ಭಾನುವಾರ, ಜುಲೈ 26, 2026

ನಂದಾದೀಪ ನಗುತ್ತಿತ್ತು (ಪುಸ್ತಕ ಯಾನ - 472)


ಪುಸ್ತಕದ ಶೀರ್ಷಿಕೆ : ನಂದಾದೀಪ ನಗುತ್ತಿತ್ತು

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಇಂದಿರಾ ಪ್ರಕಾಶನ

ಪ್ರಥಮ ಮುದ್ರಣ : 2004

ದ್ವಿತೀಯ ಮುದ್ರಣ : 2024 (ನನ್ನ ಓದಿಗೆ ಸಿಕ್ಕಿದ್ದು)


ಎಂದಿಗೂ ನಮ್ಮ ಬದುಕಿನ ರೀತಿ ನಮ್ಮದು. ಅದರಲ್ಲಿ ಸುಖ-ದುಃಖ, ನೋವು-ನಲಿವು ಏನೇ ಇದ್ದರೂ ಅದನ್ನು ನಾವೇ ಅನುಭವಿಸಬೇಕು. ಅದರ ಬದಲಾಗಿ ಬೇರೆಯವರ ಮೇಲೆ ಪೈಪೋಟಿಗಿಳಿದರೆ ನಮ್ಮ ಬದುಕಿನ ಸುಖ ಯಾವುದಕ್ಕೂ ಸಾಲದು ಎಂಬಂತೆ ಹಪಾಹಪಿಯಿಂದ ಅವರಂತಾಗಬೇಕು ಎನ್ನುವ ಓಟದಲ್ಲಿ ಇರುವುದನ್ನು ಕಳೆದುಕೊಳ್ಳುತ್ತಾ.. ನೆಮ್ಮದಿಯಿಲ್ಲದ ಬದುಕಿನತ್ತ ಸಾಗುತ್ತೇವೆ. ಇಲ್ಲಿ ಎರಡು ಸುಂದರ ಸಂಸಾರಗಳು ಹೀಗೆ ಪೈಪೋಟಿಗಿಳಿದು ತಮ್ಮ ರಕ್ತಸಂಬಂಧವನ್ನು ಮರೆತು ಒಬ್ಬರ ನಾಶಕ್ಕೆ ಒಬ್ಬರು ಪಣತೊಟ್ಟು ನಿಂತಂತೆ ಪೈಪೋಟಿಗಿಳಿದಾಗ ಮಕ್ಕಳ ಬದುಕು ಏನಾಗುತ್ತದೆ ಎಂಬ ಚಿತ್ರಣವಿದೆ. 


ಗೋಪಿನಾಥ ಹಾಗೂ ಶ್ರೀಪತಿ ಅಣ್ಣ-ತಮ್ಮಂದಿರು. ಗೋಪಿನಾಥ ಹಾಗೂ ಸರಸ್ವತಿಯ ಮಗಳು ಪುಣ್ಯಶ್ರೀ. ಶ್ರೀಪತಿ ಹಾಗೂ ಪಾರ್ವತಿಯ ಮಗಳು ಚಿನ್ಮಯಿ. ಇಬ್ಬರು ಮಕ್ಕಳು ಒಂದೇ ಓರಿಗೆಯವರು. 


ಶ್ರೀಪತಿ ಲೆಕ್ಚರರ್. ಪಾಠ ಹೇಳುವ ರೀತಿ ಚೆನ್ನಾಗಿತ್ತು. ಮಗಳು ಚಿನ್ಮಯಿ ಸಹ ಎರಡು ವರ್ಷದಿಂದ ಟ್ಯೂಷನ್ ಹೇಳಿ ಸಂಪಾದಿಸುತ್ತಿದ್ದಳು. ರೂಪವತಿ ಸಹ. ತಂದೆ-ತಾಯಿಗೆ ಹೆಮ್ಮೆಯ ಮಗಳು. 17 ವರ್ಷಗಳ ಹಿಂದೆ ಭೋಗ್ಯಕ್ಕೆ ಹಾಕಿಸಿಕೊಂಡ ಮನೆಯಲ್ಲಿಯೇ ಅವರ ಬದುಕು ನೆಮ್ಮದಿಯಾಗಿಯೇ ಸಾಗುತ್ತಿತ್ತು. ಒಂದು ಪತ್ರ ಬರುವವರೆಗೂ...


