ಶನಿವಾರ, ಮೇ 30, 2026

ಋಷ್ಯಶೃಂಗ (ಪುಸ್ತಕ ಯಾನ - 453)


ಪುಸ್ತಕದ ಶೀರ್ಷಿಕೆ : ಋಷ್ಯಶೃಂಗ

ಲೇಖಕರು : ಡಾ. ಲಕ್ಷ್ಮಣ ಕೌಂಟೆ 

ಪ್ರಕಾಶಕರು : ಭರತ್ ಬುಕ್ಸ್

ಪ್ರಥಮ ಮುದ್ರಣ : 2019

ಪುಟಗಳು : 326

ಬೆಲೆ : 325 ರೂ. 


ಋಷ್ಯಶೃಂಗ ಮುನಿಯ ಹೆಸರು ಮಳೆಯ ಮುನಿ ಎಂದೇ ಖ್ಯಾತಿಯಾಗಿರುವ ಹೆಸರು. ಇದು ವೇದಕಾಲಕ್ಕೆ ಸಂಬಂಧಿಸಿದ ಕಥಾವಸ್ತು. ಆದರೆ, ಪಾತ್ರಗಳು ಹಾಗೂ ಅದನ್ನು ಮರು ಸೃಷ್ಟಿಸಿರುವ ಬಗೆ ವಿಭಿನ್ನವಾಗಿದೆ. 


ಸಮಾಜದ ಜೀವನಾಡಿ ಮಳೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡರ ಸಂದರ್ಭದಲ್ಲಿಯೂ ಮಳೆಯ ಮಹತ್ವ ಹೆಚ್ಚು. ವೇದ ಕಾಲದಲ್ಲಿ ಎಲ್ಲದಕ್ಕೂ ಮಾರ್ಗ ತೋರಲು ಮಾರ್ಗದರ್ಶಕರಾಗಿ ಋಷಿ-ಮುನಿಗಳು ಕಾಣುತ್ತಾರೆ. ಇಲ್ಲಿಯೂ ಅಂತಹ ಮುನಿಗಳಿಂದಲೇ ಕಥೆಯ ಆರಂಭವಾಗುತ್ತದೆ. 


ಮಹಾಪಿತೃ ಕಶ್ಯಪನ ಸಂಸಾರವನ್ನು ಹಾಗೂ 13 ಜನ ವಿಭಿನ್ನ ಮನಸ್ಥಿತಿಯ ಹೆಂಡತಿಯರ, ಮಕ್ಕಳ ಪರಿಚಯ ಮಾಡಿಕೊಡುವುದು ಆತನ ಮಗ ವಿಭಾಂಡಕ. ಅಪ್ಪನ ಸಂಸಾರವನ್ನು ನೋಡಿ ಅಂತಹ ಸಹವಾಸವೇ ಬೇಡ ಎಂದು ತಪಸ್ಸಿನ ಋಜುಮಾರ್ಗವನ್ನು ಆಯ್ಕೆ ಮಾಡಿಕೊಂಡರೂ.. ಮೋಹ, ಕಾಮಗಳು ಬಿಡದೆ ಆತನಿಗೆ ಮಗ ಋಷ್ಯಶೃಂಗ ಜೊತೆಯಾಗುವಂತಾಯಿತು. ಅಪ್ಪ-ಮಗ ವಾಸಿಸುತ್ತಿದ್ದ ಈ ಕಾಡಿಗೆ ಯಾವ ನರಪಿಳ್ಳೆಯೂ ನುಸುಳುವ ಧೈರ್ಯ ಮಾಡಿರಲಿಲ್ಲ. ಮಗ ಬಂದ ಮೇಲಂತೂ ಅವರಿಬ್ಬರೂ ಕೌಶಿಕಿ ನದಿ ದಾಟಿ ಆಚೆ ದಡಕ್ಕೆ ಹೋದವರಲ್ಲ. ದುರ್ಗಮ ಕಾಡಿನಲ್ಲಿದ್ದ ಅವರ ಕುರಿತಾಗಿ ಹಲವು ದಂತಕಥೆಗಳಿದ್ದವು. ವಿಭಾಂಡಕನನ್ನು ತನ್ನ ಮೋಹಪಾಷಕ್ಕೆ ಸಿಲುಕಿಸಿದ ಹರಿಣ ಸುಂದರಿಯ ಆಲೋಚನೆ ಏನಿತ್ತು..? ಆ ಮಾಯಾಜಾಲಕ್ಕೆ ಆತ ಸಿಲುಕಿದ್ದೇಗೆ..? ಓದಿ ನೋಡಿ. 


