ಸೋಮವಾರ, ಏಪ್ರಿಲ್ 27, 2026

ಬದುಕಿನಲ್ಲಿ ಅರಳಿದ ಹೂವು (ಪುಸ್ತಕ ಯಾನ - 431)


ಕಾದಂಬರಿಯ ಶೀರ್ಷಿಕೆ : ಬದುಕಿನಲ್ಲಿ ಅರಳಿದ ಹೂವು

ಲೇಖಕರು : ವಿಶಾಲಾಕ್ಷಿ ದಕ್ಷಿಣಾಮೂರ್ತಿ


'ಜೀವನ ಚೈತ್ರ' ಚಲನಚಿತ್ರದ ಮೂಲ ಕಾದಂಬರಿ 'ವ್ಯಾಪ್ತಿ-ಪ್ರಾಪ್ತಿ' ಬರೆದ ವಿಶಾಲಾಕ್ಷಿ ದಕ್ಷಿಣಾಮೂರ್ತಿಯವರು 1993ರ ಜನವರಿಯ ತುಷಾರಕ್ಕಾಗಿ ಬರೆದು ಕೊಟ್ಟಿರುವ ವಿಶೇಷ ಕಾದಂಬರಿ ಇದು.


ಕಾದಂಬರಿಯ ಶೀರ್ಷಿಕೆ 'ಬದುಕಿನಲ್ಲಿ ಅರಳಿದ ಹೂವು' ಸೂಚಿಸುವಂತೆ.. ಮಾಗುತ್ತಾ ಹೋಗುವ ಹೆಣ್ಣೊಬ್ಬಳು ತಾಯ್ತನದ ಸವಿಯಲ್ಲಿ ಮಗುವನ್ನು ಕಾಪಾಡುವುದು ತನ್ನ ಮೊದಲ ಆದ್ಯತೆ ಎಂಬಂತೆ ಬದುಕುವ ಚಿತ್ರಣ ಇಲ್ಲಿದೆ. ದ್ವೇಷ, ಅಸೂಯೆ, ಕುಟಿಲತನ ಯಾವುದೂ ಇಲ್ಲದ ಈ ಕಾದಂಬರಿಯ ಓದು ಹಿತ ನೀಡುತ್ತದೆ. ಊರಿನವರ ಹಿತವಾದ, ಪರೋಪಕಾರದ ನಡವಳಿಕೆ ಖುಷಿ ತರುತ್ತದೆ.


'ಗಿರಿಜೆ ಚಿನ್ನದಂಥಾ ಹುಡುಗಿ !' ಎಂದು ಅವಳ ಸೋದರತ್ತೆ ಭವಾನಮ್ಮ ಹೇಳಿದ ಮಾತು ನಿಜವೆನಿಸಿತ್ತು ಭಾಸ್ಕರನಿಗೆ.


"ಬರಿಯ ಚಿನ್ನವಲ್ಲ. ಚೊಕ್ಕ ಚಿನ್ನ, ತುಂಬಾ ಮೃದು. ಯಾವ ಆಕಾರಕ್ಕೆ ಬೇಕಾದರೂ ಸುಲಭವಾಗಿ ಬಗ್ಗಿಸಿಕೊಳ್ಳಬಹುದು." ಎಂದು ನಕ್ಕಿದ್ದ.


ಭಾಸ್ಕರ ಗಿರಿಜೆಯನ್ನು ಮದುವೆಯಾಗಿ ಹೊಸದಾಗಿ ಸಂಸಾರ ಹೂಡುವಾಗ ಅಷ್ಟಿಷ್ಟು ಸಾಮಾನುಗಳನ್ನು ಕೊಂಡು ತಂದಿದ್ದ. ಗಿರಿಜೆಯೇ ಅಣಿಯಾಗಿ ಜೋಡಿಸಬಲ್ಲಳೆಂಬ ನಿರೀಕ್ಷೆ ಸುಳ್ಳಾಗಿತ್ತು. ಆದರೆ, ಅವಳನ್ನು ಅಂದು ಆಡಿ, ಮಾಡಿ ನೋಯಿಸದೆ ನವಿರಾಗಿ ತಿದ್ದುವ ಪ್ರಯತ್ನದಲ್ಲಿ ಆತ ಗೆದ್ದಿದ್ದ.


