ಶನಿವಾರ, ಮೇ 16, 2026

ಪ್ರೀತಿಯಿಂದ ಗೆದ್ದ ಕತೆಗಳು (ಪುಸ್ತಕ ಯಾನ - 446)

ಪುಸ್ತಕದ ಶೀರ್ಷಿಕೆ : ಪ್ರೀತಿಯಿಂದ ಗೆದ್ದ ಕತೆಗಳು

ಲೇಖಕರು : ವಿವಿಧ ಲೇಖಕರು

ಪ್ರಕಾಶಕರು : ಸಸಿ ಪ್ರಕಾಶನ

ಪ್ರಥಮ ಮುದ್ರಣ : 2025

ಪುಟಗಳು : 172

ಬೆಲೆ : 160 ರೂ. 


ಪ್ರಜ್ಞಾ ಬುಕ್ ಗ್ಯಾಲರಿ ಮತ್ತು ಸಸಿ ಪ್ರಕಾಶನ ಸಹಯೋಗದಲ್ಲಿ ನಡೆದ ಪ್ರಜ್ಞಾ ಕಥಾ ಸ್ಪರ್ಧೆ 2025ರಲ್ಲಿ ಗೆದ್ದ ಟಾಪ್ 10 ಕಥೆಗಳನ್ನು ನಾವು ಈ ಕಥಾ ಸಂಕಲನದಲ್ಲಿ ಓದಬಹುದು.


ದೇವ(ರ) ದಾಸಿ - ಕಬ್ಬಾಳಪ್ಪ ಮರೂರು : 

ಗಾಳೆಮ್ಮನಿಗೆ ತನ್ನ ಮಗಳು ಮೈ ನೆರೆದದ್ದು ಬಹಳ ಸಂತಸಪಡುವ ವಿಚಾರವಾದದ್ದಕ್ಕೆ ಕಾರಣ ಆಕೆ ದೇವದಾಸಿ. ಮಗಳು ರೋಜಾ ಸ್ಪುರದ್ರೂಪಿ ಹುಡುಗಿ. ಗಾಳೆಮ್ಮನ ಮನೆಗೆ ಬರುತ್ತಿದ್ದ ಎಷ್ಟೋ ಜನರು ಅವಳ ಬಗ್ಗೆ ಕುತೂಹಲದಿಂದ ಕೇಳಿದ್ದುಂಟು. ಅದನ್ನು ಗಮನಿಸುತ್ತಿದ್ದವಳು ಆಕೆ ಮೈ ನೆರೆದರೆ ಮುಂದಿನ ತನ್ನ ಬದುಕು, ಸಂತಸದಿಂದ ಕೂಡಿರುತ್ತದೆ ಎನ್ನುವ ಜೊತೆಗೆ ಅವಳನ್ನು ಕೊಂಚ ಓದಿಸಿದರೆ ದೊಡ್ಡ-ದೊಡ್ಡವರನ್ನು ಅವಳ ಕಾಲಡಿಯಲ್ಲಿ ಬಂದು ಬೀಳುವಂತೆ ಮಾಡಬಹುದು ಎಂಬ ಸಂಚನ್ನೂ ಮಾಡಿದ್ದಳು. ತಾಯಿಯ ಉಪಚಾರ, ಶಾಸ್ತ್ರ-ಸಂಪ್ರದಾಯ ಉಸಿರು ಕಟ್ಟಿಸುವುದರ ಜೊತೆಗೆ ಆಕೆಯ ಉದ್ದೇಶದ ಕುರಿತು ಅನುಮಾನವನ್ನು ಮೂಡಿಸಿತ್ತು. ರೋಜಾಳ ಮುಂದಿನ ಬದುಕು ಹೇಗಿತ್ತು..? ಶಿಕ್ಷಣದ ಮಹತ್ವವೇನು ಹಾಗೂ ದೇವದಾಸಿಯರ ಬದುಕಿನ ಚಿತ್ರಣ ಹೇಗಿರುತ್ತದೆ ಎಲ್ಲವನ್ನು ತೋರುವ ಕಥೆ ಇದು.


