ಸೋಮವಾರ, ಏಪ್ರಿಲ್ 27, 2026

ತೇಲಿ ಹೋದ ಮೋಡ


ಕಥೆಯ ಶೀರ್ಷಿಕೆ : ತೇಲಿ ಹೋದ ಮೋಡ

ಲೇಖಕರು : ಗೀತಾ ಕುಲಕರ್ಣಿ


ಆನಂದ ನಾಲ್ಕೈದು ದಿನಗಳ ಜ್ವರದ ತಾಪದಿಂದ ಜರ್ಜರಿತನಾಗಿ ತಾಳ್ಮೆಯನ್ನು ಕಳೆದುಕೊಂಡಿದ್ದ. ಮೂರು ತಾಸಿನ ಹಿಂದೆ ತಾನಾಗಿಯೇ ಮಡದಿ ಶೈಲೆಯನ್ನು ನಾಟಕಕ್ಕೆ ಹೋಗಿ ಬರಲು ಕಳುಹಿಸಿದ. ಆದರೆ, ಈಗ ಅವನ ಮನಸ್ಸು ತೀರ ವಿರುದ್ಧವಾಗಿ ಯೋಚಿಸತೊಡಗಿತ್ತು. ಹಾಗೆ ಯೋಚಿಸಿದಂತೆಲ್ಲಾ ಶೈಲೆಯ ಅಂದಿನ ನಡವಳಿಕೆಯೇ ವಿಚಿತ್ರವೆನಿಸತೊಡಗಿತ್ತು. ಆತನಿಗೆ ಜ್ವರ ಇರುವಾಗ ತಾನು ನಾಟಕ ನೋಡಲು ಹೋಗುವುದಿಲ್ಲ ಎಂದು ಹೇಳುತ್ತಾಳೆನೋ ಎಂದುಕೊಂಡಿದ್ದ ಅವನ ನಂಬಿಕೆ ಹುಸಿಯಾಗಿದ್ದೇ ಇದಕ್ಕೆ ಕಾರಣವಾಗಿತ್ತು.


ತನ್ನ ಮದುವೆಯಾದ ದಿನದಿಂದ ಇಂದಿನವರೆಗೆ ತನ್ನನ್ನು ಹಾಗೂ ಶೈಲೆಯನ್ನು ನೆನಪಿಸಿಕೊಳ್ಳತೊಡಗಿದ್ದ. ಜನ 'ಹೆಂಡತಿ ಹೇಳಿದಂತೆ ಕುಣಿಯುತ್ತಾನೆ' ಎಂದರೂ ಲೆಕ್ಕಿಸದೆ... ಪಾರ್ಟಿ, ಸಿನಿಮಾ, ಮೀಟಿಂಗ್ ಏನಿದ್ದರೂ ಶೈಲೆಯನ್ನು ಜೊತೆಗೊಂಡು ಹೋಗುತ್ತಿದ್ದ. 'ಹೆಣ್ಣು ಮನೆಯ ಒಳಗೆ, ಹೊರಗಿನ ಕಾರ್ಯ ಅವಳದ್ದಲ್ಲ' ಎನ್ನುವ ಜನರನ್ನು ಮನೆ-ಮನ ಎರಡರಿಂದಲೂ ಬಹಳ ದೂರವಿಡುತ್ತಿದ್ದ. ಈ ಅತಿ ಸಮಾನತೆಯ ಹುಚ್ಚು ಶೈಲೆಗೆ ಕೆಲವೊಮ್ಮೆ ಹಿಂಸೆಯಾಗುತ್ತಿತ್ತು ಆದರೆ ಪತಿಯ ಮೇಲಿನ ಅಪಾರ ಪ್ರೀತಿ ಅದೆಲ್ಲವನ್ನು ಸಹಿಸುವ ಶಕ್ತಿ ಕೊಟ್ಟಿತ್ತು.


