ಪುಸ್ತಕದ ಶೀರ್ಷಿಕೆ : ಎರಡು ರೆಂಬೆಗಳು
ಲೇಖಕರು : ನುಗ್ಗೇಹಳ್ಳಿ ಪಂಕಜ
ಪ್ರಕಾಶಕರು : ಇಂದಿರಾ ಪ್ರಕಾಶನ
ಪ್ರಥಮ ಮುದ್ರಣ : 1994
ಎರಡನೇ ಮುದ್ರಣ : 2011 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 120
ಬೆಲೆ : 60 ರೂ.
ನೆಮ್ಮದಿಯಾಗಿದ್ದ ಸಂಸಾರದಲ್ಲಿ ಕವಲೊಡೆದ ಪರಿಸ್ಥಿತಿಯಲ್ಲಿ ಬದಲಾದ ಚಿತ್ರಣದ ಕಥಾಹಂದರ ಹೊಂದಿರುವ ಕಾದಂಬರಿ ಇದು.
ಮರದ ಬೇರು, ಬುಡ ಒಂದೆಯಾದರೂ ರೆಂಬೆಗಳು ಕವಲೊಡೆದಾಗ ಎರಡು ರೆಂಬೆಗಳಲ್ಲಿಯೂ ಸಿಗುವ ಫಲ, ಎಲೆಗಳ ಪ್ರಮಾಣ ಎಲ್ಲವೂ ವಿಭಿನ್ನ. ಹಾಗೆಯೇ ಒಂದು ಕುಟುಂಬದಲ್ಲಿ ಬೆಳೆಯುವ ಮಕ್ಕಳಲ್ಲಿ, ಅಣ್ಣ-ತಂಗಿಯರ ಅಥವಾ ಅಣ್ಣ-ತಮ್ಮಂದಿರ ಮಕ್ಕಳಲ್ಲಿಯೂ ಈ ವ್ಯತ್ಯಾಸವನ್ನು ಕಾಣಬಹುದಾಗಿದೆ. ಅಂತಹ ಚಿತ್ರಣವನ್ನು ಕಾಣುವುದಕ್ಕೂ ಮುಂಚೆ ರಂಗೋಲಿ ಎಂಬ ಯುವತಿಯ ಪರಿಸ್ಥಿತಿಯನ್ನು ನೋಡಬೇಕಾಗುತ್ತದೆ.
ರಂಗೋಲಿಯನ್ನು ರೈಲ್ವೆ ಸ್ಟೇಷನ್ ನಲ್ಲಿ ಭೇಟಿಯಾಗಲು ಬಂದದ್ದು ಜಿತೇಂದ್ರನಲ್ಲ. ಬದಲಿಗೆ ಅವನ ಸೋದರತ್ತೆಯ ಮಗ. ಮೊದಲು ಅನುಮಾನಿಸಿದರೂ ಅವನ ಭರವಸೆ ಸೂಸುವ ನಗು ಅವನ ಮುಖದ ಒರಟುತನವನ್ನೆಲ್ಲ ಹೋಗಿಸಿ ಭರವಸೆಯಿಡುವಂತೆ ಮಾಡಿತು. ನೇರ ನಿಲುವು, ದಿಟ್ಟ ಹೆಜ್ಜೆಗಳು, ಜೊತೆಗೆ ಸುತ್ತಲಿನವರು ಅವನಿಗೆ ನೀಡುತ್ತಿದ್ದ ಗೌರವ ಎಲ್ಲವನ್ನೂ ಗಮನಿಸಿದ್ದಳು.
ಅಲ್ಲಿದ್ದವರಲ್ಲಿ ಹೆಚ್ಚಿನವರು ಗಿರಿಜನರೇ. ಮರುಭೂಮಿಯಂತಹ ಆ ಊರಿನಲ್ಲಿ ಹಬ್ಬಿಕೊಂಡಿರುವ ಎಸ್ಟೇಟು ಹಾಗೂ ಗಣಿಗಾರಿಕೆಗಳ ಕಾರ್ಮಿಕರು. ಜಿತೇಂದ್ರ ತನ್ನ ಟೆಲಿಗ್ರಾಂ ಕಂಡು ಬರಲಿಲ್ಲದಕ್ಕೆ ಬೇಸರವಾಗಿತ್ತು ಜೊತೆಗೆ ಮುನಿಸು, ಕೋಪ ಎಲ್ಲವೂ.
