ಪುಸ್ತಕದ ಶೀರ್ಷಿಕೆ : ಕಡಲು
ಲೇಖಕರು : ಹೆಚ್. ನಾಗವೇಣಿ
ಪ್ರಕಾಶಕರು : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಪ್ರಥಮ ಮುದ್ರಣ : 1994
ಪುಟಗಳು : 28
ಹೆಚ್. ನಾಗವೇಣಿಯವರು ಇಲ್ಲಿ ನಮಗೆ ಕಡಲಿನ ಸಂಪೂರ್ಣ ದರ್ಶನವನ್ನು ತನಿಯ ಹಾಗೂ ಕೆಲ ಪಾತ್ರಗಳ ಮೂಲಕ ಮಾಡಿಸುತ್ತಾರೆ. ಅಲೆಗಳ ಆಟವನ್ನು ಆನಂದಿಸುವ ನಮಗೆ ಕಡಲಿನ ಬೇರೆ ಮುಖದ ದರ್ಶನವೂ ಆಗುತ್ತದೆ.
ತನಿಯನಂತಹ ಹಲವು ಮೀನುಗಾರರು ಮತ್ತು ಅವರ ಬದುಕು ಹೇಗಿರುತ್ತದೆ ಎಂದು ನೋಡುವುದಾದರೆ ಕಡಲಿನ ಶಾಂತತೆಯಲ್ಲಿ ಅವರ ದುಡಿಮೆ. ಇಲ್ಲದಿದ್ದರೆ ಇಲ್ಲ.. ಕಡಲು ಅಬ್ಬರಿಸಿದರೆ ತನಿಯ ಹಾಗೂ ಅವನಂತಹವರಿಗೆ ಉಪವಾಸ. ಅದಕ್ಕಾಗಿ ಆತ ಬುದ್ಧಿವಂತಿಕೆಯಿಂದ ಬೇರೆ ಬೆಸ್ತರಿಗೂ ಆದರ್ಶಪ್ರಾಯನಾಗಿದ್ದಾನೆ. ದುಡಿಯಲು ಹೋದಾಗ ತರುವ ಮೀನುಗಳನ್ನು ಉಪ್ಪು ನೀರಿನಲ್ಲಿ ಅದ್ದಿ ಬಿಸಿಲಲ್ಲಿ ಒಣಗಿಸುವ ಆತನ ಉಪಾಯ ಕಡಲಿಗೆ ಹೋಗದ ದಿನಗಳಲ್ಲಿ ಅವರಿಗೆ ಉಪಯುಕ್ತವಾಗುತ್ತದೆ.
ತನಿಯನಿಗೆ ಒಬ್ಬ ಗೆಳೆಯನಿದ್ದ ಅವನೇ ಕರಿಯ. ತನಿಯ ಹಾಗೂ ಕರಿಯ ಇಬ್ಬರು ಒಂದೇ ದೋಣಿಯಲ್ಲಿ ಹೋಗುವವರಿದ್ದರು. ಏಕೆಂದರೆ, ಕರಿಯನ ದೋಣಿ ಅಳಿವೆ ಬಾಗಿಲಲ್ಲಿ ಮರಳ ದಿಣ್ಣೆಗೆ ಡಿಕ್ಕಿ ಹೊಡೆದು ಚೂರಾಗಿತ್ತು. ನದಿ ಕಡಲಿಗೆ ಸೇರುವ ಜಾಗವೇ ಅಳಿವೆ. ಅಳಿವೆಯ ಬಾಗಿಲ ಹೂಳೆತ್ತದಿದ್ದಾಗ ಬೆಸ್ತರ ಬದುಕು ಎಷ್ಟು ಗೋಳಾಗುತ್ತದೆ ಹಾಗೂ ಅವರು ಇದಕ್ಕಾಗಿ ಸರ್ಕಾರವನ್ನೇ ಅವಲಂಬಿಸಬೇಕು. ತಾವೇ ಹೂಳು ತೆಗೆಯುವಂತಿಲ್ಲ. ಇದೇಕೆ ಓದಿ ಅರಿಯಿರಿ.
ಅಂದು ಕರಿಯ ಬರಲಿಲ್ಲವೆಂದು ಅವನ ಹೆಂಡತಿ ಕಮಲು ಸುದ್ದಿ ಕೊಡಲು ಬಂದಿದ್ದಳು. ಅದಕ್ಕೆ ಕಾರಣ ಆಕೆಯ ತಾಯಿಯ ಮನೆ ಕಡಲ ಪಾಲಾದದ್ದು. ತಮಗೆ ಸೇರಿದ್ದು, ಪರಿಚಿತವಾದದ್ದು ಕಡಲ ಒಡಲಿಗೆ ಸೇರಿದಾಗ ಅದೆಷ್ಟು ನೋವಲ್ಲವೇ..?
