ಸೋಮವಾರ, ಏಪ್ರಿಲ್ 27, 2026

ಬಂಗಾರದ ಬಲೆ (ಪುಸ್ತಕ ಯಾನ - 433)



ಪುಸ್ತಕದ ಶೀರ್ಷಿಕೆ : ಬಂಗಾರದ ಬಲೆ 

ಲೇಖಕರು : ಎ. ಪಂಕಜ

ಪ್ರಕಾಶಕರು : ಸಾಹಿತ್ಯ ನಂದನ ಪ್ರಕಾಶನ

ಪ್ರಥಮ ಮುದ್ರಣ : 1979

ಮೂರನೇ ಮುದ್ರಣ : 2009 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 144

ಬೆಲೆ : 70 ರೂ. 


ಹೆಣ್ಣೊಬ್ಬಳ ಆಂತರ್ಯದ ತೊಳಲಾಟ ಜೊತೆಗೆ ಮನೆಯಲ್ಲಿನ ಸಂದರ್ಭ, ಅಸಡ್ಡೆ ಹಾಗೂ ಅತಿ ನಂಬಿಕೆಯ ಜೊತೆಗೆ ಪರಿಪಕ್ವವಿಲ್ಲದ ತೀರ್ಮಾನಗಳಿಂದ ತಾನು ತೋಡಿದ ಹಳ್ಳಕ್ಕೆ ತಾನೇ ಮುಗ್ಗರಿಸಿ ಬಿದ್ದು ಮುಂದಿನ ದಾರಿ ಕಾಣದೆ ಹತಾಶೆ ಹಾಗೂ ನೋವಿನ ತೊಳಲಾಟದಲ್ಲಿ ಬದುಕನ್ನು ಬೇರೆಯದೇ ಹಾದಿಗೆ ಕೊಂಡು ಹೋದ ಇಂದಿರಾಳ ಕಥಾನಕ ಇಲ್ಲಿದೆ. ಕಾದಂಬರಿಯ ಅಂತ್ಯ ಇನ್ನೂ ಕಾಡುತ್ತಲೇ ಇದೆ. 


ಜಾನಕಮ್ಮ ಹಾಗೂ ಶ್ಯಾಮರಾಯರು ದಂಪತಿಗಳಿಗೆ ಮೂವರು ಮಕ್ಕಳು. ರಾಯರು ರೆವೆನ್ಯೂ ಇಲಾಖೆಯಲ್ಲಿ ಗುಮಾಸ್ತರಾಗಿದ್ದವರು. ಮಾಸಿಕ ವೇತನದ ಜೊತೆಗೆ ಮೇಲು ಸಂಪಾದನೆ ಚೆನ್ನಾಗಿಯೇ ಇತ್ತು. ಮನೆಯಲ್ಲಿ ಜಾನಕಮ್ಮನವರ ಸ್ವಭಾವ ವಿಚಿತ್ರ. ಬೇರೆಯವರಿಗೆ ಉಪದೇಶ ನೀಡುವುದನ್ನು ತಾವು ಮಾತ್ರ ಪಾಲಿಸುತ್ತಿರಲಿಲ್ಲ. ಮಕ್ಕಳ ಮೇಲೆ ರೇಗುವುದು, ಗಂಡನನ್ನು ಎದುರಿಸುವುದು, ಸದಾ ಗೊಣಗುವುದು ಹೀಗೆಯೇ.. 


