ಪುಸ್ತಕದ ಶೀರ್ಷಿಕೆ : ನಭದ ನಕ್ಷತ್ರ
ಲೇಖಕರು : ಹೆಚ್. ಕೆ ಅನುಸೂಯ ಸಂಪತ್
ಪ್ರಕಾಶಕರು : ವಿಕ್ರಂ ಪ್ರಕಾಶನ
ಪ್ರಥಮ ಮುದ್ರಣ : 1994
ಇದು ವಸಂತದ ಚಿಗುರು ಮತ್ತು ನಭದ ನಕ್ಷತ್ರ ಎಂಬ ಎರಡು ಕಾದಂಬರಿಗಳ ಸಂಯುಕ್ತ ಸಂಪುಟ. ನಾನೀಗ ಆಯ್ಕೆ ಮಾಡಿಕೊಂಡಿರುವ ಕಾದಂಬರಿ ನಭದ ನಕ್ಷತ್ರ.
ಇಂದಿರಾ ರಾವ್ ಅವರು 'ವಿವಾಹ ಸದನ' ಸ್ಥಾಪಿಸಿದಾಗಿನಿಂದ ಹಲವಾರು ಯುವಕ ಯುವತಿಯರನ್ನು ನೋಡಿದ್ದರೂ.. "ವಿಧವೆಯನ್ನು ಮದುವೆಯಾಗಲು ಇಚ್ಚಿಸುತ್ತೇನೆ" ಎಂದು ಬರೆದಿದ್ದ ವಿಭಿನ್ನ ವ್ಯಕ್ತಿಯನ್ನು ಭೇಟಿಯಾಗಿ ಅವನ ಮನದ ಮಾತನ್ನು ತಿಳಿದುಕೊಳ್ಳುತ್ತಿದ್ದರು. ಹಾಗೆ ಆಶಿಸಿದ್ದ ವ್ಯಕ್ತಿ ಪ್ರಸಾದ್. ತಂದೆ-ತಾಯಿ ಇಲ್ಲದ, 35 ವರ್ಷ ವಯಸ್ಸಿನ ಪದವೀಧರನಾಗಿದ್ದ ಆತನಿಗೆ ಆಸ್ತಿಯೂ ಇರಲಿಲ್ಲ. ಖಾಸಗಿ ಕಂಪನಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ.
ಇಂದಿರಾ ರಾವ್ ಅವರಿಗೆ ಪ್ರಸಾದ್ ನೋಡಲು ಸ್ಪುರದ್ರೂಪಿಯಾಗಿ ಹಾಗೂ ಸದ್ಗುಣವಂತನಾಗಿ ಕಂಡು ಅವರ ಮನಸ್ಸಿನಲ್ಲಿ ಆತನಿಗೆ ತಕ್ಕ ಹುಡುಗಿ ಪ್ರಭಾ ಎಂದೆನಿಸಿತು. ಅವರ ನೆರೆಮನೆಯವರೇ ಆಗಿದ್ದ ಪ್ರಭಾಳನ್ನು 10 ವರ್ಷದವಳಾಗಿದ್ದಾಗಿನಿಂದಲೂ ಕಂಡಿದ್ದರು. ವಿದ್ಯಾವಂತ, ಶ್ರೀಮಂತ, ಸ್ಫುರದ್ರೂಪಿ ಗಂಡನನ್ನು ಪಡೆದ ಪ್ರಭಾಳ ಪುಣ್ಯ ಅವಳ ಬಾಳಿನಲ್ಲಿ ಉಳಿದದ್ದು ಕೇವಲ ಐದು ವರ್ಷವಷ್ಟೇ.. ಎರಡು ವರ್ಷದ ಗಂಡು ಮಗು ನವೀನ್ ತಾಯಿಯಾಗಿದ್ದ ಅವಳು ಈಗ ನೋವನ್ನು ನುಂಗಿ ಮಗನಿಗಾಗಿ ಬದುಕುತ್ತಿದ್ದಳು. ಅವಳ ಬದಲಾದ ಬದುಕನ್ನು ನೋಡಿ ಮರುಗುತ್ತಿದ್ದವರಲ್ಲಿ ಇವರೂ ಒಬ್ಬರು.
