ಸೋಮವಾರ, ಏಪ್ರಿಲ್ 27, 2026

ನನ್ನದಲ್ಲದ್ದು (ಪುಸ್ತಕ ಯಾನ - 438)


ಪುಸ್ತಕದ ಶೀರ್ಷಿಕೆ : ನನ್ನದಲ್ಲದ್ದು 

ಲೇಖಕರು : ಡಾ|| ನಾ. ಮೊಗಸಾಲೆ

ಪ್ರಕಾಶಕರು : ಸಾಹಿತ್ಯ ಪ್ರಕಾಶನ

ಪ್ರಥಮ ಮುದ್ರಣ :1977

ಮರು ಮುದ್ರಣ : 2023

ಪುಟಗಳು : 128

ಬೆಲೆ : 150 ರೂ. 


 ಸಾಮಾನ್ಯವಾಗಿ ಕಾದಂಬರಿಗಳಲ್ಲಿ ಹೆಣ್ಣಿನ ಭಾವಗಳನ್ನು ಹೆಚ್ಚಾಗಿ ಓದುತ್ತೇವೆ. ಗಂಡಿನ ಬದುಕನ್ನು ಹಾಗೂ ಭಾವಗಳನ್ನು ಬಿಚ್ಚಿಡುವ ಕಾದಂಬರಿಗಳನ್ನು ನೋಡುವುದು ತೀರಾ ಕಡಿಮೆ. ಇಲ್ಲಿ ಅಪರೂಪದ ಕಥಾ ವಸ್ತುವನ್ನು ಕಾಣಬಹುದು ಜೊತೆಗೆ ಕಾದಂಬರಿಯ ನಿರೂಪಣೆ ವಿಭಿನ್ನವಾಗಿದೆ. 


ಈ ಕಾದಂಬರಿಯಲ್ಲಿ ಭೈರಪ್ಪನವರ 'ಜಲಪಾತ' ಕಾದಂಬರಿಯ ಪ್ರಸ್ತಾಪವಿದೆ. ಲೇಖಕರು ಈ ಕಾದಂಬರಿ ಕರ್ಮವೀರದಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ಸಂದರ್ಭದಲ್ಲಿ ಪ್ರಭಾವಿತರಾಗಿದ್ದನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ಕಾರಂತರ 'ಅಳಿದ ಮೇಲೆ' ಕಾದಂಬರಿಯ ಪ್ರಭಾವವೂ ಅವರ ಮೇಲಾಗಿದೆ. ಆದರೆ, ಕಥಾವಸ್ತು ಅವೆರಡಕ್ಕಿಂತಲೂ ಭಿನ್ನ. 


ಈ ಕಾದಂಬರಿಗೆ 1977ರ ಶ್ರೇಷ್ಠ ಕಾದಂಬರಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ ಬಂದಿದೆ. 


ಕಾದಂಬರಿ ಶೇಖರ ಹಾಗೂ ಗೀತಾರ ದಾಂಪತ್ಯದ ಬದುಕು ಹಾಗೂ ಅವರ ಮಾತುಕತೆ, ಅರ್ಥೈಸುವಿಕೆಯಿಂದ ಶುರುವಾಗುತ್ತದಾದರೂ.. ಇಲ್ಲಿ ಶ್ರೀನಿವಾಸರ ಬದುಕು ತೆರೆದುಕೊಳ್ಳುತ್ತಾ ಹೋಗುತ್ತದೆ. ಶ್ರೀನಿವಾಸರ ಆತ್ಮಹತ್ಯೆಯ ನಂತರ ಶೇಖರ ಅವರ ಡೈರಿ, ಅವರೊಂದಿಗಿದ್ದ ಆತನ ಒಡನಾಟ ಜೊತೆಗೆ ವಾಮನ ಕಾಮತರ ಮೂಲಕ ಅವರನ್ನು ನೋಡಿ ಚದುರಿದ ಚಿತ್ರಗಳನ್ನು ಜೋಡಿಸುತ್ತಾ ಸಾಗುವ ಚಿತ್ರಣ ಇಲ್ಲಿದೆ.


