ಸೋಮವಾರ, ಏಪ್ರಿಲ್ 27, 2026

ಕಲೆಯೇ ಕಾಯಕ (ಪುಸ್ತಕ ಯಾನ - 443)


ಪುಸ್ತಕದ ಶೀರ್ಷಿಕೆ : ಕಲೆಯೇ ಕಾಯಕ 

ಲೇಖಕರು : ಜಿ. ಹೆಚ್. ವೀರಣ್ಣ

ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು

ಮರು ಮುದ್ರಣ : 2010

ಪುಟಗಳು : 206

ಬೆಲೆ : 80 ರೂ. 


ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದ ವೀರಣ್ಣನವರು ನಟ, ರಂಗಕರ್ಮಿ, ನಿರ್ಮಾಪಕ, ನಿರ್ದೇಶಕ, ನಾಟಕ ಮಂಡಳಿಯ ವ್ಯವಸ್ಥಾಪಕರು. ಪ್ರಸಿದ್ಧ 'ಗುಬ್ಬಿ ಶ್ರೀ ಚನ್ನಬಸವೇಶ್ವರ ನಾಟಕ ಕಂಪನಿ'ಯನ್ನು ಕಟ್ಟಿ ಬೆಳೆಸಿ, ಕರುನಾಡ ನಾಟಕರಂಗಕ್ಕೆ ಹೊಸ ಕಳೆ ತಂದರು. ಡಾ. ರಾಜ್‌ಕುಮಾರ್, ನರಸಿಂಹರಾಜು, ಉದಯಕುಮಾರ್ ಹೀಗೆ ಹಲವಾರು ದಿಗ್ಗಜರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಬಿ. ವಿ ಕಾರಂತರು, ಗಿರೀಶ್ ಕಾರ್ನಾಡರ ಪ್ರತಿಭೆಯನ್ನು ಉಜ್ವಲಗೊಳಿಸಿದವರು. 


ಈ ಆತ್ಮಕಥೆಯಲ್ಲಿ ಚದುರಿದ ಚಿತ್ರಗಳಂತೆ ತುಂಡು ತುಂಡಾದ ಅವರ ಜೀವನ ಹಾಗೂ ಕೆಲವು ಘಟನೆಗಳು ಕಂಡುಬರುತ್ತವೆ. ಒಂದಕ್ಕೊಂದರ ಕೊಂಡಿಯನ್ನು ಹಲವಾರು ಘಟನೆಗಳು ಜೋಡಿಸುತ್ತವಾದರೂ.. ಕೆಲವನ್ನು ನಾವೇ ಊಹಿಸಿಕೊಳ್ಳಬೇಕು. ವಿಸ್ತಾರವಾದ ಇಂತಹ ದಿಗ್ಗಜರ ಜೀವನದ ಘಟನೆಗಳ ಏಳುಬೀಳಿನ ಪಯಣ ಇಲ್ಲಿದೆ. ಹುಟ್ಟು, ತಂದೆ-ತಾಯಿ, ಊರಿನ ಚಿತ್ರಣಗಳು, ಹಿನ್ನೆಲೆ ಇಲ್ಲಿಲ್ಲ. ಕಲೆಯ ಬದುಕಿಗೆ ಹೊಂದಿಕೆಯಾಗುವ ಅವರ ಕಲಾ ಪಯಣದ ಶುರುವಿನಿಂದ ನಾಟಕ ರಂಗದಿಂದ ಹಿಂದೆ ಸರಿಯುವವರೆಗೂ ವೀರಣ್ಣನವರನ್ನು ಕಾಣಬಹುದು. ಕೊನೆಯಲ್ಲಿ ಅವರ ಸಾಂಸಾರಿಕ ಜೀವನದಲ್ಲಿ ಕಂಡ ದುರಂತ ಸರಮಾಲೆಗಳಿವೆ. ಅದಕ್ಕೆ ಮುನ್ನುಡಿಯೋ ಎಂಬಂತಿದೆ ಅವರ ಬದುಕಿನ ಪಯಣ. ತಮ್ಮ ಕಷ್ಟದ ನಡುವಲ್ಲೂ ಮತ್ತೊಬ್ಬರಿಗೆ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡುವ ದಿನಗಳು, ಬಂದ ಬಿರುದುಗಳು, ಏಳಿಗೆ ಅದರ ಜೊತೆಯಲ್ಲಿಯೇ ಕಷ್ಟಕ್ಕೆ ಎದೆಯೊಡ್ಡಿ ನಿಂತ ಧೀರತೆ ಎಲ್ಲವೂ ಅಚ್ಚರಿಗೊಳಿಸುತ್ತವೆ. ಕೆಲ ಭಾವಚಿತ್ರಗಳನ್ನು ಇಲ್ಲಿ ಕಾಣಬಹುದು. ಅವರ ಕಷ್ಟ-ಕೋಟಲೆಗಳು ಹಾಗೂ ನಾಟಕ ರಂಗದಿಂದ ನಿರ್ಗಮಿಸಿದ ಮನಸ್ಥಿತಿಯ ಕುರಿತು ನೀವೇ ಓದಿ ಅರಿಯಿರಿ.


1955ರ ಜೂನ್ ನಲ್ಲಿ ವೀರಣ್ಣನವರು 'ದಶಾವತಾರ' ನಾಟಕವನ್ನು ಪ್ರದರ್ಶಿಸಿದ ನಂತರ 'ಅಣ್ಣ-ತಮ್ಮ' ಎಂಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಿದಾಗ ಆತ್ಮಕತೆ ದಾಖಲಿಸುವ ಹಂಬಲ ಹೆಚ್ಚಾಗಿ ಇದನ್ನು ಬರೆದಿದ್ದಾರೆ. 


ಮೊದಮೊದಲು ಇವರು ಕಾಲಿಟ್ಟದ್ದು ನಟನಾಗಿ ಅಲ್ಲ. ಏನೂ ಅರಿಯದ ಹುಡುಗನೊಬ್ಬ ನಾಟಕ ಮಾಡಲು ನಾಟಕ ಶಾಲೆ ತಯಾರು ಮಾಡುವ ಕೆಲಸ, ಸೀನರಿಯ ತಯಾರಿಯಿಂದ ಹಿಡಿದು ತಮಟೆಯವನ ಜೊತೆಗೆ ಸಾರಿಸುವುದರ ಪ್ರಚಾರ ಕಾರ್ಯ, ನಂತರ ದೀಪದ ವ್ಯವಸ್ಥೆ, ಗ್ರೀನ್ ರೂಂನಲ್ಲಿ ಕಸಗುಡಿಸಿ ನಟರಿಗೆ ಮುಖಕ್ಕೆ ಬಣ್ಣ ಹಾಕುವ, ನಾಟಕದ ಡ್ರೆಸ್ ಕೀಪರ್ ಕೆಲಸ, ನಂತರ ಸ್ಟೋರ್ ಕೀಪರ್ ಕೆಲಸ, ಅಡುಗೆಯವರು ಕಾಯಿಲೆ ಬಿದ್ದಾಗ ಅಡುಗೆ ಕೆಲಸ, ಗೇಟ್ ಕೀಪರ್, ಬುಕ್ಕಿಂಗ್ ಕ್ಲರ್ಕ್, ವ್ಯವಸ್ಥಾಪಕ ಕೆಲಸಗಳನ್ನು ಸಂಧರ್ಬಾನುಸಾರ ಮಾಡಿರುವುದಲ್ಲದೆ.. ವಾದ್ಯದವರ ಗೈರು ಹಾಜರಿಯಿದ್ದಾಗ ತಬಲಾ, ಹಾರ್ಮೋನಿಯಂ, ಪಿಟೀಲುಗಳನ್ನು ನುಡಿಸಿದ್ದಾರೆ. ಮೊದಮೊದಲಿಗೆ ಯಾವ ಪಾತ್ರವಾದರೂ ಗೈರುಹಾಜರಾಗಿದ್ದಾಗ ಅಂತಹ ಪಾತ್ರವನ್ನು ಮಾಡುತ್ತಿದ್ದವರು, ಖಜಾಂಚಿ ಆಗಿದ್ದವರು.. 


ಈ ಎಲ್ಲಾ ಹಂತಗಳನ್ನು ಒಂದೊಂದಾಗಿ ಮೇಲೇರಿ ಆ ಎಲ್ಲಾ ಅನುಭವಗಳ ಮೊತ್ತದಿಂದ ಗುಬ್ಬಿ ಕಂಪನಿಯ ಮಾಲೀಕರು ಚಂದಣ್ಣ ನವರು ಹುಷಾರು ತಪ್ಪಿ ಸ್ವರ್ಗಸ್ಥರದಾಗ 'ಗುಬ್ಬಿ ಶ್ರೀ ಚನ್ನಬಸವೇಶ್ವರ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ'ಗೆ ಇಬ್ಬರು ಮಾಲೀಕರಲ್ಲಿ ಒಬ್ಬರಾಗುತ್ತಾರೆ. ನಂತರ ಅಲ್ಲಿಯ ಮೋಸವನ್ನು ಹಿತೈಷಿಗಳ ಸಹಾಯದಿಂದ ಗೆದ್ದು ಸಂಘದ ಒಡೆಯನಾಗುತ್ತಾರೆ. 


ಚಂದಣ್ಣನವರು ಹಾಗೂ ವಿದ್ವಾನ್ ದಾನಪ್ಪಯ್ಯನವರು ಪಿಟೀಲು ವಾದಕರಾಗಿಯೂ ಹಾಗೂ ಇವರ ಗುರುಗಳಾಗಿಯೂ ದಾರಿದೀಪವಾಗಿರುವ ಪ್ರಮುಖ ವ್ಯಕ್ತಿಗಳು.


ಮೊದಮೊದಲು ಪಿಟೀಲು, ತಬಲಾ ಮಾತ್ರ ಇದ್ದದ್ದು ನಂತರ ಶ್ರುತಿಗೋಸ್ಕರ ಸೋಟಾ ಎಂಬ ತಂಬೂರಿಯ ತರಹದ ವಾದ್ಯನ ತಯಾರಿಕೆಯ ಕುರಿತ ವಿಚಾರವೂ ಇಲ್ಲಿದೆ.


ನಾಟಕದಲ್ಲಿ ಆಗ ಹೆಣ್ಣು ಪಾತ್ರಗಳನ್ನು ಗಂಡಸರೇ ಹಾಕುತ್ತಿದ್ದರು. ತಲೆಗೆ ಟೋಫನ್ ಹಾಕಿಕೊಂಡು ಪಾತ್ರಕ್ಕೆ ತಕ್ಕ ಬಟ್ಟೆ ಹಾಕಿಕೊಳ್ಳುತ್ತಿದ್ದರು. ಲ್ಯಾಂಪಿನ ಬೆಳಕಿಗೆ ಪತಂಗದ ಹುಳುಗಳು ಸ್ವಾಭಾವಿಕವಾಗಿ ಮುತ್ತಿ ಅವರನ್ನು ತೊಂದರೆಗೊಳಪಡಿಸಿದ ಸಂದರ್ಭದಲ್ಲಿ ಪಾತ್ರಧಾರಿಯ ಮುಖದ ಅಭಿನಯ, ಜನರ ನಗುವಿಗೆ ಕಾರಣವಾದ ಸಂದರ್ಭಗಳನ್ನು ಹೇಳುತ್ತಾರೆ. 


ಅಷ್ಟಾಗಿ ಆಭರಣಗಳಿಲ್ಲದ ಸಂದರ್ಭದಲ್ಲಿ ನಾಟಕ ನೋಡಲು ಬಂದಿದ್ದ ಹೆಣ್ಣುಮಕ್ಕಳಿಂದ ಆಭರಣಗಳನ್ನು ಎರವಲು ಪಡೆದು ಹಾಕಿಕೊಂಡದ್ದು.. ನಂತರ ಅದನ್ನು ಆ ಹೆಣ್ಣು ಮಕ್ಕಳು ಹೆಮ್ಮೆಯಿಂದ ಹಂಚಿಕೊಳ್ಳುತ್ತಿದ್ದನ್ನು ಹೇಳುತ್ತಾರೆ.


ಗುಬ್ಬಿ ಕಂಪನಿಯಲ್ಲಿ 'ಸದಾರಮೆ' ನಾಟಕವೇ ಅತ್ಯುತ್ತಮ ನಾಟಕ ಎಂದು ಪಡೆದ ಪ್ರಸಿದ್ಧಿ ಹಾಗೂ ಅದರಲ್ಲಿ ಇವರು ವಹಿಸುತ್ತಿದ್ದ ಕಳ್ಳನ ಪಾತ್ರದ ಪ್ರಖ್ಯಾತಿ ಇವರನ್ನು ಮತ್ತಷ್ಟು ಜನರಿಗೆ ಹತ್ತಿರವಾಗಿಸುತ್ತಾ ಹೋಗಿಸುತ್ತದೆ. ಈ ನಾಟಕದಲ್ಲಿ ಆದಿಮೂರ್ತಿ, ಸಾಬಿ ಮತ್ತು ಕಳ್ಳ ಈ ಮೂರು ಪಾತ್ರಗಳನ್ನು ಇವರೇ ನಿರ್ವಹಿಸುತ್ತಿದ್ದರು. ಜಯಮ್ಮನವರು ಹಾಗೂ ವೀರಣ್ಣನವರ ಗುಲೇಬಕಾವಲಿ ನಾಟಕದ ಪಾತ್ರವೂ ಬಹಳ ಪ್ರಸಿದ್ಧಿ ಪಡೆದಿತ್ತು. ಎಷ್ಟೋ ನಾಟಕಗಳಲ್ಲಿ ಒಬ್ಬರೇ ಮೂರು ನಾಲ್ಕು ಪಾತ್ರಗಳನ್ನು ನಿರ್ವಹಿಸುತ್ತಿದ್ದರು.


ತಮಿಳುನಾಡಿಗೆ ಹೋದ ಸಂದರ್ಭದಲ್ಲಿ ಅಲ್ಲಿನವರಿಗೆ ಕನ್ನಡ ಅರ್ಥವಾಗದಿದ್ದರೂ.. ಮೊದಲು ಸೀನರಿಗಳಿಗಾಗಿ ನಾಟಕ ನೋಡಲು ಬರುತ್ತಿದ್ದ ಪ್ರಸಂಗಗಳು, ಜೊತೆಗೆ ಅಲ್ಲಿನ ನಾಟಕ ಕಂಪನಿಯೊಂದು ಸದಾರಮೆ ನಾಟಕದಲ್ಲಿ ಹೇಳುತ್ತಿದ್ದ ಅಶ್ಲೀಲ ಸಂಭಾಷಣೆಗಳಿಂದ ಮೊದಮೊದಲಿಗೆ ಈ ನಾಟಕವನ್ನು ನೋಡದೆ ವಿರೋಧಿಸಿದರೂ ಎರಡರ ವ್ಯತ್ಯಾಸ ತಿಳಿದು ಇವರಿಗೆ ಪ್ರೋತ್ಸಾಹಿಸಿದ ರೀತಿಯೂ ಇಲ್ಲಿದೆ. 


ಪ್ರತಿಭಾ ಪ್ರದರ್ಶನಕ್ಕೆ ಎಲ್ಲಾ ವೇದಿಕೆಗಳೂ ಒಂದೇ ರೀತಿ ಇರುತ್ತಿರಲಿಲ್ಲ. ಕಲ್ಲು ತೂರಾಟವನ್ನು ನಿರ್ವಹಿಸಿದ ಪ್ರಸಂಗಗಳೂ ಇವೆ. ಮಾಲೀಕರ ನಡತೆ, ಊಟದ ಭೇದ-ಭಾವ, ತಮ್ಮದಲ್ಲದ ಸಂಭಾಷಣೆಯನ್ನು ಪ್ರಸ್ತುತಪಡಿಸಿದಾಗ ಬಂದ ವಿರೋಧಗಳು ಎಲ್ಲವನ್ನೂ ಕಟ್ಟಿಕೊಟ್ಟಿದ್ದಾರೆ.


ನಾಟಕಗಳಲ್ಲಿ ನಟರ ಆಯ್ಕೆ ಬಹಳ ಕಷ್ಟ. ನಾಟಕವೆಂದರೆ ಜನರು ಬಹಳ ಹೀನವಾಗಿ ಕಾಣುತ್ತಿದ್ದ ಸಂದರ್ಭದಲ್ಲಿ ಮದಿರಾಪಾನ ಮಾಡುವವರನ್ನು, ವಿಷಯಾಸಕ್ತ ಜನರನ್ನು ದುರ್ಗುಣಿಗಳನ್ನು ಸಾಧ್ಯವಾದಷ್ಟು ದೂರವಿಡುತ್ತಿದ್ದರು. ಅಕಸ್ಮಾತ್ ಅವರು ಅತ್ಯುತ್ತಮ ನಟರಾಗಿದ್ದರೆ ಕೆಲವೊಮ್ಮೆ ಅನುಸರಿಸಿಕೊಂಡು ಹೋಗುತ್ತಿದ್ದದ್ದೂ ಇದೆ. ತಮ್ಮದೇ ಆದ ನಟ ವರ್ಗವನ್ನು ಸೇರಿಸಿಕೊಳ್ಳುತ್ತಾ ಬಂದರು ವೀರಣ್ಣನವರು.


1917ರಿಂದ 1924 ರ ಒಳಗೆ ಮದರಾಸು, ಮಹಾರಾಷ್ಟ್ರಗಳಲ್ಲಿ ಮೂರು ಬಾರಿ ಸಂಚಾರ ಮಾಡಿ ನಾಟಕವಾಡಿದ್ದಾರೆ. ಇದಷ್ಟೇ ಅಲ್ಲದೆ ಆಂಧ್ರಪ್ರದೇಶದಲ್ಲಿಯೂ ನಾಟಕ ಪ್ರದರ್ಶಿಸಿದ್ದಾರೆ. ಬೊಂಬಾಯಿ, ಹೈದ್ರಾಬಾದ್ ಗಳಲ್ಲಿಯೂ ನಾಟಕ ಪ್ರದರ್ಶಿಸಿದ್ದಾರೆ. ಕಲ್ಕತ್ತೆಯೊಂದು ಬಾಕಿ ಇತ್ತೆಂದು ಹೇಳಿದ್ದಾರೆ. 'ಧರ್ಮವೀರ' ಮತ್ತು 'ಕರ್ನಾಟಕಾಂಧ್ರ ನಾಟಕ ಸಾರ್ವಭೌಮ' ಎಂಬ ಬಿರುದುಗಳು ಸಿಕ್ಕಿವೆ.


ಗುಂಟೂರಿನಲ್ಲಿ ಸದಾರಮೆ ನಾಟಕ ಆಡಬಾರದೆಂದು ವೈಶ್ಯ ಮಹಾಜನರು ಒತ್ತಡ ತಂದದ್ದೇಕೆ..? ಅದೇ ನಾಟಕವನ್ನು ಆಡಲಿ ಎಂದು ಜಿಲ್ಲಾಧಿಕಾರಿಗಳು ಬಲವಾದ ಕಾವಲು ಏರ್ಪಡಿಸಿ ಆ ನಾಟಕ ಪ್ರದರ್ಶನವನ್ನು ನೋಡಲು ಹಾತೊರದದ್ದೇಕೆ..? ಓದಿ ನೋಡಿ.


1923 ರಿಂದ 1943ರ ವರೆಗೆ ನಾಟಕ ಸಂಘದ ಸುವರ್ಣ ಯುಗ ಎಂದು ಉಲ್ಲೇಖಿಸುತ್ತಾರೆ. ಮೈಸೂರಿನ ಮಹಾರಾಜರಾದ ಶ್ರೀ ಕೃಷ್ಣರಾಜ ಒಡೆಯರ್ ಅವರ ಅರಮನೆಯಲ್ಲಿ ಅನೇಕ ನಾಟಕಗಳನ್ನ ಆಡಿಸಿ 'ವರ್ಸಟೈಲ್ ಕಾಮೆಡಿಯನ್' ಎಂಬ ಬಿರುದನ್ನು ಬಂಗಾರದ ಪದಕದೊಂದಿಗೆ ಪಡೆದಿದ್ದಾರೆ.  ಮಹಾರಾಜರಿಗೆ ಇವರ ನಾಟಕ ಎಷ್ಟು ಇಷ್ಟವಾಯಿತೆಂದರೆ ಚೌ-ಚೌ ನಾಟಕ ಎಂದು ಹಲವು ನಾಟಕಗಳ ಮಿಶ್ರ ಸೀನ್ ಗಳೊಂದಿಗೆ ಪ್ರತಿ ಸೀನ್ ನಲ್ಲಿಯೂ ಇವರ ಅಭಿನಯವಿರಬೇಕೆಂಬ ಬೇಡಿಕೆ ಇಟ್ಟಿದ್ದರು. 

ಶ್ರೀ ಜಯಚಾಮರಾಜ ಒಡೆಯರ್ ಅವರು ರತ್ನ ಖಚಿತ ತೋಡಾದೊಂದಿಗೆ ನಾಟಕ ರತ್ನಂ ಎಂಬ ಬಿರುದು ಕೊಟ್ಟಿದ್ದಾರೆ. ಮೈಸೂರಿನಲ್ಲಿಯೇ ಇದ್ದು ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಿದರೂ.. ಸಂಬಳ ಕೊಡುತ್ತೇವೆಂದರೂ ಇವರು ಖಾಯಂ ಆಗಿ ಮೈಸೂರಿನಲ್ಲಿ ನೆಲೆಸಲು ಒಪ್ಪುವುದಿಲ್ಲ. ಇದಕ್ಕೆ ಕಾರಣವೇನು ಓದಿ ನೋಡಿ.


ಸ್ವಂತಕ್ಕೆ ಜಟಕಾ ಗಾಡಿ ಬೇಕೆಂದು ಕೊಂಡಾಗ ಆಗಿನ ವಿಶೇಷ ಗಾಡಿ ಎಂದು 'ಗವರ್ನರ್ ಕಾರ್ಟ್' ಗಾಡಿಯನ್ನು ಸಾಹುಕಾರರೊಬ್ಬರು ಬಹುಮಾನವಾಗಿ ಕೊಟ್ಟಿದ್ದರು.


ಹತ್ತು-ಹದಿನೈದು ವರ್ಷದ ಕಿಶೋರ ನಾಟಕ ಸಂಘ ಸ್ಥಾಪಿಸಲು 1925ರಲ್ಲಿ 'ಬಾಲಕಲಾವಿವರ್ಧಿನಿ' ಎಂಬ ಹೆಸರಿನಲ್ಲಿ ದೊಡ್ಡ ಕಂಪನಿಯಂತೆಯೇ ಅದ್ದೂರಿಯಿಂದ ನಾಟಕ ಸಂಘವನ್ನು ಕಟ್ಟಿ ನಡೆಸಿದ್ದಾರೆ.


ನಾಟಕರಂಗ ಮಾತ್ರವಲ್ಲದೆ ಮೂಕಿ ಚಿತ್ರರಂಗಕ್ಕೆ ಕಾಲಿಟ್ಟು ಫಿಲಂ ಸ್ಟುಡಿಯೋ ಮಾಡ ಬಯಸಿ 'ಹಿಸ್ ಲವ್ ಅಫೇರ್' ಮತ್ತು 'ಹರಿಮಾಯಾ' ಎಂಬ ಮೂಕ ಚಿತ್ರಗಳನ್ನು ತೆಗೆದಿದ್ದಾರೆ. ಈ ಮೂಕ ಚಿತ್ರ ಪ್ರಪಂಚದಲ್ಲಿ ಇವರಿಗೆ ಆಗಿರುವುದು ಕಹಿ ಅನುಭವಗಳೇ ಹೆಚ್ಚು. ಅದರಲ್ಲಿಯೂ ಒಳಿತನ್ನು ಎತ್ತಿ ಹೇಳಿದ್ದಾರೆ.


ಬಿ . ಪುಟ್ಟಸ್ವಾಮಿಯವರಿಂದ ಬರೆಸಿಕೊಂಡ ನಾಟಕ, ಕುರುಕ್ಷೇತ್ರ ನಾಟಕ, ಲವ-ಕುಶ, ದಶಾವತಾರ ಹೀಗೆ ಹಲವಾರು ನಾಟಕಗಳು ಅದರ ಹಿನ್ನೆಲೆಗಳು, ನಟ ವರ್ಗದ ಆಯ್ಕೆ ಅಲ್ಲೆಲ್ಲಾ ಅನುಭವಿಸಿದ ಚಾಲೆಂಜ್ ಗಳು ಮತ್ತು ಅದನ್ನು ಮೀರಿ ನಿಂತ ಬಗೆ ಎಲ್ಲವನ್ನೂ ಹೇಳಿದ್ದಾರೆ.


ತಮ್ಮ ವಿವಾಹಗಳ ಕುರಿತು ಹೇಳಿಕೊಳ್ಳುವ ಸಂದರ್ಭದಲ್ಲಿ ತಮ್ಮ ಇಬ್ಬರು ಉಪಪಪತ್ನಿಯರು ಜಿ. ಸುಂದರಮ್ಮ ಮತ್ತು ಬಿ. ಜಯಮ್ಮ ಇವರುಗಳ ಕುರಿತು ಹಾಗೂ ಇವರುಗಳ ಮಕ್ಕಳಾದ ಸ್ವರ್ಣಮ್ಮ, ಮಾಲತಮ್ಮನವರ ಬಗೆಗೂ ಪ್ರೀತ್ಯಾದರಗಳಿಂದ ಹೇಳಿಕೊಳ್ಳುತ್ತಾರೆ. ಮಾಲತಮ್ಮನವರ ಮಗಳೇ ಬಿ. ಜಯಶ್ರೀ. ಗುಬ್ಬಿ ವೀರಣ್ಣನವರ ಮೂರನೇ ತಲೆಮಾರು. ಇವರ ಪ್ರತಿಭೆಯ ಕುರಿತೂ ಉಲ್ಲೇಖವಿದೆ.


ಒಂದು ರೂಪಾಯಿಯ ಕಾಲದಿಂದ ಹಾಗೂ ಗ್ಯಾಸ್ ಲೈಟ್ ದೊಂದಿಗಳಲ್ಲಿ ನಾಟಕ ಪ್ರದರ್ಶಿಸುತ್ತಿದ್ದ ಕಾಲದಿಂದ ಲಕ್ಷಾಂತರ ರೂಪಾಯಿ ಆದಾಯ ಹಾಗೂ ಅಷ್ಟೇ ಮಟ್ಟದ ಖರ್ಚಿನ ಬದುಕಿನ ಪಯಣವನ್ನು ಇಲ್ಲಿ ಹೇಳಿದ್ದಾರೆ. ಬಂದ ಬಿರುದುಗಳು, ಬಂಗಾರ, ಮಾಡಿದ ದಾನ ಧರ್ಮಗಳು, ಅದರ ಸಂದರ್ಭಗಳು ನಾಟಕ ಮಂದಿರ ಹಾಗೂ ಥಿಯೇಟರ್ ಗಳನ್ನು ಕಟ್ಟಿಸಲು ಹೊರಟದ್ದು ಹಾಗೂ ಹಲವಾರು ಬಾರಿ ಅದನ್ನು ಮತ್ತೊಬ್ಬರ ಸುಪರ್ದಿಗೆ ಒಪ್ಪಿಸಬೇಕಾಗಿ ಬಂದ ಸಂದರ್ಭ, ಅದರಿಂದ ಉಂಟಾದ ಪರಿಣಾಮಗಳು ಎಲ್ಲವೂ ಇಲ್ಲಿವೆ.


ಒಬ್ಬ ವ್ಯಕ್ತಿ ತನ್ನ ಹೆಂಡತಿ-ಮಕ್ಕಳು, ತಂದೆ-ತಾಯಿಯ ಪುಟ್ಟ ಸಂಸಾರವನ್ನೇ ಸರಿದೂಗಿಸಲು ತಿಣುಕಾಡುವಾಗ.. ಎಷ್ಟೋ ಪ್ರತಿಭೆಗಳ ದಾರಿದೀಪವಾಗಿ, ಅಸಮಾಧಾನ ಪಟ್ಟುಕೊಂಡು ಹೋದವರು ಮರಳಿ ಬಂದಾಗ.. ಮೋಸ ಮಾಡಿದವರು ಮತ್ತೆ ಬಂದಾಗ ಅದೇ ಅಕ್ಕರೆಯಿಂದ ಸ್ವಾಗತಿಸಿ ಅವರನ್ನು ತಮ್ಮೊಳಗೆ ಒಂದಾಗಿಸಿಕೊಂಡ ಪರಿಯೂ ಇಲ್ಲಿದೆ.


ತಪ್ಪುಗಳು ಹಾಗೂ ತಮ್ಮ ಬದುಕನ್ನು ತಿರುಗಿ ನೋಡಿದಾಗ ತಮ್ಮನ್ನು ತಾವು ವಿಮರ್ಶಿಸಿಕೊಂಡ ಬಗೆಯನ್ನೂ ಕಾಣಬಹುದು. ಕಲಾ ಜೀವನದ ಹಲವಾರು ಅಂಶಗಳನ್ನು ಕಟ್ಟಿಕೊಟ್ಟಿದ್ದಾರೆ. ವೈಯಕ್ತಿಕ ಬದುಕಿನ ಕುತೂಹಲಕ್ಕಿಂತ ಕಲೆಯ ಕುರಿತ ಕುತೂಹಲವನ್ನು ಮಾತ್ರವೇ ಉಳಿಸಿಕೊಂಡು ಇವರ ಬದುಕನ್ನು ಕಲಾವಿದನಾಗಿ ಮಾತ್ರ ಕಂಡರೆ ನಮಗೆ 'ನಾಟಕರಂಗದ ಭೀಷ್ಮ' ನಿಚ್ಚಳವಾಗಿ ಕಾಣಿಸಿಗುತ್ತಾರೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