ಮುನಾವರ್ ಚಾಯ್ ಸ್ಟಾಲ್ - ವಿನಾಯಕ ಅರಳಸುರಳಿ : 

ಮೃಗಶಿರನ ಚಾಯ್ ಸ್ಟಾಲ್ ಎಷ್ಟು ಫೇಮಸ್ ಆಗಿತ್ತು ಹಾಗೂ ಎಂತಹ ಗ್ರಾಹಕರಿದ್ದರು ಎಂಬುದರಿಂದ ಶುರುವಾಗುವ ಈ ಕಥೆಯಲ್ಲಿ ಆತನ ಬದುಕಿನ ಕಷ್ಟದ ಅಧ್ಯಾಯ ಹಾಗೂ ಆತನ ಮನೆಯಲ್ಲಿ ಆತನಿಗೆ ಸಿಗುತ್ತಿದ್ದ ಗೌರವವೇನು ಎಂಬುದೂ ತೆರೆದುಕೊಳ್ಳುತ್ತಾ ಸಾಗುತ್ತದೆ. ಆದರೆ ಮೃಗಶಿರನಿಗೆ ಹೆಚ್ಚು ಬಾಧಿಸುತ್ತಿದ್ದು ಅವನಲ್ಲಿಯೇ ಹುಟ್ಟುತ್ತಿದ್ದ ಪಶ್ಚಾತ್ತಾಪ. ಹೀಗಿದ್ದ ಮೃಗಶಿರನಿಗೆ ವ್ಯವಹಾರದ ಸ್ಥಳದಲ್ಲಿ ತಾತ ಎಂದು ಕರೆದ ಮುನಾವರ ಪರಿಚಯವಾಗುತ್ತಾನೆ. ಮೃಗಶಿರನ ಚಾಯ್ ಸ್ವಾಲ್ ಮುನಾವರನದ್ದೇ ಎಂಬಂತೆ ನಡೆಯುವವನು, ಆತನ ಬದುಕಲ್ಲಿಯೂ ಆವರಿಸಿಕೊಳ್ಳುವ ಪರಿಯ ಮುನಾವರ್, ಮೃಗಶಿರ ಹಾಗೂ ಚಾಯ್ ಸ್ಟಾಲ್ ಕಥೆ ಓದಿ ನೋಡಿ. ಈ ಕಥೆ ನನಗೆ ಬಹಳ ಇಷ್ಟವಾಯಿತು.


ತಿಕ್ಕಲು ಬುಡ್ಡಿ - ಸುಮಾ ರಮೇಶ್ : 

ಮಾಜಿ ಸಚಿವರಾದ ಶ್ರೀ ಗುರುಸಿದ್ದಪ್ಪನವರ ಮಗ ಸಚಿನ್ ನ ತಲೆಯ ಮೇಲೆ ಆಕ್ರಮಣ ಮಾಡಿದ ಇಳಿ ವಯಸ್ಸಿನ ಮಾನಸಿಕ ಅಸ್ವಸ್ಥೆಯನ್ನು ಪೊಲೀಸರು ಬಂಧಿಸಿ ಕರೆದೊಯ್ಯುವ ಹಾಗೂ ಆಗ ಏನಾಯಿತು ಎಂದು ಬಿತ್ತರಿಸುತ್ತಿದ್ದ ಸುದ್ದಿ ಕೇಳಿದ ವಿಭಾಳಿಗೆ ಆಘಾತ, ನೋವು, ಹತಾಷೆ ಎಲ್ಲವೂ ಹುಟ್ಟಿತ್ತು.

ಅಷ್ಟಕ್ಕೂ ತಿಕ್ಕಲು ಬುಡ್ಡಿ ವಿಭಾಳಿಗೆ ಯಾವ ರೀತಿಯ ಪರಿಚಯ? ತನ್ನ ರೆಸ್ಟ್ ಅನ್ನೋ ಮೀರಿ ವಿಭಾ ತಲೆಕೆಡಿಸಿಕೊಳ್ಳುವಂತಹ ವಿಚಾರವಾದರೂ ಏನಿತ್ತು..?

ಬೇರೆಯವರಿಗೆ ಮಾನಸಿಕ ಅಸ್ವಸ್ಥೆಯಂತೆ ಕಾಣುವ ತಿಕ್ಕಲು ಬುಡ್ಡಿಯ ನಿಜ ಸ್ವರೂಪವಾದರೂ ಏನು..? ಓದಿ ನೋಡಿ.


