ಶನಿವಾರ, ಜೂನ್ 13, 2026

ಹಿನ್ನೀರ ದಂಡೆಯ ಸೀತಾಳೆ ದಂಡೆ (ಪುಸ್ತಕ ಯಾನ - 460)


ಪುಸ್ತಕದ ಶೀರ್ಷಿಕೆ : ಹಿನ್ನೀರ ದಂಡೆಯ ಸೀತಾಳೆ ದಂಡೆ

ಲೇಖಕರು : ಮಂಗಳ ಟಿ. ಎಸ್. ತುಮರಿ

ಪ್ರಕಾಶಕರು : ಹರಿವು ಬುಕ್ಸ್ 

ಪ್ರಥಮ ಮುದ್ರಣ : 2024

ಪುಟಗಳು : 100

ಬೆಲೆ : 130 ರೂ.


ಮಂಗಳ ಟಿ. ಎಸ್. ತುಮರಿ ಅವರ ಮೊದಲ ಕೃತಿ ಆರೋಹಿ ಎಂಬ ನಾಟಕ. ಇದು ಅವರ ಎರಡನೇ ಕೃತಿ ಹಾಗೂ ಮೊದಲ ಕಥಾ ಸಂಕಲನ.


ಶರಾವತಿ ಹಿನ್ನೀರ ದಂಡೆಯ ಲೇಖಕಿಯ ಸೀತಾಳೆ ಹೂವಿನಂತಹ ಈ ಕಥಾ ಸಂಕಲನದಲ್ಲಿ ಒಟ್ಟು 12 ಕಥೆಗಳಿವೆ. 


ಹಸಿರು ಕೆರೆ : ಕಾಂತಿ ಕೆಲಸಕ್ಕೆ ಸೇರಿದ ಏಳು ವರ್ಷಗಳಲ್ಲಿ ನಾಲ್ಕು ಬಾರಿಯಾದರೂ ಪತ್ರಿಕೆ ಗುಣಶೇಖರರ ಸಂದರ್ಶನವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ನಡೆಸಿತ್ತಾದರೂ.. ಎಷ್ಟೇ ಬೇಡಿದರೂ ಅವರ ಸಂದರ್ಶನ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಆ ಮನುಷ್ಯ ಸತ್ತ ನಂತರ ಆತನ ಪತ್ನಿಯ ಸಂದರ್ಶನಕ್ಕೆ ಸಿಕ್ಕ ಅವಕಾಶ ಅವಳನ್ನು ಸಕಲೇಶಪುರದತ್ತ ಕೊಂಡೊಯ್ಯಿತು. ಕಾಂತಿಯ ವೈಯಕ್ತಿಕ ಬದುಕಿನ ಸಂಘರ್ಷಗಳ ಜೊತೆಗೆ ಸಾಗುವ ಪಯಣ ಗುಣಶೇಖರನ ಪತ್ನಿ ಮೈಥಿಲಿಯ ಜೊತೆಗಿನ ಮಾತುಕತೆ, ವ್ಯಾವಹಾರಿಕ ಅಥವಾ ನಾಮಕಾವಸ್ಥೆ ಎಂಬಂತೆ ಆಗಬಹುದಾಗಿದ್ದ ಸಂದರ್ಶನ ಒಂದು ಸಂದರ್ಶನಕ್ಕಿಂತ ಹೆಚ್ಚಾಗಿ ಬಾಂಧವ್ಯ ಬೆಳಸಿತ್ತು. ಅಲ್ಲಿಂದ ಹೊರಟ ಕಾಂತಿಯ ಮನಸ್ಸಿನಲ್ಲೊಂದು ಸ್ಪಷ್ಟತೆ ಮೂಡಿದ್ದಕ್ಕೆ ಕಾರಣವೇನು..? ಮೈಥಿಲಿ ಹಸಿರು ಕೆರೆಗೆ ಕೊಟ್ಟ ವ್ಯಾಖ್ಯಾನ, ಕಾಂತಿ ಕಂಡುಕೊಂಡ ಬಗೆ ಇಲ್ಲಿದೆ. ವ್ಯಕ್ತಿತ್ವವನ್ನು ಹಲವು ಆಯಾಮಗಳಿಂದ ಕಾಣುವ ಇಬ್ಬರ ಕತೆ ಇಲ್ಲಿದೆ. 


ಬೇಲಿ : ಎಷ್ಟೋ ಬಾರಿ ಅಪ್ಪ ಅರ್ಥವಾಗುವುದು ಆತನ ಸಾವಿನ ನಂತರವೇ... ಶರವಿಂದುವಿಗೆ ತನ್ನ ತಂದೆ ಬದುಕಿದ್ದಾಗ ಒಂದು ರೀತಿಯಲ್ಲಿ ಕಂಡರೆ, ಸಾವಿನಾಚೆಗೆ ಬೇರೆಯದ್ದೆ ರೀತಿ ಕಾಣುತ್ತಾರೆ. ಅಪ್ಪ ಆಸ್ಪತ್ರೆಗೆ ಸೇರಲು ಮುಖ್ಯ ಕಾರಣವೇ ತೋಟ ಹಾಗೂ ಬೇಲಿಯ ಕೆಲಸ ಎಂಬಂತೆ ಶರವಿಂದು ತನ್ನ ಅಪ್ಪನ ಮಧ್ಯೆ ಎಳೆದುಕೊಂಡಿದ್ದ ಬೇಲಿ ಏನಾಯ್ತು..?


ತಪ್ಪೊಪ್ಪು : ರೇವಣಸಿದ್ಧ ಎನ್ನುವ ಹೆಸರು ಕಮಲಾಕರ ಮೇಷ್ಟ್ರ ನೆನಪಿನಲ್ಲಿ ಅಚ್ಚಳಿಯದಂತೆ ಕುಳಿತು ಹೋಗಿದ್ದಕ್ಕೆ ಕಾರಣ ಕೇವಲ ಆತನ ಬಾಲ್ಯ ಹಾಗೂ ಶಾಲೆಯ ದಿನಗಳಲ್ಲ.. ಅದರಾಚೆಗೂ ಬೆಸೆದುಕೊಂಡಿದ್ದ ಇವರ ಬಾಂಧವ್ಯ. ಅವನ ತಾಯಿ ಮೇಷ್ಟ್ರ ಬಳಿ ಬಂದು ಭಿನ್ನವಿಸಿದ್ದ ಒಂದು ವಿಚಾರಕ್ಕೆ ಆತನ ಓದು ಮುಂದುವರೆದಿದ್ದು ಈಗ ಇತಿಹಾಸವಾದರೂ.. ಅದೇ ವಿಚಾರ ಮತ್ತೆ ಮುತ್ತನೆ ಎದುರಿಗೆ ನಿಂತ ಸಂದರ್ಭದಲ್ಲಿ ಮೇಷ್ಟ್ರು ಯಾವ ನಿರ್ಧಾರ ತಳೆದರು..?


ಗುಲಾಬಿ ಫ್ರಾಕು : ಬಡತನದ ಮನೆಗಳಲ್ಲಿ ಬಟ್ಟೆ ಹೊಂದಿಸುವುದೇ ಕಷ್ಟ. ಹಿರಿಯ ಮಕ್ಕಳು ಹಾಕಿ ಬಿಟ್ಟ ಲಂಗ ಕಿರಿಯವರಿಗೆ ದಾಟಿಕೊಳ್ಳುತ್ತಾ ಸಾಗುತ್ತವೆ. ಐದು ಹೆಣ್ಣು ಮಕ್ಕಳ ಮನೆಯಲ್ಲಿ ಮಧ್ಯದವರಾಗಿದ್ದ ಇವರಿಗೆ ಗುಲಾಬಿ ಫ್ರಾಕ್ ನ ಆಸೆಯನ್ನು ಅಮ್ಮ ಹೇಗೆ ತೀರಿಸುತ್ತಾರೆ. ಡಾಲಿ ಪಾರ್ಟನ್ ಅವರ ಕೋರ್ಟ್ ಆಫ್ ಮೆನಿ ಕಲರ್ಸ್ ಕವಿತೆಯ ಸಾಲುಗಳೊಂದಿಗೆ ಅರ್ಥವಾಗದ ವಯಸ್ಸಿನ ನೆನಪು, ಕುಹಕಗಳು, ಅವಮಾನಗಳು ಎಲ್ಲದರಾಚೆಗೆ ಇನ್ನೂ ಗುಲಾಬಿ ಫ್ರಾಕಿನ ಮೋಹ, ಅವರ ಆಸೆಯನ್ನು ಯಾವೆಲ್ಲ ರೀತಿಯಲ್ಲಿ ತೀರಿಸಿಕೊಳ್ಳಲು ಬಯಸುತ್ತಾರೆ ಓದಿ ನೋಡಿ.


ಸುಕ್ರಿ : ಮೀನು ಮಾರಾಟ ಮಾಡುತ್ತಿದ್ದ ವಯಸ್ಸಾದ ಸುಕ್ರಿ ಇತ್ತೀಚೆಗೆ ಸುಳಿದು ನಾಲ್ಕು ವಾರಗಳೇ ಕಳೆದಿತ್ತು. ಆತಂಕ, ಚಡಪಡಿಕೆಯ ಜೊತೆಗೆ ಸುಕ್ರಿಯ ನೆನಪು ಸಾಗುತ್ತಾದೆ. ಯಾರೋ ಮಾತನಾಡುತ್ತಿದ್ದ ತಲ್ಲಣ ಹುಟ್ಟಿಸುವ ಮಾತುಕತೆಗಳು ಅದು ಸುಕ್ರಿ ಆಗದಿರಲಿ ಎಂದು ಪ್ರಾರ್ಥಿಸುವ ಕಥೆ ಇಲ್ಲಿದೆ. ಸುಕ್ರಿಯ ಬದುಕು ಹೀಗಿತ್ತು ಓದಿ ನೋಡಿ.


ಶಾಪ : ಶಾಪಗಳೆಲ್ಲ ಫಲಿಸುತ್ತವೆಯಾ ..? ಮುಗ್ಧ ಮನಸ್ಸಿನಿಂದ ಬೇಡಿಕೊಂಡ ಬೇಡಿಕೆಗಳು ಈಡೇರುವುದಾದರೆ ಇದೂ ಯಾಕಾಗಬಾರದು..?

ಊರಿನಲ್ಲಿ ಒಳ್ಳೆಯ ಕಾಲೇಜುಗಳಿಲ್ಲ ಎಂಬ ಕಾರಣಕ್ಕೆ ಊರಿನವರೆಲ್ಲರ ವಿರೋಧದ ನಡುವೆಯೂ ಅಪ್ಪ-ಅಮ್ಮನ ಬೆಂಬಲದೊಂದಿಗೆ ಹಾಸ್ಟೆಲ್ ಸೇರುವ ಹುಡುಗಿಯ ಓದಿನ ಎರಡನೇ ವರ್ಷದಲ್ಲಿ ಹಿಂದೆ ಬಿದ್ದಿದ್ದ ಹುಡುಗ ಅವಳನ್ನು ಕಾಡಿದ ಬಗೆ ಹೇಗೆ..? ಇಲ್ಲಿ ಶಾಪ ಯಾರದ್ದು..? ಶಾಪ ತಟ್ಟಿತೇ..? ಹಾಗಿದ್ದಲ್ಲಿ ಯಾರಿಗೆ..? ಹೊಸತನದ ಕಥೆಯಂತೆ ಭಾಸವಾಯಿತು.


ಸ್ವಪ್ನ ಸೌಧ : "ನನ್ನ ಕನಸುಗಳೆಲ್ಲ ಕಾಸು ಕೊಟ್ಟು ಕಿತ್ಕೊಂಡ್ರೋ ಕಿತ್ಕೊಂಡ್ರು! ಉಳ್ಳೋರು ಸಿವಾಲಯ ಮಾಡ್ತಾರೆ ನಾನೇನ್ ಮಾಡ್ಲಿ ಬಡಪಾಯಿ" ಏಕೆ ಅಳಲಿಡುತ್ತಿರುವ ಧ್ವನಿ ಚಿರಪರಿಚಿತವಾಗಿದ್ದರೂ.. ಗದ್ದಲದ ನಡುವೆ ನೆನಪಾಗಿರಲಿಲ್ಲ. ಆದರೆ ಮನೆಗೆ ತಲುಪಿದ ಮೇಲೆ ಎದುರು ಬೀದಿಯ ದೇವಮ್ಮನ ಧ್ವನಿ ಅದೆಂದು ತಿಳಿದು.. ಅವಳ ಬದುಕಿನ ಸ್ವಪ್ನ ಸೌಧ ಕಳಚಿದ ಕರುಣಾಜನಕ ಕಥೆ ತಿಳಿಯಿತು. ಕಷ್ಟಜೀವಿ ಹಾಗೂ ಹೋರಾಟದ ಸಾಕಾರ ರೂಪದಂತಿದ್ದು ಅವಳ ಬದುಕು ಹಾಗಾಗಿದ್ದು ವಿಪರ್ಯಾಸವಾದರೂ ದೇವಮ್ಮನ ಹೋರಾಟವೇನೂ ಕಡಿಮೆಯಿರಲಿಲ್ಲ. ದೇವಮ್ಮ ಗೆಲ್ಲಬೇಕಿತ್ತು ಎನಿಸಿದರೂ.. ಆಕೆಗೆ ಸಹಕಾರ ಸಿಗದಿದ್ದೇಕೆ ಎಂದು ಪುನರಾವಲೋಕಿಸಬೇಕಾಗುತ್ತದೆ. 


ಕಲ್ಲು ದೇವರನೆಲ್ಲ... : ಆಸ್ತಿಕ ಪತ್ನಿ ಹಾಗೂ ನಾಸ್ತಿಕ ಗಂಡ ಇಬ್ಬರ ನಡುವೆಯೂ ಪೂಜೆ, ಹೋಮ ದೇವಾಲಯದ ವಿಚಾರಕ್ಕೆ ಆಗಾಗ ಸಣ್ಣ ಮುನಿಸುಗಳು ಇದ್ದಿದ್ದೇ. ಆತನ ತಾಯಿಯದ್ದೂ ಇದೇ ವಿಚಾರಕ್ಕೆ ಸಿಡಿಮಿಡಿ. ಮನುಷ್ಯ ದೇವರನ್ನು ನಂಬದಿದ್ದರೂ ಆತನೇ ಮತ್ತೊಬ್ಬರ ಪಾಲಿಗೆ ದೇವರಾಗುವ, ಮಾನವೀಯತೆಯನ್ನು ಇಟ್ಟುಕೊಂಡಿದ್ದರೆ..? ಹೂವಮ್ಮನ ಪಾಲಿಗೆ ಸಹಾಯಕ್ಕೊದಗಿದ ದೇವರಂತ ಮನಸ್ಸಿನ ಮನುಷ್ಯನ ಕಥೆ ಇದು.


ಅವನಿ : ಮಲೆನಾಡಿನ ಊರಿಗೆ ಬ್ಯಾಂಕ್ ಕೆಲಸಕ್ಕೆ ಹೊಸದರಲ್ಲಿ ಬಂದಾಗ ಯಾಕಾದರೂ ಇಲ್ಲಿಗೆ ಬಂದೆ ಎಂದುಕೊಂಡಿದ್ದ ವಾಸುದೇವ ಶರ್ಮರಿಗೆ ಈಗ ಗೋವೆಗೆ ಟ್ರಾನ್ಸ್ಫರ್ ಆರ್ಡರ್ ಸಿಕ್ಕರೂ ಊರು ಬಿಟ್ಟು ಹೊರಡಲು ಸಂಕಟ ಹಾಗೂ ಆ ಊರಿನ ನೆನಪುಗಳು ಅವರನ್ನು ಬಾಧಿಸುತ್ತಿರುತ್ತವೆ. ಅವರ ಮನಸ್ಸಿನಲ್ಲಿ ಹಾಗೆ ಅಚ್ಚಳಿಯದೆ ಉಳಿಯಲಿದ್ದ ಅವನಿ ಯಾರು..?

ಈ ಕಥೆಯಲ್ಲಿ ಕಾಡಿದ ಸಾಲುಗಳಿವು

"ಅಬ್ಬಾ! ಹೆಣ್ಣು ಮಕ್ಕಳ ಜಗತ್ತೇ! ನಿಮ್ಮ ತಾಕತ್ತೇ! ಏನೇನು ಭಾರವನ್ನು ಇಟ್ಟುಕೊಂಡು ಹೀಗೆಲ್ಲ ಹಾಡುತ್ತೀರಿ! ಒಮ್ಮೆ ಲಾಲಿ. ಇನ್ನೊಮ್ಮೆ ಸ್ನೇಹಗೀತೆ, ಇನ್ನೊಮ್ಮೆ ಒಲವ ಗುನುಗು... ಎಷ್ಟೆಲ್ಲಾ... ಜಗದ ತೇರು ಎಳೆಯುವುದಕ್ಕೆ!"


ಕನ್ನಡಿಯ ಜಗತ್ತು : ಹಲವಾರು ಜನಗಳನ್ನು ನೋಡುವಂತಹ ಅವಕಾಶ ಆ ಕನ್ನಡಿಗಿತ್ತು. ಕನ್ನಡಿಯಿದ್ದ ರೂಮಿಗೆ ಬಂದು ಹೋಗುತ್ತಿದ್ದವರು ಹಲವರು. ಅವರನ್ನು ಹೊರಜಗತ್ತು ನೋಡಿ ಅಳೆದು ಮಾತನಾಡುವುದಕ್ಕೂ ಒಳಜಗತ್ತಿನಲ್ಲಿ ಅವರಿರುವ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿತ್ತು ಅಂತಹ ಹಲವಾರು ಘಟನೆಗಳನ್ನು ಕನ್ನಡಿಯ ಕಣ್ಣಲ್ಲಿ ಕಾಣಬಹುದು.


ಮುಂಬೈ ದರ್ಶನ : ಮುಂಬೈ ದರ್ಶನ ಮಾಡಿಸಲು ಸಿಕ್ಕ ಗೈಡ್ ಸಮೀರ, ಪತಿ-ಪತ್ನಿಯರಿಬ್ಬರ ಆಸಕ್ತಿಗಳು ಬೇರೆ-ಬೇರೆ ಇದ್ದುದರಿಂದ ಅವರಲ್ಲುಂಟಾದ ಮನಸ್ತಾಪಕ್ಕೆ ತೆರೆ ಎಳೆಯುವಲ್ಲಿ ಸಮೀರನ ಪಾತ್ರ ಹಿರಿದಾದುದು. ಸಮೀರನ ಜೀವನಾನುಭವ ವಿಸ್ತಾರವಾಗಿದ್ದು, ತನ್ನ ಪತ್ನಿಯ ಮನಸು ಗೆಲ್ಲುವುದಕ್ಕೆ ಸಮೀರನನ್ನು ಹತ್ತಿರವಾಗಿಸಿಕೊಂಡಿದ್ದವರು ಅವನದ್ದೇ ಕಾರಣದಿಂದಾಗಿ ಪೊಲೀಸ್ ಸ್ಟೇಷನ್ ನ ಸರಳಿನ ಹಿಂದೆ ಹೋಗಬೇಕಾಗಿ ಬಂದದ್ದೇಕೆ..? ಈ ಕಥೆಯ ಅಂತ್ಯ ಊಹಿಸಲು ಕಷ್ಟವಿತ್ತು.


ಸಾಕ್ಷಿ : ರಚನೆಗೆ ಅಮ್ಮನ ಅಕ್ಕ-ತಂಗಿಯರಲ್ಲಿ ಅಚ್ಚುಮೆಚ್ಚಿನವಳೆಂದರೆ ರಜನಿ ಚಿಕ್ಕಿ. ರಜನಿ ಚಿಕ್ಕಿಯ ಸಾವಿನ ಸುದ್ದಿ ಅಮ್ಮ ಹೇಳಿದಾಗ ಆಘಾತ ತಂದಿತ್ತಾದರೂ ವಾಣಿ ಚಿಕ್ಕಿಗೆ ಕ್ಯಾನ್ಸರ್ ಆಗಿದ್ದು, ಟ್ರೀಟ್ಮೆಂಟ್ ಆಗುತ್ತಿರುವುದು ಹಾಗೂ ಅವಳ ನೋವುಗಳೆಲ್ಲವೂ ನೆನಪಾಗಿತ್ತು. ವಿಪರ್ಯಾಸವೆಂದರೆ ಗಟ್ಟಿ ಹೆಂಗಸಾಗಿದ್ದ ಅವಳು ಕ್ಯಾನ್ಸರ್ ನಿಂದಲೂ ಚೇತರಿಸಿಕೊಂಡು ಚೈತನ್ಯದ ಮಾತುಗಳನ್ನಾಡುತ್ತಿದ್ದಳು. ಅವಳ ಛಲವೇ ಅವಳನ್ನು ಗೆಲ್ಲಿಸುತ್ತದೆ ಎಂದುಕೊಳ್ಳುವಷ್ಟರಲ್ಲಿ ಅವಳ ಸಾವು ಸಂಭವಿಸಿತ್ತು. ರಚನೆಗೆ ತಿಳಿದ ಆಘಾತಕಾರಿ ಸುದ್ದಿ ಎಂದರೆ ಚಿಕ್ಕಿ ಸತ್ತದ್ದು ಕ್ಯಾನ್ಸರ್ ನಿಂದಲ್ಲ. ಬದಲಾಗಿ ..? 

ಒಂದು ಸಾವು ಮನೆಯ ಸಂಬಂಧಗಳ ಸತ್ಯವನ್ನು ಹೊರ ಹಾಕುವ ಬಗೆ ಹೇಗಿರುತ್ತದೆ ಓದಿ ನೋಡಿ.