ಸರಸ್ವತಿಯ ಮನೆಯಲ್ಲಿ ಶ್ರೀಮಂತಿಕೆಯಿತ್ತು. ತಂದೆ-ತಾಯಿಯಿಂದ ಬಂದ ಆಸ್ತಿಯಿಂದಾಗಿ ಅದರೊಡನೆ ಅಹಂಕಾರವೂ ಬೆರೆತಿತ್ತು. ಮಗಳು ಪುಣ್ಯಶ್ರೀ ಸಹ ಅಂತಹದ್ದೇ ನಡವಳಿಕೆಯನ್ನು ರೂಪಿಸಿಕೊಂಡಿದ್ದಳು. ಅಷ್ಟೇನೂ ರೂಪವತಿಯೂ ಅಲ್ಲದ, ನವನವೀನ ರೀತಿಯ ಹುಡುಗಿ ಅಲಂಕಾರಕ್ಕೆ ಅಪ್ಪಿಕೊಂಡಿದ್ದವಳು.


ಶ್ರೀಪತಿ ಗೋಪಿನಾಥರ ಮೂರು ಅಕ್ಕಂದಿರಲ್ಲಿ ಮೂರನೇ ಅಕ್ಕನಿಗೆ ಮೂವರು ಗಂಡು ಮಕ್ಕಳು. ಅದರಲ್ಲಿ ಮೊದಲನೆಯ ಅವನು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಶ್ರೀಕಾಂತ್. ಪಾರ್ವತಿಗೆ ಆತನಿಗೆ ತನ್ನ ಮಗಳನ್ನು ಕೊಡುವ ಆಸೆ. ಆದರೆ, ಕಾವೇರಮ್ಮನಿಗೆ ಪುಣ್ಯಶ್ರೀಯನ್ನು ತಂದುಕೊಳ್ಳುವ ಆಸೆ. ಹಾಗೆಂದು ಬಾಯಿಬಿಟ್ಟು ಹೇಳದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದರು. 


ಪುಣ್ಯಶ್ರೀ (ಪುನ್ನಿ) ಹಾಗೂ ಶ್ರೀಕಾಂತನ ಲಗ್ನ ಪತ್ರಿಕೆಗೆ ಬರಬೇಕೆಂದು.. ಜೊತೆಗೆ ಚಿನ್ನಿಯನ್ನು ಕಾವೇರಮ್ಮನ ಎರಡನೇ ಮಗನಿಗೆ ಗಂಟು ಹಾಕಲು ಮಾಡಿದ ಪ್ರಸ್ತಾಪವನ್ನು ನೋಡಿ ಪಾರ್ವತಿ ಕುದಿದು ಹೋದಳು. ತನ್ನ ನಾಲ್ಕನೇ ತಂಗಿ ಸಾವಿತ್ರಿ ಮನೆಗೆ ಹೋಗಿ ಬರುವಾಗ ಡಾಕ್ಟರ್ ವರನ ಪ್ರಸ್ತಾಪ ತಂದಿದ್ದಳು. 


ದೊಡ್ಡಮ್ಮನ ಮೇಲಿನ ಹಠಕ್ಕೆ ಹಿಂದೆ-ಮುಂದೆ ವಿಚಾರಿಸದೆ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡವೆಂದು ಚಿನ್ನಿ ಹೇಳಿದರೂ.. ಡಾಕ್ಟರ್ ವರನ ರೂಪ, ಅಂತಸ್ತು ದಂಪತಿಗಳಿಬ್ಬರನ್ನೂ ಕನಸು ಕಾಣುವಂತೆ ಮಾಡಿತ್ತು. ಹತ್ತು ವರ್ಷಗಳ ಅಂತರವಿದ್ದರೂ ಆತನ ಜೊತೆ ಮಾತನಾಡಿದ ಚಿನ್ಮಯಿ ಡಾಕ್ಟರ್ ಭಾಸ್ಕರ್ ಜೊತೆಗೆ ಮಾತನಾಡಿದ ನಂತರ ಪರಸ್ಪರ ಒಪ್ಪಿ ವಿಜೃಂಭಣೆಯಿಂದ ಲಗ್ನಪತ್ರಿಕೆಯೂ ಆಯಿತು. 