 ಗಂಡು ಮಗುವಿನ ಆಸೆಯಲ್ಲಿದ್ದ ಜಾನಕಮ್ಮನಿಗೆ ಚೊಚ್ಚಲ ಮಗು ಹೆಣ್ಣಾಗಿದ್ದು ನಿರಾಸೆ ತಂದಿತ್ತಾದರೂ ಆ ಮಗು ಪುಷ್ಪಳನ್ನು ಚೆನ್ನಾಗಿಯೇ ನೋಡಿಕೊಂಡರು. ಎರಡನೆಯ ಮಗು ಇಂದಿರಾಳ ಹುಟ್ಟಿನಲ್ಲಿ ಮತ್ತಷ್ಟು ನಿರಾಸೆಯಾಗಿದ್ದು ಮಗುವನ್ನು ಪೋಷಿಸಲು ಆಸಕ್ತಿ ತೋರಲಿಲ್ಲ. ಆದರೆ, ತಂದೆಯ ಪ್ರೀತಿಯಲ್ಲಿ ತಾಯಿಯ ಕಡೆಗಣಿಸುವಿಕೆಯಲ್ಲಿ ಬೆಳೆದ ಇಂದಿರಾಳಿಗೆ ತಮ್ಮ ಲಕ್ಷ್ಮಣ ಬಂದಾಗ ಆತನಿಗೂ, ತನಗೂ ತಾಯಿ ತೋರುತ್ತಿರುವ ಭೇದ-ಭಾವ ಹಾಗೂ ಅಸಡ್ಡೆಯ ಭಾಗಗಳು ಢಾಳಾಗಿಯೇ ಕಾಣತೊಡಗಿದವು. 


ಮೊದಲನೆಯ ಮಗಳು ಪುಷ್ಪಳಿಗೆ ಬೇಗ ವಿವಾಹವಾದರೆ ಇಂದಿರಾಳ ವಿವಾಹದ ಸಂದರ್ಭದಲ್ಲಿಯ ಕಾಲಘಟ್ಟವೂ ಬದಲಾಗಿತ್ತು. ಜಾಣೆಯಾಗಿದ್ದ ಇಂದಿರಾಳನ್ನು ತಂದೆ ಓದಿಸಿದರು. ಓದಿಸಿದಷ್ಟೇ ಅಲ್ಲದೆ ಆಕೆ ಕೆಲಸಕ್ಕೆ ಹೋಗಲು ಸಹ ಒಪ್ಪಿದರು. ರೂಪವಂತೆ ಹಾಗೂ ಜಾಣೆಯಾಗಿದ್ದ ತನ್ನ ಮಗಳನ್ನು ಯಾರಾದರೂ ಕಣ್ಮುಚ್ಚಿ ಮದುವೆಯಾಗುತ್ತಾರೆ ಎಂದು ನಂಬಿದ್ದವರಿಗೆ ವರದಕ್ಷಿಣೆಯ ಭೂತ ಕಾಡತೊಡಗಿತ್ತು. ಕೆಲಸಕ್ಕೆ ಹೋಗುವ ಆಸಕ್ತಿ ತೋರಿದ ಇಂದಿರಾಳಿಗೆ ಹಳೆಯ ಪರಿಚಿತರನ್ನು ಹಿಡಿದು ಸೆಂಟ್ರಲ್ ಕಾಲೇಜಿನ ಲೈಬ್ರರಿಯನ್ ಆಗಿ ಕೆಲಸ ಕೊಡಿಸಿದರು. 


ಓದುವುದರಲ್ಲಿ, ನಡತೆಯಲಿ ಹಾಗೂ ಕೆಲಸಕ್ಕೆ ಸೇರುವಾಗ, ವಿವಾಹ ತಡವಾಗಿದ್ದಕ್ಕೆ ಹೀಗೆ ಪ್ರತಿಯೊಂದರಲ್ಲಿಯೂ ಇಂದಿರಾ ಕುರಿತು ಜಾನಕಮ್ಮ ಕೊಂಕು ತೆಗೆಯುತ್ತಿದ್ದರು. ಅಲ್ಲದೆ, ಅದೇ ಸಮಯಕ್ಕೆ ಲಕ್ಷ್ಮಣನಿಗೆ ಓದಿಗೆ ನೀಡುತ್ತಿದ್ದ ಪ್ರೋತ್ಸಾಹ ಜೊತೆಗೆ ಮಗ ಎಂದು ಆತನನ್ನು ತಲೆಯ ಮೇಲೆ ಕೂರಿಸಿಕೊಳ್ಳುತ್ತಿದ್ದ ವರ್ತನೆಗಳು ಹಿಂದಿರಾಳಿಗೆ ಕ್ರಮೇಣ ತಾನು ತಾಯಿಗೆ ಬೇಡದವಳು ಎನ್ನುವ ಭಾವವನ್ನು ಹುಟ್ಟಿಸಿದಷ್ಟೇ ಅಲ್ಲದೆ ತಾನು ಏನೇ ಸಾಧನೆ ಮಾಡಿದರು ತಾಯಿಯನ್ನು ಒಪ್ಪಿಸಲಾಗದು ಎಂಬ ಅರಿವಾಗಿತ್ತು.


