ಪುಸ್ತಕದ ಶೀರ್ಷಿಕೆ : ಕೀಮೋ
ಲೇಖಕರು : ಫಾತಿಮಾ ರಲಿಯಾ
ಪ್ರಕಾಶಕರು : ಜೀರುಂಡೆ ಪುಸ್ತಕ
ಪ್ರಥಮ ಮುದ್ರಣ : 2025
ಪುಟಗಳು : 120
ಬೆಲೆ : 160 ರೂ.
ಕಡಲು ನೋಡಲು ಹೋದವಳು (ಲಲಿತ ಪ್ರಬಂಧ ಸಂಕಲನ), ಒಡೆಯಲಾರದ ಒಡಪು (ಕಥಾ ಸಂಕಲನ), ಅವಳ ಕಾಲು ಸೋಲದಿರಲಿ (ಕವನ ಸಂಕಲನ) ಇದುವರೆಗೆ ಫಾತಿಮಾ ರಲಿಯಾ ಅವರ ಪ್ರಕಟಿತ ಕೃತಿಗಳು. ಅನುಭವ ಕಥನ ಕೀಮೋ ಇವರ ನಾಲ್ಕನೆಯ ಕೃತಿ.
"ಆತಂಕ ಮತ್ತು ಅಳು ಎನ್ನುವುದು ಮನುಷ್ಯ ಬದುಕಿನ ದೌರ್ಬಲ್ಯವಲ್ಲ, ಅವನ್ನು ಜೊತೆಗಿಟ್ಟುಕೊಂಡೇ ಧೈರ್ಯದಿಂದ ಮುನ್ನಡೆಯುವುದು ಮತ್ತು ಬದುಕಿನ ಸೌಂದರ್ಯ ಇರುವುದೇ, ಅದು ಬಂದಂತೆ ಎದುರಿಸುವುದರಲ್ಲಿ ಅನ್ನುವ ಸತ್ಯ"ವನ್ನು ಲೇಖಕಿಗೆ ಮನಗಾಣಿಸಿದ ಆಸ್ಪತ್ರೆಯ ವಾಸ ಹಾಗೂ ಅವರನ್ನು ಕಾಡಿದ ಹಲವಾರು ಘಟನೆಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಅಮ್ಮನಿಗೆ ಕ್ಯಾನ್ಸರ್ ಬಂದಾಗ ರಲಿಯಾಗೆ 16ನೇ ವರ್ಷ. ಆ ದಿನದ ತಲ್ಲಣ-ತಳಮಳಗಳು, ಅದನ್ನು ಎದುರಿಸಿದ ಬಗೆ ಎಲ್ಲವನ್ನೂ ಹಲವಾರು ವರ್ಷಗಳ ನಂತರ ತೆರೆದಿಟ್ಟಿದ್ದಾರೆ.
ಕ್ಯಾನ್ಸರ್ ರೋಗಿಗಳನ್ನು ದೈಹಿಕವಾಗಿ ಕಂಗೆಡಿಸಿದರೆ ಅವರ ಹತ್ತಿರದವರನ್ನು ಮಾನಸಿಕವಾಗಿಯೂ ಕಂಗಡಿಸುತ್ತದೆ. ರೋಗಿಯ ಮುಂದೆ ತನ್ನ ಮನವನ್ನು ಅಷ್ಟು ಸುಲಭವಾಗಿ ತೆರೆದಿಡುವುದು ಸಾಧ್ಯವಿಲ್ಲ. ಅಲ್ಲದೇ 16ನೇ ವರ್ಷದಲ್ಲಿ ಈ ಸಂದರ್ಭವನ್ನು ನಿಭಾಯಿಸುವುದು ಸುಲಭವೂ ಅಲ್ಲ. ಎಷ್ಟೋ ಜನಕ್ಕೆ ಈ ಅನುಭವ ಸ್ಪೂರ್ತಿಯಾಗುವುದೂ ಹೌದು. ಅದೇ ಕಾರಣಕ್ಕೆ ಲೇಖಕಿ ಸಾಧ್ಯವಾದಷ್ಟನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಪಿ.ಯು.ಸಿಯ ಮೊದಮೊದಲ ದಿನಗಳ ಓದಿನ ಸಂದರ್ಭದಲ್ಲಿಯೇ ಅಮ್ಮ ಅನುಮಾನದೊಂದಿಗೆ ಮಗಳ ಬಳಿ ಬಂದಿದ್ದರು. ಜೀವಕೋಶಗಳ ಪಾಠ ಕೇಳಿ ಬಂದಿದ್ದರೂ.. ಇದು ಕ್ಯಾನ್ಸರ್ ಇರಬಹುದಾ? ಎಂದು ಸಣ್ಣ ಅನುಮಾನ ಮೂಡಿದ್ದರೂ ಅಮ್ಮನಂತಹ ಒಳ್ಳೆಯವರಿಗೆ ಇಷ್ಟು ದೊಡ್ಡ ರೋಗ ಬರಲಿಕ್ಕಿಲ್ಲ ಎನ್ನುವ ವಿಚಿತ್ರ ಲಾಜಿಕ್. ಆದರೆ, ಅಮ್ಮ ಮಗಳ ಅಮಾಯಕ ನಂಬಿಕೆಯಾಚೆಗೂ ವೈದ್ಯರನ್ನು ಭೇಟಿಯಾಗುತ್ತಾರೆ. ಸ್ತ್ರೀರೋಗ ತಜ್ಞೆಯನ್ನು ಭೇಟಿಯಾದವರಿಗೆ ರೋಗ ಪತ್ತೆಯಾಗುವುದಿಲ್ಲ. ಆದರೆ, ಫ್ಯಾಮಿಲಿ ಡಾಕ್ಟರ್ ಬಯಾಪ್ಸಿ ಮಾಡಿಸಿದ ನಂತರ ಪತ್ತೆಯಾದದ್ದು ಸ್ತನ ಕ್ಯಾನ್ಸರ್. ಅಮ್ಮನ ಆಪರೇಷನ್ ಸಂದರ್ಭದಲ್ಲಿ ಎಲ್ಲರಿಗೂ ರಲಿಯಾ ಅಮ್ಮನ ಜವಾಬ್ದಾರಿಯನ್ನು ನಿಭಾಯಿಸಬಲ್ಲಳಾ ಎಂಬ ಅನುಮಾನ.. "ಅವಳು ನಿಭಾಯಿಸುತ್ತಾಳೆ. ನಿಭಾಯಿಸಲು ಬಾರದಿದ್ದರೆ ಕಲಿತುಕೊಳ್ಳುತ್ತಾಳೆ." ಎಂದ ಅಮ್ಮನ ಸ್ಪಷ್ಟ ನಿರ್ಧಾರ ಮಗಳನ್ನು ಮುನ್ನಡೆಸಿತು.
ಕುಟುಂಬದ ಹಿರಿಯ ಮಹಿಳೆಯೊಬ್ಬರು ಕಾಳಜಿಯ ನೆಪದಲ್ಲಿ ಆಡಿದ ಅಸೂಕ್ಷ್ಮ ಮಾತುಗಳನ್ನು ಅಮ್ಮ ತೆಗೆದುಕೊಂಡ ಬಗೆ ಜೊತೆಗೆ "ಬದುಕಲ್ಲಿ ಕೆಲವೊಂದನ್ನು ನಿರ್ಲಕ್ಷಿಸಿ ಮುಂದೆ ಹೋಗೋದನ್ನು ಇನ್ನು ಮುಂದಾದರೂ ನೀನು ಕಲೀಲೇಬೇಕು" ಎಂದ ಸಂದರ್ಭವಿದೆ.
