ಸೋಮವಾರ, ಏಪ್ರಿಲ್ 27, 2026

ರಂಜನಿ


ಕಥೆಯ ಶೀರ್ಷಿಕೆ : ರಂಜನಿ

ಲೇಖಕರು : ಶಾಂತಾದೇವಿ ಮಾಳವಾಡ


"ಕಿತ್ತೂರಿನ ಮುತ್ತಿನ ಪಾಲಕಿ

ಹತ್ತಿ ಮರೆಯುತ್ತಿರುವ ರಾಣಿ

ಮುತ್ತಿನ ವೇಣಿ ಕೋಕಿಲ ವಾಣಿ

ಹತ್ತು ದಿಕ್ಕಿನೊಳು ಕಲ್ಯಾಣಿ"


ಹೀಗೆ ಪ್ರಸಿದ್ಧಿ ಪಡೆದಿದ್ದ ಕಿತ್ತೂರು ಚೆನ್ನಮ್ಮನ ಕೋಟೆಯ ವೈಭವವನ್ನು ತೋರಿಸುತ್ತಾ..1824ರ ಅಕ್ಟೋಬರ್ ನಲ್ಲಿ ಚೆನ್ನಮ್ಮ ಬ್ರಿಟಿಷರನ್ನು ಸೋಲಿಸಿ ವಿಜಯೋತ್ಸವ ಆಚರಿಸಿದ ಸಂದರ್ಭವನ್ನು, ಪ್ರತಿ ವರ್ಷವೂ ದೀಪೋತ್ಸವವನ್ನಾಗಿ ಆಚರಿಸಿ ವಿಜಯೋತ್ಸವವನ್ನು ನೆನೆಸಿಕೊಳ್ಳುವ ಪ್ರಸಂಗವನ್ನು ಹೇಳುತ್ತಲೇ ರಂಜನಿಯ ಕಥೆಯನ್ನು ತೆರೆದಿಡುತ್ತಾರೆ.


ಕಿತ್ತೂರ ಕೋಟೆಯ ಅವಶೇಷಗಳನ್ನು ನೋಡಲು ಹೋಗಿ ಗಾಢ ನಿದ್ರೆ ಆವರಿಸಿದ್ದವರಿಗೆ ಗೆಜ್ಜೆಯ ನಾದದಿಂದ, ತಾಳ-ಮದ್ದಲೆ, ವೀಣೆ, ಮೃದಂಗಗಳ ಧ್ವನಿ ಕೇಳಿ ಬರುತ್ತದೆ. ಆಗ ಆ ಸಂದರ್ಭವನ್ನು ಪರಿಚಯಿಸಿಕೊಳ್ಳುವ ರಂಜನಿಯನ್ನು ಪರಿಚಯಿಸುತ್ತಾರೆ.


ಚೆನ್ನಮ್ಮನ ಕಿತ್ತೂರಿನಲ್ಲಿಯೇ ಇದ್ದ ಕಿತ್ತೂರಿನ ರಾಜನೊಬ್ಬ ಸರ್ವಸ್ವವನ್ನು ತ್ಯಾಗ ಮಾಡಿ ಬಂಧು-ಬಳಗದ ವಿರೋಧ ಕಟ್ಟಿಕೊಂಡು, ಸಮಾಜದಿಂದ ತಿರಸ್ಕೃತಗೊಂಡು, ಸ್ವಧರ್ಮದಿಂದ ವಂಚಿತಳಾದ ಪ್ರೇಮಿಯ ನೆನಪಿನ ಸಂಚಿ ಬಿಚ್ಚಿಕೊಳ್ಳುತ್ತದೆ.


ಕಿತ್ತೂರಿನ 9ನೇ ದೊರೆಯಾಗಲಿದ್ದ ಫಕೀರ ರುದ್ರಸರ್ಜನ ಆಸ್ಥಾನಕ್ಕೆ ನೃತ್ಯ ಮಾಡಲು ಬಂದವಳು ಬಗೆಬಗೆಯ ನೃತ್ಯವನ್ನು ಮಾಡಿ ಯುವರಾಜರ ಮನ ಗೆಲ್ಲುತ್ತಾಳೆ, ಜೊತೆಗೆ ಯುವರಾಜರಿಗೂ ಮನಸೋಲುತ್ತಾಳೆ. ಇಬ್ಬರೂ ಪ್ರೇಮ ಬಂಧನದಲ್ಲಿ ಸಿಲುಕುತ್ತಾರೆ. ರಂಜನಿಯ ತಾಯಿಗೆ ಆಕೆಯನ್ನು ರಾಜನರ್ತಕಿಯನ್ನಾಗಿಸುವ ಆಸೆ ಇದ್ದರೆ, ದೊರೆಗಳ ಉತ್ಸಾಹ ಕಂಡು ರಾಜಮಾತೆಗೆ ಚಿಂತೆ ಹತ್ತಿ,  ಅವರನ್ನು ಮದುವೆಗೆ ಒತ್ತಾಯಿಸುತ್ತಿದ್ದರು. 