ಇಲ್ಲಿನ ಕಥೆಗಳಲ್ಲಿ ಸಣ್ಣ-ಸಣ್ಣ ಸಂಗತಿಗಳನ್ನು ಭಾವನಾತ್ಮಕವಾಗಿ ತೆರೆದಿಟ್ಟಿದ್ದಾರೆ. ಚಂದದ ಬದುಕನ್ನು ಕಟ್ಟಿಕೊಳ್ಳಲು ಹಂಬಲಿಸುವ ಹೆಣ್ಣು ಮಕ್ಕಳಲ್ಲಿ ಛಲ, ಧೈರ್ಯ, ಆತ್ಮವಿಶ್ವಾಸ ಹೀಗೆ ಪ್ರತಿಯೊಂದರಲ್ಲಿಯೂ ಪಾಸಿಟಿವಿಟಿಯನ್ನೇ ಕಾಣಬಹುದು. ಹಾಗೆಂದು ಹೆಣ್ಣಿನ ಒಳತೋಟಿಗಳು ಅನಾವರಣವಾಗಿಲ್ಲವೆಂದಲ್ಲ .ಅದರಾಚೆಗೆ ವಾಸ್ತವವನ್ನು ಸ್ವೀಕರಿಸುವ ಗಟ್ಟಿ ಪಾತ್ರಗಳು ಇಲ್ಲಿವೆ. ನೊಂದ ಜೀವಗಳು ಇಲ್ಲಿ ಹಂಚುವುದು ನೋವನ್ನಲ್ಲ, ಬದಲಾಗಿ ತಮ್ಮ ಜೀವನಾನುಭವವನ್ನು ಜೊತೆಗೆ ಪಾಸಿಟಿವಿಟಿಯನ್ನು. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲು ಸಾಧ್ಯವಿಲ್ಲ. ಆದರೆ ಅದನ್ನು ಎದುರಿಸುವ ದಾರಿಯಂತೂ ಇದ್ದೇ ಇದೆ. ಆ ಹಾದಿಯ ಮೂಲಕ ಸಾಗಬೇಕಷ್ಟೆ ಎಂದು ನೀಡುವ ಸಂದೇಶಗಳು ವಾಸ್ತವತೆಯನ್ನು ತೋರುವ ಕಥಾ ಹೂರಣವನ್ನು ತೋರುತ್ತವೆ. ಚೆಂದದ ನಿರೂಪಣೆಯ ಚೆಂದದ ಓದು.


~ ವಿಭಾ ವಿಶ್ವನಾಥ್

ಶೌರ್ಯಮಲೆ - ಅಯ್ಯಪ್ಪನ ಪೂಂಗಾವನ (ಪುಸ್ತಕ ಯಾನ - 459)


ಪುಸ್ತಕದ ಶೀರ್ಷಿಕೆ : ಶೌರ್ಯಮಲೆ - ಅಯ್ಯಪ್ಪನ ಪೂಂಗಾವನ 

ಲೇಖಕರು : ರಮೇಶ್ ಶೆಟ್ಟಿಗಾರ್ ಮಂಜೇಶ್ವರ

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 2025

ಪುಟಗಳು : 224

ಬೆಲೆ : 280 ರೂ.


ಅಯ್ಯಪ್ಪನ ದರ್ಶನಕ್ಕಾಗಿ ಕಠಿಣ ವ್ರತಗಳನ್ನು ಮಾಡಿ ಪಂಪಾ ನದಿಯಲ್ಲಿ ಮಿಂದು, ಭಕ್ತಿ ಪೂರ್ವಕವಾಗಿ ಇರುಮುಡಿ ಹೊತ್ತು ಹೋಗುವವರ ಭಕ್ತಿ, ಚಲನಚಿತ್ರ ಹಾಗೂ ಪ್ರಾಥಮಿಕ ಕತೆಯಾಗಿ ಮಣಿಕಂಠ ಹುಲಿಯ ಹಾಲನ್ನು ತರಲು ಹೋಗಿ ಮಹಿಷಿಯ ವಧೆ ಮಾಡಿ ಹುಲಿಯ ಮೇಲೆ ಸವಾರಿ ಮಾಡುತ್ತಾ ಬಂದು.. ಬಿಲ್ಲಿನಿಂದ ಬಾಣ ಹೂಡಿ ತನ್ನ ಸ್ಥಳವನ್ನು ತಾನೇ ಗುರುತಿಸಿ ಕೊಟ್ಟು ಅಯ್ಯಪ್ಪನಾಗುವ ಕಥೆಯ ಅರಿವಿತ್ತು. 18 ಮೆಟ್ಟಿಲುಗಳ ದಿವ್ಯತೆ ಹಾಗೂ ಅಪಾರವಾದ ಭಕ್ತಿಯಷ್ಟೇ ನನಗೆ ಅರಿವಿದ್ದದ್ದು . ಇದರ ಆಚೆಗೆ ಮಕರ ಜ್ಯೋತಿಯ ಕುರಿತು ಹಾಗೂ ಹತ್ತರಿಂದ 50 ವಯಸ್ಸಿನ ಒಳಗಿನ ಮಹಿಳೆಯರಿಗೆ ಪ್ರವೇಶವಿಲ್ಲ ಎನ್ನುವ ಚರ್ಚೆಗಳನ್ನು ಕೇಳಿದ್ದೆ. ಆದರೆ ಎಲ್ಲದರಾಚೆಗೆ ಭಕ್ತಿ ಮಾತ್ರವೇ ಮನದಲ್ಲುಳಿದಿತ್ತು.


ಹಲವಾರು ರೋಚಕ ಕಥೆಗಳು ಘಟನೆಗಳು, ಸಂದರ್ಭಗಳು, ಪೌರಾಣಿಕ ವಿಚಾರಗಳು, ಚಾರಿತ್ರಿಕ ಘಟನೆಗಳು ಎಲ್ಲವನ್ನೂ ಪೂರಕವಾಗಿ ಒಂದಕ್ಕೊಂದು ಹೆಣೆದು.. ತಮಗೆ ಸಿಕ್ಕ ಮಾಹಿತಿಗಳ ಮೂಲವನ್ನು ಉಲ್ಲೇಖಿಸಿ ಮಣಿಕಂಠನೇ ಉತ್ತಮ ಪುರುಷದಲ್ಲಿ ತನ್ನ ಗಾಥೆಯನ್ನು ವಿವರಿಸಿರುವಂತೆ ಕಟ್ಟಿಕೊಟ್ಟಿರುವ ಕಥಾನಕ ಹಾಗೂ ತರ್ಕಬದ್ಧವಾದ ವಿಚಾರಗಳು ಓದಿನ ಸಂಪೂರ್ಣ ತೃಪ್ತಿ ನೀಡಿತು. ಶಬರಿಮಲೆಯ ದಿವ್ಯತೆ ಮನಕ್ಕೆ ಮತ್ತಷ್ಟು ಆವರಿಸಿತು. 


ತನ್ನ ನೆಚ್ಚಿನ ಸಲಗ ಬಲಭದ್ರನ ಬೆನ್ನೇರಿ ಪಂಪಾ ನದಿಯ ಬದಿಯಲ್ಲಿ ಸಂಚರಿಸುತ್ತಾ.. ಚೆಂಗನ್ನೂರು ಮಹಾದೇವ ಕ್ಷೇತ್ರ ದರ್ಶನಕ್ಕೆ ಹೊರಟಿದ್ದಾಗ ಮಣಿಕಂಠನಿಗೆ ಪಂದಳದ ಡಂಗುರ ಕೇಳಿದ್ದು ಹೀಗೆ. ಹುಲಿಯ ಹಾಲನ್ನು ತಂದವರಿಗೆ ಒಂದು ಗ್ರಾಮ ಎಂದರೂ ಬಳುವಳಿಯ ಆಮಿಷಕ್ಕೆ ಯಾರು ತಮ್ಮ ಪ್ರಾಣವನ್ನು ಪಣಕ್ಕಿಡದೆ ಉಳಿದದ್ ಜೊತೆಗೆ ಮನುಷ್ಯರಿಗೆ ಹುಲಿಯ ಹಾಲಿನ ಸೇವನೆ ವರ್ಜ್ಯ ಎಂಬ ವಿಚಾರ ಮನಸ್ಸಿಗೆ ಬಂದದ್ದು ಎಲ್ಲವೂ ಸೇರಿ ಗೊಂದಲ ಮೂಡಿಸುತ್ತದೆ. 


ಮಹಾರಾಣಿಗೆ ಬಂದಿರುವ ಅಪರೂಪದ ವ್ಯಾಘ್ರವ್ಯಾಧಿಗೆ ನಾಡಿನ ಖ್ಯಾತ ವೈದ್ಯರಾದ ಕೇಳು ಪಂಡಿತರು ಸೂಚಿಸಿದ್ದ ಔಷಧಿ ಅದೆಂದು ತಿಳಿಯಿತು. ಅಮ್ಮನನ್ನು ನೋಡಲು ಹೋದಾಗ ತಾನು ಮಗನಾಗಿ ಕರ್ತವ್ಯ ನಿರ್ವಹಿಸಲು ಔಷಧಿಯನ್ನು ತಂದೇ ತರುತ್ತೇನೆಂದವನ ಮಾತಿಗೆ "ನೀನು ನನ್ನ ಮಗನಲ್ಲವಲ್ಲ" ಎಂಬ ಮಾತು ನೋಯಿಸಿದ್ದು ಮಾತ್ರವಲ್ಲದೆ, ಅನಾಥ ಭಾವವನ್ನು ಮೂಡಿಸಿ ತಾನು ಸಿಕ್ಕ ಹಿನ್ನೆಲೆಯನ್ನು ಅವರಿಂದಲೇ ಕೇಳಿದ್ದ ನೆನಪಾಯಿತು.


ವಾವರನನ್ನು ಶರಣಾಗಿಸಿಕೊಂಡು, ಶತ್ರು ಕಾಟವನ್ನು ನಿವಾರಿಸಿ ಆತನನ್ನು ಪಂದಳದ ಮಿತ್ರರನ್ನಾಗಿ ಮಾಡಿಕೊಂಡು ಬಂದಿದ್ದವನು ಮತ್ತೊಂದು ದೊಡ್ಡ ಕಾರ್ಯವನ್ನು ಹೆಗಲೇರಿಸಿಕೊಂಡು ಹೊರಟಿದ್ದ. 12ರ ಪ್ರಾಯದ ಬಾಲಕನನ್ನು ಕಾಡಿಗೆ ಕಳುಹಿಸಲು ತಂದೆಗೆ ಕೊಂಚವೂ ಇಷ್ಟವಿರಲಿಲ್ಲ. 


ಪಂದಳ ನಾಡಿನ ಅರಸು ರಾಜಶೇಖರ ವರ್ಮ ತಂಬುರಾನ್ ಅವರು ಮಂತ್ರಿ ಸುಶೀಲನ್ ಜೊತೆಗೆ ಕಾಡಿಗೆ ಹೋಗಿದ್ದಾಗ ಮಣಿಕಂಠ ಕಾಡಿನಲ್ಲಿ ಸಿಕ್ಕಿ 12 ವರ್ಷಗಳು. ಪೆರುಮಾದೇವಿಗೆ ಮಕ್ಕಳಾಗಲಿಲ್ಲವೆಂದು ಬಹು ಪತ್ನಿತ್ವವನ್ನು ಅನುಸರಿಸಲು ಹೊರಟವರಲ್ಲ. ಮಣಿಕಂಠನ ಕಾಲುಣವೇನೋ ಎಂಬಂತೆ ರಾಜರಾಜ (ಕೇತಕೀ ವರ್ಮ) ಜನಿಸಿದ್ದ. ಸ್ವಂತ ಅಣ್ಣ-ತಮ್ಮಂದಿರಂತೆ ಬೆರೆತಿದ್ದರು. ಮುಂದಿನ ರಾಜನಾಗಿ ಪಂದಳವನ್ನು ಆಳುವವನು ಎಂದೇ ತಂಬುರಾನ್ ಆತನಿಗೆ ಪಟ್ಟ ಕಟ್ಟುವ ಸಿದ್ಧತೆಯನ್ನು ಮಾಡಿಕೊಂಡಿದ್ದರು. ರಾಜರಾಜನು ಅಣ್ಣನ ನೆರಳಿನಂತೆ ಇರುತ್ತಿದ್ದ. ಹೀಗಿರುವಾಗ ಇನ್ನು ಬಾಲಕ ಮಣಿಕಂಠನನ್ನು ಕಾಡುಗೆ ಕಳುಹಿಸಲು ಒಪ್ಪದವರನ್ನು ಒಪ್ಪಿಸಿದ್ದು ಸಿದ್ಧಪುರುಷರು. ಜೊತೆಗೆ ಮಣಿಕಂಠ ಸಿಕ್ಕಾಗ ಆತನ ಶೌರ್ಯದ ಕುರಿತಾಗಿ ಒಂದು ಪ್ರಮುಖ ಹೇಳಿಕೆಯ ಕುರಿತ ಉಲ್ಲೇಖವಿದೆ. ಅದೇನು ಓದಿ ಅರಿಯಿರಿ. 


ತನ್ನ ಕುದುರೆ ರೇವಂತನನ್ನು ಏರಿ ಮಲೆಗೆ ಹೊರಟವನಿಗೆ ಮಾಯಾವಿ ಎಮ್ಮೆಗಳ ಕಾಟ ಬಂದಾಗ ರಕ್ಷಿಸುವುದು ವಾಪುರನ್ ಮತ್ತು ಸಹಚರರು. ತನ್ನ ಉದ್ದೇಶವನ್ನು ತಿಳಿಸಿದಾಗ ಪುಲಿಮೇಡಿನ ದೂರದ ಪ್ರಯಾಣಕ್ಕೆ ದಾರಿದೀಪವಾಗುತ್ತಾರೆ. 


ಮಣಿಕಂಠ ನೀನು ದೈವಾಂಶ ಸಂಭೂತ ಎಂದು ಹೇಳಿದ ಗುರುಗಳ ಮಾತು, ಗುರುಪುತ್ರನ ಬದುಕಲ್ಲಿ ಆದ ಪವಾಡ.. ಗುರುಕುಲದಿಂದ ಅರಮನೆಗೆ ಹೊರಡಿಸುವ ಸಮಯದಲ್ಲಿಯೂ ಗುರುದಕ್ಷಿಣೆಯನ್ನು ಬಯಸದವರು, ತನಗೆ ವಿಶೇಷವಾಗಿ ಸನ್ಮಾನಿಸಿ ಸ್ವರ್ಣದ ಚೂರಿಯನ್ನು ಬಹುಮಾನವಾಗಿತ್ತ ಪ್ರಸಂಗ, ಗುರುಗಳು ಅವನಿಗೆ ಹೇಳದ ರಹಸ್ಯಮಯ ಹಿನ್ನೆಲೆ, ಮಣಿಕಂಠನ ವಿಶೇಷ ತೇಜಸ್ಸು, ಅತಿಮಾನುಷವಾದ ಕಾರ್ಯಗಳು ಎಲ್ಲಕ್ಕೂ ಇಲ್ಲಿನ ಘಟನೆಗಳು ಸಾಕ್ಷಿಯಾಗಿವೆ. 


ಚೀರಪ್ಪನ್ ಪಣಿಕ್ಕರ್ ಗುರುಕುಲದಲ್ಲಿ ಕಳರಿಪಯಟ್ಟು ವನ್ನು ಕಲಿಯಲು ಹೋದಾಗ ಆ ವಿದ್ಯೆಯ ಹಿನ್ನೆಲೆ, ಆಶ್ರಮದಲ್ಲಿ ಸಿಕ್ಕ ವಿರೋಧಗಳು, ಅದರಾಚೆಗೆ ಎಲ್ಲರೂ ಮಣಿಯುವಂತೆ ಮಾಡಿದ ಶೌರ್ಯ ಹಾಗೂ ಸಾಹಸಗಾಥೆಯನ್ನು ಕಾಣಬಹುದು. ಗುರುಪುತ್ರಿ ಲಲಿತಾಂಬಿಕೆ ಮಾಡಿಕೊಟ್ಟ ಕಪ್ಪು ಬಣ್ಣದ ಪಾಯಸ ಋಧುಮತಿ ಗಂಜಿ, ಹೊಸಬಗೆಯ ಅರವಣ ಪಾಯಸದ ಉಲ್ಲೇಖ ವಿಶೇಷವಾಗಿದೆ. 

ಲಲಿತಾಂಬಿಕೆಯ ಬಳಿ ತಾನು "ನೈಷ್ಠಿಕ ಬ್ರಹ್ಮಚಾರಿ, ಪಟ್ಟವನ್ನು ಏರುವುದಿಲ್ಲ, ಮದುವೆಯನ್ನೂ ಆಗುವುದಿಲ್ಲ, ವಂಶವನ್ನು ಬೆಳೆಸುವುದಿಲ್ಲ" ಎಂದು ತನ್ನ ದೃಢ ನಿರ್ಧಾರವನ್ನು ತಿಳಿಸಿದ್ದೇಕೆ..? ನಂತರ ವಾವರನ ಪ್ರಸಂಗವನ್ನು ಕಾಣಬಹುದು. 


ಅಚ್ಚನ್ ಕೋವಿಲ್ ಶ್ರೀಧರ್ಮಶಾಸ್ತನೇ ಮಹಾವೈದ್ಯನಾಗಿ ಪ್ರಕಟವಾದ ಪ್ರಸಂಗ, ಮೇಲ್ಸ್ಯಾಂತಿಯವರ ಅಚ್ಚರಿಯ ಪ್ರಸಂಗವೂ ಇಲ್ಲಿದೆ.


ನಾರದರು ಮಣಿಕಂಠನನ್ನು ಭೇಟಿಯಾಗುವ ಮುನ್ನ ಮಣಿಕಂಠನಿಗೆ ತನ್ನ ಸಂಪೂರ್ಣ ಜನ್ಮ ರಹಸ್ಯ ಅರಿವಾದ ಬಗೆ ಹೇಗಿತ್ತು..?

ಮಹಿಷಿಯ ವಧೆಯ ಏಕೈಕ ಉದ್ದೇಶದಿಂದ ಮಣಿಕಂಠನ ಜನ್ಮವಾಗಿತ್ತೇ..? 

ಧರ್ಮಶಾಸ್ತ ಹಾಗೂ ಮಣಿಕಂಠ ಇಬ್ಬರಲ್ಲ, ಬೇರೆಯಲ್ಲ ಎಂಬ ತತ್ತ್ವಮಸಿ ಅನುಭಾವ ಉಂಟಾದ ಕ್ಷಣಗಳ ಹಿನ್ನೆಲೆ ಏನು..?


"ಸಾವು ಅವರವರ ಕರ್ಮ ಸಿದ್ದಾಂತದ ಪ್ರಕಾರವೇ ಆಗುತ್ತದೆ." ತನ್ನ ಅಂತ್ಯವೂ ಹರಿಹರಸುತನಿಂದಲೇ ಆಗಬೇಕು ಎಂದು ವಿಧಿಯಲ್ಲಿ ವರ ಕೇಳಿ ಪಡೆದಿದ್ದ ಮಹಿಷಿಯ ಜನ್ಮದ ಹಿಂದೆಯೂ ಒಂದು ಹಿನ್ನೆಲೆ ಇದೆ. ಪೂಂಗಾವನದಲ್ಲಿ ನೆಲೆಸಿದ್ದ ಮಹಿಷಿ ಮಣಿಕಂಠನೆದುರಲ್ಲಿ ಯಾವ ರೀತಿಯಲ್ಲಿ ನಡೆದುಕೊಂಡಳು..? ಯಾರ ಶಾಪ ವಿಮೋಚನೆಯಾಯಿತು.?


ಮಣಿಕಂಠನಾಗಿ ತನ್ನ ಪ್ರೀತಿಪಾತ್ರರ ಮನಸ್ಸಿನಲ್ಲಿ ಏನಿದೆ ಎಂದು ನಿಜಾಂಶವನ್ನು ಅರಿಯುವ ಸಂದರ್ಭದಲ್ಲಿ ಸತ್ತ್ವ ಪರೀಕ್ಷೆಗಾಗಿ ದೇವೇಂದ್ರ ವಾಯು, ವರುಣ, ಅಗ್ನಿ, ಕುಬೇರರು ಯಾವ ರೀತಿಯಲ್ಲಿ ಸಹಾಯ ಮಾಡಿದರು..? ಅರಮನೆಯಲ್ಲಿ ಮಣಿಕಂಠನಿಗೆ ಅರಿವಾದ ಸತ್ಯ ಆತನನ್ನು ಯಾವ ಹಾದಿಯಲ್ಲಿ ಕೊಂಡೊಯ್ಯಿತು..? ಇಲ್ಲಿ ತಂಬುರಾನ್ ರಿಗೆ ಆದ ಆಘಾತ ಜೀರ್ಣಿಸಿಕೊಳ್ಳಲು ಕಷ್ಟವಾಗುವಂತಹದು. ತಾನು ಅರಮನೆಗೆ ಕರೆ ತಂದ ಶಿಶುವನ್ನು ಮಗನಂತೆ ಭಾವಿಸಿದ್ದ ಅವರ ಅನನ್ಯ ಪ್ರೇಮಕ್ಕೆ ಘಾಸಿಗೊಳಿಸಿದ್ದು ಅವರ ಅತ್ಯಾಪ್ತರೇ ಆದದ್ದು ವಿಪರ್ಯಾಸ. ಮಣಿಕಂಠನನ್ನು ಮಣಿಸುವ ಅವರ ಯೋಚನೆ ವಿಫಲವಾಯಿತಾದರೂ.. ರಾಜರಾಜನನ್ನು ರಾಜನಾಗಿಸುವ ಅವರ ಯೋಚನೆ ಗೆದ್ದರೂ.. ಆ ಗೆಲುವು ತೃಪ್ತಿಕರ ಗೆಲುವಾಗದ್ದು ಏಕೆ..? ಮಣಿಕಂಠನ ಮಾತಿಗೆ ತಂಬುರಾನ್ ಒಪ್ಪದೇ ದಾರಿಯೇ ಇರಲಿಲ್ಲ. ಮಣಿಕಂಠನ ಮಾತಿನಂತೆಯೇ ನಡೆದ ತಂಬುರಾನ್ ಧರ್ಮಶಾಸ್ತನ ಕ್ಷೇತ್ರವನ್ನು ಪುನರ್ ನಿರ್ಮಿಸುವಲ್ಲಿ ಏನೆಲ್ಲಾ ಮಾಡಿದರು..? 