ಈಗ ಪ್ರಸಾದನ ಮಾತಿನಿಂದ, ಪ್ರಭಾಳ ಮರು ವಿವಾಹವಾದರೆ ಎಂಬ ಆಶಾಕಿರಣದಿಂದ ಅವಳ ಜೊತೆ ಮಾತನಾಡಿದರು. ಆದರೆ, ಅವಳು ಆಸಕ್ತಿ ತೋರಲಿಲ್ಲ. ಬಿ.ಎಸ್ಸಿ ಆಗಿದೆ. ಹೇಗಾದರೂ ಕೆಲಸ ಹುಡುಕಿಕೊಂಡು ಜೀವನ ರೂಪಿಸಿಕೊಳ್ಳುವೆ ಎಂದೇ ಹೇಳಿದ್ದಳು. ಮೊದಲ ಪತಿ ರಾಜುವನ್ನು ಮರೆಯಲು ಅವಳಿಗೆ ಸಾಧ್ಯವಾಗಿರಲಿಲ್ಲ. ಅಲ್ಲದೆ, ಅಪಾರ ಪ್ರೇಮ ಕೊಟ್ಟಿದ್ದ ಗಂಡನ ಜಾಗದಲ್ಲಿ ಹಾಗೂ ಮಗನ ತಂದೆಯಾಗಿ ಬೇರೆಯವರನ್ನು ಊಹಿಸಿಕೊಳ್ಳಲು ಅವಳಿಗೆ ಇಷ್ಟವಿರಲಿಲ್ಲ.
ಆದರೆ, ಪ್ರಭಾಳ ತಂದೆ ಅವಳ ಮರು ವಿವಾಹಕ್ಕೆ ಒಪ್ಪಿಗೆ ಕೊಡುತ್ತಾರೆ. ಈಗ ವಾತ್ಸಲ್ಯ ತೋರುವ ಅಣ್ಣ-ಅತ್ತಿಗೆಯರು ಈಗಿನಂತೆಯೇ ಮುಂದೆಯೂ ನೋಡಿಕೊಳ್ಳುತ್ತಾರಾ..? ತಂದೆ ಹೋದ ನಂತರ ಭವಿಷ್ಯ ಯಾವ ರೀತಿ ಇರುತ್ತದೆ ಎಂಬೆಲ್ಲಾ ಆಲೋಚನೆಗಳು ಬಂದರೂ ಕೊನೆಗೆ ಅಳೆದು ತೂಗಿ ಪ್ರಸಾದ್ ನನ್ನು ಭೇಟಿಯಾಗಲು ಒಪ್ಪಿದ್ದಳು. ಮಾತುಕತೆಯ ನಂತರ ತನ್ನ ನಿರ್ಧಾರವನ್ನು ತಂದೆಗೆ ಬಿಟ್ಟಾಗ ಪ್ರಭಾಳ ತಂದೆ ಮತ್ತು ಅಣ್ಣ ಈ ವಿವಾಹಕ್ಕೆ ಒಪ್ಪಿಗೆ ಕೊಟ್ಟರು.
ಇಂತಹ ಮರು ವಿವಾಹಗಳು ನಡೆದಾಗ ಭೂತದ ನೆನಪುಗಳನ್ನು ಇಷ್ಟವಿಲ್ಲದಿದ್ದರೂ ಮರೆಯಬೇಕಾಗಿ ಬರುತ್ತದೆ. ಭವಿಷ್ಯದ ಸುಖ ಕಾಣುವ ಆಸೆಯಿಂದ.. ಧೈರ್ಯ ಮಾಡಿ ಹೊಸ ಬದುಕಿಗೆ ಹೆಜ್ಜೆ ಇರಿಸಿದ್ದ ಪ್ರಭಾ ಈಗ ಇಬ್ಬಂದಿತನದಲ್ಲಿ ನಲುಗಬೇಕಾಗಿತ್ತು.