ಮನೆಯಲ್ಲಿ ಸಿಗದ ಆ ಪ್ರೀತಿ ರಾಜಶೇಖರನಿಂದ ಸಿಕ್ಕಾಗ ಅತ್ತ ಆಕರ್ಷಿತಳಾಗಿದ್ದಳು ಇಂದಿರಾ. ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ರಾಜಶೇಖರ ಅವಳು ಹತ್ತುತ್ತಿದ್ದ ಬಸ್ ನಿಲ್ದಾಣದಲ್ಲಿಯೇ ಹತ್ತಿ ಅವಳು ಕೆಲಸಕ್ಕೆ ಹೋಗುತ್ತಿದ್ದ ನಿಲ್ದಾಣದಲ್ಲಿ ಇಳಿಯುತ್ತಿದ್ದ. ಇಬ್ಬರೂ ನೋಡಿ ಪರಿಚಿತರಷ್ಟೇ ಆಗಿದ್ದವರು. ಇಂದಿರಾ ಒಮ್ಮೆ ಬಸ್ ರಷ್ ನಲ್ಲಿ ಪರ್ಸು ಕಳೆದುಕೊಂಡಾಗ ಅದು ಆತನಿಗೆ ಸಿಕ್ಕಿ ಇಬ್ಬರ ಪರಿಚಯ ಕ್ರಮೇಣ ಬಿಟ್ಟಿರಲಾರದ ಪ್ರೇಮಕ್ಕೆ ತಲುಪಿತು. ಇದಕ್ಕೆ ಮುಂದಡಿ ಇಟ್ಟದ್ದು ರಾಜಶೇಖರನೇ..


ಇವರ ಓಡಾಟ ಎಲ್ಲೆ ಮೀರಿರಲಿಲ್ಲ. ಜೊತೆಗೆ ಇಂದಿರಾ ರಾಜಶೇಖರನಿಗೆ ಆ ಸಲುಗೆಯನ್ನು ನೀಡಿರಲಿಲ್ಲ. ಆದರೆ, ಇವರಿಬ್ಬರ ಓಡಾಟದ ಕುರಿತು ಶ್ಯಾಮರಾಯರಿಗೆ ಅನಾಮಧೇಯ ಪತ್ರವೊಂದು ತಲುಪಿತ್ತು. ಅದರಲ್ಲಿ ರಾಜಶೇಖರನ ನಡತೆ ಸರಿಯಿಲ್ಲವೆಂದು ನಮೂದಾಗಿತ್ತು.


ಅಷ್ಟರಲ್ಲಾಗಲೇ ರಾಜಶೇಖರ ಹಳ್ಳಿಯಲ್ಲಿದ ತನ್ನ ತಂದೆ-ತಾಯಿ ರಾಮಾಚಾರರು ಹಾಗೂ ಗೌರಮ್ಮನವರ ಬಳಿ ಇಂದಿರಾಳನ್ನು ಕರೆದುಕೊಂಡು ಹೋಗಿ ಮದುವೆಗೆ ಒಪ್ಪಿಗೆ ಪಡೆದಿದ್ದ. ಇದ್ದೊಬ್ಬ ಮಗ ಈಗಲಾದರೂ ಮದುವೆಗೆ ಒಪ್ಪಿದನಲ್ಲ ಎಂದೂ, ಸುಶಿಕ್ಷಿತ ಹಾಗೂ ಸುಸಂಸ್ಕೃತ ಇಂದಿರಾಳ ನಡತೆಯು ಇಷ್ಟವಾಗಿ ರಾಮಾಚಾರರು ತಾವೇ ಶ್ಯಾಮರಾಯರಿಗೆ ಪತ್ರ ಬರೆದರು.