ಕಾವೇರಮ್ಮ ಹಾಗೂ ಸರಸ್ವತಿ ಇಬ್ಬರೂ ಪಾರ್ವತಿಯನ್ನು ತಾವು ಸೋಲಿಸಿದ್ದೇವೆ ಎನ್ನುವ ಅಹಂಕಾರದಲ್ಲಿರುವಾಗ ಪಾರ್ವತಿ ಬಂದಿದ್ದಾಯ್ತು. ಆದರೆ, ಅಷ್ಟರಲ್ಲಾಗಲಿ ಶ್ರೀಕಾಂತ್ ಹಾಗೂ ಪುಣ್ಯಶ್ರೀಯರಲ್ಲಿ ಮನಸ್ತಾಪವಾಗಿತ್ತು. ಅವರಿರಲು ಬಾಡಿಗೆ ಮನೆಯ ಅಡ್ವಾನ್ಸ್, ಕಂಪನಿ ಹೊಡಲು ಕೊಟ್ಟ 20 ಲಕ್ಷ ಹಣ, ಅತ್ತೆಗೆ ಹಣ ಕೊಡುತ್ತಿದ್ದ ವಿಚಾರ ತಿಳಿದು ಪುಣ್ಯಶ್ರೀ ತಗ್ಗಿ-ಬಗ್ಗಿ ನಡೆಯಲು ಸಿದ್ಧವಿರಲಿಲ್ಲ. ಅದರ ಜೊತೆಗೆ ಪಾರ್ವತಿ ತನ್ನ ಮಗಳ, ಡಾಕ್ಟರ್ ಅಳಿಯನ ಲಗ್ನ ಪತ್ರಿಕೆಯ ವಿಡಿಯೋ ತೋರಿಸಿದ್ದು ಮತ್ತಷ್ಟು ಮನಸ್ಸು ಕೆರಳಿಸಿತು. ಅಲ್ಲಿ ಸಂತಸ ಪಟ್ಟವರು ಗೋಪಿನಾಥ್ ಒಬ್ಬರೇ.. ಪಾರ್ವತಿ ಹೇಳಿದ ಯಾವುದೋ ಮಾತಿಗೆ ಕೆರಳಿದ ಪುಣ್ಯಶ್ರೀ ಶ್ರೀಕಾಂತನ ಮೇಲೆ ಸಾಕಷ್ಟು ಕೋಪ ತೋರಿದಳು. ಅಲ್ಲಿಗೆ ಅವನ ಅವಳ ಲಗ್ನಪತ್ರಿಕೆ ಮುರಿದುಬಿದ್ದು.. ಅವನ ತಮ್ಮ ಟೀಚರ್ ಆಗಿದ್ದ, ಕಪ್ಪಗಿದ್ದ, ಕುಳ್ಳ ಶ್ರೀವತ್ಸನ ಜೊತೆಗೆ ಆಯಿತು. ಅದಕ್ಕೆ ಕಾರಣವೂ ಇತ್ತು. ಸರಸ್ವತಿಗೆ ತನ್ನ ಮಗಳ ಮೇಲಿದ್ದ ಅಪನಂಬಿಕೆ. ಹೀಗಾಗಿ ತರಾತುರಿಯಲ್ಲಿಯೇ ಲಗ್ನಪತ್ರಿಕೆ ನಿಶ್ಚಯವಾದರೂ.. ಮತ್ತೆ ಪುಣ್ಯಶ್ರೀ ಅವನಿಗೆ ಮನಸೋಲದೆ ಶ್ರೀಕಾಂತನಿಗೆ ಪತ್ರ ಬರೆದರೂ ಸಂಧಾನ ಫಲಿಸಲಿಲ್ಲ. 


