ಪುಸ್ತಕದ ಶೀರ್ಷಿಕೆ : ಒಡೆಯಲಾರದ ಒಡಪು
ಲೇಖಕರು : ಫಾತಿಮಾ ರಲಿಯಾ
ಪ್ರಕಾಶಕರು : ಸಂಕಥನ
ಪ್ರಥಮ ಮುದ್ರಣ : 2023
ಪುಟಗಳು : 99
ಬೆಲೆ : 150 ರೂ.
ಫಾತಿಮಾ ರಲಿಯಾ ಅವರ ಮೊದಲ ಕಥಾಸಂಕಲನ ಇದು. ಈ ಕಥಾ ಸಂಕಲನದಲ್ಲಿ ಒಟ್ಟು 12 ಕಥೆಗಳಿವೆ. ಸಾಮಾನ್ಯವಾಗಿ ಕಥಾ ಸಂಕಲನದ ಹೆಸರಿನ ಕಥೆಯೊಂದನ್ನು ಕಾಣುತ್ತೇವೆ. ಆದರೆ, ಈ ಕಥಾಸಂಕಲನದ ಶೀರ್ಷಿಕೆ ಈ ಎಲ್ಲಾ ಕಥೆಗಳಿಗೆ ಅನ್ವರ್ಥದಂತಿದೆ.
ನವಿಲು ಬಣ್ಣದ ಸೀರೆ : ಅಜ್ಜಿ ಹೇಳಿದ ಮಾತೇ ಸುಚಿತ್ರಾ ತಲೆಯಲ್ಲಿ ಬಲವಾಗಿ ಬೇರೂರಿತ್ತು. 'ಅಪ್ಪ ದೇವರಂತಹ ಮನುಷ್ಯ. ಅವನ ಜೊತೆಗಿರುವ ಯೋಗ್ಯತೆ ಅಮ್ಮನಿಗಿಲ್ಲ' ಎನ್ನುವ ಮಾತು ಅವಳ ತಲೆಯಲ್ಲಿ ಗಟ್ಟಿಯಾಗಿ ಕೂತಿದ್ದರಿಂದಲೋ ಅಥವಾ ಅಮ್ಮನ ಚಾರಿತ್ರ್ಯದ ಕುರಿತ ಒಡಕು ಮಾತುಗಳಿಂದ ಅವಳು ಅವಮಾನ ಅನುಭವಿಸುತ್ತಿದ್ದರಿಂದಲೋ ಅಮ್ಮ ಹಾಗೂ ಅವಳ ನಡುವೆ ಕಂದಕವೇ ಸೃಷ್ಟಿಯಾಗುತ್ತಾ ಸಾಗಿತ್ತು. ಅಪ್ಪ ಕಣ್ಮರೆಯಾದ ದಿನದಿಂದ ಹುಟ್ಟಿದ ಪರಿಚಿತ ಮೌನ ಕಳಚುವ ಸಮಯ ಬಂದಿತೇ..? ಸುಚಿತ್ರಾಳಿಗೆ ಅಮ್ಮ ಮಾತ್ರವಲ್ಲದೆ ಅಪ್ಪನು ಬೇರೆಯದ್ದೆ ಬಗೆಯಲ್ಲಿ ಕಂಡ ಕಥೆ ಇದೆ. ಇಲ್ಲಿ ನವಿಲು ಬಣ್ಣದ ಸೀರೆಯ ನಂಟೇನು ಓದಿ ನೋಡಿ. ಸಮಾಜದ ನೋಟಕ್ಕೂ.. ಸತ್ಯಕ್ಕೂ.. ಎಷ್ಟು ಅಂತರವಲ್ಲವಾ..?