ಜಾತಿ ಒಂದೇ ಆಗಿದ್ದರೂ.. ಅದರಲ್ಲೂ ಮೇಲು-ಕೀಳೇಂದು ಇಂದಿರಮ್ಮ ಕೊಂಕು ತೆಗೆದು ಇಷ್ಟವಿಲ್ಲದ ಮದುವೆಯನ್ನು ಹೇಗೋ ಮಾಡಿ ಮುಗಿಸಿದರು. ಅದಾದ ನಂತರ ಇಂದಿರಾ ಮತ್ತೆ ಎಂದಿಗೂ ತಾಯಿಯ ಮನೆಗೆ ಹೋಗಲು ಇಷ್ಟಪಡಲಿಲ್ಲ. ಶ್ಯಾಮರಾಯರೇ ಬಂದು ಮಗಳು-ಅಳಿಯನನ್ನು ನೋಡಿ ಹೋಗುತ್ತಿದ್ದರು.


ಮದುವೆಗೆ ಮುನ್ನವೇ ರಾಜಶೇಖರ ತನಗೆ ಹಳೆಯ ಗೆಳತಿಯರ ಸ್ನೇಹವಿತ್ತೆಂದು ಹೇಳಿದ್ದನು. ಇಂದಿರಾ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳದೆ ತಮ್ಮ ವಿವಾಹದ ನಂತರ ಅದಾವುದನ್ನೂ ಮುಂದುವರಿಸಬಾರದೆಂದು ಕಟ್ಟುನಿಟ್ಟಾಗಿಯೇ ಎಚ್ಚರಿಸಿದ್ದಳು. ಬೇರಾವ ಹೆಣ್ಣನ್ನೂ ಮದುವೆಯಾಗಲು ಮುಂದಾಗದ ರಾಜಶೇಖರನ ಬದುಕಿನಲ್ಲಿ ಹೆಂಡತಿಯ ಸ್ಥಾನ ಪಡೆಯಲು ಹೊರಟದ್ದು ಇಂದಿರಾ ಮಾತ್ರ. ಅದು ಅವಳಿಗೆ ಮತ್ತಷ್ಟು ವಿಶ್ವಾಸ ತಂದಿತ್ತು. ಹಿಂದಿನದ್ದಾವುದೂ ಮರುಕಳಿಸಲಾರದೆಂದು ನಂಬಿದ್ದಳು ಅವಳು.


ಮಣಿ ಎಂಬಾಕೆ ಬಂದು ತಾನು ಅವಿವಾಹಿತೆಯೆಂದು, ಜೊತೆಗೆ ತನ್ನ ಹೊಟ್ಟೆಯಲ್ಲಿರುವ ಐದು ತಿಂಗಳ ಮಗುವಿಗೆ ರಾಜಶೇಖರನೇ ತಂದೆ ಎಂದು ಹೇಳಿದಾಗ ಇಂದಿರಾ ಅದನ್ನು ಹೇಗೆ ಸ್ವೀಕರಿಸಿದಳು? ರಾಜಶೇಖರನ ಮೇಲೆ ಇಟ್ಟಿದ್ದ ನಂಬಿಕೆ, ಪ್ರೀತಿ ಅವನನ್ನು ಆ ಕಷ್ಟದಿಂದ ಪಾರು ಮಾಡಲು ಪ್ರೇರೇಪಿಸಿದಾಗ ಇಂದಿರಾ ತೆಗೆದುಕೊಂಡ ನಿರ್ಧಾರವೇನು..? ಮಣಿಯ ಪ್ರಸಂಗ ಅವಳ ಮನಸ್ಸಿನ ಮೇಲೆ ಯಾವ ರೀತಿಯ ಘಾಸಿ ಮಾಡಿತು..?


