ಸೋಮವಾರ, ಏಪ್ರಿಲ್ 27, 2026

ಸವಿಗಾನ (ಪುಸ್ತಕ ಯಾನ - 430)


ಪುಸ್ತಕದ ಶೀರ್ಷಿಕೆ : ಸವಿಗಾನ 

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಇಂದಿರಾ ಪ್ರಕಾಶನ

ಪ್ರಥಮ ಮುದ್ರಣ : 2003

ಎರಡನೇ ಮುದ್ರಣ : 2024


ಬಣ್ಣದ ಭ್ರಮರ, ಅದೃಷ್ಟದ ಆಟ, ಸವಿಗಾನ ಮತ್ತು ಶ್ರೀರಾಗ ವೈಭೋಗ ಈ ನಾಲ್ಕು ಸಾಮಾಜಿಕ ಕಾದಂಬರಿಗಳ ಸಂಯುಕ್ತ ಸಂಪುಟ ಈಗ ಮರು ಮುದ್ರಣವಾಗಿ ಓದುಗರಿಗೆ ಲಭ್ಯವಿದೆ. 


ಈಗ ನಾನು ಪರಿಚಯಿಸುತ್ತಿರುವ ಕಾದಂಬರಿ ಸವಿಗಾನ.


ಮಾಧುರ್ಯಪೂರ್ಣವಾಗಿರುವ ಈ ಕಾದಂಬರಿಯ ಶೀರ್ಷಿಕೆ ಬದುಕಿನ ಸವಿಗಾನವನ್ನು ಸೂಚಿಸುತ್ತದೆಯಾದರೂ.. ತನ್ನ ಬದುಕನ್ನು ಸವಿಗಾನವನ್ನಾಗಿಸಿಕೊಳ್ಳಲು ಗಂಡನ ಕಿರುಕುಳವನ್ನು ಧಿಕ್ಕರಿಸಿ, ಸ್ವತಂತ್ರವಾಗಿ ಬದುಕು ನಿರ್ಮಿಸಿಕೊಂಡು ಆತನನ್ನು ಹಾದಿಗೆ ತಂದು ವಿವಾಹವನ್ನು ಸರಿಪಡಿಸಿಕೊಳ್ಳುವ ಕಥಾಹಂದರ ಇಲ್ಲಿದೆ.


ಭೀಮಣ್ಣ ಹಾಗೂ ಶಾರದಮ್ಮ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು. ಮಗಳು ಉಷಾಳ ವಿವಾಹವಾಗಿತ್ತು. ಈ ಕಾದಂಬರಿಯ ಮುಖ್ಯ ಪಾತ್ರವಾದ ರತ್ನಾ ಇವರ ಎರಡನೆಯ ಮಗ ಸುರೇಶನ ಪತ ತ್ನಿಇವರಿಬ್ಬರ ವಿವಾಹವಾಗಿ ಐದು ವರ್ಷವಾಗಿತ್ತು. ಮಗ ರವಿ ಯು. ಕೆ. ಜಿ ಓದುತ್ತಿದ್ದ. ಮೊದಲನೆಯ ಸೊಸೆ ಶ್ರೀಮಂತೆಯಾಗಿದ್ದ ಲಲಿತ.


ರತ್ನಾಳ ತಂದೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಖಾಸಗಿ ಸಂಸ್ಥೆಯ ಹೈಸ್ಕೂಲ್ ವಿಭಾಗದಲ್ಲಿ ಉಪಾಧ್ಯಾಯನಾಗಿದ್ದ ಸುರೇಶ ಆರ್ಕೆಸ್ಟ್ರಾ ನಡೆಸುತ್ತಿದ್ದ. ರತ್ನಾಳ ಚಿಕ್ಕಮ್ಮನ ಮಗಳು ಗಾಯತ್ರಿ ಅವನೊಂದಿಗೆ ಹಾಡುತಿದ್ದಳು. ಗಾಯತ್ರಿಗಿಂತ ರೂಪಸಿ ರತ್ನ, ಗಾಯತ್ರಿ ತಂದೆ ತಾಯಿಗೆ ಒಬ್ಬಳೇ ಮಗಳು. ಗಾಯತ್ರಿ ಇಂಜಿನಿಯರ್ ವರನನ್ನು ವಿವಾಹವಾದ ತಿಂಗಳಲ್ಲಿ ಸರಳವಾಗಿ ದಿಢೀರ್ ಎಂದು ಸುರೇಶ ಹಾಗೂ ರತ್ನಾರ ವಿವಾಹವಾಗಿತ್ತು. 


