ಕವಿತೆಯ ಶೀರ್ಷಿಕೆ : ತಿರುಗಿ ನಿಂತ ಪ್ರಶ್ನೆ
ಲೇಖಕರು : ಡಾ|| ವಿಜಯಾ ದಬ್ಬೆ
ಅಪ್ಪ, ಜನಕ ಕಲಿಸಿದ ಅಕ್ಷರವಿತ್ತು
ಸಾಕವ್ವೆಯರು ಹೇಳಿಕೊಟ್ಟ ಹಾಡುಮಟ್ಟಿತ್ತು
ಸುತ್ತಮುತ್ತ ತಾಡಪತ್ರ ಚೆಲ್ಲಿತ್ತು
ಯಾಕೆ ಸುಮ್ಮನೆ ಕುಳಿತ ಸೀತೆ ನೀನು ?
ಅಶೋಕದ ನೆರಳಿತ್ತು
ನಿನ್ನ ತುಂಬಾ ಶೋಕವಿತ್ತು
ಕೈತುಂಬ ಬಿಡುವಿತ್ತು
ಇನ್ನೇನು ಬೇಕಿತ್ತು ?
ಯಾಕೆ ಸುಮ್ಮನೆ ಕುಳಿತ ಸೀತೆ ನೀನು ?
ಆಮೇಲೂ ಬಿಡುವಿತ್ತು
ಲವಕುಶರು ಬೆಳೆದು
ಆಶ್ರಮ ಪ್ರಶಾಂತವಿತ್ತು
ನಿನ್ನೆದುರು ಹರಿದು ಹೋದ
ಇಡೀ ಜೀವನವಿತ್ತು
ಯಾಕೆ ಸುಮ್ಮನೆ ಕುಳಿತ ಸೀತೆ ನೀನು ?
ನನ್ನ ಪ್ರಶ್ನೆಗಳಿಗೆಲ್ಲ
ಅವಳ ಭೂಮಿ ತೂಕದ ಮೌನ
ಕತ್ತತ್ತಿ ನೋಡಿದರೂ
ಅವಳ ಕಣ್ಣ ಭಾವಗಳು
ಶಬ್ದವಾಗದೆ ನನ್ನ ಕಣ್ಣಿಗಿಳಿದು
ತಿರುಗಿ ನಿಂತವು ಕೇಳಿದ್ದ ಪ್ರಶ್ನೆಗಳು
ಸೀತೆಯನ್ನು ಪ್ರಶ್ನಿಸುವ ಹಾಗೂ ಅವಳ ಆಂತರ್ಯವನ್ನು ಕೆದಕುವ ಪ್ರಯತ್ನದಲ್ಲಿ ಸಿಕ್ಕ ಉತ್ತರ ಅವಳ ಭೂಮಿ ತೂಕದ ಮೌನ ಎನ್ನುತ್ತಾರೆ.
ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಇರಬೇಕಿಲ್ಲ. ಉತ್ತರ ನೀಡಬೇಕಿಲ್ಲ. ಮೌನ ಎಲ್ಲಕ್ಕಿಂತಲೂ ಪ್ರಬಲವಾದ ಉತ್ತರ. ಅದರಲ್ಲೂ ಕಣ್ಣ ಭಾವನೆಗಳು ಕೊಡುವ ಉತ್ತರ, ಶಬ್ದದ ಮೂಲಕ ಕೊಡುವ ಉತ್ತರಕ್ಕಿಂತಲೂ ಹೆಚ್ಚಿನ ಅರ್ಥದ ಉತ್ತರವನ್ನು ದೊರಕಿಸಿಕೊಡುತ್ತದೆ.
ಜನಕ ಮಹಾರಾಜನ ಮಗಳಾದ ಸೀತೆಗೆ ವಿದ್ಯೆಯಿತ್ತು. ಹಾಡುವುದು ಗೊತ್ತಿತ್ತು. ಹಾಡು ಕಟ್ಟುವ ಸಾಮರ್ಥ್ಯವೂ ಇತ್ತು. ಹಾಗೂ ಓಲೆಗರಿಗಳೂ ಬೇಕಾದಷ್ಟಿದ್ದವು. ಆದರೂ.. ಯಾವುದರಲ್ಲಿಯೂ ತೊಡಗಿಸಿಕೊಳ್ಳದ ಸೀತೆಯ ಆಂತರ್ಯ ಏನಿರಬಹುದು..?
ಇನ್ನು ರಾವಣನ ಸೆರೆಯಲ್ಲಿದ್ದಾಗ ಸಮಯವಿತ್ತು. ಶೋಕವೂ ಇತ್ತು. ಮನಸ್ಸಿನ ನೋವನ್ನು ಹೊರಹಾಕಲು ಬಹಳಷ್ಟು ಅವಕಾಶ, ಸಮಯವಿತ್ತಾದರೂ .. ಸೀತೆ ಸುಮ್ಮನೆ ಕುಳಿತದ್ದೇಕಿರಬಹುದು..?