ಈಗಿನ ಕಾಲದಲ್ಲಿಯಾದರೆ ಪೋಷಣೆಯ ಜವಾಬ್ದಾರಿ ಎಲ್ಲವೂ ತಾಯಿಯದ್ದೇ ಆಗಿರುತ್ತದೆ. ಆದರೆ, ಋಷ್ಯಶೃಂಗನ ಪೋಷಣೆಯ ಜವಾಬ್ದಾರಿ ವಿಭಾಂಡಕನ ಹೆಗಲೇರುತ್ತದೆ. ವಿಭಾಂಡಕ ಆತನನ್ನು ಹೇಗೆ ಬೆಳೆಸುತ್ತಾನೆಂದರೆ.. ಸ್ತ್ರೀ ಕುರಿತ ಆಲೋಚನೆಯೂ ಅವನಿಗೆ ಹುಟ್ಟದಂತೆ.. ತನ್ನನ್ನು ಹೆತ್ತವಳು ಸ್ತ್ರೀ ಎಂಬುದೂ ಆತನ ಅರಿವಿಗೆ ಬಾರದಂತೆ..! ಹಾಗೆಂದು, ಋಷ್ಯಶೃಂಗನೇನೂ ದಡ್ಡನಲ್ಲ. ತಪಸ್ಸು, ಜ್ಞಾನಸಿದ್ಧಿ, ಮಂತ್ರ ಎಲ್ಲದರಲ್ಲಿಯೂ ಕಠಿಣ ಪರಿಶ್ರಮ ತೋರಿ ಬುದ್ಧಿವಂತನಾದವನು. ಋಷ್ಯಶೃಂಗನಿಗೆ ಲೌಕಿಕದ ಆಲೋಚನೆಗಳು ಬಂದರೂ ಅದಕ್ಕೆ ಉತ್ತರ ವಿಭಾಂಡಕನಿಂದ ಸಿಗುವಂತಿರಲಿಲ್ಲ. ಅಪ್ಪನ ಅಣತಿಯನ್ನು ಮೀರದ ಮಗ, ಅಂತರ್ಮುಖಿಯಾದ ಋಷ್ಯಶೃಂಗನನ್ನು ಕಾಣಬಹುದು. 


ಬಾಲಕನಿಂದ ಯುವಕನಾಗುವ ಹಂತದವರೆಗೂ ಋಷ್ಯಶೃಂಗ ಯಾವೆಲ್ಲ ರೀತಿಯ ಭಾವನೆಗಳನ್ನು, ಜೊತೆಗೆ ಶಿಕ್ಷೆಗಳನ್ನು ಅನುಭವಿಸಿದ ಓದಿ ನೋಡಿ. ಶ್ಲೋಕಗಳು ಜೊತೆಗೆ ವ್ಯಾಖ್ಯಾನಗಳ ಮೂಲಕ ಮಗನ ಸಂದೇಹಗಳಿಗೆ ಉತ್ತರಿಸುವ ತಂದೆಯ ಉತ್ತರಗಳು ತನಗೆ ಯಾವ ರೀತಿಯ ಉತ್ತರಗಳನ್ನು ನೀಡಬೇಕೋ ಅಂತಹ ಸಮರ್ಥನೆಗಳನ್ನು ನೀಡುವುದನ್ನು ಕಾಣಬಹುದು. ಹೊರಗಿನ ಲೋಕದ ಕುರಿತು ವಿಭಾಂಡಕ ಏನು ಹೇಳಿ ಋಷ್ಯಶೃಂಗನನ್ನು ತಡೆಹಿಡಿದಿದ್ದ ಓದಿ ನೋಡಿ.


