್ತಕ ಯಾನ - 471)


ಪುಸ್ತಕದ ಶೀರ್ಷಿಕೆ : ಶ್ರೀನಿಧಿಪುರದ ವಿಸ್ಮಿತ

ಲೇಖಕರು : ಸಾಯಿಸುತೆ

ಪ್ರಕಾಶಕರು : ಸುಧಾ ಎಂಟರ್ ಪ್ರೈಸಸ್

ಪ್ರಥಮ ಮುದ್ರಣ : 2025

ಪುಟಗಳು : 176

ಬೆಲೆ : 220 ರೂ.


ಅಮ್ಮ ವಸುಧಾಳ ತವರನ್ನು ಹುಡುಕಿಕೊಂಡು ಶ್ರೀನಿಧಿಪುರಕ್ಕೆ ಬರುವ ವಿಸ್ಮಿತ ಈ ಕಥೆಯ ನಾಯಕಿ. 


ಶ್ರೀನಿಧಿಪುರ ಎನ್ನುವ ಚಂದದ ಊರು ಪುರಾತನತೆಯಿಂದ ಹಾಗೂ ಭೌಗೋಳಿಕವಾಗಿ ತನ್ನದೇ ಅಸ್ತಿತ್ವ ಪಡೆದಿತ್ತು. ಅಂತಹ ಊರಿಗೆ ವಿದೇಶದಲ್ಲಿ ಹುಟ್ಟಿ ಬೆಳೆದ ವಿಸ್ಮಿತ ಮೊದಲ ಬಾರಿಗೆ ಕಾಲಿಡುತ್ತಿದ್ದಳು. ಆಕೆ ಬಂದದ್ದು ಪದ್ಮನಾಭಯ್ಯನವರ ಸಲುವಾಗಿ. ಆದರೆ, ಉಳಿದುಕೊಂಡದ್ದು ಪಯಸ್ವಿನಿ ಹೋಟೆಲ್ ನಲ್ಲಿ. 


ಮೊದಲಿಗೆ ಬಂದದ್ದು ಶ್ರೀನಿಧಿಪುರದ ಶ್ರೀನಿಧಿಯ ದೇವಾಲಯಕ್ಕೆ. ಭವ್ಯವಾದ ಶ್ರೀನಿಧಿಯ ಪರಿಚಯ ಆತನ ದಿವ್ಯ ಸಾನಿಧ್ಯದಲ್ಲಿ ಹಾಗೂ ಅಚ್ಚಯ್ಯ ಜೋಯಿಸರಿಂದ ತಿಳಿಯುತ್ತದೆ. ಆದರೆ, ತಾನು ಶ್ರೀನಿಧಿಪುರಕ್ಕೆ ಬಂದದ್ದೇಕೆ ಎನ್ನುವ ವಿಚಾರವನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ಗೂಗಲ್ ನಲ್ಲಿ ಸರ್ಚ್ ಮಾಡಿ ಹಾಗೂ ಕೆಲವರ ಬಾಯಿಯಿಂದ ತಿಳಿದ ವಿಚಾರಕ್ಕೆ ಇನ್ನಷ್ಟು ವಿಚಾರವನ್ನು ಇಲ್ಲಿ ಸಂಗ್ರಹಿಸಿ ಪುಸ್ತಕ ಬರೆಯಬೇಕೆನಿಸಿದೆ ಎಂದು ತನ್ನ ಬರುವಿಕೆಯ ಕಾರಣ ಕೊಟ್ಟಿದ್ದಳು. 


ಮೊದಲಿಗೆ ಸಿಕ್ಕಿದ್ದು ಅಚ್ಚಯ್ಯ ಜೋಯಿಸರು ಹಾಗೂ ಪದ್ದಮ್ಮನವರ ಆತ್ಮೀಯವಾದ ಆಥಿತ್ಯ. ಮುಂದೆ ಸಾಂಬಶಿವಯ್ಯ ಹಾಗೂ ಅವರ ಪತ್ನಿ ಪಾರ್ವತಮ್ಮ ಆಪ್ತರಾಗುತ್ತಾರೆ.


ಒಳ್ಳೆಯ ಎಜುಕೇಶನ್, ವಿವಾಹಕ್ಕೆ ಸಂಬಂಧ ಬೆಳೆಸಲು ಬಹಳ ಸ್ಟೇಟಸ್ ಇರುವ ಫ್ಯಾಮಿಲಿಗಳು ಬರುವ ಸಂದರ್ಭದಲ್ಲಿಯೇ ವಿಸ್ಮಿತ ಅಲ್ಲಿಂದ ಕಾಲು ಕಿತ್ತದ್ದು ಅಲ್ಲಿ ಎಲ್ಲರ ಕಣ್ಣು ಕೆಂಪಾಗಿಸಿತ್ತು. ವಸುಧಾ ತನ್ನ ತಾತ ಅತ್ಯಂತ ನಿಷ್ಟುರ ನುಡಿಗಳಿಂದ ಶ್ರೀನಿಧಿಪುರಕ್ಕೆ ಕಾಲಿಡಬಾರದೆಂದು ಶಪಿಸಿದ್ದನ್ನು ಹೇಳಿದ್ದರು. ವಿಸ್ಮಿತ ಹಿಂತೆಗೆದಿರಲಿಲ್ಲ. ವಸುಧ ಹಾಗೂ ವಿಲಿಯಂ ಇಬ್ಬರೂ ಪ್ರೇಮಿಸಿ ವಿವಾಹವಾಗಿದ್ದರೂ.. ವಿವಾಹಕ್ಕೆ ವಸುಧಳ ಸಂಪ್ರದಾಯಸ್ಥ ಮನೆತನದವರು ಒಪ್ಪಿರಲಿಲ್ಲ. ಇಂದಿಗೂ ವಸುಧಳ ತವರಿನ ಕೊಂಡಿ ಬೆಸೆದಿರಲಿಲ್ಲ. ಇಬ್ಬರು ಮಕ್ಕಳಲ್ಲಿ ಮಗ ವಿನ್ಸೆಂಟ್, ವಿಲಿಯಂ ತಾಯಿಯ ಸುಪರ್ದಿಯಲ್ಲಿ ಬೆಳೆದಿದ್ದು. ವಿಸ್ಮಿತ ಬಹಳ ವಿಭಿನ್ನವಾಗಿ ವಸುಧಾಳ ತೆಕ್ಕೆಯಲ್ಲಿ ಬೆಳೆದಳು. ಅದಕ್ಕೆ ಕಾರಣವೇನು..?


ಪಯಸ್ವಿನಿ ವಿಶ್ವನಾಥರ ಕನಸು. ಶ್ರೀಮಂತ ಮನೆತವನದವರಿಗೆ, ಪ್ರಭಾವಿಗಳಿಗೆ ಅದು ವಾಸ್ತವ್ಯದ ತಾಣ. ವಿದೇಶಿ ಸಂಜಾತೆಯಾಗಿದ್ದರೂ ವಿಸ್ಮಿತ ಅವರನ್ನು ವಿಭಿನ್ನವಾಗಿ ಸೆಳೆದಿದ್ದಳು. ಆಕೆಯ ಹಿನ್ನೆಲೆಯನ್ನು ವಿಚಾರಿಸಿದ್ದರಲ್ಲದೆ ಆಕೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು. 


ವಿಶ್ವನಾಥ್ ಅವರ ಏಕೈಕ ಮಗ ಪ್ರತಾಪ್ ಸ ಓದಿನಲ್ಲಿ ಬುದ್ಧಿವಂತ. ಪೂರ್ಣ ಸ್ವಾತಂತ್ರ್ಯ ನೀಡಿ ಬೆಳೆಸಿದ್ದರು. ಪಯಸ್ವಿನಿಯವರ ಆಕಸ್ಮಿಕ ಮರಣದ ನಂತರ ವಿಶ್ವನಾಥರ ಜಗತ್ತೇ ಅವನಾಗಿದ್ದ. ಹಾಗಾಗಿ ಮಗ ಕೇಳಿದ್ದಕ್ಕೆ ಬೇಡವೆನ್ನುತ್ತಿರಲಿಲ್ಲ. ಗೆಳೆಯರ ದಂಡು ಯಾವಾಗಲೂ ಅವನ ಜೊತೆಗಿರುತ್ತಿತ್ತು. ಮೊದಮೊದಲು ಇದು ದೊಡ್ಡ ಸಮಸ್ಯೆಯಾಗಿ ಕಂಡಿರಲಿಲ್ಲ. ಆದರೆ, ಈಗ ಜವಾಬ್ದಾರಿ ಹೊರಲು ಸಿದ್ಧವಿರದ ಪ್ರತಾಪ್ ಅವರ ಪಾಲಿಗೆ ಪ್ರಶ್ನೆಯಾಗಿದ್ದ. ಜೀವದ ಗೆಳೆಯರಾಗಿದ್ದ ರಾಜಗೋಪಾಲ್ ಅವರ ಸಲಹೆ ಹೆಚ್ಚು ಮನಸ್ಸಿಗೆ ಬಂದಿತ್ತು. ಅದು ಅವನಿಗೆ ವಿವಾಹ ಮಾಡುವುದು. 


