ಶನಿವಾರ, ಮೇ 16, 2026

ಕತ್ತಲಲ್ಲಿ ಕಂಡ ಮಿಂಚು (ಪುಸ್ತಕ ಯಾನ - 447)


ಪುಸ್ತಕದ ಶೀರ್ಷಿಕೆ : ಕತ್ತಲಲ್ಲಿ ಕಂಡ ಮಿಂಚು 

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಇಂದಿರಾ ಪ್ರಕಾಶನ

ಪ್ರಥಮ ಮುದ್ರಣ : 1978

ಮರು ಮುದ್ರಣ : 2024


ಕತ್ತಲಲ್ಲಿ ಕಂಡ ಮಿಂಚು ಕಾದಂಬರಿಯಲ್ಲಿ ಅಂಗವಿಕಲೆಯಾದ ಹುಡುಗಿಯೊಬ್ಬಳು ತನ್ನ ಮನೆಯವರಿಂದಲೇ ತಾತ್ಸಾರಕ್ಕೊಳಗಾದರೂ.. ಆಕೆ ಅಂಗವಿಕಲೆ ಎಂಬ ಕಾರಣಕ್ಕೆ ಸರಿಯಾದ ಪ್ರೀತಿ ಪಡೆಯದಿದ್ದರೂ.. ತನ್ನವರನ್ನು ಕಡೆಗಣಿಸದೆ, ತಾನೂ ಸೋಲದೆ, ಅವರನ್ನು ಗೆಲ್ಲಿಸಿ ಬದುಕಿನಲ್ಲಿ ಹೀಗಿರಬೇಕು ಎಂದು ಮಾದರಿಯಾದ ಕಾದಂಬರಿಯ ಕಥಾವಸ್ತು ಇಷ್ಟವಾಯಿತು. 


ಸುಭದ್ರಮ್ಮ ಹಾಗೂ ಸುಬ್ಬರಾಯರ ನಾಲ್ವರು ಮಕ್ಕಳಲ್ಲಿ ಹೇಮ ಹಿರಿಯವಳು. ಎರಡನೆಯವಳು ಸೀಮ. ಇನ್ನಿಬ್ಬರು ತಮ್ಮಂದಿರು ಉಮೇಶ ಹಾಗೂ ರಮೇಶ. ಹೇಮ ಕಾಲು ಎಳೆದು ಹಾಕುತ್ತಿದ್ದ ಕುಂಟೆಯಾದರೂ.. ಯಾರಿಗೂ ಹೊರೆಯಾಗದೆ, ಫ್ಯಾಕ್ಟರಿಗೆ ಸೇರಿ ಐದು ವರ್ಷದಿಂದ ದುಡಿಯುತ್ತಾ.. ಅಲ್ಲಿನ ಪರೀಕ್ಷೆಗಳನ್ನು ಪಾಸು ಮಾಡಿಕೊಂಡು ಮುಂದಿನ ಸ್ಥಾನಕ್ಕೇರುತ್ತಾ ತಂದೆಯಷ್ಟೇ ಮನೆಯ ಖರ್ಚನ್ನು ತಾನೂ ಮನೆಗೆ ನೀಡುತ್ತಾ.. ಆರು ಜನರ ಸಂಸಾರವನ್ನು ನಿಭಾಯಿಸುವ ಜವಾಬ್ದಾರಿ ಹೊತ್ತಿದ್ದರೂ ಮನೆಯಲ್ಲಿ ಎಲ್ಲರಿಗೂ ಆಕೆ ಎಂದರೆ ತಾತ್ಸಾರ. 