"ಜೀವನ್ಮರಣದ ಹೋರಾಟದಲ್ಲೂ ಬದುಕಿನಡೆಗೆ ಒಂದು ಹೆಜ್ಜೆ ಮುಂದಿಟ್ಟ ಅಮ್ಮ ಆಸ್ಪತ್ರೆಯ ಬೆಡ್ ಮೇಲೆ ನೋವು ತಿನ್ನುತ್ತಾ ಮಲಗಿರಬೇಕಾದರೆ, ಆ ಮಹಿಳೆಗೆ ಅಪ್ಪನ ಬಯಕೆಗಳ ಬಗ್ಗೆ ಚಿಂತೆ ಮಾಡಲಾದರು ಹೇಗೆ ಸಾಧ್ಯ ?" ಎನ್ನುವ ಲೇಖಕಿ ಸೂಕ್ಷ್ಮವಾದ ನಡವಳಿಕೆಗಳು ಹೇಗಿರಬೇಕು ಎನ್ನುವುದನ್ನು ರೋಗಿಗಳನ್ನು ನೋಡಲು ಹೋಗುವವರಿಗೆ ಅರಿವಿರಲೇಬೇಕು ಎನ್ನುವ ಹಲವಾರು ಸಂದರ್ಭಗಳನ್ನು ಹೇಳುತ್ತಾರೆ. ಸಾಂತ್ವನ ನೀಡುವುದು ಮೊದಲ ಆದ್ಯತೆ. ಆದರೆ, ಸಾಂತ್ವನದ ನೆಪದಲ್ಲಿ ಭಯ ಅಥವಾ ಆತಂಕ ಸೃಷ್ಟಿಸುವ ಪ್ರಯತ್ನವನ್ನು ಮಾಡಲೇಬಾರದೆಂಬುದು ಗೊತ್ತಿರಲೇಬೇಕು. ಅಲ್ಲವೇ..?!
ಶಸ್ತ್ರಚಿಕಿತ್ಸೆಯ ನಂತರ ಡ್ರೈನ್ ಕ್ಯಾನ್ ಬಳಸಿ ದ್ರವವನ್ನು ಹೊರತೆಗೆಯುವಾಗ ಇರುತ್ತಿದ್ದ ಸಂಕಟ, ಅಮ್ಮನ ಕೈ ಸರಿಯಾಗಿ ಕೆಲಸ ಮಾಡಬೇಕೆಂದರೆ ವ್ಯಾಯಾಮ ಮಾಡಬೇಕಿದ್ದದ್ದು, ನೋವು ನಿವಾರಕ ಇಂಜೆಕ್ಷನ್ ಗಳಿಲ್ಲದೆ ನೋವಿನ ತೀವ್ರತೆಯನ್ನು ಸಹಿಸುತ್ತಾ ಅಮ್ಮ ಬದುಕುತ್ತಿದ್ದರೆ . . ಸಂಕಟಕ್ಕೆ ಮಡಿಲಾಗಬೇಕಿದ್ದ ಅಮ್ಮನ ಜಾಗವನ್ನು ತುಂಬುವವರು ಯಾರಿದ್ದರು..?
ರಲಿಯಾರಿಗಿದ್ದ ಅರಿವಿನ ಮಿತಿಯಲ್ಲಿ ಕೆಟ್ಟ ಅಮ್ಮನು ಇರಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಅಂತಹ ಒಂದು ಜಗತ್ತು ಅಲ್ಲಿನ ಒಬ್ಬರಿಂದ ತೆರೆದುಕೊಂಡಿತ್ತು. ಅವರ ಜೀವನಗಾಥೆ ಏನಿತ್ತು..?
ಸರ್ಜರಿ ವಾರ್ಡಿನ ರೋಗಿಗಳ ಡ್ರೆಸ್ಸಿಂಗ್ ಮಾಡುವ ಮಿನಿ ಆಪರೇಷನ್ ಥಿಯೇಟರ್ ನಲ್ಲಿ ದಾದಿಯರು, ಜೂನಿಯರ್ ವೈದ್ಯರ ನಡುವೆ ಇವರಿಗೆ ಬೆಳೆದ ಸ್ನೇಹ, ಕಮ್ಯುನಿಕೇಷನ್ ಜೊತೆಗೆ ವೈದ್ಯರ ಕಾಳಜಿ ಎಲ್ಲವೂ ಇಲ್ಲಿದೆ. ಸ್ಟಾಫ್ ಮಾತುಗಳು, ಡಾಕ್ಟರ್ ನ ನಡೆ ಮತ್ತು ಅಮ್ಮನ ಸೂಕ್ಷ್ಮ ಗಮನಿಸುವಿಕೆ, ಎಲ್ಲವನ್ನೂ ಅಮ್ಮ ಗಮನಿಸಿದ್ದರೂ ಮೌನವಾಗಿದ್ದ ಕ್ಷಣಗಳು ನಂತರ ತೆರೆದುಕೊಂಡದ್ದು ಹೇಗೆ..?