ಇವರ ಇಂಡಸ್ಟ್ರಿಗಳ ಹಲವು ಆಯಾಮಗಳನ್ನು ಅರ್ಥ ಮಾಡಿಕೊಂಡಿದ್ದ ಹಾಗೂ ಎಲ್ಲ ರೀತಿಯಲ್ಲೂ ಅಪ್ಡೇಟೆಡ್ ಆಗಿದ್ದ ಕಾಮಿನಿ ಪ್ರತಾಪ್ ನನ್ನು ವಿವಾಹವಾಗಲು ಮುಂದಾದಾಗ ವಿಶ್ವನಾಥರಿಗೆ ಆತಂಕವಾಗಿತ್ತು. ಅದೇಕೆ..? ಆ ಆತಂಕ ಕರಗಿದ್ದು ಪ್ರತಾಪ್ ನಿಂದಲೇ. ಅದು ಹೇಗೆ..? 


ಪ್ರತಾಪ್ ಅವರಂದುಕೊಂಡಷ್ಟು ಮುಗ್ಧನಾಗಿರಲಿಲ್ಲ. ಆದರೆ, ಇನ್ನಷ್ಟು ಅನುಭವ ಬೇಕಿತ್ತು. ಅದಕ್ಕಾಗಿ ರಾಜಗೋಪಾಲ್ ಅವರ ಬಳಿ ಬೇರೆ ಸಲಹೆ ಇತ್ತು. ಆದರೆ, ಇಬ್ಬರೂ ಅದನ್ನು ಒಪ್ಪುತ್ತಾರೋ ಇಲ್ಲವೋ ಎಂಬ ಅನುಮಾನವೂ ಇತ್ತು


ಪಾರ್ವತಮ್ಮನವರಿಗೆ ವಿಸ್ಮಿತಳ ಬಳಿ ಮಾತನಾಡಲು ಕೇಳಲು ಸಾಕಷ್ಟು ವಿಚಾರಗಳಿದ್ದವು. ಅಮೆರಿಕದಲ್ಲಿರುವ ತನ್ನ ಮಗ ವೇಣುವಿಗೆ ಹೆಣ್ಣು ಹುಡುಕುವ, ಅವನ ವಿವಾಹ ಮಾಡುವ ಕನಸಿಗೆ ಈಗ ರೆಕ್ಕೆ ಬಂದಿತ್ತು. ಅದಕ್ಕಾಗಿ ವಿಸ್ಮಿತಳನ್ನು ಅವಲಂಬಿಸಿದರು. ಸತ್ಯ ಗೊತ್ತಿದ್ದ ಸಾಂಬಶಿವಯ್ಯನವರು ಇದಕ್ಕೆ ಹೆಚ್ಚು ಆಸಕ್ತಿ ತೋರಲಿಲ್ಲ. ಒಂದು ಸಮಯದಲ್ಲಿ ವಿಸ್ಮಿತಳಿಗೂ ನಿಜ ಗೊತ್ತಾಗಿತ್ತಾದರೂ ಪಾರ್ವತಮ್ಮನವರಿಗೆ ಹೇಳುವಂತಿರಲಿಲ್ಲ. ಅವರೆಂದರೆ ಅಪರಿಮಿತ ಪ್ರೀತಿ ಹಾಗೂ ಗೌರವ. ಇಲ್ಲಿ ಸಾಂಬಶಿವಯ್ಯನವರ ಉನ್ನತ ವ್ಯಕ್ತಿತ್ವ ಸೆಳೆಯುತ್ತದೆ.


ಸಾಂಬಶಿವಯ್ಯನವರ ಸಲಹೆಯಂತೆ ಸಂಭಾವಿತ ಡ್ರೈವರ್ ನ ಅಗತ್ಯ ಅವಳಿಗೂ ಕಂಡಿತ್ತು. ಅವರ ಗಾಬರಿ, ಕಾಳಜಿ ಅರ್ಥವಾಗಿತ್ತು 


ಶ್ರೀನಿಧಿಪುರಕ್ಕೆ ಬಂದಿದ್ದ ವಿಸ್ಮಿತಾಳಿಗೆ ವಸುಧಳ ಹಳೆಯ ಮನೆಯ ಸಂಪೂರ್ಣ ಪರಿಚಯವಾಗಿತ್ತು. ಅದು ಯಾವಾಗ..? ಅದೂ ಮನೆಯೊಡೆಯರ ಅನುಪಸ್ಥಿತಿಯಲ್ಲಿ ಅದು ಹೇಗೆ..?


ರಾಜಗೋಪಾಲ್ ಅವರು ಸಾಮಾನ್ಯ ಮನುಷ್ಯರಂತೆ ಕಂಡರೂ.. ಅಂತಹವರು ಲಕ್ಷಕೊಬ್ಬರು. ಅಂತಹ ಶ್ರೀಮಂತ ಗೆಳೆತನವನ್ನು ಎಂದಿಗೂ ದುರುಪಯೋಗ ಪಡಿಸಿಕೊಂಡವರಲ್ಲ. ಸಹಾಯಹಸ್ತವನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸುತ್ತಿದ್ದರು. ಅಪ್ಪಟ ಸ್ನೇಹವಷ್ಟೇ ಇಬ್ಬರಲ್ಲಿಯೂ.. ಅಂತಹ ರಾಜಗೋಪಾಲ್ ಪ್ರತಾಪ್ ನಿಗೆ ನಿಶ್ಚಯಿಸಿದ ಕೆಲಸ ಶ್ರೀನಿಧಿಪುರದ ಅಧ್ಯಯನಕ್ಕೆ ಬಂದಿರುವ ವಿಸ್ಮಿತಳಿಗೆ ಬೇಕಾಗಿದ್ದ ಡ್ರೈವರ್ ಕಮ್ ಸೆಕ್ಯೂರಿಟಿಯನ್ನು. 


ಪಯಸ್ವಿನಿ ಎಂಬ ಪಂಚತಾರಾ ಹೋಟೆಲ್ ಓನರ್ ಮಗ, ಹಲವು ಉದ್ಯಮಗಳ ಪಾರ್ಟ್ನರ್ ನ ಮಗ ಅದರ ಭಾವಿ  ಮಾಲೀಕ ಡ್ರೈವರ್ ಆಗಲು ಒಪ್ಪಿದ್ದು ಹೇಗೆ..? 


ಆತ ಪಯಸ್ವಿನಿಯ ಭಾವಿ ಯಜಮಾನ ಎಂಬುದನ್ನು ತಿಳಿಯದಂತೆ ನೋಡಿಕೊಳ್ಳುವುದು ಹೋಟೆಲ್ ಮ್ಯಾನೇಜ್ಮೆಂಟ್ ನ ಅನಿವಾರ್ಯವೂ ಆಗಿತ್ತು. ವಿಸ್ಮಿತಾಳ ಡ್ರೈವರ್ ಆಗಿದ್ದ ವಿಶ್ವನಾಥನ ನಂಬಿಕಸ್ತ ಡ್ರೈವರ್ ರಾಜೇಂದ್ರನ್ ಬದಲಾಗಿ ಪ್ರತಾಪ್ ಬಂದಿದ್ದ. 


ವಸುಧಾರ ತಂದೆ ಪದ್ಮನಾಭನಯ್ಯನವರ ತಂದೆ ಅನಂತರಾಮಯ್ಯನವರು. ಅವರು ಅವರ ಕೊನೆಯ ದಿನಗಳಲ್ಲಿ ವಸುಧಾಳನ್ನು ಕ್ಷಮಿಸಿದ್ದರೇ.? ಈಗ ವಸುಧಾಳ ತಂದೆ-ತಾಯಿ ಅವಳ ಕುರಿತಾಗಿ ಯಾವ ಮನಸ್ಥಿತಿಯಲ್ಲಿದ್ದರು..?