ಕೆಲವೊಮ್ಮೆ ಮನೆಯವರೇ ತಾತ್ಸಾರ ಮಾಡಿದರೂ ದೇವರಂತಹ ನೆರೆಹೊರೆಯವರು ಸಮಯಕ್ಕೊದಗುತ್ತಾರೆ. ಹೀಗೆ ಪಕ್ಕದ ಮನೆಯ ಕಾಮಾಕ್ಷಿಗೆ ಹೇಮಳೆಂದರೆ ಅಪರಿಮಿತ ವಾತ್ಸಲ್ಯ. ಆರು ಮಕ್ಕಳ ತಾಯಿಯಾದರೂ ಈಕೆಯನ್ನು ಮಗಳಂತೆಯೇ ಭಾವಿಸಿದ್ದರು. ಹಣವಿಲ್ಲದೆ ಟೈಲರಿಂಗ್ ಕಲಿಸಿ, ಟೈಪರೇಟಿಂಗ್ ಗೂ ಸೇರಿಸಿ, ತಾವು ಮನೆ ಬದಲಿಸುವಾಗ ತಮ್ಮ ಬಳಿಯಿದ್ದ ಒಂದು ಹೊಲಿಗೆಯ ಮಷೀನ್ ಅನ್ನು ಸಹ ಕೊಟ್ಟು ಹೋಗಿದ್ದರು. ಹೇಮ ಕೂಡ ಅವರಿಗೆ ಅಷ್ಟೇ ಸಹಕಾರ ನೀಡುತ್ತ ಅವರ ಕೆಲಸದಲ್ಲಿ ಸಹಾಯಕಳಾಗಿದ್ದಳು. ಕಾಮಾಕ್ಷಿಯ ಮನೆಕೆಲಸಕ್ಕೂ ಸಹಕಾರ ನೀಡುತ್ತಾ.. ಆಕೆಯ ಬಲಗೈಯಂತಿದ್ದಳು. ಕಾಮಾಕ್ಷಿಯ ಗಂಡನ ದೆಸೆಯಿಂದಲೇ ಅವರ ಫ್ಯಾಕ್ಟರಿಯಲ್ಲಿಯೇ ಟೈಪರೈಟಿಂಗ್ ಕಲಿತಿದ್ದವಳು ಕೆಲಸಕ್ಕೆ ಸೇರಿ ಮುಂದುವರೆದದ್ದು. ಕಾಮಾಕ್ಷಿಯ ಸಹಾಯವನ್ನು ಹೇಮ ಎಂದಿಗೂ ಮರೆಯುವಂತಿರಲಿಲ್ಲ. 


ಹೇಮಳಿಗೆ ವಿವಾಹ ಕೂಡಿಬರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ನಾಲ್ಕು ವರ್ಷದಲ್ಲಿ ನೂರಾದರೂ ವರ ಪರೀಕ್ಷೆ ಎದುರಿಸಿದ್ದಳು. ದಲ್ಲಾಳಿ ಶಾಮಾ ಜೋಯಿಸರಿಗೆ ತಾನೇ ಹಣ ಕೊಟ್ಟು ವಧು ಪರೀಕ್ಷೆ ಎದುರಿಸುತ್ತಿದ್ದಳಾದರೂ .. ಮುಕ್ಕಾಲುವಾಸಿ ನಿರಾಸೆ ತರುವಂತಹ ವರಗಳೇ.. ಇನ್ನುಳಿದವರು ಅವಳನ್ನು ತಿರಸ್ಕರಿಸುತ್ತಿದ್ದವರು. 


ಹೇಮಳ ವಿವಾಹವಾಗದೆ ಸೀಮಳ ವಿವಾಹವಾಗುವಂತಿರಲಿಲ್ಲ. ಹೀಗಾಗಿ ಅವಳಿಗೆ ಅಸಹನೆ. ಮನೆಯ ಎಲ್ಲಾ ಕೆಲಸವನ್ನು ಹೇಮಳೇ ಮಾಡುತ್ತಿದ್ದರೂ ಸೀಮ ರಾಣಿಯಂತೆ ಸುಮ್ಮನಿರುತ್ತಿದ್ದಳು. ಅವಳ ಸೌಂದರ್ಯ ಹಾಗೂ ತಾಯಿಯ ಮುದ್ದು, ಅಹಂಕಾರ ಅವಳನ್ನು ಹಾಗೆ ನಡೆದುಕೊಳ್ಳುವಂತೆ ಮಾಡುತ್ತಿತ್ತು.