ರತ್ನಾ ಬಹಳ ಸ್ವಾಭಿಮಾನದ ಸ್ವಭಾವದವಳು. ತಾನು ಕೇಳಿದಾಕ್ಷಣ ಮರು ಮಾತಾಡದೆ ಹಣ ಹಾಗೂ ಸೌಂದರ್ಯ ಕಂಡು ವಿವಾಹಕ್ಕೆ ಒಪ್ಪುವಳೆಂದು ನೆನೆಸಿದ್ದ ಸುರೇಶನ ಮನಸ್ಥಿತಿಗೆ ವಿರುದ್ಧವಾಗಿ ಕಟ್ಟುನಿಟ್ಟಾದ ಶರತ್ತುಗಳನ್ನು ಹಾಕಿಯೇ ವಾಸ್ತವವನ್ನು ತೋರಿಸಿಯೇ ಸರಳವಾದ ವಿವಾಹವಾಗಿದ್ದಳು ರತ್ನ, ತಮ್ಮ ಮನೆಯ ಹೆಚ್ಚುಗಾರಿಕೆಯನ್ನು ತೋರಿಸಲು ಹೋದಾಗ "ಈ ಭವ್ಯ ಬಂಗಲೆ ನಿಮ್ಮ ಸ್ವಂತದ್ದಲ್ಲ, ನಿಮ್ಮ ತಂದೆ-ತಾಯಿಯದ್ದೂ ಅಲ್ಲ. ಅತ್ತಿಗೆ ಕಡೆಯಿಂದ ಬಂದ ಬಳುವಳಿ. ಅವರು ಹೋಗೆಂದಾಗ ಇಲ್ಲಿಂದ ಹೊರನಡೆಯಬೇಕು" ಎಂದು ಸತ್ಯವನ್ನು ಅವನ ಮುಖಕ್ಕೆ ತೋರಿದ್ದಳು.


ಆತನ ಸುಳ್ಳು ಶ್ರೀಮಂತಿಕೆಯನ್ನು ನಮ್ಮದೇ ಎಂದಾಗ ನಿರಾಕರಿಸಿ, ಸ್ವಾಭಿಮಾನದಿಂದ ಜೀವಿಸಲು ಪುಟ್ಟ ಮನೆ ಮಾಡೋಣವೆಂದರೂ ಒಪ್ಪಿರಲಿಲ್ಲ. ಬುದ್ಧಿವಂತೆಯಾದರೂ ಮುಂದೆ ಓದಲು ಸಾಧ್ಯವಾಗದೆ, ಸರಿಯಾದ ಕೆಲಸ ಸಿಗದೆ ಸದ್ಯಕ್ಕೆ ಲಲಿತಾಳಿಗೆ ಸಹಾಯಕಳಾಗಿ ಆ ಮನೆಯಲ್ಲಿಯೇ ನೆಲೆಸಿದಳು. ಮದುವೆಯಾದ ವರ್ಷದಲ್ಲಿಯೇ ರವಿಯೂ ಜನಿಸಿದ. ಶಾರದಮ್ಮನವರು ಸೊಸೆಯಂದಿರನ್ನು ಭೇದ-ಭಾವ ಮಾಡುತ್ತಿರಲಿಲ್ಲವಾದರೂ ಮಗಳ ಮೇಲೆ ಅಧಿಕ ವ್ಯಾಮೋಹ.


ಸುರೇಶ ಆರ್ಕೆಸ್ಟ್ರಾ ಮೇಷ್ಟ್ರು, ವಾದ್ಯಗಳು, ರೂಮಿನ ಬಾಡಿಗೆ ಎಂದು ನೆಪ ಹೇಳಿ ಮನೆಗೆ ಒಂದು ಪೈಸೆಯನ್ನೂ ಕೊಟ್ಟಿರಲಿಲ್ಲ. ಸ್ವಾಭಿಮಾನಿ ರತ್ನ ಅವನಿಂದ ತಮ್ಮಿಬ್ಬರ ಮನೆ ಖರ್ಚಿಗೆಂದು 3000 ಕೊಡಿಸುತ್ತಿದ್ದಳು. ಲಲಿತಾಳಿಗೆ ಅವಳ ಕಷ್ಟದ ಅರಿವಿದ್ದು ತಿಂಗಳ ಕೊನೆಯಲ್ಲಿ ಅದೇ ಹಣದಲ್ಲಿ 500 ರೂಪಾಯಿಗಳನ್ನು ರತ್ನಳಿಗೆ ಕೊಡುತ್ತಿದ್ದಳು. ಮಗನನ್ನು ಕಾನ್ವೆಂಟಿಗೆ ಸೇರಿಸಲು ಹಣಕೊಡಲು ಒಪ್ಪಿರಲಿಲ್ಲ ಸುರೇಶ. ಮತ್ತೆ ಅವನು ನಡೆಸುತ್ತಿದ್ದ ಆರ್ಕೆಸ್ಟ್ರಾ 'ಶ್ರೀಶೃತಿ ಆರ್ಕೆಸ್ಟ್ರಾ' ಎಂಬ ಹೆಸರಿನಲ್ಲಿ ಜಗದೀಶನ ನೇತೃತ್ವದಲ್ಲಿ ಮತ್ತೆ ಶುರುವಾಗಿತ್ತು. ಈಗ ಅಲ್ಲಿಗೆ ಗಾಯಕನಾಗಿ ಹೋಗುತ್ತಿದ್ದ ಸುರೇಶ.