ಶ್ರೀಮಂತ ತಂದೆ-ತಾಯಿಯ ಒಬ್ಬಳೇ ಮಗಳಾಗಿದ್ದ ರಂಗೋಲಿ ಕಷ್ಟವೆಂದರೆ ಏನೆಂದೇ ಅರಿತವಳಲ್ಲ. ಶಿವಸ್ವಾಮಿ ಹಾಗೂ ಗೌರಮ್ಮನೂ ಆಕೆಯನ್ನು ಹಾಗೆಯೇ ಕಾಪಾಡಿಕೊಂಡಿದ್ದರು. ಆದರೆ, ಗೌರಮ್ಮನವರ ಅಕಾಲಿಕ ಸಾವಿನಿಂದ ಹಾಗೂ ನೆನಪಿನಿಂದ ಪಾರಾಗಲು ಸ್ಥಳ ಬದಲಾವಣೆಗೆಂದು ತೀರ್ಥಯಾತ್ರೆಗೆ ಹೋದಾಗ ಶಂತನು ಮಹಾರಾಜನಿಗೆ ಗಂಗೆ ಗಂಟು ಬಿದ್ದಂತೆ ಪೂರ್ವಾಪರ ತಿಳಿಯದ ಹೆಣ್ಣೊಬ್ಬಳು ಗಂಟು ಬಿದ್ದಿದಳು. ವಯಸ್ಸು ಮೀರಿತ್ತು ಜೊತೆಗೆ ಅವಿವಾಹಿತ ಹೆಂಗಸಿಗೆ ನೆಲೆಯಾಗುತ್ತದೆ, ರಂಗೋಲಿಯನ್ನು ಮಗಳಂತೆಯೇ ಕಾಣುತ್ತಾಳೆ ಜೊತೆಗೆ ಇಳಿಗಾಲದಲ್ಲಿ ಸಾಂಗತ್ಯ ದೊರೆಯುತ್ತದೆಂದಿದ್ದವರಿಗೆ ಆಕೆಯ ನಿಜ ಸ್ವಭಾವದ ಅರಿವಾಗ್ವು ಹೊತ್ತಿಗೆ ಮನೆಯ ಸಮಸ್ತವೆಲ್ಲವೂ ಆಕೆಯ ಆಡಳಿತದಲ್ಲಿತ್ತು. ಜೊತೆಗೆ ಏನೂ ಅರಿಯದಂತಹ ತನ್ನ ಕರುಳಿನ ಕುಡಿಯನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬಂದಿತ್ತು. ಶಿವಸ್ವಾಮಿ ಬದಲಾಯಿಸಿದ ದಿನಗಳನ್ನು ರಂಗೋಲಿಯ ವರ್ಣನೆಯಲ್ಲಿ ಕೇಳುವಾಗ ಎಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿ ಬೆಳೆದ ಅವಳ ಮೇಲೆ ದಯೆ ಮೂಡುತ್ತದೆ. ಮಲತಾಯಿಯ ದೂರದ ಸಂಬಂಧಿ, ವರಸೆಯಲ್ಲಿ ಆಕೆಗೆ ತಮ್ಮನಾಗುತ್ತಿದ್ದ ರಾಜೇಂದ್ರ ನಡೆದುಕೊಳ್ಳುತ್ತಿದ್ದ ಅನುಚಿತ ವರ್ತನೆಯಿಂದ ಪಾರಾಗಲು ಮನೆ ಬಿಟ್ಟಿದ್ದಳು.