ವಸುಧಾಳ ತಂದೆಯ ತಾಯಿ ಫಿಲೋಮಿನಾ ಮಾತು ಆ ಫ್ಯಾಮಿಲಿಗೆ ಶಾಸನದಂತೆ. ಅದನ್ನು ದಾಟಿದವರು ಯಾರೂ ಇರಲಿಲ್ಲ. ಈಗ ಅದನ್ನು ವಿಸ್ಮಿತ ದಾಟಿದ್ದರ ಪರಿಣಾಮವಾಗಿ ಮೊದಲಿಗೆ ಅವಳನ್ನು ಕರೆಸಿಕೊಳ್ಳುವ ಪ್ರಯತ್ನಗಳು ನಿರಂತರವಾಗಿ ನಡೆದರೂ ಬಗ್ಗದಿದ್ದಾಗ ಏನಾಯ್ತು ..? ಕೊನೆಯ ಪ್ರಯತ್ನವೆಂಬಂತೆ ಮೈಕಲ್ ಅವಳ ಮೇಲೆ ಅಧಿಕಾರ ಸ್ಥಾಪಿಸಲು ಹೊರಟಾಗ, ಮೈಕಲ್ ಸಂಬಂಧವನ್ನು ವಿಸ್ಮಿತ ಒಪ್ಪುತ್ತಾಳೆಯೇ ..? ತನ್ನ ತಂದೆಯ ಕಡೆಯಿಂದ ಬರುತ್ತಿದ್ದ ಎಲ್ಲಾ ಹಣದ ಮೂಲವೂ ನಿಂತಾಗ ವಿಸ್ಮಿತ ವಾಪಸ್ ಹೋಗುತ್ತಾಳೆಯೇ ..?


ವಿಸ್ಮಿತಾಳ ಕಥೆಯಲ್ಲಿ ಪೆರುಮಾಳ್ ಗೆ ಜಾಗ ಸಿಕ್ಕಿತೇ..?


ವಿಸ್ಮಿತಾಳ ಡ್ರೈವರ್ ಆಗಿ ನೇಮಕವಾಗಿದ್ದ ಪ್ರತಾಪ್ ತನ್ನ ಪ್ರತಿ ನಡವಳಿಕೆಯನ್ನು ಎಚ್ಚರದಿಂದ ನಿಭಾಯಿಸಬೇಕಿತ್ತು . ವಿಸ್ಮಿತ ಎಂದಿಗೂ ಆತನಿಗೆ ಅಗೌರವದಿಂದ ನಡೆಸಿಕೊಳ್ಳಲಿಲ್ಲ. ಅವಳ ಸ್ವಭಾವ ಯಾರನ್ನೂ ಅಗೌರವದಿಂದ ನಡೆಸಿಕೊಳ್ಳುವಂತೆಯೇ ಇರಲಿಲ್ಲ. ದಿನೇದಿನೇ ಅವಳ ಕೆಲಸದ ಹಾಗೂ ಅವಳ ನಡೆಯ ಕುರಿತಾಗಿ ತಿಳಿದುಕೊಳ್ಳುತ್ತಾ.. ಗಮನಿಸುತ್ತಾ ಇದ್ದ ಪ್ರತಾಪನ ವರ್ತನೆಯಲ್ಲಿ ಅವನಿಗೇ ಅರಿವಾಗದಂತೆ ಬದಲಾದ ಎಷ್ಟೋ ವಿಷಯಗಳನ್ನು ಕಾಣಬಹುದು.


ಪಯಸ್ವಿನಿಯ ಭವಿಷ್ಯ ಭದ್ರವಾದ ದಿನಗಳು ಓದಿಗೆ ಆಪ್ತತೆಯನ್ನು ನೀಡುತ್ತವೆ.


ಸಂಬಂಧಗಳ ಸ್ಪರ್ಶದಿಂದ ಬೇರೆಯದ್ದೇ ಜಗತ್ತು ಕಂಡವರು ಯಾರು ಯಾರು..?


ವಿಸ್ಮಿತ ಬರೆದ ಶ್ರೀನಿಧಿಪುರದ ವಿಸ್ಮಿತ ಕಾದಂಬರಿಯಲ್ಲಿ ಯಾರು ಯಾರ ಪಾತ್ರ ಹೇಗಿತ್ತು..? ಅದಕ್ಕೆ ಮುನ್ನುಡಿ ಬರೆದವರು ಯಾರು..? ವಿಸ್ಮಿತಾಳ ಪ್ರಯತ್ನ ಎಷ್ಟು ಫಲ ಕೊಟ್ಟಿತು..?


ಮಾನವೀಯತೆಯ ಸ್ಪರ್ಶದ ಜೊತೆಗೆ ನೈತಿಕ ಸಂಸ್ಕಾರಗಳ ಬದುಕನ್ನು ಇಲ್ಲಿ ಕಾಣಬಹುದಾಗಿದೆ. ಸಂಸ್ಕೃತಿ, ಪರಂಪರೆ, ದೈವಿಕತೆ, ಪರಸ್ಪರ ಗೌರವ ಒಬ್ಬರಿಗಿಂತ ಮತ್ತೊಬ್ಬರ ಉನ್ನತವಾದ ವ್ಯಕ್ತಿತ್ವ.. ಹೀಗೆ ಹಲವಾರು ಚಿತ್ರಣಗಳಿಂದ ಕಾದಂಬರಿ ಸೆಳೆಯುತ್ತದೆ. ಆಹ್ಲಾದಕರ ಹಾಗೂ ಉನ್ನತ ಆಲೋಚನೆಗಳ ಜೊತೆಗೆ ಮನಸ್ಸಿಗೆ ಹತ್ತಿರವಾಗುವ ಓದನ್ನು ನಿರೀಕ್ಷಿಸುತ್ತಿದ್ದರೆ ಇದು ಅದಕ್ಕೆ ಹೇಳಿ ಮಾಡಿಸಿದ ಕಾದಂಬರಿ. ಎಂದಿನಂತೆ ಸಾಯಿಸುತೆ ಅಮ್ಮನವರ ಕಾದಂಬರಿಯ ಓದು ಮುದ ನೀಡಿತು.


~ ವಿಭಾ ವಿಶ್ವನಾಥ್

ಭಾನುವಾರ, ಜುಲೈ 19, 2026

ಅವಳು ಕಳೆದುಕೊಂಡಿದ್ದು ನಂಬಿಕೆಯನ್ನು..!


ಹೀಗೆಯೇ ನನ್ನ ಅವಳ ಮಾತು ಸಾಗುತ್ತಾ ಇತ್ತು. ತಡೆಯಿರದಂತೆ..!


ಮಾತಿನ ನಡುವಲ್ಲಿ "ನಂಬಿಕೆ ಅನ್ನೋದು ಎರಡಲಗಿನ ಕತ್ತಿಯಂತೆ.. ಯಾರನ್ನು ನಂಬುವುದೋ ಯಾರನ್ನು ಬಿಡುವುದೋ ಗೊತ್ತಾಗ್ತಾ ಇಲ್ಲ" ಎಂಬ ವೇದಾಂತದಂತಹ ಮಾತು ಕೇಳಿದಾಗ ಯಾರನ್ನೋ ನಂಬಿ ಹಣ ಕೊಟ್ಟು ಕಳೆದುಕೊಂಡಿರಬಹುದಾ..?! ಎಂದೆನಿಸಿತು. ಅವಳಾಗಿಯೇ ಬಾಯಿ ಬಿಡಲಿ ಎಂದುಕೊಂಡು ಹೆಚ್ಚು ಕೆದಕಲು ಹೋಗಲಿಲ್ಲ.


"ಕೌಸಲ್ಯೆ, ಸುಮಿತ್ರೆ, ಕೈಕೇಯಿಯರಲ್ಲಿ ನಿನಗೆ ತಾಯಿಯಾಗಿ ಯಾರು ಇಷ್ಟ" ಎಂದಳು. "ಯಾಕೆ..?" ಎಂಬ ಮರುಪ್ರಶ್ನೆಗೆ "ಕಾಲ ಕಳೆದಂತೆ ನನ್ನ ಆಯ್ಕೆ ಬದಲಾಗುತ್ತೆ ಬಿಡು"

"ನಿನಗೆ ಯಾರಿಷ್ಟ.. ಯಾಕೆ?" ಎಂದೆ ನಾನು.

"ಈಗ ಯಾರೂ ಇಲ್ವೆ.." ಎಂಬ ಮಾತು ನನ್ನನ್ನು ಅಚ್ಚರಿಗೆ ದೂಡಿತ್ತು. ಅವಳೇ ಮುಂದುವರಿಸಿದಳು..

"ಸ್ವಂತ ಮಗನ ಪರ ವಹಿಸಿ ಧ್ವನಿ ಎತ್ತಲಾಗದ ಕೌಸಲ್ಯೆ, ಧ್ವನಿ ಎತ್ತಲು ಹೊರಟ ಮಗನನ್ನು ಸುಮ್ಮನಾಗಿಸಿ ಅನುಯಾಯಿಯಾಗಿಸಿದ ಸುಮಿತ್ರೆ ಮೊದಲಿಂದೇನೂ ಅಷ್ಟು ಪ್ರಭಾವಿಸಿದ ಪಾತ್ರಗಳಲ್ಲ." ಎಂದು ನಿಲ್ಲಿಸಿದಳು.

"ಕೆಟ್ಟ ಮಗನಿದ್ದರೂ ಕೆಟ್ಟ ತಾಯಿ ಇರಲಾರಳು. ಭರತನಿಗಾಗಿ ಎಲ್ಲವನ್ನೂ ಮಾಡಿದ ಕೈಕೇಯಿ ನಿನಗಿಷ್ಟವೇ ಹಾಗಾದರೆ..!?" ಎಂದು ಕೇಳಿದೆ. 