ಸುಪ್ತ ಶರಧಿಯ ಸೇರುವ ಸಮಯ - ದೇವೇಂದ್ರ ಅಬ್ಬಿಗೇರಿ :

ಮೂರು ಭಾಗದಲ್ಲಿ ಸಾಗುವ ಈ ಕಥೆಯಲ್ಲಿ ಸಿಡ್ ನ ಬದುಕು ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಸಿಡ್ ನ ವೈಯಕ್ತಿಕ ಬದುಕು ಸಾಫ್ಟ್ವೇರ್ ಇಂಜಿನಿಯರ್ ಒಬ್ಬರ ಬದುಕಿಗೆ ಸಾಕಷ್ಟು ಹೊಂದಿಕೆಯಾಗುವ ಚಿತ್ರಣಗಳನ್ನು ಹೊತ್ತುಕೊಂಡಿದೆ. ಅಷ್ಟಕ್ಕೂ ಸಿಡ್ ಈಗ ಡಾ. ಪ್ರಿಯಾ ಬಳಿ ಕೌನ್ಸಿಲಿಂಗ್ ತೆಗೆದುಕೊಳ್ಳುತ್ತಿದ್ದ. ಅಷ್ಟಕ್ಕೂ ಆತನನ್ನು ಬಾಧಿಸುತ್ತಿದ್ದ ಸಮಸ್ಯೆಯೇನು? ಹಾಗೂ ಪ್ರಿಯಾ ಆತನಿಗೆ ಕೊಟ್ಟ ಸಲಹೆ ಏನು? ಓದಿ ನೋಡಿ.


ಕಳಲೆ ಕಮಲಾಕ್ಷ - ಎಂ ಮನೋಹರ ಪೈ :

ಮಳೆಗಾಲ ಆರಂಭವಾಯಿತೆಂದರೆ ಸುತ್ತುರ್ಕಿಯ ಗಂಡಸರು ಪಚ್ಚಮಲೆಗೆ ಹೋಗಿ ಕಳಲೆ ಕತ್ತರಿಸಿ ತಂದು, ಕರಿಯೂರಿಗೆ ಹೋಗಿ ಕಳಲೆ ಮಾರಿ ಸಿಕ್ಕ ಹಣದಲ್ಲಿ ಮಳೆಗಾಲದ ಖರ್ಚು ಕಳೆಯುತ್ತಿದ್ದರು. ಹೀಗೆ ಬಿದಿರು ಬುಟ್ಟಿ ಹಿಡಿದುಕೊಂಡು ಪಚ್ಚಮಲೆಯನ್ನು ಪ್ರವೇಶಿಸುತ್ತಿದ್ದ ಗಂಡಸರಲ್ಲಿ ಕಮಲಾಕ್ಷನೂ ಒಬ್ಬ. ಎಲ್ಲರಂತೆ ಆತನು ಒಬ್ಬನಾಗಿದ್ದರೆ ಈ ಕಥೆ ಹುಟ್ಟುತ್ತಿರಲಿಲ್ಲವೇನೋ..! ಆದರೆ, ಕರಿಯೂರಿನ ಮನೆಗಳಲ್ಲಿ ಕಳಲೆ ಕಮಲಾಕ್ಷ ಎಂದೇ ಗುರುತಿಸಲ್ಪಡುತ್ತಿದ್ದ ಆತ ಆ ಹೆಸರು ಪಡೆದದ್ದಾದರೂ ಹೇಗೆ..? ಇತ್ತೀಚಿನ ದಿನಗಳಲ್ಲಿ ಪಚ್ಚಮಲೆಯ ಕಾಡಿನಿಂದ ಕಳಲೆ ತರುವುದು ಸುಲಭದ ಕೆಲಸವಾಗಿರಲಿಲ್ಲವೇಕೆ..? ಕಮಲಾಕ್ಷನ ಓದು ಹಾಗೂ ಆತನ ಯೌವ್ವನದ ದಿನಗಳು ಹೇಗಿದ್ದವು..? ಕಮಲಾಕ್ಷ ಮುಖ್ಯರಸ್ತೆಗೆ ಹೋಗದೆ ಅಡ್ಡದಾರಿ ಇಳಿದು ಪಚ್ಚಮಲೆಯತ್ತ ಹೋದ ದಿನ ಏನಾಯಿತು..? ಸಾಕಷ್ಟು ಕುತೂಹಲ ಹಾಗೂ ರೋಚಕತೆಯ ಜಾಡಿನಲ್ಲಿ ಸಾಗುವ ಈ ಕಥೆಯ ಅಂತ್ಯ ಊಹಿಸಲು ಸುಲಭವೇನಲ್ಲ. ಆಸಕ್ತಿಕರ ಕಥೆಯನ್ನು ಓದಿ ನೋಡಿ.


