ಭಾನುವಾರ, ಮೇ 10, 2026

ಮಡಿಲು (ಪುಸ್ತಕ ಯಾನ - 445)


ಪುಸ್ತಕದ ಶೀರ್ಷಿಕೆ : ಮಡಿಲು

ಲೇಖಕರು : ನಾಗರಾಜ ವಸ್ತಾರೆ 

ಪ್ರಕಾಶಕರು : ಛಂದ ಪುಸ್ತಕ 

ಪ್ರಥಮ ಮುದ್ರಣ : 2009

ಪುಟಗಳು : 80

ಬೆಲೆ : 15 ರೂ. 


ಮಡಿಲು ಎಂದಾಕ್ಷಣ ಮೊದಲಿಗೆ ಅಮ್ಮ ನೆನಪಾಗುತ್ತಾಳೆ. ಇದು ಅಮ್ಮನ ಕಥೆಯೇ.. ಆದರೆ, ಅಮ್ಮನ ಮನಸ್ಸಿನ ತುಮುಲಗಳು ಹಾಗೂ ಹರೆಯದ ಮಗುವಿನ ಅಮ್ಮನ ಭಾವನೆಗಳನ್ನು ತೆರೆದಿಟ್ಟಿರುವ ನೀಳ್ಗತೆ ಇದು. ಮಗನ ಅಮ್ಮನಿಗೆ ಮಾತ್ರವಲ್ಲದೆ.. ಕಾಳಜಿ ಮಾಡುವ ಪ್ರತಿ ಅಮ್ಮಂದಿರಿಗೂ ಕನೆಕ್ಟ್ ಆಗುವಂತಹ ಕಥೆ ಇದು.


ನಾಗರಾಜ ವಸ್ತಾರೆ ಅವರ ಈ ಕತೆಯಲ್ಲಿ ಹೆಸರುಗಳು ಬಹಳ ಇಷ್ಟವಾದವು. ಸಾಂಜ್ಞಲಕ್ಷ್ಮಿ, ಗುಣಶೀಲ ಮತ್ತು ಮಾಕಂದ ಎನ್ನುವ ಮೂರು ಪಾತ್ರಗಳೇ ಮುಖ್ಯ ಪಾತ್ರಗಳಾಗಿ ಇಡೀ ಕತೆಯನ್ನು ಆವರಿಸಿಕೊಳ್ಳುತ್ತವೆ. 


ಈ ನೀಳ್ಗತೆಯನ್ನು ಅರ್ಪಿಸಿರುವುದು "ನಮ್ಮ ನಿಮ್ಮ ಒಳ ಮನೆಗಳ ಸಾಂಜ್ಞಲಕ್ಷ್ಮಿಯರಿಗೆ" ಎನ್ನುತ್ತಾರೆ ವಸ್ತಾರೆಯವರು. 


ಅಕ್ಟೋಬರ್ ನಲ್ಲಿ ಒಂದು ಪ್ರವಾಸವನ್ನು ಆಯೋಜಿಸಿದ್ದಳು ಸಾಂಜ್ಞಲಕ್ಷ್ಮಿ. ದಸರೆಯ ನೆವದಲ್ಲಿ ಅವಳು ಕೆಲಸ ಮಾಡುತ್ತಿದ್ದ ಮಾಂಟೆಸರಿಗೆ ರಜೆ ಇರುತ್ತದೆ ಎನ್ನುವ ಕಾರಣಕ್ಕಿಂತಲೂ ಹೆಚ್ಚಾಗಿ ಗುಣಶೀಲನ ಕೆರಿಯರ್ ನಲ್ಲಿ ಸದ್ಯಕ್ಕೆ ಟ್ರಾನ್ಸಿಟ್ ಪಿರಿಯಡ್ ನಡೆಯುತ್ತಿರುವುದು, ಜೊತೆಗೆ ಇದ್ದೊಬ್ಬ ಮಗ ಮಾಕಂದ ಕಳೆದ ಆಗಸ್ಟ್ ನಲ್ಲಿ ಇಂಜಿನಿಯರಿಂಗ್ ಓದು ಮುಗಿಸಿ ಕಾಲೇಜಿನಿಂದಲೇ ಪ್ಲೇಸ್ಮೆಂಟ್ ಆಗಿ ಇನ್ನೇನು ಕೆಲಸಕ್ಕೆ ಸೇರಲಿದ್ದ. ಮಗನ ಇಂಜಿನಿಯರಿಂಗ್ ಸೇರಿದಾಗಿನಿಂದ ಮೂವರ ಬಿಡುವುಗಳೂ ಒಂದಕ್ಕೊಂದು ಹೊಂದಿಕೊಳ್ಳದೆ ಹೊರಗೆ ಬರಲಾಗಿರಲಿಲ್ಲ ಎನ್ನುವುದು ಹೌದಾದರೂ.. ಇದೆಲ್ಲವನ್ನು ಮೀರಿದ್ದು ಸಾಂಜ್ಞಲಕ್ಷ್ಮಿಯ ಮನಸ್ಸಿನಲ್ಲಿ ಭದ್ರವಾಗಿತ್ತು. 