"ಭರತನ ಹಾಗೆ ರಾಮನನ್ನೂ ಪ್ರೀತಿಸಿದ್ದ, ಮಮತೆಯಿಂದ ಕಂಡಿದ್ದ ತಾಯಿ ರಾಮನಿಗೆ ಎಸಗಿದ್ದ ನಂಬಿಕೆದ್ರೋಹವನ್ನು ಕಂಡ ಮೇಲೂ ಮತ್ತೆ ಕೈಕೇಯಿ ಇಷ್ಟ ಅನ್ನೋಕಾಗುತ್ತದೆಯೇ..?" ಎಂದು ಪ್ರಶ್ನಿಸಿದಳು.


"ರಾಮನೇ ಅವಳನ್ನು ಕ್ಷಮಿಸಲಿಲ್ಲವಾ..?! ಮಂಥರೆ ತಾನೆ ಅವಳ ಮನದಲ್ಲಿ ಕಹಿ ಮೂಡಿಸಿದ್ದು" ಎಂದೆ. 


"ರಾಮ ಕೈಕೇಯಿಯನ್ನು ಕ್ಷಮಿಸಿದ. ಮಣಿಕಂಠ ಪೆರುಮಾದೇವಿಯನ್ನು ಕ್ಷಮಿಸಿದ. ಅದಕ್ಕೆ ಅವರು ದೇವರಾದರು. ಸ್ವಂತ ಮಕ್ಕಳ ಮೇಲಿನ ಮೋಹಕ್ಕೆ ಇದೆಲ್ಲವನ್ನೂ ಮಾಡಿದ್ದಕ್ಕೆ ಬೇರಾರನ್ನೋ ಕಾರಣ ಅನ್ನುವುದು ಹೇಗೆ..?


ಇವತ್ತಿನ ಕಾಲಘಟ್ಟದಲ್ಲಿಯೂ ಇಂತಹವರು ಇರುತ್ತಾರೆ. ನಮ್ಮಂಥ ದಡ್ಡರು ಅಮ್ಮನಷ್ಟೇ ಮಮತೆ ತೋರುತ್ತೇವೆ. ಕೆಲವೊಮ್ಮೆ ಅಮ್ಮನಿಗಿಂತಲೂ ಹೆಚ್ಚೇ ಪ್ರಾಶಸ್ತ್ಯ ನೀಡುತ್ತೇವೆ. ಅಮ್ಮನ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ಅದು ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ ಯಾರೂ ಆಗಿರಬಹುದು. ಅವರ ವಿಶ್ವಾಸದ್ರೋಹ ಅಮ್ಮನ ಸ್ಥಾನವನ್ನಷ್ಟೇ ಕಳೆಯುವುದಿಲ್ಲ. ಮನುಷ್ಯರ ಮೇಲಿನ ನಂಬಿಕೆ, ವಿಶ್ವಾಸ ಎಲ್ಲವನ್ನೂ ಕಸಿದುಕೊಳ್ಳುತ್ತದೆ. ಹಾಗೆಂದು, ವನವಾಸ ಮಾಡೋದಿಲ್ಲ ನಾವು. ಆದರೆ, ಮತ್ತೆಂದೂ ಯಾರನ್ನೂ ನಂಬುವುದಕ್ಕೆ ಹೋಗೋದೇ ಇಲ್ಲ." ಎಂದು ಮನಸ್ಸಿನ ಕಹಿಯನ್ನು ಪ್ರಾಮಾಣಿಕವಾಗಿ ಹೊರ ಹಾಕುತ್ತಿದ್ದಳು.


"ಮತ್ತೆ ನನ್ನನ್ನೂ..?!" ಪ್ರಶ್ನಿಸಿದೆ ನಾನು.


"......" ನಿರುತ್ತರಳಾದ ಅವಳು ತನ್ನ ಮನಸ್ಸಿನ ಘಾಸಿಯನ್ನು ನನ್ನ ಬಳಿಯೂ ಸಂಪೂರ್ಣವಾಗಿ ಬಿಚ್ಚಿಡಲು ಸಿದ್ದಳಿರಲಿಲ್ಲ.


ಬಹುಶಃ, ಅವಳು ಹಣ ಕಳೆದುಕೊಂಡಿದ್ದರೆ ಯಾವುದಾದರೂ ರೂಪದಲ್ಲಿ ಮರಳಿ ಸಿಗುತ್ತಿತ್ತೇನೋ.. ಅವಳು ಕಳೆದುಕೊಂಡಿದ್ದು ನಂಬಿಕೆಯನ್ನು. 

ಕೇವಲ ನಂಬಿಕೆಯನ್ನಲ್ಲ...! ಸಂಬಂಧಗಳ ಅಡಿಪಾಯವೇ ಆಗಿದ್ದ ನಂಬಿಕೆಯನ್ನು. ಮತ್ತೆಂದೂ ಗಟ್ಟಿಯಾಗದ ಬಾಂಧವ್ಯವನ್ನು.


~ವಿಭಾ ವಿಶ್ವನಾಥ್ 

ಹಕ್ಕುದಾರ (ಬೆಳಕಿಂಡಿಯ ಕತೆಗಳು - 58)


 ಕಾರ್ಗತ್ತಲು, ಕುಳಿರ್ಗಾಳಿ ಬೀಸುತ್ತಿದ್ದ ಆ ಅಪರಾತ್ರಿಯಲ್ಲೂ ಕಣ್ಣಲ್ಲಿ ಬೆಳಕು ಮೂಡಿಸಿಕೊಂಡು ಬಾಗಿಲು ತೆಗೆದು ಅಲ್ಲೇ ಕೂರುತ್ತಾಳೆ ಅಮ್ಮ, ಎಂದಿನಂತೆ... ಅಂದು ಹೋದ ಈ ಜೀವದ ಹಕ್ಕುದಾರ ಇಂದಾದರೂ ಮರಳುತ್ತಾನೇನೋ ಎಂಬ ಆಸೆಯಿಂದ.


ಕೆಲಸ ಹುಡುಕುತ್ತೇನೆಂಬ ನೆಪಹೇಳಿ, ಮನೆಯಿಂದ ಇಂತದ್ದೇ ಒಂದು ಮಳೆಗಾಲದ ಕಾರ್ಗತ್ತಲ ರಾತ್ರಿಯಲ್ಲಿ ನಗ-ನಾಣ್ಯಗಳನ್ನೆಲ್ಲಾ ಗಂಟು ಕಟ್ಟಿ ಹೊರಟವ.. ಇಂದಾದರೂ ಬಂದಾನೇನೋ ಎಂಬ ಆಸೆಯಿಂದ ಕುಟುಕು ಜೀವ ಹಿಡಿದು ಕಾಯುತ್ತಿದ್ದಾಳೆ. ಎಷ್ಟಾದರೂ ಮಾತೃಹೃದಯವಲ್ಲವೇ? 

ಮಗ ಅತ್ತ ಐಷಾರಾಮಿ ಜೀವನ ನಡೆಸುತ್ತಾ ಬಂಗಲೆಯಲ್ಲಿ ಹೆಂಡತಿಯೊಡನೆ ಬೆಚ್ಚಗೆ ಹೊದ್ದು ಮಲಗಿದ್ದಾನೆ, ತನಗೊಬ್ಬಳು ತಾಯಿ ಇರುವಳು ಎಂಬುದನ್ನೂ ಮರೆತು..!


ತಾಯಿ ಕಾದಿರುವ ಮನೆಗೆ ಕಾರ್ಗತ್ತಲಿನಲ್ಲಿ ಬಂದನೊಬ್ಬ ಅತಿಥಿ. ಆತ ಆಕೆಯ ಮಗನಲ್ಲ, ಸಾವಿನ ರೂಪದ ವಿಧಿ.ಆತ ಮಗನಷ್ಟು ಕಲ್ಲು ಹೃದಯಿಯಲ್ಲ. ಕಾಯದಿದ್ದರೂ ಸಮಯಕ್ಕೆ ಸರಿಯಾಗಿ ಬರುತ್ತಾನೆ. ಸಿಡಿಲಿನ ರೂಪದಲ್ಲಿ ಬಂದಿಳಿದ ಆತ, ಆಕೆಗೇ ಅರಿವಾಗದಂತೆ ತನ್ನ ನುಣ್ಣನೆ ತೋಳಿನಲ್ಲಿ ಬರಸೆಳೆದು ಮಗುವಿನಂತೆ ಮಲಗಿಸಿಕೊಂಡ. ತಾನೇ ಅವಳ ಹಕ್ಕುದಾರ ಎಂಬಂತೆ...