ಚಂಪಾಪುರದ ಮಹಾರಾಜ ರೋಮಪಾದ ತನ್ನ ದೇಶದಲ್ಲಿ ದಶಕದಿಂದ ಮುನಿದ ವರುಣದೇವನ ನಡೆಗೆ ಉತ್ತರ ಹುಡುಕುತ್ತಿದ್ದ. ಮಳೆ ಕೇವಲ ಬೆಳೆಯ ಹಾಗೂ ಕುಡಿಯುವ ನೀರಿನ, ಆಹಾರದ ವಿಚಾರವಲ್ಲ. ಇದರಿಂದಾಗಿ ಉಂಟಾದ ಕಳ್ಳರ ಹಾವಳಿ, ಮೈಗಳ್ಳರು, ಹೆಚ್ಚುತ್ತಿರುವ ಅರಾಜಕತೆ.. ಇದರಿಂದ ರಾಜ್ಯದಲ್ಲಿ ಉಂಟಾಗುವ ಉತ್ಪಾತಗಳನ್ನು ಕಾಣಬಹುದು. ರೋಮಪಾದನ ಆಸ್ಥಾನದಲ್ಲಿ ಜ್ಞಾನವೃದ್ದ ಮತಿವಂತ, ಸುಹರ್ಷ, ಮಹತ್ತ, ಸುಚೇತನರ ಜೊತೆಗೆ ಸಭೆ ನಡೆದರೂ ತೃಪ್ತಿ ತರುವ ಉತ್ತರಗಳು ಸಿಗಲಿಲ್ಲ. 


ರೋಮಪಾದನ ಮಹಾರಾಣಿ ವರ್ಷಿಣಿ ಆತನ ಚಿಂತೆಯ ಕಾರಣ ತಿಳಿಯುತ್ತಾಳೆ. ಮಹಾರಾಣಿ ವರ್ಷಿಣಿ ಅಯೋಧ್ಯೆಯ ಮಹಾರಾಜ ದಶರಥನ ಮೊದಲ ಪತ್ನಿ ಕೌಸಲ್ಯಳ ತಂಗಿ. ಮಕ್ಕಳನ್ನು ಪಡೆಯುವ ಭಾಗ್ಯವಿಲ್ಲದಾದಾಗ ದಶರಥ ಹಾಗೂ ಕೌಸಲ್ಯರ ಏಕೈಕ ಸಂತಾನ ಶಾಂತೆಯನ್ನು ದತ್ತು ಪಡೆದಿದ್ದರು. ಅವರಿಗೂ ಮಕ್ಕಳಾದದ್ದು ಇವರಲ್ಲಿ ಚಿಂತೆಯನ್ನು ತಂದಿತ್ತು. ಶಾಂತೆಗೆ ಈಗ ವಿವಾಹದ ವಯಸ್ಸು. ಅಳಿಯನ ರೂಪದಲ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ದೊಡ್ಡ ಜವಾಬ್ದಾರಿ ಹೆಗಲೇರಿತ್ತು.


ಅಂಗ ದೇಶಕ್ಕೆ ಸಂಬಂಧಿಸಿದಂತೆ ಶಾಂತೆಯ ದಾಸಿಯರಾದ ವೃದ್ಧದಾಸಿ ಸುಪರ್ಣಿಕ ಒಂದು ಕಥೆ ಹೇಳಿದರೆ, ಮಾಗಿದ ಹರೆಯದ ದಾಸಿ ಅಂಗವತಿ ಪೂರಕವಾದ ಮತ್ತೊಂದು ಕಥೆಯನ್ನು ರಸವತ್ತಾಗಿ ಹೇಳುತ್ತಾಳೆ. ಅವರಿಬ್ಬರೂ ಹೇಳಿದ ಕಥೆಗಳಲ್ಲಿ ಶಾಂತೆ ಹಲವು ದೊರೆಗಳ ಕಥೆಯನ್ನು ಕಾಣುತ್ತಾಳೆ. ರಾಜಕುಮಾರನಿಗಿಂತ ಋಷಿಕುಮಾರನನ್ನು ವಿವಾಹವಾಗಲು ಇಚ್ಚಿಸುತ್ತಾಳೆ. ಇದಕ್ಕೆ ದಶರಥ ಮಹಾರಾಜ ಹಾಗೂ ರೋಮಪಾದರ ಬದುಕಿನ ರೀತಿಯೂ ಪರೋಕ್ಷವಾಗಿ ಪ್ರಭಾವಿಸಿರುತ್ತದೆ. ಋಷಿಕುಮಾರನನ್ನು ಮದುವೆಯಾಗುವುದಾದರೆ ಮಳೆಯ ದೇವತೆಯನ್ನು ವಶವರ್ತಿಯನ್ನಾಗಿಸಿಕೊಂಡಿರುವ ಋಷ್ಯಶೃಂಗನನ್ನೇ ವಿವಾಹವಾಗು ಇದರಿಂದ ರಾಜ್ಯದ ಬರವೂ ನೀಗುತ್ತದೆ. ನಿನ್ನ ಆಸೆಯೂ ಈಡೇರುತ್ತದೆ ಎಂದು ಹೇಳಿದ ಸುಪರ್ಣಿಕೆಯ ಮಾತುಗಳಿಗೆ ಆಕೆಯ ಮನಸ್ಸು ಕಟ್ಟುಬಿದ್ದಂತೆ.. ಕನಸಲ್ಲಿಯೂ ಋಷ್ಯಶೃಂಗನನ್ನೇ ಕೈಹಿಡಿದಂತೆ ರಾಜ್ಯದ ಸಮಸ್ಯೆಯನ್ನು ಬಗೆಹರಿಸಿದಂತೆ ಕನಸು ಕಾಣುತ್ತಾಳೆ ಶಾಂತೆ.