ನೇರವಾಗಿ ಹಂಚಿಕೊಳ್ಳಲಾಗದ ಈ ಚಿಂತಾಕ್ರಾಂತತೆಯನ್ನು ಲೇಖಕರು 'ವರಿ' ಎನ್ನುತ್ತಾರೆ. 

"ಆಧುನಿಕ ನುಡಿಗಟ್ಟಿನಲ್ಲಿ ಹಿಡಿದಿಳುವುದಾದರೆ ಅದನ್ನು ಒಂದು ವರಿ ಅನ್ನಬಹುದೇನೋ ದೇಸಿ ಚಿಂತಾ ಕ್ರಾಂತದಿಂದ ಪ್ರಬಲವಾದ ವರಿಯೇ 'ವರಿ' ಅದು! 


ಗುಣಶೀಲನಿಗೆ ಸಾಂಜ್ಞಲಕ್ಷ್ಮಿಯ ಮನಸ್ಸಿನ ತುಮುಲ ಹಾಗೂ ಚಿಂತಾಕ್ರಾಂತತೆಯ ಅರಿವಿದ್ದರೂ ಆತ ಅವಳಷ್ಟು ತಲೆಬಿಸಿ ಮಾಡಿಕೊಂಡಿರಲಿಲ್ಲ. 


ಅವರು ವಾಸವಿದ್ದ 'ಆಸರೆ'ಯಲ್ಲಿ ಅವರು ನೆಲೆಸಿದ್ದಾಗಿನಿಂದ ಸಾಂಜ್ಞಲಕ್ಷ್ಮಿಯ ದಿನಶರಿ ಬದಲಾಗದಿದ್ದರೂ ಗುಣಶೀಲನ ಕೆಲಸ ಜೊತೆಗೆ ದಿನಚರಿ ಲೈಫ್ ಸ್ಟೈಲ್ ಎಲ್ಲವೂ ಬದಲಾಗುತ್ತಿತ್ತು. ಒಂದು ರೀತಿಯಲ್ಲಿ ಮನೆಯ ಯಾವ ತಲೆಬಿಸಿಯನ್ನೂ ಹಂಚಿಕೊಳ್ಳದ ಗುಣಶೀಲನ ಮನಸ್ಥಿತಿಯೇ ಮಗನಿಗೂ ಬಂದಿತ್ತೆಂದರೂ ತಪ್ಪಾಗಲಾರದು. ಅಥವಾ ಸಾಂಜ್ಞಲಕ್ಷ್ಮಿಯ ಅತಿಯಾದ ಕಾಳಜಿ ಅಪ್ಪ-ಮಕ್ಕಳಿಬ್ಬರನ್ನು ಹಾಗೆ ಮಾಡಿಬಿಟ್ಟಿತ್ತು ಎಂದರೂ ತಪ್ಪಾಗಲಾರದು. 