ಆದರೆ ದೃಢನಿಶ್ಚಯದಿಂದ ಫಕೀರ ರುದ್ರಸರ್ಜನು ರಂಜನಿಯನ್ನು ವಿವಾಹವಾಗಲು ನಿಶ್ಚಯಿಸಿದಾಗ ರಂಜನಿ ಹಿಂತೆಗೆಯುತ್ತಾಳೆ. ಆಕೆ ಮುಸಲ್ಮಾನರವಳು, ಜೊತೆಗೆ ನರ್ತಕಿ. ಈ ವಿವಾಹ ಧರ್ಮಸಮ್ಮತವಾಗಲಾರದು, ಜನರು ಒಪ್ಪುವುದಿಲ್ಲ ಎಂದಾಗ ಯುವರಾಜರಿಗೆ ರಂಜನಿಯ ಸಮ್ಮತಿ ಮಾತ್ರ ಬೇಕಾಗಿರುತ್ತದೆ. ನೀವು ಮತ್ತೊಬ್ಬರನ್ನು ಮದುವೆಯಾಗಿ, ನಾನು ಇಲ್ಲಿಯೇ ಇರುತ್ತೇನೆ ಎಂದರೂ ಕೇಳದೆ "ದೇಹ ಎರಡೇ ಇದ್ದರೂ ಮನ, ಆತ್ಮ ಒಂದೇ" ಎನ್ನುತ್ತಾ ನೀನು ಹೃದಯದ ಸಾಮ್ರಾಜ್ಞಿಯಾಗಿರುವಾಗ ಬೇರೊಂದು ಹೆಣ್ಣನ್ನು ತೋರಿಕೆಯ ರಾಣಿಯನ್ನಾಗಿ ಮಾಡುವುದು ಸಾಧ್ಯವಿಲ್ಲವೆಂದು ದೃಢವಾಗಿ ಹೇಳುತ್ತಾರೆ.


ಮಂತ್ರಿಗಳು ಸಹ ರಾಜರಿಗೆ "ನೀವು ಆಕೆಯನ್ನು ಪ್ರೇಮಿಸುತ್ತಿದ್ದರೆ ರಾಜನರ್ತಕಿಯನ್ನಾಗಿ ಮಾಡೋಣ. ಇನ್ನೂ ಮುಂದೆ ಹೋಗಿ ಆಕೆ ಪಟ್ಟದರಸಿಯಾಗಲು ಸಾಧ್ಯವಿಲ್ಲ. ಆದರೆ, ವೀರಶೈವ ದೀಕ್ಷೆ ಕೊಡಿಸಿ ವಿವಾಹವಾಗಬಹುದು" ಎನ್ನುತ್ತಾರೆ.


"ಧರ್ಮಕೊಬ್ಬ ಹೆಂಡತಿ, ಪ್ರೇಮಕೊಬ್ಬ ನರ್ತಕಿ" ಎನ್ನುವ ನೀತಿ ನನಗೆ ಒಪ್ಪಿಗೆ ಇಲ್ಲ ಎನ್ನುತ್ತಾ.. ಆಕೆಗೆ ವೀರಶೈವ ದೀಕ್ಷೆ ಕೊಡಿಸಿ ವಿವಾಹವಾಗುತ್ತಾರೆ. ರಂಜನಿ ನಿರಂಜನಿಯಾಗುತ್ತಾಳೆ. ರಂಜನಿಯ ತಾಯಿ ಇದರಿಂದ ಸಿಟ್ಟಿಗೆದ್ದು ಉತ್ತರ ಭಾರತಕ್ಕೆ ಹೋಗುತ್ತಾಳೆ. ಫಕೀರ ರುದ್ರಸರ್ಜರು ರಾಜ್ಯತ್ಯಾಗ ಮಾಡುತ್ತಾರೆ.