ಹೀಗಿದ್ದ ಹೇಮಳ ಬದುಕಲ್ಲಿಯು ಒಂದು ತಿರುವು ಬರುತ್ತವೆ. ಹೇಮ ತನ್ನ ಮನೆ ಬಿಟ್ಟು ತನ್ನ ಸಹೋದ್ಯೋಗಿ ಹಾಗೂ ಆಪ್ತ ಗೆಳತಿಯಾಗಿದ್ದ ಸುಶೀಲಳ ಮನೆಯ ಬಾಡಿಗೆ ಕೋಣೆ ಹಿಡಿಯುತ್ತಾಳೆ. ಸುಶೀಲ ಹಾಗೂ ಚಂದ್ರು ದಂಪತಿಗಳು ಆಕೆಯನ್ನು ಬೇರೆಯವರಂತೆ ಭಾವಿಸದೆ, ಸ್ವಂತ ತಂಗಿಯಂತೆಯೇ ನೋಡಿಕೊಳ್ಳುತ್ತಾರೆ. ಸುಶೀಲಳ ಅಡುಗೆ ಕೆಲಸ ಹಾಗೂ ಮಗುವಿನ ಪೋಷಣೆಯಲ್ಲಿಯೂ ಸಹಾಯ ಮಾಡುತ್ತಾಳೆ ಹೇಮ. ಅಷ್ಟಕ್ಕೂ ಆಕೆ ಮನೆ ಬಿಟ್ಟು ಹೋಗುವಂತಹ ಪ್ರಸಂಗ ಏನಾಗಿತ್ತು..? ಮನಸ್ಸು ಕಹಿಯಾಗಿ ಅಷ್ಟು ಕಠಿಣ ನಿರ್ಧಾರ ತೆಗೆದುಕೊಂಡ ಹೇಮಳ ನಿರ್ಧಾರ ಸರಿಯೇ..? ಓದಿ ನೋಡಿ.


ಚಂದ್ರುವಿನ ಮನೆಗೆ ಬಂದ ರಾಜೇಶ ಹೇಮಳಿಗೆ ಪರಿಚಯವಾದ ಸಂದರ್ಭ ಯಾವುದು..? ಹೇಮ ಕುಂಟಿ ಎಂದು ತಿಳಿಯದೆ.. ಆಕೆಯ ಕೈ ರುಚಿ, ಜೊತೆಗೆ ಕಪ್ಪಿದ್ದರೂ ಲಕ್ಷಣವಾದ ರೂಪಕ್ಕೆ ಮನಸೋತದ್ದು ಮಾತ್ರವಲ್ಲದೆ ಆಕೆಯ ಮನಸ್ಸಿನಲ್ಲಿಯೂ ತನ್ನ ಕುರಿತಾಗಿ ಒಳ್ಳೆಯ ಭಾವನೆ ಬರುವಂತೆ ಮಾಡುವುದರ ಜೊತೆಗೆ ಪ್ರೇಮವನ್ನು ಹುಟ್ಟು ಹಾಕುವುದರಲ್ಲಿಯೂ ಸಫಲವಾದವನು ಅಷ್ಟೇ ಬೇಗ ಅವಳಿಂದ ದೂರವೂ ಆಗುತ್ತಾನೆ. ಆದರೆ, ಈ ಕಥೆ ಅಷ್ಟಕ್ಕೆ ಮುಗಿಯುವುದಿಲ್ಲ. ಮುಂದೊಂದು ದಿನ ಇದೇ ರಾಜೇಶ ಸೀಮಳನ್ನು ಪ್ರೇಮಿಸಿ ಅವರ ಮನೆಗೆ ಬಂದು ಹೇಮಳ ಎದುರಿಗೆ ನಿಂತಾಗ ಹೇಮಳ ಪ್ರತಿಕ್ರಿಯೆ ಏನಿತ್ತು..? ಓದಿ ನೋಡಿ. 