ಕವಿಶೈಲ : ತನ್ನ ಸಂಗಾತಿ ತನ್ನ ಹವ್ಯಾಸ, ಆಸಕ್ತಿಯನ್ನು ಪ್ರೋತ್ಸಾಹಿಸಲಿ ಹಾಗೂ ಸಮಾನ ಅಭಿರುಚಿಗಳಿರಲಿ ಎಂದೇ ಭಾವಿಸುವ ಹುಡುಗಿಗೆ ಸಿಕ್ಕ ಭಾವೀ ಪತಿ ತನ್ನ ಕವಿತೆಗಳ ಕುರಿತಾಗಿ ಆಸಕ್ತಿ ತೋರಿಸುತ್ತಿರುವುದಿಲ್ಲ. ಜೊತೆಗೆ ಪ್ರಾಕ್ಟಿಕಲ್ ಮನಸ್ಥಿತಿಯ ಅವನ ಭಾವಗಳು ಇಷ್ಟವಾಗದೆ ಅಪ್ಪನ ಬಳಿಯಲ್ಲಿಯೂ ಹಂಚಿಕೊಂಡಿದ್ದಳು. ಆದರೆ, ಕವಿಶೈಲದಲ್ಲಿ ನಡೆದ ಒಂದು ಘಟನೆ ಅವಳ ಆಲೋಚನೆಯ ದಿಕ್ಕನ್ನು ತಿರುಗಿಸಿದ ಕಥೆ ಇಲ್ಲಿದೆ.
ಸಂಕರನ ಹಸು ಕರು ಹಾಕಿತು : ಶಂಕರಣ್ಣನ ಮನೆಯ ಹಸು ಗೌರಿ ಕರು ಹಾಕಿದ ಸಂದರ್ಭದಲ್ಲಿ ಅಲ್ಲಿಗೆ ಹೋಗಿದ್ದ ಖತೀಜಮ್ಮ ಹಾಗೂ ಸರಸು ಗೌರಿಯ ಕರುವಿನ ದೇಖಿರೇಖಿ ನೋಡಿಕೊಂಡಿದ್ದರು. ಮೊದಲ ಬಾರಿಗೆ ಹಾಲು ಕರೆದು ಅದನ್ನು ಅರ್ಧರ್ಧ ಪಾಲು ಮಾಡಿ ಒಂದು ಪಾಲನ್ನು ಊರ ಭಜನಾ ಮಂದಿರಕ್ಕೂ, ಮತ್ತೊಂದು ಪಾಲನ್ನು ಮಸೀದಿಗೆಂದು ಇಟ್ಟಿದ್ದಾಗ ಸರಸು ಮಾಡಿದ್ದೇನು..? ಇದಕ್ಕೆ ಮೂಕ ಸಾಕ್ಷಿಯಾದ ಖತೀಜಮ್ಮ ಹೇಗೆ ಪ್ರತಿಕ್ರಿಯಿಸುತ್ತಾರೆ..? ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದ ಮೂರು ಕುಟುಂಬಗಳ ನಡುವಿನ ಭಾಂದವ್ಯದ ಕಥೆ ಇಲ್ಲಿದೆ. ಶಂಕರಣ್ಣ ಸಂಕರ ಆದ ಕಥೆ ಓದಿ ನೋಡಿ.