ಗಂಡು ಮಕ್ಕಳ ವಿಷಯದಲ್ಲಿ ಎಲ್ಲಾ ಅಮ್ಮಂದಿರೂ ಹೀಗೆ ಯೋಚಿಸುತ್ತಾರೋ ಅಥವಾ ತಾನೊಬ್ಬಳು ಮಾತ್ರವೋ ಎಂಬ ಅನುಮಾನ ಸಾಂಜ್ಞಲಕ್ಷ್ಮಿಗೆ ಬರುತ್ತದಾದರೂ.. ಅವಳ ಜಾಗದಲ್ಲಿ ನಾವಿದ್ದರೂ ಹಾಗೆಯೇ ಯೋಚಿಸುತ್ತಿದ್ದೆವಲ್ಲವಾ ಎಂದೂ ಅನ್ನಿಸಿತು. 


ಮಾಕಂದನ ಬದುಕಿನಲ್ಲಿ ಬಂದಿದ್ದ ವಿಶಾಲ ಗೇಂದ ಸಾಂಜ್ಞಲಕ್ಷ್ಮಿಯನ್ನು ಕಾಡುತ್ತಿದ್ದ ವ್ಯಕ್ತಿಯಾಗಿದ್ದರೂ ಅವರಿಬ್ಬರ ನಡುವಿನ ಸಂಬಂಧಕ್ಕೊಂದು ಹೆಸರು ಹಚ್ಚಲು ಗುಣಶೀಲನಾಗಲಿ, ಸಾಂಜ್ಞಲಕ್ಷ್ಮಿಯಾಗಲಿ ಮಾಡಿರಲಿಲ್ಲವಾದರೂ.. ಆ ಹೆಸರು ಸಾಂಜ್ಞಲಕ್ಷ್ಮಿಯ ಮನಸ್ಸಿನಲ್ಲಿದ್ದೇ ಇತ್ತು.


ಗುಣಶೀಲನನ್ನು ಮದುವೆಯಾಗಿ ತಾನು ಈಗ ಅನುಭವಿಸುತ್ತಿರುವ ಪರಿಸ್ಥಿತಿ ಮಾಕಂದನನ್ನು ಮದುವೆಯಾಗುವ ಹುಡುಗಿಯನ್ನು ಕಾಡಿದರೆ..! ಎಂಬುದು ಅವಳ ಮನಸ್ಸನಲ್ಲಿದ್ದ ಮತ್ತೊಂದು ಆಲೋಚನೆಯೂ ಹೌದು. ಏಕೆಂದರೆ, ಅಪ್ಪ-ಮಗನ ಸ್ವಭಾವಗಳಲ್ಲಿ ಹೆಚ್ಚೇನೂ ವ್ಯತ್ಯಾಸಗಳಿರಲಿಲ್ಲ.


ಅಷ್ಟಕ್ಕೂ ಸಾಂಜ್ಞಲಕ್ಷ್ಮಿ ಗುಣಶೀಲನ ಜೊತೆ ತನ್ನ ಹೆಚ್ಚಿನ ಭಾವನೆಗಳನ್ನು ಪೂರ್ತಿ ಚರ್ಚಿಸಿರುವುದಿಲ್ಲ. ಅವನ ಅಭಿಪ್ರಾಯ ತನ್ನ ಜೊತೆಗೆ ತಾಳೆಯಾಗುವುದಿಲ್ಲ ಎನ್ನುವುದು ಅವಳ ಪೂರ್ವಗ್ರಹಪೀಡಿತ ಮನಸ್ಥಿತಿಯೋ ಅಥವಾ ವಾಸ್ತವ ಹಾಗಿತ್ತೋ ಓದಿ ನೋಡಿ.


ಮೂವರೂ ಉದಯಪುರಕ್ಕೆ ಬರುವವರೆಗೂ ಯಾವ ವಿಚಾರವನ್ನು ಚರ್ಚಿಸಿರಲಿಲ್ಲ. 36 ತಾಸುಗಳ ರೈಲು ಮಾರ್ಗದಲ್ಲಿ ಅಪ್ಪ-ಮಗ ಮಲಗಿಕೊಂಡು ಸಮಯ ಹರಿಸಿದ್ದೇ ಹೆಚ್ಚು. ಸಾಂಜ್ಞಲಕ್ಷ್ಮಿ ಮನಸ್ಸಿನ ಅಷ್ಟೂ ಆಲೋಚನೆಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ತನ್ನದೇ ಲೋಕದಲ್ಲಿ ತಾನಿದ್ದು ಬಿಟ್ಟಿದ್ದಳು. 