ಶಬರ ಪಡೆಯ ಮುಖಂಡ ಕೊಚ್ಚು ವೇಲನ್ ನಂಬಿಕೆಯಿಂದ ಕಾಯುತ್ತಿದ್ದ ಚಾತ್ತನ್ ದೇವ ಶ್ರೀ ಭೂತನಾಥನಾದ ಧರ್ಮಶಾಸ್ತ. ಅವರೆಲ್ಲರೂ ಮಣಿಕಂಠನನ್ನು ಕಾಯುತ್ತಿದ್ದುದ್ದೇಕೆ..? ಅವರಿಟ್ಟ ಬೇಡಿಕೆ ಏನಿತ್ತು ..?


ಅಗಸ್ತ್ಯ ಮಹರ್ಷಿಗಳ ಸಹಾಯ ಹಾಗೂ ಪುಲಿಪಾಣಿ ಸಿದ್ದರು ಸೇರಿ ನಿರ್ಮಿಸಿದ ನವಪಾಷಣ ವಿಗ್ರಹ ಈಗ ಎಲ್ಲಿತ್ತು ಹಾಗೂ ಅದರ ದಿವ್ಯತೆ ಏನು..? ಇದರಲ್ಲಿ ಪರಶುರಾಮರ ಪಾತ್ರವೇನು ಎಲ್ಲದರ ಕುರಿತು ಓದಿ ನೋಡಿ.


ಶಾಸ್ತಮಲೆಯನ್ನು ಶೌರ್ಯಮಲೆ ಎಂದು ಕರೆದದ್ದೇಕೆ..? ಕಡು ಪಾಪಿಷ್ಟ ಉದಯನನ್ ನಡೆಸಿದ ಪಾಪ ಕಾರ್ಯಗಳೆಲ್ಲವೂ ಈಗ ಮಣಿಕಂಠನ ಎದುರಿಗೆ ತೆರೆದುಕೊಂಡ ನಂತರ ಆತ ದುಷ್ಟ ನಿಗ್ರಹಕ್ಕೆ ತೆಗೆದುಕೊಂಡ ಕ್ರಮವೇನು..? 


ವಾವರನನ್ನು ಮಣಿಸಿದ ರೀತಿಗೂ ಹಾಗೂ ಉದಯನನ್ನು ಮಣಿಸಿದ ರೀತಿಗೂ ಬಹಳ ವ್ಯತ್ಯಾಸ ಕಾಣುತ್ತದೆ. ದುಷ್ಟ ನಿಗ್ರಹ ಮಾತ್ರವಲ್ಲದೆ ಮನಸ್ಸನ್ನು ನಿಯಂತ್ರಿಸಿಕೊಳ್ಳಲು ಪ್ರಜೆಗಳಿಗೆ ದಾರಿ ತೋರಿದ ಮಣಿಕಂಠನನ್ನು ಇಲ್ಲಿ ಕಾಣಬಹುದು. 41 ದಿನದ ಮಂಡಲ ಹಾಗೂ ಮಲೆ ಏರಿ ಬರುವರು ಆಚರಿಸುವ ವಿಧಿ ವಿಧಾನದ ಹಿಂದಿನ ಅರ್ಥವೂ ಇಲ್ಲಿದೆ. ಮಣಿ ಮಂಟಪದ ಪಕ್ಕದಲ್ಲಿರುವ ಶಕ್ತಿಸ್ಥಾನ ಯಾರದ್ದಾಯಿತು..? ವಾಪುರನ್ ನ ಪ್ರಾಮುಖ್ಯತೆ, ಶೌರ್ಯವನ್ನು ಇಲ್ಲಿ ಕಾಣಬಹುದು. 


ಶಬರಿಮಲೆ ಎಂಬ ಹೆಸರು ಬರಲು ಕಾರಣವಾದ ಶಬರಿ ತ್ರೇತಾಯುಗದ ಶಬರಿಯೇ ಓದಿ ನೋಡಿ.


ಅಯ್ಯಪ್ಪನ ಮಾಲೆ ಹಾಕಿದವರೆಲ್ಲರೂ ತಮ್ಮ ನಿಜ ನಾಮಧೇಯದ ಬದಲು ಅಯ್ಯಪ್ಪ ಎಂದೇ ಕರೆಯಲ್ಪಡುವುದೇಕೆ..? ಮಕರ ಜ್ಯೋತಿ ಹಾಗೂ ಮಕರ ಬೆಳಕಿನ ವೈಶಿಷ್ಟ್ಯವೂ ಇಲ್ಲಿದೆ. 


ಇಲ್ಲಿ ನಾನು ಪ್ರಸ್ತಾಪಿಸಿದ್ದಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯ ಹಾಗೂ ವಿಚಾರಗಳನ್ನು ನೀವು ಓದಬಹುದು. ಇಲ್ಲಿ 18 ರ ಪ್ರಾಮುಖ್ಯತೆಯನ್ನು ಕಾಣಬಹುದು. ಮಣಿಕಂಠ ಅಯ್ಯಪ್ಪನಾಗಿ ಪ್ರತಿಷ್ಠಾಪಿತನಾದ ಸಂದರ್ಭದಲ್ಲಿ ಇನ್ನುಳಿದ ದೈವಗಳು ಪ್ರತಿಷ್ಠಾಪಿತರಾದ ದೈವತ್ವವೂ ಇಲ್ಲಿದೆ.


ಭಕ್ತಿಪೂರ್ವಕ ಓದಿನ ಅನುಭವದಲ್ಲಿ ನಾವು ಕಾಣದ ಶಬರಿಮಲೆಯ ದರ್ಶನ ಮಾತ್ರವಲ್ಲದೆ, ಇನ್ನುಳಿದ ದೈವೀ ದರ್ಶನವನ್ನು ನಮಗೆ ಮಾಡಿಸುತ್ತಾರೆ ಪೂಂಗಾವನ ಆವರಿಸುವಂತೆ ಮಾಡುತ್ತಾರೆ. ಮೊದಲ ಓದು ಮಾತ್ರವಲ್ಲದೆ, ಮರುಓದಿನಲ್ಲಿಯೂ ಮತ್ತಷ್ಟು ಆಪ್ತ ಓದು ನಮ್ಮದಾಗುತ್ತದೆ. 


~ವಿಭಾ ವಿಶ್ವನಾಥ್

ಹುಲಿ ವೇಷ (ಪುಸ್ತಕ ಯಾನ - 458)


ಪುಸ್ತಕದ ಶೀರ್ಷಿಕೆ : ಹುಲಿ ವೇಷ

ಲೇಖಕರು : ವಿಠಲ್ ಶೆಣೈ 

ಪ್ರಕಾಶಕರು : ಟೋಟಲ್ ಕನ್ನಡ 

ಪ್ರಥಮ ಮುದ್ರಣ : 2019

ಮೂರನೇ ಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 206

ಬೆಲೆ : 160 ರೂ.


ಈ ಕಥಾ ಸಂಕಲನದ ಶೀರ್ಷಿಕೆಯಾಗಿರುವ 'ಹುಲಿ ವೇಷ' ಒಂದು ನೀಳ್ಗತೆ. ಲೇಖಕರು ಈ ಕಥೆ ಹುಟ್ಟಿದ ರೀತಿಯನ್ನು ಹೇಳುತ್ತಾರೆ. ಮಂಗಳೂರಿನಲ್ಲಿ 70-80ರ ದಶಕದಲ್ಲಿ ಹುಟ್ಟಿ ಬೆಳೆದ ಹುಡುಗರಿಗೆ ಹುಲಿ ವೇಷ ಎಂದರೆ ಇರುವ ಆಪ್ತ ಭಾವ ಹಾಗೂ ನವರಾತ್ರಿಯ ಕೊನೆಯ ನಾಲ್ಕೈದು ದಿನಗಳ ಹುಲಿ ವೇಷದ ನೃತ್ಯ ಜೊತೆಗೆ ಶಾರದಾ ಮಾತೆಯ ಶೋಭಾಯಾತ್ರೆಯ ಜೊತೆ ಕೊನೆಗೊಳ್ಳುವ ಹುಲಿ ವೇಷದ ಬಣ್ಣ ಹೀಗೆ ಈ ಎಲ್ಲಾ ಅನುಭವಗಳ ಜೊತೆಗೆ ಹುಲಿ ವೇಷದ ದಂಡನ್ನೇ ಆಧಾರವಾಗಿಟ್ಟು ಬರೆದ ಕಥೆ ಇದು. ತೀರಾ ಸಣ್ಣ ಕಥೆಯೂ ಆಗದೆ, ಕಾದಂಬರಿಯಷ್ಟು ದೊಡ್ಡದಾಗದೆ ನೀಳ್ಗತೆ ರೂಪ ತಳೆದಿದೆ ಎನ್ನುತ್ತಾರೆ. ಇದರ ಜೊತೆಗೆ ಇನ್ನು ಆರು ಕಥೆಗಳು ಈ ಕಥಾ ಸಂಕಲನದಲ್ಲಿದೆ. ಕೆಲ ಕಥೆಗಳು ಪ್ರತಿಲಿಪಿ ಆನ್ಲೈನ್ ನಲ್ಲಿ ಪ್ರಕಟವಾಗಿವೆ.


ಈ ಕಥಾ ಸಂಕಲನದಲ್ಲಿ ಒಟ್ಟು ಏಳು ಕಥೆಗಳಿವೆ. 7 ಕಥೆಗಳ ಕಥಾವಸ್ತುವೂ ವಿಭಿನ್ನವಾಗಿ ಸೆಳೆಯುತ್ತವೆ. ಬೆನ್ನುಡಿ ಹಾಗೂ ಕಥೆಗಳ ಪರಿಚಯದಲ್ಲಿ ಸಂಕ್ಷಿಪ್ತವಾಗಿ ಕಥೆಯ ಕುತೂಹಲವನ್ನು ಕಟ್ಟಿಕೊಟ್ಟು ಓದಲು ಪ್ರೇರೇಪಿಸಿದ್ದಾರೆ.


ಅದೇ ಧ್ವನಿ : "ಕರ್ನಾಟಕದ ಹೊಸ ಧ್ವನಿಗಳು" ಎಂಬ ಟಿ.ವಿ ಕಾರ್ಯಕ್ರಮದ ಕೊನೆಯ ಹಂತದ ಸ್ಪರ್ಧೆಯ ವಿಜೇತನಾಗಿ ಹೊರಹೊಮ್ಮಿದ ಮನೋಜ್ ಕುಮಾರ್ ನಿಗೆ ದೈವದತ್ತವಾದ ಕಂಠ ಒಲಿದಿತ್ತು ಜೊತೆಗೆ ಮುಖದಲ್ಲಿ ಆತ್ಮವಿಶ್ವಾಸವಿತ್ತು. ಅವನ ಸುಮಧುರ ಗಾಯನದಿಂದ ಆತ ಎಲ್ಲರನ್ನೂ ಸೆಳೆದಿದ್ದ. ಮನೋಜ್ ತಾಯಿ ಮುಕ್ತ ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡು, ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾ ಮಗನನ್ನು ಸಾಕಿದ್ದರು. ಓದಿನಿಂತ ಪಠ್ಯೇತರ ಚಟುವಟಿಕೆಗಳಲ್ಲಿಯೇ ಅವನ ಒಲವು ಹೆಚ್ಚಾಗಿತ್ತು. ಅವನ ಸುಶ್ರಾವ್ಯ ಕಂಠದ ಅರಿವಾಗಿ ಜೊತೆಗೆ ವಠಾರದ ಸರೋಜಮ್ಮನ ಮೆಚ್ಚುಗೆಯೂ ಸೇರಿ ಸಂಗೀತ ತರಬೇತಿ ಕೊಡಿಸಿದರು. ಅವರ ಶ್ರಮಕ್ಕೆಲ್ಲ ಪ್ರತಿಫಲ ಸಿಕ್ಕ ಸಮಯವಿದು. ವಿಜಯದ ಪ್ರತಿಫಲವಾಗಿ ಅಮರ್ - ಕುಶಲ್ ಜೋಡಿಯ ಸಂಗೀತ ನಿರ್ದೇಶನದ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕನಾಗಿ ಕಲಿಯುತ್ತಾ ಅವರ ಗರಡಿಯಲ್ಲಿಯೇ ಕಲಿಯುತ್ತಾ ಸಾಗಿದ. ಮೂವರ ನಡುವೆಯೂ ಹೇಳದೆಯೇ ಆಪ್ತತೆ ಜೊತೆಗೆ ಕನೆಕ್ಟಿವಿಟಿ ಬೆಳೆದಿದ್ದು, ಮನೋಜನ ಪ್ರತಿಭೆ, ಯಶಸ್ಸು, ಕೀರ್ತಿ ಎಲ್ಲವೂ ಬೆಳೆದು ಎಲ್ಲವೂ ಸುಸೂತ್ರವಾಯಿತು ಎಂಬ ಸಂದರ್ಭದಲ್ಲಿ ಗಂಟಲು ನೋವಿನಿಂದ ಹಾಡು ಅಪಸ್ವರವಾಯಿತು. ಅಪಸ್ವರದ ಕಾರಣವನ್ನು ಡಾಕ್ಟರ್ ಏನೆಂದರು..? ಅವನ ಚಿಕಿತ್ಸೆ ನಡೆಯಿತು. ಅವನ ಕಮಿಟ್ಮೆಂಟ್ ಹಾಗೂ ಆತನ ಮುಂದಿನ ಬದುಕು ಹೇಗಿತ್ತು..? ಗಾಯಕನಿಗೆ ಧ್ವನಿ ಎಷ್ಟು ಮುಖ್ಯ ಹಾಗೂ ಎಲೆಮರೆ ಕಾಯಿಯಂತಹ ಪ್ರತಿಭೆಗಳ ಪಾಡು ಹೇಗಿರುತ್ತದೆ ಎಂಬುದನ್ನು ಹೇಳುವ ಕಥೆ. ತಾಯಿಯ ಮಮತೆಯ ಮತ್ತೊಂದು ಸ್ವರೂಪವನ್ನೂ ಹೇಳುತ್ತದೆ.


ಹುಲಿ ವೇಷ : ಮಂಗಳೂರಿನ ದಸರಾದ ಸಂಭ್ರಮದ ಭಾಗವಾಗುತ್ತಿದ್ದ ಹುಲಿವೇಷದ ದಂಡಿನಲ್ಲಿ ಭಾನು ಶೆಟ್ಟಿ ಫ್ರೆಂಡ್ಸ್ ಸರ್ಕಲ್ ಹುಲಿಗಳ ತಂಡಕ್ಕೆ 75ನೇ ವರ್ಷದ ಸಂಭ್ರಮ. ತಾತ ಕಟ್ಟಿ ಬೆಳೆಸಿದ್ದ ತಂಡವನ್ನು ಈಗ ತಾನು ವೇಷ ಹಾಕಿ ಭಾನು ಶೆಟ್ಟಿ ಮುನ್ನಡೆಸುತ್ತಿದ್ದ. ಆದರೆ, 30 ವರ್ಷಗಳ ಹಿಂದೆ ತನ್ನ ತಂದೆ ಭೈರವ ಶೆಟ್ಟಿಯನ್ನು ನಿರ್ದಯವಾಗಿಯೇ ಕಣ್ಣಮುಂದೆಯೇ ಕೊಂದದ್ದು ಭಾನು ಶೆಟ್ಟಿಯ ಮನಸ್ಸಿನಲ್ಲಿ ಇನ್ನು ಹಸಿಯಾಗಿಯೇ ಉಳಿದಿತ್ತು. ಇದರ ಹಿನ್ನೆಲೆ ಮತ್ತು ಕಾರಣವೇನು..?

ಹುಲಿ ವೇಷದ ಜೊತೆ ಜೊತೆಗೆ ಚುನಾವಣೆಯ ಹಾಗೂ ರಾಜಕೀಯದ ವಿಚಾರವೂ ತೆರೆದುಕೊಳ್ಳುತ್ತದೆ. ಬಹುಜನ ಪಕ್ಷ ಪ್ರಜಾರಾಜ್ಯ ಪಕ್ಷ ಹಾಗೂ ರೈತ ಬಂಧು ಪಕ್ಷದ ಚುನಾವಣಾ ಫಲಿತಾಂಶ ಹೊರ ಬಿದ್ದು ರೆಸಾರ್ಟ್ ರಾಜಕೀಯ ನಡೆಯುತ್ತಿರುವ ಸಂದರ್ಭದಲ್ಲಿಯೇ ಇತ್ತ ಹುಲಿವೇಷವೂ ನಡೆಯುತ್ತಿರುತ್ತದೆ.

ರೋಚಕವಾಗಿ ಕಥೆಯನ್ನು ಹೇಳುತ್ತಾ ಸಾಗುವಾಗ ರಾಜಕೀಯದ ಆಸಕ್ತರಲ್ಲದವರು ಮುಂದೇನಾಗಬಹುದು ಎಂದು ಕುತೂಹಲದಿಂದ ಕಾಯುವಂತಾಗುತ್ತದೆ.

ಬಿಜಾಪುರದಿಂದ ಬಂದಿದ್ದ ನಾಲ್ವರಲ್ಲಿ ಮಂಜುನಾಥ ನ ಪತ್ನಿಯ ಆಪರೇಷನ್ ಗೆ ದುಡ್ಡು ಕೂಡಿಸಲು, ದುಡ್ಡು ಸಂಪಾದಿಸಲು ವೇಷ ಹಾಕಲು ಬಂದೆವೆಂದು ಹೊಸಬರಿಗೆ ಅವಕಾಶ ಕೊಡುತ್ತಿದ್ದ ಭಾನುಶೆಟ್ಟಿ ಗ್ರೂಪ್ ನಲ್ಲಿ ಸೇರಿದಾಗ ಅವರಿಗೆ ಪೇಂಟಿಂಗ್ ಮಾಡುವುದು, ಹುಲಿ ನೃತ್ಯದ ಸ್ಟೆಪ್ ಗಳನ್ನು ಹೇಳಿಕೊಡುವುದು ಇದೆಲ್ಲದ ಜೊತೆಗೆ ಹುಲಿ ವೇಷದ ವೈಶಿಷ್ಟ್ಯಗಳನ್ನು ತೆರೆದಿರುತ್ತಾರೆ. ಭಾನು ಶೆಟ್ಟಿ ಆಶಿಸುತ್ತಿದ್ದಂತೆಯೇ ಅವರ ಟ್ಯಾಬ್ಲೋಗೆ ದೇವಿಯ ಹತ್ತಿರದ ಸ್ಥಾನವನ್ನು ದೇವಸ್ಥಾನದವರೇ ಕೊಟ್ಟಿದ್ದರ ಅಚ್ಚರಿಯ ಜೊತೆಗೆ ಮತ್ತೊಂದು ಅಚ್ಚರಿಯೂ ಕಾದಿರುತ್ತದೆ.

ಹುಲಿವೇಷ ಹಾಗೂ ರಾಜಕೀಯ ಎರಡು ಮಿಳಿತವಾಗಿರುವ ಈ ಕಥೆ ಇಷ್ಟವಾಯಿತು. ಕಿರುಚಿತ್ರ ನಿರ್ಮಿಸಲು ಚೆಂದದ ಕಥಾನಕ ಇಲ್ಲಿದೆ. 


ತಕ್ಷಕನ ದೋಷ : ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಆಫ್ ಕ್ಲೌಡ್ ಟೆಕ್ನಾಲಜಿಸ್ ಸಮ್ಮೇಳನಕ್ಕೆ ಹೋಗಬೇಕಾಗಿದ್ದ, ಅದರಲ್ಲಿಯೂ ತಾನು ಪೀಡಿಸಿ ಪಡೆದುಕೊಂಡಿದ್ದಅವಕಾಶವನ್ನು ಧನುಷ್ ಕಳೆದುಕೊಳ್ಳುವ ಸಂದರ್ಭ ಉಂಟಾಗಿದ್ದು ಹಾವಿನಿಂದ. ಏರ್ಪೋರ್ಟ್ಗೆ ಹೊರಡೋದು ಇನ್ನೇನು ಕೆಲವೇ ನಿಮಿಷಗಳು ಎನ್ನುವಾಗ ಆ ಮಧ್ಯರಾತ್ರಿಯಲ್ಲಿ ಅನಪೇಕ್ಷಿತವಾಗಿ ಕಂಡ ದೃಶ್ಯ ಮನೆಯಲ್ಲಿ ಹೆಡೆ ಬಿಚ್ಚಿ ಕುಳಿತಿದ್ದ ನಾಗರಹಾವು. ಆತನ ಪತ್ನಿಯ ಹೆದರಿಕೆ, ಆಸ್ತಿಕ ಕುಟುಂಬದಲ್ಲಿ ಹುಟ್ಟಿ ನಂಬಿಕೆ ಇಟ್ಟುಕೊಂಡಿದ್ದ ಧನುಷ್ ಬದಲಾದ ಪರಿ ಹಾಗೂ ದೈವ ಭಕ್ತಿ ಮತ್ತು ಆಸ್ತಿಕ ಮನೋಭಾವದ ಪತ್ನಿ ಸಂಧ್ಯಾ ಇವರಿಬ್ಬರ ನಡುವಿನ ಮಾತುಕತೆಗಳು, ವಾದಗಳು ಜೊತೆಗೆ ಹಾವನ್ನು ಓಡಿಸಲು ಮಾಡುವ ಪರದಾಟ ಎಲ್ಲವೂ ಇಲ್ಲಿದೆ. ಇದಕ್ಕೆ ಸರ್ಪ ದೋಷ ಎಷ್ಟರಮಟ್ಟಿಗೆ ಕಾರಣ..? ಓದಿ ನೋಡಿ.