ಜಿತೇಂದ್ರನ ತಾಯಿ ಹಾಗೂ ರಂಗೋಲಿಯ ತಾಯಿ ಇಬ್ಬರೂ ಆಪ್ತ ಸ್ನೇಹಿತೆಯರು. ವಿವಾಹವಾದ ನಂತರ ಅವರ ಸ್ನೇಹ ಹಾಗೆಯೇ ಉಳಿದಿತ್ತು ಹಾಗೂ ಮತ್ತಷ್ಟು ಆಪ್ತವಾಗಿತ್ತು. ಜಿತೇಂದ್ರನಿಗೆ ರಂಗೋಲಿಯನ್ನು ವಿವಾಹ ಮಾಡಬೇಕೆಂದು ಇಬ್ಬರು ತಾಯಿಯರ ಕನಸಾಗಿತ್ತು. ಆದರೆ, ರಂಗೋಲಿಯ ತಂದೆ ಮಾತ್ರ "ಅದು ಸ್ವಪ್ನ ಜೀವಿಯ ಕಣ್ಣುಗಳು.
ಗಂಡಸು ಸ್ವಪ್ನ ಜೀವಿ ಆದರೆ ಕಷ್ಟ" ಎನ್ನುತ್ತಿದ್ದರು.
ಜಿತೇಂದ್ರನ ತಂದೆ-ತಾಯಿಗಳಿಬ್ಬರೂ ವಿಮಾನ ಅಪಘಾತದಲ್ಲಿ ಸತ್ತಾಗ ಆತನ ತಂದೆಯ ತಂದೆ ಅವನನ್ನು ತಮ್ಮ ಬಳಿಗೆ ಹಾ
ಸಾಕಿಕೊಳ್ಳಲು ಕರೆದೊಯ್ದಾಗ ಸಂಪರ್ಕ ಒಮ್ಮೆಲೆ ಕಡಿದಿತ್ತಾದರೂ ರಂಗೋಲಿಗೆ ಮಾತ್ರ ಪತ್ರಗಳು ಬರುತ್ತಿದ್ದವು. ಹೀಗೆ ಪತ್ರ ಮಿತೃತ್ವ ಸಾಗುತ್ತಲೇ ಇತ್ತು. ದರ್ಪದ ವ್ಯಕ್ತಿತ್ವದ ತಾತ, ಪರಿಸರದ ಮಾರ್ಪಾಡು, ಅನಾಥ ಪ್ರಜ್ಞೆ ಎಲ್ಲವೂ ಅವಳಿಗೆ ತಿಳಿದಿತ್ತು. ಆದರೆ, ಈಗಿನ ಪರಿಸ್ಥಿತಿ ಅವಳಂದುಕೊಂಡಂತಿರಲಿಲ್ಲ.
ಕುಡಿತ ಹಾಗೂ ಅಮಲು ಪದಾರ್ಥದ ದಾಸನಾಗಿದ್ದ ಜಿತೇಂದ್ರ ತಾತನ ಮುದ್ದು, ಆಸ್ತಿಯ ಕೊಬ್ಬು, ಕೆಟ್ಟ ಸಹವಾಸ ಎಲ್ಲವೂ ಸೇರಿ ಹಾಳಾದ. ತಾತನೂ ಕಣ್ಣು ಮುಚ್ಚಿದ ನಂತರ ಸಾಲವಾಯಿತು. ಆಗ ಜಿತೇಂದ್ರನ ಸೋದರತ್ತೆಯ ಮಗ ಭೀಷ್ಮ ತಾನು ಕಷ್ಟಪಟ್ಟು ದುಡಿದಿದ್ದ ಹಣದಲ್ಲಿ ಎಲ್ಲವನ್ನೂ ಉಳಿಸಿಕೊಂಡಿದ್ದ. ಭೀಷ್ಮನ ಕಠಿಣತೆ ಹಾಗೂ ಕಟ್ಟುನಿಟ್ಟು, ಶಿಸ್ತು ಯಾವುದರಿಂದಲೂ ಜಿತೇಂದ್ರನನ್ನು ತಿದ್ದಲು ಸಾಧ್ಯವಾಗಲಿಲ್ಲ
ಮನೆಗೆ ಬಂದಾಗ ಅಲ್ಲಿದ್ದದ್ದು ಕೆಲಸದಾಕೆ ಕಾಳಿ. ಗಿರಿಜನರ ಹೆಣ್ಣುಮಗಳು. ಜಿತೇಂದ್ರ ಮನೆಯಲ್ಲಿರಲಿಲ್ಲ. ಆತ ಎಲ್ಲಿದ್ದಾನೆಂದು ಭೀಷ್ಮನಿಗೆ ಗೊತ್ತಿದ್ದರೂ ಆತ ನಿಜವನ್ನು ಬಿಟ್ಟು ಕೊಡಲಿಲ್ಲ. ಅದೇಕೆ..?