ಮುಂದೆ ಸುರೇಶನ ನಿಜಬಣ್ಣ ಒಂದೊಂದಾಗಿ ಅರಿವಾಗುತ್ತಾ ಹೋಗುತ್ತದೆ. ದಾಂಪತ್ಯದ ಆಕರ್ಷಣೆ ತಪ್ಪಿದ್ದು, ಗಂಡ ಸಂಪಾದಿಸುತ್ತಿದ್ದ, ಇಟ್ಟಿದ್ದ ಹಣ ಹೆಂಡತಿಗೆ ತಿಳಿದಿಲ್ಲದ್ದು ಮಾತ್ರವಲ್ಲ ಸಿಗುತ್ತಲೂ ಇರಲಿಲ್ಲ. ಆರ್ಕೆಸ್ಟ್ರಾದಿಂದ ಬಂದ ಹಣ ಎಷ್ಟು ಎಂಬ ಲೆಕ್ಕವನ್ನೇ ಆತ ಹೇಳುತ್ತಿರಲಿಲ್ಲ. ಅಲ್ಲದೆ, ಕುಡಿತದ ಚಟ ಶುರುವಾಗಿದ್ದು ಜೋರಾಗಿತ್ತು. ಮನೆಯಲ್ಲಿ ಯಾರ ಮಾತನ್ನೂ ಆತ ಕೇಳುತ್ತಿರಲಿಲ್ಲ. ಜಗದೀಶ ಶುರು ಮಾಡಿದ ಆರ್ಕೆಸ್ಟ್ರಾದಲ್ಲಿನ ಗಾಯಕಿಯ ತಂಗಿ ಊರ್ಮಿಳ ಸುರೇಶನಿಗೆ ಗಂಟು ಬಿದ್ದಳು.


ಮುಂಬೈಯಿಂದ ಬಂದ ನಾದಿನಿ ಉಷಾ ತನ್ನನ್ನು ಲೆಕ್ಕಕ್ಕೆ ಇಟ್ಟಿಲ್ಲದಿರುವುದನ್ನು ಕಂಡು ಸ್ವಾಭಿಮಾನಿ ರತ್ನಾಳ ಆತ್ಮಾಭಿಮಾನಕ್ಕೆ ಪೆಟ್ಟಾಗಿತ್ತು. ಗಂಡನ ವಿಚಾರವೆಲ್ಲವೂ ತವರಿನವರೆಗೂ ತಿಳಿದಿತ್ತು. ಶ್ರೀಮಂತರಾಗಿದ್ದ ಗಾಯಿತ್ರಿ ಈಗ ಇವಳಿಗೊಂದು ದಾರಿ ತೋರಿದ್ದಳು. ಗಾಯತ್ರಿಯ ಗಂಡ 3 ವರ್ಷ ಅಮೆರಿಕೆಗೆ ಹೋಗುತ್ತಿದ್ದರಿಂದ ಅವಳು ಒಬ್ಬಳೇ ಇರಬೇಕಾಗಿ ಬಂದಿತು. ಅತ್ತೆ ಮನೆಯಲ್ಲಿಯೂ ಹೊಂದಿಕೊಂಡಿರಲಿಲ್ಲ. ಹಾಗಾಗಿ ಅವಳ ಮನೆಯಲ್ಲಿ ರತ್ನಳನ್ನು ಜೊತೆಗಿರಲು ಕರೆದಿದ್ದಳು. ಅವಳ ಮನೆಯಲ್ಲಿಯೇ ಇದ್ದುಕೊಂಡು ಎಂ.ಬಿ.ಎ ಮಾಡಿದರೆ ನಂತರ ಆಕೆಯ ಗಂಡನ ಕಂಪನಿಯಲ್ಲಿ ಅವಳಿಗೊಂದು ಕೆಲಸ ಕೊಡಿಸುತ್ತೇನೆ ಎಂದಿದ್ದಳು. ಮಕ್ಕಳಿಲ್ಲದ ಅವರಿಗೆ ರವಿಯನ್ನು ದತ್ತು ಕೊಡಲು ಕೇಳಿದಳು. ಮಗುವನ್ನು ದತ್ತು ಕೊಟ್ಟರೆಂದು ದೂರದಲ್ಲಿರುವ ಅವಶ್ಯಕತೆ ಇರಲಿಲ್ಲ. ಮಗುವನ್ನು ಲಾಲಿಸಲು ಸಂಪೂರ್ಣ ಅಧಿಕಾರವಿತ್ತು. ಅಲ್ಲದೆ ರತ್ನಳ ತಮ್ಮಂದಿರ ಬದುಕನ್ನು ಉತ್ತಮವಾಗಿಸಲು ದಾರಿ ತೋರಿದ್ದಳು