ಖಂಡವಿದೆಕೋ, ಮಾಂಸವಿದೆಕೋ - ಸಂತೆಬೆನ್ನೂರು ಫೈಜ್ನಟ್ರಾಜ್ :

ಅಲ್ಲಾಭಕ್ಷಿ-ದಿಲ್ಷಾದ್ ದಂಪತಿಗಳ ಒಬ್ಬಳೇ ಮಗಳು ರಜಿಯಾ 7ನೇ ತರಗತಿ ಓದುತ್ತಿದ್ದಳು. ಬಕ್ರೀದ್ ಹಬ್ಬಕ್ಕೆ ಐದಾರು ದಿನ ಉಳಿದಿರುವಾಗ ಸಣ್ಣ ಹುಡುಗಿ ಅಪ್ಪನನ್ನು ಗದರಿಸುತ್ತಿದ್ದಳು. "ಮುನ್ನಿಯನ್ನು ಮಾತ್ರ ಕೊಡುವುದಿಲ್ಲ. ನಮಗೆ ಹಬ್ಬ, ಬಟ್ಟೆ, ಮಾಂಸ ಯಾವುದೂ ಬೇಡ" ಎನ್ನುತ್ತಿದ್ದ ರಜಿಯಾ ಹಾಗೂ ಮುನ್ನಿಯ ಸಂಬಂಧ ಹೇಗಿತ್ತು..? ಪ್ರೀತಿಗೆ ಭಾಷೆ ಇಲ್ಲ ಎಂಬಂತಿದ್ದ ಮುನ್ನಿ ಹಾಗೂ ರಜಿಯಾರ ಸಂಬಂಧ ಹೇಗಿತ್ತು..? ಮುನ್ನಿಯನ್ನು ಇಲ್ಲಿ ಕೇವಲ ಹಸುವಿನಂತೆ ಮಾತ್ರ ಭಾವಿಸದ ರಜಿಯಾಯ ಮನಸಲ್ಲಿ ಪುಣ್ಯಕೋಟಿಯ ಕಥೆ ಹೇಗೆ ಕಾಣುತ್ತಿತ್ತು..? ಮಗಳ ಬೇಡಿಕೆಗೆ ಮಣಿಯದ ಅಲ್ಲಾಭಕ್ಷಿಯ ನಡೆ ಯಾವೆಲ್ಲಾ ಬದಲಾವಣೆಗೆ ಕಾರಣವಾಯಿತು..? ರಜಿಯಾ ಕಂಡದ್ದು ಕನಸೋ, ನನಸೋ, ಭ್ರಮೆಯೋ ಓದಿ ನೋಡಿ.


ಸಾಮಂತ್ರಿ - ದಿವ್ಯಶ್ರೀ ಅದರಂತೆ : 

ಸಾಮಂತ್ರಿಯ ಗಂಡ ವಿಷ ಕುಡಿದು ಸತ್ತು ಮನೆಗೆ ಮುಳುವಾಗಿದ್ದನು. ಆದರೆ, ಯಾವುದಕ್ಕೂ ಜಗ್ಗದೆ ಮನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಳು ಸಾಮಂತ್ರಿ. ಸಾಮಂತ್ರಿ ತನ್ನ ಗಂಡ ಸತ್ತು ಒಂದು ವರ್ಷದ ನಂತರ ದೊಡ್ಡ ಮಗಳನ್ನು ಮದುವೆ ಮಾಡಿದ್ದಳು. ಜವಾಬ್ದಾರಿಯುತ ಅಳಿಯ ಸಿಕ್ಕಿದ್ದು ಅವಳಿಗೆ ಖುಷಿ. ಅತ್ತೆಯ ಮನೆಯ ಪರಿಸ್ಥಿತಿಗೆ ಹೆಗಲಾಗಿ ನಿಲ್ಲುವುದು ಆತನಿಗೆ ಅನಿವಾರ್ಯವೆಂದರೂ ತಪ್ಪಾಗಲಾರದು. ಆದರೂ.. ಬೆಸರಿಸಿಕೊಳ್ಳದೆ ಹೆಗಲಾಗುತ್ತಿದ್ದ. 