ಎಲ್ಲರೂ ರಾಜೇಶನಂತಿರುವುದಿಲ್ಲ. ಅಂತೆಯೇ ಎಲ್ಲರೂ ಕಾಮಾಕ್ಷಿ ಹಾಗೂ ಸುಶೀಲ ದಂಪತಿಗಳಂತೆಯೂ ಇರುವುದಿಲ್ಲ. ಬದುಕಿನಲ್ಲಿ ಎರಡೂ ರೀತಿಯ ಜನರನ್ನು ನೋಡುವ ಸಂದರ್ಭ ಬರುತ್ತದೆ. 


ಹೇಮಳಿಗೆ ಚಂದ್ರುವಿನ ಬಾಲ್ಯದ ಗೆಳೆಯ ಮಂಜುನಾಥನ ಮುಖಾಮುಖಿಯಾದದ್ದು ಚಂದ್ರು ಹಾಗೂ ಸುಶೀಲ ಮನೆಯಲ್ಲಿ ಇಲ್ಲದಿದ್ದಾಗ. ಅವರಿಬ್ಬರ ಮೊದಲ ಭೇಟಿ ಹಾಗೂ ಮೊದಲ ನೋಟ ಯಾವ ರೀತಿ ಇತ್ತು..?


ಪ್ರೇಮವೆಂದರೆ ಅದು ತಪ್ಪಾಗಬಹುದು. ಏಕೆಂದರೆ, ಅಲ್ಲಿದ್ದದ್ದು ಸರಳತೆ ಹಾಗೂ ಪ್ರಾಮಾಣಿಕತೆ. ಮಂಜುನಾಥನೂ ನೊಂದ ಜೀವ. ತಾನು ಕೆಲಸಕ್ಕಿಂತ ಹೋಟೆಲ್ ಹಾಗೂ ಸ್ವಂತ ತಂದೆಯಿಂದಲೇ ಮೋಸಕ್ಕೊಳಗಾಗಿ ಊರು ಬಿಟ್ಟು ಬಂದಿದ್ದವನು. ಸುಬ್ರಾಯ ಅಡಿಗರ ಎಂಟು ಜನ ಮಕ್ಕಳಲ್ಲಿ ಮೊದಲಿಗನಾಗಿ ಬಡ ಕುಟುಂಬವನ್ನು ತಹಬದಿಗೆ ತಂದವನು, ಓದಿನಲ್ಲಿ ಚಾಣಾಕ್ಷನಾಗಿದ್ದರೂ.. ಮುಂದೆ ಓದಿಸಿರಲಿಲ್ಲ. ಸರ್ಕಾರಿ ಕೆಲಸ ಸಿಗುವಂತಿರಲಿಲ್ಲ. ಹೋಟೆಲ್ ನಲ್ಲಿ ಅಡುಗೆ ಕೆಲಸಕ್ಕೆ ಇದ್ದವನು. ಈಗ ಅಲ್ಲಿಯೂ ಕೆಲಸ ಕಳೆದುಕೊಂಡಿದ್ದ. ಅಷ್ಟಕ್ಕೂ ಅಲ್ಲಿಂದ ಹೊರಟು ಬಂದದ್ದು ಏಕೆ..? 