ಶ್ರೀನಿವಾಸರು ಶೇಖರನ ಜೊತೆಗಿನ ಕೊನೆಯ ಭೇಟಿಯಲ್ಲಿಯೂ ತಮ್ಮ ಮನದ ಮಾತುಗಳನ್ನು ನೇರವಾಗಿ ತೆರೆದಿಟ್ಟಿರಲಿಲ್ಲ. ಇಬ್ಬರಲ್ಲಿಯೂ ಒಂದು ರೀತಿಯ ನಿಗೂಢತೆ, ಕಂದಕ ದೊಡ್ಡದಾಗುತ್ತಿರುವಂತಹ ಸಂದರ್ಭವೇ ಅಲ್ಲಿತ್ತು. ಆದರೆ, ಶೇಖರನಿಗೆ ಬಂದ ಪತ್ರ ಶ್ರೀನಿವಾಸರ ಕೊನೆಯ ದಿನಗಳ ಮನಸ್ಥಿತಿಯನ್ನು ತೆರೆದಿಡುತ್ತಿತ್ತಾದರೂ.. ಅವರ ಪೂರ್ಣ ವಿವರಗಳು ಬೇಕಾದರೆ ಅವರೇ ಸೂಚಿಸಿದಂತೆ ಹಾಗೂ ಅವರು ಅನುಮತಿಸಿದ್ದಂತೆ ಅವರ ಡೈರಿಗಳು, ಅವರ ಪತ್ನಿ, ಶ್ರೀಮತಿ ಶಾಂತ ಎಸ್. ವಡ್ಕೆ, ಶ್ರೀಮತಿ ಡಾ|| ಸೂಕ್ಷ್ಮ ಆರ್. ಮಿಶ್ರ ಹಾಗೂ ವಾಮನ ಕಾಮತ್ ಅವರನ್ನು ಭೇಟಿಯಾಗಿ ಅವರಿಂದ ಹೆಚ್ಚಿನ ಮಾಹಿತಿ ಪಡೆಯಬಹುದಾಗಿತ್ತು.


ತಮ್ಮ ಕಾದಂಬರಿ ಬಿಡುಗಡೆ ಸಮಾರಂಭಕ್ಕೆ ಬೆಂಗಳೂರಿಗೆ ಹೋಗಿ ವಾಪಸ್ಸು ಮಂಗಳೂರಿಗೆ ಬರುತ್ತಿರುವಾಗ ಆದ ಅಪಘಾತ ಆರ್ಥೋಪೆಡಿಕ್ ಪ್ರೊಫೆಸರ್ ಆಗಿದ್ದ ಡಾಕ್ಟರ್ ಶ್ರೀನಿವಾಸರನ್ನು ಹಾಗೂ ಪತ್ರಿಕೋದ್ಯಮಿ, ಬರಹಗಾರನಾಗಿದ್ದ ಶೇಖರ್ ಇಬ್ಬರನ್ನೂ ಹತ್ತಿರಕ್ಕೆ ತಂದಿತ್ತು. ಮಾನವೀಯ ದೃಷ್ಟಿಯಿಂದ ಶ್ರೀನಿವಾಸರು ಸಹಾಯ ಮಾಡಿ, ಚಿಕಿತ್ಸೆ ಮಾಡಿದರಾದರೂ.. ಮುಂದೆ ಇಬ್ಬರ ಸಾಹಿತ್ಯಪ್ರೇಮ, ಯೋಚನಾಲಹರಿ, ದೃಷ್ಟಿಕೋನಗಳು ಕಲೆತು ಸ್ನೇಹಕ್ಕೆ ತಿರುಗಿತು. 


ಅಚ್ಚುಕಟ್ಟು, ಶಿಸ್ತು, ಸಂಯಮದ ಶ್ರೀನಿವಾಸರನ್ನು ಶೇಖರ್ ಗಮನಿಸಿದ ಪರಿ, ಅವರ ಓದಿನ ವೇಗ, ವಿಮರ್ಶೆ, ವಾಡ ಮಂಡಿಸುವಿಕೆ ಹೀಗೆ ಹಲವಾರು ವಿಷಯಗಳನ್ನು ಕಾಣಬಹುದು.


ಶ್ರೀನಿವಾಸರಂತೆ ಅವರ ಶ್ರೀಮತಿ ವತ್ಸಲ ಕೂಡ ಸ್ನೇಹಮಯಿ. ಮುಂದೆ ಶೇಖರ್ ಆ ಮನೆಗೆ ಹೋಗಿ ಬರುತ್ತಿದ್ದಾಗ ಗಮನಿಸಿದಂತೆ.. ಶ್ರೀನಿವಾಸರಿಗೂ ಅವರ ಪತ್ನಿಗೂ ನಡುವೆ ಇರುವ ಬಿರುಕು ಹಾಗೂ ಅದು ಕಂದಕವಾಗುತ್ತಾ ಹೋಗುತ್ತಿದ್ದ ನಡೆಗಳನ್ನು ಗಮನಿಸುತ್ತಾರೆ. ಶ್ರೀನಿವಾಸ್ ದಂಪತಿಗಳಿಗೆ ಮಕ್ಕಳಿಲ್ಲದಿರುವುದೇ ಇದಕ್ಕೆ ಕಾರಣರಾಗಿರಬಹುದು ಎಂದು ಶೇಖರ್ ಪತ್ನಿ ಗೀತಾ ಕೂಡ ಅಭಿಪ್ರಾಯಪಟ್ಟಾಗ ಶ್ರೀನಿವಾಸ್ ಅವರ ಬಳಿ ಈ ವಿಚಾರ ಮಾತನಾಡಬೇಕೇ ಬೇಡವೇ ಎಂದೇ ಯೋಚಿಸಿ ಪ್ರಸ್ತಾಪಿಸಿದರಾದರೂ.. ಶ್ರೀನಿವಾಸ್ ಸ್ನೇಹಮಯಿಯಾಗಿ ಅವರು ತಮ್ಮ ವೈಯಕ್ತಿಕ ಬದುಕನ್ನು ತೆರೆದಿರುತ್ತಾರೆ.


ಮಕ್ಕಳಿಲ್ಲದಕ್ಕೆ ಕಾರಣ ಸ್ವತಃ ತಾನೇ ಎಂದೂ.. ಅವರು ವ್ಯಾಸೆಕ್ಟಮಿ ಮಾಡಿಸಿಕೊಂಡಿರುವ ವಿಚಾರವನ್ನು ತೆರೆದಿಟ್ಟಾಗ ಆಘಾತವಾಗುತ್ತದೆ. ಶ್ರೀನಿವಾಸರ ತಂದೆ-ತಾಯಿಯ ದಾಂಪತ್ಯ, ಅವರ ಬದುಕು, ಚಿಕ್ಕಪ್ಪನ ಸಾವು.. ಅದೇ ಅವರನ್ನು ಆರ್ಥೋಪೆಡಿಕ್ ಡಾಕ್ಟರ್ ಆಗುವಂತೆ ಪ್ರೇರೇಪಿಸಿತು. ಅದಕ್ಕೆ ವಾಮನ ಕಾಮತರ ಸಹಕಾರ ಎಲ್ಲವೂ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.


ಚಿಕ್ಕಪ್ಪನ ಸಾವು ಅವರನ್ನು ಡಾಕ್ಟರ್ ಆಗುವಂತೆ ಪ್ರೇರೇಪಿಸಿದರೂ.. ವೈದ್ಯ ಶಿಕ್ಷಣದ ಓದು ಮುಗಿಸಿ ಬಂದವರಿಗೆ ತಮ್ಮ ತಂದೆಯನ್ನು ಉಳಿಸಿಕೊಳ್ಳಲಾಗದ್ದು ಮತ್ತಷ್ಟು ಪ್ರಭಾವಿಸುತ್ತದೆ. 


ಮಕ್ಕಳಾಗಡ್ದರಲ್ಲಿ ತಮ್ಮ ಮನದ ಮಾತು, ಜೊತೆಗೆ ತಾವು ಕೈಗೊಂಡ ನಿರ್ಧಾರವನ್ನು ತೆರೆದಿಟ್ಟಾಗ ವತ್ಸಲಾ ಮನಸ್ಸಿಗೆ ಆಗುವ ಆಘಾತಕ್ಕಿಂತಲೂ ದೊಡ್ಡ ಆಘಾತವಾಗುವುದು ಅವಳು ಕೃತಕದ ಗರ್ಭದಾನ ಮಾಡಿಸಿಕೊಂಡು ತಾಯಿಯಾಗಬಹುದು ಎಂದು ಹೇಳಿದಾಗ. ಅವಳು ವಿಜ್ಞಾನದ ವಿದ್ಯಾರ್ಥಿನಿಯೇ ಆಗಿದ್ದರೂ ಆ ಕಾಲಘಟ್ಟದಲ್ಲಿ ಅದನ್ನು ಒಪ್ಪುವುದು ಹಾಗೂ ಒಪ್ಪಿಸುವುದು ಒಂದು ರೀತಿಯ ಕ್ರಾಂತಿಕಾರಿ ಹೆಜ್ಜೆಯೇ..


ಇದಾದ ನಂತರವೂ ಅವರ ದಾಂಪತ್ಯ ಸಾಗುತ್ತಿದ್ದರೂ ಮೊದಲಿನ ಅರ್ಥೈಸಿಕೊಳ್ಳುವಿಕೆ ಇರುವುದಿಲ್ಲ. ಇಬ್ಬರ ನಡುವಿನ ಕಂದಕ ಹೆಚ್ಚಾಗುತ್ತಲೇ ಹೋಗುತ್ತದೆ.


ವತ್ಸಲಾರನ್ನು ಭೇಟಿಯಾಗಿ ಶ್ರೀನಿವಾಸರ ಡೈರಿ ಪಡೆಯಬೇಕೆಂದುಕೊಂಡು ಹೋದರೂ ಮತ್ತೊಬ್ಬರ ಡೈರಿ ಪಡೆಯುವುದು ಓದುವುದು ಸರಿಯೋ..?ತಪ್ಪೋ? ಅವರು ಅದನ್ನು ಹೇಗೆ ತೆಗೆದುಕೊಳ್ಳುತ್ತಾರೋ ಎನ್ನುವ ಆಲೋಚನೆಯಲ್ಲಿದ್ದವರಿಗೆ ವತ್ಸಲಾಳಿಗೆ ಬರೆದ ಪತ್ರದಲ್ಲಿ ಅವರು ಶೇಖರರಿಗೆ ಏನು ಕೇಳಿದರೂ ಕೊಡಬೇಕೆಂಬ ಆದೇಶವಿತ್ತು. 


ಮುಂದೆ ಡೈರಿ ಸಾಗುತ್ತಾ ಹೋಗುತ್ತದೆ. ಇಲ್ಲಿ ಡೈರಿಯ ಬರವಣಿಗೆಯಲ್ಲಿ ಕೆಲವು ಸಂಕೇತಗಳು, ಚಿತ್ರಣಗಳನ್ನು ಅರ್ಥೈಸಿರುವ ರೀತಿ ಹಾಗೂ ವಿಭಿನ್ನತೆ ಸೂಕ್ಷ್ಮವಾಗಿ ಚಿತ್ರಿತವಾಗಿದೆ.


ಶಾಂತ, ಸೂಕ್ಷ್ಮ ಹಾಗೂ ವಾಮನ ಕಾಮತ್ ಇವರು ಮೂವರೂ ಶ್ರೀನಿವಾಸರ ಬದುಕಿನಲ್ಲಿ ಯಾವ ಪಾತ್ರ ವಹಿಸಿದ್ದರು ಇವರ ವೈಶಿಷ್ಟ್ಯವೇನು ? ಇವರನ್ನು ಶೇಖರ್ ಮುಖಾಮುಖಿಯಾದರೆ..?


ವೈದ್ಯರಾಗುವಾಗ ತಂದೆ-ತಾಯಿಯನ್ನು ಒಪ್ಪಿಸಿ ಓದಲು ಕಳುಹಿಸಿದ ವಾಮನ ಕಾಮತರ ಕುರಿತು ಗೊತ್ತಿತ್ತಾದರೂ ಶಾಂತ ಹಾಗೂ ಸೂಕ್ಷ್ಮ ಇವರ ಕುರಿತಾಗಿ ಒಮ್ಮೆಯೂ ಶೇಖರ್ ಅವರ ಬಳಿ ಹೇಳದೆ ಇರಲು ಕಾರಣವೇನಿತ್ತು..?


ಒಬ್ಬ ವ್ಯಕ್ತಿ ಸಾರ್ವಜನಿಕವಾಗಿ ಹೇಗಿದ್ದನೋ ಅಂತರಂಗದಲ್ಲಿಯೂ ಹಾಗೆಯೇ ಇದ್ದ ನೇ..? ಅಷ್ಟೂ ದಿನ ಇಟ್ಟುಕೊಂಡಿದ್ದ ಗೌರವಕ್ಕೆ ಮುಕ್ಕಾಗುವಂತಹ ಏನಾದರೂ ವಿಚಾರವಿದ್ದರೆ ಶೇಖರ್ ಅದನ್ನು ಹೇಗೆ ತೆಗೆದುಕೊಳ್ಳಬಹುದು ಎನ್ನುವ ಕುತೂಹಲದಲ್ಲಿಯೇ ಕಾದಂಬರಿ ಸಾಗುತ್ತದೆ.


ವ್ಯಾಸೆಕ್ಟಮಿ ಮಾಡಿಕೊಂಡ ವಿಷಯವನ್ನು ಶ್ರೀನಿವಾಸರು ತಮ್ಮ ಪತ್ನಿ ವತ್ಸಲ ಳ ಬಳಿ ಹಂಚಿಕೊಳ್ಳದೆ ತಮಗೆ ಮಕ್ಕಳಾಗದಕ್ಕೆ ಬೇರೆಯ ಕಾರಣವನ್ನು ನೀಡಿದ್ದರೆ..!?

ಶೇಖರ್ ಕೂಡ ಇದನ್ನೇ ಸೂಚಿಸುತ್ತಾ ರಾದರೂ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳಲು ಇಚ್ಛಿಸದ ಶ್ರೀನಿವಾಸರ ನಡೆ ಅಲ್ಲಿ ಒಪ್ಪಬಹುದಾದರೂ .. ಮುಂದೆ ತಮ್ಮ ಬದುಕನ್ನು ಅ-ಸಹ್ಯವಾಗಿಸಿಕೊಳ್ಳುವ ಪರಿ ಮನುಷ್ಯನ ಬದುಕಿನಲ್ಲಿ ಕಾಮ ಹಾಗೂ ದಾಂಪತ್ಯ ಜೀವನದ ಹಲವು ಮುಖಗಳನ್ನು ತೆರೆದಿಡುತ್ತದೆ. 


ಶ್ರೀನಿವಾಸರು ತಮ್ಮ ಪತ್ನಿ ಕೃತಕ ಗರ್ಭಧಾರಣೆಗೆ ಒಪ್ಪಿದರೆ ಯಾರನ್ನು ವೀರ್ಯದಾನಕ್ಕೆ ಆಯುತ್ತಿದ್ದರು ಎಂಬುದನ್ನು ಹೇಳಿದಾಗ ಅಚ್ಚರಿಯ ಜೊತೆಗೆ ಹೀಗೂ ಯೋಚಿಸುತ್ತಾರಾ ಎನ್ನಿಸುತ್ತದೆ.


ವತ್ಸಲಾರ ತಂದೆಗೆ ಈ ವಿಚಾರ ಗೊತ್ತಾದಾಗ ಅವರು ಪ್ರತಿಕ್ರಿಸುವ ಪರಿ, ತಾಳ್ಮೆ ಹಾಗೂ ವ್ಯವಧಾನದಿಂದ ಉತ್ತರಿಸುವ ರೀತಿ ಒಂದು ಸಂಸಾರವನ್ನು ಒಡೆಯಬಾರದು ಎನ್ನುವ ಅವರ ದೂರಾಲೋಚನೆಗೆ ಕನ್ನಡಿ ಹಿಡಿದಂತಿದೆ.


ಬಾಲವಿಧವೆಯಾದವರು, ಕಿರಿಯ ವಯಸ್ಸಿನಲ್ಲಿಯೇ ವಿಧವೆಯಾದವರೆಲ್ಲರೂ ಕೊನೆಯ ತನಕ ತಾ ಪರಪುರುಷ ಸಂಘ ಬಯಸದೆ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವುದರ ವಿಚಾರ ಹಾಗೂ ಶ್ರೀನಿವಾಸರಲ್ಲಿ ಕಾಣುವ ಬಯೋಲಾಜಿಕಲ್ ನೆಸಿಸಿಟಿಯಾದ ಕಾಮ ಇವೆರಡನ್ನು ಕಂಡಾಗ ಮನಸ್ಸು ಎಷ್ಟು ಸೂಕ್ಷ್ಮ ಮತ್ತು ಎಷ್ಟು ಬಲಿಷ್ಠ ಎಂಬುದರ ಅರಿವಾಗುತ್ತದೆ.


ಈ ಕಾದಂಬರಿಯಲ್ಲಿ 

ಖಾಲಿ...

ಎನ್ನುವುದಕ್ಕೆ ಬಹಳಷ್ಟು ಅರ್ಥ ಕಾಣುತ್ತದೆ. 


ವಾಮನ ಕಾಮತರ ಜೊತೆಗೆ ಮಾತನಾಡಿದ ಶ್ರೀನಿವಾಸ್ ಅವರಿಗೆ ಹೊಳೆದ ಸೂಕ್ಷ್ಮ ಏನಿತ್ತು ? ಶ್ರೀನಿವಾಸರ ಚರಾಸ್ತಿ ವಾಮನ ಕಾಮತರ ಹೆಸರಿಗೆ ಬರೆದಿದ್ದರಾದರೂ.. ಅದು 'ನನ್ನದಲ್ಲದು' ಎನ್ನುವ ಭಾವದಲ್ಲಿ ಅದನ್ನು ಏನು ಮಾಡಲು ಯೋಚಿಸಿದರು..?


ಎಷ್ಟೋ ಬಾರಿ ನಮ್ಮದಲ್ಲದ ಯೋಚನೆಗಳನ್ನು ನಮ್ಮ ಬದುಕಲ್ಲಿ ಅಂಟಿಸಿಕೊಂಡು, ನಮ್ಮದೇ ಎಂಬಂತೆ ಬದುಕುತ್ತಾ.. ಇಲ್ಲದ ಸಮಸ್ಯೆಗಳನ್ನು ಪರಿಹಾರವೆಂಬಂತೆ ಮನಸ್ಸಿಗೆ ತೆಗೆದುಕೊಳ್ಳುತ್ತೇವೆ. ಅದರ ಸರಿ-ತಪ್ಪುಗಳ ದಾರಿ ನಮ್ಮನ್ನು ಬೇರೆಯದ್ದೇ ಬದುಕಿಗೆ ಕೊಂಡೊಯ್ಯುತ್ತದೆ. ಶ್ರೀನಿವಾಸರ ಮೂಲಕ ವ್ಯಕ್ತಿಯೊಬ್ಬನ ಜೀವನದ ಹಲವು ಆಯಾಮಗಳನ್ನು ತೆರೆದಿಟ್ಟಿದ್ದಾರೆ. 


ಇಂದಿನ ದಿನಗಳಲ್ಲಿ ಕೌನ್ಸಲಿಂಗ್, ಮಾನಸಿಕ ಚಿಕಿತ್ಸೆ ಜೊತೆಗೆ ಮಕ್ಕಳ ವಿಚಾರಕ್ಕೆ ಹಲವಾರು ದಾರಿಗಳು ದಕ್ಕುತ್ತವೆ. ಈ ಕಾದಂಬರಿಯನ್ನು ಇಂದಿನ ದಿನಮಾನಕ್ಕೆ ಹೋಲಿಸಿ ನೋಡುವುದಕ್ಕಿಂತ ಲೇಖಕರು ಬರೆದಿರುವ 1974-75ರ ಕಾಲಘಟ್ಟದಲ್ಲಿಯೇ ನಿಂತು ನೋಡುವುದು ಸೂಕ್ತ. 


ಘನವಾದ ಕಥಾವಸ್ತು ಹಾಗೂ ವಿಭಿನ್ನ ನಿರೂಪಣೆಯ ಕಾದಂಬರಿ. 

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