~ವಿಭಾ ವಿಶ್ವನಾಥ್

ಆಯ್ಕೆ (ಬೆಳಕಿಂಡಿಯ ಕತೆಗಳು - 57)

 


ಮಗುವಿನ ಲಾಲನೆ ಪಾಲನೆ ಅಥವಾ ಕೆಲಸ ಎಂಬ ಎರಡು ಆಯ್ಕೆಗಳಿದ್ದವು ಕಣ್ಣ ಮುಂದೆ. ಬದುಕಿನ ದಾರಿ ಕವಲೊಡೆಯುತ್ತಿದ್ದ ಕ್ಷಣ ಅದು. ಎರಡೂ ಮುಖ್ಯವೇ.. ಈ ಭರಾಟೆಯ ಬೆಂಗಳೂರಿನ ಬದುಕಿನಲ್ಲಿ ಕೆಲಸದವರನ್ನು ನಂಬಿ ಮಗುವನ್ನು ಬಿಟ್ಟು ಹೋಗುವಂತಿರಲಿಲ್ಲ. ಮಗುವಿನ ಭವಿಷ್ಯವನ್ನು ರೂಪಿಸಲು, ಅದಕ್ಕೆ ಬೇಕಾಗಿರುವ ಸವಲತ್ತುಗಳನ್ನು ಕೊಡಲು ಇಬ್ಬರ ಸಂಬಳವೂ ಅಗತ್ಯವಿತ್ತು.


ಆದರೆ, ಈ ಆಯ್ಕೆಯ ತಲೆ ಬಿಸಿ ಇರುವಾಗಲೇ ಕೋವಿಡ್ ಬಂದದ್ದು.. ಪುಣ್ಯಕ್ಕೆ ವರ್ಕ್ ಫ್ರಮ್ ಹೋಮ್ ದೊರೆತು ಮಗು ಹಾಗೂ ಕೆಲಸ ಎರಡನ್ನೂ ನಿಭಾಯಿಸುವ ಹಾಗಾಯಿತು. 

ಬದುಕಲ್ಲಿ ಕೆಲವೊಮ್ಮೆ ಕವಲೊಡೆದ ದಾರಿಯೂ ಮತ್ತೆ ಒಂದಾಗುವ ಆಯ್ಕೆ ಸಿಗುತ್ತದೆ. ಅದೃಷ್ಟವಿದ್ದರೆ..


~ವಿಭಾ ವಿಶ್ವನಾಥ್

ಈ ಶಿಕ್ಷೆ ಸಾಲದು.. (ಬೆಳಕಿಂಡಿಯ ಕತೆಗಳು - 56)

 


ಆತ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವನು ಎಂಬ ಕಾರಣಕ್ಕೆ ಆತನಿಗೆ ಶಿಕ್ಷೆ ಕಡಿಮೆಯಾದರೆ ಆತ ಮಾಡಿದ್ದ ಪಾಪದ ಹೊರೆ ಕಡಿಮೆಯದ್ದಾ..?? ಜೀವಾವಧಿ ಶಿಕ್ಷೆಯಿಂದ, ಮರಣ ದಂಡನೆಯಿಂದ ತಪ್ಪಿಸಬೇಕಾದರೆ ಇದೊಂದು ಕ್ಷುಲ್ಲಕ ಕಾರಣವನ್ನಿಟ್ಟುಕೊಂಡು ತಪ್ಪಿಸುತ್ತಾರಲ್ಲಾ.. ಅವರ ಮನಸ್ಸಿನಲ್ಲಿ ದಯೆ, ಮಾನವೀಯತೆ ಎಲ್ಲವೂ ಸತ್ತು ಯಾವ ಕಾಲವಾಗಿ ಹೋಗಿದೆಯೋ.. ಹದಿನೆಂಟು ವರ್ಷ ಕಳೆದಂತೆ ಆತನಿಗೆ ಜೈಲಿನಿಂದ ಬಿಡುಗಡೆ. ಅಷ್ಟು ದೊಡ್ಡ ತಪ್ಪು ಮಾಡಿ ಆತ ಒಂದೇ ವರ್ಷಕ್ಕೆ ಹೊರಬರುತ್ತಾನೆ. ಅವನ ಮನಸ್ಸು ಸಹಾ ಪರಿವರ್ತನೆಯಾಗಿರಬಹುದು.. ಆದರೆ, ಆ ಮುಗ್ಧ ಹೆಣ್ಣು ಮಗು ಯಾವ ತಪ್ಪು ಮಾಡಿತ್ತು..??


ಈ ದುರುಳರ ಅಟ್ಟಹಾಸಕ್ಕೆ, ವಿಕೃತಿಗೆ ಸಿಲುಕಿ ಸತ್ತ ಆ ಮಗು ಯಾವ ತಪ್ಪು ಮಾಡಿತ್ತು..?? ಈತನ ವಯಸ್ಸು ಅಲ್ಲಿ ತಪ್ಪು ಮಾಡುವಾಗ ಮುಖ್ಯವೇ ಆಗಿರಲಿಲ್ಲವೇ..??


ಕಡೆಗೂ, ಕೋರ್ಟು ತನ್ನ ನಿರ್ಧಾರ ಬದಲಿಸಿ ಆತನಿಗೂ ಜೀವಾವಧಿ ಶಿಕ್ಷೆ ನೀಡಿತು. ಆದರೂ, ನನಗನ್ನಿಸಿದ್ದು ಆತ್ಯಾಚಾರಿಗಳಿಗೆ ಆ ಶಿಕ್ಷೆಯೂ ಸಾಲದು.


~ವಿಭಾ ವಿಶ್ವನಾಥ್

ನಾನು ಮಾಡಿದ್ದು ತಪ್ಪಾ..?? (ಬೆಳಕಿಂಡಿಯ ಕತೆಗಳು - 55)

 


ಮಕ್ಕಳಿಗೆ ಶಿಕ್ಷಣವನ್ನು ಬರೀ ಒಳ್ಳೆಯ ಮಾತಿನಲ್ಲಿ ಹೇಳಿದರೆ ಕೇಳಿ ಬಿಡುತ್ತಾರಾ..?? ತಪ್ಪು ಮಾಡಿದಾಗ ತಿದ್ದಬೇಕಾದರೆ ಕೆಲವೊಮ್ಮೆ ಶಿಕ್ಷಕಿಯಾಗಿ ನಾನು ಶಿಕ್ಷೆ ನೀಡಬೇಕಾಗುತ್ತದೆ. ನಾನು ಕೂಡಾ ಆ ಮಗುವಿನ ರಕ್ಷಕಿಯೇ ತಾನೇ..? ಒಂದು ಮಗುವನ್ನೇ ಸಂಭಾಳಿಸಲು ಅಮ್ಮ ಕಷ್ಟ ಪಡುವಾಗ ಇಲ್ಲಿ ನಾನು ಒಂದು ತರಗತಿಯಲ್ಲಿ ಕಡಿಮೆ ಎಂದರೂ 30 ಮಕ್ಕಳನ್ನು ಸಂಭಾಳಿಸಬೇಕು. ಹಾಗಿದ್ದಲ್ಲಿ, ಅವರನ್ನು ಒಳ್ಳೆ ಮಾತಿನಿಂದಲೇ ತಿದ್ದಬೇಕೆನ್ನುವ ಕಾನೂನು ಎಷ್ಟು ಪಾಲನೆಯಾಗಲು ಸಾಧ್ಯ..??


ಮಗು ಹೋಮ್ ವರ್ಕ್ ಮಾಡಿರಲಿಲ್ಲ ಎಂಬ ಕಾರಣಕ್ಕೆ ಕ್ಲಾಸ್ ನಿಂದ ಹೊರಗೆ ನಿಲ್ಲುವ ಶಿಕ್ಷೆ ನೀಡಿದ್ದೆ. ಆದರೆ, ಆತ ಹತ್ತು ನಿಮಿಷಕ್ಕೆಲ್ಲಾ ಬಿದ್ದು ಬಿಟ್ಟಿದ್ದನಂತೆ. ತಿಂಡಿ ತಿಂದು ಬಂದಿರಲಿಲ್ಲವಂತೆ. 

ಇದಕ್ಕೆಲ್ಲಾ ನಾನೇ ಕಾರಣ ಎಂಬಂತೆ ದೂಷಿಸುತ್ತಾರೆ. ಮಗುವನ್ನು ಸರಿ ದಾರಿಯಲ್ಲಿ ನಡೆಸುವ ಸಲುವಾಗಿ ನೀಡಿದ ಶಿಕ್ಷೆ ಈಗ ನನಗೇ ಶಿಕ್ಷೆಯಾಗಿದೆ. ಸಹೋದ್ಯೋಗಿಗಳು ಮಾತ್ರವಲ್ಲ.. ನನ್ನ ವಿದ್ಯಾರ್ಥಿಗಳು ಸಹಾ ನೋಡುವ ದೃಷ್ಟಿ ಬೇರೆಯಾಗಿದೆ. ನಾನು ಮಾಡಿದ್ದು ತಪ್ಪಾ..??