ಅವಳು ಅವನು ಮತ್ತು ಕೋಣೆ : ವಿಚಿತ್ರವಾದ ಕತ್ತಲ ಕೋಣೆಯಲ್ಲಿ ಬಂದಿಗಳಾದ ಇಬ್ಬರು ಬಂಧಿಗಳು ಅವನು ಮತ್ತು ಅವಳು. ಅವರಿಬ್ಬರೂ ಬಂಧಿಯಾದ ಪರಿ, ಅವರಿಬ್ಬರು ಹೊರ ಹೋಗಲು ಪ್ರಯತ್ನಿಸಿ ವಿಫಲರಾಗುವ ಬಗೆ, ಅವರಿಬ್ಬರ ನಡುವಿನ ಮಾತುಕತೆಗಳು, ಸಂಧಾನ ಎಲ್ಲವೂ ಇಲ್ಲಿದೆ. ಹೆಚ್ಚು ಹೇಳಿ ಈ ಕಥೆಯ ಸ್ವಾರಸ್ಯವನ್ನು ಹಾಳು ಮಾಡಲಾರೆ.


ಬಂಗಾರದ ಬಳೆ : ಎಷ್ಟೋ ಬಾರಿ ಪ್ರಾಮಾಣಿಕತೆಯಿಂದ ಇದ್ದವರು ಮನಸ್ಸು ಜಾರಿದ ಕ್ಷಣದಲ್ಲಿ ಅತಿಯಾಸೆಯಿಂದಲೋ ಅಥವಾ ಇದು ಒಂದು ಚಿಕ್ಕ ಅವಕಾಶ ಬಳಸಿಕೊಂಡರೆ ಬೇರೆಯವರಿಗೆ ಹಾನಿಯಾಗಲಾರದು ಎಂತಲೋ ಮನಸ್ಸು ಹೇಳಿದಂತೆ ಕೇಳಲು ಹೋದ ಕ್ಷಣಗಳಲ್ಲಿಯೇ ಸಿಕ್ಕಿಹಾಕಿಕೊಳ್ಳುವುದು ಹೆಚ್ಚು. ಕಳ್ಳರಿಗಿಂತಲೂ ಹೆಚ್ಚು ಪಾಪಪ್ರಜ್ಞೆ ಕಾಡುವುದು ಇಂತಹ ಕ್ಯಾಟಗರಿಗೆ ಸೇರಿದವರಿಗೆ. 

ಬದಲಾದ ದಿನಗಳಲ್ಲಿ ರಿಕ್ಷಾಗಿಂತಲೂ ಕ್ಯಾಬ್ ಭರಾಟೆ ಹೆಚ್ಚಾದಾಗ ನವೀನ್ ರಿಕ್ಷಾ ಬಿಟ್ಟು ಲೋನ್ ಪಡೆದು ಕ್ಯಾಬ್ ಓಡಿಸಲು ಶುರುವಿಟ್ಟ. ಪತ್ನಿ ಸುಜಾತಳಿಗೆ ಅತ್ಯಮೂಲ್ಯವಾದ ಉಡುಗೊರೆಯನ್ನು ಕೊಡುವ ಆಸೆ ಅವನಿಗೆ. ಅವಳ ಮನಸ್ಸಿನಲ್ಲಿದ್ದದ್ದು ಬಂಗಾರದ ಬಳೆ. ಹಗಲು-ರಾತ್ರಿ ಕಷ್ಟಪಟ್ಟರೆ ಉಳಿಸಲಾಗುವ ಪುಟ್ಟ ಮೊತ್ತ ಅದಕ್ಕೆ ಸಾಲುವಂತಿರಲಿಲ್ಲ. ಆದರೆ, ಅಚಾನಕ್ ಸಿಕ್ಕಿದ ಅವಕಾಶದಿಂದ ಸುಜಾತಾಳಿಗೆ ಬಂಗಾರದ ಬಳೆಯನ್ನು ಕೊಡಿಸುವ ಸಮಯ ಕೂಡಿ ಬಂದಿತ್ತು ಎಂದುಕೊಂಡು ಹೋದರೆ ಮನಸ್ಸಿನ ಕಲ್ಪನೆಗಳಿಗಿಂತಲೂ.. ಅಲ್ಲಿ ನಡೆದ ವಿದ್ಯಮಾನ ಇಬ್ಬರಿಗೂ ದೊಡ್ಡ ಪಾಠವನ್ನೇ ಕಲಿಸಿದ ಕಥೆ ಇಲ್ಲಿದೆ. 


ನೀ. ಹೀ. ಸಂ : ನಿದ್ದೆ ಬರದೆ ಏನೇನೋ ಸರ್ಕಸ್ ಮಾಡುತ್ತಿದ್ದ ಸುಮಂತ್ ಗೆ ತನ್ನಂತೆಯೇ ಇದ್ದ ಆಲ್ಬರ್ಟ್ ಅಂಕಲ್ ಜೊತೆಯಾದಾಗ ರಾತ್ರಿಯ ವಾಕಿಂಗ್ ಶುರುವಾಗಿತ್ತು. ಮುಂದೆ ರಾಮನಾಥ್ ಜೊತೆಯಾದರು. ಹೀಗೆ ಇವರ ಚಟುವಟಿಕೆಗಳು ಜೋರಾಗಿ ಮುಂದೆ ನಿದ್ರಾಹೀನರದ್ದೇ ಒಂದು ಸಂಘ ಸ್ಥಾಪಿತವಾಗುತ್ತದೆ. ಆದರೆ, ಎಲ್ಲರನ್ನೂ ನಿಯಂತ್ರಿಸುವುದು ಸುಲಭವಲ್ಲ. ಹಾಗೆಂದು ಆ ಸಂಘ ಸರಿಯೇ..? ನಿದ್ರಾಹೀನತೆಗೆ ಪರಿಹಾರ ಕಂಡುಕೊಳ್ಳುವುದು ಬಿಟ್ಟು ತಮ್ಮಂಥವರೆಲ್ಲರನ್ನು ಸೇರಿಸಿಕೊಂಡ ಸಂಘದ ಪರಿಸ್ಥಿತಿ ಏನಾಯಿತು ಓದಿ ನೋಡಿ.


ಕೀರ್ತಿ ಟ್ರಾವೆಲ್ಸ್ : ಕೀರ್ತಿ ಟ್ರಾವೆಲ್ಸ್ ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ರಚಿತ್ ಹಾಗೂ ಕೀರ್ತಿ ಇಬ್ಬರ ಪರಿಚಯವಾಗಿ ಆಗುವ ಮಾತುಕತೆಯಲ್ಲಿ ಇಬ್ಬರೂ ಮರುದಿನ ಮನೆಯಲ್ಲಿ ನೋಡಿದ ತಮ್ಮ ಭಾವಿ ಸಂಗಾತಿಗಳನ್ನು ನೋಡಲು ಹೊರಟಿರುವ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಹಾಗೆಂದು ಕೀರ್ತಿಕೆ ರಚಿತ್ ಹಾಗೂ ರಚಿತ್ ಗೆ ಕೀರ್ತಿ ನೋಡಲು ಹೊರಟಿರುವ ಹುಡುಗ-ಹುಡುಗಿಯಲ್ಲ ಇಬ್ಬರ ಬದುಕಿನಲ್ಲಿ ನಡೆಯುವ ಘಟನೆ ಕಾಕತಾಳೀಯ. ಕಥೆಯ ಮೊದಲರ್ಧ ಓದುವಾಗ ನಾನು ಇದು ಕಾಕತಾಳೀಯ ಘಟನೆ ಎಂದೇ ಅಂದುಕೊಂಡೆ. ಆದರೆ, ಯಾವ ಘಟನೆಯೂ ಸುಖಾಸುಮ್ಮನೆ ಘಟಿಸುವುದಿಲ್ಲ. ನಾವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯೂ ಸುಮ್ಮನೆ ನಮ್ಮ ಬದುಕಲ್ಲಿ ಬಂದಿರುವುದಿಲ್ಲ ಎನ್ನುವ ಉಕ್ತಿಯೊಂದನ್ನು ಓದಿದ್ದೆ. ಅಂತೆಯೇ ಪರಸ್ಪರರು ನೋಡದಿದ್ದರೂ.. ಇಬ್ಬರ ಜೀವನದಲ್ಲಿಯೂ ಬರುವ ವ್ಯಕ್ತಿಗಳ ನಡುವೆ ಕನೆಕ್ಟಿವಿಟಿಯಂತೂ ಇದ್ದೇ ಇದೆ. ಹಾಗೆಂದು ಇದು ಪ್ರೇಮ ಕಥೆಯಾ..? ಹೌದೆನ್ನಲೇ..? ಇಲ್ಲವೆನ್ನಲೇ..? ಎರಡನ್ನೂ ಪೂರ್ತಿಯಾಗಿ ಹೇಳುವುದು ಕಷ್ಟ ಓದಿ ನೋಡಿ.


ವಿಭಿನ್ನ ಕಥೆಗಳ ಓದು ಇಷ್ಟವಾಯಿತು.


~ ವಿಭಾ ವಿಶ್ವನಾಥ್

ಭಾನುವಾರ, ಜೂನ್ 7, 2026

ಅಭಯ (ಬೆಳಕಿಂಡಿಯ ಕತೆಗಳು - 31)

ಎಷ್ಟು ಕರೆ ಮಾಡಿದರೂ ತಲುಪದ ಕರೆ, ಜೊತೆಗೆ ಮಗನಿದ್ದ ಪ್ರದೇಶದಲ್ಲಿ ಯುದ್ಧದ ತೀವ್ರತೆ ಕಂಡು ಅವಳಿಗೆ ಭಯವಾಗುತ್ತಿದ್ದುದರ ಜೊತೆಗೆ.. ತನ್ನ ಗಂಡ ತನ್ನಿಂದ ಏನೋ ಮುಚ್ಚಿಡುತ್ತಿದ್ದಾರೆ ಎಂಬ ಗುಮಾನಿಯೂ ಸೇರಿ ಅವಳನ್ನು ತೀವ್ರ ಆತಂಕಕ್ಕೆ ತಳ್ಳಿತ್ತು. ದೇವರ ಮನೆಯಲ್ಲಿ ಕುಳಿತವಳಿಗೆ ಅಭಯ ಸಿಕ್ಕಂತಾಗಿ ಎದ್ದು ಹೊರಬಂದರೆ ಮಗ ಅಮ್ಮನಿಗೆ ಸರ್ಪ್ರೈಸ್ ಕೊಡಲು ತಂದೆಯ ಜೊತೆ ಪ್ಲಾನ್ ಮಾಡಿ ಹೊರಟು ಬಂದಿದ್ದ. ಅದಾದ ನಂತರ ಅಲ್ಲಿ ಯುದ್ಧ ಶುರುವಾಗಿತ್ತು. ಅಂತೂ ಅಮ್ಮನ ಆತಂಕ ಕಳೆದು, ನೆಮ್ಮದಿ ಮೂಡಿತ್ತು.

~ವಿಭಾ ವಿಶ್ವನಾಥ್


ಸಮಯ ಸಾಧಕರಿಗೆ ಸರಿಯುತ್ತರ (ಬೆಳಕಿಂಡಿಯ ಕತೆಗಳು - 30)


ಅವಳ ಬಳಿ ಬಂದು, ಮನಸ್ತಾಪ ಮಾಡಿಕೊಂಡಿದ್ದ ವ್ಯಕ್ತಿಯ ಬಗ್ಗೆ ಸಮಯಸಾಧಕರು ಹಗೆ ತುಂಬಲು ಯತ್ನಿಸಿದಾಗ ಅವಳು ಕಿವಿಗೊಡಲಿಲ್ಲ. ಮಾತ್ರವಲ್ಲ.. ಇನ್ನೊಬ್ಬರ ಕುರಿತು ಅವರ ಅನುಪಸ್ಥಿತಿಯಲ್ಲಿ ಚರ್ಚಿಸಲೂ ಇಚ್ಚಿಸಲಿಲ್ಲ. ಅವಳೂ ಹಿತ್ತಾಳೆ ಕಿವಿಯವಳಾಗಿ, ಸಂಚಿಗೆ ಬಲಿಯಾಗುವ ಬಲಿಪಶುವಾಗಲಿಲ್ಲ. ಅವಳದ್ದು ಎಂದಿಗೂ ನೇರಾನೇರ ಮಾತು.


ಅವಳು ಗಂಧದ ಜೊತೆ ಗುದ್ದಾಡುವವಳೇ ಹೊರತು, ಸಗಣಿಯ ಜೊತೆ ಸರಸವಾಡುವವಳಲ್ಲ ಎಂಬುದನ್ನು ಮನದಟ್ಟು ಮಾಡಿಸಿದ್ದಳು. ಇಲ್ಲಿ ಸಮಯಸಾಧಕರು ಮುಖಭಂಗ ಅನುಭವಿಸಿದ್ದರು.. ಅಲ್ಲಿ ಬಾಕಿ ಉಳಿದಿತ್ತು.

~ವಿಭಾ ವಿಶ್ವನಾಥ್

ಚೈತನ್ಯ (ಬೆಳಕಿಂಡಿಯ ಕತೆಗಳು - 29)

ಪುಟ್ಟ ಮಕ್ಕಳನ್ನು ಮೊದಲ ದಿನದ ಶಾಲೆಗೆ ಸ್ವಾಗತಿಸಿ, ಸಂತೈಸಿ, ಸಂಭಾಳಿಸಿ ಅರ್ಧ ದಿನ ಅವರೊಡನೆ ಕಳೆದು, ಆಯಾಸದಿಂದ ಬಂದು ಸ್ಟಾಫ್ ರೂಂನಲ್ಲಿ ಕುಳಿತರೆ.. ಮೊದಲ ಮಳೆಯ ಮಣ್ಣ ಕಂಪು ಆವರಿಸಿ ಮನಕ್ಕೆ ಚೈತನ್ಯ ತುಂಬಿತು. 


ಚಿಗುರಿಗೆ ಜೀವಜಲವಾದ ಮಳೆಗೂ.. ಪುಟ್ಟ ಮಕ್ಕಳಿಗೆ ಜೀವನೋತ್ಸಾಹಕ್ಕೆ ದಾರಿದೀಪವಾಗುತ್ತಿರುವ ತನ್ನ ಕಾಯಕಕ್ಕೂ ಸಾಮ್ಯತೆ ಕಂಡು ಹೆಮ್ಮೆಯೆನಿಸಿತು. ಮತ್ತರ್ಧ ದಿನದ ಕೆಲಸಕ್ಕೆ ಹುರುಪು ತಂದುಕೊಂಡು ಖುಷಿಯಿಂದ ಕ್ಲಾಸ್ ರೂಂ ಕಡೆಗೆ ಹೆಜ್ಜೆ ಹಾಕಿದಳು.

~ವಿಭಾ ವಿಶ್ವನಾಥ್

ಮುಗಿಲೆತ್ತರ... (ಬೆಳಕಿಂಡಿಯ ಕತೆಗಳು - 28)


 "ಮುಗಿಲಿಗೆ ಏಣಿ ಹಾಕುವ ಬದಲು ನೆಲದ ಮೇಲೆ ನಡೆಯುವುದನ್ನು ಕಲಿ" ಎಂದ ಅವರಿವರ ಮಾತಿಗೆ ಬದಲು ನುಡಿಯಲಿಲ್ಲ ಅವಳು.

"ಮುಗಿಲೆತ್ತರದ ಕನಸು ಕಂಡರೆ ಕೈಗೆಟುಕುವ ಕನಸುಗಳನ್ನು ಸಾಧಿಸುವುದು ಕಷ್ಟವಾಗದು" ಎಂಬ ಅಪ್ಪನ ಮಾತು ಸದಾ ಅವಳ ಕಿವಿಯಲ್ಲಿ ಗುನುಗುಣಿಸುತ್ತಿರುತ್ತದೆ. ಈಗ ಅವಳ ಚಿಕ್ಕ-ಪುಟ್ಟ ಸಾಧನೆಗಳು ಅವಳಿಗೆ ಅಹಂ ತರುವುದಿಲ್ಲ. ಕನಸು ಮುಗಿಲೆತ್ತರಕ್ಕೂ.. ಅಹಂ ಪಾತಾಳದಲ್ಲೂ ಇರಬೇಕೆಂದು ತನ್ನ ಮಗಳಿಗೆ ಹೇಳಿಕೊಡುತ್ತಿದ್ದಾಳೆ.

~ವಿಭಾ ವಿಶ್ವನಾಥ್


ಮನೋಗಮ (ಪುಸ್ತಕ ಯಾನ - 457)


ಪುಸ್ತಕದ ಶೀರ್ಷಿಕೆ : ಮನೋಗಮ

ಲೇಖಕರು : ಡಾ. ಕೆ. ಎನ್. ಗಣೇಶಯ್ಯ

ಪ್ರಕಾಶಕರು : ಅಂಕಿತ ಪುಸ್ತಕ 

ಪ್ರಥಮ ಮುದ್ರಣ : 2025

ಪುಟಗಳು : 88

ಬೆಲೆ : 120 ರೂ. 


ಎಂದೋ ಓದಿದ ಅಥವಾ ಕೇಳಿದ ವಿಚಾರಗಳು ಅಥವಾ ಕಥೆಯ ಎಳೆಗಳು ಮತ್ತೆ ನನ್ನು ಯೋಚಿಸಲು ಪ್ರೇರೇಪಿಸುತ್ತವೆ. ಕೆ. ಎನ್. ಗಣೇಶಯ್ಯನವರಿಗೆ ಅವರು 'ಇಮ್ಮಡಿ ಮಡಿಲು' ಎಂಬ ಕಥಾಸಂಕಲನದಲ್ಲಿ ಬರೆದಿದ್ದ ಕಥೆ ಪರ್ಯಾಯದಲ್ಲಿ ಇಂದಿನ ಕಾಲದ ಹೆಣ್ಣುಗಳು ಅಕ್ಕಮಹಾದೇವಿ ಅನುಭವಿಸಿದ ಮಾನಸಿಕ ತಲ್ಲಣಕ್ಕೆ ತುತ್ತಾದರೆ ಆಕೆಯ ಸ್ಪಂದನೆ ಹೇಗಿರುತ್ತದೆ ಎಂದು ಬರೆಯುವಾಗ ಮನುಷ್ಯನ ಮನಸ್ಸಿನ ಬಗೆಯ ಚಿತ್ರಣವನ್ನು ಕಥೆಯ ಕೊನೆಯಲ್ಲಿ ಬರೆಯುತ್ತಾರೆ. ಅದಾದ ನಂತರ ಆ ಕಥೆ ಲೇಖನಗಳಿಗೆ ನಾಂದಿ ಹಾಡಿತು ಎನ್ನುತ್ತಾರೆ. ವಿಜಯ ಕರ್ನಾಟಕದಲ್ಲಿ 'ಮನೋಗಮ' ಶೀರ್ಷಿಕೆಯ ಅಡಿಯಲ್ಲಿ 20 ಲೇಖನಗಳು ಪ್ರಕಟಗೊಂಡಿತ್ತವೆ. ಅವುಗಳನ್ನು ಕೊಂಚ ಪರಿಷ್ಕರಿಸಿ, ನಂತರ ಬರೆದ ಕೆಲವು ಲೇಖನಗಳನ್ನು ಸೇರಿಸಿ ಈ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ 15 ವಿಚಾರ ಪ್ರಚೋದಕ ಲೇಖನಗಳಿವೆ. 


ಬೆಂಕಿಯಲ್ಲಿ ಅರಳಿದ ಮೆದುಳು... : ಮಾನವನ ಮೆದುಳು ಚಿಂಪಾಂಜಿಗಿಂತ ಐದು ಪಟ್ಟು ಹೆಚ್ಚು ಗಾತ್ರಕ್ಕೆ ಬೆಳೆದಿದ್ದಕ್ಕೆ ಕಾರಣ ಬೆಂಕಿ ಎಂದು ಹೇಳುತ್ತಾರೆ. ಮಾನವನ ಮೆದುಳಿನ ಗಾತ್ರ ಹೆಚ್ಚಾಗಿದ್ದರ ಕಾರಣವನ್ನು ಹುಡುಕಿ ಹೊರಟ ವಿಜ್ಞಾನಿಗಳೆಲ್ಲರೂ ಸಾಮಾನ್ಯವಾಗಿ ಒಪ್ಪುವ ವಿದ್ಯಮಾನ ಎಂದರೆ ಅದೇ ಕಾಲಘಟ್ಟದಲ್ಲಿ ಮಾನವನ ಬೆಂಕಿಯನ್ನು ಪಳಗಿಸತೊಡಗಿದ ಎನ್ನುವುದು. ಅದಕ್ಕೂ ಮೊದಲೇ ಬೆಂಕಿಯ ಉಪಯೋಗಗಳನ್ನು ಗಮನಿಸಿರಲೂ ಸಾಧ್ಯ. ಈ  ಸಾಧ್ಯಸಾಧ್ಯತೆಗಳನ್ನಿಟ್ಟುಕೊಂಡು ಬೆಂಕಿ ಹಾಗೂ ಮೆದುಳನ್ನು ಕನೆಕ್ಟ್ ಮಾಡಿರುವ ಈ 'ಪ್ರಜ್ಞಾಕೋಶ'ದ ಕುರಿತು ಓದಿನೋಡಿ.