ಭೀಷ್ಮ ರಂಗೋಲಿಗೆ ವಿವಾಹದ ಪ್ರಸ್ತಾಪವನ್ನು ಮುಂದಿಡುತ್ತಾನೆ. ಅದಕ್ಕೆ ಕಾರಣ ಹೇಳುವುದು ಅಪರಿಚಿತ ಒಂಟಿ ಹೆಣ್ಣು ತನ್ನೊಡನೆ ಒಂಟಿಯಾಗಿದ್ದರೆ ಇಲ್ಲಿನ ಜನರ ಅಪಾರ್ಥಕ್ಕೂ ಕಾರಣವಾಗುತ್ತದೆ, ತನ್ನ ಗೌರವಕ್ಕೂ ಕುಂದು ಬರುತ್ತದೆ ಎಂದು. ರಂಗೋಲಿಗೆ ಬೇರೆ ದಾರಿ ಇರಲಿಲ್ಲ. ವಾಪಸ್ಸು ಹೋಗಲು ರಾಜೇಂದ್ರನ ಭಯ ಹಾಗೂ ತನ್ನ ಬದುಕಿನ ಅಭದ್ರತೆ. ಜಿತೇಂದ್ರನ ಪರಿಸ್ಥಿತಿ ಗೊತ್ತಿದ್ದೂ ಆತನನ್ನು ಸರಿ ದಾರಿಗೆ ತರಲು ಸಾಧ್ಯವಿಲ್ಲ ಎಂದು ಅರ್ಥ ಮಾಡಿಕೊಂಡಳು ಭೀಷ್ಮನ ಕೈಹಿಡಿಯುತ್ತಾಳೆ. ಆದರೆ, ಭೀಷ್ಮ ಮೊದಲೇ ಹೇಳಿದ್ದ "ನನ್ನನ್ನು ಮದುವೆಯಾಗಿ, ಮನೆಯ ಒಡತಿಯಾಗಿ, ಸ್ನೇಹಿತರಾಗಿಯೇ ಉಳಿಯೋಣ" ಎಂದು. ಮುಂದೆ ಈ ಪ್ರಯತ್ನದಲ್ಲಿ ಇಬ್ಬರೂ ಎಷ್ಟು ಸಫಲರಾಗುತ್ತಾರೆ..?