ಒಂದು ಭಾನುವಾರ ಕಾಡಿಗೆ ಹೋಗಿ ಬೆಳಿಗ್ಗೆ 9 ರಿಂದ ಸಂಜೆ 6 ರ ಒಳಗೆ ಕಟ್ಟಿಗೆ ಕಟ್ಟಿಕೊಂಡು ಕಾಡಿನಿಂದ ಹೊರ ಬರಬೇಕು. ಮನೆಗೆ ಇಬ್ಬರು ಮಾತ್ರ ಹೋಗಬೇಕು ಎಂದು ಸಾರಿದ ಮಾತಿಗೆ ಸಾಮಂತ್ರಿಯ ಅಳಿಯನನ್ನು ಜೊತೆ ಮಾಡಿಕೊಂಡು ಹೊರಟಳಾದರೂ ಅವಳಿಗೆ ಎದುರಾದ ಸವಾಲುಗಳೇನು..? ಅವೆಲ್ಲವನ್ನೂ ಯಾವ ರೀತಿ ನಿಭಾಯಿಸಿದಳು..? ಹೆಣ್ಣು ಎಂದರೆ ಕಡಿಮೆ ಎಂದು ಅಂದಾಜಿಸುವಂತೆಯೇ ಇಲ್ಲ. ಇಲ್ಲಿ ಸಾಮಂತ್ರಿಯ ಪ್ರತಿಕ್ರಿಯೆ ಹೇಗಿತ್ತು..?


ವೃತ್ತ - ಟಿ. ಎಂ. ರಮೇಶ್ :

ಒಂದು ವರ್ಷದ ಹಿಂದೆ ಟಿಪ್ ಟಾಪ್ ಆಗಿ ದೊಡ್ಡ ಕಾರೊಂದರಲ್ಲಿ ಬಂದಿಳಿದಿದ್ದ ಗೆಳೆಯ ಅದೃಷ್ಟವಂತನೂ ಆಗಿದ್ದು .. ಆತನ ಮಾತನ್ನು ನಂಬಿಕೊಂಡು ಆತ ಕೊಟ್ಟಿದ್ದ ವಿಳಾಸಕ್ಕೆ ಬಂದಿದ್ದ ಬರಮ ರಿಯಲ್ ಎಸ್ಟೇಟ್ ಮತ್ತು ಕಂಟ್ರಾಕ್ಟ್ ಬ್ಯುಸಿನೆಸ್ ಮನ್ ಆಗಿದ್ದ ಗೆಳೆಯ ಶ್ರೀಕೃಷ್ಣನನ್ನು ಭೇಟಿಯಾಗಿದ್ದ. ಗೆಳೆಯನನ್ನು ಆತ ಬರಮಾಡಿಕೊಂಡದ್ದು ಹೇಗೆ..? ತನ್ನ ಹೆಂಡತಿ ಲಚುಮಿಗೆ ಏನೆಂದು ಭರವಸೆ ಕೊಟ್ಟು ಬಂದಿದ್ದ ಬರಮ..? ಈ ಸ್ನೇಹ ಹಾಗೂ ಸಂದರ್ಭ ಹೇಗಿದ್ದವು ಓದಿ ನೋಡಿ.


ಡೆಡ್ ಲೈನ್ ಮತ್ತು ಡಿನ್ನರ್ - ಶ್ವೇತಾ ನರಗುಂದ :