ಇದಿಷ್ಟೇ ಅಲ್ಲ, ಮೀನುಗಾರರಿಗೆ ಕಡಲ ಕೊರೆತದ ಸಮಸ್ಯೆಯೂ ಇರುತ್ತದೆ. ಕಡಲು ಒಂದೆಡೆ ಶಾಂತವಾಗಿದೆ ಎಂದರೆ ಎಲ್ಲಾ ಕಡೆಯಲ್ಲಿಯೂ ಶಾಂತವಾಗಿರುವುದಿಲ್ಲ. ಕಡಲಿನ ಚಲನವಲನವನ್ನು ಮೀನುಗಾರರು ನೀರಿಗಿಳಿಯುವ ಸಮಯ, ಸಂದರ್ಭದ ಮೂಲಕ ತನಿಯನ ಮೂಲಕ ತೆರೆದಿಡುತ್ತಾರೆ.
ತನಿಯನ ದೋಣಿಗಿಂತ ಸುಮಾರು 40 ಪಟ್ಟು ದೊಡ್ಡ ದೋಣಿ ಪಡವು. ಅವುಗಳ ರೀತಿ-ನೀತಿಯನ್ನು ಇಲ್ಲಿ ಹೇಳುತ್ತಾರೆ. ಇವುಗಳ ಜೊತೆಜೊತೆಗೆ ದೊಡ್ಡ ಹಡಗುಗಳು, ಮೋಟಾರ್ ಜೋಡಿಸಿದ ಪರ್ಸಿನ್ ದೋಣಿ, ಟ್ರಾಲಿ ದೋಣಿಗಳು ಇವೆಲ್ಲವೂ ಮೀನುಗಳಿಗೆ ಮಾಡುವ ಕಿರಿಕಿರಿ.. ಹೀಗೆ ಸಿರಿವಂತರ ಯಂತ್ರದ ದೋಣಿಗಳು ಬಡ ಮೀನುಗಾರರ ಹೊಟ್ಟೆಗೆ ಹೊಡೆಯುವ ಚಿತ್ರಣವೂ ಇಲ್ಲಿದೆ.
ಇನ್ನು ನೀರಿಗಿಳಿದರೆ ಕಡಲ ನೀರಿನ ಮೇಲೆ ತೇಲುವ ಎಣ್ಣೆಯ ಪದರ ಹಾಗೂ ಅದಕ್ಕೆ ಕಾರಣ ಜೊತೆಗೆ ಕಡಲಜೀವಿಗಳಿಗೆ ಅವು ಉಂಟು ಮಾಡುವ ಹಾನಿ ಕಣ್ಣಿಗೆ ಕಟ್ಟುವಂತಿದೆ.
ಕಡಲ ಸ್ವಭಾವದ ಬಗ್ಗೆ ತಿಳಿಯುವುದು ಅತಿ ಅವಶ್ಯಕ. ಎಷ್ಟೋ ಬಾರಿ ತೂಫಾನಿಗೆ ಸಿಲುಕಿದವರು ಅದರಿಂದ ಪಾರಾಗಿ ಬಂದರೂ ಅದರ ಕುರಿತು ಭಯವೊಂದು ಇದ್ದೇ ಇರುತ್ತದೆ. ಆದರೆ, ಕಡಲ ತೆರೆಗಳ ಅಬ್ಬರದ ನಡುವೆಯೂ ಕಡಲ ಒಳಗಿನ ಶಾಂತತೆ ಅವರನ್ನು ಕಾಪಾಡುವ ರಹಸ್ಯ. ಇದು ಅವರಿಗೆ ಅರಿವಿರುತ್ತದೆ. ಭರತ, ಇಳಿತ ದಿನಕ್ಕೆರಡು ಬಾರಿ ಏಕಿರುತ್ತದೆ..? ಅಮಾವಾಸ್ಯೆ ಹುಣ್ಣಿಮೆಗೆ ಕಡಲು ಏರಿಳಿತಗಳಲ್ಲಿ ಬದಲಾವಣೆ ಕಾಣುವುದೇಕೆ..? ಯಾವ ಸಮಯದಲ್ಲಿ ಇದು ಹೆಚ್ಚು..? ಸಮುದ್ರದಲ್ಲಿ ವಾಯುಭಾರ ಕುಸಿತವಾದರೆ ಏನಾಗುತ್ತದೆ, ಅಲೆಗಳು ಹುಟ್ಟುವ ಪರಿ ಇದೆಲ್ಲದರ ಕುರಿತು ತನಿಯನ ಮೂಲಕ ತೆರೆದಿಡುತ್ತಲೇ... ಯಾವ ಬಲೆ ಬೀಸಿದರೆ ಯಾವ ಮೀನು ಸಿಗುತ್ತದೆ ಹಾಗೂ ಯಾವ ಸಂದರ್ಭದಲ್ಲಿ ಯಾವ ಮೀನನ್ನು ಹಿಡಿಯಬಾರದು ಎಂದು ಮೀನುಗಾರರಿಗೆ ಗೊತ್ತಿರುವ ರಹಸ್ಯ ಹಾಗೂ ಅದಕ್ಕೆ ಕಾರಣವನ್ನು ಹೇಳುತ್ತಾರೆ.
