ಸೋಮವಾರ, ಏಪ್ರಿಲ್ 27, 2026

ಫಾಲ್ಗುಣೀ ಪರ್ವ (ಪುಸ್ತಕ ಯಾನ - 436)



ಪುಸ್ತಕದ ಶೀರ್ಷಿಕೆ : ಫಾಲ್ಗುಣೀ ಪರ್ವ

ಲೇಖಕರು : ಮಲ್ಲಿಕಾ ಕಡಿದಾಳ್

ಪ್ರಕಾಶಕರು : ಲಕ್ಷ್ಮೀ ಪ್ರಕಾಶನ

ಪ್ರಥಮ ಮುದ್ರಣ : 1997

ಪುಟಗಳು : 128


ಮಲ್ಲಿಕಾ ಕಡಿದಾಳ್ ಅವರ ಈ ಕಥಾ ಸಂಕಲನದಲ್ಲಿ ಒಟ್ಟು ನಾಲ್ಕು ಕಥೆಗಳಿವೆ. ರಸವತ್ತಾದ ಭಾಷೆಯ ಜೊತೆಗೆ ಭಾವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪ್ರತಿ ಕಥೆಯ ಶುರುವಿನಲ್ಲಿಯೂ ಸೂಕ್ತಿಗಳ ಉಲ್ಲೇಖ ಮಾಡಿದ್ದಾರೆ. 


ತಿರುವಿದ ಪುಟ : ಫ್ರಾನ್ಸಿನ ಜನ್ನೆ ಜಗನ್ ಅನುಯಾಯಿಗಳಾದ ಒಬ್ಬರು ವೃದ್ಧ ಜನರ ಮಹಾಶಿಬಿರವನ್ನು ಸ್ಥಾಪಿಸಿದ್ದರು. ಇದರ ಮೇಲ್ವಿಚಾರಕರು ಕ್ರಿಶ್ಚಿಯನ್ 'ನನ್'ಗಳು. 68 ವರ್ಷದ ಲೀಲಾ ಈ ವೃದ್ಧಗಣಕ್ಕೆ ಹೊಸದಾಗಿ ಬಂದು ಸೇರುತ್ತಾರೆ. ಮನಸ್ಸಿನಲ್ಲಿ ಬಾಲ್ಯ, ಕೌಮಾರ್ಯ, ಯೌವ್ವನ, ಪ್ರೌಢ ಜೀವನಗಳ ಅವಳ ದಿನಗಳನ್ನು ನೆನೆದು ನಿಟ್ಟುಸಿರು ಬಿಡುವ ಸಂದರ್ಭಗಳು. ಹಿಂದಿನದೆಲ್ಲವನ್ನೂ ಮರೆಯುವುದು ಸುಲಭವಲ್ಲ. ಹೀಗಾಗಿ ದಿನಚರಿ ಬರೆಯುವ ರೂಢಿಯನ್ನು ಮಾಡಿಕೊಂಡಿದ್ದಾರೆ ಲೀಲಾ.

ಶಿಬಿರಕ್ಕೆ ಹೊಸದಾಗಿ ಬಂದವರು ಎಂದಾಗ ಅವರ ಕಷ್ಟಗಳ ಕೋಟಲೆಗಳನ್ನು ತಿಳಿಯುವುದರಲ್ಲಿ ಹಳಬರಿಗಿರುವ ತೀವ್ರ ಆಸಕ್ತಿಯನ್ನು ತೋರುತ್ತಲೇ.. ಅವರ ಮೂಲಕ ಲೀಲಾಳ ಬದುಕಿನ ಮತ್ತಷ್ಟು ವಿಚಾರಗಳನ್ನು ತೆರೆದಿಡುತ್ತಾರೆ. 


ವೃದ್ಧಾಶ್ರಮದಲ್ಲಿ ಕಳೆದ ಮೊದಲ ರಾತ್ರಿ ಲೀಲಾಳಿಗೆ ಯಾವ ಅಭಿಪ್ರಾಯವನ್ನು ಮೂಡಿಸಿತು.? ವೃದ್ಧಾಶ್ರಮದ ದಿನಚರಿಗಳನ್ನು ಲೀಲಾ ತನ್ನ ಡೈರಿಯಲ್ಲಿ ಸೆರೆಹಿಡಿಯುವ ಮೂಲಕ ನಮಗೂ ದರ್ಶನ ಮಾಡಿಸುತ್ತಾರೆ. ಸಿಸ್ಟರ್ ಗಳು ಆತ್ಮೀಯತೆ, ಹದವಾಗುತ್ತಿರುವ ವೃದ್ಧರು ಹಾಗೂ ಅಲ್ಲಿನ ಜೀವನ ಎಲ್ಲದರ ಜೊತೆಗೆ ಲವಲವಿಕೆಯಿಂದ ಲೀಲಾ ಚಟುವಟಿಕೆಯಿಂದ ಎಲ್ಲರಿಗೂ ಪ್ರಿಯರಾದ ವಿಚಾರವೂ ಅರಿವಾಗುತ್ತದೆ.


ಅಸ್ವಸ್ಥೆಯಾದ ವೃದ್ಧೆಯೊಬ್ಬಳ ಸಾವಿನ ಸಂಗತಿಯನ್ನು ತೆರೆದಿಡುತ್ತಾರೆ. ಅದು ಲೀಲಾಳ ಮೇಲೆ ಮಾಡಿದ ಪರಿಣಾಮವೇನು ? ಲೀಲಾ ತನ್ನ ಮಗನ ಭಾವಚಿತ್ರವನ್ನು ಪತ್ರಿಕೆಯಲ್ಲಿ ನೋಡಿದಾಗ ಅವಳು ಯಾವ ಭಾವವನ್ನು ತಳೆದಳು ಓದಿ ನೋಡಿ ವೃದ್ಧೆಯೊಬ್ಬರ ಬದುಕಿನ ಮತ್ತೊಂದು ಘಟ್ಟದ ಕತೆಯನ್ನು.


ಕೆಂಪು ಗುಲಾಬಿ : ರಾಜೇಶ್ವರಿ ತನ್ನ ಬಾಳಿನ ಬವಣೆಗಳನ್ನು ಲೆಕ್ಕಿಸದೆ ಮಗ ಇಂದುಧರನನ್ನು ಓದಿಸಿದಳು. ಕಷ್ಟಕ್ಕೆ, ಪರಿಶ್ರಮಕ್ಕೆ ಫಲವೆಂಬಂತೆ ಯುನಿವರ್ಸಿಟಿಗೆ ಮೊದಲು ಬಂದಿದ್ದ. ಪತಿ ಕ್ಯಾಪ್ಟನ್ ಗಿರೀಶ್ ಯುದ್ಧರಂಗದಲ್ಲಿ ಮಡಿದಾಗ ರಾಜೇಶ್ವರಿ ಪಟ್ಟ ಪಾಡು ಅವರ್ಣನೀಯ. ಶಾಲೆಯಲ್ಲಿ ಶಿಕ್ಷಕಿಯಾಗಿದ್ದವರು ಮಗನ ಶ್ರೇಯಸ್ಸೇ ಮುಖ್ಯ ಎಂದು ಭಾವಿಸಿ ಆತನಿಗಾಗಿಯೇ ಬದುಕನ್ನು ಮುಡಿಪಿಟ್ಟಿದ್ದರು. ಪಿ . ಎಚ್. ಡಿ ಗಾಗಿ ಅಮೆರಿಕೆಯ ಯೂನಿವರ್ಸಿಟಿಗೆ ಪ್ರವೇಶ ಕೋರಿ ಬರೆದಿದ್ದ ಬೇಡಿಕೆಗೆ ಅಸ್ತು ಎಂದಿತ್ತು.


ಗೆಳೆಯ ರಾಜೇಶನಿಗೆ ತಾಯಿಯ ಯೋಗಕ್ಷೇಮದ ಹೊಣೆ ಹೊರಿಸಿ ಹೋಗಿ ಐದು ವರ್ಷ ಅಮೆರಿಕೆಯಲ್ಲಿದ್ದವನು ಈಗ ವಾಪಸ್ ಬಂದಿದ್ದ. ಎಲ್ಲಾ ಸಂದರ್ಭಗಳಲ್ಲಿಯೂ ಮನೆಯಲ್ಲಿದ್ದ ಒಂದು ಕೆಂಪು ಗುಲಾಬಿ ಗಿಡದ ಜೊತೆಯಲ್ಲಿ ಇಂದುಧರನ ಬದುಕನ್ನು ಸಮೀಕರಿಸಲಾಗಿದೆ. 


ಇಂದುಧರ ಕೆಲಸಕ್ಕಾಗಿ ನಾನಾ ಕಡೆ ಅಲೆದರೂ ಆತನ ವಿದ್ಯೆ-ಬುದ್ಧಿ, ಬಹುಮಾನಗಳಿಗೆ, ಯೋಗ್ಯತೆಗಳಿಗೆ ಬೆಲೆ ಸಿಗದಾದಾಗ ದಿನೇದಿನೇ ಕುಗ್ಗುತ್ತಾ ಹೋದ. ತಾಯಿ ಎಷ್ಟೇ ಆತ್ಮವಿಶ್ವಾಸ ತುಂಬಲು ಹೊರಟರ ರೂ ಆತನ ಮನಸ್ಸು ವಿಫಲತೆಯನ್ನೇ ಕಾಣುತ್ತಿತ್ತು. ಇಂದುಧರನ ಕೆಟ್ಟ ಮಾನಸಿಕ ಪರಿಸ್ಥಿತಿ ಜೊತೆಗೆ ಗುಲಾಬಿ ಗಿಡದ ಪರಿಸ್ಥಿತಿ ಎರಡಕ್ಕೂ ಥಳಕು ಹಾಕಿಕೊಂಡಿರುವ ಚಿತ್ರಣ ಇಲ್ಲಿದೆ. 


"ಇಂದುಧರ ಹೂ ಗೊಂಚಲನ್ನು ಕ್ಷೀಣಿತ ಕೈಯಿಂದ ತೆಗೆದುಕೊಂಡು ಆಘ್ರಾಣಿಸಿದ. ಹೂಗಂಪು ಅಂತರಂಗವನ್ನು ಮುಟ್ಟಿತು. ತನ್ನ ಒಲವಿನ ಕೆಂಪು ಗುಲಾಬಿ ಮಾತ್ರ ಅದರಲ್ಲಿರಲಿಲ್ಲ. ಅದರ ವೈಶಿಷ್ಟ್ಯವೇ ಬೇರೆ, ಅದರ ಸುಗಂಧವೇ ಬೇರೆ. ಆನಂದವನ್ನೂ ಆನಂದಿತಗೊಳಿಸುವಂತಹ ಸೌಂದರ್ಯ ಅದರಲ್ಲಿ ..!"


ಇಂದುಧರ ಚೇತರಿಸಿಕೊಂಡನೇ ಓದಿ ನೋಡಿ.


ಜಾಗೃತಿ :

"ನಾರಿ ಸಕಲರಿಗೆ ಹಿತಕಾರಿ 

ನಾರಿ ಮುನಿದರೆ ಮಾರಿ ಸರ್ವಜ್ಞ"


ಎನ್ನುವ ಮಾತುಗಳಿಂದ ಶುರುವಾಗುವ ಈ ಕಥೆಯಲ್ಲಿ ಉಪಾಧ್ಯಾಯ ವೃತ್ತಿಯನ್ನು ಮಾಡಿಕೊಂಡು, ವಂಶಪಾರಂಪರ್ಯವಾಗಿ ಬಂದ ಮೋಚಿ ವೃತ್ತಿಯಲ್ಲಿಯೂ ಮುಂದುವರೆಯುತ್ತಿದ್ದರು. ಒಂದು ದಿನ ವೃತ್ತಪತ್ರಿಕೆಯನ್ನು ತೆಗೆದುಕೊಂಡು ಬಂದಾಗ ಅಲ್ಲಿ ಪ್ರಕಟವಾಗಿದ್ದ ಒಂದು ಸ್ತ್ರೀಯ ಚಿತ್ರ ಆತನ ಗಮನ ಸೆಳೆದಿತ್ತು. ಆಕೆಯನ್ನು ಕಂಡವರು ಹಿಡಿದುಕೊಟ್ಟರೆ ಅಥವಾ ಸುಳಿವು ಕೊಟ್ಟರೆ 5000 ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು. ಆ   ವಿಷಯ ಅವನಿಗೆ ಅಚ್ಚರಿ ತಂದಿತ್ತು.


ಶಾಲಾ ದಿನಗಳಿಂದಲೂ ಒಳ್ಳೆಯ ಭಾಷಣಕಾರನಾಗಿದ್ದ. ಅವನ ಭಾಷಣವನ್ನು ಕೇಳಿದ ಒಬ್ಬಳು ಸ್ತ್ರೀ ಆತನ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಕುರಿತು ಆರ್ಯ ಸಮಾಜದಲ್ಲಿ ಮಾಡಿದ ಭಾಷಣವನ್ನು ಕೇಳಿ ಆತನ ಭೇಟಿಗೆಂದು ಬಿರುಮಳೆಯಲ್ಲಿಯೇ ಬಂದಿದ್ದಳು. ಸಮಾಜದಲ್ಲಿ ಕ್ರಾಂತಿಯನ್ನು ಸುಧಾರಣೆಯನ್ನು ತರಲು ಆಶಿಸುತ್ತಿದ್ದ ಅವಳ ಮಾರ್ಗ ಹೇಗಿತ್ತು..? ಅದನ್ನು ಕೇಳಿ ಈತನ ವಾಗ್ಜರಿ ಹಾಗೂ ವಾದ ಸರಣಿ ಯಾವುದಾದರೂ ಬದಲಾವಣೆಯನ್ನು ಮಾಡಿತೇ..?


ಆತನನ್ನು ಮಾತ್ರವಲ್ಲದೆ ಆತನ ವಿದ್ಯಾರ್ಥಿಗಳನ್ನೂ ಕ್ರಾಂತಿಯ ಹಾದಿಗೆಳೆಯಲು ಆಕೆ ಮಾಡಿದ ಪ್ರಯತ್ನ ಎಷ್ಟು ಸಫಲವಾಯಿತು? ಆಕೆ ಕೊಲೆ ಮಾಡಿದ್ದಾಳೆಂದು ತಿಳಿದ ನಂತರ ಇವನ ಮನಸ್ಥಿತಿ ಹೇಗಿತ್ತು? ಇಲ್ಲಿ ಜಾಗೃತವಾದವರು ಯಾರು? ಅಷ್ಟಕ್ಕೂ ಪೇಪರ್ ನಲ್ಲಿ ಕಂಡ ಹಾಗೂ ಮನೆಗೆ ಬಂದ ಸ್ತ್ರೀ ಇಬ್ಬರು ಒಬ್ಬರೇ ಅಥವಾ ಬೇರೆ ಬೇರೆಯೇ ಓದಿ ನೋಡಿ.


ಫಾಲ್ಗುಣೀ ಪರ್ವ :  ವಿಶ್ವವಿದ್ಯಾಲಯದಲ್ಲಿ ಪ್ರಯೋಗಶಾಲೆ ಹಾಗೂ ಅದಕ್ಕೆ ಹೊಂದಿಕೊಂಡಂತಿದ್ದ ಗ್ರಂಥಾಲಯದಲ್ಲಿ ಈ ಕಥೆಯ ಹೆಚ್ಚಿನ ಭಾಗ ಸಾಗುತ್ತಾ ಹೋಗುತ್ತದೆ. ಹರೀಶ್, ವಸಿಷ್ಠ, ಕಾತ್ಯಾಯಿನಿ ಹಾಗೂ ಜಗನ್ಮಾತಾ ಈ ನಾಲ್ವರಲ್ಲಿ ಪ್ರಯೋಗ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಗಳ ಚರ್ಚೆಯಾಗುತ್ತಿರುತ್ತದೆ.

ಅಣು ಬಾಂಬ್, ನ್ಯೂಟ್ರಾನ್ ಬಾಂಬ್ ಹೀಗೆ ಎಲ್ಲದರ ಕುರಿತು ಹರೀಶನ ವಾದ ಸರಣಿ ಇರುತ್ತದೆ. ವಿಜ್ಞಾನವನ್ನು ಬಳಸಿಕೊಳ್ಳುವ ಹಾಗೂ ಮತ್ತಷ್ಟು ಪ್ರಯೋಗಕ್ಕೆ ಹಚ್ಚುವ ಹರೀಶನಿಗೆ ಭಾವನಾತ್ಮಕತೆ ಕಡಿಮೆ. ಕಾತ್ಯಾಯಿನಿಯ ಮೇಲೆ ಆತ ಇಟ್ಟಿದ್ದ ಪ್ರೇಮ ಭಾವಕ್ಕೆ ಕಾತ್ಯಾಯಿನಿಯ ಪ್ರತಿಕ್ರಿಯೆ ಹೇಗಿತ್ತು..?


ಪ್ರಯೋಗಾಲಯದ ಬಾಗಿಲು ಕಾಯುತ್ತಿದ್ದ ಲಕ್ಷ್ಮಣನ ಸಮಸ್ಯೆಯನ್ನು ನಾಲ್ವರು ಸೇರಿ ಪರಿಹರಿಸಿದ್ದೇಗೆ?

ಅಷ್ಟು ಸುಲಭವಾಗಿ ಇನ್ನೊಬ್ಬರ ಮಾತನ್ನು ಕೇಳದ ಹರೀಶ್ ಸಾಮೂಹಿಕವಾದ ಅಣುಕೃಷಿಗೆ ಉಳಿದವರನ್ನು ಒಪ್ಪಿಸಲು ಎಷ್ಟು ಸಫಲನಾದ..?


"ಶಿಶಿರ ಬಂದಮೇಲೆ ವಸಂತವೇನೂ ದೂರವಲ್ಲ..." ಎನ್ನುವ ಹರೀಶನ ಆಲೋಚನೆಯ ಹಿಂದಿನ ಮರ್ಮವೇನು..?

ಹರೀಶ ಹಾಗೂ ಕಾತ್ಯಾಯಿನಿಯರ ನಡುವೆ ನಡೆದ ವಾದದಲ್ಲಿ ಅಣುಶಕ್ತಿಯನ್ನು ಬಳಸುವ ಸಂದರ್ಭ, ಆಗ ಉಂಟಾಗುವ ದುಷ್ಪರಿಣಾಮ ಇದೆಲ್ಲದರ ಜೊತೆಗೆ ದೂರ ದೃಷ್ಟಿಯುಳ್ಳ ಡಾ. ಹೋಮಿ ಬಾಬಾರ ವಿಚಾರವೂ ಬಂದು ಹೋಯಿತು.


ಇದಾದ ನಂತರ ಬಂದ ರಜೆಯಲ್ಲಿ ಬಂದ ಒಂದು ಸುದ್ದಿ.. ರಾಜಸ್ತಾನದ ಮರುಭೂಮಿಯಲ್ಲಿ ನ್ಯೂಟ್ರಾನ್ ಬಾಂಬ್ ಸಿಡಿದಿರುವುದಾಗಿ ಹೇಳಿತ್ತು.  ಅನಿರೀಕ್ಷಿತವಾದ, ಆಶ್ಚರ್ಯಕರವಾದ ಈ ವರದಿಗೆ ಎಲ್ಲರಿಗೂ ಅಚ್ಚರಿಯಾಗಿತ್ತು. ಹಾಗೂ ಇದರ ಪರಿಣಾಮಗಳು ಏನಾಯ್ತು..? ಇದಕ್ಕೂ ಹರೀಶನಿಗೂ ಏನಾದರೂ ಸಂಬಂಧವಿತ್ತೇ... ಓದಿ ನೋಡಿ.


ಇಲ್ಲಿನ ಕಥಾವಸ್ತುಗಳ ವಿಶೇಷತೆಯ ಜೊತೆ ಜೊತೆಗೆ ಕಥೆಯ ನಿರೂಪಣೆಯಲ್ಲಿ ಲೇಖಕಿ ಬಳಸಿರುವ ಗಹನವಾದ ವಿಚಾರಗಳು, ಸಂಭಾಷಣೆ ಹಾಗೂ ರಸವತ್ತಾದ ಭಾಷಾಶೈಲಿ ವಿಭಿನ್ನವಾದ ಓದಿನ ಅನುಭವವನ್ನು ನೀಡಿತು.


~ ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