ರಂಗೋಲಿ ಎಲ್ಲದರ ಕುರಿತು ಅಸ್ಥೆಯಿಂದ ತಿಳಿದುಕೊಳ್ಳುತ್ತಾ.. ಕಾಳಿಯನ್ನು ಆಪ್ತಳನ್ನಾಗಿಸಿಕೊಂಡು, ಹೊಂದಿಕೊಳ್ಳುವ ಪ್ರಯತ್ನದಲ್ಲಿ ಇರುವಾಗ ಪಕ್ಕದ ಎಸ್ಟೇಟಿನ ಚಂದರ್ ದಂಪತಿಗಳು ಬರುತ್ತಾರೆ. ಮಿಸಸ್ ಚಂದರ್ ಗೆ ಪ್ರತಿಯೊಂದು ಒಳ್ಳೆಯದರಲ್ಲಿಯೂ ಕೆಟ್ಟದ್ದನ್ನು ಹುಡುಕುವ ಹಾಗೂ ಪ್ರತಿಯೊಂದರಲ್ಲಿಯೂ ನಿರಾಸೆಯನ್ನು ಕಾಣುವ ಮನಸ್ಸು, ನಕಾರಾತ್ಮಕ ಆಲೋಚನೆಗಳು. ಏನೇನೋ ತರ್ಕ-ವಿತರ್ಕಗಳನ್ನು ಹೇಳ ಬಂದವಳು ರಂಗೋಲಿಯ ಮನಸ್ಸಿನಲ್ಲಿ ಬೇರೇನೋ ಆಲೋಚನೆಗಳು ಮೂಡುವಂತೆ ಮಾಡಿ ಹೋಗಿದ್ದಳು. ಭೀಷ್ಮನ ಕುರಿತು ಬಲು ಕಟ್ಟುನಿಟ್ಟಿನ ಮನುಷ್ಯ ಹಾಗೂ ನಿರ್ದಯಿ ಎಂದು ಬಿತ್ತಿದ್ದ ವಿಷಬೀಜ ಇಷ್ಟು ದಿನ ಭೀಷ್ಮನ ಕುರಿತು ಬೆಳೆಸಿಕೊಂಡಿದ್ದ ಗೌರವವನ್ನು ಬದಲಾಯಿಸಿತೇ ?
ಇಂತಹದ್ದೇ ಒಂದು ಸಂದರ್ಭದಲ್ಲಿ ಜಿತೇಂದ್ರ ಬಂದಾಗ ಆತನಿಗೆ ರಂಗೋಲಿ ಹಾಗೂ ಭೀಷ್ಮನ ವಿವಾಹದ ವಿಚಾರ ತಿಳಿದಿರುತ್ತದೆ. ಅದಕ್ಕೆ ಆತ ಪ್ರತಿಕ್ರಿಯಿಸಿದ್ದು ಹೇಗೆ..? ಮುಂದಾದರೂ ಆತ ಬದಲಾದನೇ..? ಆತನ ಅವನತಿಯಲ್ಲಿ ಡಾ. ಪ್ರಭುವಿನ ಪಾಲು ಎಷ್ಟಿತ್ತು?
ಹಿಂದೆ ಜಿತೇಂದ್ರ ಕೆಲಸ ಮಾಡುತ್ತಿದ್ದ ಗಣಿಯ ಅಧಿಕಾರಿಯಾಗಿದ್ದ ರಂಜನ್ ಭೀಷ್ಮನಿಗೆ ಆಪ್ತ ಸ್ನೇಹಿತ. ರಂಗೋಲಿಗೆ ಅಣ್ಣನ ಸ್ಥಾನ ತುಂಬುವ ರಂಜನ್ ಅವಳಿಗೆ ಯಾವೆಲ್ಲಾ ತೊಂದರೆಗಳಿಂದ ಪಾರಾಗಲು ಸಹಾಯ ಮಾಡುತ್ತಾನೆ ಹಾಗೂ ರಂಜನ್ ಗೆ ಇವರಿಬ್ಬರ ವಿವಾಹದ ವಿಚಾರ ಹಾಗೂ ಜಿತೇಂದ್ರ ಮತ್ತು ರಂಗೋಲಿಯರ ಪ್ರೇಮದ ವಿಚಾರ ತಿಳಿದಾಗ ಆತನ ಮನಸ್ಸಿನಲ್ಲಿ ಮೂಡುವ ಯೋಚನೆಗಳು ಯಾರ ಬದುಕನ್ನು ಬದಲಾಯಿಸುತ್ತವೆ..?