ತಂದೆಯ ಪ್ರೀತಿಯನ್ನೇ ಅರಿಯದ ನವೀನ್ ಪಾಲಿಗೆ ಈಗ ಪ್ರಸಾದ್ ಬಂದದ್ದು ಹೆಚ್ಚಿನ ಖುಷಿ ಕೊಟ್ಟಿತ್ತು. ಹಾಗಾಗಿ ಆತನ ಬೇಡಿಕೆಗಳು ಪ್ರಸಾದ್ ಬಳಿಯಲ್ಲಿ ಹೆಚ್ಚೇ ಇದ್ದವೋ. ಆದರೆ, ಪ್ರಸಾದ್ ನ ಸ್ವಭಾವ ವಿಭಿನ್ನವಾಗಿತ್ತು. ತಾನು ಹೇಳಿದ ಹಾಗೆ ಕೇಳಿಕೊಂಡು ವಿಧೇಯತೆಯಿಂದ ಇರಬೇಕಾಗಿತ್ತು. ಇಲ್ಲದಿದ್ದರೆ ರೌದ್ರಾವತಾರ ತೋರುತ್ತಿದ್ದ. ಮಗುವಿನ ಹಠ ಹಾಗೂ ಗಂಡನ ಮುನಿಸು ಇವೆರಡನ್ನು ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದಳು ಪ್ರಭಾ.
ಚಿಕ್ಕ ಮಗುವಾದ್ದರಿಂದ ಹಾಗೂ ಪ್ರಭಾಳ ಪೂರ್ತಿ ಗಮನ ಇಷ್ಟು ದಿನವೂ ತನ್ನದೇ ಇದ್ದುದರಿಂದ ನವೀನ್ ಅವಳನ್ನು ಹೆಚ್ಚಾಗಿ ಅಂಟಿಕೊಳ್ಳುತ್ತಿದ್ದ. ಪ್ರಸಾದ್ ಅರ್ಥಮಾಡಿಕೊಳ್ಳದೆ, ಬೇರೆಯದ್ದೇ ರೀತಿಯ ವ್ಯಂಗ್ಯದ ಚಾವಟಿಗಳನ್ನು ಪ್ರಭಾಳಗೆ ಬೀಸುತ್ತಿದ್ದ.
ಪ್ರಸಾದ್ ಪ್ರೀತಿ ಬೇರೆಯದ್ದೇ ತರಹ. ಚೆನ್ನಾಗಿದ್ದರೆ ಅತಿ ಪ್ರೀತಿ. ಇಲ್ಲವಾದಲ್ಲಿ ಕೊಂಕು ಮಾತುಗಳಿಂದಲೇ ಹಿಂಸಿಸುತ್ತಿದ್ದ. ಮೊದಮೊದಲಿಗೆ ಚೆನ್ನಾಗಿಯೇ ಸಾಗುತ್ತಿದ್ದ ಸಂಸಾರವನ್ನು ಕಂಡು ಪ್ರಭಾಳ ತಂದೆ ಹಾಗೂ ಇಂದಿರಾ ರಾವ್ ಅವರಿಗೆ ತಮ್ಮ ನಿರ್ಧಾರ ಕಂಡು ಸಮಾಧಾನವಾಗಿತ್ತು. ಮೊದಲ ಶ್ರೀಮಂತಿಕೆಯನ್ನೇನೂ ಅಪೇಕ್ಷಿಸದೆ.. ಇದ್ದುದರಲ್ಲಿಯೇ ಎಲ್ಲವನ್ನೂ ಅಣಿ ಮಾಡಿಕೊಂಡು, ಬರುವ ಸಂಬಳದಲ್ಲಿಯೇ ಮನೆ ತೂಗಿಸಲು ಪ್ರಭಾ ಹೊಂದಿಕೊಂಡಳು.