~ವಿಭಾ ವಿಶ್ವನಾಥ್

ಬದುಕು ನಿಲ್ಲಬಲ್ಲದೇ..? (ಬೆಳಕಿಂಡಿಯ ಕತೆಗಳು - 54)

 


"ಕರೋನಾ ಮಹಾಮಾರಿ ವಕ್ಕರಿಸಿರುವುದರಿಂದ ಎಲ್ಲರಿಗೂ ತೊಂದರೆಯೇ.. ಹಾಗೆಂದು ಮನೆಯಲ್ಲಿಯೇ ಸುಮ್ಮನೆ ಕುಳಿತುಕೊಳ್ಳಲಾಗುತ್ತದೆಯೇ..?? ಹಾಗೆ ಕುಳಿತರೆ ಬದುಕು ನಿಲ್ಲಬಲ್ಲದೇ..?? ಸಮಯ ಓಡುತ್ತಲೇ ಇದೆ. ನಾವು ನಿಂತ ಮಾತ್ರಕ್ಕೆ ಬದುಕು ಸಮಯ ನಿಲ್ಲುತ್ತದೆಯೇ..?? 


ಮುನ್ನೆಚ್ಚರಿಕೆಯಾಗಿ ಮಾಸ್ಕ್ ಧರಿಸಿಕೊಳ್ಳಬೇಕು, ಸ್ಯಾನಿಟೈಜರ್ ಹಾಕಿಕೊಳ್ಳಬೇಕು. ಮನೆಯಲ್ಲಿ ಕರೆದ ಹಾಲು ಮಾರುತ್ತಾ, ಮನೆಯಂಗಳದಲ್ಲಿಯೇ ಬೆಳೆದಿದ್ದ ಹೂಗಳನ್ನು ಕಟ್ಟುತ್ತಾ, ಅಲ್ಲೇ ಬೆಳೆದ ಸೊಪ್ಪು-ತರಕಾರಿಗಳನ್ನು ಮಾರುತ್ತಾ ಬದುಕು ಸಾಗಿಸಬೇಕು." ಎಂದರು ಅಜ್ಜಿ. 


"ಅಜ್ಜಿ ನೀವು ಈ ವಯಸಲ್ಲಿ, ಅದೂ ಕರೋನಾ ಕಾಲದಲ್ಲಿ ಹೀಗೆ ಬಂದಿದ್ದೀರಾ.. ಮನೆಯಲ್ಲಿಯೇ ಕುಳಿತುಕೊಳ್ಳುವುದಲ್ಲವೇ" ಎಂದು ಪ್ರಶ್ನಿಸಿದ್ದಕ್ಕೆ... 

ಅವರು ಹೇಳಿದ್ದರಲ್ಲಿ ತಪ್ಪೇನಿದೆ.. "ನಾವು ಸುಮ್ಮನೆ ಕುಳಿತ ಮಾತ್ರಕ್ಕೆ ಸಮಯ, ಬದುಕು ನಿಲ್ಲುವುದಿಲ್ಲ.. ಅಲ್ಲವೇ..??"


~ವಿಭಾ ವಿಶ್ವನಾಥ್

ಈಗಿಲ್ಲಿ ಎಲ್ಲವೂ ಮೆಸ್ಸಿ! (ಪುಸ್ತಕ ಯಾನ - 470)


ಪುಸ್ತಕದ ಶೀರ್ಷಿಕೆ : ಈಗಿಲ್ಲಿ ಎಲ್ಲವೂ ಮೆಸ್ಸಿ!

ಲೇಖಕರು : ಎಂ ಆರ್ ಕಮಲ

ಪ್ರಕಾಶಕರು : ಬಹುರೂಪಿ 

ಪ್ರಥಮ ಮುದ್ರಣ : ಡಿಸೆಂಬರ್ 2024

ಪುಟಗಳು : 104

ಬೆಲೆ : 150 ರೂ.


ನನಗೆ ಎಂ. ಆರ್ ಕಮಲ ಮೇಡಂ ಅವರ ಗದ್ಯಗಂಧಿ ಕವಿತೆಗಳು ಬಹಳ ಇಷ್ಟ. ಜೊತೆಗೆ ಅವರ ಸಕಾರಾತ್ಮಕ ನೋಟವೂ..


ಗದ್ಯಗಂಧಿ ಶೈಲಿಯ ಜೊತೆಗೆ ಲೇಖಕಿ 2015ರಲ್ಲಿ ಅರಬ್ ಹೆಣ್ಣು ಮಕ್ಕಳ ಕಾವ್ಯದ ಅನುವಾದದಲ್ಲಿ ತೊಡಗಿಕೊಂಡಿದ್ದಾಗ ಅವರ ಬರವಣಿಗೆಯ ಶೈಲಿಗಳು ಬದಲಾಗಿರುವುದಕ್ಕೆ ಕಾರಣ ಹಾಗೂ ಹೆಚ್ಚಿನ ಅರಬ್ ಮಹಿಳಾ ಕವಿಗಳ ಗದ್ಯಗಂಧಿ ಕವಿತೆಗಳ ಕುರಿತಾಗಿ ಪುಸ್ತಕದ ಪ್ರವೇಶಿಕೆಯಲ್ಲಿ ತೆರೆದಿಡುತ್ತಾರೆ. 


ಸಾಮಾನ್ಯವಾಗಿ ಇವರ ಗದ್ಯಗಂಧಿ ಕವಿತೆಗಳಲ್ಲಿ ಅವಳು ಎನ್ನುವುದನ್ನು ಕಾಣಬಹುದು. ಇದು ಹಲವಾರು ಹೆಣ್ಣುಮಕ್ಕಳಿಗೆ ಕನೆಕ್ಟ್ ಆಗುತ್ತದೆ ಸಹ. ಇಲ್ಲಿ ಅವಳ ಭಾವಗಳು ಕಾಣುತ್ತವೆ. ಜೊತೆಗೆ ವಲಸೆ, ವಿಸ್ಮೃತಿ, ಹೆಣ್ಣಿನ ಅಸ್ಮಿತೆ, ಮನುಷ್ಯನ ಸೋಗಲಾಡಿತನ, ಸಾಮಾಜಿಕ ಜಾಲತಾಣ ಹೀಗೆ ಹಲವಾರು ವಿಚಾರಗಳನ್ನು ನಾವಿಲ್ಲಿ ಕಾಣಬಹುದು. ಶೀರ್ಷಿಕೆಯೇ ಸೂಚಿಸುವಂತೆ ಮೆಸ್ಸಿ ಅಂದರೆ ಗೊಂದಲವಿರುವ ಭಾವಗಳು ಹಾಗೂ ಅವುಗಳ ಮೇಳ್ಳೆಸುವಿಕೆಯ ಜೊತೆಗೆ ಹೊಸದೊಂದು ಸಕಾರಾತ್ಮಕ ಹೊಳಹು ಸಹ ಸಿಗುತ್ತದೆ.


ಈ ಕವಿತೆಗಳ ಮಾಲೆಯ ಮೊದಲ ಪುಸ್ತಕಕ್ಕೆ ಗದ್ಯಗಂಧಿ ಎಂಬ ಚಂದದ ಹೆಸರಿಟ್ಟ ಡಾ. ಎಚ್. ಎಸ್ ಸತ್ಯನಾರಾಯಣ ಅವರಿಗೆ ಈ ಸಂಕಲನವನ್ನು ಅರ್ಪಿಸಿದ್ದಾರೆ. 


ಇಲ್ಲಿ 76 ಸೊಗಸಾದ ಗದ್ಯಗಂಧಿ ಕವಿತೆಗಳಿವೆ. ನನಗಿಷ್ಟವಾದ ಕೆಲವನ್ನು ನನಗರ್ಥವಾದಂತೆ ಪ್ರಸ್ತಾಪಿಸುತ್ತೇನೆ.


**************


ಅವರು ಕೇಳುತ್ತಾರೆ :

ಅವರು ಕೇಳುತ್ತಾರೆ: ನಿನ್ನೊಳಗೆ ಕಹಿಯೇ ಇಲ್ಲವೇ?


ನಾನು ಹೇಳುತ್ತೇನೆ: ಇಲ್ಲಿ ಎಲ್ಲರೂ ಕಹಿ ತುಂಬಿದ

ಪಾತ್ರೆಯಾಗಿದ್ದಾರೆ. ಎಲ್ಲ ಕಡೆಯೂ ಅದನ್ನೇ ಹೀರುತ್ತ, ಉಗುಳುತ್ತ

ಹೊಳೆಯಂತೆ ಹರಿಯುತ್ತಿದ್ದಾರೆ. ಯಾವಾಗ ಕಹಿಯೊಂದು

ಕಡಲಾಗುವುದೋ? ಅದಕ್ಕೆಂದೇ ಜೇನುಹುಟ್ಟಿಯಾಗಿದ್ದೇನೆ. 