ರ್ಯಾಂಕ್ ಸ್ಟೂಡೆಂಟ್ ಆಗಿ ಅಪರಿಮಿತ ಬುದ್ಧಿವಂತೆಯಾಗಿದ್ದರೂ.. ಅಡುಗೆ ಮನೆಯಲ್ಲಿ ನಾನು ಕತ್ತಲಿನಲ್ಲಿ ಕೊಳೆತು ಹೋಗಬಾರದೆಂದು ಬೇರೆಲ್ಲಾ ಕಿಂಡಿಗಳು ಮುಚ್ಚಿದಾಗ ಬೆಳಕಾಗಿ ಬಂದಿದ್ದ ಉಷಾಳ ಮಾತಿಗೆ ಒಪ್ಪಿದಳು. 


ಅಲ್ಲದೆ, ನಯವಾಗಿಯೇ ಓರಗಿತ್ತಿ ಹಾಗೂ ಅತ್ತೆ ಕೆಲಸಗಾತಿಯ ಪಟ್ಟ ಕಟ್ಟಿದರು. ಹಣ ಹೊಂದಿಸಲು ಲಲಿತಾಳ ತಾಯಿಯ ಮನೆಯಲ್ಲಿಯೂ ಅಡಿಗೆಯವಳಾಗಿಯೂ ದುಡಿದಿದ್ದ ರತ್ನಳಿಗೆ ಪ್ರೀತಿ, ಮಮತೆಗಳು ಇಲ್ಲದ್ದು ಮಾತ್ರವಲ್ಲದೆ.. ಚುಚ್ಚು ಮಾತುಗಳು ಕೇಳುತ್ತಿದ್ದವು. ಹೀಗಿದ್ದ ಸಂದರ್ಭದಲ್ಲಿ ರತ್ನಾ ಆ ಮನೆಯಿಂದ ಹೊರಬಂದದ್ದು ಹೇಗೆ..?


ಸುರೇಶ ಹಾಗೂ ಗಾಯತ್ರಿ ಒಬ್ಬರನ್ನು ಒಬ್ಬರು ಪ್ರೀತಿಸಿದ್ದರೇ...? ಅವರಿಬ್ಬರ ಮಧ್ಯೆ ಇದ್ದ ಬಾಂಧವ್ಯವಾದರೂ ಹೇಗಿತ್ತು, ಆ ವಿಚಾರವೆಲ್ಲವೋ ರತ್ನಗಳಿಗೆ ತಿಳಿದದ್ದು ಹೇಗೆ..? ರವಿಯನ್ನು ದತ್ತು ಪಡೆಯುವ ವಿಚಾರವನ್ನು ಕೈಬಿಡುವ ವಿಷಯದಲ್ಲಿ ವಿರಸ ಬರದೆ ಅದು ಸುಖಾಂತ್ಯವಾದ ಬಗೆ ಹೇಗೆ..? ಗಾಯತ್ರಿಯ ಗಂಡ ವಾಪಾಸು ಬಂದಾಗ ಅವರ ದಾಂಪತ್ಯದಲ್ಲಿ ಆದ ಬದಲಾವಣೆ ಏನು..? ರತ್ನ ಮನೆಯಿಂದ ಹೊರ ಬಂದ ನಂತರ ಸುರೇಶನ ಪಾಡು ಏನಾಯಿತು..? ಊರ್ಮಿಳಾ ಸುರೇಶನ ಬದುಕಿನಿಂದ ದೂರಾದದ್ದೇಕೆ.. ಸುರೇಶ ಯಾವ ಪರಿಸ್ಥಿತಿಯಲ್ಲಿ ರತ್ನಳ ಬಳಿ ಬಂದ ? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ನೋಡಿ ಕಾದಂಬರಿ ಸವಿಗಾನ ಸ


ಗಾಯಿತ್ರಿಯ ತಂದೆಯ ಶ್ರೀಮಂತಿಕೆಯ ದರ್ಪ ಕಾಲಕ್ರಮೇಣ ಇಳಿದದ್ದು ಒಂದು ರೀತಿಯ ಬದುಕಿನ ಬದಲಾವಣೆಯಾದರೆ... ಲಲಿತಾ ಹಾಗೂ ಶಾರದಮ್ಮನವರು ರತ್ನಾಳನ್ನು ನೋಡುವ ಹಾಗೂ ಆಕೆಯನ್ನು ಕುಗ್ಗಿಸುವ ಸಂದರ್ಭಗಳನ್ನು ತಂದೊಡ್ಡುವಾಗ ಮೊದಲಿನ ಆತ್ಮೀಯತೆ ಸಂಪೂರ್ಣವಾಗಿ ಕಡಿಮೆಯಾಗಿರುತ್ತದೆ. ಇದು ಮತ್ತೊಂದು ರೀತಿಯ ಬದುಕಿನ ಏರಿಳಿತ, 


ಹಣವಿದ್ದಾಗ ಮಾತ್ರ ಮನುಷ್ಯನಿಗೆ ಬೆಲೆ ಎನ್ನುವಂತಹ ನಡುವಳಿಕೆಗಳನ್ನು ಇಲ್ಲಿ ಉಷಾ, ಲಲಿತಾ ಹಾಗೂ ರತ್ನರನ್ನು ಕಾಣುವ, ಮಾತನಾಡಿಸುವ ರೀತಿಯಲ್ಲಿ ಗುರುತಿಸಬಹುದು.


ಈ ಕಾದಂಬರಿಯಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ರತ್ನಾಳ ಸ್ವಾಭಿಮಾನದ ನಡೆ ಇಷ್ಟವಾಗುತ್ತದೆ. ಲಲಿತಾಳ ಜೊತೆ ಎಲ್ಲದಕ್ಕೂ ಹೊಂದಿಕೊಂಡು ಹೋಗಬಹುದಾದರೂ.. ತನ್ನದೇ ಆದ ಸ್ವಂತ ವ್ಯಕ್ತಿತ್ವವನ್ನು ಪ್ರತಿ ಹೆಜ್ಜೆಯಲ್ಲಿಯೂ ರೂಢಿಸಿಕೊಳ್ಳುತ್ತಾ ಹೋಗುವುದನ್ನು ಗುರುತಿಸಬಹುದು. ತನ್ನದೇ ಕೆಲಸ ಹುಡುಕುವ ಪ್ರಯತ್ನ, ಮನೆಯಲ್ಲಿ ಕೆಲಸ ಮಾಡುವುದು, ಲಲಿತಳ ಮನೆಯಲ್ಲಿಯೂ ಅಡಿಗೆಯವಳಾಗಿ ದುಡಿಯುವುದು ಇದೆಲ್ಲವನ್ನೂ ಮೀರಿ ಕಷ್ಟಕ್ಕೆ ತಕ್ಕ ಪ್ರತಿಫಲವೆಂಬಂತೆ ಮುಂದೆ ಒಳ್ಳೆಯ ಬದುಕು ರತ್ನಾಳದ್ದಾಗುವುದು ಖುಷಿ ತರುತ್ತದೆ.


ವಿದ್ಯಾವಂತೆಯಾದರೂ.. ಹಣ ಬಂದರೂ.. ತಪ್ಪು ಮಾಡಿದ ಸುರೇಶನನ್ನು ಮತ್ತೆ ಕಂಡಾಗ ಆತ ಪಶ್ಚಾತಾಪ ಪಡುತ್ತಿದ್ದಾನೆಂಬುದರ ಅರಿವಾಗಿ ತನ್ನ ಸಂಸಾರವನ್ನು ಕಟ್ಟಿಕೊಳ್ಳುವ ರೀತಿ ವಿವಾಹಕ್ಕೆ ಕೊಡುವ ಪ್ರಾಶಸ್ತ್ಯಯನ್ನು ತೋರುತ್ತದೆ.


ಚೆಂದದ ಕಾದಂಬರಿಯ ಸುಲಲಿತ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