ಮನೆಗೆ ಬಂದಿದ್ದ ವೆಂಕಮ್ಮನವರಿಗೆ ಮೇಷ್ಟ್ರೇ ಮನೆಯನ್ನು ಅಣಿ ಮಾಡುತ್ತಿರುವುದು, ಗಿರಿಜೆಯನ್ನು ಕಾಳಜಿ ಮಾಡುವುದರ ಜೊತೆಗೆ ಹೊರಡುವಾಗ ವೆಂಕಮ್ಮನವರಿಗೆ ಕುಂಕುಮ ತಂದುಕೊಡಲು ಸೂಚಿಸಿದ್ದು ಎಲ್ಲವೂ ಅಚ್ಚರಿ ಅಷ್ಟೇ ಅಲ್ಲದೆ ಹಿಗ್ಗು ಕೂಡ ತಂದಿತ್ತು.  ಪುಟ್ಟ ಸಂಸಾರದ ಅಕ್ಕರೆಯನ್ನು ತಮ್ಮದೇ ಮಾತಿನಲ್ಲಿ ಅಕ್ಕ-ಪಕ್ಕದವರಿಗೆ, ಮನೆಯವರಿಗೂ ವರ್ಣಿಸಿದ್ದರು. 


ಊರಿನವರು ಸ್ನೇಹಮಯಿಗಳು. ಸಲುಗೆ, ಸರಳತೆಯಿಂದ ಗಿರಿಜೆಯನ್ನು ಕಾಣುತ್ತಿದ್ದರು. ವೆಂಕಟಲಕ್ಷ್ಮಿ ಹಾಗೂ ಶಾಮಣ್ಣ ದಂಪತಿಗಳು ಕಾಶಿ ಸಮಾರಾಧನೆಗೆ ಕರೆಯಲು ಬಂದ ಸಂದರ್ಭ.. ಆಕೆಯನ್ನು ಪ್ರೀತಿಯಿಂದ ಕಂಡದಷ್ಟೇ ಅಲ್ಲದೆ ಅವರ ಮನೆಗೆ ಹೋದಾಗಲೂ ಭಾಸ್ಕರ ಹಾಗೂ ಗಿರಿಜೆಯರನ್ನು ನೋಡಿಕೊಂಡ ರೀತಿ ಆಪ್ತ ಭಾವ ಹುಟ್ಟಿಸುತ್ತದೆ.


ಭಾಸ್ಕರ ಗಿರಿಜೆಯನ್ನು ಕಂಡ ಮೊದಲ ನೋಟದಲ್ಲಿಯೇ ಮರುಳಾಗಿ ಅವಳನ್ನು ಮದುವೆಯಾಗುವೆನೆಂದು ನಿರ್ಧರಿಸಿ ತನ್ನ ತಾಯಿ ಅಚ್ಚಮ್ಮನವರಿಗೆ ಹೇಳಿದಾಗ

"ಗಿರಿಜೆ ಓದಿದವಳಲ್ಲ, ಅವರ ಮನೆಯವರು ಅನುಕೂಲಸ್ಥರೂ ಅಲ್ಲ. ಏಕಾದಶಿ ನನಗೆ ಶಿವರಾತ್ರಿ ಬಂದಂತೆ ಎಂಬ ಹಾಗೆ, ಆ ಮನೆಯಲ್ಲಿಯೂ ಬಡತನ ಈ ಮನೆಯಲ್ಲಿಯೂ ಬಡತನ." ಎಂದು ಪೇಚಾಡಿಕೊಂಡಿದ್ದರು

"ಅಲ್ಲೂ ಬಡತನ, ಇಲ್ಲೂ ಬಡತನ, ಹುಚ್ಚಿಗೆ ಅತ್ತೆ ಮನೆಯೂ ಒಂದೇ ತವರು ಮನೆಯೂ ಒಂದೇ ಅಂತ ಆಗಲ್ವೇನೋ" ಎಂದು ಹೇಳಿದ್ದರು.


ಗಿರಿಜೆ ತಬ್ಬಲಿ, ಈಗ ತಾನು ಮದುವೆಯಾಗದಿದ್ದರೆ ಅನ್ಯಾಯವಾಗಿ ಎರಡನೆಯದ್ದೋ ಮೂರನೆಯದ್ದೋ ಮದುವೆಗೆ ಆಕೆಯನ್ನು ಕೊಟ್ಟು ಅವಳ ಬಾಳನ್ನೇ ಹಾಳು ಮಾಡುತ್ತಾರೆಂದು.. ಅಪ್ಪ-ಅಮ್ಮ ಇಲ್ಲದ ಅವಳನ್ನು ಅಲ್ಲಿಗಿಂತ ಇಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಸಮಾಧಾನಿಸಿದ ಭಾಸ್ಕರನ ಮಾತು ಆತನ ತಂದೆಯ ಪರೋಪಕಾರದ ಗುಣವನ್ನು ನೆನಪಿಸಿತ್ತು ಅಚ್ಚಮ್ಮನವರಿಗೆ.