ಆದರೆ, ಅದು ಅಷ್ಟು ಸುಲಭವಿರಲಿಲ್ಲ. ಒಂದೊಮ್ಮೆ ಶಾಂತೆಯೇ ಅದಕ್ಕೆ ಒಪ್ಪಿದರೂ ಮಹಾರಾಣಿ ವರ್ಷಿಣಿ ಒಪ್ಪುವ ಪ್ರಮೇಯವೇ ಇರಲಿಲ್ಲ.


ತ್ರಿಕಾಲಜ್ಞಾನಿ ಎಂದು ಖ್ಯಾತಿ ಹೊಂದಿದ್ದ ಜ್ಯೋತಿಷ್ಯ ರತ್ನಾಕರ ವಿದ್ವಾನ್ ವಿಷ್ಣುಶರ್ಮ ಶಾಸ್ತ್ರಿಗಳಿಂದ ರಾಜ್ಯದ ಬರಗಾಲಕ್ಕೆ ಹಿನ್ನೆಲೆ ತಿಳಿಯುತ್ತದೆ. ಅದು ಅರಮನೆಯಿಂದ ಆದ ಅಪಚಾರ. ಅದಕ್ಕಿಂತಲೂ ಮುಖ್ಯವಾಗಿ ಸಿಕ್ಕಿದ್ದು ಪರಿಹಾರ. ಅದೇ ಋಷ್ಯಶೃಂಗರನ್ನು ಕರೆತರುವುದು. ರೋಮಪಾದನ ರಕ್ತದಿಂದ ಜನಿಸಿದ ಓರ್ವರನ್ನು, ರಾಜಕುಮಾರಿಯನ್ನು ಕಳುಹಿಸಿ ಋಷಿಕುಮಾರನನ್ನು ಮೋಹದ ಕಾಲದಲ್ಲಿ ಬೀಳಿಸಿ ಕರೆತರುವ ಉಪಾಯವನ್ನು ಹೇಳಿದರಾದರೂ ಆ ಉಪಾಯವನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಿತ್ತು. ವರ್ಷಿಣಿ ಶಾಂತೆಯನ್ನು ಕಳುಹಿಸಲು ಒಪ್ಪಲೇ ಇಲ್ಲ.