ಹತ್ತು ಸಾವಿರ ಸಿಕ್ಕರೆ ಇಪ್ಪತ್ತು ಸಾವಿರ ಮಾಡುವ ಚಾಣಾಕ್ಷತನ, ಆತ್ಮವಿಶ್ವಾಸವಿದ್ದರೂ ಹಣ ಆತನ ಬಳಿ ಇರಲಿಲ್ಲ. ಆದರೆ, ಸುಶೀಲ ಇಟ್ಟ ಒಂದು ಪ್ರಸ್ತಾಪಕ್ಕೆ ಆತ ಒಪ್ಪುತ್ತಾನೆ. ಆದರೆ, ಸಂಪೂರ್ಣವಾಗಿ ಅಲ್ಲ. 

ಹೇಮಾಳಿಂದ 10,000 ಹಣ ಪಡೆಯುತ್ತಾನೆ. ಆದರೆ, ನಾಲ್ಕು ವರ್ಷದ ನಂತರ ವಿವಾಹವಾಗುತ್ತೇನೆ ಎಂದು ಹೇಳುತ್ತಾನೆ. ಅದೇಕೆ..?


ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡಿದ್ದ ಹೇಮಾಳಿಗೆ ಇದು ಆಶಾಕಿರಣದಂತೆ ತೋರಿದರೂ ಯಾರನ್ನು ಅಷ್ಟು ಸುಲಭವಾಗಿ ನಂಬಲಾಗುವುದಿಲ್ಲ. ಮಂಜುನಾಥ ಆಕೆ ಕುಂಟಿ ಎಂದು ತಿಳಿದೂ ಮದುವೆಗೆ ಒಪ್ಪಿದರೂ.. ಮುಂದೇನಾಗುತ್ತದೆ..?


ಹೇಮ ಮತ್ತೆ ತನ್ನ ತಾಯಿ, ಸುಭದ್ರಮ್ಮ ಬಂದು ಕರೆದಾಗ ತನ್ನ ಮನೆಗೆ ಹೋಗುತ್ತಾಳಾದರೂ ಆಕೆಗೆ ಮೊದಲಿದ್ದ ಕಷ್ಟ ಇರುವುದಿಲ್ಲ. ಹಾಗೆಂದು ದಬ್ಬಾಳಿಕೆಯೂ ಮುಗಿದಿರುವುದಿಲ್ಲ.


ರೂಪಕ್ಕೆ ಮರುಳಾದ ರಾಜೇಶ ಹಾಗೂ ಸೀಮರ ಬದುಕು ಸಹ ಒಂದು ತಿರುವಿಗೆ ಬಂದು ನಿಲ್ಲುತ್ತದೆ. ಇಬ್ಬರ ಬದುಕನ್ನು ಬದಲಿಸಿದ ಆ ತಿರುವು ಏನು..?


ಹೇಮಳಿಗೆ ಯಾರ ಜೊತೆ ವಿವಾಹವಾಗುತ್ತದೆ..? ಅವಳ ಮುಂದಿನ ಬದುಕು ಹೇಗಿರುತ್ತದೆ..? ಮಂಜುನಾಥ ಪ್ರಾಮಾಣಿಕನೇ..? ಎಲ್ಲದಕ್ಕೂ ಉತ್ತರ ತಿಳಿಯಲು ಕಾದಂಬರಿ ಓದಿ ನೋಡಿ.


ರಾಧಾದೇವಿಯವರ ಹೆಚ್ಚಿನ ಕಾದಂಬರಿಗಳು ಸುಖಾಂತ್ಯ ಕಾಣುತ್ತವೆ. ಈ ಕಾದಂಬರಿಯೂ ಸುಖಾಂತ್ಯದ ಕಾದಂಬರಿ ಎಂದು ಹೇಳಬಹುದಾಗಿದ್ದರೂ ಎಲ್ಲರ ಬದುಕು ತಾವು ಬಯಸಿದ ಸುಖ ಕಾಣುತ್ತದಾ ಓದಿ ನೋಡಿ. 