ನವೀನ್ ಖರ್ಚನ್ನು ಪ್ರಸಾದ್ ನಿಭಾಯಿಸಿದ ಅವಶ್ಯಕತೆ ಇರಲಿಲ್ಲ. ಆತನಿಗೆ ಅವನ ತಂದೆ ಭವಿಷ್ಯಕ್ಕೆ ಬೇಕಾದಷ್ಟು ಹಣವನ್ನು ಬಿಟ್ಟು ಹೋಗಿದ್ದರು. ಹೀಗಾಗಿ ಮಗುವಿಗೆ ಖರ್ಚುಗಳಿಗೆ ಪ್ರಸಾದನನ್ನು ಅವಲಂಬಿಸುವಂತಿರಲಿಲ್ಲ. ಪ್ರಭಾ ಆ ಕುರಿತು ಆತನಿಗೆ ಸ್ಪಷ್ಟಪಡಿಸಿದ್ದಳು ಸಹ. ಕೆಲವು ದಿನ ಸುಮ್ಮನಿದ್ದ ಪ್ರಸಾದ್ ತಾನೊಂದು ಸೈಟ್ ಕೊಳ್ಳಲು ರಾಜು ಇಟ್ಟಿದ್ದ ಹಣದಲ್ಲಿ 10,000 ರೂ. ಸಾಲದಂತೆ ಕೊಟ್ಟರೆ, ಬಡ್ಡಿ ಸಮೇತ ವಾಪಸ್ ಮಾಡುತ್ತೇನೆ ಎನ್ನುವ ಬೇಡಿಕೆ ಇಟ್ಟಾಗ ಪ್ರಭಾಳ ಮನಸ್ಸು ಡೋಲಾಯಮಾನವಾಗಿತ್ತು.
ಆಸೆ ಸಂಧರ್ಭದಲ್ಲಿ ಪ್ರಭಾ ರಾಜುವಿನ ತಮ್ಮನ ಕುರಿತು ಹೇಳುತ್ತಾಳೆ. ಆಗ ಪ್ರಸಾದನ ಪ್ರತಿಕ್ರಿಯೆ ಹೇಗಿತ್ತು..?
ಹಣದ ಅವಶ್ಯಕತೆ ಮನುಷ್ಯನನ್ನು ಯಾವ ರೀತಿ ಬೇಕಾದರೂ ಬದಲಾಯಿಸಬಲ್ಲದು. ಹಣ ಕೊಡಲು ಸ್ಪಷ್ಟವಾಗಿ ನಿರಾಕರಿಸಿದ ಪ್ರಭಾಳ ನಡೆಯಿಂದಾಗಿ ಪ್ರಸಾದ್ ಸಂಪೂರ್ಣವಾಗಿ ಬದಲಾದ. ತನ್ನ ಸ್ವಾರ್ಥವನ್ನು ತ್ಯಾಗ ಮಾಡಿ ವಿಧವೆಯನ್ನು ಕಟ್ಟಿಕೊಂಡು ಈಕೆಯನ್ನು ಉದ್ದಾರ ಮಾಡಲು ಹೊರಟರೆ, ಇವಳು ಕೊಡುವ ಬೆಲೆ ಇಷ್ಟೆಯಾ..? ಎಂದೆಲ್ಲಾ ಮಾತನಾಡಿದ. ಅಷ್ಟಕ್ಕೂ ಆತ ವಿಧವಾ ವಿವಾಹಕ್ಕೆ ಬೇಡಿಕೆ ಇಟ್ಟದ್ದರ ಹಿನ್ನೆಲೆ ಏನಿತ್ತು..?
ಪ್ರಭಾ ತನ್ನ ಖರ್ಚಿಗಾಗಿ ಪ್ರಸಾದನ ಬಳಿ ಬೇಡುವುದನ್ನು ಬಿಟ್ಟಿದ್ದಳು. ರಾಜುವಿನ ಹಣದಲ್ಲಿಯೂ ಆಕೆ ಸ್ವಂತಕ್ಕಾಗಿ ಖರ್ಚು ಮಾಡಿಕೊಳ್ಳುತ್ತಿರಲಿಲ್ಲ. ಇನ್ನು ತಂದೆಯ ಬಳಿಯೂ ಕೇಳುತ್ತಿರಲಿಲ್ಲ. ಹೀಗಿದ್ದಾಗ ಪ್ರಭಾ ತನ್ನ ಖರ್ಚಿಗೆ ಯಾವ ದಾರಿಯನ್ನು ಆಯ್ದುಕೊಂಡಿದ್ದಳು..?