ಕಣ್ಣೆದುರಿಗಿದ್ದ ಹದಿನಾರರ ಮಗಳ ಕಣ್ಣಲ್ಲಿನ ಕನಸು ಮತ್ತು ಅವಳಾಡುತ್ತಿದ್ದ ಅತಿ ಮೆಚ್ಯೂರ್ಡ್ ಮಾತುಗಳು ಅಮ್ಮನಿಗೆ ಹೇಗನಿಸುತ್ತಿತ್ತು..? ಅಮ್ಮ ನಿರ್ಲಿಪ್ತತೆ ನಟಿಸದೆ ಇದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು..?
ಸರ್ಜರಿಯ ನಂತರ ಆರು ತಿಂಗಳುಗಳಲ್ಲಿ ಆರು ಸೈಕಲ್ ನಂತೆ ಕೀಮೋ ಕೊಡಿಸಬೇಕಿತ್ತು. ಕೊನೆಯ ಕೀಮೋ ಆದ ಆರು ತಿಂಗಳ ಬಳಿಕ ಮತ್ತೆ ಕ್ಯಾನ್ಸರ್ ಸೆಲ್ ಹುಟ್ಟಿವೆಯ ಎಂದು ಚೆಕಪ್ ಮಾಡಿಸಿಕೊಳ್ಳಬೇಕಿರುತ್ತದೆ.
ಆಪರೇಷನ್ ಆದಮೇಲೆ ಗೆಲುವಾಗಿಯೇ ಇದ್ದ, ನೋವಲ್ಲಿಯೂ ಗಟ್ಟಿಯಾಗಿದ್ದ ಅಮ್ಮ ಕೀಮೋ ಥೆರಪಿಯಲ್ಲಿ ಇಳಿದು ಹೋಗಿದ್ದರು. ಈ ಕೀಮೋ ಥೆರಪಿಯ ಅನುಭವಗಳ ಜೊತೆ ನಾವೂ ಸಾಗುವಾಗ ಸಂಕಟ ಎದೆಯಾಳದಿಂದ ಉದ್ಭವಿಸುತ್ತದೆ.
ಕುಟುಂಬದವರೇ ಸೂಕ್ಷ್ಮವಿಲ್ಲದೆ ನಡೆದುಕೊಳ್ಳುತ್ತಿದ್ದರೆ, ಪರಸ್ಪರರನ್ನು ಸಂತೈಸುತ್ತಿದ್ದದ್ದು ಧೈರ್ಯ ತುಂಬುತ್ತಿದ್ದದ್ದು ಭರವಸೆ ತೋರುತ್ತಿದ್ದದ್ದು ಆಸ್ಪತ್ರೆಯಲ್ಲಿನ ಮಾನವೀಯ ಸಂಬಂಧಗಳೇ.. ಅವುಗಳೇ ಬದುಕನ್ನು ಸಹ್ಯವಾಗಿಸುವುದೇನೋ..?
ಕೀಮೋಥೆರಪಿ, ರೇಡಿಯೋಥೆರಪಿ ಯಾವುದೂ ಕೂಡ ಅವರ ಕ್ಯಾನ್ಸರ್ ಅನ್ನು ಗುಣಪಡಿಸಲಾಗದು ಎಂದು ಅರಿವಾದ ನಂತರ "ನಿಮ್ಮ ರೋಗ ಗುಣವಾಗಿದೆ" ಎಂದು ಹೇಳಿ ಆಸ್ಪತ್ರೆಯವರು ಧೈರ್ಯ ತುಂಬಿ ಡಿಸ್ಚಾರ್ಜ್ ಮಾಡಿದ ಸೋಜಿಯವರ ತಾಯಿ, ಗೀತಕ್ಕನ ವಿಭಿನ್ನ ಕಥೆ, ವಿಷಾದ ಗೀತೆಯಂತೆ ಕಂಡುಬಂದ ಚಾಂದಜ್ಜಿ ಇಲ್ಲಿ ಸಿಗುತ್ತಾರೆ.