ಸುಖವಾಗಿ ಸಾಗುತ್ತಿದ್ದ ಗಿರಿಜೆ ಹಾಗೂ ಭಾಸ್ಕರರ ಸಂಸಾರದಲ್ಲಿ ದಿನೇದಿನೇ ಗಿರಿಜೆ ಹೆಚ್ಚು ಪಕ್ವವಾಗುತ್ತಿದ್ದಳು. ಹೀಗೆಯೇ ಒಂದು ದಿನ ಮೆಲ್ಲಗೆ ಕಾಲೆಳೆದುಕೊಂಡು ಹೋಗುತ್ತಿದ್ದ ಪದ್ಮಾವತಿ ಆಕೆಗೆ ದುರ್ಗದ ಬೆಟ್ಟ ನೋಡಲು ಹೋಗಿದ್ದವಳು ಅಲ್ಲಿನ ಬಸವನ ಬುರುಜು, ಬತೇರಿ, ಒನಕೆ ಕಿಂಡಿ, ಅರಮನೆ ಪಾಳು, ಗೋಪಾಲಸ್ವಾಮಿ ಹೊಂಡ, ಎಣ್ಣೆ ಕೊಳ, ತುಪ್ಪದ ಕೊಳ, ಹನುಮನ ದೊಣೆ ಎಲ್ಲದರ ಆಸೆ ಹುಟ್ಟಿಸಿದಳು. ಭಾಸ್ಕರ ಆಕೆಯನ್ನು ಬೆಟ್ಟ ಸುತ್ತಲೂ ಕರೆದುಕೊಂಡು ಹೋದದ್ದೂ ಆಯ್ತು. ಬೆಟ್ಟಕ್ಕೆ ಹೋಗುವ ಸಂದರ್ಭದಲ್ಲಿ ಬಸ್ಸಿಗೆಂದು ನಿಂತಾಗಲೂ ಊರಿನ ಜನರ ಪರೋಪಕಾರದ ಚಿತ್ರಣ ಕಾಣಿಸುತ್ತದೆ. ಕೆಂಚಪ್ಪನವರು ಅವರನ್ನು ಬಸ್ಸಿಗೆ ಹತ್ತಿಸಿ, ಸೀಟು ಮಾಡಿದ್ದು ಮಾತ್ರವಲ್ಲದೆ.. ಟಿಕೆಟ್ ಕೊಂಡು, ಕಿತ್ತಲೆ ಹಣ್ಣು ತಂದುಕೊಡುವ ಸಂದರ್ಭ ಮೇಷ್ಟ್ರ ಮೇಲಿನ ಅಕ್ಕರೆ ಹೇಗಿದೆ ಎಂದು ತೋರುತ್ತದೆ.


ದುರ್ಗಕ್ಕೆ ಹೋಗುವ ದಾರಿಯಲ್ಲಿ ರಂಗಯ್ಯನ ಬಾಗಿಲು, ಸಂಪಿಗೆ ಸಿದ್ದೇಶ್ವರನ ದೇವಸ್ಥಾನ ದರ್ಶನ ಎಲ್ಲಾ ಮುಗಿದ ನಂತರ ಅವಳು ಆಸೆ ಪಟ್ಟ ಕೆಂಡಸಂಪಿಗೆ ಕೊಯ್ದು ಕೊಟ್ಟು ಹಿಡಿಂಬೇಶ್ವರನ ದೇವಾಲಯ, ಗೋಪಾಲಸ್ವಾಮಿ ಹೊಂಡ, ಏಕನಾಥೇಶ್ವರಿ ದೇವಾಲಯ, ಗೋಪಾಲಕೃಷ್ಣನ ದೇವಾಲಯ, ಭೈರವಿ ವೆಂಕಟಸುಬ್ಬಯ್ಯನವರ ಕಲ್ಲುಹಾಸು ಹೀಗೆ ಎಲ್ಲದರ ದರ್ಶನವಾಗುತ್ತದೆ. 


ಭಾಸ್ಕರನ ಗೆಳೆಯ ವಾಸು ಎದುರಾಗಿ ಬಹಳ ಕಾಲದ ನಂತರ ಸಿಕ್ಕ ಭಾಸ್ಕರನನ್ನು ದಂಪತಿ ಸಮೇತವಾಗಿ ಮನೆಗೆ ಕರೆದೊಯ್ಯುತ್ತಾನೆ. ಅಲ್ಲಿ ಶ್ರೀಪಾದಾಚಾರ್ಯರು ಹಾಗೂ ಕಮಲಬಾಯಿಯವರ ಆಪ್ತ ಆತಿಥ್ಯವೂ ಸಿಗುತ್ತದೆ. ವಾಸುವಿನ ಹೆಂಡತಿ ಜಲಜಾಕ್ಷಿ ಗಿರಿಜೆಗೆ ಗೆಳತಿಯಾಗುತ್ತಾಳೆ. ಆಕೆ ತನ್ನ ಬಸಿರಿನ ದಿನಗಳು, ಬಯಕೆಯ ಸಂಕಟ, ಹೆರಿಗೆಯ ವಿಚಾರಗಳು ಎಲ್ಲವನ್ನೂ ಅವಳೊಡನೆ ಹಂಚಿಕೊಂಡಾಗ ಸುಪ್ತವಾಗಿದ್ದ ಆಸೆಗಳು ಗಿರಿಜೆಯಲ್ಲಿ ಒಂದು ರೂಪ ತಳೆಯುತ್ತವೆ. 