ತಾಯಿಬೇರು : ತಾನು ನೋಡಿದ ವರನಿಗಾಗಿ ತನ್ನ ದೇಹದಲ್ಲಿ ಒಂದು ಬದಲಾವಣೆ ಮಾಡಿಸಿಕೊಳ್ಳಲು ಹೊರಟಿದ್ದ ಸಮಿಯ್ಯಾ ಅದನ್ನು ನಿರೀಕ್ಷಿಸಿರಲಿಲ್ಲ. ಡಿಗ್ರಿ ಪರೀಕ್ಷೆ ರಿಸಲ್ಟ್ ಬಂದ ತಕ್ಷಣ ಶಿಕ್ಷಕಿ ಸ್ಥಾನಕ್ಕೆ ಅರ್ಜಿ ಸಲ್ಲಿಸಿ ಬಂದಿದ್ದಳು. ಅದೇ ಸಮಯದಲ್ಲಿ ಬ್ರೋಕರ್ ಅಬ್ಬು ಕಾಕಾ ಒಂದು ಸಂಬಂಧವನ್ನು ತಂದಿದ್ದ . ಇದ್ದೊಬ್ಬ ಅಕ್ಕ ಸುರಯ್ಯಾಳ ಗಂಡ ತನ್ನ ದೊಡ್ಡಸ್ತಿಕೆ ತೋರಲು ಬಂದ ಸಂದರ್ಭದಲ್ಲಿ ಆತನನ್ನು ಎದುರಿಸಲು ಹೋದಾಗ ಆಗಿದ್ದೇನು..? ತಾಯಿಯ ಮುನ್ನೆಚ್ಚರಿಕೆಯ ಕ್ರಮ ಸಮಿಯ್ಯಾ, ಸುರಯ್ಯಾರ ಬದುಕನ್ನು ಯಾವ ದಿಕ್ಕಿಗೆ ಕರೆದೊಯ್ಯಿತು..? ಶಿಕ್ಷಣ ಹಾಗೂ ಸ್ವಾತಂತ್ರ್ಯ ಎಷ್ಟು ಮುಖ್ಯವಾಗುತ್ತದೆ ಎಂದು ಹೇಳುವ ಕತೆ.
ಬೇಲಿಯಾಚೆಗೂ ಬೆಳೆದ ನೆರಳು : ಶ್ರೀಧರನ ಅಮ್ಮ ಸಾವಿತ್ರಮ್ಮ ಹಾಗೂ ಪಾತುಞ ಯ ಗಳಸ್ಯ-ಕಂಠಸ್ಯದ ಸ್ನೇಹದೊಂದಿಗೆ ತೆರೆದುಕೊಳ್ಳುವ ಕಥೆ ಅವರಿಬ್ಬರ ಮಕ್ಕಳು ಶ್ರೀಧರ ಹಾಗೂ ಜೈನಬಾಳ ಬದುಕನ್ನು ತೆರೆದಿಡುತ್ತಾ ಎರಡು ದಿಕ್ಕಿನೆಡೆಗೆ ಸಾಗುತ್ತಾ ಅವರವರ ಸಂಸಾರ ಕಟ್ಟಿಕೊಂಡಿದ್ದರು. ಕೊರೊನಾ ಸಮಯದಲ್ಲಿ ಸಾವಿತ್ರಮ್ಮನ ಸಾವಿನ ನಂತರ ಯಾವ ರೀತಿ ಬದುಕಿದರು..? ಶ್ರೀಧರನ ಪತ್ನಿ ಯಮುನಾ ಪಾತುಞ ಮನೆಯವರನ್ನು ಯಾವ ರೀತಿ ಕಂಡಳು ಹಾಗೂ ಯಾರು ಯಾರ ಸಹಾಯಕ್ಕೊದಗಿದರು..? ಬೇಲಿಯಾಚೆಗೆ ಬೆಳೆದ ನೆರಳು ತಂಪು ಕೊಟ್ಟಿತೇ ಅಥವಾ ತಡೆಯಾಯಿತೇ..?
ಲೆಕ್ಕ ಪುಸ್ತಕ : ಮಸೀದಿಯ ಮಾಸಿಕ ವಂತಿಗೆಯನ್ನು ಕಡ್ಡಾಯವಾಗಿ ಹೆಚ್ಚಳ ಮಾಡುವ ಯೋಜನೆ ಅಧ್ಯಕ್ಷರಾದ ಅಬ್ಬೋನು ಹಾಜಿಯವರಿಗೆ ಇಷ್ಟವಾಗಿರಲಿಲ್ಲ. ಆದರೆ, ಊರಿಗೆ ಹೊಸ ಶ್ರೀಮಂತನಾಗಿದ್ದ ರಫೀಕ್ ನನ್ನು ಮೆಚ್ಚಿಸುವ ಉಮೇದಿನಲ್ಲಿದ್ದ ಹಲವರಿಗೆ ಅದು ಲೆಕ್ಕಕ್ಕಿರಲಿಲ್ಲ. ಹೀಗೆ ವಂತಿಗೆಯ ಲೆಕ್ಕಕ್ಕೊಂದು ಕಾನೂನು ಬಂದು ವಂತಿಕೆ ಬಾಕಿ ಇಟ್ಟು, ಕಾನೂನು ಮುರಿದವರಿಗೆ ಶಿಕ್ಷೆಯೊಂದು ಜಾರಿಯಾಗಿತ್ತು. ಆದರೆ, ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದು ರಫೀಕನ ತಂದೆ ಅದ್ರಾಮ. ಹಾಜಿಯವರ ಲೆಕ್ಕ ಪುಸ್ತಕದ ಲೆಕ್ಕ ಯಾವ ರೀತಿ ಇತ್ತು..?