"ಒಳಿತಿಗೆ ಜಯ" ಎಂಬ ತತ್ವ ಇಲ್ಲಿ ಗೋಚರಿಸುತ್ತದೆ. ಮಾಡಿದುಣ್ಣೋ ಮಹಾರಾಯ ಎಂಬಂತೆ ಎಲ್ಲರೂ ತಮ್ಮ ಕರ್ಮದ ಫಲವನ್ನು ಉಣ್ಣುವುದೂ ಕಾಣುತ್ತದೆ.


ಹೇಮಳ ಬದುಕು ಮೊದಲು ಕಷ್ಟದಿಂದಲೇ ಕೂಡಿದ್ದರೂ.. ಅವಳ ಬದುಕಿನಲ್ಲಿ ಬರುವ ಕಾಮಾಕ್ಷಿ ದಂಪತಿಗಳು, ಸುಶೀಲಾ ದಂಪತಿಗಳು ಹಾಗೂ ಆಕೆಯ ಪತಿಯಂತಹವರು ಎಲ್ಲರಿಗೂ ಸಿಗುವುದು ಕಷ್ಟ. ಆದರೆ, ಅಂತಹ ನಿಷ್ಕಲ್ಮಶ ಪ್ರೀತಿ ಸಿಕ್ಕರೆ ಬದುಕಿನಲ್ಲಿ ಮತ್ತೇನೂ ಬೇಡ ಎನಿಸುವುದಂತೂ ಹೌದು. ರಕ್ತ ಸಂಬಂಧಕ್ಕಿಂತಲೂ ಹೆಚ್ಚು ಆಪ್ತವಾಗುವ ಇಂತಹ ಸಂಬಂಧಗಳೇ ಸಮಾಜದಲ್ಲಿ ಇನ್ನೂ ಒಳ್ಳೆಯದಿದೆ ಎಂಬ ಭರವಸೆಯನ್ನು ಇಟ್ಟುಕೊಳ್ಳುವಂತೆ ಮಾಡುವಂತಹವು. ಅಸೂಯೆ, ದ್ವೇಷ ಕೆಲವೊಮ್ಮೆ ರಕ್ತಸಂಬಂಧಗಳಲ್ಲಿ ಕಂಡರೂ.. ಸ್ನೇಹದಲ್ಲಿ ಇಂತಹವು ಕಾಣುವುದು ವಿರಳ ಎಂಬ ಸಂದರ್ಭಗಳನ್ನು ಕಾಣಬಹುದು. 


ಹಣಕ್ಕಿಂತ ಗುಣ ಮುಖ್ಯ ಜೊತೆಗೆ ಯಾರ ಅಂಗವಿಕಲತೆಯೂ ನಿಜವಾದ ಅಂಗವಿಕಲತೆಯಲ್ಲ ಬದಲಿಗೆ ಮಾನಸಿಕವಾಗಿ ಹಾಗೆ ಯೋಚಿಸುವವರು, ದ್ವೇಷಿಸುವವರು ಹಾಗೂ ತಾತ್ಸಾರದಿಂದ ನೋಡುವವರ ಮನಸ್ಸು ಎಷ್ಟು ಕುರೂಪ ಎಂಬುದನ್ನು ಇಲ್ಲಿ ಕಾಣಬಹುದು. 


ಇನ್ನು ಹಲವಾರು ಪಾತ್ರಗಳ ಹಾಗೂ ಇಷ್ಟವಾಗಬಹುದಾದ ಸಂದರ್ಭಗಳ ಚಿತ್ರಣವೂ ಇಲ್ಲಿದೆ. ಈ ಕಾದಂಬರಿ ಇದೀಗ ಮರು ಮುದ್ರಣವಾಗಿ ಓದುಗರಿಗೆ ಲಭ್ಯವಿದೆ. ಫೀಲ್ ಗುಡ್ ಎನಿಸುವಂತಹ ಈ ಕಾದಂಬರಿ ಸುಲಲಿತವಾಗಿ ಓದಿಸಿಕೊಂಡು ಹೋಯಿತು ಹಾಗೂ ಇಷ್ಟವಾಯಿತು. 


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