ಎಲ್ಲರೂ ಕಹಿ ತುಂಬಿಕೊಂಡು.. ಕಹಿಯನ್ನೇ ಕಕ್ಕುವಾಗ ಸಿಹಿಯಾಗಿರುವರು ಮಾದರಿಯಾಗಬೇಕಿದೆ. ಪ್ರತಿಯೊಂದಕ್ಕೂ ಏಕೆ, ಹೇಗೆ ಎಂದು ಪ್ರಶ್ನಿಸುವವರಿಗೆ ಇಲ್ಲಿ ಎಲ್ಲರಂತೆಯೇ ತಾನೂ ಆದರೆ ಹೇಗೆ..?! ಎಂಬ ವಿಭಿನ್ನತೆಯ ಜೊತೆಗೆ ಮನುಷ್ಯ ಏನಾಗಬೇಕಿದೆ ಎಂಬುದನ್ನು ಬೋಧಿಸದೆ ತಾನೇ ಮಾದರಿಯಾಗಿ ನಿಲ್ಲುವ ಬಗೆ ಕಾಣಸಿಗುತ್ತದೆ. 


**************


ಹೀಗಿಲ್ಲಿ ಎಲ್ಲವೂ ಮೆಸ್ಸಿ! :

ಇಲ್ಲಿ ಮೆಸ್ಸಿ ಎಂಬ ಪದ ಗೋಜಲು, ಗೊಂದಲ ಎಂಬರ್ಥ ನೀಡುತ್ತದೆ. 

ಬದಲಾದ ದಿನಗಳು ಬದಲಾದ ರೀತಿ-ನೀತಿಗಳು, ಬದುಕಿನ ರೀತಿಗಳು, ಅಪ್ಡೇಟ್ ಆಗುವ ನೆಪದಲ್ಲಿ ಬದಲಾಗಿರುವ ನಮಗೆ ಕನ್ನಡಿ ಹಿಡಿದಂತಿದೆ ಇದು. 


**************


ಉದುರಿದ ಪದಗಳನ್ನು ಅಂಟಿಸಲಾಗುವುದಿಲ್ಲ :


'ಪದಗಳೆಂದರೆ' ಮರದಿಂದ ಉದುರಿದ ಎಲೆಗಳು 

ಎಂಬ ಸಾಲು ಮರದಿಂದ ಉದುರಿದ ಎಲೆಗಳನ್ನು ಮತ್ತೆ ಹೇಗೆ ಮೊದಲಿನಂತಾಗಿಸುವುದಿಲ್ಲವೋ ಹಾಗೆಯೇ ಒಮ್ಮೆ ಆಡಿದ ಮಾತುಗಳು ಎಲ್ಲೆಲ್ಲಾ ಹಾರಿ, ಹೊತ್ತಿ ಉರಿಯಬಹುದು ಅಥವಾ ಹೇಗೆಲ್ಲಾ ವಿನ್ಯಾಸವಾಗಬಹುದು, ಯಾವ ರೀತಿಯಲ್ಲಿ ಬಳಕೆಯಾಗಬಹುದು ಎಂಬುದನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. 


ಉದುರಿದ ಪದಗಳನ್ನು ಹಿಂತೆಗೆದು ಅಂಟಿಸಲಾಗುವುದಿಲ್ಲವಲ್ಲ! 

ಎಂಬ ಸಾಲು ಅದೆಷ್ಟು ಅರ್ಥಪೂರ್ಣವಲ್ಲವೇ..!


**************


ತನ್ನದೇ ಸಾಲುಗಳನ್ನು ಮರೆಯುತ್ತಿದ್ದಾನೆ! :


ಫೇಸ್ಬುಕ್ ನ ಅನ್ ಫ್ರೆಂಡ್ ಆಗುವ ವಿಚಾರವನ್ನು ಪ್ರಸ್ತಾಪಿಸುತ್ತಲೇ.. ಚಿಕ್ಕವರಿದ್ದಾಗ ನೆಂಟರು ಬರುವ ಸಂದರ್ಭದ ಸಂಭ್ರಮ ಜೊತೆಗೆ ಅವರ ನಿರ್ಗಮನದ ನಂತರದ ಖಾಲಿತನ ಎರಡರ ಅನುಭವವನ್ನು ಪ್ರಸ್ತಾಪಿಸುತ್ತಾರೆ. ಅದಕ್ಕೂ.. ಇಂದಿನ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಗೂ ಲಿಂಕ್ ಆಗುತ್ತದೆ. ಬರುವವರ, ಹೋಗುವವರ, ಹೊಂದುವವರ ಕುರಿತು ಹೇಳುತ್ತಾರೆ.


ಬರುವವರ ಹೋಗುವವರ ಎಣಿಕೆಯಲ್ಲಿ ಕವಿಗೀಗ ವಿಸ್ಮೃತಿ.

ತನ್ನನ್ನು, ತನ್ನದೇ ಸಾಲುಗಳನ್ನು ಮರೆಯುತ್ತಿದ್ದಾನೆ! 


**************


ನಕ್ಷತ್ರಗಳನ್ನು ಹುಡುಕುವುದು! :

ಚಿಕ್ಕಂದಿನಿಂದ ಇದ್ದ ನಕ್ಷತ್ರಗಳ ಹುಚ್ಚಿನಲ್ಲಿ ಕೆಂಪು ಕಲ್ಲಿನ ನಕ್ಷತ್ರದ ಓಲೆ, ನಂತರ ಅದು ಕಳೆದು ಹೋಗಿದ್ದು, ನಕ್ಷತ್ರ ಕತ್ತಿನ ಫ್ರಾಕು ಹೀಗೆ ನಕ್ಷತ್ರದ ಆಸೆಗಳು ಹಲವಿದ್ದವು. ಆದರೆ ನಕ್ಷತ್ರಗಳು ಸಿಕ್ಕಿದ್ದೇ ಬೇರೆ ರೀತಿಯಲ್ಲಿ. ಇವು ಕಳೆದುಹೋಗದ ನಕ್ಷತ್ರಗಳು. ಅವು ಹೇಗಿವೆ ಎಂದರೆ ಹೀಗಿವೆ ನೋಡಿ.


ಪಾಠ ಮಾಡಿದರೆ ಮಕ್ಕಳ ಕಣ್ಣಲ್ಲಿ ನೂರಾರು ನಕ್ಷತ್ರ, ಅಡುಗೆ

ಮುಗಿಸಿದರೆ ಕೈಯಲ್ಲೊಂದು, ನೆಟ್ಟ ಮಲ್ಲಿಗೆಯ ಬಳ್ಳಿಯಲ್ಲಿ

ಲೆಕ್ಕವಿರದಷ್ಟು! ಕಾಲಿಟ್ಟಲ್ಲೆಲ್ಲ ನಕ್ಷತ್ರಗಳ ಬಳ್ಳಿ ತೊಡರಿಕೊಳ್ಳುತ್ತಿವೆ.

ಮನಸ್ಸಿಗೆ ಮಂಕು ಕವಿದಿದೆ ಎನ್ನಿಸಿದರೆ ಎದ್ದು ಕೆಲಸ ಹುಡುಕುತ್ತಾಳೆ.

ನಕ್ಷತ್ರಗಳು ದಳದಳ ಉದುರುತ್ತವೆ!


**************


ಮಾತನಾಡಿಸಬೇಕಾಗಿಯೇ ಇಲ್ಲ! :

"ಬೆಳಗಾದರೆ ಅದದೇ ಮನೆಯ ರಂಗೋಲಿ ನೋಡುತ್ತಾ ನಡೆಯುತ್ತಾಳೆ. ಕವಿ ನಿಸಾರರಿಗಿದ್ದ ಜಿಜ್ಞಾಸೆ, ಬೆರಗುಗಣ್ಣು ಯಾವುದೂ ಇಲ್ಲ. ಪ್ರಶ್ನೆಗಳು ಇಲ್ಲ ಹೆಚ್ಚಿನವು ಉತ್ತರಗಳೇ!"