ಹಿಗ್ಗಿದ ಮೆದುಳು ಕುಗ್ಗಿದ್ದೇಕೆ? : ಹಿಂದಿನ ಲೇಖನದಲ್ಲಿ ಚಿಂಪಾಂಜಿ ಎಂತಹ ಪ್ರಭೇದದಿಂದ ವಿಕಾಸಗೊಂಡ ಮಾನವನ ಮೆದುಳು ಗಾತ್ರದಲ್ಲಿ 5 ಪಟ್ಟು ದೊಡ್ಡದಾದ ಕುರಿತಾಗಿ ಹೇಳಿದರಾದರೂ ಅದಾದ 3000 ವರ್ಷಗಳಲ್ಲಿ ಮೆದುಳಿನ ಗಾತ್ರ ಗಣನೀಯವಾಗಿ ಕುಗ್ಗಿದೆ ಎನ್ನುವುದಕ್ಕೆ ವಿಕಾಸಗೊಳ್ಳುವ ಹಾದಿಯಲ್ಲಿ ಮತ್ತೆ ಹಿಂದಕ್ಕೆ ಬಂದಂತೆ ಅಂದರೆ ಅವಿಕಾಸವಾಗುವ ವಿಚಾರವನ್ನೂ ತೆರೆದಿಡುತ್ತಾರೆ. ಮಂಗನಿಂದ ವಿಕಾಸಗೊಂಡ ನಾವು ಬಾಲ ಕಳೆದುಕೊಂಡಿದ್ದೇವೆ. ಹಾಗಾದರೆ ನಾವು ಮತ್ತೆ ಬಾಲ ಉಳಿಸಿಕೊಳ್ಳುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೂ ಉತ್ತರ ಇಲ್ಲಿದೆ ಓದಿ ನೋಡಿ.


ವಂಚನೆಯ ವಿಕಾಸ ಏಕೆ ಮತ್ತು ಹೇಗೆ? : ಕವಲುತೋಕೆ ಹಕ್ಕಿಯ ಗುಂಪಿಗೆ ಸೇರಿದ ಕೆಲವು ಪಕ್ಷಿಗಳು ಹಿಂಡುಹಿಂಡಾಗಿ ಗೂಡು ಕಟ್ಟಿಕೊಂಡು ಜೀವಿಸುತ್ತವೆ. ಒಂದು ಪಕ್ಷಿ ಯಾವುದಾದರೂ ಒಂದು ಆಹಾರದ ಜಾಡು ಹಿಡಿದು ಅಲ್ಲಿಂದ ಆಹಾರ ತರುತ್ತಿದ್ದರೆ.. ಇತರ ಪಕ್ಷಿಗಳು ಅದನ್ನು ಅನುಸರಿಸಿ ಹೋಗುತ್ತವೆ. ಈ ವಿಚಾರವನ್ನು ತೆರೆದಿಟ್ಟಾಗ ಬಂದ ಸಂದೇಹವೆಂದರೆ, ಮೊದಲು ಆಹಾರವನ್ನು ಕಂಡು ಹಿಡಿದ ಪಕ್ಷಿಗೆ ಇದರಿಂದ ಅತೀವ ಸ್ಪರ್ಧೆ ಉಂಟಾಗುತ್ತದೆ. ಅದು ಅದಕ್ಕೆ ನಷ್ಟವಲ್ಲವೇ..? ಆ ಹಕ್ಕಿ ವಂಚನೆಯ ಹಾದಿ ಹಿಡಿದರೆ..?! ವಂಚನೆಯ ವರ್ತನೆ ಈ ಪಕ್ಷಿಗಳಲಿಲ್ಲ. ಆದರೆ, ಮಾನವನಲ್ಲಿ ಹೆಚ್ಚಾಗಿರುವ ವಂಚನೆ ಮತ್ತು ಸುಳ್ಳು ಹೇಗೆ ವಿಕಾಸಗೊಂಡಿದೆ ಎನ್ನುವುದರ ಜೊತೆಗೆ ಪ್ರಾಣಿ ಪ್ರಪಂಚದಲ್ಲಿ ಕಟ್ಲರ್ ಫಿಶ್ ಗಂಡು ಮತ್ತು ಹೆಣ್ಣು ಮೀನುಗಳನ್ನು ಮೋಸಗೊಳಿಸುವ ಬಗೆಯನ್ನು ಹೇಳುತ್ತಾರೆ. ಆದರೆ ಊಸರವಳ್ಳಿಯ ಬಣ್ಣ ಬದಲಾವಣೆ ವಂಚನೆಯಲ್ಲ ಎನ್ನುವ ತರ್ಕವನ್ನು ಹೇಳುತ್ತಾರೆ. ಹಾಗಾದರೆ ಇನ್ನು ಯಾವ ಪ್ರಾಣಿಯಲ್ಲಿ ಇಂತಹ ವಿಚಿತ್ರವನ್ನು ಕಾಣಬಹುದು ಓದಿ ತಿಳಿಯಿರಿ. 


ನಾವೇಕೆ ದ್ವೇಷಿಸುತ್ತೇವೆ? : ಪ್ರೀತಿ-ಪ್ರೇಮಗಳಂತೆ ದ್ವೇಷವು ಕೂಡ ಮನುಷ್ಯನ ಉಳಿವಿಗೆ ಅವಶ್ಯಕ ಎನ್ನುತ್ತದೆ ವಿಜ್ಞಾನ. ಅಸೂಯೆ ಮತ್ತು ದ್ವೇಷ ನಮ್ಮನ್ನು ನಾವು ಹೋಲಿಸಿಕೊಳ್ಳಬಹುದಾದ ಸಮಾಜ ಅಥವಾ ಪ್ರಪಂಚಕ್ಕೆ ಮಾತ್ರವೇ ಸೀಮಿತವೇ..? ದ್ವೇಷ ಹರಡುವ ಬಗೆಯ ಜೊತೆಗೆ ದ್ವೇಷವು ಪ್ರೀತಿಯ ಇನ್ನೊಂದು ಮುಖವಾಗಿ ವಿಕಾಸಗೊಂಡಿರುವ ಪರಿಯನ್ನು ನಾವಿಲ್ಲಿ ಕಾಣಬಹುದು. ಪ್ರೀತಿಯೇ ದ್ವೇಷವಾಗಿ ವಿಕಾಸಗೊಂಡದ್ದು ಹೇಗೆ..? ಇದು ತಲೆಮಾರುಗಳಿಂದ ತಲೆಮಾರುಗಳಿಗೆ ಧಾತುಗಳ ಮೂಲಕ ಸಾಗುತ್ತದಾ..? ಅಚ್ಚರಿ ಹಾಗೂ ವಿಸ್ಮಿತಗೊಳಿಸುವ ವಿಶ್ಲೇಷಣೆ ಇಲ್ಲಿದೆ.


ಎಲ್ಲ ಮರೆತಿರುವಾಗ... ಮತ್ತೆ ಮರಳುವ ನೆನಪು : ನಮ್ಮ ಆತ್ಮೀಯರ ಸಾವು ನಮ್ಮನ್ನು ಕಾಡುತ್ತದೆ. ಆದರೆ, ಅವರ ನೆನಪು ಬೇಕು ಅವರಿಲ್ಲ ಎಂಬ ನೋವು ಬೇಡ ಎಂದು ನೆನಪುಗಳನ್ನು ಶೋಧಿಸಲು ಮನಸ್ಸಿಗೆ ಸಾಧ್ಯವಾಗದು. ನೋವು ಕೊಡುವ ನೆನಪುಗಳು ನಮಗೆ ಹಾಗೂ ನಮ್ಮ ಉಳಿವಿಗೆ ಬೇಕೇ..? ನೆನಪುಗಳು ವಿಕಾಸಗೊಂಡಿರುವುದು ನಮ್ಮ ಉಳಿವಿಗೆ ಹಾಗೂ ಕ್ಷೇಮಕ್ಕೆ ಎಂಬುದು ಎಷ್ಟು ಸರಿ. ನೆನಪು ಹಾಗೂ ಕಾಲದ ಊಹೆಯ ಪ್ರಯೋಗವನ್ನು ನಾಲ್ಕು ಗುಂಪಿನ ಮೂಲಕ ಮಾಡಿರುವ ಪ್ರಯೋಗವನ್ನು ಸಹ ಇಲ್ಲಿ ಕಾಣಬಹುದು.


ಪ್ರಜ್ಞೆ 'ನಿನ್ನ ಸೊತ್ತಲ್ಲ' ಎಂದ ಇರುವೆಗಳು : ಇಡೀ ಜೀವ ಜಗತ್ತಿನಲ್ಲಿ ಬುದ್ಧಿವಂತ ಪ್ರಜ್ಞಾವಂತ ಎನಿಸಿಕೊಂಡ ಮನುಷ್ಯ ಚಿಟ್ಟೆ, ದುಂಬಿ, ಇರುವೆ ಮುಂತಾದ ಕ್ಷುದ್ರ ಪ್ರಾಣಿಗಳನ್ನು ಅರಿವು ಮೂಡಲಾರದ ಜೀವಿಗಳಂತೆ ಕಂಡ. ಆದರೆ, ಆ ಪ್ರಾಣಿಪ್ರಜ್ಞೆ ಹೇಗಿರುತ್ತದೆ ಎನ್ನುವುದನ್ನು ನಾವಿಲ್ಲಿ ಇರುವೆಗಳು, ಅವುಗಳ ವಾಸನಾ ಗ್ರಹಿಕೆಯ ಹಾಗೂ ಸಂದೇಶ ತಿಳಿಸುವ ನಡೆಯ ಮೂಲಕ ಕಾಣಬಹುದು.


ಅರಮನೆಯೇ ಸೆರೆಮನೆಯಾಗುವ ಪರಿ : ನಮ್ಮ ಹವ್ಯಾಸ ಅಥವಾ ಆಸಕ್ತಿಯ ಕ್ಷೇತ್ರ ಅಥವಾ ಅದಮ್ಯ ಗುರಿಯ ಕಡೆಗೆ ನಡೆಯುತ್ತಾ.. ನಮ್ಮಗರಿವಿಲ್ಲದಂತೆಯೇ ನಾವೆಲ್ಲರೂ ನಮ್ಮದೇ ಅದೃಶ್ಯ ಸೆರೆಮನೆಗಳನ್ನು ಕಟ್ಟಿಕೊಂಡು ಹೊರ ಜಗತ್ತಿಗೆ ತೆರೆದುಕೊಳ್ಳದೆಯೇ ಮರೆಯಾಗಿ ಬಿಡುತ್ತೇವೆ ಎಂಬುದು ಲೇಖಕರ ವಾದ. ಅದನ್ನು ಸೆರೆಮನೆ ಎಂದು ಹೇಳುವ ಬದಲು ಧ್ಯೇಯದತ್ತ ಸಾಗುವ ಸಾಧಕ ಪಯಣ ಎಂದೇಕೆ ಪರಿಗಣಿಸಬಾರದು ಎನ್ನುವ ಅವರ ಮಗಳ ಪ್ರಶ್ನೆ ಚರ್ಚಾ ರೂಪದಲ್ಲಿ ಸಾಗುವ ಪರಿ ಇಲ್ಲಿದೆ.


ಹಸಿರು, ಮನೆ, ಮನ : ನಾವು ಪ್ರಕೃತಿಯ ಸಾಂಗತ್ಯದಿಂದ ದೂರವಾದಂತೆ ನಮಗರಿವಿಲ್ಲದೆಯೇ ಹಲವು ರೀತಿಯ ಅನಾರೋಗ್ಯಗಳಿಗೆ ತುತ್ತಾಗುವುದರ ಜೊತೆಗೆ ನೆಮ್ಮದಿಯನ್ನು ಕಳೆದುಕೊಳ್ಳುವ ಸಂಭವದ ಕುರಿತು ಎಚ್ಚರಿಸುತ್ತಿದ್ದಾರೆ. ಹಸಿರು ನಮ್ಮ ದೈನಂದಿನ ಜೀವನದಲ್ಲಿ ಯಾವ ರೀತಿಯ ಪರಿಣಾಮವನ್ನುಂಟು ಮಾಡುತ್ತದೆ, ಆರೋಗ್ಯ, ಮನ-ಮನೆಗಳ ಕೊಂಡಿಯ ಜೊತೆಗೆ ಕುವೆಂಪು ಅವರ ರಾಮಾಯಣ ದರ್ಶನಂ ಹಾಗೂ ರಾಮಾಯಣ ಕಾಲದ ಉದಾಹರಣೆಗಳನ್ನು ಇಲ್ಲಿ ಕಾಣಬಹುದು.


ನಮ್ಮ ಬದುಕಿಗೆ ಕೃತಕತೆ ತಂದ ಸಮಾಜ 'ಪ್ರಜ್ಞೆ' : ಪ್ರಾಣಿಗಳಿಗೇಕೆ ಪ್ರತ್ಯೇಕವಾದ ಸ್ನಾನದ ಮನೆಗಳಿಲ್ಲ..? ಪ್ರಾಣಿಗಳಿಗೆ ಮೈ ಮುಚ್ಚಿಕೊಳ್ಳುವುದಿಲ್ಲ ಎಂಬ ಪ್ರಶ್ನೆಗಳು ನಮ್ಮಲ್ಲೂ ಒಂದು ಬಾರಿ ಮೂಡಿವೆಯಲ್ಲವೇ..?! ಇಂತಹ ಪ್ರಶ್ನೆಗಳ ಪಟ್ಟಿಯೇ ಮೂಡಿರಬಹುದು. ಮನುಷ್ಯ ವಿಕಾಸವಾಗುತ್ತಾ ಹೋದಂತೆ ನಗು, ಭಾವ ಪ್ರದರ್ಶನ, ನಾಚಿಕೆ, ಮರ್ಯಾದೆ ಹೀಗೆ ಒಂದೊಂದಾಗಿ ಜೊತೆಯಾಗುತ್ತಾ ಹೋದವು. ಇದು ಸಮಾಜಕಷ್ಟೇ ಸೀಮಿತವೇ..? ನಾವು ಒಬ್ಬರೇ ಇರುವಾಗಿನ ನಿರಾಳ ಸ್ಥಿತಿ, ಸಮಾಜ ಹಾಗೂ ಜನರೊಡನೆ ಬೆರೆಯುವಾಗ ಇರುವ ನಡೆಗೂ ವ್ಯತ್ಯಾಸವಿರುತ್ತದೆಯಲ್ಲವೇ..? ಇದರ ಆಧಾರಿತ ಲೇಖನವಿದು.


'ಜೀವ'ಕ್ಕೇಕೆ ಈ ಸ್ಪಂದನ : ನಾವು ಮಾನವ ಜೀವಕ್ಕೆ ಮರುಗುವಷ್ಟು ತೀಕ್ಷ್ಣವಾಗಿ ಇತರೆ ಪ್ರಾಣಿಗಳ ಜೀವಗಳಿಗೆ ಮರುಗುವುದಿಲ್ಲವೇಕೆ..? ಬೇರೆ ಪ್ರಾಣಿಗಳಿಗೂ ಇದೇ ಭಾವವಿದೆಯಾ..? ಹಲವು ಆಯಾಮಗಳಿಂದ ಚರ್ಚಿತವಾಗಿದೆ.


ನಮ್ಮ ನಿಮ್ಮೊಳಗಿನ ರಾವಣ : ರಾಮಾಯಣ ದರ್ಶನಂನಲ್ಲಿ ರಾವಣನ ಆತ್ಮ ಶ್ರೀರಾಮನ ಆತ್ಮದೊಳಗೆ ಮೋಕ್ಷ ಪಡೆಯುವ ಪ್ರಸಂಗವನ್ನು ಹೇಳುತ್ತಾ.. ಸಂಶೋಧನಾ ಪ್ರಬಂಧವೊಂದರ ತಿರುಳನ್ನು ಹೇಳುತ್ತಾರೆ. ಲಕ್ಷಾಂತರ ವರ್ಷಗಳಿಂದ ಮಾನವನನ್ನು ರಾವಣನಂತೆ ಕಾಡಿದ ಸಾವಿರಾರು ವೈರಾಣುಗಳ ಪ್ರಮುಖ ಧಾತುಗಳು ವಿಕಾಸದ ಹಾದಿಯಲ್ಲಿ ನಮ್ಮದೇ ಧಾತುಗಳೊಂದಿಗೆ ಲೀನವಾಗಿ ನಮ್ಮೊಂದಿಗೆ ಬದುಕಿ ಬಾಳುತ್ತಿವೆ ಎಂಬ ಸತ್ಯವನ್ನು ತೆರೆದಿಡುತ್ತಾರೆ. ಸಂಶೋಧನೆಯ ಆಂತರ್ಯವನ್ನು ಕೋವಿಡ್ ಹಾಗೂ ಇತರ ವೈರಸ್ ಗಳ ಮೂಲಕ ಪ್ರಸ್ತುತಪಡಿಸಿದ್ದಾರೆ.


ಸುಖದ ಬೇಟೆ ಕೊಡುವ ದುಃಖ : ಸುಖ ಹುಡುಕುವುದರಲ್ಲಿ ಯಾವ ತಪ್ಪೂ ಇಲ್ಲ. ಒಂದೇ ತೊಂದರೆ. ಅದು ಸಿಕ್ಕಿದಾಗ ನಮ್ಮ ಗಮನಕ್ಕೆ ಬರುವುದಿಲ್ಲ. ಇದಕ್ಕೆ ಪರಿಹಾರವೇನು..? ಅದನ್ನು ಹೇಗೆ ತಿಳಿದುಕೊಳ್ಳಬಹುದು..? ಮಾನವನ ಮನಸ್ಸಿನ ಚಂಚಲತೆ ಹಾಗೂ ಸುಖದ ಸ್ಥಿತಿಯ ನಡುವಿನ ಸಂಬಂಧದ ಅಧ್ಯಯನವೂ ಇಲ್ಲಿದೆ.


ಡಾರ್ವಿನ್ ವಾದಕ್ಕೆ ಸವಾಲಾದ ಸಮ್ಮೋಹನ : ಯಾವುದೇ ವರ್ತನೆ ಪುನರಾಭಿವೃದ್ಧಿಗೆ ಸಹಕಾರಿಯಾಗಿದ್ದರೆ ಮಾತ್ರವೇ ವಿಕಾಸಗೊಳ್ಳುತ್ತದೆ ಎನ್ನುವುದು ಡಾರ್ವಿನ್ ಸಿದ್ದಾಂತದ ಪ್ರತಿಪಾದನೆ. ಸಲಿಂಗ ಕಾಮ ಸ್ವಾಭಾವಿಕವೇ..? ತಮ್ಮ ಪುನರಾಭಿವೃದ್ಧಿಯನ್ನೇ ತ್ಯಾಗ ಮಾಡಿ ಸೋದರಿಯನ್ನು ಸಾಕುವ ಬಂಜೆ ಜೇನುನೊಣಗಳಂತೆ ಸಲಿಂಗ ಕಾಮ ಸಮಾಜದ ಒಳಿತಿಗಾಗಿಯೇ ವಿಕಾಸಗೊಂಡಿರುವ ತ್ಯಾಗ ವರ್ತನೆ ಎನ್ನುವ ವಾದ ಎಷ್ಟು ಸಮಂಜಸ. ಈ ಕುರಿತ ವಾದ-ಪ್ರತಿವಾದಗಳು ಇಲ್ಲಿವೆ.


ನಾನು ಎಂಬ ನಂಬಿಕೆ : ನಾನು ಎಂಬುದಕ್ಕೆ ಅದೆಷ್ಟು ರೂಪಗಳು..! ಕೆಲವರಿಗೆ ಭಾವಚಿತ್ರ, ಕೆಲವರಿಗೆ ಬೆರಳಚ್ಚು, ಕೆಲವೊಮ್ಮೆ ನಮ್ಮ ಯೋಚನೆಗಳು. ಹಾಗಾದರೆ ನಾನು ಎಂಬ ಭಾವ ನಿಜಕ್ಕೂ ನಂಬಿಕೆ ಮಾತ್ರವಾ..? ಹಲವು ಆಯಾಮಗಳ ನೋಟ ಇಲ್ಲಿದೆ.


ರಣಮೇಘದ ಕಣ್ಣೀರು : ಇರಾನಿನ ಪರ್ವತ ಪ್ರದೇಶದ ಅಂತರಾಳದಲ್ಲಿ ಹುದುಗಿದ್ದ ಅಣುಸ್ಥಾವರಗಳ ಮೇಲೆ ನಡೆಯುತ್ತಿದ್ದ ಬಾಂಬ್ ದಾಳಿ ಇರಾನಿನಿಂದ ಸುಮಾರು 3000 ಕಿಲೋಮೀಟರ್ ದೂರದಲ್ಲಿರುವ ಜರ್ಮನಿಯ ಒಂದು ಸಣ್ಣ ಪಟ್ಟಣದ ವಿಜ್ಞಾನ ವಿದ್ಯಾರ್ಥಿಗಳ ಪರೀಕ್ಷಾ ಕೊಠಡಿಯನ್ನು ಹೊಕ್ಕ.. ಆಲೋಚನೆಗೆ ಹಚ್ಚುವ ಪ್ರಸಂಗ ಇಲ್ಲಿದೆ. ಈ ಪ್ರಸಂಗದ ಕುರಿತು ಹೆಚ್ಚು ತೆರೆಡಿಡಲಾರೆ. ಲೇಖಕರಿಗೆ ಪಾಪಪ್ರಜ್ಞೆ ಕಾಡಿದ ಗಾಢವಾದ ಕ್ಷಣಗಳು ಇಲ್ಲಿವೆ. 


ಕಡಿವಾಣವಿಲ್ಲದ ಕುದುರೆಯಂತಹ ಮನಸ್ಸು ಹಾಗೂ ಅದರ ಆಲೋಚನೆಗಳು ವಿಸ್ತಾರ ಹಾಗೂ ವಿಭಿನ್ನ. ಇದನ್ನು ಜೀವ ವಿಕಾಸದ ಹಿನ್ನೆಲೆಯಲ್ಲಿ, ಸಂಶೋಧನೆಗಳು ಹಾಗೂ ತರ್ಕಗಳ ಮೂಲಕ ಕಟ್ಟಿಕೊಟ್ಟಿರುವ ಸತ್ವಯುತ ಲೇಖನಗಳ ಸಂಗ್ರಹ ಇಲ್ಲಿದೆ. ವಿಜ್ಞಾನ ಮತ್ತು ಮನೋವೈಜ್ಞಾನಿಕ ವಿಷಯದ ಆಸಕ್ತರು ತಪ್ಪದೇ ಓದಿ ನೋಡಿ.