ಬಸುರು ಹಾಗೂ ಬಾಣಂತನದ ಸಮಯದಲ್ಲಿ ಅತ್ತೆಯೇ ತಾಯಿಗಿಂತ ಹೆಚ್ಚಾಗಿ ನೋಡಿಕೊಂಡು ತಾಯಿ ಜೊತೆಗಿಲ್ಲದ ಭಾವವನ್ನು ಇಂದಿರಾಳಿಗೆ ನೀಗಿಸಿದರು. ಮಗಳು ಲಕ್ಷ್ಮಿ ಇಂದಿರಾ ಹಾಗೂ ರಾಜಶೇಖರನ ಬಾಳಿನಲ್ಲಿ ಹೊಸ ಸಂತಸವನ್ನೇ ತಂದಳಾದರೂ.. ಮತ್ತೆ ಕೆಲಸಕ್ಕೆ ಹೋಗುವ ಇಂದಿರಾಳಿಗೆ ಎಲ್ಲವನ್ನು ನಿಭಾಯಿಸುವುದು ಕಷ್ಟವೇ ಆಯಿತು. ಆಗ ಆಕೆ ತೆಗೆದುಕೊಂಡ ನಿರ್ಧಾರವೇನು..? ಅದೇ ಅವಳಿಗೆ ಮುಳುವಾದದ್ದೇಗೆ..?


ಒಳ್ಳೆಯ ನಡತೆ, ಸಂಸ್ಕೃತಿ, ಗುಣ ಎಲ್ಲವೂ ಇದ್ದ ತಂದೆ-ತಾಯಿಗೆ ವ್ಯತಿರಿಕ್ತವಾಗಿದ್ದ ರಾಜಶೇಖರನ ನಿಜ ರೂಪ ಒಮ್ಮೊಮ್ಮೆ ಇಂದಿರಾಳ ಮುಂದೆ ಬಯಲಾಗುತ್ತಿದ್ದಾದರೂ ಆತನ ಮಾತುಗಳು ಮೋಡಿ ಹಾಕಿದಂತೆ, ಆಕೆ ಮಾಟಗಾರನ ಮಾಯಾಜಾಲಕ್ಕೆ ಸಿಕ್ಕಿ ಮಂತ್ರಮುಗ್ಧಳಾದಂತೆ ಎಲ್ಲಾ ಭಯ-ದುಃಖಗಳನ್ನು ಮರೆತು ಹಿಂದಿನದೆಲ್ಲವನ್ನೂ ಕ್ಷಮಿಸಿ ಆತನ ಜೊತೆ ಪ್ರೀತಿಯಿಂದ ಬದುಕಲು ಅಣಿಯಾಗುತ್ತಿದ್ದಳು.


ಆದರೆ, ಎಲ್ಲದಕ್ಕೂ ಒಂದು ಅಂತ್ಯ ಇದ್ದೇ ಇರುತ್ತದೆ. ಇಂದಿರಾ ಯಾವುದು ತನ್ನ ಜೀವನದಲ್ಲಿ ಬೇಡವೆಂದು ಆಶಿಸಿದ್ದಳೋ, ಅದಷ್ಟೂ ನಡೆಯಿತು. ರಾಜಶೇಖರ ಸಿಗರೇಟು, ಕುಡಿತ, ಹೆಣ್ಣು ಮೂರಕ್ಕೂ ಬಲಿಯಾಗಿದ್ದ. ಯಾವುದು ಅಸಹ್ಯ, ವ್ಯಭಿಚಾರ, ಮಹಾಪಾಪ, ಮಾಡಬಾರದೆಂದು ತಿಳಿದಿದ್ದಳೋ ಅಷ್ಟೂ ತನ್ನ ಮನೆಯಲ್ಲಿಯೇ ನಡೆದಾಗ ಘಾಸಿಯಾದ ಅವಳ ಮನಸ್ಸು ಚೇತರಿಸಿಕೊಳ್ಳಲು ಸಾಧ್ಯವೇ..?