ಸುಮಾರು ವರ್ಷಗಳ ಹಿಂದೆ ಕೌಶಾಂಬಿಯ ವಣಿಕನನ್ನು ವಂಚನೆಯ ಆರೋಪದ ಮೇಲೆ ಬಂಧಿಸಿ ಅವನ ಸಮಸ್ತ ಆಸ್ತಿಯಲ್ಲಿ ಹತ್ತರಷ್ಟು ಮಾತ್ರ ಸಂಸಾರ ನಿರ್ವಹಣೆಗೆ ನೀಡಿ ಉಳಿದದ್ದೆಲ್ಲವನ್ನು ರಾಜ್ಯಶಾಸನ ವ್ಯಾಪ್ತಿಗೆ ಪಡೆದುಕೊಂಡಿದ್ದರು. ಬಂಧಮುಕ್ತನಾಗಿದ್ದ ಆತ, ಮುನಿವರ್ಯರೊಂದಿಗೆ ಬಂದಿದ್ದರು. ಮುನಿಯ ಮನವಿಯನ್ನು ತಿರಸ್ಕರಿಸಿ ಕಳುಹಿಸಿದಾಗ ಅವನು ಶಪಿಸುತ್ತಾ ಹೊರಟಿದ್ದ. ಅದೇ ಇದಕ್ಕೆ ಕಾರಣವೆಂದು ಅರಿವಾಗಿತ್ತು. ಈ ಎಲ್ಲಾ ನೆನಪಿನ ಜೊತೆಗೆ ತಾಮ್ರಲಿಪ್ತಿಯ ಅರ್ಥಗುಪ್ತನ ಮಗಳು ಹೇಮಪ್ರಭೆಯ ನೆನಪು ತಳುಕು ಹಾಕಿಕೊಂಡಿತು. ನೆನಪು ಮಾತ್ರವಲ್ಲ, ಪರೋಕ್ಷವಾಗಿ ಈ ಪ್ರಸಂಗ ಅವಳ ಸುತ್ತಲೇ ಸುತ್ತುತ್ತಾ ಸಾಗುತ್ತದೆ. ರೋಮಪಾದ ನಿಗೂ ಹೇಮಪ್ರಭೆಗೂ ಇದ್ದ ಸಂಬಂಧವೇನಿತ್ತು ..?


ಹೇಮಪ್ರಭೆಯ ಗುಣಲಕ್ಷಣಗಳನ್ನು ಅರಿಯಲೆಂದು ಕಳುಹಿಸಿದ ಬ್ರಾಹ್ಮಣರು ಅಂದು ಅಸತ್ಯವನ್ನು ನುಡಿದಿದ್ದರ ಪರಿಣಾಮ ಯಾವ ರೀತಿಯಾಗಿತ್ತು.?


ಕಾಲಚಕ್ರ ಬಹಳ ಮುಂದಕ್ಕೋಡಿತ್ತು. ಈಗ ಹೇಮಪ್ರಭೆ ತನ್ನ ವೃದ್ಧದಾಸಿ ಮಕರಂದಿಕೆ ಹಾಗೂ ಮಗಳು ಓಜಸ್ವತಿಯ ಜೊತೆಯಲ್ಲಿ ಅವಳದೇ ಸಂಸಾರದಲ್ಲಿ ಮುಳುಗಿದ್ದಳು. ತಾರುಣ್ಯದ ಹೇಮಪ್ರಭೆಯ ಪ್ರತಿರೂಪದಂತಿದ್ದಳು ಓಜಸ್ವತಿ. ಅಂಗ ದೇಶದ ರಾಜಧಾನಿ ಚಂಪಾಪುರದಲ್ಲಿ ಪ್ರತಿವರ್ಷದಂತೆ ನಡೆಯುತ್ತಿದ್ದ ನಗರೋತ್ಸವದಲ್ಲಿ ನೃತ್ಯ, ಶಾಸ್ತ್ರೀಯ ಸಂಗೀತ ಸ್ಪರ್ಧೆಗಳಲ್ಲಿ ಹಾಗೂ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಓಜಸ್ವತಿ ನಾಡಸುಂದರಿ ಎಂದು ಆಯ್ಕೆಯಾದಳು. ರೋಮಪಾದರ ಕೃಪಾದೃಷ್ಟಿಗೆ ಬಿದ್ದಳು. ಜೊತೆಗೆ ಶಾಂತೆ ಆಕೆಯ ಗೆಳತಿಯಂತೆ ಮಾತ್ರವಲ್ಲದೆ, ಆಕೆಯನ್ನು ಅಕ್ಕನಂತೆ ಭಾವಿಸಿ ಬಾಂಧವ್ಯ ಹೆಚ್ಚು ಮಾಡಿಕೊಂಡಳು. ಆದರೆ, ಹೇಮಪ್ರಭೆ ಮಾತ್ರ ಮಹಾರಾಜರು ಎಷ್ಟೇ ಹೇಳಿದರೂ ಅವರ ಭೇಟಿಗೆ ಸಿದ್ಧವಿರಲಿಲ್ಲ.