ಈಗ ಎರಡು ವರ್ಷದಿಂದ ಆತನ 'ನ್ಯಾಷನಲ್ ಫಾರ್ಮಸಿ' ತುಸು ಇಳಿಮುಖವಾದ ಗಳಿಕೆಯನ್ನು ಕಾಣುತ್ತಿತ್ತು. ಅವನ ಅಂದಿನ ಉತ್ಸಾಹ ಮರೆಯಾಗಿ ಬೇಸರ ತಲೆದೋರಿತ್ತು. ಮನೆಯಲ್ಲಿ ಒಂದು ರೀತಿಯ ತಾತ್ಸಾರ ಭಾವವಿತ್ತು. ಇದನ್ನರಿತ ಶೈಲೆ ಹದ ತಪ್ಪದಂತೆ ಚೊಕ್ಕವಾಗಿ ಸಂಸಾರವನ್ನು ನಡೆಸುತ್ತಿದ್ದಳು. ಅವರ ಆತ್ಮೀಯ ಸಂಭಾಷಣೆ ಹಾಗೂ ಶೈಲೆಯ ಆದರದ ಭಾವಗಳು ಅವನನ್ನು ಮತ್ತೆ ಚೈತನ್ಯದಾಯಕವಾಗಿಸುತ್ತಿತ್ತು. ನಳ-ದಮಯಂತಿಯರ ಕಥೆ ಅವರ ದಾಂಪತ್ಯಕ್ಕೆ ಹತ್ತಿರವಾದ ಸಂದರ್ಭವನ್ನು ತೋರಿದಂತಾದಾಗ ಇಬ್ಬರೂ ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದರು.


ಅಂದು ತಾನು ನೋಡಿದ ನಾಟಕದ ವಿಷಯವನ್ನೆಲ್ಲಾ ಹೇಳಿ ಆನಂದನನ್ನು ಸಂತಸಪಡಿಸಬೇಕೆಂದು ಬಂದಿದ್ದವಳಿಗೆ ಆತನ ವರ್ತನೆ ಬಿಡಿಸಲಾರದ ಒಗಟಿನಂತಾಗಿತ್ತು. ಮುನಿಸು, ಬಲವಾದ ಕೈಯ್ಯ ಹಿಡಿತ ಯಾವುದೋ ದುಷ್ಟಶಕ್ತಿ ಅವನಲ್ಲಿ ಆಟವಾಡುತ್ತಿರಬಹುದು ಎನ್ನಿಸಿತು. ಜೊತೆಗೆ ಅವನ ಮಾತಿನ ಬಾಣಗಳನ್ನು ಆಕೆ ಸಹಿಸದಾದಳು.


ಬೆಳಗಿನ ಹೊತ್ತಿಗೆ ಆತನ ಸಿಟ್ಟು ಇಳಿದಿತ್ತು. ಶೈಲೆಯ ಮುದುಡಿದ ದೇಹ, ಕಪ್ಪಿಟ್ಟ ಮುಖ ರಾತ್ರಿಯ ನೆನಪನ್ನು ತಂದುಕೊಟ್ಟಿತ್ತಾದರೂ ಆಕೆಯನ್ನು ಮಾತನಾಡಿಸುವ ಆಲೋಚನೆಯನ್ನು ಬಿಟ್ಟು ಹಿಂದಕ್ಕೆ ಹೊರಟಿದ್ದ.


ಇಷ್ಟು ಸಮಯವಾದರೂ ಏಳದಿದ್ದ ಅತ್ತಿಗೆಯನ್ನು ಸುವರ್ಣ ಎಚ್ಚರಗೊಳಿಸಲು ಹೋದಾಗ ಅವಳ ಮ್ಲಾನವದನ, ಏಳಲು ಮನಸ್ಸಿಲ್ಲದಿರುವಿಕೆ, ಬಾತುಕೊಂಡಿದ್ದ ಮುಖ, ಊದಿದ್ದ ಕಣ್ಣುಗಳು ಎಲ್ಲವೂ ಬೇರೆಯದ್ದೇ ಕಥೆಯನ್ನು ಹೇಳುತ್ತಿತ್ತು.


 ತಂದೆ-ತಾಯಿಯರನ್ನು ಒಮ್ಮೊಮ್ಮೆ ಬಿಟ್ಟು ಇದ್ದಾಳೇನೋ.. ಆದರೆ, ಅಣ್ಣ ಅತ್ತಿಗೆಯರನ್ನು ಬಿಟ್ಟಿರಲಾಗದ ಸುವರ್ಣೆಗೆ ಅತ್ತಿಗೆಯ ಈ ಬಗೆ ಹೊಸತು. ಮಗುವಿಗೆ ಹಾಗೂ ಕೆಲಸಕ್ಕೆ ಬಂದ ಲಚುಮಿಗೆ ಎಲ್ಲರಿಗೂ ಶೈಲೆಯ ಆ ಪರಿ ಕಂಡು ಬೇಸರವೇ ...