~ ವಿಭಾ ವಿಶ್ವನಾಥ್

ಸೂಪರ್ ಗಾಡ್ ಸಣ್ಣಯ್ಯ (ಪುಸ್ತಕ ಯಾನ - 456)



ಪುಸ್ತಕದ ಶೀರ್ಷಿಕೆ : ಸೂಪರ್ ಗಾಡ್ ಸಣ್ಣಯ್ಯ

ಲೇಖಕರು : ಹೃದಯ ಶಿವ

ಪ್ರಕಾಶಕರು : ಹರಿವು ಬುಕ್ಸ್

ಪ್ರಥಮ ಮುದ್ರಣ : 2025

ಪುಟಗಳು : 128

ಬೆಲೆ : 165 ರೂ. 


ಹೃದಯ ಶಿವ ಇವರು ಸಿನಿಮಾ ಗೀತ ರಚನಕಾರರು, ನಿರ್ದೇಶಕರು ಹಾಗೂ ಹವ್ಯಾಸಿ ಪತ್ರಕರ್ತರು. ಹಲವಾರು ಕವನ ಸಂಕಲನ, ಗದ್ಯ ಬರಹಗಳು, ಸಿನಿಮಾ ಗೀತೆಗಳನ್ನೂ ಬರೆದಿದ್ದಾರೆ. ಇದು ಇವರ ಮೊದಲ ಕಥಾ ಸಂಕಲನ. ಇದಕ್ಕೆ ಸ್ವಾಮಿ ಪೊನ್ನಾಚಿ ಅವರ ಮುನ್ನುಡಿ ಇದೆ. ಅದರಲ್ಲಿ ..

"ಗೇದುಣ್ಣುವವರೇ ಬದುಕದ ಕಾಲದಲ್ಲಿ ಹುಟ್ಟುವ ಕಥೆಗಳಾದರೂ ಉಳಿಯುತ್ತವೆ" ಎಂಬ ಮಾತಿನಿಂದಲೇ ಕಥೆಯ ಸೋಜಿಗಗಳನ್ನೆಲ್ಲ ತೆರೆದಿಡುತ್ತಾರೆ.

ಈ ಕಥಾ ಸಂಕಲನದಲ್ಲಿ ಒಟ್ಟು 15 ಕಥೆಗಳಿವೆ. 


ಒಂದು ಫ್ರೆಂಡ್ ರಿಕ್ವೆಸ್ಟ್ : ಮೂರು ವರ್ಷಗಳ ಸುದೀರ್ಘ ಅಂತರದ ನಂತರ ಫೇಸ್ಬುಕ್ನಲ್ಲಿ ಅವಳು ಕಳುಹಿಸಿದ ಫ್ರೆಂಡ್ ರಿಕ್ವೆಸ್ಟ್ ಅವನಿಗೆ ಹುಟ್ಟಿಸಿದ್ದು ಅಚ್ಚರಿ ಮಾತ್ರವಲ್ಲ ಆತಂಕವನ್ನೂ.. ಈ ಮೂರು ವರ್ಷಗಳಲ್ಲಿ ಇಬ್ಬರೂ ಹೇಗಿದ್ದರು...? ಅವರ ಆ ಅಂತರಕ್ಕೆ ಕಾರಣವೇನು ಎಂಬುದರ ಜೊತೆಜೊತೆಗೆ ಅವರಿಬ್ಬರ ಚಾಟಿಂಗ್ ತೆರೆದುಕೊಳ್ಳುತ್ತಾ ಸಾಗುತ್ತದೆ. ಅವನ ಚಿತ್ರದ ಸೂಕ್ಷ್ಮವನ್ನು ಗಮನಿಸುವ ಅವಳು ಹಾಗೂ ಅವಳ ಪ್ರೊಫೈಲ್ ಪಿಚ್ಚರ್ ಇಂದ ಅವಳನ್ನು ಅಳೆಯುವ ಇವನು ಮತ್ತೆ ಎದುರಾಗಿದ್ದು ಸ್ಮಶಾನದಲ್ಲಿ. ಈ ವಿಚಿತ್ರ ಭೇಟಿ ಹೇಗಿದೆ ಓದಿ ನೋಡಿ.


ಸುಶೀಲಾ : ಅಪ್ರತಿಮ ಸುಂದರಿಯಾಗಿದ್ದ ಸುಶೀಲಾ ಶಾಲೆಯ ಶಿಕ್ಷಕರಿಗೆಲ್ಲರಿಗೂ ಮೆಚ್ಚಿನ ಶಿಷ್ಯಳಾಗಿದ್ದಳು. ಅವಳಿಗೆ ಆರಾಧಕರೂ ಇದ್ದರು. ಹುಷಾರಿನ ಹುಡುಗಿಯಾಗಿದ್ದವಳಿಗೆ ಡಿಸ್ಟಿಕ್ ಕೋರ್ಟಿನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಸಿಕ್ಕ ಕಾರಣಕ್ಕೆ ತಂದೆ ಮದುವೆ ಮಾಡಿಕೊಟ್ಟಿದ್ದರು. ಅವಳ ವಕೀಲೆಯಾಗುವ ಕನಸು ಅರ್ಧಕ್ಕೆ ನಿಂತು ಸಂಸಾರ ಸಾಗರದಲ್ಲಿ ಮುಳುಗಿದ್ದಾಗ.. ಹಳೆಯ ಗೆಳೆಯ ಮೋಹನ ಅವಳ ಬದುಕಿನಲ್ಲಿ ಅಲೆ ಎಬ್ಬಿಸಿದ್ದು ಹೇಗೆ..? ಟಿ.ವಿಯಲ್ಲಿ ಸೆಳೆಯುತ್ತಿದ್ದ, ಕಾಣುತ್ತಿದ್ದ ಮೋಹನನ ಭೇಟಿ ಸುಶೀಲಾಳ ಬದುಕನ್ನು ಹೇಗೆಲ್ಲಾ ಬದಲಾಯಿಸಿತು ಓದಿ ನೋಡಿ.


ಮೊರೆವ ಕಡಲ ಧ್ಯಾನ : ಹಿಂದಿನ ದಿನವಷ್ಟೇ ಅಪ್ಪನ ಶವಪೆಟ್ಟಿಗೆಯನ್ನು ಚರ್ಚಿನಲ್ಲಿ ಹೂತು ಬಂದಿದ್ದ ನಿಕೊಲಸ್ ಹಾಗೂ ಗೇಬ್ರಿಯಲ್ ಒಂದೇ ತಂದೆಯ ಮಕ್ಕಳಾದರೂ .. ಒಂದೇ ತಾಯಿಯ ಮಕ್ಕಳಲ್ಲ. ಇಬ್ಬರೂ ತಮ್ಮ ಬದುಕನ್ನು ಪರಸ್ಪರ ತೆರೆದಿಟ್ಟುಕೊಳ್ಳುತ್ತಾ ಸಾಗುತ್ತಿದ್ದಾಗ ಎದುರಲ್ಲಿ ಕಡಲಿತ್ತು. ಅಪ್ಪನಿಲ್ಲದ ಹೊತ್ತಿನಲ್ಲಿ ಇಬ್ಬರ ಮನದಾಳ ಹೇಗಿತ್ತು...? ಕಡಲು ಯಾವುದಕ್ಕೆಲ್ಲ ಸಾಕ್ಷಿಯಾಯಿತು..?


ಬುಂಡೆದಾಸನೆಂಬ ಹುಚ್ಚಯ್ಯ : ಮುದುಕ ಬುಂಡೆದಾಸ ಆನೆ ತುಳಿದು ಸತ್ತಿದ್ದನು. ಬಾಲ್ಯದಿಂದಲೇ ಭಟ್ಟಿ ಸರಾಪು ಕುಡಿಯುತ್ತಿದ್ದವನಿಗೆ ಆ ಹೆಸರು ಬಂದಿತ್ತು. ಆತನ ಅಣ್ಣಂದಿರು, ಅತ್ತಿಗೆಯರಿಗೆ ಈತ ಯಾವತ್ತೋ ಸತ್ತು ಹೋಗಿದ್ದ. ಆದರೆ, ಆತನನ್ನು ಪ್ರೀತಿಸುತ್ತಿದ್ದ ಜನ ಬಹಳ ಇದ್ದರು. ಅವನ ಸಾವಿನ ಹೊತ್ತಿನಲ್ಲಿ ಅವನನ್ನು ಜ್ಞಾಪಿಸಿಕೊಂಡ ಪರಿಯೇ  ಈ ಕಥೆ. ನಿಯತ್ತಿನ ನಾಯಿ ಬೈರನ ಜೊತೆಗಿದ್ದವನ ಸಂಸಾರ ಹೇಗಿತ್ತು..? ಪ್ರಕೃತಿಯಲ್ಲಿ ಲೀನವಾದ ಬುಂಡೆದಾಸ ಹೇಗಿದ್ದ ಓದಿ ನೋಡಿ.


ವೈಷ್ಣವಿ ಎಂಬ ಸುಂದರಿ : ಕೇರಳದಿಂದ ಬೆಂಗಳೂರಿಗೆ ಬಂದು ಪಿ.ಜಿಯಲ್ಲಿ ನೆಲೆಸಿ ಚೆನ್ನಾಗಿ ಓದಿ ನರ್ಸ್ ಆಗುವ ಆಸೆ ಇಟ್ಟುಕೊಂಡಿದ್ದ ವೈಷ್ಣವಿ ಹಾಗೂ ಅವಳ ತಂದೆಯ ಕನಸಿನ ಜೊತೆಗೆ ಅವಳ ರೂಮ್ ಮೇಟ್ ಚೈತ್ರ ತುಂಬಿದ ಕನಸು ಚಿತ್ರನಟಿಯಾಗುವುದು. ಸ್ಟಾಫ್ ನರ್ಸ್ ಆಗಲಿ ಎಂಬ  ವಾಸ್ತವದ ಕನಸು ಕಾಣುತ್ತಿದ್ದ ತಂದೆ, ಬಾಲ್ಯದ ಗೆಳತಿ ವೈಷ್ಣವಿಯನ್ನೇ ಮನಸಾರ ಪ್ರೀತಿಸಿ ಅವಳೇ ತನ್ನ ಮಡದಿಯಾಗಲಿ ಎಂದು ಆಶಿಸುತ್ತಿದ್ದ ಮುರಳೀಧರನ್, ಚಿತ್ರನಟಿಯಾಗಲು ಅದಕ್ಕೆ ಬೇಕಾದ ಕಾಂಟಾಕ್ಟ್ ಮಾಡಿಕೊಟ್ಟಿದ್ದ ಚೈತ್ರ ಈ ಮೂವರ ಪ್ರಯತ್ನಗಳಲ್ಲಿ ವೈಷ್ಣವಿ ಯಾವುದರ ಹಿಂದೆ ಹೋಗುತ್ತಾಳೆ..? 


ಪ್ರಾಯಶ್ಚಿತ್ತ : ರಮಾಕಾಂತ್ ನನ್ನು ಹುಡುಕಿಕೊಂಡು ಬಂದಿದ್ದವಳು ಆತನ ಬಳಿ ಹೇಳ ಬಯಸಿದಾಗ ಸತ್ಯ ಆಕೆ ಗರ್ಭಿಣಿ ಎಂದೂ ಹಾಗೂ ಆಕೆಗೆ ಬೇರೊಬ್ಬರ ಜೊತೆ ಸಂಬಂಧವಿದೆ ಎಂದು. ಅಷ್ಟಕ್ಕೂ ವಕೀಲ ರಮಾಕಾಂತ್ ನನ್ನು ಆಕೆ ಹುಡುಕಿಕೊಂಡು ಬಂದದ್ದೇಕೆ..? ಮಟನ್ ಸ್ಟಾಲ್ ನ ಆ ವ್ಯಕ್ತಿ ಅವರಿಬ್ಬರ ಸಂಬಂಧವನ್ನು ತಿಳಿದು ನಿಬ್ಬೆರಗಾದ ಪ್ರಸಂಗ ಇಲ್ಲಿದೆ.


ಹೊನ್ನಮ್ಮನ ಕುರಿಗಳು : ಮುದುಕಿ ಹೊನ್ನಮ್ಮನನ್ನು ಮಣ್ಣಿನಲ್ಲಿರಿಸಿ ಎಲ್ಲರೂ ಹೊರಟರಾದರೂ ಬೀರಯ್ಯನಿಗೆ ಪಾಪಪ್ರಜ್ಞೆ ಕಾಡುತ್ತಿತ್ತು. ಆಕೆ ಒಳ್ಳೆಯ ಅಮ್ಮನಾದಳು, ತಾನೇ ಒಳ್ಳೆಯ ಮಗನಾಗಲಿಲ್ಲ ಎಂಬ ಭಾವ ಕಾಡುತ್ತಿತ್ತು. ತನ್ನ ತಾಯಿಯ ಸಾವಿಗೆ ಕಾರಣಕರ್ತಳಾದ ತನ್ನ ಹೆಂಡತಿಯ ಕ್ರೂರತೆ ಕಂಡು ಆಕ್ರೋಶವೂ ಹುಟ್ಟಿ ಈಗ ದಿಕ್ಕು ತೋಚದಂತಾಗಿತ್ತು. ಈ ಎಲ್ಲದರ ಹಿನ್ನೆಲೆ ಹಾಗೂ ಸತ್ಯಾಸತ್ಯತೆ ಏನಿತ್ತು ಓದಿ ನೋಡಿ.


ಬಂಧ : ಆತ ಎರಡನೇ ಮದುವೆಯಾಗಿದ್ದರೂ ಈಗ ಮೊದಲ ಪತ್ನಿ ಮತ್ತೆ ಆತನ ಬದುಕಲ್ಲಿ ಬರುವ ಸುಳಿವು ಸಿಕ್ಕಿತ್ತು . ಎರಡನೆಯ ಹೆಂಡತಿಗೆ ಅವಳ ಫೋಟೋ ಕಂಡರೆ ಸಿಡಿಮಿಡಿ. ಇನ್ನು ಈಗಿನ ವಿಚಾರ ತಿಳಿದರೆ ಹೇಗಿರಬಹುದು..? ಮೊಮ್ಮಗಳಿಗೆ ಹೇಳುವ ಕಥೆ ಜೊತೆಗೆ ಅವರ ಬದುಕಿನ ವಾಸ್ತವ ಎರಡನ್ನು ಮಿಳಿತಗೊಳಿಸಿದಂತಿರುವ ಕಥೆ ಇದು. ಕಥಾತಂತ್ರ ಇಷ್ಟವಾಯಿತು.


ಒಂದು ರಾತ್ರಿ ಏನಾಯಿತೆಂದರೆ... : "ಮದುವೆ ಅನ್ನೋದು ಒಂದು ಸಂಬಂಧ ಬೆಸೆಯೋದ್ರ ಜೊತೆಗೆ ಒಂದಿಷ್ಟು ನಂಟುಗಳ ಬೇರುಗಳನ್ನು ಕತ್ತರಿಸಿ ಹಾಕುತ್ತೆ" ಎಂದವನ ವಿಚಾರಗಳು ಯಾವು ದಿಕ್ಕಿನಲ್ಲಿ ಓಡುತ್ತಿದ್ದವು..? ಲಿಸಾ ಹಾಗೂ ಅವನ ಸಂಬಂಧಕ್ಕೆ ಅರ್ಥವೇನು..? ಆ ಸಂಬಂಧದ ರೂಪುರೇಷೆ ಆ ರಾತ್ರಿ ಬದಲಾಯಿತೇ ಓದಿ ನೋಡಿ.


ಕಲ್ಗುಡಿ ಮಠ : ಜವರಪ್ಪ ಹಾಗೂ ಸಾಧುವಿನ ನಡುವೆ ನಡೆಯುವ ಸಂಭಾಷಣೆಗಳು ಅವರ ಬದುಕು ಮಾತ್ರವಲ್ಲದೆ ಬದುಕಿನ ಆಧ್ಯಾತ್ಮವನ್ನು, ಲೋಕದ ವ್ಯವಹಾರಗಳನ್ನು ತಮ್ಮದೇ ಪ್ರೀತಿಯಲ್ಲಿ ವಿಶ್ಲೇಷಿಸಿದ ಬಗೆ ಇಲ್ಲಿದೆ. ಹಳ್ಳಿಯ ಆಡುಮಾತಿನಲ್ಲಿರುವ ಈ ಕಥೆಯಲ್ಲಿ ಹಲವಾರು ತತ್ವಗಳು ಮಿಳಿತವಾಗಿವೆ.


ಸೂಪರ್ ಗಾಡ್ ಸಣ್ಣಯ್ಯ : ಮೈಮೇಲೆ ಬಸಪ್ಪ ದೇವರು ಬಂದಿದ್ದ ಸಣ್ಣಯ್ಯ ಹೇಳಿದಾಗ ರಾಗಿದೊಡ್ಡಿಯ ಜನ ಮರುಮಾತಾಡದೆ ಒಪ್ಪುತ್ತಿದ್ದರು. ಇಡೀ ಊರಿನಲ್ಲಿಯೇ ಅವನೊಬ್ಬನಿಗೆ ಮಾತ್ರ ದೇವರು ಬರುತ್ತಿತ್ತು. ಊರದೇವರಾದ ಬಸಪ್ಪನ ಅರ್ಚಕ ಕಟ್ಟಾ ಬ್ರಹ್ಮಚಾರಿ ಎನ್ನುವ ಬಿರುದು ಪಡೆದಿದ್ದ. ಜನರ ಕಷ್ಟ-ಸುಖ, ಹಣ-ಚಿನ್ನ, ರೋಗ-ರುಜಿನ, ಮನೆಯ ಕಾರ್ಯಕ್ರಮಗಳು, ವ್ಯವಹಾರ ಎಲ್ಲದರ ಕುರಿತೂ ನಿಯಂತ್ರಿಸುತ್ತಿದ್ದ ಎಂದರೂ ತಪ್ಪಾಗುವುದಿಲ್ಲ. ಆತನನ್ನು ಜನ ನಂಬಿದಕ್ಕೂ.. ಆತ ನಡೆದುಕೊಳ್ಳುತ್ತಿದ್ದಕ್ಕೂ ವ್ಯತ್ಯಾಸವಿತ್ತೇ..? ಜನ ಎಷ್ಟೆಲ್ಲಾ ಮರ್ಯಾದೆ ಕೊಟ್ಟರೂ ಆತ "ಸಿಸುಮಗನೆ" ಎಂದು ಎಲ್ಲರನ್ನು ಸಂಬೋಧಿಸುತ್ತಿದ್ದ ಪರಿ ಒಪ್ಪುವಂತಿತ್ತೇ..? ಶ್ರೀ ಶ್ರೀ ಶ್ರೀ ಸಣ್ಣಯ್ಯಾನಂದ ಶಿವಾಚಾರ್ಯ ಸ್ವಾಮೀಜಿಗಳ ಬದುಕನ್ನು ಬುಡಮೇಲು ಮಾಡುವಂತಹ ಘಟನೆಗಳು ನಡೆದ ಸರಣಿ ಇಲ್ಲಿದೆ.


ನೆನಪಿನ ಹಿಂಜೋಲ : ನೆಮ್ಮದಿಯ ಸಂಸಾರದಲ್ಲಿ ಈಗ ಮೊಮ್ಮಗನಿಗೆ ಕಥೆ ಹೇಳುತ್ತಾ.. ಅದೂ ತನ್ನ ಯಜಮಾನನ ಕಥೆಯನ್ನೇ ಹೇಳುತ್ತಾ ಕೆಂಪಮ್ಮ ನೆನಪಿಗೆ ಜಾರಿದ್ದಳು. ತನ್ನಷ್ಟು ಸುಖಿ ಬೇರೊಂದು ಹೆಣ್ಣಿಲ್ಲವೆಂದು ಭಾವಿಸಿ ನೆಮ್ಮದಿಯಿಂದಿದ್ದ ಅವಳ ಬದುಕನ್ನು ಮೊಮ್ಮಗನಿಗೆ ಕಥೆ ಹಾಗೂ ಹಾಡಿನ ರೂಪದಲ್ಲಿ ತೆರೆದಿಟ್ಟ ಚಿತ್ರಣ ಇಲ್ಲಿದೆ. ಹಾಡಿನ ಒಂದೆರಡು ಸಾಲುಗಳನ್ನು ನೋಡುವುದಾದರೆ ಹೀಗಿವೆ.

"ಯಾವ ಕುದುರೆಯನೇರಿ ಯಾವ ರಾಜ್ಯವ ಸುತ್ತಿ

ಯಾವ ಕಷ್ಟಕೆ ನೀ ನೆರವಾದೋ

ಯಾರ ಕಂಬನಿಯೊರೆಸಿ ಯಾರ ದುಃಖವ ಸರಿಸಿ

ಯಾರ ಮುಖದಲ್ಲಿ ನಗುವಾದೋ"


ಹಕ್ಕಿಗೂಡು : ಮಾಧವ್ ಸಂದರ್ಶನ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಸ್ಪೆಷಲ್ ಗೆಸ್ಟ್ ಬೇರಾರೂ ಆಗಿರಲಿಲ್ಲ.. ಆತನ ತಾಯಿ ಯಶೋದಾ. ಜಗತ್ತಿನಲ್ಲಿರುವ ಪ್ರತಿ ಜೀವಿಯನ್ನು ಪ್ರೀತಿಸಬೇಕು ಅಂತ ಹೇಳುವ ಅವನ ಆಶಯ ಹಾಗೂ ಅಂತಹದ್ದೇ ಕ್ಲಿಪಿಂಗ್ ಅನ್ನು ತೋರಿಸಿದ ಸಂದರ್ಶಕಿ ಈಗ ವೃದ್ಧಾಪ್ಯದಲ್ಲಿ ಆತ ತನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವಷ್ಟು ಕಟುಕರಾಗಿದ್ದೇಕೆ ಎಂದು ಕೇಳಿದಾಗ ಅವನ ಉತ್ತರವೇನಿತ್ತು..? ಅದಕ್ಕೆ ಅವನ ಮಗ ಹಾಗೂ ತಾಯಿಯ ಪ್ರತಿಕ್ರಿಯೆಯೇನು..? ಯಶೋಧಾಳ ನೋಟ ಹಾಗೂ ಬದುಕಿನ ಸಾಕ್ಷಿಯಾಗಿ ಹಕ್ಕಿ ಗೂಡೊಂದು ಕಾಣುತ್ತದೆ.