ಅಲ್ಲಿಂದ ದೂರ ಬಂದು ದೇಶನೂರಿಗೆ ಹೋಗಿ ಮೊಘಲ ಪದ್ಧತಿಯಂತೆ ಅರಮನೆ ಕಟ್ಟಿಸಿ ನೆಲೆಸುತ್ತಾರೆ. ಅರಮನೆಯ ಸುತ್ತ ಕಟ್ಟಿಸಿದ ಭದ್ರವಾದ ಕೋಟೆ ರುದ್ರಗಢವೆಂದು ಪ್ರಸಿದ್ಧವಾಗುತ್ತದೆ. ಅರಮನೆಯನ್ನು 'ರಂಜನಿ ಮಹಲ್' ಎಂದು ಕರೆಯತೊಡಗುತ್ತಾರೆ. ಪ್ರೇಮದ ಸವಿಯಲ್ಲಿ ಉಲ್ಲಾಸವಾಗಿ ಬಾಳುತ್ತಾರೆ. ಆದರೆ, ಪಕೀರ ರುದ್ರಸರ್ಜರ ಆಸೆಯಂತೆಯೇ ಪೂರ್ವಜರ ಸಮಾಧಿಗಳಿರುವ ಕಲ್ಮಠದಲ್ಲಿಯೇ ಸಮಾಧಿಯಾಗಬೇಕು ಎನ್ನುವ ಅವರ ಆಸೆಗಾಗಿ ಮರಳಿ ಕಿತ್ತೂರಿಗೆ ಬರುತ್ತಾರೆ. ಫಕೀರ ರುದ್ರಸರ್ಜರ ಕಿತ್ತೂರ ಕಲ್ಮಠದ ಸಮಾಧಿಯ ಮೇಲೆ ಈ ಅಮರ ಪ್ರೇಮದ ಕಥೆಯನ್ನು ಕೆತ್ತಿಸುತ್ತಾರೆ. ರಂಜನಿ ಹಾಗೂ ರುದ್ರಸರ್ಜರ ಸಮಾಧಿ ಪಕ್ಕಪಕ್ಕದಲ್ಲಿಯೇ ನಿರ್ಮಾಣವಾಗುತ್ತದೆ. 


ಈಗ ಈ ಅಮರ ಪ್ರೇಮದ ಕಥೆಯನ್ನು ಸಾರುತ್ತಾ ಅವರಿಬ್ಬರ ಆತ್ಮಗಳು ಜೊತೆಯಾಗಿ ತಿರುಗಾಡುತ್ತಾ.. ಅಮರ ಪ್ರೇಮಿಗಳಾಗಿರುವ ಕಥೆಯನ್ನು ಹೇಳುತ್ತಲೇ ರಂಜನಿ ಮಾಯವಾಗುತ್ತಾಳೆ.


ಇತಿಹಾಸದಲ್ಲಿ ಹೀಗೆ ಮರೆಯಾದ ಕಥೆಯೊಂದು ಹೀಗೆ ಕಾಣಸಿಗುತ್ತದೆ. ಅಧಿಕಾರ, ವ್ಯಾಮೋಹ ಎಲ್ಲದಕ್ಕಿಂತಲೂ ಪ್ರೇಮವೇ ಮಿಗಿಲು ಎಂದು ಕೈಹಿಡಿದ ಹೆಣ್ಣನ್ನು ಕೊನೆಯವರೆಗೂ ಜೊತೆಯಾಗಿದ್ದು ಕಾಪಾಡಿದ ಫಕೀರ ರುದ್ರಸರ್ಜ ಹಾಗೂ ಆತನ ಆಶಯದಂತೆಯೇ ನಡೆಯುವ ಅಷ್ಟೇ ಪ್ರೇಮವನ್ನು ವ್ಯಕ್ತಪಡಿಸುವ ರಂಜನಿಯ ಐತಿಹಾಸಿಕ ಕಥೆಯನ್ನು ಕಣ್ಮುಂದೆ ಬರುವಂತೆ ಸೊಗಸಾಗಿ ಚಿತ್ರಿಸಿದ್ದಾರೆ ಶಾಂತಾದೇವಿ ಮಾಳವಾಡರವರು. ಭಾವುಕತೆಯೇ ಪ್ರಧಾನವಾಗಿರುವ ಕಥೆ ಇದು.


1982 - 83 ರಲ್ಲಿ ಡಾ|| ವೀಣಾ ಶಾಂತೇಶ್ವರ ಅವರು ಸಂಪಾದಿಸಿರುವ 'ಲೇಖಕಿಯರ ಕಥಾಸಂಕಲನ'ದಲ್ಲಿ ನನ್ನ ಓದಿಗೆ ಸಿಕ್ಕ ಕಥೆ ಇದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