ಮುಂದೆ ಗಿರಿಜೆ ಹಾಗೂ ಭಾಸ್ಕರರ ದಾಂಪತ್ಯಕ್ಕೆ ಚೊಚ್ಚಲ ಮಗುವಾಗಿ ಜಯರಾಮ ಜನಿಸುತ್ತಾನೆ. ಇಷ್ಟರಲ್ಲಿ ಮನೆಯ ವಾತಾವರಣದಲ್ಲಿ ಕೊಂಚ ಸಿರಿವಂತಿಕೆ ಸೇರಿರುವುದನ್ನು ಭಾಸ್ಕರ ಗಿರಿಜೆಗೆ ಒಡವೆ ಮಾಡಿಸಿಕೊಡುವ ಚಿತ್ರಣದಿಂದ ಕಾಣಬಹುದು.


ಬೆಳೆಯುತ್ತಿದ್ದ ಜಯರಾಮನ ಬಾಲಲೀಲೆಗಳು ಗಿರಿಜೆಗೆ ಸಂತಸ ತರತಿದ್ದವು. ಆದರೆ, ಆತನಿಗೆ ಕೊಂಚ ಹುಷಾರು ತಪ್ಪಿದರೂ ಆತಂಕ. ಒಮ್ಮೆಯಂತೂ ಜ್ವರದ ತಾಪ ಏರಿ, ಕೈಕಾಲು ಅದುರತೊಡಗಿ, ಕಣ್ಣುಗುಡ್ಡೆಗಳು ಮೇಲಕ್ಕೆ ಸಿಕ್ಕಿಕೊಂಡು ಬಾಯಿಯಿಂದ ಬುರುಗು ಬಂದಿತ್ತು. ಮಗು ಪ್ರಜ್ಞಾಹೀನವೂ ಆಗಿತ್ತು. ಆಗಲಂತೂ ಗಿರಿಜೆಯ ಪಾಡು ಕೇಳುವುದೇ ಬೇಡ. ಇರುವ ಒಬ್ಬ ಮಗುವನ್ನೇ ಕಾಪಾಡಿದರೆ ಸಾಕು ಎಂದು ನಿರ್ಧಾರ ಮಾಡಿ ಬಿಟ್ಟಿದ್ದಳು. ವೈದ್ಯರು ಹುಷಾರಿನಿಂದ ನೋಡಿಕೊಳ್ಳಲು ಹೇಳಿದರೂ ಆಕೆಗೆ ಸಮಾಧಾನವಿಲ್ಲ. ದೇವರ ಮೊರೆಯನ್ನು ಹೊಕ್ಕಾಗಿತ್ತು ಅವಳು. ಜಯರಾಮ ಚೇತರಿಸಿಕೊಂಡು ಆರೋಗ್ಯವಂತನಾದರೂ ಆಕೆಯ ಆತಂಕ ನಿಂತಿರಲಿಲ್ಲ.


ವೈಜ್ಞಾನಿಕತೆ, ಅವೈಜ್ಞಾನಿಕತೆಗಳ ಎಲ್ಲೆಗಳನ್ನು ಮೀರಿ ಗಿರಿಜೆಯ ಮಾತೃವಾತ್ಸಲ್ಯ.. ತಾರ್ಕಿಕ ವಿಚಾರಗಳನ್ನು ಒಪ್ಪಿಕೊಂಡು, ಕಂದನ ಹಂಬಲಕ್ಕೆ ತಾಯ್ತನದಲ್ಲಿ ಮಾಡಿಸುವ ಒಳ್ಳೆಯ ಕಾರ್ಯಗಳನ್ನೆಲ್ಲ ಇಲ್ಲಿ ಸೊಗಸಾಗಿ ತೆರೆದಿಟ್ಟಿದ್ದಾರೆ ಲೇಖಕಿ. 


ಇದು ಆಗಿನ ಒಂದು ವಾಸ್ತವದ ತುಣುಕನ್ನು ನಮ್ಮೆದುರು ಬಿಡಿಸಿಟ್ಟಂತೆ ಕಾಣುತ್ತದೆ. ಸುಂದರವಾದ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