ಚೇತರಿಸಿಕೊಳ್ಳಲು ಒಳ್ಳೆಯ ಆಸರೆಯೋ ಅಥವಾ ಮನ ಬಿಚ್ಚಿ ಮಾತಾಡಲು ಒಳ್ಳೆಯ ಸ್ನೇಹವೋ, ತವರಿನ ಆಸರೆಯೋ ಅವಳಿಗಿದ್ದಿದ್ದರೆ ಇಂದಿರಾಳ ಬದುಕು ಬೇರೆಯದ್ದೇ ಹಾದಿ ಹಿಡಿಯುತ್ತಿತ್ತೇನೋ.. ಆದರೆ, ಅವಳ ಬದುಕಲ್ಲಿ ಅಂತಹದ್ದಾವುದೂ ಘಟಿಸಲಿಲ್ಲ. ಅವಳ ಬಾಳಿನ ಸುಖದ ಕ್ಷಣಗಳೆಂದರೆ ವೈದೇಹಿಯ ಗೆಳೆತನ ಹಾಗೂ ಆಕೆಯ ಸ್ನೇಹ ಸಾಂಗತ್ಯ.


ಪಕ್ವವಾಗದ ಪ್ರೀತಿ, ಅತಿ ನಂಬಿಕೆ, ಮೋಸವನ್ನು ಮರೆತು ಹೊಸ ಬದುಕನ್ನು ಕಟ್ಟಿಕೊಳ್ಳಲು ಅಣಿಯಾಗುತ್ತಿದ್ದರೂ ಬದಲಾಗದ ರಾಜಶೇಖರ ಬಂಗಾರದ ಬಲೆಯಲ್ಲಿ ಆಕೆಯನ್ನು ವಿಲವಿಲನೆ ಒದ್ದಾಡಿಸುತ್ತಾನೆ. 


ಇಂದಿರಾಳ ಬದುಕು ಏನಾಯ್ತು ಓದಿ ನೋಡಿ. ಸಾವಿಗಿಂತಲೂ ಕ್ರೂರವಾದ ಆ ಬದುಕು ಹೇಗಿತ್ತು..?


ಹಿಂದಿನ ತಪ್ಪಿಗೆ ಪಶ್ಚಾತ್ತಾಪಪಟ್ಟು ಬದಲಾದರೆ ಮನುಷ್ಯ ಬದಲಾಗುತ್ತಾನೆ ಎನ್ನಬಹುದು. ಆದರೆ, ರಾಜಶೇಖರನ ಪಶ್ಚಾತ್ತಾಪ ಎಂದಿಗೂ ಪ್ರಾಯಶ್ಚಿತವಾಗಿರಲಿಲ್ಲ. 


ತನಗಿದ್ದ ಓದು, ಉದ್ಯೋಗ ಹಾಗೂ ಮಗು ಜೊತೆಗೆ ತಂದೆಯ ಆಸರೆ ಇವೆಲ್ಲವನ್ನೂ ಇಂದಿರಾ ಸಕಾರಾತ್ಮಕವಾಗಿ ಕಂಡಿದ್ದರೆ ಅಥವಾ ಅವಳ ಮಾನಸಿಕ ಸ್ಥಿತಿ ಅಷ್ಟು ದುರ್ಬಲರಾಗಿರದಿದ್ದರೆ ಅವಳಿಗೆ ಬೇರೆಯದ್ದೇ ಬಾಳು ಸಿಕ್ಕಿರುತ್ತಿತ್ತು ಎನ್ನಿಸಿತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