ಮನೆಯಲ್ಲಿ ಮಾತಿನ ಚಕಮಕಿ ಮಾತ್ರವಲ್ಲದೆ, ಈಗ ದ್ವೇಷವು ಮೊಳೆಯಲು ಶುರುವಾಗಿತ್ತು. ಮನೆಯ ಖರ್ಚಿನಿಂದ ಸಂಪೂರ್ಣವಾಗಿ ವಿಮುಖನಾದ ಪ್ರಸಾದ್..
ಪ್ರಭಾಳ ಅಣ್ಣ-ಅತ್ತಿಗೆ ಮನೆಗೆ ಬಂದಾಗ ಹಾಗೂ ಪ್ರಸಾದ್ ತನ್ನ ಸ್ನೇಹಿತರನ್ನು ಮನೆಗೆ ಕರೆ ತಂದಾಗ ಅವನ ಎರಡು ರೀತಿಯ ವರ್ತನೆಗಳು ಹೇಗಿದ್ದವು..?
ದಿನ ದಿನವೂ ಚಿತ್ರ-ವಿಚಿತ್ರ ಹಿಂಸೆ, ನೋವುಗಳಿಂದ ಪ್ರಭಾ ಮಾತ್ರ ಬಳಲಲಿಲ್ಲ. ನವೀನನ ಪುಟ್ಟ ಮನಸ್ಸು ಸಹ ಘಾಸಿಗೊಳಾಗುತ್ತಾ ಹೋಯಿತು.
ಪ್ರಭಾ ತಾನಾಗಿಯೇ ಏನನ್ನೂ ಹೇಳದಿದ್ದರೂ.. ಇಂದಿರಾ ಅವರಿಗೆ ಪ್ರಭಾಳ ಸಂಸಾರದ ಗುಟ್ಟು ತಿಳಿದದ್ದು ಹೇಗೆ..? ಪ್ರಸಾದ್ ಬಳಿ ಇಂದಿರಾ ಅವರು ಈ ಕುರಿತು ಚರ್ಚಿಸಿದರೇ..?
ಪ್ರಸಾದ್ ಪ್ರಭಾಳ ಗರ್ಭಪಾತ ಮಾಡಿಸಿದ್ದು ನೋಡುವವರ ಕಣ್ಣಿಗೆ ನವೀನ ನ ಮೇಲಿನ ಪ್ರೀತಿ ಕಡಿಮೆಯಾಗಬಾರದು ಎಂಬಂತೆ ತೋರುತ್ತಿದ್ದಾದರೂ.. ನಿಜವಾದ ಕಾರಣ ಏನಿತ್ತು..?
ಪ್ರಭಾಳ ಪಾಲಿಗೆ ಸುಖ ಎನ್ನುವುದು ನಭದ ನಕ್ಷತ್ರವಾಯಿತೇ..? ಪ್ರಭಾ ಕಾದಂಬರಿಯ ಅಂತ್ಯಕ್ಕೆ ಆಯ್ದುಕೊಂಡ ದಾರಿ ಯಾವುದು..?
ಮಗುವಿದ್ದಾಗ ತಾಯೊಬ್ಬಳು ಮರುವಿವಾಹವಾಗಲು ಏನೆಲ್ಲಾ ಅಡಚಣೆಗಳು..! ಅವೆಲ್ಲವನ್ನು ಮೀರಿ ಒಳ್ಳೆಯ ಭವಿಷ್ಯ ಸಿಕ್ಕಿತು ಎನ್ನುವಾಗ ಸಿಕ್ಕ ಸುಖವು ಮರೀಚಿಕೆಯಾದರೆ..? ಹೆಣ್ಣು ಮಕ್ಕಳ ಸಾಂಸಾರಿಕ ಬದುಕಿನ ಕಷ್ಟದ ಮತ್ತೊಂದು ರೂಪವನ್ನು ಈ ಕಾದಂಬರಿಯಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ಹೆಚ್. ಕೆ ಅನುಸೂಯ ಸಂಪತ್ ಅವರು.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