ಈ ನಡುವೆ ಪುಣ್ಯಶ್ರೀ ತನ್ನ ದುರ್ಬುದ್ಧಿಯಿಂದ ಚಿನ್ನಿಯ ಮದುವೆ ಕೆಡಿಸಲು ಪ್ರಯತ್ನ ಮಾಡುತ್ತಾಳೆ. ಆ ಪ್ರಯತ್ನವೇನು..? ಅದು ಫಲ ಕೊಟ್ಟಿತೇ..? 


ಶ್ರೀಕಾಂತ್ ತಾನು ಮನಸಾರೆ ಪ್ರೀತಿಸಿರುವ ತನ್ನ ಗೆಳತಿ ಮನೋಹರಿಯನ್ನು ವಿವಾಹವಾಗಿರುವುದಾಗಿ ಪತ್ರ ಬರೆಯುತ್ತಾನೆ. 


ಚಿನ್ನಿ ಡಾಕ್ಟರ್ ಇವರನೊಂದಿಗೆ ಮದುವೆ ತಪ್ಪಿ ಹೋಯಿತೆಂದು, ಬೇರೆಯವನನ್ನು ವಿವಾಹವಾಗುತ್ತಿರುವ ವಿಚಾರ ಕೇಳಿ ಸಂತಸ ಪಟ್ಟ ಪುಣ್ಯಶ್ರೀ ಶ್ರೀವತ್ಸನನ್ನೇ ಮದುವೆಯಾಗುವುದಾಗಿ ಒಪ್ಪುತ್ತಾಳೆ. ಆದರೆ, ಅದು ಸಂತಸದಿಂದಲ್ಲ. 


ಪುಣ್ಯಶ್ರೀ ಹಾಗೂ ಶ್ರೀವತ್ಸರ ವಿವಾಹ ನಡೆದ ನಂತರ ಚಿನ್ನಿಯ ವಿವಾಹ ಮೊದಲು ನಿಶ್ಚಯವಾಗಿದ್ದ ಡಾಕ್ಟರ್ ವರನೊಂದಿಗೆ ನಡೆಯುವುದು ಪುನ್ನಿಗೆ ಆಘಾತ ತರುತ್ತದೆ. ಪುನ್ನಿ ಹಾಗೂ ಶ್ರೀವತ್ಸನ ವಿವಾಹ ಮುರಿದು ಬಿದ್ದದ್ದೇಕೆ..? 


ಇಲ್ಲಿಂದ ಕಾದಂಬರಿಯ ಮತ್ತೊಂದು ರೂಪ ಕಣ್ಣೆದುರಿಗೆ ಬರುತ್ತದೆ. 


ಮನುಷ್ಯನ ಗುಣ-ಸ್ವಭಾವಗಳು ಯಾವಾಗ ಬೇಕಾದರೂ ಬದಲಾಗಬಹುದು. ಹಾಗೆ ಬದಲಾದ ಪಾರ್ವತಿ ಹಾಗೂ ಪುಣ್ಯಶ್ರೀಯರನ್ನು ಕಾಣಬಹುದು. 


ಪುಣ್ಯಶ್ರೀ ಓದಿನಲ್ಲಿ ಆಸಕ್ತಿಯೇ ಇರದೆ ಸುಖದ ಜೀವನ ನಡೆಸುತ್ತಿದ್ದವಳು. ಬದುಕಿನಲ್ಲಿ ನಡೆದ ದುರಂತದಿಂದ ಮತ್ತೆ ಓದಿನತ್ತ ಗಮನಹರಿಸುತ್ತಾಳೆ. ಛಲದಿಂದ ಓದುತ್ತಾಳೆ. ಎಷ್ಟೆಂದರೆ, ಅವಳು ಡಾಕ್ಟರ್ ಆಗಿ ಹೆಸರುವಾಸಿಯಾಗುತ್ತಾಳೆ. ಚಿನ್ನಿ ಡಾಕ್ಟರ್ ವರನನ್ನು ವಿವಾಹವಾದರೆ, ಪುನ್ನಿ ಸ್ವತಃ ಡಾಕ್ಟರ್ ಆಗುತ್ತಾಳೆ. 


ಪ್ರತಿಯೊಂದು ವಿಚಾರದಲ್ಲಿಯೂ ತಮ್ಮ, ತಮ್ಮನ ಹೆಂಡತಿಯನ್ನು ಬಿಟ್ಟು ಕೊಡದಿದ್ದ ಗೋಪಿನಾಥ್ ಸಹ ಪಾರ್ವತಿಯ ಮೇಲೆ ಸಿಡಿಮಿಡಿಯಾಗುವುದೇಕೆ..? 