ಈ ನಡುವೆ ಮಳೆಗಾಗಿ ವಿಶ್ವಾಮಿತ್ರರ ಉಸ್ತುವಾರಿಯಲ್ಲಿ ಯಾಗ ನಡೆದರೂ ಮಳೆ ಬರಲಿಲ್ಲ. ವಿಶ್ವಾಮಿತ್ರರು ಹಾಗೂ ವಿಭಾಂಡಕರ ಭೇಟಿಯಾದರೂ ಅದು ಫಲಿಸಲಿಲ್ಲ. ಉಳಿದ ದಾರಿ ಎಂದರೆ ಋಷ್ಯಶೃಂಗನನ್ನು ಕರೆತರುವುದು.


ಋಷ್ಯಶೃಂಗನನ್ನು ಕರೆತರಲು ನೇಮಕವಾದದ್ದು ಓಜಸ್ವತಿ, ಇದು ಸುಲಭದ ಹಾದಿಯಾಗಿರಲಿಲ್ಲ. ಇದಕ್ಕೆ ಮಹಾರಾಣಿ ವರ್ಷಿಣಿ ಒಪ್ಪಿಗೆ ಕೊಟ್ಟದ್ದೇಕೆ..? ಹೇಮಪ್ರಭೆ ಹಾಗೂ ರೋಮಪಾದರ ನಡುವಿನ ಸಂಬಂಧ ಹೇಗಿದ್ದಿತ್ತು..? ಓಜಸ್ವತಿಯ ಜೊತೆಗೆ ಹೇಮಪ್ರಭೆ ಹಾಗೂ ಮಕರಂದಿಕೆಯರು ಅವಳಿಗಿಂದೇ ಕಟ್ಟಿಸಲಾದ ದೋಣಿಮನೆಯಲ್ಲಿ ನೆಲೆಸಲು ಹೊರಟರು. ಅಲ್ಲಿಯ ಸ್ಥಳೀಯತೆಯ ಅರಿವಿದ್ದ ಮೃಗಾಂಕಲೇಖೆ ಜೊತೆಯಾಗಿದ್ದಳು. ವಾಚಾಳಿಯಾಗಿದ್ದ ಅವಳಿಂದ ಯಾವೆಲ್ಲ ವಿಚಾರಗಳು ಹೊರಬರುತ್ತವೆ. ವಾಚಾಳಿಯಾದ ಅವುಗಳಲ್ಲಿ ಸತ್ಯವೆಷ್ಟು.. ಸುಳ್ಳೆಷ್ಟು..? ಎಂಬುದನ್ನು ಸೋಸಿ ತೆಗೆದ ಬಗೆ ಹೇಗೆ..? ಓಜಸ್ವತಿಯ ಈ ಪ್ರಯತ್ನಕ್ಕೆ ಶಾಂತೆ ಒಪ್ಪಿದಳೇ..? ಓಜಸ್ವತಿ ಶಾಂತೆಗೆ ಕೊಟ್ಟ ಮಾತೇನು..? ಓಜಸ್ವತಿಯ ಈ ಪ್ರಯತ್ನದಲ್ಲಿ ಪ್ರಕೃತಿ ಎಷ್ಟು ಸಹಕರಿಸಿತು..? 


ಹೆಣ್ಣನ್ನೇ ಕಾಣದ, ಹೆಂಗಸು ಎಂದರೆ ನಕಾರಾತ್ಮಕ ಆಲೋಚನೆಗಳನ್ನೇ ತುಂಬಿಕೊಂಡಿದ್ದ ಋಷ್ಯಶೃಂಗನ ಮನಸ್ಸನ್ನು ಪರಿವರ್ತಿಸಲು ಓಜಸ್ವತಿ ಪೂರ್ವಜನ್ಮದ ಯಾವ ಕಥೆಯನ್ನು ಹೇಳಿದಳು..?  ಆತನನ್ನು ತನ್ನಡೆ ಸೆಳೆಯಲು ಯಾವೆಲ್ಲ ತಂತ್ರ ಹೂಡಿದಳು..? ವಿಭಾಂಡಕನ ಕಣ್ಣಿಗೆ ಮಣ್ಣೆರಚ್ಚುವ ಪ್ರಯತ್ನದಲ್ಲಿ ಯಾವೆಲ್ಲ ಅಡೆತಡೆಗಳನ್ನು ಮೀರಬೇಕಾಗಿ ಬಂದಿತು..?