ಹೋಟೆಲ್ ನ ಆ ಮಾತುಕತೆಯಲ್ಲಿ ಯಾರ ಮನಸ್ಸು ಹಗುರವಾಯಿತು ಮತ್ತು ಯಾರ ಮನಸ್ಸು ಭಾರವಾಯಿತು..?


ಅಪ್ಪಟ ಅಮ್ಮತನವನ್ನು ಮೆರೆಯುವಂತೆ ಮಾಡಿದ ಹೊತ್ತಿನಲ್ಲಿ ಮಾಕಂದ ಅಮ್ಮನ ಕಣ್ಣಿಗೆ ಕಾಣಿಸಿದ್ದು ಹೇಗೆ..?


ಇಲ್ಲಿ ಕೇವಲ ಹರೆಯದ ಮಗನ ಬದುಕಿನಲ್ಲಿ ಬರುವ ಹುಡುಗಿಯ ವಿಚಾರ ಮಾತ್ರವಲ್ಲ.. ಮಗನ ಭವಿಷ್ಯ ಹೇಗಿರಬಹುದು ಹಾಗೂ ಆ ಭವಿಷ್ಯಕ್ಕೆ ಬರುವರ ಪರಿಸ್ಥಿತಿ ತನ್ನಂತೆಯೇ ಇದ್ದರೆ..! ಎಂಬುದು ಮಾತ್ರವಲ್ಲದೆ, ಆ ಹುಡುಗಿಯ ಕುರಿತ ಆಲೋಚನೆ ಅತ್ತೆಯ ಪರಿಧಿಯಿಂದಲ್ಲದೆ ಅಮ್ಮನ ಆಲೋಚನೆಯ ಮೂಲಕ ವ್ಯಕ್ತವಾಗಿದೆ.


ಇಲ್ಲಿ ಅಮ್ಮನ ಮಡಿಲನ್ನು ಮೀರಿ ಬೆಳೆಯುವ ಮಗುವನ್ನು ಅಮ್ಮ ಕಾಣುವ ಬಗೆ, ವಯಸ್ಸಿಗೆ ತಕ್ಕ ಪ್ರೌಢತೆ, ಗಹನವಾದ ವಿಚಾರಗಳು ಎಲ್ಲವೂ ಕಾಣುತ್ತವೆ. ಅದಾಗಿಯೂ ಅಮ್ಮನ ಮಡಿಲು ಯಾಕಷ್ಟು ಮುಖ್ಯವಾಗುತ್ತದೆ ಎಂಬುದನ್ನೂ ಇಲ್ಲಿ ಕಂಡುಕೊಳ್ಳಬಹುದು. 


ಹರೆಯದ ಮಕ್ಕಳ ಅಮ್ಮಂದಿರಾಗಿದ್ದರೆ ಇವು ನಿಮ್ಮನ್ನೂ ಕಾಡಿರಬಹುದು ಅಥವಾ ಆ ಘಟ್ಟದಲ್ಲಿ ನಾವೂ ಹೀಗೆಯೇ ಆಲೋಚಿಸಬಹುದೇನೋ.. ಸಾಂಜ್ಞಲಕ್ಷ್ಮಿ ಕನ್ನಡಿಯಂತೆ ಕಾಣುತ್ತಾಳೆ. 


ನಾಗರಾಜ ವಸ್ತಾರೆ ಅವರ ಯಾವುದಾದರೂ ಪುಸ್ತಕವನ್ನು ಓದಿದ್ದರೆ ನಿಮಗೆ ಅವರ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಅರಿವಂತೂ ಇರುತ್ತದೆ. ಅಂತಹದ್ದೇ ಚೆಂದದ ಓದು ಇದು. ಅಕಸ್ಮಾತ್ ನೀವಿನ್ನೂ ಅವರ ಪುಸ್ತಕಗಳನ್ನು ಓದಿರದಿದ್ದರೆ ಅವರ ಲೇಖ-ಲೋಕಕ್ಕೆ ಕಾಲಿಡಲು ಒಳ್ಳೆಯ ಪ್ರವೇಶಿಕೆ ಇದು.


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