ಹೆಣ್ಣುಮಕ್ಕಳ ಮನಸ್ಸು ರಂಗೋಲಿಯ ಮೂಲಕ ಚಿತ್ರಿತವಾಗಿರುವ ಪರಿಯನ್ನು ನಮಗೂ ಕಟ್ಟಿಕೊಡುತ್ತಾರೆ. ಕಾಟಾಚಾರಕ್ಕೆ ಎಳೆದ ರಂಗೋಲಿ, ಬಿಳಿಯ ರಂಗೋಲಿ ಜೊತೆಗೆ ಕೆಮ್ಮಣಿನ ಅಲಂಕಾರ, ಬಣ್ಣದ ರಂಗೋಲಿ, ಬಣ್ಣ ಬೇಡದ ಕಡೆ ಬಣ್ಣ ಸೇರಿಸಿ ಅಂದಗೆಟ್ಟ ರಂಗೋಲಿ, ಹೆಚ್ಚು ಎಳೆಗಳಿದ್ದ ರಂಗೋಲಿಯನ್ನು ಹಿಗ್ಗಿಸುತ್ತಾ ಸಾಗಿರುವ ಪರಿ, ಬದಲಾಗದ ಒಂದು ಮನೆಯ ರಂಗೋಲಿ, ಹೀಗೆ ವಿವಿಧ ರಂಗೋಲಿಗಳು ಅವರ ಮನಸ್ಸನ್ನೇ ಬಿಚ್ಚಿಡುವಂತೆ ಕಾಣುತ್ತವೆ. 

ಗದ್ಯಗಂಧಿ ಕೊನೆಯಲ್ಲಿನ ಈ ಸಾಲು ಎಲ್ಲವನ್ನೂ ಹೇಳುತ್ತದೆ.


ಈ ಹೆಣ್ಣು ಮಕ್ಕಳನ್ನು ಅರಿಯಲು ಮಾತನಾಡಿಸಬೇಕಾಗಿಯೇ ಇಲ್ಲ!


**************


ಸ್ವಯಂ ಸಂಭ್ರಮೆಗೆ ಯಾವ ಹಂಗಿಲ್ಲ! :

ಯಾತನೆಯ ಒರೆಸಿ ಹಾಕಿರುವ ನೂತನೆಯ ಕಣ್ಣ ಕಾಡಿಗೆ

ನೀರಾಗುವುದಿಲ್ಲ, ತುಟಿ ರಂಗು ಅಳಿಯುವುದಿಲ್ಲ, ಅಳಿಸುವುದೂ

ಇಲ್ಲ. ಬರುವನೋ, ಬಾರನೋ ಎಂಬ ಗೊಂದಲವೇ ಇಲ್ಲ.

ಸ್ವಯಂ ಸಂಭ್ರಮೆಗೆ ಯಾವುದರ ಹಂಗಿಲ್ಲ.


ಸ್ವಯಂ ಸಂಭ್ರಮೆಯರಾಗಿ ಮೊದಲಿಗೆ ತಮ್ಮನ್ನು ತಾವು ಪ್ರೀತಿಸಿಕೊಳ್ಳುವ ಹಾಗೂ ಯಾರಲ್ಲೂ ತಮ್ಮ ಸಂತೋಷವಿಲ್ಲ ಎಂಬ ಅರಿವನ್ನು ಮೂಡಿಸಿಕೊಳ್ಳುವ, ಸ್ವಯಂ ಸಂಭ್ರಮೆ ಇಲ್ಲಿ ಮಾದರಿಯಾಗುತ್ತಾಳೆ ಹಾಗೂ ಇಷ್ಟವಾಗುತ್ತಾಳೆ. ಇಲ್ಲಿ ಸ್ವಯಂ ಸಂಭ್ರಮೆಯ ಅರಳುವಿಕೆ ಹಾಗೂ ಅವಳ ಪರಿ ಆವರಿಸಿಕೊಳ್ಳುತ್ತದೆ.


**************


ವಿರುದ್ಧ ಪದಗಳ ಹುಡುಕುತ್ತ ! :


ಎಲ್ಲದಕ್ಕೂ ನಿಮ್ಮದು 'ಏರುದ್ಧ ಪದ'ದ ಹುಡುಕಾಟ. ಸಿಗದಿದ್ದರೆ ತತ್ತರಿಸಿ ಎಂಥದ್ದನ್ನೋ ಎದುರಿಗೆ ತಂದು ನಿಲ್ಲಿಸಿ ಕಾದಾಡಲೇಬೇಕು.

ಮಾಗಿಯ ಕೋಗಿಲೆಯಂತೆ ಯಾರೂ ಇಲ್ಲಿ ಮೂಗರಾಗಬಾರದು.

ಹುಲಿಯೋ, ನರಿಯೋ ಯಾವುದೋ ವೇಷ ತೊಟ್ಟು

ಕುಣಿಯುತ್ತಿರಬೇಕು.


ಎಲೆ ಕಳಚಿ ನಿಂತ ಮರದ ಮೌನ, ವಿಷಾದ, ಚಿಗುರ ಭರವಸೆ

ಯಾವುದೂ ವಿರುದ್ಧ ಪದಗಳ' ಹುಡುಕಾಡುವವರಿಗೆ

ಅರ್ಥವಾಗುವುದಿಲ್ಲ.


ಪಕ್ಷಿಗಳಿಗೆ ಮರಗಳಿಗೆ ಹೀಗೆ ಪರಿಸರದಲ್ಲಿ ವಿರುದ್ಧ ಎಂಬುದಿಲ್ಲ. ಅವುಗಳಿಗೆ ನಿಯಮವೂ ಇಲ್ಲ. ತಮ್ಮ ಪಾಡಿಗೆ ಚಿಗುರಿ, ಅರಳಿ ನಳನಳಿಸುತ್ತವೆ. ಮನುಷ್ಯನಂತೆ ಹುನ್ನಾರಗಳಿಲ್ಲ ಎಂದು ಹೇಳುತ್ತಲೇ ಮನುಷ್ಯರ ವಿರುದ್ಧ ಪದದ ಹುಡುಕಾಟದ ಪ್ರಯತ್ನವನ್ನು ಬದಿಗಿರಿಸಿ, ಏನೋ ಒಂದು ಮಾಡುತ್ತಲಿದ್ದಾಗ ಹೇಗಿರುತ್ತದೆ ಎಂದು ಹೇಳಿದ್ದಾರೆ. 


**************


ಅರಳುವುದಷ್ಟೇ ತನ್ನ ಸಹಜ ಗುಣ! :

ತನ್ನೊಳಗೊಂದು ಭಾಷೆಯಿದೆಯೆಂದೇ ತಿಳಿದಿರಲಿಲ್ಲ ತನಗೆ

ತಾನೇ ಹೂವಂತೆ ಅರಳುವವರೆಗೂ! ಈಗವಳು ಹೊರಗಿನೆಲ್ಲ

ಭಾಷೆಯನ್ನು ಆಚೆಗಟ್ಟಿದ್ದಾಳೆ. ಅರಳುವುದಷ್ಟೇ ತನ್ನ ಸಹಜ ಗುಣ!


ಕೆಲವೊಮ್ಮೆ ಪರಿಸರದ ಅಥವಾ ಕುಟುಂಬದ ಯಾರದ್ದೋ ಭಾಷೆಯನ್ನೋ, ಭಾವವನ್ನೋ ನಮ್ಮೊಳಗೆ ಅಳವಡಿಸಿಕೊಳ್ಳುತ್ತಾ ಸಾಗುತ್ತೇವೆ. ಆದರೆ, ನಮ್ಮ ನೈಜತೆಯ ಅರಿವಾಗುವುದು ನಮ್ಮ ಭಾವ, ಭಾಷೆಯ ಅರಿವಾಗುವುದು ಸಹಜವಾದ ಪ್ರಕ್ರಿಯೆ. ಹೂವರಳುವಂತೆ.. ಜೊತೆಗೆ ಅದರ ನಂತರದ ಜ್ಞಾನೋದಯ, ಪರಿಪಕ್ವತೆ ಯಾವುದನ್ನು ಆಚೆಗಿಡಬೇಕು ಎನ್ನುವುದನ್ನು ನಿರ್ಧರಿಸುತ್ತದೆ. ಅಲ್ಲವೇ..?


**************


ಅರ್ಥಪೂರ್ಣವಾದ ಹಾಗೂ ಮನಸ್ಸಿಗೆ ಹತ್ತಿರವಾಗುವ ಹಲವು ಸಾಲುಗಳಿವೆ ಇಲ್ಲಿ. ಪ್ರಸ್ತಾಪಿಸಲು ಹೊರಟರೆ ಈ ಪುಸ್ತಕದ ಸಾಕಷ್ಟು ಸಾಲುಗಳನ್ನು ಪ್ರಸ್ತಾಪಿಸಬೇಕಾಗುತ್ತದೆ. ರೂಪಕಗಳನ್ನು ಇಷ್ಟಪಡುವ ಗದ್ಯದ ಪ್ರಿಯರು ಹಾಗೂ ಪದ್ಯದ ಪ್ರಿಯರು, ಕಾವ್ಯಾತ್ಮಕ ಭಾಷೆಯನ್ನು ಇಷ್ಟಪಡುವವರು ಹೀಗೆ ಎಲ್ಲರೂ ಓದಬಹುದಾದ ಗದ್ಯಗಂಧಿ ಕವಿತೆಗಳಿವೆ ಇಲ್ಲಿ. ಸೊಗಸಾದ ಓದು.


~ವಿಭಾ ವಿಶ್ವನಾಥ್