ನಮಗೆಲ್ಲ ಗೊತ್ತಿರುವ ಪುರಾಣದ ಕಥೆಯಂತೆ ಶಾಂತೆ ಹಾಗೂ ಋಷ್ಯಶೃಂಗರ ವಿವಾಹವಾಗುತ್ತದೆ. ಹಾಗಿದ್ದರೆ ಓಜಸ್ವತಿಯ ಗತಿ ಏನು..? ಅರಮನೆಯ ಒಳ ರಾಜಕೀಯಗಳ ಹುನ್ನಾರವನ್ನು ಇಲ್ಲಿ ತೆರೆದಿಡುತ್ತಾರೆ. ಕೌಸಲ್ಯೆಯನ್ನು ಮಾತೃರೂಪಿಯನ್ನಾಗಿ ಮಾತ್ರ ಚಿತ್ರಿಸಿಕೊಂಡಿದ್ದ ನನಗೆ ಇಲ್ಲಿನ ಕೌಸಲ್ಯೆ ಬೇರೆಯದ್ದೇ ರೂಪವಾಗಿ ಕಂಡಳು. ರಾಣಿಯರ ರಾಜಕೀಯದಲ್ಲಿ ಯಾವೆಲ್ಲ ರೀತಿಯ ಕುಟಿಲತೆಗಳು ಹಾಗೂ ಹುನ್ನಾರಗಳು ಕಾಣಬಹುದು..? ಸ್ವಾರ್ಥದ ಚಿಂತನೆಗಿಂತಲೂ ರಾಜ್ಯದ ಹಿತಾಸಕ್ತಿಯನ್ನು ಇಲ್ಲಿ ನಿಜಕ್ಕೂ ಆಲೋಚಿಸಿದವರು ಯಾರು..?


ಹುಟ್ಟಿನಿಂದ ವಿಭಾಂಡಕನನ್ನು ಹೊರತುಪಡಿಸಿ ಬೇರೆಯ ಲೋಕವೇ ಗೊತ್ತಿರದ ಋಷ್ಯಶೃಂಗ ಶಾಂತೆಯನ್ನು ಒಪ್ಪುತ್ತಾನಾ..?


ಕೆದಕಿದರೆ ಹಲವಾರು ಕಥೆಗಳ ಹಲವು ಸ್ವರೂಪಗಳು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ. ಸ್ವಹಿತಾಸಕ್ತಿ, ಕಾಮ.. ಆ ಕ್ಷಣಕ್ಕೆ ತಮ್ಮ ರೂಪವನ್ನು ತೋರದಿದ್ದರೂ ಮುಂದೆ ಯಾವೆಲ್ಲಾ ದೊಡ್ಡ ಬದಲಾವಣೆಗೆ ಮೂಲವಾಗಿರುತ್ತವೆ ಎಂಬುದನ್ನು ಇಲ್ಲಿ ಕಾಣಬಹುದು.


ಋಷ್ಯಶೃಂಗನಿಂದ ಮಳೆ ಬಂದಿತ್ತು. ಬದಲಾವಣೆ ಬಂದಿತು. ಅಂತಯೇ ಕೆಲವು ನಾಶವೂ ಉಂಟಾಯಿತು. ಕೆಲವು ಒಳ್ಳೆಯ ಬದಲಾವಣೆಗಾಗಿ ಅದರಿಂದ ಉಂಟಾಗುವ ಕೆಟ್ಟದ್ದನ್ನು ಸಹಿಸಿಕೊಳ್ಳಲು ಸಿದ್ಧವಿರಬೇಕು ಎನ್ನುವ ಅಂಶವನ್ನು ಇಲ್ಲಿ ಕಾಣಬಹುದು.


ಕಲ್ಪನೆ, ನಂಬಿಕೆ, ಪೌರಾಣಿಕತೆ ಎಲ್ಲವೂ ಹದವಾಗಿ ಬೆರೆತಿರುವ ಕಾದಂಬರಿಯ ಓದು ಇದು. 

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