ಶಕುಂತಲೆ : ಕೆಲವೇ ತಿಂಗಳುಗಳ ಸ್ನೇಹ ಹುಟ್ಟಿಕೊಂಡ ಪ್ರೀತಿ ಇಬ್ಬರನ್ನೂ ಜೊತೆಯಾಗಿಸದೆ ಬೇರೆ-ಬೇರೆಯ ಸಂಸಾರವನ್ನೇ ಕಟ್ಟಿಕೊಟ್ಟಿತ್ತು. ಇಲ್ಲಿ ಯಾರು ಇಷ್ಟು ಸುಖಿ ಎನ್ನುವುದಕ್ಕಿಂತಲೂ.. ಅವನ ಮಗು ತೀರಿಕೊಂಡ ಸುದ್ದಿ ಕೇಳಿದಾಗ ಇವಳಲ್ಲಿ ಹುಟ್ಟಿದ ಭಾವಗಳೇನು..? ತೀರಿಕೊಂಡ ಮಗುವಿನ ಮನೆಗೆ ಹೋಗುವ ಮುನ್ನಿನ ಭಾವುಕತೆ, ಚರ್ಚೆ, ತುಮುಲ, ತೊಳಲಾಟಗಳು ಇದಲ್ಲದರ ಜೊತೆಗೆ ಕಥೆಯ ಕೊನೆಯಲ್ಲೊಂದು ತಿರುವಿದೆ.
ಉಮ್ಮನ ಆಲಿಕತ್ತ್ : ಯಾರ ಬಳಿಯೂ ಕೈಚಾಚದ ಖತೀಜಾ ತನ್ನ ದೊಡ್ಡ ಮಗಳು ಹಸೀನಾ ಹೈಸ್ಕೂಲ್ ಸೇರಲು 2,000 ದುಡ್ಡಿಗಾಗಿ ತನ್ನ ಮೈದುನನ ಬಳಿ ಕೈಯೊಡ್ಡಿದ್ದಳು. ಕುಡುಕ ಗಂಡ ಮನೆಯಲ್ಲಿದ್ದ ಹಣವನ್ನು ಬಿಡದವನು. ಉಮ್ಮನ ಆಲಿಕತ್ತ್ ಅವಳ ಹಣದ ನೆರವಿಗೆ ಬಂದಿತಾದರೂ ಊಹಿಸದ ಘಟನೆಯೊಂದು ನಡೆದು ಹಣ ಹಸೀನಾಳ ನೆರವಿಗೆ ಬಾರದೆ ಹೋಯಿತು. ಹಣದ ಅಸಹಾಯಕತೆ ಅವಳಿಂದ ಯಾವ ಕೆಲಸ ಮಾಡಿಸಿತು..? ಅವಳು ತನ್ನ ಪಾಪಪ್ರಜ್ಞೆಯನ್ನು ಕಳೆದುಕೊಂಡದ್ದು ಹೇಗೆ..? ಹಣಕ್ಕಾಗಿ ಮಾಡಿದ ತಪ್ಪು ಅವಳ ಕುರಿತ ಅಭಿಪ್ರಾಯವನ್ನು ಬದಲಾಯಿಸದೆ ಅವಳನ್ನು ಬೇರೆಯದ್ದೇ ರೂಪದಲ್ಲಿ ತೋರಿರುವ ಕಥೆ ಇಲ್ಲಿದೆ.