ಶ್ರೀಕಾಂತ ಹಾಗೂ ಆತನ ಆತನ ತಾಯಿ ಹೆಣೆದ ಜಾಲಕ್ಕೆ ಬಲಿಯಾಗದೆ ಪುಣ್ಯಶ್ರೀ ತಪ್ಪಿಸಿಕೊಂಡ ಬಗೆ ಹೇಗೆ..? ಶ್ರೀಕಾಂತನ ವಿವಾಹದ ಬದುಕು ಹೇಗಿತ್ತು..?


ಡಾಕ್ಟರ್ ಆದ ಪುಣ್ಯಶ್ರೀಯ ವಿವಾಹದ ಕುರಿತು, ಅದರಲ್ಲಿಯೂ ಎರಡನೆಯ ವಿವಾಹದ ಕುರಿತು ಪ್ರಸ್ತಾಪಿಸಿದವರು ಯಾರೆಲ್ಲ..? ಅವಳಿಗೆ ಯಾರೆಲ್ಲ ವರನನ್ನು ತೋರುತ್ತಾರೆ ಹಾಗೂ ಅವರು ಹೇಗಿದ್ದರು..?


ಕೆಲವೊಮ್ಮೆ ಹರೆಯದ ಎಡವಟ್ಟುಗಳಿಂದ ಅಥವಾ ಬುದ್ಧಿ ಸಾಲದ ವಯಸ್ಸಿನಿಂದ ಇಲ್ಲವೇ ಮನೆಯಲ್ಲಿ ತಿದ್ದಿ ಬುದ್ದಿ ಹೇಳದ ತಂದೆ-ತಾಯಿಯಿಂದ, ಅಹಂಕಾರದಿಂದ ಹೀಗೆ ಯಾವುದೋ ಒಂದು ಪ್ರಭಾವದಿಂದ ಹೇಗೋ ಇದ್ದರೂ.. ತನ್ನನ್ನು ತಿದ್ದಿಕೊಂಡು ಬದುಕಿದ ಪುಣ್ಯಶ್ರೀ ಮಾದರಿಯಾಗುತ್ತಾಳೆ. 


ಕಾದಂಬರಿಯ ಮೊದಲಲ್ಲಿ ಇಷ್ಟವಾಗಿದ್ದ ಚಿನ್ನಿ ಕಾದಂಬರಿಯ ಕೊನೆಯಲ್ಲಿ ಹೇಗನಿಸುತ್ತಾಳೆ..?


ಒಳ್ಳೆಯ ಕೆಲಸ ಮಾಡುತ್ತಿದ್ದರೆ ಅದರ ಪ್ರಭಾವವು ಒಳ್ಳೆಯದೇ ಆಗಿರುತ್ತದೆ ಎನ್ನುವಂತೆ ಪುಣ್ಯಶ್ರೀ ಬದುಕಲ್ಲಿ ಯಾವ ವ್ಯಕ್ತಿಯಿಂದ ಒಳ್ಳೆಯ ಹಾದಿ ತೆರೆಯುತ್ತದೆ..?


ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ನಂದಾದೀಪ ನಗುತ್ತಿತ್ತು' ಕಾದಂಬರಿಯನ್ನು. 


ಒಬ್ಬರಿಗೆ ಬದುಕಿನ ಒಂದೊಂದು ಹಂತದಲ್ಲಿ ಜ್ಞಾನೋದಯವಾಗುತ್ತದೆ. ಒಬ್ಬರ ಅನುಭವ ಮತ್ತೊಬ್ಬರದಲ್ಲ. ಅಂತೆಯೇ ಒಬ್ಬರ ನಾಶ ಮತ್ತೊಬ್ಬರ ಸಂತೋಷವಾಗಲಾರದು. "ಒಳಿತಿಗೆ ಜಯ"ವಿದೆ ಎನ್ನುವ ರಾಧಾದೇವಿಯವರ ಈ ಕಾದಂಬರಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