ಶಾಲೆ ಎಂಬುದು ವಿದ್ಯಾಲಯವಾದರೂ ಸರಸ್ವತಿ ಕೊಠಡಿಗಳಲ್ಲಿ ಮಾತ್ರ ನೆಲೆಸಿರುವುದಿಲ್ಲ. ವಿದ್ಯೆ ಕೂಡಾ ಬರೀ ನಾಲ್ಕು ಕೊಠಡಿಗಳ ಮಧ್ಯದಲ್ಲಿ ಮಾತ್ರ ದೊರೆಯುವುದಿಲ್ಲ ಎಂಬುದು ಅರಿವಾಗಲು ಆ ದಿನವೇ ಬರಬೇಕಾಯ್ತು.
ಅವತ್ತು ಬಂಗಾರಿ ಶಾಲೆಗೆ ಹೊರಟ ಮೊದಲ ದಿನ. ಆಕೆಯನ್ನು ಬಿಡಲು ಹೊರಡುವ ಹಿಂದಿನ ದಿನದಿಂದಲೇ ತಳಮಳ. ಹೇಗೋ ಏನೋ ಎಂಬ ಅಳುಕು.. ಹೊಂದಿಕೊಳ್ಳುವಳೋ ಇಲ್ಲವೋ ಎಂಬ ಆತಂಕ. ಅದನ್ನೆಲ್ಲಾ ಸುಳ್ಳು ಮಾಡುವ ಹಾಗೆ ಅವಳು ಶಾಲೆಗೆ ಹೋಗತೊಡಗಿದಳು. ಒಂದೆರಡು ದಿನ ಮೊದಮೊದಲಿಗೆ ಅತ್ತರೂ ನಂತರದಲ್ಲಿ ಇಷ್ಟಪಟ್ಟೆ ಹೋಗತೊಡಗಿದಳು.
ನಾನೇ ಪ್ರಪಂಚವಾಗಿದ್ದ ಅವಳಿಗೆ ಹೊಸ ಪ್ರಪಂಚ ದೊರೆತಿತ್ತು. ನನ್ನ ಕೈ ಬಿಡಿಸಿಕೊಂಡು ಸ್ನೇಹಿತರೊಡನೆ ಸೇರಲು ತವಕದಿಂದ ತಿರುಗಿಯೂ ನೋಡದೆ ಆಕೆ ಅತ್ತ ಹೋಗುತ್ತಿದ್ದರೆ ನನಗೆ ಜ್ಞಾನೋದಯವಾಗತೊಡಗಿತ್ತು. ಮಕ್ಕಳಿಗೆ ಪೋಷಕರೇ ಪ್ರಪಂಚವಲ್ಲ.. ಹೊಸ ಪ್ರಪಂಚವೇ ಅವರಿಗಾಗಿ ಕಾಯುತ್ತಿದೆ. ಅವರೂ ಅದನ್ನು ಸೃಷ್ಟಿಸಿಕೊಳ್ಳಲು ಕಾತುರರಾಗಿದ್ದಾರೆ ಎಂದು.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