ಕಾರ್ಪೊರೇಟ್ ಫೀಲ್ಡ್ ನಲ್ಲಿಯೇ ಇದ್ದ ಇಬ್ಬರು ದಂಪತಿಗಳು ಆರತಿ ಹಾಗೂ ಅಭಿಷೇಕ್. ಮೀಟಿಂಗ್, ಟಾಸ್ಕ್ ಅಪ್ಡೇಟ್, ಪರ್ಫಾರ್ಮೆನ್ಸ್, ರಿವ್ಯೂ ಎಂದೆಲ್ಲಾ ಕೆಲಸದಲ್ಲಿಯೇ ಮುಳುಗಿ ಏಳುತ್ತಿದ್ದಾಗ ತಮ್ಮಿಬ್ಬರ ನಡುವೆ ಮೂಡುತ್ತಿದ್ದ ಕಂದಕವನ್ನು ಗಮನಿಸಿದವಳು ಆರತಿ. ಶೇರ್ಡ್ ಸ್ಪೇಸ್ ವರ್ಕರ್ಸ್ ನಂತಾಗಿದ್ದೇವೆ ಎನಿಸಿದಾಗ ಅದನ್ನು ನೇರವಾಗಿಯೇ ಬಿಚ್ಚಿಟ್ಟಳಾದರೂ ಅಭಿಷೇಕ್ ಅದಕ್ಕೆ ಪ್ರತಿಕ್ರಿಸಿದ ಬಗೆಯೇ ಬೇರೆಯಿತ್ತು. ಇಬ್ಬರಲ್ಲಿ ಮೊದಲು ಎಚ್ಚೆತ್ತ ಆರತಿಗೆ ಮನಸ್ಸಿಗೆ ಬಂದ ವಿಚಾರಗಳು ಏನಿದ್ದವು..? ಅಭಿಷೇಕ್ ನನ್ನು ಕನ್ವೆನ್ಸ್ ಮಾಡುವುದರಲ್ಲಿ ಆರತಿ ಎಷ್ಟು ಸಫಲಳಾದಳು..? ಓಡುವ ಬೆಂಗಳೂರಿನ ವೇಗಕ್ಕೆ ಸಮನಾಗಿ ಓಡಲು ಪ್ರಯತ್ನಿಸುವ ಕಾರ್ಪೊರೇಟ್ ದಂಪತಿಗಳ ಕಥೆ ಇದು. ವೇಗ, ಕಾರ್ಯಕ್ಷಮತೆ, ಸಾಧನೆ, ಫಲಿತಾಂಶ ಎಂದೆಲ್ಲಾ ಓಡುವಾಗ ವೈಯಕ್ತಿಕ ಬದುಕಿಗೆ ಎಷ್ಟು ಸ್ಪೇಸ್ ಬೇಕು ಎನ್ನುವುದನ್ನು ಅರ್ಥ ಮಾಡಿಸುವ ಕಥೆ ಇಲ್ಲಿದೆ.


ಬೆಂಕಿ ಮತ್ತು ಬಾವಿ - ಡಾ. ಭದ್ರಪ್ಪ ಶಿ ಹೆನ್ಲಿ

40 ವರ್ಷಗಳ ಹಿಂದೆ ಇದ್ದ ಕಣ್ಣಾ ಪಂಡಿತರ ಮನೆಯನ್ನು ಹುಡುಕಿ ಬಂದವನಿಗೆ ಕೊನೆಗೂ ಜಾನಕಿ ಅಜ್ಜಿ ಸಿಕ್ಕಿದಳು. ಜಾನಕಿ ಅಚ್ಚಿಯಿಂದ ತಿಳಿದದ್ದು ಪಂಡಿತರು ಮೃತರಾಗಿ ಮೂರು ದಿನ ಕಳೆದಿದ್ದವು. ಕಣ್ಣಾ ಪಂಡಿತರ ಸನಾತನ ಧರ್ಮವನ್ನು ಧಿಕ್ಕರಿಸಿ ನಡೆದ ಮಗ ಏನಾದ..? ಕಾಲವೇ ಎಲ್ಲವನ್ನು ಮರೆಸಬಹುದೆಂದು ಅಜ್ಞಾತನಾದವನಿಗೆ.. ಅವರು ಆತನನ್ನು ಮರೆತಾಗ ಸನ್ನಿವೇಶಗಳು ಆತನ ಬದುಕಲ್ಲಿ ಏನೆಲ್ಲಾ ಆಟ ಆಡಿದವು..? ಕಣ್ಣಾ ಪಂಡಿತರ ಸಂಸಾರಸೌಧ ಕುಸಿದ ಬಗೆ ಹೇಗೆ..?

ಸಂಬಂಧಗಳಿಗೆ ಸಾವಿಲ್ಲವೆಂದು ಬರೆದ ತಂದೆಯ ಪತ್ರ ಮಗನಿಗೆ ಸೇರಿತೇ? ಸಾಮಾಜಿಕ ನ್ಯಾಯವೆಂದು ಅಲೆದಾಡಿದ್ದ ಮಗ ಹೇಗಿದ್ದ..? ಈ ದುರಂತಗಾಥೆ ಯಾರದ್ದಾದರೂ ಬದುಕಲ್ಲಿ ಪರಿವರ್ತನೆ ತರಬಹುದು ಓದಿ ನೋಡಿ.


ವಿವಿಧ ಲೇಖಕರ ವಿಭಿನ್ನ ಕತೆಗಳ ಚೆಂದದ ಕಥಾಲೋಕ ಇಲ್ಲಿದೆ. ಸ್ಪರ್ಧಾ ಕತೆಗಳ ಕುರಿತ ಕುತೂಹಲ ಉಳ್ಳವರು ಓದಬಹುದಾದ ಕಥಾ ಸಂಕಲನ ಇದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