ಮಕ್ಕಳಾದ ಲವ-ಕುಶರು ಬೆಳೆದು ದೊಡ್ಡವರಾದ ನಂತರ ಕೈತುಂಬ ಬಿಡುವಿದ್ದರೂ.. ಪ್ರಶಾಂತವಾದ ವಾತಾವರಣವಿದ್ದರೂ.. ಸೀತೆ ಸುಮ್ಮನೆ ಕುಳಿತದ್ದೇಕೆ..? ಅದರಲ್ಲಿಯೂ ಅವಳ ಇಡೀ ಜೀವನಗಾಥೆ ಬೇರೊಂದು ರೂಪ ತಡೆಯಬಹುದಾದ ಸಾಧ್ಯತೆ ಇದ್ದಾಗಲೂ ಸೀತೆ ಸುಮ್ಮನಿದ್ದದ್ದೇಕೆ..?
ಇಂದಿನ ದಿನಮಾನಗಳಲ್ಲಿ ಇರುವ ವಿದ್ಯೆ ಹಾಗೂ ಹವ್ಯಾಸವನ್ನು.. ಬರಹ, ಹಾಡು, ಕಸೂತಿ ಕಲೆಯ ರೂಪ ಹೀಗೆ ಯಾವುದಾದರೂ ಒಂದರ ಮೂಲಕ ವ್ಯಕ್ತಪಡಿಸಲು ತೊಡಗುತ್ತಾರೆ. ಶೋಕ, ಮನದ ನೋವುಗಳು.. ಬಿಡುವಿನ ಸಮಯದಲ್ಲಿ ಕಥೆ, ಕಾವ್ಯದ ರೂಪ ತಳೆಯುತ್ತವೆ. ಮಕ್ಕಳು ಬೆಳೆದು ದೊಡ್ಡವರಾದರಂತೂ ಮನೆಯಲ್ಲಿ ಹೆಚ್ಚಿನ ಜವಾಬ್ದಾರಿಗಳಿಲ್ಲದಿದ್ದಾಗ ತಮ್ಮನ್ನು ತಾವು ಪುನರ್ ಅವಲೋಕಿಸಿಕೊಳ್ಳಲು ಹಾಗೂ ಯಾವುದಾದರೂ ಒಂದು ರೂಪದಲ್ಲಿ ಕಂಡುಕೊಳ್ಳಲು ಬಯಸುತ್ತಾರೆ. ಇಂದಿನ ಹೆಚ್ಚಿನ ಮಹಿಳೆಯರು ಹೀಗೆ ಯಾವುದೋ ಒಂದು ಘಟ್ಟದಲ್ಲಿ ತಮ್ಮ ಬದುಕಿನ ತಿರುವನ್ನು ಕಂಡುಕೊಳ್ಳುತ್ತಾರೆ. ಸಿಕ್ಕ ಅವಕಾಶವನ್ನು ಬಿಡದೆ ತಮ್ಮ ಸಾಮರ್ಥ್ಯವನ್ನು ಒರೆ ಹಚ್ಚುತ್ತಾರೆ. ನೋವನ್ನು, ಕಷ್ಟವನ್ನು ದಾಟಿಸದಿದ್ದರೂ ಅನುಭವವನ್ನಾದರೂ ದಾಟಿಸುವವರಿರುತ್ತಾರೆ.
ಇಂತಹ ಆಧುನಿಕ ದಿನಮಾನಗಳಲ್ಲಿ ಆಲೋಚನೆಗಳಲ್ಲಿ ಸೀತೆಯ ಈ ನಡೆ ಪ್ರಶ್ನಿಸುವಂತೆ ಮಾಡುತ್ತದೆ. ಆದರೆ, ಸೀತೆಯ ಮೌನವೇ ಎಲ್ಲಕ್ಕೂ ಉತ್ತರವಾದಾಗ.. ಅದು ಪೂರ್ಣವಿರಾಮವಾಗದೆ ತಿರುಗಿ ನಿಂತ ಪ್ರಶ್ನೆಗಳು ನಮ್ಮಲ್ಲಿ ಇನ್ನೂ ಹಲವು ಆಲೋಚನೆಗಳನ್ನು ಮೂಡಿಸುವುದಂತು ಹೌದು.
ನನಗೆ ದಕ್ಕಿದಂತೆ ಕವಿತೆಯ ಆಂತರ್ಯವನ್ನು ತೆರೆದಿರುವ ಪ್ರಯತ್ನ ಮಾಡಿದ್ದೇನೆ.
ಡಾ|| ವಿಜಯಾ ದಬ್ಬೆಯವರ ಈ ಕವಿತೆ 1996ರ ಜನವರಿ-ಮಾರ್ಚ್ ಅಚಲ ದಶಮಾನೋತ್ಸವ ಸಂಚಿಕೆಯಲ್ಲಿ ಪ್ರಕಟಿತ.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