ತನಿಯನ ಹೆಂಡತಿ ಸರಸು ಹಾಗೂ ಆಕೆಯ ಮಗಳು ವಾರಿಜಾ ಕಡಲ ತೀರಕ್ಕೆ ಬಂದಿರುವುದು ಬಾರಿ ಜಲ ಕಡಲ ಸ್ನಾನಕ್ಕೆ. ಮಗಳಿಗೆ ಸೀತಾಳೆ ಸಿಡುಬು ಎದ್ದು 13 ದಿನವಾಗಿತ್ತು. ಹಣ್ಣಾಗಿ ಉದುರುವಾಗ ಕಡಲಲ್ಲಿ ಮೀಸಿದರೆ ಒಳ್ಳೆಯದೆಂಬ ಕಡಲ ತೀರದವರ ನಂಬಿಕೆಯ ಫಲವಾಗಿ ಅವರಿಬ್ಬರೂ ಅಲ್ಲಿದ್ದರು. ಅದೆಷ್ಟು ಸಫಲವಾಗುತ್ತದೆ..? ವಾರಿಜಾಳ ಮೂಲಕ ಅವಳ ಪುಟ್ಟ ಕುತೂಹಲದ ಪ್ರಶ್ನೆಗಳು ಹಾಗೂ ಅವುಗಳಿಗೆ ಉತ್ತರಗಳು ನಮಗೆ ದೊರಕುತ್ತಾ ಹೋಗುತ್ತವೆ. ಕಡಲ ಮೀನುಗಳು ಹಾಗೂ ಅವುಗಳ ತರಹೇವಾರಿ ಸಂಗತಿಗಳು ಇಷ್ಟೇ ಅಲ್ಲದೆ ಕಡಲ ದ್ವೀಪ ಹಾಗೂ ಭೂಕಂಪದ ಕುರಿತು ಹಲವಾರು ವಿಶೇಷ ಸಂಗತಿಗಳನ್ನು ಇಲ್ಲಿ ಕಾಣಬಹುದು.
ಕಡಲ ಸಂಪತ್ತು ಎಷ್ಟಿದೆ ಹಾಗೂ ಕಡಲಿನ ಆಳದಲ್ಲಿನ ಪ್ರಾಣಿ ಜಗತ್ತು ಹಾಗೂ ಸಲಕರಣೆಗಳನ್ನು ಬಳಸಿ ಸಂಪತ್ತನ್ನು ಪತ್ತೆ ಹಚ್ಚುವ ಪರಿ ಎಲ್ಲದರ ಕುರಿತು ಗಣಪಯ್ಯನವರು ಹೇಳಿದ ಮಾತುಗಳನ್ನು ತನಿಯ ನೆನಪಿಸಿಕೊಳ್ಳುವ ಮೂಲಕ ನಮಗೂ ಪರಿಚಯಿಸುತ್ತಾರೆ.
ಪ್ರವಾಸಿ ಸ್ಥಳವಾಗಿರುವ ಕಿನಾರೆ ಹಾಗೂ ಪ್ರವಾಸಿಗಳ ಗುಂಪು ಸೇರುವ ಕೆಲ ಕಡಲ ದಂಡೆಗಳನ್ನು ಸಿರಿವಂತರಿಗೆ ಗುತ್ತಿಗೆ ಕೊಟ್ಟಿರುವ ವಿಚಾರ, ಇದರ ಜೊತೆಗೆ ಕಡಲ ತಳದಿಂದ ಮರಳು ಒಯ್ಯಲು ಬರುವ ಲಾರಿಗಳು ಹಾಗೂ ಅದರಿಂದ ಉಂಟಾಗುವ ದುಷ್ಪರಿಣಾಮಗಳು, ಕಡಲ ಕೊರೆತ ಹೆಚ್ಚಾಗುವ ಪರಿ ಎಲ್ಲವೂ ಕಳಕಳಿಯಿಂದ ಚಿತ್ರಿತವಾಗಿದೆ.
ತನಿಯನ ಪರಿವಾರ ಹಾಗೂ ಕಮಲುವಿನ ಮೂಲಕ ಕಡಲಿನ ಇನ್ನೂ ಹಲವಾರು ಆಸಕ್ತಿದಾಯಕ ವಿಚಾರಗಳು ಜೊತೆಗೆ ಯೋಚಿಸಬೇಕಾದ ಅಂಶಗಳನ್ನು ಲೇಖಕಿ ಕಟ್ಟಿಕೊಡುತ್ತಾರೆ. ಈ ಪುಸ್ತಕ ಸರಳವಾಗಿದ್ದು, ಮಾಹಿತಿಪೂರ್ಣವಾಗಿಯೂ ಇದೆ. ಮಕ್ಕಳಿಗೂ ಆರಾಮವಾಗಿ ಓದಿಸಬಹುದಾದ ಪುಸ್ತಕ. ಕಥಾರೂಪದಲ್ಲಿ ಮಾಹಿತಿಯುಕ್ತವಾಗಿ ಕಟ್ಟಿಕೊಟ್ಟಿರುವ ಚಿತ್ರಣಗಳು ಇಷ್ಟವಾಗುತ್ತವೆ.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