ನೆಳಲು-ಬೆಳಕು : ಅಪರ್ಣ ಕೊನೆಯ ಟ್ರೈನಿಗೆ ಹೊರಡುವ ಗಡಿಬಿಡಿ, ಧಾವಂತ. ನಂತರ ನಿದ್ದೆಯ ಮಂಪರಿನಲ್ಲಿ ಮುಂದಿನ ಸ್ಟಾಪ್ ನಲ್ಲಿ ಇಳಿದಾಗ ಮಧ್ಯರಾತ್ರಿಯ ಆ ರೈಲ್ವೆ ಸ್ಟೇಷನ್ ನಲ್ಲಿ ನಡೆದ ಘಟನೆ ಏನು..? ನಾವು ನೋಡುವವರು ಎಷ್ಟೋ ಬಾರಿ ನಾವಂದುಕೊಂಡಂತೆ ಒಳ್ಳೆಯವರೂ ಆಗಿರುವುದಿಲ್ಲ ಅಂದುಕೊಂಡಷ್ಟು ಕೆಟ್ಟವರಾಗಿರುವುದಿಲ್ಲ. ಮಾನವೀಯತೆ ಇನ್ನೂ ಇದೆ ಎಂಬುದನ್ನು ತೋರುವ ಕಥೆ ಇಲ್ಲಿದೆ.
ಅವನ ಬಿಟ್ಟು ಅವಳು ಯಾರು ? : ಮೊದಮೊದಲು ಹವ್ಯಾಸದಂತೆ, ಬಿಡುವು ಕಳೆಯುವ ಸಾಧನದಂತೆ ನಯನಾಳಿಗೆ ಅಂಟಿಕೊಂಡ ಕ್ಲಬ್ ಹೌಸ್ ನ ಸಾಂಗತ್ಯ ಇತ್ತೀಚೆಗೆ ಹೆಚ್ಚಾಗಿತ್ತು. ಅವಳು ಒಳ್ಳೆಯ ಮಾತುಗಾತಿಯಾಗಿದ್ದಳು. ಅದಕ್ಕಾಗಿಯೇ ಬಿಡುವು ಮಾಡಿಕೊಂಡಂತೆ ಅದರೊಳಗೆ ಕಳೆದು ಹೋದಂತಿದ್ದಳು. ಭ್ರಮರ ಎನ್ನುವ ಹೆಸರಲ್ಲಿ ಲಾಗಿನ್ ಆಗಿದ್ದವಳ ಚರ್ಚೆಗಳು ಹೇಗಿದ್ದವು..? ಸ್ಲಿಮ್ ಎಂಬ ಮೋಡಿಗಾರ ಕವಿಯ ಮೋಡಿಗೆ ಸಿಕ್ಕವಳು ಆತನನ್ನು ಭೇಟಿಯಾಗಲು ಹೊರಟ ಕ್ಷಣಗಳು ಭೇಟಿಯಾದ ಸಂದರ್ಭದ ಅವಳ ಅನಿರೀಕ್ಷಿತ ಬದುಕಿನ ತಿರುವು ಇಲ್ಲಿದೆ. ಶೀರ್ಷಿಕೆ ಅದನ್ನು ಸೂಚಿಸದಿದ್ದರೆ ಈ ಕಥೆಯ ಅಂತ್ಯ ಊಹಿಸುವುದು ಕಷ್ಟ.
