ಶನಿವಾರ, ಮೇ 30, 2026

ಬಾಳ ಮುಂಜಾವು (ಪುಸ್ತಕ ಯಾನ - 454)



ಪುಸ್ತಕದ ಶೀರ್ಷಿಕೆ : ಬಾಳ ಮುಂಜಾವು 

ಲೇಖಕರು : ಎಂ. ಕೆ. ಜಯಲಕ್ಷ್ಮಿ 

ಪ್ರಕಾಶಕರು : ಓಂ ಶಕ್ತಿ ಪ್ರಕಾಶನ

ಪ್ರಥಮ ಮುದ್ರಣ : 1963

ನಾಲ್ಕನೇ ಮುದ್ರಣ : 2008

ಪುಟಗಳು : 144

ಬೆಲೆ : 60 ರೂ. 


ಇದು ಮನೋವೈಜ್ಞಾನಿಕ ಕಾದಂಬರಿಯ ಸಾಲಿಗೆ ಸೇರುವ ಕಾದಂಬರಿ. ಶಾಂತ ಹಾಗೂ ಶ್ರೀರಂಗ ಎಂಬ ಇಬ್ಬರು ಹೆಣ್ಣು ಮಕ್ಕಳ ವಯಸ್ಸು ಒಂದೇ ಆದರೂ ಮನೆಯಲ್ಲಿನ ವಾತಾವರಣ ಅವರನ್ನು ಯಾವ ರೀತಿ ರೂಪಿಸುತ್ತದೆ ಎಂಬುದನ್ನು ಕಾಣಬಹುದು. ಶ್ರೀಕಂಠ ಹಾಗೂ ವರದರಾಜರ ಪಾತ್ರಗಳಲ್ಲಿಯೂ ಅದನ್ನು ಕಾಣಬಹುದಾದರೂ ಹೆಣ್ಣು ಮಕ್ಕಳ ಸೂಕ್ಷ್ಮತೆಯನ್ನು ಹೆಚ್ಚಾಗಿ ಗಮನಿಸಬಹುದು.


ಪಾರ್ವತಮ್ಮ ಹಾಗೂ ಶ್ರೀಪಾದರಾಯರ ಮಗಳು ಶಾಂತ. ಏಳು ವರ್ಷದ ಶಾಂತಳಿಂದ ಕಥೆ ಶುರುವಾಗುತ್ತದೆ. ಲವಲವಿಕೆಯ ಶಾಂತ ಪ್ರತಿಯೊಂದರಲ್ಲೂ ಮುಂದು. ಪಾದರಸಮಂತಿರುವ ಅವನನ್ನು ಕಂಡರೆ ತಂದೆ ತಾಯಿಗೆ ಹೆಮ್ಮೆ. 


ಶಾಂತ, ಪದ್ಮಾ, ಜಾನಕಿ ಹಾಗೂ ಶ್ರೀರಂಗ ಕೂಡಿ ಆಟವಾಡುತ್ತಿದ್ದರು. ಇವರಿಷ್ಟೂ ಜನರ ಸ್ನೇಹಕ್ಕೆ ಭಂಗ ತಂದದ್ದು ಮೀನಾಕ್ಷಿ. ಶ್ರೀಮಂತಿಕೆಯ ಪ್ರದರ್ಶನ ಮಾಡಿಕೊಂಡು ಜಂಬ ಪಡುತ್ತಾ, ಶಾಂತಳ ಮೇಲೆ ಪೈಪೋಟಿ ಮಾಡುತ್ತಾ, ಶ್ರೀರಂಗಳನ್ನು ತನ್ನ ಜೊತೆಗೆ ಹಾಕಿಕೊಂಡು ಶಾಂತನನ್ನು ಕುಗ್ಗಿಸುವುದರಲ್ಲಿ ಮುಂದಾಗುವ ಮೀನಾಕ್ಷಿಗೆ ಶಿಕ್ಷಕಿ ಶಾರದಮ್ಮನವರಿಂದ ಒಳ್ಳೆಯ ಪಾಠವೇ ಸಿಗುತ್ತದೆ. ಶಾರದಮ್ಮನಂತಹ ಶಿಕ್ಷಕಿಯರಿದ್ದರೆ ಮಕ್ಕಳ ಮನಸ್ಸು ವೈಮನಸ್ಸಿನಿಂದ ಕೂಡಿರಲಾರದು. 