ಶೈಲೆಯ ಮನಸ್ಸಿನ ಆಲೋಚನೆಗಳು ಆತ್ಮಹತ್ಯೆಯನ್ನು ಮುಟ್ಟಿ ಬಂದಿದ್ದರೂ.. ಗಂಡ-ಮಗನ ಯೋಚನೆ, ಜೊತೆಗೆ ಅಷ್ಟು ದಿನದ ಪ್ರೀತಿ ಅದನ್ನು ಹಿಂತೆಗೆಯುವಂತೆ ಮಾಡಿತ್ತು.


'ಸಂಸಾರ ಗುಟ್ಟು ವ್ಯಾಧಿ ರಟ್ಟು, ಎಂಬುದನ್ನು ಅರಿತಿದ್ದ ಶೈಲೆ ಯಾರೊಡನೆಯೂ ತನ್ನ ಮನಸ್ಸಿನ ನೋವನ್ನು ಬಿಚ್ಚಿಟ್ಟಿರಲಿಲ್ಲ. ಅತ್ಯಾಪ್ತಳಾಗಿದ್ದ ನಾದಿನಿಯೂ ಕೆದಕಲು ಹೋಗಿರಲಿಲ್ಲ. ಸುವರ್ಣ ಅತ್ತಿಗೆಯ ನೋವನ್ನು ಊಹಿಸಿದಳಾದರೂ... ಆಕೆಗೆ ಏಕಾಂತವನ್ನು ಒದಗಿಸಿ ಕೊಟ್ಟಳು.


ದಿಂಬಿನಡಿ ಸಿಕ್ಕ ಆನಂದನ ಕೈಬರಹದ ಪತ್ರ ಶೈಲೆಗೆ ಎದೆಭಾರವನ್ನೆಲ್ಲಾ ಇಳಿಸಿ ಮನಸನ್ನು ಹಗುರಾಗಿಸಿತು. 


"ಇರುಳಿನ ದುಃಖದ ಬೇಗೆ ಇಷ್ಟು ಲಘುವಾಗಿ, ಬಿಳಿಯ ಮೋಡವಾಗಿ ತೇಲಿ ಹೋದೀತೆಂದು ಶೈಲೆ ಭಾವಿಸಿರಲಿಲ್ಲ."


ಶೈಲೆಯ ಮನದ ನೋವು ಕಳೆದು ಹಗುರಾದಂತೆ ಈ ಕತೆಯ ಓದು ನಮ್ಮನ್ನೂ ಹಗುರಾಗಿಸುತ್ತದೆ.


ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೂ ನಂತರ ಹಮ್ಮ-ಬಿಮ್ಮು ಇಟ್ಟುಕೊಳ್ಳದಂತೆ, ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಬೇಡಿದ ಆನಂದನ ಗುಣ.. ಜೊತೆಗೆ ತನ್ನ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಆನಂದನನ್ನು ಮತ್ತೊಬ್ಬರ ಮುಂದೆ ಸಣ್ಣವನಾಗಿಸದ ಶೈಲೆಯ ಗುಣ ಇದ್ದಾಗ ಅಂತಹ ದಾಂಪತ್ಯಗಳು ದೀರ್ಘಕಾಲ ಸಾಗುವ ಚಿತ್ರಣ ಈ ಕಥೆಯ ಮೂಲಕ ವ್ಯಕ್ತವಾಗಿದೆ.


ಈ ಕಥೆ ಕೆ. ನರಸಿಂಹ ಮೂರ್ತಿಯವರ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಕನ್ನಡದ ಅತ್ಯುತ್ತಮ ಸಣ್ಣ ಕಥೆಗಳು ಮೂರನೆಯ ಸಂಪುಟದಲ್ಲಿ ನನ್ನ ಓದಿಗೆ ಸಿಕ್ಕಿತು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