ಖಬರ್ ಸ್ತಾನ : ಖಾಸಿಮನ ಬದುಕಿನ 5 ದಶಕಗಳಲ್ಲಿ ಆತ ಮಾಡದೆ ಇರುವ, ಕಲಿಯದೆ ಇರುವ ಕೆಲಸಗಳೇ ಇಲ್ಲವೇನೋ ಎಂಬಂತಾಗಿತ್ತು. 30 ಚಿಲ್ಲರೆ ವರ್ಷಗಳಲ್ಲಿ ಖಬರಸ್ತಾನವೆಂದಾಗಲಿ, ಸ್ಮಶಾನವೆಂದಾಗಲಿ ಭೇದವೆಣಿಸದೆ ಗುಂಡಿ ತೋಡುತ್ತಿದ್ದವನು ಬ ತನ್ನ ಖಾಸ ಗೆಳೆಯನಂತಿದ್ದ ಬಸಯ್ಯನ ತಾತ ತೀರಿಕೊಂಡಿದ್ದಾಗ ಅಲ್ಲಿ ಗುಂಡಿ ತೆಗೆಯಲು ಹೋಗಿದ್ದವನ ಫೋನಿಗೆ ಬಂದ ಫೋನು ಆತನಿಗೆ ಮಸೀದಿಯಿಂದ ಪತ್ರವೊಂದು ಬರುವಂತೆ ಮಾಡಿತು. ಆ ನೋಟಿಸ್ ನಲ್ಲಿ ಇದ್ದದ್ದೇನು..? ಬಸಯ್ಯ ಆತನಿಗೆ ಹೇಳದ ಸತ್ಯವೂ ಮತ್ತೊಂದಿತ್ತು. ಆ ಸತ್ಯ ನೋಟಿಸಿನ ಮತ್ತೊಂದು ಮುಖದಂತಿದೆ.
ಆವರ್ತ : ಆತ ಕಳಕಳಿಯ ಗೆಳೆಯ ಅಭಿ. ನೋಡಿದವರೆಲ್ಲರೂ ಅಸೂಯೆ ಪಡುವಂತಹ ಸ್ನೇಹ ಅವಳು ಮತ್ತು ಅಭಿಯದ್ದು. ಅವಳ ಪ್ರೇಮಿಯಾಗಿ ಬಂದ ಆಕಾಶ್ ಅವಳಿಗೆ ತಕ್ಕವನಲ್ಲವೆಂದು ಹೇಳಲು ಹೊರಟ ಅಭಿಗೆ ಅವಳಿಂದ ಸಿಕ್ಕ ಉತ್ತರ ಅವರಿಬ್ಬರ ಸ್ನೇಹವನ್ನು ಬಹಳ ಕಾಲ ದೂರವಿರಿಸಿತ್ತು. ಸ್ನೇಹ ಮಾತ್ರವಲ್ಲ.. ಪ್ರೀತಿಯೂ ದೂರವಾದ ದಿನಗಳನ್ನು ಎದುರಿಸಿದವಳಿಗೆ ಸ್ನೇಹ ಹಾಗೂ ಪ್ರೀತಿ ಎರಡೂ ಎದುರಿನಲ್ಲಿದ್ದವು. ಒಂದು ಆವರ್ತದ ಘಟನಾವಳಿಗಳ ಕತೆ ಇದು.
ಈ ಕಥಾ ಸಂಕಲನದಲ್ಲಿ ತರಹೇವಾರಿ ಸೂಕ್ಷ್ಮ ಸಂಬಂಧಗಳನ್ನು ಕಾಣಬಹುದು. ಅದು ಅಮ್ಮ-ಮಗಳದ್ದಾಗಿರಬಹುದು. ವಿವಾಹದ ಆಚೆಗಿನ ಸಂಬಂಧ, ಸಂಗಾತಿಯ ಆಯ್ಕೆ, ಮದುವೆ, ಪ್ರೀತಿ ಗೆಳೆತನ ಹೀಗೆ.. ಅದನ್ನು ನವಿರಾಗಿಯೇ ಪ್ರಬುದ್ಧವಾಗಿ ಕಟ್ಟಿಕೊಟ್ಟಿದ್ದಾರೆ. ಚೆಂದದ ಕಥೆಗಳ ಓದು.
~ ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