ಇಂತಹ ಯಾವ ಕೆಟ್ಟತನಗಳೂ ಶಾಂತ ಹಾಗೂ ಶ್ರೀರಂಗರನ್ನು ಬೇರ್ಪಡಿಸಲಾಗದಂತೆ ಅವರ ಸ್ನೇಹ ಸಾಗುತ್ತಿತ್ತು. ಆದರೆ, ಮೀನಾಕ್ಷಿ ಬದಲಾಗುವಂತಿರಲಿಲ್ಲ. 


ಶಾಂತಳ ಅಣ್ಣ ಶ್ರೀಕಂಠ. ಇವರಿಬ್ಬರ ಬಾಂಧವ್ಯವನ್ನು ಓದುತ್ತಿದ್ದರೆ ಆಹ್ಲಾದಮಯ. ಮನೆಯಲ್ಲಿ ಗಂಡು-ಹೆಣ್ಣು ಎಂದು ಭೇದ ಮಾಡದೆ, ಇಬ್ಬರಿಗೂ ಸಮಾನವಾದ ಪ್ರೀತಿ ಕೊಟ್ಟು ಮೇಲು-ಕೀಳುಗಳನ್ನು ತೊಡೆದು ಹಾಕಿದವರು ತಂದೆ-ತಾಯಿ. ಶಾಂತಳನ್ನು ಕಂಡರೆ ಒಂದು ಕೈ ಹೆಚ್ಚು ಪ್ರೀತಿಯೆಂದರೂ ತಪ್ಪಾಗಲಾರದು. ಶ್ರೀಕಂಠ ಹಾಗೂ ರಾಮಕೃಷ್ಣರ ಸ್ನೇಹವೂ ಸೊಗಸಾಗಿದೆ. 


ಆದರೆ, ಇಲ್ಲಿ ಶ್ರೀರಂಗಳ ಅಣ್ಣ ವರದರಾಜ್ ನ ಮುಂಗೋಪಿತನ, ಹೆಣ್ಣುಮಕ್ಕಳ ಕುರಿತ ಅಸಡ್ಡೆ, ಶ್ರೀರಂಗಳನ್ನು ಗೋಳು ಹುಯ್ದುಕೊಳ್ಳುವುದು ಎಲ್ಲವೂ ಅವನನ್ನು ಸೈಂಧವ ಎಂದು ಕರೆಸಿಕೊಳ್ಳುವಂತೆ ಮಾಡಿದ್ದವು. 


ವರದರಾಜನ ವರ್ತನೆ ಶ್ರೀರಂಗಳ ಮೇಲೆ ನೇರವಾಗಿ ಪರಿಣಾಮ ಬೀರಿತ್ತು. ಮನೆಯ ಪರಿಸರವೂ ಅದಕ್ಕೆ ಕಾರಣವಾಗಿತ್ತು. ಶ್ರೀರಂಗಳ ತಂದೆ ನಾರಾಯಣಾಚಾರ್ ಈಗಾಗಲೇ ಐದು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಹಣ್ಣಾಗಿದ್ದರು. ಶ್ರೀರಂಗಳ ನಂತರ ಇನ್ನೂ ಮೂರು ಹೆಣ್ಣಿದ್ದವು. ಮಗನಾದ್ದರಿಂದ ಅವನ ಮೇಲೆ ಅತಿ ಎನ್ನಿಸುವಷ್ಟೇ ಅಸ್ಥೆ. ಅವಳ ತಾಯಿ ಲಕ್ಷ್ಮಮ್ಮನವರು ಸಹ ಕಟುವಾಗಿ ನಡೆದುಕೊಳ್ಳುತ್ತಿದ್ದರು. ಕೆಲವೊಮ್ಮೆ ಈಕೆ ತನ್ನ ತಾಯಿಯೇ ಎಂದು ಅನುಮಾನ ಬರುತ್ತಿತ್ತು ಶ್ರೀರಂಗಳಿಗೆ. ಅದು ಅವಳ ಮನಸ್ಸಿನಲ್ಲಿ ಗಟ್ಟಿಯಾಗಿ ಕೂತಿತ್ತು ಸಹ. 


