ವಾರದಿಂದ ಕೃತಿಗೆ ತನ್ನ ಗಂಡನ ನಡೆಯ ಮೇಲೆ ಅನುಮಾನ ಮೂಡಿತ್ತು. ತಾನು ಮಲಗಿದ ನಂತರ ಪಿಸುದನಿಯಲ್ಲಿ ಫೋನ್ ನಲ್ಲಿ ಮಾತನಾಡುವುದು, ತಾನು ಹೋದಾಗ ಸುಮ್ಮನಾಗುವುದು, ಆಫೀಸ್ ಅವಧಿಗಿಂತ ಮುನ್ನವೇ ಮನೆ ಬಿಡುವುದು, ಮನೆ ಸೇರುವುದು ಲೇಟಾದ ಸಂಧರ್ಭದಲ್ಲಿ ಮಾತು ತಪ್ಪಿಸುವುದು ಹೀಗೆ.. ತನ್ನ ಹುಟ್ಟುಹಬ್ಬದ ದಿನ ಹಾರೈಸುವುದಿರಲಿ.. ಮಾತೂ ಆಡದಂತೆ ಹೊರಟಾಗ ಅವನಿಗೆ ಗೊತ್ತಾಗದಂತೆ ಹಿಂಬಾಲಿಸಿ ಹೋಗಿ ನೋಡಿದಾಗ ತನ್ನ ಆಪ್ತ ಗೆಳತಿ ಪ್ರಿಯಾ ಜೊತೆಗೆ ಮಾತಿನಲ್ಲಿ ತೊಡಗಿದ್ದು ಕಂಡಿತು. ತನ್ನ ಅನುಮಾನಕ್ಕೆ ಪುಷ್ಠಿ ದೊರೆತಂತಾಗಿತ್ತು. ಬೇಡವೆಂದುಕೊಂಡರೂ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳ ಸರಮಾಲೆಯೇ..!
ತಂದೆ - ತಾಯಿ ನೋಡಿ ಮಾಡಿದ ವಿವಾಹಕ್ಕೆ ಆಯಸ್ಸು ಇಷ್ಟೆಯೇ..?! ಎಂದು ಆಲೋಚಿಸಿ ದುಃಖ ಪಟ್ಟಳಾದರೂ.. ಆತುರದಲ್ಲಿ ಹೋಗಿ ಪ್ರಶ್ನಿಸಲಿಲ್ಲ. ಯಾರ ಬಳಿಯೂ ಈ ವಿಚಾರ ಹಂಚಿಕೊಳ್ಳಲಿಲ್ಲ. ಅವನ ಒಳ್ಳೆಯತನ ನಾಟಕವೇ ಎಂದು ಯೋಚಿಸಿದಳಾದರೂ.. ಅಂತಹ ಯಾವುದೇ ಕಪ್ಪು ಚುಕ್ಕಿಯೂ ಕಾಣಲಿಲ್ಲ. ತಾನೇ ಮಾತನಾಡಿ ಬಗೆಹರಿಸಿಕೊಳ್ಳಲು ತೀರ್ಮಾನಿಸಿಕೊಂಡು ತಳಮಳದಿಂದಲೇ ಹೊರಟಳಾದರೂ.. ಅವಳಿಗೆ ಅಂತಹ ಪ್ರಮೇಯವೇ ಬರಲಿಲ್ಲ.
ಸಂಜೆ ಕುಟುಂಬ, ಸ್ನೇಹಿತರೊಂದಿಗೆ ಸಿಕ್ಕ ಹುಟ್ಟುಹಬ್ಬದ ವಿಶೇಷ ಪಾರ್ಟಿ ಅವನ ನಿಗೂಢ ನಡೆಗೆ ಉತ್ತರ ಕೊಟ್ಟಿತ್ತು. ಆತುರಪಟ್ಟು ಆತನ ಕಣ್ಣಲ್ಲಿ ಸಣ್ಣವಳಾಗಲಿಲ್ಲವಲ್ಲ ಎಂದು ಖುಷಿ ಪಟ್ಟಳು. ಅವನ ಮೇಲಿನ ಗೌರವ, ಪ್ರೀತಿಗಳು ದುಪ್ಪಟ್ಟಾಗಿದ್ದವು. ದಾಂಪತ್ಯದಲ್ಲಿ ನಂಬಿಕೆ, ತಾಳ್ಮೆಯ ಅಗತ್ಯ ಮನದಟ್ಟಾಗಿತ್ತು.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