ಪಕ್ಕದ ಎಸ್ಟೇಟ್ ನಲ್ಲಿ ಬೆಂಕಿ ಹತ್ತಿಕೊಂಡಿರುವ ವಿಚಾರ ತಿಳಿದಾಗ ಸಹಾಯಕ್ಕೆ ಹೋಗಿದ್ದ ಭೀಷ್ಮ, ಆತನ ಉನ್ನತ ಓದು, ಉನ್ನತ ವ್ಯಕ್ತಿತ್ವ, ಗಣಿಯಲ್ಲಿ ಭೂಕುಸಿತ ಉಂಟಾಗಿ ಅಲ್ಲಿನ ಕಾರ್ಮಿಕರು ಸಿಲುಕಿಕೊಂಡಾಗ ರಕ್ಷಿಸಲು ಹೊರಟ ಭೀಷ್ಮ ಇವೆಲ್ಲವೂ ಭೀಷ್ಮನ ಮತ್ತೊಂದು ಮುಖವನ್ನು ಪರಿಚಯಿಸುತ್ತವೆ.
ಅಷ್ಟೇ ಅಲ್ಲದೆ ಇದೇ ಸಂದರ್ಭದಲ್ಲಿ ನಡೆದ ಘಟನೆಯೊಂದು ಜಿತೇಂದ್ರನ ನಿಜರೂಪವನ್ನು ರಂಗೋಲಿಗೆ ಪರಿಚಯಿಸುತ್ತದೆ. ಜಿತೇಂದ್ರನನ್ನು ಕೊಂದಾದರೂ ಆ ಹಣವನ್ನು ಹಿಂದೆ ತರಬೇಕು ಎಂದು ಹೊರಟ ರಂಗೋಲಿಯ ರೋಷದ ಹಿಂದೆ ನಡೆದ ಘಟನೆಯ ಹಿನ್ನೆಲೆಯೇನು..? ಜಿತೇಂದ್ರ ಹಾಗೂ ರಂಗೋಲಿಯರ ಬದುಕು ಮಾತ್ರವಲ್ಲದೆ, ಭೀಷ್ಮನ ಬದುಕನ್ನೂ ಬದಲಾಯಿಸಿದ ಕಥೆ ಇಲ್ಲಿದೆ.
ಜಿತೇಂದ್ರನಿಗೆ ಭೀಷ್ಮನ ಮೇಲೆ ಪೈಪೋಟಿಯ ಭಾವ ಬೆಳೆದದ್ದು ಹಾಗೂ ದ್ವೇಷಕ್ಕೆ ಕಾರಣವಾದ ಪ್ರಸಂಗವೇನು..? ಜಿತೇಂದ್ರನನ್ನು ತಿದ್ದಲು ಹೋದ ಭೀಷ್ಮ ಸೋತನೇ..? ಒಂಟಿಯಾಗಿದ್ದು ರೂಢಿಯಾಗಿದ್ದ ಕಾಳಿ ಸ್ನೇಹಕ್ಕೆ ಹಾತೊರೆಯುವ ಹಾಗೂ ನಿಷ್ಕಲ್ಮಶವಾದ ಬಂಧವನ್ನು ಬೆಳೆಸಿಕೊಳ್ಳುವ, ರಂಗೋಲಿಯನ್ನು ಹಚ್ಚಿಕೊಳ್ಳುವ ನಡೆ ಹೇಗಿದೆ ಓದಿ ನೋಡಿ.
ಇಲ್ಲಿ ವೈಯಕ್ತಿಕ ಸಂಬಂಧಗಳಿಗಿಂತಲೂ.. ಸಮಾಜದಲ್ಲಿ ವ್ಯಕ್ತಿಯ ನಡೆಗಳು, ಅವರ ನಡವಳಿಕೆಗಳು ಅದರ ಹಿಂದಿನ ಮಾನಸಿಕ ಸಂಘರ್ಷಗಳು, ಬದಲಾವಣೆಗಳು ಎಲ್ಲವನ್ನೂ ಮನಮುಟ್ಟುವಂತೆ ತೆರೆದಿಟ್ಟಿದ್ದಾರೆ ಲೇಖಕಿ. ವಿಭಿನ್ನವಾದ ನಿರೂಪಣೆ ಸೆಳೆಯುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