ಸೂಕ್ಷ್ಮ ಮನಸ್ಸಿನ ಶ್ರೀರಂಗ ಮನೆಯಲ್ಲಿ ಅನಾದರ ಹೆಚ್ಚಾದಷ್ಟು ಮೊಂಡಿಯಾಗುತ್ತಾ, ಕಟುವಾಗುತ್ತಾ ಹೋಗುತ್ತಿದ್ದಳು. ಅವಳ ಮನಸ್ಸಿನ ಮೇಲೆ ಘಾಸಿಯಾಗುತ್ತಿದ್ದದ್ದು ಮನೆಯಲ್ಲಿ ಯಾರಿಗೂ ಅರಿವಾಗಲೇ ಇಲ್ಲ. ಅದರ ಬದಲಾಗಿ ಶ್ರೀರಂಗಳನ್ನು ದೂರವಿಟ್ಟು, ಶಿಕ್ಷೆ ಕೊಟ್ಟು ಸರಿ ಮಾಡಲು ನೋಡುತ್ತಿದ್ದದ್ದೇ ಹೆಚ್ಚು. 


ಶಾಂತಳ ತಾಯಿ ಶ್ರೀರಂಗಳನ್ನು ಪ್ರೀತಿಯಿಂದ ನೋಡಿ, ಆಕೆಯ ಕುರಿತು ಅಸ್ಥೆ ತೋರಿದ್ದೇ ತಪ್ಪಾಯ್ತು ಎನ್ನುವಂತೆ ಮಾಡಿಬಿಟ್ಟರು ಲಕ್ಷ್ಮಮ್ಮ. ಇದಕ್ಕೆ ಮೀನಾಕ್ಷಿಯ ಮನೆಯವರ ಪಾಲು ಸಹ ಇತ್ತು. ಆ ಪ್ರಸಂಗವಾದರೂ ಏನು..? ಓದಿ ನೋಡಿ. 


ಶ್ರೀರಂಗಳ ಹದಗೆಟ್ಟ ಮನಸ್ಥಿತಿಯ ಪರಿಣಾಮ ಆಕೆಯ ವರ್ತನೆಯ ಮೇಲಾಯಿತು. ಅದನ್ನು ಶಾಂತ ಗಮನಿಸಿದಳು ಸಹ. ಯಾರಿಗಾದರೂ ತೊಂದರೆಯಾದರೆ ಸಂತಸ ಪಡುವಷ್ಟು ಬದಲಾದಳೇ ಶ್ರೀರಂಗ..?


ಶ್ರೀರಂಗಳ ಚಿಕ್ಕಮ್ಮ ಬಂದಾಗ ಅವಳ ವರ್ತನೆ ಸೂಕ್ಷ್ಮವಾಗಿ ಅವರ ಗಮನಕ್ಕೆ ಬಂದಿತು. ಜೊತೆಗೆ ಲಕ್ಷ್ಮಮ್ಮನವರ ಬಳಿಯಲ್ಲಿ ಅವಳ ವರ್ತನೆಯನ್ನು ಹೇಳಿದರು ಸಹ, ಜೊತೆಗೆ ಸೂಕ್ಷ್ಮದ ಹುಡುಗಿಯನ್ನು ಕಾಡದಂತಿರಲು ಹೇಳಿ ಅವಳ ಮನಸ್ಸನ್ನು ಸಾಧ್ಯವಾದಷ್ಟು ಪರಿವರ್ತನೆ ಮಾಡಿ ಇನ್ನು ಮೂರು ತಿಂಗಳಲ್ಲಿ ತನ್ನ ಊರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದಳು. ಶ್ರೀರಂಗ ೪ ನಂತರದ ದಿನಗಳು ಹೇಗಿದ್ದವು..? ವರದ ಬದಲಾದನೇ..?


ಇತ್ತ ಶಾಂತಳ ಮನಸ್ಥಿತಿ ಈಗ ಪ್ರಬುದ್ಧವಾಗಿ ಬದಲಾಗುತ್ತಿತ್ತು. ಶಾಂತಳ ತಾಯಿ ಪಾರ್ವತಮ್ಮನವರು ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಊರಿನ ಶಾನುಭೋಗರಾಗಿದ್ದ ತಮ್ಮ ಅಣ್ಣ ಮಹಾಬಲಯ್ಯನವರ ಮನೆಗೆ ಹೊರಟರು. ಶಾಂತ ಅಲ್ಲಿ ಹೋದಾಗ ಅಲ್ಲಿನ ಪರಿಸ್ಥಿತಿ ಹೇಗಿತ್ತು..? ಶಾಂತಳ ಅತ್ತೆಗೆ ಶಾಂತಳನ್ನು ಕಂಡರೆ ಸಿಡಿಮಿಡಿಯಾಗುತ್ತಿದ್ದುದ್ದೇಕೆ..?


ಶ್ರೀಪಾದರಾಯರು ಮಹಾಬಲಯ್ಯನವರ ಟೆಲಿಗ್ರಾಂ ಅನ್ನು ಕಂಡು ಧಾವಿಸುವಷ್ಟರಲ್ಲಿ ಅವರಿಗಾಗಿ ಕಾಯುತ್ತಿದ್ದ ವಾರ್ತೆಯಾದರೂ ಏನು..?


ಶಾಂತ ಮತ್ತಷ್ಟು ತಾಳ್ಮೆ ಹಾಗೂ ಶಾಂತಿಯಿಂದ ವರ್ತಿಸಲು ಶುರು ಮಾಡಿದಕ್ಕೆ ಹಾಗೂ ಅವಳ ಬದುಕಿನ ದೊಡ್ಡ ಬದಲಾವಣೆಯಾದದಕ್ಕೆ ಅವಳ ಪ್ರತಿಕ್ರಿಯೆ ಹೇಗಿತ್ತು..?


"ಬಾಲ್ಯ ಮುಂಜಾವು, ಯೌವ್ವನ ಮಧ್ಯಾಹ್ನ, ಮುಪ್ಪು ಸಂಜೆ. 

ಎದ್ದೊಡನೆ ಒಳ್ಳೆಯ ವಿಷಯ ಕೇಳಿ, ಒಳ್ಳೆಯ ಭಾವನೆಗಳು ಮನಸ್ಸಿನಲ್ಲಿ ಉದ್ಭವಿಸಿದರೆ ಆ ದಿನವೆಲ್ಲ ಹಿತವಾಗಿರುತ್ತೆ. ದಿನಪೂರ್ತಿ ಹರ್ಷ ಉತ್ಸಾಹ ತುಂಬಿರುತ್ತೆ. ಎದ್ದ ಕೂಡಲೇ ಕಿರಿಕಿರಿ ಅಂತ ಮನಸ್ಸಿಗೆ ಅನ್ನಿಸಿದರೆ ಆ ದಿನವೆಲ್ಲ ಸಮಾಧಾನವಿರುವುದಿಲ್ಲ ಜೀವನದಲ್ಲೂ ಹಾಗೇನೆ. ಬಾಲ್ಯದಲ್ಲಿ ನಾವು ಮಕ್ಕಳಿಗೆ ಎಂತಹ ವಾತಾವರಣ ಕಲ್ಪಿಸಿ ಕೊಡುತ್ತೇವೋ ಹಾಗೆಯೇ ಅವರ ಜೀವನವೂ ರೂಪಿತವಾಗುತ್ತೆ."


ಮಕ್ಕಳ ಅನುಭವವನ್ನು ತಿದ್ದುವುದರ ಜೊತೆಗೆ ತಂದೆ ತಾಯಿಯರ ಸ್ವಭಾವ, ವರ್ತನೆಯಲ್ಲಿಯೂ ಬದಲಾವಣೆ ಬೇಕಿರುತ್ತದೆ. ಅಂತಹ ಬದಲಾವಣೆಗೆ ಅವರೂ ಸಿದ್ದರಿರಬೇಕು. ಇಲ್ಲವಾದಲ್ಲಿ ಯಾವುದೂ ಬದಲಾಗದು. 


ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಒಂದೊಂದು ನಡೆಯೂ ಅವರ ಮನಸ್ಸನ್ನು ಯಾವ ರೀತಿಯಲ್ಲಿ ಫಾಸಿಗೊಳಿಸಬಹುದು ಎಂಬ ಅರಿವು ಅತ್ಯಗತ್ಯ. ಇಲ್ಲಿನ ಪರಿಸ್ಥಿತಿಯಲ್ಲಿ ಇಬ್ಬರು ಮಕ್ಕಳು ಹಾಗೂ ಹತ್ತು ಮಕ್ಕಳ ದೊಡ್ಡ ಕುಟುಂಬದ ವ್ಯತ್ಯಾಸವಿದೆಯಾದರೂ... ಪ್ರತಿ ಮಕ್ಕಳೂ ವಿಭಿನ್ನ ಹಾಗೂ ಪ್ರತಿ ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮ ಎಂಬುದನ್ನು ಗಮನಿಸಬಹುದು. ವರ್ತಮಾನದ ದಿನಗಳಲ್ಲಂತೂ ಇದು ಮತ್ತಷ್ಟು ಸೂಕ್ಷ್ಮವಾಗಿದೆ ಎಂಬುದು ಗಮನೀಯ.


ಮಕ್ಕಳನ್ನು ತಿದ್ದಲು ಪ್ರತಿ ಸಂದರ್ಭದಲ್ಲಿಯೂ ಶಿಕ್ಷೆ ಅನಗತ್ಯ . ಎಷ್ಟೋ ಬಾರಿ ಶಿಕ್ಷೆ ಭಯ ಹುಟ್ಟಿಸುತ್ತದೆ. ಮಾತ್ರವಲ್ಲದೆ.. ಮೊಂಡುತನದ ವರ್ತನೆಗೂ ಕಾರಣವಾಗುತ್ತದೆ. ಅವರನ್ನು ತಿದ್ದುವ ನಾನಾ ವಿಧಗಳನ್ನು ನಾವು ಶಾಂತಳ ತಂದೆ-ತಾಯಿಯ ರೂಪದಲ್ಲಿ ಕಾಣಬಹುದು. ಮಕ್ಕಳಿಗೆ ಕಥೆ ಹೇಳುವ ಚಿತ್ರಣ  ಹಾಗೂ ಸ್ನೇಹಿತರೊಂದಿಗೆ ಬೆರೆತು ಆಟ ಆಡುವ ಚಿತ್ರಣಗಳು ಅವರ ಬೆಳವಣಿಗೆಗೆ ಎಷ್ಟು ಅಗತ್ಯ ಎಂಬುದನ್ನು ಮನಗಾಣಿಸುತ್ತವೆ.


1963 ರಲ್ಲಿ ಬರೆದ ಕಾದಂಬರಿಯಾದರೂ.. ಇಂದಿನ ಸಮಸ್ಯೆಗೂ ಪ್ರಸ್ತುತ.. ಪುಟ್ಟ ಮಕ್ಕಳ ತಂದೆ-ತಾಯಿಯಂದಿರು ಓದಿದರೆ ಅವರಿಗೆ ಮಾರ್ಗದರ್ಶಿಯಂತಿದೆ ಹಾಗೂ ಹೆಚ್ಚು ಕನೆಕ್ಟ್ ಆಗುತ್ತದೆ. 


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