ಪೂರ್ಣಿಮಾಳ ಭರವಸೆ : ಚಿಕ್ಕವಳಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡ ಹಾಗೂ ಈಗ ತಂದೆ ಸಾವಿಗೀಡಾದ ಪರಿಣಾಮವಾಗಿ ಕಾಲೇಜನ್ನು ಅರ್ಧಕ್ಕೆ ಬಿಟ್ಟು ಜವಾಬ್ದಾರಿ ವಹಿಸಿಕೊಂಡ ಪೂರ್ಣಿಮಾಳಿಗೆ ಇಬ್ಬರು ತಂಗಿಯರಿದ್ದರು. ಮೊದಲನೇ ತಂಗಿ ಮುಂಗೋಪಿ, ಅಹಂಕಾರಿ, ಉದ್ದಟ ಹಾಗೂ ತನ್ನ ಸ್ವಾರ್ಥವನ್ನು, ಸುಖ-ಸಂತೋಷವನ್ನು ಯೋಚಿಸುವ ಸ್ವಭಾವದವಳಾದರೆ.. ಎರಡನೆಯ ತಂಗಿ ಬುದ್ಧಿಮಾಂದ್ಯೆ. ಇಬ್ಬರನ್ನು ತಾಯಿಯಂತೆ ಸಲಹಲು ಹೊರಡುವ ಪೂರ್ಣಿಮಾಳಿಗೆ ಯಾವ ಸವಾಲುಗಳು ಎದುರಾಗಿದ್ದವು ಹಾಗೂ ಅವೆಲ್ಲವನ್ನು ದಾಟಿ ತನ್ನ ಬದುಕಿನ ಕುರಿತು ಮಾತ್ರವಲ್ಲದೆ, ತನ್ನ ತಂದೆಯಂತೆಯೇ ದೊಡ್ಡ ಉದ್ಯಮಿಯಾಗಿ ನೂರಾರು ಜನಕ್ಕೆ ಉದ್ಯೋಗ ಕೊಡುವ ವಿಶ್ವಾಸ ಬೆಳೆಸಿಕೊಂಡದ್ದು ಹೇಗೆ..?


ಕತ್ತಲ ವಂಶದವನು : "ಬೆಳಕೆಂಬುದು ಕೇವಲ ಸೂರ್ಯನಿಗೆ ಸಂಬಂಧಿಸಿದ ವಿಷಯವಲ್ಲ ಬಿಡಿ."

"ಕತ್ತಲೆ ಎಂಬುದು ಕಪ್ಪಗಿರುತ್ತದೆಂದೂ ನಾನು ನಂಬಿದವನಲ್ಲ." 

"ನನಗೆ ರಾತ್ರಿಗಳೆಂದರೆ ಇಷ್ಟ. ಈ ರಾತ್ರಿಯಲ್ಲಿ ಹುಟ್ಟುವ ಒಂದೊಂದು ವಾಕ್ಯವೂ ನನ್ನ ನಲ್ಮೆಯ ಸಂತಾನ." 

ಹೀಗೆ ಕತ್ತಲು, ಬೆಳಕು ಜಿಜ್ಞಾಸೆಯ ಕಾವ್ಯಾತ್ಮಕ ಭಾಷೆಯ ಕಥನವಿದು.


ಹಳ್ಳಿಗೆ ತಕ್ಕ ಹಿನ್ನೆಲೆ ಹಾಗೂ ಆಡು ಮಾತುಗಳು, ವಯಸ್ಸಿಗೆ ತಕ್ಕ ನೋಟಗಳು ಹಾಗೂ ಅನುಭವಗಳು, ಸಿಟಿಯ ಪರಿಸರಕ್ಕೆ ತಕ್ಕಂತೆ ಅಪ್ಡೇಟ್ ಸಂಭಾಷಣೆಗಳು ಎಲ್ಲವನ್ನು ಹೊಂದಿರುವ ಕಥಾ ಸಂಕಲನ. ಕಥೆಯ ಮತ್ತು ಹಾಗೂ ಕಥಾತಂತ್ರಕ್ಕಿಂತಲೂ ಸಂಭಾಷಣೆಗಳು, ಕಥೆಯನ್ನು ಕನೆಕ್ಟ್ ಮಾಡಲು ಬಳಸುವ ರೂಪಕಗಳು ಹೆಚ್ಚು ಇಷ್ಟವಾದವು. ಕೆಲವು ಕತೆಗಳಲ್ಲಿ ಸಿನಿಮೀಯ ಟಚ್ ಕಾಣುತ್ತದೆ. ಚೆಂದದ ಕಥಾ ಸಂಕಲನದ ಸುಂದರ ಓದು.


~ವಿಭಾ ವಿಶ್ವನಾಥ್

ಆರ್ಯಾವರ್ತ (ಪುಸ್ತಕ ಯಾನ - 455)


ಪುಸ್ತಕದ ಶೀರ್ಷಿಕೆ : ಆರ್ಯಾವರ್ತ

ಲೇಖಕರು : ಉಷಾ ನರಸಿಂಹನ್

ಪ್ರಕಾಶಕರು : ಅಂಕಿತ ಪುಸ್ತಕ 

ಪ್ರಥಮ ಮುದ್ರಣ : 2025

ಪುಟಗಳು : 360

ಬೆಲೆ : 450 ರೂ.


ಆರ್ಯಾವರ್ತ ಎಂಬುದು ಉತ್ತರ ಸೀಮೆಗಳನ್ನು ಒಳಗೊಂಡಿತ್ತು ಎಂಬ ಅರ್ಥವಿರುವಂತೆ ಶ್ರೇಷ್ಠರು ಓಡಾಡಿದ ಸ್ಥಳ ಎಂಬ ಅರ್ಥವೂ ಇದೆ. ಬುದ್ಧನ ಹಾದಿಯಲ್ಲಿ ನಡೆಯಲು ಹೊರಟ ಹರ್ಷವರ್ಧನನ ಕಥೆ ಇಲ್ಲಿದೆ. ಚೀನಿ ಪ್ರವಾಸಿಗ ಹ್ಯೂಯಾನ್ ತ್ಸಾಂಗ್ ಬಂದ ಸಂದರ್ಭದಲ್ಲಿ ಆತ ನೋಡಿದ ಹರ್ಷವರ್ಧನನ ಆಳ್ವಿಕೆ ಹಾಗೂ ಆತನ ವ್ಯಕ್ತಿತ್ವವೂ ಇಲ್ಲಿದೆ. ಈ ಕಾದಂಬರಿಯಲ್ಲಿ ಐತಿಹಾಸಿಕ, ಧಾರ್ಮಿಕ, ರಾಜಕೀಯದ ಎಲ್ಲಾ ನೋಟಗಳು ಕಾಣುತ್ತವೆ. ಹರ್ಷವರ್ಧನನನ್ನು ಕುರಿತ ಮೊದಲ ಕಾದಂಬರಿ ಎಂಬ ವಿಶೇಷತೆಯು ಇದರದ್ದು.


ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿಯವರೆಗೆ, ಹಿಮಾಚಲದಿಂದ, ವಿಂಧ್ಯಾಚಲದವರೆಗಿನ ಭೂಪ್ರದೇಶ, ಗೌಡ, ಮಾಳವ, ಕಾಮರೂಪ, ಸಿಂಧೂ ದೇಶ, ಗುರ್ಜರ, ಗಾಂಧಾರ, ಕಳಿಂಗ, ಕಶ್ಮೀರ ಈ ಎಲ್ಲವನ್ನೂ ಒಳಗೊಂಡ ವಿಶಾಲ ಭೂಪ್ರದೇಶವೇ ಇಲ್ಲಿನ ಆರ್ಯಾವರ್ತ. 'ಸಕಲೋತ್ತರ ಪಥನಾಥ' ಎಂದು ಕರೆಸಿಕೊಂಡ ಹರ್ಷವರ್ಧನನ ಬದುಕಿನ ಚರಿತೆ ಅವನ ಆಸ್ಥಾನ ಕವಿ ಬಾಣಭಟ್ಟನ 'ಹರ್ಷ ಚರಿತ'ದಲ್ಲಿರುವುದೂ.. ಹ್ಯೂಯನ್ ತ್ಸಾಂಗ್ ನ ಆತ್ಮಕಥೆ 'ಸಿಯುಕಿ'ಯಲ್ಲಿಯೂ ಅದು ತಾಳೆಯಾಗುವುದೂ ವಿಶೇಷ. ಪಾಲಿ ಭಾಷೆಯ ನಾಲ್ಕು ಶೀರ್ಷಿಕೆಗಳಿಂದ ಕಾದಂಬರಿಯ ನಾಲ್ಕು ಘಟ್ಟಗಳನ್ನು ಕಾಣಬಹುದು. 


ಸಂವಟ್ಟ (ಲೋಕದವಿಲಯ) :

ಪ್ರಭಾಕರವರ್ಧನ ಮತ್ತು ಯಶೋಮತಿ ದಂಪತಿಗಳ ಮೂವರು ಮಕ್ಕಳೇ ರಾಜ್ಯವರ್ಧನ, ಹರ್ಷವರ್ಧನ ಹಾಗೂ ರಾಜ್ಯಶ್ರೀ. ಇವರು ಪುಷ್ಯಭೂತಿ ವಂಶಸ್ಥರು. ಮಾಳವದಿಂದ ಯಶೋಮತಿ ವಿವಾಹವಾಗಿ ಬಂದಿದ್ದಾಗ ಆಕೆಯ ಗೆಳತಿಯಾಗಿದ್ದ ಗಿರಿಜೆಯೂ ಸ್ಥಾನೇಶ್ವರಕ್ಕೆ ಸೊಸೆಯಾಗಿ ಬಂದು.. ಅವರ ಸ್ನೇಹ ಇಲ್ಲಿಯೂ ಮುಂದುವರೆದಿತ್ತು. ಅಂತಸ್ತುಗಳು ಕಡಿಮೆಯಿದ್ದರೂ ಅರಮನೆಯ ಪೂಜೆ, ಪುನಸ್ಕಾರಗಳಲ್ಲಿ ಅವರಿಗೆ ಯಾವತ್ತಿಗೂ ಹಿರಿಯ ಸ್ಥಾನವೇ. ರಾಜ್ಯಶ್ರೀಯ ಪ್ರೀತಿಯ ಗಿರಿಜತ್ತೆ ಆಪ್ತವಾಗುತ್ತಾಳೆ. ಆಂತೆಯೇ ಗಿರಿಜತ್ತೆಯ ಮಗ ವಿಶ್ವಂಬರ ಹಾಗೂ ರಾಜ್ಯಶ್ರೀಯ ನವಿರಾದ ಭಾವಗಳು ಕಾಣುತ್ತವೆ. ಈಗ ಕನ್ಯಾಕುಬ್ಜದ ಅರಸು ಗೃಹವರ್ಮನ ಮನದನ್ನೆಯಾಗಿ ಹೋಗುತ್ತಿದ್ದಳು ರಾಜ್ಯಶ್ರೀ. ವಿವಾಹದ ಕುರಿತು ಅವಳಿಗಿದ್ದ ಭಯ, ಅದನ್ನು ಹೋಗಲಾಡಿಸುವ ಪರಿ ಎರಡು ಕುಟುಂಬಗಳ ಹಿನ್ನೆಲೆ, ನಿರ್ವಿಘ್ನವಾಗಿ ಸಾಗುವ ವಿವಾಹ ಎಲ್ಲವೂ ಮಧುರವಾದ ಓದು. ಈ ಶುಭ ಸಂದರ್ಭದಲ್ಲಿಯೂ ನೋವಿನ ಮುಳ್ಳಿತ್ತು. 


ಮಾಳವದಿಂದ ಯಾರೂ ಬರದಿದ್ದು ಕಾಡುತ್ತಲೇ ಇತ್ತು. ಅದಕ್ಕೆ ಕಾರಣವೂ ಇತ್ತು. ಮಾಳಗದ ಯುವರಾಜ ಭಂಡಿ ಚಿಕ್ಕ ಹುಡುಗನಾಗಿದ್ದಾಗಲೇ ಸ್ಥಾನೇಶ್ವರದಲ್ಲಿ ರಾಜಕೀಯ ಬಂಧಿಯಾಗಿದ್ದ. ಆದರೆ, ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ಬೆಳೆಸಿದ್ದರು ವರ್ಧನ ದಂಪತಿಗಳು. ಈಗ ಆತ ಅಮಾತ್ಯನೂ ಹೌದು. ಯಶೋಮತಿಯ ತವರು ಮಾಳವಕ್ಕೂ ಪ್ರಭಾಕರವರ್ಧನನಿಗೂ ಉಂಟಾದ ವೈಮನಸ್ಯಕ್ಕೆ ಕಾರಣವೇನು? ಓದಿ ನೋಡಿ.


ಪುಷ್ಯಭೂತಿ ಹಾಗೂ ಮೌಖಾರಿ ವಂಶದ ನಂಟು ಬೆಳೆದಿದ್ದಕ್ಕೆ ರಾಜಕೀಯ ಹಿನ್ನೆಲೆಯೂ ಇತ್ತು. ಹಾಗಿಲ್ಲದಿದ್ದರೆ ರಾಜಶ್ರೀ ಹಾಗೂ ಭಂಡಿಯ ವಿವಾಹವಾಗುತ್ತಿತ್ತೇ..? ಹಾಗಿದ್ದರೆ ಆ ಹಿನ್ನೆಲೆಯೇನು..? ಅದನ್ನು ಪ್ರಭಾಕರವರ್ಧನ ಭಂಡಿಯೊಡನೆ ಚರ್ಚಿಸಿದ ರೀತಿ ಹೇಗಿತ್ತು..?

ಪ್ರಭಾಕರವರ್ಧನನ ಸಾವು, ಯಶೋಮತಿ ಸತಿಯಾಗುವುದರ ನಂತರದಲ್ಲಿಯೇ ರಾಜ್ಯವರ್ಧನ ಹಾಗೂ ಗೃಹವರ್ಮನ ಅನಿರೀಕ್ಷಿತ ಸಾವುಗಳು, ರಾಜ್ಯಶ್ರೀಯ ಬದುಕಿನಲ್ಲಿ ಕಡುಕಷ್ಟದ ದಿನಗಳನ್ನು ತರುತ್ತವೆ. ಭಂಡಿ ತನ್ನ ಅತ್ತೆಗೆ ಕೊಟ್ಟ ಮಾತಿನಂತೆ ನಡೆಯುತ್ತಾನಾ..? ಎಳೆಯ ಹರ್ಷವರ್ಧನ ಎಲ್ಲ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾನೆ..? ಸಾಯಲು ಹೊರಟಿದ್ದ ರಾಜ್ಯಶ್ರೀಯನ್ನು ತಡೆದ ದಿವಾಕರಮಿತ್ರರ ಹಿರಿಮೆಯನ್ನು ಇಲ್ಲಿ ಕಾಣಬಹುದು.


ಪಸಾರೋ (ಪ್ರಸರಣ, ವಿಸ್ತಾರ) :

ಪತಿಯಿಲ್ಲದ ರಾಜ್ಯಶ್ರೀ ಕನ್ಯಾಕುಬ್ಜದ ಅರಮನೆಗೆ ಸೇರಿದಾಗ ವಂಶ ಮುನ್ನಡೆಯವ ಸಾಧ್ಯತೆಯೂ ಇಲ್ಲ ಎನ್ನುವುದು ಮನದಟ್ಟಾಗಿತ್ತು. ಗೃಹವರ್ಮನನ್ನು ಕೊಂದ ದೇವಗುಪ್ತನನ್ನು ರಾಜ್ಯವರ್ಧನ ನರಕಕ್ಕೆ ಕಳುಹಿಸಿದ್ದನಾದರೂ.. ಗೌಡ ದೇಶದ ಶಶಾಂಕನ ಆಟ ಇನ್ನೂ ನಿಂತಿರಲಿಲ್ಲ. ಮುೌಖಾರಿ ವಂಶಕ್ಕೆ ರಾಜ್ಯಶ್ರೀ ರಾಣಿಯಾಗಿ ಪಟ್ಟವೇರುತ್ತಾಳೆ. ಹರ್ಷವರ್ಧನ ಎರಡೂ ಕಡೆ ನಿಭಾಯಿಸುತ್ತಾ.. ಅಣ್ಣನಿಗೆ ತಂಗಿ, ತಂಗಿಗೆ ಅಣ್ಣ ಎಂಬಂತೆ ಬದುಕುತ್ತಾರೆ. ಸಾಮ್ರಾಜ್ಯದ ಹೊರೆಯನ್ನು ಹೊತ್ತ ಹರ್ಷನಿಗೆ ಭಂಡಿ ಕಾವಲಾಗುತ್ತಾನೆ.


ಧವಳ ಭವನದಲ್ಲಿ ಬದುಕದ ಅಲಕೆಯ ಮಗಳು ಕುಮುದಿನಿ ಹರ್ಷ ನ ಮತ್ತೊಬ್ಬ ತಂಗಿ. ಭಂಡಿಗೆ ಆಕೆಯ ವಿವಾಹದ ಪ್ರಸ್ತಾಪ ಮಾಡಿದಾಗ ನಿರಾಕರಿಸುವ ಭಂಡಿ ಜೀವನಪೂರ್ತಿ ಅವಿವಾಹಿತನಾಗಿಯೇ ಉಳಿಯುವುದು ವಿಪರ್ಯಾಸ.


ಕುಮುದಿನಿಯ ವಿವಾಹ, ದಿವಾಕರಮಿತ್ರರು ಹರ್ಷನ ಅರಮನೆಗೆ ಆಗಮಿಸುವುದು, ಅವರ ಶಿಷ್ಯ ಮೈತ್ರಕ ತಾವು ಹೊರಟ ನಳಂದ ವಿಹಾರದ ಕುರಿತಾಗಿ ಹೇಳುವುದು, ಜ್ಞಾನ ಪ್ರಸರಣ ಕೇಂದ್ರವಾದ ನಳಂದದ ಹಿರಿಮೆ ಅಲ್ಲಿನ ಕುಲಪತಿಗಳಾದ ಶಿಲಾಭದ್ರರು (ಈಶಾನ್ಯದ ಸಮತಾತದ ಅವರು ಸುಪುತ್ರ ಹಾಗೂ ಬ್ರಾಹ್ಮಣರು ಈಗ ಬುದ್ಧ ಧಮ್ಮವನ್ನು ಒಪ್ಪಿಕೊಂಡು ಬಿಕ್ಕುವಾಗಿ ದೀಕ್ಷೆ ಪಡೆದಿದ್ದವರು), ವಿದ್ಯಾರ್ಥಿಗಳಿಂದ ಒಂದು ಚಿಕ್ಕಾಸೂ ಪಡೆಯದೆ ನಿರ್ವಂಚನೆಯಿಂದ ವಿದ್ಯೆ ಕಲಿಸುತ್ತಿರುವ ನಳಂದ ಹಾಗೂ ಅಲ್ಲಿಗೆ ದೇಣಿಗೆ ಕೊಟ್ಟ ದೊರೆಗಳು, ಧರ್ಮಗಂಜ ಎನ್ನುವ ಸುಸಜ್ಜಿತ ಸಂಕೀರ್ಣ ಗ್ರಂಥಾಲಯ ಇವೆಲ್ಲವನ್ನೂ ಕಾಣಬಹುದು.


 ಹರ್ಷ ಅಲ್ಲಿಗೆ ಹೋಗಿ ಬಂದ ನಂತರ ರಾಜ್ಯಶ್ರೀ ಅಲ್ಲಿಗೆ ಹೋಗಿ ಬರುತ್ತಾಳೆ. ವಿಶ್ವಂಬರನಿಗೆ ಆತ ಆಶಿಸಿದಂತೆ ನಳಂದದಲ್ಲಿ ಚಿಕಿತ್ಸಾ ವಿದ್ಯೆ ಕಲಿಯಲು ಅವಕಾಶ ಸಿಗುತ್ತದ..? ಅಲ್ಲಿನ ದ್ವಾರ ಪಂಡಿತರು ಕೇಳುವ ಬುದ್ಧ ಸೂತ್ರಗಳು, ವಿನಯ ಪಿಟಕಗಳ ದಮ್ಮದ ಕುರಿತ ಪ್ರಶ್ನೆಗಳು ಇವೆಲ್ಲವನ್ನು ಗೆದ್ದು ಮುನ್ನಡೆದರೆ ಮುಂದೆ ನಡೆಯುವ ಸಂದರ್ಶನ ಎಲ್ಲವೂ ಹೇಗಿರುತ್ತದೆ..?


ಮುಂದೆ ಹರ್ಷವರ್ಧನ ಹಾಗೂ ದುರ್ಗಾವತಿಯರ ವಿವಾಹ, ಪ್ರಾಗ್ಯವರ್ಧನ ಹಾಗೂ ಕಲ್ಯಾಣವರ್ಧನ, ಯಶೋಮತಿಯರ ಜನನ.. ರಾಜ್ಯಶ್ರೀ ತನ್ನ ಮಕ್ಕಳಂತೆಯೇ ಭಾವಿಸುವ ಪರಿ..

 

ಆ ವಂಶದಲ್ಲಿ ಕುಮುದಿನಿ ಇದ್ದಂತೆ ಈ ವಂಶದಲ್ಲಿ ರಾಜಶ್ರೀಯ ಮಾವ ಆವಂತಿವರ್ಮರ ಮತ್ತೊಬ್ಬ ಪುತ್ರನೂ ಇರುತ್ತಾನೆ. ಆದರೆ, ಎರಡೂ ವಂಶಗಳು ಅವರನ್ನು ನಡೆಸಿಕೊಂಡ ರೀತಿ ಮಾತ್ರ ವಿಭಿನ್ನ.. ಹರ್ಷನ ಆಡಳಿತಕ್ಕೆ ಇಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ..? ಮೌಖಾರಿ ವಂಶದ ಮಹಾಮಾತ್ಯ ಅರ್ಜುನಾಶ್ವನ ಪ್ರತಿಕ್ರಿಯೆ ಹೇಗಿರುತ್ತದೆ..?


ಹರ್ಷನ ದಂಡಯಾತ್ರೆ, ರಾಜ್ಯವನ್ನು ವಿಸ್ತರಿಸುವ ಹಾಗೂ ಸಾಮಂತರನ್ನಾಗಿಸಿಕೊಳ್ಳುವ, ಸೈನ್ಯವನ್ನು ಬಲಪಡಿಸಿಕೊಳ್ಳುವ ದೃಶ್ಯಗಳು ಕಣ್ಣಿಗೆ ಕಟ್ಟಿದಂತಿವೆ. 

ಗಜಪಡೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾಡಿನ ಆನೆಯನ್ನು ಪಳಗಿಸುವ ಹಾಗೂ ಶಬರರೇ ಕಾವಾಡಿಗಳಾಗಿ ಕನ್ಯಾಕುಬ್ಜಕ್ಕೆ ಬಂದು ಮಾವುತರಾಗುವ ಕಾರ್ಯಕ್ಕೆ ದಿವಾಕರಮಿತ್ರರು ಅಸಮಾಧಾನ ವ್ಯಕ್ತಪಡಿಸಿದ್ದೇಕೆ..? ಇಂದಿನ ದಿನಗಳಿಗೂ ಹೊಂದುವ ಸಮಸ್ಯೆ ಇದು. ಇದಕ್ಕೆ ಸಿಕ್ಕ ಪರಿಹಾರವೇನು..?


ವಿಶ್ವನ ನಳಂದದ ಪ್ರವೇಶ, ಅಲ್ಲಿನ ರೀತಿ-ನೀತಿಗಳು, ವಿದ್ಯೆ ಕಲಿಸುವ ಶಿಸ್ತು ಜೊತೆಗೆ ಬೌದ್ಧ ಧಮ್ಮದ ಹಲವಾರು ವಿಚಾರಗಳಿವೆ. ವಿಶ್ವ ರಾಜ್ಯಶ್ರೀಯನ್ನು ವಿವಾಹವಾಗುವ ಅಪೇಕ್ಷೆ ವ್ಯಕ್ತಪಡಿಸಿದ್ದಕ್ಕೆ ಅಡ್ಡಿಯಾದವರಾರು..?

ಗಿರಿಜೆಯ ಒತ್ತಾಯದ ಮೇರೆಗೆ ವಿಶ್ವ ಮದುವೆಯಾದ ಕಾತ್ಯಾಯಿನಿಯ ಸಾವಿನ ನಂತರ ವಿಶ್ವನ ಪರಿಸ್ಥಿತಿಯೇನಾಯಿತು ..?


ವಿರಾಗೋ (ಆಸಕ್ತಿರಹಿತ ಸ್ಥಿತಿ) :

ವಿಶ್ವನಿಗೆ ಅರಮನೆಯ ಬಾಗಿಲು ಮುಚ್ಚಿದ್ದು, ಪತ್ನಿಯ ಸಾವು ಆತನನ್ನು ಮಾತ್ರವಲ್ಲ.. ರಾಜ್ಯಶ್ರೀ, ಗಿರಿಜೆಯರನ್ನೂ ಬಾಧಿಸಿತು. ರಾಜ್ಯಶ್ರೀ ತನ್ನ ಸಖಿ ರಾಧಿಕೆಯೊಂದಿಗೆ ಬಿಕ್ಕುಣಿಯರಿದ್ದ ಸಂಘಾರಾಮಕ್ಕೆ ಹೋದಾಗ ಅಲ್ಲಿನ ರೀತಿ-ನೀತಿಗಳು, ಶಾಂತಿದೇವಿ ಎಂಬ ಅಧ್ಯಕ್ಷೆ, ತನ್ನೆಲ್ಲ ದುಗುಡಗಳನ್ನು ಅವರೊಡನೆ ಹಂಚಿಕೊಂಡಾಗ ಆಕೆಗೆ ಸಿಕ್ಕ ಸಮಾಧಾನದ ಮಾರ್ಗವೇನು..? 


ವಲ್ಲಭಿಯ ದೊರೆ ಧ್ರುವಸೇನನೊಂದಿಗೆ ಯಶೋಮತಿಯ ವಿವಾಹದಲ್ಲಿ ಬಾಣಭಟ್ಟನ ಪಾತ್ರವೇನಿತ್ತು..? ಹೆಣ್ಣುಮಗಳೊಬ್ಬಳ ಭವಿಷ್ಯದ ಹಾದಿಯನ್ನು ಎಷ್ಟೆಲ್ಲಾ ಎಚ್ಚರಿಕೆಯಿಂದ ರೂಪಿಸುತ್ತಾರೆ ಎನ್ನುವ ನಿದರ್ಶನವಿದು.


ಚೀನೀ ಯಾತ್ರಿಕ ಹ್ಯೂಯನ್ ತ್ಸಾಂಗ್ ಆಗಮನ ಹಾಗೂ ಆತನ ಹಿರಿಮೆಗಳಿವೆ.


ದಕ್ಷಿಣ ಪಥೇಶ್ವರ ಎಂದು ಕರೆಸಿಕೊಂಡಿದ್ದ ಇಮ್ಮಡಿ ಪುಲಕೇಶಿಯ ಮೇಲೆ ಯುದ್ಧಕ್ಕೆ ಹೋಗುವ ಹರ್ಷನ ನಿರ್ಧಾರಕ್ಕೆ ಕಾರಣವೇನು..? ಅಳಿಯ ಧ್ರುವಸೇನ ಯುದ್ಧದ ಸಹಾಯದಲ್ಲಿ ನಿರಾಕರಿಸಿದ್ದು ಮಾತ್ರವಲ್ಲದೆ, ತಟಸ್ಥವಾಗಿ ಉಳಿಯಲು ನಿರಾಕರಿಸಿದ್ದು ಸಂಬಂಧಕ್ಕೆ ಏನಾದರೂ ಚ್ಯುತಿ ತಂದಿತೇ..?

ಹರ್ಷನ ಒಂದು ಸೋಲು ಅವನನ್ನು ಯಾವ ಮಟ್ಟಕ್ಕೆ ಕುಗ್ಗಿಸಿತು..? ಎಲ್ಲದರ ಹಿಂದಿನ ಚಿತಾವಣೆಯ ಸುಳಿವು ಭಂಡಿಗೆ ಸಿಗದೆ ಹೋದದ್ದು ವಿಪರ್ಯಾಸ.


ತ್ಸಾಂಗ್ ಹರ್ಷ ನ ಬಗ್ಗೆ ತಿಳಿದುಕೊಳ್ಳುವುದು, ಬುದ್ಧನ ಕುರಿತು ಬುದ್ಧ ಸೂತ್ರಗಳ ಕುರಿತು ಆತನ ಆಸಕ್ತಿ, ನಳಂದದಲ್ಲಿ ಆತನ ದಿನಗಳು, ಆತನಿಗೆ ಸಹಾಯಕನಾಗುವ ರವಿತೇಜ, ಶಿಲಾಭದ್ರರ ಜೊತೆಯಲ್ಲಿ ಆಸಕ್ತಿಯ ಮಾತುಕತೆಗಳು, ತ್ಸಾಂಗ್ ಬುದ್ಧನ ಸೂತ್ರಗಳನ್ನು.. ಭಾರತೀಯ ವಿದ್ಯೆಯ ಗ್ರಂಥಗಳನ್ನು ತನ್ನ ದೇಶಕ್ಕೆ ಒಯ್ಯಲು ಮಾಡಿಕೊಂಡ ಸಿದ್ಧತೆಗಳು ಎಲ್ಲವೂ ಇಲ್ಲಿವೆ


ನಿಬ್ಬಾಣ (ಜನನ-ಮರಣ ಚಕ್ರದ ಅಂತ್ಯ) :

ಹರ್ಷ ದಿವಾಕರಮಿತ್ರರ ಬಳಿ ಬಂದಾಗ ಅಷ್ಟರಲ್ಲಾಗಲೇ ಅವರಿಗೆ ಆತನ ಸೋಲಿನ ಸುದ್ದಿ ತಿಳಿದಿತ್ತು. ಹರ್ಷನ ಸೋಲಿನ ಕುಗ್ಗುವಿಕೆಗೆ ಅವರು ಕೊಟ್ಟ ಕಾರಣಗಳೇನು..? ತಥಾಗತನಂತೆ ಹರ್ಷನೂ ರಾಜ್ಯ-ಕೋಶವನ್ನು ತೊರೆದು ಮುನ್ನಡೆಯಲು ಹೊರಟಾಗ ಅದರಿಂದ ಉಂಟಾಗುವ ಅನರ್ಥಗಳನ್ನು ಹೇಳಿ ತಡೆದದ್ದೇಕೆ..? ಹಾಗಾದರೆ, ಬುದ್ಧ ಮಾಡಿದ್ದು ಸರಿಯೇ..?


ಹರ್ಷನ ಆಸ್ಥಾನವನ್ನು ನೋಡುವ ತ್ಸಾಂಗ್ ಮುಂದೆ ಹರ್ಷನ ವ್ಯಕ್ತಿತ್ವವನ್ನು ಅರಿಯುತ್ತಾನೆ ಜೊತೆಗೆ ಸರ್ವ ಧರ್ಮ ಸಮ್ಮೇಳನದಲ್ಲಿ ಮಹಾಯಾನ ಸಿದ್ದಾಂತಗಳನ್ನು ಪ್ರತಿಪಾದಿಸುವ ಸಂದರ್ಭದ ಭವ್ಯ ಕಾರ್ಯಕ್ರಮವೂ ಇಲ್ಲಿದೆ. ಆದರೆ, ಇಲ್ಲಿ ನಡೆದ ಆಘಾತ ಹರ್ಷನ ವಿರುದ್ಧ ನಡೆದ ಷಡ್ಯಂತ್ರಗಳನ್ನು ತೆರೆದಿಡುತ್ತದೆ. ನಿಧಾನ ವಿಷಪ್ರಾಶನದಿಂದ ಜರ್ಜರಿತನಾಗಿದ್ದ ಅವನನ್ನು ಉಳಿಸಲು ಮತ್ತೆ ವಿಶ್ವ ಬರುತ್ತಾನೆ. ಆತನಿಗೆ ವಿಷಪ್ರಾಶನ ಮಾಡಿಸಿದ್ದು ಯಾರು..? ತಮ್ಮ ಧರ್ಮಕ್ಕಿಂತಲೂ ಬೌದ್ಧಧರ್ಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು ಆತನಿಗೆ ಮುಳುವಾಯಿತೇ..?


ವಿಶ್ವನನ್ನು ಕಂಡು ರಾಜ್ಯಶ್ರೀಯಲ್ಲಿ ಉಂಟಾದ ಭಾವಗಳು ಇನ್ನೂ ಮೋಹವನ್ನು ಮೀರದ ಅವಳನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ. ಶಾಂತಿದೇವಿಯ ಭೇಟಿಯ ಜೊತೆಗೆ ಥೇರಿಗಾಥಾದ ಕೆಲವು ಪದ್ಯಗಳು, ಬುದ್ಧನ ಕಾಲದಲ್ಲಿ ಸಂಸಾರವನ್ನು ತೊರೆದು ಬಂದ ಹೆಣ್ಣು ಮಕ್ಕಳ ಪರಿಸ್ಥಿತಿ, ಅವರ ರಕ್ಷಣೆಗಾಗಿ ಬುದ್ಧ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳು, ಜೀವನಶೈಲಿ ಎಲ್ಲವನ್ನು ಕಾಣಬಹುದು.


ಹರ್ಷನ ಕುಲಪುತ್ರರಿಬ್ಬರ ಮರಣ, ತ್ಸಾಂಗ್ ಮತ್ತೆ ತನ್ನ ದೇಶಕ್ಕೆ ಮರಳುವುದು ಎಲ್ಲದರೊಂದಿಗೆ ಕಾದಂಬರಿ ಮುಕ್ತಾಯದ ಹಂತಕ್ಕೆ ಬರುತ್ತದೆ. ಹರ್ಷನ ಕೊನೆ ಹೇಗಾಗುತ್ತದೆ..? ಅದಕ್ಕೆ ಕಾರಣವಾದವರು ಯಾರು..?

ಶಾಂತಿಯನ್ನು ಅರಸಿ ಹೊರಟ ಹರ್ಷನ ಆ ಅಂತ್ಯಕ್ಕೆ ರಾಜ್ಯಶ್ರೀ ಪರಿತಪಿಸಿ ಎಲ್ಲಿಗೆ ಹೋಗುತ್ತಾಳೆ..! ಭಂಡಿಗೂ ಸಿಗದ ಅವಳು ವಿಶ್ವನಿಗೆ ಸಿಕ್ಕದ್ದು ಹೇಗೆ..?

ವಿಶ್ವ ಹರ್ಷನಿಗೆ ರಾಜ್ಯಶ್ರೀಯ ಕುರಿತ ಕೊಟ್ಟ ಮಾತೇನು.. ಅದನ್ನು ಆತ ನೆರವೇರಿಸುತ್ತಾನಾ..?


ಬುದ್ಧನೆಂದರೆ ಅಪಾರ ಭಕ್ತಿಯಿದ್ದರೂ.. ಧಮ್ಮವನ್ನು ಅದರ ಮೂಲಸೆಲೆಯಲ್ಲಿ ಅನುಸರಿಸಿ ಆಚರಿಸುತ್ತಿದ್ದರೂ ವಿಶ್ವನಿಗೆ ಭಿಕ್ಕುವಾಗುವ ಮನಸ್ಸಿಲ್ಲದ್ದು ಏಕೆ..? ಬುದ್ಧನ ದಯೆ, ಕರುಣೆ, ಧರ್ಮಗಳು ಜೀವಪರ ಎಂದು ಒಪ್ಪಿಕೊಂಡು ಯಾವುದೇ ಪಂಥಕ್ಕೆ ಸೇರದೆಯೂ ಮಾನವ ಸೇವೆಯಲ್ಲಿ ತೊಡಗಿಕೊಳ್ಳುವ ವಿಶ್ವ .. ಹರ್ಷ ಹಾಗೂ ರಾಜಶ್ರೀಯಿಂದ ದೂರವಾಗಿ ನೆಲೆಸಿದ್ದು ಎಲ್ಲಿ..?


ಚಿಕ್ಕವಯಸ್ಸಿನಲ್ಲಿಯೇ, ಹೆಚ್ಚಿನ ಮಾರ್ಗದರ್ಶನ ವಿಲ್ಲದೆ ಸಕಲೋತ್ತರ ಪಥನಾಥನಾದ ಹರ್ಷನ ಧೈರ್ಯ, ಸಾಹಸ, ತಂಗಿಗಾಗಿ ತನ್ನ ಬದುಕನ್ನು ಮುಡುಪಾಗಿಸಿಕೊಂಡು, ರಾಜ್ಯಕ್ಕಾಗಿ ಜೀವ ಸವೆಸಿದ ಹರ್ಷ ಮನದಲ್ಲುಳಿಯುತ್ತಾನೆ. ನಳಂದಕ್ಕೆ ಕೊಡುಗೈ ದಾನಿಯಾಗಿ, ಗ್ರಾಮಗಳ ಉಂಬಳಿ, ಸ್ತೂಪಗಳ ನಿರ್ಮಿತಿ, ದೇಣಿಗೆ ಕೊಟ್ಟವನು ನಡೆಸಿದ ಕನ್ಯಾಕುಬ್ಜದ ಗಂಗಾ ತಟಾಕದ ಸರ್ವಧರ್ಮ ಸಮ್ಮೇಳನ, ಕರ್ಣನಿಗೂ ಮಿಗಿಲಾಗಿ ಮಾಡುವ ದಾನ.. ಕೌಪೀನವನ್ನೊಂದುಳಿದು ಎಲ್ಲವನ್ನೂ ದಾನ ಮಾಡಿದ ಪರಿ, ಎಲ್ಲದರಾಚೆಗೂ ಆತನ ಅಂತ್ಯ ಕಾಡುತ್ತದೆ. ವಿರಾಗಿಯಾಗಿ ನಡೆಯಲು ಹೊರಟವನ ಹಾದಿಯನ್ನು ಆಗಲೇ ಒಪ್ಪಿದ್ದರೆ.. ಹರ್ಷ ಉಳಿಯುತ್ತಿದ್ದನೇನೋ..! ಸಾಮ್ರಾಜ್ಯದ ಪರಿಸ್ಥಿತಿಯೇನೂ ವಿಭಿನ್ನವಾಗುತ್ತಿರಲಿಲ್ಲ ಎನ್ನಿಸುತ್ತದೆ. ಹರ್ಷ ತನ್ನ ದುರಂತ ಅಂತ್ಯದಿಂದ ಮನದಲ್ಲುಳಿಯುತ್ತಾನೆ.


ಸುಕೋಮಲ ರಾಜಕುಮಾರಿಯಂತೆ ಕಾದಂಬರಿಯ ಆರಂಭದಲ್ಲಿ ಕಾಣುವ ರಾಜ್ಯಶ್ರೀ ಮುಂದೆ ಪಡುವ ಕಷ್ಟಗಳು ಒಂದೆರಡಲ್ಲ. ಸಾಮಾನ್ಯ ಮನುಷ್ಯಳಂತೆ ತನ್ನಿಷ್ಟದಂತೆ ಬದುಕಲಾಗದ ರಾಜಕುಮಾರಿಯಾಗಿ, ಬುದ್ಧಿವಂತೆಯಾದರೂ.. ದಿನೇ ದಿನೇ ಪ್ರೌಢಳಾಗಿ ಆಧ್ಯಾತ್ಮದತ್ತ ಹೆಚ್ಚು ವಾಲುತ್ತಾ ಸಾಗುವ ರಾಜ್ಯಶ್ರೀ ಇಲ್ಲಿ ಹರ್ಷನಿಗಿಂತಲೂ ಹೆಚ್ಚೇ ಕಾಡುತ್ತಾಳೆ. ತ್ಸಾಂಗನ ಪತ್ರವೂ ಇದನ್ನು ಪುಷ್ಟೀಕರಿಸುತ್ತದೆ.


ತನ್ನ ರಾಜ್ಯದಿಂದ ಕರೆತಂದು ಬಾಲ್ಯದಲ್ಲೇ ತಂದೆ-ತಾಯಿಯಿಂದ ದೂರ ಮಾಡಿದ ಮಾವನ ಮೇಲೆ, ರಾಜ್ಯಶ್ರೀಯನ್ನು ಪಡೆಯಲಾಗದ್ದಕ್ಕೆ ಸೇಡು ತೀರಿಸಿಕೊಳ್ಳಬಹುದಾದ ಎಲ್ಲಾ ಅವಕಾಶವಿದ್ದರೂ.. ತಾನೇ ಆಡಳಿತದ ಚುಕ್ಕಾಣಿ ಹಿಡಿಯಬಹುದಾದ ಸಾಮರ್ಥ್ಯ ಹಾಗೂ ಅವಕಾಶವಿದ್ದರೂ.. ಅದಾವುದನ್ನು ಮಾಡದೆ ಪರಿಸ್ಥಿತಿಯನ್ನು ಪ್ರೌಢವಾಗಿ, ಪ್ರಾಮಾಣಿಕವಾಗಿ ಅರ್ಥೈಸಿಕೊಂಡು ಅತ್ತೆಗೆ ಕೊಟ್ಟ ಮಾತಿನಂತೆ, ಜೊತೆಗೆ ಅವರನ್ನೇ ತಂದೆ-ತಾಯಿಯಂತೆ ಪೂಜಿಸುತ್ತಾ .. ತನ್ನ ತಂದೆಯ ಹೀನ ಕಾರ್ಯಕ್ಕೆ ಆತನಿಗೆ ಛೀಮಾರಿ ಹಾಕುವ ಭಂಡಿಯ ಧೈರ್ಯ,ಅಜೀವ ಬ್ರಹ್ಮಚಾರಿಯಾಗಿ ಉಳಿಯುವ ಆತನ ಬದುಕು ಹರ್ಷ ಹಾಗೂ ರಾಜಶ್ರೀಯಷ್ಟೇ ಉನ್ನತವಾಗಿ ನಿಲ್ಲುತ್ತದೆ. 


ಕಾದಂಬರಿ ಕೇವಲ ಐತಿಹಾಸಿಕ ಕಾರಣದಿಂದ ಮಾತ್ರವಲ್ಲದೆ.. ಕಥೆಯ ನಿರೂಪಣೆ, ವಿಶಾಲವಾದ ಹರವು, ಭಕ್ತಿ, ವೈರಾಗ್ಯ, ಇತಿಹಾಸ ಪುಟದಲ್ಲಿ ಬುದ್ಧನಲ್ಲಿದ್ದ ಪ್ರೇಮ, ರಾಜ್ಯವೊಂದರ ಚುಕ್ಕಾಣಿ ಹಿಡಿದವರ ಬದುಕಿನ ಒಳನೋಟಗಳು ಹೀಗೆ ಆರ್ಯಾವರ್ತದಂತೆಯೇ ವಿಶಾಲವಾದ ಓದು ಇಲ್ಲಿದೆ. ಒಮ್ಮೆ ಓದಲು ಶುರು ಮಾಡಿದರೆ ಕಾದಂಬರಿಯನ್ನು ಪೂರ್ತಿ ಮುಗಿಸುವವರೆಗೂ ಕೆಳಗಿಡುವುದು ಕಷ್ಟ. ಮುಗಿದ ನಂತರವೂ ಕಾಡುವ ಓದು ಇದು. 


~ ವಿಭಾ ವಿಶ್ವನಾಥ್