ಅಮ್ಮ ಆಸ್ಪತ್ರೆಯಿಂದ ಮನೆಗೆ ಬಂದ ನಂತರ ಅವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವ ಹಾಗೂ ಮನೆಯ ಜವಾಬ್ದಾರಿಯನ್ನು ನಿಭಾಯಿಸುವ ಸಂದರ್ಭದಲ್ಲಿ ನೆರವಾದ ಅಣ್ಣ ಹಾಗೂ ಅಂದಿನ ಸಂದರ್ಭಗಳು ಹೇಗಿದ್ದವು..?
ಕೆಲವೊಂದು ಕನಸುಗಳನ್ನು ಕೈ ಬಿಡಬೇಕಾದ ಅನಿವಾರ್ಯತೆ, ಈಗಿನಂತೆ ಮಾಹಿತಿಯ ಮಹಾಪೂರ ಸಿಕ್ಕಿದ್ದರೆ ಕನಸಿನ ಪಕ್ಷಿ ಹೇಗೆ ಹಾರಬಹುದಿತ್ತು ಎಂದು ನೆನಪಿಸಿಕೊಳ್ಳುತ್ತಾರೆ.
ಕೀಮೋನಿಂದ ಸುಸ್ತಾಗುತ್ತಿದ್ದ ಅಮ್ಮನನ್ನು ಅದರ ವಿರುದ್ಧ ಹೋರಾಡಿಸುವಂತೆ ಪಣತೊಟ್ಟು ಕೀಮೋವನ್ನೇ ಎದುರಿಸಲು ಅಮ್ಮನಿಗೆ ಮಾಡುತ್ತಿದ್ದ ಕಾಳಜಿ ಅವರನ್ನು ಸುಸ್ತು ಮಾಡಿದ ಪರಿ ಅಂದು ಅರ್ಥವಾಗದ ಸಂದರ್ಭ, ಅಸಹಾಯಕತೆ, ಸುಮ್ಮನಿರುವುದೇ ಏಕೈಕ ಆಯ್ಕೆ ಎಂದು ಅರಿವಾದ ಕ್ಷಣಗಳು, "ಹಠ ತೊಟ್ಟರೆ ಏನನ್ನೂ ಸಾಧಿಸಿಬಹುದು, ಏನನ್ನೂ ದಕ್ಕಿಸಿಕೊಳ್ಳಬಹುದು ಎನ್ನುವ ಭ್ರಮೆ ಹರಿದು ಹೋದ ಕ್ಷಣಗಳು" ಇಲ್ಲಿವೆ.
ರಲಿಯಾನ ಅಮ್ಮನಿಗೆ ಕ್ಯಾನ್ಸರ್ ಎಂದು ಗೊತ್ತಾದಾಗ ಗೆಳತಿಯರು ಪ್ರತಿಕ್ರಿಯಿಸಿದ ಬಗೆ ಹೇಗಿತ್ತು.?
ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದುಕೊಂಡು ಅಮ್ಮನಿಗೆ 17 ವರ್ಷಗಳೇ ಕಳೆದರೂ.. ಪ್ರತಿ ವರ್ಷದ ಪರೀಕ್ಷೆಯಲ್ಲಿಯೂ ಅಮ್ಮ ಕ್ಯಾನ್ಸರ್ ಕಣಗಳಿಲ್ಲ ಎಂಬ ಫಲಿತಾಂಶಕ್ಕಾಗಿ ಕಾಯುವ ಕ್ಷಣಗಳು, ಅದರ ಹಿಂದಿನ ಆತಂಕಗಳು, ಮುಂದೆ ಧೈರ್ಯವಾಗಿದ್ದರೂ ಹಿಂದೆ ಪರಸ್ಪರರಿಗೆ ಇರುವ ಭಾವಗಳು ಇಲ್ಲಿವೆ.
17 ವರ್ಷಗಳ ನಂತರ ಮತ್ತೆ ಆ ದಿನಗಳನ್ನು, ಕ್ಷಣಗಳನ್ನು, ಅದುವರಿಗಿನ ಬದುಕಲ್ಲಿನ ಸೂಕ್ಷ್ಮ ವಿಚಾರಗಳನ್ನು ಬಹಳಷ್ಟು ಪ್ರಸ್ತಾಪಿಸಿದ್ದಾರೆ. "ಜೀವನ್ಮರಣದ ಹೋರಾಟದಿಂದ ಎದ್ದು ಬಂದವರಿಗೆ ನಾವು ಮಾಡಬೇಕಾದ ದೊಡ್ಡ ಉಪಕಾರವೆಂದರೆ ಹಿತವಾದ ಮೌನ ಹಾಗೂ ಅವರ ಖಾಸಗಿ ಕ್ಷಣಗಳಿಗೆ ಧಕ್ಕೆಯಾಗದಂತಹ ಒಂದು ಸಣ್ಣ ಸ್ಪೇಸ್ ಉಳಿಸಿಕೊಳ್ಳುವುದು" ಎನ್ನುತ್ತಾರೆ.
"ಕಣ್ಣಿಗೆ ಕಾಣಸಿದ ಕ್ಯಾನ್ಸರ್ ಕಣಗಳೊಂದಿಗೆ ಅಷ್ಟು ಬಡಿದಾಡಿದವರಿಗೆ ಉಳಿದಿರುವ ಬದುಕನ್ನು ಕಟ್ಟಿಕೊಳ್ಳುವುದೇನೂ ದೊಡ್ಡ ಸಂಗತಿಯಲ್ಲ. ಹಾಗೆ ಕಟ್ಟಿಕೊಳ್ಳಲು ಅನುವು ಮಾಡಿಕೊಡುವ ಕನಿಷ್ಠ ಮನುಷ್ಯತ್ವವನ್ನು ನಾವು ಉಳಿಸಿಕೊಳ್ಳಬೇಕು ಅಷ್ಟೇ." ಎನ್ನುವ ಅವರ ಮಾತು ಎಷ್ಟು ನಿಜವಲ್ಲವಾ ಎನ್ನಿಸಿತು.
ಕ್ಯಾನ್ಸರ್ ಪೀಡಿತರನ್ನು ನೋಡಲು ಹೋದಾಗ ಸಾಂತ್ವನವನ್ನು ಹೇಳೋಣ. ಅದಾಗದಿದ್ದರೆ ಅಧೈರ್ಯವನ್ನು ಮೂಡಿಸದಿರೋಣ. ಜೊತೆಗೆ ಅಸೂಕ್ಷ್ಮತೆಯಿಂದ ನಡೆದುಕೊಳ್ಳುವುದಂತೂ ಬಿಲ್ಕುಲ್ ಬೇಡವೇ ಬೇಡ. ಇಷ್ಟನ್ನು ಪಾಲಿಸಿದರಾದರೂ ಎಷ್ಟೋ ಮನಗಳಿಗೆ ನೆಮ್ಮದಿ.
ಈ ಅನುಭವ ಕಥನ ಕ್ಯಾನ್ಸರ್ ಜೊತೆಜೊತೆಗೆ ಸಾವಿನ ಸಮ್ಮುಖದಲ್ಲಿ ಕಲಿತ ಹುಡುಗಿಯೊಬ್ಬಳ ಜೀವನಪಾಠವನ್ನು ತೆರೆದಿಡುತ್ತಾ ಸಾಗುತ್ತದೆ. ಅವರು ಅನುಭವಿಸಿದ ತಲ್ಲಣ, ಸಂಕಟಗಳನ್ನು ಓದುವಾಗ ನಾವೂ ಸಂಕಟಪಡುವಂತಾಗುತ್ತದೆ. ಆದರೆ, ಪ್ರಮುಖವಾಗಿ ಪಾಸಿಟಿವಿಟಿಯನ್ನು ಹಾಗೂ ಧೈರ್ಯವನ್ನಂತೂ ಕಂಡುಕೊಳ್ಳುತ್ತೇವೆ. ಪ್ರತಿಯೊಬ್ಬರ ಅನುಭವ ಬೇರೆಯೇ ಆಗಬಹುದಾದರೂ.. ಸೂಕ್ಷ್ಮತೆಯ ಪಾಠವನ್ನುಂಟು ಕಲಿತುಕೊಳ್ಳಲೇಬೇಕು. ಓದಿ ಮುಗಿದ ನಂತರವೂ ಆವರಿಸಿಕೊಳ್ಳುವ ಓದು ಇದು.
~ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